ನೆಲದನಿ
ಕಲಾ ಲೋಕದೊಳಗೊಬ್ಬ ಸಾಧಕ : ಡಾ.ಸಂತೋಷ್ ಅವರ ಬದುಕಿನ ಸಂಕಥನ

ಕಲೆ ಮತ್ತು ಕಲಾವಿದ ಎಂದಾಕ್ಷಣ ನಮಗೆ ನೆನಪಾಗುವುದು ವಿಶಿಷ್ಟವಾದ ಚಿತ್ತಾರದ ಲೋಕ. ಆದರೆ ಈ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡ ಕಲಾವಿದರಿಗೆ ಈ ಕ್ಷೇತ್ರದ ಸಿದ್ಧಿ ಅಷ್ಟೊಂದು ಸುಲಭದ ಕೆಲಸವಲ್ಲ. ಇಲ್ಲಿ ತಮ್ಮದೇ ಆದ ಸಾಧನೆ ಮಾಡಿರುವ ಪ್ರತಿಯೊಬ್ಬ ಕಲಾವಿದರೂ ಕೂಡ ಹಲವಾರು ತೆರನಾದ ಏಳುಬೀಳುಗಳನ್ನು ಅನುಭವಿಸಿಯೇ ಮುಂದೆ ಬಂದಿರುತ್ತಾರೆ. ಹೀಗೆ ಕಲಾ ಲೋಕದೊಳಗೆ ತನ್ನದೇ ಆದ ಸಾಧನೆ ಮಾಡಿರುವ ಸಂತೋಷ್ ದಾವಣಗೆರೆ ಇವರು ಕೂಡ ಈ ಹಾದಿಯಲ್ಲಿ ಹಲವಾರು ಸಂಕಷ್ಟಗಳನ್ನು ಮೆಟ್ಟಿನಿಂತು ಕಲಾ ಮತ್ತು ಸಾಹಿತ್ಯ ಲೋಕಕ್ಕೆ ತನ್ನದೆ ಆದ ಕಾಣಿಕೆಯನ್ನು ನೀಡಿದ್ದಾರೆ. ಇಂತಹ ಸಾಧಕ ಕಲಾವಿದನ ಬದುಕಿನ ಸಂಕಥನವನ್ನು ಅನಾವರಣಗೊಳಿಸುವುದೆ ಪ್ರಸ್ತುತ ಲೇಖನದ ಉದ್ಧೇಶವಾಗಿದೆ.
ಶ್ರೀಯುತ ಸಂತೋಷ್ ದಾವಣಗೆರೆ ಅವರು 19ನೇ ಮೇ 1974ರಂದು ದಾವಣಗೆರೆ ತಾಲ್ಲೂಕಿನ ಕಬ್ಬೂರು ಗ್ರಾಮದಲ್ಲಿ ಶ್ರೀ ರುದ್ರಪ್ಪ ಹಾಗೂ ಶ್ರೀಮತಿ ಕೊಟ್ರಮ್ಮ ದಂಪತಿಗಳ ಪುತ್ರನಾಗಿ ಜನಿಸಿದರು. ಬಾಲ್ಯದ ದಿನಗಳಿಂದಲೂ ಕೌಟುಂಬಿಕ ಪರಿಸ್ಥಿತಿಯು ಉತ್ತಮವಾಗಿದ್ದ ಕಾರಣ ಯಾವುದೇ ಸಂಕಷ್ಟಗಳನ್ನು ಅನುಭವಿಸದೆ ಬೆಳೆದ ಇವರು, ಬಿ.ಎ ಪದವಿ ಶಿಕ್ಷಣವನ್ನು ಪಡೆದು ಕೆಲವೊಂದು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತ ತಮ್ಮ ಜೀವನವನ್ನು ನಿರ್ವಹಿಸುತ್ತಿದ್ದರು. ಆದರೆ ತಮ್ಮ ತಾಯಿಯವರ ಅಕಾಲಿಕ ಮರಣದಿಂದ ಮನನೊಂದು ಬೆಂಗಳೂರಿನತ್ತ ನಡೆದರು. ಬೆಂಗಳೂರಿನ ಪರಿಚಯವೇ ಇರದ ಇವರು ಇಲ್ಲಿಗೆ ಬಂದ ಆರಂಭದ ದಿನಗಳಲ್ಲಿ ತುಂಬ ಸಂಕಷ್ಟವನ್ನು ಅನುಭವಿಸಿದರು. ಕೆಲವು ತಿಂಗಳುಗಳು ಸಾರ್ವಜನಿಕ ಪಾರ್ಕುಗಳನ್ನೆ ಆಶ್ರಯಿಸಿ ಜೀವನ ನಡೆಸುವ ಹಂತವನ್ನು ತಲುಪಿ, ಕೊನೆ ಕೊನೆಗೆ ಒಂದೊತ್ತಿನ ಊಟಕ್ಕೂ ಭಿಕ್ಷೆ ಬೇಡುವ ಹಂತವನ್ನು ತಲುಪಿದರು. ಇಂತಹ ಸಂದರ್ಭದಲ್ಲಿ ಹೆಸರಾಂತ ರಂಗಕರ್ಮಿಗಳಾದ ಎ.ಎಸ್.ಮೂರ್ತಿಯವರು ನಡೆಸುತಿದ್ದ ಬೀದಿ ನಾಟಕಗಳನ್ನು ನೋಡಿ, ಇವರ ಜೊತೆ ತಿರುಗಾಡಿದರೆ ಆ ದಿನದ ಊಟವಾದರೂ ಸಿಗುತ್ತದೆ ಎಂದು ನಂಬಿ ಅವರ ತಂಡದೊಂದಿಗೆ ಪಾತ್ರ ಮಾಡುತ್ತ ಹಲವು ದಿನಗಳು ಕಳೆದರು.
ಶ್ರೀಯುತರು ಯಾವುದೇ ಗೊತ್ತು ಗುರಿ, ಉದ್ಧೇಶವಿಲ್ಲದೆ ಬೆಂಗಳೂರಿಗೆ ಪ್ರವೇಶ ಮಾಡಿದ್ದರು. ಈ ಸಂದರ್ಭದಲ್ಲಿ ಅನ್ನಕೆ ಆಸರೆಯಾಗಿದ್ದು ಈ ರಂಗಕಲೆ. ಹೀಗೆ ಆರಂಭವಾದ ಇವರ ಕಲಾ ಬದುಕು ವಿವಿಧ ಸ್ವರೂಪಗಳಲ್ಲಿ ಮಂದುವರೆಯಿತು. ಯಾವುದೇ ರಂಗ ತರಬೇತಿಯು ಇಲ್ಲದ ಇವರಿಗೆ ರಂಗಭೂಮಿಯ ಆಶಯಗಳೇನು, ಚಲನಚಿತ್ರಗಳಲ್ಲಿ ನಟಿಸಲು ಬೇಕಾದ ಮಾನದಂಡಗಳೇನು ಎಂಬುದರ ಯಾವುದೇ ಪರಿಚಯವಾಗಲಿ, ಅನುಭವವಾಗಲಿ ಇರಲಿಲ್ಲ. ಅನ್ನದ ಅನಿವಾರ್ಯತೆಗಾಗಿ ಮೊದಲು ಎ.ಎಸ್.ಮೂರ್ತಿಯವರ ಕಲಾ ತಂಡದೊಂದಿಗೆ ತನ್ನನ್ನು ತೊಡಗಿಸಿಕೊಂಡರು. ನಂತರದಲ್ಲಿ ಇವರ ಸ್ವಗ್ರಾಮದವರೇ ಆದ ನಿರ್ದೇಶಕ ಶರಣ್ ಕಬ್ಬೂರು ಅವರ ನಿರ್ಮಾಣದ ‘ಪೂಜಾರಿ’ ಸಿನಮಾದಲ್ಲಿ ಒಂದು ಕಿರುಪಾತ್ರವನ್ನು ಮಾಡಿ ಮೆಚ್ಚುಗೆಯನ್ನು ಪಡೆದುಕೊಂಡಿದ್ದರು. ಇದರಿಂದ ಪ್ರೇರಿತಗೊಂಡ ಇವರು ನಂತರದಲ್ಲಿ ಮುಕ್ತ ಧಾರವಾಯಿಯಲ್ಲಿ ನಟಿಸುವುದಕ್ಕೆ ಅವಕಾಶಗಳಿವೆ ಎಂದು ತಿಳಿದು ಅಲ್ಲಿಗೆ ಹೋದಾಗ, ಭಯದಿಂದ ಅಭಿನಯದಲ್ಲಿ ಏರುಪೇರು ಉಂಟಾಯಿತು. ಆಗ ಅಲ್ಲಿನ ಪ್ರೊಡಕ್ಷನ್ ಮ್ಯಾನೇಜರ್ ಅವರಿಂದ ಚೀಮಾರಿಯನ್ನು ಹಾಕಿಸಿಕೊಂಡು, ಅಳುತ್ತ ಹೊರಬಂದರು. ಆ ಸಂದರ್ಭದಲ್ಲಿ ಸತ್ಯ ಎಂಬ ಕಲಾವಿದರು ಈ ಹಿಂದೆ ನಟಿಸಿದ ಇವರೊಳಗಿನ ಕಲಾ ಚಾತುರ್ಯತೆಯನ್ನು ಅರಿತಿದ್ದರು. ಈ ಸಂದರ್ಭದಲ್ಲಿ ಸಂತೋಷ್ ಅವರನ್ನು ಮಾತನಾಡಿಸಿ, ಈ ಹಿಂದೆ ನೀವು ತುಂಬ ಚನ್ನಾಗಿ ನಟಿಸಿದ್ದನು ನಾನು ನೋಡಿದ್ದೇನೆ. ನಿಮ್ಮೊಳಗೊಬ್ಬ ಕಲಾವಿದನಿದ್ದಾನೆ. ಆ ಕಲಾವಿದನನ್ನು ಬೆಳೆಸುವುದಕ್ಕೆ ತರಬೇತಿಯ ಅಗತ್ಯವಿದೆ ಎಂದು ಧೈರ್ಯ ಹೇಳಿದರು. ಆಗ ಸಂತೋಷ್ ಅವರು ನನಗೆ ಇದೆಲ್ಲ ಗೊತ್ತೆ ಇಲ್ಲ. ಯಾರಾದರು ತೊರಿಸಿಕೊಟ್ಟರೆ ಮಾಡುತ್ತೇನೆ ಎಂದು ಹೇಳಿದಾಗ, ಎ.ಎಸ್.ಮೂರ್ತಿಯವರ ‘ಅಭಿನಯ ತರಂಗ’ದ ದಾರಿ ತೋರಿದರು. ಈ ಹಿಂದೆ ಎ.ಎಸ್.ಮೂರ್ತಿಯವರ ತಂಡದೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿದ ಕಾರಣದಿಂದ ತನಗೆ ಅಲ್ಲಿಗೆ ಯಾವುದೇ ಅಡೆತಡೆ ಇಲ್ಲದೆ ತರಬೇತಿ ಸಿಗಬಹುದು ಎಂದು ಅಭಿನಯ ತರಂಗದತ್ತ ಮುಖ ಮಾಡಿದರು. ಇಲ್ಲಿಗೆ ಬಂದು ನಾನು ಸಿನಿಮಾ ಮಾಡಲಿಕ್ಕಾಗಿ ತರಬೇತಿ ಬೇಕಾಗಿದೆ ಎಂದಾಗ ಎ.ಎಸ್.ಮೂರ್ತಿಯವರ ಮಗಳಾದ ‘ಗೌರಿದತ್ತ್’ ಅವರಿಂದಲೂ ಚೀಮಾರಿ ಹಾಕಿಸಿಕೊಂಡರು. ರಂಗಭೂಮಿಯಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿರುವವರು ಯಾವುದೇ ಕಾರಣಕ್ಕೂ ಸಿನಿಮಾ ಮಾಡುವ ಅವಕಾಶವಾದಿಗಳಾಗಿರಬಾರದು. ರಂಗಭೂಮಿಗೆ ತನ್ನದೇ ಆದ ಸಿದ್ಧಾಂತ, ಮೌಲ್ಯ, ಬದ್ಧತೆಗಳಿಗೆ ಎಂಬುದಾಗಿ ಅರಿವು ಮೂಡಿಸಿ, ಇಲ್ಲಿ ತರಬೇತಿ ಪಡೆಯುವುದಕ್ಕೆ ಹಣ ಕೊಡಬೇಕಾಗುತ್ತದೆ. ಇಂತಿಷ್ಟು ಹಣ ತೆಗೆದುಕೊಂಡು ಬರುವಂತೆ ತಿಳಿಸಿದರು. ಆಗ ಸಂತೋಷ್ ಅವರು ದಾವಣಗೆರೆಗೆ ಬಂದು ತಮ್ಮ ಆಪ್ತರಿಂದ ಒಂದಿಷ್ಟು ಹಣವನ್ನು ಸಂಗ್ರಹಿಸಿ ಅವರಿಗೆ ನೀಡಿ, ಉಳಿದ ಹಣವನ್ನು ಹೇಗಾದರು ಕೆಲಸ ಮಾಡಿ ಕೊಡುವುದಾಗಿ ತಿಳಿಸಿ ರಂಗ ತರಬೇತಿಗೆ ಸೇರಿಕೊಂಡರು.
ಶ್ರೀಯುತರು ‘ಅಭಿನಯ ತರಂಗ’ಕ್ಕೆ ಸೇರಿಕೊಂಡ ತರುವಾಯದಲ್ಲಿ ಇವರ ಬದುಕಿನ ದಿಕ್ಕೆ ಬದಲಾಯಿತು. ಈ ಸಂಸ್ಥೆಗೆ ಬರುತಿದ್ದ ಹಿರಿಯ ಕಲಾವಿದರು, ನಿರ್ದೇಶಕರುಗಳ ಎದುರಿಗೆ ಹಾಡುವುದಕ್ಕೆ ಅವಕಾಶಗಳು ಲಭಿಸಿದವು. ಸ್ವತಃ ನಾಟಕ ರಚನೆ, ನಿರ್ದೇಶನಕ್ಕೆ ಅವಕಾಶಗಳು ದೊರಕಿದವು. ಈ ಎಲ್ಲಾ ಸಂದರ್ಭಗಳಲ್ಲಿ ಗಿರೀಶ್ ಜತ್ತಿ ಎಂಬ ಗೆಳೆಯನ ಸಹಕಾರವು ದೊರೆಯಿತು. ಈ ಎಲ್ಲಾ ಅವಕಾಶಗಳಿಂದಾಗಿ 900ಕ್ಕೂ ಹೆಚ್ಚು ಬೀದಿ ನಾಟಕ, 300ಕ್ಕೂ ಹೆಚ್ಚು ನಾಟಕ, 45ಕ್ಕೂ ಹೆಚ್ಚು ಧಾರವಾಯಿ, 10 ಸಿನಿಮಾಗಳಲ್ಲಿ ಅಭಿನಯ, 6 ಕಿರುಚಿತ್ರಗಳಲ್ಲಿ ನಟನೆ ಮತ್ತು ನಿರ್ದೇಶನ, ಕಸ್ತೂರಿ ವಾಹಿನಿಯ ಕಾಮಿಡಿ ಷೋಗಳಾದ ‘ಕಾಮಿಡಿ ಕಿಲಾಡಿಗಳು’, ‘ಕಾಮಿಡಿ ದರ್ಬಾರ್’ ಹಾಗೂ ‘ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್’ ಕಾರ್ಯಕ್ರಮಗಳಲ್ಲಿ ತಮ್ಮ ಸಹಭಾಗಿತ್ವವನ್ನು ವ್ಯಕ್ತಪಡಿಸಿದ ಕೀರ್ತಿಯು ಶ್ರೀಯುತರಿಗೆ ಸಲ್ಲುತ್ತದೆ. ಇದೆಲ್ಲವೂ ನೆರವೇರಿದ್ದು ‘ಅಭಿನಯ ತರಂಗ’ವು ನೀಡಿದ ಅತ್ಯಮೂಲ್ಯವಾದ ಕೊಡುಗೆಯಾಗಿದ್ದು, ಇಲ್ಲಿ ಶ್ರೀಯುತ ಸಂತೋಷ್ ಅವರ ಪ್ರಾಮಾಣಿಕ ಪ್ರಯತ್ನ ಸಕ್ರಿಯವಾಗಿ ಕಾರ್ಯನಿರ್ವಹಿಸಿದೆ. ಈ ಅಭಿನಯ ತರಂಗದಲ್ಲಿ ಶ್ರೀಯುತರು ತಮ್ಮ ತಂದೆಯರಿಂದ ಕಲಿತಂತಹ ಹಲವಾರು ತತ್ವಪದಗಳು ಮತ್ತೇ ಮತ್ತೇ ಪ್ರದರ್ಶನವನ್ನು ಪಡೆದುಕೊಂಡವು. ಇವುಗಳು ಸಂತೋಷ್ ಅವರನ್ನು ಗುರುತಿಸುವುದಕ್ಕೆ ಅವಕಾಶವನ್ನು ಕಲ್ಪಿಸಿಕೊಟ್ಟವು.
ಶ್ರೀಯುತ ಸಂತೋಷ್ ಅವರು ಈ ವೇಳೆಗಾಗಲೆ ರಂಗಭೂಮಿ, ಕಿರುತೆರೆ, ಸಿನಿಮಾ ಲೋಕದಲ್ಲಿ ಸಾಕಷ್ಟು ಗುರುತಿಸಿಕೊಂಡಿದ್ದರು. ಆದರೆ ಈ ಹಂತದ ವೇಳೆಗೆ ತಮ್ಮ ತಂದೆಯವರನ್ನು ಕಳೆದುಕೊಂಡಿದ್ದರು. ನಂತರದಲ್ಲಿ ಮದುವೆಯಾಗಬೇಕೆಂದು ಹುಡುಕಾಡಿ, ತನಗೆ ಎಲ್ಲಿಯೂ ಹೆಣ್ಣು ಸಿಗಲಿಲ್ಲವೆಂದು ಬೇಸರಗೊಂಡು, ಮದುವೆಯ ವಿಷಯವನ್ನು ತಲೆಯಿಂದ ತೆಗೆದುಹಾಕಿ ತಂದೆಯವರು ಹಾಡುತಿದ್ದ ತತ್ವಪದಗಳ ಸಂಗ್ರಹದತ್ತ ಮುಖಮಾಡಿ ಹಲವು ದಿನಗಳ ಕಾಲ ಕ್ಷೇತ್ರಕಾರ್ಯ ಮಾಡಿ, ತನ್ನ ತಂದೆಯ ಶಿಷ್ಯಂದಿರ ಬಳಿ ಸುಮಾರು 55 ತತ್ವಪದ ಹಾಡುಗಳನ್ನು ಸಂಗ್ರಹಿಸಿ ‘ಅಪ್ಪನ ಸಂಗ್ರಹ’ ಎಂಬ ಕೃತಿಯನ್ನು ಬಿಡುಗಡೆ ಮಾಡುವ ಹಂತದಲ್ಲಿ ಕಂಕಣ ಭಾಗ್ಯವೂ ಕೂಡಿ ಬಂತು. ತಮ್ಮ ಮದುವೆಯ ದಿನದಂದೆ ‘ಅಪ್ಪನ ಸಂಗ್ರಹ’ ಕೃತಿಯು ಕೂಡ ಬಿಡುಗಡೆಯ ಭಾಗ್ಯವನ್ನು ಪಡೆದುಕೊಂಡಿತು. ನಂತರದಲ್ಲಿ ಇವರನ್ನು ಬಹು ಕಾಡಿದ ವಿಷಯವೆಂದರೆ ಕರ್ನಾಟಕದ ಮಠ ಮಾನ್ಯಗಳು. ತಮ್ಮ ಶ್ರೀಮತಿಯ ಮನವೊಲಿಸಿ, ಅವರು ಹೆರಿಗೆಗೆ ತಮ್ಮ ತವರಿಗೆ ತೆರಳಿದಾಗ ಪ್ರಯಾಣಕ್ಕೆ ಬೇಕಾದ ಸಕಲ ಸಿದ್ಧತೆ ಮಾಡಿಕೊಂಡು ಮಠಗಳ ಅಧ್ಯಯನಕ್ಕೆ ಸಿದ್ಧತೆಯನ್ನು ಕೈಗೊಂಡರು.
ಶ್ರೀಯುತರದು ಮಠ ಮಾನ್ಯಗಳ ಅಧ್ಯಯನವು ಅತ್ಯಂತ ಆಸಕ್ತಿದಾಯಕವಾದ ವಿಷಯವಾಗಿತ್ತು. ಅದಕ್ಕಿಂತ ಹೆಚ್ಚಾಗಿ ಈ ವಿಷಯವು ಅವರನ್ನು ಬಹುದಿನಗಳು ಕಾಡಿತ್ತು. ಇದಕ್ಕಾಗಿ ಕೆಲವು ದಿನಗಳ ಕಾಲ ಊಟ, ನಿದ್ರೆಯನ್ನು ಕಳೆದುಕೊಂಡಿದ್ದರು. ಕೊನೆಗೂ ಕೂಡಿಬಂದ ಅವಕಾಶದಿಂದಾಗಿ ದಾವಣಗೆರೆಯ ಹೆಬ್ಬಾಳು ಮಠದಿಂದ ಆರಂಭಗೊಂಡ ಇವರ ಮೊದಲ ಹಂತದ ಆಧ್ಯಯನವು ಸದರಿ ಜಿಲ್ಲೆಯನ್ನು ಸಂಪೂರ್ಣ ಅಧ್ಯಯನಕ್ಕೆ ಒಳಪಡಿಸಿತು. ಹೀಗೆ ಆರಂಭಗೊಂಡ ಕರ್ನಾಟಕದ 30 ಜಿಲ್ಲೆಗಳ ಪ್ರತಿಯೊಂದು ಮಠಗಳ ಅಧ್ಯಯನವು 39.000 ಕಿ.ಮಿ ಹಾದಿಯನ್ನು 19 ತಿಂಗಳುಗಳ ಕಾಲ 3000 ಸಾವಿರ ಹಳ್ಳಿಗಳನ್ನು ಸುತ್ತಿ, 2000 ಮಠಗಳಿಂದ ಮಾಹಿತಿಯನ್ನು ಸಂಗ್ರಹಿಸಿದ್ದರು. ನಂತರದಲ್ಲಿ ಸಮಗ್ರವಾದ ಮಾಹಿತಿಗಾಗಿ ಸಿದ್ಧತೆ ಮಾಡಿಕೊಂಡು ಎರಡನೇ ಹಂತದಲ್ಲಿ 56.000 ಕಿ.ಮಿ ಸಂಚರಿಸಿ ಸಮಗ್ರವಾದ ಮಾಹಿಯನ್ನು ಪಡೆದುಕೊಂಡು ಬಂದರು. ಈ ಸಂದರ್ಭದಲ್ಲಿ ಅವರು ಅನುಭವಿಸಿದ ಯಾತನೆಗಳನ್ನು ಕೇಳಿದರೆ ಎಂತಹ ಕಲ್ಲು ಮನಸು ಕೂಡ ಕರಗಿ ನೀರಾಗುವಂತಹ ಕರಾಳ ಅನುಭವಗಳು ಶ್ರೀಯುತರಿಗೆ ಲಭಿಸಿವೆ. ಈ ಎಲ್ಲಾ ನೋವುಗಳನ್ನು ತಡೆದುಕೊಂಡು ಸಮಗ್ರ ಮಾಹಿತಿಯನ್ನು ಶ್ರೀಯುತರು ಸಂಗ್ರಹಿಸಿರುವುದು ನಿಜಕ್ಕೂ ಅಭೂತಪೂರ್ವದ ಸಂಗತಿಯಾಗಿದೆ. ಹೀಗೆ ಸಂಗ್ರಹಿಸಿದ ಮಾಹಿತಿಯನ್ನು ಪ್ರಕಟಿಸುವುದಕ್ಕೆ ಬೇಕಾದ ಹಣಕಾಸಿನ ನೆರವು ಇಲ್ಲದೆ ಹಲವಾರು ದಿನಗಳ ಕಾಲ ನೋವು ಅನುಭವಿಸಿದ್ದಾರೆ. ಹಲವಾರು ದಾನಿಗಳ ಆಶ್ರಯವನ್ನು ಬೇಡಿದ್ದಾರೆ. ಆದರೆ ಇವರ ಬದುಕಲ್ಲಿ ಆತ್ಮೀಯರಾಗಿ ಬಂದ ಶ್ರೀಮತಿ ಶುಭ ಐನಳ್ಳಿ ವಿಶ್ವಪ್ರಕಾಶ್ ಹಾಗೂ ಶ್ರೀ ರವೀಂದ್ರ ಅರಳಗುಪ್ಪಿ ಅವರ ಸಹಕಾರದಿಂದ ಈ ಸಂಶೋಧನ ಕಾರ್ಯವು ಒಂದು ಮೂರ್ತ ಸ್ವರೂಪವನ್ನು ಪಡೆದುಕೊಂಡಿತು. ಹಾಗೆಯೇ ಪುಸ್ತಕ ಮುದ್ರಣಕ್ಕೆ ಆರ್ಥಿಕ ಸಹಕಾರ ನೀಡಿದ ಶ್ರೀ. ಗಂಗಾಧರ್ ಯಾವಗಲ್, ಮುದ್ರಣಕ್ಕೆ ಸಹಕರಿಸಿದ ಪ್ರೆಸ್ ಮಾಲಿಕರಾದ ಬಿ.ಸಿ.ಪಾಟೀಲ್ ಅವರ ಸಹಕಾರದಿಂದಾಗಿ ಜಿಲ್ಲಾವಾರು ಮಠಗಳ ದರ್ಶನದ ಕೃತಿಗಳು ಬಿಡುಗಡೆಯ ಭಾಗ್ಯವನ್ನು ಪಡೆದುಕೊಂಡಿವೆ.
