ಲೈಫ್ ಸ್ಟೈಲ್
ಲಾಲ್ ಬಾಗ್ ಬಗ್ಗೆ ನಿಮಗೆ ಗೊತ್ತಿರದ ಅಚ್ಚರಿ ಸಂಗತಿಗಳು..!
ಲಾಲ್ಬಾಗ್ ಎಂದರೆ ಎಲ್ಲರಿಗೂ ನೆನಪಾಗುವುದು ಅಲ್ಲಿನ ಗಾಜಿನಮನೆ, ದೊಡ್ಡ ಗಡಿಯಾರ, ವಿಧವಿಧ ಹೂವಿನ ಗಿಡಗಳ ತೋಟ, ಹಳೆದಾದ ಮರಗಳು ಹಾಗೂ ಸುಂದರವಾದ ಕೆರೆ ಮತ್ತು ಸುತ್ತಮುತ್ತಲಿನ ಪರಿಸರ. ಇನ್ನೂ ಹೆಚ್ಚಾಗಿ ನೆನಪಾಗುವುದು, ಪ್ರತಿ ವರ್ಷ ಸ್ವಾತಂತ್ರೋತ್ಸವ ಹಾಗೂ ಗಣರಾಜ್ಯ ದಿನೋತ್ಸವದ ಸಂದರ್ಭಗಳಲ್ಲಿ ಏರ್ಪಡಿಸಲಾಗುವ ಫಲಪುಷ್ಪ ಪ್ರದರ್ಶನಗಳು.
ಈ ಬಾರಿಯ ಫಲಪುಷ್ಪ ಪ್ರದರ್ಶನದ ಬಗ್ಗೆ ತಿಳಿಯುವ ಮುನ್ನ ಲಾಲ್ಬಾಗ್ ಬಗ್ಗೆ ಸ್ವಲ್ಪ ತಿಳಿಯೋಣ.
ಲಾಲ್ಬಾಗ್, ಬೆಂಗಳೂರಿನ ಹೃದಯ ಭಾಗದಲ್ಲಿ ಇದೆ. 240 ಎಕರೆ ಪ್ರದೇಶದ ಲಾಲ್ಬಾಗ್ನಲ್ಲಿ ಸುಮಾರು 1,854 ಬಗೆಯ ಗಿಡಗಳು ಇವೆ. ಹೈದರಾಲಿಯು ಇದನ್ನು 1760 ರಲ್ಲಿ ನಿರ್ಮಿಸಲು ಸೂಚಿಸುತ್ತಾನೆ. ಆದರೆ, ಇದನ್ನು ಈತನ ಮಗ ಟಿಪ್ಪು ಸುಲ್ತಾನ್ ಕಾಲದಲ್ಲಿ ಪೂರ್ಣಗೊಳಿಸಲಾಯಿತು. ಈ ಉದ್ಯಾನವನ್ನು ಅಭಿವೃದ್ಧಿಪಡಿಸಲು, ಹಲವಾರು ದೇಶಗಳಿಂದ ಸಸ್ಯಗಳು ಮತ್ತು ಮರಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಇದನ್ನು ಮೊಘಲ್ ಉದ್ಯಾನಗಳ ಮಾದರಿಯಲ್ಲಿ ಈ ಉದ್ಯಾನವನ್ನು ನಿರ್ಮಿಸಲು ನಿರ್ಧರಿಸಿದ್ದರು. ತುಮಕೂರು ಜಿಲ್ಲೆಯ, ಶಿರಾ ತಾಲ್ಲೂಕಿನಲ್ಲಿರುವ ಮೊಘಲ್ ಉದ್ಯಾನವು ಲಾಲ್ಬಾಗ್ನ ವಿನ್ಯಾಸಕ್ಕೆ ಮೂಲವಾಗಿದೆ.
ಲಾಲ್ಬಾಗ್ಗೆ, ಲಾಲ್ಬಾಗ್ ಎಂದು ಹೆಸರು ಬರಲು ಮೂರು ಕಾರಣಗಳಿವೆ ಎಂದು ಹೇಳಲಾಗುತ್ತದೆ. ಮೊದಲನೆಯದಾಗಿ, ಇತಿಹಾಸಕಾರ ಮನ್ಸೂರ್ ಅಲಿ ಹೇಳುವ ಪ್ರಕಾರ, ಶ್ರೀರಂಗಪಟ್ಟಣದಲ್ಲಿ ಇರುವ ಲಾಲ್ಮಹಲ್ ಅರಮನೆಯ ಹತ್ತಿರ ಇರುವ ತೋಟ, ಇದೇ ಮಾದರಿಯಲ್ಲಿ ಇರುವುದು. ಎರಡನೆಯದು ಹೈದರಾಲಿಯ ತಾಯಿ ಲಾಲ್ಬಾಯಿ ಅವರ ಹೆಸರು ಎಂದೂ ಕೆಲವರು ಹೇಳುತ್ತಾರೆ. ಮೂರನೆಯದಾಗಿ, ಲಾಲ್ಬಾಗ್ನಲ್ಲಿ ಬೆಳೆದಂತಹ ಕೆಂಪು ಗುಲಾಬಿಗಳಿಂದ ಆ ಹೆಸರು ಬಂದಿತು ಎನ್ನುತ್ತಾರೆ.
ಲಾಲ್ ಬಾಗ್ನಲ್ಲಿ ಪ್ರಮುಖವಾಗಿ ನೋಡಬೇಕಾಗಿರುವುದು
• ಗಾಜಿನ ಮನೆ-ಇದನ್ನು ಲಂಡನ್ನಿನ ಕ್ರಿಸ್ಟಲ್ ಪಾಲೇಸ್ ಮಾದರಿಯಲ್ಲಿದೆ. ಇದಕ್ಕೆ ರಾಜಕುಮಾರ ಅಲ್ಬರ್ಟ್ ವಿಕ್ಟರ್ ಅವರು ನವಂಬರ್ 30, 1898 ರಂದು ಅಡಿಗಲ್ಲು ಹಾಕಿದರು. ನಂತರದ ಮೇಲ್ವಿಚಾರಕ ಜೇಮ್ಸ್ ಕ್ಯಾಮರಾನ್ ಇದನ್ನು ನಿರ್ಮಿಸಿದರು.
• ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ಪ್ರತಿಮೆ.
• ಭಾರತದ ಮೊದಲ ಹುಲ್ಲಿನ ಗಡಿಯಾರ.
• ನೂರಾರು ವರ್ಷ ಅಪರೂಪದ ಹಳೆಯ ಮರಗಳ ದೊಡ್ಡದಾದ ಸಂಗ್ರಹ.
• 20 ಮಿಲಿಯನ್ ವರ್ಷ ಹಳೆಯ ಕೋನಿಫೆರಸ್ ಮರದ ಪಳವಳಿಕೆ.
• ಪರ್ಷಿಯಾ, ಅಫ್ಘಾನಿಸ್ತಾನ ಮತ್ತು ಪ್ರಾನ್ಸ್ನ ಹಲವಾರು ಅಪರೂಪದ ಸಸ್ಯಗಳು.
• 3000 ವರ್ಷಕ್ಕೂ ಹಳೆಯದಾದ ಬೃಹದಾಕಾರದ ಬಂಡೆ.
• ಸುಂದರವಾದ ಕೆರೆ.
ಫಲಪುಷ್ಪ ಪ್ರದರ್ಶನ
ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನವನ್ನು 1912 ರಲ್ಲಿ ಜಿ.ಹೆಚ್. ಕೃಂಬಿಗಲ್ ರವರು ಪ್ರಥಮವಾಗಿ ಪ್ರಾರಂಭಿಸಿದರು. ಈ ಸಾಲಿನಲ್ಲಿ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನವು 208ನೇ ಪ್ರದರ್ಶನವಾಗಿದೆ.
ಈ ಬಾರಿ ಮುಖ್ಯವಾಗಿ ರಾಷ್ಟ್ರದ ಯೋಧರಿಗೆ ನಮನ ಸಲ್ಲಿಸಲು, ಭಾರತದ ಸಮಗ್ರ ರಕ್ಷಣಾ ವ್ಯವಸ್ಥೆಯನ್ನು 36 ಸದಸ್ಯರ ತಂಡ 9 ದಿನಗಳಲ್ಲಿ ಅನಾವರಣಗೊಳಿಸಿದೆ ಅಲ್ಲದೇ, ಕನ್ನಡ ಚಿತ್ರರಂಗಕ್ಕೆ 85 ವರ್ಷ ತುಂಬಿದ ಸವಿನೆನಪಿಗಾಗಿ ಗೌರವವನ್ನೂ ಸಹ ಸಲ್ಲಿಸಲಾಗಿದೆ.
ಗಾಜಿನ ಮನೆ ಪ್ರವೇಶಿಸುತ್ತಿದ್ದಂತೆಯೇ, ದೆಹಲಿಯ ಇಂಡಿಯಾ ಗೇಟ್ ಬಳಿಯಿರುವ ಯುದ್ಧ ಸ್ಮಾರಕ ‘ಅಮರ್ ಜವಾನ್ ಜ್ಯೋತಿ’ ಯ ಪ್ರತಿಕೃತಿಯನ್ನು ಇರಿಸಲಾಗಿದೆ. ಅದರ ಹಿಂಭಾಗದಲ್ಲಿ ಸಮುದ್ರ ಮಟ್ಟದಿಂದ 5753 ಮೀಟರ್ ಎತ್ತರದಲ್ಲಿರುವ ಸಿಯಾಚಿನ್ ಹಿಮಪರ್ವತವನ್ನು ಹೋಲುವ ಪ್ರತಿಕೃತಿಯನ್ನು ನಿರ್ಮಿಸಲಾಗಿದೆ.
ಆ ಪರ್ವತದ ಮುಂಭಾಗದಲ್ಲಿ, ಭೂ ಸೇನೆಯ ಯುದ್ಧ ಟ್ಯಾಂಕರ್, ವಾಯುಸೇನೆಯ ಯುದ್ಧ ವಿಮಾನ, ಹೆಲಿಕಾಪ್ಟರ್, ಫೈಟರ್ ಜೆಟ್ಗಳು, ನೌಕಾದಳದ ಸಮರ ನೌಕೆ, ದೇಶದ ಗಡಿ ರಕ್ಷಣಾ ಪಡೆಗೆ ಸಂಬಂಧಿಸಿದ ಮಾದರಿಗಳನ್ನು ಭತ್ತದ ಹುಲ್ಲು, ಥರ್ಮೋಕೋಲ್ ಮತ್ತು ಸಾವಿರಾರು ಹೂವುಗಳಿಂದ ಸಿಂಗರಿಸಲಾಗಿದೆ. ಹಾಗೆಯೇ ಸಿಯಾಚಿನ್ನಲ್ಲಿ ಸೇನೆಯ ಕಾರ್ಯಾಚರಣೆ ಬಗ್ಗೆ, ಕೊರೆಯುವ ಚಳಿಯಲ್ಲಿ ಸೈನಿಕರು ಕರ್ತವ್ಯ ನಿರತರಾಗಿರುವ ಬಗ್ಗೆ, ಹಿಮದಿಂದ ಕೂಡಿರುವ ಬೆಟ್ಟವನ್ನು ಸೈನಿಕರು ಹತ್ತುತ್ತಿರುವ ಮಾದರಿಗಳು ಎಲ್ಲರನ್ನೂ ಆಕರ್ಷಿಸುತ್ತಿದೆ.
ದೇಶ ಕಾಯುವ ಸಂದರ್ಭದಲ್ಲಿ, ಹಿಮದಡಿಯಲ್ಲಿ ಸಿಲುಕಿ ಮರಣ ಹೊಂದಿದ ವೀರ ಕನ್ನಡಿಗ, ಹನುಂತಪ್ಪ ಕೊಪ್ಪದ್ ರವರ ಧಾನ್ಯಗಳಿಂದ ರಚಿಸಲ್ಪಟ್ಟ ಭಾವಚಿತ್ರ ಹಾಗೂ ಅಕ್ಕಿಯಿಂದ ರಚಿಸಿರುವ ಭಾರತದ ತ್ರಿವರ್ಣ ಧ್ವಜವು ಎಲ್ಲರ ಕಣ್ಸೆಳೆಯುತ್ತದೆ. ಮುಂದುವರೆದು, ಶೌರ್ಯ ಚಕ್ರಗಳ ಬಗ್ಗೆ, ಸೈನಿಕರ ಸುಭಾಷಿತಗಳು ಹಾಗೂ ಇನ್ನಿತರೆ ಮಾಹಿತಿಗಳ ಫಲಕಗಳನ್ನೂ ಸಹ ಪ್ರದರ್ಶಿಸಲಾಗಿದೆ.
ಬೆಟ್ಟದ ಹಿಂಭಾಗದಲ್ಲಿ, ಕನ್ನಡ ಚಿತ್ರರಂಗಕ್ಕೆ 85 ವರ್ಷ ತುಂಬಿರುವುದರಿಂದ ಅದಕ್ಕೆ ಗೌರವ ಸಮರ್ಪಿಸಲು ಕೆಂಪು, ಬಿಳಿ, ಕೇಸರಿ ಗುಲಾಬಿಗಳನ್ನು ಹೆಚ್ಚಾಗಿ ಬಳಸಿ ಬೃಹತ್ ಗಾತ್ರದ ಕ್ಯಾಮರಾ, ಫಿಲ್ಮ್ರೋಲ್, ಕ್ಲಾಪ್ ಬೋರ್ಡ್ ಇನ್ನೂ ಮುಂತಾದುವುಗಳನ್ನು ನೋಡುಗರಿಗೆ ಆಕರ್ಷಿಸುವಂತೆ ನಿರ್ಮಿಸಲಾಗಿದೆ. ಚಿತ್ರೋದ್ಯಮದಲ್ಲಿ ತೆರೆಯ ಹಿಂದೆ ಕಾರ್ಯನಿರ್ವಹಿಸುವ ಎಲ್ಲಾ ತಂತ್ರಜ್ಞರಿಗೆ ನಮನ ಸಲ್ಲಿಸಲಾಗಿದೆ.
ಬೆಟ್ಟದ ಎಡಭಾಗದಲ್ಲಿ 12 ಅಡಿ ಎತ್ತರದ, 25 ಸಾವಿರ ಸೇವಂತಿಗೆ ಮತ್ತು ಕಾರ್ನೆಷಿಯ ಹೂವುಗಳನ್ನು ಬಳಸಿ ಬೃಹತ್ ಗಾತ್ರದ ಸಿಂಹದ ಪ್ರತಿಕೃತಿಯನ್ನು ನಿರ್ಮಿಸಲಾಗಿದೆ. ಈ ಸಿಂಹವು ಎಲ್ಲರಿಗೂ ಸೆಲ್ಫಿ ತೆಗೆದುಕೊಳ್ಳುವ ನೆಚ್ಚಿನ ತಾಣವಾಗಿದೆ. ಈ ಸಿಂಹದ ಹಿಂಭಾಗದಲ್ಲಿ ಊಟಿಯ ಫರ್ನ್ ಹಿಲ್ನ ಆರ್ಕಿಡ್ ಹೂವಿನ ಪರಿಮಳ ಹಾಗೂ ಸೌಂದರ್ಯ ಎಲ್ಲರ ಮನಸನ್ನು ಸೂರೆಗೊಳ್ಳುತ್ತದೆ.
ಗಾಜಿನ ಮನೆ ಒಳಗೆ ಸುತ್ತಲೂ ಬಾಲ್ಲ್ಮ್, ಸ್ಪೈದರ್ ಪ್ಲಾಂಟ್, ಆಂಟೋರಿಯನಂ, ಲಂಟಾನ್, ಅಸ್ಟರ್, ಕೆಲೆಂಡುಲಾ, ಸಾಲ್ವಿಯಾ, ಲಾಕ್ರ್ಸ್ಪರ್, ಡಯಾಂತನಿ, ಹೈಡ್ರಾಂಜಿಯಾ, ಜೆನಿಯಾ, ಚೆಂಡು ಹೂವು, ಹೀಗೆ ಹಲವು ಬಗೆಯ ಗಿಡಗಳು ಎಲ್ಲರ ಗಮನ ಸೆಳೆಯುತ್ತವೆ. ಹಿಮ್ಮೇಳದಲ್ಲಿ ಕೇಳುತ್ತಿದ್ದ, ಲಘು ಸಂಗೀತವು ಎಲ್ಲರ ಮನಸ್ಸಿಗೆ ಮೊದ ನೀಡುತ್ತದೆ.
ಗಾಜಿನ ಮನೆಯ ಸುತ್ತಲೂ 4 ವಿಭಾಗಗಳಲ್ಲಿ ಯುದ್ಧ ಟ್ಯಾಂಕರ್, ಕ್ಷಿಪಣಿ, ಸಮರ ನೌಕೆ, ಜೆಟ್ ಯುದ್ಧ ವಿಮಾನಗಳ ಮಾದರಿಯನ್ನು ಭತ್ತದ ಹುಲ್ಲಿನಿಂದ ಬೃಹದಾಕಾರವಾಗಿ ನಿರ್ಮಿಸಲಾಗಿದೆ.
ಗಾಜಿನ ಮನೆಯ ಹೊರಾಂಗಣದಲ್ಲಿ ಹೂವಿನಿಂದ ಮಾಡಿದ ಜಲಪಾತ, ನವಿಲು, ಹೃದಯಾಕಾರದ ಕಮಾನು, ಹೂವುಗಳ ತೂಗು ಗುಚ್ಛ ಕಣ್ಣಿಗೆ ಆನಂದವನ್ನು ನೀಡುತ್ತವೆ.
ಈ ಬಾರಿ ಇನ್ನೊಂದು ವಿಶೇಷವೆಂದರೆ ಲಾಲ್ಬಾಗ್ ಆವರಣದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧ ಮಾಡಲಾಗಿದೆ.
ಒಟ್ಟಾರೆ 2 ಕೋಟಿ ರೂ.ವೆಚ್ಚದಲ್ಲಿ, 1 ಲಕ್ಷ 20 ಸಾವಿರಕ್ಕೂ ಅಧಿಕ ಹೂಗಳನ್ನು ಬಳಸಿ ಗಾಜಿನ ಮನೆಯಲ್ಲಿ ಪುಷ್ಪ
ಪ್ರದರ್ಶನವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ.
ಈ ಪ್ರದರ್ಶನವು ಆಗಸ್ಟ್ 4 ರಂದು ಪ್ರಾರಂಭಗೊಂಡಿದ್ದು, ಆಗಸ್ಟ್ 15 ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದ್ದು, ಆಸಕ್ತರು ಒಮ್ಮೆ ಭೇಟಿ ನೀಡಿ ಆನಂದ ಹೊಂದಬಹುದಾಗಿದೆ.
-ಸೌಮ್ಯ ಅಶೋಕ್
ಬೆಂಗಳೂರು
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ರಿಲೀಸ್ಗೂ ಮುನ್ನ ಧರ್ಮಸ್ಥಳದತ್ತ ರಾಕಿಂಗ್ ಸ್ಟಾರ್ ಯಶ್; ‘ಟಾಕ್ಸಿಕ್’ ಗೆಲುವಿಗಾಗಿ ವಿಶೇಷ ಪೂಜೆ
ಚೆನ್ನೈ ಪ್ರೀ-ರಿಲೀಸ್ ಕಾರ್ಯಕ್ರಮದ ಬಳಿಕ ನೇರವಾಗಿ ಧರ್ಮಸ್ಥಳಕ್ಕೆ ಆಗಮಿಸಿದ ಯಶ್; ಕೆಜಿಎಫ್-2 ಬಳಿಕ ಮತ್ತೊಮ್ಮೆ ಹಳೆಯ ಸಂಪ್ರದಾಯ ಮುಂದುವರಿಕೆ
- ಟಾಕ್ಸಿಕ್ ರಿಲೀಸ್ಗೂ ಮುನ್ನ ಧರ್ಮಸ್ಥಳದಲ್ಲಿ ಯಶ್!
- ಮಂಜುನಾಥನ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ
ಸುದ್ದಿದಿನ,ಮಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಆಗಸ್ಟ್ 26ರಂದು ಚಿತ್ರ ತೆರೆಗೆ ಬರಲಿದ್ದು, ಬಿಡುಗಡೆಗೂ ಮುನ್ನ ಯಶ್ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ನಿನ್ನೆ ಚೆನ್ನೈನಲ್ಲಿ ನಡೆದ ‘ಟಾಕ್ಸಿಕ್’ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಶ್, ಕಾರ್ಯಕ್ರಮ ಮುಗಿದ ಬಳಿಕ ಧರ್ಮಸ್ಥಳದತ್ತ ಪ್ರಯಾಣ ಬೆಳೆಸಿದ್ದಾರೆ. ಇಂದು ಧರ್ಮಸ್ಥಳಕ್ಕೆ ಆಗಮಿಸಿದ ಅವರು, ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಚಿತ್ರದ ಯಶಸ್ಸಿಗಾಗಿ ಪ್ರಾರ್ಥಿಸಿದ್ದಾರೆ ಎನ್ನಲಾಗಿದೆ.
http://Visit : www.suddidina.com
ರಿಲೀಸ್ಗೂ ಮುನ್ನ ದೇವರ ದರ್ಶನದ ಸಂಪ್ರದಾಯ
ಸಿನಿಮಾ ಬಿಡುಗಡೆಗೂ ಮುನ್ನ ದೇವಸ್ಥಾನಗಳಿಗೆ ತೆರಳಿ ದೇವರ ಆಶೀರ್ವಾದ ಪಡೆಯುವುದು ಯಶ್ ಅವರಲ್ಲಿ ಹಿಂದಿನಿಂದಲೂ ಕಂಡುಬರುವ ಸಂಪ್ರದಾಯ. ‘ಕೆಜಿಎಫ್: ಚಾಪ್ಟರ್ 2’ ಬಿಡುಗಡೆಯ ಮುನ್ನವೂ ಯಶ್ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ಇದೀಗ ‘ಟಾಕ್ಸಿಕ್’ ಬಿಡುಗಡೆಗೂ ಮುನ್ನ ಧರ್ಮಸ್ಥಳಕ್ಕೆ ಭೇಟಿ ನೀಡುವ ಮೂಲಕ ತಮ್ಮ ಆ ಸಂಪ್ರದಾಯವನ್ನು ಮುಂದುವರಿಸಿದ್ದಾರೆ.
ಯಶ್ ಸೂರ್ಯ ದೇವಸ್ಥಾನಕ್ಕೂ ಭೇಟಿ ನೀಡಿ ಹರಕೆ ಸಲ್ಲಿಸಲಿದ್ದಾರೆ ಎಂಬ ಮಾಹಿತಿಯೂ ಇದೆ. ಹೀಗಾಗಿ ಸಿನಿಮಾ ಬಿಡುಗಡೆಗೂ ಮುನ್ನ ಯಶ್ ಅವರ ದೇವಸ್ಥಾನ ಭೇಟಿ ಅಭಿಮಾನಿಗಳ ಗಮನ ಸೆಳೆದಿದೆ.
ಟಾಕ್ಸಿಕ್ ಮೇಲೆ ಭಾರಿ ನಿರೀಕ್ಷೆ
ಗೀತು ಮೋಹನ್ದಾಸ್ ನಿರ್ದೇಶನದ ‘ಟಾಕ್ಸಿಕ್’ ಪ್ಯಾನ್ ಇಂಡಿಯಾ ಆಕ್ಷನ್ ಥ್ರಿಲ್ಲರ್ ಆಗಿದ್ದು, ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಏಕಕಾಲದಲ್ಲಿ ನಿರ್ಮಾಣಗೊಂಡಿದೆ. ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಿಗೂ ಚಿತ್ರ ಡಬ್ ಆಗಿದೆ.
ಯಶ್ ಪ್ರಮುಖ ಪಾತ್ರದಲ್ಲಿರುವ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಹಾಗೂ ನಯನತಾರಾ ಸೇರಿದಂತೆ ಬಹುಭಾಷಾ ತಾರೆಯರ ದೊಡ್ಡ ಬಳಗವೇ ಇದೆ. ಹೀಗಾಗಿ ಕನ್ನಡ ಮಾತ್ರವಲ್ಲದೆ ದಕ್ಷಿಣ ಹಾಗೂ ಉತ್ತರ ಭಾರತದ ಮಾರುಕಟ್ಟೆಗಳಲ್ಲೂ ಚಿತ್ರದ ಮೇಲೆ ಭಾರಿ ನಿರೀಕ್ಷೆ ಮೂಡಿದೆ.
ಬೆಂಗಳೂರಿನಲ್ಲಿ ಟಿಕೆಟ್ ದರಕ್ಕೆ ಶಾಕ್!
‘ಟಾಕ್ಸಿಕ್’ ಅಡ್ವಾನ್ಸ್ ಬುಕ್ಕಿಂಗ್ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬೆಂಗಳೂರಿನ ಕೆಲವು ಪ್ರೀಮಿಯಂ ಥಿಯೇಟರ್ಗಳಲ್ಲಿ ಟಿಕೆಟ್ ದರ ₹3,600ರ ಗಡಿ ತಲುಪಿರುವುದು ಗಮನ ಸೆಳೆದಿದೆ. ಕೆಲವು ಮಲ್ಟಿಪ್ಲೆಕ್ಸ್ಗಳಲ್ಲಿ ರೆಕ್ಲೈನರ್ ಟಿಕೆಟ್ಗಳು ₹700ರಿಂದ ₹1,600ರವರೆಗೆ ಲಭ್ಯವಿದ್ದರೆ, ಕೆಲವು ಪ್ರೀಮಿಯಂ ಸ್ಕ್ರೀನ್ಗಳಲ್ಲಿ ದರ ಇನ್ನಷ್ಟು ಹೆಚ್ಚಾಗಿದೆ.
ಸಾಕ್ನಿಲ್ಕ್ ವರದಿಯ ಪ್ರಕಾರ, ಅಡ್ವಾನ್ಸ್ ಬುಕ್ಕಿಂಗ್ ಆರಂಭವಾದ ಎರಡು ದಿನಗಳಲ್ಲಿ ‘ಟಾಕ್ಸಿಕ್’ ಸುಮಾರು ₹18.73 ಕೋಟಿ ಮುಂಗಡ ಬುಕ್ಕಿಂಗ್ ದಾಖಲಿಸಿದೆ ಎನ್ನಲಾಗಿದೆ. ಟಿಕೆಟ್ ದರ ಏರಿಕೆಯ ನಡುವೆಯೂ ಬುಕ್ಕಿಂಗ್ ವೇಗ ಕುಂದಿಲ್ಲ.
ರಿಲೀಸ್ಗೂ ಮುನ್ನ ಧರ್ಮಸ್ಥಳದತ್ತ ರಾಕಿಂಗ್ ಸ್ಟಾರ್ ಯಶ್; ‘ಟಾಕ್ಸಿಕ್’ ಗೆಲುವಿಗಾಗಿ ವಿಶೇಷ ಪೂಜೆ
ನಾಳೆ ತೆರೆಗೆ ‘ಟಾಕ್ಸಿಕ್’
ಯಶ್ ಮತ್ತು ಗೀತು ಮೋಹನ್ದಾಸ್ ಕಥೆ ಬರೆದಿರುವ ಈ ಚಿತ್ರವು ಭಿನ್ನ ಕಥಾಹಂದರ ಹಾಗೂ ಭರ್ಜರಿ ಆಕ್ಷನ್ ಮೂಲಕ ಪ್ರೇಕ್ಷಕರನ್ನು ಸೆಳೆಯುವ ನಿರೀಕ್ಷೆ ಮೂಡಿಸಿದೆ. ಈಗ ಧರ್ಮಸ್ಥಳದ ಸನ್ನಿಧಿಯಲ್ಲಿ ಯಶ್ ಪಡೆದ ಆಶೀರ್ವಾದದ ಬೆನ್ನಲ್ಲೇ, ನಾಳೆ ‘ಟಾಕ್ಸಿಕ್’ ಬಾಕ್ಸ್ ಆಫೀಸ್ನಲ್ಲಿ ಹೇಗೆ ಸದ್ದು ಮಾಡಲಿದೆ ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ದಿನದ ಸುದ್ದಿ
₹25 ಕೋಟಿ ಮೌಲ್ಯದ ಬಿಡಿಎ ಆಸ್ತಿ ವಶಕ್ಕೆ: ರಾಜಾಜಿನಗರ ಬಡಾವಣೆಯಲ್ಲಿ ಅನಧಿಕೃತ ನಿರ್ಮಾಣಕ್ಕೆ ಬಿತ್ತು ಬೀಗ
ರಾಜಾಜಿನಗರದಲ್ಲಿ ಬಿಡಿಎ ಭರ್ಜರಿ ಕಾರ್ಯಾಚರಣೆ: 13,000 ಚದರ ಅಡಿ ಜಾಗ ವಶಕ್ಕೆ
- 13,000 ಚದರ ಅಡಿ ಪ್ರದೇಶ ತೆರವು; ಪೊಲೀಸ್ ಭದ್ರತೆಯಲ್ಲಿ ಬಿಡಿಎ ಕಾರ್ಯಾಚರಣೆ
ನಿವೇಶನ 13 ಮತ್ತು 17ರಲ್ಲಿ ಅನಧಿಕೃತ ನಿರ್ಮಾಣ ತೆರವು; ಪೊಲೀಸ್ ಸಹಕಾರದಲ್ಲಿ ಕಾರ್ಯಾಚರಣೆ
ಸುದ್ದಿದಿನ,ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅನಧಿಕೃತ ನಿರ್ಮಾಣಗಳ ವಿರುದ್ಧದ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ರಾಜಾಜಿನಗರ ಬಡಾವಣೆಯ ಇಂಡಸ್ಟ್ರೀಯಲ್ ಸಬರ್ಬ್ 2ನೇ ಹಂತದಲ್ಲಿ ಮಹತ್ವದ ತೆರವು ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆಯಲ್ಲಿ ಸುಮಾರು ₹25 ಕೋಟಿ ಮೌಲ್ಯದ ಆಸ್ತಿಯನ್ನು ಪ್ರಾಧಿಕಾರ ತನ್ನ ಸುಪರ್ದಿಗೆ ಪಡೆದುಕೊಂಡಿದೆ.
ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ಪೀಣ್ಯ ಗ್ರಾಮದ ಸರ್ವೆ ನಂಬರ್ 79 ಮತ್ತು 70ರಲ್ಲಿ ಬರುವ ಇಂಡಸ್ಟ್ರೀಯಲ್ ಸಬರ್ಬ್, 2ನೇ ಹಂತ, ರಾಜಾಜಿನಗರ ಬಡಾವಣೆಯ ನಿವೇಶನ ಸಂಖ್ಯೆ 13 ಮತ್ತು 17ರಲ್ಲಿ ಈ ಕಾರ್ಯಾಚರಣೆ ನಡೆದಿದೆ. ಸುಮಾರು 13,000 ಚದರ ಅಡಿ ವಿಸ್ತೀರ್ಣದ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಅನಧಿಕೃತ ಕಟ್ಟಡ ಹಾಗೂ ನಿರ್ಮಾಣಗಳನ್ನು ತೆರವುಗೊಳಿಸಿ, ಜಾಗವನ್ನು ಬಿಡಿಎ ವಶಕ್ಕೆ ಪಡೆದುಕೊಂಡಿದೆ.
http://Visit : www.suddidina.com
ಅನಧಿಕೃತ ನಿರ್ಮಾಣಕ್ಕೆ ಬಿಡಿಎ ಬ್ರೇಕ್:
ಬಿಡಿಎಗೆ ಸೇರಿದ ಅಥವಾ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಜಾಗಗಳಲ್ಲಿ ನಿಯಮಬಾಹಿರವಾಗಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳುವ ಭಾಗವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ. ತೆರವು ಕಾರ್ಯಾಚರಣೆಯ ಬಳಿಕ ಆಸ್ತಿಯನ್ನು ಪ್ರಾಧಿಕಾರದ ನೇರ ಸುಪರ್ದಿಗೆ ತೆಗೆದುಕೊಳ್ಳಲಾಗಿದ್ದು, ಸಾರ್ವಜನಿಕ ಹಾಗೂ ಸರ್ಕಾರಿ ಆಸ್ತಿಗಳ ಸಂರಕ್ಷಣೆಗೆ ಬಿಡಿಎ ಕೈಗೊಳ್ಳುತ್ತಿರುವ ಕ್ರಮಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ.
ಸುಮಾರು ₹25 ಕೋಟಿ ಮೌಲ್ಯದ ಆಸ್ತಿ ಇರುವುದರಿಂದ, ಈ ಕಾರ್ಯಾಚರಣೆ ನಗರದ ಆಸ್ತಿ ಸಂರಕ್ಷಣೆ ಹಾಗೂ ಅನಧಿಕೃತ ನಿರ್ಮಾಣಗಳ ನಿಯಂತ್ರಣದ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ. ದೊಡ್ಡ ಪ್ರಮಾಣದ ಭೂಮಿಯಲ್ಲಿ ನಿಯಮ ಉಲ್ಲಂಘಿಸಿ ನಿರ್ಮಾಣ ನಡೆಸಿದರೆ ಯಾವುದೇ ಕಾರಣಕ್ಕೂ ಅದನ್ನು ಮುಂದುವರಿಸಲು ಅವಕಾಶ ನೀಡುವುದಿಲ್ಲ ಎಂಬ ಸಂದೇಶವನ್ನು ಈ ಕ್ರಮ ನೀಡಿದೆ.
https://x.com/BDAOfficialGok/status/2092121239175512436?s=20
ಬಹು ಇಲಾಖೆಗಳ ಸಮನ್ವಯದಲ್ಲಿ ಕಾರ್ಯಾಚರಣೆ:
ತೆರವು ಕಾರ್ಯಾಚರಣೆಯನ್ನು ಬಿಡಿಎಯ ವಲಯ ಆಯುಕ್ತರು, ಆರಕ್ಷಕ ಅಧೀಕ್ಷಕರು, ಅಭಿಯಂತರ ಅಧಿಕಾರಿ-1, ಕಾರ್ಯನಿರತ ಆರಕ್ಷಕ ಪಡೆ, ಪಶ್ಚಿಮ ವಿಭಾಗದ ಅಭಿಯಂತರರು ಹಾಗೂ ಸರ್ವೆಯರ್ಗಳು ಒಳಗೊಂಡ ತಂಡ ಕೈಗೊಂಡಿತು. ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಗಿದ್ದು, ಯಾವುದೇ ಅಡಚಣೆ ಉಂಟಾಗದಂತೆ ಅಗತ್ಯ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.
ಸ್ಥಳ ಪರಿಶೀಲನೆ, ನಿರ್ಮಾಣ ತೆರವು ಹಾಗೂ ಜಾಗದ ಸ್ವಾಧೀನ ಪ್ರಕ್ರಿಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಸಮನ್ವಯದಿಂದ ಪೂರ್ಣಗೊಳಿಸಿದರು. ಕಾರ್ಯಾಚರಣೆ ಬಳಿಕ ತೆರವುಗೊಳಿಸಲಾದ ಪ್ರದೇಶವನ್ನು ಬಿಡಿಎ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ.
ನಗರದ ಭೂ ಸಂಪತ್ತಿನ ರಕ್ಷಣೆಗೆ ಕಠಿಣ ಹೆಜ್ಜೆ
ಬೆಂಗಳೂರು ವೇಗವಾಗಿ ವಿಸ್ತರಿಸುತ್ತಿರುವ ಸಂದರ್ಭದಲ್ಲಿ ಸರ್ಕಾರಿ ಹಾಗೂ ಪ್ರಾಧಿಕಾರಕ್ಕೆ ಸೇರಿದ ಜಾಗಗಳ ಮೇಲೆ ಅಕ್ರಮ ನಿರ್ಮಾಣಗಳು ನಡೆಯದಂತೆ ನಿಗಾ ವಹಿಸುವುದು ಪ್ರಮುಖ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಬಿಡಿಎ ಕೈಗೊಂಡಿರುವ ₹25 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಳ್ಳುವ ಕ್ರಮ, ಅನಧಿಕೃತ ನಿರ್ಮಾಣಗಳ ವಿರುದ್ಧದ ಕಾರ್ಯಾಚರಣೆಗೆ ಮತ್ತಷ್ಟು ಬಲ ನೀಡಿದೆ.
ಬೆಂಗಳೂರು ನಗರದ ಭೂ ಸಂಪತ್ತನ್ನು ಕಾಪಾಡುವ ನಿಟ್ಟಿನಲ್ಲಿ ಬಿಡಿಎಯ ಈ ತೆರವು ಕಾರ್ಯಾಚರಣೆ, ನಿಯಮ ಉಲ್ಲಂಘಿಸುವವರಿಗೆ ಎಚ್ಚರಿಕೆಯ ಸಂದೇಶವಾಗಿದ್ದು, ಮುಂದಿನ ದಿನಗಳಲ್ಲೂ ಇಂತಹ ಕಾರ್ಯಾಚರಣೆಗಳು ಮುಂದುವರಿಯುವ ಸಾಧ್ಯತೆ ಇದೆ.

ದಿನದ ಸುದ್ದಿ
ಸರ್ವರ್ ಡೌನ್, ಅಧಿಕಾರಿಗಳ ವಿಳಂಬ: ‘ಎ-ಖಾತೆ’ಗಾಗಿ ಕಾದು ಕುಳಿತ 60 ಸಾವಿರಕ್ಕೂ ಹೆಚ್ಚು ಅರ್ಜಿದಾರರು!
‘ನನ್ನ ಖಾತಾ ನನ್ನ ಹಕ್ಕು’ ಮುಗಿದರೂ ಸಂಕಷ್ಟ ಮುಗಿಯಲಿಲ್ಲ: 7.50 ಲಕ್ಷ ಆಸ್ತಿಗಳಲ್ಲಿ ಎ-ಖಾತೆ ಸಿಕ್ಕಿದ್ದು 20 ಸಾವಿರಕ್ಕೆ ಮಾತ್ರ!
- ಗಡುವು ಮುಕ್ತಾಯ, ಇನ್ನು ಬಿ-ಖಾತೆಯಿಂದ ಎ-ಖಾತೆಗೆ 100% ಶುಲ್ಕ?
- ಶೇ.2ಕ್ಕೆ ಇಳಿದ ಶುಲ್ಕದ ಬಳಿಕ ಅರ್ಜಿ ಹೆಚ್ಚಾದರೂ, ತಾಂತ್ರಿಕ ಸಮಸ್ಯೆಯಿಂದ ಜನರಿಗೆ ಸಂಕಷ್ಟ
- 7.50 ಲಕ್ಷ ಬಿ-ಖಾತೆ ಆಸ್ತಿಗಳ ಪೈಕಿ ಕೇವಲ 90 ಸಾವಿರ ಅರ್ಜಿಗಳು, 20 ಸಾವಿರಕ್ಕಷ್ಟೇ ಎ-ಖಾತೆ ಭಾಗ್ಯ
ಸುದ್ದಿದಿನ,ಬೆಂಗಳೂರು: ‘ಮನೆ ನಮ್ಮದು, ಖಾತೆಯೂ ನಮ್ಮ ಹಕ್ಕು’ ಎಂಬ ನಿರೀಕ್ಷೆಯೊಂದಿಗೆ ಎ-ಖಾತೆ ಪಡೆಯಲು ಮುಂದಾದ ಬೆಂಗಳೂರಿನ ಸಾವಿರಾರು ಆಸ್ತಿ ಮಾಲೀಕರಿಗೆ ಇದೀಗ ನಿರಾಸೆ ಎದುರಾಗಿದೆ. ರಾಜ್ಯ ಸರ್ಕಾರದ ಆರನೇ ಗ್ಯಾರಂಟಿ ಯೋಜನೆಯ ಭಾಗವಾಗಿ ಆರಂಭಿಸಿದ್ದ ‘ನನ್ನ ಖಾತಾ ನನ್ನ ಹಕ್ಕು’ ಕಾರ್ಯಕ್ರಮದ ಗಡುವು ಮುಕ್ತಾಯಗೊಂಡಿದ್ದು, ಯೋಜನೆಯ ಅನುಷ್ಠಾನದಲ್ಲಿ ಎದುರಾದ ತಾಂತ್ರಿಕ ಸಮಸ್ಯೆ ಹಾಗೂ ಅಧಿಕಾರಿಗಳ ವಿಳಂಬದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರು ನಗರದಲ್ಲಿ ಸುಮಾರು 7.50 ಲಕ್ಷ ಬಿ-ಖಾತೆ ಆಸ್ತಿಗಳಿವೆ ಎನ್ನಲಾಗಿದ್ದು, ಈ ಪೈಕಿ ಕೇವಲ 90 ಸಾವಿರ ಆಸ್ತಿ ಮಾಲೀಕರು ಮಾತ್ರ ಎ-ಖಾತೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅರ್ಜಿ ಸಲ್ಲಿಸಿದವರಿಗೂ ತಕ್ಷಣ ಪರಿಹಾರ ಸಿಗಲಿಲ್ಲ. ಅಧಿಕಾರಿಗಳ ಪ್ರಕ್ರಿಯೆ ವಿಳಂಬದಿಂದಾಗಿ ಇದುವರೆಗೆ ಕೇವಲ 20 ಸಾವಿರ ಆಸ್ತಿಗಳಿಗೆ ಮಾತ್ರ ಎ-ಖಾತೆ ಮಂಜೂರಾಗಿದೆ. ಇನ್ನೂ 60 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಾಕಿ ಉಳಿದಿವೆ.
ಶುಲ್ಕ ಕಡಿತದ ಬಳಿಕ ಹೆಚ್ಚಿದ ನಿರೀಕ್ಷೆ
ಆರಂಭದಲ್ಲಿ ಎ-ಖಾತೆ ಪಡೆಯಲು ಮಾರ್ಗಸೂಚಿ ಮೌಲ್ಯದ ಶೇ.5ರಷ್ಟು ಶುಲ್ಕ ವಿಧಿಸಲು ಸರ್ಕಾರ ನಿರ್ಧರಿಸಿತ್ತು. ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಶುಲ್ಕವನ್ನು ಶೇ.2ಕ್ಕೆ ಇಳಿಸಲಾಯಿತು. ಶುಲ್ಕ ಕಡಿಮೆಯಾದ ಬಳಿಕ ಎ-ಖಾತೆ ಪಡೆಯುವ ಆಸಕ್ತಿಯೂ ಹೆಚ್ಚಾಯಿತು. ಆದರೆ, ಇದೇ ಸಂದರ್ಭದಲ್ಲಿ ಮತ್ತೊಂದು ಸಮಸ್ಯೆ ಎದುರಾಯಿತು. ಅರ್ಜಿ ಸಲ್ಲಿಸಲು ಬಳಸುತ್ತಿದ್ದ ಜಿಬಿಎ ವೆಬ್ಸೈಟ್ನಲ್ಲಿ ಸರ್ವರ್ ಡೌನ್, ತಾಂತ್ರಿಕ ದೋಷ ಮತ್ತು ಮೂಲಸೌಕರ್ಯ ಕೊರತೆ ಕಾಣಿಸಿಕೊಂಡಿದ್ದರಿಂದ ಅನೇಕ ಆಸ್ತಿ ಮಾಲೀಕರು ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಪರದಾಡಿದರು. ಅರ್ಜಿ ಸಲ್ಲಿಸಿದವರಲ್ಲೂ ಹಲವರ ಅರ್ಜಿಗಳು ಅಧಿಕಾರಿಗಳ ಪರಿಶೀಲನೆಗಾಗಿ ಬಾಕಿ ಉಳಿದಿವೆ.
ಗಡುವು ಮುಗಿದ ಬಳಿಕ ಶುಲ್ಕದ ಹೊರೆ?
ಈಗ ‘ನನ್ನ ಖಾತಾ ನನ್ನ ಹಕ್ಕು’ ಯೋಜನೆಯ ಗಡುವು ಮುಕ್ತಾಯಗೊಂಡಿರುವುದರಿಂದ, ಮುಂದಿನ ದಿನಗಳಲ್ಲಿ ಬಿ-ಖಾತೆಯಿಂದ ಎ-ಖಾತೆಗೆ ಪರಿವರ್ತಿಸಿಕೊಳ್ಳುವವರು ಪೂರ್ಣ ಪ್ರಮಾಣದ ಶೇ.100 ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಇದರಿಂದ ಈಗಾಗಲೇ ಅರ್ಜಿ ಸಲ್ಲಿಸಿ ಅಧಿಕಾರಿಗಳ ಅನುಮೋದನೆಗಾಗಿ ಕಾಯುತ್ತಿರುವ 60 ಸಾವಿರಕ್ಕೂ ಹೆಚ್ಚು ಆಸ್ತಿ ಮಾಲೀಕರಲ್ಲಿ ಆತಂಕ ಹೆಚ್ಚಾಗಿದೆ. “ಶುಲ್ಕ ವಸೂಲಿಗೆ ಸರ್ಕಾರ ತೋರಿದ ವೇಗವನ್ನು, ಜನರಿಗೆ ತಾಂತ್ರಿಕ ನೆರವು ನೀಡುವಲ್ಲಿ ತೋರಲಿಲ್ಲ” ಎಂಬ ಆಕ್ರೋಶವೂ ಕೇಳಿಬರುತ್ತಿದೆ.
ಈಗ ಎಲ್ಲರ ಕಣ್ಣು ಸರ್ಕಾರದತ್ತ ನೆಟ್ಟಿದೆ. ಗಡುವು ವಿಸ್ತರಣೆಯಾಗುತ್ತದೆಯೇ? ಬಾಕಿ ಅರ್ಜಿಗಳಿಗೆ ವಿಶೇಷ ಅವಕಾಶ ಸಿಗುತ್ತದೆಯೇ? ಅಥವಾ ಸಾವಿರಾರು ಜನರು ಶೇ.100 ಶುಲ್ಕದ ಹೊರೆ ಹೊರುವಂತಾಗುತ್ತದೆಯೇ? ಎಂಬ ಪ್ರಶ್ನೆಗಳಿಗೆ ಸರ್ಕಾರದ ಮುಂದಿನ ನಿರ್ಧಾರವೇ ಉತ್ತರ ನೀಡಬೇಕಿದೆ.

-
ದಿನದ ಸುದ್ದಿ7 days agoಅಪರೂಪದ ಲಿವರ್ ಗಡ್ಡೆ | ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ನಲ್ಲಿ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ
-
ದಿನದ ಸುದ್ದಿ4 days agoವಿಶ್ವ ವೆಂಕಟೇಶ್ವರ ಸಂಸ್ಥೆಯ ಹೆಸರು ಹಾಳು ಮಾಡುವ ಹುನ್ನಾರ: ವಿಠಲ ರುಕ್ಮಿಣಿ ಮಠದ ವಿರುದ್ಧ ಗಂಭೀರ ಆರೋಪ
-
ಅಂತರಂಗ3 days agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
-
ದಿನದ ಸುದ್ದಿ18 hours agoತುಂಗಭದ್ರಾದಲ್ಲಿ ನೀರಿನ ಹರಿವು ಕುಸಿತ: ಹರಿಹರದ 24×7 ‘ಜಲಸಿರಿ’ಗೆ ಬ್ರೇಕ್, ನೀರು ಪೂರೈಕೆ ಸಮಯ ಕಡಿತ
-
ದಿನದ ಸುದ್ದಿ19 hours agoಭದ್ರಾ ಡ್ಯಾಂ ನೀರು ಹರಿಸುವಂತೆ ಆಗ್ರಹಿಸಿ ಕರೆ ನೀಡಿದ್ದ ದಾವಣಗೆರೆ ಬಂದ್ ನೀರಸ
-
ದಿನದ ಸುದ್ದಿ15 hours agoಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
-
ದಿನದ ಸುದ್ದಿ15 hours agoಉದ್ದಿಮೆದಾರರಿಗೆ ನೆರವು ಯೋಜನೆ; ಅರ್ಜಿ ಆಹ್ವಾನ
-
ದಿನದ ಸುದ್ದಿ19 hours agoಶಾಸಕ ಸಮರ್ಥ್ ಶಾಮನೂರು ಪ್ರಯಾಣಿಸುತ್ತಿದ್ದ ಕಾರು ಅಪಘಾತ: ಅಡ್ಡಬಂದ ವಾಹನ ತಪ್ಪಿಸಲು ಹೋಗಿ ಅವಘಡ !










