ಲೈಫ್ ಸ್ಟೈಲ್
‘ಕೋವಿಡ್’ ನಾ ಕಂಡ ಹಾಗೆ : ಡಾ. ರಾಘವೇಂದ್ರ. ಎಫ್. ಎನ್
- ಡಾ. ರಾಘವೇಂದ್ರ. ಎಫ್. ಎನ್
ಒಬ್ಬ ಯೋದ ಯುದ್ಧದಲ್ಲಿ ಪಾಲ್ಗೊಂಡಾಗ ತನ್ನ ಪ್ರಾಣವನ್ನು ಒತ್ತೆಯಿಟ್ಟು ಹೊರಾಡುತ್ತಾನೆ. ಕೆಲವರು ಚತುರವಾಗಿ ತಮ್ಮ ಪ್ರಾಣ ರಕ್ಷಣೆ ಮಾಡಿಕೊಂಡು ಅಲ್ಪಸ್ವಲ್ಪ ಗಾಯ ಮಾಡಿಕೊಂಡರೂ ಸರಿ, ಆದರೂ ಹೋರಾಡಿ ಕೊನೆಗೆ ಗೆಲುವು ಸಾಧಿಸುತ್ತಾರೆ ಆದರೇ ಇನ್ನೂ ಕೆಲವರು ವೀರಾವೇಶದಿಂದ ಉದ್ವೇಗವಾಗಿ ಹೋರಾಡಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ ಯಾಕೆ ಇದನ್ನು ಹೇಳಿದೆ ಎಂದರೆ ಇದರಿಂದ ಸೋಂಕಿತರಾದ ಕೆಲವರ ಪರಿಸ್ಥಿತಿ ಹಾಗೆಯೆ.
ಕೋವಿಡ್ ಈಗ ಜಾಗತಿಕಮಾರಿ.ಜಗತ್ತನ್ನೇ ಭಯಭೀತಗೊಳಿಸಿ ಊನ ಮಾಡಿರುವ ಈ ವೈರಾಣು ಕೆಲವರನ್ನು ಸ್ವಲ್ಪ ದಿನ ಮಾತ್ರ ಕಾಡಿ ಸುಮ್ಮನೆ ಬಿಟ್ಟುಬಿಟ್ಟರೆ ಇನ್ನೂ ಕೆಲವರನ್ನು ಹಿಂಡಿ ಹಿಪ್ಪೆಕಾಯಿಮಾಡಿ ಪ್ರಾಣವನ್ನೇ ತೆಗೆದುಬಿಡುತ್ತದೆ.ಯಾಕೆ ಹೀಗೆ?
ಕೊರೊನ ಮತ್ತು ದೇಹದ ಯುದ್ಧ..!
ಇಲ್ಲಿ ಬರೀ ಕೊರೊನ ವೈರಾಣುವನ್ನು ಒಂದನ್ನೇ ದೂಷಿಸುವುದು ತರವಲ್ಲ. ನಾನು ಈಗಾಗಲೇ ಹೇಳಿದ ಹಾಗೆ ನಮ್ಮ ದೇಹದ ರೋಗನಿರೋಧಕ ಶಕ್ತಿ, ಸೈನಿಕರ ದಂಡು ಇದ್ದ ಹಾಗೆ ಈ ವೈರಾಣುವನ್ನು ಈ ಸೈನಿಕರು ಎಷ್ಟು ಚಾಣಾಕ್ಷವಾಗಿ ಹದ್ದು ಬಸ್ತಿಗೆ ತರುತ್ತಾರೆಯೋ ಅಥವಾ ಅತಿರೇಕವಾಗಿ ಹೋರಾಡಿ ತಮ್ಮ ದೇಹವನ್ನ ತಾವೇ ಹಾನಿ ಮಾಡಿಕೊಳ್ಳುತ್ತಾರೆಯೋ ಅದರ ಮೇಲೆ ನಿರ್ಭರ.
ಈ ವೈರಾಣು ಹೇಗೆ ದೇಹ ಪ್ರವೇಶಿಸುತ್ತದೆ, ಹೇಗೆ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ, ಯಾಕೆ ಕೆಲವರು ಬರೀ ಶೀತ, ಕೆಮ್ಮು, ಜ್ವರ, ಮೈ ಕೈ ನೋವಿನಿಂದ ಬಳಲಿ ಗುಣಮುಖರಾಗುತ್ತಾರೆ ಮತ್ತು ಇನ್ನೂ ಕೆಲವರು ಉಸಿರಾಟದ ತೊಂದರೆ, ಆಯಾಸ, ಅಂಗವೈಫಲ್ಯ, ಆಮ್ಲಜನಕ ಕೊರತೆಯಿಂದ ಬಳಲಿ ಆಸ್ಪತ್ರಗೆ ಸೇರಿ ಆಮ್ಲಜನಕ, ವೆಂಟಿಲೇಟರ್ ಇತ್ಯಾದಿ ಉತ್ತಮ ಮಟ್ಟದ ವೈದ್ಯಕೀಯ ಚಿಕಿತ್ಸೆ, ಔಷಧ ಪಡೆದರೂ ಕೂಡ ಅಸುನೀಗುತ್ತಾರೆ ಎಂಬುದು ಒಂದು ವೈದ್ಯಕೀಯ ವೈಚಿತ್ರವೇ ಸರಿ.
ಇದಕ್ಕೆ ಕಾರಣ ನಮ್ಮ ದೇಹದ ರೋಗನಿರೋಧಕ ಶಕ್ತಿ ಮತ್ತು ಅದು ಹೋರಾಡುವ ಪರಿ ಅತಿಯಾಗಿ ಹೋರಾಡಿದರೆ ದೇಹದಲ್ಲಿನ ರೋಗನಿರೋಧಕ ಕಣಗಳು ಅಗತ್ಯಕ್ಕಿಂತ ಹೆಚ್ಚಾಗಿ ಹೊರಬಂದು, ರಕ್ತ ಸಂಚಲನೆ ತಡೆಯೊಡ್ಡಿ,, ಪುಪ್ಪಸದಲ್ಲಿ ರಕ್ತಹೆಪ್ಪುಗಟ್ಟಿ, ನೀರು ತುಂಬಿ ತೀವ್ರ ಉಸಿರಾಟದ ತೊಂದರೆಯಾಗಿ ಕೊರತೆಯಾಗಿ(ಹೈಪೈಕ್ಸಿಯಾ), ವೆಂಟಿಲೇಟರ್ ಇನ್ನಿತರ ಸಲಕರಣೆ ಮೂಲಕ ಆಮ್ಲಜನಕ ಪೂರೈಕೆ ಮಾಡಿ ಮತ್ತು ಅತೀ ಉನ್ನತ ಔಷಧಗಳನ್ನು ಕೊಟ್ಟರೂ ಸಾವನ್ನಪ್ಪುತ್ತಾರೆ.
ನಮ್ಮ ರೋಗನಿರೋಧಕ ಹೋರಾಟ ಅತೀ ಮಂದವಾಗಿದ್ದರೂ ಹಾನಿ, ಅತೀ ವೇಗವಾಗಿದ್ದರೂ ಹಾನಿ. ಮಧ್ಯಮದಲ್ಲಿದ್ದರೆ ಉತ್ತಮ.ಹಿಡಿತದಲ್ಲಿದ್ದರೆ ದೇಹಕ್ಕೆ ಇನ್ನೂ ಉತ್ತಮ, ಹೀಗಿದ್ದರೆ ಶೀಘ್ರ ಗುಣಮುಖರಾಗಲು ಅಥವಾ ರೋಗ ಸೋಂಕಿದ ನಂತರ, ಗುಣಮುಖರಾದ ಮೇಲೆ ದೇಹದ ಮೇಲೆ ಆಗುವ ಪರಿಣಾಮಗಳನ್ನು ತಡೆಗಟ್ಟಬಹುದು.