ಶ್ರೀಯುತ ಸಂತೋಷ್ ಅವರು ಬವಣೆಯ ನಡುವೆಯೇ ಬದುಕು ರೂಪಿಸಿಕೊಂಡು ಬಂದ ಅಪರೂಪದ ಕಲಾವಿದ. ಕಲಾವಿದನಾಚೆ ಒಬ್ಬ ವಿದ್ವಾಂಸನಾಗಿ, ಸಂಶೋಧಕನಾಗಿ ತನ್ನ ಸೇವೆಯನ್ನು ಸಲ್ಲಿಸಿದವರು. ತನ್ನ ಸಾರ್ಥಕ್ಕಾಗಿ ದುಡಿಯದೆ, ಸಮಾಜಕ್ಕೊಂದು ಸಂದೇಶ, ಮಾರ್ಗದರ್ಶನ ನೀಡಬೇಕೆಂಬ ಇವರ ತುಡಿತ, ಹಂಬಲ ನಿಜಕ್ಕೂ ಶ್ಲಾಘನೀಯ. ಇಂತಹ ಅಪರೂಪದ ಕಲಾ ಪ್ರತಿಭೆಯನ್ನು ಗಮನಿಸಿ ಜರುಸಲೆಂ ವಿಶ್ವವಿದ್ಯಾಲಯವು ‘ಗೌರವ ಡಾಕ್ಟರೇಟ್’ ಪದವಿಯನ್ನು ನೀಡಿ ಗೌರವಿಸಿದೆ. ಹಾಗೆಯೇ ಶ್ರೀಯುತರಿಗೆ ಉತ್ತಮ ಹಾಸ್ಯ ನಟ ಪ್ರಶಸ್ತಿ, ಕಲಾಕಲ್ಪ ಪ್ರಶಸ್ತಿ, ಸಮಾಜ ಸೇವಾರತ್ನ ಪ್ರಶಸ್ತಿ, ಕರ್ನಾಟಕ ಕಲಾರತ್ನ ಪ್ರಶಸ್ತಿ, ಯುವ ಸ್ಪೂರ್ತಿ ಚೇತನ ಪ್ರಶಸ್ತಿ, ಶ್ರೀ ಶಿವ ದಾಸಿಮಯ್ಯ ಸಾಹಿತ್ಯ ರತ್ನ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಇವರ ಮುಡಿಗೇರಿವೆ. ಇವರ ಈ ಎಲ್ಲಾ ಸಾಧನೆಗಳಿಗೆ ಇವರ ಶ್ರೀಮತಿಯವರಾದ ಜಯಶ್ರೀಯವರ ಸಹಕಾರ ಪ್ರಚೋದನೆಯನ್ನು ನೀಡಿದೆ. ಇವರ ಕಲಾಸೇವೆ ಮತ್ತು ಸಮಾಜ ಸೇವೆ ಹೀಗೆ ಮುಂದುವರೆಯಲಿ. ಶ್ರೀಯುತರ ಕುಟುಂಬಕ್ಕೆ ದೇವರು ಆರೋಗ್ಯ ಮತ್ತು ನೆಮ್ಮದಿಯನ್ನು ಕರುಣಿಸಲಿ ಎಂಬುದು ನಮ್ಮೆಲ್ಲರ ಹಾರೈಕೆ.

ಅಂಕಣ
ಚನ್ನಗಿರಿ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ’; ವಿದ್ಯಾರ್ಥಿಗಳ ಕಲರವ

ಸುದ್ದಿದಿನ,ಚನ್ನಗಿರಿ:ಪಟ್ಟಣದ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ (ಮಾರ್ಚ್-22) ‘ಜಾನಪದ ಉತ್ಸವ – 2025″ ಅದ್ದೂರಿಯಾಗಿ ನಡೆಯಿತು.
ಜಾನಪದ ತಜ್ಞ, ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಬಸವರಾಜ ನೆಲ್ಲಿಸರ, ಅವರು ಉತ್ಸವಕ್ಕೆ ಚಾಲನೆ ನೀಡಿದರು.
ಎತ್ತಿನ ಬಂಡಿಯಲ್ಲಿ ಅಧ್ಯಾಪಕರು, ಅತಿಥಿಗಳ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ನೀರು ತುಂಬಿದ ಪೂರ್ಣ ಕುಂಭಗಳನ್ನು ಹೊತ್ತು ಅತಿಥಿಗಳನ್ನು ಸ್ವಾಗತಿಸಿದರು.
ಅಂದು ಕಾಲೇಜಿನಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ವರ್ಷದಲ್ಲಿ ಬರುವ ಯುಗಾದಿ, ಸಂಕ್ರಾಂತಿ, ಶಿವರಾತ್ರಿ, ಕ್ರಿಸ್ ಮಸ್, ರಂಜಾನ್, ದಸರಾ, ಭೂಮಿ ಹುಣ್ಣಿಮೆ, ರಾಶಿ ಪೂಜೆ ಸೇರಿದಂತೆ, ಬಳೆಗಾರ, ಕಣಿಹೇಳುವ, ಚೌಕಾಬಾರಾ, ಗುರುಕುಲ, ಆಯುರ್ವೇದ, ಗೋ ಪೂಜೆ ಎಲ್ಲವೂ ಜಾನಪದ ಸಂಸ್ಕೃತಿಯನ್ನು ಪುನರ್ ನಿರ್ಮಾಣಮಾಡಿದ್ದವು.
ಉತ್ಸವದಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು, ಪಂಚೆ, ಅಂಗಿ, ಕುರ್ತಾ, ಲಂಗಾದಾವಣಿ, ಸೀರೆ ಉಟ್ಟು ,ಬುರ್ಕಾ, ತೊಟ್ಟು ಸಡಗರ ಸಂಭ್ರಮದಿಂದ ಕುಣಿದಾಡಿದರು.
ರಾಮನವಮಿಯ ಬೆಲ್ಲದ ಪಾನಕ – ಕೋಸಂಬರಿ, ಕ್ರಿಸ್ಮಸ್ ನ ಕೇಕ್, ರಂಜಾನ್ ಹಬ್ಬದ ಇಪ್ತಾರ್ ಕೂಟದ ಫಲಾಹಾರ, ಗಣಪತಿ ಹಬ್ಬದ ಕಡುಬು, ಯುಗಾದಿಯ ಹೋಳಿಗೆ, ಭೂಮಿಪೂಜೆಯ ಪಾಯಸ ಹೀಗೆ ವಿವಿಧ ಬಗೆಯ ತಿಂಡಿತಿನಿಸುಗಳು 30 ಜಿಲ್ಲೆಗಳ ವಿಶೇಷ ಖಾಧ್ಯಗಳು ಹಬ್ಬದ ಸಡಗರವನ್ನು ಇಮ್ಮಡಿಗೊಳಿಸಿದವು.
ವಸ್ತು ಪ್ರದರ್ಶನ
ಸುಮಾರು ವರ್ಷಗಳ ಹಿಂದೆ ಬಳಕೆಯಲ್ಲಿದ್ದ ಬೀಸು ಕಲ್ಲು, ಒನಕೆ, ಸೌದೆ ಒಲೆ, ಕೊಡಲಿ, ಮಚ್ಚು, ಬರ್ಜಿ, ಚನ್ನೆಮಣೆ, ಕೀಲುಗೊಂಬೆ, ಪಾರಂಪರಿಕ ಔಷಧಿ, ಕುಡುಗೋಲು, ಬಂಡಿ,ನಾಣ್ಯಗಳು,ಸೇರು, ಒಳಕಲ್ಲು, ಶಹನಾಯಿ,ಮಜ್ಜಿಗೆಯ ಕಡೆಗೋಲು, ತಾಳ, ಹಾರ್ಮೊನಿಯಂ, ಗಂಡುಕೊಡಲಿ,ಶಾವಿಗೆ ಒತ್ತು,ಹುತ್ತದ ಮಾದರಿ,ವಿಭಿನ್ನ ಬಗೆಯ ರಂಗವಲ್ಲಿ, ವಿವಿಧ ಧಾನ್ಯದ ರಾಶಿ,ಕಳಸ, ದಸರಾ ಗೊಂಬೆಗಳು, ನವರಾತ್ರಿಯ ಮಾತೃದೇವತೆ, ಕುರಾನ್ ಪ್ರತಿ, ಜಾನಮಾಜ್,ಕ್ರಿಸ್ತನ ಜನನದ ಗೋದರಿ, ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನ ಮಾದರಿ ಚಿತ್ರಗಳು ವಸ್ತುಪ್ರದರ್ಶನದಲ್ಲಿದ್ದವು.
ದೇಸೀ ಆಟಗಳು
ದೇಸೀ ಆಟಗಳಾದ ಹಗ್ಗ ಜಗ್ಗಾಟ, ಲಗೋರಿ, ಬುಗುರಿ, ಕುಂಟೋಬಿಲ್ಲೆ ಹಾಗೂ ಜನಪದ ನೃತ್ಯ-ಹಾಡು ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಸಂತಸದಿಂದ ಭಾಗವಹಿಸಿದರು.
