Connect with us

ದಿನದ ಸುದ್ದಿ

ಬದಲಾದ ಸನ್ನಿವೇಶದಲ್ಲಿ ಹೀಗಿರಲಿ ಶಿಕ್ಷಣ ಪದ್ಧತಿ; ಮಗುವಿನ ಜೀವ ಮತ್ತು ಜೀವನ ಎರಡಕ್ಕೂ ಸಿಗಲಿ ಸಮಾನ ಆದ್ಯತೆ

Published

on

  • ವಿ.ಕೆ.ಕುಮಾರಸ್ವಾಮಿ, ಶಿಕ್ಷಕರು, ರಾಮನಗರ

ಇಡೀ ಭೂ ಖಂಡಕ್ಕೆ ವಕ್ಕರಿಸಿರುವ ಕೊರೋನಾ ವಿಷ ಪೀಡೆಯ ಹಾವಳಿಯಿಂದ ಇಂದು ಎಲ್ಲವೂ ಅಯೋಮಯವಾಗಿದೆ. ಈ ವಿಷವರ್ತುಲದಲ್ಲೇ ಬದುಕು ಸವೆಸುವುದು ಸರ್ವರಿಗೂ ಅನಿವಾರ್ಯವಾಗಿದೆ. ಬಹುಕಾಲದಿಂದ ಅಸ್ತಿತ್ವದಲ್ಲಿದ್ದ ನಮ್ಮ ಧೀಮಂತ ಶಿಕ್ಷಣ ವ್ಯವಸ್ಥೆಯೂ ಸಹ ಇದರಿಂದ ಹೊರತಾಗಿಲ್ಲ. ಪ್ರಸ್ತುತ ಸಂದಿಗ್ಧ ಸಂದರ್ಭದಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ನೇರವಾಗಿ ಚಾಲನೆ ಕೊಡುವ ಬಗ್ಗೆ ಎಲ್ಲರಲ್ಲೂ ಜಿಜ್ಞಾಸೆ ಇದೆ.

ಹೇಗೋ ಶಾಲೆಗಳು ಪುನರಾರಂಭವಾದರೂ, ಈ ಮೊದಲಿನಂತೆ ಶಿಕ್ಷಣದ ರಥವನ್ನ ಎಳೆಯುವುದು ಪ್ರಾಯಾಸದ ವಿಚಾರವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಹಾಗೂ ಸಂಬಂಧಿಸಿದ ರಾಜ್ಯ ಸರಕಾರಗಳು ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿರುವುದು ಒಂದಷ್ಟು ವಿಶ್ವಾಸ ಮೂಡಿಸಿದ್ದರೂ, ಅವುಗಳ ಜಾರಿ ಮತ್ತು ಪಾಲನೆ ಅಷ್ಟು ಸರಾಗದ ಕೆಲಸವಲ್ಲ. ಶಾಲೆಗಳು ಆರಂಭವಾದ ನಂತರ ಸರಕಾರದ ಮಾರ್ಗಸೂಚಿಗಳ ಜೊತೆಗೆ, ಕೈಗೊಳ್ಳಬಹುದಾದ ಇನ್ನಿತರ ಉಪಕ್ರಮಗಳನ್ನು ಕುರಿತು ಒಂದು ಅವಲೋಕನ ಇಲ್ಲಿದೆ.

ಹಿರಿದಾಗಬೇಕಿದೆ ಪೋಷಕರ ಪಾತ್ರ

ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು ಎಂಬ ನಾಣ್ಣುಡಿಯಂತೆ ಬದಲಾದ ಶೈಕ್ಷಣಿಕ ದಿನಗಳಲ್ಲಿ ಪೋಷಕರು ಸಹ ಶಿಕ್ಷಣ ವ್ಯವಸ್ಥೆಯ ಒಂದು ಭಾಗವಾಗಿ ಹೊರಳಬೇಕಿದೆ. ಈ ಮೊದಲು ಶಿಕ್ಷಕ-ಪಠ್ಯವಸ್ತು–ವಿದ್ಯಾರ್ಥಿ ಕೇಂದ್ರಿತವಾಗಿದ್ದ ತ್ರಿಸೂತ್ರದ ಶಿಕ್ಷಣ ವ್ಯವಸ್ಥೆ ಇಂದು ಪೋಷಕರನ್ನೂ ಒಳಗೊಂಡು ಚತುರ್ ಸೂತ್ರವಾಗಬೇಕಿದೆ. ಶಾಲಾವಧಿಯನ್ನು ಕಡಿತಗೊಳಿಸುವ ಬಗ್ಗೆ ಈಗಾಗಲೇ ಉನ್ನತ ಮಟ್ಟದ ಚಿಂತನೆ ನಡೆಯುತ್ತಿರುವುದರಿಂದ, ಇನ್ನು ಮುಂದೆ ಮಗುವಿಗೆ ಮನೆಯಲ್ಲೂ ಸಹ ಕಲಿಕೆಯಾಗಬೇಕಿದೆ.

ವಿಶೇಷವಾಗಿ ತಾಯಂದಿರು ಸ್ವತಃ ಶಿಕ್ಷಕರಾಗಿ ಬದಲಾಗಬೇಕಿದೆ. ಪ್ರಬುದ್ಧ ಪೌರರ ನಿರ್ಮಾಣದಲ್ಲಿ ಶಿಕ್ಷಣದ ಪಾತ್ರ ಅತ್ಯಂತ ಹಿರಿದಾಗಿದ್ದು, ಈ ನಿಟ್ಟಿನಲ್ಲಿ ನಾವಿಡುವ ಪ್ರತೀ ಹೆಜ್ಜೆಯೂ ಭವಿಷ್ಯದಲ್ಲಿ ಶಿಕ್ಷಣದ ಸ್ಥಿತಿಸ್ಥಾಪಕತ್ವದ ಮುನ್ನುಡಿಯಾಗುತ್ತದೆ. ಇತಿಹಾಸದಲ್ಲಿ ಶಿವಾಜಿ ಮಹಾರಾಜರ ತಾಯಿ ಜೀಜಾಬಾಯಿಯನ್ನು ಮೊದಲುಗೊಂಡು, ಅನೇಕ ತಾಯಂದಿರು ತಮ್ಮ ಕಂದಮ್ಮಗಳ ಭವಿಷ್ಯಕ್ಕೆ ಅಡಿಪಾಯವಾದದ್ದನ್ನು ಸ್ಮರಿಸಿಕೊಳ್ಳುತ್ತಾ, ಅದೇ ಹಾದಿಯಲ್ಲಿ ಸಾಗಬೇಕಿದೆ.

‘ಹಿತ್ತಲ ಗಿಡ ಮದ್ದಲ್ಲ’ ಎಂಬಂತೆ ಮಕ್ಕಳು ಮನೆಯಲ್ಲಿ ಮೊಂಡು ಬೀಳುವುದು ಸಹಜವೇ. ಆದರೆ ಇಂದಿನ ವಿಷಮ ಪರಿಸ್ಥಿತಿಯಲ್ಲಿ ಮಗುವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲೇಬೇಕಿದೆ. ಪೋಷಕರೂ ಸಹ ಶೈಕ್ಷಣಿಕ ಚಟುವಟಿಕೆಗಳಿಗೆ ಸಮಾನ ಸಹಭಾಗಿತ್ವ ತೋರಬೇಕಿದೆ. ಇಂತಹ ಚತುರ್ ಸೂತ್ರದ ಪಾಲನೆಗೆ ಕ್ರಮೇಣವಾಗಿ ಎಲ್ಲರೂ ಒಗ್ಗಿಕೊಳ್ಳಬೇಕಿದೆ.

ಶಾಲೆಗಳ ಆರಂಭದ ನಂತರವಂತೂ ಮಗುವಿನ ಆರೋಗ್ಯ ರಕ್ಷಣೆಯ ವಿಚಾರ ಅತ್ಯಂತ ಗಂಭೀರವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮಗುವಿನ ಭವಿಷ್ಯ ಡೋಲಾಯಮಾನವಾಗದಂತೆ ರಕ್ಷಿಸುವ ಹೊಣೆ ಎಲ್ಲರದ್ದೂ ಆಗಿದೆ. ಮನೆಯಲ್ಲಿ ಅವರಿಗೆ ಸ್ವಚ್ಛವಾದ ಆಹಾರ ಪೂರೈಕೆ, ಪ್ರತಿನಿತ್ಯ ಸ್ನಾನ, ಶಾಲೆಯಲ್ಲಿ ಅವರು ಅನುಸರಿಸಬೇಕಾದ ಕ್ರಮಗಳು, ಅವರ ಓದು ಬರಹದ ಮೇಲೆ ಪೂರ್ಣ ನಿಗಾ ಇಡುವುದು ಇವೆಲ್ಲವೂ ಸಹ ಮಗುವಿನ ಬೆಳವಣಿಗೆಗೆ ಮಹತ್ವದ ಆಧಾರ ಸ್ಥಂಭಗಳಾಗಲಿವೆ. ಶಾಲೆಗೂ ಸಹ ಮನೆಯಿಂದಲೇ ಆಹಾರ ಮತ್ತು ಬಿಸಿ ನೀರಿನ ಪೂರೈಕೆ ಮಾಡುವುದು ಸಮಂಜಸ. ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳಿಗೆ ಹೊರಗಿನ ತಿಂಡಿ-ತಿನಿಸುಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕಿದೆ.

ಶಿಕ್ಷಣ ಸಂಸ್ಥೆಗಳಿಗೆ ಸವಾಲು

ವರ್ಷವಿಡೀ ಪಠ್ಯವಸ್ತುವನ್ನು ಬೋಧಿಸಿ, ಅದನ್ನು ಮಗುವಿಗೆ ಮನದಟ್ಟು ಮಾಡಿಸಿ, ಮಧ್ಯದಲ್ಲಿ ಕೆಲವು ಪಠ್ಯೇತರ ಚಟುವಟಿಕೆಗಳನ್ನು ನಡೆಸಿ, ಕೊನೆಗೆ ಮಕ್ಕಳನ್ನು ಪರೀಕ್ಷೆಗೆ ಒರೆ ಹಚ್ಚುವುದು ನಮ್ಮ ಈ ಮೊದಲಿನ ಶಿಕ್ಷಣ ವ್ಯವಸ್ಥೆಯ ಸಮಗ್ರ ಭಾಗವಾಗಿತ್ತು. ಇಂದಿನ ಬದಲಾದ ಸನ್ನಿವೇಶದಲ್ಲಿ, ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಮಗುವನ್ನು ಕಾಣದ ಕ್ರಿಮಿಯ ದಾಳಿಯಿಂದ ಪಹರೆ ಮಾಡಬೇಕಾದ ದೊಡ್ಡಮಟ್ಟದ ಜವಾಬ್ದಾರಿ ಶಾಲೆಗಳ ಮೇಲಿದೆ.

ಕೊರೋನಾ ಪೂರ್ವ ಕಾಲದಲ್ಲಿದ್ದಂತೆ, ಕೊರೋನೋತ್ತರ ಕಾಲದಲ್ಲೂ ಮಗುವಿನ ಸಮಗ್ರ ವಿಕಾಸಕ್ಕೆ ಅಗತ್ಯವಾದ ಕ್ರಮಗಳ ಅನುಷ್ಠಾನ ಇಂದು ಶಿಕ್ಷಣ ಸಂಸ್ಥೆಗಳಿಗೆ ಸವಾಲಾಗಿದೆ. ಮಕ್ಕಳ ಸರ್ವಾಂಗೀಣ ಪ್ರಗತಿಯು ಶಿಕ್ಷಣದ ಮೂಲಭೂತ ಗುರಿಯಾಗಿದ್ದು, ಪಾಠಪ್ರವಚನಗಳ ಜೊತೆಗೆ ಮಗುವಿಗೆ ಆರೋಗ್ಯ ಶಿಕ್ಷಣ, ನೈತಿಕ ಮೌಲ್ಯಗಳ ವೃದ್ಧಿ, ದೈಹಿಕ ಬಲವರ್ಧನೆಯಂತಹ ಕಾರ್ಯಕ್ರಮಗಳಿಗೆ ಮತ್ತಷ್ಟು ಸಮಾನ ಪ್ರಾಶಸ್ತ್ಯದ ಅಗತ್ಯವಿದೆ.

ಹಿರಿಯರೊಬ್ಬರು ಸಮಾರಂಭದಲ್ಲಿ ಹೇಳಿದ ಮಾತೊಂದು ನೆನಪಿಗೆ ಬರುತ್ತಿದೆ “ಇಂದಿನ ಶಿಕ್ಷಣ ಪದ್ಧತಿ ಮಗವಿಗೆ ಭವಿಷ್ಯದಲ್ಲಿ ಹೇಗೆ ಹಣ ಸಂಪಾದಿಸಬೇಕು ಎನ್ನುವುದನ್ನಷ್ಟೇ ಕಲಿಸುತ್ತಿದೆ” ಎಂದು. ಇಂತಹ ಅಪವಾದಗಳಿಂದ ಮುಕ್ತವಾಗುವುದರ ಜೊತೆಗೆ, ‘ಶಿಕ್ಷಣವೇ ಜೀವನ’ ಎಂಬ ಶಿಕ್ಷಣ ತಜ್ಞರ ಅಭಿಮತಕ್ಕೆ ಮರುಜೀವ ದೊರಕಬೇಕಿದೆ. ಇಂತಹ ಹಲವು ತಂತ್ರಗಾರಿಕೆಗಳನ್ನು ನಾವಿಂದು ರೂಪಿಸಿಕೊಂಡು ಮುಂದಡಿ ಇಡಬೇಕಿದೆ.

ಉದಾರೀಕರಣ, ಜಾಗತೀಕರಣ, ಔದ್ಯೋಗೀಕರಣದ ವ್ಯವಸ್ಥೆಗಳಿಗೆ ಮಕ್ಕಳನ್ನು ಈಗಲೇ ಸಜ್ಜುಗೊಳಿಸುವ ಪ್ರಯತ್ನದ ಮುನ್ನ, ಮಕ್ಕಳನ್ನ ಮಕ್ಕಳಾಗಿಯೇ ನೋಡಬೇಕಿದೆ. ಸ್ಫರ್ಧೆಗಿಂತ ಸಾಮರಸ್ಯದ ಶಿಕ್ಷಣಕ್ಕೆ ಮಾನ್ಯತೆ ಸಿಗಬೇಕಿದೆ. ಇಲ್ಲವಾದಲ್ಲಿ ಎಲ್ಲವೂ ನಗಣ್ಯವಾಗಿ, ನೀರಿನ ಮೇಲೆ ಹೋಮ ಮಾಡಿದಂತಾಗುತ್ತದೆ. ಸುದೀರ್ಘ ಚರ್ಚಾ ರೀತಿಯ ಬೋಧನಾ ವಿಧಾನವೂ ಸಹ ಮುಂಬರುವ ದಿನಗಳಲ್ಲಿ ತೊಡಕಾಗಬಹುದು. ಹಾಗೆಯೇ ಇದೆಲ್ಲದಕ್ಕೂ ಸಮಯದ ಅಭಾವವೂ ಆಗುತ್ತದೆ.

ಆದ್ದರಿಂದ ಇಂದು ಮಗುವಿನ ಸರ್ವಾಂಗೀಣ ಅಭ್ಯುದಯಕ್ಕೆ ಕಾರಣವಾಗುವ ಕೇಂದ್ರೀಕೃತ ನೂತನ ಬೋಧನಾ ವಿಧಾನಗಳನ್ನು ಅಭಿವೃದ್ಧಿಪಡಿಸಬೇಕಿದೆ. ಪ್ರಯೋಗಾತ್ಮಕ ಹಾಗೂ ಚಟುವಟಿಕಾತ್ಮಕ ಕಲಿಕೆಗೆ ಹೆಚ್ಚು ಒತ್ತು ನೀಡಬೇಕಿದೆ. ಕೋವಿಡ್‍ನ ಆತಂಕದ ನಡುವೆಯೇ ಇವೆಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ಅತಿ ದೊಡ್ಡ ಹೊಣೆಗಾರಿಕೆ ಇಂದು ನಮ್ಮ ಶಿಕ್ಷಣ ವ್ಯವಸ್ಥೆಯ ಮೇಲೆ ಬಿದ್ದಿದೆ.

ಸಾಮಾಜಿಕ ಅಂತರ ಕಷ್ಟಸಾಧ್ಯ

ಹಿರಿಯರಲ್ಲೇ ಕ್ಷೀಣಿಸುತ್ತಿರುವ ಸಾಮಾಜಿಕ ಅಂತರವನ್ನು ಮಕ್ಕಳಲ್ಲಿ ಮೈಗೂಡಿಸುವುದು ದೊಡ್ಡ ಸಾಹಸವೇ ಸರಿ. ತುಂಟಾಟದ ವಯೋಮಾನದ ಮಕ್ಕಳಿಗೆ ನಾವು ಯಾವುದನ್ನು ಮಾಡಬೇಡಿ ಎನ್ನುತ್ತೇವೋ ಅದನ್ನೇ ಮಾಡುವುದು ಹೆಚ್ಚು. ಪ್ರತಿನಿತ್ಯ ಗೆಳೆಯರ ಒಡನಾಟ, ವಾಟರ್ ಬಾಟಲ್, ಆಹಾರ, ತಿಂಡಿ-ತಿನಿಸುಗಳನ್ನು ವಿನಿಮಯ ಮಾಡಿಕೊಳ್ಳುವಿಕೆ, ಕೈ ತೊಳೆಯುವ ಜಾಗದಲ್ಲಿ ಗುಂಪುಗೂಡುವಿಕೆ, ಶಾಲಾ ವಾಹನಗಳಲ್ಲಿ ಸೀಟಿಗಾಗಿ ನಡೆಯುವ ಕಿತಾಪತಿಗಳು, ತರಗತಿಯಲ್ಲಿ ನಡೆಯುವ ಕೀಟಲೆಗಳು, ಪ್ರಾರ್ಥನೆ, ಆಟದ ಸಮಯದಲ್ಲಾಗುವ ಪೈಪೋಟಿಯುತ ವಾತಾವರಣ ಇವುಗಳ ಮಧ್ಯೆ ಅಂತರ ಮರೀಚೀಕೆಯಾಗಬಹುದು.

ಈ ನಿಟ್ಟಿನಲ್ಲಿ ಅತೀ ಹೆಚ್ಚಿನ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇವೆಲ್ಲದರ ನಡುವೆ ಮಕ್ಕಳನ್ನು ತಹಬಂದಿಗೆ ತಂದು, ಅವರ ಆರೋಗ್ಯ ರಕ್ಷಣೆಗೆ ಮೊದಲ ಆದ್ಯತೆ ಕೊಟ್ಟು, ನಂತರ ಬಾಕಿ ಕಾರ್ಯಕ್ರಮಗಳತ್ತ ಗಮನ ಹರಿಹಸಬೇಕಿದೆ. ಅಲ್ಲದೇ ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಮಗುವಿನ ಮನಸ್ಸಿನ ಮೇಲೆ ಕೊಂಚವೂ ನಕಾರತ್ಮಕ ಪರಿಣಾಮ ಬೀರದಂತೆ ಎಚ್ಚರಿಕೆವಹಿಸಬೇಕಿದೆ. ಹೀಗೆ ಎಲ್ಲವೂ ಅತ್ಯಂತ ಸವಾಲೇ ಸರಿ.

ಇದಲ್ಲದೆ ನಮ್ಮ ದಿನನಿತ್ಯದ ಕರ್ತವ್ಯಗಳಂತಾಗಿರುವ ಮಾಸ್ಕ್ ಧಾರಣೆ, ಸ್ಯಾನಿಟೈಸರ್ ಬಳಕೆ, ಸಾಬೂನಿನಲ್ಲಿ ಆಗಾಗ್ಗೆ ಕೈ ತೊಳೆಯುವುದು, ವಯಕ್ತಿಕ ಸ್ವಚ್ಛತೆ, ಅಂಗಾಂಗಳನ್ನು ಮುಟ್ಟದಿರುವಿಕೆ ಇತ್ಯಾದಿ ಕ್ರಮಗಳನ್ನು ಅಲಕ್ಷಿಸದೆ ಅನುಸರಿಸಬೇಕಿದೆ. ಪೆನ್ನು, ಪುಸ್ತಕ, ಪೆನ್ಸಿಲ್, ಇತ್ಯಾದಿ ವಸ್ತುಗಳನ್ನು ಕೆಲವು ತುಂಟ ಮಕ್ಕಳು ಕದಿಯುತ್ತಿದ್ದ ಬಗ್ಗೆ ಬರುತ್ತಿದ್ದ ದೂರುಗಳು ಮುಂದೆ ಸ್ಯಾನಿಟೈಸರ್, ಮಾಸ್ಕ್, ಸಾಬೂನುಗಳತ್ತ ತಿರುಗುವುದಂತಾದರೆ ಅದು ಮುಂಬರುವ ವಾಸ್ತವದ ನಗೆಹನಿಯೇ ಸರಿ..!

ಒಟ್ಟಾರೆ ನಮ್ಮ ಇಂದಿನ ಶಿಕ್ಷಣ ಪದ್ಧತಿಯಿಂದ ನಾವು ಹಿಂದಿನ ಗುರುಕುಲ ಪದ್ಧತಿಯ ಶಿಕ್ಷಣದ ಕೆಲ ಭಾಗಗಳತ್ತ ಒಳನೋಟ ಬೀರಬೇಕಿದೆ. ಇವೆಲ್ಲವೂ ಶಾಶ್ವತವಾಗಿ ನಡೆಯುತ್ತದೋ ಇಲ್ಲವೋ ಎಂಬ ಅಪನಂಬಿಕೆಯ ನಡುವೆ ಸದ್ಯಕ್ಕಂತೂ ಯಾವುದನ್ನೂ ತಾತ್ಸಾರ ಮನೋಭಾವದಿಂದ ನೋಡುವುದು ಬೇಡವಷ್ಟೆ. ಈ ಮಧ್ಯೆ ವಿಷಕಾರಿ ಕೊರೋನಾ ಮಹಾಮಾರಿಯ ಬಗ್ಗೆ ಪ್ರತಿನಿತ್ಯ ಮಕ್ಕಳಿಗೆ 10 – 15 ನಿಮಿಷಗಳ ಕಾಲ ತಿಳಿ ಹೇಳುವ ಕೆಲಸವೂ ಇಂದು ಜರುಗಬೇಕಿದೆ.

ಶಾಲೆಯಲ್ಲೇ ಶುರುವಾಗಲಿ ಕೊರೋನಾ ವಿರುದ್ಧದ ಹೋರಾಟ

ಮಗುವಿನ ವರ್ತನೆಯಲ್ಲಿ ಆಮೂಲಾಗ್ರ ಬದಲಾವಣೆ ತರುವುದು ಶಿಕ್ಷಣದ ಧ್ಯೇಯೋದ್ದೇಶಗಳಲ್ಲೊಂದು. ಕುಟುಂಬದ ಜೊತೆಗೆ ಮಗುವನ್ನು ಸಾಮಾಜೀಕರಣಗೊಳಿಸುವ ಮಹತ್ತರ ಹೊಣೆ ಶಾಲೆಗಳ ಮೇಲೂ ಸಹ ಇದೆ. ಇಂತಹ ಪ್ರಗತಿಯ ಹಾದಿಯ ನಡುವೆ ನಾವಿಂದು ‘ಸದೃಢ ದೇಹದಲ್ಲಿ ಸದೃಢ ಮನಸ್ಸು’ ಎಂಬ ವಿವೇಕವಾಣಿಯನ್ನು ನೆನೆಯಬೇಕಿದೆ.

ಇಡೀ ಜಗತ್ತನ್ನೇ ನಿತ್ರಾಣಗೊಳಿಸುತ್ತಿರುವ ಕೊರೋನಾ ವಿಷಪೀಡಿಗೆ ಲಸಿಕೆ ಸಿಕ್ಕರೂ, ಶೀಘ್ರವಾಗಿ ಅದು ನಮ್ಮನ್ನು ಬಿಟ್ಟು ಹೋಗದು ಎಂಬ ಕೂಗು ಪ್ರತಿಧ್ವನಿಸುತ್ತಲೇ ಇದೆ. ಇಂತಹ ವಿಷ ಪೀಡೆಯ ವಿರುದ್ಧ ಹೋರಾಡಲು ಅಗತ್ಯವಾದ ಶಕ್ತಿ, ಸಾಮಥ್ರ್ಯಗಳನ್ನು ಪಡೆಯುವಂತಹ, ದೇಹವನ್ನು ಗಟ್ಟಿಗೊಳಿಸುವಂತಹ ಕ್ರಿಯೆಗಳಿಗೆ ಶಾಲೆಗಳಿಂದ ಚಾಲನೆ ಸಿಗಬೇಕಿದೆ. ಪಠ್ಯದೊಂದಿಗೆ ಯೋಗ, ಧ್ಯಾನ, ಪ್ರಾಣಾಯಾಮ, ಸೂರ್ಯ ನಮಸ್ಕಾರ, ಜೊತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಆಡುವ ಆಟಗಳಿಗೆ ಇಂದು ಮನ್ನಣೆ ದೊರಕಬೇಕಿದೆ.

ತನ್ಮೂಲಕ ದೇಹ ಗಟ್ಟಿಗೊಳ್ಳುವುದರ ಜೊತೆಗೆ, ಮಗುವಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಾಧ್ಯ. ಆದರೆ ಇವೆಲ್ಲವುಗಳನ್ನು ಅತೀ ಸೂಕ್ಷ್ಮ ಹಾಗೂ ಜಾಗರೂಕವಾಗಿ ನಿರ್ವಹಿಸಬೇಕಷ್ಟೆ. ಇವುಗಳಂತೆ ಚಿತ್ರಕಲೆ, ಸಂಗೀತ, ತೋಟಗಾರಿಕೆ, ಕರಕುಶಲ ಕಲೆ, ನಾಟಕ, ಪ್ರಬಂಧ, ಪ್ರಯೋಗ, ನೃತ್ಯ, ಇವುಗಳ ಮೂಲಕವೂ ಮೂಲಭೂತ ಶಿಕ್ಷಣ ನೀಡುವಂಹ ವ್ಯವಸ್ಥೆಯನ್ನು ಸಜ್ಜುಗೊಳಿಸಬೇಕಿದೆ. ಇಂತಹ ಕ್ರಮಗಳಿಂದ ಸಾಮಾಜಿಕ ಅಂತರ ಪಾಲನೆಯೂ ಸರಳವಾಗುತ್ತದೆ.

ಪೂರ್ವ ತಯಾರಿ ಅಗತ್ಯ

ಸರಕಾರದ ಮಾರ್ಗಸೂಚಿಗಳ ಪಾಲನೆಯಷ್ಟೇ ಅಲ್ಲದೆ ಮುಂಬರುವ ದಿನಗಳಲ್ಲಿ ಶಾಲೆಗಳ ಪಾತ್ರ ನಿರ್ಣಾಯಕವಾಗಲಿದೆ. ಮಕ್ಕಳಂತೆಯೇ ಶಾಲಾ ಸಿಬ್ಬಂದಿಯ ಸುರಕ್ಷತೆ, ಪ್ರತಿನಿತ್ಯ ಕೊಠಡಿಗಳ ಸ್ವಚ್ಛತೆ, ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಣ್ಣಪುಟ್ಟ ಕಾಯಿಲೆಗಳ ಲಕ್ಷಣಗಳಿದ್ದರೂ ವಿಶೇಷ ಚಿಕಿತ್ಸಾ ಆರೈಕಾ ಕೊಠಡಿಗಳ ನಿರ್ಮಾಣ, ಸಾಧ್ಯವಾದರೆ ಬಿಸಿ ನೀರಿನ ಪೂರೈಕೆ, ಇಂತಹ ಹಲವು ಸೌಕರ್ಯಗಳತ್ತ ಗಮನ ಹರಿಸಬೇಕಿದೆ.

ಇವೆಲ್ಲಕ್ಕೂ ಪೂರ್ವ ತಯಾರಿ ಅತ್ಯಗತ್ಯ. ಏಕೆಂದರೆ ಕೊರೋನಾ ಸಾವಿನೋಟದಾಟದ ನಡುವೆ ನಾವು ನಿರ್ಮಾಣ ಮಾಡಹೊರಟಿರುವುದು ಭವಿಷ್ಯದ ಪೌರರನ್ನು. ಇದರಲ್ಲಿ ಒಂದು ತಪ್ಪು ಹೆಜ್ಜೆ ಇಟ್ಟರೂ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಕೊಂಚವೂ ನಿರ್ಲಕ್ಷ್ಯ ಸಲ್ಲದು. ಮಗುವಿನ ಜೀವ, ಹಾಗೂ ಜೀವನ ನಮ್ಮೆಲ್ಲರ ಸಮಾನ ಆದ್ಯತೆಯಾಗಬೇಕಿದೆ. ಇಷ್ಟೆಲ್ಲದರ ನಡುವೆ ಮಗುವಿನ ಮೇಲೆ ಮಾನಸಿಕ ಒತ್ತಡ ಬೀಳದಂತೆ ಕ್ರಮ ವಹಿಸಬೇಕಿದೆ.

ಶಿಕ್ಷಣ, ಆರೋಗ್ಯ, ಜೀವ, ಜೀವನ, ಮಾನಸಿಕ ವಿಕಾಸ, ದೈಹಿಕ ಬೆಳವಣಿಗೆ, ಒತ್ತಡ ರಹಿತ ಬದುಕು, ಸಹಕಾರ, ಸಹಬಾಳ್ವೆ, ನಿರಾತಂಕ ಹೀಗೆ ಹತ್ತು ಹಲವು ವಿಚಾರಗಳನ್ನು ಇಂದು ಮಗುವಿನ ಮನಸ್ಸಿನಲ್ಲಿ ರಿಜಿಸ್ಟರ್ ಮಾಡುವ ಕೆಲಸ ಶಾಲೆ ಮತ್ತು ಮನೆಗಳಿಂದ ಆಗಬೇಕಿದೆ.

ಬದಲಾಗಬೇಕಿದೆ ಪರೀಕ್ಷಾ ಪದ್ಧತಿ

ಪ್ರಸ್ತುತ ಪರೀಕ್ಷಾ ಪದ್ಧತಿಯು ಅತ್ಯಂತ ಸಮಗ್ರವಾಗಿದ್ದು, ಮುಂದೆ ಶಾಲಾವಧಿಯು ಕಡಿತಗೊಂಡರೆ ಇದೇ ಪದ್ಧತಿಯನ್ನು ಮುಂದುವರೆಸಿಕೊಂಡು ಹೋಗುವುದು ಕಠಿಣವಾಗಬಹುದು. ಸೀಮಿತ ಅವಧಿಗೆ ಪೂರಕವಾಗುವಂತಹ ಪರೀಕ್ಷಾ ಪದ್ಧತಿಯನ್ನು ಇಂದು ನಿರ್ಮಿಸಬೇಕಿದೆ. ಬರವಣಿಗೆಯನ್ನೂ ಒಳಗೊಂಡಂತೆ ಒಂದಷ್ಟು ಪ್ರಾಯೋಗಿಕ ಮತ್ತು ಚಟುವಟಿಕೆ ಆಧಾರಿತ ಪರೀಕ್ಷೆಗೆ ಆದ್ಯತೆ ನೀಡಬೇಕಿದೆ. ಅಲ್ಲದೇ ಈ ರೀತಿಯ ಪರೀಕ್ಷೆಗಳು ಒತ್ತಡರಹಿತವಾಗಿಯೂ ಇರುವುದರ ಜೊತೆಗೆ ಮಕ್ಕಳ ಔದ್ಯೋಗಿಕ ಭವಿಷ್ಯಕ್ಕೂ ಸಹಕಾರಿಯಾಗಿರಬೇಕಾಗುತ್ತದೆ.

ಪರ್ಯಾಯವಾಗುವುದೇ ಆನ್‍ಲೈನ್ ಕ್ಲಾಸ್..?

ಇಡೀ ವಿಶ್ವವೇ ಸ್ತಬ್ಧವಾಗಿದ್ದರೂ, ಶಿಕ್ಷಣದ ಚಟುವಟಿಕೆಗಳು ಮೊಟಕುಗೊಳ್ಳಬಾರದೆಂದು ಬಹುತೇಕ ಶಿಕ್ಷಣ ಸಂಸ್ಥೆಗಳು ಇಂದು ಆನ್‍ಲೈನ್ ಶಿಕ್ಷಣದತ್ತ ಮುಖ ಮಾಡಿರುವುದು ನಮ್ಮ ಮುಂದಿರುವ ಸತ್ಯ. ಆದರೆ ತೀರಾ ಸಣ್ಣ ವಯೋಮಾನದ ಮಕ್ಕಳನ್ನು ಮಾತ್ರ ಇದರಿಂದ ಹೊರತಾಗಿಸಬೇಕಷ್ಟೆ.

ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ, ನೇರ ಶಿಕ್ಷಣ ಪದ್ಧತಿ ಬೀರುವಷ್ಟು ಪರಿಣಾಮ ಇದರಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ. ಶಿಕ್ಷಣವೆಂದರೆ ಮಗು ಮತ್ತು ಶಿಕ್ಷಕನ ನಡುವಿನ ದ್ವಿ ಕೇಂದ್ರಿತ ವ್ಯವಸ್ಥೆ ಹಾಗೂ ಚಟುವಟಿಕೆ ಆಧಾರಿತವಾಗಿರಬೇಕು. ಆನ್‍ಲೈನ್ ತರಗತಿಗಳು ಶಿಕ್ಷಣದ ಏಕಮುಖ ಸಂಚಾರವಾಗಿದೆ. ಒಂದಷ್ಟು ಕಾಲಮಿತಿಯೊಳಗೆ ಇಂತಹ ಹೊಸತನಗಳಿಗೆ ನಾವಿಂದು ಬಲವಂತವಾಗಿ ತೊಡಗಿಸಿಕೊಂಡಿದ್ದೇವಷ್ಟೆ.

ಆದರೆ ಎಂದಿಗೂ ಇದು ಶಾಶ್ವತವಾದ ಪರ್ಯಾಯ ವ್ಯವಸ್ಥೆಯಾಗಲಾರದು. ಶಿಕ್ಷಕರೂ ಸಹ ‘ವರ್ಕ್ ಫ್ರಮ್ ಹೋಮ್’ ಮಾಡಿಯಾರು ಎಂಬುದು ತರ್ಕಕ್ಕೆ ನಿಲುಕದ್ದು. ಒಂದು ವೇಳೆ ಸರಕಾರವೇ ಡಿಜಿಟಲ್ ಶಿಕ್ಷಣಕ್ಕೆ ಒತ್ತು ನೀಡಿದರೂ, ಅದು ಸಮಗ್ರ ಹಿಂದೂಸ್ಥಾನದ ಮೂಲೆ ಮೂಲೆಗೂ ತಲುಪುವ ವ್ಯವಸ್ಥೆಯನ್ನು ಅಣಿಗೊಳಿಸಬೇಕಿದೆ.

ಭಾರತ ಹಳ್ಳಿಗಳ ದೇಶವಾಗಿರುವುದರಿಂದ ಎಲ್ಲೆಡೆಯೂ ಸಮರ್ಪಕವಾದ ಡಿಜಿಟಲ್ ಸಂಪರ್ಕವನ್ನು ನಿರೀಕ್ಷಿಸುವುದು ಅಸಾಧ್ಯವಾಗಿದೆ. ಹೀಗಾಗಿ ಸರಕಾರಕ್ಕೂ ಇದು ಸವಾಲಾಗಿಯೇ ಪರಿಣಮಿಸುವುದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಡಿಜಿಟಲ್ ಸಾಧನಗಳು ಮಕ್ಕಳ ಆರೋಗ್ಯಕ್ಕೆ ಬಹುತೇಕ ಹಾನಿಕಾರಕ ಎಂಬ ಅನೇಕ ಸಂಶೋಧನೆಗಳು ಈಗಾಗಲೇ ನಡೆದಿವೆ.

ಇದರಿಂದ ಅವಕಾಶ ವಂಚಿತ ಅನೇಕ ಮಕ್ಕಳಲ್ಲಿ ಕೀಳರಿಮೆ ಉಂಟಾಗಿ ಅವರು ಮಾನಸಿಕವಾಗಿ ಕುಗ್ಗಬಹುದು. ಈಗಾಗಲೇ ಆನ್‍ಲೈನ್ ತರಗತಿಗೆ ಹಾಜರಾಗದೆ, ಭಯಗೊಂಡು ಆತ್ಮಹತ್ಯೆ ಹಾದಿ ಹಿಡಿಯುತ್ತಿರುವ ಮಕ್ಕಳ ನಡೆ ಗಾಬರಿ ಹುಟ್ಟಿಸುತ್ತಿದೆ.

(ವಿ.ಕೆ.ಕುಮಾರಸ್ವಾಮಿ
ಬರಹಗಾರ ಶಿಕ್ಷಕರು
ವಿರುಪಾಪುರ, ಸುಗ್ಗನಹಳ್ಳಿ ಅಂಚೆ,
ತಿಪ್ಪಸಂದ್ರ ಹೋಬಳಿ, ಮಾಗಡಿ ತಾಲ್ಲೂಕು,
ರಾಮನಗರ ಜಿಲ್ಲೆ – 561101
ಮೊ: 9113906120, 9740840678 (ವಾಟ್ಸಪ್)
ಇ ಮೇಲ್ : kumarvirupapura@gmail.com)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಎಸ್.ಐ.ಆರ್ ಮತದಾರರ ಪಟ್ಟಿಯ ಡಿಜಿಟಲೀಕರಣ ಶೇ. 56 ರಷ್ಟು ಪೂರ್ಣ

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಶೇ. 56 ರಷ್ಟು ಗಣತಿ ನಮೂನೆಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ತಿಳಿಸಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎಸ್.ಐ.ಆರ್.ಕುರಿತು ಮಾಹಿತಿ ನೀಡಲು ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಜಿಲ್ಲೆಯ ಎಲ್ಲಾ ಬಿಎಲ್‌ಒಗಳು ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ಅರ್ಜಿಗಳನ್ನು ವಿತರಿಸಿ, ಸ್ವೀಕರಿಸುತ್ತಿದ್ದಾರೆ. ಶೇ. 91 ರಷ್ಟು ಜನರಿಗೆ ಫಾರಂ ಭರ್ತಿ ಮಾಡಲು ತಿಳಿಯದ ಕಾರಣ ಬಿಎಲ್‌ಒಗಳೇ ಸಾರ್ವಜನಿಕರಿಗೆ ಸಹಾಯ ಮಾಡುತ್ತಿದ್ದಾರೆ ಎಂದರು.

ಸಾರ್ವಜನಿಕರ ಅನುಕೂಲಕ್ಕಾಗಿ ದಾವಣಗೆರೆ ನಗರದಲ್ಲಿ 45 ಕೇಂದ್ರಗಳು ಸೇರಿದಂತೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಹಾಗೂ ತಾಲೂಕು ಕಚೇರಿಗಳಲ್ಲಿ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಯಾವುದೇ ಅನುಮಾನಗಳಿದ್ದಲ್ಲಿ ಸಾರ್ವಜನಿಕರು ಬಿಎಲ್‌ಒಗಳನ್ನು ಅಥವಾ ಚುನಾವಣಾ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ನೋಡಲ್ ಅಧಿಕಾರಿಗಳು ಮತ್ತು ಸೂಪರ್‌ವೈಸರ್‌ಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ಸದ್ಯಕ್ಕೆ ಸಾರ್ವಜನಿಕರಿಂದ ಯಾವುದೇ ದಾಖಲೆಗಳನ್ನು ಸಂಗ್ರಹಿಸುತ್ತಿಲ್ಲ. ಆಗಸ್ಟ್ 7 ರ ನಂತರ ಯಾರು ಯಾವ ದಾಖಲೆಗಳನ್ನು ನೀಡಬೇಕು ಎಂಬುದನ್ನು ಸ್ಪಷ್ಟಪಡಿಸಲಾಗುವುದು. ಅಲ್ಲಿಯವರೆಗೆ ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದರು.

ವಿವಿಧ ತಾಂತ್ರಿಕ ಹಾಗೂ ನೈಜ ಕಾರಣಗಳಿಂದಾಗಿ ಒಟ್ಟು 17,499 ಮತದಾರರ ಗಣತಿ ನಮೂನೆಗಳು ವಾಪಸ್ ಬಂದಿಲ್ಲ. ಇದರಲ್ಲಿ ಪ್ರಮುಖವಾಗಿ 7,487 ಮರಣ ಪ್ರಕರಣಗಳು , 263 ವಿಳಾಸ ಪತ್ತೆಯಾಗದವರು , 6,677 ಶಾಶ್ವತವಾಗಿ ಸ್ಥಳಾಂತರಗೊಂಡವರು , 2,994 ದ್ವಿಪ್ರತಿ ದಾಖಲಾತಿ (Double Entry) ಹಾಗೂ 78 ಇತರೆ ಕಾರಣ ಎಂದು ತಿಳಿಸಿದರು.

1,200 ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗಳನ್ನು ಗುರುತಿಸಿ, ಅಲ್ಲಿ ಹೊಸ ಮತಗಟ್ಟೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮತದಾರರ ಪರಿಷ್ಕರಣೆಯ ಕಾರ್ಯವಿಧಾನದ ಕುರಿತು ವಿವಿಧ ರಾಜಕೀಯ ಪಕ್ಷಗಳೊಂದಿಗೆ ನಡೆದ ಸಭೆ ಯಲ್ಲಿ ಚರ್ಚಿಸಿದ್ದು, ಮುಂದಿನ ದಿನಗಳಲ್ಲಿ ಹೊಸ ಮತಗಟ್ಟೆಗಳನ್ನು ಸ್ಥಾಪಿಸುವ ಕುರಿತು ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಜುಲೈ 29ರ ವರೆಗೆ ಮಾತ್ರ ಕಾಲಾವಕಾಶ ಇರುವುದರಿಂದ ಬಿಎಲ್‌ಒಗಳು ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರು ಅವರೊಂದಿಗೆ ಶಾಂತಿಯುತವಾಗಿ ವರ್ತಿಸಿ, ಸೂಕ್ತ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಒಂದು ವೇಳೆ ದ್ವಿಪ್ರತಿ (Double Entry) ಸೇರಿದಂತೆ ಯಾವುದೇ ತಪ್ಪು ಮಾಹಿತಿಗಳನ್ನು ಉದ್ದೇಶಪೂರ್ವಕವಾಗಿ ನೀಡಿದಲ್ಲಿ, ಅಂತವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್‌, ಮಹಾನಗರ ಪಾಲಿಕೆ ಆಯುಕ್ತ ಡಾ.ಮಹಾಂತೇಶ್‌ ಚುನಾವಣಾ ಶಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ಗೌಡ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ: ಜಿಲ್ಲಾ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ, ವಿಭಾಗ-2ರ ವ್ಯಾಪ್ತಿಗೆ 2023-24 ರಿಂದ 2025-26 ರವರೆಗೆ ಸ್ಥಳೀಯ ಶಾಸಕರ ಅನುದಾನದ ಅಡಿಯಲ್ಲಿ ಬಿಡುಗಡೆಯಾದ ಅನುದಾನಗಳ ಖರ್ಚು-ವೆಚ್ಚವನ್ನು ಇಲಾಖಾ ತನಿಖೆ ನಡೆಸುವಂತೆ ದೂರು ನೀಡಿ 5 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷö್ಯ ತೋರಿದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್) ಇದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಶ್ ಗೌಡ ಎಂ.ಬಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿ, ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಯುಕ್ತಾಗೆ ದೂರು ಸಲ್ಲಿಸಿದ್ದಾರೆ.

ದಾವಣಗೆರೆ ಜಿಲ್ಲಾ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್) ವಿಭಾಗ-2 ರ ವ್ಯಾಪ್ತಿಗೆ ಒಳಪಡುವ ಮಾಯಕೊಂಡ, ಹೊನ್ನಾಳಿ, ಚನ್ನಗಿರಿ ಉಪ ವಿಭಾಗಗಳು ಹಾಗೂ ವಿಭಾಗ-2ರ ಕಛೇರಿಯ ವ್ಯಾಪ್ತಿಗೆ 2023-24 ರಿಂದ 2025-26ನೇ ಸಾಲಿನ ಅವಧಿಯಲ್ಲಿ ಬಿಡುಗಡೆಯಾಗಿರುವ ಸ್ಥಳೀಯ ಶಾಸಕರ ಅನುದಾನದಲ್ಲಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಹಣವನ್ನು ಇಲಾಖೆಯ ವಾಹನಗಳ ಇಂಧನ ವೆಚ್ಚಕ್ಕೆಂದು ನಿಯಮಬಾಹಿರವಾಗಿ ದುರ್ಬಳಕೆ ಮಾಡಿಕೊಂಡಿರುವುದು ಮಾತ್ರವಲ್ಲದೆ, ಬಹುತೇಕ ಕಡೆಗಳಲ್ಲಿ ಯಾವುದೇ ಕಾಮಗಾರಿ ನಡೆಸದೆ ನಕಲಿ ಕಡತ ಸೃಷ್ಟಿಸಿ ಸ್ಥಳೀಯ ಶಾಸಕರ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವ ವಿಷಯವು ಅಧಿಕೃತ ಮೂಲಗಳಿಂದ ತಿಳಿದು ಬಂದ ಕಾರಣ ಮಾಹಿತಿಹಕ್ಕು ಅಡಿಯಲ್ಲಿ ಹಲವಾರು ಭಾರಿ ಅರ್ಜಿ ಸಲ್ಲಿಸಿ, ಮಾಹಿತಿ ಕೋರಿದಾಗಲೂ ನಿಯಮಬಾಹಿರವಾಗಿ ಹಿಂಬರಹ ನೀಡುತ್ತ ಬಂದಿರುತ್ತಾರೆ.

ಆದ ಕಾರಣ ದಾವಣಗೆರೆ ಜಿಲ್ಲಾ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ, ವಿಭಾಗ-2ರ ವ್ಯಾಪ್ತಿಗೆ 2023-24 ರಿಂದ 2025-26 ರವರೆಗೆ ಸ್ಥಳೀಯ ಶಾಸಕರ ಅನುದಾನದ ಅಡಿಯಲ್ಲಿ ಬಿಡುಗಡೆಯಾದ ಅನುದಾನಗಳ ಖರ್ಚು-ವೆಚ್ಚವನ್ನು ಇಲಾಖಾ ತನಿಖೆಗೆ ಒಳಪಡಿಸಿ, ಕೈಗೊಂಡ ಕ್ರಮದ ವರದಿಯನ್ನು ನೀಡುವಂತೆ ವ್ಯವಸ್ಥಾಪಕ ನಿರ್ದೇಶಕರು, ಕೆ.ಆರ್.ಐ.ಡಿ.ಎಲ್, ಬೆಂಗಳೂರು ಇವರಿಗೆ ದಿನಾಂಕ: 06-02-2026 ರಂದು ದೂರು ನೀಡಲಾಗಿತ್ತು. ಆದರೆ ದೂರು ನೀಡಿ 2 ತಿಂಗಳು ಕಳೆದರೂ ಯಾವುದೇ ತನಿಖಾ ವರದಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ಕಾರಣ ದಿನಾಂಕ: 21-04-2026 ರಂದು ಜ್ಞಾಪನ ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ 2 ತಿಂಗಳು ಕಳೆದರೂ ಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಶ್‌ಗೌಡ ಎಂ.ಬಿ ಇವರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.

ಆದ ಕಾರಣ ನಿರ್ಲಕ್ಷö್ಯ ತೋರಿದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ ಇದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಶ್‌ಗೌಡ ಎಂ.ಬಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತ ಕಾಯ್ದೆಯ ಅನುಸಾರ ಪ್ರಕರಣ ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರು ಸಲ್ಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಾಜಿ ರಾಜ್ಯಸಭಾ ಸದಸ್ಯ ಹೆಚ್ ಹನುಮಂತಪ್ಪ ನಿಧನ

Published

on

ಸುದ್ದಿದಿನ,ಚಿತ್ರದುರ್ಗ:ಮಾಜಿ ರಾಜ್ಯಸಭಾ ಸದಸ್ಯರು ಹೆಚ್ ಹನುಮಂತಪ್ಪನವರು (95ವರ್ಷ) ವಯೋಸಹಜ ಅನಾರೋಗ್ಯದಿಂದ ದೈವಧೀನರಾಗಿದ್ದಾರೆ ಎಂದು ಪುತ್ರ ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಹೆಚ್ ಮೋಹನ್ ಅವರು  ತಿಳಿಸಿದ್ದಾರೆ.

ಅಂತ್ಯಕ್ರಿಯೆಯನ್ನು ನಾಳೆ (ಸೋಮವಾರ) ಮಧ್ಯಾಹ್ನ 4:00 ಗಂಟೆಗೆ ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆ ಮುಕ್ತಿದಾಮದಲ್ಲಿ ನೆರವೇರಿಸಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ‌.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending