Connect with us

ದಿನದ ಸುದ್ದಿ

ಅಸ್ತಮಾ ಸಮಸ್ಯೆಗೆ ಶಾಶ್ವತ ಪರಿಹಾರ

Published

on

ಇಂದು ಅಸ್ತಮಾ ರೋಗದ ಬಗ್ಗೆ ಕೆಲವು ಮುಖ್ಯ ಮತ್ತು ವಿಶೇಷ ವಿಷಯಗಳನ್ನು ತಿಳಿದುಕೊಳ್ಳೋಣ.ಅಸ್ತಮಾ ಸಮಸ್ಯೆ ಒಮ್ಮೆ ಬಂತೆಂದರೆ, ಜೀವನಪರ್ಯಂತ ಇದರಿಂದ ಬಳಲಲೇಬೇಕು ಮತ್ತು ಇನ್ಹೇಲರ್ ಗಳನ್ನು ಬಿಡಲು ಸಾಧ್ಯವೇ ಇಲ್ಲ ಎಂಬ ಕಲ್ಪನೆ ಜನರಲ್ಲಿ ಇದೆ. ಇದು ಅರ್ಧ ಸತ್ಯ; ಏಕೆಂದರೆ ನಾವು ಮನಸ್ಸು ಮಾಡಿದರೆ ಇದರಿಂದ ಸಂಪೂರ್ಣವಾಗಿ ಹೊರಬರಲು ಸಾಧ್ಯವಿದೆ. ಯಾವ ಕಾರಣದಿಂದ ಅಸ್ತಮಾ ಸಮಸ್ಯೆ ಬಂದಿದ್ದರೂ ನಮ್ಮ ಜೀವನ ಶೈಲಿ ಮತ್ತು ದಿನಚರಿಯ ಕ್ರಿಯೆಗಳು ಸರಿಯಾಗಿದ್ದರೆ ಅದನ್ನು ಖಂಡಿತ ಹತೋಟಿಯಲ್ಲಿಡಲು ಸಾಧ್ಯವಿದೆ. ಅತ್ಯುತ್ತಮ ಉದಾಹರಣೆ ಎಂದರೆ ಪ್ರಾಣಾಯಾಮ.

ಭಸ್ತ್ರಿಕಾ, ಕಪಾಲಭಾತಿ, ನಾಡಿಶೋಧನ, ಉಜ್ಜಾಯಿ, ಬಂಧಗಳಂತಹ ಪ್ರಾಣಾಯಾಮದ ಕ್ರಿಯೆಗಳನ್ನು ನಿತ್ಯವೂ ತಪ್ಪದೇ ಅಭ್ಯಾಸ ಮಾಡಿದರೆ ನಮ್ಮ ಶ್ವಾಸಾಂಗವ್ಯೂಹದ ಶಕ್ತಿ ಎಷ್ಟರಮಟ್ಟಿಗೆ ಹೆಚ್ಚಾಗುತ್ತದೆ ಎಂದರೆ ಸುಲಭಕ್ಕೆ ಅಸ್ತಮಾ ಸಮಸ್ಯೆ ಉಂಟಾಗಲು ಸಾಧ್ಯವಿಲ್ಲ. ಸುಲಭವಾಗಿ ಅರ್ಥವಾಗುವಂತೆ ಹೇಳಬೇಕೆಂದರೆ ಅಸ್ತಮಾ ಖಾಯಿಲೆಯಲ್ಲಿ ಸೂಕ್ಷ್ಮ ಶ್ವಾಸನಾಳಗಳಲ್ಲಿ ಹೆಚ್ಚಾದ ಲೋಳೆಯ ಸ್ರವಿಸುವಿಕೆಯ ಕಾರಣ ನಾಳಗಳು ಕಿರಿದಾಗಿ ಉಸಿರಾಟಕ್ಕೆ ಕಷ್ಟವಾಗುತ್ತದೆ.

ಇದರಿಂದ ಹೃದಯ, ಶ್ವಾಸಕೋಶ, ಮೆದುಳು ಮತ್ತು ಇಡೀ ದೇಹಕ್ಕೆ ದುಷ್ಪರಿಣಾಮ ಉಂಟಾಗುತ್ತದೆ. ಹಾಗಾಗಿ ತಕ್ಷಣ ಸಮಸ್ಯೆ ಶಮನವಾಗಲು ಆಧುನಿಕ ವೈದ್ಯ ಪದ್ಧತಿಯಲ್ಲಿ ಹೇಳಿದ ಔಷಧಗಳನ್ನು ಅಥವಾ ಇನ್ಹೇಲರ್ ಗಳನ್ನು ಬಳಸುವುದು ಒಳ್ಳೆಯದೇ. ಆದರೆ ಶಾಶ್ವತ ಪರಿಹಾರಕ್ಕಾಗಿ ಭಾರತೀಯ ಚಿಕಿತ್ಸಾ ಪದ್ಧತಿಗಳು ವಿವರಿಸಿರುವ ಚಿಕಿತ್ಸೆಗಳ ಮೊರೆ ಹೋಗಲೇಬೇಕು.

ಆಸನ, ಪ್ರಾಣಾಯಾಮ, ಜಲನೇತಿ, ಸೂತ್ರನೇತಿಯಂತಹ ಕ್ರಿಯೆಗಳನ್ನು ನಿಯಮಿತವಾಗಿ ಅಭ್ಯಾಸದಲ್ಲಿ ಇಟ್ಟುಕೊಂಡರೆ ತುಂಬಾ ಸಹಾಯವಾಗುತ್ತದೆ. ಆಯುರ್ವೇದ ಹೇಳಿದ ವಮನ, ವಿರೇಚನದಂತಹ ಪಂಚಕರ್ಮ ಚಿಕಿತ್ಸೆಗಳನ್ನು ತೆಗೆದುಕೊಂಡರೆ ಬಹಳ ದೊಡ್ಡ ಪ್ರಮಾಣದಲ್ಲಿ ಅಸ್ತಮಾ ಹತೋಟಿಗೆ ಬರುತ್ತದೆ ಮತ್ತು ಆನುವಂಶಿಕವಾಗಿ ಬರುವ ಸಾಧ್ಯತೆ ಇದ್ದರೂ ಅದನ್ನು ತಡೆಗಟ್ಟುತ್ತದೆ. ಅಪರೂಪಕ್ಕೆ ಮಾತ್ರ ಜೀರ್ಣಕ್ರಿಯೆಗೆ ಕಷ್ಟಕರವಾದ ಆಹಾರಗಳನ್ನು ಅಂದರೆ ಕರಿದ ಪದಾರ್ಥಗಳು ಅಥವಾ ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ಸೇವಿಸಬೇಕೇ ಹೊರತು ಸಾಮಾನ್ಯವಾಗಿ ನಿತ್ಯವೂ ಲಘು ಭೋಜನವನ್ನೇ ಮಾಡಬೇಕು.

ಇದರಿಂದ ನಮ್ಮ ಶ್ವಾಸಕೋಶದ ಸೂಕ್ಷ್ಮನಾಳಗಳಲ್ಲಿ ವ್ಯತಿರಿಕ್ತ ಬದಲಾವಣೆ ಆಗುವುದನ್ನು ತಡೆಯಬಹುದು. ಹಗಲುನಿದ್ದೆ ಮಾಡುವ ರೂಢಿಯಿದ್ದರೆ ಹಗಲುನಿದ್ದೆಯ ಅವಧಿಯನ್ನು ಕಡಿಮೆ ಮಾಡುತ್ತಾ ಬಂದು ಪೂರ್ತಿಯಾಗಿ ಬಿಟ್ಟುಬಿಡಬೇಕು. ರಾತ್ರಿ ಅತ್ಯಂತ ಲಘು ಭೋಜನ ಮಾಡಬೇಕು ಮತ್ತು ಸಾಧ್ಯವಾದಷ್ಟೂ ಬೇಗ ಮಾಡಬೇಕು. ರಾತ್ರಿಯ ಊಟದಲ್ಲಿ ಹಾಲು, ಮೊಸರು, ತುಪ್ಪ, ಕರಿದ ಪದಾರ್ಥಗಳು, ಮಾಂಸಾಹಾರಗಳನ್ನು ತ್ಯಜಿಸಲೇಬೇಕು. ರಾತ್ರಿ ಊಟದ ನಂತರ ಕನಿಷ್ಟ ಒಂದೂವರೆ ಘಂಟೆ ಬಿಟ್ಟು ಮಲಗಬೇಕು.

ಇನ್ನು ಅಸ್ತಮಾ ತೀವ್ರಾವಸ್ಥೆಯಲ್ಲಿದ್ದು ವೈದ್ಯರನ್ನು ಭೇಟಿಯಾಗಲು ಸಾಧ್ಯವಾಗದೇ ಇದ್ದಾಗ ಸಾಸಿವೆ ಎಣ್ಣೆಗೆ ಉಪ್ಪು ಸೇರಿಸಿ ಬಿಸಿಮಾಡಿ, ಎದೆಗೆ, ಬೆನ್ನಿಗೆ ಮಸ್ಸಾಜ್ ಮಾಡಿ, ಆ ಜಾಗಗಳಿಗೆ ನೀರಿನ ಉಗಿ ಕೊಡಬೇಕು. ನೀರಿಗೆ ನೀಲಗಿರಿ ಎಣ್ಣೆಯನ್ನು ಬಿಟ್ಟು ಉಗಿ ಕೊಟ್ಟರೆ ಹೆಚ್ಚು ಸಹಾಯವಾಗುತ್ತದೆ. ಕಫ ಸರಿಯಾಗಿ ಹೊರಗೆ ಬರದೆ ತೊಂದರೆಯಾಗುತ್ತಿದ್ದರೆ ಆಡುಮುಟ್ಟದ ಸೊಪ್ಪಿನ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಒಂದು ವಾರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.

ಒಂದು ವೀಳ್ಯದೆಲೆಯಲ್ಲಿ ಐದು ಎಲೆ ತುಳಸಿ, ಒಂದು ಲವಂಗ, ಒಂದು ಚೂರು ಜೇಷ್ಠಮಧು ಹಾಕಿ ಪ್ರತಿ ಬಾರಿ ಊಟವಾದ ನಂತರ ಒಂದು ವಾರದ ಕಾಲ ಸೇವಿಸಬಹುದು. ಕಾಳುಮೆಣಸು, ಶುಂಠಿ, ಹಿಪ್ಪಲಿಗಳ ಸಮಪ್ರಮಾಣದ ಮಿಶ್ರಣವನ್ನು ಅರ್ಧ ಚಮಚ ತೆಗೆದುಕೊಂಡು ಅದಕ್ಕೆ ಒಂದು ಚಮಚ ಜೇನುತುಪ್ಪ ಹಾಕಿ ನಿತ್ಯ ಸೇವಿಸುವುದರಿಂದ ಜೀರ್ಣಶಕ್ತಿಯೂ ಹೆಚ್ಚುತ್ತದೆ; ಅಸ್ತಮಾ ಕೂಡಾ ಹತೋಟಿಯಲ್ಲಿರುತ್ತದೆ.

ದೀರ್ಘಾವಧಿಯಿಂದ ಇರುವ ಅಸ್ತಮಾ ರೋಗಿಗಳಿಗೆ ಕೆಲವೊಮ್ಮೆ ಒಳರೋಗಿಯಾಗಿದ್ದು ಪಂಚಕರ್ಮ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಚಿಕಿತ್ಸೆಗಳನ್ನು ಪಡೆದು ಗುಣಪಡಿಸಿಕೊಳ್ಳಬೇಕಾಗುತ್ತದೆ. ಅಸ್ತಮಾ ಸಂಪೂರ್ಣವಾಗಿ ಗುಣವಾದ ಮೇಲೆಯೂ ಕೆಲವು ನಿಯಮಗಳನ್ನು ಪಾಲಿಸದೇ ಹೋದರೆ ಕೆಲವು ಕಾಲದ ನಂತರ ಮರುಕಳಿಸುವ ಸಾಧ್ಯತೆ ಇರುತ್ತದೆ. ಅಸ್ತಮಾ ತೀವ್ರಾವಸ್ಥೆಯಲ್ಲಿದ್ದಾಗ ಸಾಧ್ಯವಾದಷ್ಟೂ ಬೇಗ ಆಸ್ಪತ್ರೆಗೆ ಭೇಟಿ ಕೊಟ್ಟು ತುರ್ತು ಚಿಕಿತ್ಸೆ ತೆಗೆದುಕೂಳ್ಳಬೇಕು. ಉಸಿರಾಟದ ತೊಂದರೆಗಳೆಲ್ಲವೂ ಅಸ್ತಮಾ ಅಲ್ಲ. ಹಾಗಾಗಿ ವೈದ್ಯರ ಭೇಟಿ ಮಾಡದೇ ಅಸ್ತಮಾ ಎಂದು ತೀರ್ಮಾನಿಸಿ ಮನೆಮದ್ದುಗಳನ್ನಾಗಲೀ ಔಷಧ ಸೇವನೆಯನ್ನಾಗಲೀ ಮಾಡಬಾರದು.(ಬರಹ-ಡಾ ವೆಂಕಟ್ರಮಣ ಹೆಗಡೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

ದಿನದ ಸುದ್ದಿ

ರಾಜ್ಯದೆಲ್ಲೆಡೆ ಈದ್ ಮಿಲಾದ್ ಹಬ್ಬದ ಸಂಭ್ರಮ

Published

on

ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದ್ದಾರೆ.

ಮುಸ್ಲಿಮರ ಪವಿತ್ರ ಈದ್ ಮಿಲಾದ್ ಅನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶ್ರದ್ಧಾ ಭಕ್ತಿ, ಸಡಗರಗಳಿಂದ ಆಚರಿಸಲಾಗುತ್ತಿದೆ. ಪ್ರವಾದಿ ಮಹಮದ್ ಪೈಗಂಬರ್ ಜನ್ಮ ದಿನಾಚರಣೆಯ ಅಂಗವಾಗಿ ವಿವಿಧ ಮಸೀದಿಗಳಲ್ಲಿ ಮೌಲೀದ್ ಪಾರಾಯಣ ನಡೆಯಿತು. ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯಗಳನ್ನು ಕೋರುವ ಮೂಲಕ ಸಂಭ್ರಮಿಸಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭ್ರಮದಿಂದ ಈದ್ ಮಿಲಾದ್ ಹಬ್ಬವನ್ನು ಆಚರಿಸಿದರು. ಸಮುದಾಯದ ಒಂದು ಪಂಗಡದವರು ತಾವು ಸಾಕಿರುವ ಬಸವಗಳನ್ನು ಸಿಂಗರಿಸಿ ಮೆರವಣಿಗೆ ನಡೆಸಿದರು. ಕೋಲಾರ ಜಿಲ್ಲೆಯಾದ್ಯಂತ ಪ್ರೀತಿ, ಸಹೋದರತ್ವ ಭಾವನೆಯನ್ನು ಬೆಸೆಯುವ ಪ್ರವಾದಿ ಮೊಹಮ್ಮದ್ ಅವರ ಜನ್ಮ ದಿನದ ಅಂಗವಾಗಿ ಈದ್ ಮಿಲಾದ್ ಹಬ್ಬ ಶಾಂತಿಯುತವಾಗಿ ನಡೆಯಿತು.

ಕೋಲಾರ ನಗರದ ಕ್ಲಾಕ್ ಟವರ್ ನಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿ ಕೋಲಾರ – ಬೆಂಗಳೂರು ರಸ್ತೆಯಲ್ಲಿರುವ ಈದ್ಗಾ ಮೈದಾನ ಮತ್ತು ಸಂಗೊಂಡಹಳ್ಳಿ ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ನಡೆಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮುಹಮ್ಮದ್ ಎಂಬ ಮಹೋನ್ನತ ಮಾದರಿ

Published

on

  • ಯೋಗೇಶ್ ಮಾಸ್ಟರ್

ನುಷ್ಯನ ಎಲ್ಲಾ ವ್ಯವಹಾರಗಳೂ ನಡೆಯುವುದು ಅವನ ಮನಸ್ಸಿನ ಮೂಲಕ. ಮಾಡುವಂತಹ ಆಲೋಚನೆಗಳು, ತೆಗೆದುಕೊಳ್ಳುವಂತಹ ನಿರ್ಧಾರಗಳು, ತೋರುವಂತಹ ವರ್ತನೆಗಳು, ವ್ಯಕ್ತಿಯ ಬಲ, ದೌರ್ಬಲ್ಯ, ಸನ್ನಡತೆ, ದುರ್ನಡತೆ; ಮನುಷ್ಯನದ್ದು ಏನೆಂದು ಹೇಳುತ್ತಾ ಬೆರಳು ತೋರಿಸುವಿರೋ ಅವೆಲ್ಲವೂ ಮನಸ್ಸಿನ ವಿಷಯಗಳಷ್ಟೇ ಆಗಿವೆ. ವ್ಯಕ್ತಿ ಎಂಬುವನು ಆ ಮನಸ್ಸಿನ ಕರಣ, ವರ್ತನೆ ಎನ್ನುವುದು ಆ ಮನಸ್ಸಿನ ಗುಣದ ಪ್ರದರ್ಶನ.

ಮನುಷ್ಯ ತನ್ನ ಮನಸ್ಸಿನ ವೈಪರಿತ್ಯದಿಂದಾಗಿ ತನ್ನ ನಡವಳಿಕೆಯಲ್ಲಿ ತೋರುವ ಎಲ್ಲಾ ವ್ಯವಹಾರಗಳನ್ನು ಮನಗಂಡ ಮುಹಮ್ಮದರು ಅದನ್ನು ತಹಬಂದಿಗೆ ತರಲೆಂದೇ ನೈತಿಕ ತರಬೇತಿಗೆ ತೀವ್ರ ಗಮನ ನೀಡಿದರು. ವ್ಯಕ್ತಿಯೊಬ್ಬನು ವ್ಯಕ್ತಿಗತವಾಗಿಯಾಗಲಿ, ಸಮೂಹದೊಡನೆಯಾದರೂ ಆಗಲಿ, ತನ್ನನ್ನು ತಾನು ಘಾಸಿಗೊಳಿಸಿಕೊಳ್ಳಕೂಡದು ಮತ್ತು ಮತ್ತೊಬ್ಬರನ್ನು ಘಾಸಿಗೊಳಿಸಕೂಡದು; ಇದು ನೈತಿಕ ಹೊಣೆಗಾರಿಕೆ.

ವ್ಯಕ್ತಿ ಮತ್ತೊಬ್ಬ ವ್ಯಕ್ತಿಯ ಮೇಲಾಗಲಿ, ಸಮೂಹವು ಮತ್ತೊಂದು ಸಮೂಹದ ಮೇಲಾಗಲಿ ಆಕ್ರಮಿಸುವುದೆಂದರೆ ನೈತಿಕ ಪರಿಧಿಯೊಳಗೆ ಅತಿಕ್ರಮಿಸುವುದೆಂದೇ ಅರ್ಥ. ಈ ಆಕ್ರಮಣ ಮತ್ತು ಅತಿಕ್ರಮಣಗಳಿಗೆ ಕಾರಣವೇನು?

ಆಸೆಯಿಂದಾಗಿಯೇ ಅಹಂಕಾರ, ಭಯದಿಂದಾಗಿಯೇ ಆಕ್ರಮಣ. ಆಸೆ ಮತ್ತು ಭಯವೆಂಬ ಎರಡು ತೀವ್ರವಾದ ವಿಷಯಗಳು ಮನುಷ್ಯನಲ್ಲಿ ಸೈತಾನರನ್ನು ಆಮಂತ್ರಿಸುತ್ತವೆ. ಸೈತಾನನೆಂದರೆ ದೆವ್ವವೋ, ಭೂತವೋ, ಪ್ರೇತವೋ ಅಲ್ಲ. ನಮ್ಮ ಮನಸ್ಸನ್ನು ಪ್ರಭಾವಿಸಿ ಅಥವಾ ಪುಸಲಾಯಿಸಿ ನಮ್ಮಿಂದ ಕೆಲಸ ಮಾಡಿಸುವ ನಮ್ಮೊಳಗಿನ ಮತ್ತು ಹೊರಗಿನ ಪ್ರಲೋಭನಾ ಪ್ರಭಾವಗಳ ಪ್ರತಿಮಾ ರೂಪಕ.

ಇಂತಹ ಸೈತಾನನ ಪ್ರಭಾವಗಳು ಆಲೋಚಿಸುವ, ಭಾವಿಸುವ ಮನಸ್ಸಿನ ಮೂಲಕವೇ ಕೆಲಸ ಮಾಡುವುದರಿಂದ ಸೈತಾನನ ಚಟುವಟಿಕೆಗಳನ್ನು ನಮ್ಮವೇ ಎಂದು ವ್ಯಕ್ತಿ ಭಾವಿಸುತ್ತಾನೆ. ಹಾಗಾಗಿ ಸೈತಾನನ ಎಲ್ಲಾ ಪ್ರಭಾವ ಮತ್ತು ಚಟುವಟಿಕೆಗಳನ್ನು ಸಮರ್ಥಿಸುವ ಸಲುವಾಗಿ ತನ್ನ ಮನಸ್ಥಿತಿ ಮತ್ತು ಪರಿಸ್ಥಿತಿಯನ್ನು ಉಪಯೋಗಿಸಿಕೊಳ್ಳುವನು.

ಸರಿ, ಈ ವ್ಯಕ್ತಿಯ ಚೈತನ್ಯವನ್ನು ಜೀವ ಅಥವಾ ವ್ಯಕ್ತಿಗತವಾದ ಅಸ್ತಿತ್ವ ಎನ್ನುವುದಾದರೆ, ಮಹಾ ಅಸ್ತಿತ್ವವೊಂದಿದೆ. ಇದು ಆತ್ಮವಾದರೆ, ಅದು ಪರಮಾತ್ಮ. ಇಹದಲ್ಲಿ ಇರುವ ಇದರ ಆಲೋಚನೆಗಳು ಮತ್ತು ಕಾರ್ಯ ಸಾಮರ್ಥ್ಯ ಸೀಮಿತ ಮತ್ತು ಪ್ರಭಾವಿತ. ಆದರೆ ಪರವಾಗಿರುವ, ಇಹದ ಅಳತೆಗೆ ಎಟುಕದ ಅದರ ಸಾಮರ್ಥ್ಯ ಅಮಿತ ಮತ್ತು ಅನಂತ.
ಅಂತಹ ಮಹಾ ಅಸ್ತಿತ್ವವನ್ನೇ ಈಶ್ವರ ಎನ್ನುವರೋ, ಅಲ್ಲಾಹ್ ಎನ್ನುವರೋ, ಬ್ರಹ್ಮನ್ ಎನ್ನುವರೋ, ಲಿಂಗ ಎನ್ನುವರೋ, ಪರಮಪಿತ ಎನ್ನುವರೋ, ಪರಮಾತ್ಮ ಎನ್ನುವರೋ; ಒಟ್ಟಿನಲ್ಲಿ ಭಾಷೆ ಯಾವುದಾದರೂ ಸೃಷ್ಟಿಕರ್ತ ಎಂದು ಕರೆಯಲ್ಪಡುವ ಆ ಮಹೋನ್ನತ ಚೈತನ್ಯಕ್ಕೆ ಶರಣಾಗಿ ಆ ಮಹಾಕಾಶದ ಇಚ್ಛೆಯಂತೆ ನಡೆಯುವ, ಆತನ ಇಚ್ಛೆಗಳನ್ನು ತಮ್ಮ ಮೂಲಕ ನೆರವೇರಿಸುವ ಮಾನವನ ಕರ್ತವ್ಯಕ್ಕೆ ಬೇಕಾದ ನೈತಿಕತೆ, ಆಧ್ಯಾತ್ಮಕತೆ ಮತ್ತು ತಾತ್ವಿಕತೆಯ ಸಾಕ್ಷಾತ್ಕಾರಕ್ಕೆ ಪ್ರವಾದಿ ಮುಹಮ್ಮದರು ಮಹೋನ್ನತ ಮಾದರಿಯಾಗಿ ತಮ್ಮ ಜೀವನ ಮತ್ತು ಸಂದೇಶವನ್ನು ಮುಂದಿರಿಸುತ್ತಾರೆ.

ಮಹಾಸ್ತಿತ್ವಕ್ಕೆ ಶರಣಾಗಿ ತನ್ನ ಸೀಮಿತ ಇತಿ ಮಿತಿಯ ಮಾನಸಿಕ ಲೆಕ್ಕಾಚಾರಗಳಿಂದ ಹೊರಗಿನ ನೇಮವನ್ನು ಸ್ವೀಕರಿಸುವುದೇ ಮುಹಮ್ಮದರ ಪಾಲಿನ ಮಹೋನ್ನತ ನೈತಿಕತೆ. ಅದನ್ನು ತಮ್ಮ ಆಲೋಚನೆ, ನಡವಳಿಕೆ ಮತ್ತು ಬದುಕು ಹಾಗೂ ಬೋಧನೆಗಳ ಮೂಲಕ ತೋರುವ ಮುಹಮ್ಮದ್ ನಿಸ್ಸಂಶಯವಾಗಿ ಅಚ್ಚರಿಯ ಒಂದು ಮಹೋನ್ನತ ಮಾದರಿ. ಯಾರೊಬ್ಬರು ಮುಸಲ್ಮಾನರಾಗಿರಲಿ, ಅಲ್ಲದಿರಲಿ; ಯಾರೊಬ್ಬರ ಬದುಕಿನ ನೈತಿಕತೆಯ ಗುಣಮಟ್ಟವನ್ನು ಉತ್ತಮಗೊಳಿಸಿಕೊಳ್ಳಲು ಅವರ ಜೀವನದ ಸಂಗತಿಗಳ ಅಧ್ಯಯನ ಮತ್ತು ಅವರು ಹೇಳುವ ಮಾತುಗಳ ಸಾಂದರ್ಭಿಕ ಸ್ಮರಣೆಗಳು ತಾತ್ವಿಕ ಊರುಗೋಲಾಗುತ್ತವೆ. ಮುಹಮ್ಮದರನ್ನು ಮುಸಲ್ಮಾನರಿಗೆ ಮತ್ತು ಇಸ್ಲಾಮಿಗೆ ಮಾತ್ರ ಸೀಮಿತಗೊಳಿಸಿನೋಡುವುದು ಅವರ ವ್ಯಕ್ತಿತ್ವ ಅಧ್ಯಯನಕ್ಕೆ ಚ್ಯುತಿ.

ಪಾರದರ್ಶಕವಾದ ನಿಷ್ಕಳಂಕ ಮತ್ತು ಪರಿಪೂರ್ಣ ವ್ಯಕ್ತಿತ್ವದ ಮಾದರಿ ಅವರದು. ವಿನಯಶೀಲತೆ, ಸಮಚಿತ್ತತೆ, ಪೂರ್ಣಪ್ರಜ್ಞೆ, ಕ್ಷಮಾಗುಣ, ಸಹನೆ, ಔದಾರ್ಯ, ನ್ಯಾಯಸಮ್ಮತ, ಪ್ರಾಮಾಣಿಕತೆ ಮತ್ತು ಸಂಪೂರ್ಣ ಸ್ವಾರ್ಥರಹಿತ ಜೀವನದ ನಿದರ್ಶನಗಳೇ ಅವರ ಬದುಕು ಮತ್ತು ಬೋಧನೆಗಳಲ್ಲಿ ಅನಾವರಣಗೊಳ್ಳುವುದು.

ಅಧ್ಯಯನದ ಮೂಲಕ ಅವರನ್ನು ಅರಿತಿರುವಾಗ, ನಮ್ಮ ಬದುಕಿನ ಯಾವುದೇ ಹಂತದಲ್ಲಿ, ಹೆಜ್ಜೆಯಲ್ಲಿ, ಪ್ರಸಂಗಗಳಲ್ಲಿ “ಈ ಸಮಯದಲ್ಲಿ, ಈ ಸಂದರ್ಭಕ್ಕೆ ಪ್ರವಾದಿ ಮುಹಮ್ಮದರು ಮಾದರಿ ಅಥವಾ ಬೋಧನೆ ಹೇಗೆ ಅನ್ವಯಿಸಿಕೊಳ್ಳಬಹುದು” ಎಂಬ ಆಲೋಚನೆಯೇ ಸಾಕು, ನಮ್ಮ ಗುಣಮಟ್ಟದ ನಿರ್ವಹಣೆಯನ್ನು ಅಲ್ಲಿ ಎದುರು ನೋಡಲು ಸಾಧ್ಯ. ಅತಿಕ್ರಮಣವಲ್ಲದ ಮೃದು ಸಾಮಿಪ್ಯದ, ನಸುನಗೆಯ ಮುಹಮ್ಮದರು ಎದೆಯಲ್ಲಿ ಸದಾ ಜೀವಂತ.
ಪ್ರವಾದಿ ಮುಹಮ್ಮದ್ ಅವರ ಸಂಗಾತಿಗಳು ದಾಖಲಿಸಿರುವಂತೆ, ಅವರ ಜೊತೆಗಾರರ ಜೊತೆಯಲ್ಲಿರುವಾಗಲೂ ಕೂಡಾ ಕಾಲನ್ನು ಚಾಚಿ ಕುಳಿತುಕೊಳ್ಳುತ್ತಿರಲಿಲ್ಲ. ಯಾರಿಗೇ ಹಸ್ತಲಾಘವಕ್ಕೆ ಕೊಟ್ಟ ಕೈಯನ್ನು ತಾವೇ ಮೊದಲಾಗಿ ಎಳೆದುಕೊಳ್ಳುತ್ತಿರಲಿಲ್ಲ.

ಮಕ್ಕಾದ ಮೇಲಿನ ವಿಜಯದ ತರುವಾಯ ಮುಹಮ್ಮದರು ನಗರವನ್ನು ಪ್ರವೇಶಿಸುವಾಗ ಒಂಟೆಯ ಮೇಲೆ ಕುಳಿತಿದ್ದ ಅವರು ಅಲ್ಲಾಹನಿಗೆ ಕೃತಜ್ಞತಾ ಪೂರ್ವಕವಾಗಿ ತಲೆಯನ್ನು ತಗ್ಗಿಸಿದ್ದ ಅವರು ಅದೆಷ್ಟು ಬಾಗಿದ್ದರೆಂದರೆ, ಒಂಟೆಯ ಕುತ್ತಿಗೆಯ ಹಿಂಬದಿಯನ್ನು ತಗಲುವಷ್ಟು! ವ್ಯಕ್ತಿಗತವಾದ ಅಹಂಕಾರದ ಕಾರಣಕ್ಕಾಗಿ ಎಂದಿಗೂ, ಯಾರ ಮೇಲೂ ಅದೆಷ್ಟೇ ಸಮಸ್ಯೆಗಳನ್ನು ಕೊಟ್ಟಿದ್ದರೂ ಸೇಡು ತೀರಿಸಿಕೊಳ್ಳುವ ಕಿಂಚಿತ್ತೂ ಧೋರಣೆ ಹೊಂದಿರಲಿಲ್ಲ ಮತ್ತು ‘ನಾನು’ ಎಂದ ಅಹಂಭಾವಕ್ಕೆ ಎಲ್ಲಿಯೂ ಆಸ್ಪದವನ್ನೇ ಕೊಡಲಿಲ್ಲ. ತಮ್ಮೆಲ್ಲಾ ಕೆಲಸ, ವರ್ತನೆ ಮತ್ತು ವ್ಯವಹಾರಗಳಲ್ಲಿ ನ್ಯಾಯ ಮತ್ತು ಪ್ರಾಮಾಣಿಕತೆಯನ್ನು ಕಿಂಚಿತ್ತೂ ಬಿಟ್ಟುಕೊಡಲಿಲ್ಲ.

ಕುಲೀನ ಮನೆತನದ ಹೆಣ್ಣುಮಗಳೊಬ್ಬಳು ಕಳ್ಳತನದ ಅಪರಾಧದಲ್ಲಿ ಶಿಕ್ಷೆಅನುಭವಿಸಬೇಕಾಗಿ ಬಂದಾಗ, “ನಮ್ಮ ಮಗಳು ಫಾತೀಮಾ ಆಗಿದ್ದರೂ ಕೂಡಾ ಇದೇ ಕಾನೂನಿನ ಕ್ರಮವನ್ನು ಎದುರಿಸಬೇಕಿತ್ತು” ಎನ್ನುವರು ಪ್ರವಾದಿ ಮುಹಮ್ಮದರು. ಅದು ಸಮಾಜದ ನೈತಿಕ ವ್ಯವಸ್ಥೆಯ ವಿಷಯದಲ್ಲಿ. ಆದರೆ ಅದೇ ತಮ್ಮ ವಿಷಯಕ್ಕೆ ಬಂದಾಗ ಶತ್ರುಗಳನ್ನು ತಾವು ಕ್ಷಮಿಸಿಬಿಡುತ್ತಿದ್ದರು. ತಮ್ಮನ್ನು ಮತ್ತು ತಮ್ಮ ಅನುಯಾಯಿಗಳನ್ನು ಸತತವಾಗಿ ಕಿರುಕುಳಕೊಡುತ್ತಿದ್ದವರನ್ನೂ ಮೆಕ್ಕಾದ ವಿಜಯದ ನಂತರ ಕ್ಷಮಿಸಿದ್ದರು.

ಅವರ ಅನುಯಾಯಿಗಳು ತಮ್ಮನ್ನು ಆರಾಧಿಸುವಂತಹ ವಿಷಯಕ್ಕೆ ಎಂದಿಗೂ ಆಸ್ಪದವನ್ನು ಕೊಡಲಿಲ್ಲ. ಅಲ್ಲಾಹನಿಗೆ ಮಾತ್ರ ಆರಾಧನೆಯು ಮೀಸಲು ಎಂದ ಅವರು ಹೇಳುತ್ತಿದ್ದದ್ದು, “ನಾನು ಅಲ್ಲಾಹನ ಬರೀ ಸೇವಕನೊಬ್ಬ.” ತಮ್ಮನ್ನು ತಾವು ಗುರುತಿಸಿಕೊಂಡಿದ್ದು ದೇವತಾ ಮನುಷ್ಯನಾಗಿ ಅಲ್ಲ. ಬರಿಯ ಮಾರ್ಗದರ್ಶಕ, ಅಲ್ಲಾಹನ ಸಂದೇಶ ವಾಹಕ.
“ಮಾನವರೇ, ನಾನು ನಿಮ್ಮೆಲ್ಲರ ಪಾಲಿಗೆ ಅಲ್ಲಾಹನ ದೂತನಾಗಿರುವೆನು. ಆಕಾಶಗಳ ಮತ್ತು ಭೂಮಿಯ ಅಧಿಪತ್ಯವು ಅವನಿಗೆ ಸೇರಿದೆ. ಅವನ ಹೊರತು ಬೇರೆ ದೇವರಿಲ್ಲ. ಅವನೇ ಜೀವಂತಗೊಳಿಸುವವನು ಮತ್ತು ಮರಣ ನೀಡುವವನು. ನೀವೀಗ ಅಲ್ಲಾಹನಲ್ಲೂ ಆತನ ದೂತನಲ್ಲೂ ನಂಬಿಕೆ ಇಡಿರಿ. ಅವರು ನಿರಕ್ಷರಿ ಪ್ರವಾದಿಯಾಗಿದ್ದು, ಅಲ್ಲಾಹನಲ್ಲಿ ಹಾಗೂ ಅವನ ವಚನಗಳಲ್ಲಿ ನಂಬಿಕೆ ಉಳ್ಳವರಾಗಿದ್ದಾರೆ. ಮಾರ್ಗದರ್ಶನ ಪಡೆಯಲಿಕ್ಕಾಗಿ ನೀವು ಅವರನ್ನು ಅನುಸರಿಸಿ.” (ಕು: 7/158)

ಮನುಷ್ಯನ ಹೊರತು ನೈಸರ್ಗಿಕವಾಗಿರುವ ಉಳಿದೆಲ್ಲಾ ಜೀವಿಗಳು ಸಹಜವಾಗಿಯೇ ಇರುತ್ತವೆ. ಆದರೆ ಮನುಷ್ಯನೊಬ್ಬನಿಗೆ ಮಾತ್ರ ಮನಸ್ಸು ಎಂಬುವುದಿದ್ದು, ಅದು ಆಲೋಚನೆ ಎಂಬುದನ್ನು ಮಾಡಿ, ವಿಷಯಗಳನ್ನು ಮತ್ತು ಪ್ರಸಂಗಗಳನ್ನು ವಿಶ್ಲೇಷಿಸುವ ಮತ್ತು ವಿವೇಚಿಸುವ ಸಾಮರ್ಥ್ಯವನ್ನು ಹೊಂದಿದ್ದಾನೆ. ಇದರಿಂದಾಗಿಯೇ ತನ್ನ ಇಷ್ಟಕ್ಕೆ ತಕ್ಕಂತೆ, ತನ್ನ ಅನುಕೂಲಕ್ಕೆ ತಕ್ಕಂತೆ, ತನ್ನ ಸ್ವಾರ್ಥ ಮತ್ತು ಅಹಂಕಾರಕ್ಕೆ ತಕ್ಕಂತೆ ವಿವೇಚಿಸುತ್ತಾ ಇಡೀ ವಿಶ್ವದ ವಿದ್ಯಮಾನಗಳನ್ನೇ ವಿವರಿಸುತ್ತಾನೆ. ಹೃದಯ ಮತ್ತು ದೇಹಗಳು ಪ್ರಕೃತಿ ಸಹಜವಾಗಿದ್ದರೆ, ಮನಸ್ಸು ಮಾತ್ರ ಕೃತಕತೆಯನ್ನು ಸೃಷ್ಟಿಸುತ್ತದೆ. ಕೃತಕತೆ ಎಂಬುದು ನೈಸರ್ಗಿಕವಲ್ಲದೇ ಇರುವ ಕಾರಣದಿಂದ ವ್ಯಕ್ತಿಯಿಂದ ವ್ಯಕ್ತಿಗೆ, ಸಮೂಹದಿಂದ ಸಮೂಹಕ್ಕೆ ಬದಲಾಗುತ್ತಾ ಹೋಗಿ ಸಂಘರ್ಷಕ್ಕೆ, ದೌರ್ಜನ್ಯಕ್ಕೆ ಮತ್ತು ಹುಸಿ ವಿದ್ಯಮಾನಗಳಿಗೆ ಕಾರಣವಾಗುತ್ತದೆ. ಯಾವ ವಿಷಯಗಳು ಮನಸ್ಸಿನ ಸೃಷ್ಟಿಯಾಗಿರುತ್ತವೆಯೋ ಅವುಗಳೆಲ್ಲವೂ ಕೂಡಾ ಕೃತಕತೆಯನ್ನು ಹೊಂದಿರುವ ಸಾಧ್ಯತೆಯೇ ಅತಿ ಹೆಚ್ಚು. ಹಾಗಿರುವಾಗ ಇಡೀ ವಿಶ್ವದ ಪ್ರಕೃತಿಯ ಸೃಷ್ಟಿಯ ಕಾರಣ ಅಂದರೆ ದೇವರು ಈ ವೈಪರಿತ್ಯವನ್ನು ಸಹಿಸಲಾಗದು. ತಾತ್ವಿಕ ಮತ್ತು ಆಧ್ಯಾತ್ಮಿಕ ವಿವರಣೆಯಂತೆ ಪ್ರವಾದಿಗಳ ಬಹು ದೊಡ್ಡ ಹೊಣೆಗಾರಿಕೆಯೆಂದರೇನೇ ದೇವರ ದೃಷ್ಟಿಯಂತೆ, ಅವನ ಇಚ್ಛೆಯಂತೆ ಮನುಷ್ಯನೂ ಕೂಡಾ ಬಾಳುವುದು. ಅದಕ್ಕಾಗಿ ಅವನನ್ನು ಕ್ರಮಕ್ಕೊಳಪಡಿಸಲು ನೈತಿಕ ಮತ್ತು ತಾತ್ವಿಕ ಕರಣಗಳಿವೆ.

ಅದರಂತೆಯೇ ಪ್ರವಾದಿ ಮುಹಮ್ಮದರೂ ಕೂಡಾ ಮನುಷ್ಯನ ನಡವಳಿಕೆ, ಬದುಕುವ ರೀತಿ ಮತ್ತು ತನ್ನನ್ನು ತಾನು ಹಾಗೂ ಇತರ ಜೀವಿಗಳನ್ನು ನೋಡುವ ರೀತಿ; ಎಲ್ಲವೂ ಅಲ್ಲಾಹನು ಬಯಸುವ ರೀತಿಯದ್ದಾಗಿರಲಿ ಎಂದು ತಾವೇ ಒಂದು ಸುಂದರ ಮಾದರಿಯಾಗಿ ತೋರಿದರು.

ಖಂಡಿತವಾಗಿಯೂ ಅಲ್ಲಾಹನ ದೂತರಲ್ಲಿ ನಿಮಗೆ ಅತ್ಯುತ್ತಮ ಆದರ್ಶವಿದೆ. ಅಲ್ಲಾಹನ ಕುರಿತು ಮತ್ತು ಆ ಅಂತಿಮದಿನದ ಕುರಿತು ಶುಭ ನಿರೀಕ್ಷೆ ಉಳ್ಳವರಿಗೆ ಮತ್ತು ಅಲ್ಲಾಹುವನ್ನು ಪದೇ ಪದೇ ಸ್ಮರಿಸುವವರಿಗೆ (ಇದು ಅನ್ವಯಿಸುತ್ತದೆ.) (ಕು: 33.21)

ಹಾಗಾಗಿಯೇ ಇಸ್ಲಾಮ್ ಒಂದು ಮಾರ್ಗ. ಅಲ್ಲಾಹನು ಇಚ್ಛಿಸುವ ಗುರಿಯನ್ನು ಮುಟ್ಟಲು ಒಂದು ಅನುಗ್ರಹಿತ ಮಾರ್ಗ. ಹಾಗಾಗಿಯೇ ಮತ್ತೆ ಮತ್ತೆ ನಾವು ನೆನಪಿಸಿಕೊಳ್ಳಬೇಕಾಗಿರುವುದು ಮುಹಮ್ಮದರು ಬರಿಯ ಮುಸ್ಲೀಮರಿಗಲ್ಲ, ಎಲ್ಲರಿಗೂ.
ಕುರಾನ್ ಒಂದು ಮಾರ್ಗದರ್ಶಿ ಕೈಪಿಡಿ. ಅನುಗ್ರಹಿತ ಮಾರ್ಗದಲ್ಲಿ ನಡೆಯಲು ಮಾಡಬೇಕಾದ ಕೆಲಸಗಳು, ತೆಗೆದುಕೊಳ್ಳಬೇಕಾದ ನಿರ್ಧಾರಗಳು, ರೂಢಿಸಿಕೊಳ್ಳಬೇಕಾದ ಅಭ್ಯಾಸಗಳು, ತಳೆಯ ಬೇಕಾದ ನಿಲುವುಗಳು, ಸತ್ಯ ಮತ್ತು ಮಿಥ್ಯಗಳನ್ನು ಬೇರ್ಪಡಿಸಿ ನೋಡುವ ವಿವೇಕಗಳು, ಹಿಂದೆ ಸಾಧಿಸಿದವರ ಉದಾಹರಣೆಗಳು, ಎಡವಿರುವವರ ವೈಫಲ್ಯಗಳು, ಸಾಧಿಸಿರುವವರ ದೃಷ್ಟಾಂತಗಳು, ಪ್ರಕೃತಿಯಿಂದ, ಕೀಟ ಮತ್ತು ಪ್ರಾಣಿಗಳ ಮಾದರಿಗಳು; ಎಲ್ಲವನ್ನೂ ಪ್ರವಾದಿ ಮುಹಮ್ಮದರು ಕ್ರೋಢೀಕರಿಸಿದ್ದಾರೆ. ಯಾವುದೇ ಒಬ್ಬ ಮನುಷ್ಯ ತನ್ನ ಮನೆಯಲ್ಲಿ, ಸಮಾಜದಲ್ಲಿ, ಆರ್ಥಿಕ ಮತ್ತು ರಾಜಕೀಯ ನಿಲುವುಗಳಲ್ಲಿ ಹೇಗಿರಬೇಕು, ಹೇಗಿರಬಾರದು ಎಂಬುದರ ಸ್ಪಷ್ಟ ನಿರ್ದೇಶನಗಳಿವೆ. ಯಾವವು ನಂಬಲರ್ಹ, ಯಾವುದನ್ನು ನಂಬಕೂಡದು ಇವುಗಳ ಬಗೆಯೂ ಸ್ಪಷ್ಟ ಧೋರಣೆ. ಒಟ್ಟಾರೆ ಮನುಷ್ಯ ಮತ್ತು ದೇವರ ನಡುವಿನ ಒಂದು ದಿವ್ಯವಾದ ಮಾರ್ಗವದಾಯಿತು. ಕುರಾನಿನಲ್ಲಿ ನೀಡಿದ ಬೋಧನೆಗಳನ್ನೆಲ್ಲಾ ತಾವೇ ಬಾಳಿ ಬದುಕಿ ಮಾದರಿಯಾಗಿದ್ದು ಪ್ರವಾದಿ ಮುಹಮ್ಮದರು.

ಪ್ರವಾದಿ ಮುಹಮ್ಮದರ ಜೀವಿತಾವಧಿಯಲ್ಲಿ ಮತ್ತು ಮೊದಲು ಕೂಡಾ ಅರಬ್ಬರಲ್ಲಿ ಪ್ರತಿಕಾರವೆನ್ನುವುದು ಬಹಳ ಸಹಜವಾದ ವಿಷಯ. ಸೇಡು ತೀರಿಸಿಕೊಳ್ಳದವರು ಮನುಷ್ಯರೇ ಅಲ್ಲ ಅಥವಾ ಹಾಗೆ ಸೇಡು ತೀರಿಸಿಕೊಳ್ಳದೇ ಇರುವುದು ಘನತೆಗೆ ತಕ್ಕುದ್ದಲ್ಲ ಎಂಬಂತೆ ಅವರ ಧೋರಣೆ. ಯಾವುದೇ ಎದುರಾಳಿಯ ಪಂಗಡದಿಂದ ಅಥವಾ ಸಮೂಹದಿಂದ ಅಥವಾ ವ್ಯಕ್ತಿಯಿಂದಾದರೂ ತಮ್ಮಲ್ಲಿ ಶತ್ರುತ್ವ ಹುಟ್ಟುವಂತಹ ಸಂಗತಿ ಜರುಗಿತೆಂದರೆ ಅವರು ರಕ್ತಪಾತದ ಮೂಲಕ ಸೇಡು ತೀರಿಸಿಕೊಳ್ಳುವುದು ಏನೇನೂ ವಿಶೇಷವೇ ಅಲ್ಲ. ಆದರೆ ಅವರ ನಡುವೆ ಹುಟ್ಟಿ, ಬೆಳೆದು, ಅವರೆಲ್ಲಾ ಚಟುವಟಿಕೆಗಳನ್ನು ನೇರವಾಗಿ ಸಾಕ್ಷೀಕರಿಸುತ್ತಾ ಇದ್ದ ಮುಹಮ್ಮದರು ಅವರ ಪ್ರಭಾವಕ್ಕೆ ಸಹಜವಾಗಿ ಒಳಗಾಗಬೇಕಾಗಿತ್ತು. ಆದರೆ ಅವರ ಮನಸ್ಸು ವಾಲಿದ್ದು ಸತ್ಯದ ಕಡೆಗೆ, ಪರಮ ಸತ್ಯದ ಕಡೆಗೆ, ಅಲ್ಲಾಹನ ಕಡೆಗೆ. ಅಲ್ಲಾಹನ ಗುಣವೇ ಶಾಂತಿ, ಕರುಣಾಳು. ಹಾಗಾಗಿಯೇ ದೇವರ ಗುಣಗಳನ್ನು ತಮ್ಮ ಚಟುವಟಿಕೆಗಳಲ್ಲಿ ಪ್ರತಿಫಲಿಸುತ್ತಿದ್ದರು.

ಮುಹಮ್ಮದ್ ಅವರು ವ್ಯಾಪಾರಿಯಾಗಿದ್ದು ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದ ದಿನಗಳಲ್ಲಿ ಅವರು ಸತ್ಯಸಂಧ ಮತ್ತು ಪ್ರಾಮಾಣಿಕರಾಗಿದ್ದರು ಎಂಬ ಹೆಸರು ಪಡೆದಿದ್ದರೂ ತಮ್ಮ ವ್ಯಾಪಾರ ಮತ್ತು ವ್ಯವಹಾರಗಳಿಂದ ಶ್ರೀಮಂತರಾಗುವ ದೃಷ್ಟಿಯನ್ನು ಹೊಂದಿಲ್ಲದ ಇವರನ್ನು ಅವರ ಸಂಬಂಧಿಗಳು ಮತ್ತು ಇತರ ವ್ಯಾಪಾರಿಗಳು ಆಡಿಕೊಳ್ಳುತ್ತಿದ್ದುದ್ದುಂಟು. ಏಕೆಂದರೆ ಇವರ ವ್ಯಕ್ತಿ ವಿಶೇಷಣಗಳಿಂದಾಗಿ, ವ್ಯಾಪಾರದ ಕೌಶಲ್ಯಗಳಿಂದಾಗಿ ಉತ್ತಮ ವ್ಯಾಪಾರವಾಗುತ್ತಿದ್ದರೂ ಗಳಿಸುತ್ತಿದ್ದ ಲಾಭವು ಇತರರಿಗೆ ಹೋಲಿಸಿದರೆ ಕಡಿಮೆಯೇ. ತಮಗೆ ಕಡಿಮೆ ಆದಾಯವಾಗಿದ್ದರೂ ಫುಜ್ಜಾರ್ ಯುದ್ಧದಲ್ಲಿ ಮಡಿದವರ ಚಿಕ್ಕ ಚಿಕ್ಕ ಮಕ್ಕಳಿಗೆ ಮತ್ತು ವಯಸ್ಸಾದವರಿಗೆ ಕೃತಜ್ಞತೆಯನ್ನೂ ಬಯಸದೇ ಜೀವನೋಪಯೋಗಿ ವಸ್ತುಗಳನ್ನು ಕೊಟ್ಟು ಬಂದುಬಿಡುತ್ತಿದ್ದರು. ಅವರು ಹಾಗೆ ಬಂದು ಕೊಡುವುದು ನಿತ್ಯಕ್ರಮವೇ ಆಗಿತ್ತು. ಇತರರು ಅಂದುಕೊಳ್ಳುತ್ತಿದ್ದದ್ದು ಮಾತ್ರ ಮುಹಮ್ಮದ್ ಸಂಪತ್ತಿನ ಬೆಲೆಯನ್ನು ತಿಳಿಯದವನು. ವ್ಯರ್ಥವಾಗಿ ವಿಧವೆಯರಲ್ಲಿ ಮತ್ತು ಅನಾಥರಲ್ಲಿ ವ್ಯಯ ಮಾಡುತ್ತಿದ್ದಾನೆ. ಒಂದು ವೇಳೆ ಇಂತವನ್ನು ಬಿಟ್ಟಿದ್ದರೆ ಇಡೀ ಮಕ್ಕಾದಲ್ಲಿಯೇ ಅತಿ ದೊಡ್ಡ ಸಾಹುಕಾರನಾಗುತ್ತಿದ್ದ ಎಂಬುದು ಉಳಿದವರ ಲೆಕ್ಕಾಚಾರ.

ಆದರೆ ಗಳಿಸಿದ್ದನ್ನು ಉಳಿಸಿ ಜಿಪುಣತನದಿಂದ ಕಾಪಾಡುವುದು ಮುಹಮ್ಮದರ ಉದ್ದೇಶವಾಗಿರಲಿಲ್ಲ. ಬದಲಿಗೆ, ನಿರ್ಗತಿಕರಲ್ಲಿ, ಅನಾಥರಲ್ಲಿ ಮತ್ತು ಅಸಹಾಯಕ ಸ್ಥಿತಿಗಳಲ್ಲಿ ಇರುವ ವ್ಯಕ್ತಿಗಳಿಗೆ ಹಂಚಿಕೊಳ್ಳುವುದು ಅವರ ಗುಣವಾಗಿತ್ತು. ಇವರು ಬರುವುದನ್ನೇ ಕಾಯುತ್ತಿದ್ದು ಅವರಿಂದ ಜೀವನಾಧಾರ ವಸ್ತುಗಳನ್ನು ಪಡೆಯುವುದು ಅಲ್ಲಿ ಸಂತ್ರಸ್ತರ ವಾಡಿಕೆಯಾಗಿತ್ತು. ಮುಹಮ್ಮದರದ್ದು ಗುಪ್ತದಾನ, ಯಾರ ಮೆಚ್ಚುಗೆಗೂ ಅಲ್ಲ, ಯಾವ ದಾಕ್ಷಿಣ್ಯಕ್ಕೂ ಅಲ್ಲ. ಎರಡೇ ಕಾರಣ ಒಂದು ಹಾಗಿರುವುದೇ ಮುಹಮ್ಮುದರು ತಮ್ಮನ್ನು ರೂಪಿಸಿಕೊಂಡಿರುವ ರೀತಿಯಾಗಿತ್ತು. ಮತ್ತೊಂದು ಇದಾಗುತ್ತಿದ್ದದ್ದು ಪರಮ ದಯಾಳುವೂ ಕರುಣಾನಿಧಿಯೂ ಆದ ಅಲ್ಲಾಹನಿಗೊಸ್ಕರ.

ಮಾಡಿದೆನೆಂಬುದು ಮನದಲಿ ಹೊಳೆದಡೆ
ಏಡಿಸಿ ಕಾಡಿತ್ತು ಶಿವನ ಡಂಗುರ.
ಮಾಡಿದೆನೆನ್ನದಿರಾ ಲಿಂಗಕ್ಕೆ, ಮಾಡಿದೆನೆನ್ನದಿರಾ ಜಂಗಮಕ್ಕೆ
ಮಾಡಿದೆನೆಂಬುದು ಮನದಲಿಲ್ಲದಿದ್ದೆಡೆ
ಬೇಡಿತ್ತನೀವ ನಮ್ಮ ಕೂಡಲ ಸಂಗಮದೇವ.

ಝಕಾತ್, ಕೊಡುವುದರ ಮೂಲಕ, ನಾನು ಮಾಡುತ್ತಿದ್ದೇನೆ ಎಂಬ ಅಹಂಕಾರ ಇಲ್ಲದೇ, ಅಲ್ಲಾಹನ ಆದೇಶದ ಅನುಸಾರ ಅವನೇ ತಮಗೆ ಕೊಟ್ಟಿರುವ ತಮ್ಮ ದುಡಿಮೆ ಅಥವಾ ಐಶ್ವರ್ಯದಿಂದ ನಿಶ್ಚಿತ ಮೊತ್ತವನ್ನು ಕೊಡುವುದು. ಇದು ಯಾತ್ರಿಕರ, ಬಡವರ, ದುಃಖಿಗಳ ತಾಪತ್ರಯಗಳನ್ನು ಹೋಗಲಾಡಿಸಲು, ಅಥವಾ ಅವರ ಸಮಸ್ಯೆಯನ್ನು ನಿವಾರಿಸಲು, ಸಾಲದ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿರುವವರ ಸಾಲ ತೀರಿಸುವ ಮೂಲಕ ಆ ಹೊರೆಯನ್ನು ಅವರಿಂದ ಇಳಿಸುವುದು ಸಾಧ್ಯವಾಗುತ್ತದೆ.

ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ,
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ,
ಮಾಡುವ ನೀಡುವ ನಿಜಗುಣವುಳ್ಳಡೆ
ಕೂಡಿಕೊಂಡಿರ್ಪ ನಮ್ಮ ಕೂಡಲಸಂಗಮದೇವ.

ಕೊಡುವಿಕೆಯಲ್ಲಿಯೂ ಶುದ್ಧವಾದ ಮಾದರಿ ಮುಹಮ್ಮದರದು.
ಒಮ್ಮೆ ಹಜರತ್ ಅಬು ಹುರೈರಾ ಅವರಿಗೆ ವಿಪರೀತ ಹಸಿವಾಗುತ್ತಿತ್ತಂತೆ. ನಬಾವಿ ಮಸೀದಿಯಿಂದ ಹೊರಗೆ ಹೊರಟರು. ಯಾರಾದರೂ ಸಹಾಬಿಗಳು ತಿನ್ನಲೋ ಅಥವಾ ಕುಡಿಯಲೋ ಏನಾದರೂ ಕೊಡಬಹುದೆಂಬ ವಿಶ್ವಾಸ ಅವರಿಗೆ. ಮೊದಲು ಅಬೂಬಕರ್ ಎದುರಾದರು, ಸಲಾಂ ಹೇಳಿದರು, ಮುಂದೆ ನಡೆದರು. ನಂತರ ಉಮರ್ ಎದುರಾದರು. ಅವರೂ ಸಲಾಂ ಹೇಳಿ ಮುಂದೆ ನಡೆದರು. ನಂತರ ಪ್ರವಾದಿ ಮುಹಮ್ಮದರು ಕಂಡರು. ಅವರು ಸಲಾಂ ಹೇಳಿ ಅಬು ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋದರು. ಮನೆಯಲ್ಲಿ ಒಂದು ಸಣ್ಣ ಬಟ್ಟಲಿನಲ್ಲಿ ಹಾಲಿತ್ತು. ಮುಹಮ್ಮದರು ಅಬು ಅವರಿಗೆ ಎಪ್ಪತ್ತು ಜನ ವಿದ್ಯಾರ್ಥಿಗಳ ಜೊತೆಗೆ ಹಸಿವನ್ನು ನೀಗಿಸಿದ ಪ್ರತೀತಿ. ಮುಹಮ್ಮದರು ಮೂರನೆಯ ಬಾರಿ ಮತ್ತಷ್ಟು ತೆಗೆದುಕೊಳ್ಳಿರೆಂದಾಗ, “ಆಯಿತು ರಸುಲ್ಲುಲ್ಲಾಹ್, ನನ್ನ ಹೊಟ್ಟೆಯಲ್ಲಿ ಇನ್ನು ಜಾಗವಿಲ್ಲ” ಎಂದರು ಅಬು ಹುರೈರಾ.

ಕೊಡುವಿಕೆ ಎನ್ನುವುದು ಅಲ್ಲಾಹನ ಇಚ್ಛೆಯೇ ಆಗಿದ್ದು ಹೀಗೆ ಝಕಾತ್ ಕೊಡುವುದರಲ್ಲಿ ನಮ್ರತೆ ಇದೆ. ತನ್ನ ಮನಸ್ಸು, ಹೃದಯವನ್ನು ಶುದ್ಧಿಗೊಳಿಸಿಕೊಳ್ಳುವ ಪ್ರಕ್ರಿಯೆ ಭಾಗವಾಗಿದ್ದು, ತನ್ನದು, ತಾನು ಯಾರಿಗೂ ಕೊಡುವುದಿಲ್ಲ, ಅಥವಾ ನಾನು ಗಳಿಸಿದ್ದೆಲ್ಲಾ, ಕೂಡಿಡುವುದೆಲ್ಲಾ ತನ್ನದೇ ಎನ್ನುವುದಿಲ್ಲ. ಇಂತಹ ಅದ್ವಿತೀಯವಾದ ಕೊಡುವಿಕೆಯ ಸಾಧನೆ ಎಂದರೆ ಇಂದು ಇಡೀ ಜಗತ್ತಿನಲ್ಲಿ ದಾರ್ಮಿಕವಾಗಿ ಕೊಡಲ್ಪಡುವ ಅತ್ಯಂತ ದೊಡ್ಡ ಮೊತ್ತದ ದಾನ ಎಂದರೆ ಅದು ಝಕಾತ್.

ಈ ಕೊಡುವಿಕೆ ನಾನಿಷ್ಟುಕೊಟ್ಟೆ, ಅಷ್ಟು ಮಾಡಿದೆ ಎಂದು ಜಂಭಪಡಲು ಅಲ್ಲ ಎನ್ನುವ ಮೇಲ್ಪಂಕ್ತಿ ಮುಹಮ್ಮದರು ಹಾಕಿಕೊಟ್ಟಿದ್ದಾರೆ. ಅಲ್ಲಾಹನಿಂದ ದೊರಕಿರುವ ಐಶ್ವರ್ಯದ ಒಂದು ಭಾಗವನ್ನು ಅಲ್ಲಾಹನ ದಾಸರಿಗೆ ತೆಗೆದಿಡದೇ ಹೋದರೆ ಆ ಸಂಪತ್ತು ಮಲಿನಗೊಳ್ಳುವುದು. ಅಷ್ಟರಮಟ್ಟಿಗೆ ಸಾಮಾಜಿಕ ಮತ್ತು ನೈತಿಕ ಸೂಕ್ಷ್ಮತೆಯನ್ನು ಝಕಾತ್ ಹೊಂದಿರುವುದು.

ಕೊಟ್ಟು ಕುದಿಯಲು ಬೇಡ, ಕೊಟ್ಟಾಡಿಕೊಳಬೇಡ
ಕೊಟ್ಟು ನಾ ಕೆಟ್ಟೆನೆನಬೇಡ, ಶಿವನಲ್ಲಿ
ಕಟ್ಟಿಹುದು ಬುತ್ತಿ ಸರ್ವಜ್ಞ

ಪ್ರವಾದಿ ಮುಹಮ್ಮದರ ಇಸ್ಲಾಂ ಅನುಸರಣೆ ಮತ್ತು ಪ್ರಚಾರಕ್ಕಾಗಿ ತೊಡಗಲು ಹೋದಾಗ ನಾನಾ ರೀತಿಗಳಲ್ಲಿ ಕಿರುಕುಳ, ಅಪಮಾನ, ಹಿಂಸೆ, ಅಪಹಾಸ್ಯಗಳನ್ನೆಲ್ಲಾ ಮಾಡಿದ್ದ ಜನರಿಂದ ತಮ್ಮನ್ನು ಮತ್ತು ಸತ್ಯವನ್ನು ರಕ್ಷಿಸಲು ಯುದ್ಧವನ್ನೇ ಮಾಡಬೇಕಾಗಿ ಬಂದರೂ, ಪ್ರವಾದಿಗಳು ತಮ್ಮ ವೈಯಕ್ತಿಕ ಅಹಮಿನ ಗೆಲುವನ್ನು ಸಂಭ್ರಮಿಸಲು ಯುದ್ಧ ಮಾಡಲೇ ಇಲ್ಲ. ಅದೂ ಕೂಡಾ ಅಲ್ಲಾಹನಿಗೆ ಮತ್ತು ಅವನ ಇಚ್ಛೆಗೆ ಶರಣಾಗಿರುವಂತಹ ಧಾರ್ಮಿಕ ಯುದ್ಧವೇ ಆಗಿತ್ತು. ಅದರಲ್ಲಿ ಮುಖ್ಯವಾದದ್ದು ಬದ್ರ್ ಯುದ್ಧ. ಇಸ್ಲಾಮನ್ನೇ ಇಲ್ಲವಾಗಿಸಲು ಬಂದಂತಹ ಕರಾಳ ಶಕ್ತಿಗಳನ್ನು ತಮ್ಮ ನೈತಿಕ ಮತ್ತು ಆಧ್ಯಾತ್ಮಿಕ ಬಲದಿಂದಲೇ ಸಶಕ್ತವಾಗಿ ಎದುರಿಸಿದ್ದ ಮುಹಮ್ಮದ್ ಮತ್ತು ಅವರ ಅನುಯಾಯಿಗಳು ಗೆದ್ದಾಗ ಆ ಗೆಲುವು ತಮ್ಮದೆಂದು ಬೀಗಲಿಲ್ಲ. ಅಲ್ಲಾಹನಲ್ಲಿ ಅದೇ ವಿನಮ್ರತೆ, ಅದೇ ಶರಣಾಗತಿ.

ಯುದ್ಧ ಕೈದಿಗಳಾದವರನ್ನು ಪರಿಹಾರ ಧನವನ್ನು ಸ್ವೀಕರಿಸಿ ಬಿಟ್ಟುಬಿಡುವ ನಿರ್ಧಾರ ತೆಗೆದುಕೊಂಡಮುಹಮ್ಮದರು ತಮ್ಮ ಅನುಯಾಯಿಗಳೊಂದಿಗೆ ಪೂರ್ವಭಾವಿಯಾಗಿ ಚರ್ಚಿಸಿದ್ದರು. ಪರಿಹಾರ ಧನ ಕೊಡಲಾಗದವರು ಓದು ಬರಹ ಬಲ್ಲವರಾಗಿದ್ದರೆ ಮುಸ್ಲಿಮ್ ಮಕ್ಕಳಿಗೆ ಓದು ಬರಹ ಕಲಿಸಿ ಬಂಧಮುಕ್ತರಾಗಿ ಹೋಗಬಹುದಿತ್ತು. ಕೊನೆಗೆ ಹಣವನ್ನೂ ಕೊಡಲಾಗುತ್ತಿಲ್ಲ, ಅಥವಾ ಕಲಿಸುವಂತಹ ಸೇವೆಯನ್ನೂ ನೀಡಲು ಶಕ್ತರಲ್ಲ ಎಂದಾದರೆ ಬರಿಯ ಔದಾರ್ಯದಿಂದಲೇ ಅವರನ್ನು ಮುಕ್ತರನ್ನಾಗಿಸಿ ಮನೆಗೆ ಕಳುಹಿಸಲಾಗಿತ್ತು.
ಇದು ಯುದ್ಧದಲ್ಲಿ ಬಂಧಿತರಾದವರನ್ನು ಔದಾರ್ಯದ ಮುಹಮ್ಮದರು ನಡೆಸಿಕೊಂಡ ರೀತಿ.

ಮುಂದೆ ಉಹುದ್ ಯುದ್ಧದ ವೇಳೆ ಪ್ರವಾದಿ ಮುಹಮ್ಮದರ ಮುಖಕ್ಕೇ ಏಟು ಬಿದ್ದು ರಕ್ತ ಹರಿಯುತ್ತಿದ್ದಾಗಲೂ ಅವರು ವ್ಯಕ್ತಿಗತವಾದಂತಹ ಕೋಪದಲ್ಲಿ ಕೆರಳಲಿಲ್ಲ. ಬದಲಾಗಿ ಪ್ರಾರ್ಥನೆ ಮತ್ತು ಅಲ್ಲಾಹನಿಗೆ ಕಿವಿಗೊಡುವುದೇ ಅವರ ಒಲವು ನಿಲುವಿನ ಪ್ರಕ್ರಿಯೆಯಾಗಿತ್ತು.

“ಓ ಅಲ್ಲಾಹ್, ನನ್ನ ಜನಾಂಗಕ್ಕೆ ಸನ್ಮಾರ್ಗವನ್ನು ತೋರು. ತಾವೇನು ಮಾಡುತ್ತಿದ್ದೇವೆಂದು ಅವರಿಗೆ ತಿಳಿದಿಲ್ಲ ಅಥವಾ ಅವರನ್ನು ಕ್ಷಮಿಸಿಬಿಡು.”
ಪ್ರವಾದಿಯವರ ಅನುಯಾಯಿಗಳಾಗಿದ್ದ ಸಹಾಬಿಗಳು ಆ ಶತ್ರುಗಳಿಗೆ ಶಾಪ ಕೊಡಲು ಹೇಳಿದಾಗ,
“ನಾನು ಯಾರನ್ನೂ ಶಪಿಸಲಿಕ್ಕಾಗಿ ನೇಮಿಸಲ್ಪಟ್ಟವನಲ್ಲ. ನನ್ನನ್ನು ಒಳಿತು ಕರುಣೆಯ ಸಂದೇಶವಾಹಕರಾಗಿ ನಿಯೋಗಿಸಲಾಗಿದೆ” ಎಂದು ತಮ್ಮ ಈ ಜನ ಅರಿವಿಲ್ಲದೇ ಮಾಡುತ್ತಿರುವ ವಿಷಯಗಳನ್ನು ಕ್ಷಮಿಸುವುದಕ್ಕಾಗಿ ಪ್ರಾರ್ಥಿಸುವರೇ ಹೊರತು ಅಲ್ಲಿ ಪ್ರತಿಕಾರವೆಂಬುದೇ ಇಲ್ಲ.
ತಮ್ಮನ್ನು ಜರಿದರೂ ಕೂಡಾ ಅವರನ್ನು ನಕಾರಾತ್ಮಕವಾಗಿ ನೋಡದೇ ಸೌಜನ್ಯ ಮತ್ತು ಕ್ಷಮಾಶೀಲತೆಯಿಂದಲೇ ನೋಡುವ ಮುಹಮ್ಮದರ ಗುಣವನ್ನು ನಿರೂಪಿಸುವ ಒಂದು ಸಂಗತಿ.
ಮುಹಮ್ಮದರಿಗೆ ಸಾಲ ಕೊಟ್ಟಿದ್ದ ಯಹೂದಿಯೊಬ್ಬನು ಅವರ ಬಳಿ ವಸೂಲಿಗೆಂದು ಬಂದಿದ್ದನು. ಐಷಾರಾಮಿ ಜೀವನ ನಡೆಸದ, ಸರಳಾತಿ ಸರಳ ಬದುಕು ನಡೆಸುತ್ತಿದ್ದ ಮುಹಮ್ಮದರು ಸಾಲ ಎಂದು ಮಾಡುತ್ತಿದ್ದದ್ದು ತಮ್ಮ ವೈಭವಕ್ಕಂತೂ ಅಲ್ಲ. ಯಾರೋ ದೀನರ, ನೊಂದರವರ ಕಷ್ಟಗಾಲದಲ್ಲಾಗಲು.
ಈ ಯಹೂದಿಯು ಇನ್ನೂ ಸಾಲ ತೀರಿಸಲು ನೀಡಿದ್ದ ಗಡುವು ಮೂರು ದಿನವಿದ್ದಂತೆಯೇ ಬಂದು ಹಣಕ್ಕಾಗಿ ಒತ್ತಾಯಿಸುವುದಲ್ಲದೇ ಒರಟಾಗಿ ನಡೆದುಕೊಳ್ಳುತ್ತಾ ಜೋರು ಮಾಡುತ್ತಿದ್ದ. ಆದರೆ ಮುಹಮ್ಮದರು ತಮ್ಮ ಗುಣ ಸ್ವಭಾವದ ಸಹಜತೆಯಿಂದಾಗಿ ಸೌಜನ್ಯ ಮತ್ತು ವಿನಯದಿಂದಲೇ ಉತ್ತರಿಸುತ್ತಿದ್ದರು.

ಸಾಲ ಕೊಟ್ಟಿರುವ ಮದದಿಂದ ಉನ್ಮತ್ತನಾಗಿದ್ದ ಆ ಯಹೂದಿಯು ‘ಅಬ್ದುಲ್ ಮುತ್ತಲಿಬ್’ ಅವರ ಸಂತತಿಯನ್ನೇ ಅನುಮಾನಿಸುತ್ತಾ ಅಪಮಾನಿಸುವಂತೆ ಮಾತಾಡಿದ. ಮುಹಮ್ಮದರ ಜೊತೆಯಲ್ಲಿಯೇ ಇದ್ದ ಉಮರ್ ಕೋಪಗೊಂಡು ಆ ಯೆಹೂದಿಯನ್ನು ಗದರಿಸಿದರು. ಇನ್ನೊಮ್ಮೆ ಅಂತಹ ಮಾತುಗಳನ್ನಾಡದಿರುವಂತೆ ಎಚ್ಚರಿಸಿದರು.
ಆಗ ಮುಹಮ್ಮದರು, “ಉಮರ್, ನೀವು ಅವರೊಂದಿಗೆ ಉತ್ತಮ ರೀತಿಯಲ್ಲಿ ನಡೆದುಕೊಳ್ಳಬಹುದಿತ್ತು. ಮರು ಪಾವತಿ ಮಾಡಲು ಇನ್ನಷ್ಟು ಸಮಯ ಕೇಳಬಹುದಿತ್ತು. ಈಗ ಮೂರು ದಿನಗಳ ಗಡುವು ಇದ್ದರೂ ಈಗಲೇ ತೀರಿಸಿಬಿಡಿ ಮತ್ತು ಅವರನ್ನು ಜರಿದುದಕ್ಕಾಗಿ ಅವರಿಗೆ ಇನ್ನಷ್ಟು ಹೆಚ್ಚಿನ ಮೊತ್ತವನ್ನು ಪರಿಹಾರವಾಗಿ ನೀಡಿ” ಎಂದರು.

ಮುಹಮ್ಮದರ ಇಂತಹ ಸೌಜನ್ಯ ಮತ್ತು ಕ್ಷಮಾಶೀಲತೆಯೇ ಆ ಯಹೂದಿಯನ್ನೂ ಇಸ್ಲಾಂ ಸ್ವೀಕರಿಸುವಷ್ಟು ಮನಪರಿವರ್ತನೆಯಾಗಿತ್ತು. ಓರ್ವ ಆಡಳಿತಗಾರರಾಗಿ ಕಿರುಕುಳವನ್ನು ತಡೆಯಲು ಯುದ್ಧವನ್ನೇ ಮಾಡಬೇಕಾದ ಅನಿವಾರ್ಯತೆ ಒದಗಿ ಅದಕ್ಕೆಂದು ಸಿದ್ಧವಾದಾಗಲೂ ಮುಹಮ್ಮದರು ಅಲ್ಲಾಹನ ಹೆಸರಿಂದ, ಅಲ್ಲಾಹನ ಮಾರ್ಗದಲ್ಲಿ ಸತ್ಯನಿಷೇಧಿಗಳೊಂದಿಗೆ ಹೋರಾಡುವಂತಹ ಅವರಿಗೆ ಉಪದೇಶಿಸಿದ್ದು ಹೀಗೆ, “ವಚನ ಭಂಗ ಮಾಡಕೂಡದು. ಯಾವುದೇ ರೀತಿಯಲ್ಲಿ ಅತಿಕ್ರಮ ಎಸಬಾರದು, ಯಾವುದೇ ಮಗು, ಮಹಿಳೆ ಮತ್ತು ವಯಸ್ಸಾದವರ ಹಾಗೂ ಪ್ರಾರ್ಥನೆ ಅಥವಾ ಆರಾಧನೆ ಮಾಡುತ್ತಿರುವವರ ಮೇಲೆ ದಾಳಿ ಮಾಡಕೂಡದು, ಅವರನ್ನು ಕೊಲ್ಲಕೂಡದು. ಖರ್ಜೂರದ ತೋಟಗಳ ಕಡೆ ಸುಳಿಯಬಾರದು. ಯಾವುದೇ ಮರವನ್ನೂ ಕಡಿಯಬಾರದು. ಯಾರದೇ ಮನೆಯನ್ನು ಕೆಡವಬಾರದು.”

ತಾವು ಇತರ ವ್ಯಾಪಾರಿಗಳಂತೆ ಮನಸ್ಸು ಮಾಡಿದ್ದರೆ ಸುಖವಾಗಿ ಅತಿ ಶ್ರೀಮಂತರಾಗಿದ್ದಿರಬಹುದಾದ ಯೌವನದ ಕಾಲದಲ್ಲಿಯೇ ಅಂತಹವನ್ನಲ್ಲ ತ್ಯಾಗ ಮಾಡಿದ್ದವರು ಈ ಯುದ್ಧವನ್ನು ಮಾಡಬೇಕಾದ ಕಾರಣವೂ ವ್ಯಕ್ತಿಗತವಾದ ಅಹಂಕಾರದ ಪುಷ್ಟಿ, ಬಯಕೆಯ ತೃಪ್ತಿ ಮತ್ತು ತಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳಲಲ್ಲವಲ್ಲ!

ಹಾಗಾಗಿಯೇ ಅಲ್ಲಾಹನ ಆಶಯಕ್ಕೆ ತಕ್ಕುದಾದಂತಹ ವಿನಯ, ಶಿಸ್ತು, ಕ್ರಮ ಮತ್ತು ಸನ್ನಡತೆ ಎಲ್ಲವೂ.
ಇದು ಜನರ ಮಧ್ಯೆ ಮಾಡಿಕೊಂಡಿರುವಂತಹ ರಾಜಿ, ಸಂಧಾನವಲ್ಲ! ಅಲ್ಲಾಹನೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆ.

ಖಂಡಿತವಾಗಿಯೂ ಅಲ್ಲಾಹನು ನಿಮಗೆ ನ್ಯಾಯ ಪಾಲಿಸಬೇಕೆಂದೂ ಸೌಜನ್ಯ ತೋರಬೇಕೆಂದೂ, ಬಂಧುಗಳಿಗೆ ಅವರ ಹಕ್ಕನ್ನು ನೀಡಬೇಕೆಂದೂ ಆದೇಶಿಸುತ್ತಾನೆ ಮತ್ತು ಅವನು ನಿಮ್ಮನ್ನು ಅಶ್ಲೀಲ ಕೃತ್ಯಗಳಿಂದಲೂ, ಅನ್ಯಾಯದಿಂದಲೂ, ವಿದ್ರೋಹದಿಂದಲೂ ತಡೆಯುತ್ತಾನೆ. ನೀವು ಪಾಠ ಕಲಿಯಬೇಕೆಂದು ಅವನು ನಿಮಗೆ ಉಪದೇಶಿಸುತ್ತಾನೆ.
ನೀವು ಅಲ್ಲಾಹನ ಜೊತೆ ಕರಾರು ಮಾಡಿರುವಾಗ ಆ ಕರಾರನ್ನು ತಪ್ಪದೆ ಪಾಲಿಸಿರಿ. ಮತ್ತು ಪ್ರತಿಜ್ಞೆ ಮಾಡಿ ಅದನ್ನು ದೃಢಪಡಿಸಿದ ಬಳಿಕ ಹಾಗೂ ನೀವು ಖಚಿತವಾಗಿ ಅಲ್ಲಾಹನನ್ನು ನಿಮ್ಮ ಮೇಲೆ ಸಾಕ್ಷಿಯಾಗಿಸಿಕೊಂಡ ಬಳಿಕ ಆ ಪ್ರತಿಜ್ಞೆಯನ್ನು ಮುರಿಯಬೇಡಿ. ನೀವು ಮಾಡುವುದೆಲ್ಲವನ್ನೂ ಅಲ್ಲಾಹನು ಖಂಡಿತ ಬಲ್ಲನು. (ಕು: 16. 90-91) ವ್ಯಕ್ತಿಗಳು ಸನ್ನಡತೆಗಳಿಂದಲೇ ಅವರ ಆಲೋಚನೆ, ಹೊಂದಿರುವ ಮನೋಭಾವ, ಉದ್ದೇಶ, ಗಮ್ಯ ಮತ್ತು ಗಮನ; ಎಲ್ಲವನ್ನೂ ಪ್ರದರ್ಶಿಸುವುದು.

ಅಲ್ಲಾಹನನ್ನೇ ಪೂಜಿಸಿರಿ ಮತ್ತು ಅವನ ಜೊತೆ ಏನನ್ನೂ ಸೇರಿಸಬೇಡಿ. ಹೆತ್ತವರ ವಿಷಯದಲ್ಲಿ ಹಾಗೂ ಆಪ್ತ ಬಂಧುಗಳು, ನೆರೆಯಲ್ಲಿರುವ ಅಪರಿಚಿತರು, ಜೊತೆಗಾರರು, ಪ್ರಯಾಣಿಕರು ಮತ್ತು ನಿಮ್ಮ ಮಾಲಕತ್ವದಲ್ಲಿ ಇರುವವರ ವಿಷಯದಲ್ಲಿ ಸೌಜನ್ಯ ತೋರಿರಿ. ಖಂಡಿತವಾಗಿಯೂ ಅಲ್ಲಾಹನು ಅಹಂಕಾರಿಗಳನ್ನು ಮತ್ತು ಸ್ವತಃ ತಮ್ಮನ್ನೇ ಹೊಗಳಿಕೊಳ್ಳುವವರನ್ನು ಪ್ರೀತಿಸುವುದಿಲ್ಲ. (4:36)
ಕೊಡುವುದರಲ್ಲಾಗಲಿ, ಸನ್ನಡತೆಯಿಂದ ವರ್ತಿಸುವುದರಲ್ಲಾಗಲಿ, ಮಾಡುವ ಕೆಲಸದಲ್ಲಾಗಲಿ, ನೀಡುವ ಸೇವೆಯಲ್ಲಾಗಲಿ ಜಿಪುಣತನವೆಂಬುದು ಅವರಲ್ಲಿರಲಿಲ್ಲ. ಕರುಣೆ, ಸೌಜನ್ಯವೇ ಮೊದಲಾದ ಸದ್ಗುಣಗಳಲ್ಲಿ ಮಾತ್ರವಲ್ಲ, ವಸ್ತುಗಳನ್ನು ಕೊಡುವುದರಲ್ಲಿಯೂ ಧಾರಾಳ.

ಜಿಪುಣತೆ ತೋರುವವರನ್ನು, ಜನರಿಗೆ ಜಿಪುಣತೆ ಬೋಧಿಸುವವರನ್ನು ಮತ್ತು ಅಲ್ಲಾಹನು ತನ್ನ ಅನುಗ್ರಹದಿಂದ ನೀಡಿರುವುದನ್ನು ಬಚ್ಚಿಡುವವರನ್ನು (ಅಲ್ಲಾಹನು ಪ್ರೀತಿಸುವುದಿಲ್ಲ). ಧಿಕ್ಕಾರಿಗಳಿಗೆ ನಾವು ಅಪಮಾನಕಾರಿ ಶಿಕ್ಷೆಯನ್ನು ಸಿದ್ಧಗೊಳಿಸಿಟ್ಟಿದ್ದೀವೆ. (4: 37)

ತಮಗೆ ಕೆಡುಕ ಮಾಡುವವರಿಗೂ ಸೌಜನ್ಯ ತೋರಿ ಅವರಲ್ಲಿ ಪರಿವರ್ತನೆಗಾಗಿ ಪ್ರಾರ್ಥಿಸುವ ಮುಹಮ್ಮದರ ಜೀವನವೇ ಅನುಕರಣೀಯ ಸನ್ನಡತೆಯ ಮತ್ತು ಸದ್ಗುಣದ ಮಾದರಿ.
ನೀನೀಗ ನನ್ನನ್ನು ಕೊಲ್ಲಲಿಕ್ಕೆಂದು ನನ್ನ ಮೇಲೆ ಕೈ ಎತ್ತಿದರೂ, ನಾನಂತೂ ನಿನ್ನನ್ನು ಕೊಲ್ಲಲು ನಿನ್ನ ಮೇಲೆ ಕೈ ಎತ್ತುವವನಲ್ಲ. ಖಂಡಿತವಾಗಿಯೂ ನನಗೆ ಸರ್ವಲೋಕಗಳ ಪಾಲಕನಾದ ಅಲ್ಲಾಹನ ಭಯವಿದೆ. (5:28)

ಪ್ರವಾದಿ ಮುಹಮ್ಮದರಿಗೆ ಯಾರದ್ದೂ ಭಯವಿರಲಿಲ್ಲ. ಇದ್ದ ಭಯವೆಂದರೆ ಅದು ಅಲ್ಲಾಹನದು ಮಾತ್ರ. ಅಲ್ಲಾಹನೊಬ್ಬನಲ್ಲಿಯೇ ಇದ್ದಂತಹ ಭಯ ಮತ್ತು ಭಕ್ತಿ ತಮ್ಮ ಸಹ ಜೀವಿಗಳೆಲ್ಲ ಜೊತೆ ವರ್ತಿಸುವ ಬಗೆಗಳಲ್ಲಿ ಪ್ರತಿಫಲಿತವಾಗುತ್ತಿತ್ತು.

ಪಾಶ್ಚಾತ್ಯ ಇತಿಹಾಸ ವಿದ್ವಾಂಸರಾದ ಸರ್ ವಿಲಿಯಮ್ ಮ್ಯೂರ್ ಹೇಳುವಂತೆ, ಮುಹಮ್ಮದರ ಮಾರ್ಗದರ್ಶನದಿಂದಾಗಿ ಮದೀನಾದ ಪ್ರಜೆಗಳು ಕೈದಿಗಳನ್ನೂ ಸನ್ನಡತೆಯಿಂದ ಉಪಚರಿಸುವಷ್ಟು ಪರಿಗಣಿಸಿದರು. ಮುಂದಿನ ದಿನಗಳಲ್ಲಿ ಮದೀನಾದಲ್ಲಿ ಕೈದಿಯಾಗಿದ್ದವನೊಬ್ಬ ಹೇಳುತ್ತಿದ್ದನಂತೆ, ‘ಮದೀನಾದ ಜನರು ಅನುಗ್ರಹಿತರು. ಅವರು ತಾವು ಬರಿಗಾಲಿನಲ್ಲಿ ನಡೆಯುತ್ತಾ ಕೈದಿಗಳನ್ನು ಸವಾರಿಯಲ್ಲಿ ಕೊಂಡೊಯ್ದರು. ತಾವು ತಿನ್ನುವುದು ಅಲ್ಪವೇ ಆಗಿದ್ದರೂ, ಖರ್ಜೂರದಲ್ಲಿಯೇ ಹೊತ್ತಿನ ಆಹಾರ ಮುಗಿಸಿಕೊಳ್ಳುತ್ತಿದ್ದರೂ ನಮಗೆ ಗೋಧಿಯ ರೊಟ್ಟಿ ಕೊಟ್ಟಿದ್ದರು.”

ಇದು ಮುಹಮ್ಮದರ ಗುಣ ನಡವಳಿಕೆಗಳು ಜನರನ್ನೇ ರೂಪಾಂತರಿಸಿದ್ದ ರೀತಿ.
ಮನುಷ್ಯ ನೈಸರ್ಗಿಕವಾಗಿಯೇ ಕೇಡಿಯಾಗಿದ್ದಾನೆ.
ಮನುಷ್ಯ ನಿಜಕ್ಕೂ ಅಕ್ರಮಿ ಮತ್ತು ಅಜ್ಞಾನಿಯಾಗಿದ್ದಾನೆ. (ಕುರಾನ್: 33.72)

ಅವನು ತನಗೆ ಸಹಜವಾಗಿರುವ ಪಶುಪ್ರವೃತ್ತಿಗಳನ್ನು ತೃಪ್ತಿಪಡಿಸಿಕೊಳ್ಳಲು ತನ್ನ ಮನಸ್ಸನ್ನೂ ಉಪಯೋಗಿಸಿಕೊಳ್ಳುತ್ತಾನೆ. ಇದರಿಂದ ಲೋಕದಲ್ಲಿ ಕ್ಷೋಭೆ ಉಂಟಾಗುವುದಲ್ಲದೇ ತನ್ನ ಬದುಕನ್ನೂ ಮತ್ತು ಇತರರ ಬದುಕನ್ನೂ ನಾಶ ಮಾಡುತ್ತಾನೆ.ನಷ್ಟವಾದಾಗ ಕುಗ್ಗುತ್ತಾನೆ, ಲಾಭವಾದಾಗ ಹಿಗ್ಗುತ್ತಾನೆ. ತನಗಿಂತ ಇನ್ನಾರೂ ಇಲ್ಲ ಎಂದು ವರ್ತಿಸುತ್ತಾನೆ.ಹಾಗಾಗಿಯೇ ಅವನಿಗೆ ಅಗತ್ಯವಿರುವಂತ ನೈತಿಕತೆಯನ್ನು ಮತ್ತು ಬದುಕುವ ಮಾರ್ಗವನ್ನು ಇಸ್ಲಾಮಿನಲ್ಲಿ ತೋರುವ ಪ್ರವಾದಿ ಮಾಡುತ್ತಾರೆ.

ಮಾನವನು ಚಂಚಲನಾಗಿಯೇ ಸೃಷ್ಟಿಸಲ್ಪಟ್ಟಿದ್ದಾನೆ. ಅವನಿಗೆ ಸಂಕಷ್ಟ ಬಂದಾಗ ಗಾಬರಿಗೊಳ್ಳುತ್ತಾನೆ ಮತ್ತು ಸೌಭಾಗ್ಯಾ ಪ್ರಾಪ್ತವಾದಾಗ ಲೋಭ ತೋರುತ್ತಾನೆ. ಆದರೆ ನಮಾಝ್ ಮಾಡುವವರು ಈ ದೋಷಗಳಿಂದ ಮುಕ್ತರಾಗಿದ್ದಾರೆ. (70:19-22)

ಸ್ಪರ್ಧೆ, ಅಸೂಯೆ, ದುರಾಸೆ, ಕಪಟತನ, ಸ್ವಾರ್ಥವೇ ಮೊದಲಾದ ಆತ್ಮಘಾತಕ ಗುಣಗಳಿಂದ ಕಳಚಿಕೊಳ್ಳಲು, ಆ ಕಳಂಕಗಳಿಂದ ಮುಕ್ತವಾಗಲು, ನಿಜವಾಗಿಯೂ ಮಾನವನ ಇಹ ಮತ್ತು ಪರದ ಅಗತ್ಯತೆಗಳನ್ನು ಪೂರಿಸಿಕೊಳ್ಳಲು ಮನುಷ್ಯನು ಪರಿಶುದ್ಧನಾಗಬೇಕಿದೆ.

ಮನಸ್ಸು (ಹೃದಯ)ಗಳು ದುರ್ಬಲವೂ ಮತ್ತು ಅನುಮಾನಗಳು ಆಕ್ರಮಣಕಾರಿಯಾಗಿ ಕಿತ್ತುಕೊಳ್ಳುವಂತವೇ ಆಗಿವೆ. (ಸಿಯಾರ್ ಅಲಂ ಅಲ್ ನುಬಾಲ 7/261)

ಮನಸ್ಸನ್ನು, ಹೃದಯವನ್ನು ಪರಿಶುದ್ಧವಾಗಿರಿಸಿಕೊಳ್ಳುವುದರ ಮೂಲಕ ಇಡೀ ಬದುಕನ್ನೇ ಪರಿಶುದ್ಧವಾಗಿಸಿಕೊಳ್ಳುವ ಮಾದರಿ ಅವರದು.

ಸಂದೇಶವಾಹಕರು ಹೇಳುತ್ತಾರೆ: ಓ ಅಬು ಢಾರ್ರ್, ಸಮೃದ್ಧವಾದ ಧನಕನಕಗಳನ್ನು ಶ್ರೀಮಂತಿಕೆ ಎಂದು ಊಹಿಸುತ್ತೀಯಾ? ಹೃದಯ ಶ್ರೀಮಂತಿಕೆಯೇ ಶ್ರೀಮಂತಿಕೆ, ಹೃದಯದ ದಾರಿದ್ರ್ಯವೇ ದಾರಿದ್ರ್ಯ. ಹೃದಯದಲ್ಲಿ ಶ್ರೀಮಂತವಾಗಿರುವವರು ಈ ಪ್ರಪಂಚದಲ್ಲಿ ಏನನ್ನೇ ಎದುರಿಸಿದರೂ ಕುಂದಲಾರರು. ಹೃದಯದಲ್ಲಿ ದಾರಿದ್ರ್ಯವಿರುವವರು ಈ ಲೋಕದಲ್ಲಿ ಎಷ್ಟೇ ಗಳಿಸಿದರೂ ಶ್ರೀಮಂತರಾಗಲಾರರು. ಅವರ ತಮ್ಮತನವನ್ನು ಧಕ್ಕೆ ಗೊಳಿಸುವುದು ಆ ದೌರ್ಬಲ್ಯವೇ. (ಸಹಿಹ್ ಅಲ್ ಜಮಿ / 7816)

ಮನೋದೌರ್ಬಲ್ಯಗಳಿಂದಾಗಿಯೇ ಮನುಷ್ಯನು ತನಗೆ ಲಭ್ಯವಾಗುವ ಅರಿವನ್ನು ಅನುಭವವನ್ನಾಗಿಸಿಕೊಳ್ಳಲು ಎಡವುತ್ತಾನೆ. ಒಮ್ಮೆ ಸನ್ಮಾರ್ಗದಲ್ಲಿ ನಡೆಯುವವನು, ಮತ್ತೊಮ್ಮೆ ದುರ್ಮಾರ್ಗಕ್ಕೆ ಎಳೆಯಲ್ಪಡುತ್ತಾನೆ. ಲೋಕದ ಇತರ ಪ್ರಭಾವಗಳು, ಪ್ರಲೋಭನೆಗಳು ಆತನನ್ನು ಎಳೆಯುತ್ತವೆ. ತನ್ನ ಗಮ್ಯವನ್ನು ಸದಾ ಧ್ಯಾನಿಸುತ್ತಾ ಗಮನವಿಟ್ಟು ತನ್ನ ಕೆಲಸ ಕಾರ್ಯಗಳ ಮೂಲಕ, ವರ್ತನೆಗಳ ಮೂಲಕ ಮಾರ್ಗ ತಪ್ಪದಂತೆ ತನ್ನನ್ನು ತಾನೇ ತರಬೇತುಗೊಳಿಸಿಕೊಳ್ಳಬೇಕು.
ನಿಮ್ಮ ಚಟುವಟಿಕೆಗಳನ್ನು ತ್ವರೆಗೊಳಿಸಿ ಅರಿವು ಕತ್ತಲರಾತ್ರಿಯ ತುಂಡುಗಳಂತೆ ಬರುವಷ್ಟರಲ್ಲಿ. ತನ್ನ ಸತ್ಯವಿಶ್ವಾಸವನ್ನು ಲೌಕಿಕ ಲಾಭಕ್ಕಾಗಿ ಮಾರಾಟ ಮಾಡಿಕೊಳ್ಳುತ್ತಾ ಒಬ್ಬ ಬೆಳಗ್ಗೆ ವಿಶ್ವಾಸಿಯಾಗಿರುವನು, ರಾತ್ರಿ ಅವಿಶ್ವಾಸಿಯಾಗಿರುವನು. ಅಥವಾ ರಾತ್ರಿ ವಿಶ್ವಾಸಿಯಾಗಿರುವನು ಮತ್ತೆ ಬೆಳಗ್ಗೆ ಅವಿಶ್ವಾಸಿಯಾಗಿರುವನು. (ಮುಸ್ಲೀಂ – 118)

ಏನೆಲ್ಲಾ ಮಾಡಿದರೂ ತಪ್ಪಾದರೇನು ಮಾಡುವುದು? ಅಹುದು, ಮರಳಿ ಪ್ರಯತ್ನವ ಮಾಡಲೇ ಬೇಕು.
ಹೇಳಿರಿ, ಸ್ವತಃ ತಮ್ಮ ಮೇಲೆ ಅಕ್ರಮವೆಸಗಿಕೊಂಡಿರುವ ನನ್ನ ಅಲ್ಲಾಹನ ದಾಸರೇ, ಅಲ್ಲಾಹನ ಅನುಗ್ರಹದ ಕುರಿತಂತೆ ನಿರಾಶರಾಗಬೇಡಿ. ಅಲ್ಲಾಹನು ಖಂಡಿತ ಎಲ್ಲಾ ಪಾಪಗಳನ್ನೂ ಕ್ಷಮಿಸುತ್ತಾನೆ. ಅವನು ಖಂಡಿತ ತುಂಬಾ ಕ್ಷಮಿಸುವವನು ಮತ್ತು ಕರುಣೆ ತೋರುವವನೂ ಆಗಿದ್ದಾನೆ. (39: 53)

ವ್ಯಕ್ತಿಯೊಬ್ಬನು ತನ್ನ ಕಪಟತನವನ್ನು ತಾನೇ ಅರಿತುಬಿಟ್ಟರೆ, ತನ್ನ ರೋಗಕ್ಕೆ ತಾನೇ ಚಿಕಿತ್ಸೆ ತೆಗೆದುಕೊಳ್ಳಲು ಸಾಧ್ಯವಾಗುವಂತಾಗುತ್ತದೆ.
ಹೃದಯ (ಮನೋಭಾವ)ಗಳಲ್ಲಿ ನಾಲ್ಕು ವಿಧ: ಎರಡು ಮುಖಗಳುಳ್ಳ ಮನಸ್ಸು. ಇದು ಕಪಟತನದ ವೇಷಧಾರಿ ಮನಸ್ಸು; ಇದು ಅವಿಶ್ವಾಸಿಯ ಮನಸ್ಸು. ಒಂದು ಪರಿಶುದ್ಧ ಮನಸ್ಸು, ಪ್ರಕಾಶಮಾನವಾಗಿರುವ ದೀಪವೊಂದು ಒಳಗಿರುವಂತೆ. ಈ ಹೃದಯ ವಿಶ್ವಾಸದಿಂದ ಕೂಡಿದ್ದು. ಇನ್ನೊಂದು ಮನಸ್ಸು ಕಪಟತನ ಮತ್ತು ವಿಶ್ವಾಸ ಎರಡನ್ನೂ ಹೊಂದಿರುವಂತದ್ದು, ರಕ್ತ ಮತ್ತು ಕೀವುಗಳಿಂದ ಕೂಡಿರುವ ಹುಣ್ಣಿದ್ದಂತೆ, ಕೊಳಕು ಮತ್ತು ಶುದ್ಧ; ಎರಡೂ ಬಗೆಯ ನೀರನ್ನು ಹನಿಸಿಕೊಂಡು ಬೆಳೆದಿರುವ ಮರದಂತೆ. ಆ ಎರಡರಲ್ಲಿ ಯಾವುದೇ ಒಂದು ಹಿರಿದಾದರೂ ಹೃದಯ (ಮನಸ್ಸು) ಗೆಲ್ಲುವುದು. (ಇಬ್ನ್ ಅಬಿ ಶಯ್ಬಾಹ್ ಇನ್ ಕಿತಾಬ್ ಅಲ್ ಇಮಾನ್ – 54)
ನಾನೊಬ್ಬ ಉದ್ದಾರವಾದರೆ ಸಾಕು ಎನ್ನುವ ಮಾತಲ್ಲ ಇದು. ಮನುಷ್ಯ ಸಂಘಜೀವಿ. ನನ್ನ ಒಡಹುಟ್ಟುಗಳೂ, ಸಹಜೀವಿಗಳೂ ಒಟ್ಟಾಗಿಯೇ ಮನುಷ್ಯನ ಲೋಕವನ್ನು ನಿರ್ಮಿಸಿ ನಿರ್ವಹಿಸುತ್ತಿರುವುದು. ನಮ್ಮ ಸಹಜೀವಿಗಳನ್ನೂ ಜೊತೆಗೊಯ್ಯುವ ಬಾಧ್ಯತೆಯೂ ನಮಗಿದೆ. ಆದರೆ ಅವರು ನಮ್ಮ ವಿಷಯವನ್ನು ಅರಿಯಲು ವಿಮುಖರಾದರೆ?

“ಅವರು ನಿಮ್ಮ ಮಾತನ್ನು ಸ್ವೀಕರಿಸದಿದ್ದರೆ, ನಿಮಗೆ ತಿಳಿದಿರಲಿ; ಅವರು ಕೇವಲ ತಮ್ಮ ಸ್ವೇಚ್ಛೆಯನ್ನಷ್ಟೇ ಅನುಸರಿಸುತ್ತಿದ್ದಾರೆ. ಅಲ್ಲಾಹನ ಕಡೆಯಿಂದ ಯಾವುದೇ ಮಾರ್ಗದರ್ಶನವಿಲ್ಲದೆ, ತನ್ನ ಸ್ವೇಚ್ಛೆಯನ್ನು ಅನುಸರಿಸುವಾತನಿಗಿಂತ ಹೆಚ್ಚು ದಾರಿಗೆಟ್ಟವನು ಯಾರಿರಬಹುದು? ಅಲ್ಲಾಹನು ಅಕ್ರಮಿಗಳಿಗೆ ಖಂಡಿತ ದಾರಿ ತೋರುವುದಿಲ್ಲ.” (ಕು. 28-50)

ನಮ್ಮನ್ನು ನೇರವಾದ ಮಾರ್ಗದಲ್ಲಿ ನಡೆಸು ಎನ್ನುವುದೇ ಪ್ರಾರ್ಥನೆ. ದಾರಿತಪ್ಪಿರುವವರ ದಾರಿಯಲ್ಲ. ಅಲ್ಲಾಹನಿಂದ ಅನುಗ್ರಹಿತವಾಗಿರುವ ದಾರಿಯದು.
ಶ್ರೇಷ್ಟತೆಯು ನೀವು ಮನೆಗಳಿಗೆ ಹಿಂಬಾಗಿಲಿನಿಂದ ಪ್ರವೇಶಿಸುವುದನ್ನು ಅವಲಂಬಿಸಿಲ್ಲ. ನಿಜವಾಗಿ ಭಯ ಭಕ್ತಿ ಉಳ್ಳವನೇ ಶ್ರೇಷ್ಟನು. ನೀವಿನ್ನು ಮನೆಗಳಿಗೆ ಮುಂಬಾಗಿಲಿನಿಂದಲೇ ಪ್ರವೇಶಿಸಿರಿ ಮತ್ತು ಅಲ್ಲಾಹನಿಗೆ ಅಂಜುತ್ತಲಿರಿ – ನೀವು ವಿಜಯಿಗಳಾಗಲಿಕ್ಕಾಗಿ. (ಕು. 2:189)

ಏಕೆಂದರೆ ಹೃದಯದ ಮೇಲೆ ಗಾಯದ ಕಲೆಗಳನ್ನು ಉಳಿಸುವುದೇ ಪಾಪಗಳು.
ತಮ್ಮಿಷ್ಟಕ್ಕೆ ತಾವೇ ತಮ್ಮ ಅಹಂಕಾರದಿಂದ ಪ್ರೇರೇಪಿತರಾಗಿ ನಡೆದುಕೊಳ್ಳುವವರಿಗೆ ಪ್ರವಾದಿ ಮುಹಮ್ಮದರು ಅರ್ಥವಾಗರು.
ಪ್ರವಾದಿ ಮುಹಮ್ಮದರು ಅರಬ್ಬರನ್ನು ಅಹಂಕಾರದಿಂದ ವಿನಯಕ್ಕೆ, ಕ್ರೌರ್ಯದಿಂದ ಕರುಣೆಗೆ, ಒಡಕುತನದಿಂದ ಒಗ್ಗಟ್ಟಿಗೆ, ಚಂಚಲತೆಯಿಂದ ದೃಢವಾದ ಶ್ರದ್ಧೆಗೆ, ಅನೇಕ ದೇವತಾರಾಧನೆಗಳಿಂದ ಏಕ ದೇವನಿಗೆ, ಅನೈತಿಕತೆಯಿಂದ ಪಾವಿತ್ರ್ಯತೆಗೆ, ಸೇಡಿನಿಂದ ಕ್ಷಮೆಗೆ, ಸೋಮಾರಿತನದಿಂದ ಕಾಯಕ ನಿಷ್ಟೆಗೆ, ಸ್ವಾರ್ಥದಿಂದ ನಿಸ್ವಾರ್ಥಕ್ಕೆ, ಒರಟುತನದಿಂದ ನಾಜೂಕುತನಕ್ಕೆ, ಸ್ವಂತದರ ವ್ಯಾಮೋಹದಿಂದ ಸರ್ವೋದಯದ ಧೋರಣೆಗೆ, ಮೂರ್ಖತನದಿಂದ ಜಾಣತನಕ್ಕೆ ತಂದಂತೆ ನನ್ನ ಅರಿವಿನ ಪ್ರವಾದಿಯ ಸಾಕ್ಷಾತ್ಕಾರದಿಂದ ಜೀವಿತದ ಮಹೋನ್ನತ ಮೌಲ್ಯದ ಅರಿವು ಸಾಕ್ಷಾತ್ಕಾರವಾಗುವುದು. ನನ್ನ ಪ್ರೀತಿಯ ಪ್ರವಾದಿಯ ಅರಿವು ನನ್ನ ಹೃದಯದಲ್ಲಿ, ನಡೆಯಲ್ಲಿ, ಆಲೋಚನೆ ಮತ್ತು ವರ್ತನೆಗಳಲ್ಲಿ ಪ್ರತಿಫಲಿಸುತ್ತಲೇ ಇರಲೆಂಬ ಪ್ರಾರ್ಥನೆ ನನ್ನದು.(ಬರಹ-ಯೋಗೇಶ್ ಮಾಸ್ಟರ್)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಗೃಹಲಕ್ಷ್ಮೀ ಯೋಜನೆಗೆ ತಾಲ್ಲೂಕುವಾರು ಹೆಲ್ಪ್ ಡೆಸ್ಕ್

Published

on

ಸುದ್ದಿದಿನ,ದಾವಣಗೆರೆ:ಗೃಹಲಕ್ಷ್ನೀ ಯೋಜನೆಯಡಿ ನೊಂದಣಿಯಾಗಿ ಸಹಾಯಧನ ಪಾವತಿಯಾಗದೇ ಇರುವ ಫಲಾನುಭವಿಗಳಿಗೆ ಸೂಕ್ತ ಮಾಹಿತಿ ನೀಡಲು ತಾಲ್ಲೂಕುವಾರು ಶಿಶು ಅಭಿವೃದ್ದಿ ಯೋಜನಾ ಕಚೇರಿಯಲ್ಲಿ ಹೆಲ್ಪ್ ಡೆಸ್ಕ್ ತೆರೆಯಲಾಗಿದೆ.

ಇಲ್ಲಿಯವರೆಗೂ ಗೃಹಲಕ್ಷ್ಮೀ ಯೋಜನೆಗೆ ನೊಂದಣಿ ಮಾಡಿಕೊಳ್ಳದೇ ಇರುವ ಫಲಾನುಭವಿಗಳು ಗ್ರಾಮ ಒನ್, ದಾವಣಗೆರೆ ಒನ್, ಸೇವಾಸಿಂಧೂ ಕೇಂದ್ರಗಳಲ್ಲಿ ನೊಂದಾಯಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಲಲಿತ.ಟಿ.ಎಸ್ ಪ್ರಥಮ ದರ್ಜೆ ಸಹಾಯಕರು ಮೊ.ಸಂ:9620380498, ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಎಂ.ಸಿ.ಸಿ.ಬಿ ಬ್ಲಾಕ್, ಕುವೆಂಪು ನಗರ ದಾವಣಗೆರೆ,

ತುಷಾರ್.ಆರ್.ಎ ದ್ವಿತೀಯ ದರ್ಜೆ ಸಹಾಯಕರು ಮೊ.ಸಂ: 9380629266, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ದುಗಾರ್ಂಬಿಕ ಶಾಲೆ ಹತ್ತಿರ, ಸರಸ್ವತಿ ಬಡಾವಣೆ, ದಾವಣಗೆರೆ.

ಕಿರಣ್ ತಾಲ್ಲೂಕು ಸಂಯೋಜನಾಧಿಕಾರಿ, ಪೋಷಣ್ ಅಭಿಯಾನ ಯೋಜನೆ ಮೊ.ಸಂ:9731262426, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ನೆಲಮಹಣಿ, ಪಿ.ಎಲ್.ಡಿ ಬ್ಯಾಂಕ್ ಬಿಲ್ಡಿಂಗ್. ಶಿವಮೊಗ್ಗ ರಸ್ತೆ, ಹರಿಹರ, ಈಶ್ವರ ತಾಲ್ಲೂಕು ಸಂಯೋಜನಾಧಿಕಾರಿ, ಪೋಷಣ್ ಅಭಿಯಾನ ಯೋಜನೆ ಮೊ.ಸಂ: 9740192819, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ, ತಾಲ್ಲೂಕು ಪಂಚಾಯಿತಿ ಆವರಣ, ಸ್ರೀಶಕ್ತಿ ಭವನ ಜಗಳೂರು.

ಸುದೀಪ್ ತಾಲ್ಲೂಕು ಸಂಯೋಜನಾಧಿಕಾರಿ, ಪೋಷಣ್ ಅಭಿಯಾನ ಯೋಜನೆ ಮೊ.ಸಂ:9844019027, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಎರಡನೇ ಮಹಡಿ, ಮಲ್ಲಪ್ಪ ಕಾಂಪ್ಲೆಕ್ಸ್, ಟಿ.ಎಮ್ ರೋಡ್, ಹೊನ್ನಾಳಿ. ಶಿವಣ್ಣ ತಾಲ್ಲೂಕು ಸಂಯೋಜನಾಧಿಕಾರಿ, ಪೋಷಣ್ ಅಭಿಯಾನ ಯೋಜನೆ ಮೊ.ಸಂ:9686601791, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ, ಶಿವಮೊಗ್ಗ ರಸ್ತೆ, ಐ.ಸಿ.ಐ.ಇ ಬ್ಯಾಂಕ್ ಹತ್ತಿರ, ಜಿ.ಎಂ ಕಾಂಪ್ಲೆಕ್ಸ್ ಚನ್ನಗಿರಿ ಸಂಪರ್ಕಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕರಾದ ರಾಜಾನಾಯ್ಕ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending