Connect with us

ದಿನದ ಸುದ್ದಿ

ಮಕ್ಕಳ ಕೈಗೆ ವಾಹನ ಕೊಡುವ ಮುನ್ನ ನೂರು ಬಾರಿ ಯೋಚಿಸಿ !

Published

on

ಪುಣೆ | ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಪೋರ್ಷೆ ಕಾರ್
  • ಶರೀಫ್ ಎ ಎ, ವಕೀಲರು

ದಿನೆಂಟು ವರ್ಷ ತುಂಬದ ಮತ್ತು ಚಾಲನಾ ಪರವಾನಗಿ ಪಡೆಯದ ಮಕ್ಕಳ ಕೈಗೆ ಮೋಟಾರು ವಾಹನ ಕೊಡುವ ಮತ್ತು ತಮ್ಮ ಮಕ್ಕಳ ವಾಹನ ಚಾಲನಾ ಕೌಶಲ್ಯದ ಬಗ್ಗೆ ಹೆಮ್ಮೆಯಿಂದ ಬೀಗುವ ಪೋಷಕರನ್ನು ಬಹಳ ನೋಡಿದ್ದೇನೆ. ಕೇವಲ ಶ್ರೀಮಂತರ ನಡುವೆ ಮಾತ್ರ ಅಲ್ಲ, ಮಧ್ಯಮ ಮತ್ತು ಬಡ ವರ್ಗದಲ್ಲೂ ಸಹ ಇಂತಹ ಹೊಣೆಗೇಡಿ ಪೋಷಕರು ಇದ್ದಾರೆ. ಇಂತವರ ಬೇಜವಾಬ್ದಾರಿತನ ತಂದೊಡ್ದುವ ಅನಾಹುತ ಮತ್ತು ಪರಿಣಾಮಗಳ ಬಗ್ಗೆ ಸ್ವಲ್ಪ ನೋಡೋಣ.

ಬಾಲ ನ್ಯಾಯ ಮಂಡಳಿಯ ಪ್ರಧಾನ ನ್ಯಾಯಿಕ ದಂಡಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಧರ್ಬದಲ್ಲಿ ಹಲವು ರಸ್ತೆ ಅಪಘಾತ ಪ್ರಕರಣಗಳು ನನ್ನ ಮುಂದೆ ವಿಚಾರಣೆಗೆ ಬಂದಿದ್ದವು. ಹದಿನೆಂಟು ವರ್ಷ ತುಂಬದ ಮಕ್ಕಳು ಅಜಾಗರೂಕತೆ ಅಥವಾ ನಿರ್ಲಕ್ಷ್ಯತನದಿಂದ ಬೈಕ್, ಕಾರು ಮುಂತಾದ ವಾಹನ ಚಲಾಯಿಸಿ ಯಾರೋ ನತದೃಷ್ಟರ ಜೀವ ತೆಗೆದ ಅಪರಾಧಕ್ಕೆ ಅಥವಾ ಗಂಭೀರವಾಗಿ ಗಾಯಪಡಿಸಿದಕ್ಕೆ ದಾಖಲಾದ ಪ್ರಕರಣಗಳವು. ಅಂತಹ ಪ್ರಕರಣಗಳಲ್ಲಿ ಸಾಮಾನ್ಯವಾಗಿ ವಾಹನ ಚಲಾಯಿಸಿದ ಬಾಲಕನನ್ನು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಎಂದು ಪರಿಗಣಿಸಿ ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರು ಪಡಿಸಲಾಗುತ್ತದೆ. ಬಾಲಕನ ಪೋಷಕರ ವಿರುದ್ಧ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 199A ರ ಅಡಿಯಲ್ಲಿ ಮೂರು ವರ್ಷಗಳವರೆಗೆ ವಿಸ್ತರಿಸ ಬಹುದಾದ ಕಾರಾಗೃಹ ವಾಸದಿಂದ ಮತ್ತು ಇಪ್ಪತೈದು ಸಾವಿರ ರೂಪಾಯಿ ಜುಲ್ಮಾನೆಯ ಶಿಕ್ಷೆಗೆ ಗುರಿಪಡಿಸ ಬಹುದಾದ ಅಪರಾಧಕ್ಕೆ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗುತ್ತದೆ.

ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 199A ರ ಅಡಿಯಲ್ಲಿ ವಾಹನ ಚಾಲನೆಗೆ ಸಂಬಂಧಿಸಿದಂತೆ ಅಪ್ರಾಪ್ತರು ಎಸಗುವ ಅಪರಾಧಗಳಿಗೆ ಪೋಷಕರೇ ನೇರ ಹೊಣೆಗಾರರು ಎಂದು ಪರಿಭಾವಿಸಲಾಗುತ್ತದೆ. ಹಾಗಾಗಿ ಬಾಲ ನ್ಯಾಯ ಮಂಡಳಿಯ ಮುಂದಿರುವ ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿ ದಂಡ ವಿಧಿಸಿ ಕಳುಹಿಸಿದರೂ ಕಾನೂನು ಕುಣಿಕೆಯಿಂದ ತಪ್ಪಿಸಿ ಕೊಳ್ಳಲು ಪೋಷಕರಿಗೆ ಸಾಧ್ಯವಿರುವುದಿಲ್ಲ. ಜೆ .ಎಂ. ಎಫ್. ಸಿ ನ್ಯಾಯಾಲಯದಲ್ಲಿ ದಂಡ ಮತ್ತು ಜೈಲು ಶಿಕ್ಷೆಯ ತೂಗುಗತ್ತಿ ಒಂದೆಡೆಯಾದರೆ ಮೋಟಾರು ವಾಹನ ಅಪಘಾತ ವಿಮಾ ಪರಿಹಾರ ನ್ಯಾಯಾಧಿಕರಣದ ಮುಂದೆ ಸಂತ್ರಸ್ತರು ಅಥವಾ ಗಾಯಾಳು ವಿಮಾ ಪರಿಹಾರ ಕೋರಿ ದಾಖಲಿಸುವ ಪ್ರಕರಣ ಮತ್ತೊಂದೆಡೆ.

ಅಪ್ರಾಪ್ತ ವಯಸ್ಕರ ಕೈಗೆ ವಾಹನ ಕೊಡುವುದು, ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದು ಇವೆಲ್ಲವೂ ವಿಮಾ ಷರತ್ತಿನ ಉಲ್ಲಂಘನೆ. ಹಾಗಾಗಿ ಅಪಘಾತದಲ್ಲಿ ಮೃತಪಟ್ಟವರ ವಾರಸುದಾರರು ಅಥವಾ ಗಾಯಾಳು ಅಪ್ರಾಪ್ತ ವಯಸ್ಕ ಚಾಲನೆ ಮಾಡಿದ ವಾಹನದ ವಿಮಾ ಕಂಪನಿಯಿಂದ ಪರಿಹಾರ ಪಡೆಯಲು ಸಾಧ್ಯವಾಗುವುದಿಲ್ಲ. ಅಂತಹ ಪ್ರಕರಣಗಳಲ್ಲಿ ಪರಿಹಾರ ನೀಡುವ ಸಂಪೂರ್ಣ ಹೊಣೆ ವಾಹನ ಮಾಲೀಕ ಅಥವಾ ಅಪ್ರಾಪ್ತನ ಪೋಷಕರ ಮೇಲೆ ಬೀಳಲಿದೆ. ನ್ಯಾಯಾಧಿಕರಣ ಆದೇಶಿಸುವ ಪರಿಹಾರದ ಮೊತ್ತ ಮೃತರ ಅಥವಾ ಗಾಯಾಳುಗಳ ವೃತ್ತಿ, ಆದಾಯ ಮತ್ತು ಪ್ರಾಯವನ್ನು ಆಧರಿಸಿ ಲಕ್ಷಾಂತರ ರೂಪಾಯಿಗಳವರೆಗೂ ಬರಬಹುದು, ಕೋಟಿ ರೂಪಾಯಿ ಮೊತ್ತ ದಾಟಲೂ ಬಹುದು.

ಮೋಟಾರು ವಾಹನ ಅಪಘಾತ ವಿಮಾ ಪರಿಹಾರ ನ್ಯಾಯಾಧಿಕರಣದ ಪೀಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ನನ್ನ ಮುಂದೆ ಬಂದ ಒಂದು ಪ್ರಕರಣದ ಘಟನೆ ಹೀಗಿತ್ತು. 15 ವರ್ಷದ ಹುಡುಗ ಬೈಕ್ ಚಾಲನೆ ಮಾಡಿ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರಿಗೆ ಡಿಕ್ಕಿ ಪಡಿಸಿ ಆ ಸಾಫ್ಟ್ವೇರ್ ಇಂಜಿನಿಯರ್ ಸಾವಿಗೆ ಕಾರಣಕರ್ತನಾಗುತ್ತಾನೆ. ಆ ಪ್ರಕರಣದಲ್ಲಿ ಮೃತನ ವಾರಸುದಾರರಿಗೆ ಎಂಬತ್ತು ಲಕ್ಷ ಹಣ ಪಾವತಿಸಲು ನ್ಯಾಯಾಧಿಕರಣದಿಂದ ಆದೇಶವಾಗುತ್ತದೆ. ಅಪಘಾತಕ್ಕೆ ಕಾರಣಕರ್ತ ನಾದ ಬಾಲಕನ ತಂದೆ ಶಾಲಾ ಶಿಕ್ಷಕ.

ಹಣ ಪಾವತಿಸಲು ಯಾವುದೇ ದಾರಿ ಕಾಣದೆ ಕೊನೆಗೆ ಜೈಲಿಗೆ ಹೋಗುವುದು ಖಚಿತವಾದಾಗ ವಾಸವಿದ್ದ ಮನೆ ಮಾರಿ ಹಣ ತಂದು ನ್ಯಾಯಾಲಯದಲ್ಲಿ ಕಟ್ಟುತ್ತಾರೆ. ಅಪ್ರಾಪ್ತ ಬಾಲಕರು ಮಾಡುವ ತಪ್ಪಿನಿಂದ ಪೋಷಕರು ದಂಡ ತೆರಬೇಕಾಗಿ ಬಂದ ಇಂತಹ ಹಲವು ಪ್ರಕರಣಗಳನ್ನು ನನ್ನ ವೃತ್ತಿ ಜೀವನದಲ್ಲಿ ನೋಡಿದ್ದೇನೆ. ಮೊನ್ನೆ ಮೇ 19 ರಂದು ಪುಣೆಯಲ್ಲಿ 17 ವರ್ಷದ ಅಪ್ರಾಪ್ತ ಬಾಲಕನೊಬ್ಬ ಮದ್ಯದ ಅಮಲಿನಲ್ಲಿ ಪೋರ್ಷೆ ಕಾರ್ ಚಲಾಯಿಸಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿ ಅನೀಶ್ ಅವಧಿಯಾ ಮತ್ತು ಅಶ್ವಿನಿ ಕೋಷ್ಟಾ ಎಂಬ ಇಬ್ಬರು ಸಾಫ್ಟ್ವೇರ್ ಉದ್ಯೋಗಿಗಳು ಸಾವನ್ನಪ್ಪಿದ ದುರಂತ ಘಟನೆ ನಮ್ಮ ಕಣ್ಣ ಮುಂದೆಯೇ ಇದೆ. (ಕೃಪೆ : ಶಫೀರ್ ಎ .ಎ ಫೇಸ್ ಬುಕ್ ಪೇಜ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದ್ವಿತೀಯ ಪಿಯುಸಿ 3 ನೇ ಪರೀಕ್ಷೆ ; ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ:ಜೂನ್ 24 ರಿಂದ ಜುಲೈ 5 ರವರೆಗೆ ನಗರದಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ 3 ನೇ ಪರೀಕ್ಷೆ ನಡೆಯಲಿದ್ದು ಸುಗಮ ಪರೀಕ್ಷೆಗಾಗಿ ಮತ್ತು ಪರೀಕ್ಷಾ ಅವ್ಯವಹಾರ ತಡೆಗಟ್ಟಲು ಜಿಲ್ಲಾ ವ್ಯಾಪ್ತಿಯ 8 ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 144ಸೆಕ್ಷನ್ ಜಾರಿಗೊಳಿಸಿ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿ ಡಾ.ವೆಂಕಟೇಶ್.ಎಂ.ವಿ ಆದೇಶಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಟ ದರ್ಶನ್ ಪರಪ್ಪನ ಆಗ್ರಹಾರ ಜೈಲು ಪಾಲು

Published

on

ಸುದ್ದಿದಿನಡೆಸ್ಕ್:ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಎರಡನೇ ಆರೋಪಿ ದರ್ಶನ್ ಹಾಗೂ ಇತರೆ ಆರೋಪಿಗಳಾದ ವಿನಯ್, ಪ್ರದೋಷ್, ಧನರಾಜ್‌ಗೆ 13 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ವಿಚಾರಣೆ ನಡೆಸಿದ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ಜುಲೈ 4 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಈ ಹಿನ್ನೆಲೆಯಲ್ಲಿ 2ನೇ ಆರೋಪಿ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳು ಪರಪ್ಪನ ಆಗ್ರಹಾರ ಜೈಲು ಪಾಲಾಗಿದ್ದಾರೆ. ಇದೇ ಪ್ರಕರಣದಲ್ಲಿ ಆರೋಪಿಗಳಾದ ಪವಿತ್ರಾ ಹಾಗೂ ಇತರರಿಗೆ 2 ದಿನಗಳ ಹಿಂದೆಯೇ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಾಡೋಜೆ ಡಾ. ಕಮಲಾ ಹಂಪನಾಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಗಣ್ಯರಿಂದ ಅಂತಿಮ ನಮನ

Published

on

ಸುದ್ದಿದಿನ,ಬೆಂಗಳೂರು:ಹಿರಿಯ ಸಾಹಿತಿ ನಾಡೋಜ ಡಾ. ಕಮಲಾ ಹಂಪನಾ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವೀಂದ್ರ ಕಲಾಕ್ಷೇತ್ರದಲ್ಲಿ ಪಡೆದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ, ಸಾಹಿತಿ ಹಂಪನಾ ಮತ್ತು ಬರಗೂರು ರಾಮಚಂದ್ರಪ್ಪ ಸೇರಿ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.

ಈ ವೇಳೆ, ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡದ ಉತ್ತಮ ಸಾಹಿತಿಯನ್ನು ಕಳೆದುಕೊಂಡಿದ್ದೇವೆ, ಕಮಲಾ ಹಂಪನಾ, ಬೋಧಕರಾಗಿ, ಸಂಶೋಧಕರಾಗಿ, ಸಾಹಿತಿಯಾಗಿ ಕನ್ನಡ ಭಾಷೆಗಾಗಿ ಬಹಳ ಶ್ರಮಿಸಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಂಪನಾ ಮತ್ತು ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending