ದಿನದ ಸುದ್ದಿ
ಕೋವಿಡ್ ನಿಯಂತ್ರಣಕ್ಕೆ ಪಣತೊಟ್ಟ ಮಹಿಳಾ ಅಧಿಕಾರಿಗಳು

ಸುದ್ದಿದಿನ,ಧಾರವಾಡ : ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲದು. ಮಹಿಳೆ ಅಬಲೆಯಲ್ಲ, ಆಕೆ ಪುರುಷನಷ್ಟೇ ಸಬಲಳು ಎಂಬುದನ್ನು ಜಿಲ್ಲೆಯ ಐವರು ಮಹಿಳಾ ವೈದ್ಯಾಧಿಕಾರಿಗಳು ಸಾಬೀತುಪಡಿಸಿದ್ದಾರೆ. ನಿರ್ಗಮಿತ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರ ಮಾರ್ಗದರ್ಶನದಲ್ಲಿ ಕಳೆದ ಸುಮಾರು ಮೂರುವರೆ ತಿಂಗಳಿನಿಂದ ಕೋವಿಡ್ ನಿಯಂತ್ರಣಕ್ಕೆ ಸರ್ಕಾರದ ಎಲ್ಲ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಸಮರ್ಥವಾಗಿ ಅನುಷ್ಠಾನಗೊಳಿಸುತ್ತಿದ್ದಾರೆ.
ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಾಣು ಎಂತಹ ಜಗಜಟ್ಟಿಗಳನ್ನೂ ಕೂಡಾ ನಡುಗಿಸಿದೆ. ಕೊರೊನಾ ವಿರುದ್ಧದ ಈ ಹೋರಾಟದಲ್ಲಿ ಕೊಂಚವೂ ಹಿಂಜರಿಯದೇ ಮುನ್ನುಗ್ಗಿರುವ ಮಹಿಳಾ ಕೊರೊನಾ ಸೇನಾಪಡೆಯೊಂದು ಧಾರವಾಡ ಜಿಲ್ಲೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.
ನಿಕಟಪೂರ್ವ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರ ಸಮರ್ಥ ನಾಯಕತ್ವ ಹಾಗೂ ಪ್ರೋತ್ಸಾಹದೊಂದಿಗೆ ಈ ತಂಡವು ಕೋವಿಡ್ ಸೋಂಕಿತರ ಪತ್ತೆ, ಚಿಕಿತ್ಸೆ, ಕ್ವಾರಂಟೈನ್ ಕೇಂದ್ರಗಳ ನಿರ್ವಹಣೆ, ವೈರಾಲಜಿ ಪ್ರಯೋಗಾಲಯ, ಕೆಪಿಎಂಇ ನೋಂದಾಯಿತ ಆಸ್ಪತ್ರೆಗಳಲ್ಲಿ ವರದಿಯಾಗುವ ತೀವ್ರ ಉಸಿರಾಟದ ತೊಂದರೆ ಹಾಗೂ ನೆಗಡಿ, ಕೆಮ್ಮು ಮತ್ತು ಜ್ವರ ಲಕ್ಷಣಗಳಿರುವ ವ್ಯಕ್ತಿಗಳ ಆರೋಗ್ಯ ತಪಾಸಣೆ ಹಾಗೂ ಕಂಟೈನ್ಮೆಂಟ್ ವಲಯಗಳ ಜನರ ಆರೋಗ್ಯ ಸಮೀಕ್ಷೆ ಕಾರ್ಯಗಳನ್ನು ಪ್ರತಿನಿತ್ಯ ಜಾಗರೂಕತೆಯಿಂದ ನಿರ್ವಹಿಸುತ್ತಿದೆ.
ಜಿಲ್ಲಾ ಸರ್ವೇಕ್ಷಣಾಧಿಕಾರಿಯಾಗಿರುವ ಡಾ: ಸುಜಾತಾ ಹಸವೀಮಠ ಅವರು ಇಡೀ ಕೊರೊನಾ ನಿಯಂತ್ರಣದ ಹೋರಾಟದ ಪ್ರಮುಖ ಸೇನಾನಿಯಾಗಿದ್ದಾರೆ. ಕಳೆದ ಜನವರಿಯಿಂದಲೇ ಈ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಯುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ 1897 ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗಗಳ (ಕೋವಿಡ್) ನಿಯಂತ್ರಣ ಕಾಯ್ದೆಯಡಿ ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಎಲ್ಲ ನಿರ್ದೇಶನಗಳನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ. ಕೋವಿಡ್ ಸೋಂಕಿತರು, ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕ ಹೊಂದಿದವರನ್ನು ಗುರುತಿಸಿ ತಪಾಸಣೆ ಮತ್ತು ಚಿಕಿತ್ಸೆಗೆ ಒಳಪಡಿಸುವ ಮಹತ್ವದ ಕಾರ್ಯವನ್ನು ಅವಿರತವಾಗಿ ಹಾಗೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.
ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಯಾಗಿರುವ ಡಾ: ಶಶಿ ಪಾಟೀಲ ಅವರು ಕೋವಿಡ್ ಸೋಂಕಿತರ ಸಂಪರ್ಕ ಹೊಂದಿದವರು, ಹೊರರಾಜ್ಯಗಳಿಂದ ಆಗಮಿಸಿದ ಜನರು ಸೇರಿದಂತೆ ಕ್ವಾರಂಟೈನ್ ಅಗತ್ಯವಿರುವ ವ್ಯಕ್ತಿಗಳನ್ನು ಗುರುತಿಸಿ ಕ್ವಾರಂಟೈನ್ ಕೇಂದ್ರಗಳಲ್ಲಿ ಅವರನ್ನು ಪ್ರತ್ಯೇಕವಾಗಿ ಇರಿಸುವ ಕಾರ್ಯ ಮಾಡುತ್ತಿದ್ದಾರೆ.
ಕ್ವಾರಂಟೈನ್ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯಕೀಯ ಮತ್ತು ಅರೆವೈದ್ಯಕೀಯ ಹಾಗೂ ಸಹಾಯಕ ಸಿಬ್ಬಂದಿಗೆ ತರಬೇತಿ ಕೂಡಾ ನೀಡುತ್ತಿದ್ದಾರೆ. ಇದೀಗ ಹೊಸ ಮಾರ್ಗಸೂಚಿಗಳಂತೆ ಗುರುತಿಸಲಾಗಿರುವ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಅಗತ್ಯ ಸೌಲಭ್ಯ ವೈದ್ಯಕೀಯ ಏರ್ಪಾಡುಗಳನ್ನು ನಿರ್ಮಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಕಿಮ್ಸ್ನ ಮೈಕ್ರೋಬಯೋಲಾಜಿ ವಿಭಾಗದ ಮುಖ್ಯಸ್ಥೆಯಾಗಿರುವ ಡಾ: ಆಶಾ ಪಾಟೀಲ ಅವರು ಈ ಭಾಗದಲ್ಲಿ ಮೊದಲ ಕೋವಿಡ್ ಪ್ರಯೋಗಾಲಯ ಸ್ಥಾಪಿಸಲು ವಿಶೇಷ ಮುತುವರ್ಜಿ ವಹಿಸಿ ಕಿಮ್ಸ್ನಲ್ಲಿ ಪ್ರಯೋಗಾಲಯ ಸ್ಥಾಪನೆಗೆ ಐಸಿಎಂಆರ್ ಅನುಮೋದನೆ ಪಡೆಯಲು ಶ್ರಮಿಸಿದ್ದಾರೆ. ವೈರಾಲಜಿ ಪ್ರಯೋಗಾಲಯದ ತಾಂತ್ರಿಕ ಸಿದ್ಧತೆ ಹಾಗೂ ಮಾನವ ಸಂಪನ್ಮೂಲ ನಿರ್ವಹಣೆಯಂತಹ ಸವಾಲಿನ ಕಾರ್ಯಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕುಟುಂಬ ಕಲ್ಯಾಣಾಧಿಕಾರಿಯಾಗಿರುವ ಡಾ: ಶಶಿಕಲಾ ನಿಂಬಣ್ಣವರ ಅವರು ಕೆಪಿಎಂಇ ಅಡಿ ನೋಂದಣಿಯಾಗಿರುವ ಆಸ್ಪತ್ರೆಗಳಲ್ಲಿ ಪ್ರತಿನಿತ್ಯ ವರದಿಯಾಗುವ ತೀವ್ರ ಉಸಿರಾಟದ ತೊಂದರೆ ಮತ್ತು ನೆಗಡಿ, ಕೆಮ್ಮು ಹಾಗೂ ಜ್ವರದ ಲಕ್ಷಣಗಳಿರುವ ವ್ಯಕ್ತಿಗಳ ಪರಿಶೀಲನೆ ಮಾಡಿ ಕೋವಿಡ್ ತಪಾಸಣೆಗೆ ಒಳಪಡಿಸುವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಯಾಗಿರುವ ಡಾ: ತನುಜಾ ಕೆ.ಎನ್. ಅವರು ಜಿಲ್ಲೆಯ ಕಂಟೈನ್ಮೆಂಟ್ ವಲಯಗಳಲ್ಲಿ ವಾಸಿಸುವ ವ್ಯಕ್ತಿಗಳ ಆರೋಗ್ಯ ಸಮೀಕ್ಷೆ ಹಾಗೂ ಜಿಲ್ಲೆಯಾದ್ಯಂತ ಇರುವ ಗರ್ಭಿಣಿಯರು, ಬಾಣಂತಿಯರ, ಮಕ್ಕಳು, ಮಧುಮೇಹ, ರಕ್ತದೊತ್ತಡ, ಕುಷ್ಠರೋಗ, ಕ್ಷಯರೋಗ, ಹೆಚ್ಐವಿ ಏಡ್ಸ್, ಕ್ಯಾನ್ಸರ್, ಪಾಶ್ರ್ವವಾಯು ಮತ್ತಿತರ ದುರ್ಬಲ ಆರೋಗ್ಯ ಹೊಂದಿರುವ ಜನರ ಆರೋಗ್ಯ ಸಮೀಕ್ಷೆ ನಡೆಸಿ ಅವರಿಗೆ ಅಗತ್ಯ ಚಿಕಿತ್ಸೆಗಳು ಲಭ್ಯವಾಗುವಂತೆ ಎಚ್ಚರ ವಹಿಸುತ್ತಿದ್ದಾರೆ.
ನಿರ್ಗಮಿತ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರ ನಾಯಕತ್ವದಲ್ಲಿ ಇದುವರೆಗೆ ಸಮರ್ಥವಾಗಿ ಕರ್ತವ್ಯ ನಿರ್ವಹಿಸಿರುವ ಈ ಮಹಿಳಾ ಕೊರೊನಾ ಸೇನಾನಿಗಳ ತಂಡ ಇದೀಗ ನೂತನ ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ ಅವರ ಮಾರ್ಗದರ್ಶನದಲ್ಲಿ ತಮ್ಮ ಕಾರ್ಯ ಮುಂದುವರೆಸಲು ಉತ್ಸುಕರಾಗಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣ : ಯುವತಿ ಪತ್ತೆ..!?

ಸುದ್ದಿದಿನ, ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೊತೆ ಅಶ್ಲೀಲ ವಿಡಿಯೋ ಚಾಟ್ ನಡೆಸಿದ್ದ ಯುವತಿ ದುಬೈಗೆ ಹಾರಿದ್ದಾಳೆ ಎನ್ನಲಾಗುತ್ತಿತ್ತು. ಆದರೆ ಬೆಂಗಳೂರಿನ ಆರ್.ಟಿ.ನಗರದಲ್ಲೇ ಆಕೆ ಇದ್ದಾಳೆ ಎಂದು ಹೇಳಲಾಗುತ್ತಿದೆ.
ರಾಸಲೀಲೆಯ ವಿಡಿಯೋದಲ್ಲಿರುವ ಯುವತಿಯ ಮುಖ ಚಹರೆಯನ್ನೇ ಹೋಲುವ ಯುವತಿಯೊಬ್ಬಳು ಆರ್.ಟಿ.ನಗರದಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ತನ್ನ ಸ್ನೇಹಿತನೊಬ್ಬನೊಂದಿಗೆ ಓಡಾಡಿಕೊಂಡಿದ್ದಾಳೆ. ಈ ಸಂಬಂಧಿತ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಖಚಿತವಾಗಿ ಆಕೆಯೇ ವಿಡಿಯೋ ಸಂಭಾಷಣೆ ನಡೆಸಿದಾಕೆನಾ ಎಂಬ ಬಗ್ಗೆ ಪೊಲೀಸರಿಗೂ ಅನುಮಾನವಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ರಾಜ್ಯ ಬಜೆಟ್ ನ ಪಾವಿತ್ರ್ಯವನ್ನೇ ಹಾಳು ಮಾಡಿದ ಬಿ.ಎಸ್.ಯಡಿಯೂರಪ್ಪ : ಸಿದ್ದರಾಮಯ್ಯ ಕಿಡಿ

ಸುದ್ದಿದಿನ, ಬೆಂಗಳೂರು: ‘ಆಪರೇಷನ್ ಕಮಲ’ ಎಂಬ ಅನೈತಿಕ ರಾಜಕೀಯದ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ರಾಜ್ಯವನ್ನು ದಶಕಗಳ ಹಿಂದಕ್ಕೆ ಒಯ್ಯುವ “ಆಪರೇಷನ್ ಬರ್ಬಾದ್” ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡುತ್ತಿದೆ. ಇದಕ್ಕೆ ಕಳೆದ ಮತ್ತು ಈ ವರ್ಷದ ಎರಡು ಬಜೆಟ್ಗಳೇ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಇಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದ ಬಜೆಟ್ -2021 ರ ಬಗ್ಗೆ ಪ್ರತಿಜ್ರಿಯಿಸಿದ ಅವರು,
ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಸರ್ಕಾರ ಪಾರದರ್ಶಕವಾಗಿ ಕೆಲಸ ಮಾಡಬೇಕೆನ್ನುವುದು ಸಂವಿಧಾನಬದ್ಧ ಬದ್ಧತೆ. ಆದರೆ, ಇದೊಂದು ಮುಚ್ಚುಮರೆಯ ಸರ್ಕಾರ. ಈ ಬಜೆಟ್ನಲ್ಲಿ ಸರ್ಕಾರ ಬಿಚ್ಚಿಟ್ಟಿದ್ದಕ್ಕಿಂತ ಮುಚ್ಚಿಟ್ಟಿದ್ದೇ ಹೆಎಂದರು.ಎಂದು ಕಿಡಿಕಾರಿದರು.
ಆಯವ್ಯಯವನ್ನು ಇಲಾಖಾವಾರು ನೀಡದೆ ಆರು ವಲಯಗಳಾಗಿ ವಿಂಗಡಿಸಿ ಯಾವ ಇಲಾಖೆಗೆ ಎಷ್ಟು ಅನುದಾನ ನೀಡಲಾಗಿದೆ. ಇಲಾಖೆಗಳ ಕಾರ್ಯಕ್ರಮಗಳೇನು, ಕಳೆದ ವರ್ಷದ ಸಾಧನೆಗಳೇನು, ಹೊಸ ಯೋಜನೆಗಳೇನು ಎಂಬ ವಿವರಗಳೇ ಇಲ್ಲ.
ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಬಜೆಟ್ಗೆ ಇದ್ದ ಮಹತ್ವ ಮತ್ತು ಪಾವಿತ್ರ್ಯವನ್ನೇ ಹಾಳು ಮಾಡಿದ್ದಾರೆ. ರಾಜ್ಯದಲ್ಲಿರುವ 33 ಇಲಾಖೆಗಳನ್ನು ಆರು ವಲಯಗಳನ್ನಾಗಿ ಮಾಡಿ ಗೊಂದಲ ಸೃಷ್ಟಿಸಲಾಗಿದೆ. ಈ ಆರೂ ವಲಯಗಳಿಗೆ ಕಳೆದ ಬಜೆಟ್ನಲ್ಲಿ ನಿಗದಿಪಡಿಸಲಾಗಿದ್ದ ಅನುದಾನಕ್ಕಿಂತ ಕಡಿಮೆ ಹಣ ನಿಗದಿಪಡಿಸಲಾಗಿದೆ.
ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ ರೂ 1231 ಕೋಟಿ , ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯಕ್ಕೆ ರೂ 9943 ಕೋಟಿ, ಆರ್ಥಿಕ ಅಭಿವೃದ್ಧಿ ಪ್ರಚೋದನೆ ವಲಯಕ್ಕೆ ರೂ 3203 ಕೋಟಿ, ಬೆಂಗಳೂರು ಸಮಗ್ರ ಅಭಿವೃದ್ಧಿಗೆ ರೂ 997 ಕೋಟಿ, ಸಂಸ್ಕೃತಿ – ಪರಂಪರೆ ಹಾಗೂ ನೈಸರ್ಗಿಕ ಸಂಪನ್ಮೂಲ ವಲಯಕ್ಕೆ 1907 ಕೋಟಿ ಕಡಿಮೆ ಅನುದಾನವನ್ನು ನಿಗದಿಪಡಿಸಲಾಗಿದೆ ಎಂದರು.
ಆಡಳಿತ ಸುಧಾರಣಾ ವಲಯಕ್ಕೆ ಮಾತ್ರ ರೂ.42,325 ಕೋಟಿಯಷ್ಟು ಅನುದಾವನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಈ ಹೆಚ್ಚುವರಿ ಅನುದಾನಕ್ಕೆ ಯಾವ ಹೊಸ ಯೋಜನೆಗಳನ್ನೂ ಪ್ರಕಟಮಾಡಿಲ್ಲ.
ಸಂಕಷ್ಟಗಳ ಸರಮಾಲೆಗೆ ಸಿಲುಕಿರುವ ರೈತರು ದೇಶಾದ್ಯಂತ ಬೀದಿಗಿಳಿದಿದ್ದಾರೆ. ಕೃಷಿ ವಿರೋಧಿ ಕಾಯ್ದೆಗಳ ಮೂಲಕ ರೈತರನ್ನು ದಿವಾಳಿ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ಜೊತೆ ಸೇರಿರುವ ರಾಜ್ಯ ಸರ್ಕಾರ ತನ್ನ ಬಜೆಟ್ನಲ್ಲೂ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.
ಕಳೆದ ವಿಧಾನಸಭಾ ಚುನಾವಣೆಯ ಪೂರ್ವದಲ್ಲೂ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ‘ಒಂದು ಲಕ್ಷದವರೆಗಿನ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರ ಬ್ಯಾಂಕ್ಗಳಲ್ಲಿನ ಕೃಷಿ ಸಾಲವನ್ನು ಮನ್ನಾ ಮಾಡುತ್ತೇವೆ’ ಎಂದು ಭರವಸೆ ನೀಡಿತ್ತು. ಈ ಸರಕಾರ ಅಧಿಕಾರಕ್ಕೆ ಬಂದ ನಂತರ ಮಂಡಿಸಿದ ಎರಡೂ ಬಜೆಟ್ಗಳಲ್ಲೂ ರೈತರ ಸಾಲ ಮನ್ನಾದ ಪ್ರಸ್ತಾಪವೇ ಇಲ್ಲ.
ಕೃಷಿ, ತೋಟಗಾರಿಕೆ, ಜಲಸಂಪನ್ಮೂಲ, ಸಹಕಾರ, ಮೀನುಗಾರಿಕೆ, ರೇಷ್ಮೆ ಮೊದಲಾದ ಕೃಷಿ ಸಂಬಂಧಿತ ಇಲಾಖೆಗಳಿಗೆ ಕಳೆದ ಬಜೆಟ್ನಲ್ಲಿ ರೂ. 32,259 ಕೋಟಿ ಅನುದಾನ ನೀಡಿದ್ದರೆ ಪ್ರಸಕ್ತ ಬಜೆಟ್ನಲ್ಲಿ ರೂ 31,028 ಕೋಟಿ ಅನುದಾನ ಒದಗಿಸಲಾಗಿದೆ. ಅಂದರೆ, ರೂ 1,231 ಕೋಟಿ ಅನುದಾನ ಕಡಿಮೆ ಮಾಡಲಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತನ್ನ ಎರಡನೇ ಬಜೆಟ್ನಲ್ಲಿ ಕೂಡ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಜಾತಿ ಹಾಗೂ ಅಲ್ಪಸಂಖ್ಯಾತ ವರ್ಗಗಳನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎಂದು ಹೇಳಿದರು.
2020-21 ನೇ ಸಾಲಿನಲ್ಲಿ ಎಸ್ಸಿಎಸ್ಪಿ/ಟಿಎಸ್ಪಿ ಯೋಜನೆಗೆ 26,930 ಕೋಟಿ ಅನುದಾನ ಒದಗಿಸಲಾಗಿತ್ತು. ಈ ಬಾರಿ ಬಜೆಟ್ ಗಾತ್ರ ಹೆಚ್ಚಳಕ್ಕೆ ಅನುಗುಣವಾಗಿ ಈ ಯೋಜನೆಗೆ ಅನುದಾನವನ್ನು ಹೆಚ್ಚಿಸಬೇಕಿತ್ತು. ಆದರೆ ಈ ವರ್ಷದ ಬಜೆಟ್ನಲ್ಲಿ ನೀಡಲಾಗಿರುವ ಅನುದಾನ ರೂ 26,005 ಕೋಟಿ ಮಾತ್ರ.
ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಸಮಾಜದ ಅಭಿವೃದ್ಧಿಗಾಗಿ ನಿಗಮವನ್ನು ಸ್ಥಾಪಿಸಿ ತಲಾ ರೂ.500 ಕೋಟಿ ಅನುದಾನ ನಿಗದಿಪಡಿಸಿರುವುದನ್ನು ನಾನು ಸ್ವಾಗತಿಸುತ್ತೇನೆ. ಅಂಬೇಡ್ಕರ್, ವಾಲ್ಮೀಕಿ, ಆದಿಜಾಂಬವ, ಬೋವಿ, ವಿಶ್ವಕರ್ಮ, ಕಾಡುಗೊಲ್ಲರ, ಅಂಬಿಗರ ಚೌಡಯ್ಯ, ಸವಿತಾ ಸಮಾಜ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ಒಟ್ಟು ಕೇವಲ 500 ಕೋಟಿ ಅನುದಾನ ನೀಡುವ ಮೂಲಕ ತಳಸಮುದಾಯಗಳಿಗೆ ಅನ್ಯಾಯ ಮಾಡಲಾಗಿದೆ.
ಮುಖ್ಯಮಂತ್ರಿಗಳು ಆರ್ಥಿಕತೆ ಸಕಾರಾತ್ಮಕ ಹಾದಿಯಲ್ಲಿ ಇದೆ ಎಂದು ಬಜೆಟ್ನಲ್ಲಿ ಹೇಳಿದ್ದಾರೆ. ಆದರೆ ಶೇ.14 ರಷ್ಟು ಪ್ರಗತಿಯಲ್ಲಿದ್ದ ರಾಜ್ಯದ ಆರ್ಥಿಕತೆ ಈ ಬಾರಿಯ ಬಜೆಟ್ನಲ್ಲಿರುವ ಅಂಕಿಅಂಶಗಳನ್ನು ನೋಡಿದರೆ ಗಾಬರಿ ಹುಟ್ಟಿಸುವಂತೆ ಇವೆ.
ರಾಜ್ಯ ಆದಾಯ ಎಂದು ಹೇಳುತ್ತಿರುವುದು ಬರಿ ಸಾಲವನ್ನು. ತೆರಿಗೆ ಸಂಗ್ರಹವು ಮುಖ್ಯಮಂತ್ರಿಗಳ ಭಾಷಣದ ಪ್ರಕಾರ ಕರ್ನಾಟಕದಲ್ಲಿ ತುಸು ಸಮಾಧಾನಕರವಾಗಿದ್ದರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ನ್ಯಾಯಯುತವಾಗಿ ನೀಡಬೇಕಾದ ಪ್ರಮಾಣದಲ್ಲಿ ನೀಡದೆ ಹೋದ ಕಾರಣಕ್ಕೆ ರಾಜ್ಯವು ಭೀಕರ ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿದೆ.
ರಾಜ್ಯದ ಇತ್ತೀಚಿನ ವರ್ಷಗಳಲ್ಲಿಯೆ ಪ್ರಥಮ ಬಾರಿ ರೂ.19,485.84 ಕೋಟಿ ರಾಜಸ್ವ ಕೊರತೆ 2020-21 ರಲ್ಲಿ ಎದುರಾಗಿದೆ. 2021-22 ಕ್ಕೆ ರೂ.15,133 ಕೋಟಿ ರಾಜಸ್ವದ ಕೊರತೆ ಆಗುವುದೆಂದು ಬಜೆಟ್ನಲ್ಲಿ ತಿಳಿಸಿದ್ದಾರೆ. 2020-21 ರಲ್ಲಿ ಬಜೆಟ್ ಮಂಡಿಸಿದಾಗ ರೂ.143 ಕೋಟಿ ರಾಜಸ್ವ ಉಳಿಕೆ ಇರುತ್ತದೆ ಎಂದು ಅಂದಾಜಿಸಲಾಗಿತ್ತು ನಂತರದ ಪರಿಷ್ಕೃತ ಬಜೆಟ್ನಲ್ಲಿ ರಾಜಸ್ವ ಕೊರತೆ ಎದುರಾಯಿತು. 5 ವರ್ಷದ ನಮ್ಮ ಸರ್ಕಾರದಲ್ಲಿ ರಾಜಸ್ವದ ಕೊರತೆ ಎಂದೂ ಆಗಿಲ್ಲ.
ಬಜೆಟ್ನ ಅಂದಾಜಿನ ಪ್ರಕಾರ ವಿತ್ತೀಯ ಕೊರತೆ ಜಿ.ಎಸ್.ಡಿ.ಪಿ.ಯ ಶೇ.3.48 ರಷ್ಟು ಇರುತ್ತದೆ. ಇದರ ಪ್ರಕಾರ 2021-22 ರಲ್ಲಿ ವಿತ್ತೀಯ ಕೊರತೆ ರೂ.59,240 ಕೋಟಿ ಇರುತ್ತದೆ. ಈ ವರ್ಷ ರೂ.71,332 ಕೋಟಿಗಳಷ್ಟು ರಾಜ್ಯ ಸರ್ಕಾರ ಸಾಲ ಪಡೆಯುವುದಾಗಿ ಘೋಷಿಸಿದೆ. ಇದರಿಂದ ಸರ್ಕಾರದ ಮೇಲೆ ಬಹಳಷ್ಟು ಹೊರೆಯಾಗುತ್ತದೆ.
ಎಫ್.ಆರ್.ಬಿ.ಎಂ. ಕಾಯ್ದೆ ಪ್ರಕಾರ ವಿತ್ತೀಯ ಕೊರತೆಯು ಜಿ.ಡಿ.ಪಿ.ಯ ಶೇ.3 ಕ್ಕಿಂತ ಕಡಿಮೆ ಇರಬೇಕೆಂದು ನಿಯಮವಿದೆ. ಆದರೆ ಸರ್ಕಾರವು ಕೊರೋನಾ ಸಂದರ್ಭದಲ್ಲಿ ಸರಿಯಾದ ಆಡಳಿತವನ್ನು ನಡೆಸದೇ ಸರ್ಕಾರದ ವೈಫಲ್ಯವನ್ನು ಮುಚ್ಚಿ ಹಾಕಲು ಜಿ.ಎಸ್.ಡಿ.ಪಿ.ಯ ಶೇ.4 ರಷ್ಟು ಹೆಚ್ಚಿಗೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಳ್ಳಲಾಗಿದೆ. ಇದು ಒಳ್ಳೆಯ ಆರ್ಥಿಕ ನೀತಿಯ ಲಕ್ಷಣವಲ್ಲ.
5 ವರ್ಷದ ನಮ್ಮ ಸರ್ಕಾರದಲ್ಲಿ ವಿತ್ತೀಯ ಕೊರತೆಯು ಜಿ.ಎಸ್.ಡಿ.ಪಿಯ. ಶೇ.2.5 ರ ಆಸುಪಾಸಿನಲ್ಲೇ ಇತ್ತು.
2020-21 ರಲ್ಲಿ ಬಿಡುಗಡೆ ಮಾಡಿದ ಮಧ್ಯಮಾವಧಿ ವಿತ್ತೀಯ ಯೋಜನೆ – 2020-2024 ರ ಪ್ರಕಾರ ಹೆಚ್ಚುವರಿ ರಾಜಸ್ವ ನಿರೀಕ್ಷೆಯಲ್ಲಿದ್ದ ರಾಜ್ಯ 2020-21 ರಲ್ಲೇ ದೊಡ್ಡ ಮಟ್ಟದ ರಾಜಸ್ವ ಕೊರತೆಯನ್ನು ಎದುರಿಸುತ್ತಿದೆ.
2022-23 ರಿಂದ ಜಿ.ಎಸ್.ಟಿ. ಪರಿಹಾರ ಸ್ಥಗಿತಗೊಳ್ಳುವುದರಿಂದ ಇದರ ಜೊತೆಗೆ ರೂ.30,743 ಕೋಟಿ ರಾಜಸ್ವ ಕೊರತೆಯಾಗಲಿದೆ ಎಂದು ಅಂದಾಜು ಮಾಡಲಾಗಿದೆ. 2023-24 ರಲ್ಲಿ ಈ ರಾಜಸ್ವ ಕೊರತೆಯು ರೂ.46,831 ಕೋಟಿಯಾಗಲಿದೆ.
2020-21 ರಲ್ಲಿ ರೂ.70,411 ಕೋಟಿ ಸಾಲ ಮಾಡಿದೆ. 2019-20 ರವರೆಗೆ ರೂ.3,27,209 ಕೋಟಿ ಸಾಲ ರಾಜ್ಯದ ಮೇಲಿತ್ತು. ನಮ್ಮ ಸರ್ಕಾರದ ಅಂತಿಮ ವರ್ಷದಲ್ಲಿ (2017-18)ರಲ್ಲಿ ರೂ.2,42,420 ಕೋಟಿ ಸಾಲ ಮಾಡಲಾಗಿತ್ತು. ಜಿ.ಎಸ್.ಡಿ.ಪಿಯ ಮೇಲೆ ಸಾಲದ ಪ್ರಮಾಣ ಶೇ.18.93 ಇತ್ತು.
2020-21 ರ ಫೆಬ್ರವರಿ ಅಂತ್ಯಕ್ಕೆ ರಾಜ್ಯದ ಸಾಲ ರೂ.3,97,881 ಕೋಟಿ ಇದೆ. ಮುಂದಿನ ವರ್ಷಕ್ಕೆ ರೂ.4,57,889 ಕೋಟಿಗಳಷ್ಟು ಸಾಲ ರಾಜ್ಯದ ಜನರ ಮೇಲೆ ಇರುತ್ತದೆ ಎಂದು ಅಂದಾಜಿಸಲಾಗಿದೆ. ಇದು ಜಿ.ಎಸ್.ಡಿ.ಪಿ.ಯ ಶೇ.26.9 ರಷ್ಟು ಆಗಿದೆ. ಎಫ್.ಆರ್.ಬಿ.ಎಂ. ಕಾಯ್ದೆಯ ನಿಯಮದ ಪ್ರಕಾರ ಜಿ.ಎಸ್.ಡಿ.ಪಿಯ ಶೇ.25 ರಷ್ಟು ಕಡಿಮೆ ಇರಬೇಕು. 5 ವರ್ಷದ ನಮ್ಮ ಸರ್ಕಾರವು ಅದು ಶೇ.20 ರ ಆಸುಪಾಸಿನಲ್ಲಿ ಇತ್ತು.
ರಾಜಸ್ವ ಆದಾಯವು ಕಳೆದ ಬಜೆಟ್ ಅಂದಾಜಿಗಿಂತ ಈ ವರ್ಷದ ಅಂದಾಜಿನಲ್ಲಿ ಸುಮಾರು ರೂ.7,000 ಕೋಟಿಯಷ್ಟು ಕಡಿಮೆಯಾಗಿದೆ. ಕಳೆದ ಬಜೆಟ್ನ ಅಂದಾಜು ಮತ್ತು ಪರಿಷ್ಕೃತ ರಾಜಸ್ವ ಸ್ವೀಕೃತಿಯಲ್ಲಿ ರೂ.20,000 ಕೋಟಿಯಷ್ಟು ಕಡಿಮೆಯಾಗಿದೆ. ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆ ಮತ್ತು ಅನುದಾನದ ಕೊರತೆಯೇ ಇದಕ್ಕೆ ಹೊಣೆ.
2020-21 ರ ಪರಿಷ್ಕೃತ ವೆಚ್ಚವು ರೂ.2,29,924.73 ಕೋಟಿ ಇರುತ್ತದೆ ಎಂದು ಅಂದಾಜಿಸಲಾಗಿದೆ. ಇದು ಬಜೆಟ್ನ ಅಂದಾಜಿಗಿಂತ ರೂ.8,000 ಕೋಟಿಯಷ್ಟು ಕಡಿಮೆಯಾಗಿದೆ.
2020-21 ರಲ್ಲಿ ರೂ.2,37,893 ಕೋಟಿಗಳಷ್ಟು ಬಜೆಟ್ ಅನ್ನು ಮಂಡಿಸಿದ್ದರೂ ಕಡೆಯದಾಗಿ ಇಲಾಖೆಗಳಿಗೆ ನೀಡಲು ಉದ್ದೇಶಿಸಿದ್ದ ಮೊತ್ತ ರೂ.1,96,369.2 ಕೋಟಿ. ಅದರಲ್ಲಿ ಹಳೆಯ ಬಾಕಿ ರೂ.13,491.7 ಕೋಟಿ. ಒಟ್ಟಿಗೆ ಸೇರಿ ಖರ್ಚು ಮಾಡಲು ಲಭ್ಯವಿದ್ದ ಅನುದಾನ ರೂ.2,09,860 ಕೋಟಿ.
ಇಲಾಖೆಗಳಿಗೆ ಜನವರಿಯವರೆಗೆ ಬಿಡುಗಡೆ ಮಾಡಿದ್ದು ರೂ.1,42,851 ಕೋಟಿ. ಖರ್ಚಾಗಿರುವುದು ರೂ.1,30,998 ಕೋಟಿ ಮಾತ್ರ. 2020-21 ರಲ್ಲಿ ರೂ.2,37,893 ಕೋಟಿಯನ್ನು ಪರಿಷ್ಕರಿಸಿ ರೂ.2,29,925 ಕೋಟಿಗಳಿಗೆ ಇಳಿಸಿಕೊಂಡರು.
ಇದನ್ನೂ ಓದಿ | ರಾಜ್ಯ ಬಜೆಟ್-2021 ವಿಶ್ಲೇಷಣೆ | ಯಡ್ಡಿ ಬಜೆಟ್ – ಉತ್ಪ್ರೇಕ್ಷೆ, ತಾರತಮ್ಯ ಮತ್ತು ಸುಳ್ಳು ಅಂಕಿಅಂಶಗಳ ಕಣ್ಕಟ್ಟು..!
ಕೊರೋನಾ ನಿರ್ವಹಣೆಗಾಗಿ ರೂ.5,372 ಕೋಟಿ ಖರ್ಚು ಮಾಡಿಯೂ ಒಟ್ಟು ಖರ್ಚು ಅವರ ಬಜೆಟ್ ಅಂದಾಜಿಗಿಂತ ಕಡಿಮೆಯಿದೆ. ಇದರಲ್ಲಿ ಇಲಾಖೆಗಳಿಗೆ ಖರ್ಚು ಮಾಡಲು ಸಿಕ್ಕಿದ್ದು ರೂ.1,96,369 ಕೋಟಿ. ಇನ್ನು ಉಳಿದ ರೂ.33,556 ಕೋಟಿಗಳು ಸಾಲ ಮರುಪಾವತಿ ಮತ್ತು ಬಡ್ಡಿ ಪಾವತಿಗೆ ಖರ್ಚಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 2021-22 ರಲ್ಲಿ ಜಿ.ಡಿ.ಪಿ.ಯು ಶೇ.11 ರಷ್ಟು ಬೆಳವಣಿಗೆ ಕಾಣುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ರಾಜ್ಯದ ಸ್ವಂತ ತೆರಿಗೆಗಳ ಸಂಗ್ರಹಗಳ ಗುರಿಯು 2020-21 ರ ಮೂಲ ಬಜೆಟ್ಗೆ ಹೋಲಿಸಿದರೆ ಶೇ.3.12 ರಷ್ಟು ಕಡಿಮೆಯಾಗಿದೆ.
ಕೇಂದ್ರದ ತೆರಿಗೆ ಪಾಲು 2020-21ರ ಮೂಲ ಬಜೆಟ್ನಲ್ಲಿ ರೂ.28,591.23 ಕೋಟಿ ನಿರೀಕ್ಷೆ ಮಾಡಲಾಗಿತ್ತು. 2021-22 ರ ಆಯವ್ಯಯದಲ್ಲಿ ಇದು ರೂ.24,273.6 ಕೋಟಿಗೆ ಇಳಿಯಲಿದೆ. ರೂ.4,318 ಕೋಟಿಗಳಷ್ಟು ಕಡಿಮೆಯಾಗಿದೆ. ಅಂದರೆ ಶೇ.15 ರಷ್ಟು ಕಡಿಮೆಯಾಗಿದೆ.
ದೇಶದ ಜಿ.ಡಿ.ಪಿ.ಯು ಶೇ.11 ಕ್ಕೂ ಹೆಚ್ಚು ಪ್ರಗತಿಯಾಗುವುದಾದರೆ ನಮಗೆ ನೀಡಬೇಕಾದ ತೆರಿಗೆ ಹಂಚಿಕೆಯೂ ಅಷ್ಟೇ ಪ್ರಮಾಣದಲ್ಲಿ ಹೆಚ್ಚಾಗಿ ರಾಜ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಆದಾಯ ಬರಬೇಕಿತ್ತು ಅಲ್ಲವೇ? ಕೇಂದ್ರ ಮತ್ತು ರಾಜ್ಯಗಳಲ್ಲಿನ ಎರಡೂ ಬಿ.ಜೆ.ಪಿ. ಸರ್ಕಾರಗಳು ಜನರ ತಲೆಗೆ ಟೋಪಿ ಹಾಕುತ್ತಿವೆ ಎಂದರು.
ರಾಜ್ಯ ಬಜೆಟ್ನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ವಿಧಿಸಲಾಗುತ್ತಿದ್ದ ಮಾರಾಟ ತೆರಿಗೆಯನ್ನು ಕಡಿಮೆ ಮಾಡುವ ಮೂಲಕ ಜನರಿಗೆ ನೆರವಾಗಬೇಕಿತ್ತು ಹಾಗೂ ಕೇಂದ್ರ ಸರ್ಕಾರದ ಮೇಲೆ ತೆರಿಗೆ ಕಡಿತಗೊಳಿಸುವಂತೆ ಒತ್ತಡ ಹೇರಬೇಕಿತ್ತು. ಈ ಅಂಶಗಳೇ ಇಂದಿನ ಬಜೆಟ್ನಲ್ಲಿ ಇಲ್ಲ ಎಂದು ಆರೋಪಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ರಾಜ್ಯ ಬಜೆಟ್-2021 ವಿಶ್ಲೇಷಣೆ | ಯಡ್ಡಿ ಬಜೆಟ್ – ಉತ್ಪ್ರೇಕ್ಷೆ, ತಾರತಮ್ಯ ಮತ್ತು ಸುಳ್ಳು ಅಂಕಿಅಂಶಗಳ ಕಣ್ಕಟ್ಟು..!

- ಶಿವಸುಂದರ್
ಆತ್ಮೀಯರೇ ,
ಬಜೆಟ್ಟಿನ ಬಗ್ಗೆ ಈಗಾಗಲೇ ಸಾಕಷ್ಟು ಅಭಿಪ್ರಾಯಗಳು ಬಂದಾಗಿವೆ. ಇತರ ಎಲ್ಲಾ ಕ್ಷೇತ್ರಗಳಿಗೂ ತೋರಿಕೆಯಲ್ಲಾದರೂ ಬಜೆಟ್ ಹೆಚ್ಚಳ ಮಾಡಿರುವ ಯಡ್ಡಿ ಸರ್ಕಾರ SCSP-STP ಯೋಜನೆಗಳಿಗೆ ಮಾತ್ರ ಕೋವಿಡ್ ಕಾರಣ ತೋರಿಸಿ ಈ ಬಾರಿ ಹೆಚ್ಚಳ ಮಾಡಲಾಗುವುದಿಲ್ಲವೆಂದು ಸ್ಪಷ್ಟವಾಗಿ ಘೋಷಿಸಿದೆ.
ಆದರೆ ಅದೇ ಸಮಯದಲ್ಲಿ ದಲಿತ-ಹಿಂದುಳಿದ ಸಮುದಾಯಗಳ ಎಲ್ಲಾ ಅಭಿವೃದ್ಧಿ ಮಂಡಳಿಗಳಿಗೆ ಒಟ್ಟಾರೆಯಾಗಿ 500 ಕೋಟಿಗಳನ್ನು ಮಾತ್ರ ನೀಡಿದ್ದರೆ, ಲಿಂಗಾಯತ ಹಾಗು ಒಕ್ಕಲಿಗ ಮಂಡಳಿಗಳಿಗೆ ತಲಾ 500 ಕೋಟಿ ಘೋಷಿಸಲಾಗಿದೆ.ಮಾತ್ರವಲ್ಲದೆ ಬಸವಕಲ್ಯಾಣದಲ್ಲಿಯೇ ಆಧುನಿಕ ಅನುಭವ ಮಂಟಪಕ್ಕೆ 500ಕೋಟಿ ನೀಡಲಾಗಿದೆ.
ಈ ಸರ್ಕಾರ ಯಾರದ್ದು ಎಂಬುದನ್ನು ಅರ್ಥಮಾಡಿಕೊಳ್ಳಲು ಬಜೆಟ್ ವೆಚ್ಚದಲ್ಲಿರುವ ಈ ಆದ್ಯತೆಗಳು ಮತ್ತು ತಾರತಮ್ಯಗಳು ಸಾಕು. ಆದರೆ ನಾನು ಈಗ ಹೇಳಲು ಹೊರಟಿರುವುದು ಅದಲ್ಲ. ಇಡೀ ಬಜೆಟ್ಟಿನಲ್ಲಿ ಘೋಷಿಸಲಾಗಿರುವ ಆದಾಯ ಮತ್ತು ಹಾಗು ಅದನ್ನು ಆಧರಿಸಿದ ವೆಚ್ಚಗಳ ಬುನಾದಿಯಲ್ಲೆ ಉತ್ಪ್ರೇಕ್ಷೆ ಮತ್ತು ಕಣ್ಣುಕಟ್ಟಿದೆ. ಇದೆ ಸುಳ್ಳಾದರೆ ಉಳಿದವು ಸುಳ್ಳೇ ಆಗಿರುತ್ತಲ್ಲವೇ?
ಉದಾಹರಣೆಗೆ: ರಾಜ್ಯದ 2021-22 ಸಾಲಿನ ವೆಚ್ಚವನ್ನು ರೂ. 2,46,207 ಕೋಟಿಯೆಂದು ನಿಗದಿ ಪಡಿಸಲಾಗಿದೆ. ಹಾಗು ರಾಜ್ಯದ ಸ್ವಂತ ಆದಾಯ 1,72,271 ಕೋಟಿ ಗಳಾಗಲಿದೆಎಂದು ಅಂದಾಜಿಸಲಾಗಿದೆ.
ಈ ಅಂದಾಜುಗಳನ್ನು ರಾಜ್ಯದ ಒಟ್ಟಾರೆ ರಾಜ್ಯ ಉತ್ಪನ್ನದ ಅಭಿವೃದ್ಧಿ ದರದ ಅಂದಾಜನ್ನು (Gross State Domestic Produce- GSDP) ಆಧರಿಸಿ ಮಾಡಲಾಗುತ್ತದೆ. GSDP ಯ ಅಂದಾಜು ಶೇ. 7ರಷ್ಟು ತೆರಿಗೆ ಸಂಗ್ರಹವಾಗಲಿದೆ ಎಂದು ಅಂದಾಜು ಮಾಡಲಾಗುತ್ತದೆ. ಕೇಂದ್ರದಲ್ಲಿ ಅದು 12-14% ಇರುತ್ತದೆ.
ಇದನ್ನೂ ಓದಿ |ರಾಜ್ಯ ಬಜೆಟ್ | 60 ಸಾವಿರ ಮಹಿಳೆಯರಿಗೆ ಉದ್ಯೋಗ : ಸಿಎಂ ಯಡಿಯೂರಪ್ಪ
ಸರ್ಕಾರದ ಪ್ರಕಾರ ರಾಜ್ಯದ GSDP ಯು 2019-20 ಕ್ಕೆ ಹೋಲಿಸಿದಲ್ಲಿ 2020-21ನೇ ಸಾಲಿನಲ್ಲಿ ಕೋವಿಡ್ ಕಾರಣಕ್ಕೆ ಶೇ. 2.6ರಷ್ಟು ಕುಸಿತವನ್ನು ಕಂಡಿದೆ. 2019-20 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ GSDP ಯು 16,98,685 ಕೋಟಿ ರೂಪಾಯಿಗಳು. ಇದು ಕೋವಿಡ್ ಕಾರಣಕ್ಕೆ 2020-21ನೇ ಸಾಲಿನಲ್ಲಿ ಶೇ. 2.6 ರಷ್ಟು ಕಡಿಮೆಯಾಗಿದೆ ಎಂದರೆ 16,65,320 ಕೋಟಿ ರೂಪಾಯಿಗಳಾಗಬೇಕು. ಹೀಗಾಗಿ ಎಲ್ಲಾ ತೆರಿಗೆ ಸಂಗ್ರಹ ಅಂದಾಜುಗಳನ್ನು ಇದರ ಆಧಾರದಲ್ಲಿ ಮಾಡಬೇಕು.
ಆದರೆ ಬಜೆಟ್ ದಸ್ತಾವೇಜಿನ ಜೊತೆ ಕಡ್ಡಾಯವಾಗಿ ಒದಗಿಸಬೇಕಿರುವ Mid Term Fiscal Plan-MTFP ದಸ್ತಾವೇಜಿನಲ್ಲಿ ಸರ್ಕಾರವು :
“Government of India had communicated a figure of Rs.18,03,609 Crore as State’s GSDP for FY 2020-21 and it has also directed that the same amount be used for evaluation of states fiscal parameters”
ಅಂದರೆ ” ಭಾರತ ಸರ್ಕಾರವು ಕರ್ನಾಟಕದ 2020-21 ನೆ ಸಾಲಿಗೆ ರಾಜ್ಯದ GSDP ಯು 18,03,609 ಕೋಟಿ ಎಂದು ತಿಳಿಸಿದ್ದು ಎಲ್ಲಾ ವಿತ್ತೀಯ ಲೆಕ್ಕಾಚಾರಗಳಿಗೂ ಅದೇ ಅಂಕಿಅಂಶವನ್ನೇ ಬಳಸಬೇಕೆಂದು ಎಂದು ನಿರ್ದೇಶಿಸಿದೆ ” ಎಂದು ಹೇಳಿಕೊಂಡಿದೆ.
ಆದರೆ ಅವೆರಡರ ನಡುವಿನ ವ್ಯತ್ಯಾಸವನ್ನೇನು ಕೇಂದ್ರ ಸರ್ಕಾರ ಭರಿಸುತ್ತಿಲ್ಲ. ಅಷ್ಟೇ ಅಲ್ಲ. ಕೇಂದ್ರದಿಂದ ಸಿಗುವ GST ಪರಿಹಾರ, ಅನುದಾನ ಮತ್ತು ತೆರಿಗೆ ಪಾಲು ಎಲ್ಲವನ್ನು ಕರ್ನಾಟಕಕ್ಕೇ ಕಡಿಮೆ ಮಾಡಲಾಗಿದೆ. ಆದರೂ ಲೆಕ್ಕಾಚಾರವನ್ನು ಮಾತ್ರ ಇರುವುದಕ್ಕಿಂತ ಒಂದು ಲಕ್ಷ ಕೋಟಿ ಹೆಚ್ಚಿಗೆಸೇರಿಸಿ ಮಾಡಬೇಕೆಂದು ಆದೇಶಿಸಿದೆ!! ಹೀಗಾಗಿ ಬಜೆಟ್ಟಿನಲ್ಲಿ ಹೇಳಲಾಗಿರುವ ಪರಿಷ್ಕೃತ ಅಂದಾಜುಗಳಲ್ಲೇ ದೋಷವಿದೆ. ದೊಡ್ಡ ಸುಳ್ಳಿದೆ.
ಎರಡನೆಯದಾಗಿ, ಬಜೆಟ್ಟಿನ ಜೊತೆಗೆ ಒದಗಿಸಲಾಗಿರುವ MTFP – Mid Term Fiscal Plan -ಪ್ರಕಾರ ಹಾಗು 15ನೇ ಹಣಕಾಸು ಆಯೋಗದ ಅಂದಾಜಿನ ಪ್ರಕಾರ ೨೦೨೧-೨೨ ರ ಸಾಲಿನಲ್ಲಿ ಕರ್ನಾಟದ GSDP ಯು 17,02,227 ಕೋಟಿ ರೂ. ಗಳಿಗೆ ಇಳಿಯಲಿದೆ.
ಅಂದರೆ 2020-21 ನೇ ಸಾಲಿಗಿಂತ ಒಂದು ಲಕ್ಷ ಕೋಟಿ ಕಡಿಮೆಯಾಗಲಿದೆ. ಹಾಗಿದ್ದಲ್ಲಿ ಅದೇ ಪ್ರಮಾಣದಲ್ಲಿ ರಾಜ್ಯದ ಸ್ವಂತ ತೆರಿಗೆ ಸಂಗ್ರಹ ಮತ್ತು ಆದಾಯಗಳು ಕಡಿಮೆಯಾಗಬೇಕಲ್ಲವೇ? ಆದರೆ ಬಜೆಟ್ಟಿನ ಲೆಕ್ಕಾಚಾರದ ಪ್ರಕಾರ 2021-22 ನೇ ಸಾಲಿನಲ್ಲಿ ಸ್ವಂತ ತೆರಿಗೆ ರಾಜಸ್ವವು 1,24,202 ಕೋಟಿ ರು.ಗಳಾಗಲಿದೆಯಂತೆ!
ಆದರೆ ಹೆಚ್ಚು ಕಡಿಮೆ ಇಷ್ಟೇ GSDP ಇದ್ದ 2019-20ನೇ ಸಾಲಿನಲ್ಲಿ ಸ್ವಂತ ರಾಜಸ್ವವು 1,16, 860 ಕೋಟಿ ರೂಪಾಯಿಗಳು ಮಾತ್ರ…ಆದರೆ 2021-22ನೇ ಸಾಲಿನಲ್ಲಿ, ಇನ್ನು ಕೋವಿಡ್ ದಾಳಿಯಿಂದಾಗಿ ಭಾರತವು 2019ರ ಅಭಿವೃದ್ಧಿ ದರವನ್ನು ಸಾಧಿಸಲಾಗದು ಎಂಬುದು ಸ್ಪಷವಾಗಿರುವಾಗಲೂ, ಯಡ್ಡಿ ಸರ್ಕಾರ ಮಾತ್ರ ಅಂದಾಜು 8000 ಕೋಟಿ ರೂಪಾಯಿಗಳನ್ನು ಹೆಚ್ಚಿಗೆ ಸಂಗ್ರಹಿಸಲಿದೆಯೆಂದು ಅಂದಾಜಿಸಲಾಗಿದೆ!
ಇದಲ್ಲದೆ, 15ನೇ ಹಣಕಾಸು ಆಯೋಗದ ವರದಿ 2021-22ರಿಂದ ಜಾರಿಗೆ ಬರಲಿದ್ದು ಕರ್ನಾಟಕದ ಪಾಲು 30,000 ಕೋಟಿ ಕಡಿಮೆಯಾಗಲಿದೆ. ಅದನ್ನು ಈ ಬಜೆಟ್ ಲೆಕ್ಕಾಚಾರಗಳಲ್ಲಿ ಸಂಪೂರ್ಣವಾಗಿ ಲೆಕ್ಕಕ್ಕೆ ತೆಗೆದುಕೊಂಡಿಲ್ಲ.
ಜೊತೆಗೆ 2018 ರಿಂದಾಚೆಗೆ ಒಂದು ವರ್ಷವೂ ಕರ್ನಾಟಕಕ್ಕೇ ಸಂಪೂರ್ಣ GST ಪರಿಹಾರ ದೊರೆತಿಲ್ಲ. ಕಳೆದ ವರ್ಷವಂತೂ ಕೇವಲ ಶೇ. 53 ರಷ್ಟು ಪಾಲು ಮಾತ್ರ ಕರ್ನಾಟಕಕ್ಕೇ ಸಂದಿದೆ. ಈ ಎಲ್ಲಾ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ನೋಡಿದಾಗ ಬಜೆಟ್ಟಿನಲ್ಲಿ ಸರ್ಕಾರ ಘೋಷಿರುವ ಸ್ವೀಕೃತಿಗಿಂತ ವಾಸ್ತವದಲ್ಲಿ ಶೇ. 20ರಷ್ಟು ಅಂದರೆ 40-50 ಸಾವಿರ ಕೋಟಿ ಹಣ ಕೊರತೆ ಬೀಳಲಿದೆ.
ಇದು ಬಜೆಟ್ಟಿನಲ್ಲಿ ತೋರಿಸಿರುವ ಕೊರತೆಯ ಜೊತೆ ಹೆಚ್ಚುವರಿಯಾಗಿ ಆಗಲಿರುವ ಕೊರತೆಯಾಗಿದೆ. ಹೀಗಾಗಿ ವೆಚ್ಚದಲ್ಲೂ ಅದೇ ಪ್ರಮಾಣದಲ್ಲೂ ಕೊರತೆ ಬೀಳಲಿದೆ. ಆಗ ಸರ್ಕಾರದ ಆದ್ಯತೆಗಳೇನಾಗಲಿದೆ ಎಂಬುದನ್ನು ಯಡ್ಡಿ ಸರ್ಕಾರ ಈಗಾಗಲೇ ಬಜೆಟ್ ಭಾಷಣದಲ್ಲಿ ಘೋಷಿಸಲಾದ ತಾರತಮ್ಯ ಮತ್ತು ಆದ್ಯತೆಗಳಲ್ಲಿ ಸ್ಪಷ್ಟಪಡಿಸಿದೆ. ಅಲ್ಲವೇ?
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಬಹಿರಂಗ5 days ago
ಗಾಳಿಪಟ ವೇಗದ ರಾಜಕುಮಾರ ‘ಬೀರ್ ಚಿಲಾರಾಯ್’..!
-
ದಿನದ ಸುದ್ದಿ6 days ago
ಕೊಟ್ಟ ಮಾತಿನಂತೆ ನಡೆದ ಡಿ ಬಾಸ್ ದರ್ಶನ್;ಕುದುರೆಯ ತಡಿ ನೀಡಿ, ಎಸ್.ಎಸ್.ಮಲ್ಲಿಕಾರ್ಜುನಗೆ ಕೃತಜ್ಞತೆ
-
ಬಹಿರಂಗ7 days ago
ಪ್ರತಿರೋಧದ ದನಿಗಳು ಸರ್ವಾಧಿಕಾರಕ್ಕೆ ಸದಾ ಅಪಥ್ಯವೇ
-
ಕ್ರೀಡೆ7 days ago
ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ ಡೇವಿಡ್ ವಾರ್ನರ್ ಮರಳಿ ತಂಡಕ್ಕೆ..!
-
ದಿನದ ಸುದ್ದಿ5 days ago
24 ಕೆರೆ ತುಂಬಿಸುವ ಯೋಜನೆಗೆ ರೂ.48 ಕೋಟಿಗಳ ಅನುದಾನ ಮಂಜೂರು : ಎಂ.ಪಿ ರೇಣುಕಾಚಾರ್ಯ
-
ನಿತ್ಯ ಭವಿಷ್ಯ6 days ago
ಜ್ಯೋತಿಷ್ಯಶಾಸ್ತ್ರ ಅಥವಾ ನಿಮ್ಮ ಜನ್ಮಕುಂಡಲಿ ಪ್ರಕಾರ ಎಂಥಾ ಗುಣವುಳ್ಳ ವ್ಯಕ್ತಿ ಜೊತೆ ಮದುವೆ ಕಾರ್ಯ ಆಗುವುದು?ಕಂಕಣಬಲ ಕೂಡಿ ಬರಲು ಏನು ಮಾಡಬೇಕು?
-
ದಿನದ ಸುದ್ದಿ5 days ago
ಮಾಧ್ಯಮ ಉದ್ಯಮವಾಗಿರುವ ಈ ಕಾಲಘಟ್ಟದಲ್ಲಿ ಜನರೇ ಜನಾಭಿಪ್ರಾಯ ರೂಪಿಸುವ ಹೊಣೆ ಹೊರಬೇಕು : ಹಿರಿಯ ಪತ್ರಕರ್ತ ಬಸವರಾಜ್ ದೊಡ್ಮನಿ
-
ದಿನದ ಸುದ್ದಿ5 days ago
ಅಡಿಕೆಯಲ್ಲಿ ಅರಳು ಉದುರುವ, ಹಿಂಗಾರು ಒಣಗುವ ಮತ್ತು ಹಿಂಗಾರ ತಿನ್ನುವ ಸಮಸ್ಯೆ : ರೈತರು ತೆಗೆದುಕೊಳ್ಳಬೇಕಾದ ಕ್ರಮಗಳು