ಆದರೇ ಇದು ನಮ್ಮ ಕೈಯಲ್ಲಿಲ್ಲ ಆದರೂ ವಿಜ್ಞಾನಿಗಳು ಇಂತಹ ಪರಿಸ್ಥಿತಿ ಎದುರಿಸಲು ಕೆಲವು ಔಷಧಗಳನ್ನು ಕಂಡುಹಿಡಿದಿದ್ದಾರೆ. ವೈರಾಣುವನ್ನು ದೇಹದ ಒಳಗೆ ಬರುವುದನ್ನು ತಡೆಗಟ್ಟುವ ಕೆಲವು ಔಷಧಗಳಾದ ಹೈಡ್ರಾಕ್ಸಿಕ್ಲೋರೊಕ್ಕಿನ್, ವೈರಾಣು ದೇಹದೊಳಗಡೆ ದ್ವಿಗುಣಗೊಳ್ಳುವುದನ್ನು ತಡೆಗಟ್ಟಲು ಐವರ್ಮೆಕ್ಟಿನ್, ಲೋಪಿನವೀರ್, ಫೆವಿಪಿರವೀರ್, ರೆಮಿಡೀಸ್ವೀರ್ ಇತ್ಯಾದಿಗಳು ಹಾಗು ದೇಹದ ರೋಗನಿರೋಧಕ ಶಕ್ತಿ ಅತೀ ಹೆಚ್ಚು ಪ್ರಮಾಣದಲ್ಲಿದ್ದು ದೇಹಕ್ಕೆ ಹಾನಿ ಮಾಡುವಂಥ ಸೈಟೋಕೈನ್ ಎಂಬ ನಮ್ಮ ರೋಗ ನಿರೋಧಕ ಕಣಗಳೇ ನಮಗೆ ವೈರಿಯಾಗಿ ಬಿಡುತ್ತವೆ ಮತ್ತು ಸೈಟೊಕೈನ್ರಭಸದ ಖಾಯಿಲೆ ಅಥವಾ ಸೈಟೊಕೈನ್ಸ್ಟಾಮ್ ಸಿಂಡ್ರೋಮ್ ಅನ್ನುವ ಪರಿಸ್ಥಿತಿ ನಿರ್ಮಾಣವಾಗಿ ಅತೀಶೀಘ್ರವಾಗಿ ಸಾವನ್ನಪ್ಪುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಇದು ಎರಡನೇ ವಾರದಲ್ಲಿ ಕೆಲವರಲ್ಲಿ ಆಗುವ ಸಂಭವ ಹೆಚ್ಚು. ಹೀಗೆ ಹೆಚ್ಚಾದ ಸಂದರ್ಭದಲ್ಲಿ, ಅದನ್ನು ತಡೆಗಟ್ಟುವ ಔಷಧಗಳಾದ ಸ್ಟಿರಾಯ್ಡ್ಸ್, ಟೋಕ್ಲಿಜುಮ್ಯಾಬ್, ಉಲಿನ ಸ್ಟಾಟಿನ್ಹೀಗೆ ಇನ್ನೂ ಇತ್ಯಾದಿ ಔಷಧಗಳನ್ನ ಬಳಸಬಹುದು. ಆದರೇ ಇದು ಸಂಪೂರ್ಣವಾಗಿ ವೈದ್ಯರ ಮಾರ್ಗದರ್ಶನದಲ್ಲಿ, ತೀವ್ರ ನಿಗಾ ಘಟಕದಲ್ಲಿ ಕೊಡಬೇಕು. ಇದರಲ್ಲಿ ಕೆಲವರು ತೀವ್ರತೆ ಇಂದ ಹೊರಬರುತ್ತಾರೆ ಇನ್ನೂ ಕೆಲವರು ಇದಕ್ಕೆ ಸ್ಪಂದಿಸದೆ ಅಸುನೀಗುತ್ತಾರೆ.
ಮೊದಲೇ ರೋಗಲಕ್ಷಣಗಳು ಕಂಡಾಗ ತಪಾಸಣೆ ಮಾಡಿಸಿಕೊಳ್ಳುವುದು ಕ್ಷೇಮ. ಬೆರಳತುದಿಗೆ “ಪಲ್ಸ್ಆಕ್ಸಿಮೀಟರ್” ಎಂಬ ದೇಹದೊಳಗಿನ ಆಮ್ಲಜನಕ ಸಾಂದ್ರತೆ ಅಳೆಯುವ ಚಿಕ್ಕ ಮಾಪನವನ್ನು ತೂರಿಸಿ ಪರೀಕ್ಷೆಮಾಡಿಕೊಳ್ಳುವುದು ಬಹಳಮುಖ್ಯ. ಎಷ್ಟೋ ಜನ ಮೇಲ್ನೋಟಕ್ಕೆ ಆರೋಗ್ಯವಾಗಿ ಕಂಡರೂ ಅವರ ಆಮ್ಲಜನಕ ಸಾಂದ್ರತೆ (ಎಸ್ಪಿ 02)ಕಡಿಮೆ ಇರುತ್ತದೆ ಅದು ಹೊರಗಡೆ ತೋರ್ಪಡದೆ ಇದ್ದಕ್ಕಿದ್ದ ಹಾಗೆ ತೀವ್ರ ಉಸಿರಾಟದ ತೊಂದರೆಗೆ ಒಳಗಾಗುವವರು ಬಹಳ. ಇದಕ್ಕೆ ಇಂಗ್ಲಿಷ್ನಲ್ಲಿ “ಹ್ಯಾಪಿಹೈಪೆಕ್ಸಿಯಾ” ಅಥವಾ “ಒಳ ಹುದುಗಿರುವ ಕ್ಷೀಣಗೊಂಡ ಆಮ್ಲಜನಕದ ಕೊರತೆ” ಇಂಥ ಸಂದರ್ಭದಲ್ಲಿ ಬೇಗನೆ ಆಮ್ಲಜನಕ ಪೂರೈಕೆ ಮಾಡಿದರೆ ಬಹಳಷ್ಟು ಜನ ಬದುಕುವರು.
ಸಾಮಾನ್ಯವಾಗಿ ಈ ಆಮ್ಲಜನಕ ಸಾಂದ್ರತೆ ದೇಹದಲ್ಲಿ ಶೇಕಡಾ 95 ಅಥವಾ ಮೇಲ್ಪಟ್ಟು ಇರಬೇಕು. 90 ರಿಂದ 95 ಇದ್ದರೆ ಮಧ್ಯಮ, 90 ಕ್ಕಿಂತಲೂ ಕಡಿಮೆ ಇದ್ದರೆ ತೀವ್ರ ಹಾಗು 85 ಕ್ಕಿಂತಲೂ ಕಡಿಮೆ ಇದ್ದರೆ ಅತೀ ತೀವ್ರ ಆಮ್ಲಜನಕ ಕೊರತೆ ಎನ್ನುವರು. ಇಂಥವರಿಗೆ, ಸಿಲಿಂಡರ್ ಮೂಲಕ, ವಿಧವಾದ ಮಾಸ್ಕ್ ಮೂಲಕ ಅಥವಾ ನಳಿಕೆಗಳ ಮೂಲಕ ತೀವ್ರ ಆಮ್ಲಜನಕ ಪೂರೈಕೆ (ಹೆಚ್.ಎಫ್.ಎನ್.ಸಿ) ಅಥವಾ ಕೊನೆಗೆ ಕೃತಕ ಉಸಿರಾಟವನ್ನು ವೆಂಟಿಲೇಟರ್ ಮೂಲಕ ಪೂರೈಸಬೇಕಾಗಬಹುದು. ಇವೆಲ್ಲದರ ನಿರ್ಧಾರವನ್ನು ತೀವ್ರ ನಿಗಾ ಘಟಕದ ತುರ್ತು ವೈದ್ಯತಂಡದ ವೈದ್ಯರು ನಿರ್ಧರಿಸುತ್ತಾರೆ.
ರಕ್ತಪರೀಕ್ಷೆಗಳಾದ, ರಕ್ತಕಣಗಳು, ಡಿಡೈಮರ್, ಫೆರಿಟೀನ್, ಎಲ್ಡಿಹೆಚ್, ಸಕ್ಕರೆ ಪ್ರಮಾಣ, ಉಪ್ಪಿನಂಶ, ಇಂಟೆರ್ಲುಕಿನ್ 6 ಹೀಗೆ ಅನೇಕ ರಕ್ತಪರೀಕ್ಷೆಗಳನ್ನ ವೈದ್ಯರು ಮಾಡಿಸಿ ಅವರ ಮಾರ್ಗದರ್ಶನದಂತೆ ಚಿಕಿತ್ಸೆಕೊಡುತ್ತಾರೆ. ಎದೆಯ ಭಾಗದ ಕ್ಷ ಕಿರಣ ಚಿತ್ರ ಹಾಗೂ ಎದೆಯ ಸಿಟಿ ಸ್ಕ್ಯಾನ್ ಅನ್ನು ವೈದ್ಯರು ಸಲಹೆ ನೀಡಿ, ಅದರ ಉಪಲಬ್ಧತೆ ಮೇರೆಗೆ ಮಾಡಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವರು. ಇವೆಲ್ಲವನ್ನೂ ನಾಲ್ಕರಿಂದ ಎಂಟನೇ ದಿನಗಳ ಮಧ್ಯದಲ್ಲಿ ಮಾಡಿಸಿ ನಿರ್ಧರಿಸುತ್ತಾರೆ.
ರಕ್ತದಲ್ಲಿ ಕಣಗಳ ಸಾಂದ್ರತೆ ಹೆಚ್ಚಾದರೆ ಉಸಿರಾಟದ ಏರುಪೇರು ಹೆಚ್ಚು. ವಯಸ್ಸಾದವರು, ಸಕ್ಕರೆಖಾಯಿಲೆ, ಹೃದಯ, ಕಿಡ್ನಿ, ಲಿವರ್, ಕ್ಯಾನ್ಸರ್, ರೋಗನಿರೋಧಕ ಶಕ್ತಿ ಕುಂಠಿತಗೊಂಡ ಖಾಯಿಲೆಗಳ ರೋಗಿಗಳು ಹೆಚ್ಚಾಗಿ ತೊಂದರೆ ಅನುಭವಿಸುತ್ತಾರೆ. ಮಕ್ಕಳಲ್ಲಿ, ಯುವಕರಲ್ಲಿ ಮತ್ತು ಗರ್ಭಿಣಿಯರಲ್ಲಿ ಇದರ ತೀವ್ರತೆ ಕಡಿಮೆ.
ಬೋರಲು ಮಲಗುವುದು..!
ಹೌದು, ಬೋರಲು ಮಲಗುವುದು ಅಥವಾ ಪ್ರೈನ್ಪೊಸಿಷನ್ಲ್ಸೀಪಿಂಗ್ ಅಂತ ಏನು ಹೇಳುತ್ತೇವೆಯೋ ಇದರಲ್ಲಿ ಬೋರಲಾಗಿ ಮಲಗಿ ನಂತರ ಎಡಪಕ್ಕ ತಿರುಗಿ, ಹಾಗೆ ಬಲಪಕ್ಕ ತಿರುಗಿ ಮತ್ತೇ ಬೋರಲು ಮಲಗುವ ಈ ಚಕ್ರವನ್ನು ಪ್ರತಿ ಅರ್ಧ ಗಂಟೆಯಿಂದ ಒಂದು ಘಂಟೆ ಮಾಡುತ್ತಾ ಹೋದರೆ ಪುಪ್ಪಸಕ್ಕೆ ಮತ್ತು ಅದರ ಕೆಳಭಾಗಕ್ಕೆ ಹೆಚ್ಚು ಆಮ್ಲಜನಕ ಪೂರೈಕೆ ಆಗುತ್ತದೆ. ಈ ಕೊರೊನದಿಂದ ಉಂಟಾಗುವ ಊತ ಅಥವಾ ನ್ಯುಮೋನಿಯಾ ಪುಪ್ಪಸದ ಕೆಳಭಾಗಕ್ಕೆ ಹೆಚ್ಚು ಅಂಟಿಕೊಳ್ಳುತ್ತ್ತದೆ, ಇಲ್ಲಿ ಆಮ್ಲಜನಕದ ಕೊರತೆಯನ್ನು ನೀಗಿಸಲು ಈ ಬೋರಲು ಮಲಗುವ ಅಭ್ಯಾಸ ಬಹಳ ಉಪಾಯಕಾರಿ.
ಹೀಗೆ ಸತತವಾಗಿ ಆಮ್ಲಜನಕ ತೆಗೆದುಕೊಂಡವರು ಅಥವಾ ವೆಂಟಿಲೇಟನಿರ್ಂದ ಹೊರ ಬಂದವರು ತಮ್ಮ ಪುಪ್ಪಸದ ಮೊದಲಿನ ಶಕ್ತಿ ಮತ್ತು ಅಯಸ್ಸನ್ನು ಕಳೆದುಕೊಳ್ಳುವ ಸಂಭವ ಹೆಚ್ಚು. ಅದನ್ನು ತಡೆಗಟ್ಟಲು ಉಸಿರಾಟದ ಪುನಸ್ರ್ಥಾಪನೆ, ಪ್ರಾಣಾಯಾಮ, ಪರಿಶುದ್ಧ ಗಾಳಿ ಸೇವನೆ, ಮಾನಸಿಕ ಸ್ಥೈರ್ಯ, ಧನಾತ್ಮಕ ಮನೋಭಾವ ಬೆಳೆಸಿಕೊಳ್ಳುವುದರಿಂದ ದೇಹವು ಮತ್ತೆ ಮೊದಲಿನಂತೆ ಸಾಮಾನ್ಯ ಸ್ಥಿತಿಗೆ ತರಲು ಪ್ರಯತ್ನ ಮಾಡುತ್ತದೆ. ಇದನ್ನು ಉಳಿಸಿಕೊಳ್ಳಲು ವೈದ್ಯರ ಸಲಹೆ ಮೇರೆಗೆ ಸ್ಟಿರೋಯ್ಡ್, ಹೊಸ ಔಷಧಗಳು, ಆಸ್ಪಿರಿನ್ಹೀಗೆ ಇತ್ಯಾದಿಗಳನ್ನು ಕೆಲವು ದಿನ ಅಥವಾ ತಿಂಗಳುಗಟ್ಟಲೆ ಮುಂದುವರಿಸ ಬೇಕಾಗಬಹುದು
ಆಂಟಿಬಯೋಟಿಕ್ಸ್ ಮೊದಲ ದಿನ ದಿಂದಲೇ ಕೊಟ್ಟರೆ ಅಷ್ಟೇನೂ ಲಾಭವಿಲ್ಲ ಆದರೇ ವಾರದ ಕೊನೆ ಅಥವಾ ಎರಡನೇ ವಾರದ ಹಂತದಲ್ಲಿ ಬ್ಯಾಕ್ಟೀರಿಯಾ ಎಂಬ ರೋಗಾಣುಗಳು ಈ ವೈರಸ್ನಿಂದ ಕ್ಷೀಣಗೊಂಡ ರೋಗನಿರೋಧಕ ಶಕ್ತಿಯ ಅವಕಾಶ ಉಪಯೋಗಿಸಿಕೊಂಡು ದೇಹದ ಮೇಲೆ ದಾಳಿ ಮಾಡುತ್ತವೆ, ಅದನ್ನು ತಡೆಗಟ್ಟಲು ಈ ಅಂಟಿಬಯೋಟಿಕ್ ಉಪಯೋಗಿಸಬಹುದು.
ವಿಟಮಿನ್ಸಿ, ಜಿಂಕ್, ಡಿ ಹಾಗು ಇತರೆ ಮಾತ್ರೆಗಳು, ಮನೆ ಮದ್ದುಗಳು, ಆರೋಗ್ಯಕರವಾದ ಹಣ್ಣು ಮತ್ತು ತರಕಾರಿಗಳು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆಯೇ ಹೊರತು ಕೊರೊನ ಬರದೇ ಇರುವ ಹಾಗೆ ತಡೆಗಟ್ಟುವುದಿಲ್ಲ. ಇವೆಲ್ಲವನ್ನು ವೈದ್ಯರ ಸಲಹೆ ಮೇರೆಗೆ ಬಳಸಿದರೆ ತಪ್ಪೇನಿಲ್ಲ.
ಜಗತ್ತಿನಾದ್ಯಂತ ಎಷ್ಟೊಂದು ಚರ್ಚೆಗಳು, ಸಂಶೋಧನೆಗಳು, ಔಷದ ಮತ್ತು ರೋಗನಿರೋಧಕ ಲಸಿಕೆ ಕಂಡುಹಿಡಿಯುವತ್ತ ಹಗಲುರಾತ್ರಿ ಬಿಡುವಿಲ್ಲದೆ ಕೆಲಸಗಳು ನಡೆಯುತ್ತಲಿವೆ, ಈ ಕೆಲಸಗಳ ಮಧ್ಯೆ, ಊಟ ಉಪಚಾರ ನಿದ್ದೆ ಮರೆತು ವೈದ್ಯರು ಹಗಲಿರುಳೆನ್ನದೆ ಸೇವೆ ಮಾಡುತ್ತಿದ್ದಾರೆ. ವೈದ್ಯರ ಈ ನಿಸ್ವಾರ್ಥ ಮನೋಭಾವವನ್ನು ಜೀವನಮಾನವಿಡಿ ನೆನೆದರೆ ಸಾಲದು.
ಕರೋನ ಒಂದು ಹೊಸಯುಗವನ್ನೇ ಹುಟ್ಟುಹಾಕಿದೆ, ಹಲವು ಪಾಠಗಳನ್ನು ಕಲಿಸುತ್ತಲಿದೆ ಇನ್ನೂ ಕಲಿಯಬೇಕಾದದ್ದು ಬಹಳಷ್ಟು ಇದೆ ಇಲ್ಲಿ ಯಾರೂ ಪಂಡಿತರಲ್ಲ ಎಲ್ಲರೂ ವಿದ್ಯಾರ್ಥಿಗಳೇ..!
ಇದನ್ನು ತಡೆಗಟ್ಟಲು ಮುಖಕ್ಕೆ ಮತ್ತು ಮೂಗಿಗೆ ಮುಖಗವಸು ಅಥವಾ ಮಾಸ್ಕ್, ಸ್ವಚ್ಛತೆ, ಭೌತಿಕ ಮತ್ತು ಸಾಮಾಜಿಕ ಅಂತರಕಾಯ್ದುಕೊಳ್ಳುವಿಕೆ ಒಂದೇ ರಾಜಮಾರ್ಗ.
ಇದರಿಂದ ಪೀಡಿತರಾದ ರೋಗಿಗಳನ್ನು ವೈದ್ಯರು, ವಿಜ್ಞಾನಿಗಳು ತಮ್ಮ ಶಕ್ತಿಮೀರಿ ವೈಜ್ಞಾನಿಕ ಚೌಕಟ್ಟಿನಲ್ಲಿ ಈ ಕರೋನವನ್ನು ತಡೆಗಟ್ಟಲು ಪ್ರಯತ್ನ ಮಾಡಬಹುದೇ ಹೊರತು ಇದನ್ನು ಸಂಪೂರ್ಣವಾಗಿ ಗುಣಮಾಡುವ ಶಕ್ತಿ ಯಾವ ವೈದ್ಯರ ಕೈಲಿಲ್ಲ.
ಸಮಯಕ್ಕೆ ಸರಿಯಾಗಿ ತಪಾಸಣೆ ಮತ್ತು ಚಿಕಿತ್ಸೆ, ನಮ್ಮ ದೇಹದ ರೋಗನಿರೋಧಕ ಶಕ್ತಿ ಮತ್ತು ವೈರಾಣುವಿನ ಜೊತೆ ಇದರ ಪ್ರತಿಸ್ಪಂದನೆ, ಧನಾತ್ಮಕ ಚಿಂತನೆ ಮತ್ತು ಗಟ್ಟಿಯಾದ ಮನೋಬಲ ನಮ್ಮನ್ನು ಇದರಿಂದ ಕಾಪಾಡಿ ಹೊರತರುವುದರಲ್ಲಿ ಎರಡು ಮಾತಿಲ್ಲ.
–ಡಾ. ರಾಘವೇಂದ್ರ. ಎಫ್. ಎನ್
ಎಂಬಿಬಿಎಸ್. ಎಂಡಿ.
ಸಹಪ್ರಾಧ್ಯಾಪಕರು ಮತ್ತು ಕನ್ಸಲ್ಟೆಂಟ್ಫಿಜಿಷಿಯನ್ ವೈದ್ಯಕೀಯ ವಿಭಾಗ
ಕೋವಿಡ್ ನೊಡಲ್ ಆಫೀಸರ್
ವಿಮ್ಸ್, ಬಳ್ಳಾರಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಾಮಾಜಿಕ ಬದಲಾವಣೆಗೆ ಮಾದರಿಯಾಗಬೇಕಿದ್ದ ಯೋಜನೆಗೆ ದಾಖಲೆ, ಅನುದಾನ ಕೊರತೆ ಅಡ್ಡಿ; ಸಾವಿರಾರು ಅರ್ಜಿಗಳು ಬಾಕಿ
ಸುದ್ದಿದಿನ,ಶಿವಮೊಗ್ಗ: ಜಾತಿ-ಧರ್ಮದ ಕಟ್ಟುಪಾಡುಗಳನ್ನು ಮೀರಿ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಮದುವೆಯಾಗುವ ದಂಪತಿಗಳಿಗೆ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಯೋಜನೆಯೇ ಇದೀಗ ಪ್ರಶ್ನೆಗಳ ಸುಳಿಯಲ್ಲಿ ಸಿಲುಕಿದೆ. ಸಮಾಜದ ವಿರೋಧವನ್ನು ಎದುರಿಸಿ ಹೊಸ ಬದುಕು ಕಟ್ಟಿಕೊಳ್ಳುವ ದಂಪತಿಗಳಿಗೆ ನೆರವಾಗಬೇಕಿದ್ದ ಯೋಜನೆಯಲ್ಲಿ ಹಣ ಬಿಡುಗಡೆ ವಿಳಂಬವಾಗುತ್ತಿದ್ದು, ಅರ್ಹ ಫಲಾನುಭವಿಗಳು ಸರ್ಕಾರದ ನೆರವಿಗಾಗಿ ಕಾಯುವಂತಾಗಿದೆ.
| ಹೈಲೈಟ್ಸ್: |
|
http://Visit : www.suddidina.com
ಅಂತರ್ಜಾತಿ ವಿವಾಹಕ್ಕೆ ಎಷ್ಟು ಪ್ರೋತ್ಸಾಹಧನ?
ಅಸ್ಪೃಶ್ಯತೆ ನಿವಾರಣೆ ಮತ್ತು ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಪುರುಷ ಬೇರೆ ಜಾತಿಯ ಮಹಿಳೆಯನ್ನು ವಿವಾಹವಾದರೆ ₹2.50 ಲಕ್ಷ ಹಾಗೂ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಮಹಿಳೆ ಬೇರೆ ಜಾತಿಯ ಪುರುಷನನ್ನು ವಿವಾಹವಾದರೆ ₹3 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತದೆ.
ಆದರೆ, ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸಿದವರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಹಣ ಪಾವತಿ ಮಾತ್ರ ಅದೇ ವೇಗದಲ್ಲಿ ನಡೆಯುತ್ತಿಲ್ಲ. 2025-26ನೇ ಸಾಲಿನಲ್ಲಿ 5,612 ಅರ್ಜಿಗಳು ಸಲ್ಲಿಕೆಯಾಗಿದ್ದು, 1,615 ಅರ್ಜಿಗಳಿಗೆ ಮೊದಲ ಹಂತದ ಪ್ರೋತ್ಸಾಹಧನಕ್ಕೆ ಅನುಮೋದನೆ ದೊರೆತಿದೆ. ಆದರೆ ಕೇವಲ 39 ಫಲಾನುಭವಿಗಳಿಗೆ ಮಾತ್ರ ಹಣ ಪಾವತಿಯಾಗಿದ್ದು, 3,997 ಅರ್ಜಿಗಳು ಇನ್ನೂ ಬಾಕಿ ಉಳಿದಿವೆ. 909 ಅರ್ಜಿಗಳು ಅಪೂರ್ಣ ದಾಖಲೆಗಳ ಕಾರಣದಿಂದ ಬಾಕಿಯಾಗಿವೆ.
ಹೊಸ ಸಾಲಿನಲ್ಲೂ ಅದೇ ಕಥೆ
2026-27ನೇ ಸಾಲಿನಲ್ಲಿ ಇದುವರೆಗೆ 2,194 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 61 ಅರ್ಜಿಗಳಿಗೆ ಅನುಮೋದನೆ ದೊರೆತಿದ್ದರೂ, ಮೊದಲ ಕಂತಿನ ಹಣ ಯಾರಿಗೂ ಪಾವತಿಯಾಗಿಲ್ಲ. 392 ಅರ್ಜಿಗಳು ಅಪೂರ್ಣ ದಾಖಲೆಗಳ ಕಾರಣದಿಂದ ಬಾಕಿ ಉಳಿದಿವೆ.
ಅನುದಾನ ಹೆಚ್ಚಳವಾಗದಿರುವುದು ದೊಡ್ಡ ಸಮಸ್ಯೆ
ಅಂತರ್ಜಾತಿ ವಿವಾಹಗಳ ಸಾಮಾಜಿಕ ಸ್ವೀಕಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಏರಿಕೆಯಾಗಿದೆ. ಆದರೆ, ಅರ್ಜಿಗಳ ಸಂಖ್ಯೆಗೆ ಅನುಗುಣವಾಗಿ ಯೋಜನೆಯ ಅನುದಾನ ಹೆಚ್ಚಳವಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಹೀಗಾಗಿ ಹಿಂದಿನ ವರ್ಷದ ಅರ್ಜಿಗಳೇ ಬಾಕಿ ಉಳಿಯುತ್ತಿರುವಾಗ ಹೊಸ ಅರ್ಜಿಗಳ ವಿಲೇವಾರಿಯೂ ವಿಳಂಬವಾಗುತ್ತಿದೆ.
2018-19ರಲ್ಲಿ ₹64.27 ಕೋಟಿ, 2019-20ರಲ್ಲಿ ₹90.42 ಕೋಟಿ, 2020-21ರಲ್ಲಿ ₹99.9 ಕೋಟಿ, 2021-22ರಲ್ಲಿ ₹171.84 ಕೋಟಿ ಹಾಗೂ 2022-23ರಲ್ಲಿ ₹94.62 ಕೋಟಿ ಅನುದಾನ ಮೀಸಲಿಡಲಾಗಿತ್ತು. ಆದರೆ ವಾರ್ಷಿಕವಾಗಿ ಬರುತ್ತಿರುವ ಅರ್ಜಿಗಳನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಲು ಈ ಮೊತ್ತ ಸಾಕಾಗುತ್ತಿಲ್ಲ ಎಂಬ ಪ್ರಶ್ನೆ ಎದುರಾಗಿದೆ.
2026-27ನೇ ಸಾಲಿನ ಈವರೆಗಿನ ಅಂತರ್ಜಾತಿ ಪ್ರೋತ್ಸಾಹಧನ ಯೋಜನೆಯ ವಿವರ
- 2026-27ನೇ ಸಾಲಿನಲ್ಲಿ ಸಲ್ಲಿಕೆಯಾದ ಅರ್ಜಿಗಳು: 2,194
- ಮೊದಲ ಕಂತಿಗೆ ಅನುಮೋದನೆ: 61
- ಪ್ರೋತ್ಸಾಹ ಧನ ಪಾವತಿ: 00
- ಅಪೂರ್ಣ ಅರ್ಜಿಗಳು: 392
- ತಿರಸ್ಕಾರಗೊಂಡ ಅರ್ಜಿಗಳು: 02
ಸಾಮಾಜಿಕ ಧೈರ್ಯಕ್ಕೆ ಆರ್ಥಿಕ ಬೆಂಬಲ ಬೇಕಿದೆ
ಅಂತರ್ಜಾತಿ ವಿವಾಹದ ನಿರ್ಧಾರ ಕೈಗೊಳ್ಳುವ ಜೋಡಿಗಳು ಕೆಲವೊಮ್ಮೆ ಕುಟುಂಬದ ವಿರೋಧ, ಸಾಮಾಜಿಕ ಒತ್ತಡ, ಬಹಿಷ್ಕಾರ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಾರೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಪ್ರೋತ್ಸಾಹಧನ ಕೇವಲ ಹಣಕಾಸಿನ ನೆರವಲ್ಲ; ಅದು ಹೊಸ ದಂಪತಿಗಳ ನಿರ್ಧಾರಕ್ಕೆ ಸಾಮಾಜಿಕ ಬೆಂಬಲದ ಸಂಕೇತವೂ ಹೌದು.
ಆದರೆ ಅರ್ಜಿ ಸಲ್ಲಿಸಿ ಅನುಮೋದನೆಗಾಗಿ, ನಂತರ ಹಣಕ್ಕಾಗಿ ದೀರ್ಘಕಾಲ ಕಾಯಬೇಕಾದ ಪರಿಸ್ಥಿತಿ ಉಂಟಾದರೆ ಯೋಜನೆಯ ಮೂಲ ಉದ್ದೇಶವೇ ದುರ್ಬಲವಾಗುತ್ತದೆ. ಹೀಗಾಗಿ ಬಾಕಿ ಅರ್ಜಿಗಳ ತ್ವರಿತ ವಿಲೇವಾರಿ, ದಾಖಲೆ ಪ್ರಕ್ರಿಯೆ ಸರಳೀಕರಣ ಹಾಗೂ ಅಗತ್ಯ ಅನುದಾನ ಹೆಚ್ಚಳಕ್ಕೆ ಸರ್ಕಾರ ಗಮನಹರಿಸಬೇಕಿದೆ.

ದಿನದ ಸುದ್ದಿ
ಅಪೌಷ್ಟಿಕತೆ ನಿವಾರಣೆಗೆ ಹೊಸ ಹೆಜ್ಜೆ; ಶಾಲೆ ಮುಗಿಯುವ ಮುನ್ನ ಮಕ್ಕಳಿಗೆ ಪೌಷ್ಟಿಕ ತಿನಿಸು
ಸುದ್ದಿದಿನ,ಹೂವಿನಹಡಗಲಿ: ಗಣಿ ಚಟುವಟಿಕೆಗಳಿಂದ ಬಾಧಿತ ಪ್ರದೇಶಗಳ ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆ ಸುಧಾರಣೆಗೆ ಕರ್ನಾಟಕ ಗಣಿ ಮತ್ತು ಪರಿಸರ ಪುನಸ್ಥಾಪನೆ ನಿಗಮ (ಕೆಎಂಆರ್ಸಿಇ) ಹೊಸ ಹೆಜ್ಜೆ ಇಟ್ಟಿದೆ. ವಿಜಯನಗರ, ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳಿಗೆ ಶೀಘ್ರದಲ್ಲೇ ಸಂಜೆ ಸ್ನ್ಯಾಕ್ಸ್ ವಿತರಿಸುವ ಯೋಜನೆ ರೂಪಿಸಲಾಗಿದೆ.
ಈ ಸಂಬಂಧ ನಾಲ್ಕು ಜಿಲ್ಲೆಗಳ ಜಿಲ್ಲಾ ಪಂಚಾಯಿತಿಗಳ ಮೂಲಕ ಸಂಬಂಧಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ರವಾನೆಯಾಗಿದ್ದು, ಯೋಜನೆಯನ್ನು ಅನುಷ್ಠಾನಗೊಳಿಸಲು ಸಿದ್ಧತೆ ಆರಂಭಿಸಲಾಗಿದೆ. ಹೂವಿನಹಡಗಲಿ ತಾಲೂಕಿನಲ್ಲಿ ಈಗಾಗಲೇ ಮುಖ್ಯಗುರುಗಳ ಸಭೆ ನಡೆಸಿ ಅಗತ್ಯ ಕ್ರಮಗಳ ಕುರಿತು ಚರ್ಚಿಸಲಾಗಿದೆ.
http://Visit : www.suddidina.com
ಅಪೌಷ್ಟಿಕತೆ ತಡೆಗೆ ಪೌಷ್ಟಿಕ ಆಹಾರ
ಗಣಿ ಬಾಧಿತ ಪ್ರದೇಶಗಳಲ್ಲಿ ಮಕ್ಕಳಿಗೆ ಹೆಚ್ಚುವರಿ ಪೌಷ್ಟಿಕ ಆಹಾರ ಒದಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಸಂಜೆ ಸಮಯದಲ್ಲಿ ಮಕ್ಕಳಿಗೆ ನೆನೆಸಿದ ಶೇಂಗಾ, ಮೊಳಕೆಯೊಡೆದ ಹೆಸರುಕಾಳು, ಚಕ್ಕಿ ಸೇರಿದಂತೆ ವಿವಿಧ ಪೌಷ್ಟಿಕ ಆಹಾರಗಳನ್ನು ನೀಡಲು ಉದ್ದೇಶಿಸಲಾಗಿದೆ. ಕೆಲವು ದಿನಗಳಲ್ಲಿ ಮೂಸಂಬಿ, ಕಿತ್ತಳೆ, ಸಪೋಟ ಮತ್ತಿತರ ಹಣ್ಣುಗಳನ್ನೂ ವಿತರಿಸುವ ವ್ಯವಸ್ಥೆ ಇರಲಿದೆ.
ಮಕ್ಕಳಲ್ಲಿ ಕಂಡುಬರುತ್ತಿರುವ ಅಪೌಷ್ಟಿಕತೆ ಹಾಗೂ ಪೌಷ್ಟಿಕಾಂಶದ ಕೊರತೆ ನಿವಾರಣೆಗೆ ಪೂರಕವಾಗುವಂತೆ ಈ ಯೋಜನೆ ರೂಪಿಸಲಾಗಿದೆ. ಶಾಲೆಯಲ್ಲಿ ಶಿಕ್ಷಣದ ಜತೆಗೆ ಮಕ್ಕಳ ಆರೋಗ್ಯಕ್ಕೂ ಆದ್ಯತೆ ನೀಡುವ ಪ್ರಯತ್ನ ಇದಾಗಿದೆ.
24,352 ಮಕ್ಕಳಿಗೆ ಪ್ರಯೋಜನ
ಹೂವಿನಹಡಗಲಿ ತಾಲೂಕಿನಲ್ಲಿ 138 ಸರ್ಕಾರಿ ಪ್ರಾಥಮಿಕ ಹಾಗೂ 27 ಪ್ರೌಢಶಾಲೆಗಳ ಒಟ್ಟು 24,352 ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಯೋಜನೆಗಾಗಿ ಕೆಎಂಆರ್ಸಿಇ ವತಿಯಿಂದ ₹10.64 ಕೋಟಿಗೂ ಹೆಚ್ಚು ಮೊತ್ತದ ಅನುದಾನ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಮೂರು ವರ್ಷಗಳ ಅವಧಿಗೆ ಒಟ್ಟು ಸುಮಾರು ₹33 ಕೋಟಿ ಆಡಳಿತಾತ್ಮಕ ಮಂಜೂರಾತಿ ದೊರೆತಿದ್ದು, ಅಡುಗೆದಾರರು ಮತ್ತು ಸಹಾಯಕಿಯರ ವೆಚ್ಚಕ್ಕೂ ಪ್ರತ್ಯೇಕ ಅನುದಾನ ಮೀಸಲಿಡಲಾಗಿದೆ. ಇದರಿಂದ ಯೋಜನೆ ಕೇವಲ ತಾತ್ಕಾಲಿಕ ಕ್ರಮವಾಗದೆ ನಿರಂತರವಾಗಿ ನಡೆಯುವ ನಿರೀಕ್ಷೆ ಮೂಡಿದೆ.
SATS ಮಾಹಿತಿ ಅಪ್ಡೇಟ್ ಸವಾಲು
ಆದರೆ ಯೋಜನೆ ಅನುಷ್ಠಾನಕ್ಕೆ ವಿದ್ಯಾರ್ಥಿಗಳ ನಿಖರ ಸಂಖ್ಯೆಯೇ ಪ್ರಮುಖ ಆಧಾರವಾಗಿದ್ದು, SATS ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಮಾಹಿತಿ ಅಪ್ಡೇಟ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಹೊಸ ಪ್ರವೇಶ, ಶಾಲೆ ಬದಲಾವಣೆ ಸೇರಿದಂತೆ ಹಲವು ಕಾರಣಗಳಿಂದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಬದಲಾವಣೆಯಾಗಿರುವುದರಿಂದ ಅಂತಿಮ ಪಟ್ಟಿ ಸಿದ್ಧಪಡಿಸುವುದು ಸವಾಲಾಗಿದೆ.
ಸೆಪ್ಟೆಂಬರ್ 5ರೊಳಗೆ ಮಾಹಿತಿ ನವೀಕರಣ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ನಂತರ ಸಂಜೆ ಸ್ನ್ಯಾಕ್ಸ್ ವಿತರಣೆಗೆ ವೇಗ ಸಿಗುವ ಸಾಧ್ಯತೆಯಿದೆ.
ಶಿಕ್ಷಕರಿಗೆ ಹೆಚ್ಚುವರಿ ಹೊರೆ?
ಯೋಜನೆಯ ಉದ್ದೇಶ ಉತ್ತಮವಾಗಿದ್ದರೂ, ಅನುಷ್ಠಾನದ ಹೊಣೆಗಾರಿಕೆ ಶಿಕ್ಷಕರ ಮೇಲೆಯೇ ಹೆಚ್ಚಾಗುವ ಆತಂಕವೂ ವ್ಯಕ್ತವಾಗಿದೆ. ಈಗಾಗಲೇ ಎಐ ಹಾಜರಾತಿ, ಬಿಸಿಯೂಟ, ಮೊಟ್ಟೆ, ಬಾಳೆಹಣ್ಣು ಹಾಗೂ ವಿವಿಧ ಡಿಜಿಟಲ್ ದಾಖಲೆಗಳ ನಿರ್ವಹಣೆಯಲ್ಲಿ ಶಿಕ್ಷಕರು ನಿರತರಾಗಿದ್ದಾರೆ. ನೆಟ್ವರ್ಕ್ ಸಮಸ್ಯೆಯೂ ಕೆಲವೊಮ್ಮೆ ತೊಂದರೆ ನೀಡುತ್ತಿದೆ.
ಶಾಲೆ ಮುಗಿಯುವ ವೇಳೆಯಲ್ಲಿ ಸ್ನ್ಯಾಕ್ಸ್ ವಿತರಣೆ, ದಾಖಲಾತಿ ಮತ್ತು ಮೇಲ್ವಿಚಾರಣೆ ಮತ್ತೊಂದು ಜವಾಬ್ದಾರಿಯಾಗಬಹುದು ಎಂಬುದು ಶಿಕ್ಷಕರ ಅಭಿಪ್ರಾಯ. ಹೀಗಾಗಿ ಮಕ್ಕಳಿಗೆ ಪೌಷ್ಟಿಕ ಆಹಾರ ತಲುಪಿಸುವ ಯೋಜನೆಯ ಜತೆಗೆ ಶಿಕ್ಷಕರ ಮೇಲಿನ ಆಡಳಿತಾತ್ಮಕ ಒತ್ತಡ ಕಡಿಮೆ ಮಾಡುವ ವ್ಯವಸ್ಥೆಯೂ ಅಗತ್ಯವಾಗಿದೆ.
ವಾರದ ಆರು ದಿನಗಳಲ್ಲಿ ವಿವಿಧ ಪೌಷ್ಟಿಕ ತಿನಿಸುಗಳು ಹಾಗೂ ಶನಿವಾರ ಹಣ್ಣು ವಿತರಿಸುವ ಉದ್ದೇಶವಿದ್ದು, ಸರಕಾರದ ಅಂತಿಮ ಸೂಚನೆ ಬಂದ ಬಳಿಕ ಯೋಜನೆಗೆ ಚಾಲನೆ ಸಿಗಲಿದೆ.

ಕ್ರೀಡೆ
ಕಲ್ಲು-ಮುಳ್ಳಿನ ದಾರಿಯಲ್ಲೂ ನಿಲ್ಲದ ಹೆಜ್ಜೆ; ತಾಯಿಯ ಛಲಕ್ಕೆ ಮ್ಯಾರಥಾನ್ನಲ್ಲಿ ಪ್ರಥಮ ಸ್ಥಾನ
ಸುದ್ದಿದಿನ,ಮುಂಬಯಿ: ಬದುಕಿನಲ್ಲಿ ಎದುರಾಗುವ ಸಂಕಷ್ಟಗಳು ಕೆಲವೊಮ್ಮೆ ಮನುಷ್ಯನನ್ನು ಕುಗ್ಗಿಸುತ್ತವೆ. ಆದರೆ ತಾಯಿಯೊಬ್ಬಳಿಗೆ ಮಕ್ಕಳ ಭವಿಷ್ಯದ ಕನಸು ದೊಡ್ಡದಾಗಿದ್ದರೆ, ಆಕೆಯ ಮುಂದೆ ನೋವು, ಬಡತನ, ಅಡೆತಡೆ ಯಾವುದೂ ನಿಲ್ಲುವುದಿಲ್ಲ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬಾಜೋಗೈನ 47 ವರ್ಷದ ರಮಾಬಾಯಿ ರಣವೀರ್ ಅವರ ಕಥೆ ಇದಕ್ಕೆ ಜೀವಂತ ಸಾಕ್ಷಿಯಾಗಿದೆ. ಪತಿಯ ಅಕಾಲಿಕ ಅಗಲಿಕೆಯ ಬಳಿಕ ಇಬ್ಬರು ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ಹೋರಾಟ ನಡೆಸುತ್ತಿರುವ ರಮಾಬಾಯಿ, ಬರಿಗಾಲಿನಲ್ಲಿ ಮ್ಯಾರಥಾನ್ ಓಡಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.
http://Visit : www.suddidina.com
ಕೂಲಿ ಕೆಲಸದಿಂದ ಅಡುಗೆ ಕೆಲಸದವರೆಗೆ
ಮುಂಬಯಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡ ಬಳಿಕ ರಮಾಬಾಯಿ ಕುಟುಂಬದ ಜವಾಬ್ದಾರಿಯನ್ನು ಸಂಪೂರ್ಣವಾಗಿ ತಮ್ಮ ಹೆಗಲ ಮೇಲೆ ಹೊತ್ತರು. ಗದ್ದೆಗಳಲ್ಲಿ ಕೂಲಿ ಕೆಲಸ ಮಾಡುತ್ತಾ ಮಕ್ಕಳನ್ನು ಬೆಳೆಸಿದ ಅವರು, ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಅಂಬಾಜೋಗೈನ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವೊಂದರಲ್ಲಿ ಅಡುಗೆ ಕೆಲಸಕ್ಕೂ ಸೇರಿದರು.
ದಿನವಿಡೀ ಅಡುಗೆ ಮಾಡುವುದು, ಪಾತ್ರೆ ತೊಳೆಯುವುದು ಸೇರಿದಂತೆ ದುಡಿಮೆಯ ನಡುವೆಯೂ ಅವರ ಮನಸ್ಸಿನಲ್ಲಿದ್ದದ್ದು ಒಂದೇ ಕನಸು—ತಮ್ಮ ಇಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಸ್ವಾವಲಂಬಿಗಳನ್ನಾಗಿ ಮಾಡುವುದು.
₹3 ಸಾವಿರಕ್ಕಾಗಿ ಆರಂಭವಾದ ಓಟ
ಮಕ್ಕಳ ವಿದ್ಯಾಭ್ಯಾಸದ ಅಗತ್ಯಕ್ಕೆ ಪುಸ್ತಕಗಳನ್ನು ಖರೀದಿಸಲು ಹಣ ಬೇಕಾಗಿತ್ತು. ಇದೇ ಸಂದರ್ಭದಲ್ಲಿ ‘ಅಮೃತ್ ದೌಡ್’ ಮ್ಯಾರಥಾನ್ ಕುರಿತು ಅವರಿಗೆ ಮಾಹಿತಿ ದೊರೆಯಿತು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ₹3 ಸಾವಿರ ನೀಡಲಾಗುತ್ತದೆ ಎಂಬುದು ತಿಳಿದ ತಕ್ಷಣ ರಮಾಬಾಯಿ ಓಟದಲ್ಲಿ ಭಾಗವಹಿಸಲು ನಿರ್ಧರಿಸಿದರು.
ಯುವಕರು ಟ್ರ್ಯಾಕ್ಸೂಟ್ ಮತ್ತು ಶೂ ಧರಿಸಿ ಓಟಕ್ಕೆ ಸಜ್ಜಾಗಿದ್ದರೆ, ರಮಾಬಾಯಿ ಮಾತ್ರ ಸಾಮಾನ್ಯ ಸೀರೆಯಲ್ಲೇ ಸ್ಪರ್ಧೆಯ ಕಣಕ್ಕಿಳಿದರು. ಆರಂಭದಲ್ಲಿ ಕಾಲಿಗೆ ಚಪ್ಪಲಿ ಇದ್ದರೂ ಓಟದ ವೇಗ ಹೆಚ್ಚಾದಂತೆ ಅದು ಜಾರಲಾರಂಭಿಸಿತು.
ಚಪ್ಪಲಿ ಬಿಟ್ಟು ಬರಿಗಾಲಿನಲ್ಲಿ ಓಟ
ಗುರಿ ಮುಟ್ಟಬೇಕೆಂಬ ಛಲದ ಮುಂದೆ ಚಪ್ಪಲಿ ಅಡ್ಡಿಯಾಗಬಾರದು ಎಂದು ನಿರ್ಧರಿಸಿದ ರಮಾಬಾಯಿ, ಚಪ್ಪಲಿಯನ್ನು ಕೈಗೆತ್ತಿಕೊಂಡು ಬರಿಗಾಲಿನಲ್ಲೇ ಓಡತೊಡಗಿದರು. ರಸ್ತೆಯ ಕಲ್ಲು-ಮುಳ್ಳುಗಳು ಕಾಲಿಗೆ ಚುಚ್ಚಿದರೂ ಅವರು ಓಟ ನಿಲ್ಲಿಸಲಿಲ್ಲ.
ಸೀರೆಯ ಅಂಚನ್ನು ಸರಿಪಡಿಸಿಕೊಳ್ಳುತ್ತಾ, ನೋವನ್ನು ಮರೆತು ಗುರಿಯತ್ತ ಮುನ್ನುಗ್ಗಿದ ಅವರು ಎಲ್ಲ ಸ್ಪರ್ಧಿಗಳನ್ನು ಹಿಂದಿಕ್ಕಿ ಮೊದಲಿಗರಾಗಿ ಫಿನಿಶ್ ಲೈನ್ ತಲುಪಿದರು. ಈ ಗೆಲುವಿನ ಹಿಂದೆ ಬಹುಮಾನದ ಹಣಕ್ಕಿಂತಲೂ ದೊಡ್ಡದಾದ ಒಂದು ಕನಸು—ಮಕ್ಕಳ ಭವಿಷ್ಯ—ಇತ್ತು.
ತಾಯಿಯ ಹಾದಿಯಲ್ಲೇ ಮಗಳ ಗೆಲುವು
ಈ ಮ್ಯಾರಥಾನ್ನಲ್ಲಿ ರಮಾಬಾಯಿಯ ಮಗಳು ಪೂಜಾ ಕೂಡ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುವುದು ವಿಶೇಷ. ತಾಯಿಯ ಪರಿಶ್ರಮದಿಂದ ಪ್ರೇರಣೆ ಪಡೆದ ಪೂಜಾ, ಭವಿಷ್ಯದಲ್ಲಿ ಪೊಲೀಸ್ ಅಧಿಕಾರಿಯಾಗುವ ಸಂಕಲ್ಪ ಮಾಡಿದ್ದಾರೆ. ಮತ್ತೊಬ್ಬ ಮಗಳು ಬ್ಯಾಂಕಿಂಗ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.
ಪೂಜಾಳ ಪರಿಶ್ರಮ ಮತ್ತು ರಮಾಬಾಯಿಯ ತ್ಯಾಗವನ್ನು ಗಮನಿಸಿದ ತರಬೇತಿ ಅಕಾಡೆಮಿಯ ನಿರ್ದೇಶಕರು ಪೂಜಾಳ ಶಿಕ್ಷಣ ಶುಲ್ಕವನ್ನು ಸಂಪೂರ್ಣ ಮನ್ನಾ ಮಾಡಿದ್ದಾರೆ. ಹೀಗಾಗಿ ಒಂದು ಮ್ಯಾರಥಾನ್ ಗೆಲುವು ಕೇವಲ ₹3 ಸಾವಿರದ ಬಹುಮಾನಕ್ಕೆ ಸೀಮಿತವಾಗದೆ, ಕುಟುಂಬದ ಭವಿಷ್ಯಕ್ಕೆ ಹೊಸ ಆಶಾಕಿರಣವನ್ನೇ ಮೂಡಿಸಿದೆ.

-
ದಿನದ ಸುದ್ದಿ6 days agoಮಹಿಳೆಯರ ಉಚಿತ ಪ್ರಯಾಣದ ನಡುವೆ ನಿಗಮಗಳಿಗೆ ಹಣಕಾಸಿನ ಸಂಕಷ್ಟ; ವೇತನ, ಡೀಸೆಲ್ ಖರೀದಿಗೂ ಎದುರಾಗುತ್ತಿದೆ ಒತ್ತಡ
-
ದಿನದ ಸುದ್ದಿ6 days agoಸಾಮಾಜಿಕ ಬದಲಾವಣೆಗೆ ಮಾದರಿಯಾಗಬೇಕಿದ್ದ ಯೋಜನೆಗೆ ದಾಖಲೆ, ಅನುದಾನ ಕೊರತೆ ಅಡ್ಡಿ; ಸಾವಿರಾರು ಅರ್ಜಿಗಳು ಬಾಕಿ
-
ದಿನದ ಸುದ್ದಿ6 days agoಭದ್ರಾ ಜಲಾಶಯ: ಮಲೆನಾಡಿನ ಮಳೆಯಿಂದ ಬಯಲುಸೀಮೆಯ ಹಸಿರಿನವರೆಗೆ… ಲಕ್ಷಾಂತರ ಜನರ ಬದುಕಿನ ಜಲನಾಡಿ!
-
ಸಿನಿ ಸುದ್ದಿ6 days agoಅಭಿಮಾನಿಗಳ ಸಂಭ್ರಮದಿಂದ ದೂರ ಕಿಚ್ಚನ ಬರ್ತ್ಡೇ; 53ನೇ ವಸಂತದಲ್ಲಿ ಸುದೀಪ್ ಸಿನಿಮಾ ಸರ್ಪ್ರೈಸ್ಗೆ ಕೌಂಟ್ಡೌನ್!
-
ನಿತ್ಯ ಭವಿಷ್ಯ6 days agoಮೇಷದಿಂದ ಮೀನದವರೆಗೆ: ಉದ್ಯೋಗ, ಹಣಕಾಸು, ಕುಟುಂಬ, ಆರೋಗ್ಯದಲ್ಲಿ ಏನಿದೆ?


