Connect with us

ರಾಜಕೀಯ

ಸಿದ್ದರಾಮೋತ್ಸವ ; ಇದು ಗೂಗ್ಲಿಯೂ ಹೌದು; ಮೊದಲ ಬಾಲಿಗೆ ಸಿಕ್ಸರೂ ಹೌದು..!

Published

on

  • ರಾಜಾರಾಂ ತಲ್ಲೂರು

ಒಂದು ಆಡಳಿತಪಕ್ಷ ದುರಾಡಳಿತದಲ್ಲಿ ತೊಡಗಿರುವಾಗ, ವಿರೋಧಪಕ್ಷ ಶಕ್ತಿಹೀನವಾಗುತ್ತಿದೆ ಎಂದು ಬಿಂಬಿತವಾಗುತ್ತಿರುವಾಗ ರಾಜ್ಯದ ಪ್ರಮುಖ ವಿರೋಧಪಕ್ಷ ಕಾಂಗ್ರೆಸ್ಸಿಗೆ ಇಂತಹದೊಂದು ಬೂಸ್ಟರ್ ಡೋಸ್ ಬೇಕಿತ್ತು. ಈಗ ಸಂಜೆಯ ಹೊತ್ತಿಗೆ ಕಾಂಗ್ರೆಸ್ಸಿಗರಲ್ಲಿ ಬೂಸ್ಟರ್ ಡೋಸ್ ಪಡೆದ ಭಾವ ಕಾರ್ಯಕರ್ತರ ನೆಲಮಟ್ಟದಲ್ಲೂ, ಸೋಷಿಯಲ್ ಮೀಡಿಯಾದ ಮುಗಿಲಿನಲ್ಲೂ ಕಾಣಿಸುತ್ತಿದೆ ಎಂಬ ಮಟ್ಟಿಗೆ ಈವತ್ತಿನ “ದಾವಣಗೆರೆ ಶೋಆಫ್” ಯಶಸ್ವಿ.

ಒಂದು ಕ್ಷಣ, ಈ ಸಿದ್ಧರಾಮೋತ್ಸವದ ರನ್‌ಅಪ್ ಕಡೆ ಹಿಂದಿರುಗಿ ನೋಡಿ

ಆಳುವವರ ಪರ ಇರುವ ರಾಜ್ಯದ ಬಹುತೇಕ ಮಾಧ್ಯಮಗಳು, ಇದು ಸಿದ್ಧರಾಮಯ್ಯ-ಡಿಕೆ ಶಿವಕುಮಾರ್ ನಡುವಿನ ಶೋಡೌನ್ ಎಂದೇ ಬಿಂಬಿಸಿದ್ದವು. ಕಾಂಗ್ರೆಸ್ಸಿನ ಒಡಕು ಈ ಸಮಾರಂಭದ ಮೂಲಕ ಹೊರಬೀಳಲಿದೆ ಎಂಬುದು ಅವರ ತುಂಬು ನಿರೀಕ್ಷೆ ಆಗಿತ್ತು. ಸಮಾರಂಭಕ್ಕೆ “ಐವತ್ತು ಕೋಟಿ ಖರ್ಚು ಮಾಡುವ ಸಮಾಜವಾದ” ಎಂಬ ಟೀಕೆಯಿಂದ ಹಿಡಿದು, ಸಿದ್ಧರಾಮಯ್ಯ ಸುಳ್ಳು ಜನ್ಮದಿನಾಂಕದೊಂದಿಗೆ ಹುಟ್ಟಿದ ಹಬ್ಬ ಆಚರಣೆಯ ತುರ್ತಿಗೆ ಬಿದ್ದಿದ್ದಾರೆ ಎಂಬಲ್ಲಿಯ ತನಕ “ಅಪ”ಪ್ರಚಾರ ನಡೆದಿತ್ತು. ಪ್ರಚಾರಕ್ಕಿಂತ ಅಪಪ್ರಚಾರದ ಅಬ್ಬರವೇ ಹೆಚ್ಚಿತ್ತು. ಇದರ ಪರಿಣಾಮವಾಗಿ ಈ ಸಮಾರಂಭದ ಹೆಸರು “ಸಿದ್ಧರಾಮೋತ್ಸವ” ಇರಬೇಕೇ ಬೇಡವೇ ಎಂಬ ಚರ್ಚೆ ಕೂಡ ಕಾಂಗ್ರೆಸ್ಸಿನೊಳಗೆ ನಡೆದ ಬಗ್ಗೆ ಸುದ್ದಿ ಆಗಿತ್ತು.

ಇಂತಹದೊಂದು “ಶೇಕೀ ರನ್ ಅಪ್” ಜೊತೆಗೇ ಆರಂಭಗೊಂಡ “ಸಿದ್ಧರಾಮಯ್ಯನವರ 75ನೇ ಹುಟ್ಟುಹಬ್ಬದ ತಯಾರಿ, ಇಂದು ಬೆಳಗ್ಗೆಯ ಹೊತ್ತಿಗೆ ಹದಿನೈದು ಕಿಲೋಮೀಟರ್ ಹಿಂದೆಯೇ ಜನಸಂದಣಿಯ ಕಾರಣಕ್ಕೆ ಟ್ರಾಫಿಕ್ ಜಾಮ್ ಎಂಬಂತಹ ಸುದ್ದಿಗಳ ಜೊತೆ ಅಂತಿಮ ಹಂತ ತಲುಪಿದ್ದು, ಕಾಂಗ್ರೆಸ್ಸಿಗರು ಈ ಸಮಾವೇಶವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದರು ಎಂಬುದಕ್ಕೆ ಸೂಚನೆ.

ಕಾಂಗ್ರೆಸ್ಸಿಗೆ ತಾನು ಮರೆತೇ ಹೋಗಿದ್ದ “ಸ್ವಸಾಮರ್ಥ್ಯ ಮರುಪರಿಚಯ”ಕ್ಕೆ ಇಂತಹದೊಂದು ಬೂಸ್ಟರ್ ಡೋಸ್ ಅಗತ್ಯ ಇತ್ತು. ಒಂದಿಡೀ ಟರ್ಮ್ ಆಡಳಿತ ನಡೆಸಿದ್ದ ಸಿದ್ಧರಾಮಯ್ಯ ಸರ್ಕಾರ ಎರಡನೇ ಟರ್ಮಿಗೆ 55-45ರ ಸಣ್ಣ ಅಂತರದಲ್ಲಿ ಸೋತರೂ ಬಾಹ್ಯ ಬೆಂಬಲದಿಂದ ಸರ್ಕಾರ ರಚಿಸಿದ್ದು, ಪ್ರಲೋಭನೆಯ ಪಕ್ಷಾಂತರಗಳಿಂದಾಗಿ ಅಧಿಕಾರ ಕಳೆದುಕೊಂಡದ್ದು… ಎಲ್ಲವನ್ನೂ ಕಾಂಗ್ರೆಸ್ ಕಾರ್ಯಕರ್ತರು ಮರೆತಂತೆ ಕಾಣುತ್ತಿತ್ತು.

ಯಾಕೆ ಈ ಮರೆವು ಉಂಟಾಗಿತ್ತೆಂದರೆ “ಡಬ್ಬಲ್ ಎಂಜಿನ್” ಭೋರ್ಗರೆತ ಅಷ್ಟು ಗಟ್ಟಿಯಾಗಿತ್ತು! ಜೊತೆಗೆ #ಡಿಯರ್_ಮೀಡಿಯಾ ಪ್ರತಿಪಕ್ಷವನ್ನೇ ಆಡಳಿತಪಕ್ಷವೆಂದು ಪರಿಗಣಿಸಿ ಪ್ರಹಾರ ನಿರತವಾಗಿತ್ತು. ಮೆದುಳಿಗೆ ಈ ಸತತ ಪ್ರಹಾರದ ಪರಿಣಾಮ ಮತ್ತು ಕೋವಿಡ್ ಮತ್ತಿತರ ಸಂಕಷ್ಟಗಳು ಕಾಂಗ್ರೆಸ್ ಕಾರ್ಯಕರ್ತರನ್ನು ವಿನಮನಸ್ಕಗೊಳಿಸಿದ್ದವು.

ತಳಮಟ್ಟದಲ್ಲಿ ಅವರ ಶಕ್ತಿ ಸಾಮರ್ಥ್ಯಗಳು ಅವರಿಗೇ ಮರೆತುಹೋಗಿದ್ದವು. ಇಂದಿನ ಸಮಾರಂಭ ಅದನ್ನು ಬಡಿದೆಚ್ಚರಿಸಿದೆ. ಇಂದು ಸಮಾರಂಭದ ವೇದಿಕೆಯಲ್ಲಿದ್ದ ನಾಯಕಗಢಣದ ಮಾತುಗಳು, ಅಭಿವ್ಯಕ್ತಿಗಳು ಈ “ಸಂತಸ”ವನ್ನು ಸಾರಿ ಸಾರಿ ಹೇಳುತ್ತಿದ್ದವು. ಅವರೆಲ್ಲರ ನಿರೀಕ್ಷೆ ಮೀರಿ ದಾವಣಗೆರೆಗೆ ಕಾಂಗ್ರೆಸ್ ಕಾರ್ಯಕರ್ತರು ಲಗ್ಗೆ ಇಟ್ಟಿದ್ದರು!

ಈ ಸಮಾರಂಭ ಏಕೆ ಗೂಗ್ಲಿ ಎಂದರೆ, ಸಿದ್ಧರಾಮಯ್ಯ ಅವರ “ಜನ್ಮದಿನ ಸಂಭ್ರಮ” ಎಂದೇ ಎಲ್ಲರೂ ಊಹಿಸಿಕೊಂಡಿದ್ದ ಈ ಕಾರ್ಯಕ್ರಮ, ಕಾಂಗ್ರೆಸ್ಸಿನ ಮಟ್ಟಿಗೆ ವಿಧಾನಸಭಾ ಚುನಾವಣೆಗಳಿಗೆ ತಯಾರಿಯ ಉದ್ಘಾಟನಾ ಸಮಾರಂಭ ಆಗಿ ಬದಲಾಗಿತ್ತು. ಆ ಮಟ್ಟಿಗೆ ಕಾರ್ಯಕ್ರಮದ ಆಯೋಜಕರು ಮತ್ತು ಸಿದ್ಧರಾಮಯ್ಯನವರ ಸೂಕ್ಷ್ಮಗ್ರಾಹಿತ್ವವನ್ನು ಮೆಚ್ಚಬೇಕು. ಆಡಳಿತಪಕ್ಷಕ್ಕೆ ಇದು ಅನಿರೀಕ್ಷಿತ. ಇಂತಹದೊಂದು ನಿರೀಕ್ಷೆ ಇದ್ದಿದ್ದರೆ, ಅವರದನ್ನು ಬೇರೆ ರೀತಿಯಲ್ಲಿ ನಿಭಾಯಿಸಲು ಅವಕಾಶಗಳಿದ್ದವು.

ಬೇರೆಲ್ಲ ವ್ಯವಸ್ಥೆ ಮಾಡಿಕೊಂಡು, ಸಿದ್ಧರಾಮಯ್ಯನವರನ್ನು ಕಟ್ಟಿ ಹಾಕುವುದು ಹೇಗೆ ಎಂಬ ಚಿಂತೆಯಲ್ಲಿದ್ದ ಆಡಳಿತ ಪಕ್ಷಕ್ಕೆ ಈವತ್ತು ದಾವಣಗೆರೆಯಲ್ಲಿ ಸೇರಿದ ಜನಸಾಗರ, ವೇದಿಕೆಯಲ್ಲಿದ್ದ ಕಾಂಗ್ರೆಸ್ ನಾಯಕರ ಮೂಡ್ ಹೊಸ ಚಿಂತೆಯ ಗೆರೆಗಳನ್ನು ಮೂಡಿಸಿದ್ದರೆ ಅಚ್ಚರಿ ಇಲ್ಲ. ತಳಮಟ್ಟದಲ್ಲಿ ಎಲ್ಲವೂ ಸರಿಯಾಗಿಲ್ಲ, ಜನಸಾಮಾನ್ಯರ ಪರಿಸ್ಥಿತಿ ತೀರಾ ಕೆಟ್ಟಿದ್ದು, ಕೇವಲ “ಮೋದಿ” ಹೆಸರು ಈ ಬಾರಿ ಮತ್ತೊಮ್ಮೆ ಓಟು ತಂದುಕೊಡದು ಎಂಬುದು ಅವರಿಗೂ ಅರಿವಿದೆ.

ಈವತ್ತು ಬೆಳಗ್ಗೆ ದಾವಣಗೆರೆಯಲ್ಲಿ ಒಮ್ಮೆ ಜನಸಾಗರವನ್ನು ನೋಡಿದ ಬಳಿಕ ಕಾಂಗ್ರೆಸ್ ನಾಯಕರೆಲ್ಲರೂ “ಸಿಕ್ಸರ್” ಬಾರಿಸುವ ಹುಮ್ಮಸ್ಸಿನಲ್ಲಿದ್ದರು. ಅವರ ಮಾತುಗಳಲ್ಲಿ ಅದು ಮತ್ತೆ ಮತ್ತೆ ವ್ಯಕ್ತವಾಯಿತು. ಡಿ ಕೆ ಶಿವಕುಮಾರ್, ಸಿದ್ಧರಾಮಯ್ಯ ಮತ್ತು ಅವರ ಸರ್ವೋಚ್ಛನಾಯಕ ರಾಹುಲ್ ಗಾಂಧಿ ಮೂವರೂ ಬಹಳ ಎಚ್ಚರಿಕೆಯಿಂದ ತಮ್ಮ ಮಾತುಗಳನ್ನು ಆಯ್ದುಕೊಳ್ಳುವ ಮೂಲಕ, “ಸಿದ್ಧರಾಮೋತ್ಸವ” ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 2023ರ ಚುನಾವಣಾ ಪ್ರಚಾರದ ಆರಂಭ ಎಂಬುದನ್ನು ಕಾರ್ಯಕರ್ತರಿಗೆ ತಲುಪಿಸಿದರು.

ಈ ಸಿಕ್ಸರ್ ಕೂಡ ಆಡಳಿತ ಪಕ್ಷಕ್ಕೆ ಅನಿರೀಕ್ಷಿತ

ಆಟ ಇಲ್ಲಿಗೇ ಮುಗಿಯುವುದಿಲ್ಲ. ಇದಿನ್ನೂ ಆರಂಭ ಮಾತ್ರ. ಆದರೆ ತಯಾರಿಯ ಕೊರತೆಯಿಂದ ಕಂಗೆಟ್ಟಿದ್ದ ಕಾಂಗ್ರೆಸ್ ಮಟ್ಟಿಗೆ ಇವತ್ತಿನದು ಭರ್ಜರಿ ಆರಂಭ ಎಂಬುದರಲ್ಲಿ ಸಂಶಯ ಇಲ್ಲ. ಕಾಂಗ್ರೆಸ್ಸಿಗರು ಈವತ್ತಿನದೇ ಕೊನೆಯ ಬಾಲ್, ಸಿಕ್ಸರ್ ಬಿದ್ದಿದೆ ಅಂದುಕೊಂಡು ತಣ್ಣಗೆ ಕುಳಿತರೆ ಮಾತ್ರ ಕೆಟ್ಟರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ನಡೆದ ಕೊಲೆಗಳೆಷ್ಟು ? ಅತ್ಯಾಚಾರಗಳೆಷ್ಟು ಗೊತ್ತಾ?

Published

on

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಹಾದಿ ಬೀದಿಯಲ್ಲಿ ಹತ್ಯೆಗಳು ಆಗುತ್ತಿವೆ. ಬೆಂಗಳೂರು ನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ.

ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ 430 ಹತ್ಯೆಗಳು ಮತ್ತು 198ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ರಾಜ್ಯಗೃಹ ಇಲಾಖೆ ಕಾರ್ಯನಿರ್ವಹಿಸುತ್ತಿದೆಯೋ ಅಥವಾ ನಿದ್ದೆ ಮಾಡುತ್ತಿದೆಯೋ ? ಎಂದು ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಪ್ರಶ್ನಿಸಿದೆ.ಇದೇ ವೇಳೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಅಪರಾಧ ಪ್ರಮಾಣ ಹೆಚ್ಚಳವಾಗಿರುವುದರಿಂದ ಕೂಡಲೇ ಈ ಬಗ್ಗೆ ಕ್ರಮವಹಿಸಬೇಕೆಂದು ಆಗ್ರಹಿಸಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಬಿಜೆಪಿ ನಿಯೋಗ ದೂರು ನೀಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ : ಗೃಹ ಸಚಿವ ಡಾ. ಜಿ.ಪರಮೇಶ್ವರ್

Published

on

ಸುದ್ದಿದಿನ, ತುಮಕೂರು : ರಾಜ್ಯದಲ್ಲಿ ಜನರು ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಯಾವುದೇ ಕ್ರಮ ತೆಗೆದುಕೊಳ್ಳಲು ಸಿದ್ಧ. ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಶಾಂತಿಯನ್ನು ಕದಡಲು ಎಷ್ಟು ಪ್ರಯತ್ನ ನಡೆಸಿದರೂ ಅದನ್ನು ನಿಯಂತ್ರಿಸುವ ಶಕ್ತಿ ನಮ್ಮ ಸರ್ಕಾರಕ್ಕಿದೆ ಎಂದು ತಿರುಗೇಟು ನೀಡಿದರು. ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚಳವಾಗುತ್ತಿರುವ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸಿ, ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಜಿ. ಪರಮೇಶ್ವರ್ ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿಧಾನ ಪರಿಷತ್ ಚುನಾವಣೆ ; 91 ನಾಮಪತ್ರಗಳು ಪುರಸ್ಕೃತ

Published

on

ಸುದ್ದಿದಿನ ಡೆಸ್ಕ್ : ಕರ್ನಾಟಕ ವಿಧಾನ ಪರಿಷತ್‌ನ ಚುನಾವಣೆಗೆ ಸಂಬಂಧಪಟ್ಟಂತೆ ಒಟ್ಟು 91ನಾಮಪತ್ರಗಳು ಪುರಸ್ಕೃತಗೊಂಡಿವೆ. ಈಶಾನ್ಯ ಪದವಿಧರ ಕ್ಷೇತ್ರಕ್ಕೆ ಒಟ್ಟು 26 ನಾಮಪತ್ರಗಳು ಪುರಸ್ಕೃತಗೊಂಡಿದೆ.

ಅದೇ ರೀತಿ ಕರ್ನಾಟಕದ ಆಗ್ನೇಯಾ ಶಿಕ್ಷಕರ ಕ್ಷೇತ್ರಕ್ಕೆ 15, ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ 16, ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ 9, ಕನಾಟಕ ನೈಋತ್ಯ ಪದವೀಧರ ಕ್ಷೇತ್ರಕ್ಕೆ12 ಹಾಗೂ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಒಟ್ಟು 13 ನಾಮಪತ್ರಗಳು ಪುರಸ್ಕೃತಗೊಂಡಿವೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending