ರಾಜಕೀಯ
ಸಿದ್ದರಾಮೋತ್ಸವ ; ಇದು ಗೂಗ್ಲಿಯೂ ಹೌದು; ಮೊದಲ ಬಾಲಿಗೆ ಸಿಕ್ಸರೂ ಹೌದು..!
- ರಾಜಾರಾಂ ತಲ್ಲೂರು
ಒಂದು ಆಡಳಿತಪಕ್ಷ ದುರಾಡಳಿತದಲ್ಲಿ ತೊಡಗಿರುವಾಗ, ವಿರೋಧಪಕ್ಷ ಶಕ್ತಿಹೀನವಾಗುತ್ತಿದೆ ಎಂದು ಬಿಂಬಿತವಾಗುತ್ತಿರುವಾಗ ರಾಜ್ಯದ ಪ್ರಮುಖ ವಿರೋಧಪಕ್ಷ ಕಾಂಗ್ರೆಸ್ಸಿಗೆ ಇಂತಹದೊಂದು ಬೂಸ್ಟರ್ ಡೋಸ್ ಬೇಕಿತ್ತು. ಈಗ ಸಂಜೆಯ ಹೊತ್ತಿಗೆ ಕಾಂಗ್ರೆಸ್ಸಿಗರಲ್ಲಿ ಬೂಸ್ಟರ್ ಡೋಸ್ ಪಡೆದ ಭಾವ ಕಾರ್ಯಕರ್ತರ ನೆಲಮಟ್ಟದಲ್ಲೂ, ಸೋಷಿಯಲ್ ಮೀಡಿಯಾದ ಮುಗಿಲಿನಲ್ಲೂ ಕಾಣಿಸುತ್ತಿದೆ ಎಂಬ ಮಟ್ಟಿಗೆ ಈವತ್ತಿನ “ದಾವಣಗೆರೆ ಶೋಆಫ್” ಯಶಸ್ವಿ.
ಒಂದು ಕ್ಷಣ, ಈ ಸಿದ್ಧರಾಮೋತ್ಸವದ ರನ್ಅಪ್ ಕಡೆ ಹಿಂದಿರುಗಿ ನೋಡಿ
ಆಳುವವರ ಪರ ಇರುವ ರಾಜ್ಯದ ಬಹುತೇಕ ಮಾಧ್ಯಮಗಳು, ಇದು ಸಿದ್ಧರಾಮಯ್ಯ-ಡಿಕೆ ಶಿವಕುಮಾರ್ ನಡುವಿನ ಶೋಡೌನ್ ಎಂದೇ ಬಿಂಬಿಸಿದ್ದವು. ಕಾಂಗ್ರೆಸ್ಸಿನ ಒಡಕು ಈ ಸಮಾರಂಭದ ಮೂಲಕ ಹೊರಬೀಳಲಿದೆ ಎಂಬುದು ಅವರ ತುಂಬು ನಿರೀಕ್ಷೆ ಆಗಿತ್ತು. ಸಮಾರಂಭಕ್ಕೆ “ಐವತ್ತು ಕೋಟಿ ಖರ್ಚು ಮಾಡುವ ಸಮಾಜವಾದ” ಎಂಬ ಟೀಕೆಯಿಂದ ಹಿಡಿದು, ಸಿದ್ಧರಾಮಯ್ಯ ಸುಳ್ಳು ಜನ್ಮದಿನಾಂಕದೊಂದಿಗೆ ಹುಟ್ಟಿದ ಹಬ್ಬ ಆಚರಣೆಯ ತುರ್ತಿಗೆ ಬಿದ್ದಿದ್ದಾರೆ ಎಂಬಲ್ಲಿಯ ತನಕ “ಅಪ”ಪ್ರಚಾರ ನಡೆದಿತ್ತು. ಪ್ರಚಾರಕ್ಕಿಂತ ಅಪಪ್ರಚಾರದ ಅಬ್ಬರವೇ ಹೆಚ್ಚಿತ್ತು. ಇದರ ಪರಿಣಾಮವಾಗಿ ಈ ಸಮಾರಂಭದ ಹೆಸರು “ಸಿದ್ಧರಾಮೋತ್ಸವ” ಇರಬೇಕೇ ಬೇಡವೇ ಎಂಬ ಚರ್ಚೆ ಕೂಡ ಕಾಂಗ್ರೆಸ್ಸಿನೊಳಗೆ ನಡೆದ ಬಗ್ಗೆ ಸುದ್ದಿ ಆಗಿತ್ತು.
ಇಂತಹದೊಂದು “ಶೇಕೀ ರನ್ ಅಪ್” ಜೊತೆಗೇ ಆರಂಭಗೊಂಡ “ಸಿದ್ಧರಾಮಯ್ಯನವರ 75ನೇ ಹುಟ್ಟುಹಬ್ಬದ ತಯಾರಿ, ಇಂದು ಬೆಳಗ್ಗೆಯ ಹೊತ್ತಿಗೆ ಹದಿನೈದು ಕಿಲೋಮೀಟರ್ ಹಿಂದೆಯೇ ಜನಸಂದಣಿಯ ಕಾರಣಕ್ಕೆ ಟ್ರಾಫಿಕ್ ಜಾಮ್ ಎಂಬಂತಹ ಸುದ್ದಿಗಳ ಜೊತೆ ಅಂತಿಮ ಹಂತ ತಲುಪಿದ್ದು, ಕಾಂಗ್ರೆಸ್ಸಿಗರು ಈ ಸಮಾವೇಶವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದರು ಎಂಬುದಕ್ಕೆ ಸೂಚನೆ.
ಕಾಂಗ್ರೆಸ್ಸಿಗೆ ತಾನು ಮರೆತೇ ಹೋಗಿದ್ದ “ಸ್ವಸಾಮರ್ಥ್ಯ ಮರುಪರಿಚಯ”ಕ್ಕೆ ಇಂತಹದೊಂದು ಬೂಸ್ಟರ್ ಡೋಸ್ ಅಗತ್ಯ ಇತ್ತು. ಒಂದಿಡೀ ಟರ್ಮ್ ಆಡಳಿತ ನಡೆಸಿದ್ದ ಸಿದ್ಧರಾಮಯ್ಯ ಸರ್ಕಾರ ಎರಡನೇ ಟರ್ಮಿಗೆ 55-45ರ ಸಣ್ಣ ಅಂತರದಲ್ಲಿ ಸೋತರೂ ಬಾಹ್ಯ ಬೆಂಬಲದಿಂದ ಸರ್ಕಾರ ರಚಿಸಿದ್ದು, ಪ್ರಲೋಭನೆಯ ಪಕ್ಷಾಂತರಗಳಿಂದಾಗಿ ಅಧಿಕಾರ ಕಳೆದುಕೊಂಡದ್ದು… ಎಲ್ಲವನ್ನೂ ಕಾಂಗ್ರೆಸ್ ಕಾರ್ಯಕರ್ತರು ಮರೆತಂತೆ ಕಾಣುತ್ತಿತ್ತು.
ಯಾಕೆ ಈ ಮರೆವು ಉಂಟಾಗಿತ್ತೆಂದರೆ “ಡಬ್ಬಲ್ ಎಂಜಿನ್” ಭೋರ್ಗರೆತ ಅಷ್ಟು ಗಟ್ಟಿಯಾಗಿತ್ತು! ಜೊತೆಗೆ #ಡಿಯರ್_ಮೀಡಿಯಾ ಪ್ರತಿಪಕ್ಷವನ್ನೇ ಆಡಳಿತಪಕ್ಷವೆಂದು ಪರಿಗಣಿಸಿ ಪ್ರಹಾರ ನಿರತವಾಗಿತ್ತು. ಮೆದುಳಿಗೆ ಈ ಸತತ ಪ್ರಹಾರದ ಪರಿಣಾಮ ಮತ್ತು ಕೋವಿಡ್ ಮತ್ತಿತರ ಸಂಕಷ್ಟಗಳು ಕಾಂಗ್ರೆಸ್ ಕಾರ್ಯಕರ್ತರನ್ನು ವಿನಮನಸ್ಕಗೊಳಿಸಿದ್ದವು.
ತಳಮಟ್ಟದಲ್ಲಿ ಅವರ ಶಕ್ತಿ ಸಾಮರ್ಥ್ಯಗಳು ಅವರಿಗೇ ಮರೆತುಹೋಗಿದ್ದವು. ಇಂದಿನ ಸಮಾರಂಭ ಅದನ್ನು ಬಡಿದೆಚ್ಚರಿಸಿದೆ. ಇಂದು ಸಮಾರಂಭದ ವೇದಿಕೆಯಲ್ಲಿದ್ದ ನಾಯಕಗಢಣದ ಮಾತುಗಳು, ಅಭಿವ್ಯಕ್ತಿಗಳು ಈ “ಸಂತಸ”ವನ್ನು ಸಾರಿ ಸಾರಿ ಹೇಳುತ್ತಿದ್ದವು. ಅವರೆಲ್ಲರ ನಿರೀಕ್ಷೆ ಮೀರಿ ದಾವಣಗೆರೆಗೆ ಕಾಂಗ್ರೆಸ್ ಕಾರ್ಯಕರ್ತರು ಲಗ್ಗೆ ಇಟ್ಟಿದ್ದರು!
ಈ ಸಮಾರಂಭ ಏಕೆ ಗೂಗ್ಲಿ ಎಂದರೆ, ಸಿದ್ಧರಾಮಯ್ಯ ಅವರ “ಜನ್ಮದಿನ ಸಂಭ್ರಮ” ಎಂದೇ ಎಲ್ಲರೂ ಊಹಿಸಿಕೊಂಡಿದ್ದ ಈ ಕಾರ್ಯಕ್ರಮ, ಕಾಂಗ್ರೆಸ್ಸಿನ ಮಟ್ಟಿಗೆ ವಿಧಾನಸಭಾ ಚುನಾವಣೆಗಳಿಗೆ ತಯಾರಿಯ ಉದ್ಘಾಟನಾ ಸಮಾರಂಭ ಆಗಿ ಬದಲಾಗಿತ್ತು. ಆ ಮಟ್ಟಿಗೆ ಕಾರ್ಯಕ್ರಮದ ಆಯೋಜಕರು ಮತ್ತು ಸಿದ್ಧರಾಮಯ್ಯನವರ ಸೂಕ್ಷ್ಮಗ್ರಾಹಿತ್ವವನ್ನು ಮೆಚ್ಚಬೇಕು. ಆಡಳಿತಪಕ್ಷಕ್ಕೆ ಇದು ಅನಿರೀಕ್ಷಿತ. ಇಂತಹದೊಂದು ನಿರೀಕ್ಷೆ ಇದ್ದಿದ್ದರೆ, ಅವರದನ್ನು ಬೇರೆ ರೀತಿಯಲ್ಲಿ ನಿಭಾಯಿಸಲು ಅವಕಾಶಗಳಿದ್ದವು.
ಬೇರೆಲ್ಲ ವ್ಯವಸ್ಥೆ ಮಾಡಿಕೊಂಡು, ಸಿದ್ಧರಾಮಯ್ಯನವರನ್ನು ಕಟ್ಟಿ ಹಾಕುವುದು ಹೇಗೆ ಎಂಬ ಚಿಂತೆಯಲ್ಲಿದ್ದ ಆಡಳಿತ ಪಕ್ಷಕ್ಕೆ ಈವತ್ತು ದಾವಣಗೆರೆಯಲ್ಲಿ ಸೇರಿದ ಜನಸಾಗರ, ವೇದಿಕೆಯಲ್ಲಿದ್ದ ಕಾಂಗ್ರೆಸ್ ನಾಯಕರ ಮೂಡ್ ಹೊಸ ಚಿಂತೆಯ ಗೆರೆಗಳನ್ನು ಮೂಡಿಸಿದ್ದರೆ ಅಚ್ಚರಿ ಇಲ್ಲ. ತಳಮಟ್ಟದಲ್ಲಿ ಎಲ್ಲವೂ ಸರಿಯಾಗಿಲ್ಲ, ಜನಸಾಮಾನ್ಯರ ಪರಿಸ್ಥಿತಿ ತೀರಾ ಕೆಟ್ಟಿದ್ದು, ಕೇವಲ “ಮೋದಿ” ಹೆಸರು ಈ ಬಾರಿ ಮತ್ತೊಮ್ಮೆ ಓಟು ತಂದುಕೊಡದು ಎಂಬುದು ಅವರಿಗೂ ಅರಿವಿದೆ.
ಈವತ್ತು ಬೆಳಗ್ಗೆ ದಾವಣಗೆರೆಯಲ್ಲಿ ಒಮ್ಮೆ ಜನಸಾಗರವನ್ನು ನೋಡಿದ ಬಳಿಕ ಕಾಂಗ್ರೆಸ್ ನಾಯಕರೆಲ್ಲರೂ “ಸಿಕ್ಸರ್” ಬಾರಿಸುವ ಹುಮ್ಮಸ್ಸಿನಲ್ಲಿದ್ದರು. ಅವರ ಮಾತುಗಳಲ್ಲಿ ಅದು ಮತ್ತೆ ಮತ್ತೆ ವ್ಯಕ್ತವಾಯಿತು. ಡಿ ಕೆ ಶಿವಕುಮಾರ್, ಸಿದ್ಧರಾಮಯ್ಯ ಮತ್ತು ಅವರ ಸರ್ವೋಚ್ಛನಾಯಕ ರಾಹುಲ್ ಗಾಂಧಿ ಮೂವರೂ ಬಹಳ ಎಚ್ಚರಿಕೆಯಿಂದ ತಮ್ಮ ಮಾತುಗಳನ್ನು ಆಯ್ದುಕೊಳ್ಳುವ ಮೂಲಕ, “ಸಿದ್ಧರಾಮೋತ್ಸವ” ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 2023ರ ಚುನಾವಣಾ ಪ್ರಚಾರದ ಆರಂಭ ಎಂಬುದನ್ನು ಕಾರ್ಯಕರ್ತರಿಗೆ ತಲುಪಿಸಿದರು.
ಈ ಸಿಕ್ಸರ್ ಕೂಡ ಆಡಳಿತ ಪಕ್ಷಕ್ಕೆ ಅನಿರೀಕ್ಷಿತ
ಆಟ ಇಲ್ಲಿಗೇ ಮುಗಿಯುವುದಿಲ್ಲ. ಇದಿನ್ನೂ ಆರಂಭ ಮಾತ್ರ. ಆದರೆ ತಯಾರಿಯ ಕೊರತೆಯಿಂದ ಕಂಗೆಟ್ಟಿದ್ದ ಕಾಂಗ್ರೆಸ್ ಮಟ್ಟಿಗೆ ಇವತ್ತಿನದು ಭರ್ಜರಿ ಆರಂಭ ಎಂಬುದರಲ್ಲಿ ಸಂಶಯ ಇಲ್ಲ. ಕಾಂಗ್ರೆಸ್ಸಿಗರು ಈವತ್ತಿನದೇ ಕೊನೆಯ ಬಾಲ್, ಸಿಕ್ಸರ್ ಬಿದ್ದಿದೆ ಅಂದುಕೊಂಡು ತಣ್ಣಗೆ ಕುಳಿತರೆ ಮಾತ್ರ ಕೆಟ್ಟರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮೆಗಾ ಉದ್ಯೋಗ ಮೇಳ ವಿದ್ಯಾಭ್ಯಾಸದೊಂದಿಗೆ ಕೌಶಲ್ಯತೆಗೂ ಆದ್ಯತೆ ನೀಡಿ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್
ಸುದ್ದಿದಿನ,ದಾವಣಗೆರೆ:ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯ ಶಿಕ್ಷಣಕ ಕಲಿಸಬೇಕು. ಯುವ ಜನತೆ ವಿದ್ಯಾರ್ಥಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಸೋಮವಾರ(ಫೆ.23) ರಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟಿçÃಯ ಗ್ರಾಮೀಣ ಜೀವನೋಪಾಯ ಅಭಿಯಾನ, ಮಹಾನಗರಪಾಲಿಕೆ, ಜಿಲ್ಲಾ ಕೌಶಲ್ಯಾ ಮಿಷನ್, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು
ಯುವನಿಧಿ ಯೋಜನೆಯಡಿ ರಾಜ್ಯದಲ್ಲಿ 3,62,000 ಅಭ್ಯರ್ಥಿಗಳು ನೋಂದಾಯಿಸಿಕೊAಡಿದ್ದು, ಜಿಲ್ಲೆಯಲ್ಲಿ 10,404 ಪದವಿಧರರು, 226 ಡಿಪ್ಲೋಮ ಆದವರು ಯುವನಿಧಿಯ ಸೌಲಭ್ಯ ಪಡೆಯುತ್ತಿದ್ದಾರೆ. ಇದರಲ್ಲಿ 2326 ಯುವಕ, ಯುವತಿಯರಿಗೆ ಬೇರೆ ಬೇರೆ ಉದ್ಯೋಗ ಮೇಳದಲ್ಲಿ ಉದ್ಯೋಗ ದೊರತಿದೆ. 2024-25ನೇ ಸಾಲಿನಲ್ಲಿ ಸುಮಾರು 33 ಕೋಟಿ, 22 ಲಕ್ಷ ಹಣ ಸಂದಾಯವಾಗಿದೆ. ರಾಜ್ಯದಲ್ಲಿ ಕೌಶಲ್ಯಾಭಿವೃದ್ದಿ ಯೋಜನೆಯಡಿ 17,715 ಅಭ್ಯರ್ಥಿಗಳಿಗೆ ತರಬೇತಿ ನೀಡಿದ್ದು, 2376 ಅಭ್ಯರ್ಥಿಗಳಿಗೆ ಉದ್ಯೋಗ ದೊರತಿದೆ.
ಜೊತೆಗೆ ಪದವಿ ಉತ್ತೀರ್ಣ ವಿದ್ಯಾರ್ಥಿಗಳು ಸಿವಿಲ್ ಸರ್ವಿಸಸ್ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ ನೀಡಲಾಗುತ್ತಿದೆ. ಒಟ್ಟಾರೆ ಯುವಜನತೆಗೆ ಐಎಎಸ್, ಕೆಎಎಸ್ ಈ ರೀತಿಯ ಉದ್ಯೋಗಾವಕಾಶಗಳು ಸಿಗುವಂತಾಗಲು ಎಸ್ಎಸ್ ಕೇರ್ ಟ್ರಸ್ಟ್ ನಿಂದ ತರಬೇತಿ ನೀಡಲಾಗುತ್ತಿದೆ.
ಯುವಕರು ಸ್ಕೂಲ್, ಕಾಲೇಜ್ಗೆ ಬಂದಾಗ ಅಲ್ಲಿರುವಂತಹ ವಿದ್ಯಾರ್ಥಿಗಳು ಸ್ಪೋರ್ಟ್ಸ್, ಕಲ್ಚರಲ್ ಆಕ್ಟಿವಿಟೀಸ್, ಜೊತೆಗೆ ಆನ್ಲೈನ್ ಕೋರ್ಸ್ಗಳಲ್ಲಿ ಭಾಗವಹಿಸಬೇಕು.
ಯಾವುದೇ ಕಂಪನಿಯ ಲಿಖಿತ ಪರೀಕ್ಷೆಗೆ ಹಾಜರಾದಾಗ ನಿಮ್ಮಲ್ಲಿ ಏನು ಲೋಪದೋಷ ಹೇಳಿದ್ರು, ಯಾವ ರೀತಿ ನೀವು ಮತ್ತೊಮ್ಮೆ ನಿಮ್ಮ ತಪ್ಪನ್ನು ಸರಿ ಮಾಡಿಕೊಳ್ಳಬಹುದು ಎನ್ನುವುದನ್ನು ಅರಿತು ಸಂದರ್ಶನ ಎದುರಿಸಬೇಕೆಂದರು.
ಉದ್ಯೋಗ ಮೇಳದಲ್ಲಿ ನೀಡಿದ ಪ್ರಮಾಣ ಪತ್ರ ಪಡೆದು ಆಯ್ಕೆಯಾದ ಕಂಪನಿಗೆ ವರದಿ ಮಾಡಿಕೊಳ್ಳಲು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಮಾತನಾಡಿ ಎಲ್ಲರಿಗೂ ಸರ್ಕಾರವೇ ಉದ್ಯೋಗ ನೀಡಲು ಆಗುವುದಿಲ್ಲ. ಜನರು ಸ್ವಯಂ ಬದುಕು ಕಟ್ಟಿಕೊಂಡು, ಉದ್ಯೋಗದಾತರಾಗಿ ಹೊರಹೊಮ್ಮಬೇಕು. ಶಿಕ್ಷಣ, ಜ್ಞಾನದ ಜೊತೆ ಕೌಶಲ್ಯತೆ ರೂಢಿಸಿಕೊಳ್ಳಬೇಕು. ಒಂದು ದೇಶದ ಪ್ರಗತಿ ಹಾಗೂ ಅಭಿವದ್ಧಿಗೆ ಯುವ ಶಕ್ತಿ ಪ್ರಮುಖವಾಗಿದ್ದು, ಉದ್ಯೋಗ ಮೇಳದಿಂದ ಯುವಕರಿಗೆ ಹೆಚ್ಚು ಲಾಭ ದೊರೆಯಲಿದೆ. ಇದರಿಂದ ಬದುಕು ಕಟ್ಟಿಕೊಂಡು ಯಶಸ್ಸು ಗಳಿಸಲು ಶ್ರಮಿಸಬೇಕು ಎಂದರು. ಯುವಕರು ದೇಶದ ಸಂಪತ್ತು. ಪ್ರತಿಯೊಬ್ಬರೂ ಯಾವುದಾದರೂ ಒಂದು ವೃತ್ತಿ ಮಾಡಬೇಕು. ಇದರಿಂದ ನಿಮ್ಮ ಭವಿಷ್ಯ ಉತ್ತಮವಾಗುತ್ತದೆ ಎಂದರು.
ಉದ್ಯೋಗದಾತ ಕಂಪನಿಗಳು ಕಾಲೇಜು ಆವರಣದಲ್ಲೇ ಮೇಳ ಆಯೋಜಿಸಿ, ಅಭ್ಯರ್ಥಿಗಳ ಸಂದರ್ಶನ ನಡೆಸಿ, ಅರ್ಹರಿಗೆ ಉದ್ಯೋಗ ನೀಡುತ್ತಿವೆ. ಇದು ವಿದ್ಯಾವಂತ ಬಡ ನಿರುದ್ಯೋಗಿಗಳಿಗೆ ಅನುಕೂಲವಾಗಿದೆ ಎಂದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಕರು ಕೇವಲ ಪದವಿ ಪಡೆದರೆ ಸಾಲದು, ತಾಂತ್ರಿಕ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಬದ್ಧತೆ, ಸಮಯಪ್ರಜ್ಞೆ ಮತ್ತು ಆತ್ಮವಿಶ್ವಾಸವಿದ್ದರೆ ಯಾವುದೇ ಉದ್ಯೋಗವನ್ನು ಪಡೆಯಬಹುದು ಎಂದು ಯುವಜನತೆಗೆ ಕರೆ ನೀಡಿದರು. ತರಬೇತಿಯು ಹೆಚ್ಚು ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡುವಲ್ಲಿ ಯಶಸ್ವಿಯಾಗಿವೆ ಎಂದು ಅವರು ತಿಳಿಸಿದರು.
ಮೋನಿಕಾ, ಚಂದನಾ, ಸಿಂಚನಾ, ಸುಶೀಲಾ, ವಿನೂತ, ಸಾನಿಯಾ, ಶರತ್, ಅಶ್ವಿನಿ ಇನ್ನೂ ಕೆಲವು ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಆದೇಶ ಪ್ರತಿಯನ್ನು ನೀಡಿದರು.
ಮೇಳದ ಪ್ರಮುಖ ಅಂಕಿ-ಅAಶಗಳು: ಭಾಗವಹಿಸಿದ ಕಂಪನಿಗಳು: 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು, 61 ವಿಶೇಷ ಚೇತನ ಅಭ್ಯರ್ಥಿಗಳು ಒಳಗೊಂಡು 1944 ಉದ್ಯೋಗಾಕಾಂಕ್ಷಿಗಳು, ಆಯ್ಕೆ ಹಂತ ತಲುಪಿದವರು: 421 ಅಭ್ಯರ್ಥಿಗಳು, ಸ್ಥಳದಲ್ಲೇ ನೇಮಕಾತಿ: 421 ಅಭ್ಯರ್ಥಿಗಳಿಗೆ ಅಂತಿಮ ನೇಮಕಾತಿ ಆದೇಶ ಪಡೆದಿರುತ್ತಾರೆ. ಹಾಗೂ 555 ಅಭ್ಯರ್ಥಿಗಳು ಶಾರ್ಟ್ ಲಿಸ್ಟ್ ಆಗಿ 2ನೇ ಹಂತದ ಸಂದರ್ಶನ ಅರ್ಹತೆ ಪಡೆದಿರುತ್ತಾರೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲ್ರಾವ್ ಪ್ರಾಸ್ತವಿಕ ನುಡಿಗಳಾನ್ನಾಡಿದರು.
ದೂಡಾ ಅಧ್ಯಕ್ಷರಾದ ದಿನೇಶ್.ಕೆ.ಶೆಟ್ಟಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಕೌಸರ್ ರೇಷ್ಮಾ, ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ಬಸವರಾಜ.ಟಿ.ಶಾಮನೂರು, ಉಪಾಧ್ಯಕ್ಷರಾದ ಮಂಜಣ್ಣ, ಪ್ರಾಂಶುಪಾಲರಾದ ಬಸವರಾಜ ತಹಶೀಲ್ದಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ, ಜಿ.ಪಂ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕಂದಾಯ ಹಕ್ಕು ಪತ್ರ ಮತ್ತು ಪಾವತಿ ಆಂದೋಲನ
ಸುದ್ದಿದಿನ,ದಾವಣಗೆರೆ:ಜಿಲ್ಲೆಯಲ್ಲಿ 298 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗಿದ್ದು, ಈಗಾಗಲೇ 12,000ಕ್ಕೂ ಹೆಚ್ಚು ಹಕ್ಕು ಪತ್ರಗಳನ್ನು ವಿತರಿಸಲಾಗಿದ್ದು, ಬಾಕಿ ಇರುವವರು ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.
ಗುರುವಾರ(ಫೆ.19) ರಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಅಲ್ಲದೆ, ಮೃತಪಟ್ಟ ರೈತರ ಹೆಸರಿರುವ ಪಹಣಿಗಳನ್ನು ವಾರಸುದಾರರ ಹೆಸರಿಗೆ ಸುಮಾರು 24000 ಪೌತಿ ಖಾತೆಗಳನ್ನು ಬದಲಾಯಿಸಲಾಗಿದ್ದು, ಪೌತಿ ಆಂದೋಲನವನ್ನು ಸಹ ಹಮ್ಮಿಕೊಳ್ಳಲಾಗಿದೆ. ಸರ್ಕಾರಿ ಜಮೀನು ಮಂಜೂರು ಆಗಿ ಪೋಡಿ ಆಗದೇ ಪ್ರತ್ಯೇಕ ಪಹಣಿ ಬರದೇ ಇರುವುದರಿಂದ ಅಂತಹವುಗಳನ್ನು ಗೈರು ವಿಲೇ ಕಡತವನ್ನು ಮಾಡಲಾಗಿದ್ದು, ಸುಮಾರು 4000 ಜನರಿಗೆ ಈ ಗೈರು ವಿಲೇ ಕಡತವನ್ನು ನೀಡಲಾಗಿದೆ. ರಾಜ್ಯದಲ್ಲಿ ನಮ್ಮ ಜಿಲ್ಲೆಯೂ 3ನೇ ಸ್ಥಾನವನ್ನು ಹೊಂದಲಾಗಿದೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ತಾಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣ | ಭದ್ರಾ ನಾಲೆ ನೀರು ನಿರ್ವಹಣೆ
ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ಸ್ಥಳ ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.
ಗುರುವಾರ(ಫೆ.19) ರಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಾಲೆಯ ಕೊನೆಯ ಭಾಗದ ರೈತರಿಗೆ ನೀರು ತಲುಪಿಸಲು ನಾಲೆಯುದ್ದಕ್ಕೂ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು, ಅನಧಿಕೃತವಾಗಿ ನೀರು ಎತ್ತುವವರ ಮೋಟಾರ್ಗಳನ್ನು ವಶಪಡಿಸಿಕೊಳ್ಳಲಾಗುವುದು.
ಪ್ರಿಪೇಯ್ಡ್ ಆಟೋಗಳನ್ನು ಚಾಲ್ತಿಗೊಳಿಸಿದ್ದು, ಇದಕ್ಕೆ ರೂ.38/-ಶುಲ್ಕ ನಿಗದಿಪಡಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಶೇಖರ್ ಹೆಚ್.ಟಿ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243


