Connect with us

ದಿನದ ಸುದ್ದಿ

ಡಾ. ಚಿದಾನಂದ ಮೂರ್ತಿ ಅವರಿಗೆ ಅಂತಿಮ ನಮನಗಳು

Published

on

  • ಡಾ. ಪುರುಷೋತ್ತಮ ಬಿಳಿಮಲೆ

ಸ್ವಾತಂತ್ರ್ಯೋತ್ತರ ಕಾಲದ ಕನ್ನಡ ಸಂಶೋಧನೆಗೆ ಭದ್ರವಾದ ತಳಹದಿ ಹಾಕಿಕೊಟ್ಟವರಲ್ಲಿ ಡಾ. ಚಿದಾನಂದ ಮೂರ್ತಿಯವರು (1931 – 2020) ಕೂಡಾ ಒಬ್ಬರು. ಪಾಶ್ಚಾತ್ಯ ವಿದ್ವಾಂಸರು ಮಾಡಿದ ಕೆಲಸಗಳು ಸಂಶೋಧನೆಯ ಮೂಲ ಆಕರಗಳಾಗಿ ಸಹಕರಿಸುತ್ತಲಿರುವ ಸಂದರ್ಭದಲ್ಲಿ ಅವರು ನಿಘಂಟು ಶಾಸ್ತ್ರ, ಶಾಸನ ಶಾಸ್ತ್ರ, ಹಸ್ತ ಪ್ರತಿ ಸಂಪಾದನೆ, ಗ್ರಂಥ ಸಂಪಾದನೆ, ಸಂಸ್ಕೃತಿ ಸಂಶೋಧನೆ ಮತ್ತು ಜಾನಪದ ಕೆಲಸಗಳ ಮೂಲಕ ಕನ್ನಡ ಸಂಶೋಧನೆಯ ವಸ್ತು ಮತ್ತು ವಿಧಾನಗಳನ್ನು ಪುನಾರೂಪಿಸಿದರು.

ತೀ. ನಂ. ಶೀಕಂಠಯ್ಯನವರ ಮಾರ್ಗದರ್ಶನದಲ್ಲಿ1964 ರಲ್ಲಿ ಅವರು ಪಿಎಚ್.ಡಿ ಪದವಿಗಾಗಿ ಸಿದ್ಧ ಪಡಿಸಿದ್ದ ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಕೃತಿಯು ನಮಗೆಲ್ಲಾ ಪ್ರೇರಣೆ ನೀಡಿದ ಅತ್ಯುತ್ತಮ ಸಂಶೋಧನಾ ಗ್ರಂಥ. ಉಳಿದಂತೆ, ಅವರು ಬರೆದ ಭಾಷಾ ವಿಜ್ಞಾನದ ಮೂಲತತ್ವಗಳು, ವಾಗಾರ್ಥ, ಸಂಶೋಧನ ತರಂಗ ಒಂದು ಮತ್ತು ಎರಡು, ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪ್ರಶ್ಯತೆ, ಹೊಸತು ಹೊಸತು, ಶೂನ್ಯ ಸಂಪಾದನೆಯನ್ನು ಕುರಿತು, ವಚನ ಸಾಹಿತ್ಯ, ಗ್ರಾಮೀಣ, ಪಗರಣ ಮತ್ತು ಇತರ ಸಂಪ್ರಯದಾಯಗಳು ಕೃತಿಗಳನ್ನು ನಾನು ಇವತ್ತಿಗೂ ಆಗಾಗ ಪರಿಶೀಲಿಸುತ್ತಿರುತ್ತೇನೆ.

1988ರಲ್ಲಿ ಅವರು ‘ಕನ್ನಡ ಶಕ್ತಿಕೇಂದ್ರವನ್ನು’ ಸ್ಥಾಪಿಸಿದ ಮೇಲೆ ಅವರ ಸಂಶೋಧನೆಯ ಪ್ರಖರತೆ ಕಳೆಗುಂದಿತು. ಆದರೆ ಕಾಲ್ನಡಿಗೆಯ ಮೂಲಕ ಬೆಂಗಳೂರಿನಿಂದ ಹಂಪಿಗೆ ಪ್ರಯಾಣ ಮಾಡಿ, ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆಗೆ ಕಾರಣರಾದರು. ಟಿಪ್ಪುವಿನ ವಿಷಯದಲ್ಲಂತೂ ಪೂರ್ಣ ಕೋಮುವಾದಿಯಾದರು. ನಾವೆಲ್ಲ ಚಿದಾನಂದಮುರ್ತೀ ಅವರ ಪುಸ್ತಕಗಳನ್ನು ಕೈಯಲ್ಲಿ ಹಿಡಿದುಕೊಂಡೇ ಕಲಬುರ್ಗಿ ಅವರ ಕಡೆಗೆ ವಾಲಿಕೊಂಡೆವು.

ನಾನು ಕನ್ನಡ ವಿವಿಯಲ್ಲಿದ್ದಾಗ ಅವರೊಮ್ಮೆ ಕನ್ನಡದ ಉಳಿವಿಗಾಗಿ ತುಂಗಾಭದ್ರ ನದಿಗೆ ಹಾರಿದ್ದರು. ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಅವರನ್ನು ಯಾರೋ ಮೇಲೆತ್ತಿ ಹಾಕಿದರು. ನಡು ರಾತ್ರಿ ನಾನು ಮತ್ತು ಕೆ ವಿ ನಾರಾಯಣ ಅವರನ್ನು ಹೊಸಪೇಟೆಗೆ ತಂದು ಆರೈಕೆ ಮಾಡಿದೆವು.

ಈಚಿಗೆ ಅವರಿಗೆ ರಾಷ್ಟ್ರಪತಿಗಳ ಪ್ರಶಸ್ತಿ ಬಂದಿತ್ತು. ‘ ಬಿಳಿಮಲೆ, ನೀವು ಅಲ್ಲಿದ್ದೀರಲ್ವಾ? ಬರ್ತೇನೆ’ ಎಂದಿದ್ದರು. ಎರಡು ದಿನ ಅವರ ಜೊತೆ ಇದ್ದೆ. ಅದಕ್ಕೂ ಹಿಂದೆ ಒಮ್ಮೆ ಬಂದಿದ್ದಾಗ, ಕೆಳದಿ ನೃಪ ವಿಜಯದಲ್ಲಿ ಉಲ್ಲೇಖಿತವಾಗಿದ್ದ ಚಾವಲ್ ಮಂಡಿಯನ್ನು ಅವರು ದೆಹಲಿಯ ಕೆಂಪು ಕೋಟೆಯ ಬಳಿ ಪತ್ತೆ ಹಚ್ಚಿದ್ದರು. ನಾನು ಸಿದ್ಧವೇಶದ ಬಗ್ಗೆ ಮತ್ತು ಕುಮಾರರಾಮನ ಬಗ್ಗೆ ಬರೆದ ಲೇಖನಗಳನ್ನು ಅವರು ಬಹಳ ಮೆಚ್ಚಿಕೊಂಡಿದ್ದರು.

ಡಿ ಎಲ್ ನರಸಿಂಹಾಚಾರ್, ಆರ್ ನರಸಿಂಹಾಚಾರ್, ಕೆ ಬಿ ಪಾಠಕ್, ಪಿ ಬಿ ದೇಸಾಯಿ, ಕೆ ಜಿ ಕುಂದಣಗಾರ, ಟಿ ಎಸ್ ವೆಂಕಣಯ್ಯ, ಮಂಜೇಶ್ವರ ಗೋವಿಂದ ಪೈ, ಮುಳಿಯ ತಿಮ್ಮಪ್ಪಯ್ಯ, ಸೇಡಿಯಾಪು ಕೃಷ್ಣ ಭಟ್, ಎಲ್ ಬಸವರಾಜು, ಶಂಭಾ ಜೋಷಿ, ಫ ಗು ಹಳಕಟ್ಟಿ, ಚನ್ನಪ್ಪ ಉತ್ತಂಗಿ ಮೊದಲಾದವರಿಂದ ಪ್ರೇರಣೆ ಪಡೆದು, ಕನ್ನಡಕ್ಕೆ ಮಹತ್ವದ ಕೊಡುಗೆ ನೀಡಿದ ಚಿದಾನಂದ ಮೂರ್ತಿ ಅವರು ನನ್ನ ಕಾಲದ ಅತ್ಯುತ್ತಮ ಸಂಶೋಧಕರಲ್ಲಿ ಒಬ್ಬರು. ಅವರಿಗೆ ನಮನಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ಪ್ರಶ್ನಿಸಿಕೊಳ್ಳಬೇಕು : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನಡೆಸ್ಕ್:ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಬೀದರ್ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಇಂದು ಅವರು ಮಾತನಾಡಿದರು.

ಊಹಾ ಪತ್ರಿಕೋದ್ಯಮ ಅತ್ಯಂತ ಅಪಾಯಕಾರಿಯಾದದ್ದು. ಕ್ಷುಲ್ಲಕ ವಿಚಾರವನ್ನು ದಿನವಿಡೀ ತೋರಿಸುವವರು ಅದರ ಪರಿಣಾಮದ ಬಗ್ಗೆಯೂ ಯೋಚಿಸಬೇಕು. ಗಂಡ ಹೆಂಡತಿ ಜಗಳವನ್ನು ಇಡೀ ದಿನ‌ ತೋರಿಸಿದರೆ ಅದರಿಂದ ಸಮಾಜಕ್ಕೆ ಏನು ಪ್ರಯೋಜನ? ಎಂದು ಪ್ರಶ್ನಿಸಿದರು.

ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿ ಇಬ್ಬರೂ ಪತ್ರಕರ್ತರಾಗಿ ಧ್ವನಿ ಇಲ್ಲದವರ ಧ್ವನಿಯಾಗಿದ್ದರು. ಸಮಾಜದಲ್ಲಿರುವ ನ್ಯೂನ್ಯತೆಗಳನ್ನು ಹೋಗಲಾಡಿಸಿ ಸಮಾಜವನ್ನು ಕಟ್ಟುವ ಕಾಯಕವನ್ನು ಬಸವಾದಿ ಶರಣರು ಮಾಡಿದ್ದರು. ಶರಣರ ಆಶಯದ ಸಮಸಮಾಜ ಆಗದಿದ್ದರೆ ಅಸಮಾನತೆ ಮುಂದುವರೆಯುತ್ತದೆ.‌ ಅದು ಮುಂದುವರೆಯಲಿ ಎನ್ನುವುದು ಪಟ್ಟಭದ್ರರ ಹಿತಾಸಕ್ತಿಯಾಗಿದೆ ಎಂದರು.

ಯಾವ ದೇವರೂ ಯಾರನ್ನೂ ಕೂಡ ಅವಿದ್ಯಾವಂತನಾಗು ಅಂತಾಗಲೀ, ಕೆಳ ಜಾತಿಯಲ್ಲೇ ಹುಟ್ಟು ಎಂದು ಬಯಸುವುದಿಲ್ಲ. ಈ ಅರಿವನ್ನು ಜನರಲ್ಲಿ ಹೆಚ್ಚಿಸುವ ಕೆಲಸ ಪತ್ರಕರ್ತರಿಂದ ಆಗಬೇಕು. ಪತ್ರಕರ್ತರು ಕೇವಲ ಮಾಹಿತಿ ಕೊಡುವವರಾಗದೆ, ಸಮಾಜ ಸುಧಾರಣೆಗೂ ಒತ್ತು ನೀಡಬೇಕು.

ಅಂಬೇಡ್ಕರ್ ಅವರ ಆಶಯದಂತೆ ಎಲ್ಲರಿಗೂ ಆರ್ಥಿಕ, ಸಾಮಾಜಿಕ‌ ಶಕ್ತಿ ಕೊಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ 2013 ರಲ್ಲೂ ಮಾಡಿತ್ತು. ಈಗಲೂ ಮುಂದುವರೆಸಿದೆ. ನಾವು ಬಡವರ ಪರವಾದ ಯೂನಿವರ್ಸಲ್ ಬೇಸಿಕ್ ಇನ್ ಕಂ ಆರ್ಥಿಕತೆಯನ್ನು ಪಾಲುಸುತ್ತಿದ್ದೇವೆ. ಇದನ್ನು ಪತ್ರಕರ್ತರು ಅರ್ಥ ಮಾಡಿಕೊಳ್ಳಬೇಕು.

ಕೆಲವು ಒಳ್ಳೆ ಪತ್ರಕರ್ತರೂ ಇದ್ದಾರೆ. ಆದರೆ ಬಹಳಷ್ಟು ಮಾಧ್ಯಮ‌ ಸಂಸ್ಥೆಗಳು ಕಾರ್ಪೋರೇಟ್ ಹಿಡಿತಕ್ಕೆ ಒಳಪಟ್ಟಿವೆ. ಪತ್ರಕರ್ತರು ಸತ್ಯ ಬರೆದರೂ ಕೆಲವೊಮ್ಮೆ ಸಂಪಾದಕರುಗಳು ಮಾಲೀಕರ ಒತ್ತಡಕ್ಕೆ ಮಣಿದು ಬದಲಾಯಿಸಿ ಬಿಡುತ್ತಾರೆ. ನಾನು ಮಂತ್ರಿಯಾಗಿ 40 ವರ್ಷ ಆಯ್ತು. ನಮ್ಮ ಸರ್ಕಾರದ ಪರವಾಗಿ ಬರೆಯಿರಿ ಎಂದು ಇವತ್ತಿನವರೆಗೂ ನಾನು ಯಾರನ್ನೂ ಕೇಳಿಲ್ಲ‌.

ಜನಸಾಮಾನ್ಯರು ಇನ್ನೂ ಪತ್ರಿಕೆಗಳ ಮೇಲೆ ನಂಬಿಕೆ ಇಟ್ಟಿದ್ದಾರೆ. ನಾನೂ ನಂಬಿಕೆ ಇಟ್ಟಿದ್ದೇನೆ.
ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವ ಸವಲತ್ತನ್ನು ಜಾರಿ ಮಾಡಿದ್ದೇ ನಾನು. ಇದರಲ್ಲಿನ ನಿಯಮಗಳಲ್ಲಿ ತೊಂದರೆ ಇದ್ದರೆ, ಆ ಬಗ್ಗೆ ಚರ್ಚಿಸಿ ನಿವಾರಣೆಗೊಳಿಸಲಾಗುವುದು ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವಿಜ್ಞಾನ ವಿಭಾಗಕ್ಕೆ ಅಗ್ರಸ್ಥಾನ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲೆಯ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯು ಒಟ್ಟಾರೆ ಶೇಕಡ 81.99 ರಷ್ಟು ಸಾಧನೆ ಮಾಡಿದ್ದು, ರಾಜ್ಯದಲ್ಲಿ 25 ನೇ ಸ್ಥಾನ ಪಡೆದಿದೆ. ಈ ಬಾರಿಯೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಅತಿ ಹೆಚ್ಚು ಶೇಕಡ 90.91 ರಷ್ಟು ಫಲಿತಾಂಶ ಪಡೆದು ಮೇಲುಗೈ ಸಾಧಿಸಿದ್ದಾರೆ.

ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 20,810 ವಿದ್ಯಾರ್ಥಿಗಳ ಪೈಕಿ 16,046 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇಕಡ 77.11 ರಷ್ಟು ಹಾಗೂ ಹೊಸದಾಗಿ ಪರೀಕ್ಷೆ ಬರೆದ (Freshers) 18,949 ವಿದ್ಯಾರ್ಥಿಗಳಲ್ಲಿ 15,540 ಮಂದಿ ಉತ್ತೀರ್ಣರಾಗಿದ್ದಾರೆ ಶೇಕಡ 82.01 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಿಭಾಗವಾರು ಫಲಿತಾಂಶದ ವಿಶ್ಲೇಷಣೆ

ವಿಜ್ಞಾನ ವಿಭಾಗ (Science): ಜಿಲ್ಲೆಯಲ್ಲಿ ಅತಿ ಹೆಚ್ಚು ಸಾಧನೆ ಈ ವಿಭಾಗದಲ್ಲಿ ದಾಖಲಾಗಿದೆ. ಒಟ್ಟು 12,536 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 10,936 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ (ಶೇ. 87.24). ಹೊಸ ವಿದ್ಯಾರ್ಥಿಗಳ ಪೈಕಿ 11,770 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 10,736 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಶೇ. 90.91 ರಷ್ಟು ಅದ್ಭುತ ಫಲಿತಾಂಶ ಬಂದಿದೆ.

ವಾಣಿಜ್ಯ ವಿಭಾಗ (Commerce)

ಈ ವಿಭಾಗದಲ್ಲಿ ಹಾಜರಾದ 4,295 ವಿದ್ಯಾರ್ಥಿಗಳಲ್ಲಿ 3,075 ಮಂದಿ ಉತ್ತೀರ್ಣರಾಗಿದ್ದಾರೆ (ಶೇ. 71.59). ಹೊಸ ವಿದ್ಯಾರ್ಥಿಗಳ ಪೈಕಿ 3858 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2960 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಶೇ. 76.72 ರಷ್ಟು ಫಲಿತಾಂಶ ಬಂದಿದೆ.

ಕಲಾ ವಿಭಾಗ (Arts): ಕಲಾ ವಿಭಾಗದಲ್ಲಿ ಒಟ್ಟು 3,979 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 2,035 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ (ಶೇ. 51.14). ಹೊಸ ವಿದ್ಯಾರ್ಥಿಗಳ ಪೈಕಿ 3321 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1880 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಶೇ. 56.61 ರಷ್ಟು ಫಲಿತಾಂಶ ಬಂದಿದೆ.

ಜಿಲ್ಲೆಯ ಒಟ್ಟಾರೆ ಫಲಿತಾಂಶದಲ್ಲಿ ವಿಜ್ಞಾನ ವಿಭಾಗವು ಪ್ರಥಮ ಸ್ಥಾನದಲ್ಲಿದ್ದರೆ, ವಾಣಿಜ್ಯ ಮತ್ತು ಕಲಾ ವಿಭಾಗಗಳು ನಂತರದ ಸ್ಥಾನ ಪಡೆದಿವೆ ಎಂದು ಉಪ ನಿರ್ದೇಶಕ ಪಳಿನಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಶೇ. 68.55ರಷ್ಟು ಮತದಾನ

Published

on

ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಇಂದು ನಡೆದ ಉಪ ಚುನಾವಣೆಯು ಅತ್ಯಂತ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಒಟ್ಟಾರೆ ಶೇ. 68.55ರಷ್ಟು ಮತದಾನ ದಾಖಲಾಗಿದೆ.

ಬೆಳಿಗ್ಗೆಯಿಂದಲೇ ಮತಗಟ್ಟೆಗಳ ಮುಂದೆ ಮತದಾರರು ಉತ್ಸಾಹದಿಂದ ಸರದಿಯಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮಗಳು ಹಾಗೂ ಪೊಲೀಸ್ ಬಂದೋಬಸ್ತ್ನಿಂದಾಗಿ ಯಾವುದೇ ಅಹಿತಕರ ಘಟನೆಗಳಿಲ್ಲದೆ ಮತದಾನ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು.

ಯುವಕರು ಹಾಗೂ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತದಾನ ಮಾಡಿದ್ದು ಕಂಡುಬಂದಿತು. ಚುನಾವಣಾ ಸಿಬ್ಬಂದಿ ಹಾಗೂ ಭದ್ರತಾ ಪಡೆಯ ಸಹಕಾರದೊಂದಿಗೆ ಮತದಾನ ಪ್ರಕ್ರಿಯೆಯು ಸುಗಮವಾಗಿ ಜರುಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending