Connect with us

ಲೈಫ್ ಸ್ಟೈಲ್

ಕರ್ನಾಟಕದ ಗಿಡಗಳ‌ ನಂಟನ್ನು ರಾಜಸ್ಥಾನದಲ್ಲೂ ಬೆಳಸುವ ಅಪರೂಪದ ಪರಿಸರ ಪ್ರೇಮಿ ‘ಬೈರವ್ ಸಿಂಗ್’..!

Published

on

  • ಸಂಜಯ್ ಹೊಯ್ಸಳ

ರ್ನಾಟಕದಿಂದ ರಾಜಸ್ಥಾನಕ್ಕೆ ಪ್ರತಿವರ್ಷ ಕೆಲವೊಂದಿಷ್ಟು ಗಿಡ ತೆಗೆದುಕೊಂಡು ಹೋಗಿ, ಕರ್ನಾಟಕದ ಗಿಡಗಳ‌ ನಂಟನ್ನು ರಾಜಸ್ಥಾನದಲ್ಲೂ ಬೆಳಸುವ ಪ್ರಯತ್ನ ಮಾಡುತ್ತಿರುವ ಅಪರೂಪದ ಪರಿಸರ ಪ್ರೇಮಿ.

ಮೊನ್ನೆ ನಮ್ಮ ನರ್ಸರಿಗೆ ಬೈರವ್ ಸಿಂಗ್ ಬಂದಿದ್ದರು. ಇವರು ಹುಟ್ಟಿ ಬೆಳದಿದ್ದೆಲ್ಲಾ ಮೈಸೂರಿನಲ್ಲಿಯಾದರೂ, ಪೂರ್ವಜರ ತವರಾದ ರಾಜಸ್ಥಾನದ ಜೊತೆಗೆ ಇವರು ನಂಟು ಕಡಿದುಕೊಂಡಿಲ್ಲ. ಆಗಾಗ್ಗೆ ತಮ್ಮೂರಿನ ಕಡೆಗೆ ಹೋಗಿ ಬರುತ್ತಿರುತ್ತಾರೆ. ಇವರು ರಾಜಸ್ಥಾನ ಐತಿಹಾಸಿಕ ನಗರವಾದ ಜೋದ್ ಪುರ ಮೂಲದವರು. ಸದ್ಯ ಮೈಸೂರಿನಲ್ಲಿ ವ್ಯಾಪಾರ ಮಾಡಿಕೊಂಡು‌ ಜೀವನ ಮಾಡುತ್ತಿರುವ ಇವರು, ಮಳೆಗಾಲದ ಸಮಯದಲ್ಲಿ ಊರಿನ ಕಡೆ ಹೋಗುವಾಗ ತಪ್ಪದೆ‌ ಮೈಸೂರಿನಿಂದ ಇಲ್ಲಿನ ಕೆಲವೊಂದಿಷ್ಟು‌, ಅವರಿಗೆ ವಿಶೇಷ ಎನಿಸುವ ಗಿಡಗಳನ್ನು ತೆಗೆದುಕೊಂಡು ಹೋಗಿ ಅಲ್ಲಿ ನೆಟ್ಟು‌ ಬೆಳಸುವ ಪ್ರಯತ್ನ ಮಾಡುತ್ತಿದ್ದಾರೆ. ಮೊನ್ನೆ ಇದೇ ರೀತಿ ನಮ್ಮ ನರ್ಸರಿಗೂ ಬಂದು ಕಾಡುಬಾದಾಮಿ, ಶ್ರೀಗಂದ, ಬಿಲ್ವಪತ್ರೆ ಸೇರಿ ಐದಾರು ಗಿಡಗಳನ್ನು ತೆಗೆದುಕೊಂಡರು. ನಮ್ಮ ಅರಣ್ಯ ಇಲಾಖೆ ನರ್ಸರಿಗೆ ಬರುವ ಮುನ್ನ ತೋಟಗಾರಿಕೆ ಇಲಾಖೆಯ ನರ್ಸರಿಯಲ್ಲಿ‌ ಕೆಲವು ಹಣ್ಣಿನ ಗಿಡಗಳನ್ನು ತಂದಿದ್ದರು.

ಈ ಸಂಧರ್ಭದಲ್ಲಿ ಇವರ ಪರಿಚಯವಾಗಿ ಲೋಕರೂಡಿಯಾಗಿ ಮಾತನ್ನಾಡುವಾಗ ರಾಜಸ್ಥಾನದ ಅರಣ್ಯ ಹಾಗೂ‌ ವನ್ಯಜೀವಿ ಪ್ರೇಮಿ ಜನಾಂಗವೆಂದು ಹೆಸರಾಗಿರುವ ಬೀಷ್ಣೋಯಿಗಳ ಬಗ್ಗೆ ನಿಮಗೆ ಗೊತ್ತಾ? ಎಂದು ಕೇಳಿದೆ. “ಹೌದು ಗೊತ್ತು. ಅದೇ ಸಲ್ಮಾನ್ ಖಾನ್ ಗೆ ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ‌ ಶಿಕ್ಷೆ ಆಗೋದಕ್ಕೆ ಕಡೆಯವರಿಗೆ ಹೋರಾಡಿದ್ರಲ್ಲ… ಮತ್ತೆ ಅನಾಥ ವನ್ಯಜೀವಿಗಳಿಗೆ ತಮ್ಮ ಎದೆಹಾಲು ಕುಡಿಸುವ ಪೋಟೋ ಎಲ್ಲಾ ನೋಡಿದಿವಲ್ಲ… ಅವ್ರಲ್ವಾ!?” ಅಂದ್ರು. ಅನಂತರ ನಾನು ಮಾತು ಮುಂದುವರೆಸಿ “ಹೌದು ಅವರೆ.

ಬೀಷ್ಣೋಯಿ ಜನಾಂಗದವರ ಪರಿಸರ ಹಾಗೂ ವನ್ಯಜೀವಿ ಪ್ರೇಮಕ್ಕೆ ದೊಡ್ಡ ಐತಿಹಾಸಿಕ ಹಿನ್ನೆಲೆ ಇದೆ.‌ 1730 ರಲ್ಲಿ ಜೋದಪುರದ ರಾಜ ಅಭಯ್ ಸಿಂಗ್’ನ ಸೈನಿಕರು, ತಮ್ಮ ರಾಜ್ಯದ ಹೊಸ ಅರಮನೆ ನಿರ್ಮಾಣಕ್ಕಾಗಿ ಬೀಷ್ಣೋಯಿಗಳ ಬಾಹುಳ್ಯದ ಕೇಜರ್ಲಿ ಗ್ರಾಮಕ್ಕೆ ಬಂದು ಆ ಭಾಗದ ಅಪರೂಪದ ಮರವಾಗ ಕೇಜ್ರಿ ಮರ (Prosopis cineraria) ಗಳನ್ನು ಕಡಿಯಲು ಮುಂದಾಗುತ್ತಾರೆ. ಆಗ ಅವುಗಳನ್ನು ಕಡಿಯದಂತೆ ಬೀಷ್ಣೋಯಿಗಳು, ಸೈನಿಕರಿಗೆ ಪ್ರತಿರೋಧ ತೋರುತ್ತಾರೆ‌. ಇದರಿಂದ ಕೆರಳಿದ ರಾಜನ ಸೈನಿಕರು ಮಹಿಳೆ ಮಕ್ಕಳು ಸೇರಿದಂತೆ ಒಟ್ಟು 363 ಜನರನ್ನು ಹತ್ಯೆ ಮಾಡುತ್ತಾರೆ.

ಈ ಘಟನೆ ನಡೆದ ದಿನವಾದ ಸೆಪ್ಟೆಂಬರ್ 10ನ್ನು ಭಾರತದಾದ್ಯಂತ ‘ಅರಣ್ಯ ಹುತಾತ್ಮರ ದಿನ’ ಎಂದು ಆಚರಿಸಲಾಗುತ್ತಿದ್ದು, ಬೀಷ್ಣೋಯಿಗಳನ್ನು ಸೇರಿ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಗಾಗಿ ಹೋರಾಡಿ ಹುತಾತ್ಮರಾದ ಎಲ್ಲರನ್ನು ಆ ದಿನ ಸ್ಮರಿಸಲಾಗುತ್ತದೆ.” ಎಂದು ಬೀಷ್ಣೋಯಿಗಳ ಕುರಿತಾದ ವಿವರಗಳನ್ನು ಅವರಿಗೆ ತಿಳಿಸಿದೆ.

ಅವರಿಗೆ ಕೇಜ್ರಿ ಮರಗಳ ಬಗ್ಗೆ ಹೇಳಿದಾಗ ಅವುಗಳ ಪೋಟೋವನ್ನು ತೋರಿಸಿದಾಗ ಆಗಲೇ ರಾಜಸ್ಥಾನದಲ್ಲಿದ್ದ ಅವರ ತಂದೆಗೆ ಕರೆ ಮಾಡಿ ಕೇಜ್ರಿ ಮರಗಳ ಕುರಿತು ಕೇಳಿದರು. ನನ್ನ ಬಳಿಯೂ ಅವರ ಜೊತೆ ಮಾತನ್ನಾಡಿಸಿದರು. ಕೇಜ್ರಿ ಮರದ ಬಗ್ಗೆ ಸ್ವಲ್ಪ ವಿವರಣೆ ಹೇಳಿದಾಕ್ಷಣ ಅವರ ತಂದೆ ಮರವನ್ನು ಗುರ್ತಿಸಿದರು. ಸಾಧ್ಯವಾದರೆ ಆ ಮರದ ಒಂದೆರಡು‌ ಸಸಿ ಅಥವಾ ಒಂದಷ್ಟು ಬೀಜಗಳನ್ನು ಸಂಗ್ರಹಿಸಿ ಕೊಡಿ ಎಂದು ಹೇಳಿದೆ. ಖಂಡಿತಾ ಸಂಗ್ರಹಿಸಿ ಕೊಡುತ್ತೇನೆ ಎಂದು ಅವರು ಹೇಳಿದರು.

ಹೀಗೆ ಬೈರವ್ ಸಿಂಗ್’ರವರ ಪರಿಚಯ ಕೇಜ್ರಿ ಮರವನ್ನು ನಮ್ಮಲ್ಲಿ ಬೆಳಸಿ ಪರಿಚಯಿಸುವ ಪ್ರಯತ್ನಕ್ಕೆ ಕಾರಣವಾಯಿತು.

(ಲೇಖನ ಕೃಪೆ : ಪರಿಸರ ಪರಿವಾರ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂಧಿವಾತ ಕೀಲುನೋವಿಗೆ ಪರಿಣಾಮಕಾರಿ ಚಿಕಿತ್ಸೆ

Published

on

ಇಂದಿನ ಆಧುನಿಕ ಮನುಷ್ಯನಿಗೆ ಒಂದಲ್ಲ ಒಂದು ರೀತಿಯ ರೋಗಗಳು ಕಾಡುತ್ತಲೇ ಇವೆ. ಇಂದು ನಮ್ಮ ದೇಶದಲ್ಲಿ ಅಲೋಪತಿ, ಆಯುರ್ವೇದ, ಹೋಮಿಯೋಪತಿ, ಯುನಾನಿ ಹೀಗೆ ಅನೇಕ ಚಿಕಿತ್ಸಾ ಪದ್ದತಿಗಳು ಜಾರಿಯಲ್ಲಿವೆ.

ಯಾವ ಚಿಕಿತ್ಸೆ ಪಡೆದರೆ ಸಂಪೂರ್ಣ ವಾಸಿಯಾಗುತ್ತದೆ? ಯಾವ ಚಿಕಿತ್ಸೆ ಶ್ರೇಷ್ಟ? ಯಾವ ಔಷಧಿ ಶ್ರೇಷ್ಣ? ಎಂದು ಯಾವ ರೋಗಿಗೂ ಸ್ಪಷ್ಟವಾಗಿ ಗೊತ್ತಿಲ್ಲ. ಇದರಿಂದ ಜನರಲ್ಲಿ ಅನೇಕ ಗೊಂದಲಗಳುಂಟಾಗುತ್ತಿವೆ. ಅನೇಕರು ತಮ್ಮ ಒಂದೇ ಕಾಯಿಲೆಗೆ ವೈದ್ಯರಿಂದ ವೈದ್ಯರಲ್ಲಿಗೆ ಅಲೆದಾಡುತ್ತಿರುತ್ತಾರೆ. ಅಲೋಪತಿ ಔಷಧಿ ಪಡೆದು ಗುಣಮುಖವಾಗದಿದ್ದರೆ, ಆಯುರ್ವೇದ ವೈದ್ಯರಲ್ಲಿ ಓಡುತ್ತಾರೆ. ಅಲ್ಲಿ ಗುಣಮುಖವಾಗದಿದ್ದರೆ ಯುನಾನಿ, ನಾಟಿ ವೈದ್ಯರನ್ನು ಕಾಣಲು ಓಡುತ್ತಾರೆ. ವೈದ್ಯರಿಂದ ವೈದ್ಯರಲ್ಲಿಗೆ ಅಲೆದು, ಅವರು ಕೊಡುವ ವಿವಿಧ ಔಷಧಿಗಳನ್ನು ಸೇವಿಸುತ್ತಾ, ವಿವಿಧ ಔಷಧಿಗಳ ಅಡ್ಡಪರಿಣಾಮದಿಂದ ದೇಹದ ಅನೇಕ ಅಂಗಗಳು ಡ್ಯಾಮೇಜ್ ಆಗಿ ಗುಣಪಡಿಸಲಾಗದಂತಹ ಸ್ಥಿತಿಗೆ ರೋಗಿ ತಲುಪುತ್ತಿದ್ದಾನೆ.

ಹೀಗಾಗಿಯೇ ನಮ್ಮ ದೇಶದಲ್ಲಿ ಬಿಪಿ, ಶುಗರ್, ಕೀಲು ನೋವಿನಿಂದ ಬಳಲುತ್ತಿರುವ ರೋಗಿಗಳು ಪ್ರತಿ ಮನೆಯಲ್ಲಿ ಒಬ್ಬರು ಇಬ್ಬರು ಕಾಣಸಿಗುತ್ತಾರೆ ಮತ್ತು ಈ ಸಂಖ್ಯೆ ಪ್ರತೀ ವರ್ಷ ಹೆಚ್ಚಳವಾಗುತ್ತಿದೆ. ಇದಕ್ಕೆ ಕಾರಣ ಹುಡುಕಿದಾಗ ವೈದ್ಯರಲ್ಲಿ ದೋಷವಿಲ್ಲ. ವೈದ್ಯ ಪದ್ಧತಿಯಲ್ಲಿ ದೋಷವಿಲ್ಲ. ಒಬ್ಬ ರೋಗಿ ಅಲೋಪತಿಯಲ್ಲಿ ಸಂಪೂರ್ಣ ಗುಣಮುಖ ಹೊಂದಿದರೆ, ಮತ್ತೊಬ್ಬರು ಆಯುರ್ವೇದದಲ್ಲಿ ಗುಣಮುಖ ಹೊಂದಿರುತ್ತಾರೆ. ಇನ್ನೂ ಕೆಲವರು ನಾಟಿ ಔಷಧಿಯಿಂದ ಗುಣಮುಖ ಹೊಂದುತ್ತಾರೆ. ಅಲೋಪತಿಯಲ್ಲಿ, ಆಯುರ್ವೇದಲ್ಲಿ ಇತರೆ ಯಾವುದೇ ವೈದ್ಯ ಪದ್ಧತಿಯಲ್ಲಿ ದೋಷವಿಲ್ಲ. ದೋಷವಿರುವುದು ಜನರ ಆಹಾರ ಕ್ರಮದಲ್ಲಿ ಮತ್ತು ಜೀವನ ಶೈಲಿಯಲ್ಲಿ. ಆಹಾರ ಕ್ರಮ ಮತ್ತು ಜೀವನ ಶೈಲಿಯನ್ನು ಅರಿತು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಯಾವುದೇ ವೈದ್ಯ, ಪದ್ಧತಿ ಅನುಸರಿಸಿದರೂ ಕಾಯಿಲೆ ವಾಸಿಯಾಗುವುದು 100% ಸತ್ಯ.

ಇಂದು ಬಿಪಿ ಶುಗರ್ನಂತೆ ಬಹಳಷ್ಟು ಜನರು ಸಂಧಿವಾತದ ತೊಂದರೆಯಿಂದ ಬಳಲುತ್ತಿದ್ದಾರೆ. ಪ್ರತಿಯೊಂದು ಮನೆಯಲ್ಲೂ ಕಾಲುನೋವು, ಮೈ ಕೈ ನೋವು ಬೆನ್ನು ನೋವು ಎಂದು ಬಳಲುತ್ತಿರುತ್ತಾರೆ. ಅದರಲ್ಲೂ ಮಹಿಳೆಯರೇ ಹೆಚ್ಚಾಗಿ ಈ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ಪುರುಷರಲ್ಲೂ 30 ವರ್ಷ ವಯಸ್ಸಿನ ನಂತರ ಸಂಧಿವಾತದಿಂದ ಬಳಲುವವರು ಹೆಚ್ಚಾಗುತ್ತಿದ್ದಾರೆ. ಕುಳಿತುಕೊಳ್ಳಲು, ಮೇಲೇಳಲು, ನಡೆದಾಡಲು, ಮೆಟ್ಟಿಲು ಹತ್ತಲು ತುಂಬಾ ಕಷ್ಟವನ್ನನುಭವಿಸುತ್ತಿದ್ದಾರೆ.

ಸಂಧಿವಾತ ಎಂದರೇನು?

ನಮ್ಮ ಶರೀರದಲ್ಲಿ ನೋವು ಬರಲು ಪ್ರಮುಖ ಕಾರಣ ಅಧಿಕ ವಾತ ಅಥವಾ ವಾಯು. ನಾವು ಒಂದೇ ಬಾರಿಗೆ ಅತಿ ಆಹಾರ ಸೇವಿಸಿದಾಗ, ಹಸಿವೆಯಾಗದೆ ಆಹಾರ ಸೇವಿಸಿದಾಗ, ಪದೇ ಪದೇ ಆಹಾರ ಸೇವಿಸಿದಾಗ ಮತ್ತು ಎಣ್ಣೆಯಲ್ಲಿ ಕರಿದ ಉರಿದ ಆಹಾರ ಸೇವಿಸಿದಾಗ ಆಹಾರ ಸರಿಯಾಗಿ ಜೀರ್ಣವಾಗದೆ ಹೊಟ್ಟೆಯಲ್ಲಿ ಕೊಳೆಯಲು ಪ್ರಾರಂಭವಾಗುತ್ತದೆ. ಈ ಕೊಳೆತ ಆಹಾರ ಸಣ್ಣ ಕರುಳು ದೊಡ್ಡ ಕರುಳಿನಲ್ಲಿ ಗಟ್ಟಿಯಾಗಿ ಕುಳಿತು ಸಮಯಕ್ಕೆ ಸರಿಯಾಗಿ ವಿಸರ್ಜನೆ ಆಗದೆ ವಾತ ಅಥವಾ ವಾಯು ಹೆಚ್ಚಳವಾಗುತ್ತದೆ. ಈ ಹೆಚ್ಚಾದ ವಾತವು ಶರೀರದ ಮೂಳೆಗಳ ಸಂಧಿಗಳಲ್ಲಿ ಸಂಗ್ರಹಗೊಗೊಂಡು ಅಲ್ಲಿನ ಮೃದುವಾದ ನೀರಿನಂಶ ಇರುವ ಭಾಗವನ್ನು ಒಣಗಿಸುತ್ತದೆ. ಇದರಿಂದ ಪ್ರಮುಖವಾಗಿ ಕೈ ಕಾಲು ಬೆರಳುಗಳ ಸಂಧಿಗಳಲ್ಲಿ ನೋವು ಹೆಚ್ಚಾಗಿ, ವ್ಯಕ್ತಿ ನಡೆಯಲು, ನಿಲ್ಲಲು, ಕುಳಿತುಕೊಳ್ಳಲು, ಮೆಟ್ಟಿಲು ಹತ್ತಲು, ದಿನನಿತ್ಯದ ಕೆಲಸಗಳನ್ನು ಮಾಡಲು ಅಸಮರ್ಥನಾಗುತ್ತಾನೆ. ಈ ರೀತಿ ವಾತ ಹೆಚ್ಚಳದಿಂದ ಶರೀರದ ಕೀಲುಗಳ ಸಂಧಿಗಳಲ್ಲಿ ನೋವು ಬರುತ್ತಿದ್ದಲ್ಲಿ ಅದನ್ನು ಸಂಧಿವಾತ, ವಾತರೋಗ, ಕೀಲು ನೋವು ಎಂದು ವಿವಿಧ ಹೆಸರುಗಳಿಂದ ಕರೆಯುತ್ತೇವೆ. ವಾತರೋಗದಲ್ಲಿ ನೂರಕ್ಕೂ ಹೆಚ್ಚು ವಿಧಗಳಿವೆ. ಅವುಗಳಲ್ಲಿ ಪ್ರಮುಖವಾಗಿ ಆಸ್ಟಿಯೋ ಆರ್ಥರೈಟಿಸ್, ರುಮಟಾಯ್ಡ್ ಆರ್ಥರೈಟಿಸ್ ಅತಿ ಹೆಚ್ಚು ಜನರಲ್ಲಿ ಕಾಣಿಸಿಕೊಳ್ಳುತ್ತಿದೆ.

ಸಂಧಿವಾತಕ್ಕೆ ಪ್ರಾಕೃತಿ ಚಿಕಿತ್ಸೆ

ನಮ್ಮ ಶರೀರದ ಎಲ್ಲಾ ನೋವುಗಳಿಗೂ ವಾತ ಅಥವಾ ವಾಯು ಪ್ರಮುಖ ಕಾರಣವಾಗಿದೆ. ಹಾಗೆಯೇ ಸಂಧಿವಾತದ ಎಲ್ಲಾ ವಿವಿಧ ರೀತಿಯ ಕಾಯಿಲೆಗಳಿಗೂ ಒಂದೇ ರೀತಿಯ ಎಲ್ಲರು ಸರಳವಾಗಿ ಅನುಸರಿಸುವಂತಹ ಆಹಾರ ಪದ್ಧತಿ ಮತ್ತು ಜೀವನ ಶೈಲಿ ಮತ್ತು ಸೂಕ್ತ ಚಿಕಿತ್ಸಾ ಪದ್ದತಿಯನ್ನು ಅನುಸರಿಸಬಹುದಾಗಿದೆ. ಈ ಚಿಕಿತ್ಸಾ ಪದ್ದತಿಯನ್ನು ಅನುಸರಿಸುವ ಮೂಲಕ ನಿಮ್ಮ ಸಂಧಿವಾತ ರೋಗವನ್ನು ಶೇ.100 ರಷ್ಟು ನಿಯಂತ್ರಣಕ್ಕೆ ತರಬಹುದಾಗಿದೆ. ಆ ಮೂಲಕ ಸಾಮಾನ್ಯ ಜೀವನ ನಡೆಸಲು ನಿಮಗೆ ಸಾಧ್ಯವಾಗುತ್ತದೆ. ಸಂಪೂರ್ಣ ಆರೋಗ್ಯಕರ ಜೀವನ ನಡೆಸಬಹುದಾಗಿದೆ.

ಸಂಧಿವಾತಕ್ಕೆ ಅನುಸರಿಸಬೇಕಾದ ಆಹಾರ ಕ್ರಮ

• ಪ್ರತೀ ಬಾರಿ ಬಿಸಿ ಇರುವ ತಾಜಾ ಆಹಾರವನ್ನು ಸೇವಿಸಬೇಕು.
• ಯೂರಿಕ್ ಆಸಿಡ್ ಹೆಚ್ಚಿಸುವ ಆಹಾರವನ್ನು ಸಂಪೂರ್ಣ ಬಿಡಬೇಕು. ಮಾಂಸಹಾರ, ಬೇಕರಿ ಉತ್ಪನ್ನಗಳು, ಪ್ರೊಸೆಸ್ಡ್ ಪ್ಯಾಕ್ಡ್ ಫುಡ್, ಮಸಾಲೆ ಪದಾರ್ಥಗಳು, ಟೀ ಕಾಫಿ, ಸಕ್ಕರೆ, ಸಿಹಿ ಪದಾರ್ಥಗಳು, ದ್ವಿದಳ ಧಾನ್ಯಗಳು, ಮೈದಾ, ಎಣ್ಣೆಯಲ್ಲಿ ಕರಿದ ಹುರಿದ ಎಲ್ಲಾ ಆಹಾರಗಳು ಶರೀರದಲ್ಲಿ ಯೂರಿಕ್ ಆಸಿಡ್ ಹೆಚ್ಚಿಸುತ್ತವೆ.
• ಅತೀ ಹುಳಿಯಾಗಿರುವ ಯಾವುದೇ ಆಹಾರ ಮತ್ತು ಹಣ್ಣುಗಳನ್ನು ಸೇವಿಸಬಾರದು.
• ಪೊಟ್ಯಾಷಿಯಂ ಅಧಿಕವಿರುವ ಆಹಾರ ಸೇವಿಸಬಾರದು. ಅಧಿಕ ಪೊಟ್ಯಾಸಿಯಮ್ನಿಂದ ರಕ್ತದಲ್ಲಿ ಕಲ್ಮಷ ಹೆಚ್ಚಳವಾಗುತ್ತದೆ. ಅಧಿಕ ಪೊಟ್ಯಾಸಿಯಮ್ ಇರುವ ಬಾಳೆಹಣ್ಣು, ಎಳೆನೀರು, ಕಿತ್ತಳೆ ಹಣ್ಣು, ಗೆಣಸು, ಕ್ಯಾರೆಟ್, ಮೂಲಂಗಿ, ಬೀಟ್ರೂಟ್, ಪಾಲಕ್, ಟೊಮೇಟೊ, ಬೆಂಡೆಕಾಯಿ, ಬದನೆಕಾಯಿ, ಇವುಗಳನ್ನು ಬಿಟ್ಟು ಉಳಿದ ಎಲ್ಲಾ ತರಕಾರಿಗಳನ್ನು ಮಿತ ಪ್ರಮಾಣದಲ್ಲಿ ಸೇವಿಸಬಹುದು.. ಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲೂ ಅಧಿಕ ಪೊಟ್ಯಾಸಿಯಮ್ ಇರುತ್ತದೆ. ಮಿತ ಪ್ರಮಾಣದಲ್ಲಿ ಸೇವಿಸಬಹುದು.
• ಗೋದಿಯಿಂದ ತಯಾರಿಸಿದ ಚಪಾತಿ ಮತ್ತು ಉಪ್ಪಿಟ್ಟನ್ನು ಮಿತವಾಗಿ ಸೇವಿಸಬೇಕು. ಗೋಧಿಯಲ್ಲಿ ಗ್ಲುಟೆನ್ ಇರುತ್ತದೆ. ಕೆಲವರಿಗೆ ಗ್ಲುಟೆನ್ ಉಳ್ಳ ಆಹಾರಗಳು ಅಲರ್ಜಿಯನ್ನುಂಟು ಮಾಡುತ್ತವೆ. ಗ್ಲುಟೆನ್ ತಿಂದರೆ ಕೆಲವರಿಗೆ ಆರೋಗ್ಯ ಸಮಸ್ಯೆಗಳು ಕಾಡುತ್ತವೆ.
• ಹಣ್ಣು ತರಕಾರಿ ಸೊಪ್ಪುಗಳನ್ನು ಹೆಚ್ಚಾಗಿ ಸೇವಿಸಬೇಕು. ಹಸಿ ತರಕಾರಿ ಅಜೀರ್ಣವನ್ನುಂಟುಮಾಡುತ್ತವೆ. ಬೇಯಿಸಿ ರುಚಿಕರವಾದ ಪಲ್ಯ ಸಾಂಬಾರ್ ಮಾಡಿ ಸೇವಿಸಬಹುದು..
• ವಾತ ಹೆಚ್ಚಿಸುವ ಬೇಳೆ ಕಾಳು ಮತ್ತು ಸಿರಿಧಾನ್ಯಗಳನ್ನು ಸಂಪೂರ್ಣ ಬಿಡಬೇಕು. ತೊಗರಿ ಬೇಳೆ, ಕಡಲೆ ಬೇಳೆ, ಹೆಸರುಬೇಳೆ, ಬಟಾಣಿ, ಶೇಂಗ ಇತ್ಯಾದಿ ಧಾನ್ಯಗಳೆಲ್ಲವೂ ವಾತ ಅಥವಾ ವಾಯು ಪ್ರಕೋಪವನ್ನುಂಟು ಮಾಡುತ್ತವೆ.

ಸಂಧಿವಾತ ಕಾಯಿಲೆ ಇರುವವರಿಗಾಗಿ ವಿಶೇಷ 5 ಜೀವನ ಸೂತ್ರಗಳು

• ಹಸಿವಾದಾಗ ಮಾತ್ರ ಊಟ ಮಾಡಬೇಕು.
• ಪ್ರತಿ ದಿನ ಎರಡು ಬಾರಿ ಮಾತ್ರ ಊಟ ಮಾಡಬೇಕು. ಒಂದು ಒಂದು ಊಟವನ್ನು ತ್ಯಾಜಿಸಿ ಉಪವಾಸ ಮಾಡಬೇಕು.
• ಪ್ರತಿದಿನ 30 ನಿಮಿಷ ಸೂರ್ಯನ ಬಿಸಿಲಲ್ಲಿ ಕುಳಿತುಕೊಳ್ಳಬೇಕು.
• ಪ್ರತಿದಿನ 20 ನಿಮಿಷ ವಾಕಿಂಗ್ ಮಾಡಬೇಕು.
• ಪ್ರತಿ ದಿನ ಸೂರ್ಯೋದಯಕ್ಕಿಂತ ಮುಂಚೆ ಏಳಬೇಕು.

ಸಂಧಿವಾತ ಕೀಲುನೋವಿಗೆ ಅತ್ಯಂತ ಶ್ರೇಷ್ಠ ಪರಿಣಾಮಕಾರಿ ಔಷಧ Stomach Kare ಮತ್ತು Othro Care!

ನಿಮ್ಮ ಸಂಧಿವಾತ ಕೀಲುನೋವು ಯಾವುದೇ ಹಂತದಲ್ಲಿರಲಿ. ಮೇಲಿನ ಆಹಾರ ಪದ್ಧತಿಯೊಂದಿಗೆ ಅಲ್ಪ ಪ್ರಮಾಣದಲ್ಲಿ ಪರಿಣಾಮಕಾರಿ ಔಷದ ಸೇವಿಸಿದಲ್ಲಿ ಕೆಲವೇ ದಿನಗಳಲ್ಲಿ ನಿಮ್ಮ ಸಂಧಿವಾತ ಕೀಲುನೋವು ನಿಯಂತ್ರಣಕ್ಕೆ ಬರುತ್ತದೆ. ನಿಮ್ಮ ಸಂಧಿವಾತ ಕೀಲುನೋವಿಗೆ Stomach Kare ಮತ್ತು Othro Care ಎಂಬ ಔಷಧವು ರಾಮಬಾಣದಂತೆ ಕೆಲಸ ಮಾಡುತ್ತದೆ. ಇದರ ಕ್ರಮಬದ್ಧ ಸೇವನೆಯಿಂದ ಕೆಲವೇ ದಿನಗಳಲ್ಲಿ ನಿಮ್ಮ ಸಂಧಿವಾತ ಕೀಲುನೋವು ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ. ಮಾತ್ರವಲ್ಲ. ಇತರೆ ಕಾಯಿಲೆಗಳಾದ ಗ್ಯಾಸ್, ಅಸಿಡಿಟಿ, ಮಲಬದ್ಧತೆ, ಅಲ್ಸರ್, ಹೈಬಿಪಿ, ಹೃದಯ ರೋಗ, ಚರ್ಮರೋಗ, ಕಿಡ್ನಿ ಲಿವರ್ ಕಾಯಿಲೆಗಳಲ್ಲೂ ಈ ಔಷಧ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಈ ಔಷಧವನ್ನು ಭೂಲೋಕದ ಸಂಜೀವಿನಿ ಎಂದೇ ಹೇಳಬಹುದು.(ಬರಹ – ಸೂರ್ಯಕಾಂತ ಸಜ್ಜನ್)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಆತ್ಮಕತೆ | ಪಠ್ಯೇತರ ಚಟುವಟಿಕೆಗಳು

Published

on

  • ರುದ್ರಪ್ಪ ಹನಗವಾಡಿ

ಠ್ಯೇತರ ಚಟುವಟಿಕೆಗಳ ಕಾರಣದಿಂದಾಗಿ ಅದರ ಅಧ್ಯಕ್ಷನಾಗಿದ್ದ ಕಾರಣ ಇಡೀ ಕೇಂದ್ರದ ವಿದ್ಯಾರ್ಥಿಗಳು ಪರಸ್ಪರ ಪರಿಚಯ ಮತ್ತು ಅರ್ಥಮಾಡಿಕೊಳ್ಳುವಂತಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಭಾಷಣ, ಚರ್ಚೆಗಳ ಜೊತೆಗೆ ವಿದ್ಯಾರ್ಥಿಗಳಿಗೆ ಸಂಘಟಿತ ಕಾರ್ಯಕ್ರಮಗಳಾದ ಸಂಗೀತ, ನಾಟಕ, ಏಕಪಾತ್ರಾಭಿನಯಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತಾಗಿತ್ತು.

ಪಠ್ಯೇತರ ಚಟುವಟಿಕೆಯ ಸಂಘದ ಉದ್ಘಾಟನಾ ಸಮಾರಂಭದ ನೆಪದಲ್ಲಿ ನಮ್ಮ ಕೇಂದ್ರಕ್ಕೆ ಆಗಿನ ವಿದ್ಯಾ ಮಂತ್ರಿಗಳಾಗಿದ್ದ ಎ. ಆರ್. ಬದರಿ ನಾರಾಯಣ, ಪಿಡಬ್ಲೂಡಿ ಮಂತ್ರಿಗಳಾಗಿದ್ದ ಕಾಗೋಡು ತಿಮ್ಮಪ್ಪ, ಉಪಕುಲಪತಿಗಳಾಗಿದ್ದ ಕೆ.ಎಸ್. ಹೆಗ್ಗಡೆಯವರಂತವರನ್ನು ಆಹ್ವಾನಿಸಿ, ಇಲ್ಲಿನ ಅನಾನುಕೂಲತೆಗಳನ್ನು ಅವರಿಗೆ ವಿವರಿಸಿ, ಅದರ ಅಭಿವೃದ್ಧಿಗಾಗಿ ಕ್ರಮ ಜರುಗಿಸುವಂತೆ ಒತ್ತಾಯಿಸುತ್ತಿದ್ದೆವು. ಮತ್ತು ಇದೇ ಸಂಘಟನೆಯನ್ನು ಉಪಯೋಗಿಸಿಕೊಂಡು ನಮ್ಮ ಕೇಂದ್ರಕ್ಕೆ ಹಿರಿಯ ಸಾಹಿತಿಗಳಾಗಿದ್ದ ಚಂಪಾ, ಸುಜನಾ ಮತ್ತು ಆಗಿನ್ನು ಹಾಡುವ ಉತ್ಸಾಹದಲ್ಲಿದ್ದ ಜಾನಪದ ಹಾಡುಗಾರ ಬಾನಂದೂರು ಕೆಂಪಯ್ಯ, ಶಿವಮೊಗ್ಗದ ಜನಪದ ಹಾಡುಗಾರರಾಗಿದ್ದ ಯುವರಾಜ ಹೀಗೆ ಅನೇಕರನ್ನು ಸಮಾರಂಭಗಳಿಗೆ ಆಹ್ವಾನಿಸಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೆವು.

ನಮ್ಮಲ್ಲಿನ ಕೊರತೆಗಳನ್ನು ಅರುಹುತ್ತಾ ಸರ್ಕಾರ ಮತ್ತು ವಿಶ್ವವಿದ್ಯಾಲಯ ನಮ್ಮ ಕೇಂದ್ರದ ಬೆಳವಣಿಗೆಗೆ ಏನೆಲ್ಲ ಪ್ರಯತ್ನಗಳನ್ನು ಮಾಡಬೇಕೆಂಬುದರ ಬಗ್ಗೆ ಚರ್ಚೆ ಕೂಡ ನಡೆಯುತ್ತಿದ್ದವು. ಇದೇ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಂದ ಚಂದ್ರಶೇಖರ ಪಾಟೀಲರ `ಕುಂಟ ಕುಂಟ ಕುರುವತ್ತಿ’, `ಕೊಡೆಗಳು’, ಚಂದ್ರಶೇಖರ ಕಂಬಾರರ ‘ಸಂಗ್ಯಾ-ಬಾಳ್ಯಾ’, ಪೂರ್ಣಚಂದ್ರ ತೇಜಸ್ವಿಯವರ ‘ಯಮಳ ಪ್ರಶ್ನೆ’, ನಾಟಕಗಳನ್ನು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರೆಲ್ಲ ಸೇರಿ ಪ್ರದರ್ಶನ ಮಾಡುತ್ತಿದ್ದೆವು. ನಾಟಕದ ನಿರ್ದೇಶನವನ್ನು ನಾನೇ ಮಾಡುತ್ತಿದ್ದೆ. ಈ ಸಮಾರಂಭಗಳು ನಡೆದಾಗ ವಿಶೇಷವಾಗಿ ವಿದ್ಯಾರ್ಥಿಗಳಲ್ಲದೆ, ಕೇಂದ್ರದ ಅಕ್ಕಪಕ್ಕದ ಗ್ರಾಮಸ್ಥರು ಮತ್ತು ಬಿ.ಆರ್.ಪಿ. ಯಲ್ಲಿ ಇದ್ದ ವಿದ್ಯುತ್ ನಿಗಮದ ಹಿರಿಯ ಅಧಿಕಾರಿಗಳು,ಲೋಕೋಪಯೋಗಿ ಇಲಾಖೆ ನೌಕರರು ಹಾಗೂ ಹತ್ತಿರದಲ್ಲಿದ್ದ ಮೀನುಗಾರಿಕಾ ಇಲಾಖೆಯ ನೌಕರರು ಕೂಡಾ ಬರುತ್ತಿದ್ದರು. ನಮ್ಮ ಪಠ್ಯೇತರ ಚಟುವಟಿಕೆಗಳ ಕಾರಣದಿಂದಾಗಿ ನಮ್ಮ ಕೇಂದ್ರದ ಅಸ್ತಿತ್ವಕ್ಕೆ ಒಂದು ರೀತಿಯ ಮನ್ನಣೆ ದೊರೆತಂತಾಗಿತ್ತು. ಇಂತಹ ಎಲ್ಲಾ ಸಭೆ ಸಮಾರಂಭಗಳಲ್ಲಿ ಹಿರಿಯರಾಗಿದ್ದ ಕನ್ನಡ ವಿಭಾಗದ ಡಾ. ಹೆಚ್. ತಿಪ್ಪೇರುದ್ರ ಸ್ವಾಮಿ ಅವರು ಅಧ್ಯಕ್ಷತೆ ವಹಿಸುತ್ತಿದ್ದರು. ಇತರೆ ಎಲ್ಲಾ ಆಧ್ಯಾಪಕರು ಕೂಡಾ ಏಕಮನಸ್ಸಿನಿಂದ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದರು.

ನಮ್ಮ ಅರ್ಥಶಾಸ್ತ್ರ ವಿಭಾಗದ ಯೋಜನಾ ವೇದಿಕೆಯೂ ಕೂಡ ಕ್ರಿಯಾಶೀಲವಾಗಿತ್ತು. ಸಾಮಾನ್ಯ ಅರ್ಥಶಾಸ್ತçಕ್ಕೂ ಒಳಪಡುವ ರಾಷ್ಟç ಮತ್ತು ರಾಜ್ಯ ಯೋಜನೆಗಳ ರ‍್ಯಾವಲೋಚನೆ, ವಾರ್ಷಿಕ ಬಜೆಟ್ ಮೇಲಿನ ಚರ್ಚೆ ಇವೇ
ಮುಂತಾದ ವಿಷಯಗಳನ್ನು ಚರ್ಚಿಸುತ್ತಿದ್ದೆವು. ಇದಕ್ಕಾಗಿ ಮೈಸೂರಿನಿಂದ ಹಿರಿಯ ಅಧ್ಯಾಪಕರಾಗಿದ್ದ ಡಾ. ಮಾದಯ್ಯ, ಡಾ. ಎಸ್. ನಾಗರಾಜು, ಡಾ. ಎಸ್.ಎಂ. ವೀರರಾಘವಾಚಾರ್ ಅವರುಗಳನ್ನು ಜೊತೆಗೆ ಆಡಳಿತಾಧಿ ಕಾರಿಗಳಾಗಿದ್ದ ತರಿಕೆರೆ ಉಪ ವಿಭಾಗದಲ್ಲಿದ್ದ ಎಸ್.ಎಂ. ಜಾಮಾದಾರ್ ಅವರನ್ನು ಕರೆಸಿ ನಮ್ಮ ವಿದ್ಯಾರ್ಥಿಗಳಿಗೆ ಅವರಿಂದ ಉಪನ್ಯಾಸ ಮತ್ತು ಆಡಳಿತದಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ಮಾಡುತ್ತಿದ್ದೆವು.

ನಮ್ಮ ಕೇಂದ್ರದ ಅಧ್ಯಾಪಕರ ಮತ್ತು ವಿದ್ಯಾರ್ಥಿಗಳನ್ನು ಸಂಘಟಿಸಿ ಸುಮಾರು 10 ದಿನಗಳಿಗೂ ಹೆಚ್ಚು ಕಾಲ ಇಡೀ ಸ್ನಾತಕೋತ್ತರ ಕೇಂದ್ರವನ್ನು ಬಂದ್ ಮಾಡಿ ಪ್ರತಿಭಟಿಸಿದ್ದೆವು. ಈ ಕೇಂದ್ರ ಪ್ರಾರಂಭವಾಗಿ 6-7 ವರ್ಷಗಳಾದರೂ ಖಾಯಂ ಅಧ್ಯಾಪಕರ ಕೊರತೆ ನೀಗಿಸಲು ಸರಿಯಾದ ಲೈಬ್ರರಿ ವ್ಯವಸ್ಥೆ, ಹಾಸ್ಟೆಲ್‌ನಲ್ಲಿನ ಮೂಲಭೂತ ಸೌಲಭ್ಯಗಳ ಕೊರತೆಯನ್ನು ಮುಂದಿಟ್ಟುಕೊಂಡು ಒಂದು ಕರಪತ್ರ ಮುದ್ರಿಸಿ ಧರಣಿ ನಡೆಸಿದ್ದೊಂದು ದೊಡ್ಡ ಇತಿಹಾಸ.

ನೇರವಾಗಿ ಅಧ್ಯಾಪಕರು ಭಾಗವಹಿಸಿಲ್ಲವಾದರೂ ವಿದ್ಯಾರ್ಥಿಗಳು ದಿನನಿತ್ಯದ ಬೆಳವಣಿಗೆಯನ್ನೆಲ್ಲ ಗಮನಿಸುತ್ತಾ ಈ ಧರಣಿಯ ವಿಷಯಗಳು ವಿಶ್ವವಿದ್ಯಾಲಯ ಮತ್ತು ಸರ್ಕಾರಕ್ಕೆ ಮುಟ್ಟುವಂತೆ ಮಾಡಲು ಶಿವಮೊಗ್ಗದಲ್ಲಿದ್ದ ಪತ್ರಕರ್ತರಿಗೂ ಸಂಪರ್ಕಿಸಿ ಎಲ್ಲಾ ಪತ್ರಿಕೆಗಳಲ್ಲಿ ಬರುವಂತೆ ಮಾಡಿದ್ದೆವು. ಅದರ ಪರಿಣಾಮವೋ ಎನ್ನುವಂತೆ, ವಿಶ್ವವಿದ್ಯಾಲಯದಿಂದ ಹಿರಿಯ ಅಧಿಕಾರಿಗಳು ಬಂದು ಅಲ್ಲಿನ ಸಮಸ್ಯೆಗಳ ಬಗ್ಗೆ ತುರ್ತು ಗಮನ ಹರಿಸುವ ಬಗ್ಗೆ ಭರವಸೆ ನೀಡಿದ್ದು, ಅದರ ಭಾಗವಾಗಿ ತಾತ್ಕಾಲಿಕವಾಗಿ ಕೆಲಸ ನಿರ್ವಹಿಸುತ್ತಿದ್ದ ಅಧ್ಯಾಪಕರಲ್ಲಿ ನನ್ನನ್ನು ಒಳಗೊಂಡAತೆ ಅನೇಕರಿಗೆ ಖಾಯಂಗೊಳಿಸುವ ಪ್ರಕ್ರಿಯೆ ಪ್ರಾರಂಭವಾದವು. ಲೈಬ್ರರಿ ಶಾಖೆಗೆ ಪೂರ್ಣ ಪ್ರಮಾಣದ ಲೈಬ್ರರಿಯನ್ ಆಗಿ ಮೈಸೂರಿನಿಂದ ರಾಮಕೃಷ್ಣ ಗೌಡ ಬಂದರು. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಎಲ್ಲಾ ವಿಭಾಗಗಳಿಗೆ ಹೊಸ ಪುಸ್ತಕಗಳನ್ನು, ನಿಯತಕಾಲಿಕಗಳನ್ನು ಕೇಂದ್ರಕ್ಕೆ ತರಿಸುವ ವ್ಯವಸ್ಥೆಯಾಯಿತು.

ಈ ನಡುವೆ ನಾನು ಪಿಹೆಚ್.ಡಿ., ಮಾಡಲು ಹೊಸ ವಿಷಯವೊಂದರ ಹುಡುಕಾಟ ಮತ್ತು ನನಗೆ ಗೈಡ್ ಮಾಡಲು ಈಗಾಗಲೇ ಪ್ರಾಧ್ಯಾಪಕರಾಗಿದ್ದವರನ್ನು ನಿಗದಿಗೊಳಿಸಿಕೊಳ್ಳುವ ತಯಾರಿಯಲ್ಲಿದ್ದೆ. ಗಂಗೋತ್ರಿಯಲ್ಲಿ ಪ್ರೊ. ಮಾದಯ್ಯನವರನ್ನು ಈ ಬಗ್ಗೆ ವಿಚಾರಿಸಿದೆ. ಅವರ ಬಳಿ ಈಗಾಗಲೇ ಸಂಶೋಧನೆ ಮಾಡುವ ಹೆಚ್ಚಿನ ವಿದ್ಯಾರ್ಥಿಗಳಿರುವ ಕಾರಣ ನೀಡಿ, ಸಾಧ್ಯವಾಗುವುದಿಲ್ಲ ಎಂದರು. ಹಿರಿಯ ಪ್ರಾಧ್ಯಾಪಕರಾಗಿದ್ದ ಎಪಿಎಸ್ ಮತ್ತು ಎಸ್.ಎಂ.ವಿ. ಅವರು ನಿವೃತ್ತಿ ಅಂಚಿನಲ್ಲಿದ್ದು ಅವರೂ ಕೂಡ ನನಗೆ ಮಾರ್ಗದರ್ಶನ ಮಾಡುವ ಆಸಕ್ತಿ ತೋರಲಿಲ್ಲ. ಇದೇ ಯೋಚನೆಯಲ್ಲಿ ನಾನು ಬೆಂಗಳೂರು ವಿಕೆಆರ್‌ವಿ. ಇನ್ಸಿಟಿಟ್ಯೂಟ್‌ನಲ್ಲಿ ಅಂದು ಪ್ರಾಧ್ಯಾಪಕರಾಗಿದ್ದ ಡಾ. ಅಬ್ದುಲ್ ಅಜೀಜ್ ಅವರನ್ನು ಭೇಟಿ ಮಾಡಿ ನನ್ನ ಸಂಶೋಧನಾ ಆಸಕ್ತಿಯನ್ನು ವಿವರಿಸಿ ತಾವು ಗೈಡ್ ಆಗಬೇಕೆಂದು ಕೇಳಿದೆ. ಅದಕ್ಕವರು ಇಲ್ಲ, ನೀವು ನಿಮ್ಮ ವಿಶ್ವವಿದ್ಯಾಲಯದಲ್ಲೇ ಇರುವ ಪ್ರಾಧ್ಯಾಪಕರಲ್ಲಿ ಸಂಶೋಧನೆ ಮಾಡುವುದು ಸೂಕ್ತ.

ಮುಂದೆ ಅನೇಕ ಸಂದರ್ಭಗಳಲ್ಲಿ ನಿಮ್ಮ ವಿಭಾಗದ ಮುಖ್ಯಸ್ಥರ ಶಿಫಾರಸ್ಸುಗಳು ನಿಮಗೆ ಬೇಕಾಗುತ್ತದೆ. ನೀವು ಬೇರೊಂದು ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಪ್ರಾರಂಭಿಸಿದರೆ ಮುಂದೆ ನಿಮಗೆ ವಿಭಾಗ ಮಟ್ಟದಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸಿ ನಿಮಗೆ ಸಂಶೋಧನೆಯಲ್ಲಿ ಆಸಕ್ತಿ ಬರದಂತಹ ಸನ್ನಿವೇಶ ಬರಬಹುದೆಂದು ಅವರು ತಿಳಿ ಹೇಳಿದರು. ಸ್ನಾತಕೋತ್ತರ ವಿಭಾಗದಲ್ಲಿ ಹೆಚ್ಚು ಅರ್ಹತೆಗಳನ್ನು ಪಡೆಯದೆ ಸ್ನಾತಕೋತ್ತರ ಕೇಂದ್ರದಲ್ಲಿ ಮುಂದುವರಿಯುವುದು ನ್ಯಾಯ ಸಮ್ಮತವಲ್ಲವೆಂದು ನನ್ನೊಳಗಿನ ಒಳ ಮನಸ್ಸು ಕೂಡ ಜಾಗೃತವಾಗಿ ಹೇಳುತ್ತಲೇ ಇತ್ತು. ಅದರ ಒತ್ತಾಸೆಯಂತೆ ಮುಂದೆ ನಾನು ನನ್ನ ಹುದ್ದೆಯನ್ನು ಬಿಟ್ಟು ಬೇರೆ ಕಡೆಗೆ ಹೋಗುವ ಬಗ್ಗೆ ಯೋಚನೆ ಪ್ರಾರಂಭವಾಗಿತ್ತು.

ಮುಂದುವರಿಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಯಾರು ಭೂಮಿಗೆ ಮೊದಲ ಬಾರಿಗೆ ಪ್ರೀತಿಯ ‘ಎಳೆ’ ತಂದರೋ..!

Published

on

  • ನವೀನ್ ಸಾಗರ್, ಬೆಂಗಳೂರು

ಸಿನಿಮಾ ಹಾಡುಗಳು ಕವನಗಳು ಎಲ್ಲ ಗದ್ಯಗಳಷ್ಟು ನೇರ ಸಲೀಸು ಅಲ್ಲ. ಹೇಳಬೇಕಿರೊದನ್ನು ಗದ್ಯಗಳ ಹಾಗೆ ಸೀದಾಸಾದಾವಾಗಿ ಕವನಗಳು, ಸಿನಿಗೀತೆಗಳು ಹೇಳುವುದಿಲ್ಲ. ಹಾಗೆ ಹೇಳಿಬಿಟ್ಟರೆ ಅವು ಕವನ/ಹಾಡು/ಪದ್ಯಗಳೇ ಅಲ್ಲ!!!

ಹಾಡು ಅಂದರೆ ಅಲ್ಲಿ ಉಪಮೆಗಳು ಗೂಢಾರ್ಥಗಳು ದ್ವಂದ್ವಾರ್ಥಗಳು(ದ್ವಂದ್ವಾರ್ಥ ಅಂದ್ರೆ ಅಶ್ಲೀಲ ಮಾತ್ರವೇ ಅಲ್ಲ), ಎರಡುಮೂರು ವಿಚಾರಗಳನ್ನು ಹೇಳಬಲ್ಲ ಒಂದೇ ಒಂದು ಸಾಲು, ಇನ್ಯಾವತ್ತೋ ರೆಲೆವೆಂಟ್ ಅನಿಸಬಲ್ಲ ಕಲ್ಪನೆಗಳು ಏನೇನೋ ತುಂಬಿಹೋಗಿರುತ್ತವೆ. ಅದಕ್ಕೊಂದು ಮೂಡ್ ಇರುತ್ತೆ.

ಒಬ್ಬೊಬ್ಬ ಓದುಗನಲ್ಲಿ ಒಂದೊಂದು ಭಾವ ಹುಟ್ಟಿಸಬಲ್ಲ ಶಕ್ತಿ ಕವಿತೆಗಳಿಗಿರುತ್ತದೆ. ನನಗೆ ರೊಮ್ಯಾಂಟಿಕ್ ಅನಿಸುವ ಗೀತೆಯೊಂದು ಇನ್ನೊಬ್ಬನಿಗೆ ವಿರಹಗೀತೆ ಅನಿಸಬಹುದು. ನನಗೆ ಲಾಲಿ ಹಾಡೆನಿಸುವ ಗೀತೆಯೊಂದು ಇನ್ಯಾರಿಗೋ ಜಾಲಿ ಗೀತೆ ಅನಿಸಬಹುದು. ಇನ್ನೊಬ್ರಿಗೆ ಶೋಕಗೀತೆ ಅನಿಸೋ ಗೀತೆಯಲ್ಲಿ ನನಗೇನೋ ತುಂಟತನ ಕಾಣಿಸಬಹುದು. ಸಭ್ಯಗೀತೆ ಅನಿಸುವ ಹಾಡೊಂದು ಸಾಲುಸಾಲಲ್ಲೂ ಡಬಲ್ ಮೀನಿಂಗ್ ತುಂಬ್ಕೊಂಡಿದೆಯಲ್ಲ ಅನಿಸಬಹುದು. ಗ್ರಹಿಕೆ ಮೂಡು ವಯಸ್ಸು ಸಂದರ್ಭ ಇವೆಲ್ಲದರ ಮೇಲೆ ಹಾಡೊಂದು ನಮ್ಮನ್ನು ತಲುಪೋ ಬಗೆ ಬದಲಾಗುತ್ತಾ ಹೋಗುತ್ತದೆ‌. ಅಷ್ಟಾಗಿಯೂ ಅಸಲಿಗೆ ಅದನ್ನು ಬರೆದ ಕವಿಯ ಯೋಚನೆ ನಾವು ಗ್ರಹಿಸಿದ್ದೆಲ್ಲಕ್ಕಿಂತ ಭಿನ್ನವಾಗಿದ್ದಿನ್ನೇನೋ ಇದ್ದರೂ ಇರಬಹುದು.

ಹಲವು ಬಾರಿ ಕವಿಗೆ ತನ್ನ ಗೀತೆ ತಾನಂದುಕೊಂಡ ಭಾವದಲ್ಲೇ ರೀಚ್ ಆಗಿದೆ ಅನ್ನೋ ಖುಷಿ ತೃಪ್ತಿ ಸಿಗುತ್ತದೆ. ಕೆಲವು ಬಾರಿ .. ಅರೆ ಬರೆಯುವಾಗ ನಾನೇ ಹೀಗೊಂದು ಗೂಡಾರ್ಥದ ಬಗ್ಗೆ ಯೋಚಿಸಿರಲಿಲ್ಲ. ಕೇಳುಗ ಇದಕ್ಕೆ ಇನ್ನೊಂದು ಆಯಾಮವನ್ನೇ ಕೊಟ್ಟುಬಿಟ್ಟನಲ್ಲ ಅಂತ ಅಚ್ಚರಿಯಾಗಬಹುದು. ಕೆಲವೊಮ್ಮೆ ತನಗೇ ಗೊತ್ತಿಲ್ಲದ ಅರ್ಥ ಹುಟ್ಟಿಸಿ ತನ್ನನ್ನು ಕೇಳುಗರು ಮೇಲೇರಿಸಿ ಕೂರಿಸಿದಾಗ, ಈ ಕ್ರೆಡಿಟ್ ಬಿಟ್ಟುಕೊಡಲಿಷ್ಟ ಪಡದ ಕರಪ್ಟ್ ಮನಸು.. ಹೌದೌದು ನಾನು ಹೀಗೆ ಎರಡರ್ಥ ಹುದುಗಿಸಿ‌ಈ ಸಾಲು ಬರೆದಿದ್ದೆ ಎಂದು ಧ್ವನಿಗೂಡಿಸುತ್ತದೆ. ಅದೇ ವಿವಾದಕ್ಕೋ ಅವಹೇಳನಕ್ಕೋ ಕಾರಣವಾದರೆ .. ಇಲ್ಲ ನಾನು ಬರೆದದ್ದು ಈ ಅರ್ಥದಲ್ಲಿ ಅಂತ ಸೇಫ್ಟಿ ಮೋಡ್ ಗೂ ಹೋಗುತ್ತದೆ. ಹಾಡು/ಕವಿತೆಗಳಿಗೆ ಈ ವ್ಯಾಖ್ಯಾನದ ಮೂಲಕ ಬಚಾವಾಗುವ ಇಮೇಜ್ ರೂಪಿಸಿಕೊಳ್ಳುವ ಅವಕಾಶವಿರುತ್ತದೆ‌. ಗದ್ಯಗಳಿಗೆ ಆ ಪ್ರಿವೆಲೇಜ್ ಇರೋದಿಲ್ಲ.

ಸಂಭ್ರಮ ಚಿತ್ರದಲ್ಲಿ ಹಂಸಲೇಖ … “ಯಾರು ಭೂಮಿಗೆ ಮೊದಲ ಬಾರಿಗೆ ಪ್ರೀತಿಯ ಎಳೆ ತಂದರೋ…” ಗೀತೆಯಲ್ಲಿ ” ಎಳೆ” ಪದವನ್ನು ಎರಡರ್ಥ ಬರುತ್ತದೆಂದೇ ಬಳಸಿದರೋ ಬರೆದ ಮೇಲೆ ಎರಡರ್ಥ ಕೇಳುಗರ ಗ್ರಹಿಕೆಗೆ ಬಂತೋ ಎಂಬ ಪ್ರಶ್ನೆಯಂತೆ ಇದು. ಹಂಸ ಲೇಖಾವ್ರು ಪ್ರೀತಿಯ ’ಎಳೆ’ಯ ಬಗ್ಗೆ ಬರೆದಿರಬಹುದು. ಅಥವಾ ಎಳೆದು ತಂದರೋ ಎಂದು ಕೇಳಿಯೂ ಬರೆದಿರಬಹುದು. ಅಥವಾ ಅವರಿಗಿರೋ ಪನ್ ಸೆನ್ಸ್ ಗೆ ಈ ಎರಡೂ ಅರ್ಥ ಬರಲಿ ಅಂತಲೇ ಎಳೆ ಎಂಬ ಪದ ಬಳಸಿರಬಹುದು. ಈ ಥರದ ಸಾಕಷ್ಟು ಉದಾಹರಣೆ ಸಿಗುತ್ತದೆ. ಸಾಹಿತ್ಯ ಗಮನಿಸಲು ಶುರು ಮಾಡಿದಾಗ ಇಂಥ ಖುಷಿ ಅನುಭೂತಿಗಳು ಸಿಗಲಾರಂಭಿಸುತ್ತವೆ. ರಿಸರ್ಚಿನಂಥ ಖುಷಿ

ಹಂಸಲೇಖರ … “ಈ ಹರಯದ ನರಕೊಳಲಲಿ ಇವೆ ಸರಿಗಮ ಹೊಳ್ಳೆಗಳು… ಈ ಮದನನ ಕಿರುಬೆರಳಲಿ ನವಿರೇಳದೆ ಗುಳ್ಳೆಗಳು..” ಈ ಸಾಲು ಕೇವಲ ಕಮರ್ಶಿಯಲ್ ಮ್ಯೂಸಿಕಲ್ ಸಾಂಗ್ ಆಗಿ ನಮ್ಮ ಕಿವಿ ತಲುಪಿದಾಗ ಗುನುಗುವ ಸಾಲಾಗುತ್ತದೆ ಅಷ್ಟೆ. ಅರೆ ಹರಯದ ನರಕೊಳಲು ಅಂದ್ರೆ ಏನು… ಮದನನ ಕಿರುಬೆರಳು ಅಂದ್ರೆ.. ? ಸಾಮಾನಿಗೆ ಇಷ್ಟು ಸಭ್ಯಶೃಂಗಾರರೂಪ ಕೊಟ್ಟು ಹೇಳಿರೋದಾ ಅನಿಸಿದಾಗ.. ಶೃಂಗಾರ ಅಡಗಿರೋ‌ ಸಾಲಾದರೂ ಜೋರಾಗಿ ಹೇಳೋಕೆ ಮನಸು ಹಿಂಜರಿಯುತ್ತದೆ.

ಸಾಹಿತ್ಯ ಅಷ್ಟಾಗಿ ಗಮನಿಸದ ವಯಸ್ಸಲ್ಲಿ… “ಮೈಯ್ಯಲ್ಲಿ ಏಳುತಿದೆ ಮನ್ಮಥ‌ನ ಅಂಬುಗಳು.. ಜುಮ್ ಜುಮ್ ಜುಮ್..” ಅನ್ನೋ ಸಾಲು ಸಂಕ್ರಾಂತಿ ಗೀತೆ ಎಂಬಂತೆ ಬಂದು ಹೋಗುತ್ತಿತ್ತು.

ಆದರೆ ಆನಂತರ ಸಾಹಿತ್ಯವಾಗಿ ಗಮನಿಸಿದಾಗ.‌ ಆಹಾ ರೋಮಾಂಚನವನ್ನು.. ಮೈರೋಮ ನಿಮಿರುವುದನ್ನು ಮನ್ಮಥನ ಬಾಣಕ್ಕೆ ಹೋಲಿಸಿದ್ದಾರಲ್ಲ ಅನಿಸಿ ನಿಜಕ್ಕೂ ಜುಮ್ ಅನಿಸಿತ್ತು. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಯೋಚಿಸಿದರೆ.. ಮೈಯಲ್ಲಿ ಏಳುತಿದೆ ಮನ್ಮಥನ ಅಂಬು ಅಂದ್ರೆ.. ಒನ್ಸಗೇನ್ ಸಾಮಾನಿರಬಹುದಾ ಅನಿಸದಿರದು.

ಸದಾಶಿವಂಗೆ ಅದೇ ಗ್ಯಾನ ಅಂದ್ಕೋಬೇಡಿ..

ನೆನಪಿರಲಿ ಚಿತ್ರದ ಅಜಂತಾ ಎಲ್ಲೋರಾ ಗೀತೆಯಲ್ಲಿ ಬರುವ… “ಮಂದವಾಗಿ ಬಳುಕೋವಂಥ ನಾರಿ ಇವಳ
ಅಂದ ನೋಡಿ ನಿಂತಾಗ..ಚಂದ ನೋಡಿ ನಿಂತಾಗ..
ಯಾರೊ ನೀನು ಎಂದು ಕೇಳುತಾವೆ..
ಇವಳ ಪೊಗರಿನ ಹೃದಯಪಾಲಕಿಯರು..
ನಾಟ್ಯದಂತೆ ನಡೆಯುವಾಗ ಅತ್ತಲಾಡಿ ಇತ್ತಲಾಡಿ…”

ಈ ಸಾಲುಗಳು ತನ್ನ ರಿದಮಿಕ್ ಮ್ಯೂಸಿಕ್ ಹಾಗೂ ಸುಲಲಿತವಾಗಿ ಲಘುಗುರು ಇಟ್ಟು ಬರೆದಂಥ ಪದಗಳ‌ ಆಟದಿಂದ ಮಜವಾಗಿ ಹಾಡಿಸಿಕೊಂಡು ಬಿಡ್ತವೆ. ಆದರೆ ಯಾವತ್ತೋ ಆರಾಮಾಗಿ ಸಾಹಿತ್ಯ ಕೇಳ್ತಾ ಇದ್ದರೆ.. ಆಹಾ ..ಹಂಸಲೇಖರ ರಸಿಕಕಲ್ಪನೆಗಳಿಗೆ ಮಿತಿಯೇ ಇಲ್ಲವಾ ಅನಿಸಿಬಿಡುತ್ತದೆ.

ಯಾರೋ ನೀನು ಎಂದು ಕೇಳುತಾವೆ ಇವಳ “ಪೊಗರಿನ ಹೃದಯ ಪಾಲಕಿಯರು” ಎಂದು ಅವರು ರೆಫರ್ ಮಾಡ್ತಿರೋದು ಆ ಹೆಣ್ಣಿನ ಸ್ತನಗಳ ಬಗ್ಗೆ ಅಂತ ಅರ್ಥವಾದಾಗ ಮತ್ತೊಮ್ಮೆ ಈ ಸಾಂಗ್ ಕೊಡುವ ಅನುಭೂತಿಯೇ ವಿಭಿನ್ನ. “ನಾಟ್ಯದಂತೆ ನಡೆಯುವಾಗ ಅತ್ತಲಾಡಿ ಇತ್ತಲಾಡಿ” ಎಂದು ಮುಂದುವರಿಸಿ ಆ ಸಾಲಿಗೆ ಇನ್ನಷ್ಟು ರಸಿಕತೆ ತುಂಬುತ್ತಾರೆ ಹಂಸ್.

ಗಡಿಬಿಡಿಗಂಡ ಚಿತ್ರದ…. ಮುದ್ದಾಡೆಂದಿದೆ ಮಲ್ಲಿಗೆ ಹೂ ಗೀತೆಯಲ್ಲಿ……. ನಾಯಕಿ”ಎದೆಯ ಸೆರಗ ಮೋಡದಲ್ಲಿ ನೀನೇ ಚಂದ್ರನೀಗ….” ಅಂದರೆ…. ನಾಯಕ” ಹೃದಯ ಮೇರುಗಿರಿಗಳಲ್ಲಿ… ಕರಗಬಹುದೆ ಈಗ” ಅಂತಾನೆ. “ಮುಡಿಯಲಿ ಮಲ್ಲಿಗೆಯ ಮುಡಿದವಳ ಮೊದಲುಮುಡಿಯಬೇಕು.. ಮಡದಿಗೆ ಪ್ರತಿದಿನವೂ ಮೊದಲಿರುಳಿರಬೇಕು…” ಅಂತ ನಾಯಕಿ ತನ್ನನ್ನು ಮೊದಲು ರಮಿಸು ಅಂತ ಒತ್ತಾಯಿಸುತ್ತಿದ್ದರೆ………… ನಾಯಕ ..” ಮನಸಿನ ಮಧುವಿನ ಮಹಲೊಳಗೆ … ಮದನ ಮಣಿಯಬೇಕು… ಸುರತಿಯ ಪರಮಾನ್ನ ಹಿತಮಿತವಿರಬೇಕು” ಅಂತ ಆಕೆಯ ಮೇಲಿರೋ ಮೋಹದ ಜೊತೆಜೊತೆಗೆ ಪ್ರತಿದಿನ ಬೇಡ ಫ್ರೀಡಮ್ಮು ವೀಕ್ಲಿ ಒನ್ಸು ಜುಮ್ ಜುಮ್ಮು” ಅಂತ ದೂರ ಹೋಗೋ ಪ್ರಯತ್ನ ಕೂಡ ಮಾಡುತ್ತಾನೆ.

ಇದು ಕೂಡ ಹೆಣ್ಣು ತನ್ನ ಗಂಡನ್ನು ಸೆಕ್ಸಿಗಾಗಿ ಕರೆಯುವ ಗೀತೆಯೇ ಆದರೂ… ತನ್ನ ಕ್ಲಾಸಿಕಲ್ ಟ್ಯೂನ್ ನಿಂದ ಚೆಂದದ ಪದಜೋಡಣೆಯಿಂದ… ಈ ಹಾಡು ಕೊಂಚವೂ ಅಶ್ಲೀಲ ಅನಿಸೋದೇ ಇಲ್ಲ. ಅಶ್ಲೀಲ ಅನಿಸಿದರೂ ಓಕೆ ಎಂದು ಬರೆದಾಗ.. ರಾತ್ರಿ ಆಯ್ತು ಮಲಗೋಣ ಇಂದು ನಮ್ಮ ಸೋಭಾನ… ಅಥವಾ ಕಾಯಿ ಕಾಯಿ ನುಗ್ಗೇಕಾಯಿ ಮಹಿಮೆಗೆ ರಾತ್ರಿಯೆಲ್ಲ ನಿದ್ದೆಯಿಲ್ಲ ಕಣ್ಣಿಗೆ.. ನೆಲ್ಲಿಕಾಯಿ ಆಸೆಗೆ ಬಿಟ್ಟು ಬಂದೆ ಹಾಸಿಗೆ ಅಂತ ಸ್ವಲ್ಪ ನೇರವಾಗಿಬಿಡುತ್ತಾರೆ ಹಂಸಲೇಖ.

ಇವೆಲ್ಲ ಸಾಹಿತ್ಯವನ್ನು ಗಮನಿಸುವಾಗ ಅರ್ಥವಾಗುತ್ತಾ ಹೋಗುವ ಅಪಾರಾರ್ಥಗಳು. ತೂಗುಮಂಚದ “ಹಮ್ಮನುಸಿರಬಿಟ್ಟಳು ಎಂಬುದು ಅಮ್ಮನುಸಿರ ಬಿಟ್ಟಳು ಎಂದಾಗಿದ್ದು ಅದನ್ನು ಲಾಲಿಹಾಡೆಂದು ತಪ್ಪು ತಿಳಿದುದರ ಪರಿಣಾಮ ಎಂದು ಹಿಂದೊಮ್ಮೆ ಬರೆದಿದ್ದು ನಿಮಗೆ ನೆನಪಿರಬಹುದು.

ಇನ್ನು ಡಬಲ್ ಮೀನಿಂಗೇ ಹುಡುಕಬೇಕು ಅಂದರೆ ಪ್ರತಿ ಗೀತೆಯೂ ಬೇರೆಯೇ ಅರ್ಥ ಕೊಡಬಲ್ಲ ಕೆಪಾಸಿಟಿ ಹೊಂದಿರುತ್ತದೆ. ಅದು ನಾವು ಆ ಗೀತೆಯನ್ನು ಬಿಂಬಿಸೋಕೆ ಹೊರಟಿರುವ ರೀತಿಯ ಮೇಲೆ ಡಿಪೆಂಡು. ಎಂಥ ಸಭ್ಯಸಾಲನ್ನೂ.. ಕವಿಗೇ ಶಾಕ್ ಆಗುವ ಹಾಗೆ ಡಬಲ್ ಮೀನಿಂಗ್ ಆಗಿಸಬಹುದು. ಆ ಉದಾಹರಣೆ ಈ ಬರಹದಲ್ಲಿ ಬೇಡ. ಮುಂದೆಂದಾದರೂ ಬರೆಯೋಣ.

ಇದೆಲ್ಲ ಬರೆಯೋಕೆ ಹೊರಟಿದ್ದಕ್ಕೆ ಪ್ರೇರಣೆ ಅಣ್ಣಯ್ಯ ಚಿತ್ರದ ಒಂದು ಸಾಂಗ್. ಅಣ್ಣಯ್ಯ ಬಂದು ಹೋಗಿ ಇಪ್ಪತ್ತೈದು ವರ್ಷಕ್ಕೂ ಹೆಚ್ಚು ಟೈಮಾಯ್ತು. ರವಿಚಂದ್ರನ್ ಸಿನಿಮಾಗಳು ಸಾಫ್ಟ್ ಪೋರ್ನ್ ಸಿನಿಮಾಗಳಂತೆ ಭಾಸವಾಗುತ್ತಿದ್ದ ನಮ್ಮ ಏಜಿನ ದಿನಗಳವು. ರವಿಚಂದ್ರನ್ ಸಿನಿಮಾಗಳನ್ನು ನೋಡೋದು ಕಾಶೀನಾಥ್ ಸಿನಿಮಾ ನೋಡೋಷ್ಟೇ ಪಾಪ ಎಂಬಷ್ಟು ಮಡಿವಂತಿಕೆ ದಿನಗಳವು. ಆದರೆ ನಮ್ಮ ಪಾಲಿಗೆ ಆಗ ರವಿಮಾಮಾ ಲವ್ ರೊಮ್ಯಾನ್ಸ್ ಶೃಂಗಾರಗಳಿಗೆ ಗಾಡ್. ಆತ ಹೀರೋಯಿನ್ ಎದೆಯ ಮೇಲೆ ಮುಖವಿಟ್ಟು ಒರಗಿದರೆ ನಮಗೆ ರಸಸ್ಫೋಟ ಆಗುತ್ತಿತ್ತು. ಕುತ್ತಿಗೆಗೊಂದು ಮುತ್ತಿಟ್ಟು ತುದಿಬೆರಳುಗಳನ್ನು ಕತ್ತು ಮತ್ತು ಎದೆಯ ನಡುವೆ ಒಮ್ಮೆ ಆಡಿಸಿದ ಅಂದರೆ ಕೊಳಲು ಲಂಬಕೋನವಾಗುತ್ತಿತ್ತು.

ಆತ ಸೆರಗು ಸರಿಸಿ ಹೊಕ್ಕಳಿಗೊಮ್ಮೆ ಮುತ್ತಿಟ್ಟರೆ ಮುಗಿದೇಹೋಯ್ತು ಊರಸ್ನಾಯುಗಳು ಬಿಗಿಯಾಗಿ ಹೋಗುತ್ತಿದ್ದವು. ಅಂದು ಹಂಸಲೇಖ ಗೀತೆಗಳು ರವಿಚಂದ್ರನ್ ನ ಪಿಚ್ಚರೈಸೇಷನ್ನಲ್ಲಿ ಕಳೆದುಹೋಗಿಬಿಡುತ್ತಿದ್ದವು. ಅಥವಾ ಸಾಹಿತ್ಯ ಸಂಗೀತ ಎಲ್ಲದರಾಚೆಗೆ ನಮಗೆ ಆ ರೊಮ್ಯಾನ್ಸೇ ಹೆಚ್ಚು ಆಕರ್ಷಿಸಿಬಿಡುತ್ತಿತ್ತು. ಕ್ಯಾಸೆಟಲ್ಲಿ ಹಾಡುಗಳನ್ನು ಕೇಳಿ ಸಿನಿಮಾಗೆ ಹೋದಾಗ ಗೀತೆಗಳು ಆಡಿಯೋಗಿಂತ ವಿಡಿಯೋವಾಗಿ ತೃಪ್ತಿಕೊಟ್ಟು ಕಳಿಸುತ್ತಿದ್ದವು. ಆದರೆ ಆನಂತರ ಸಾಹಿತ್ಯ ಗಮನಿಸುವ ಮೆಚುರಿಟಿ, ಸಾಹಿತ್ಯದಲ್ಲಿರುವ ಇಮ್ಯಾಜಿನೇಷನ್ ಪವರ್ ಆಸ್ವಾಧಿಸುವ ಮನಸ್ಥಿತಿ ಎಲ್ಲ ಬಂದಾಗ.. ರವಿ ಚಂದ್ರನ್ ಹಂಸಲೇಖರ ಗೀತೆಗೆ ಹತ್ತು ಪರ್ಸೆಂಟಷ್ಟೂ ನ್ಯಾಯ ಸಲ್ಲಿಸಲು ಸಾಧ್ಯವಾಗಿಲ್ಲ ಅನಿಸಿಬಿಟ್ಟಿದೆ. ಹಾಗಂತ ಹಂಸಲೇಖರ ಸಾಹಿತ್ಯಕ್ಕೆ ನ್ಯಾಯ ಸಲ್ಲಿಸಲು ಸಾಧ್ಯವಿತ್ತಾ? ಖಂಡಿತ ಇಲ್ಲ. ಯಥಾವತ್ ನ್ಯಾಯ ಸಲ್ಲಿಸಲು ಹೋದದ್ದೇ ಆದರೆ ಆ ಸಾಂಗ್ ನ ಪಿಚ್ಚರೈಸೇಷನ್ ಕಾಮಸೂತ್ರವಾಗಿ ಹೋಗುವಷ್ಟು ಹಾಟ್ ಆಗಿಬಿಡುತ್ತಿತ್ತು.

ಆ ಗೀತೆಗಳು ಪಿಚ್ಚರೈಸ್ ಆಗದೆಯೇ ಇಮ್ಯಾಜಿನೇಷನ್ನಲ್ಲೇ ಉಳಿದುಬಿಟ್ಟಿದ್ದರೆ ಎಷ್ಟು ಚೆಂದವಿತ್ತು ಅನಿಸಿದ್ದೂ ಇದೆ. ಸತ್ಯ ಏನಂದರೆ ರವಿಚಂದ್ರನ್ ಸಲ್ಲಿಸಿದಷ್ಟು ನ್ಯಾಯವನ್ನು ಹಂಸಲೇಖರ ಗೀತೆಗೆ ಇನ್ಯಾರೂ ಸಲ್ಲಿಸಲು ಸಾಧ್ಯವಾಗಲಿಲ್ಲ. ರೊಮ್ಯಾಂಟಿಕ್ ಗೀತೆಗಳಲ್ಲಿ ಮಾತ್ರವಲ್ಲ… ಬೇರೆ ಗಂಭೀರ/ಸ್ಯಾಡ್/ಫಿಲಾಸಫಿಕಲ್/ಕ್ರಾಂತಿ ಯಾವ ಗೀತೆಗಳಿಗೂ ವಿಶ್ಯುಯಲಿ ನ್ಯಾಯ ಸಿಕ್ಕಿಲ್ಲ. ಇದು ಹಂಸಲೇಖ ಮಾತ್ರ ಅಲ್ಲ.. ಬಹುತೇಕ ಸಾಹಿತಿಗಳ ಮನಸಿನ ಮೂಲೆಯ ಅಸಮಾಧಾನ ಹಾಗೂ ನೋಡುಗರ ಅಸಂತೃಪ್ತಿ. ಮೊನ್ನೆ ನಾನು ಶೇರ್ ಮಾಡಿಕೊಂಡ ” ಸುಮ್ಮನೆ ಹೀಗೆ ನಿನ್ನನೇ …:” ಎಂಬ ಅಮರ್ ಚಿತ್ರದ ಗೀತೆಯಾದರೂ ಅಷ್ಟೆ. ಅಷ್ಟು ಗಾಢ ಸಾಲುಗಳ ಗೀತೆಗೆ ಅಂಬರೀಶ್ ಪುತ್ರನಿಂದ ಕಲ್ಲುಬಂಡೆಯಂಥ ಅಭಿನಯ. ಇಡೀ ಹಾಡನ್ನು ಲಾಂಗ್ ಶಾಟ್ ಗಳಲ್ಲಿ ತೆಗೆದು ಪ್ರಕೃತಿ ಸೌಂದರ್ಯ ತೋರಿಸಿ ಮುಗಿಸಿದ್ದಾರೆ ನಾಗಶೇಖರ್. ಸಾಹಿತ್ಯಕ್ಕೆ ಸಂಗೀತ ಸಲ್ಲಿಸುವಷ್ಟು ನ್ಯಾಯವನ್ನು ದೃಶ್ಯರೂಪ ಸಲ್ಲಿಸಲು ಸಾಧ್ಯವಿಲ್ಲ. ಬೆಟರ್ ನಾವು ಹಾಡುಗಳನ್ನು ನಮ್ಮ ಇಮ್ಯಾಜಿನೇಷನ್ ಗೆ ತಕ್ಕಂತೆ ಕಣ್ಮುಚ್ಚಿಕೊಂಡು ಮನಸ್ಸಿನೊಳಗೇ ಚಿತ್ರಿಸಿಕೊಂಡುಬಿಡುವುದು.

ಬ್ಯಾಕ್ ಟು ಅಣ್ಣಯ್ಯ ಚಿತ್ರದ ಆ ಸಾಂಗ್ : ಇಷ್ಟು ವರ್ಷದಲ್ಲಿ ಈ ಹಾಡನ್ನು ಕಮ್ಮಿ ಅಂದ್ರೂ ಒಂದು ಸಾವಿರ ಸಲ ಕೇಳಿರುತ್ತೇನೆ. ಹಿಟ್ ಆಲ್ಪಮ್ ಆಗಿರುವ ಅದರ ಕಡಿಮೆ ಪಾಪ್ಯುಲರ್ ಗೀತೆ ಅದು.

“ಅ ಹಾಗೆ ಪ್ರೇಮಿ ಓಹೋ.. ಒ ಹೋಗೆ ಪ್ರೇಮಿ ಆಹಾ…”
ಈ ಹಾಡಿನ ಚಿತ್ರಣ ನಿಮ್ಮನ್ನು ಸಾಹಿತ್ಯ ಗಮನಿಸದಷ್ಟು ಸೆಳೆದುಕೊಳ್ಳುತ್ತದೆ ಕಾರಣ. ರವಿಚಂದ್ರನ್ ಮಧುಬಾಲಾ ಕೆಮಿಸ್ಟ್ರಿ! ಆದರೆ ಅದ್ಯಾಕೋ ಗೀತೆ ತುಂಬ ಅಟ್ರಾಕ್ಟಿವ್ ಅನಿಸಿರಲಿಲ್ಲ. ಕಮಾನು ಡಾರ್ಲಿಂಗ್, ಅಣ್ಣಯ್ಯ ಅಣ್ಣಯ್ಯ ಬಾರೋ, ರಾಗಿ ಹೊಲದಾಗೆ ಖಾಲಿ ಗುಡಿಸಲು ಈ ಗೀತೆಗಳು ಕೊಟ್ಟ ಕಿಕ್ …. ಈ ಅ ಹಾಗೆ ಪ್ರೇಮಿ ಓಹೋ… ಒ ಹೋಗೆ ಪ್ರೇಮಿ ಆಹಾ ಗೀತೆ ನೀಡಿರಲಿಲ್ಲ.

ಹೌದು ನಾನು ಈ ಹಾಡನ್ನು ಕೇಳಿಸಿಕೊಳ್ತಾ ಇದ್ದದ್ದೇ ಹೀಗೆ. ಮೊನ್ನೆಯ ತನಕವೂ…ಆದರೆ ಮೊನ್ನೆ ಯಾಕೋ ಮತ್ತೊಮ್ಮೆ ಕೇಳಿಸಿಕೊಂಡಾಗ.. ಅರೆ ಇಪ್ಪತ್ತೈದು ವರ್ಷ ತಪ್ಪಾಗಿ ತಿಳಿದುಕೊಂಡು ತಪ್ಪಾಗೇ ಹಾಡಿಕೊಂಡೆನಲ್ಲ ಅಂತ ಮೈತುಂಬ ಗಿಲ್ಟು

ಆ ಸಾಂಗ್ ಇರೋದು ಹೀಗೆ…

”ಆಹಾ’ಗೆ ಪ್ರೇಮಿ “ಓಹೋ”
” ಓಹೋ”ಗೆ ಪ್ರೇಮಿ ” ಆಹಾ”

ನನ್ನ ಹಾಗೆ ಅದೆಷ್ಟು ಜನ ಯಾಮಾರಿದ್ದೀರೋ ಗೊತ್ತಿಲ್ಲ. ಅಥವಾ ನಾನೊಬ್ನೇ ಹೀಗೆ ತಪ್ಪಾಗಿ ಕೇಳಿಸಿಕೊಂಡವ್ನೋ ಗೊತ್ತಿಲ್ಲ

ಈ ಗೀತೆಯ ವಿಶೇಷ ಏನಂದ್ರೆ ಹಂಸಲೇಖ. ಆಹಾ ಮತ್ತು ಓಹೋ ಎಂಬ ಎರಡು ಪದಗಳನ್ನೇ ಪ್ರೇಮಿಗಳನ್ನಾಗಿಸಿದ್ದಾರೆ

ಆಹಾಗೆ ಓಹೋ ಪ್ರೇಮಿ… ಓಹೋಗೆ ಆಹಾ ಪ್ರೇಮಿ!
ಅದು ಇಬ್ಬರು ಪ್ರ‍ೇಮಿಗಳ ಹೆಸರು!

ಈಗ ಈ ಹಾಡೊಮ್ಮೆ ಕೇಳಿನೋಡಿ…
ಅದು ಸೌಂಡಾಗೋದೇ ಬೇರೆ ಥರ!

ಅದ್ಯಾಕೆ ಆಹಾ ಓಹೋ ಎಂಬ ಪದಗಳು ಇಲ್ಲಿ ಪಾತ್ರಗಳಾದವು ಅಂತ ಸಿನಿಮಾ ತೆರೆದು ನೋಡಿದೆ. ಈ ಹಾಡು ಆರಂಭವಾಗುವ ಮುನ್ನ ಅಣ್ಣಯ್ಯ ಯಾವುದೋ ಫೈಟಿಂಗಲ್ಲಿ ಒದೆ ತಿಂದು ಬೆನ್ನಿಗೆ ಕಾಶಿ ಕೈಲಿ ಬಿಸಿ ಮಸಾಜ್ ಮಾಡಿಸಿಕೊಳ್ತಾ ಇರ್ತಾನೆ. ಅವನ ಇಮ್ಯಾಜಿನೇಷನಲ್ಲಿ ನಾಯಕಿ ಬಂದು ಕಾಶಿಯ ಬದಲು ಮಸಾಜ್ ಮಾಡ್ತಿರೋ ಹಾಗೆ ಒಂದು ಟ್ವಿಸ್ಟು.. ಇಮ್ಯಾಜಿನೇಷನಲ್ಲೇ ಅವಳೊಂದಿಗೆ ಮಾತಾಡ್ತಾ.. ಆಕೆ ಬಿಸಿ ಶಾಖ ಕೊಟ್ಟಾಗ ಒಮ್ಮೆ ನಾಯಕ ಆಹಾ ಅಂತಾನೆ.. ಇನ್ನೊಮ್ಮೆ ಓಹೋ ಎಂದು ಬಿಗಿಯುಸಿರು ಬಿಡುತ್ತಾನೆ. ಆಗ ಹುಟ್ಟುವ ಹಾಡಿದು. ಡ್ರೀಮ್ ಸಾಂಗ್ ನಲ್ಲಿ ಟೆಕ್ಸ್ಟ್ ಕೂಡ ಬರುತ್ತದೆ ಆಹಾ ಓಹೋ ಅಂತ!

ಸ್ಕ್ರಿಪ್ಟ್ ಜೊತೆ ದೃಶ್ಯರಚನೆ ಜೊತೆ ಗೀತ ಸಾಹಿತಿ ಕನೆಕ್ಟ್ ಆದಾಗ ಇಂಥ ಅದ್ಭುತಗಳು, ಮಜಗಳು, ಕ್ರಿಯೇಟಿವ್ ಐಡಿಯಾಗಳು ಹುಟ್ಟುತ್ತವೆ. ಹಂಸಲೇಖ ಎಲ್ಲೋ ಕೂತು ಹಾಡುಬರೆದುಕೊಟ್ಟು ಸಂಗೀತ ಮಾಡಿಕೊಡ್ತಿರಲಿಲ್ಲ. ಸಿನಿಮಾದೊಂದಿಗೆ ಪ್ರೀ ಪ್ರೊಡಕ್ಷನ್ನಿಂದ ರೀರೆಕಾರ್ಡಿನ ತನಕ ಜರ್ನಿ ಮಾಡ್ತಿದ್ರು ಅನ್ನೋದಕ್ಕೆ ಇದೊಂದು ಸಾಕ್ಷಿ. ಅವರಿಬ್ಬರ ಕಾಂಬಿನೇಷನ್ ಯಾಕೆ ಆ ಪರಿ ಕ್ಲಿಕ್ ಆಗುತ್ತಿತ್ತು ಅನ್ನೋದಕ್ಕೂ ಇದೊಂದು ಪುರಾವೆ. ( ಬರಹ : ನವೀನ್ ಸಾಗರ್ ; ಫೇಸ್ ಬುಕ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending