Connect with us

ರಾಜಕೀಯ

ಕನ್ಹಯ್ಯ, ಜಿಗ್ನೇಶ್ ಕಾಂಗ್ರೆಸ್ ಸೇರಿದ್ದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು..?

Published

on

  • ಹರ್ಷಕುಮಾರ್ ಕುಗ್ವೆ

ಮಾಜಿ ಕಮ್ಯುನಿಸ್ಟ್ ಯುವ ಮುಂದಾಳು ಕನ್ಹಯ್ಯ ಕುಮಾರ್ ಮೇಲೆ ನಮ್ಮ ಕೆಲವು ಕಮ್ಯುನಿಸ್ಟ್ ಗೆಳೆಯರು ನಡೆಸುತ್ತಿರುವ ಟ್ರೋಲ್ ಕುರಿತು ನಾನೂ ಒಂದೆರಡು ಪೋಸ್ಟ್ ಹಾಕಿದ್ದಕ್ಕೆ ಕೆಲವರಿಗೆ ಬೇಜಾರಾಗಿದೆ ಎಂದು ತಿಳಿಯಿತು. ನನ್ನ ಉದ್ದೇಶ ಯಾರನ್ನೂ ನೋಯಿಸುವುದಲ್ಲ.

ಆದರೆ ಫ್ಯಾಸಿಸ್ಟರನ್ನು ವಿರೋದಿಸುವಲ್ಲಿ ತಾನು ತೋರಿದ ದಿಟ್ಟತನ, ವಾಕ್ಚಾತುರ್ಯದ ಕಾರಣಕ್ಕೆ ಇಷ್ಟು ದಿನ ಎಲ್ಲರ ಕಣ್ಮಣಿಯಾಗಿದ್ದ ಹೆಮ್ಮೆಯ ಕೂಸಾಗಿದ್ದ ಹುಡುಗನೊಬ್ಬ ಮತ್ತೊಂದು ಪಕ್ಷ ಸೇರಿದ ಕೂಡಲೇ ದ್ರೋಹಿ, ವಂಚಕ ಏನೇನೆಲ್ಲಾ ಆಗಿ ಯಾವ ಮಾರ್ಜಿನ್ ಕೊಡದೇ ನಿಂದಿಸತೊಡಗಿದಾಗ ಆದ ಕಳವಳದಿಂದ ‘ವಾರೆ’ನೋಟದಿಂದ ಒಂದೆರಡು ಸಾಲು ಬರೆಯಬೇಕಾಯಿತು.

ಕನ್ಹಯ್ಯ, ಜಿಗ್ನೇಶ್ ಕಾಂಗ್ರೆಸ್ ಸೇರಿದ್ದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು? ಸೈದ್ಧಾಂತಿಕ, ಸಂಘಟನಾತ್ಮಕ ಬದ್ಧತೆ ಇಲ್ಲದ ಅವಕಾಶವಾದಿಗಳು ಬಂಡವಾಳಶಾಹಿ ಪಕ್ಷವನ್ನು ಸೇರಿಕೊಂಡರು ಎಂದು ಸರಳವಾಗಿ ತೀರ್ಪು ಹೊರಡಿಸಬಹುದೆ? ಖಂಡಿತಾ ಇಂತಹ ನಿಲುವು ಸರಿಯಲ್ಲ ಎಂಬುದು ನನ್ನ ಖಚಿತ ಅಭಿಪ್ರಾಯ. ಯಾಕೆ ಎಂದು ಮುಂದೆ ವಿವರಿಸುವೆ.

ನಾನು ಯಾವುದೇ ಪಕ್ಷದ ಸದಸ್ಯನಾಗಲೀ ವಕ್ತಾರನಾಗಲೀ ಅಲ್ಲ. ಯಾವುದೇ ಒಂದು ಪಕ್ಷದ ಐಡಿಯಾಲಜಿಗೂ ಆತುಕೊಂಡಿಲ್ಲ. ಸಧ್ಯದ ಮಟ್ಟಿಗೆ ಫ್ಯಾಸಿಸ್ಟರನ್ನು ಹೊರತುಪಡಿಸಿದ ಎಲ್ಲಾ ಪಕ್ಷ ಮತ್ತು ಸಂಘಟನೆಗಳ ನಡುವೆ ಯಾವುದಾದರೂ ರೂಪದ ಸಮನ್ವಯ ಆಗಬಹುದೇ ಎಂಬ ಆಸೆ ಇಟ್ಟುಕೊಂಡಿದ್ದೇನೆ.

ನನ್ನ ದೃಷ್ಟಿಯಲ್ಲಿ ಇಂದು ಅವನತಿಯ ಅಂಚಿನಲ್ಲಿರುವ ಭಾರತದ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಯಾವುದೋ ರೀತಿಯಲ್ಲಿ ಒಂದುಗೂಡಲೇಬೇಕು, ಇಂತಹ ಒಂದುಗೂಡುವಿಕೆಗೆ ವಿರೋಧವಿರುವವರು ಫ್ಯಾಸಿಸ್ಟ್ ಶಕ್ತಿಗಳಿಗೆ ಪೂರಕವಾಗಿಯೇ ಇರಲು ಸಾಧ್ಯ ಎಂಬ ನಿಲುವು ನನ್ನದು.

ಕೆಲ ವರ್ಷಗಳ ಹಿಂದೆ ಹೆಸರಾಂತ ಪತ್ರಕರ್ತ ರವೀಶ್ ಕುಮಾರ್ ಇಂತಹುದೇ ಒಂದು ಸಲಹೆ ಮುಂದಿಟ್ಟಿದ್ದರು. ದೇಶದ ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು ಸ್ವಯಂ ವಿಸರ್ಜನೆಗೊಂಡು ಹೊಸ ಪಕ್ಷ ಆಗಬೇಕು ಎಂಬ ಒಂದು ಅವಾಸ್ತವಿಕ ಯೋಜನೆಯೊಂದನ್ನು ಅವರು ಮುಂದಿಟ್ಟಿದ್ದರು. ಅವರ ಸಲಹೆ ಜಾರಿಯಾಗಲು ಅಸಾಧ್ಯ ಎಂದರೂ ಅವರ ಆಶಯ ಸರಿಯಾಗಿತ್ತು ಎಂದು ನನ್ನ ಭಾವನೆ.

ವರ್ಷದ ಹಿಂದೆ ಕಾಂಗ್ರೆಸ್ ಸೇರಿದ ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ಅವರನ್ನು ‘ಯಾಕೆ ಕಾಂಗ್ರೆಸ್ ಸೇರಿದ್ರಿ? ಅಂತ ಕೇಳಿದ್ದೆ. ಅದಕ್ಕವರು ನೇರ ಉತ್ತರಿಸದೇ ಒಂದು ಉದಾಹರಣೆ ಮೂಲಕ ಹೇಳಿದ್ದರು. ಈಗ ಒಂದು ಮನೆ ಹೊತ್ತಿ ಉರಿಯುತ್ತಿದೆ. ಅದರ ಸನಿಹದಲ್ಲಿ ಒಂದು ಫೈರ್ ಎಂಜಿನ್ ಇದೆ. ಆದರೆ ಅದರಲ್ಲಿ ಇರುವವರು ನಿದ್ದೆ ಮಾಡ್ತಾ ಇದ್ದಾರೆ. ಆ ಮನೆಯಿಂದ ಬಹಳ ದೂರದಲ್ಲಿ ಇರುವ ಫೈರ್ ಇಂಜಿನ್ ಗಳು ಹತ್ತಿರ ಬರೋ ಅಷ್ಟರಲ್ಲಿ ಇಡೀ ಮನೆ ಉರಿದು ಹೋಗತ್ತೆ. ಹೀಗಾಗಿ ಹತ್ತಿರ ಇರುವ ಫೈರ್ ಇಂಜಿನ್ ಹತ್ತಿ ಅದರಲ್ಲಿ ಇರೋರನ್ನ ಎಚ್ಚರಿಸಿ ನಾವೂ ಮನೆಯ ಬೆಂಕಿ ಆರಿಸಲು ಪ್ರಯತ್ನ ಮಾಡಬೇಕಾಗುತ್ತೆ’ ಎಂದು ಹೇಳಿದ್ದರು.

ಈಗ ಜಿಗ್ನೇಶ್, ಕನ್ಹಯ್ಯ ವಿಶಯಕ್ಕೆ ಬರೋಣ. ಕಳೆದ ಗುಜರಾತ್ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲದಿಂದಲೇ ವಡಗಾಂವ್ ಕ್ಷೇತ್ರದಿಂದ ಜಿಗ್ನೇಶ್ ಪಕ್ಷೇತರ ಅಭ್ಯರ್ಥಿಯಾಗಿ ಆರಿಸಿ ಬಂದಿದ್ದರು. ಅಂದು ತಮ್ಮ ಪಕ್ಷ ಸೇರಲು ಒಪ್ಪದ ಜಿಗ್ನೇಶ್ ಗೆ ರಾಹುಲ್ ಗಾಂಧಿ ಬೆಂಬಲಿಸಿ ಆರಿಸಿ ಬರಲು ಸಹಕರಿಸಿದ್ದರು. ಅಂದಿನ ಸಂದರ್ಭದಲ್ಲಿ ಜಿಗ್ನೇಶ್ ಚುನಾವಣೆಯಲ್ಲಿ ಗೆಲ್ಲಬೇಕೆಂದು ಇಡೀ ದೇಶದ ಶೋಷಿತರು ಬಯಸಿದ್ದರು.

ಯಾಕೆಂದರೆ ಅದು ಕೇವಲ ಜಿಗ್ನೇಶ್ ಗೆಲುವಾಗಿರಲಿಲ್ಲ. ಜಿಗ್ನೇಶ್ ಪ್ರತಿನಿಧಿಸಿದ್ದ ಚಿಂತನೆಗಳ ಗೆಲುವಾಗಿತ್ತು. ಹೀಗಾಗೇ ಜಿಗ್ನೇಶ್ ರನ್ನು ಸೋಲಿಸಲು ಮೋದಿ ಮತ್ತು ಶಾ ಮಾಡಿದ ಪ್ರಯತ್ನ ಅಷ್ಟಿಷ್ಡಿರಲಿಲ್ಲ‌. ಜಿಗ್ನೇಶ್ ಗೆಲುವಿನೊಂದಿಗೆ ನಾವೆಲ್ಲರೂ ಬೀಗಿದ್ದೆವು. ಕರ್ನಾಟದಿಂದಲೂ ಸಾವಿರಾರು ರೂಪಾಯಿಗಳನ್ನು ಸಂಗ್ರಹಿಸಿ ಕಳಿಸಿದ್ದೆವು.

ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಬೇಗುಸರಾಯ್ ನಿಂದ ಸಿಪಿಐ ಪಕ್ಷದ ಅಭ್ಯರ್ಥಿಯಾಗಿ ಕನ್ಹಯ್ಯ ಸ್ಪರ್ದಿಸಿದ್ದರು. ಆಗಲೂ ಇಡೀ ದೇಶದ ಪ್ರಗತಿಪರ ಶಕ್ತಿಗಳು ಕನ್ಹಯ್ಯ ಗೆಲುವಿಗೆ ಆಶಿಸಿದ್ದರು. ಆದರೆ ಮಹಾಘಟಬಂದನ್ ಮಾಡಿದ ಎಡವಟ್ಟಿನಿಂದಾಗಿ ಹಾಗೂ ಬೂಮಿಹಾರ್ ಜಾತಿಯವರು ಬಿಜೆಪಿ ಜೊತೆ ನಿಂತ ಕಾರಣದಿಂದ ಕನ್ಹಯ್ಯ ಬಿಜೆಪಿ ಸ್ಪರ್ಧಿ ಎದುರು ಸೋಲುಂಡರು.

ಈಗ ಮತ್ತೊಂದು ಚುನಾವಣೆ ಬರುತ್ತಲಿದೆ. ಎಂದಿನಂತೆ ಫ್ಯಾಸಿಸ್ಟ್ ರು ಜನರ ಮನಸುಗಳನ್ನು ಒಡೆಯುತ್ತಿದ್ದಾರೆ. ಬೆಂಕಿ ಹಚ್ಚುತ್ತಿದ್ದಾರೆ. ಅವರ ಆಡಳಿತರ ವೈಫಲ್ಯ ಮುಚ್ಚಿಕೊಳ್ಳಲು ಧರ್ಮ ದ್ವೇಷವನ್ನು ದೇಶವ್ಯಾಪಿ ಹರಡುವ ತಯಾರಿ ನಡೆಸಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಮುಂದೆ ಕೆಲವು ಪ್ರಶ್ನೆಗಳು ಎದುರಾಗುತ್ತವೆ.‌

ಅಕಸ್ಮಾತ್ ಮುಂದಿನ ಚುನಾವಣೆಗಳಲ್ಲೂ ಈ ಬ್ರಾಹ್ಮಿನಿಕಲ್ ಫ್ಯಾಸಿಸ್ಟ್ ಶಕ್ತಿಗಳೇ ಗೆಲುವು ಸಾಧಿಸಿದರೆ ಭಾರತದ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯ ತತ್ವಗಳ ಸ್ಥಿತಿ ಎಲ್ಲಿಗೆ ತಲುಪಬಹುದು? ಈಗಾಗಲೇ ಡಾ.ಆನಂದ್ ತೇಲ್ತುಂಬ್ಡೆ, ಸಂಜೀವ್ ಭಟ್, ರೋಣಾ ಮುಂತಾದ ಪ್ರಜಾತಂತ್ರ ಮುಂದಾಳುಗಳನ್ನು ಜೈಲಿನಲ್ಲಿ ಕೊಳೆಸುತ್ತಿರುವ ಇವರು ಮತ್ತೊಂದು ಅಧಿಕಾರಕ್ಕೆ ಬಂದರೆ ಯಾವ ರೀತಿ ಆಡಳಿತ ನಡೆಸಬಹುದು?

ಇಂತಹ ಒಂದು ಪ್ರಜಾಪ್ರಭುತ್ವದ ಬಿಕ್ಕಟ್ಟಿನ ಸನ್ನಿವೇಶದಲ್ಲಿ ನಮ್ಮ ನಡೆ ಏನಾಗಬೇಕು?

ಕಮ್ಯುನಿಸ್ಟ್, ಬಿ ಎಸ್ ಪಿ, ಎಸ್ಡಿಪಿಐ ಗಳು ಫ್ಯಾಸಿಸ್ಟರನ್ನು ಅಧಿಕಾರದಿಂದ ತಡೆಯಲು ನಿಜಕ್ಕೂ ಸಮರ್ಥವಾಗಿವೆಯಾ? ಅವುಗಳ ತತ್ವ ಚಿಂತನೆಗಳು ಉತ್ತಮವೂ ಉದಾತ್ತವೂ ಇರಬಹುದು. ಆದರೆ ತಕ್ಷಣದ ಅಜೆಂಡಾ ಒಂದು ದೇಶದ ಮುಂದಿದೆಯಲ್ಲವೆ?

ಇಂತಹ ಸನ್ನಿವೇಶದಲ್ಲಿ ಪ್ರಾಯಶಃ ಕಾಂಗ್ರೆಸ್ ಉಳಿದ ಪಕ್ಷಗಳಿಗಿಂತ ಉತ್ತಮ ಎಂದುಕೊಂಡು ಜಿಗ್ನೇಶ್, ಕನ್ಹಯ್ಯ, ಸೆಂಥಿಲ್ ತರದವರು ಕಾಂಗ್ರೆಸ್ ಸೇರಿಕೊಂಡಿದ್ದರೆ ಅದರ ಬಗ್ಗೆ ತೀರಾ ಬೇಸರ ಪಟ್ಟುಕೊಳ್ಳುವ ಅಗತ್ಯ ನನಗಂತೂ ಕಾಣುತ್ತಿಲ್ಲ.‌

ಹಾಗಂತ ಕಾಂಗ್ರೆಸ್ ಸರಿಯಾದ ಆಯ್ಕೆಯಾ? ಅಲ್ಲಿ ಎಲ್ಲವೂ ಸರಿ ಇದೆಯಾ? ಇದಕ್ಕೆ ಸಕಾರಾತ್ಮಕ ಉತ್ತರವನ್ನು ಪ್ರಾಯಶಃ ಕಾಂಗ್ರೆಸ್ ನವರೂ ಎದೆ ತಟ್ಟಿಕೊಂಡು ಕೊಡಲಾರರು. ಅಲ್ಲಿ ತತ್ವ ಸಿದ್ದಾಂತಗಳಿಗೆ, ಪ್ರಾಮಾಣಿಕತೆಗೆ ಯಾವ ಬೆಲೆ ಇದೆ ಎಂಬುದೂ ಪ್ರಶ್ನೆಯೇ.

ದೇಶದ ಮಟ್ಟದಲ್ಲಿ ಲಕ್ಷಾಂತರ ಕಾರ್ಯಕರ್ತರ ಮುಂದಾಳುಗಳ ಪಡೆ ಇದ್ದರೂ unity of thought and action ಅಂತೂ ಅಲ್ಲಿಲ್ಲ. ಕಾಂಗ್ರೆಸ್ ನ ಮೂಲ ತತ್ವಗಳ ಕುರಿತೇ ಸೂಕ್ತ ಪರಿಣಾಮಕಾರಿ ಶಿಕ್ಷಣವೂ ಅಲ್ಲಿ ಇದ್ದಂತಿಲ್ಲ. ಈಗ ಇರುವ ವ್ಯಕ್ತಿ ಕೇಂದ್ರಿತ ಕಾಂಗ್ರೆಸನ್ನು ಸ್ವಲ್ಪ ಮಟ್ಟಿಗೆ ಕೇಡರ್ ಬೇಸ್ಡ್ ಮತ್ತು ಸಂವಿಧಾನವಾದಿ ಪಕ್ಷವಾಗಿ ಮಾರ್ಪಡಿಸಲು ಸಾಧ್ಯವಾದರೆ ಒಂದಷ್ಟು ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.

ಕಾಂಗ್ರೆಸ್ ನ ವರ್ಗ ಹಿನ್ನೆಲೆ, ಅವರ ಆರ್ಥಿಕ ನೀತಿಗಳು ಇತ್ಯಾದಿಗಳ ಬಗ್ಗೆ ತಕರಾರು ಬೇಜ್ಜಾನ್ ಇವೆ. ಆದರೆ ನರಹತ್ಯೆಗಳನ್ನು ಯಾವ ಕ್ಷಣದಲ್ಲಿ ನಡೆಸಬಲ್ಲ ಒಂದು ಶಕ್ತಿಯನ್ನು ಎದುರಿಸಲು ಮಿಕ್ಕೆಲ್ಲರೂ ತಕ್ಷಣದ ಕನಿಷ್ಟ ಸಾಮಾನ್ಯ ಕಾರ್ಯಕ್ರಮವೊಂದರ ಬಗ್ಗೆ ಚಿಂತಿಸುವ ಅಗತ್ಯವಿದೆ.

ಕೇವಲ ಚುನಾವಣೆಯಿಂದ ಫ್ಯಾಸಿಸ್ಟ್ ಶಕ್ತಿಗಳನ್ನು ಹಿಮ್ಮೆಟ್ಟಿಸುವುದು ಅಸಾಧ್ಯ. ಆದರೆ ಬೀದಿಯ ಮೇಲೆ ಎದುರಿಸಲಾದರೂ ನಮಗೊಂದಷ್ಟು ಸಮಾಯಾವಕಾಶ ತೆಗೆದುಕೊಳ್ಳಲಾದರೂ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸೋಲಲೇಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ.

ಈ ನಡುವೆ ಯಾರಾದರೂ ಕಮ್ಯುನಿಸ್ಟ್ ಪಕ್ಷದಿಂದ ಕಾಂಗ್ರೆಸ್ ಗೆ, ಬಿಎಸ್ ಪಿಯಿಂದ ಎಸ್ ಡಿ ಪಿ ಐ, ಎಸ್ ಡಿ ಪಿ ಐ‌ನಿಂದ ಕಾಂಗ್ರೆಸ್ ಹೀಗೆ ಸ್ಥಾನ ಪಲ್ಲಟ ಮಾಡಿಕೊಂಡರೆ ತೀರಾ ತಲೆಕೆಡಿಸಿಕೊಳ್ಳಬೇಕಿಲ್ಲ. Let’s welcome…

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಏ.14ರಂದು ಡಾ.ಬಿ.ಆರ್.ಅಂಬೇಡ್ಕರ್‍ ಸಮುದಾಯ ಭವನ ಶಂಕುಸ್ಥಾಪನೆ

Published

on

ಸುದ್ದಿದಿನ,ದಾವಣಗೆರೆ:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಮಹಾನಗರಪಾಲಿಕೆ, ದಾವಣಗೆರೆ ಇವರುಗಳ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 14 ರಂದು ಮಧ್ಯಾಹ್ನ 2 ಗಂಟೆಗೆ ನಗರದ ಸಕ್ರ್ಯೂಟ್ ಹೌಸ್ ಪಕ್ಕ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರ ಸಮುದಾಯ ಭವನ ಶಂಕುಸ್ಥಾಪನೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಉದ್ಘಾಟಿಸುವರು. ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸುವರು. ಲೋಕಸಭಾ ಸದಸ್ಯರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಉಪಸ್ಥಿತರಿರುವರು.

ಮುಖ್ಯ ಅತಿಥಿಗಳಾಗಿ ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ, ಜಗಳೂರು ಶಾಸಕ ಬಿ.ದೇವೇಂದ್ರಪ್ಪ, ಹೊನ್ನಾಳಿ ಶಾಸಕ ಶಾಂತನಗೌಡ ಡಿ.ಜಿ, ಚನ್ನಗಿರಿ ಶಾಸಕ ಬಸವರಾಜು ವಿ.ಶಿವಗಂಗಾ, ಹರಿಹರ ಶಾಸಕ ಬಿ.ಪಿ ಹರೀಶ್, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಚಿದಾನಂದ ಎಂ.ಗೌಡ, ಡಿ.ಎಸ್ ಅರುಣ್, ಕೆ.ಎಸ್.ನವೀನ್, ಕೆ.ಅಬ್ದುಲ್ ಜಬ್ಬಾರ್, ಡಾ.ಧನಂಜಯ್ ಸರ್ಜಿ, ಡಿ.ಟಿ.ಶ್ರೀನಿವಾಸ್, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಬಂಜಾರ ಅಭಿವೃದ್ದಿ ನಿಗಮದ ಅಧ್ಯಕ್ಷ ಜಯದೇವನಾಯ್ಕ್, ದೂಡಾ ಅಧ್ಯಕ್ಷರಾದ ದಿನೇಶ್.ಕೆ.ಶೆಟ್ಟಿ, ಜಿಲ್ಲಾಧಿಕಾರಿ ಹಾಗೂ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ಬಿ. ಇಟ್ನಾಳ್. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ | ಕೇಂದ್ರ ಕೊಡದಿದ್ದರೂ ರಾಜ್ಯ ಸರ್ಕಾರ ನೀಡಲಿದೆ : ಗೃಹ ಸಚಿವ ಡಾ.ಜಿ.ಪರಮೇಶ್ವರ್

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನಡೆಸ್ಕ್:ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಘೋಷಿಸಿದ್ದ 5 ಸಾವಿರದ 300 ಕೋಟಿ ರೂಪಾಯಿ ಅನುದಾನ ನೀಡದೇ ಇದ್ದರೂ, ಭದ್ರಾ ಮೇಲ್ದಂಡೆ ಯೋಜನೆಗೆ ರಾಜ್ಯ ಸರ್ಕಾರ ಅಗತ್ಯ ಅನುದಾನ ನೀಡಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತುಮಕೂರಿನಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದೇಶಾದ್ಯಂತ ಇಂದು ಮಹಾವೀರ ಜಯಂತಿ ಆಚರಣೆ ; ಗಣ್ಯರ ಶುಭಾಶಯ

Published

on

ಸುದ್ದಿದಿನಡೆಸ್ಕ್:ದೇಶಾದ್ಯಂತ ಇಂದು ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತಿದೆ. ಇಂದು 24ನೇ ಹಾಗೂ ಕೊನೆಯ ಜೈನ ತೀರ್ಥಂಕರ ಮಹಾವೀರ ಅವರ ಜನ್ಮದಿನ. ಜೈನ ಸಮುದಾಯಕ್ಕೆ ಇದು ಅತ್ಯಂತ ಪವಿತ್ರ ದಿನವಾಗಿದೆ.

ಭಗವಾನ್ ಮಹಾವೀರನ ಅನುಯಾಯಿಗಳು ಇಂದು ವಿಶೇಷ ಪ್ರಾರ್ಥನೆ, ಮಂತ್ರ ಪಠಣ ಮಾಡುವುದಲ್ಲದೇ ಪ್ರಸಾದವನ್ನು ವಿತರಿಸುವುದು ಹಾಗೂ ಮೆರವಣಿಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಮಹಾವೀರ ಜಯಂತಿ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಶುಭ ಕೋರಿದ್ದಾರೆ. ರಾಷ್ಟ್ರಪತಿ ಅವರು, ತಮ್ಮ ಸಂದೇಶದಲ್ಲಿ ಭಗವಾನ್ ಮಹಾವೀರ್ ಅವರು, ಅಹಿಂಸೆ ಮತ್ತು ಅನುಕಂಪದ ಸಂಕೇತವಾಗಿದ್ದಾರೆ.

ಅವರು, ಅಹಿಂಸಾ ಪರಮೊ ಧರ್ಮ ಎಂಬ ಸಂದೇಶದ ಮೂಲಕ ಮನುಕುಲಕ್ಕೆ ಹೊಸ ಹಾದಿಯನ್ನು ತೋರಿಸಿಕೊಟ್ಟಿದ್ದಾರೆ. ಅಲ್ಲದೇ ಮಹಾವೀರ ಅವರ ಸರಳತೆ, ದಯೆ, ತತ್ವಗಳನ್ನು ಪ್ರತಿಪಾದಿಸಿದ್ದರು ಎಂದು ಹೇಳಿದ್ದಾರೆ.

ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ತಮ್ಮ ಸಂದೇಶದಲ್ಲಿ ಭಗವಾನ್ ಮಹಾವೀರರ ಬೋದನೆಗಳು ಹೆಚ್ಚಿನ ಸಹಾನುಬೂತಿ ಮತ್ತು ಸಾಮರಸ್ಯದ ಜಗತ್ತಿನತ್ತ ನಮ್ಮ ಹಾದಿಯನ್ನು ಬೆಳಗಿಸುತ್ತಿವೆ. ಎಲ್ಲ ಜೀವಿಗಳಿಗೆ ಸಮಾನತೆ ಮತ್ತು ವಿಭಿನ್ನ ದೃಷ್ಟಿಕೋನದಲ್ಲಿ ನೋಡುವ ಸಂದೇಶವನ್ನು ಸಾರಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಮಹಾವೀರ ಜಯಂತಿ ಅಂಗವಾಗಿ ಜೈನ ಸಮುದಾಯಕ್ಕೆ ಶುಭಾಶಯ ಕೋರಿದ್ದಾರೆ. ಅವರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಭಗವಾನ್ ಮಹಾವೀರರ ಆದರ್ಶಗಳು ಜಗತ್ತಿನೆಲ್ಲೆಡೆ ಅಸಖ್ಯಾಂತ ಜನರಿಗೆ ಶಕ್ತಿಯನ್ನು ನೀಡಿದೆ. ಅವರ ಬೋಧನೆಗಳನ್ನು ಜೈನ ಸಮುದಾಯ ಸುಂದರವಾಗಿ ಸಂರಕ್ಷಿಸಿ ಅವುಗಳನ್ನು ಪ್ರಚುರಪಡಿಸುತ್ತಿದೆ. ಭಗವಾನ್ ಮಹಾವೀರರ ಕನಸುಗಳನ್ನು ಸಾಕಾರಗೊಳಿಸಲು ಸರ್ಕಾರ ಬದ್ಧವಿದೆ. ಸರ್ಕಾರ ಪ್ರಾಕೃತ್ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವ ಮೂಲಕ ಮಹಾವೀರರ ಬೋಧನೆಗಳನ್ನು ಮತ್ತಷ್ಟು ಜನಪ್ರಿಯಗೊಳಿಸಲಾಗುತ್ತಿದೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending