Connect with us

ರಾಜಕೀಯ

ಮಲ್ಲಿಕಾರ್ಜುನ ಖರ್ಗೆ ಎಂಬ ದಣಿವರಿಯದ ಜೀವ

Published

on

mallikarjun kharge_suddidina
  • ಜಗದೀಶ್ ಕೊಪ್ಪ

1972 ರಲ್ಲಿ ಗುಲ್ಬರ್ಗಾ ಜಿಲ್ಲೆಯ ಗುರುಮಿಟ್ಕಲ್ ಕ್ಷೇತ್ರದಿಂದ ಕಾಂಗ್ರೇಸ್ ಪಕ್ಷದ ಶಾಸಕನಾಗಿ ವಿಧಾನ ಸಭೆ ಪ್ರವೇಶಿಸುವುದರ ಮೂಲಕ ರಾಜ್ಯ ರಾಜಕಾರಣಕ್ಕೆ ಕಾಲಿಟ್ಟ ಮಲ್ಲಿಕಾರ್ಜುನ ಖರ್ಗೆಯವರು ಐವತ್ತು ವರ್ಷಗಳ ತಮ್ಮ ಸುಧೀರ್ಘ ರಾಜಕಾರಣದಲ್ಲಿ ರಾಜ್ಯ ಹಾಗೂ ಮತ್ತು ಕೇಂದ್ರ ರಾಜಕೀಯದಲ್ಲಿದ್ದುಕೊಂಡು , ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಸುವುದರ ಮೂಲಕ ರಾಷ್ಟ್ರದ ಗಮನ ಸ ಳೆದ ಹಿರಿಯ ಮುತ್ಸದಿ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ.

ಹೈದರಾಬಾದ್ ಕರ್ನಾಟಕದಲ್ಲಿ ಸುದೀರ್ಘ ರಾಜಕಾರಣದಲ್ಲಿದ್ದುಕೊಂಡು ಒಂಬತ್ತು ಬಾರಿ ರಾಜ್ಯ ವಿಧಾನಸಭೆಗೆ ಹಾಗೂ ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗುವುದರ ಮೂಲಕ ಖರ್ಗೆಯವರು ಸೋಲಿಲ್ಲದ ಸರದಾರರಾಗಿ ದಾಖಲೆ ನಿರ್ಮಿಸಿರುವುದು ಸುಲಭದ ಸಂಗತಿಯಲ್ಲ. . ರಾಜಕಾರಣವೆಂದರೆ, ಅಧಿಕಾರವನ್ನು ಅನುಭವಿಸುವುದು ಎನ್ನುವ ಮಾತು ಚಾಲ್ತಿಯಲ್ಲಿರುವ ಈ ಕಾಲಘಟ್ಟದಲ್ಲಿ ಜನರ ಸೇವೆಯನ್ನು ಮತ್ತು ತನ್ನ ಕ್ಷೇತ್ರದ ಅಭಿವೃದ್ಧಿಯನ್ನು ಕಾಯಕವೆಂದು ಭಾವಿಸಿ, ಅದನ್ನು ಒಂದು ತಪಸ್ಸಿನಂತೆ ಧ್ಯಾನಿಸಿದ ಖರ್ಗೆಯ ಕರ್ತೃತ್ವ ಶಕ್ತಿ ನಿಜಕ್ಕೂ ಬೆರಗು ಮೂಡಿಸುವಂತಹದ್ದು.

ಸದಾ ಸುದ್ದಿಜಗತ್ತು ಮತ್ತು ಪ್ರಚಾರದಿಂದ ದೂರವಿರುವ ಮಲ್ಲಿಕಾರ್ಜುನ ಖರ್ಗೆಯವರು ಮೇಲುನೋಟಕ್ಕೆ ತೀರಾ ಗಂಭೀರವಾದ ವ್ಯಕ್ತಿತ್ವದವರು ನಿಜ. ಆದರೆ, ಅಧಿಕಾರದ ಹಪಾಹಪಿತನವಿಲ್ಲದ, ಎಂದಿಗೂ ಗುಂಪುಗಾರಿಕೆಯನ್ನು ಮಾಡದ ಅಥವಾ ತನ್ನ ಜಾತಿಯ ಹಿನ್ನಲೆಯಲ್ಲಿ ಅಧಿಕಾರಕ್ಕಾಗಿ ಲಾಬಿ ಮಾಡದ ಖರ್ಗೆಯವರ ಸ್ವಾಭಿಮಾನದ .ಗುಣಗಳ ಹಿಂದೆ ಅವರ ಅಪಾರ ಓದು, ತಿಳುವಳಿಕೆ, ವಿದ್ವತ್ತು ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಗೌತಮ ಬುದ್ಧನ ಪ್ರಭಾವಗಳಿವೆ. ಅತ್ಯಂತ ಮಾಗಿದ ಹಾಗೂ ಪ್ರಬುದ್ಧ ಚಿಂತನೆಗಳ ವ್ಯಕ್ತಿತ್ವದ ಖರ್ಗೆಯವರ ಬಳಿ ಅರ್ಧ ಗಂಟೆ ಕುಳಿತು ಮಾತನಾಡಿದರೆ ಸಾಕು, ಅವರು ಎಂತಹ ಧೀಮಂತ ರಾಜಕಾರಣಿ ಎಂಬುವುದು ನಮ್ಮ ಅನುಭವಕ್ಕೆ ಬರುತ್ತದೆ.
ಖರ್ಗೆಯವರ ಬಾಲ್ಯದ ಬಡತನ.

ಅವರ ಅವರ ಓದಿನ ಆಕಾಂಕ್ಷೆ ಮತ್ತು ತನ್ನ ಪುತ್ರನನನ್ನು ಓದಿಸಿ ಸಾಹೇಬನನ್ನಾಗಿ ಮಾಡಬೇಕೆಂಬ ಏಕೈಕ ಆಸೆಯಿಂದ ಬೀದರ್ ಜಿಲ್ಲೆಯ ಹಳ್ಳಿಯಿಂದ ಇಟ್ಟಿಗೆ ತಯಾರಿಸುವವರ ಬಳಿ ಕೂಲಿ ಕಾರ್ಮಿಕರಾಗಿದ್ದ ಖರ್ಗೆಯವರ ತಂದೆ ಮಾಪಣ್ಣನವರು ಗುಲ್ಬರ್ಗ ನಗರಕ್ಕೆ ಬಂದು ಅಲ್ಲಿನ ಜವಳಿ ಮಿಲ್ ನಲ್ಲಿ ಕೂಲಿ ಕಾರ್ಮಿಕನಾಗಿ ಸೇರಿಕೊಂಡು ಪುತ್ರನ ಏಳಿಗೆಗಾಗಿ ಇಡೀ ಬದುಕನ್ನು ಗಂಧದ ಕೊರಡಿನಂತೆ ತೇಯ್ದ ಕಥೆ ನಿಜಕ್ಕೂ ಹೃದಯ ಕಲಕುವಂತಹ ಕಥನವಾಗಿದೆ.

ಖರ್ಗೆಯವರ ಬಡವರ ಹಾಗೂ ಹಿಂದುಳಿದವರ ಮೇಲಿನ ಪ್ರೀತಿ ಮತ್ತು ನಿಷ್ಕಳಂಕ ಕಾಳಜಿಯ ಹಿಂದೆ ಅವರ ತಂದೆಯವರ ಪ್ರಭಾವವಿದೆ. ತಾನು ಮತ್ತು ತನ್ನ ಕೃತಿಯಲ್ಲ ತಟ್ಟೆಯಲ್ಲಿ ಕುಳಿತು ಊಟ ಮಾಡುತ್ತಿದ್ದನ್ನು ಹಾಗೂ ತನ್ನನ್ನು ಅಪ್ಪ ಬೆಳಿಗ್ಗೆ ಹೆಗಲ ಮೇಲೆ ಕೂರಿಸಿಕೊಂಡು ಹೋಗಿ ಶಾಲೆಗೆ ಬಿಟ್ಟು, ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಘಟನೆ ಮತ್ತು ಆನಂತರ ಕೂಲಿ ಕೆಲಸ ಮುಗಿಸಿ ಬಂದು ಸಂಜೆ ಶಾಲೆಯಿಂದ ಹೆಗಲ ಮೇಲೆ ಕೂರಿಸಿಕೊಂಡು ಬರುತ್ತಿದ್ದದನ್ನು ಭಾವುಕರಾಗಿ ನೆನೆಯುವಾಗ ಮಲ್ಲಿಕಾರ್ಜುನ ಖರ್ಗೆಯವರ ಕಣ್ಣಾಲಿಗಳು ಒದ್ದೆಯಾಗುತ್ತವೆ.

1972 ರಲ್ಲಿ ಪ್ರಥಮವಾಗಿ ವಿಧಾನ ಸಭೆಗೆ ಶಾಸಕರಾಗಿ ಪ್ರವೇಶ ಮಾಡಿದ ದಿನದಿಂದ ಇಂದಿನವರೆಗೂ ಖರ್ಗೆಯವರು ಶಾಸಕರಾಗಿ, ಸಚಿವರಾಗಿ ಮತ್ತು ಲೋಕಸಭೆಯ ಸದಸ್ಯರಾಗಿ ಮಾಡಿರುವ ಕೆಲಸಗಳನ್ನು ಲೇಖಕರಾದ ಹೆಚ್.ಟಿ. ಪೋತೆಯವರು ಖರ್ಗೆ ಕುರಿತಾದ ಕೃತಿಯಲ್ಲಿ ಸವಿವರಾಗಿ ಅಂಕಿ ಅಂಶಗಳ ಸಮೇತ ದಾಖಲಿಸಿದ್ದಾರೆ. ಜೊತೆಗೆ ಕಳೆದ ಒಂದು ದಶಕದಲ್ಲಿ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಯಲ್ಲಿ ಅದರಲ್ಲೂ ವಿಶೇಷವಾಗಿ ಗುಲ್ಬರ್ಗಾ ನಗರವನ್ನು ಅವರು ಪರಿವರ್ತಿಸಿರುವ ರೀತಿ ನಿಜಕ್ಕೂ ಬೆರಗು ಮೂಡಿಸುವಂತಹದ್ದು.

ಶ್ರೀ ಮಲ್ಲಿಕಾರ್ಜುನ ಖರ್ಗೆಯವರು ಕೇಂದ್ರದಲ್ಲಿ ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ವಿಸ್ತರಿಸಿದ ರೈಲ್ವೆ ಯೋಜನೆಗಳು, ಅಲ್ಲಿಗೆ ತಂದ ಕಛೇರಿಗಳು ಮತ್ತು ಕಾರ್ಮಿಕ ಸಚಿವರಾಗಿದ್ದ ಸಂದರ್ಭದಲ್ಲಿ ಗುಲ್ಬರ್ಗಾ ನಗರಕ್ಕೆ ಸುಸಜ್ಜಿತ ಇ.ಎಸ್.ಐ. ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು, ಅವುಗಳ ಭವ್ಯ ಕಟ್ಟಡ, ಬೆಂಗಳೂರು ಮತ್ತು ಹುಬ್ಬಳ್ಳಿ ನಗರಗಳಲ್ಲಿ ಮೇಲ್ದರ್ಜೆಗೆ ಏರಿಸಲ್ಪಟ್ಟ ಆಸ್ಪತ್ರೆಗಳು, ಗುಲ್ಬರ್ಗಾ ನಗರದಲ್ಲಿ ನಿರ್ಮಾಣವಾಗಿರುವ ರಿಂಗ್ ರಸ್ತೆ ಹಾಗೂ ಅಲ್ಲಿನ ವಿಶಾಲವಾದ ಮುಖ್ಯ ರಸ್ತೆಗಳು ಇವೆಲ್ಲವೂ ಖರ್ಗೆಯವರ ಹೆಸರನ್ನು ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ದಾಖಲಾಗುವಂತೆ ಮಾಡಿವೆ. ಜೊತೆಗೆ ಹೈದರಾಬಾದ್ ಕರ್ನಾಟಕದ ಹರಿಕಾರನನ್ನಾಗಿ ಮಾಡಿವೆ.

ಗುಲ್ಬರ್ಗಾ ನಗರವನ್ನು ಪ್ರಸಿದ್ಧ ಪ್ರವಾಸಿ ತಾಣ ಮಾಡುವುದಲ್ಲಿ ಖರ್ಗೆಯವರ ಸಾಧನೆ ಅಪ್ರತಿಮವಾದುದು. ಸೇಡಂ ರಸ್ತೆಯಲ್ಲಿ ಗುಲ್ಬರ್ಗಾ ವಿ.ವಿ. ಗೆ ಹೊಂದಿಕೊಂಡಿರುವ ಹದಿನೆಂಟು ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಸಿದ್ಧಾರ್ಥ ವಿಹಾರ ಎಂಬ ಬುದ್ಧ ದೇಗುಲವನ್ನು ನಿರ್ಮಿಸಿ, ಅದನ್ನು ದಕ್ಷಿಣ ಭಾರತ ಮಾತ್ರವಲ್ಲದೆ, ದಕ್ಷಿಣ ಏಷ್ಯಾದ ಅತ್ಯುತ್ತಮ ಬುದ್ಧ ದೇಗುಲವನ್ನಾಗಿ ಮಾಡಿದ್ದಾರೆ. ಅಲ್ಲಿನ ಪ್ರಶಾಂತ ಮೌನ, ಸ್ವಚ್ಛತೆ ಮತ್ತು ಗಿಡಮರಗಳ ಹಸಿರು, ಎಲ್ಲವೂ ಮನಸ್ಸಿಗೆ ಮುದನೀಡುತ್ತವೆ. ಒಂದು ಸಂಸ್ಥೆ ಅಥವಾ ಒಂದು ಸರ್ಕಾರ ಮಾಡಬಹುದಾದ ಕೆಲಸವನ್ನು ಇಚ್ಛಾ ಶಕ್ತಿ ಇರುವ ಒಬ್ಬ ವ್ಯಕ್ತಿ ಕೂಡ ಮಾಡಬಲ್ಲ ಎಂಬುದನ್ನು ಈ ದೇಗುಲದ ಮೂಲಕ ಮಲ್ಲಿಕಾರ್ಜುನ ಖರ್ಗೆಯವರು ತಮ್ಮೊಳಗಿನ ದೈತ್ಯ ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.

2017 ರಲ್ಲಿ ನಾನು ಅವರ ಸಿದ್ಧಾರ್ಥ ವಿಹಾರ ಸಂಸ್ಥೆಗಾಗಿ ಡಾ. ಅಂಬೇಡ್ಕರ್ ಅವರ ಬುದ್ಧ ಮತ್ತು ಆತನ ಧಮ್ಮ ಕೃತಿಯನ್ನು ಅನುವಾದಿಸಿಕೊಟ್ಟೆ. ಅವರಿಗೆ ಅನುವಾದ ಹೇಗಿರುತ್ತೋ ಎಂಬ ಆತಂಕವಿತ್ತು. ಹಿಂದಿನ ರಾತ್ರಿ ದೆಹಲಿಯಿಂದ ಗುಲ್ಬರ್ಗಾ ಕ್ಕೆ ಬಂದಿದ್ದ ಖರ್ಗೆಯವರು ರಾತ್ರಿಯಿಡಿ ಕೃತಿಯನ್ನು ಓದಿ ಸಂತೋಷಪಟ್ಟರು. ಬೆಳಗಿನ ಜಾವ ಏಳುಗಂಟೆಗೆ ಸಿದ್ಧಾರ್ಥ ವಿಹಾರದ ಕಚೇರಿಗೆ ಬಂದು ಪಕ್ಕದ ಗುಲ್ಬರ್ಗಾ ವಿ.ವಿ. ಅತಿಥಿ ಗೃಹದಲ್ಲಿ ತಂಗಿದ್ದ ನನ್ನನ್ನು ಕರೆಸಿಕೊಂಡು ಧನ್ಯವಾದ ಹೇಳಿದರು. ಜೊತೆಗೆ ಪ್ರೊ.ಮಲ್ಲೇಪುರಂ ವೆಂಕಟೇಶ್ ನಿಮ್ಮನ್ನು ಆಯ್ಕೆ ಮಾಡಡುವುದರ ಮೂಲಕ ಅಂಬೇಡ್ಕರ್ ಮತ್ತು ಬುದ್ಧ ಇಬ್ಬರಿಗೂ ನ್ಯಾಯ ಒದಗಿಸಿದ್ದಾರೆ ಎಂದು ಅವರ ಬಗ್ಗೆ ಮೆಚ್ಚುಗೆ ಸೂಚಿಸಿದರು.

ಬುದ್ಧನ ಕುರಿತಾಗಿ ಹಾಗೂ ಅಲ್ಲಿನ ದೇಗುಲ ಕುರಿತಾಗಿ ಅವರು ಎಷ್ಟು ಆಳವಾಗಿ ಭಾವನಾತ್ಮಕ ಸಂಬಂಧ ಹೊಂದಿದ್ದಾರೆಂದರೆ, ಬುದ್ಧ ಪೂರ್ಣಿಮೆಯ ದಿನದಂದು ಬೆಳಗಿನ ವೇಳೆ ಅವರೊಂದಿಗೆ ಮಾತನಾಡುತ್ತಾ ದೇಗುಲದ ಆವರಣದಲ್ಲಿ ನಾನು ಸುತ್ತಾಡುತ್ತಿದ್ದೆ. ನೆಲಕ್ಕೆ ಹಾಸಿರುವ ಕಲ್ಲುಚಪ್ಪಡಿಯ ಮೇಲೆ ಬಿದ್ದಿದ್ದ ಒಣಗಿದ ಬೇವಿನ ಮರದ ಎಲೆಗಳನ್ನು ಒಂದೊಂದಾಗಿ ಆಯ್ದು ಅವುಗಳನ್ನು ಕಸದ ಬುಟ್ಟಿಗೆ ಹಾಕುತ್ತಾ ಅವರು ನಡೆಯುತ್ತಿದ್ದರು. ಬೇಸಿಗೆಯಲ್ಲಿ ನಲವತ್ತೈದು ಡಿಗ್ರಿ ಉಷ್ಣಾಂಶ ಇರುವ ಗುಲ್ಬರ್ಗಾ ನಗರದಲ್ಲಿ ಬೌದ್ಧ ವಿಹಾರದ ಬಳಿ ಸೆಕೆ ಅಥವಾ ಬಿಸಿಲು ಎನಿಸುವುದಿಲ್ಲ.ಅಷ್ಟೊಂದು ಬೇವಿನ ಮರಗಳನ್ನು ಅವರು ಮಕ್ಕಳ ಹಾಗೆ ಜೋಪಾನ ಮಾಡಿ ಬೆಳಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆಯವರನ್ನು ಹಲವು ವರ್ಷಗಳಿಂದ ಬಹಳ ಆಸಕ್ತಿಯಿಂದ ನಾನು ಗಮನಿಸುತ್ತಾ ಬಂದಿದ್ದೀನಿ. ಅವರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಮೋದಿ ಸರ್ಕಾರವನ್ನು ವಿಮರ್ಶೆಗೆ ಒಳಪಡಿಸುವ ರೀತಿಗೆ ಮತ್ತು ಅವರ ವಾಕ್ ಚಾತುರ್ಯಕ್ಕೆ ನಾನು ವಿಸ್ಮಯಗೊಂಡಿದ್ದೇನೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ವರ್ಷವಾದ ನಂತರ, ಲೋಕಸಭೆಯಲ್ಲಿ ಖರ್ಗೆಯವರು ಸರ್ಕಾರದ ಸಾಧನೆಯನ್ನು ಬಣ್ಣಿಸುತ್ತಾ “ ನಿಮ್ಮದು ಚಾರ್ ಆಣೆ ಕಾ ಮುರ್ಗಾ, ಬಾರ್ ಆಣೆ ಕಾ ಮಸಾಲ’ ಎಂಬ ಉರ್ದು ಗಾದೆಯಂತೆ ನಾಲ್ಕಾಣೆ ಕೋಳಿಗೆ ಹನ್ನೆರೆಡಾಣೆ ಮಸಾಲೆ ಅರೆಯುವ ಸರ್ಕಾರ ಎಂದು ಜರಿದಿದ್ದರು.

ವಿಧಾನ ಸಭೆಯಲ್ಲಾಗಲಿ, ಲೋಕಸಭೆಯಲ್ಲಾಗಲಿ ಎಂದಿಗೂ ಅಸಂಸದೀಯ ಪದ ಬಳಕೆ ಮಾಡದ, ತುಟಿ ಮೀರಿ ಮಾತನಾಡದ ಖರ್ಗೆಯವರು ಚರ್ಚೆಗೆ ಮುನ್ನ ನಿಖರವಾದ ಅಂಕಿ ಅಂಶಗಳನ್ನು ಎದುರಿಗೆ ಇಟ್ಟುಕೊಂಡು ವಾದ ಮಂಡಿಸುವ ಪರಿಗೆ ಆಡಳಿತಾ ರೂಡ ಬಿ.ಜೆ.ಪಿ. ಪಕ್ಷದ ಎಲ್ಲಾ ನಾಯಕರಲ್ಲಿ ಖರ್ಗೆಯವರ ಕುರಿತಾಗಿ ಒಂದು ರೀತಿ ನೈತಿಕ ಭಯವಿತ್ತು. ಇದು ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಕಾಂಗ್ರೇಸ್ ಪಕ್ಷಕ್ಕೆ ಖರ್ಗೆಯವರ ನಾಯಕತ್ವ ಮತ್ತು ಅವರ ನಡುವಳಿಕೆ ಹಾಗೂ ಮಾತುಗಾರಿಕೆಯಿಂದ ಒಂದಿಷ್ಟು ಘನತೆ ಮತ್ತು ಮೌಲ್ಯ ಉಳಿದುಕೊಂಡಿದೆ ಎಂದರೆ ತಪ್ಪಾಗಲಾರದು.

ಇಂತಹ ಹಿರಿಯ ಧೀಮಂತ ರಾಜಕಾರಣಿ ಮತ್ತು ರಾಜಕೀಯ ಮುತ್ಸದಿಗೆ ರಾಜ್ಯದ ಮುಖ್ಯಮಂತ್ರಿ ಪದವಿ ಇದುವರೆಗೆ ಏಕೆ ದಕ್ಕಲಿಲ್ಲ ಎಂಬುದು ನಿಜಕ್ಕೂ ಸೋಜಿಗದ ಸಂಗತಿ. ಎಂದಿಗೂ ಕೆಳಮಟ್ಟದ ರಾಜಕಾರಣಕ್ಕೆ ಇಳಿಯಲಾರದ ಅವರ ಘನತೆಯ ರಾಜಕಾರಣ ಇದಕ್ಕೆ ಕಾರಣವಿರಬಹುದು. ಇದನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ಅವರು ತನ್ನ ನೆಲ ಹಾಗೂ ಜನರ ಪರವಾಗಿ ಅವರು ಸೇವೆ ಸಲ್ಲಿಸುತ್ತಿರುವ ಪರಿ ಅಚ್ಚರಿ ಮೂಡಿಸುತ್ತದೆ. ಇಂದಿಗೂ ಕೂಡ ತಾನು ಹುಟ್ಟಿ ಬೆಳೆದ ಬೀದರ್ ಜಿಲ್ಲೆಯ ಬಾಲ್ಕಿ ತಾಲ್ಲೂಕಿನ ವರವಟ್ಟಿ ಗ್ರಾಮವನ್ನು ಅವರು ಮರೆತಿಲ್ಲ.

ತಾವು ಪ್ರತಿನಿಧಿಸುವ ಲೋಕ ಸಭಾ ಕ್ಷೇತ್ರಕ್ಕೆ ಅದು ಒಳಪಡದಿದ್ದರೂ ಸಹ, ಆ ಗ್ರಾಮವನ್ನು ಅವರು ಅಭಿವೃದ್ಧಿ ಪಡಿಸುರುವ ರೀತಿ ಪ್ರತಿಯೊಬ್ಬ ಜನಪ್ರತಿನಿಧಿಗೆ ಮಾದರಿಯಾಗಿದೆ. ಹೈಸ್ಕೂಲು, ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ವೈದ್ಯಕೀಯ ಆಸ್ಪತ್ರೆ, ಕೃಷಿ ಸಲಹಾ ಕೇಂದ್ರ, ಕುಡಿಯುವ ನೀರು, ರಸ್ತೆ ಇವೆಲ್ಲವನ್ನು ಒಳಗೊಂಡಿರುವ ವರವಟ್ಟಿ ಗ್ರಾಮದ ಜನತೆ ನಿಜಕ್ಕೂ ಪುಣ್ಯವಂತರು.ಏಕೆಂದರೆ, ಅವರು ಈ ನಾಡಿಗೆ ಒಬ್ಬ ಶ್ರೇಷ್ಠ ಜನಪ್ರತಿನಿಧಿಯನ್ನು ಹಾಗೂ , ಸ್ವಾಭಿಮಾನದ ರಾಜಕೀಯ ನಾಯಕನನ್ನು ನಾಡಿಗೆ ನೀಡಿದ ಕೀರ್ತಿ ಆ ನೆಲಕ್ಕೆ ಸಲ್ಲುತ್ತದೆ.

ಇಂತಹ ಕರ್ನಾಟಕ ಕಂಡ ಅಪರೂಪದ ಪ್ರತಿಭೆ ಇಂದು ಅಖಿಲ ಭಾರತೀಯ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾಗಿ ಆತ್ಕೆಯಾಗಿರುವುದು ಪ್ರತಿಯಯೊಬ್ಬ ಕನ್ನಡಿಗನೂ ಹೆಮ್ಮೆ ಪಡುವಂತಹ ವಿಷಯವಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ

Published

on

ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ನಿನ್ನೆ ಲಿಖಿತ ಉತ್ತರ ನೀಡಿದ್ದಾರೆ.

ದೇಶದಲ್ಲಿ ಒಟ್ಟು 15 ಸಾವಿರದ 300 ಮೆಗಾ ವ್ಯಾಟ್, ಸಾಮರ್ಥ್ಯದ 21 ಪರಮಾಣು ರಿಯಾಕ್ಟರ್‌ಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಭೂವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ಸ್ಥಾಪಿಸಲಾದ ಪರಮಾಣು ಶಕ್ತಿ ಸಾಮರ್ಥ್ಯವು 8 ಸಾವಿರ 180 ಮೆಗಾವ್ಯಾಟ್ ಆಗಿದ್ದು, 24 ಪರಮಾಣು ಶಕ್ತಿ ರಿಯಾಕ್ಟರ್‌ಗಳನ್ನು ಒಳಗೊಂಡಿದೆ.

ಪ್ರಸ್ತುತ ಸ್ಥಾಪಿಸಲಾದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 2031-32ರ ವೇಳೆಗೆ 22 ಸಾವಿರದ 480 ಮೆಗಾವ್ಯಾಟ್‌ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ
ಪರಮಾಣು ವಿದ್ಯುತ್ ಸ್ಥಾವರಗಳಿಂದ ವಾರ್ಷಿಕ ವಿದ್ಯುತ್ ಉತ್ಪಾದನೆಯು 2013-14 ರಲ್ಲಿ 34 ಸಾವಿರದ 228 ಮಿಲಿಯನ್ ಯುನಿಟ್‌ಗಳಿಂದ 2023-24 ರಲ್ಲಿ 47 ಸಾವಿರದ 971 ಮಿಲಿಯನ್ ಯುನಿಟ್‌ಗಳಿಗೆ ಏರಿಕೆಯಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಇಂದು ಕಾರ್ಗಿಲ್ ವಿಜಯ ದಿವಸ್ ; ಯೋಧರ ಸ್ಮರಣೆ

Published

on

ಸುದ್ದಿದಿನಡೆಸ್ಕ್:ಇಂದು ಕಾರ್ಗಿಲ್ ವಿಜಯ್ ದಿವಸ್. ಇದರ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಪಾಕಿಸ್ತಾನ ವಿರುದ್ಧದ ಕಾರ್ಗಿಲ್ ಯುದ್ಧದಲ್ಲಿ ಬಲಿದಾನಗೈದ ವೀರ ಯೋಧರಿಗೆ ಪ್ರಧಾನಿ ಗೌರವ ಸಮರ್ಪಣೆ ಮಾಡಲಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಶಿಂಕುನ್ ಲಾ ಸುರಂಗ ಮಾರ್ಗ ಯೋಜನೆಗೆ ವರ್ಚುವಲ್ ಮೂಲಕ ಚಾಲನೆ ನೀಡಲಿದ್ದಾರೆ.

ಈ ಯೋಜನೆಯಡಿ ನಿಮು-ಪದುಮ್-ಡಾರ್ಚಾ ರಸ್ತೆಯಿಂದ ಲೇಹ್‌ಗೆ ಎಲ್ಲಾ ಹವಾಮಾನಗಳಲ್ಲೂ ಸಂಪರ್ಕ ಕಲ್ಪಿಸಲು ಸುಮಾರು 15 ಸಾವಿರದ 800 ಅಡಿ ಎತ್ತರದಲ್ಲಿ 4.1 ಕಿಲೋಮೀಟರ್ ಉದ್ದದ ಜೋಡಿ ಸುರಂಗ ಮಾರ್ಗವನ್ನು ನಿರ್ಮಿಸಲಾಗುವುದು. ಈ ಕಾರ್ಯ ಪೂರ್ಣಗೊಂಡ ನಂತರ ವಿಶ್ವದಲ್ಲೇ ಇದು ಅತಿ ಎತ್ತರದ ಸುರಂಗ ಮಾರ್ಗವಾಗಲಿದೆ. ಸಶಸ್ತ್ರ ಪಡೆಗಳ ಸುಗಮ ಪ್ರಯಾಣಕ್ಕಷ್ಟೇ ಅಲ್ಲದೇ ಲಡಾಕ್‌ನಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೂ ಈ ಸುರಂಗ ಮಾರ್ಗವು ಸಹಕಾರಿಯಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೇಂದ್ರ ಬಜೆಟ್ : ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ

Published

on

ಸುದ್ದಿದಿನಡೆಸ್ಕ್:ಕೇಂದ್ರದ ಮುಂಗಡ ಪತ್ರ ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ತೆಲುಗು ದೇಶಂ ನಾಯಕ ಕೇಂದ್ರ ಸಚಿವ ಕಿಂಜರಪು ರಾಮಮೋಹನ ನಾಯ್ಡು ಹೇಳಿದ್ದಾರೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಬಜೆಟ್ ಎಲ್ಲರ ಕನಸಾಗಿದೆ ಎಂದು ಹೇಳಿದ್ದಾರೆ. ಈಶಾನ್ಯ ರಾಜ್ಯಗಳ ಬೆಳವಣಿಗೆಗೆ ಆಯ-ವ್ಯಯ ಪೂರಕವಾಗಿದೆ ಎಂದು ಹೇಳಿದರು.

ಬಿಜೆಪಿ ಹಿರಿಯ ನಾಯಕ ರವಿಶಂಕರ್ ಪ್ರಸಾದ್, ಉದ್ಯೋಗ ಹೆಚ್ಚಿಸುವ ಕಾರ್ಯಕ್ರಮವನ್ನು ಹಣಕಾಸು ಸಚಿವರು ಪ್ರಕಟಿಸಿರುವುದಾಗಿ ಹೇಳಿದ್ದಾರೆ. ಜೆಡಿಯು ಮುಖಂಡ ರಾಜೀವ್ ರಂಜನ್ ಸಿಂಗ್, ಆಯ-ವ್ಯಯ ಬಿಹಾರ ಜನತೆಗೆ ಹಾಗೂ ಪ್ರವಾಸೋದ್ಯಮಕ್ಕೆ ಒತ್ತು ನೀಡಿದೆ ಎಂದರು.

ಕಾಂಗ್ರೆಸ್ ಮುಖಂಡ ಶಶಿತರೂರ್ ಪ್ರತಿಕ್ರಿಯೆಸಿ, ಉದ್ಯೋಗ ಖಾತರಿ ಯೋಜನೆಯ ರಾಜ್ಯಗಳ ತಾರತಮ್ಯವನ್ನು ನಿಭಾಯಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಶಿವಸೇನಾ ನಾಯಕ ಪ್ರಿಯಾಂಕ ಚತುರ್ವೇದಿ, ಮಹಾರಾಷ್ಟ್ರ ರಾಜ್ಯಕ್ಕೆ ನಿರ್ಧಿಷ್ಟವಾದ ಯೋಜನೆಗಳನ್ನು ಪ್ರಕಟಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಡಿಎಂಕೆ ನಾಯಕ ಟಿ.ಆರ್.ಬಾಲು, ಟಿಎಂಸಿ ನಾಯಕಿ ಕಲ್ಯಾಣ ಬ್ಯಾನರ್ಜಿ ಅವರು, ಆಯ-ವ್ಯಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕದ ಸಂಸದರಾದ ಬಸವರಾಜ ಬೊಮ್ಮಾಯಿ, ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಜಗದೀಶ್ ಶೆಟ್ಟರ್, ಜನಪರ ಸಾಮಾನ್ಯವರ್ಗದವರ ಆಯ-ವ್ಯಯವಾಗಿದೆ ಎಂದರು. ಕೇಂದ್ರ ಸಚಿವರಾದ ಎಚ್.ಡಿ.ಕುಮಾರ್‌ಸ್ವಾಮಿ, ವಿ.ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಅವರುಗಳು ಆಯ-ವ್ಯಯವನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ. ಭಾರತೀಯ ಕೈಗಾರಿಕಾ ಒಕ್ಕೂಟದ ಅಧ್ಯಕ್ಷ ಅನಿಶ್ ಶಹಾ ಪ್ರತಿಕ್ರಿಯಿಸಿ, ದೇಶದ ಬೆಳವಣಿಗೆಗೆ ಪೂರಕ ಆಯ-ವ್ಯಯ ರೈತರು, ಯುವಕರು, ಮಹಿಳೆಯರಿಗೆ ಸಹಕಾರಿ ಎಂದು ಹೇಳಿದ್ದಾರೆ.

ಶಿಕ್ಷಣ, ಆರೋಗ್ಯ, ರಕ್ಷಣಾ ಕ್ಷೇತ್ರಗಳಿಗೆ ಅನುದಾನವನ್ನು ಗಣನೀಯವಾಗಿ ಖಡಿತ ಮಾಡಿದ್ದಾರೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಹಲವು ಯೋಜನೆಗಳ ಅನುಷ್ಠಾನಕ್ಕೆ ನೆರವು ಕೋರಿದ್ದೆವು. ಮಾಹಿತಿ ತಂತ್ರಜ್ಞಾನಕ್ಕೆ ನೀಡಿದ್ದ ಅನುದಾನವನ್ನು ಕಡಿಮೆ ಮಾಡಿರುವ ಕೇಂದ್ರ ಸರ್ಕಾರ, ಪರಿಶಿಷ್ಟ ಸಮುದಾಯ ಮತ್ತು ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಅನುದಾನವನ್ನು ಖಡಿತ ಮಾಡಿ, ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮೂಲ ಸೌಕರ್ಯ ಅನ್ವೇಷಣೆ ಹಾಗೂ ಅಭಿವೃದ್ಧಿಗೆ ಆಯ-ವ್ಯಯ ಪೂರಕವಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಹಾಗೂ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಆಯ-ವ್ಯಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ದೇಶದ ಉತ್ಪಾದನೆ ಹಾಗೂ ಬೆಳವಣಿಗೆಯ ಪ್ರಮಾಣದಲ್ಲಿ ಕೃಷಿ, ಉದ್ಯೋಗ, ಕೌಶಲ್ಯಾಭಿವೃದ್ಧಿ ಜೊತೆಗೆ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗಿದೆ ಎಂದು ಅವರು ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending