Connect with us

ದಿನದ ಸುದ್ದಿ

ಮ.ರಾಮಮೂರ್ತಿಯವರ ಕೊಟ್ಟ ಕನ್ನಡದ ಬಾವುಟ ; ಹೋರಾಟದ ಜವಾಬ್ದಾರಿಯ ಹಸ್ತಾಂತರಕ್ಕೆ ಮೆರಗು

Published

on

  • ಸುಮನ್ ಜೆ.ಎಸ್,ಪ್ರಥಮ ವರ್ಷದ ಸ್ನಾತಕೋತ್ತರ ಪದವಿ, ವಿದ್ಯಾರ್ಥಿ,ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಬೆಂಗಳೂರು ವಿಶ್ವವಿದ್ಯಾಲಯ

ಕನ್ನಡ ನಾಡಿನ ಅಭಿಮಾನ ಸ್ವಾಭಿಮಾನ ಮತ್ತು ಅಸ್ಮಿತೆಯಾಗಿ ಕನ್ನಡಿಗರ ಉಸಿರಲ್ಲಿ ಬೆರೆತು ಹೋಗಿರುವ ಕೆಂಪು-ಹಳದಿ ಬಾವುಟದ ನಿರ್ಮಾತೃ ಮ.ರಾಮಮೂರ್ತಿ ಎಂದು ಈ ಹೆಸರು ಕೇಳಿದ ತಕ್ಷಣವೇ ಕನ್ನಡಿಗರ ನರನಾಡಿಗಳಲ್ಲಿ ಸಂಚಲನ ಉಂಟಾಗುತ್ತದ್ದೆ ನಮ್ಮ ತಾಯಿನಾಡು ಅನುಭವಿಸುತ್ತಿರುವ ವೇದನೆಗಳಿಗೆ ತೀವ್ರವಾಗಿ ಪ್ರತಿರೋಧಿಸುವ ಪ್ರೇರಕ ಶಕ್ತಿಯೊಂದು ಇಡಿ ದೇಹದ ತುಂಬೆಲ್ಲಾ ವಿದ್ಯುತ್ತಿನಂತೆ ಸಂಚರಿಸುತ್ತದೆ ಅಂತಹ ಒಂದು ಪ್ರಚೋದಕ ಶಕ್ತಿಯಿಂದ ಕೂಡಿರುವ ವ್ಯಕ್ತಿತ್ವವಾಗಿತ್ತು.

ರಾಮಮೂರ್ತಿ ರವರು ಮಾರ್ಚ್ 11, -1918ರಂದು ನಂಜನಗೂಡಿನ ಗಾಂಧಿವಾದಿಯಾಗಿ ವೀರ ಕೇಸರಿ ಪತ್ರಿಕೆಯ ಸಂಪಾದರಾಗಿದ್ದ ಸೀತಾರಾಮ ಶಾಸ್ತ್ರಿ ಮತ್ತು ಸುಬ್ಬಮ್ಮ ಅವರ ಪುತ್ರನಾಗಿ ಹುಟ್ಟಿದ ರವರು ಶೈಕ್ಷಣಿಕ ಜೀವನವೂ ಹುಟ್ಟೂರಲ್ಲಿ ಸೇರಿದಂತೆ ಬೆಂಗಳೂರಿನ ಗಾಂಧಿನಗರದಲ್ಲಿರುವ ಆರ್ಯ ವಿದ್ಯಾಶಾಲೆಯಲ್ಲಿ ಮುಂದೊರೆಯಿತು. ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾದ ಸುಬ್ರಮಣ್ಯ ಅಯ್ಯರ್ ಅವರಿಂದ ಮತ್ತು ಮಾಧ್ಯಮಿಕ ಶಾಲೆಯಿಂದ ಶಿಕ್ಷಕರಾದ ದೇವುಡು ಅವರಿಂದ ವಿಶೇಷ ಕಾಳಜಿಗೊಳಪಟ್ಟು ಅವರಿಂದ ಪ್ರಭಾವಿತರಾದರು.ಹುಟ್ಟಿನಿಂದ ಪ್ರತಿಭಾವಂತರಾಗಿದ್ದ ರಾಮಮೂರ್ತಿ ರವರಿಗೆ ಚಳವಳಿಗಳಿಗೆ ಧುಮುಕಲು ಮೊದಲ ಪ್ರೇರಣೆಯಾಗಿದ್ದು ಅವರ ತಂದೆಯವರಾದ ಸೀತಾರಾಮಶಾಸ್ತ್ರಿ,

ಗಾಂಧೀಜಿಯವರ ವಿಚಾರಗಳಿಂದ ಪ್ರಭಾವಿತರಾಗಿ ಚಳವಳಿಗಳತ್ತ ಮುಖ ಮಾಡಿದ ಶಾಸ್ತ್ರಿ ಅದರ ಪ್ರಚಾರಕ್ಕಾಗಿ ‘ವೀರ ಕೇಸರಿ’ ಎನ್ನುವ ಪತ್ರಿಕೆಯನ್ನು ಹೊರಡಿಸುತ್ತಿದ್ದರು. ಮುಂದೆ ರಾಮಮೂರ್ತಿ ಪತ್ರಕರ್ತರಾಗಿ ಹೊರಹೊಮ್ಮುವಲ್ಲಿ ಬಹಳ ದೊಡ್ಡ ಪಾತ್ರವಹಿಸಿದ್ದು ಇದೆ ವೀರಕೇಸರಿ ಪತ್ರಿಕೆ.

ತನ್ನ ತಂದೆಯವರು ಸ್ಥಾಪಿಸಿದ ಪತ್ರಿಕೆಯಲ್ಲಿ ಸ್ವತಃ ತಾನೂ ಕೂಡ ತಂದೆಯವರೊಂದಿಗೆ ತೊಡಗಿಸಿಕೊಂಡು ಮುಂದೆ ತಾವೇ ವೀರಕೇಸರಿ ಪತ್ರಿಕೆಯ ಸಂಪಾದಕರಾದರು. ಸ್ವತಂತ್ರ ಚಳವಳಿ ಉತ್ತುಂಗದಲ್ಲಿದ್ದ ಕಾಲದಲ್ಲಿದಲ್ಲಿ ಈ ಪತ್ರಿಕೆಯು ತನ್ನ ಓದುಗರನ್ನ ಚಳುವಳಿಯಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸುತ್ತಿತ್ತು ಆ ಪತ್ರಿಕೆಯು ಭಾರತ ಸ್ವತಂತ್ರವಾಗಿ ಭಾಷಾವಾರು ರಾಜ್ಯಗಳು ರಚನೆಯಾದ ಮೇಲೆ ಕರ್ನಾಟಕದ ಹಲವಾರು ಮೂಲಭೂತ ಸಮಸ್ಯೆಗಳನ್ನು ನಾಡಿನ ಜನತೆಯ ಎದುರು ತೆರೆದಿಡಲು ರಾಮಮೂರ್ತಿ ರವರ ಸಂಪಾದಕತ್ವದಲ್ಲಿ ಆರಂಭಿಸಿತು.

ಅನೇಕ ಕಾರಣಾಂತರಗಳಿಂದ ವೀರಕೇಸರಿ ಪತ್ರಿಕೆಯು ನಿಂತುಕೊಂಡ ಮೇಲೆ ಮಹತ್ವಾಕಾಂಕ್ಷೆಯ ವ್ಯಕ್ತಿತ್ವಯುಳ್ಳ ರಾಮಮೂರ್ತಿ ವಿನೋದಿನಿ, ಕಥಾವಾಣಿ, ವಿನೋದವಾಣಿ ಅಂತಹ ಪತ್ರಿಕೆಗಳನ್ನು ಹುಟ್ಟುಹಾಕಿ ತನ್ನ ಸಕ್ರಿಯತೆಯನ್ನು ಕಾಯ್ದುಕೊಂಡರು. ನಾಡಿನಲ್ಲಿ ಲೈಂಗಿಕ ವಿಜ್ಞಾನದ ಪತ್ರಿಕೆಯ ಕೊರತೆಯನ್ನು ಅರಿತು ರಾಮಮೂರ್ತಿ, ‘ಕಾಮಕಲಾ’ ಎನ್ನುವ ಪತ್ರಿಕೆ ಹೊರಡಿಸಿದರು. ಇಂತಹ ಹಲವಾರು ಸಮಸ್ಯೆಗಳು ಎದುರಾದಾಗ ಪತ್ರಿಕೆಯನ್ನು ಮುಚ್ಚಿದರು ಹೀಗೆ ಒಬ್ಬ ಸೃಜನಶೀಲ ಪತ್ರಕರ್ತರಾಗಿ ಕಾರ್ಯನಿರ್ವಹಿಸಿ ಅನೇಕ ಏಳು ಬೀಳುಗಳು ನಡುವೆ ಜಗ್ಗದೆ ಹೋರಾಟ ನಡೆಸಿದರು.

ರಾಮಮೂರ್ತಿ ಪ್ರಾಥಮಿಕ ಶಾಲಾ ಹಂತದಿಂದಲೇ ಸಾಹಿತ್ಯಾಸಕ್ತರಾಗಿದ್ದರು. ಆ ಆಸಕ್ತಿಯೇ ಮುಂದೆ ಅವರಿಗೆ ಬರಹಗಾರರಾಗಿ, ಪತ್ತೆದಾರಿ ಕಾದಂಬರಿಕಾರರಾಗಿ ರೂಪಗೊಳ್ಳುವಲ್ಲಿ ಪ್ರಚೋದಿಸಿದರ ಕಾರಣದಿಂದಾಗಿ 1950-60ರ ದಶಕದಲ್ಲಿ ವಿಪ್ಲವ, ಇಬ್ಬರು ರಾಣಿಯರು, ಚಿತ್ರಲೇಖ, ರಾಜದಂಡ, ವಿಷಕನ್ಯೆ ಮರೆಯಾಗಿದ್ದ ವಜ್ರಗಳು ಇಂತಹ ಪತ್ತೆದಾರಿ ಕಾದಂಬರಿಗಳಲ್ಲದೆ ಭಾಗ್ಯದ ಮದುವೆ, ಪ್ರೇಮಮಂದಿರ, ಹಿಪ್ಪರಗಿ ಇಂತಹ ಐತಿಹಾಸಿಕ ಕಾದಂಬರಿಗಳನ್ನ ಒಳಗೊಂಡು ಸುಮಾರು 150ಕ್ಕೂ ಹೆಚ್ಚು ಕಾದಂಬರಿಗಳು ಇವರ ವಿದ್ವತ್ತಿಗೆ ಸಾಕ್ಷಿಯಾಗಿವೇ. ಕನ್ನಡದ ಓದುಗರಿಗೆ ಸುಲಭವಾಗಿ ಎಟುಕುವ ದರದಲ್ಲಿ ತನ್ನ ಪುಸ್ತಕಗಳನ್ನು ಪ್ರಕಟಿಸುತ್ತಿದ್ದ ವಿಶಾಲ ಮನಸ್ಸು ಕೂಡ ರಾಮಮೂರ್ತಿಯವದಾಗಿತ್ತು.

ಇದಕೊಂದು ನಿದರ್ಶನ ಕೊಡುವುದಾದರೆ 120-130ರ ಪುಟಗಳ ಪುಸ್ತಕ ಅವರು ಬರವಣಿಗೆ ಮಾರಾಟದ ದರವನ್ನು ನಿಗದಿ ಪಡಿಸಿದ್ದು, ಇದು ಕನ್ನಡದ ಸಾಹಿತ್ಯದ ಬೆಳವಣಿಗೆಗಾಗಿ ಅವರು ಕೈಗೊಂಡ ಕೆಲಸಗಳಲ್ಲಿ ಒಂದು ಎಂದರು ಉತ್ಪ್ರೇಕ್ಷೆ ಅಲ್ಲ.

ಬಹುರೂಪಿಯಾಗಿದ್ದ ರಾಮಮೂರ್ತಿ ಸಾಹಿತಿಯಾಗಿ, ಪತ್ತೆದಾರಿ ಕಾದಂಬರಿಕಾರರಾಗಿ, ಪ್ರಖರ ಪತ್ರಕರ್ತರಾಗಿ, ಸ್ವತಂತ್ರ ಹೋರಾಟಗಾರರಾಗಿ, ಕನ್ನಡಪರ ಹೋರಾಟಗಾರರಾಗಿ ತನ್ನ ನಿರಂತರತೆಯನ್ನ ಸಮಾಜದೊಂದಿಗೆ ಸೆಣೆಸುತ್ತಲೆ ಬಂದವರು. ಈ ನಾಡು ಇಂದು ಪ್ರತಿಯೊಂದು ಕ್ಷಣದಲ್ಲು ಮ.ರಾಮಮೂರ್ತಿ ರವರನ್ನು ಸ್ಮರಿಸಲು ಹಲವಾರು ಕಾರಣಗಳಿವೆ. ಅವರು ಬದುಕಿ ಬಾಳಿದ ಕಾಲವೂ ಸ್ವತಂತ್ರ ಚಳುವಳಿ, ಸಾಮಾಜಿಕ ಚಳುವಳಿಗಳು ಸೇರಿದಂತೆ ಹಲವಾರು ಚಳುವಳಿಗಳು ಉತ್ತುಂಗದಲ್ಲಿ ಕಾಲವದು ಭಾರತವೂ 1947ರಲ್ಲಿ ಸ್ವಾತಂತ್ರ್ಯವನ್ನು ಪಡೆದ ನಂತರ ಆಂತರಿಕವಾಗಿ ಭಾರತವೂ ಹಲವಾರು ಹೋರಾಟಗಳು ತನ್ನೊಳಗಿನ ಅಸ್ತವ್ಯಸ್ತತೆಯನ್ನು ಸರಿ ಪಡಿಸಿಕೊಳ್ಳುವತ್ತ ಸಾಗಿತ್ತು.

ಇತ್ತ ಕರ್ನಾಟಕದಲ್ಲೂ ಸಹ ಹಲವಾರು ಹೋರಾಟಗಳು ಮುನ್ನೆಲೆಗೆ ಬಂದವು, ಭಾಷಾವಾರು ರಾಜ್ಯಗಳ ರಚನೆಗಳಾದಾಗ ಕರ್ನಾಟಕವೂ ತೀವ್ರ ತರದ ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು. ಈ ಸಮಸ್ಯೆಗಳನ್ನು ಪ್ರತಿನಿಧಿಸಲು ಬೇಕಾದ ಪ್ರತಿನಿಧಿಗಳು ಹಲವಾರಿದ್ದರು. ರಾಮಮೂರ್ತಿ ಮತ್ತವರ ಸಮಕಾಲಿನವರಾದ
ಕನ್ನಡ ಚಳವಳಿಗಳ ಹರಿಕಾರರು ಎಂದೆ ಪ್ರಸಿದ್ಧರಾಗಿರುವ ಕೊಣಂದೂರು ಲಿಂಗಪ್ಪ, ಅ.ನ.ಕೃ, ಮೈ.ಸು.ನಟರಾಜ್, ಮೈ.ಸು. ಶೇಷಗಿರಿರಾವ್, ನಾಡಿಗೇರ ಕೃಷ್ಣರಾವ್, ಕರ್ಲಮಂಗಲಂ ಶ್ರೀಕಂಠಯ್ಯ ಮೊದಲಾದವರುಗಳ ಜತೆಗೆ ಗುರುತಿಸಿಕೊಂಡವರು.

ಮ.ರಾಮಮೂರ್ತಿ ಕನ್ನಡ ಚಳವಳಿಗಳು ನಿರ್ಣಾಯಕ ಹಂತದಲ್ಲಿರುವ ಕಾಲಘಟ್ಟದಲ್ಲಿ ಹಲವಾರು ಹೋರಾಟಗಳಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು.1956ರಲ್ಲಿ ಭಾಷಾವಾರು ರಾಜ್ಯಗಳ ರಚನೆ ಆದಾಗಾ ಕರ್ನಾಟಕವೂ ಸುತ್ತುಮುತ್ತಲಿನ ಅನ್ಯಭಾಷಿಕರಿಂದ ಹಲವು ಸಮಸ್ಯೆಗಳು ಎದುರಿಸುತ್ತಿತ್ತು. ವಿಶೇಷವಾಗಿ ಬೆಂಗಳೂರು ಅನ್ಯಭಾಷಿಕರಿಂದ ಸಮಸ್ಯೆಗಳನ್ನ ಎದುರಿಸುತ್ತಿತ್ತು. ಅಂತಹ ಕಾಲದಲ್ಲಿ ಇದರ ವಿರುದ್ಧವಾಗಿ ಕನ್ನಡ ನೆಲದ ಹಿತಾಸಕ್ತಿಯನ್ನು ಕಾಪಾಡಲು ಮುಂದಾದ ನೂರಾರು ಮಹನೀಯರಲ್ಲಿ ಮ.ರಾಮಮೂರ್ತಿ ಪ್ರಾತಃಸ್ಮರಣಿಯರು ಇಡಿ ಬದುಕೆ ಕನ್ನಡ ನಾಡಿನ ಹಿತಕ್ಕಾಗಿ ಸವೆಸಿದರು.

ಬೆಂಗಳೂರಲ್ಲಿನ ಹಲವಾರು ಬಡಾವಣೆಗಳಲ್ಲಿ ಕನ್ನಡಕ್ಕೆ ಗೌರವ ಕೊಡೊದಲ್ಲೆ ಇರಲಿ ಕನ್ನಡ ಎಂದರೆ ಎನ್ನಡ ಎನ್ನುವ ಸ್ಥಿತಿ ತಲುಪಿತ್ತು. ನಂತರ ದಿನದಲ್ಲಿ ಕನ್ನಡದ ಕುವರರಾದ ಕೋಣಂದೂರ ಲಿಂಗಪ್ಪಾ, ಬಂದಗದ್ದೆ ರಮೇಶ್ ಅನ್ನು ತರುಣ ವಿಧ್ಯಾರ್ಥಿಗಳು ‘ಕನ್ನಡ ಯುವಜನ‌ ಸಭಾ’‌ ಎನ್ನುವ ಹೆಸರಲ್ಲಿ ಕನ್ನಡ ವಿರೋಧಿ ಶಕ್ತಿಗಳಿಗೆ ಪ್ರತಿರೋಧ ಒಡ್ಡಲು ಆರಂಭಿಸಿದರು.

ಅದು ಸ್ಪೋಟಗೊಂಡಿದ್ದು, ಮತ್ತೆ ಮ.ರಾಮಮೂರ್ತಿ ಮತ್ತೆ ಅ.ನ.ಕೃ ಅವರು 04.02.1962ರಲ್ಲಿ ಆಯೋಜಿಸಿದ್ದ ‘ಬೆಂಗಳೂರು ಕನ್ನಡಿಗರ ಸಮಾವೇಶ’ ನಡೆಸಿ ಅದರ ಪ್ರಚಾರಕ್ಕಾಗಿ ಮತ್ತು ಕನ್ನಡ ಪರ ಸಂಘಟನೆಗಳಲ್ಲಿ ಹೋರಾಟದ ಶಕ್ತಿ ತುಂಬಲು ‘ಕನ್ನಡ ಯುವಜನ’ ಎನ್ನುವ ಪಾಕ್ಷಿಕ ಪತ್ರಿಕೆ ಹೊರಡಿಸಿ ಚಳವಳಿಗೆ ಹೊಸ ಆಯಾಮ ನೀಡಿದರು.

ಪುನಃ 27.05.1963ರಂದು ಚಾಮರಾಜಪೇಟೆ ರಾಮಸೇವಾ ಮಂಡಳಿಯಲ್ಲಿ ಎಂ.ಎಸ್‌. ಸುಬ್ಬಲಕ್ಷ್ಮೀ ಅವರ ಸಂಗೀತ ಕಚೇರಿ ವ್ಯವಸ್ಥೆಯಾಗಿತ್ತು, ಕನ್ನಡಕ್ಕೆ ಅವಕಾಶವೆ ಇಲ್ಲದ ಕಾರ್ಯಕ್ರಮವನ್ನು ಮ.ರಾಮಮೂರ್ತಿ ಮತ್ತು ಅ.ನ.ಕೃ ಅವರು ತೀವ್ರವಾಗಿ ಖಂಡಿಸಿ ಪ್ರತಿಭಟನೆ ಮಾಡಿದ್ದರ ಫಲವಾಗಿ ಆ ಕಚೇರಿ ರದ್ದಾಯಿತು. ಕನ್ನಡ ಅಂತ ಬಂದಾಗ ಯಾವುದಕ್ಕೂ ಸಹ ರಾಜಿಯಾಗದ ವ್ಯಕ್ತಿತ್ವ ರಾಮಮೂರ್ತಿಯವರದಾಗಿತ್ತು. ಈ ಪ್ರತಿಭಟನೆಯು ಹೊಸ ಒಂದು ಹೆಜ್ಜೆಗೆ ನಾಂದಿ ಹಾಡಿತ್ತು.

ಅದೇನೆಂದರೆ ಸುಮಾರು 60ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ಒಳಗೊಂಡ ‘ಕರ್ನಾಟಕ ಸಂಯುಕ್ತ ರಂಗ’ದ ಉದಯವಾಯಿತು. ಅ.ನ.ಕೃರವರು ಅಧ್ಯಕ್ಷರಾದರು. ರಾಮಮೂರ್ತಿ ಕಾರ್ಯದರ್ಶಿಯಾಗಿ ಹಲವಾರು ಐತಿಹಾಸಿಕ ನಿರ್ಧಾರಗಳು, ಹೋರಾಟಗಳು ಕೈಗೊಂಡರು.

ಅಜಾನುಬಾಹು ದೇಹ ನಿರ್ಭಿತ ಹೆಜ್ಜೆಗಳಿಂದ ಕೂಡಿದ ರಾಮಮೂರ್ತಿ ವ್ಯಕ್ತಿತ್ವಕ್ಕೆ “ಕನ್ನಡದ ವೀರ ಸೇನಾನಿ” ಎನ್ನುವ ಬಿರುದು ಬರಲು ಒಂದು ರೋಚಕ ಘಟನೆಯೇ ಇದೆ. ಇದು ರಾಮಮೂರ್ತಿರವರ ಎದೆಗಾರಿಕೆಗೆ ಸಾಕ್ಷಿಯಾಗಿದೆ.

ಸುಮನ್

ಅಂದಿನ ಕಾಲದಲ್ಲಿ ಚಿತ್ರದುರ್ಗದ ಹಿರಿಯೂರಲ್ಲಿ ನಿರ್ಮಾಣವಾಗಿದ್ದ ವಾಣಿ ವಿಲಾಸ ಸಾಗರ ಕಟ್ಟುವಾಗ ಕೂಲಿ ಕಾರ್ಮಿಕರಾಗಿ ತಮಿಳರೇ ಇದ್ದರು. ಇಡೀ ಹಿರಿಯೂರು ಪಟ್ಟಣವೇ ತಮಿಳರ ಕೈವಶ ಮಾಡಿಕೊಂಡು ಪಟ್ಟಣದಲ್ಲಿ ಡಿಎಂಕೆ ಪಕ್ಷದ ಬಾವುಟವನ್ನು ಹಾರಿಸಿದ್ದರು. ಇದು ಅಲ್ಲಿನ ಕನ್ನಡಪರ ಮನಸ್ಸುಗಳಲ್ಲಿ ತಳಮಳ ಉಂಟಾದರು ಏನೂ ಮಾಡದ ಸ್ಥಿತಿಯಲ್ಲಿದ್ದಾಗ ವಿಷಯ ರಾಮಮೂರ್ತಿ ಗಮನಕ್ಕೆ ಬಂದು ಬಾವುಟವನ್ನು ತೆಗೆಯುವಂತೆ ಮೌಖಿಕವಾಗಿ ಸೂಚಿಸಿದರು.

ನಂತರ ಅದನ್ನ ಕಡೆಗಣಿಸಿದ ತಮಿಳರು ಕನ್ನಡಿಗರ ತಾಳ್ಮೆ ಮತ್ತಷ್ಟು ಪರೀಕ್ಷೆ ಮಾಡಿದರು. ಇದನ್ನ ಸಹಿಸದ ರಾಮಮೂರ್ತಿ ಹಿರಿಯೂರ ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಂಡು ಆವಾಗಲೂ ಕೂಡ ತಾವಾಗಿಯೇ ಬಾವುಟ ತೆಗೆಯಿರಿ ಇಲ್ಲಾ ನಾನು ಇದನ್ನ ತೆಗೆದು ಎಸೆಯುತ್ತೆನೆ ಎಂದು ಹೇಳಿದ್ದು, ಲಘುವಾಗಿ ತಗೊಂಡ ತಮಿಳರು ಇವರ ಮಾತನ್ನು ಕಡೆಗಣಿಸಿದಾಗ ರೊಚ್ಚಿಗೆದ್ದ ರಾಮಮೂರ್ತಿ ತಾನೇ ಆ ಡಿಎಂಕೆ ಬಾವುಟ ಕಿತ್ತೆಸೆಯಲು ಮುಂದಾದಾಗ ಒಬ್ಬ ತಮಿಳು ಯುವಕ ಅವರನ್ನ ತಡೆದು ತಾನೆ ಬಾವುಟ ತೆಗೆದ ತಮಿಳರು ಕ್ನನಡಿಗರಿಗೆ ಕ್ಷಮೆ ಯಾಚಿಸಿದರು. ಈ ಒಂದು ದಿಟ್ಟ ನಡೆಯಿಂದ ಅವರಿಗೆ ವೀರ ಸೇನಾನಿ ಎಂಬ ಬಿರುದು ಅಭಿಮಾನಪೂರ್ವಕವಾಗಿ ಅರ್ಪಿಸಲಾಯಿತು.

ರಾಮಮೂರ್ತಿ ಪ್ರತಿಯೊಂದು ಹೋರಾಟವೂ ಕನ್ನಡಿಗರ ಲಾಭಕ್ಕಾಗಿ, ಉದ್ದಾರಕ್ಕಾಗಿ ನಾಡಿನ ಸಮಗ್ರ ಹಿತಕ್ಕಾಗಿಯೇ ಇತ್ತು. ಎನ್ನುವುದಕ್ಕೆ ಬಹಳಷ್ಟು ಸಾಕ್ಷಿಗಳಿವೆ. ಡಬ್ಬಿಂಗ್ ಚಿತ್ರ ವಿರೋಧಿ ಹೋರಾಟ, ಸ್ಥಳಿಯ ಕೆಲಸಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ, ಕನ್ನಡ ಶಿಕ್ಷಣ ಮಾಧ್ಯಮ ಭಾಷೆ ಮಾಡಲು, ಕನ್ನಡ ಚಿತ್ರಗಳಿಗೆ ಥಿಯೇಟರ್‌ ಸಲುವಾಗಿ ಇಂತಹ ದೂರಾಲೋಚನೆಗಳು ಕನ್ನಡಿಗರ ಭವಿಷ್ಯದ ಹಿತಕ್ಕಾಗಿ ನಡೆದ ನಡೆಯಬೇಕಾದ ಹೋರಾಟಗಳಾದರೆ.

ಅನ್ಯಭಾಷಿಕರಿಂದ ಕನ್ನಡಕ್ಕಾಗುತ್ತಿರುವ ಅನ್ಯಾಯ, ಕಾರ್ಖನೆಗಳಲ್ಲಿ ದುಡಿಯುವ ಕನ್ನಡದ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯವನ್ನು ನಿರಂತರವಾಗಿ ಪ್ರತಿಭಟಿಸಿದರು. ಇದಕ್ಕೆ ಒಳ್ಳೆಯ ನಿದರ್ಶನ ಎಂದರೆ ಮೈಕೊ ಕಾರ್ಖನೆಯ ಕಾರ್ಮಿಕರ ಪರವಾಗಿ ಹೋರಾಟ ಮಾಡಿದ್ದು ಅವರಿಗೆ ಕನ್ನಡದ ದುಡಿಯುವ ಜನರ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ.

ಇಂತಹ ಒಂದು ಘನ ವ್ಯಕ್ತಿತ್ವದ ರಾಮಮೂರ್ತಿ ರವರ ಕನಕಪುರ ರಸ್ತೆ ಪಕ್ಕದ ತಲೆಘಟ್ಟಪೂರದಲ್ಲಿ ಡಿಸೆಂಬರ್ 27.1962ರಲ್ಲಿ ತಮ್ಮ ಜಮೀನಿನಲ್ಲಿ ಬಾವಿಗೆ ನೀರು ಬಂದಿದೆ ಎನ್ನುವ ಖುಷಿಯಲ್ಲಿ ಕೆಲಸಗಾರರೊಂದಿಗೆ ಬಾವಿಗಿಳಿದಾಗ ಮೇಲಿಂದ ಮಣ್ಣು ಕುಸಿದು ಇಬ್ಬರು ಕೆಲಸಗಾರರೊಂದಿಗೆ ದುರಂತವಾಗಿ ಸಾವಿಗಿಡಾದರು. ಕನ್ನಡ ಬಹುದೊಡ್ಡ ಶಕ್ತಿಯೊಂದು ವಿಧಿ ಕನ್ನಡಿಗರಿಂದ ಕಿತ್ತುಕೊಂಡು ಬಿಟ್ಟಿತ್ತು.

ಕನ್ನಡವು ಸುಮ್ಮನೆ ಯಾವುದು ಕೂಡ ಉಳಿಸಿಕೊಂಡಿಲ್ಲ ಪ್ರತಿಯೊಂದರ ಹಿಂದೆ ರೋಚಕ ಇತಿಹಾಸವಿದೆ ಆ ಇತಿಹಾಸ ರೂಪಿಸುವಲ್ಲಿ ಸಾಹಿತಿಗಳು, ಕವಿಗಳು, ಹೋರಾಟಗಾರರು, ಪತ್ರಕರ್ತರು, ಗೋಪಾಲಗೌಡರಂತಹ ಕನ್ನಡ ಪ್ರೇಮಿ ರಾಜಕಾರಣಿಗಳು ಸೇರಿದಂತೆ ಪ್ರತಿಯೊಬ್ಬರು ದುಡಿದಿದ್ದಾರೆ. ಇಂತಹ ಹಲವಾರು ಮಹನೀಯರ ಕನಸಿನ ಕನ್ನಡ ನಾಡು ಅಂದು ಅವರು ಎದುರುಗೊಂಡು ಹೋರಾಡಿದ ಸಮಸ್ಯೆಗಳು ಇಂದು ಮತ್ತೆ ಅದರ ಹತ್ತರಷ್ಟಾಗಿ ಕನ್ನಡಿಗರ ಎದುರಿಗೆ ಬೃಹದಾಕಾರದಲ್ಲಿ ನಿಂತಿದೆ.

ಮ.ರಾಮಮೂರ್ತಿ ಅವರಂತಹ ಕನ್ನಡದ ಕಲಿಗಳು ಹಾಕಿಕೊಟ್ಟ ದಾರಿಯಲ್ಲೇ ಮತ್ತೆ ನಾವೂ ಸಾಗಬೇಕಾಗಿದೆ. ನಮ್ಮ ನಾಡು ನುಡಿ ನೆಲ ಜಲ ಇಂದು ಅನುಭವಿಸುತ್ತಿರುವ ನೋವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ರಾಮಮೂರ್ತಿ ಅವರು ತನ್ನ ಹೋರಾಟವನ್ನ ಬಾವುಟವನ್ನು ನಿರ್ಮಿಸಿ ನಾಡಿಗೆ ಅರ್ಪಿಸುವ ಮೂಲಕ ನಾಡು ನುಡಿಗಾಗಿ ಹೋರಾಡುವ ಜವಾಬ್ದಾರಿಯನ್ನು ಕೂಡ ಕನ್ನಡಿಗರ ಹೆಗಲಿಗೆ ವಹಿಸಿದ್ದಾರೆ. “ಒಂದಲ್ಲಾ ಒಂದು ದಿನ ಈ ರಾಜ್ಯದಲ್ಲಿ ಕನ್ನಡ ಬಾವುಟ ಹಾರಿಸುತ್ತೇನೆ. ಎಲ್ಲೆಡೆ ಕನ್ನಡ ಕಾಣುವಂತೆ ಮಾಡುವವರೆಗೆ ವಿರಮಿಸಲಾರೆ” ಎನ್ನುವ ಅವರ ಕೆಚ್ಚೆದೆಯ ಘೋಷವಾಕ್ಯವೂ ನಮ್ಮ ಕನ್ನಡಿಗರ ಎದೆಬಡಿತವಾಗಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು

Published

on

~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ

ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.

ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.

 

ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.

ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

Continue Reading

ದಿನದ ಸುದ್ದಿ

ನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್

Published

on

ಸುದ್ದಿದಿನ,ದಾವಣಗೆರೆ: “ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ತಾವು ಮುಖ್ಯಮಂತ್ರಿಯಂತೆ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇನೆ” ಎಂದು ಶಾಸಕ ಶಿವಗಂಗಾ ಬಸವರಾಜ್ ಹೇಳಿದರು.

ದಾವಣಗೆರೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಅವರು, ನಾನು ಡಿ.ಕೆ ಶಿವಕುಮಾರ್‌ ಅವರ ಮನೆಮಗ, ಶಿವನ ಮುಂದೆ ಇರುವ ಬಸವ ನಾನು. ನಾನೇ ಮುಖ್ಯಮಂತ್ರಿ ಇದ್ದಂತೆ, ಮನೆ ಮಗನಿಗೆ ಯಾವಾಗಲೂ ಅವರ ಆಶೀರ್ವಾದ ಇದ್ದೇ ಇರುತ್ತದೆ ಎಂದಿದ್ದಾರೆ.

ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

“ನಾನು ಮುಖ್ಯಮಂತ್ರಿ ಅಲ್ಲ. ಆದರೆ ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರ ಬಂದಾಗ ಮುಖ್ಯಮಂತ್ರಿಯಂತೆ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದೇನೆ. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದು ನನ್ನ ಮೊದಲ ಕರ್ತವ್ಯವಾಗಿದೆ. ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ,” ಎಂದು ಅವರು ಹೇಳಿದರು.

ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು, ಇನ್ನೂ ಅನೇಕ ಯೋಜನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ ಅವರು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುತ್ತಿದೆ ಎಂದರು.

“ಜನಪ್ರತಿನಿಧಿಯಾಗಿ ಚುನಾಯಿತರಾದ ಬಳಿಕ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದ್ದೇನೆ. ಗ್ರಾಮಗಳ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅಗತ್ಯ ಅನುದಾನ ತರುವ ಪ್ರಯತ್ನ ಮಾಡಲಾಗಿದೆ. ಕುಡಿಯುವ ನೀರಿನ ಯೋಜನೆಗಳು, ರಸ್ತೆ ಅಭಿವೃದ್ಧಿ, ಶಾಲೆಗಳ ಮೂಲಸೌಕರ್ಯ ಸುಧಾರಣೆ ಸೇರಿದಂತೆ ಹಲವು ಕಾಮಗಾರಿಗಳಿಗೆ ವೇಗ ನೀಡಲಾಗಿದೆ,” ಎಂದು ಹೇಳಿದರು.

ಕ್ಷೇತ್ರದ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಆಕರ್ಷಿಸುವ ಪ್ರಯತ್ನ ನಡೆಯುತ್ತಿದೆ. ಕೃಷಿ ಕ್ಷೇತ್ರಕ್ಕೆ ಅಗತ್ಯವಾದ ನೀರಾವರಿ ಹಾಗೂ ರೈತರಿಗೆ ಅನುಕೂಲಕರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಸರ್ಕಾರದ ಅಭಿವೃದ್ಧಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಅರ್ಹ ವ್ಯಕ್ತಿ ಯೋಜನೆಯಿಂದ ವಂಚಿತರಾಗಬಾರದು ಎಂಬುದು ತಮ್ಮ ಉದ್ದೇಶವಾಗಿದೆ ಎಂದು ಶಾಸಕರು ತಿಳಿಸಿದರು.

ವಿರೋಧ ಪಕ್ಷಗಳ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, “ಟೀಕೆಗಳು ಪ್ರಜಾಪ್ರಭುತ್ವದ ಭಾಗ. ಆದರೆ ಅಭಿವೃದ್ಧಿಯೇ ನಮ್ಮ ಉತ್ತರ. ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದು ಹಾಗೂ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವುದೇ ನಮ್ಮ ಗುರಿಯಾಗಿದೆ,” ಎಂದರು.

ಕ್ಷೇತ್ರದ ಜನರು ಅಭಿವೃದ್ಧಿಗೆ ಸಹಕಾರ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಸಂಪರ್ಕಿಸಬಹುದು. ಜನಸೇವೆಗಾಗಿ ತಮ್ಮ ಕಚೇರಿ ಸದಾ ತೆರೆದಿರುತ್ತದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ, ಗ್ರಾಮೀಣ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿಯ ನೂತನ ವಿಜ್ಞಾನ ಸಭಾಂಗಣದಲ್ಲಿ ಕಂಪ್ಯೂಟರ್ ಅಪ್ಲಿಕೇಷನ್ಸ್ (ಎಮ್.ಸಿ.ಎ) ಹಾಗೂ ಕಂಪ್ಯೂಟರ್ ಸೈನ್ಸ್ (ಎಮ್.ಎಸ್ಸಿ) ವಿಭಾಗಗಳ ಸಂಯುಕ್ತಾಶ್ರಯದಲ್ಲಿ “ಸಂಶೋಧನಾ ಸಮಸ್ಯೆಯನ್ನು ಗುರುತಿಸುವ ವಿವಿಧ ವಿಧಾನಗಳು, ಹೊಸ ಸಂಶೋಧನಾ ಕಲ್ಪನೆಗಳ ಸೃಷ್ಟಿ ಹಾಗೂ ಟೈಯರ್-1 ಸಂಶೋಧನಾ ಲೇಖನಗಳ ಬರಹದ ಪ್ರಮುಖ ಅಂಶಗಳು” ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.

ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ, ಗುಣಮಟ್ಟದ ಸಂಶೋಧನೆಯೇ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಪ್ರಗತಿ ಮತ್ತು ಜಾಗತಿಕ ಮಾನ್ಯತೆಯ ಮೂಲಾಧಾರವಾಗಿದೆ ಎಂದು ಹೇಳಿದರು.

ಸಂಶೋಧನೆ ಕೇವಲ ಪದವಿ ಪಡೆಯುವ ಪ್ರಕ್ರಿಯೆಯಾಗಬಾರದು, ಅದು ಸಮಾಜದ ಸಮಸ್ಯೆಗಳಿಗೆ ಪರಿಹಾರ ನೀಡುವ ದಿಕ್ಕಿನಲ್ಲಿ ಸಾಗಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಪ್ರಕಟಣೆಗಳು ವಿಶ್ವವಿದ್ಯಾಲಯದ ಸಂಶೋಧನಾ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಯು ಕೆ ಮಾಂಚೆಸ್ಟರ್‌ನ ‘ಯೂನಿವರ್ಸಿಟಿ ಆಫ್ ಸ್ಯಾಲ್‌ಫೋರ್ಡ್’ನ ಕಂಪ್ಯೂಟರ್ ಸೈನ್ಸ್ ಪ್ರಾಧ್ಯಾಪಕ ಡಾ. ಶಿವಕುಮಾರ ಪಿ. ಮಾತನಾಡಿ, ಸಂಶೋಧನಾ ಸಮಸ್ಯೆ ಗುರುತಿಸುವಿಕೆ, ಸಂಶೋಧನಾ ಅಂತರ (Research Gap) ಪತ್ತೆ, ಸಾಹಿತ್ಯ ಸಮೀಕ್ಷೆ, ಪ್ರಯೋಗಾತ್ಮಕ ವಿನ್ಯಾಸ (Experimental Design), ಟೈಯರ್-1 ಜರ್ನಲ್ ಲೇಖನ ಬರಹ, ಪ್ರಕಟಣಾ ನೈತಿಕತೆ ಹಾಗೂ ವಿಮರ್ಶಕರ ಅಭಿಪ್ರಾಯಗಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವ ವಿಧಾನಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

“ಒಂದು ಉತ್ತಮ ಸಂಶೋಧನಾ ಲೇಖನದ ಯಶಸ್ಸು ಅದರ ಹೊಸತನ, ವೈಜ್ಞಾನಿಕ ವಿಧಾನ ಮತ್ತು ಸ್ಪಷ್ಟವಾದ ಪ್ರಸ್ತುತೀಕರಣದಲ್ಲಿ ಅಡಗಿದೆ. ಸಂಶೋಧಕರು ಗುಣಮಟ್ಟದ ಸಮಸ್ಯೆಗಳನ್ನು ಆಯ್ಕೆ ಮಾಡಿಕೊಂಡು ಅಂತರರಾಷ್ಟ್ರೀಯ ಮಟ್ಟದ ಪ್ರಕಟಣೆಗೆ ಸಿದ್ಧರಾಗಬೇಕು,” ಎಂದು ಅವರು ಕರೆ ನೀಡಿದರು.

ಕಾರ್ಯಾಗಾರದಲ್ಲಿ 250ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ವಿವಿಧ ವಿಭಾಗಗಳ ಅಧ್ಯಾಪಕರು ಭಾಗವಹಿಸಿದ್ದರು. ಪೋಸ್ಟರ್ ಪ್ರಸೆಂಟೇಷನ್‌ಗಳು, ಸಂವಾದಾತ್ಮಕ ಚರ್ಚೆಗಳು ಮತ್ತು ಸಂಶೋಧನಾ ಲೇಖನ ಬರಹದ ಪ್ರಾಯೋಗಿಕ ಮಾರ್ಗದರ್ಶನ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ಭವಿಷ್ಯದಲ್ಲೂ ಇಂತಹ ಕಾರ್ಯಾಗಾರಗಳ ಸರಣಿಯನ್ನು ಆಯೋಜಿಸಲು ವಿಶ್ವವಿದ್ಯಾಲಯ ನಿರ್ಧರಿಸಿದೆ. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕುಲಸಚಿವ ಶ್ರೀ ಎಸ್. ಬಿ. ಗಂಟಿ, ಪರೀಕ್ಷಾಂಗ ಕುಲಸಚಿವ ಡಾ. ಸಿ. ಕೆ. ರಮೇಶ್, ಡಾ. ಬಸವಣ್ಣ ಎಮ್. ಅಧ್ಯಕ್ಷರು, ಎಮ್.ಸಿ.ಎ ವಿಭಾಗ, ಡಾ. ಚಂದ್ರಕಾಂತ ಎನ್. ಅಧ್ಯಕ್ಷರು, ಕಂಪ್ಯೂಟರ್ ಸೈನ್ಸ್ ವಿಭಾಗ, ಹಣಕಾಸು ಅಧಿಕಾರಿ ಡಾ. ಆರ್. ಶಶಿಧರ್ ಹಾಗೂ ವಿವಿಧ ವಿಭಾಗಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending