Connect with us

ದಿನದ ಸುದ್ದಿ

ಹೋರಾಟಕ್ಕೆ ಮಸಿ ಬಳಿಯಲು ವಿರೋಧಿಗಳಿಗೆ ಅವಕಾಶ ಮಾಡಿಕೊಟ್ಟಿದೆ ಅಮೂಲ್ಯಳ‌ ಆ ಮಾತು..!

Published

on

  • ಹರ್ಷಕುಮಾರ್ ಕುಗ್ವೆ

ಮೂಲ್ಯ ಎಂಬ ಈ ಸಹೋದರಿ ತನ್ನ ಯಾವ ಮಾತುಗಳಿಂದ ಏನು ಪರಿಣಾಮ ಆಗಬಹುದು ಎಂಬುದನ್ನು ಯೋಚಿಸದೇ ಸಾರ್ವಜನಿಕ ಸಭೆಯಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆ ಕೂಗಿ CAA ವಿರುದ್ಧದ ಹೋರಾಟದ ಮೇಲೆ ಎಲ್ಲಾ ವಿರೋಧಿಗಳು ದಾಳಿ ನಡೆಸಲು ಅವಕಾಶ ಮಾಡಿಕೊಡ್ಡಿದ್ದಾಳೆ. ಬಿಜೆಪಿ ಸಚಿವರು ‘CAA ವಿರುದ್ಧ ಹೋರಾಟಗಾರರೆಲ್ಲರೂ ಪಾಕಿಸ್ತಾನದ ಪರ’ ಎಂದು ಬಿಂಬಿಸಲು ಈ ಘಟನೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಯಾವ ಸಭೆಯಲ್ಲಿ ಅಮೂಲ್ಯ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದಾಳೋ ಅದರ ಮರುಕ್ಷಣವೇ ಸಂಸದ ಓವೈಸಿ ಮತ್ತು ಕಾರ್ಯಕ್ರಮದ ಆಯೋಜಕರು ಅವಳಿಂದ ಮೈಕ್ ಕಿತ್ತುಕೊಂಡು ಅವಳ ಘೋಷಣೆಯನ್ನು ಖಂಡಿಸಿದ್ದಾರೆ. ನಾವು ‘ಪಾಕಿಸ್ತಾನ್ ಜಿಂದಾಬಾದ್’ ನಂತಹ ಘೋಷಣೆಗೆ ಬೆಂಬಲ ನೀಡುವುದಿಲ್ಲ, ನಾವು ಎಂದಿಗೂ ಹಿಂದೂಸ್ತಾನ್ ಜಿಂದಾಬಾದ್ ಎಂದು ಹೇಳುವವರು, ಈ ಹುಡುಗಿಯ ಮಾತಿಗೆ ನಮ್ಮ ಬೆಂಬಲವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಈ ಘಟನೆಯ ನಂತರದಲ್ಲಿ ಹಲವಾರು ರೀತಿಯ ಅಭಿಪ್ರಾಯಗಳನ್ನು ವಿರೋಧಿಗಳು, ಸ್ನೇಹಿತರು ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಹಿರಿಯ ಜೀವ ಬಾನು ಮುಷ್ತಾಕ್ ಅವರು ನನಗೆ ಕರೆ ಮಾಡಿ ‘ಹರ್ಷಾ ಆ ಎಳಸು ಹುಡುಗಿ ಎಂತ ಕೆಲಸ ಮಾಡಿದ್ದಾಳೆ ನೋಡು, ಇಡೀ ಹೋರಾಟ ಒಂದು ಒಳ್ಳೇ ರೀತಿಯಲ್ಲಿ ನಡೀತಾ ಇತ್ತು, ನೆನ್ನೆ ಮಾಜಿ ಸಿಎಂ ಕುಮಾರಸ್ವಾಮಿ ಸಹ ಸಮ್ಮ ಪರವಾಗಿ ಸದನದಲ್ಲಿ ಮಾತಾಡಿದ್ರು, ಈಗ ನೋಡಿದ್ರೆ ಈ ಹುಡುಗಿಯಿಂದಾಗಿ ಎಲ್ಲಾ ಹಾಳಾಯ್ತು, ಅವಳಿಗೇನು ತಲೆ ಕೆಟ್ಟಿದೆಯಾ?” ಎಂದು ಹೇಳಿಕೊಂಡು ತೀವ್ರ ಬೇಸರ ವ್ಯಕ್ತಪಡಿಸಿದರು.

ಇನ್ನು ಕೆಲವು ಸ್ನೇಹಿತರು ಮತ್ತೊಂದು ಅತಿರೇಕದಲ್ಲಿ ‘ಅಮೂಲ್ಯ ಒಬ್ಬ ದೇಶದ್ರೋಹಿ” ಎಂದು ಕರೆಯತೊಡಗಿದ್ದಾರೆ. ‘ನೋಡಿ ಇಂತಾ ಹುಡುಗಿಯರಿಗೆಲ್ಲಾ ವೇದಿಕೆ ಕೊಟ್ಟವರು ಈಗ ಏನು ಹೇಳ್ತೀರಾ’ ಎಂದು ಅಬ್ಬರಿಸಲು ತೊಡಗಿದ್ದಾರೆ. ಅವರಿಗೆ ಬೇಕಿದ್ದುದೂ ಇದೇ ಆಗಿತ್ತು ಎನ್ನುವ ರೀತಿಯಲ್ಲಿ!
CAA ವಿರುದ್ಧದ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡವನಾಗಿ ಈ ಸಂದರ್ಭದಲ್ಲಿ ಇಂದಿನ ಈ ಘಟನೆಯ ಕುರಿತು ನನ್ನ ಅಭಿಪ್ರಾಯವನ್ನು ಸ್ಪಷ್ಟಪಡಿಸುವುದು ನನ್ನ ಜವಾಬ್ದಾರಿ ಎಂದುಕೊಂಡಿದ್ದೇನೆ.

1. ಮೊದಲಿಗೆ ಸ್ಪಷ್ಟಪಡಿಸಿಕೊಳ್ಳಬೇಕಾದ ವಿಚಾರ ಎಂದರೆ ಅಮೂಲ್ಯ ಒಂದು ವೇದಿಕೆಯ ಮೇಲೆ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿರುವುದಕ್ಕ ನನ್ನ ಒಪ್ಪಿಗೆ ಖಂಡಿತಾ ಇಲ್ಲ. ಅವಳು ಮುಂದೆ ಏನು ಹೇಳಲು ಹೊರಟಿದ್ದಳೋ ಗೊತ್ತಿಲ್ಲ, ಹಾಗೆ ಹೇಳುವಾಗ ಅವಳ ಉದ್ದೇಶವೂ ತಿಳಿದಿಲ್ಲ. ಆದರೆ ಏನೇ ಇದ್ದರೂ ಸಹ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗಿಕೊಂಡು ಭಾಷಣ ಶುರು ಮಾಡುವುದು ಅತ್ಯಂತ ಅವಿವೇಕತನದ ವರ್ತನೆ ಮಾತ್ರವಲ್ಲ ಅತ್ಯಂತ ಹೊಣೆಗೇಡಿತನದ ವರ್ತನೆ ಸಹ. ಯಾವುದೇ ಮುಲಾಜಿಲ್ಲದೇ ಇದಕ್ಕೆ ನನ್ನ ಖಂಡನೆಯಿದೆ.

2. ಮೊನ್ನೆ ಫೆಬ್ರವರಿ 16ರಂದು ತನ್ನ ಫೇಸ್ಬುಕ್ ಪೋಸ್ಟಿನಲ್ಲಿ ಪಾಕಿಸ್ತಾನವೂ ಸೇರಿದಂತೆ ಹಿಂದೂಸ್ತಾನ್, ಬಾಂಗ್ಲಾದೇಶ್, ಶ್ರೀಲಂಕಾ, ನೇಪಾಳ, ಅಫಘಾನಿಸ್ತಾನ್, ಚೈನಾ ಭೂತಾನ್ ದೇಶಗಳಿಗೂ ಜಿಂದಾಬಾದ್ ಎಂದು ಬರೆದು ಯಾವುದೇ ದೇಶ ಇರಲಿ ಎಲ್ಲ ದೇಶಗಳಿಗೂ ಜಿಂದಾಬಾದ್ ಎಂದು ಬರೆದು ತನ್ನ ಅಭಿಪ್ರಾಯಗಳನ್ನು ತಿಳಿಸಿದ್ದಾಳೆ. ಇದರ ಮೂಲಕ ಅಮೂಲ್ಯ ತನಗೆ ಹಲವರು ಹೇಳುವ’ ರಾಷ್ಟ್ರವಾದ’ ಮತ್ತು ದೇಶಭಕ್ತಿಯ ಪರಿಕಲ್ಪನೆಗೆ ಒಪ್ಪಿಗೆ ಇಲ್ಲವೆಂದು ಪರೋಕ್ಷವಾಗಿ ತಿಳಿಸಿದ್ದಾಳೆ.

3. ಸೋದರಿ ಅಮೂಲ್ಯಳ ವೈಯಕ್ತಿಕ ಅಭಿಪ್ರಾಯ ಏನೇ ಇದ್ದರೂ ಅವಳ ಇಂದಿನ ವರ್ತನೆ ಮತ್ತು ನಡೆದ ಘಟನೆಗಳು CAA ವಿರುದ್ಧದ ಹೋರಾಟಕ್ಕೆ ಮಸಿ ಬಳಿಯಲು ನಮ್ಮ ವಿರೋಧಿಗಳಿಗೆ ಅವಕಾಶ ಮಾಡಿಕೊಟ್ಟಿದೆ. ಹೋರಾಟಗಾರರಿಗೆ ಮುಜುಗರದ ಸನ್ನಿವೇಶವನ್ನು ತಂದಿದೆ.

4. ಅಮೂಲ್ಯಳ ನಡವಳಿಕೆಯ ಕುರಿತು ತೀವ್ರ ಅಸಮಧಾನ ಮತ್ತು ಖಂಡನೆ ವ್ಯಕ್ತಪಡಿಸುತ್ತಲೇ ಈಗ ನಡೆಯುತ್ತಿರುವಂತೆ ಅವಳ ಮೇಲೆ ಹಲವರು ದಾಳಿ ನಡೆಸುತ್ತಿರುವುದನ್ನು ಸಹ ನಾನು ಖಂಡಿಸುತ್ತೇನೆ. ಹೀಗೆಂದ ಮಾತ್ರಕ್ಕೆ ಅವಳ ಅಭಿಪ್ರಾಯವನ್ನು ಬೆಂಬಸುತ್ತೇನೆ ಎಂದಲ್ಲ. ಇಂತಹ ಸಂದರ್ಭದಲ್ಲಿ ನನಗೆ ನೆನಪಾಗುವುದು ಫ್ರಾನ್ಸಿನ ಪ್ರಜಾಪ್ರಭುತ್ವ ಕ್ರಾಂತಿಯ ಬುದ್ಧಿಜೀವಿ ವಾಲ್ಟೇರ್ನ ಮಾತು- ‘ನಾನು ನಿನ್ನ ಅಭಿಪ್ರಾಯವನ್ನು ಒಪ್ಪುವುದಿಲ್ಲ. ಆದರೆ ಆ ಅಭಿಪ್ರಾಯವನ್ನು ವ್ಯಕ್ತಿಪಡಿಸುವ ನಿನ್ನ ಹಕ್ಕು, ಸ್ವಾತಂತ್ರ್ಯವನ್ನು ಉಳಿಸಲು ಬೇಕಾದರೆ ನನ್ನ ಪ್ರಾಣವನ್ನಾದರೂ ಒತ್ತೆ ಇಡುತ್ತೇನೆ”.

ನಮ್ಮ ಕಡು ವಿರೋಧಿಗಳಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಇರಬೇಕು ಎನ್ನುವುದು ಇದರ ಆಶಯ. ಮೊನ್ನೆ ಹುಬ್ಬಳ್ಳಿಯಲ್ಲಿ ಪಾಕಿಸ್ತಾನದ ಸೈನ್ಯದ ಹಾಡಿಗೆ ದನಿಗೂಡಿಸಿ ತಾವೂ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೋರಸ್ ನೀಡಿದ್ದ ಕಾಶ್ಮೀರದ ಹುಡುಗರ ವಿಷಯದಲ್ಲಿ ಸಹ ನಾನು ಇದನ್ನೇ ಹೇಳಿದ್ದೆ. ಆ ಹುಡುಗರನ್ನು ಏಕ್ ದಂ ನೀವು ಪಾಕಿಸ್ತಾನದ ಪರ ಎಂದು ದೂಷಿಸಿ ಶತ್ರುಗಳ ರೀತಿಯಲ್ಲಿ ನೋಡುವುದಲ್ಲ. ಹಿರಿಯರಾದವರು ಅವರೊಂದಿಗೆ ಕುಳಿತು ಅವರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು ಎಂದು. ಈ ಅಮೂಲ್ಯಳ ವಿಷಯದಲ್ಲಿ ಸಹ ನನ್ನ ಸಲಹೆ ಇದೇ ಆಗಿದೆ.

5. ನಮ್ಮ ನಾಡಿನ ಇತಿಹಾಸದಲ್ಲಿ ದೊಡ್ಡ ದೊಡ್ಡ ಚಳವಳಿಗಳು ನಡೆದಿವೆ. ಎಷ್ಟೋ ಮಹಾನ್ ಹೋರಾಟಗಾರರು ತಮ್ಮ ಜೀವನಗಳನ್ನೇ ಸಮರ್ಪಿಸಿಕೊಂಡು ಚಳವಳಿಗಳನ್ನು ಕಟ್ಟಿದ್ದಾರೆ. ಇಂದಿಗೂ ಬದ್ಧತೆಯಿಂದ ದೇಶದ ಒಳಿತು ಮತ್ತು ಜನರ ಹಿತವನ್ನು ಕಾಪಾಡಲು ತಮ್ಮನ್ನು ತೊಡಗಿಸಿಕೊಂಡಿರುವ ಸಾವಿರಾರು ಹಿರಿಯ ಜೀವಗಳು ನಮ್ಮ ಕಣ್ಣಮುಂದೇಯೇ ಇವೆ. ಆದರೆ ಕಾಲದ ಮಹಿಮೆಯೇ ಏನೋ, ಹೋರಾಟ ಚಳವಳಿಗಳಲ್ಲಿ ಭಾಗವಹಿಸುವ ಇಂದಿನ ಪೀಳಿಗೆಯ ಎಳೆಯರಿಗೆ ಇರುವ ಸೌಲಭ್ಯ, ಅವಕಾಶಗಳೇ ಬೇರೆ.

ತಿಳುವಳಿಕೆ, ಅನುಭವಗಳನ್ನು ಹಿಂದೆ ಹಾಕಿ ಕೇವಲ ಮಾತುಗಾರಿಕೆಯ ಕಲೆಯಿಂದಲೇ ಸಾಕಷ್ಟು ಐಡೆಂಟಿಟಿ ಪಡೆಯಲು ಇಂದಿನ ಸಾಮಾಜಿಕ ಮಾಧ್ಯಮಗಳು ಸಹಾಯ ಮಾಡಿವೆ. ಇಂದು ನಮ್ಮೆದುರಿಗಿರುವ ಕನ್ಹಯ್ಯ ಕುಮಾರ್, ಶೆಹ್ಲಾ ರಶೀದ್, ಜಿಗ್ನೇಶ್ ಮೇವಾನಿ ಮೊದಲಾದವರೆಲ್ಲ ದಿಡೀರನೆಂದು ದೇಶದ ಜನರ ಗಮನ ಸೆಳೆಯಲು ಸಾಧ್ಯವಾದದ್ದು, ನಾಯಕರೆಂದು ಬಿಂಬಿಸಿಕೊಳ್ಳಲು ಸಾಧ್ಯವಾದದ್ದು ಈ ಹೊಸಕಾಲದ ಅವಕಾಶಗಳಿಂದ, ಇದೇ ಅವಕಾಶಗಳಿಂದ ಅನೇಕ ಬಲಪಂಥೀಯರೂ ಪ್ರಖ್ಯಾತರೂ ಕುಖ್ಯಾತರೂ ಆಗಿರುವುದನ್ನು ನೋಡಬಹುದು. ಚಕ್ರವರ್ತಿ ಸೂಲಿಬೆಲೆ, ತೇಜಸ್ವಿ ಸೂರ್ಯ ಇಂತವರೂ ಇದ್ದಾರೆ.

6. CAA ವಿರುದ್ಧವಾಗಿ ಇಡೀ ದೇಶದಾಧ್ಯಂತ ಜನಾಂದೋಲನಗಳು ಶುರುವಾದಂತೆ ಆರಂಭದಲ್ಲಿ ನಡೆದ ಕೆಲವು ಸಭೆ ಪ್ರತಿಭಟನೆಗಳಲ್ಲಿ ವಾಕ್ಚಾತುರ್ಯ ತೋರಿದ ಹಲವರು ಈ ಹೋರಾಟದ Iconಗಳಾಗಿ ಮುಂದೆ ಬಂದರು. ರಾಷ್ಟ್ರಮಟ್ಟದಲ್ಲಿ ಕಣ್ಣನ್ ಗೋಪಿನಾಥನ್, ಯೋಗೇಂದ್ರ ಯಾದವ್, ಕನ್ಹಯ್ಯ, ಹರ್ಷ ಮಂದರ್, ರಾಜ್ಯದಲ್ಲಿ ಶಿವಸುಂದರ್, ಸಸಿಕಾಂತ್ ಸೆಂಥಿಲ್, ಸುಧೀರ್ ಕುಮಾರ್ ಮುರೊಳ್ಳಿ, ಮಹೇಂದ್ರ ಕುಮಾರ್, ಭಾಸ್ಕರ್ ಪ್ರಸಾದ್, ನಜ್ಮಾ ನಜೀರ್, ರಾ ಚಿಂತನ್, ಭವ್ಯ ನರಸಿಂಹಮೂರ್ತಿ, ಅಮೂಲ್ಯ ಲಿಯೋನ ಇವರೆಲ್ಲಾ ರಾಜ್ಯದ ಬೇರೆ ಬೇರೆ ಕಡೆಗಳಿಗೆ ಹೋಗಿ CAA-NRC-NPR ವಿರುದ್ಧ ತಮ್ಮ ಧ್ವನಿ ಎತ್ತತೊಡಗಿದರು.

ನಾನೂ ಕೆಲವೆಡೆಗಳಲ್ಲಿ ಭಾಗವಹಿಸಿದ್ದೇನೆ. ಈ ಕಾಯ್ದೆಯಿಂದ ಆತಂಕಕ್ಕೆ ಒಳಗಾಗಿರುವ ಮುಸ್ಲಿಂ ಸಮುದಾಯಿಂದ ಸಾವಿರಾರು ಕೆಲವೊಮ್ಮೆ ಲಕ್ಷಾಂತರ ಜನರು ನೆರೆಯತೊಡಗಿದರು. ಇಂತಹ ಬೃಹತ್ ಸಭೆಗಳಲ್ಲಿ ಆಹ್ವಾನಿತರಾಗುವಾಗ ಸಹಜವಾಗಿ ಒಂದು ಐಡೆಂಟಿಟಿ ಸುಲಭವಾಗಿ ಬರುತ್ತದೆ. ಮತ್ತದು ಸಹಜವೇ. ಹಾಗಂತ ಈ ಎಲ್ಲರಿಗೂ ಎಲ್ಲಾ ವಿಷಗಳಲ್ಲಿಯೂ ಒಂದೇ ಅಭಿಪ್ರಾಯವಿದೆ ಎಂದಲ್ಲ. ಈಗಲೂ CAA-NRCಗಳಿಗೆ ಕುರಿತಂತೆ ಕೆಲವು ವಿಷಯಗಳಲ್ಲಿ ಎಲ್ಲರಿಗೂ ಒಪ್ಪಿಗೆ ಇರಬಹುದಾದರೂ ಅನೇಕ ವಿಷಯಗಳಲ್ಲಿ ಹಲವಾರು ಭಿನ್ನಾಭಿಪ್ರಾಯಗಳಿವೆ. ಯಾವುದೇ ಚಳವಳಿಯಾದರೂ ಇದು ಸಹಜ.

ಇಡೀ JNU ಕೇಂದ್ರ ಸರ್ಕಾರದ ವಿರುದ್ಧ ನಿಂತಾಗಲೂ ಅಲ್ಲಿರುವ ಹಲವಾರು ಸಂಘಟನೆಗಳ ನಡುವೆ ತೀವ್ರ ಸ್ವರೂಪದ ಭಿನ್ನಾಭಿಪ್ರಾಯಗಳು ಈಗಲೂ ಇವೆ. ನಮ್ಮ ನಡುವಿನ ಭಿನ್ನ ಭಿನ್ನ ಅಭಿಪ್ರಾಯಗಳನ್ನು ಸೆಲೆಬ್ರೇಟ್ ಮಾಡುತ್ತಲೇ ಸಮಾನ ಒಪ್ಪಿಗೆ ಇರುವ ಅಂಶಗಳ ಮೇಲೆ ಚಳವಳಿ ಮುನ್ನಡೆಸಿಕೊಂಡು ಹೋಗುವು ಪ್ರಬುದ್ಧತೆ ಎಲ್ಲರಿಗೂ ಅತ್ಯವಶ್ಯಕ. ಹೀಗಾಗಿ ಅಮೂಲ್ಯ ಹೇಳುವ ಎಲ್ಲಾ ಮಾತುಗಳೂ ಮಹೇಂದ್ರ ಕುಮಾರ್ ಮಾತುಗಳಾಗಿರುವುದು, ಹಾಗೆಯೇ ಮಹೇಂದ್ರ ಕುಮಾರ್ ಹೇಳುವ ಎಲ್ಲಾ ಮಾತುಗಳೂ ಶಿವಸುಂದರ್ ಮಾತುಗಳಾಗಿರಲು ಸಾಧ್ಯವಿಲ್ಲ.

7. ಈ ಅವಧಿಯಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವವರೆಂದರೆ ಅಮೂಲ್ಯ, ನಜ್ಮಾ ನಜೀರ್ , ಭವ್ಯ ನರಸಿಂಹಮೂರ್ತಿ. ಮತ್ತು ಕೆಲವರು. ತಿಳುವಳಿಕೆ, ವಿಷಯಗಳನ್ನು ನೋಡುವ ದೃಷ್ಟಿಕೋನ ಮತ್ತು ಪ್ರೆಸೆಂಟೇಶನ್ ಶೈಲಿಯಲ್ಲಿ ಇವರೆಲ್ಲಾ ಒಬ್ಬರಿಗೊಬ್ಬರು ಸಂಪೂರ್ಣವಾಗಿ ಭಿನ್ನ ಭಿನ್ನ. ಆದರೆ ಸಭೆಗಳಲ್ಲಿ ನೆರೆದ ಸಾವಿರಾರು ಜನರು ಇವರು ಮಾತುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದುದು ಸತ್ಯ. ನಾನು ಗಮನಿಸಿರುವಂತೆ ಕೆಲವು ಕಡೆಗಳಲ್ಲಿ ಮಾತಾಡುವಾಗ ತನ್ನ ವಯಸ್ಸು ಮತ್ತು ತಿಳುವಳಿಕೆಯನ್ನೂ ಮೀರಿ ಮಾತಾಡುತ್ತಿದುದು ಮಾತ್ರ ಅಮೂಲ್ಯ.

ಅವಳ ಮೇಲೆ ಸಾಕಷ್ಟು ಟ್ರೋಲ್ ಆಗುತ್ತಿದ್ದಾಗಲೂ ಅದಕ್ಕೆಲ್ಲಾ ತಲೆಕೆಡಿಸಿಕೊಳ‍್ಳದೇ ತಾನು ಹೀಗೆಯೇ ಎಂದು ತೋರಿಸಿಕೊಳ್ಳುತ್ತಿದ್ದ ಅಮೂಲ್ಯಳನ್ನ ನೋಡಿ ಯಾವತ್ತಾದರೂ ಒಮ್ಮೆ ಕೂರಿಸಿಕೊಂಡು ಹೋರಾಟ-ಚಳವಳಿಗಳ ಕೆಲವು ಸೂಕ್ಷ್ಮತೆಗಳನ್ನು ಹೇಳಬೇಕು ಎಂದು ನನಗೂ ಅನಿಸಿತ್ತು. ಅಕಸ್ಮಾತ್ ನಾನು ಮಾತಾಡಿದ್ದರೂ ಅವಳು ಕೇಳಿಬಿಡುತ್ತಿದ್ದಳು ಎಂದೂ ಅಲ್ಲ. ಅವಳ ಸ್ಪೀಡ್ ನೋಡಿ ಸ್ವತಃ ಅವರ ತಂದೆ ಆತಂಕಗೊಂಡು ತಮ್ಮ ಮಗಳು ತಮ್ಮಿಂದ ಎಲ್ಲಿ ದೂರಾಗುತ್ತಾರೋ ಎಂದು ಆಪ್ತರ ಬಳಿ ತೋಡಿಕೊಂಡಿದ್ದ ಬಗ್ಗೆ ನನಗೆ ತಿಳಿದಿತ್ತು. ಮಾತ್ರವಲ್ಲ ಹೋರಾಟದ ಕೆಲವು ಹಿರಿಯ ಸ್ನೇಹಿತರು ಗಂಟೆಗಳ ಕಾಲ ಅವಳನ್ನು ಕೂರಿಸಿಕೊಂಡು ಕೆಲವು ವಿಷಯಗಳಲ್ಲಿ ಬುದ್ಧಿ ಹೇಳಿರುವ ವಿಷಯವೂ ನಂತರ ತಿಳಿಯಿತು.

ಟ್ವಿಟರ್ ನಲ್ಲಿ ಯಾರಾದರೂ ಏನಾದರೂ ಕೇಳಿದರೆ ಅಮೂಲ್ಯ ಹಿಂದೆ ಮುಂದೆ ಯೋಚಿಸದೇ ಮನಸಿಗೆ ಬಂದಂತೆ ಮಾತಾಡುವುದು ಕಂಡು ಕೆಲವು ಸಂದರ್ಭದಲ್ಲಿ ಕಮೆಂಟ್ ರೂಪದಲ್ಲಿ ಬುದ್ಧಿಯನ್ನೂ ಹೇಳಿದ್ದೆ. ‘ನಾಯಕತ್ವ ಇರುವುದು ಮಾತಾಡುವುದರಲ್ಲಿ ಅಲ್ಲ, ಇತರರ ಅಭಿಪ್ರಾಯಗಳನ್ನು ಕೇಳಿಸಿಕೊಳ್ಳುವುದರಲ್ಲಿ, ಬಾಯಿಗಿಂತ ಹೆಚ್ಚಾಗಿ ನಮ್ಮ ಕಿವಿ ಕೆಲಸ ಮಾಡಬೇಕಾಗುತ್ತದೆ” ಎಂಬ ಕಿವಿಮಾತನ್ನೂ ಹೇಳಿದ್ದೆ. ಈ ವಿಷಯದಲ್ಲಿ ನಜ್ಮಾ ಬೆಟರ್ ಅನಿಸಿತ್ತು.

8. ಈಗ ಅಮೂಲ್ಯ ತಪ್ಪು ಮಾಡಿದ್ದಾಳೆ. ಇದನ್ನೇ ಇಟ್ಟುಕೊಂಡು ನಮ್ಮ ವಿರೋಧಿ ಪಡೆ, ಅಮೂಲ್ಯಳ ಮೇಲೆ, ಇಡೀ CAA ವಿರೋಧಿ ಹೋರಾಟದ ಮೇಲೆ ತೀವ್ರವಾಗಿ ದಾಳಿ ನಡೆಸತೊಡಗಿದೆ. ಅವರು ಅದನ್ನು ಮಾಡಲೇಬೇಕು ಬಿಡಿ. ಹಾಗಂತ ನಾವೂ ಅದನ್ನೇ ಮಾಡತೊಡಗಿದರೆ ನಮಗೂ ಅವರಿಗೂ ವ್ಯತ್ಯಾಸವೇನಿರುತ್ತದೆ? ಅಮೂಲ್ಯಳ ನಡವಳಿಕೆಯನ್ನು ಖಂಡಿಸಬೇಕು ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಅಮೂಲ್ಯ ಪಾಕಿಸ್ತಾನ್ ಜಿಂದಾಬಾದ್ ಎಂದು ತನ್ನ ಭಾಷಣದ ಆರಂಭಿಸುವಾಗ ಕೂಗಿದ್ದರ ಹಿಂದಿನ ಉದ್ದೇಶ ಏನಿತ್ತು ಎಂದು ವಿಚಾರಣೆ ನಡೆಸಬೇಕು. ಅವಳ ಉದ್ದೇಶ ಸದುದ್ದೇಶವಾಗಿದ್ದರೆ, ದೇಶದ ಸಂವಿಧಾನಕ್ಕೆ ವಿರುದ್ಧವಾಗಿ ಇರದಿದ್ದರೆ ಅವಳಿಗೆ ಬುದ್ದಿ ಹೇಳಿ ಅವಳು ಮಾಡಿರುವ ತಪ್ಪನ್ನು ಕ್ಷಮಿಸಬಹುದು. ಆದರೆ ಅವಳ ಉದ್ದೇಶವೇ ಕೆಟ್ಟದ್ದಾಗಿದ್ದರೆ (Malafide), ನಮ್ಮ ಸಂವಿಧಾನದ ಕಣ್ಣಿನಲ್ಲಿ ಅಪರಾಧ ಎನಿಸುವ ಉದ್ದೇಶ ಆಕೆಗೆ ಇದ್ದಿದ್ದೇ ಆಗಿದ್ದರೆ ಕಾನೂನಿನ ಪ್ರಕಾರ ಅವಳ ಮೇಲೆ ಕ್ರಮ ತೆಗೆದುಕೊಳ್ಳಿ ಎನ್ನಬಹುದು.

ಆದರೆ ಅಷ್ಟರೊಳಗಾಗಿ ಯಾವುದೇ ಫತ್ವಾ ಹೊರಡಿಸುವುದನ್ನು ನಾವು ಮಾಡುವುದು ಸರಿಯಲ್ಲ. ಅಮೂಲ್ಯ ಕೂಡಾ ದೇಶದ ನಾಗರಿಕಳು ಮತ್ತು ಆಕೆಯ ಅಭಿಪ್ರಾಯ ಏನೇ ಇರಲಿ ಒಬ್ಬ ನಾಗರಿಕಳಾಗಿ ಅವಳಿಗೂ ಸಂವಿಧಾನದ ಹಕ್ಕುಗಳು, ನ್ಯಾಯಾಲಯದಲ್ಲಿ ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಹಕ್ಕು ಇರುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು.

9. ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಪಾಕಿಸ್ತಾನಿಯರು ಹೇಳುತ್ತಾರೆ, ಪಾಕಿಸ್ತಾನದ ಮತಾಂಧ ಉಗ್ರರೂ ಹೇಳುತ್ತಾರೆ, ಕಾಶ್ಮೀರದಲ್ಲಿದ್ದುಕೊಂಡು ಪಾಕಿಸ್ತಾನವನ್ನು ಬೆಂಬಲಿಸುವವರು ಹೇಳುತ್ತಾರೆ, ಕೆಲವು ಅಮಾಯಕ ಅವಿವೇಕಿ ಕಾಶ್ಮೀರಿಗಳೂ ಹೇಳುತ್ತಾರೆ. ಮಾತ್ರವಲ್ಲ ಶ‍್ರೀಶ್ರೀ ರವಿಶಂಕರ್ ಗುರೂಜಿ ಸಹ ಹೇಳಿದ್ದರು. ಹಾಗೆಯೇ ಅಮೂಲ್ಯ ಕೂಡಾ ಹೇಳಿದ್ದಾಳೆ. ಇವರಲ್ಲಿ ಒಬ್ಬಬ್ಬರೂ ಒಂದೊಂದು ಉದ್ದೇಶದಿಂದ ಹೇಳಿದ್ದಾರೆ. ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದಲ್ಲ. ಭಾರತದಲ್ಲಿದ್ದುಕೊಂಡು ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳುವುದು ದೇಶದ ಮೇಲೆ ಸಹಜ ಪ್ರೀತಿ, ಅಭಿಮಾನ ಇರುವು ಎಲ್ಲರಿಗೂ ಸಿಟ್ಟು, ಆಕ್ರೋಶ ತರಿಸುತ್ತದೆ, ನಮ್ಮ ತಂಗಿಯಂತಿರುವ ಅಮೂಲ್ಯ ತನ್ನ ಅವಿವೇಕತನದಿಂದ ಹಾಗೆ ಹೇಳಿ ಆಡುವವರ ಬಾಯಿಗೆ ತುತ್ತಾದಾಗ ದುಪ್ಪಟ್ಟು ನೋವಾಗುತ್ತದೆ.

ಇಂತಹ ಸಂದರ್ಭದಲ್ಲಿ ಎಲ್ಲರ ಜೊತೆ ಸೇರಿಕೊಂಡು ಅಮೂಲ್ಯಳನ್ನು ಬೈದುಬಿಡುವುದು ಸುಲಭ. ಅವಳನ್ನೂ ಒಂದು ಅಭಿಪ್ರಾಯ ಇರುವ ನಾಗರಿಕಳು ಎಂದು ನೋಡುವುದು ಬಹಳ ಜನರಿಗೆ ಕಷ್ಟವಾಗುತ್ತದೆ. ಹಾಗೆ ಯಾವುದೋ ಒಂದು ರೀತಿಯಲ್ಲಿ ಅವಳ ನಾಗರಿಕ ಹಕ್ಕಿನ ಪರವಾಗಿ ಮಾತಾಡಿದಾಗ ನಾವೂ ತೊಂದರೆಗೆ ಸಿಲುಕುವ ಸಾಧ್ಯತೆಯೂ ಇರುತ್ತದೆ. ‘ನಿಮ್ಮಂತವರ ಕುಮ್ಮಕ್ಕಿನಿಂದಲೇ ಇಂತಹವರು ಹೀಗಾಡುವುದು’ ಸಪೋರ್ಟ್ ಮಾಡಬೇಡಿ’ ಎಂಬ ಸಲಹೆಗಳೂ ನಮಗೆ ಬರಬಹುದು.

ಆದರೂ ಸಹ ನನ್ನ ಅಭಿಪ್ರಾಯದಲ್ಲಿ ಇಂದು ಅಮೂಲ್ಯ ತೋರಿರುವ eccentric ನಡವಳಿಕೆಯನ್ನು ಟೀಕಿಸುತ್ತಲೇ, ಅದಕ್ಕೆ ತೀವ್ರ ಅಸಮ್ಮತಿ ವ್ಯಕ್ತಪಡಿಸುತ್ತಲೇ ಅಮೂಲ್ಯಳಿಗೆ ಕೂರಿಸಿ ಬುದ್ಧಿ ಹೇಳುವ ಅಗತ್ಯವಿದೆಯೇ ಹೊರತು ಆಕೆಯನ್ನು ‘ದೇಶದ್ರೋಹಿ’ ಏಕಾಏಕಿಯಾಗಿ ತೀರ್ಮಾನಿಸಿ ಆಕೆಯ ಮೇಲೆ ಯದ್ವಾತದ್ವಾ ಅಕ್ಷರದಾಳಿ ನಡೆಸುವುದನ್ನೂ ಖಂಡಿಸುತ್ತೇನೆ. ಹೀಗೆ ಮಾಡುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು. ಇದೇ ಸಂದರ್ಭದಲ್ಲಿ CAA ವಿರುದ್ಧದ ಇಡೀ ಹೋರಾಟವನ್ನು ‘ಅಮೂಲ್ಯಳ ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಗೆ ಸೀಮಿತಗೊಳಿಸಿ ಇಡೀ ಹೋರಾಟದ ಮೇಲೆ ದಾಳಿ ನಡೆಸುತ್ತಿರುವವರ ಹುನ್ನಾರವನ್ನೂ ಖಂಡಿಸುತ್ತೇನೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Suddidina.com Kannada online news portal. Its providing Kannada news, film news Kannada, sports news Kannada, political NeWS in Kannada and more.

ದಿನದ ಸುದ್ದಿ

ದಾವಣಗೆರೆ | ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ

Published

on

ಸುದ್ದಿದಿನ,ದಾವಣಗೆರೆ : 66/11 ಕೆ.ವಿ. ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ತುರ್ತು ನಿರ್ವಹಣಾ ಕಾಮಗಾರಿಗಳ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಜೂನ್ 23 ರಂದು ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೆÉ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಮಾಮಾಸ್ ಜಾಯಿಂಟ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಎಮ್.ಸಿ.ಸಿ.ಬಿ : ಶಾಬನೂರು ರಸ್ತೆ, ಎಸ್.ಎಸ್. ಲೇಔಟ್, ಎ ಬ್ಲಾಕ್, ಕುವೆಂಪು ನಗರ, ಬಾಟ್ಲಿ ಬಿಲ್ಡಿಂಗ್ ಸುತ್ತ ಮುತ್ತ, ಸಿದ್ದವೀರಪ್ಪ ಬಡಾವಣೆ, 1ನೇ ಅಡ್ಡ ರಸ್ತೆ ಯಿಂದ 7ನೇ ಅಡ್ಡರಸ್ತೆವರೆಗೆ, ಗ್ಲಾಸ್ ಹೌಸ್, ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಹಿಂಭಾಗದ ಪ್ರದೇಶ , ಬಿ.ಐ.ಇ.ಟಿ. ಕಾಲೇಜು ಹಾಗೂ ಸುತ್ತ ಮುತ್ತ ಪ್ರದೇಶಗಳು.

ಮಂಡಿಪೇಟೆ, ಬೆನ್ನೆ ಕಂಪನಿ ರಸ್ತೆ, ಎಮ್ ಜಿ ರಸ್ತೆ, ಎನ್ ಆರ್ ರಸ್ತೆ, ಬೆಲ್ಲೌಡಿಹಲ್ಲಿ, ಮಹಾವೀರ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು, ಬಿ.ಟಿ.: ಮಂಡಕ್ಕಿ ಬಟ್ಟಿ, 1 ರಿಂದ 10 ನೇ ಕ್ರಾಸ್, ಇಂದಿರಾ ನಗರ, ಸಿದ್ದರಾಮೇಶ್ವರ ಬಡಾವಣೆ, ಕಾರ್ಲ್ ಮಾರ್ಸ್ ನಗರ, ಕೋಳಿ ಚನ್ನಪ್ಪ ಬಡಾವಣೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು, ಮೌನೇಶ್ವರ : ಹೆಚ್.ಕೆ. ಆರ್. ಸರ್ಕಲ್, ಕೆ.ಇ.ಬಿ ಕಾಲೋನಿ, ನಿಟುವಳ್ಳಿ ಹಾಗು ನಿಟುವಳ್ಳಿ ಹೊಸಬಡಾವಣೆ, ಮೌನೇಶ್ವರ ಬಡಾವಣೆ, ಸೈಯದ್ ಪೀರ್ ಬಡಾವಣೆ, ಐ.ಟಿ.ಐ. ರಿಂಗ್ ರಸ್ತೆ, ಜಯನಗರ, ದುರ್ಗಾಂಬಿಕ ದೇವಸ್ಥಾನ ಸುತ್ತಮುತ್ತ.

ಎಸ್.ಎಸ್. ಹೈಟೆಕ್ ಆಸ್ಪತ್ರೆ ರಸ್ತೆ, ಭಗೀರಥ ಸರ್ಕಲ್, ಕಾಳಿಕಾಂಬ ದೇವಸ್ಥಾನ, ಶಕ್ತಿನಗರ, ಹಾಗು ಇ.ಎಸ್.ಐ ಆಸ್ಪತ್ರೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳ, ಪಿ.ಬಿ. ರಸ್ತೆ., ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು, ಕೆಟಿಜೆ: ಶ್ರೀ ಮುರಘ ರಾಜೇಂದ್ರ ಸ್ವಾಮಿಗಳ ಮಠ, ಜಾಧವ್ ಕ್ಲಿನಿಕ್ ಸುತ್ತ ಮುತ್ತ , ಶಿವಪ್ಪ ವೃತ್ತದಿಂದ ಜಯದೇವ ವೃತ್ತದವರೆಗೆ ಹಾಗು ಸುತ್ತಮುತ್ತ ಪ್ರದೇಶಗಳು, ಪಿಜೆ: ಪೋಲೀಸ್ ಕ್ವಾಟ್ರಸ್, ತುಂಗ, ಭದ್ರ, ಸರಸ್ವತಿ, ಕೃಷ್ಣ ಬ್ಲಾಕ್, ಅರುಣಾ ಸರ್ಕಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಸಿಜಿಹೆಚ್: ಎಮ್.ಸಿ.ಸಿ. ಎ ಬ್ಲಾಕ್, ನ್ಯಾಯಾಧೀಶರ ವಸತಿ ಗೃಹಗಳು, ತೊಗಟವೀರ ಕಲ್ಯಾಣ ಮಂದಿರ, ವಿನೋಬ ನಗರ 1ನೇ ಮುಖ್ಯ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು, ಎಸ್.ಎಸ್. ಬಡಾವಣೆ, ಎ ಬ್ಲಾಕ್, ಶಾಂತಿ ನಗರ, ಕುಂದುವಾಡ ರಸ್ತೆ, ಮಹಾನಗರ ಪಾಲಿಕೆ ಕುಡಿಯುವ ನೀರಿನ ಸ್ಥಾವರ, ಬಸವೇಶ್ವರ ಬಡಾವಣೆ, ಮಹಾಲಕ್ಷ್ಮೀ ಬಡಾವಣೆ, ಬಾಲಾಜಿ ನಗರ, ಕುಂದುವಾಡ ಕೆರೆ ಹಾಗು ಸುತ್ತಮುತ್ತ ಪ್ರದೇಶಗಳು.

ಕರೂರು ಇಂಡಸ್ಟ್ರಿಯಲ್ ಏರಿಯಾ, ಡಿ.ಸಿ. ಕಛೇರಿ, ಜಿ.ಎಂ.ಐ.ಟಿ. ಬಸವೇಶ್ವರ ನಗರ, ರಶ್ಮೀ, ಹರಿಹರ ರಸ್ತೆ, ವಿಜಯ ನಗರ, ಅಶೋಕ ನಗರ, ಆರ್.ಟಿ.ಓ. ಕಛೇರಿ, ಎಸ್.ಪಿ. ಕಛೇರಿ, ರಿಂಗ್ ರಸ್ತೆ, ಶಿಬಾರ, ಎಸ್.ಎಂ.ಕೆ. ನಗರ, ಹಾಗೂ ಚಿತ್ತನಹಳ್ಳಿ, ಕಕ್ಕರಗೊಳ್ಳ, ಆವರಗೊಳ್ಳ, ನೀಲನಹಳ್ಳಿ, ದೇವರಹಟ್ಟಿ, ದೊಡ್ಡಬಾತಿ, ಹಳೆಬಾತಿ, ನಾರಾಯಣ ಕ್ಯಾಂಪ್, ಯರಗುಂಟಾ, ಕೋಡಿಹಳ್ಳಿ, ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು, ಮಾಗಾನಹಳ್ಳಿ, ಮಾಗಾನಹಳ್ಳಿ ಕ್ಯಾಂಪ್, ಓಬಜ್ಜಿಹಳ್ಳಿ, ಓಬಜ್ಜಿಹಳ್ಳಿ ಕ್ಯಾಂಪ್, ಕಡ್ಲೇಬಾಳು, ಹಳೆಕಡ್ಲೆಬಾಳು, ಮಾಳಗೊಂಡನಹಳ್ಳಿ, ಅರಸಾಪುರ, ಬದುನಾಯಕನತಾಂಡ, ಚಿಕ್ಕಓಬಜ್ಜೀಹಳ್ಳಿ, ದೊಡ್ಡಓಬಜ್ಜೀಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು, ಮ್ಯಾಸರಹಳ್ಳಿ, ಗುಮ್ಮನೂರು, ಹುಣಸೆಕಟ್ಟೆ, ಮುಡೇನಹಳ್ಳಿ, ಕೆಂಚಮ್ಮನಹಳ್ಳಿ, ಹೊಸಹಳ್ಳಿ, ಕಾಟಿಹಳ್ಳಿ.

ಮಂಡಲೂರು ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು ಹನುಮನಹಳ್ಳಿ, ಕೊಗ್ಗÀನೂರು, ಹನುಮನಹಳ್ಳಿ, ಆನಗೋಡು, ಹೆಬ್ಬಾಳು, ನೀರ್ಥಡಿ, ಶಿವಪುರ, ಹಾಲುವರ್ತಿ, ಗಂಗನಕಟ್ಟೆ, ನೇರ್ಲಿಗಿ, ಚಿನ್ನಸಮುದ್ರ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು ಮತ್ತು ಆರಾಧ್ಯಾ ಕೈಗಾರಿಕೆ, ಅತ್ತಿಗೆರೆ, ಕುರ್ಕಿ, ಬಾಡ, ಕಬ್ಬೂರು, ಹೀರೆತೊಗಲೇರಿ, ಗೊಪಾನಾಳು, ಕಂದ್ಗಲ್, ರಾಮಗೊಂಡನಹಳ್ಳಿ, ಕಾಶೀಪುರ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು ಆರ್.ಎಂ.ಸಿ. ಲಿಂಕ್ ರಸ್ತೆ, ಬಿ.ಟಿ. ಲೇಔಟ್, ಗುಜರಿ ಲೈನ್, ಬಂಬೂ ಬಜಾರ್, ಮಟ್ಟಿಕಲ್, ಬಿಡಿಓ ಕಛೇರಿ, ಇಮಾಮ್ ನಗರ, ಅಮರಪ್ಪನ ತೋಟ.

ಆನೆಕೊಂಡ, ಎಲ್.ಬಿ.ಎಸ್. ನಗರ.ಟಿ.ಸಿ. ಲೇಔಟ್, ಬಿಟಿ ಲೇಔಟ್, ಕೆ.ಆರ್. ರಸ್ತೆ, ಇಮಾಮ್ ನಗರ, ಆನೆಕೊಂಡ, ಐನಳ್ಳಿ ಕಾಂಪೌಂಡ್, ಎಪಿಎಂಸಿ, ಭಾರತ್ ಕಾಲೋನಿ, ಶೇಖ್ರಪ್ಪ ನಗರ ಹೆಚ್.ಕೆ.ಆರ್. ನಗರ, ಕಬ್ಬೂರು ಬಸಾಪುರ ನಗರ, ಆಣ್ಣಾ ನಗರ, ಬಸಾಪುರ ರಸ್ತೆ, ಗೋಶಾಲೆ, ಪಿ.ಬಿ. ರಸ್ತೆ, ರವಿ ಮಿಲ್ ಹಾಗೂ ಆವರಗೆರೆ, ಹೊನ್ನೂರು, ಐಗೂರು, ಮಲ್ಲಶೆಟ್ಟಿಹಳ್ಳಿ, ತೊಳಹುಣಸೆ, ದಾವಣಗೆರೆ ವಿಶ್ವವಿದ್ಯಾಲಯ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿದ್ಯಾರ್ಥಿಗಳು ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು: ಹೆಚ್ ಎನ್ ಶಿವಕುಮಾರ್

Published

on

ಸುದ್ದಿದಿನ,ರಾಣೇಬೆನ್ನೂರ: ಸಾಮಾಜಿಕ ಹಾಗೂ ಶೈಕ್ಷಣಿಕ ಜವಾಬ್ದಾರಿಗಳ ಅಗತ್ಯವು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.ಸದಾಕಾಲ ಜ್ಞಾನವನ್ನು ಪಡೆಯುವ ತನಕ ಹೊಂದಿ ಜ್ಞಾನಿಗಳಾಗುವ ಗುರಿ ಹೊಂದಲು ಬಾಪೂಜಿ ಮಹಾವಿದ್ಯಾಲಯ ಉಪ ಪ್ರಾಚಾರ್ಯರಾದ ಎಚ್ ಎನ್ ಶಿವಕುಮಾರ್ ನುಡಿದರು.

ಅವರು ಸ್ಥಳೀಯ ಬಿಎಜೆಎಸ್ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ಪುರಸ್ಕಾರ, ಬಿಳ್ಕೋಡಿಗೆ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ಒಕ್ಕೂಟದ, ಎನ್ ಎಸ್ ಎಸ್ ಚಟುವಟಿಕೆ, ಯುವ ರೆಡ್ ಕ್ರಾಸ್ ಘಟಕದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದ ಬಿಎ ಜೆಎಸ್ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಅಧಿಕಾರಿಗಳು ಡಾ.ಆರ್ ಎಂ ಕುಬೇರಪ್ಪ ಮಾತನಾಡಿ ವಿದ್ಯೆಯನ್ನು ವಿನಯದಿಂದ ವಿದ್ಯೆಕಲಿಯಬೇಕು ಸಂಸ್ಕಾರವಂತರಾಗ ಬೇಕು, ಸಂಸ್ಕಾರ ಹೊಂದಿರುವ ವ್ಯಕ್ತಿಗಳು ಪುರಸ್ಕಾರ ಪಡೆದರೆ ಸಂಸ್ಕಾರ ಇಲ್ಲದವರು ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗುವರು.ನಿಮ್ಮ ಬದುಕನ್ನು ನೀವೆ ಕಟ್ಟಿಕೊಳ್ಳುವ ನೆಲೆಯಲ್ಲಿ ಪ್ರಯತ್ನಿಸಬೇಕು ಎಂದು ನುಡಿದರು.

ಪ್ರಾಚಾರ್ಯರಾದ ಪ್ರಕಾಶ್ ಬಸಪ್ಪನವರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಎಚ್ ಎನ್ ಭೀಕ್ಷಾವರ್ತಿಮಠ ಹಾಗೂ ಕೆ ಕೆ ಹಾವಿನಾಳ ರವರು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.ಆರಂಭದಲ್ಲಿಪ್ರೋ.ಎಂ ಡಿ ಹೊನ್ನಮ್ಮನವರ ಸ್ವಾಗತಿಸಿದರು.ಪ್ರೋ.ಶ್ರೀಕಾಂತ ಕುಂಚೂರ, ಪ್ರಾಸ್ತಾವಿಕ ಮಾತನಾಡಿ ವಾರ್ಷಿಕ ವರದಿ ವಾಚಿಸಿದರು.

ಕೊನೆಯಲ್ಲಿ ಪ್ರೋ.ಪುಷ್ಟಾ ಕಬ್ಬಿನಾಲೆ ವಂದಿಸಿದರು.ಇದೆ ಸಮಾರಂಭದಲ್ಲಿ ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಸೇವೆಗಳಲ್ಲಿವಿದ್ಯಾರ್ಥಿಗಳ ಸಾಧನೆ ಗುರುತಿಸಿ ಪುರಸ್ಕಾರ ಮಾಡಲಾಯಿತು.ವರ್ಷದ ಮಹಾವಿದ್ಯಾಲಯ ಉತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರ ಪ್ರದಾನ ಮಾಡಲಾಯಿತು.ವಿವಿಧ ವಿಷಯದ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪಿಂಚಣಿ ದಾರರು ಸಕಾಲದಲ್ಲಿ ಜೀವಂತ ಪ್ರಮಾಣ ಪತ್ರ ಸಲ್ಲಿಸಿ

Published

on

ಸುದ್ದಿದಿನ,ದಾವಣಗೆರೆ: ಪಿಂಚಣಿ ಪಡೆಯಲು ಜೀವಂತ ಸದಸ್ಯರ ಪ್ರಮಾಣ ಪತ್ರಗಳು ಕಡ್ಡಾಯವಾಗಿರುವುದರಿಂದ ಸಕಾಲಕ್ಕೆ ಸೂಕ್ತ ದಾಖಲಾತಿಗಳನ್ನು ನೀಡುವ ಮೂಲಕ ಸಹಕರಿಸಿ ಎಂದು ಉಪ ಮಹಾಲೇಖಪಾಲರಾದ ಸಚ್ಚಿನ್ ಕೃಷ್ಣ ಕೌಶಿಕ್ ತಿಳಿಸಿದರು.

ಶುಕ್ರವಾರ ಜೂನ್(19) ‌ಬೆಂಗಳೂರಿನ ಮಹಾಲೇಖಪಾಲರು ದಾವಣಗೆರೆ ಜಿಲ್ಲಾ ಖಜಾನೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾಮಾನ್ಯ ಭವಿಷ್ಯ ನಿಧಿ ಹಾಗೂ ಲೆಕ್ಕಪತ್ರ ಸಮಸ್ಯೆಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪಿಂಚಣಿದಾರರು ತಮ್ಮ ಎಲ್ಲಾ ಬ್ಯಾಂಕ್‌ಗೆ 2ನೇ ವಾರ ಭೇಟಿ ನೀಡಿದರೆ ನಿಮ್ಮ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲಾಗುವುದು. ಜೀವಂತ ಸದಸ್ಯರ ದೃಢೀಕರಣ ಪತ್ರವನ್ನು ಪಡೆಯಲು ಸೈಬರ್‌ಕೆಫೆ ಇನ್ನಿತರ ಕೇಂದ್ರಗಳಿಗೆ ಅಲೆಯುವ ಅವಶ್ಯಕತೆ ಇಲ್ಲ. ನೀವು ಮನೆಯಲ್ಲಿ ಮೊಬೈಲ್‌ನಲ್ಲಿ ಅಫ್ ಲೋಡ್ ಮಾಡಿ ಪಡೆಯಬಹುದು. ಮತ್ತು ನಿಮ್ಮ ಸಮಸ್ಯೆಗಳನ್ನು ತಿಳಿಸುವಾಗ ಅರ್ಜಿಯಲ್ಲಿ ಇ-ಮೇಲ್ ವಿಳಾಸ, ಮೊಬೈಲ್ ನಂಬರ್‌ನ್ನು ಕಡ್ಡಾಯವಾಗಿ ನಮೂದಿಸಿದರೆ, ಇದರಿಂದ ನಿಮಗೆ ಮಾಹಿತಿ ನೀಡಲು ಅನುಕೂಲವಾಗುತ್ತದೆ ಎಂದರು.

ಪಿಂಚಣಿ ಅದಾಲತ್ ಎನ್ನುವುದು ನಿವೃತ್ತ ನೌಕರರು ಮತ್ತು ಪಿಂಚಣಿದಾರರ ದೀರ್ಘಕಾಲದ ಬಾಕಿ ಉಳಿದಿರುವ ಸಮಸ್ಯೆಗಳನ್ನು ಅಥವಾ ಕುಂದುಕೊರತೆಗಳನ್ನು ಪರಿಹರಿಸಲು ವಿಶೇಷ ವೇದಿಕೆಯಾಗಿದೆ. ಸ್ಥಳದಲ್ಲೇ ಅರ್ಜಿಗಳನ್ನು ಪರಿಶೀಲಿಸಿ, ಬ್ಯಾಂಕ್‌ ಅಧಿಕಾರಿಗಳ ಸಮ್ಮುಖದಲ್ಲಿ ತ್ವರಿತವಾಗಿ ಸಮಸ್ಯೆಗಳನ್ನು ಬಗೆಹರಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಮಹಾಲೇಖಪಾಲರ ಕಚೇರಿಯ ಹಿರಿಯ ಲೆಕ್ಕಪರಿಶೋಧನಾ ಅಧಿಕಾರಿ ನಾಗಸೇನಾ.ಟಿ.ವಿ, ಮತ್ತು ಪದ್ಮವತಿ, ಜಿಲ್ಲಾ ಖಜಾನೆಯ ಉಪನಿರ್ದೇಶಕರಾದ ರಮೇಶ್ ಅರೆಮಲ್ಲಾಪುರ, ಸಹಾಯಕ ಲೆಕ್ಕಪರಿಶೋಧನಾ ಆಧಿಕಾರಿ ಚಂದನ್ ಮತ್ತು ಜಾಬ್‌ಲೀನೋ, ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending