Connect with us

ರಾಜಕೀಯ

ಸಿದ್ದರಾಮೋತ್ಸವ ; ಇದು ಗೂಗ್ಲಿಯೂ ಹೌದು; ಮೊದಲ ಬಾಲಿಗೆ ಸಿಕ್ಸರೂ ಹೌದು..!

Published

on

  • ರಾಜಾರಾಂ ತಲ್ಲೂರು

ಒಂದು ಆಡಳಿತಪಕ್ಷ ದುರಾಡಳಿತದಲ್ಲಿ ತೊಡಗಿರುವಾಗ, ವಿರೋಧಪಕ್ಷ ಶಕ್ತಿಹೀನವಾಗುತ್ತಿದೆ ಎಂದು ಬಿಂಬಿತವಾಗುತ್ತಿರುವಾಗ ರಾಜ್ಯದ ಪ್ರಮುಖ ವಿರೋಧಪಕ್ಷ ಕಾಂಗ್ರೆಸ್ಸಿಗೆ ಇಂತಹದೊಂದು ಬೂಸ್ಟರ್ ಡೋಸ್ ಬೇಕಿತ್ತು. ಈಗ ಸಂಜೆಯ ಹೊತ್ತಿಗೆ ಕಾಂಗ್ರೆಸ್ಸಿಗರಲ್ಲಿ ಬೂಸ್ಟರ್ ಡೋಸ್ ಪಡೆದ ಭಾವ ಕಾರ್ಯಕರ್ತರ ನೆಲಮಟ್ಟದಲ್ಲೂ, ಸೋಷಿಯಲ್ ಮೀಡಿಯಾದ ಮುಗಿಲಿನಲ್ಲೂ ಕಾಣಿಸುತ್ತಿದೆ ಎಂಬ ಮಟ್ಟಿಗೆ ಈವತ್ತಿನ “ದಾವಣಗೆರೆ ಶೋಆಫ್” ಯಶಸ್ವಿ.

ಒಂದು ಕ್ಷಣ, ಈ ಸಿದ್ಧರಾಮೋತ್ಸವದ ರನ್‌ಅಪ್ ಕಡೆ ಹಿಂದಿರುಗಿ ನೋಡಿ

ಆಳುವವರ ಪರ ಇರುವ ರಾಜ್ಯದ ಬಹುತೇಕ ಮಾಧ್ಯಮಗಳು, ಇದು ಸಿದ್ಧರಾಮಯ್ಯ-ಡಿಕೆ ಶಿವಕುಮಾರ್ ನಡುವಿನ ಶೋಡೌನ್ ಎಂದೇ ಬಿಂಬಿಸಿದ್ದವು. ಕಾಂಗ್ರೆಸ್ಸಿನ ಒಡಕು ಈ ಸಮಾರಂಭದ ಮೂಲಕ ಹೊರಬೀಳಲಿದೆ ಎಂಬುದು ಅವರ ತುಂಬು ನಿರೀಕ್ಷೆ ಆಗಿತ್ತು. ಸಮಾರಂಭಕ್ಕೆ “ಐವತ್ತು ಕೋಟಿ ಖರ್ಚು ಮಾಡುವ ಸಮಾಜವಾದ” ಎಂಬ ಟೀಕೆಯಿಂದ ಹಿಡಿದು, ಸಿದ್ಧರಾಮಯ್ಯ ಸುಳ್ಳು ಜನ್ಮದಿನಾಂಕದೊಂದಿಗೆ ಹುಟ್ಟಿದ ಹಬ್ಬ ಆಚರಣೆಯ ತುರ್ತಿಗೆ ಬಿದ್ದಿದ್ದಾರೆ ಎಂಬಲ್ಲಿಯ ತನಕ “ಅಪ”ಪ್ರಚಾರ ನಡೆದಿತ್ತು. ಪ್ರಚಾರಕ್ಕಿಂತ ಅಪಪ್ರಚಾರದ ಅಬ್ಬರವೇ ಹೆಚ್ಚಿತ್ತು. ಇದರ ಪರಿಣಾಮವಾಗಿ ಈ ಸಮಾರಂಭದ ಹೆಸರು “ಸಿದ್ಧರಾಮೋತ್ಸವ” ಇರಬೇಕೇ ಬೇಡವೇ ಎಂಬ ಚರ್ಚೆ ಕೂಡ ಕಾಂಗ್ರೆಸ್ಸಿನೊಳಗೆ ನಡೆದ ಬಗ್ಗೆ ಸುದ್ದಿ ಆಗಿತ್ತು.

ಇಂತಹದೊಂದು “ಶೇಕೀ ರನ್ ಅಪ್” ಜೊತೆಗೇ ಆರಂಭಗೊಂಡ “ಸಿದ್ಧರಾಮಯ್ಯನವರ 75ನೇ ಹುಟ್ಟುಹಬ್ಬದ ತಯಾರಿ, ಇಂದು ಬೆಳಗ್ಗೆಯ ಹೊತ್ತಿಗೆ ಹದಿನೈದು ಕಿಲೋಮೀಟರ್ ಹಿಂದೆಯೇ ಜನಸಂದಣಿಯ ಕಾರಣಕ್ಕೆ ಟ್ರಾಫಿಕ್ ಜಾಮ್ ಎಂಬಂತಹ ಸುದ್ದಿಗಳ ಜೊತೆ ಅಂತಿಮ ಹಂತ ತಲುಪಿದ್ದು, ಕಾಂಗ್ರೆಸ್ಸಿಗರು ಈ ಸಮಾವೇಶವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದರು ಎಂಬುದಕ್ಕೆ ಸೂಚನೆ.

ಕಾಂಗ್ರೆಸ್ಸಿಗೆ ತಾನು ಮರೆತೇ ಹೋಗಿದ್ದ “ಸ್ವಸಾಮರ್ಥ್ಯ ಮರುಪರಿಚಯ”ಕ್ಕೆ ಇಂತಹದೊಂದು ಬೂಸ್ಟರ್ ಡೋಸ್ ಅಗತ್ಯ ಇತ್ತು. ಒಂದಿಡೀ ಟರ್ಮ್ ಆಡಳಿತ ನಡೆಸಿದ್ದ ಸಿದ್ಧರಾಮಯ್ಯ ಸರ್ಕಾರ ಎರಡನೇ ಟರ್ಮಿಗೆ 55-45ರ ಸಣ್ಣ ಅಂತರದಲ್ಲಿ ಸೋತರೂ ಬಾಹ್ಯ ಬೆಂಬಲದಿಂದ ಸರ್ಕಾರ ರಚಿಸಿದ್ದು, ಪ್ರಲೋಭನೆಯ ಪಕ್ಷಾಂತರಗಳಿಂದಾಗಿ ಅಧಿಕಾರ ಕಳೆದುಕೊಂಡದ್ದು… ಎಲ್ಲವನ್ನೂ ಕಾಂಗ್ರೆಸ್ ಕಾರ್ಯಕರ್ತರು ಮರೆತಂತೆ ಕಾಣುತ್ತಿತ್ತು.

ಯಾಕೆ ಈ ಮರೆವು ಉಂಟಾಗಿತ್ತೆಂದರೆ “ಡಬ್ಬಲ್ ಎಂಜಿನ್” ಭೋರ್ಗರೆತ ಅಷ್ಟು ಗಟ್ಟಿಯಾಗಿತ್ತು! ಜೊತೆಗೆ #ಡಿಯರ್_ಮೀಡಿಯಾ ಪ್ರತಿಪಕ್ಷವನ್ನೇ ಆಡಳಿತಪಕ್ಷವೆಂದು ಪರಿಗಣಿಸಿ ಪ್ರಹಾರ ನಿರತವಾಗಿತ್ತು. ಮೆದುಳಿಗೆ ಈ ಸತತ ಪ್ರಹಾರದ ಪರಿಣಾಮ ಮತ್ತು ಕೋವಿಡ್ ಮತ್ತಿತರ ಸಂಕಷ್ಟಗಳು ಕಾಂಗ್ರೆಸ್ ಕಾರ್ಯಕರ್ತರನ್ನು ವಿನಮನಸ್ಕಗೊಳಿಸಿದ್ದವು.

ತಳಮಟ್ಟದಲ್ಲಿ ಅವರ ಶಕ್ತಿ ಸಾಮರ್ಥ್ಯಗಳು ಅವರಿಗೇ ಮರೆತುಹೋಗಿದ್ದವು. ಇಂದಿನ ಸಮಾರಂಭ ಅದನ್ನು ಬಡಿದೆಚ್ಚರಿಸಿದೆ. ಇಂದು ಸಮಾರಂಭದ ವೇದಿಕೆಯಲ್ಲಿದ್ದ ನಾಯಕಗಢಣದ ಮಾತುಗಳು, ಅಭಿವ್ಯಕ್ತಿಗಳು ಈ “ಸಂತಸ”ವನ್ನು ಸಾರಿ ಸಾರಿ ಹೇಳುತ್ತಿದ್ದವು. ಅವರೆಲ್ಲರ ನಿರೀಕ್ಷೆ ಮೀರಿ ದಾವಣಗೆರೆಗೆ ಕಾಂಗ್ರೆಸ್ ಕಾರ್ಯಕರ್ತರು ಲಗ್ಗೆ ಇಟ್ಟಿದ್ದರು!

ಈ ಸಮಾರಂಭ ಏಕೆ ಗೂಗ್ಲಿ ಎಂದರೆ, ಸಿದ್ಧರಾಮಯ್ಯ ಅವರ “ಜನ್ಮದಿನ ಸಂಭ್ರಮ” ಎಂದೇ ಎಲ್ಲರೂ ಊಹಿಸಿಕೊಂಡಿದ್ದ ಈ ಕಾರ್ಯಕ್ರಮ, ಕಾಂಗ್ರೆಸ್ಸಿನ ಮಟ್ಟಿಗೆ ವಿಧಾನಸಭಾ ಚುನಾವಣೆಗಳಿಗೆ ತಯಾರಿಯ ಉದ್ಘಾಟನಾ ಸಮಾರಂಭ ಆಗಿ ಬದಲಾಗಿತ್ತು. ಆ ಮಟ್ಟಿಗೆ ಕಾರ್ಯಕ್ರಮದ ಆಯೋಜಕರು ಮತ್ತು ಸಿದ್ಧರಾಮಯ್ಯನವರ ಸೂಕ್ಷ್ಮಗ್ರಾಹಿತ್ವವನ್ನು ಮೆಚ್ಚಬೇಕು. ಆಡಳಿತಪಕ್ಷಕ್ಕೆ ಇದು ಅನಿರೀಕ್ಷಿತ. ಇಂತಹದೊಂದು ನಿರೀಕ್ಷೆ ಇದ್ದಿದ್ದರೆ, ಅವರದನ್ನು ಬೇರೆ ರೀತಿಯಲ್ಲಿ ನಿಭಾಯಿಸಲು ಅವಕಾಶಗಳಿದ್ದವು.

ಬೇರೆಲ್ಲ ವ್ಯವಸ್ಥೆ ಮಾಡಿಕೊಂಡು, ಸಿದ್ಧರಾಮಯ್ಯನವರನ್ನು ಕಟ್ಟಿ ಹಾಕುವುದು ಹೇಗೆ ಎಂಬ ಚಿಂತೆಯಲ್ಲಿದ್ದ ಆಡಳಿತ ಪಕ್ಷಕ್ಕೆ ಈವತ್ತು ದಾವಣಗೆರೆಯಲ್ಲಿ ಸೇರಿದ ಜನಸಾಗರ, ವೇದಿಕೆಯಲ್ಲಿದ್ದ ಕಾಂಗ್ರೆಸ್ ನಾಯಕರ ಮೂಡ್ ಹೊಸ ಚಿಂತೆಯ ಗೆರೆಗಳನ್ನು ಮೂಡಿಸಿದ್ದರೆ ಅಚ್ಚರಿ ಇಲ್ಲ. ತಳಮಟ್ಟದಲ್ಲಿ ಎಲ್ಲವೂ ಸರಿಯಾಗಿಲ್ಲ, ಜನಸಾಮಾನ್ಯರ ಪರಿಸ್ಥಿತಿ ತೀರಾ ಕೆಟ್ಟಿದ್ದು, ಕೇವಲ “ಮೋದಿ” ಹೆಸರು ಈ ಬಾರಿ ಮತ್ತೊಮ್ಮೆ ಓಟು ತಂದುಕೊಡದು ಎಂಬುದು ಅವರಿಗೂ ಅರಿವಿದೆ.

ಈವತ್ತು ಬೆಳಗ್ಗೆ ದಾವಣಗೆರೆಯಲ್ಲಿ ಒಮ್ಮೆ ಜನಸಾಗರವನ್ನು ನೋಡಿದ ಬಳಿಕ ಕಾಂಗ್ರೆಸ್ ನಾಯಕರೆಲ್ಲರೂ “ಸಿಕ್ಸರ್” ಬಾರಿಸುವ ಹುಮ್ಮಸ್ಸಿನಲ್ಲಿದ್ದರು. ಅವರ ಮಾತುಗಳಲ್ಲಿ ಅದು ಮತ್ತೆ ಮತ್ತೆ ವ್ಯಕ್ತವಾಯಿತು. ಡಿ ಕೆ ಶಿವಕುಮಾರ್, ಸಿದ್ಧರಾಮಯ್ಯ ಮತ್ತು ಅವರ ಸರ್ವೋಚ್ಛನಾಯಕ ರಾಹುಲ್ ಗಾಂಧಿ ಮೂವರೂ ಬಹಳ ಎಚ್ಚರಿಕೆಯಿಂದ ತಮ್ಮ ಮಾತುಗಳನ್ನು ಆಯ್ದುಕೊಳ್ಳುವ ಮೂಲಕ, “ಸಿದ್ಧರಾಮೋತ್ಸವ” ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 2023ರ ಚುನಾವಣಾ ಪ್ರಚಾರದ ಆರಂಭ ಎಂಬುದನ್ನು ಕಾರ್ಯಕರ್ತರಿಗೆ ತಲುಪಿಸಿದರು.

ಈ ಸಿಕ್ಸರ್ ಕೂಡ ಆಡಳಿತ ಪಕ್ಷಕ್ಕೆ ಅನಿರೀಕ್ಷಿತ

ಆಟ ಇಲ್ಲಿಗೇ ಮುಗಿಯುವುದಿಲ್ಲ. ಇದಿನ್ನೂ ಆರಂಭ ಮಾತ್ರ. ಆದರೆ ತಯಾರಿಯ ಕೊರತೆಯಿಂದ ಕಂಗೆಟ್ಟಿದ್ದ ಕಾಂಗ್ರೆಸ್ ಮಟ್ಟಿಗೆ ಇವತ್ತಿನದು ಭರ್ಜರಿ ಆರಂಭ ಎಂಬುದರಲ್ಲಿ ಸಂಶಯ ಇಲ್ಲ. ಕಾಂಗ್ರೆಸ್ಸಿಗರು ಈವತ್ತಿನದೇ ಕೊನೆಯ ಬಾಲ್, ಸಿಕ್ಸರ್ ಬಿದ್ದಿದೆ ಅಂದುಕೊಂಡು ತಣ್ಣಗೆ ಕುಳಿತರೆ ಮಾತ್ರ ಕೆಟ್ಟರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ

Published

on

ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ನಿನ್ನೆ ಲಿಖಿತ ಉತ್ತರ ನೀಡಿದ್ದಾರೆ.

ದೇಶದಲ್ಲಿ ಒಟ್ಟು 15 ಸಾವಿರದ 300 ಮೆಗಾ ವ್ಯಾಟ್, ಸಾಮರ್ಥ್ಯದ 21 ಪರಮಾಣು ರಿಯಾಕ್ಟರ್‌ಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಭೂವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ಸ್ಥಾಪಿಸಲಾದ ಪರಮಾಣು ಶಕ್ತಿ ಸಾಮರ್ಥ್ಯವು 8 ಸಾವಿರ 180 ಮೆಗಾವ್ಯಾಟ್ ಆಗಿದ್ದು, 24 ಪರಮಾಣು ಶಕ್ತಿ ರಿಯಾಕ್ಟರ್‌ಗಳನ್ನು ಒಳಗೊಂಡಿದೆ.

ಪ್ರಸ್ತುತ ಸ್ಥಾಪಿಸಲಾದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 2031-32ರ ವೇಳೆಗೆ 22 ಸಾವಿರದ 480 ಮೆಗಾವ್ಯಾಟ್‌ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ
ಪರಮಾಣು ವಿದ್ಯುತ್ ಸ್ಥಾವರಗಳಿಂದ ವಾರ್ಷಿಕ ವಿದ್ಯುತ್ ಉತ್ಪಾದನೆಯು 2013-14 ರಲ್ಲಿ 34 ಸಾವಿರದ 228 ಮಿಲಿಯನ್ ಯುನಿಟ್‌ಗಳಿಂದ 2023-24 ರಲ್ಲಿ 47 ಸಾವಿರದ 971 ಮಿಲಿಯನ್ ಯುನಿಟ್‌ಗಳಿಗೆ ಏರಿಕೆಯಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಇಂದು ಕಾರ್ಗಿಲ್ ವಿಜಯ ದಿವಸ್ ; ಯೋಧರ ಸ್ಮರಣೆ

Published

on

ಸುದ್ದಿದಿನಡೆಸ್ಕ್:ಇಂದು ಕಾರ್ಗಿಲ್ ವಿಜಯ್ ದಿವಸ್. ಇದರ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಪಾಕಿಸ್ತಾನ ವಿರುದ್ಧದ ಕಾರ್ಗಿಲ್ ಯುದ್ಧದಲ್ಲಿ ಬಲಿದಾನಗೈದ ವೀರ ಯೋಧರಿಗೆ ಪ್ರಧಾನಿ ಗೌರವ ಸಮರ್ಪಣೆ ಮಾಡಲಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಶಿಂಕುನ್ ಲಾ ಸುರಂಗ ಮಾರ್ಗ ಯೋಜನೆಗೆ ವರ್ಚುವಲ್ ಮೂಲಕ ಚಾಲನೆ ನೀಡಲಿದ್ದಾರೆ.

ಈ ಯೋಜನೆಯಡಿ ನಿಮು-ಪದುಮ್-ಡಾರ್ಚಾ ರಸ್ತೆಯಿಂದ ಲೇಹ್‌ಗೆ ಎಲ್ಲಾ ಹವಾಮಾನಗಳಲ್ಲೂ ಸಂಪರ್ಕ ಕಲ್ಪಿಸಲು ಸುಮಾರು 15 ಸಾವಿರದ 800 ಅಡಿ ಎತ್ತರದಲ್ಲಿ 4.1 ಕಿಲೋಮೀಟರ್ ಉದ್ದದ ಜೋಡಿ ಸುರಂಗ ಮಾರ್ಗವನ್ನು ನಿರ್ಮಿಸಲಾಗುವುದು. ಈ ಕಾರ್ಯ ಪೂರ್ಣಗೊಂಡ ನಂತರ ವಿಶ್ವದಲ್ಲೇ ಇದು ಅತಿ ಎತ್ತರದ ಸುರಂಗ ಮಾರ್ಗವಾಗಲಿದೆ. ಸಶಸ್ತ್ರ ಪಡೆಗಳ ಸುಗಮ ಪ್ರಯಾಣಕ್ಕಷ್ಟೇ ಅಲ್ಲದೇ ಲಡಾಕ್‌ನಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೂ ಈ ಸುರಂಗ ಮಾರ್ಗವು ಸಹಕಾರಿಯಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೇಂದ್ರ ಬಜೆಟ್ : ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ

Published

on

ಸುದ್ದಿದಿನಡೆಸ್ಕ್:ಕೇಂದ್ರದ ಮುಂಗಡ ಪತ್ರ ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ತೆಲುಗು ದೇಶಂ ನಾಯಕ ಕೇಂದ್ರ ಸಚಿವ ಕಿಂಜರಪು ರಾಮಮೋಹನ ನಾಯ್ಡು ಹೇಳಿದ್ದಾರೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಬಜೆಟ್ ಎಲ್ಲರ ಕನಸಾಗಿದೆ ಎಂದು ಹೇಳಿದ್ದಾರೆ. ಈಶಾನ್ಯ ರಾಜ್ಯಗಳ ಬೆಳವಣಿಗೆಗೆ ಆಯ-ವ್ಯಯ ಪೂರಕವಾಗಿದೆ ಎಂದು ಹೇಳಿದರು.

ಬಿಜೆಪಿ ಹಿರಿಯ ನಾಯಕ ರವಿಶಂಕರ್ ಪ್ರಸಾದ್, ಉದ್ಯೋಗ ಹೆಚ್ಚಿಸುವ ಕಾರ್ಯಕ್ರಮವನ್ನು ಹಣಕಾಸು ಸಚಿವರು ಪ್ರಕಟಿಸಿರುವುದಾಗಿ ಹೇಳಿದ್ದಾರೆ. ಜೆಡಿಯು ಮುಖಂಡ ರಾಜೀವ್ ರಂಜನ್ ಸಿಂಗ್, ಆಯ-ವ್ಯಯ ಬಿಹಾರ ಜನತೆಗೆ ಹಾಗೂ ಪ್ರವಾಸೋದ್ಯಮಕ್ಕೆ ಒತ್ತು ನೀಡಿದೆ ಎಂದರು.

ಕಾಂಗ್ರೆಸ್ ಮುಖಂಡ ಶಶಿತರೂರ್ ಪ್ರತಿಕ್ರಿಯೆಸಿ, ಉದ್ಯೋಗ ಖಾತರಿ ಯೋಜನೆಯ ರಾಜ್ಯಗಳ ತಾರತಮ್ಯವನ್ನು ನಿಭಾಯಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಶಿವಸೇನಾ ನಾಯಕ ಪ್ರಿಯಾಂಕ ಚತುರ್ವೇದಿ, ಮಹಾರಾಷ್ಟ್ರ ರಾಜ್ಯಕ್ಕೆ ನಿರ್ಧಿಷ್ಟವಾದ ಯೋಜನೆಗಳನ್ನು ಪ್ರಕಟಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಡಿಎಂಕೆ ನಾಯಕ ಟಿ.ಆರ್.ಬಾಲು, ಟಿಎಂಸಿ ನಾಯಕಿ ಕಲ್ಯಾಣ ಬ್ಯಾನರ್ಜಿ ಅವರು, ಆಯ-ವ್ಯಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕದ ಸಂಸದರಾದ ಬಸವರಾಜ ಬೊಮ್ಮಾಯಿ, ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಜಗದೀಶ್ ಶೆಟ್ಟರ್, ಜನಪರ ಸಾಮಾನ್ಯವರ್ಗದವರ ಆಯ-ವ್ಯಯವಾಗಿದೆ ಎಂದರು. ಕೇಂದ್ರ ಸಚಿವರಾದ ಎಚ್.ಡಿ.ಕುಮಾರ್‌ಸ್ವಾಮಿ, ವಿ.ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಅವರುಗಳು ಆಯ-ವ್ಯಯವನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ. ಭಾರತೀಯ ಕೈಗಾರಿಕಾ ಒಕ್ಕೂಟದ ಅಧ್ಯಕ್ಷ ಅನಿಶ್ ಶಹಾ ಪ್ರತಿಕ್ರಿಯಿಸಿ, ದೇಶದ ಬೆಳವಣಿಗೆಗೆ ಪೂರಕ ಆಯ-ವ್ಯಯ ರೈತರು, ಯುವಕರು, ಮಹಿಳೆಯರಿಗೆ ಸಹಕಾರಿ ಎಂದು ಹೇಳಿದ್ದಾರೆ.

ಶಿಕ್ಷಣ, ಆರೋಗ್ಯ, ರಕ್ಷಣಾ ಕ್ಷೇತ್ರಗಳಿಗೆ ಅನುದಾನವನ್ನು ಗಣನೀಯವಾಗಿ ಖಡಿತ ಮಾಡಿದ್ದಾರೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಹಲವು ಯೋಜನೆಗಳ ಅನುಷ್ಠಾನಕ್ಕೆ ನೆರವು ಕೋರಿದ್ದೆವು. ಮಾಹಿತಿ ತಂತ್ರಜ್ಞಾನಕ್ಕೆ ನೀಡಿದ್ದ ಅನುದಾನವನ್ನು ಕಡಿಮೆ ಮಾಡಿರುವ ಕೇಂದ್ರ ಸರ್ಕಾರ, ಪರಿಶಿಷ್ಟ ಸಮುದಾಯ ಮತ್ತು ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಅನುದಾನವನ್ನು ಖಡಿತ ಮಾಡಿ, ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮೂಲ ಸೌಕರ್ಯ ಅನ್ವೇಷಣೆ ಹಾಗೂ ಅಭಿವೃದ್ಧಿಗೆ ಆಯ-ವ್ಯಯ ಪೂರಕವಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಹಾಗೂ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಆಯ-ವ್ಯಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ದೇಶದ ಉತ್ಪಾದನೆ ಹಾಗೂ ಬೆಳವಣಿಗೆಯ ಪ್ರಮಾಣದಲ್ಲಿ ಕೃಷಿ, ಉದ್ಯೋಗ, ಕೌಶಲ್ಯಾಭಿವೃದ್ಧಿ ಜೊತೆಗೆ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗಿದೆ ಎಂದು ಅವರು ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending