Connect with us

ದಿನದ ಸುದ್ದಿ

ಕೊರೋನಾ – ಕೈಚೆಲ್ಲಿ ಕೂರುವುದು ಹೊಣೆಗೇಡಿತನವಾದೀತು

Published

on

  • ನಾ ದಿವಾಕರ

ರ್ನಾಟಕದಲ್ಲಿ ಮತ್ತು ದೇಶದ ಹಲವು ರಾಜ್ಯಗಳಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿದೆ. ಮೇ 1 ರಂದು ಎರಡನೆ ಹಂತದ ಲಾಕ್ ಡೌನ್ ಅಂತ್ಯವಾದಾಗ ವಿಶ್ವದಲ್ಲಿ ಎರಡನೆ ಸ್ಥಾನದಲ್ಲಿದ್ದ ಭಾರತ ಈಗ ಅಮೆರಿಕ ನಂತರ ಎರಡನೆ ಸ್ಥಾನದಲ್ಲಿದೆ. ಕರ್ನಾಟಕದಲ್ಲಿಯೂ ಕೊರೋನಾ ಸೋಂಕಿತರ ಸಂಖ್ಯೆ ನಾಲ್ಕು ಲಕ್ಷ ದಾಟಿದ್ದು ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಅಂಕಿಅಂಶಗಳನ್ನು ನೀಡುವ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಏನೇ ಕಸರತ್ತು ಮಾಡಿದರೂ ರಾಜ್ಯದಲ್ಲಿ ಕೊರೋನಾ ವ್ಯಾಪಿಸುತ್ತಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ, ಸಾವಿನ ಪ್ರಮಾಣ ಶೇಕಡಾವಾರು ಕಡಿಮೆ ಇದೆ ಎಂದ ಮಾತ್ರಕ್ಕೆ ಹೆಚ್ಚುತ್ತಿರುವ ಸೋಂಕು ನಗಣ್ಯ ಎಂದು ಭಾವಿಸಲಾಗುವುದಿಲ್ಲ. ಸೋಂಕನ್ನು ತಡೆಗಟ್ಟುವುದು ಹೇಗೆ ಎಂದು ಯೋಚಿಸುವುದಲ್ಲದೆ, ರಾಜ್ಯದ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಯ ಪರಿಸ್ಥಿತಿ ಹೇಗಿದೆ ಎಂದು ಅವಲೋಕನ ಮಾಡುವುದು ಇಂದಿನ ತುರ್ತು.

ಕೇಂದ್ರ ನೀತಿ ಆಯೋಗ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯೊಂದರಲ್ಲಿ ಇದೇ ಎಚ್ಚರಿಕೆಯನ್ನು ನೀಡಿದೆ. ಕೊರೋನಾ ವೈರಾಣು ದೊಡ್ಡ ನಗರಗಳಿಗಿಂತಲೂ ಸಣ್ಣ ಪುಟ್ಟ ನಗರಗಳು, ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶೀಘ್ರವಾಗಿ ಹರಡುತ್ತಿದೆ, ದೇಶದ ಹೆಚ್ಚಿನ ಭಾಗ ಸೋಂಕಿಗೆ ಒಳಗಾಗುವ ಸಾಧ್ಯತೆಗಳಿವೆ ಎಂದು ನೀತಿ ಆಯೋಗದ ಆರೋಗ್ಯ ವಿಭಾಗ ಅಧಿಕಾರಿ ವಿ ಕೆ ಪಾಲ್ ಎಚ್ಚರಿಸಿದ್ದಾರೆ. ಕೊರೋನಾ ಸೋಂಕಿನ ಪರೀಕ್ಷೆಗಳ ಪ್ರಮಾಣ ಹೆಚ್ಚಿಸಬೇಕು ಎಂದು ನೀತಿ ಆಯೋಗವೂ ಸಲಹೆ ನೀಡಿದೆ.

ಶೇಕಡಾವಾರು ಸಾವಿನ ಪ್ರಮಾಣ ಕಡಿಮೆ ಇದೆ ಎಂದ ಮಾತ್ರಕ್ಕೆ ಸಾವಿನ ಸಂಖ್ಯೆಯನ್ನು ಕಡೆಗಣಿಸಲಾಗುವುದಿಲ್ಲ. ವೆಂಟಿಲೇಟರ್ ಇಲ್ಲದೆ, ಆಸ್ಪತ್ರೆಯಲ್ಲಿ ಸ್ಥಳಾವಕಾಶವಿಲ್ಲದೆ, ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೆ ಸೋಂಕಿತರು ಮೃತಪಟ್ಟರೆ ಅದು ಪ್ರಭುತ್ವ ಮಾಡುವ ಕೊಲೆ ಎಂದೇ ಭಾವಿಸಬೇಕಾಗುತ್ತದೆ. ಏಕೆಂದರೆ ಪ್ರತಿಯೊಂದು ಜೀವವೂ ಅಮೂಲ್ಯ. ಮತ್ತೊಂದೆಡೆ ದಾಖಲೆಗಳ ಸಂಗ್ರಹದಲ್ಲಿರುವ ವ್ಯತ್ಯಯಗಳ ಪರಿಣಾಮ ಈ ಅಂಕಿ ಅಂಶಗಳೂ ಸಹ ಪರಿಪೂರ್ಣವಲ್ಲ ಎನ್ನುವುದು ಸಾರ್ವತ್ರಿಕ ಸತ್ಯ.

ಈ ಸಂದರ್ಭದಲ್ಲೇ ಕರ್ನಾಟಕದಲ್ಲಿ ಕೋವಿದ್ 19 ನಿಂದ ಸತ್ತವರ ಸಂಖ್ಯೆ 6937. ಒಟ್ಟು ಸೋಂಕಿತರ ಸಂಖ್ಯೆ 4.30 ಲಕ್ಷ. ಸೆಪ್ಟಂಬರ್ ತಿಂಗಳ 10 ದಿನಗಳಲ್ಲಿ 1235 ಮಂದಿ ಮೃತಪಟ್ಟಿದ್ದಾರೆ ಅಂದರೆ ಪ್ರತಿದಿನ ಕನಿಷ್ಟ ಸರಾಸರಿ 123 ಹೆಚ್ಚು ಮಂದಿ ಸಾಯುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಕೋವಿದ್ ಪರೀಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಲಾಗಿದ್ದು ಸೋಂಕಿತರ ಸಂಖ್ಯೆಯೂ ಕಡಿಮೆ ಎನಿಸುತ್ತಿದೆ. ಆರು ತಿಂಗಳ ಅವಧಿಯಲ್ಲಿ ಕರ್ನಾಟಕದಲ್ಲಿ 34.61 ಲಕ್ಷ ಜನರು ಪರೀಕ್ಷೆಗೊಳಪಟ್ಟಿದ್ದಾರೆ.

ರಾಜ್ಯದ ಜನಸಂಖ್ಯೆಗೆ ಹೋಲಿಸಿದರೆ ಇದು ನಗಣ್ಯ ಎನ್ನಬಹುದು. 3.22 ಲಕ್ಷ ಜನರು ಚೇತರಿಸಿಕೊಂಡಿದ್ದಾರೆ. ಚೇತರಿಕೆಯ ಪ್ರಮಾಣ ಹೆಚ್ಚಾಗಿದೆ ಎಂದರೆ ಕೊರೋನಾ ನಿಯಂತ್ರಣದಲ್ಲಿದೆ ಎಂದರ್ಥವಲ್ಲ. ಸೋಂಕಿತರ ಪ್ರಮಾಣ ಏರುತ್ತಿರುವುದು ಸರ್ಕಾರವನ್ನು ಎಚ್ಚರಿಸಬೇಕಿದೆ. ಈ ಮುನ್ನ ಸೋಂಕಿತ ವ್ಯಕ್ತಿಗಳ ಮನೆಗಳನ್ನು, ಅಥವಾ ಮನೆ ಇರುವ ರಸ್ತೆಗಳನ್ನು ಸೀಲ್ ಡೌನ್ ಮಾಡಲಾಗುತ್ತಿತ್ತು. ಇದರ ಪೂರ್ಣ ವಿವರಗಳನ್ನು ಮಾಧ್ಯಮಗಳಿಗೆ ನೀಡಲಾಗುತ್ತಿತ್ತು.

ಈಗ ಸೋಂಕಿತ ವ್ಯಕ್ತಿಯ ಮನೆಗಳನ್ನು ಮಾತ್ರವೇ ಸೀಲ್ ಡೌನ್ ಮಾಡಲಾಗುತ್ತಿದೆ. ಒಂದು ಊರಿನ ಯಾವ ರಸ್ತೆ ಅಥವಾ ಯಾವ ಬಡಾವಣೆಯಲ್ಲಿ ಸೋಂಕಿತರಿದ್ದಾರೆ ಎನ್ನುವ ಮಾಹಿತಿಯನ್ನು ಎಲ್ಲಿಯೂ ನೀಡಲಾಗುತ್ತಿಲ್ಲ. ಹಾಗಾಗಿ ಸೋಂಕಿತರು ಇರುವ ರಸ್ತೆಗಳಲ್ಲಿ, ಸೋಂಕಿನ ಅರಿವು ಇಲ್ಲದೆ ಓಡಾಡುವವರೂ ಸಹ ಯಾವುದೋ ಒಂದು ರೀತಿಯಲ್ಲಿ ಸೋಂಕಿಗೆ ಒಳಗಾಗುವ ಸಾಧ್ಯತೆಗಳಿರುತ್ತವೆ ಅಲ್ಲವೇ ? ಈಗ ಸರ್ಕಾರದ ಗಮನ ಮಾರುಕಟ್ಟೆ ಮತ್ತು ಆರ್ಥಿಕತೆಯತ್ತ ಹೊರಳಿದೆ. ಚಿತ್ರಮಂದಿರಗಳು ಮತ್ತು ಶಾಲೆಗಳನ್ನು ತೆರೆದುಬಿಟ್ಟರೆ ಸಂಪೂರ್ಣ ಸಹಜ ಸ್ಥಿತಿಗೆ ಬಂದಂತಾಗುತ್ತದೆ. ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರತೆಯ ದೃಷ್ಟಿಯಿಂದ ಇದು ಅನಿವಾರ್ಯ ಇರಬಹುದು. ಆದರೆ ಇದರೊಟ್ಟಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದೂ ಮುಖ್ಯ ಅಲ್ಲವೇ ?

ಕೊರೋನಾ ಸದ್ದೇ ಮಾಡದಿದ್ದ ಸಂದರ್ಭದಲ್ಲಿ ಸೂರ ಕುಸಿಯುವಂತೆ ಅರಚಾಡುತ್ತಿದ್ದ ಸುದ್ದಿಮನೆಯ ಕೂಗುಮಾರಿಗಳಿಗೆ ಈಗ, ಕೊರೋನಾ ಮನೆಮನೆಗೂ ಹಬ್ಬುತ್ತಿರುವಾಗ ಕಂಗನಾ, ರಿಯಾ, ಕವಿತಾ, ಸಂಜನಾ, ಸುಶಾಂತ್ ಟಿ ಆರ್ ಪಿ ಸಾಧನಗಳಾಗಿಬಿಟ್ಟಿದ್ದಾರೆ. ಸುದ್ದಿಮನೆಗಳು ಮಾದಕ ದ್ರವ್ಯ ವ್ಯಸನಕ್ಕೆ ಬಲಿಯಾಗಿ ಹಾಳಾಗಿ ಹೋಗಿವೆ. ಸುದ್ದಿಮನೆಯ ಕೂಗುಮಾರಿಗಳಿಗೆ ತಬ್ಲೀಗಿಗಳು ಒಂದು ಘಟ್ಟದಲ್ಲಿ ಲಾಭದಾಯಕವಾಗಿ ಕಾಣುತ್ತಿದ್ದರು.

ಕೊರೋನಾ ರಣಕೇಕೆ ಹಾಕುತ್ತಾ ಹಣ ತರುತ್ತಿತ್ತು. ಈಗ ಡ್ರಗ್ಗಿಣಿ, ಢಾಕಿಣಿ ಬಲೆಗೆ ಸಿಲುಕಿದ್ದಾರೆ. ಅಂದೂ ಸುದ್ದಿ ನೀಡಿರಲಿಲ್ಲ ಇಂದೂ ನೀಡುತ್ತಿಲ್ಲ. ಈಗ ಡ್ರಗ್ ಪೀಡಿತರಾಗಿರುವುದರಿಂದ ಹೆಚ್ಚಿನದೇನೂ ನಿರೀಕ್ಷಿಸಲೂ ಆಗುವುದಿಲ್ಲ. ಮುದ್ರಣ ಮಾಧ್ಯಮಗಳಲ್ಲಿ ಕೊರೋನಾ ಈಗ ಚಿನ್ನ-ಬೆಳ್ಳಿ, ಈರುಳ್ಳಿ-ಬೆಳ್ಳುಳ್ಳಿ, ಮಾಂಸ-ಮೊಟ್ಟೆಯ ಹಾಗೆ ಪೇಟೆ ಧಾರಣೆಯ ಅಂಕಿಅಂಶಗಳಾಗಿ ಕಾಣುತ್ತಿದ್ದು ಎಲ್ಲೋ ಮೂಲೆಯಲ್ಲಿ ಜಾಗ ಪಡೆಯುತ್ತಿವೆ.

ಕೊರೋನಾದೊಂದಿಗೆ ಬದುಕುವುದನ್ನು ಜನರು ಕಲಿತಿದ್ದಾರೆ. ಸತ್ತವರಿಗೆ ಏನು ಹೇಳುವುದು ? ಆರ್ಥಿಕವಾಗಿ ಜರ್ಝರಿತವಾಗಿರುವ ಅನೇಕ ಕುಟುಂಬಗಳು ತಮ್ಮ ಆಧಾರ ಕಳೆದುಕೊಳ್ಳುತ್ತಿವೆ. ಒಂದು ಲಕ್ಷಕ್ಕೂ ಹೆಚ್ಚು ಅಂಗಡಿ ಮುಗ್ಗಟ್ಟುಗಳು ಮುಚ್ಚಲ್ಪಟ್ಟಿವೆ. ಹಲವಾರು ಸ್ಟೇಷನರಿ ಅಂಗಡಿಗಳು ಮುಚ್ಚಲ್ಪಟ್ಟಿವೆ, ದಿನಸಿ ಅಂಗಡಿಗಳು ಮುಚ್ಚಲ್ಪಟ್ಟಿವೆ. ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡು ನಾಳಿನ ಚಿಂತೆಯಲ್ಲಿದ್ದಾರೆ.

ಈ ನಡುವೆಯೇ ರಾಜ್ಯ ಸರ್ಕಾರ ಎಲ್ಲ ಕ್ಷೇತ್ರಗಳನ್ನೂ ಅನ್ ಲಾಕ್ ಮಾಡುವ ಮೂಲಕ ಆರ್ಥಿಕ ಚಟುವಟಿಕೆಗೆ ಅವಕಾಶ ನೀಡಿದೆ. ಸೆಪ್ಟಂಬರ್ 21 ರಿಂದ ಸಭೆ ಸಮಾರಂಭಗಳಲ್ಲಿ 100 ಜನರಿಗೆ ಅವಕಾಶ ನೀಡಲಾಗುತ್ತಿದೆ. 9 ರಿಂದ 12ನೆಯ ತರಗತಿಯವರೆಗೆ ಶಾಲೆಗಳನ್ನು ತೆರೆಯಲಾಗುತ್ತಿದೆ. ಬಾರ್ ರೆಸ್ಟೋರೆಂಟ್ ಪಬ್ ಈಗಾಗಲೇ ತೆರೆದಿವೆ. ಅಕ್ಟೋಬರ್ 1ರಿಂದ ಚಿತ್ರಮಂದಿರಗಳನ್ನೂ ತೆರೆಯಲಾಗುತ್ತದೆ. ಇದು ಅನಿವಾರ್ಯ ಎಂದಾದರೆ ಇರಲಿ, ಕೊರೋನಾ ಸೋಂಕಿತರ ಸೌಖ್ಯವೂ ಅನಿವಾರ್ಯವೇ ಅಲ್ಲವೇ ?

ನೀತಿ ಆಯೋಗದ ಒಂದು ಎಚ್ಚರಿಕೆಯ ಮಾತನ್ನು ಜನರೂ ಅರ್ಥಮಾಡಿಕೊಳ್ಳಬೇಕು, ಸರ್ಕಾರವೂ ಯೋಚಿಸಬೇಕು. ಜನರ ನಿರ್ಲಕ್ಷ್ಯವೇ ಸೋಂಕು ಹೆಚ್ಚುವುದಕ್ಕೆ ಕಾರಣ ಎಂದು ನೀತಿ ಆಯೋಗ ಹೇಳಿರುವುದು ವಾಸ್ತವ ಸಂಗತಿ. ಯಾವುದೇ ಸಭೆ ಸಮಾರಂಭಗಳಲ್ಲೂ ಸರ್ಕಾರ ರೂಪಿಸಿರುವ ನಿರ್ದಿಷ್ಟ ಮಾನದಂಡಗಳನ್ನು ಪಾಲಿಸಲಾಗುತ್ತಿಲ್ಲ.

ಸಚಿವರು, ಸರ್ಕಾರಿ ಅಧಿಕಾರಿಗಳೇ ಈ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಬಿಟ್ಟರೆ ಮತ್ತಾವ ನಿಯಮಗಳೂ ಪಾಲನೆಯಾಗುತ್ತಿಲ್ಲ. ಆರು ಅಡಿ ದೈಹಿಕ ಅಂತರ ಕಾಪಾಡಿಕೊಳ್ಳುವ ನಿಯಮ ಶತಮಾನದ ಜೋಕ್ ಆಗಿ ಕಾಣುತ್ತಿದೆ. ಜನಸಾಮಾನ್ಯರ ನಿತ್ಯ ಜೀವನದಲ್ಲಿ, ಜನನಿಬಿಡ ಮಾರುಕಟ್ಟೆಗಳಲ್ಲಿ ಇದನ್ನು ಅನುಸರಿಸುವುದೂ ಕಷ್ಟ ಎನ್ನುವುದು ವಾಸ್ತವ.

ಆದರೆ ಸರ್ಕಾರದ ವತಿಯಿಂದ ಯಾವ ರೀತಿಯ ಮೇಲ್ವಿಚಾರಣೆ ನಡೆಸಲಾಗುತ್ತಿದೆ ? ಎಷ್ಟು ಸಭೆ ಸಮಾರಂಭಗಳಲ್ಲಿ, ಮದುವೆ ಮುಂತಾದ ಸಮಾರಂಭಗಳಲ್ಲಿ ನಿಯಮ ಪಾಲನೆಯ ಬಗ್ಗೆ ಪರಿವೀಕ್ಷಣೆ ಮಾಡಲಾಗುತ್ತಿದೆ ? ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವುದೂ ಸಹ ವಿರಳ ಎನಿಸುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿ ಹೇಗಿದೆ, ಆರೋಗ್ಯ ಸೌಲಭ್ಯಗಳು ಹೇಗಿವೆ, ಶುಚಿತ್ವ ಕಾಪಾಡಲಾಗಿದೆಯೇ, ಆಸ್ಪತ್ರೆಗಳಲ್ಲಿ ಎಲ್ಲವೂ ಸುಸೂತ್ರವಾಗಿ ಇದೆಯೇ ಇವೇ ಮುಂತಾದ ವಿಚಾರಗಳ ಬಗ್ಗೆ ಸರ್ಕಾರ ಹೆಚ್ಚಿನ ಕಾಳಜಿ ವಹಿಸಬೇಕಿದೆ. ಇಂತಹ ವಿಷಮ ಸನ್ನಿವೇಶದಲ್ಲಿ ಸೂಕ್ಷ್ಮ ಸಂವೇದನೆ ಇರುವವರು ಆರೋಗ್ಯ ಇಲಾಖೆಯ ಉಸ್ತುವಾರಿ ವಹಿಸಿದ್ದರೆ ಬಹುಶಃ ಪರಿಸ್ಥಿತಿ ಭಿನ್ನವಾಗಿರುತ್ತಿತ್ತು ಎನಿಸುತ್ತದೆ.

ಸರ್ಕಾರ ಮತ್ತು ಆಡಳಿತ ವ್ಯವಸ್ಥೆ ಅಕ್ಷರಶಃ ಹರಾಜು ಮಾರುಕಟ್ಟೆಯಾಗಿ ಪರಿವರ್ತನೆಯಾಗಿದೆ. ವಿಮಾನದಿಂದ ಹಿಡಿದು ಪ್ರಾಥಮಿಕ ಆರೋಗ್ಯ ಕೇಂದ್ರದವರೆಗೆ ಎಲ್ಲವನ್ನೂ ಹರಾಜು ಮಾಡಲು ಮಾರುಕಟ್ಟೆ ಕೂಗುಮಾರಿಗಳು ಸಜ್ಜಾಗುತ್ತಿದ್ದಾರೆ. ಇವರನ್ನು ನಾವೇ ಆಯ್ಕೆ ಮಾಡಿರುವುದು ನಮ್ಮ ದುರದೃಷ್ಟ. ಕೊರೋನಾ ಇರಲಿ ಇಲ್ಲದಿರಲಿ ಜನಸಾಮಾನ್ಯರು ಹೇಗೋ ಒಂದು ಬದುಕುತ್ತಾರೆ ಆದರೆ ತಮಗೆ ಅರಿವಿಲ್ಲದೆಯೇ ಸಾಯುವುದೂ ಸತ್ಯ.

ಬದುಕು ಮತ್ತು ಸಾವು ಜನರ ಕೈಯ್ಯಲ್ಲೇ ಇದೆ ಆದರೆ ಬದುಕುವ ಪರಿಸರ ನಿರ್ಮಿಸಿ ಸಾಯುವುದನ್ನು ತಡೆಗಟ್ಟುವ ಹೊಣೆ ಚುನಾಯಿತ ಸರ್ಕಾರದ ಮೇಲಿರುತ್ತದೆ ಅಲ್ಲವೇ ? ಕೊರೋನಾ ಈ ಪರಿಸರವನ್ನು ಅಪಾಯಕ್ಕೆ ಸಿಲುಕಿಸುತ್ತಿದೆ. ವೈರಾಣು ನಿಯಂತ್ರಣಕ್ಕೆ ಬರುವುದಿಲ್ಲ, ಲಾಕ್ ಡೌನ್ ಉಪಯುಕ್ತವಲ್ಲ, ಗಂಟೆ, ಜಾಗಟೆ, ಶಂಖನಾದ, ಚಪ್ಪಾಳೆ, ಗೋ ಕೊರೋನಾ ಇವೆಲ್ಲವೂ ತಮಾಷೆಯ ಸರಕುಗಳಾಗಿವೆ.

ಹಾಗಾದರೆ ಏನು ಮಾಡಬೇಕು ? ಆರೋಗ್ಯ ಸೇವೆಯನ್ನು ವಿಸ್ತರಿಸಬೇಕು, ಎಲ್ಲರಿಗೂ ಸಮನಾಗಿ ದೊರೆಯುವಂತೆ ಮಾಡಬೇಕು, ಚಿಕಿತ್ಸೆ ಗಗನಕುಸುಮವಾದರೆ ಸೋಂಕಿತರು ಸಾಯುವ ಸಿದ್ಧತೆಯೊಂದಿಗೇ ಆಸ್ಪತ್ರೆಗೆ ಬರಬೇಕಾಗುತ್ತದೆ. ಎಷ್ಟು ಕುಟುಂಬಗಳು ಈ ಸಂದರ್ಭದಲ್ಲಿ ಅನಾಥವಾಗಿವೆ ಎಂದು ಸರ್ಕಾರ ಯೋಚಿಸಬೇಕು. ವೈದ್ಯರ ಕೊರತೆ ಇದೆ ಆದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಖಾಸಗಿ ವೈದ್ಯರನ್ನು, ಆಸ್ಪತ್ರೆಗಳನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಪುನಃ ಮಾರುಕಟ್ಟೆ ಲೆಕ್ಕಾಚಾರ ಅಡ್ಡಿಯಾಗುತ್ತದೆ. ಸುದ್ದಿಮನೆಯ ಕೂಗುಮಾರಿ ನಿರೂಪಕರಿಗೆ ಟಿ ಆರ್ ಪಿ ಚಿಂತೆಯಾದರೆ, ಚುನಾಯಿತ ಮಾರುಕಟ್ಟೆ ಕೂಗುಮಾರಿಗಳಿಗೆ ಮುಂದಿನ ಚುನಾವಣೆ ಮತ್ತು ನಿಧಿಯ ಚಿಂತೆ. ಇಷ್ಟರ ನಡುವೆ ಬಡಪಾಯಿ ಪ್ರಜೆ ಬದುಕಲು ಕಲಿಯುತ್ತಿದ್ದಾನೆ, ಸಾಯುತ್ತಿರುವವರನ್ನು ನೋಡುತ್ತಲೇ ತನ್ನ ಚಿತೆಯ ಚಿಂತೆಯಲ್ಲೇ ಕಾಲ ಕಳೆಯುತ್ತಿರುತ್ತಾನೆ. ಇಷ್ಟನ್ನು ಅರ್ಥಮಾಡಿಕೊಳ್ಳುವ ಸಂವೇದನೆ, ಪರಿಜ್ಞಾನ ಸರ್ಕಾರಕ್ಕೆ ಇರಬೇಕು. “ಹಣೆಬರಹವಿದ್ದಂತೆ ಆಗುತ್ತದೆ ” ಎನ್ನುವ ಪ್ರಾಚೀನ ಬೌದ್ಧಿಕ ದಾರಿದ್ರ್ಯವನ್ನೇ ಪ್ರದರ್ಶಿಸುತ್ತಾ ಕೈಚೆಲ್ಲಿ ಕುಳಿತುಕೊಳ್ಳುವುದು ಹೊಣೆಗೇಡಿತನವಾಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಹಲವು ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಆರಂಭ; ಕೃಷಿ ಚಟುವಟಿಕೆ ಆರಂಭ

Published

on

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಮುಂದಿನ ಒಂದು ವಾರ ಮುಂಗಾರು ಮಳೆ ಚುರುಕುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಕನ್ನಡ, ಕೊಡಗು, ಮೈಸೂರು, ಹಾಸನ, ಮಂಡ್ಯ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದು, ಈ ಜಿಲ್ಲೆಗಳ ಜತೆಗೆ ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಪ್ರತಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಸಮೇತ ಭಾರೀ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಮಳೆ ತೀವ್ರತೆ ಹೆಚ್ಚಾಗಲಿದ್ದು, ಇದೇ 20ರ ವರೆಗೆ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಬೀಳುವ ಸಾಧ್ಯತೆ ಇದೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಮೋಡಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿವೇಳೆ ಹಗುರದಿಂದ ಭಾರೀ ಮಳೆಯಾಗುವ ನಿರೀಕ್ಷೆ ಇದೆ.

ನಿನ್ನೆ ರಾತ್ರಿ ಶಿವಮೊಗ್ಗ, ದಾವಣಗೆರೆ, ಹಾಸನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಕೊಪ್ಪಳ, ಹಾವೇರಿ ಜಿಲ್ಲೆಯಲ್ಲಿಯೂ ಗುಡುಗು ಸಹಿತ ಮಳೆಯಾಗಿದೆ. ಹಾವೇರಿ ಜಿಲ್ಲೆಯಲ್ಲಿ ಸಿಡಿಲು ಬಡಿದು, ಓರ್ವ ಯುವಕ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಶಿವಮೊಗ್ಗ, ದಾವಣಗೆರೆ, ಹಾಸನ, ಕೊಡಗು ಜಿಲ್ಲೆಗಳಲ್ಲಿ ವರ್ಷಧಾರೆ ಉತ್ತಮವಾಗಿದ್ದು, ರೈತರಲ್ಲಿ ಸಂತಸ ಉಂಟುಮಾಡಿದೆ. ಮಳೆ ಬೀಳುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಚುರುಕು ಗೊಂಡಿರುವ ಬಗ್ಗೆ ನಮ್ಮ ಪ್ರತಿನಿಧಿಗಳು ವರದಿ ಮಾಡಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬೆಳೆ ಪರಿಹಾರವನ್ನು ಸರ್ಕಾರ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ. ರೈತರು ತಮ್ಮ ಬ್ಯಾಂಕ್‌ಗಳಿಗೆ ಭೇಟಿ ನೀಡಿ, ಹಣ ಪಾವತಿಯಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರಘುನಂದನಮೂರ್ತಿ ತಿಳಿಸಿದ್ದಾರೆ.

ಇದರ ಜತೆಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ರೈತರ ಖಾತೆಗಳಿಗೆ ತಲಾ ಎರಡು ಸಾವಿರ ರೂಪಾಯಿ ವರೆಗೆ ರಾಜ್ಯ ಸರ್ಕಾರದ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಹಾವೇರಿ ಜಿಲ್ಲಿಯಲ್ಲಿ ಒಂದು ಲಕ್ಷ 98 ಸಾವಿರದ 455 ರೈತರಿಗೆ 9 ಹಂತದಲ್ಲಿ 37 ಕೋಟಿ 73 ಲಕ್ಷ ರೂಪಾಯಿ ಪರಿಹಾರದ ಮೊತ್ತವನ್ನು ಜಮೆ ಮಾಡಲಾಗಿದೆ ಎಂದು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಗದಗ ಜಿಲ್ಲೆಯಲ್ಲಿ ಕಳೆದ ಸಾಲಿನ ಹಂಗಾಮಿನಲ್ಲಿ ಬೆಳೆಹಾನಿಗೆ ಒಂದು ಲಕ್ಷದ 13 ಸಾವಿರದ 328 ರೈತ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಸರ್ಕಾರದಿಂದ ಪರಿಹಾರ ಹಣವನ್ನು ಜಮೆ ಮಾಡಲಾಗಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ ತಿಳಿಸಿದ್ದಾರೆ.

ರೈತರು ತಮ್ಮ ಖಾತೆಗೆ ಹಣ ಜಮೆಯಾಗಿರುವ ಬಗ್ಗೆ ಸಹಾಯವಾಣಿಯ ಮೂಲಕ ಖಚಿತಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮೇಲ್ಮನೆಯ ಆರು ಕ್ಷೇತ್ರಗಳ ನಾಮಪತ್ರ ಪರಿಶೀಲನೆ ಪ್ರಗತಿಯಲ್ಲಿ ; ಕಣದಲ್ಲಿ 103 ಅಭ್ಯರ್ಥಿಗಳು : ಇಲ್ಲಿದೆ ಸಂಪೂರ್ಣ ಮಾಹಿತಿ

Published

on

ಸುದ್ದಿದಿನ ಡೆಸ್ಕ್ : ವಿಧಾನಪರಿಷತ್ತಿನ ಆರು ಸ್ಥಾನಗಳಿಗೆ 103 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇಂದು ನಾಮಪತ್ರಗಳ ಪರಿಶೀಲನೆ ಕಾರ್ಯ ಆರಂಭಗೊಂಡಿದೆ.

ಕಾಂಗ್ರೆಸ್, ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಗಳು ಜತೆಗೆ, ದೊಡ್ಡ ಸಂಖ್ಯೆಯಲ್ಲಿ ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದಿಂದ 24 ನಾಮಮಪತ್ರಗಳು ಸಲ್ಲಿಕೆಯಾಗಿವೆ. ಬೆಂಗಳೂರು ಪದವೀಧರ ಕ್ಷೇತ್ರದಿಂದ 18 ನಾಮಪತ್ರಗಳು ಸಲ್ಲಿಕೆಯಾದರೆ, ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ 11 ನಾಮಪತ್ರಗಳು, ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರದಿಂದ 7 ನಾಮಪತ್ರಗಳು, ಕರ್ನಾಟಕ ನೈಋತ್ಯ ಪದವೀಧರ ಕ್ಷೇತ್ರದಿಂದ 12ಹಾಗೂ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ 13 ನಾಮಪತ್ರಗಳು ನಿನ್ನೆ ಸಲ್ಲಿಕೆಯಾಗಿದ್ದವು.

ಇದುವರೆಗೆ ಒಟ್ಟು 103 ಅಭ್ಯರ್ಥಿಗಳಿಂದ 156 ಸೆಟ್ ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಪರಿಶೀಲನೆ ಕಾರ್ಯ ಪ್ರಗತಿಯಲ್ಲಿದೆ ಎಂದು ವರದಿಯಾಗಿದೆ. ಸಂಜೆ ವೇಳೆಗೆ ಅಂತಿಮವಾಗಿ ಕಣದಲ್ಲಿರುವವರ ಪಟ್ಟಿ ಬಿಡುಗಡೆ ಮಾಡಲಾಗುವುದು. ನಾಮಪತ್ರ ವಾಪಸ್ ಪಡೆಯಲು ಇದೇ 20ರಂದು ಕೊನೆಯ ದಿನವಾಗಿದೆ.

ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ತಿನ ದ್ವೈವಾರ್ಷಿಕ ಚುನಾವಣೆಗೆ ಜೂನ್ 3 ರಂದು ಮತದಾನ ನಡೆಯಲಿದೆ. ಮತದಾನದ ಸಂಬಂಧ ಚಿತ್ರದುರ್ಗ ಜಿಲ್ಲೆಯ ಮತದಾನ ಕೇಂದ್ರಗಳ ಪಟ್ಟಿಯನ್ನು ಆಗ್ನೇಯ ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಪ್ರಕಟಿಸಿದರು. ಜಿಲ್ಲೆಯಲ್ಲಿ ಒಟ್ಟು 7 ಮತದಾನ ಕೇಂದ್ರಗಳಿವೆ.

ಮೊಳಕಾಲ್ಮೂರು ತಾಲೂಕಿನ ಶಿಕ್ಷಕರ ಮತದಾರರು ಮೊಳಕಾಲ್ಮೂರು ಪಟ್ಟಣದ ತಾಲೂಕು ಆಡಳಿತ ಕೇಂದ್ರದಲ್ಲಿ ಮತ ಚಲಾಯಿಸಬಹುದು. ಚಳ್ಳಕೆರೆ ನಗರದ ಬಿ.ಎಂ.ಜಿ.ಎಚ್.ಎಸ್ ಶಾಲೆ, ಚಿತ್ರದುರ್ಗ ನಗರದ ಬಾಲಕಿಯರು ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಠಡಿ 1, ಕೋಠಡಿ 2 ರಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಹಿರಿಯೂರು ನಗರದ ತಾಲೂಕಿನ ಕಚೇರಿಯಲ್ಲಿ, ಹೊಸದುರ್ಗ ಪಟ್ಟಣ ತಾಲೂಕು ಕಚೇರಿಯ ಸಭಾಂಗಣದಲ್ಲಿ ಹೊಳಲ್ಕರೆ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಮತಚಲಾಯಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು. ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಶಿಕ್ಷಕ ಮತದಾರರು ಯಾವುದೇ ಪ್ರಚಾರ ಕಾರ್ಯದಲ್ಲಿ ಭಾಗವಹಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ 4 ಸಾವಿರದ 615 ಶಿಕ್ಷಕ ಮತದಾರರು ಇದ್ದಾರೆ ಎಂದು ಅವರು ಅಂಕಿ-ಅಂಶ ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಸತಿ ಶಾಲೆಯಲ್ಲಿನ 7, 8 ಮತ್ತು 9ನೇ ತರಗತಿಗಳಲ್ಲಿನ ಖಾಲಿ ಸ್ಥಾನಗಳಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿನ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಡಿ ಬರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ನಡೆಸುವ ಒಟ್ಟು 22 ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ವಸತಿ ಶಾಲೆಗಳಲ್ಲಿ 2024-25ನೇ ಸಾಲಿಗೆ 7, 8 ಮತ್ತು 9ನೇ ತರಗತಿಗಳಲ್ಲಿ ಖಾಲಿಯಿರುವ ಸ್ಥಾನಗಳನ್ನು ಜಿಲ್ಲಾ ಹಂತದಲ್ಲಿ ಪ್ರವೇಶ ಪರೀಕ್ಷೆಯ ಮೂಲಕ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಖಾಲಿ ಇರುವ ಸ್ಥಾನಗಳ ವಿವರ ಇಂತಿವೆ

7ನೇ ತರಗತಿಯಲ್ಲಿ ಪ.ಜಾತಿ ಹೆಣ್ಣು-1, 8 ನೇ ತರಗತಿಯಲ್ಲಿ ಪ.ಜಾತಿ ಹೆಣ್ಣು-2. ಪ್ರವರ್ಗ-1 ರಲ್ಲಿ ಹೆಣ್ಣು-1, 2ಎ ರಲ್ಲಿ ಹೆಣ್ಣು-1, 3ಬಿ ಯಲ್ಲಿ ಗಂಡು-1 ಹಾಗೂ 9ನೇ ತರಗತಿಯಲ್ಲಿ ಪ.ಜಾತಿ ಹೆಣ್ಣು-1. ಪ.ವರ್ಗದಲ್ಲಿ ಹೆಣ್ಣು- 5 ಒಟ್ಟು 12 ಸ್ಥಾನಗಳು ಖಾಲಿಯಿರುತ್ತವೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಜಿಲ್ಲೆಯ ಯಾವುದೇ ಶಾಲೆಯಲ್ಲಿ ಸ್ಥಾನ ಲಭ್ಯವಿರುವುದಿಲ್ಲ.

ಮೇಲ್ಕಾಣಿಸಿದ ಖಾಲಿ ಸ್ಥಾನಗಳನ್ನು ಹೊರತು ಪಡಿಸಿ ಇತರೆ (ಲಿಂಗ, ಜಾತಿ) ಆಸಕ್ತಿಯಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದಲ್ಲಿ, ವಸತಿ ಶಾಲೆಗಳಲ್ಲಿ ಮುಂದಿನ ದಿನಗಳಲ್ಲಿ ಖಾಲಿಯಾಗಬಹುದಾದ ಸ್ಥಾನಗಳಿಗೆ ಹೆಚ್ಚುವರಿ ಆಯ್ಕೆಪಟ್ಟ(Waiting List) ಮೆರಿಟ್ ಮತ್ತು ಮೀಸಲಾತಿ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ದಾಖಲಾತಿಗೆ ಪರಿಗಣಿಸಲಾಗುವುದು.

ಅರ್ಜಿಗಳನ್ನು ಸಮೀಪದ ಮೊರಾರ್ಜಿದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಶ್ರೀಮತಿ ಇಂದಿರಾಗಾಂಧಿ, ಡಾ.ಬಿ.ಆರ್ ಅಂಬೇಡ್ಕರ್, ಪ್ರತಿಭಾನ್ವಿತ ಹೆಣ್ಣುಮಕ್ಕಳ ವಸತಿ ಶಾಲೆಗಳಲ್ಲಿ ಮೇ.17 ರಿಂದ ಪಡೆಯಬಹುದು.

ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಮೇ.31 ರೊಳಗಾಗಿ ಜಂಟಿ ನಿರ್ದೇಶಕರ ಕಚೇರಿ ಸಮಾಜ ಕಲ್ಯಾಣ ಇಲಾಖೆ, ದಾವಣಗೆರೆ ಇಲ್ಲಿ ಕಡ್ಡಾಯವಾಗಿ ಸಲ್ಲಿಸುವುದು. ಜೂನ್ 5ರಂದು ಮೊರಾರ್ಜಿದೇಸಾಯಿ ವಸತಿ ಶಾಲೆ ದೇವರಬೆಳಕೆರೆ, ಹರಿಹರ ತಾಲ್ಲೂಕು ಇಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಪ್ರವೇಶ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ನಾಗರಾಜ.ಕೆ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending