ಭಾವ ಭೈರಾಗಿ
ಆ ಪ್ರಾಯಶ್ಚಿತ್ತ ಕಾಡಿದರಷ್ಟೇ ನಾವು ಮನುಷ್ಯರಾಗೋದಲ್ವಾ..!
ನಾವು ನೀವು ತುಂಬಾ ಸಲ ಹಾಗೆ ಮಾಡಿರುತ್ತೇವೆ. ದಾರಿಯಲ್ಲೆಲ್ಲೋ ಸಿಕ್ಕಿದ್ದು ತಿಂದುಕೊಂಡು ಅಡ್ಡಾಡಿಕೊಂಡಿದ್ದ ಬೆಕ್ಕಿನಮರಿಯನ್ನು ತುಂಬಾ ಆಸ್ಥೆಯಿಂದ ಹಿಡಿದುತಂದಿರುತ್ತೇವೆ, ಅದು ಬರಲೊಲ್ಲದು ನಾವು ಬಿಡಲೊಲ್ಲೆವು, ಎಷ್ಟೇ ತಪ್ಪಿಸಿಕೊಂಡರೂ ಬಿಡದೆ ಹಿಡಿದಿರುತ್ತೇವೆ. ‘ಒಮ್ಮೆ ನನ್ನ ಮನೆಗೆ ಬಾ ಆ ನಂತರ ನಾನೇ ಆಚೆ ತಳ್ಳಿದರೂ ನೀನು ಹೋಗುವುದಿಲ್ಲ ಹಾಗೆ ನೋಡಿಕೊಳ್ತೇನೆ’ ಎಂದು ಮನದಲ್ಲೇ ಆ ಬೆಕ್ಕಿನ ಮರಿಗೆ ಮಾತುಕೊಟ್ಟಿರುತ್ತೇವೆ.
ನಮ್ಮಿಂದ ತಪ್ಪಿಸಿಕೊಳ್ಳಲು ತನ್ನ ಶಕ್ತಿ ಮೀರಿ ಹೋರಾಡಿ ಇನ್ನು ನನ್ನಿಂದಾಗದು ಎಂದು ತಿಳಿದ ನಂತರ ಬೆಕ್ಕಿನ ಮರಿ ನಮಗೆ ಶರಣಾಗಿರುತ್ತದೆ. ಕೊನೆಗೂ ಸಿಕ್ಕಿಬಿಟ್ಟೆಯಲ್ಲಾ ಮುದ್ದಿನ ಮರಿಯೇ ಬಾ ಎಂದು ಮನೆಗೆ ತರುತ್ತೇವೆ. ಅಂದು ಆ ಬೆಕ್ಕಿನ ಮರಿಗೆ ಜೀವನದಲ್ಲಿ ಎಂದೂ ಕಾಣದಷ್ಟು ಬೂರಿ ಭೋಜನ. ತಿನ್ನಿಸಿ ಆ ಬಿಳೀ ಬೆಕ್ಕಿನ ಕೊರಳಿಗೊಂದು ಕೆಂಪು ಟೇಪು ಕಟ್ಟಿ ಮುದ್ದುಮಾಡಿ ಅಂಗಳದಲ್ಲಿ ಆಡಲು ಬಿಡುತ್ತೇವೆ.
ಅಷ್ಟೇ ಅದೆಲ್ಲಿತ್ತೋ ಯಮರೂಪಿ ನಾಯಿಯೊಂದು ಬೀದಿಯ ಅದ್ಯಾವುದೋ ಮೂಲೆಯಿಂದ ಮಿಂಚಿನವೇಗದಲ್ಲಿ ಬಂದು ನೋಡನೋಡುತ್ತಿದ್ದಂತೆಯೇ ನಮ್ಮೆದುರೇ ಆ ಮುದ್ದಿನಮರಿಯ ಕುತ್ತಿಗೆಗೆ ಬಾಯಿಹಾಕಿ ವಾಯುವೇಗದಲ್ಲಿ ಕಣ್ಮರೆಯಾಗುತ್ತದೆ. ನಾವೋ ಕೈಲಾದಷ್ಟೂ ಜೋರಾಗಿ ಕೂಗುತ್ತಾ ಅದರ ಹಿಂದೆ ಬೀದಿಯ ಕೊನೆಯವರೆಗೂ ಓಡುತ್ತೇವೆ. ಆದರೆ ಹಿಡಿದೆವಾ? ಬೆಕ್ಕಿನಮರಿಯ ಜೀವ ಉಳಿಸಿದೆವಾ? ಖಂಡಿತಾ ಇಲ್ಲ. ಹಿಡಿದು ತರುವ ಮುನ್ನ, ಮತ್ತು ತಂದಾದಮೇಲೂ ಆ ಬೆಕ್ಕಿನ ಮರಿಯ ಕಣ್ಣಲ್ಲಿ ನಾವು ಕಂಡಿದ್ದ ಆ ಮುಗ್ದತೆ ಅಸಹಾಯಕತೆಯೂ ಹೌದು ಎಂಬುದು ನಮಗೀಗ ಅರ್ಥವಾಗತೊಡಗುತ್ತದೆ.
ಪಾಪ ಅದೆಲ್ಲೋ ಬೇಲಿಬದಿಯಲ್ಲಿ ಕೈಗೆ ಸಿಕ್ಕಿದ್ದು ತಿಂದುಕೊಂಡು ಯಾರಿಗೂ ಕಾಣದಂತೆ ಕದ್ದು ತಿರುಗುತ್ತಾ ತನ್ನ ಜೀವನ ಸಾಗಿಸುತ್ತಿತ್ತು, ನಿನ್ನನ್ನು ರಾಣಿ ಮಾಡುತ್ತೇನೆ ಬಾ ಎಂದು ಕರೆತಂದು ಸಾವಿನದವಡೆಗೆ ನೂಕಿಬಿಟ್ಟಿದ್ದೇವೆ, ಕೊನೆಯಬಾರಿ ನಾಯಿ ಅದರ ಕೊರಳಿಗೆ ತನ್ನ ಚೂಪಾದ ಹಲ್ಲುನೆಟ್ಟು ಕುತ್ತಿಗೆಯನ್ನು ಬಾಯಲಿ ಬಿಗಿಹಿಡಿದಾಗ ವ್ಯಾಂವ್,,,,, ಎಂದದ್ದು ಮತ್ತೆ ಮತ್ತೆ ಕಿವಿಯಲ್ಲಿ ಗುಯ್ ಗುಟ್ಟು ಕರುಳು ಕಿತ್ತು ಬರುತ್ತದೆ. ನಮಗಾದರೂ ಏನು ಗೊತ್ತಿತ್ತು ನಾ ಕೊಡುವ ಪ್ರೀತಿ ಹೀಗೆ ಸಾವಿನ ರೂಪ ಪಡೆಯುತ್ತದೆ ಎಂದು? ಅಲ್ಲಿ ನಾವೂ ಅಸಹಾಯಕರೇ ಅಲ್ವಾ?
ಒಮ್ಮೆ ನಮ್ಮ ಮನೆಯಲ್ಲಿ ಇಲಿಮರಿಯೊಂದು ಕಾಲಿಗೆ ಪೆಟ್ಟಾಗಿ ಕುಂಟುತ್ತಾ ಹೋಗುತ್ತಿತ್ತು, ಸಿನಿಮಾಗಳಲ್ಲಿ ಪ್ರಾಣಿಪ್ರಿಯ ಮಕ್ಕಳನ್ನು ನೋಡಿ ಇನ್ಸ್ಪೈರ್ ಆಗಿದ್ದ ನಾನು ಆ ಇಲಿಯನ್ನು ಕಷ್ಟಪಟ್ಟು ಹಿಡಿದೆ, ಅದರ ಕೊರಳಿಗೆ ದಾರ ಕಟ್ಟಿ ನಮ್ಮ ಮನೆಯ ಮಂಚದ ಕಾಲಿಗೆ ಕಟ್ಟಿದೆ, ಅದು ಏನೇನು ತಿನ್ನುತ್ತದೆ ಎಂದು ತಿಳಿದುಕೊಂಡು ಅದನ್ನೇ ತಂದು ತಿನ್ನಿಸಿದೆ. ಇಡೀ ರಾತ್ರಿ ಅಲ್ಲೇ ಇದ್ದ ಇಲಮರಿಯನ್ನು ಆಗಾಗ ನೋಡಿ ಸಂತಸ ಪಟ್ಟೆ. ಬೆಳಗ್ಗೆ ಎದ್ದು ಬ್ರಶ್ ಮಾಡಲು ಮಂಚದ ಪಕ್ಕದಲ್ಲೇ ನಡೆದುಹೋಗುವಾಗ ಸರ್ರನೆ ಬಂದ ಇಲಿಮರಿ ನನ್ನ ಕಾಲಿಗೆ ಸಿಕ್ಕಿತ್ತು. ಅಷ್ಟೆ. ನಾನು ಇಟ್ಟ ಹೆಜ್ಜೆಯ ಕೆಳಗೆ ಸಿಕ್ಕು ವಿಲವಿಲ ಒದ್ದಾಡಹತ್ತಿತು.
ಅಯ್ಯಯ್ಯೋ ಎಂದವನೇ ನೀರು ತಂದು ಬಾಯಿಗೆ ಬಿಡಲು ಹೋಗಿ ಸ್ನಾನ ಮಾಡಿಸಿಬಿಟ್ಟೆ, ಮನೆಯ ಪಕ್ಕದಲ್ಲಿದ್ದ ದೇವಸ್ಥಾನಕ್ಕೆ ಹೋಗಿ ತೀರ್ಥ ತಂದು ಇಲಿಮರಿಗೆ ಪ್ರೋಕ್ಷಣೆ ಮಾಡಿದೆ. ಆದರೆ ಇಲಿಮರಿ ಬದುಕಲಿಲ್ಲ. ಇದೆಲ್ಲ ನಡೆದು ಅರ್ಧಗಂಟೆಯ ಒಳಗೆ ಇಲಿಯ ಸ್ವರ್ಗಾರೋಹಣ ನಡೆದೇ ಹೋಯಿತು. ನಾನು ಪ್ರಾಯಶ್ಚಿತ್ತದಲ್ಲಿ ಬೆಂದು ಹೋದೆ. ಆ ಇಲಿಯನ್ನು ಕೊಂದ ಪಾಪಪ್ರಜ್ಞೆ ಇಂದಿಗೂ ನನ್ನನ್ನು ಕಾಡುತ್ತದೆ.
ಕೇವಲ ಇಲಿ ಬೆಕ್ಕಿನ ವಿಚಾರದಲ್ಲಷ್ಟೆ ಅಲ್ಲ ಮನುಷ್ಯರ ವಿಚಾರದಲ್ಲೂ ಸಾಕಷ್ಟು ಬಾರಿ ಹೀಗೆ ಮಾಡಿರುತ್ತೇವೆ. ಸಂಬಂಧಗಳ ಆರಂಭದಲ್ಲಿ ಕ್ಷಣಕ್ಕೊಂದರಂತೆ ಹೊಸ ಭರವಸೆಗಳ ಹುಟ್ಟಿಗೆ ಕಾರಣರಾಗಿರುತ್ತೇವೆ. ನಂತರ ನಮಗೆ ನಾವೇ ಸಮಾಧಾನಿಸಿಕೊಂಡು ಇನ್ನೂ ಏನು ಮಾಡಬೇಕು ಬಿಡು ಎಂದುಕೊಂಡಿರುತ್ತೇವೆ. ಆಗತಾನೆ ಯೌವನಕ್ಕೆ ಕಾಲಿಟ್ಟು ತಂದೆ ತಾಯಿ ಜೊತೆಗೆ ಮಗುವಂತಿದ್ದ ಪುಟ್ಟ ಹುಡುಗಿಯೊಂದನ್ನು ಮದುವೆಯಾಗಿ ಅವಳ ಕಂಗಳಲ್ಲಿದ್ದ ಸಾವಿರ ಕನಸುಗಳಿಗೆ ಸಮಾಧಿಕಟ್ಟಿ, ಆರಂಭವಾಗುವುದಕ್ಕೂ ಮುಂಚೆಯೇ ಅವಳ ಬದುಕಿಗೆ ಬೇಲಿಹಾಕಿ, ಅವಳ ಜೀವನವನ್ನೇ ನರಕಮಾಡಿರುವ ಅದೆಷ್ಟೋ ಗಂಡಸರನ್ನು ಕಣ್ಣಾರೆ ಕಂಡಿದ್ದೇನೆ.
ಪಾಪ ಮದುವೆಯ ಹೊಸತರಲ್ಲಿ ಒಬ್ಬನೇ ಮಗ, ಸರ್ಕಾರಿ ಕೆಲಸ, ಕೈತುಂಬಾ ಸಂಬಳ ಇನ್ನೇನು ಬೇಕು ತಗೋ ರಾಣಿತರ ಇರ್ತಿಯ ಅಂತ ಅಕ್ಕಪಕ್ಕದ ಮನೆಯವರು ಅವಳನ್ನು ಉಬ್ಬಿಸಿರುತ್ತಾರೆ. ಅವಳೋ ದಿನಕ್ಕತ್ತು ಬಾರಿ ಅವನ ಫೋಟೋ ನೋಡಿ ಇದೇ ಎದೆಯಮೇಲೆ ಮಲಗಬೇಕು, ಗುಂಗುರು ಕೂದಲಿನೊಂದಿಗೆ ಆಟವಾಡಬೇಕು, ಕಂಬಳಿಹುಳದಂತ ಮೀಸೆ ಹಿಡಿದು ತಿರುವಬೇಕು, ಗುಂಡುಗಲ್ಲವ ಕಚ್ಚಿ ಚೇಷ್ಟೆ ಮಾಡಬೇಕು ಹೀಗೆ ಹತ್ತಾರು ಕನಸು ಕಂಡಿರುತ್ತಾಳೆ, ಆದರೆ ಅಸಲಿಗೆ ಅಂಗಾತ ಮಲಗುವುದಕ್ಕಷ್ಟೇ ಸೀಮಿತವಾದಾಗ ಆ ಪುಟ್ಟ ಹೃದಯ ತನ್ನ ಕನಸು ಕೊಂದವರನ್ನು ಯಾಕೆ ಕ್ಷಮಿಸಬೇಕು?
ಕ್ಷಮಿಸಿ ಇದನ್ನೆಲ್ಲಾ ಹೇಳಬೇಕೆಂದುಕೊಂಡಿರಲಿಲ್ಲ, ಆದರೆ ಕಥೆಯೊಂದನ್ನು ಹೆಣೆಯುತ್ತಾ ಪಾರ್ಕಿನಲ್ಲಿ ಹೆಜ್ಜೆ ಮೇಲೆಜ್ಜೆ ಇಟ್ಟು ಸುತ್ತುವಾಗ ಅವನೊಬ್ಬ ಅವಳ ಮಾತೇ ಕೇಳದೆ ಮುಂದೆ ಹೋಗುತ್ತಿದ್ದ, ತನ್ನನ್ನು ಬಿಟ್ಟುಹೋಗದಂತೆ ಅವಳು ಅಂಗಲಾಚಿ ಬೇಡುತ್ತಿದ್ದಾಳೆ. ಅಸಲಿಗೆ ಅವರಿಬ್ಬರೂ ಗಂಡಹೆಂಡತಿಯರು. ಮದುವೆಯಾದಾಗಿನಿಂದ ಹೊಂದಾಣಿಕೆಯೇ ಇಲ್ಲ ಅವಳು ಶುದ್ಧ ಚಾಕರಿಯವಳಂತೆ ದುಡಿಯುತ್ತಾಳೆ ಆತನಿಗೆ ಸಮಾಧಾನವೇ ಇಲ್ಲ. ಅದೇನೋ ಸಾಲದು ಅಂತ ಬಿಟ್ಟು ಹೋಗುತ್ತಿದ್ದ ಅವಳು ಅಳುವುದಕಂಡು ನನಗೆ ಇದೆಲ್ಲಾ ನೆನಪಾಯಿತು. ಅವಳಿಗೆ ಮತ್ತೇನೂ ಬೇಡವಾಗಿತ್ತು ಆ ಹಿಡಿಯಷ್ಟಿರುವ ಹೃದಯಕ್ಕೆ ಬೊಗಸೆಯಷ್ಟು ಪ್ರೀತಿಕೊಡದಷ್ಟು ಬಡವನಾಗಿದ್ದ ನನ್ನೆದುರು ನಿಂತಿದ್ದ ಸೊ ಕಾಲ್ಡ್ ಗಂಡಸು…!
-ದರ್ಶನ್ ಆರಾಧ್ಯ
ಬೆಂಗಳೂರು
ಸುದ್ದಿದಿನ.ಕಾಂ|ವಾಟ್ಸಾಪ್|9986715401