Connect with us

ದಿನದ ಸುದ್ದಿ

ಮೆಡಿಕಲ್ ಮಾಫಿಯಾ : ರೋಗಿಯ ಜೀವಕ್ಕೆ ಬೆಲೆ ಇದೆಯಾ..?

Published

on

  • ನಾಗೇಶ್ ಹೆಗಡೆ 

ಖಾಸಗಿ ಆಸ್ಪತ್ರೆಗಳು ಈಗಿನ ಕೋವಿಡ್ ಸಂಕಟಕಾಲದಲ್ಲಿ ಅದೆಷ್ಟು ರೀತಿ ರೋಗಿಗಳ ಸುಲಿಗೆಯಲ್ಲಿ ತೊಡಗಿವೆ ಎಂಬುದರ ವರದಿ ದಿನದಿನವೂ ಬರುತ್ತಿದೆ. ಸರಕಾರಿ ನಿಗಾ ಇದ್ದರೂ ಕ್ಯಾರೇ ಇಲ್ಲದೆ ಇವು ಲಂಗು ಲಗಾಮಿಲ್ಲದಂತೆ ವಸೂಲಿ ದಂಧೆಗೆ ಇಳಿದಿವೆ. ಈ ಮಾಫಿಯಾಗಳ ಕುರಿತು ವಿವೇಕ್ ಬಿಂದ್ರ ಎರಡು ವರ್ಷಗಳ ಹಿಂದೆ ದನಿ ಎತ್ತಿ, ಹಿಂದಿಯಲ್ಲಿ ಕೂಗಾಡಿದ ವಿಡಿಯೊ ಇಲ್ಲಿದೆ.

ಹಿಂದೀ ಭಾಷೆ ಗೊತ್ತಿಲ್ಲದವರಿಗೆ ನಾಗೇಶ ಹೆಗಡೆ ಮಾಡಿದ ಅದರ ಅಜಮಾಸು ತರ್ಜುಮೆ ಇದು (ಆವರಣದಲ್ಲಿ ಕೊಟ್ಟ ಸಂಖ್ಯೆಗಳು ಈ ವಿಡಿಯೊದ ಕಾಲಕ್ರಮವನ್ನು ತೋರಿಸುತ್ತವೆ). ಕನ್ನಡದಲ್ಲಿ ಇಷ್ಟೇ ಗಟ್ಟಿ ದನಿಯಲ್ಲಿ ಗರ್ಜಿಸಬಲ್ಲ ಯಾರಾದರೂ ಇದ್ದರೆ ಈ ಮಾಹಿತಿಯನ್ನು ಬಳಸಿಕೊಂಡು ವಿಡಿಯೊ ಮಾಡಬಹುದು. ಹಿಂದೀ ಭಾಷೆ ಗೊತ್ತಿದ್ದವರು ಯುಟ್ಯೂಬಿನಲ್ಲಿ ಅಥವಾ ಗೂಗಲ್‌ನಲ್ಲಿ vivek bindra ಇವರ ಇನ್ನೂ ಅಬ್ಬರದ, ಇನ್ನೂ ರೋಚಕ ಉದ್ದೀಪನ ಉಪನ್ಯಾಸಗಳನ್ನು ನೋಡಬಹುದು. ಖಾಸಗಿ ಆಸ್ಪತ್ರೆಗಳ ತಮ್ಮ ಅನುಭವವನ್ನು ಇಲ್ಲಿ ಹಂಚಿಕೊಳ್ಳಬಹುದು.


(0.15: ಸೆಕೆಂಡು) ದೇಶದಲ್ಲಿ ಬಿಳಿಕೋಟಿನ ಲೂಟಿಖೋರರ, ಖೂನಿದಾರರ ಹಾವಳಿ ಅತಿಯಾಗಿದೆ. ಈ ಖಾಸಗಿ ಆಸ್ಪತ್ರೆಗಳೆಂಬ ದೋಚುದಾಣಗಳು (ಅವುಗಳ ಹೆಸರನ್ನು ಹೇಳುವುದಿಲ್ಲ ನಾನು) ದುಡ್ಡು ಮಾಡ್ಕೊಳ್ಳಿ, ಬೇಜಾರಿಲ್ಲ ಆದರೆ ಈ ರೀತಿ ಲೂಟಿಗೆ ಇಳಿಯಬೇಡಿ. ನಾನು ಬಿಸಿನೆಸ್ ಕೋಚಿಂಗ್ ಕೊಡ್ತೇನೆ; ಬಿಸಿನೆಸ್ ಹೇಗೆ ಮಾಡಬಾರದು ಅನ್ನೋದನ್ನು ಇಲ್ಲಿ ಹೇಳ್ತೇನೆ. ನಮ್ಮ ದೇಶದ ಡಾಕ್ಟರ್ಗಳಿಗೆ ದುಡ್ಡನ್ನು ಗಳಿಸುವ ಅಧಿಕಾರ ಇದೆ. ಒಪ್ಪೋಣ. ಅದನ್ನು ಖುಷಿಖುಷಿಯಿಂದ, ಜವಾಬ್ದಾರಿಯಿಂದ, ನೈತಿಕವಾಗಿ ಗಳಿಸಲು ಸಾಧ್ಯ ಇದೆ.

(1.00) ಆದರೆ ಇಲ್ಲ, ಇವರಿಗೆ ಅದೇನೂ ಬೇಕಾಗಿಲ್ಲ. ಇವರಿಗೆ ಡಯಗ್ನೋಸ್ಟಿಕ್ ಲ್ಯಾಬ್ನಿಂದಲೂ ಹಣ ಬೇಕು; ಅಂಬುಲೆನ್ಸ್ ಮೂಲಕ ರೆಫರೆನ್ಸ್ ಪೇಶಂಟ್ಗಳನ್ನು ಸೆಳೆದುಕೊಂಡು ಅಲ್ಲಿಂದಲೂ ಹಣ ನುಂಗುತ್ತಾರೆ. ನಿಮಗೆ ಗೊತ್ತಿರಬೇಕು- ಅಂಬುಲೆನ್ಸ್ ಡ್ರೈವರಿಗೆ ಹೇಳುತ್ತಾರೆ “ನೋಡಪ್ಪಾ ಪೇಶಂಟ್ ಗಳನ್ನು ನಮ್ಮಲ್ಲಿಗೇ ಕರ್ಕೊಂಡು ಬಾ, ಕಮೀಶನ್ ಕೊಡ್ತೇನೆ” ಎನ್ನುತ್ತಾರೆ. ಡ್ರೈವರು ಜಾಸ್ತಿ ಹಣ ಸಿಗುವ ರಾಂಗ್ ಡಾಕ್ಟರ್ ಬಳಿ ಒಯ್ಯುವಾಗ ದಾರಿಯಲ್ಲೇ ರೋಗಿ ಸಾಯಬಹುದು.

ಈ ಡಾಕ್ಟರ್ ಗಳಿಗೆ ಔಷಧ ಅಂಗಡಿಗಳಿಂದಲೂ ದುಡ್ಡು ಬೇಕು. ಇವರು ಔಷಧ ತಯಾರಿಸುವ ಕಂಪನಿಗಳನ್ನೂ ಲೂಟಿ ಮಾಡುತ್ತಾರೆ. ಕಂಪನಿಗಳಿಗೆ ಇವರು ಹೇಳುತ್ತಾರೆ: “ನನ್ನ ಮಗಳು ಮತ್ತು ಅವಳ ಗೆಳೆಯನಿಗೆ ನ್ಯೂಯಾರ್ಕಿಗೆ ಹೋಗುವುದಿದೆ. ಅಲ್ಲಿಂದ ನ್ಯೂಜೆರ್ಸಿ, ಅಲ್ಲಿಂದ ನ್ಯೂಝಿಲ್ಯಾಂಡ್ ಹೋಗಿ ವಾಪಸ್ ನ್ಯೂಡಿಲ್ಲಿಗೆ ಬರ್ತಾರೆ; ತುಸು ಅವರ ಖರ್ಚುವೆಚ್ಚ ನೋಡಿಕೊಳ್ಳಿ” ಎನ್ನುತ್ತಾರೆ. “ನನಗೆ ಈವೆಂಟ್ ಮಾಡೋದಿದೆ, ಖರ್ಚು ನೋಡಿಕೊಳ್ಳಿ…” ಈ ಡಾಕ್ಟರ್ ಗಳ ಬೇಡಿಕೆಗಳಿಗೆ ಮಿತಿಯೇ ಇಲ್ಲ. ಫಾರ್ಮಾ ಕಂಪನಿಗಳಿಂದ ಇವರಿಗೆ ಹಣ ಬೇಕು, ರೋಗಿಗಳಿಂದ ಹಣ ಬೇಕು; ಆಸ್ಪತ್ರೆಗಳಿಂದಲೂ ಹಣ ಬೇಕು…

(1.30) ಅಲ್ಲಾರೀ, ಹಣ ಸಂಪಾದನೆ ಮಾಡೀಪ್ಪ; ಆದರೆ ಯಾರದೋ ದೌರ್ಬಲ್ಯದ ಲಾಭ ಪಡೆಯಬೇಡಿ! ಆ ಫಾರ್ಮಾ ಕಂಪನಿ ತನಗೆ ಬಂದ ಎಲ್ಲ ಖರ್ಚನ್ನೂ ಔಷಧಕ್ಕೆ ಸೇರಿಸಿ, ಔಷಧದ ಬೆಲೆಯನ್ನು ಆಕಾಶಕ್ಕೇರಿಸಿ ರೋಗಿಗಳನ್ನು ಲೂಟಿ ಮಾಡುತ್ತಾರೆ. ಭಾರೀ ದೊಡ್ಡ ಸ್ಕ್ಯಾಂಡಲ್ ಇದು.

(1.45) ಇಂಥ ಲೂಟಿ ಮಾಡದೇ ಹಣ ಮಾಡುವ ‘ಸ್ಕೇಲೆಬಲ್ “ ವಿಧಾನವನ್ನು ನಾನು ಅದೆಷ್ಟೋ ಬಿಸಿನೆಸ್ ಕಂಪನಿಗಳಿಗೆ ತಿಳಿಸಿಕೊಟ್ಟಿದ್ದೇನೆ. ಆರೋಗ್ಯರಂಗದಲ್ಲೂ ಅಂತಹ ಮಾದರಿಗಳು ನಮ್ಮ ದೇಶದಲ್ಲಿ ಅದೆಷ್ಟೋ ಇವೆ.

(2.00) ಈಗ ನೋಡಿ: ಪ್ಯಾಥ್ ಲ್ಯಾಬ್ (ಡಯಗ್ನೋಸ್ಟಿಕ್ ಲ್ಯಾಬ್) ಆರಂಭಿಸುವ ವ್ಯಕ್ತಿ ತಾನು ತುಂಬ ಅಚ್ಚುಕಟ್ಟಾದ, ಅತ್ಯಾಧುನಿಕ ತಂತ್ರಜ್ಞಾನದ ಪ್ರಯೋಗಶಾಲೆಯನ್ನು ಸ್ಥಾಪಿಸುವ ಕನಸು ಕಾಣುತ್ತಾನೆ. ಆದರೆ ಪೇಶಂಟ್ಗಳು ತಾವಾಗಿ ಬರುವುದಿಲ್ಲ. ಆತ ಡಾಕ್ಟರ್ ಬಳಿ ಹೋಗಿ, ನಮ್ಮ ಲ್ಯಾಬಿಗೆ ರೋಗಿಗಳನ್ನು ಕಳಿಸಿ ಎನ್ನುತ್ತಾನೆ.

ಡಾಕ್ಟರ್ ಸುಮ್ನೆ ಕಳಿಸ್ತಾನಾ? “ನನಗೆ 50% ಕಮಿಶನ್ ಬೇಕು’’ ಎನ್ನುತ್ತಾನೆ. ಸೂಪರ್ ಸ್ಪೆಶಾಲಿಟಿ ಡಾಕ್ಟರಂತೂ 60% ಕಮಿಶನ್ ಹೊಡಿತಾನೆ. ಅಲ್ಲಿಗೆ ನೀವು ಲ್ಯಾಬಿಗೆ ಕೊಡುವ ಸ್ಯಾಂಪಲ್ಲಿನ ಸರಿಯಾದ ಪರೀಕ್ಷೆ ಕೂಡ ಆಗುವುದಿಲ್ಲ. ಬರೀ “ಬೇಸಿನ್ ಟೆಸ್ಟ್’’ ಮಾಡುತ್ತಾರೆ. ಬೇಸಿನ್ ಟೆಸ್ಟ್ ಎಂದರೆ, ನಿಮ್ಮ ತೋಳಿನಿಂದ ರಕ್ತ ತೆಗಿ ವಾಶ್ ಬೇಸಿನ್ ಗೆ ಸುರಿ…. ಇದು ಭಾರೀ ದೊಡ್ ಸ್ಕ್ಯಾಂಡಲ್.

(2.40) ಬಿಸಿನೆಸ್ ಗೊತ್ತಿಲ್ಲದ ಇಂಥ ದಡ್ಡಪಿಪಾಸುಗಳಿಂದಾಗಿ ನಮ್ಮ ದೇಶ ಎಂಥಾ ದುಃಸ್ಥಿತಿಯಲ್ಲಿದೆ ನೋಡಿ: ಅಂತರರಾಷ್ಟ್ರೀಯ ಆರೋಗ್ಯ ಸೂಚ್ಯಂಕದಲ್ಲಿ ನಮ್ಮ ದೇಶದ ಸ್ಥಾನ 154ರಷ್ಟು ಕೆಳಗಿದೆ. ಮೊದಲ 150 ಸ್ಥಾನಗಳಲ್ಲಿ ನಮಗೆ ಸ್ಥಾನವೇ ಇಲ್ಲ.

ನಾವು ಡಾಕ್ಟರನ್ನು ದೇವರ ಸಮಾನ ಎಂದು ನಂಬುತ್ತೇವೆ. ಡಾಕ್ಟರ್ ತನ್ನನ್ನು ದೇವರ ಸಮಾನ ಅಲ್ಲ; ಸಾಕ್ಷಾತ್ ದೇವನೇ ತಾನು ಎಂದುಕೊಂಡಿದ್ದಾನೆ. ತಾನೇ ಸರ್ವಶಕ್ತನೆಂದು ಲೂಟಿ ಮಾಡುತ್ತಾನೆ, ಪ್ರಾಣ ಹೀರುತ್ತಾನೆ.

(3.30) ಗೊತ್ತಾ ನಿಮಗೆ? ಹೈಟೆಕ್ ಆಸ್ಪತ್ರೆಗಳಲ್ಲಿ ‘ಸೇಲ್ಸ್ ರಿವ್ಯೂ’ ಮಾಡಲಾಗುತ್ತದೆ. ಡಾಕ್ಟರ್ ಗಳನ್ನು ಕೂರಿಸಿಕೊಂಡ ‘ಎಷ್ಟು ಲಾಭ ಬಂತು?’ ಎಂದು ನೋಡಲು ಮೀಟಿಂಗ್’ ನಡೆಸುತ್ತವೆ.
ಯಾವ ಡಾಕ್ಟರು ಎಷ್ಟು ಜಾಸ್ತಿ ರೋಗಿಗಳ ಅಡ್ಮಿಶನ್ ಮಾಡಿಸಿಕೊಳ್ಳುತ್ತಾನೊ ಅವನಿಗೆ ಜಾಸ್ತಿ ಕಮಿಶನ್ ಸಿಗುತ್ತದೆ. ಡಾಕ್ಟರ್ಗೆ ಹಬ್ಬವೋ ಹಬ್ಬ. ‘ಕರಿ, ಕರಿ ಅವನ್ನ, ಸೇರ್ಸು ಅವನ್ನ ವಾರ್ಡಿಗೆ’… ಅವರನ್ನ ಇವರನ್ನ ಎಲ್ಲರನ್ನೂ ಆಸ್ಪತ್ರೆಗೆ ಸೇರ್ಸು..

ಈ ಡಾಕ್ಟರುಗಳಿಗೆ ಆಸ್ಪತ್ರೆಯ ಮಾಲಿಕ ‘ಆಪರೇಶನ್ ಟಾರ್ಗೆಟ್’ ಕೊಡುತ್ತಾನೆ. “ನೀನು ಎಷ್ಟು ಆಪರೇಶನ್ ಮಾಡಿದೆ? ಎಷ್ಟು ಲ್ಯಾಬ್ ಟೆಸ್ಟ್ ಮಾಡಿಸಿದೆ?… ಮತ್ತೆ ಎಷ್ಟು ದಿನ ಏನೂ ಟ್ರೀಟ್ಮೆಂಟ್ ಇಲ್ಲದೆ ಬೆಡ್ ಮೇಲೆ ಖಾಲಿ ಮಲಗಿಸಿದೆ? ಎಷ್ಟು ಗಳಿಕೆ ಬಂತು ಆಸ್ಪತ್ರೆಗೆ? ಪ್ರೈವೇಟ್ ಬೆಡ್ ಎಷ್ಟಿತ್ತು? ಜನರಲ್ ವಾರ್ಡಿಗೆ ಎಷ್ಟು ರೋಗಿಗಳನ್ನು ಹಾಕಿದೆ?”

ಇದು ಪಕ್ಕಾ ಧಂಧೆ ಆಗಿಬಿಟ್ಟಿದೆ. ಇಂತಿಷ್ಟೇ ಪೇಶಂಟುಗಳ ಸುಲಿಗೆ ಮಾಡಬೇಕು ಎಂಬ ಟಾರ್ಗೆಟ್ ಕೊಟ್ಟಿರ್ತಾರೆ ಡಾಕ್ಟರಿಗೆ. ‘ನೀನು ಟಾರ್ಗೆಟ್ ದಾಟಿದರೆ ನಿನ್ನ ಪ್ರೊಮೋಶನ್ ಪಕ್ಕಾ’ ಎನ್ನುತ್ತಾರೆ. “…ನೀನು ಯಾವ ಔಷಧ ಶಿಫಾರಸು ಮಾಡ್ತೀಯ? ಅಲ್ಪವೆಚ್ಚದ್ದಾ? ಬೇಡ ಬೇಡ ಬೇಡ… ಆ ದುಬಾರಿ ಔಷಧವನ್ನೇ ತರಿಸು… ಕಂಪನಿಯಿಂದ ಕಮಿಷನ್ ಬರುವ ಔಷಧವನ್ನೇ ನೀನು ರೋಗಿಗೆ ಕೊಡಬೇಕು…’’

(4.00) ಒಂದು ಮಾತು ಹೇಳ್ತೀನಿ… ನಿಮ್ಮ ಚಿಕಿತ್ಸೆಯ ಅಸಲೀ ವೆಚ್ಚ ಒಟ್ಟೂ ಬಿಲ್ಲಿನ ಕೇವಲ ಹತ್ತೇ ಪರ್ಸೆಂಟ್ ಅಷ್ಟೆ. ಇನ್ನುಳಿದ 90 ಈ ಎಲ್ಲರ ಕಮೀಶನ್ನೇ ಆಗಿದೆ! ನಿಮ್ಮ ಬಿಲ್ ಎರಡು ಲಕ್ಷ ರೂಪಾಯಿ ಆಗಿದೆಯೆಂದರೆ, ಅದು 20 ಸಾವಿರ ಅಷ್ಟೆ ಆಗಬೇಕಿತ್ತು. ಈ ಇವರು ಇನ್ಶೂರನ್ಸ್ ಕಂಪನಿಗಳನ್ನೂ ಬಿಡುವುದಿಲ್ಲ. ಕಮೀಶನ್ ಕೊಡದಿದ್ದರೆ ಅಂಥ ವಿಮಾ ಕಂಪನಿಯ ಹೆಸರನ್ನೇ ಪ್ಯಾನೆಲ್ಲಿನಿಂದ ಕಿತ್ತು ಹಾಕುತ್ತಾರೆ. ಮಾಫಿಯಾ, ದೊಡ್ಡ ಮಾಫಿಯಾ ಇವರೆಲ್ಲ.

(4.30) ಈ ಡಾಕ್ಟರ್ ಗಳಿಗೂ ಟ್ರೇನಿಂಗ್ ಸಿಕ್ಕಿರುತ್ತದೆ. ಟ್ರೇನಿಂಗ್ ಏನೂ ಅಂದ್ರೆ, ಪೇಶಂಟ್ ಮೇಲೆ ಒತ್ತಾಯ ಹೇರಬೇಡಿ. ತುಸು ಹೆದರಿಸಿಬಿಡಿ… ಜಾಸ್ತಿಯಲ್ಲ, ತುಸುವೇ ಹೆದರಿಸಿಬಿಡಿ… ‘ನಾಳೆ ಇದೇ ದೊಡ್ಡದಾಗಿ ತೀರಾ ಕಾಂಪ್ಲಿಕೇಟ್ ಆಗಬಹದು… ಹೃದಯದ ಕಾಯಿಲೆ ಸೀರಿಯಸ್ ಇದೆ… ನಿಮ್ಮ ಬದುಕು, ನಿಮ್ಮ ಅಪ್ಪ ಅಮ್ಮ..’ ಎಲ್ಲವನ್ನೂ ಮೆಲ್ಲಗೆ ಹೇಳಿ, ‘ಇನ್ನುಳಿದಿದ್ದು ನಿಮ್ಮ ಆಯ್ಕೆ’ ಎಂದು ಬಿಡಿ ಸಾಕು. ಆತ ಹೆದರಿ ಕೈಜೋಡಿಸುತ್ತಾನೆ.. ‘ಒಳ್ಳೇದು ಡಾಕ್ಟರೆ ನೀವು ಹೇಳಿದ ಹಾಗೆ ದೊಡ್ಡ ..’ ಎಂದು ಕೈಜೋಡಿಸುತ್ತಾನೆ.
ಒಂದೇ ಏಟಿನಲ್ಲಿ ಇವರು ನಿಮ್ಮ ಇಡೀ ಬದುಕಿನಲ್ಲಿ ಉಳಿಸಿದ ಎಲ್ಲ ಹಣವನ್ನೂ ಸ್ವಾಹಾ ಮಾಡುತ್ತಾರೆ. ಸ್ವಲ್ಪವೂ ನಾಚಿಕೆಯಿಲ್ಲ ಇವರಿಗೆ.

(5.00) ನಿಮಗೆ ಗೊತ್ತೆ, 2010ರ ಮೊದಲು ನಮ್ಮ ದೇಶದಲ್ಲಿ ಸಿಝೇರಿಯನ್ ಹೆರಿಗೆಯ ಪ್ರಮಾಣ ಕೇವಲ ಶೇಕಡಾ ಎಂಟೂವರೆಯಷ್ಟಿತ್ತು. ಆಗೆಲ್ಲ ಗರ್ಭವತಿಗೆ ಅಥವಾ ಅವಳ ಮಗುವಿಗೆ ಅಪಾಯವಿದೆ ಎಂದಿದ್ದಾಗ ಮಾತ್ರ ಸಿಝೇರಿಯನ್ ಹೆರಿಗೆ ಮಾಡಿಸುತ್ತಿದ್ದರು. ಇಂದು ಈಗ ‘ರಿಸ್ಕ್ ಇದೇರೀ, ರಿಸ್ಕಿದೆ’ ಎಂದೆಲ್ಲ ಹೆದರಿಸಿ ಒಂದಲ್ಲ ಒಂದು ಸುಳ್ಳು ನೆಪ ಹೇಳಿ ಗರ್ಭಿಣಿಯ ಹೊಟ್ಟೆ ಕೊಯ್ದು ಶಿಶುವನ್ನು ಹೊರಕ್ಕೆ ತೆಗೆಯುತ್ತಾರೆ.

ನಗರಗಳಲ್ಲಿ ಸಿಝೇರಿಯನ್ ಶೇಕಡಾ 40ಕ್ಕೆ ಏರಿದೆ. ಟಾರ್ಗೆಟ್ ಕೊಟ್ಟಿದ್ದಾರಲ್ಲ! ಆ ಬಡಪಾಯಿ ಗರ್ಭಿಣಿ ಮತ್ತು ಅವಳ ಗಂಡ, “ನಾವು ನಾರ್ಮಲ್ ಡೆಲಿವರಿವರೆಗೆ ಕಾಯುತ್ತೇವೆ ಎಂದು ಹೇಳಿದರೆ ಮುಗೀತು. ಅವರೆದುರು ದೊಡ್ಡ ದೊಡ್ಡ ಮೆಡಿಕಲ್ ಶಬ್ದಗಳನ್ನು ಉದುರಿಸಿ, ಹೆದರಿಸಬೇಕು.

ಅರೇ! ಈ ಖಾಸಗಿಯ ಆಸ್ಪತ್ರೆಯ ಡಾಕ್ಟರುಗಳಿಗೆಲ್ಲ ಟಾರ್ಗೆಟ್ ಕೊಡಲಾಗಿದೆ. ಯಾರು ಜಾಸ್ತಿ ಸಿ-ಸೆಕ್ಷನ್ (ಸಿಝೇರಿಯನ್) ಮಾಡುತ್ತಾರೊ ಅವರಿಗೆ ಮುಂಬಡ್ತಿ ಕೊಡೋದು. ಇಡೀ ವೈದ್ಯಲೋಕವೇ ಧಂಧೆಗೆ ಇಳಿದಿದೆರೀ, ದಂಧೆಗೆ!