ಉತ್ಸವದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಬಿ.ಜಿ.ಅಮೃತೇಶ್ವರ ಅವರು ವಹಿಸಿಕೊಂಡಿದ್ದರು. ಹಾಗೂ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಪಕ ಹಾಗೂ ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಷ್ಮುಖಪ್ಪ ಕೆ.ಹೆಚ್, ಐಕ್ಯುಎಸಿ ಸಂಚಾಲಕ ಪ್ರೊ.ವಿಜಯ್ ಕುಮಾರ್, ಉತ್ಸವದ ಕ್ರೀಡೆಗಳ ಆಯೋಜಕ ಹಾಗೂ ದೈಹಿಕ ನಿರ್ದೇಶಕರಾದ ಕಲ್ಲೇಶಪ್ಪ ಎಸ್.ಜಿ ಹಾಗೂ ಕಾಲೇಜಿನ ಎಲ್ಲಾ ಅಧ್ಯಾಪಕರು ಹಾಗೂ ಬೋಧಕೇತರ ಸಿಬಂದಿಗಳು ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಭಾಗವಹಿಸಿದ್ದರು.

ಜಾನಪದ ಕಲೆ, ಸಂಸ್ಕೃತಿಯು ಹಿಂದಿನಿಂದಲೂ ಮನುಷ್ಯ ಜೀವನದೊಂದಿಗೆ ಸಂಬಂಧ ಹೊಂದಿದ್ದು ಇಂದಿನ ಪೀಳಿಗೆಯ ಮಕ್ಕಳು ಜಾನಪದ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಜನಪದ ಪರಂಪರೆಯ ಪ್ರತೀಕವಾಗಿ ‘ಜನಪದ ಉತ್ಸವ – 2025’ ನಮ್ಮಸಂಸ್ಕೃತಿ ನಮ್ಮ ಹೆಮ್ಮೆ ಹೆಚ್ಚು ಅರ್ಥ ಪೂರ್ಣವಾಗಿ ಮೂಡಿ ಬಂದಿದೆ.
| ಜಾನಪದ ತಜ್ಞ, ವಿಶ್ರಾಂತ ಪ್ರಾಧ್ಯಾಪಕ ಡಾ.ಬಸವರಾಜ ನೆಲ್ಲಿಸರ

ನಮ್ಮ ದೇಶಿ ಸಂಸ್ಕೃತಿಯನ್ನು ಸಂರಕ್ಷಿಸಿ, ಮನುಷ್ಯನ ಬದುಕಿನೊಂದಿಗೆ ಅವಿನಾಭಾವ ಸಂಬಂಧವನ್ನು ತಲೆಮಾರುಗಳಿಂದ ಹೊಂದಿರುವ, ಆಯಾ ಪ್ರಾದೇಶಿಕ ಗ್ರಾಮೀಣ ವ್ಯಾಪ್ತಿಯಲ್ಲಿ ಆಚರಣೆಯಲ್ಲಿರುವ ಈ ಮೌಖಿಕ ಪರಂಪರೆಯ ಜಾನಪದ ಸಂಸ್ಕೃತಿಯ ಸೊಗಡುಗಳು ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸುವ ಒಂದು ಅತ್ಯುತ್ತಮ ಪ್ರಯತ್ನ ‘ಜಾನಪದ ಉತ್ಸವ’-2025.
| ಡಾ.ಬಿ.ಜಿ.ಅಮೃತೇಶ್ವರ, ಪ್ರಾಂಶುಪಾಲರು

ಜನಪದರ ಬದುಕು, ಆಧುನಿಕ ಜಾಗತೀಕರಣದ ಕಾಲದಲ್ಲಿ ಹೆಚ್ಚು ಪ್ರಸ್ತುತವಾಗುತ್ತಿದೆ ಅದರ ಸದಾಶಯವನ್ನು ಕಾಲೇಜು ಶಿಕ್ಷಣ ಇಲಾಖೆಯ ಸುತ್ತೋಲೆಯಂತೆ ನಮ್ಮ ಕಾಲೇಜಿನ ವಿಧ್ಯಾರ್ಥಿಗಳು ಎಲ್ಲಾ ಅಧ್ಯಾಪಕರ ಸಹಾಯದಿಂದ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ಅವರಿಗೆ ಅಭಿನಂದನೆಗಳು.
| ಷಣ್ಮುಖಪ್ಪ ಕೆ ಎಚ್ ,ಕಾರ್ಯಕ್ರಮದ ನಿರ್ದೇಶಕರು, ಸಂಚಾಲಕರು,ಸಾಂಸ್ಕೃತಿಕ ವೇದಿಕೆ

ಅಂತರಂಗ
ಮಹಿಳಾ ದಿನಾಚರಣೆ | ಸಾಧನೆಯ ಸುಗಂಧ, ಪ್ರೇರಣೆಯ ಬೆಳಕು

- ಡಾ. ವೆಂಕಟೇಶ ಬಾಬು ಎಸ್, ಸಹ ಪ್ರಾಧ್ಯಾಪಕರು, ದಾವಣಗೆರೆ
ಇಂದು ಮಹಿಳಾ ದಿನಾಚರಣೆ ಪ್ರಯುಕ್ತ ಎಲ್ಲಾ ಮಹಿಳೆಯರಿಗೆ ಶುಭಾಷಯಗಳು
ಪ್ರತಿಯೊಂದು ಮಹಿಳೆ ತನ್ನ ಜೀವನದಲ್ಲಿ ವಿವಿಧ ಹಂತಗಳನ್ನು ದಾಟುತ್ತಾ, ಆತ್ಮವಿಶ್ವಾಸ, ಪ್ರೇರಣೆ ಹಾಗೂ ಶಕ್ತಿ ಹೊಂದುವ ಪ್ರತಿರೂಪವಾಗಿರುತ್ತಾರೆ. ವಿಶ್ವ ಮಹಿಳಾ ದಿನವನ್ನು ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ, ಇದು ಮಹಿಳೆಯರ ಹಕ್ಕುಗಳು, ಸಾಧನೆಗಳು ಮತ್ತು ಅವರ ಜಗತ್ತಿನ ಮೇಲೆ ಬೀರಿದ ಪ್ರಭಾವವನ್ನು ಗೌರವಿಸುವ ಒಂದು ಅದ್ಭುತ ಅವಕಾಶ.
ಮಹಿಳೆಯರ ಬದುಕು ಕೇವಲ ಕುಟುಂಬದ ಕೇಂದ್ರದಲ್ಲಿಯೇ ಸೀಮಿತವಾಗಿಲ್ಲ; ಅವರು ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲೂ ಮಹತ್ತರ ಪಾತ್ರ ವಹಿಸುತ್ತಿದ್ದಾರೆ. ಅಮ್ಮನಾಗಿ, ಪತ್ನಿಯಾಗಿ, ಮಗುವಾಗಿ, ಸಂಸ್ಥಾಪಕಿಯಾಗಿ, ನಾಯಕಿಯಾಗಿ, ವೈಜ್ಞಾನಿಕರಾಗಿ, ಕ್ರೀಡಾಪಟುವಾಗಿ – ಎಲ್ಲಾ ಪಾತ್ರಗಳಲ್ಲೂ ಮಹಿಳೆಯರು ತಮ್ಮ ಅದ್ಭುತ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ.
ಈಗ ಮಹಿಳೆಯರು ತಮ್ಮ ಇಚ್ಛಾಶಕ್ತಿಯೊಂದಿಗೆ ಮತ್ತು ಶಿಕ್ಷಣದ ಹಾದಿಯ ಮೂಲಕ ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಇಂದು ಕಲ್ಪನಾ ಚಾವ್ಲಾ, ಮೇರೀ ಕೋಮ್, ಸುಧಾ ಮುರ್ತಿ, ಕಿರಣ್ ಮಜುಂದಾರ್ ಶಾ, ಫಾಲ್ಗುಣಿ ನಾಯರ್ ಮುಂತಾದ ಅನೇಕ ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡುತ್ತಿದ್ದಾರೆ.
ಮಹಿಳಾ ದಿನಾಚರಣೆ – ಇತಿಹಾಸ ಮತ್ತು ಹಿನ್ನೆಲೆ
ಮಹಿಳಾ ದಿನಾಚರಣೆ (International Women’s Day – IWD) ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ. ಇದು ಮಹಿಳೆಯರ ಹಕ್ಕುಗಳು, ಸಶಕ್ತೀಕರಣ, ಸಾಧನೆಗಳು ಮತ್ತು ಲಿಂಗ ಸಮಾನತೆಯ ಪ್ರಗತಿ ಕುರಿತು ಜಾಗೃತಿಯನ್ನು ಮೂಡಿಸುವ ಮಹತ್ವದ ದಿನ.
ಮಹಿಳಾ ದಿನಾಚರಣೆಯ ಇತಿಹಾಸ
ಮಹಿಳಾ ದಿನಾಚರಣೆಯ ಮೂಲವು 1900ರ ದಶಕದ ಪ್ರಾರಂಭದಲ್ಲಿ ಕೈಗೆತ್ತಿಕೊಳ್ಳಲಾದ ಮಹಿಳಾ ಹಕ್ಕುಗಳ ಹೋರಾಟಕ್ಕೆ ಸರಿಹೊಂದಿದೆ. ಈ ದಿನವನ್ನು ಆಚರಿಸಲು ಪ್ರೇರಣೆ ನೀಡಿದ ಪ್ರಮುಖ ಘಟನೆಗಳು ಹೀಗಿವೆ:
1. 1908 – ಮಹಿಳಾ ಹಕ್ಕುಗಳ ಹೋರಾಟ:
ಅಮೇರಿಕಾದ ನ್ಯೂಯಾರ್ಕ್ ನಗರದಲ್ಲಿ ಸಾವಿರಾರು ಮಹಿಳಾ ಕಾರ್ಮಿಕರು ಕಡಿಮೆ ಕೆಲಸದ ಘಂಟೆಗಳು, ಉತ್ತಮ ಸಂಬಳ ಮತ್ತು ಮತದಾನದ ಹಕ್ಕುಕ್ಕಾಗಿ ಪ್ರತಿಭಟನೆ ನಡೆಸಿದರು.
2. 1909 – ಮೊದಲ ಮಹಿಳಾ ದಿನಾಚರಣೆ:
ಫೆಬ್ರವರಿ 28, 1909 ರಂದು ಅಮೆರಿಕಾದ ಸೋಶಲಿಸ್ಟ್ ಪಾರ್ಟಿ ದೇಶದಾದ್ಯಂತ ಮಹಿಳಾ ದಿನವನ್ನು ಆಚರಿಸಿತು.
3. 1910 – ಅಂತಾರಾಷ್ಟ್ರೀಯ ಹೋರಾಟ:
ಡೆನ್ಮಾರ್ಕ್ನ ಕೊಪನ್ಹೇಗನ್ ನಲ್ಲಿ ನಡೆದ ಸೋಶಲಿಸ್ಟ್ ವುಮೆನ್ಸ್ ಕಾನ್ಫರೆನ್ಸ್ ನಲ್ಲಿ ಜರ್ಮನಿಯ ಕ್ಲಾರಾ ಜೆಟ್ಕಿನ್ ಅವರು ಪ್ರಪಂಚದಾದ್ಯಂತ ಮಹಿಳಾ ದಿನ ಆಚರಿಸುವ ಸಲಹೆ ನೀಡಿದರು.
4. 1911 – ಪ್ರಥಮ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ:
ಮೊದಲ ಬಾರಿ ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್ ದೇಶಗಳಲ್ಲಿ ಮಹಿಳಾ ದಿನವನ್ನು ಮಾರ್ಚ್ 19ರಂದು ಆಚರಿಸಲಾಯಿತು.
5. 1913 – ಮಾರ್ಚ್ 8ಕ್ಕೆ ದಿನಾಂಕ ಬದಲಾವಣೆ:
1913ರಿಂದ ಮಾರ್ಚ್ 8ನೇ ತಾರೀಖನ್ನು ಅಧಿಕೃತವಾಗಿ ಮಹಿಳಾ ದಿನಾಚರಣೆಗೆ ಮೀಸಲಾಗಿಸಲಾಯಿತು.
6. 1975 – ವಿಶ್ವ ಮಹಿಳಾ ವರ್ಷ:
UNO1975ನೇ ವರ್ಷವನ್ನು “ಅಂತರಾಷ್ಟ್ರೀಯ ಮಹಿಳಾ ವರ್ಷ” ಎಂದು ಘೋಷಿಸಿ, ಮಹಿಳಾ ದಿನವನ್ನು ಅಧಿಕೃತವಾಗಿ ಅಂಗೀಕರಿಸಿತು
7. 2011 – 100ನೇ ವಾರ್ಷಿಕೋತ್ಸವ:
2011ರಲ್ಲಿ ಮಹಿಳಾ ದಿನಾಚರಣೆ ಶತಮಾನೋತ್ಸವವನ್ನು ಪೂರೈಸಿತು.
ಮಹಿಳಾ ದಿನಾಚರಣೆಯ ಉದ್ದೇಶ
ಮಹಿಳಾ ದಿನವನ್ನು ಆಚರಿಸುವ ಪ್ರಮುಖ ಉದ್ದೇಶಗಳು:
ಮಹಿಳಾ ಸಮಾನತೆ ಮತ್ತು ಹಕ್ಕುಗಳನ್ನು ಬಲಪಡಿಸುವುದು.
ಮಹಿಳೆಯರ ಸಾಧನೆಗಳನ್ನು ಗುರುತಿಸಿ, ಗೌರವ ನೀಡುವುದು.
ಅವರ ಸಮಸ್ಯೆಗಳನ್ನು ಅರಿತು, ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು.
ಮಹಿಳಾ ಶಕ್ತಿ ಮತ್ತು ಸ್ವಾವಲಂಬನೆಯ ಕುರಿತು ಜಾಗೃತಿಯನ್ನು ಹರಡುವುದು.
ಮಹಿಳಾ ದಿನಾಚರಣೆ – ಇಂದಿನ ಪ್ರಸ್ತುತತೆ
ಇಂದಿನ ಹೊತ್ತಿನಲ್ಲಿ, ಮಹಿಳೆಯರು ಶಿಕ್ಷಣ, ಉದ್ಯಮ, ರಾಜಕೀಯ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ಸೇವಾ ಕ್ಷೇತ್ರ ಮತ್ತು ಉದ್ಯಮಶೀಲತೆ ಎಲ್ಲೆಲ್ಲಿಯೂ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ಮಹಿಳಾ ದಿನವು “Gender Equality – ಲಿಂಗ ಸಮಾನತೆ”, “Break the Bias – ಲಿಂಗತಾತ್ವಿಕ ಭೇದಭಾವವನ್ನು ಕಳಚುವುದು”, “DigitALL: Innovation and technology for gender equality” ಮುಂತಾದ ವಿಶೇಷ ಥೀಮ್ಗಳೊಂದಿಗೆ ಪ್ರತಿವರ್ಷ ಜಾಗೃತಿಯನ್ನು ಮೂಡಿಸುತ್ತದೆ.
ಮಹಿಳೆಯರು ಬದುಕಿನ ಉತ್ಸಾಹ
ಮಹಿಳೆಯರು ತಮ್ಮ ಕುಟುಂಬ, ಸಮಾಜ ಮತ್ತು ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರಲ್ಲಿರುವ ಹೃದಯಸ್ಪರ್ಶಿ ಭಾವನೆ, ತ್ಯಾಗ, ಶ್ರಮ ಹಾಗೂ ಪ್ರೀತಿ ಅವರ ಬದುಕಿನ ಹಾದಿಯನ್ನು ಮಾದರಿಯಾಗಿ ಮಾಡುತ್ತದೆ. ಶಿಕ್ಷಣ, ಉದ್ಯೋಗ, ರಾಜಕೀಯ, ಕಲೆ, ಕ್ರೀಡೆ, ವಿಜ್ಞಾನ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ.
ಅನೇಕ ಮಹಿಳೆಯರು ಸಂಕಷ್ಟಗಳನ್ನು ಎದುರಿಸುತ್ತಾ, ಸಾಧನೆಗೆ ಹೊಸ ಪರಿಮಾಣ ನೀಡಿದ ಉದಾಹರಣೆಗಳಿವೆ. ಐದು ದಶಕಗಳ ಹಿಂದೆಯೂ ಮಹಿಳೆಯರು ಮನೆಯಲ್ಲಿ ಸೀಮಿತವಾಗಿದ್ದರೆ, ಇಂದು ಅವರು ಅಂತರಿಕ್ಷ ಯಾತ್ರೆ, ವ್ಯವಹಾರ ನಿರ್ವಹಣೆ, ಕಾನೂನು, ತಂತ್ರಜ್ಞಾನ, ಆಡಳಿತ ಮತ್ತು ರಾಜಕೀಯದಲ್ಲಿ ಮುಂಚೂಣಿಯಲ್ಲಿದ್ದಾರೆ.
ಸಾಧನೆಗಳ ಬೆಳಕು
1. ಶಿಕ್ಷಣ ಮತ್ತು ಸಶಕ್ತೀಕರಣ:
ಜಗತ್ತಿನ ಅನೇಕ ದೇಶಗಳಲ್ಲಿ ಈಗ ಮಹಿಳಿಯರಿಗೆ ಶಿಕ್ಷಣ ಹಕ್ಕುಗಳನ್ನು ಒದಗಿಸಲಾಗುತ್ತಿದೆ, ಇದರಿಂದ ಮಹಿಳೆಯರು ಸಮಾಜದ ಮುಖ್ಯಧಾರೆಯಲ್ಲಿರಲು ಸಾಧ್ಯವಾಗಿದೆ. ಭಾರತದಲ್ಲಿ ಸವಿತ್ರಿಬಾಯಿ ಫುಲೆ, ಇಂದಿರಾ ಗಾಂಧಿ, ಕಲ್ಪನಾ ಚಾವ್ಲಾ, ಮೇರೀ ಕೋಮ್ ಮುಂತಾದವರು ಮಹಿಳಾ ಶಿಕ್ಷಣ ಮತ್ತು ಸಶಕ್ತೀಕರಣದಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ.
2. ಉದ್ಯೋಗ ಹಾಗೂ ಉದ್ಯಮಶೀಲತೆ:
ಈಗ ಮಹಿಳೆಯರು ಉದ್ಯೋಗ ಮಾತ್ರವಲ್ಲದೆ, ಸ್ವಂತ ಉದ್ಯಮಗಳನ್ನು ನಿರ್ಮಿಸಿ ಉದ್ಯಮಶೀಲತೆ ತೋರಿಸುತ್ತಿದ್ದಾರೆ. ಫಾಲ್ಗುಣಿ ನಾಯರ್ (ನೈಕಾ), ಕಿರಣ್ ಮಜುಂದಾರ್ ಶಾ (ಬಯೋಕಾನ್), ವಂದನಾ ಲೂತರ (ಪೇಪರ್ ಶೈರಿ) ಮುಂತಾದವರು ಉದ್ಯಮ ವಲಯದಲ್ಲಿ ತಮ್ಮ ಅಚ್ಚಳಿಯದ ಗುರುತು ಮೂಡಿಸಿದ್ದಾರೆ.
3. ಕ್ರೀಡೆ ಮತ್ತು ಸಾಹಸ:
ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರು ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ. ಸೈನಾ ನೆಹ್ವಾಲ್, ಮೇರೀ ಕೋಮ್, ಪಿ.ವಿ. ಸಿಂಧು, ಮಿಥಾಲಿ ರಾಜ್ ಮುಂತಾದವರು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಮ್ಮೆ ಹೆಚ್ಚಿಸಿದ್ದಾರೆ.
4. ಸಮಾಜಸೇವೆ ಮತ್ತು ಪ್ರಭಾವ:
ಮಹಿಳೆಯರು ಕೇವಲ ತಮ್ಮ ವ್ಯಕ್ತಿಗತ ಜೀವನದಲ್ಲಷ್ಟೇ ಅಲ್ಲದೆ, ಸಮಾಜಸೇವೆಯಲ್ಲಿ ಕೂಡ ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಮದರ್ ತೆರೆಸಾ, ಸುಧಾ ಮುರ್ತಿ ಮುಂತಾದವರು ತಮ್ಮ ಸಮಾಜಮುಖಿ ಕಾರ್ಯಗಳಿಂದ ಲಕ್ಷಾಂತರ ಜನರಿಗೆ ಪ್ರೇರಣೆ ನೀಡಿದ್ದಾರೆ.
ಸಮಾಜದ ಹೊಣೆಗಾರಿಕೆ – ಮಹಿಳಾ ಸಮಾನತೆ ಮತ್ತು ಗೌರವ
ಮಹಿಳೆಯರನ್ನು ಗೌರವಿಸುವ, ಅವರ ಆತ್ಮವಿಶ್ವಾಸ ಹೆಚ್ಚಿಸುವ, ಅವರಿಗೆ ಸಮಾನ ಅವಕಾಶ ಒದಗಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಮಹಿಳಾ ಸುರಕ್ಷತೆ, ಸಂವೇದನಾಶೀಲತೆ ಮತ್ತು ಗೌರವ ಹೊಂದಿದ ಸಮಾಜವನ್ನು ನಿರ್ಮಿಸುವುದು ಅನಿವಾರ್ಯ.
ನಮ್ಮ ಕರ್ತವ್ಯ – ಮಹಿಳಾ ಶಕ್ತಿಗೆ ಸಾಥ್
ಈ ಮಹಿಳಾ ದಿನಾಚರಣೆ ದಿನದಂದು ನಾವು ನಮ್ಮ ಜೀವನದಲ್ಲಿ ಶಕ್ತಿ, ಪ್ರೇರಣೆ, ಪ್ರೀತಿಯ ಬೆಳಕು ತುಂಬುವ ಮಹಿಳೆಯರಿಗೆ ಕೃತಜ್ಞತೆ ಸಲ್ಲಿಸೋಣ. ಅವರ ಸಾಧನೆಗಳನ್ನು ಗೌರವಿಸೋಣ ಮತ್ತು ಹೊಸ ತಲೆಮಾರಿನ ಮಹಿಳೆಯರಿಗೆ ಇನ್ನಷ್ಟು ಉತ್ಸಾಹ, ಶಿಕ್ಷಣ ಮತ್ತು ಅವಕಾಶಗಳನ್ನು ಒದಗಿಸುವ ಮೂಲಕ ಅವರನ್ನು ಸಶಕ್ತಗೊಳಿಸೋಣ.
“ಮಹಿಳೆಯರ ಪ್ರಗತಿ – ರಾಷ್ಟ್ರದ ಪ್ರಗತಿ!”(ಲೇಖನ-ಡಾ. ವೆಂಕಟೇಶ ಬಾಬು ಎಸ್,ಸಹ ಪ್ರಾಧ್ಯಾಪಕರು, ದಾವಣಗೆರೆ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಮ್ಮ ಪೂರ್ವಿಕ ಶಿವನೂ ; ಅವರ ಡುಬಾಕು ಸನಾತನವೂ..

- ಹರ್ಷಕುಮಾರ್ ಕುಗ್ವೆ
ಲಿಂಗವು ದೇವರಲ್ಲ ಶಿವನು ದೇವರಲ್ಲ
ಶಕ್ತಿಯೂ ದೇವರಲ್ಲ. ಮನುಷ್ಯನ ಕಲ್ಪನೆಯ ಆಳವನ್ನು ಮೀರಿದ ಯಾವ ದೇವರೂ ಇಲ್ಲ. ಅಸಲಿಗೆ ಇಡೀ ಜಗತ್ತನ್ನು ನಡೆಸುವ ದೇವರೆಂಬುದೇ ಇಲ್ಲ.
ಶಿವನು ನಮ್ಮ ಪೂರ್ವಿಕ, ಗೌರಿ ಅತವಾ ಶಕ್ತಿ ನಮ್ಮ ಪೂರ್ವಿಕಳು. ಗಂಗೆ ನಮ್ಮ ಬದುಕು. ಶಿವನ ಕೊರಳಿನ ನಾಗ ನಮ್ಮ ಕುಲ. ಲಿಂಗ ಫಲವಂತಿಕೆಯ ಸಂಕೇತವೂ ಹೌದು, ಶಿವ ಶಕ್ತಿಯರ ಸಮಾಗಮದ ಸಂಕೇತವೂ ಹೌದು. ನಮ್ಮ ಜನರಿಗೆ ಸಂಕೇತಗಳು ಶಕ್ತಿಯಾಗಿದ್ದವು, ಪ್ರೇರಣೆಯಾಗಿದ್ದವು. ಡೊಳ್ಳು ಹೊಡೆದು ಕೇಕೆ ಹಾಕಿದಾಗ ಮಳೆ ಬಂದರೆ, ನಮ್ಮ ಡೊಳ್ಳಿನ ಸದ್ದಿನ ಶಕ್ತಿಯಿಂದಲೇ, ನಮ್ಮ ಕೇಕೆಯಿಂದಲೇ ಮಳೆ ಬಂತು ಎಂದು ನಂಬಿದರು. ಇದನ್ನು primitive magic ಪರಿಕಲ್ಪನೆ ಎನ್ನಲಾಗಿದೆ. ನಮ್ಮ ಬಳ್ಳಾರಿಯ ಸಂಗನಕಲ್ಲಿನಲ್ಲಿ 3000 ವರ್ಷಗಳ ಹಿಂದೆ ಕಲ್ಲು ಬಂಡೆಗಳ ಮೇಲೆ ಕೆತ್ತಿದ ಹೋರಿ ಮತ್ತು ಉದ್ದ ಕೊಂಬಿನ ಕೆತ್ತನೆಗಳು ಸಹ ಇಂತಹ ಒಂದು ಆದಿಮ ಮಾಂತ್ರಿಕ ಶಕ್ತಿಯ ಆಚರಣೆಯಾಗಿದೆ.
ನಂಬಿಕೆಗಳನ್ನು ಸಂಸ್ಕೃತಿಯಾಗಿ, ಪರಂಪರೆಯಾಗಿ ಗ್ರಹಿಸಬೇಕೇ ಹೊರತು ದೇವರಾಗಿ ಅಲ್ಲ. ದೇವ ಎಂಬ ಕಲ್ಪನೆಯೇ ದ್ರಾವಿಡರಲ್ಲಿ ಇರಲಿಲ್ಲ. 50 ಸಾವಿರ ವರ್ಷಗಳಿಂದ ಬಂದ ಲಿಂಗ- ಯೋನಿ ಪೂಜೆ, ಗೌರಿ ಪೂಜೆ, 9,000 ವರ್ಷಗಳಿಂದ ಬಂದ ಬೂಮ್ತಾಯಿ ಪೂಜೆ, ಅರಳಿ ಮರದ ಪೂಜೆ, ಐದು ಸಾವಿರ ವರ್ಷಗಳಿಂದ ಬಂದ ಶಿವನ ಪೂಜೆ, ಗಣಪತಿ ಪೂಜೆ, ನಾಗನ ಪೂಜೆ, 4000 ವರ್ಷಗಳಿಂದ ಬಂದ ಗತಿಸಿದ ಹಿರೀಕರ ಪೂಜೆ, ಇದರ ಮುಂದುವರಿಕೆಯಾಗಿಯೇ 2600 ವರ್ಷಗಳ ಹಿಂದೆ ಬುದ್ದ ಗುರುವು ತೀರಿದ ಬಳಿಕ ಅವನ ಅಸ್ತಿಯನ್ನು ಇಟ್ಟ ಸ್ತೂಪಗಳನ್ನು ಪೂಜಿಸಿದೆವು, ದೂಪ ಹಾಕಿದೆವು... ಇದುವೇ ಈ ನೆಲದ ಪೂಜನ ಸಂಸ್ಕತಿಯಾಗಿತ್ತು.
‘ದೇವ’ ಮತ್ತು ಅಸುರ ಇಬ್ಬರೂ ಬಂದಿದ್ದು ಮಧ್ಯ ಏಷ್ಯಾದಿಂದ ಹೊರಟಿದ್ದ ಆರ್ಯರಿಂದಲೇ. ಅವರಿಗೆ ಪೂಜೆ ಗೊತ್ತಿರಲಿಲ್ಲ. ಯಜ್ಞ ಗೊತ್ತಿತ್ತು, ಹೋಮ ಗೊತ್ತಿತ್ತು. ‘ದೇವ’ ಅತವಾ “ದ-ಏವ” ಕೂಡಾ ಮೂಲದಲ್ಲಿ ಆರ್ಯರ ಪೂರ್ವಿಕ ಕುಲ ನಾಯಕರೇ ಆಗಿದ್ದಾರು... ಹೀಗಾಗಿಯೇ ಆರ್ಯ ವೈದಿಕರ ದೇವ ಎಂದರೆ ಅವರ ದಾಯಾದಿಗಳಾಗಿದ್ದ ಪಾರ್ಸಿಯನ್ (ಜೊರಾಸ್ಟ್ರಿಯನ್) ಆರ್ಯ ಅವೆಸ್ತನ್ನರಿಗೆ ಕೆಡುಕಿನ ಸಂಕೇತವಾಗಿತ್ತು. ಹಾಗೇ ಆರ್ಯ ವೈದಿಕರು ಕೆಡುಕು ಎಂದ ಅಸುರ (ಅಹುರ) ಆರ್ಯ ಅವೆಸ್ತನ್ನರ ಪಾಲಿಗೆ “ನಾಯಕ”ನಾಗಿದ್ದ. ಅವರನ್ನು ಅಹುರ ಮಜ್ದಾ ಎಂದು ಕರೆದು ಆರಾದಿಸಿದರು.
ಭಾರತಕ್ಕೆ ಪ್ರವೇಶಿಸಿದ ಬಳಿಕ ಆರ್ಯ ವೈದಿಕರಿಗೆ ಈ ನೆಲದ ಮೊದಲ ನಿವಾಸಿಗಳ ಮೇಲೆ ಯಜಮಾನಿಕೆ ಸ್ತಾಪಿಸಬೇಕಿತ್ತು. ಅದಕ್ಕಾಗಿ ನಮ್ಮಿಂದ ಪೂಜೆಗೊಳ್ಳುತ್ತಿದ್ದ ಪೂರ್ವಿಕರನ್ನು ತಮ್ಮ “ದೇವರು” ಮಾಡಿದರು. ಆ ದೇವರ ಪೂಜೆಗೆ ಅವರೇ ನಿಂತರು. ತಮ್ಮ ಜುಟ್ಟು ಬಿಟ್ಟುಕೊಂಡು ನಮ್ಮ ಜುಟ್ಟು ಹಿಡಿದರು. ನಾವು ಪೂರ್ವಿಕರನ್ನು ಬಿಟ್ಟು ಕೊಟ್ಟು, ಅವರ ಕೈಯಲ್ಲಿ ದೇವರುಗಳ ಪೂಜೆ ನಡೆಯುವಾಗ ನಮ್ಮ ಪೂರ್ವಿಕರಿಗೆ ಗೊತ್ತೇ ಇರದಿದ್ದ ವೇದ ಮಂತ್ರಗಳನ್ನ ಕೇಳಿ ಪುನೀತರಾದೆವು. ಈ ಮಂತ್ರ ಭಾಷೆಯೇ ದೇವರಿಗೆ ಅರ್ಥವಾಗುವುದು ಎಂದು ಪುಂಗಿದ್ದಕ್ಕೆ ತಲೆಯಾಡಿಸಿ ಕೈಮುಗಿದು ಗರ್ಭಗುಡಿಯ ಹೊರಗೆ ಸಾಲಿನಲ್ಲಿ ನಿಂತೆವು. ಮುಂದಿನ 2000 ವರ್ಷಗಳ ಕಾಲ ಗುಲಾಮರಾದೆವು. ಪುರಾಣಗಳನ್ನು ಕೇಳಿದೆವು, ನಂಬಿದೆವು ಮತಿಗೆಟ್ಟೆವು, ಗತಿಗೆಟ್ಟೆವು.
ಇನ್ನೂ ಉಳಿದಿರುವುದೇನು?
ನಾವು ಶಿವನ ವಕ್ಕಲು, ಗೌರಿ- ಗಂಗೆಯರ ಒಕ್ಕಲು. ಅವರು ಇಂದ್ರ ಅಗ್ನಿಯರ ವಕ್ಕಲಾಗಿದ್ದವರು ತಮ್ಮ ದೇವರಿಗೆ ಕಿಮ್ಮತ್ತಿಲ್ಲ ಎಂದರಿತು ಅವರನ್ನೇ ಬಿಟ್ಟರು. ಈಗ ಹೇಳುತ್ತಾರೆ ನಾವೇ ಸನಾತನರು ಎಂದು! ಅವರ ಡುಬಾಕು ಸನಾತನದಲ್ಲಿ ನಮ್ಮತನ ಕಳೆದುಕೊಂಡ “ಶೂದ್ರ ಮುಂಡೇಮಕ್ಕಳಾಗಿ”, ಅವರಿಗಾಗಿ ಬಾಳು ಬದುಕು ಹಾಳುಮಾಡಿಕೊಂಡು, ಅವರ ಹೋಮ ಹವನ ಮಾಡಿಸಿ, ನಮ್ಮ ಉಳಿಕೆ ಕಾಸು ಕಳೆದುಕೊಂಡು, ಗೌರವ ಗನತೆ ಕಳೆದುಕೊಳ್ಳುವುದೇ ಇವತ್ತಿನ ಸನಾತನ!
– ಹರ್ಷಕುಮಾರ್ ಕುಗ್ವೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ರಾಜಕೀಯ5 days ago
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ಚನ್ನಗಿರಿ | ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ; ಕಾನೂನು ಮೂಲಕ ಪರಿಹಾರ ಕಂಡುಕೊಳ್ಳಿ : ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಎಚ್ಚರಿಕೆ
-
ದಿನದ ಸುದ್ದಿ6 days ago
ಅಂಬೇಡ್ಕರ್ ಸ್ಮರಣೆಯಿಂದ ದೇಶ ಪ್ರಗತಿಪರವಾಗಲು ಸಾಧ್ಯ : ಸಹಾಯಕ ಪ್ರಾಧ್ಯಾಪಕ ಷಣ್ಮುಖಪ್ಪ ಕೆ.ಎಚ್
-
ದಿನದ ಸುದ್ದಿ5 days ago
ದಾವಣಗೆರೆ | ಪ್ರಾಂಶುಪಾಲರ ಹುದ್ದೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ದಾವಣಗೆರೆ | ಮೊಬೈಲ್ ಕ್ಯಾಟೀನ್ ; ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ದಾವಣಗೆರೆ | ಮೌಲಾನಾ ಅಜಾದ್ ಮಾದರಿ ಶಾಲೆಗೆ 6ನೇ ತರಗತಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಇ-ಸ್ವತ್ತು ಸಮಸ್ಯೆ ಪರಿಹಾರಕ್ಕಾಗಿ ಕಾರ್ಯನಿರ್ವಹಣಾ ಸಮಿತಿ ರಚನೆ
-
ದಿನದ ಸುದ್ದಿ5 days ago
‘ವಿದ್ಯಾಸಿರಿ’ ಯೋಜನೆಯಡಿ ವಿದ್ಯಾರ್ಥಿ ವೇತನ ಪರಿಷ್ಕರಣೆಗೆ ಒತ್ತು : ಸಿಎಂ ಸಿದ್ದರಾಮಯ್ಯ