(6.00) ನಿಮಗೆ ನೆನಪಿರಬೇಕು, ಆತನಿಗೆ ಸಾಮಾನ್ಯ ವಾಂತಿಯಾಗಿತ್ತು ಅಷ್ಟೆ! ಎಳನೀರು ಅಥವಾ ಸಾಕಷ್ಟು ಬೆಲ್ಲದ ನೀರು (ಓಆರ್ಎಸ್) ಕೊಟ್ಟಿದ್ದರೆ ವಾಸಿ ಆಗುತ್ತಿತ್ತು. ಏನಾಯ್ತು… ಅಂದ್ರೆ ‘ನಿನ್ನ ಅಪೆಂಡಿಕ್ಸ್ ಊದಿದೆ, ಅದು ಬಿರಿದುಕೊಂಡಿದೆ’ ಎಂದು ಹೆದರಿಸಿ ಒಂದೂವರೆ ಲಕ್ಷ ಕಕ್ಕಿಸಿ ಆತನ ಹೊಟ್ಟೆಗೆ ಬ್ಲೇಡ್ ಹಾಕಿದ್ದು, ಹೊಲಿಗೆ ಹಾಕಿದ್ದು ಅಷ್ಟೆ. ಒಂದೂವರೆ ಲಕ್ಷ…

(6.10) ನಾನು ಬರೀ ನೆಗೆಟಿವ್ ಮಾತಾಡುತ್ತಿಲ್ಲ ಇಲ್ಲಿ. ಡಾ. ದೇವಿಶೆಟ್ಟಿ ಅನ್ನೋರು ಇದ್ದಾರೆ. ಅವರ ಬಗ್ಗೆ ಇಡೀ ದೇಶಕ್ಕೇ ಗೊತ್ತಿದೆ. ಪದ್ಮಶ್ರೀ, ಪದ್ಮಭೂಷಣ ಎಂದೆಲ್ಲ ಸಂಮಾನಿತರಾಗಿದ್ದಾರೆ. 23 ಆಸ್ಪತ್ರೆಗಳನ್ನು ಸ್ಥಾಪಿಸಿದ್ದಾರೆ. ಏಳು ಹಾರ್ಟ್ ಸೆಂಟರ್ ಗಳನ್ನು ಆರಂಭಿಸಿದ್ದಾರೆ. ಇವರು ಕಡಿಮೆ ಖರ್ಚಿನಲ್ಲಿ ಹೆಚ್ಚು ಹೆಚ್ಚು ಜನರಿಗೆ ಹಾರ್ಟ್ ಆಪರೇಶನ್ ಮಾಡುತ್ತಾರೆ.

ಇದಕ್ಕೆ ಇಕಾನಮಿ ಆಫ್ ಸ್ಕೇಲ್ ಎನ್ನುತ್ತಾರೆ. ಹೆನ್ರಿ ಫೋರ್ಡ್ ಮಾದರಿಯಲ್ಲಿ (ಅಂದರೆ, ಮೆಕ್ಯಾನಿಕ್ ನಿಂತಲ್ಲೇ ನಿಂತಿರುತ್ತಾನೆ, ಅರೆ ನಿರ್ಮಿತ ಕಾರುಗಳು ಆತನ ಎದುರು ಸಾಲಾಗಿ ಬರುತ್ತಿರುತ್ತವೆ. ಚಕ್ರ ಜೋಡಿಸುವವನು ಚಕ್ರ ಜೋಡಿಸುತ್ತಿರುತ್ತಾನೆ; ಗಾಜು ಕೂರಿಸುವವನು ಗಾಜು ಕೂರಿಸುತ್ತಾನೆ. ಮುಂದೆ ಮಡ್ಗಾರ್ಡ್… ಕಾರು ಇಡಿಯಾಗುತ್ತ ಹೋಗುತ್ತಿರುತ್ತದೆ).

(6.45) ಡಾಕ್ಟರ್ ದೇವಿಶೆಟ್ಟಿ ಅದೇರೀತಿ ತೆರೆದ ಹೃದಯದ ಶಸ್ತ್ರಚಿಕಿತ್ಸೆಯನ್ನು ಅಸೆಂಬ್ಲಿ ಲೈನ್ ಮಾದರಿಯಲ್ಲಿ ಮಾಡುತ್ತಾರೆ. ಬೇರೆ ಬೇರೆ ತಜ್ಞರು ಸಾಲಾಗಿ ನಿಂತಿರುತ್ತಾರೆ. ಪೇಶಂಟ್ ಮಲಗಿದ ಮಂಚವೇ ಸಾಗುತ್ತಿರುತ್ತದೆ.

ಒಬ್ಬ ಎಕ್ಸರೇ ತೆಗೀತಾನೆ, ಇನ್ನೊಬ್ಬ ಅನೆಸ್ತೀಶಿಯಾ ಕೊಡುತ್ತಾನೆ. ಮುಂದಿದ್ದವ ಸರ್ಜರಿ ಮಾಡುತ್ತಾನೆ. ನಂತರದವ ಹೊಲಿಗೆ ಹಾಕುತ್ತಾನೆ….. ಸರಸರ ಎಂದು ಅತ್ಯಂತ ವೇಗದಲ್ಲಿ ಸರ್ಜರಿ ದಾಖಲೆ ವೇಗದಲ್ಲಿ, ದಿನಕ್ಕೆ ಮುನ್ನೂರು ಮುನ್ನೂರು ಆಪರೇಶನ್ ಆಗುತ್ತಿರುತ್ತದೆ.

ಜಾಸ್ತಿ ಪೇಶಂಟ್ ಗಳಿಗೆ ಚಿಕಿತ್ಸೆ ಕೊಡುತ್ತ ಹೋದರೆ ಹಣದ ಸುರಿಮಳೆ ತಂತಾನೇ ಆಗುತ್ತಿರುತ್ತದೆ. ಯಾಕೆ ಪೇಶಂಟ್ ಗಳ ಲೂಟಿ ಮಾಡುತ್ತೀರಿ ? ಜಾಸ್ತಿ ಪೇಶಂಟ್ ಗಳು ಬರುತ್ತಿದ್ದರೆ ಜಾಸ್ತಿ ಆಪರೇಶನ್ ಮಾಡಿದರೆ ಹಣ ಹೇಗೂ ಬರುತ್ತದೆ ನಿಮಗೆ!

ನಿಮಗೆ ಗೊತ್ತೆ ಡಾ. ದೇವೀಶೆಟ್ಟಿ ಕಳೆದ ವರ್ಷ ಒಂದೂಮುಕ್ಕಾಲು ಕೋಟಿ ರೂಪಾಯಿಗಳನ್ನು ಗಳಿಸಿದ್ದಾರೆ. ಐಪಿಓದಲ್ಲಿ ಇವರ ಮೌಲ್ಯ ನೂರು ಕೋಟಿ ಡಾಲರ್ ! ಇವರ ಆಸ್ಪತ್ರೆಗಳಲ್ಲಿ 14 ಸಾವಿರ ಕೆಲಸಗಾರರಿದ್ದಾರೆ. ಅವರಂತೆ ವಾಲ್ಯೂಮ್ ಹೆಚ್ಚಿಸಿಕೊಂಡು ಹಣ ಮಾಡಿ, ಲೂಟಿಯಿಂದಲ್ಲ…

(7.45) ನಿಮಗೆ ಗೊತ್ತೆ? ಭಾರತದಲ್ಲಿ ನೈತಿಕವಾಗಿ ಆಸ್ಪತ್ರೆ ನಡೆಸುತ್ತಲೇ ಹಣ ಗಳಿಸುವುದು ತೀರ ಸುಲಭ. ಇಷ್ಟು ದೊಡ್ಡ ಜನಸಂಖ್ಯೆ, ಇಷ್ಟು ದೊಡ್ಡ ದೇಶ… ಇಷ್ಟು ದೊಡ್ಡ ಸಂಖ್ಯೆ! ಗೋವಿಂದಪ್ಪ ವೆಂಕಟಸ್ವಾಮಿ.. ಅರವಿಂದ್ ಐ ಕೇರ್ ಹಾಸ್ಪಿಟಲ್. ಇವರು ಮೆಕ್ಡೊನಾಲ್ಡ್ ಕಂಪನಿಯಿಂದ ಪಾಠ ಕಲಿತವರು. ಆತ ದಿನಕ್ಕೆ ನೂರು ಕೋಟಿ ಬರ್ಗರ್ ತಯಾರಿಸಿ ಮಾರುತ್ತಾನೆ.

ನಮ್ಮ ದೇಶ ಅಂದರೆ ಜಗತ್ತಿನಲ್ಲೇ ಅತಿ ಜಾಸ್ತಿ ಸಂಖ್ಯೆಯ ಅಂಧರಿದ್ದಾರೆ. ಅಮೆರಿಕದಲ್ಲಿ 2000 ಡಾಲರ್ಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡುವುದಾದರೆ ನಾನು ಹತ್ತೇ ಡಾಲರ್ ಗಳಲ್ಲಿ ಮಾಡುತ್ತೇನೆ ಎಂದವರು ಇವರು. ಇತರೆಲ್ಲ ಡಾಕ್ಟರ್ಗಳು ರೋಗಿಗಳ ನಗ, ನಾಣ್ಯ, ಆಸ್ತಿಪಾಸ್ತಿಯನ್ನು ಲೂಟಿ ಮಾಡಲು ನಿಂತಿರುವಾಗ ಈ ಗೋವಿಂದಪ್ಪ ವೆಂಕಟಸ್ವಾಮಿ ತಮ್ಮ ನಗ, ನಾಣ್ಯ ಆಸ್ತಿಪಾಸ್ತಿಯನ್ನು ಗಿರವಿ ಇಟ್ಟು ಅರವಿಂದ್ ಐ ಕೇರ್ ಆರಂಭಿಸಿದರು.

(8.30) ಅಥವಾ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಉದಾಹರಣೆ ನೋಡಿ: ಇವರು ಎರಡು ವಿಭಾಗಗಳನ್ನು ಮಾಡಿದ್ದಾರೆ. ಒಂದು ಕಡೆ ಅನುಕೂಲಸ್ಥರಿಗೆ ಜಾಸ್ತಿ ಶುಲ್ಕ ವಿಧಿಸುವುದು, ಇನ್ನೊಂದು ಕಡೆ ಅದೇ ಹಣದಿಂದ ಬಡ-ಮಧ್ಯಮ ವರ್ಗದವರಿಗೆ ಅತಿ ಕಡಿಮೆ ಅಥವಾ ಉಚಿತವಾಗಿ ವೈದ್ಯಸೇವೆ ಒದಗಿಸುವುದು.

ಭಾಳಾ ಅದ್ಭುತ ಕೆಲಸ ಮಾಡುತ್ತಿದ್ದಾರೆ. ಯಾವ ಕ್ಯಾನ್ಸರ್ ಔಷಧಿಗೆ ಒಂದು ಲಕ್ಷ ರೂಪಾಯಿ ಬೆಲೆ ಇದೆಯೊ ಅದನ್ನು (ಶುಷ್ರೂಷೆಗೆ ಬರುವವರ ಸಂಖ್ಯೆ ಹೆಚ್ಚಿಸುವ ಮೂಲಕ) ಒಂದು ಸಾವಿರ ರೂಪಾಯಿಗಳಿಗೆ ಒದಗಿಸುವ ವ್ಯವಸ್ಥೆ ಮಾಡುತ್ತಿದ್ದಾರೆ.

(9.00) ಇದು ಸಾಧ್ಯವಿದೆ, ಸಾಧ್ಯವಿದೆ. ಅದಕ್ಕೇ ನಾನು ಹೇಳೋದು, ಬಿಸಿನೆಸ್ ಮಾಡಲು ಸುಲಭ ಮಾರ್ಗಗಳಿವೆ. ಈ ಲೂಟಿಖೋರರಿಗೆ ಅದು ಗೊತ್ತಿಲ್ಲ. ಒಂದೇ ಸಾರಿ ಕತ್ತರಿಸು! ಒಂದೇ ಬಾರಿಗೆ ಲೂಟಿ ಮಾಡು…

(9.10) ನನ್ನದು ಒಂದೇ ಒಂದು ಚಿಕ್ಕ ವಿನಂತಿ ಇದೆ. ಈ ವಿಡಿಯೊವನ್ನು ಡೌನ್‌ಲೋಡ್ ಮಾಡಿ ಹಂಚಿ. ನಮ್ಮ ದೇಶದ ಎಂಟು ಲಕ್ಷ ಡಾಕ್ಟರ್‌ಗಳಿಗೆ ಸಂದೇಶ ತಲುಪುವಂತೆ ಮಾಡಿ. ದೇಶದ ಆರೋಗ್ಯ ಸಚಿವರಿಗೆ ಇದು ತಲುಪುವಂತೆ ಮಾಡಿ. ದನಿ ಎತ್ತಿ. ಇವೊತ್ತು ನನ್ನೊಂದಿಗೆ ನೀವು ದನಿ ಎತ್ತಿ ಕೂಗದಿದ್ದರೆ ನಾಳೆ ನಿಮ್ಮನ್ನೂ ಇವರು ಲೂಟಿ ಮಾಡುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ: ಡಾ. ಪ್ರಭಾ ಮಲ್ಲಿಕಾರ್ಜುನ

Published

on

ಸುದ್ದಿದಿನ,ದಾವಣಗೆರೆ:ರಾಜ್ಯ ಸರ್ಕಾರ ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರುತ್ತಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 100 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ದಾವಣಗೆರೆಯ ಬಾಷಾನಗರ,ಆನೆಕೊಂಡ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮನೆಮನೆಗೆ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರವಾಗಿ ಮತಯಾಚನೆ ಮಾಡಿ ನಂತರ ಮಾತನಾಡಿದರು.

ರಾಜ್ಯದಲ್ಲಿ ನಿಮ್ಮದೇ ಕಾಂಗ್ರೆಸ್ ಸರ್ಕಾರವಿದ್ದು, ಅದನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದೆ ಎಂದ ಅವರು ಶಾಮನೂರು ಕುಟುಂಬವು ಸದಾ ಜನರ ಸಮಸ್ಯೆಗಳ ಪರಿಹಾರಕ್ಕೆ ನಿಂತುಕೊಳ್ಳುತ್ತದೆ ಎಂಬ ಭರವಸೆಯನ್ನೂ ನೀಡಿದರು.

ಪ್ರಚಾರದ ವೇಳೆ ಸ್ಥಳೀಯರು ತಮ್ಮ ಬೇಡಿಕೆಗಳ ಮನವಿಯನ್ನು ಸಲ್ಲಿಸಿದರ ಬಗ್ಗೆ ಜನರಿಗೆ ಭರವಸೆ ನೀಡಿದರು. ಜನರ ಹಕ್ಕುಪತ್ರದ ಸಮಸ್ಯೆಗಳು ಕುರಿತು ಈ ಹಿಂದೆ ಶಾಮನೂರು ಶಿವಶಂಕರಪ್ಪ ಅವರು ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸಿದ್ದರು.ಈಗ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಜನರ ಎಲ್ಲಾ ಸಮಸ್ಯೆಗಳ ಪರಿಹಾರ ಮಾಡುತ್ತಿದ್ದಾರೆ ಎಂದರು.

ಯುವ ನಾಯಕ ಸಮರ್ಥ್ ಶಾಮನೂರು ಕುರಿತು ಮಾತನಾಡಿದ ಅವರು ಸಮರ್ಥ್ ಜನರೊಂದಿಗೆ ಉತ್ತಮ ಒಡನಾಟ ಹೊಂದಿರುವುದಾಗಿ ತಿಳಿಸಿದರು. ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಭಾಗವಹಿಸಿ, ಏಪ್ರಿಲ್ 9 ರಂದು ಮತಗಟ್ಟೆಗೆ ಬಂದು ಕ್ರಮ ಸಂಖ್ಯೆ 3ರ ‘ಹಸ್ತ’ ಚಿಹ್ನೆಗೆ ಮತ ಹಾಕಿ ಸಮರ್ಥ್ ಅವರನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು. ಈ ವೇಳೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ಜನರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ

Published

on

~ಗೋವರ್ಧನ ನವಿಲೇಹಾಳು

ಏಪ್ರಿಲ್ 3, 2026 ರಿಂದ ಇರಾನ್-ಇಸ್ರೇಲ್-ಅಮೆರಿಕಾ ಸಂಘರ್ಷವು ಐದನೇ ವಾರಕ್ಕೆ ಕಾಲಿಟ್ಟಿದೆ. ತೆಹ್ರಾನ್ ಮತ್ತು ಇಸ್ಫಹಾನ್‌ನಲ್ಲಿ ಧೂಮ್ರಜಾಲದ ಕಪ್ಪು ಮೋಡಗಳು, ಬೆಂಕಿಯ ಉರಿ ಭುಗಿಲೆದ್ದಿದೆ. ಅಮೆರಿಕಾ CENTCOM ವಿಡಿಯೋಗಳಲ್ಲಿ ಡ್ರೋನ್, ಟ್ಯಾಂಕ್ ಮತ್ತು ಮಿಸೈಲ್ ಲಾಂಚರ್‌ಗಳನ್ನು “ಯಶಸ್ವಿಯಾಗಿ” ನಾಶಪಡಿಸುತ್ತಿರುವುದನ್ನು ತೋರಿಸುತ್ತಿದೆ.

ಈ ಯುದ್ಧವು ನಾಗರಿಕರ ಮೇಲಿನ ನೇರ ಹಲ್ಲೆಯಾಗಿ ಮಾರ್ಪಟ್ಟಿದೆ. ಅಂತರಾಷ್ಟ್ರೀಯ ಮಾಧ್ಯಮಗಳು – ಅಲ್ ಜಜೀರಾ, ಯುರೋನ್ಯೂಸ್, ದಿ ಎಕಾನಮಿಸ್ಟ್, ಯುಎನ್ ವರದಿಗಳು – ಇದನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಇದು ಯುದ್ಧವಲ್ಲ; ಇದು ಮಾನವೀಯತೆಯ ವಿರುದ್ಧದ ಅಪರಾಧ.

ಫೆಬ್ರುವರಿ 28ರಂದು ಆರಂಭವಾದ ಆಪರೇಷನ್ ಎಪಿಕ್ ಫ್ಯೂರಿಯಲ್ಲಿ 900ಕ್ಕೂ ಹೆಚ್ಚು ದಾಳಿಗಳು ನಡೆದವು. ಇರಾನ್ ನಾಯಕತ್ವ, ನ್ಯೂಕ್ಲಿಯರ್ ಸೌಲಭ್ಯಗಳು, ಮಿಸೈಲ್ ಗಳನ್ನು ಹೊಡೆದು ಹಾಕುವುದು ನಮ್ಮ ಗುರಿ ಎಂದು ಅಮೆರಿಕಾ-ಇಸ್ರೇಲ್ ಹೇಳುತ್ತವೆ. ಆದರೆ ವಾಸ್ತವವು ಭಯಾನಕ. ಇರಾನ್ ಆರೋಗ್ಯ ಸಚಿವಾಲಯದ ಪ್ರಕಾರ 2,076ಕ್ಕೂ ಹೆಚ್ಚು ಜನ ಸತ್ತಿದ್ದಾರೆ, 26,500ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದರಲ್ಲಿ ಬಹುಪಾಲು ನಾಗರಿಕರು. ಮಿನಾಬ್‌ನ ಪ್ರಾಥಮಿಕ ಶಾಲೆಯ ಮೇಲಿನ ದಾಳಿಯಲ್ಲಿ 168-175 ಮಕ್ಕಳು (ಹೆಚ್ಚಿನವರು ಹುಡುಗಿಯರು) ಸಾವಿಗೀಡಾದರು – ವಿಯೆಟ್ನಾಮ್‌ನ ಮೈ ಲಾಯ್ ಹತ್ಯಾಕಾಂಡದ ನಂತರ ಅಮೆರಿಕಾ ಸೈನ್ಯದ ಅತಿದೊಡ್ಡ ಮಕ್ಕಳ ಸಾವು ಎಂದು ರಿಫ್ಯೂಜೀಸ್ ಇಂಟರ್ನ್ಯಾಷನಲ್ ಹೇಳಿದೆ. ಇಸ್ಫಹಾನ್‌ನಲ್ಲಿ ಉಕ್ಕು ಘಟಕಗಳು, ಔಷಧಿ ಸಂಶೋಧನಾ ಕೇಂದ್ರಗಳು ನಾಶವಾಗಿವೆ. ಯುಎನ್ ಹ್ಯೂಮನ್ ರೈಟ್ಸ್ ಚೀಫ್ ವೋಲ್ಕರ್ ಟರ್ಕ್ ಅವರು “ನಾಗರಿಕರು ಈ ಯುದ್ಧದ ಬಲಿಪಶುಗಳಾಗಿದ್ದಾರೆ” ಎಂದು ಖಂಡಿಸಿದ್ದಾರೆ. 67,414 ನಾಗರಿಕ ಸೈಟ್‌ಗಳು (498 ಶಾಲೆಗಳು, 236 ಆಸ್ಪತ್ರೆಗಳು) ಹಾನಿಗೊಳಗಾಗಿವೆ.

ಇರಾನ್ ಕೂಡ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸಿದೆ. ಕೇಂದ್ರ ಇಸ್ರೇಲ್‌ನಲ್ಲಿ ಸ್ಫೋಟಗಳು, 24 ಇಸ್ರೇಲಿ ನಾಗರಿಕರು ಸತ್ತಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ತೈಲ ಘಟಕಗಳು, ವಿಮಾನ ನಿಲ್ದಾಣಗಳ ಮೇಲೆ ದಾಳಿ. ಆದರೆ ಸಾವುಗಳ ಪ್ರಮಾಣದಲ್ಲಿ ಇರಾನ್‌ನ ನಷ್ಟ ಅಪಾರ. ಲೆಬನಾನ್‌ನಲ್ಲಿ ಹೆಜ್ಬೊಲ್ಲಾಹ್ ಸಂಘರ್ಷದಿಂದ 1,318 ಜನ ಸತ್ತಿದ್ದಾರೆ. ಯುಎನ್‌ಎಚ್‌ಸಿಆರ್ ಪ್ರಕಾರ 3.2 ಮಿಲಿಯನ್ ಇರಾನಿಯನ್ನರು ಒಳನಾಡಿನ ನಿರಾಶ್ರಿತರಾಗಿದ್ದಾರೆ. ಇದು ಇರಾನ್‌ನ 3% ಜನಸಂಖ್ಯೆ. ಆಫ್ಘನ್ ನಿರಾಶ್ರಿತರು (1.65 ಮಿಲಿಯನ್) ಇನ್ನಷ್ಟು ಅಪಾಯದಲ್ಲಿದ್ದಾರೆ. ವಿದ್ಯುತ್ ಸರಬರಾಜು, ಔಷಧಿ, ಆಹಾರ, ಇಂಧನದ ಕೊರತೆ ತೀವ್ರವಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ಸ್ಥಳಗಳು ಹಾನಿಗೊಳಗಾಗಿವೆ.

ಅಮೆರಿಕಾದ ನಡೆಯನ್ನು ತೀಕ್ಷ್ಣವಾಗಿ ವಿಮರ್ಶಿಸಬೇಕು. ಟ್ರಂಪ್ ಸರ್ಕಾರವು “ಸ್ವಯಂರಕ್ಷಣೆ” ಮತ್ತು “ಇರಾನ್ ಅಪಾಯವನ್ನು ತೊಡೆದುಹಾಕುವುದು” ಎಂದು ನ್ಯಾಯೀಕರಿಸುತ್ತಿದೆ. ಆದರೆ ಅವರು ಸೇತುವೆಗಳು, ವಿದ್ಯುತ್ ಘಟಕಗಳನ್ನು ಗುರಿಯಾಗಿಸುತ್ತಿದ್ದಾರೆ – ಇದು ನಾಗರಿಕ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುತ್ತದೆ. ಯುದ್ಧದ ವೆಚ್ಚ ದಿನಕ್ಕೆ ಶತಕೋಟಿ ಡಾಲರ್‌ಗಳು. ಹಾರ್ಮುಜ್ ಜಲಸಂಧಿ ಪ್ರಾಯಶಃ ಮುಚ್ಚುವಿಕೆಯಿಂದ ಜಗತ್ತಿನ ತೈಲ ಸರಬರಾಜು ಅಸ್ತವ್ಯಸ್ತ. ತೈಲ ಬೆಲೆಗಳು ಏರಿಕೆಯಾಗಿ, ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ 50 ಸೆಂಟ್‌ಗಳಷ್ಟು ಏರಿದೆ. ಆಫ್ರಿಕಾ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಆಹಾರ, ಗೊಬ್ಬರ, ಔಷಧಿ ಬೆಲೆಗಳು ಆಕಾಶ ಸ್ಪರ್ಶಿಸುತ್ತಿವೆ. ಇದು ಬಡ ಜನರ ಮೇಲಿನ ಪರೋಕ್ಷ ಹಲ್ಲೆ. ಟ್ರಂಪ್ ಅವರ ಭಾಷಣಗಳಲ್ಲಿ ಸ್ಪಷ್ಟ ಯೋಜನೆ ಇಲ್ಲ – “ನನಗೆ ಅನಿಸಿದಾಗ” ಯುದ್ಧ ಕೊನೆಗೊಳ್ಳುತ್ತದೆ ಎಂದು ಹೇಳುತ್ತಾರೆ. ಇದು ಅನಿಯಂತ್ರಿತ ಆಕ್ರಮಣವಲ್ಲದೆ ಬೇರೇನು?

ಅಂತರಾಷ್ಟ್ರೀಯ ಮಾಧ್ಯಮಗಳು ಎರಡು ಮುಖಗಳನ್ನು ತೋರಿಸುತ್ತವೆ. ಪಶ್ಚಿಮ ಮಾಧ್ಯಮಗಳು ಇರಾನ್‌ನ “ಅಪಾಯ”ವನ್ನು ಒತ್ತಿ ಹೇಳುತ್ತವೆಯಾದರೆ, ಅಲ್ ಜಜೀರಾ ಮತ್ತು ಮಧ್ಯಪ್ರಾಚ್ಯ ಮಾಧ್ಯಮಗಳು ಅಮೆರಿಕಾ-ಇಸ್ರೇಲ್‌ನ “ಆಕ್ರಮಣ”ವನ್ನು ಖಂಡಿಸುತ್ತವೆ. ಆದರೆ ಸತ್ಯ ಒಂದೇ: ನಾಗರಿಕರು ಬಲಿಪಶುಗಳಾಗಿದ್ದಾರೆ. ಜನೆವಾ ಕನ್ವೆನ್ಷನ್‌ಗಳು ನಾಗರಿಕ ಗುರಿಗಳನ್ನು ರಕ್ಷಿಸುತ್ತವೆ, ಆದರೆ ಇಲ್ಲಿ “ಕೊಲಾಟೆರಲ್ ಡ್ಯಾಮೇಜ್” ಎಂದು ಸುಲಭವಾಗಿ ಕರೆಯಲಾಗುತ್ತಿದೆ. ಇಸ್ರೇಲ್‌ನ ಸುರಕ್ಷತೆಯ ಅಗತ್ಯವನ್ನು ಒಪ್ಪಿಕೊಂಡರೂ, ಇರಾನ್ ಜನರನ್ನು “ಶಿಲಾ ಯುಗಕ್ಕೆ” ತಳ್ಳುವುದು ನೈತಿಕತೆಯಲ್ಲ. ಇರಾನ್ ರೆಜಿಮ್‌ನ ದಮನಕಾರಿ ನೀತಿಗಳು ಖಂಡನೀಯವೇ, ಆದರೆ ಯುದ್ಧವು ಆ ನಿರಂಕುಶತೆಯನ್ನು ಬಲಪಡಿಸುತ್ತಿದೆ, ಜನರನ್ನು ಒಗ್ಗೂಡಿಸುತ್ತಿದೆ.

ದೀರ್ಘಕಾಲೀನ ಪರಿಣಾಮಗಳು ಭಯಾನಕವಾಗಿವೆ. ಹೇಗೆಂದರೆ 3.2 ಮಿಲಿಯನ್ ನಿರಾಶ್ರಿತರು, ಆರೋಗ್ಯ ಸಂಕಷ್ಟ, ಮಾನಸಿಕ ಆಘಾತ, ಬಡತನದ ಏರಿಕೆ. ಯುದ್ಧವು ಮುಂದುವರಿದರೆ ಹಸಿವು, ರೋಗಗಳು, ಪರಿಸರ ವಿನಾಶ ತೀವ್ರವಾಗುತ್ತವೆ. ಹಾರ್ಮುಜ್ ಮುಚ್ಚುವಿಕೆ ಜಗತ್ತಿನ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಅಂತರಾಷ್ಟ್ರೀಯ ಸಮುದಾಯ ಈಗಲೇ ಎಚ್ಚರಗೊಳ್ಳಬೇಕು: ಸೆಸ್‌ಫೈರ್, ಮಾನವೀಯ ಸಹಾಯದ ಮುಕ್ತ ಪ್ರವೇಶ, ಯುಎನ್ ಮಧ್ಯಸ್ಥಿಕೆಯ ಸಂಧಾನ. ಡಿಪ್ಲಾಮಸಿಗೆ ಬದಲಾಗಿ ಬಾಂಬ್‌ಗಳನ್ನು ಆಯ್ಕೆ ಮಾಡುವುದು ಅಮೆರಿಕಾದ ಶಕ್ತಿಯನ್ನು ಅಪಹಾಸ್ಯಗೊಳಿಸುತ್ತಿದೆ.

ಯುದ್ಧವು ಯಾರಿಗೂ ಗೆಲುವು ತರುವುದಿಲ್ಲ. ಇರಾನ್‌ನ ಮಕ್ಕಳ ಸಾವುಗಳು, ಇಸ್ರೇಲ್‌ನ ಗಾಯಗೊಂಡ ಕುಟುಂಬಗಳು, ಗಲ್ಫ್‌ನ ಆರ್ಥಿಕ ಸಂಕಷ್ಟಗಳು ಮನಕಲಕುತ್ತವೆ. ರಾಜಕೀಯ ಲೆಕ್ಕಾಚಾರಗಳು ಮಾನವ ಜೀವಗಳಿಗಿಂತ ದೊಡ್ಡವಲ್ಲ. ಅಮೆರಿಕಾವು ತನ್ನ ಅಪಾರ ಶಕ್ತಿಯನ್ನು ಶಾಂತಿ ಮತ್ತು ಸಂಧಾನಕ್ಕೆ ಬಳಸಬೇಕು. ಇಲ್ಲವಾದರೆ ಈ ಯುದ್ಧವು ಅಮಾಯಕ ಜೀವಗಳ ಭವಿಷ್ಯವನ್ನು ನಾಶಪಡಿಸುತ್ತದೆ. ಮಾನವೀಯತೆಯ ದೃಷ್ಟಿಯಿಂದ, ಈ ಅಮಾನುಷ ಆಕ್ರಮಣವನ್ನು ತಕ್ಷಣ ನಿಲ್ಲಿಸಿ. ಶಾಂತಿಯೇ ಏಕೈಕ ಮಾರ್ಗ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕಾಂಗ್ರೆಸ್ ಸರಕಾರದ ದುರಾಡಳಿತ ; ಆರೋಪ ಪಟ್ಟಿ ಬಿಡುಗಡೆ

Published

on

ಸುದ್ದಿದಿನ,ದಾವಣಗೆರೆ:ಮುಖ್ಯಮಂತ್ರಿಗಳೇ, ಒಳ್ಳೆಯ ಕಾರಣಕ್ಕೆ ನಿಮ್ಮ ಸರಕಾರ ಯಾವಾಗ ಸುದ್ದಿಯಾಗಿದೆ ಹೇಳಿ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಸರಕಾರದ ದುರಾಡಳಿತ ಸಂಬಂಧ ಆರೋಪ ಪಟ್ಟಿ ಬಿಡುಗಡೆ ಮಾಡಿ ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿದರು. ಕಳೆದ 3 ವರ್ಷಗಳಲ್ಲಿ ಈ ಸರಕಾರ ಒಳ್ಳೆಯ ಕಾರಣಕ್ಕೆ ಯಾವಾಗ ಹೆಸರಾಗಿತ್ತು ಎಂದು ಹೇಳಲೂ ಸಿಗುವುದಿಲ್ಲ. ಭ್ರಷ್ಟಾಚಾರ, ಬೆಲೆ ಏರಿಕೆ, ದರೋಡೆ ಪ್ರಕರಣಗಳು ಸುದ್ದಿಯಾದವು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸುಮಾರು 3 ವರ್ಷಗಳಾಗಿವೆ. ಈ ಅವಧಿಯ ಭ್ರಷ್ಟಾಚಾರ, ಬೆಲೆ ಏರಿಕೆ, ದುರಾಡಳಿತ ಕುರಿತ ಚಾರ್ಜ್ ಶೀಟನ್ನು ಇವತ್ತು ಬಿಡುಗಡೆ ಮಾಡಿದ್ದೇವೆ ಎಂದರು.

ಡ್ರಗ್ಸ್ ವಿಚಾರದಲ್ಲಿ ರಾಜ್ಯ ಸುದ್ದಿಯಾಗಿದೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ ಇದೆ. ಸರಕಾರಿ ನೌಕರರು ಆತ್ಮಹತ್ಯೆ ಮಾಡಿಕೊಂಡರು. ಬಾಣಂತಿಯರು, ಹಸುಗೂಸುಗಳ ಸರಣಿ ಸಾವಿನ ಕಾರಣಕ್ಕೆ ಈ ಸರಕಾರ ಸುದ್ದಿಯಲ್ಲಿತ್ತು. ಸರಕಾರಿ ಆಸ್ಪತ್ರೆಯಲ್ಲಿ ಔಷಧಿ ಕೊರತೆಗೆ ಈ ಸರಕಾರ ಸುದ್ದಿಯಲ್ಲಿತ್ತು. ಅಂಗನವಾಡಿ ಶಿಕ್ಷಕಿಯರ ಚಳವಳಿ, ಆಶಾ ಕಾರ್ಯಕರ್ತೆಯರ ಚಳವಳಿ, ಅತಿಥಿ ಉಪನ್ಯಾಸಕರಿಂದ ಸಂಬಳ ಸಿಗುತ್ತಿಲ್ಲವೆಂದು ಹೋರಾಟ, ಗುತ್ತಿಗೆ ನೌಕರರ ಹೋರಾಟ- ಹೀಗೆ ಚಳವಳಿಗಳ ಕಾಟಕ್ಕೆ ಈ ಸರಕಾರ ಸುದ್ದಿಯಲ್ಲಿದೆ ಎಂದು ವ್ಯಂಗ್ಯವಾಡಿದರು.

ಒಳ್ಳೆಯ ಕಾರಣಕ್ಕೆ ಒಂದು ದಿನವೂ ಸುದ್ದಿಯಲ್ಲಿ ಇರಲಿಲ್ಲ

ಕಳೆದ 3 ವರ್ಷದಲ್ಲಿ ಕೆಟ್ಟ ಕಾರಣಕ್ಕಾಗಿ ಈ ಸರಕಾರ ಸುದ್ದಿಯಲ್ಲಿದೆಯೇ ಹೊರತು ಒಳ್ಳೆಯ ಕಾರಣಕ್ಕೆ ಒಂದು ದಿನವೂ ಸುದ್ದಿಯಲ್ಲಿ ಇರಲಿಲ್ಲ ಎಂದು ವಿಶ್ಲೇಷಿಸಿದರು. ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಬಲಿಯಾದವರು ನೂರಾರು ಜನ; ರಸ್ತೆ ಗುಂಡಿ ಕಾರಣಕ್ಕೆ ಈ ಸರಕಾರ ಸುದ್ದಿಯಲ್ಲಿತ್ತು. ಹೀಗೆ ಪ್ರತಿನಿತ್ಯ ಸರಕಾರ ಸುದ್ದಿಯಲ್ಲಿ ಇರುವುದು ಕೇವಲ ಕೆಟ್ಟ ಕಾರಣಕ್ಕಾಗಿ ಎಂದು ಆರೋಪಿಸಿದರು. ಅಭಿವೃದ್ಧಿ ಕೆಲಸ ಮಾಡಿದ್ದಕ್ಕಾಗಿ ಒಂದು ದಿನವೂ ಸುದ್ದಿಯಲ್ಲಿ ಇರಲಿಲ್ಲ ಎಂದು ಆಕ್ಷೇಪಿಸಿದರು.

ಮುಡಾ, ವಾಲ್ಮೀಕಿ ನಿಗಮದ ಹಗರಣ ಮಾನಗೆಟ್ಟ ಕೆಲಸವಲ್ಲವೇ?

ಮುಖ್ಯಮಂತ್ರಿಗಳು ಬಿಜೆಪಿಯವರು ಮಾನಗೆಟ್ಟವರು ಎಂದು ಭಾಷಣದಲ್ಲಿ ಹೇಳಿದ್ದಾರೆ. ಯಾರು ಮುಖ್ಯಮಂತ್ರಿಗಳೇ ಮಾನಗೆಟ್ಟವರು? ಮುಡಾ ಹಗರಣ ಯಾರ ಮೇಲೆ ಬಂತು? ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ನಿಮ್ಮ ಸರಕಾರದ ಸಚಿವರೇ ರಾಜೀನಾಮೆ ಕೊಡಬೇಕಾಯಿತಲ್ಲವೇ? ಇದು ಮಾನಗೆಟ್ಟ ಕೆಲಸವಲ್ಲವೇ? ಎಂದು ಕೇಳಿದರು. ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಬಳಕೆ ಆಗಬೇಕಾದ ಹಣವನ್ನು ನಿಮ್ಮ ಒಬ್ಬ ಸಚಿವರು ಹೆಂಡತಿಗೆ ಒಡವೆ ಕೊಡಿಸಲು, ಚುನಾವಣೆಗೆ ಬಾರ್ ನಿಂದ ಎಣ್ಣೆ ಸರಬರಾಜು ಮಾಡಲು ಹಣ ಬಳಸಿದ್ದು ಮರ್ಯಾದೆ ಇದ್ದವರು ಮಾಡುವ ಕೆಲಸವೇ ಎಂದು ಕೇಳಿದರು.

ಮರ್ಯಾದೆ ಇದ್ದವರು ಅಧಿಕಾರಕ್ಕೆ ಅಂಟಿಕೊಳ್ಳುವರೇ?
ನೀವು ಬಿಜೆಪಿ ಮೇಲೆ ಶೇ 40 ಆರೋಪ ಹೊರಿಸಿ ಅಧಿಕಾರಕ್ಕೆ ಬಂದಿದ್ದೀರಿ. ಗುತ್ತಿಗೆದಾರರು ಶೇ 60 ಕಮಿಷನ್‍ನ ಸರಕಾರ ಎಂದು ನಿಮ್ಮ ಸರಕಾರದ ಮೇಲೆ ಆರೋಪ ಮಾಡಿದ್ದಾರಲ್ಲವೇ? ಮರ್ಯಾದೆ ಇದ್ದವರು ಆ ಆರೋಪ ಕೇಳಿಯೂ ಅಧಿಕಾರಕ್ಕೆ ಅಂಟಿಕೊಳ್ಳುತ್ತಾರಾ ಎಂದು ಪ್ರಶ್ನೆಯನ್ನು ಮುಂದಿಟ್ಟರು. ನಿಮ್ಮ ಅಬಕಾರಿ ಸಚಿವರ ಮೇಲೆ ಬಾರ್ ಮಾಲೀಕರು ತಿಂಗಳ ಮಾಮೂಲಿ ಕೇಳುವ ಕುರಿತು ಆರೋಪ ಮಾಡಿದ್ದಾರಲ್ಲವೇ? ಇದು ಮರ್ಯಾದೆ ಇದ್ದವರು ಮಾಡುವ ಕೆಲಸವೇ? ಮಾನಗೆಟ್ಟವರು ಮಾಡುವ ಕೆಲಸವೇ ಎಂದು ಪ್ರಶ್ನೆ ಹಾಕಿದರು.

ಮುಖ್ಯಮಂತ್ರಿಗಳೇ, ಇಡೀ ಸಂಪುಟದಲ್ಲಿ ಮಾನಗೆಟ್ಟವರು ಇದ್ದಾರೆಯೇ ಹೊರತು ಮರ್ಯಾದೆ ಇದ್ದವರು ಯಾರಿದ್ದಾರೆ ಹೇಳಿ ಎಂದು ಕೇಳಿದರು. ಮಾನಗೆಟ್ಟ ಕೆಲಸ ಮಾಡುವವರನ್ನು ಸಚಿವರನ್ನಾಗಿ ಮಾಡಿಕೊಂಡು, ಶೇ 60ರ ಆರೋಪ ಹೊತ್ತುಕೊಂಡು ನೀವು ಬಿಜೆಪಿ ವಿರುದ್ಧ ಮಾನಗೆಟ್ಟ ಬಿಜೆಪಿ ಎಂದು ಆರೋಪ ಮಾಡುತ್ತೀರಲ್ಲವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.

ನಿಮ್ಮದು ದರೋಡೆಕೋರ ಸರಕಾರವಲ್ಲವೇ?

ರಾಜ್ಯದ ಉಸ್ತುವಾರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಅವರು ಬಿಜೆಪಿಯನ್ನು ಜೇಬುಗಳ್ಳರು ಎಂದಿದ್ದಾರೆ. ನೀವು ಬಿಜೆಪಿ ಸರಕಾರವನ್ನು ಜೇಬುಗಳ್ಳರು ಎಂದು ಕರೆಯುವುದಾದರೆ ಯುದ್ಧದ ಕಾರಣಕ್ಕೆ ಕೆಲವು ಬೆಲೆ ಏರಿಕೆಗಳಾಗಿವೆ. ನಿಮ್ಮ ಸರಕಾರವನ್ನು ದರೋಡೆಕೋರ ಸರಕಾರ ಎಂದು ಕರೆಯುವುದರಲ್ಲಿ ತಪ್ಪೇನಿದೆ ಎಂದು ಕೇಳಿದರು. ನಿಮ್ಮ ಸರಕಾರ ಯಾವ್ಯಾವ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ ಎಂಬ ಪಟ್ಟಿ ಕೊಡಲೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.

20 ರೂ. ಸ್ಟಾಂಪ್ ಪೇಪರ್ ಮಾಯವಾಗಿದೆ..

ನಂದಿನಿ ಹಾಲಿನ ದರ ಏರಿಕೆ ಮಾಡಿದ್ದೀರಿ. ಪೆಟ್ರೋಲ್ ಮೇಲೆ 3 ರೂ. ಸೆಸ್, ಡೀಸೆಲ್ ಮೇಲೆ 5.08 ರೂ. ಸೆಸ್ ಹಾಕಿದ್ದೀರಿ. ಕೇಂದ್ರ ಸರಕಾರ ದರ ಇಳಸಿದರೆ ನೀವು ಸೆಸ್ ಹಾಕಿ ಅವರ ಲಾಭ ಜನರಿಗೆ ಸಿಗದಂತೆ ಮಾಡಿದ್ದೀರಿ ಎಂದು ಟೀಕಿಸಿದರು. ಬಸ್ ಪ್ರಯಾಣ ದರ ಶೇ 15, ಮೆಟ್ರೋ ದರ ಶೇ 50ರಷ್ಟು ಹೆಚ್ಚಿಸಿದ್ದೀರಿ. ಪ್ರತಿ ಯೂನಿಟ್ 4.50 ರೂ. ವಿದ್ಯುತ್ ದರವನ್ನು ರೂ 5.90 ಮಾಡಿದ್ದೀರಿ. ವಾಣಿಜ್ಯ ದರವನ್ನು 7 ರೂ.ಗೂ ಹೆಚ್ಚಳ ಮಾಡಲಾಗಿದೆ. ಅಬಕಾರಿ ಸುಂಕವನ್ನು ಶೇ 20ರಷ್ಟು ಏರಿಸಿದ್ದೀರಿ. ಸ್ಟಾಂಪ್ ಡ್ಯೂಟಿ ಹೆಚ್ಚಿಸಿದ್ದೀರಿ. 20 ರೂ. ಸ್ಟಾಂಪ್ ಪೇಪರ್ ಮಾಯವಾಗಿದೆ. ಅದರ ಜಾಗಕ್ಕೆ 100, 200 ರೂ.ಗಳ ಸ್ಟಾಂಪ್ ಪೇಪರ್ ಖರೀದಿಸಬೇಕಾಗಿದೆ. ನಮ್ಮ ಚಿನ್ನ ನಾವು ಒತ್ತೆ ಇಡಲು 0.5ರಷ್ಟು ಸ್ಟಾಂಪ್ ಡ್ಯೂಟಿ ಕಟ್ಟಬೇಕಾಗಿದೆ ಎಂದು ಆಕ್ಷೇಪಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending