ದಿನದ ಸುದ್ದಿ
ಯಾರು ಪ್ರಗತಿಪರರು? : ದಿನೇಶ್ ಅಮಿನ್ ಮಟ್ಟು

ನಾನು ಮುಸುಕಿನ ಗುದ್ದಾಟ ನಡೆಸಲು ಹೋಗುವುದಿಲ್ಲ, ಯಾರದೋ ಹೆಗಲ ಮೇಲೆ ಬಂದೂಕು ಇಡುವುದೂ ಇಲ್ಲ, ನನ್ನ ಅಭಿಪ್ರಾಯ ಮಂಡಿಸಲು ಥಿಯರಿಗಳ ಮೂಟೆಗಳನ್ನು ಉರುಳಿಸಿ ಯಾರನ್ನೂ ಗೊಂದಲಕ್ಕೀಡುಮಾಡುವುದೂ ಇಲ್ಲ. ನೇರವಾಗಿ ವಿಷಯಕ್ಕೆ ಬರ್ತೇನೆ.
ಪ್ರಗತಿಪರರು ಯಾರು ಎನ್ನುವ ಪ್ರಶ್ನೆಗೆ ಉತ್ತರ ಬೇಕಲ್ಲಾ? ಮುಸುಕು ತೆಗೆದಿದ್ದೇನೆ, ಹೆಸರು ಬರ್ಕೊಳ್ಳಿ: ದೊರೆಸ್ವಾಮಿ, ದೇವನೂರ,ಚಂಪಾ, ಸುಬ್ಬಯ್ಯ ಬರಗೂರು, ಮರುಳಸಿದ್ದಪ್ಪ, ಸಿದ್ದರಾಮಯ್ಯ,ಗೋವಿಂದರಾವ್, , ಬಿಳಿಮಲೆ, ಅಸ್ಸಾದಿ, ಚೆನ್ನಿ, ಸಿದ್ದಯ್ಯ, ಕಾಳೇಗೌಡ, ಇಂಧೂಧರ, ಬಂಜಗೆರೆ, ರಹಮತ್, ಹುಳಿಯಾರ್, ರವಿವರ್ಮಕುಮಾರ್, ಗಣೇಶ್ ದೇವಿ, ವಿಜಯಮ್ಮ, ಮಾಲಗತ್ತಿ…ಪಟ್ಟಿ ಉದ್ದ ಇದೆ.
ಇವರ ಜತೆ ಜನನುಡಿ, ಮೇ ಸಾಹಿತ್ಯಮೇಳ, ನಾವು ನಮ್ಮಲ್ಲಿ, ಉಡುಪಿ-ಗುಬ್ಬಿ-ಗುಡಿಬಂಡೆ ಚಲೋ, ದಿಡ್ಡಳ್ಳಿ ಚಲೋ ಮೊದಲಾದ ಸಂಘಟನೆಗಳಲ್ಲಿ ಸಕ್ರಿಯರಾಗಿರುವ ಕನಸುಕಂಗಳ ಸಾವಿರಾರು ಯುವಕ-ಯುವತಿಯರಿದ್ದಾರೆ. ಈ ಪಟ್ಟಿಯಲ್ಲಿ ಎಡಪಕ್ಷಗಳ ಸದಸ್ಯರಾಗಿರುವವರನ್ನು ನಾನು ಸೇರಿಸಿಲ್ಲ. ಸದ್ಯ ಇಷ್ಟಕ್ಕೆ ನಿಲ್ಲಿಸ್ತೇನೆ.
ಮೊದಲನೆಯದಾಗಿ, ಇವರು ಜಾತ್ಯತೀತತೆಯ ರಕ್ಷಣೆಯ ಸೈದ್ಧಾಂತಿಕ ಗುತ್ತಿಗೆಯನ್ನು ಪಡೆದಿರುವುದು ಬಸವಣ್ಣ, ಗಾಂಧೀಜಿ, ಅಂಬೇಡ್ಕರ್, ಲೋಹಿಯಾ, ಪೆರಿಯಾರ್ ಅವರಿಂದ ಹೊರತು ಕಾಂಗ್ರೆಸ್ ಪಕ್ಷದಿಂದ ಅಲ್ಲ.
ಇವರಲ್ಲಿ ಬಹುತೇಕ ಮಂದಿ 75-77ರ ಕಾಲದಲ್ಲಿ ಇಂದಿರಾಗಾಂಧಿಯವರ ತುರ್ತುಪರಿಸ್ಥಿತಿಯನ್ನು ವಿರೋಧಿಸಿದವರು, 1989ರಲ್ಲಿ ರಾಜೀವ್ ಗಾಂಧಿಯವರ ವಿರುದ್ಧ ಸಿಡಿದೆದ್ದಿದ್ದ ಮತ್ತು ಮಂಡಲ್ ವರದಿ ಜಾರಿಗೆ ತಂದಿದ್ದ ವಿ.ಪಿ.ಸಿಂಗ್ ಪರವಾಗಿ ನಿಂತವರು. ಈ ಎರಡೂ ಸಂದರ್ಭಗಳಲ್ಲಿ ಜನಸಂಘ-ಬಿಜೆಪಿ ಕಾರ್ಯಕರ್ತರು ಇವರ ಜತೆಗಿದ್ದರು. ಆಗ ಯಾರೂ ಇವರಿಗೆ ಕೇಸರಿ ಬಣ್ಣ ಬಳಿಯಲಿಲ್ಲ, ಚಡ್ಡಿ ಹಾಕಲಿಲ್ಲ, ಗಂಜಿ ಗಿರಾಕಿ ಅನ್ನಲಿಲ್ಲ.
ಎರಡನೆಯದಾಗಿ, ಹಿಂದಿನ ಇತಿಹಾಸ ಬೇಡ, ಕಳೆದ ಐದು ವರ್ಷಗಳ ಅವಧಿಯಲ್ಲಿ ಇವರೆಲ್ಲರೂ ರಾಜ್ಯದಲ್ಲಿ ಕೋಮುವಾದದ ವಿರುದ್ಧದ ಮತ್ತು, ಜಾತ್ಯತೀತತೆಯನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಬಿಜೆಪಿ ವಿರುದ್ಧ ಮಾತ್ರವಲ್ಲ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಮಾತನಾಡಿದ್ದಾರೆ. ಹೌದು, ಸಿದ್ದರಾಮಯ್ಯನವರ ವಿಷಯದಲ್ಲಿ ಸಕಾರಣವಾಗಿ ಮೆದುವಾಗಿದ್ದರು.
ಈ ಮೆದು ಧೋರಣೆಯಿಂದ ಇವರು ಪಡೆದ ಲಾಭಗಳೇನು? ಐದು ವರ್ಷಗಳ ಅವಧಿಯಲ್ಲಿ ಇವರಲ್ಲಿ ಎಷ್ಟು ಮಂದಿಯ ಆದಾಯ ದುಪ್ಪಟ್ಟಾಯಿತು? ಎಷ್ಟುಮಂದಿ ಸರ್ಕಾರಿ ಮನೆ-ಸೈಟು ತೆಗೆದುಕೊಂಡರು? ಎಷ್ಟುಮಂದಿ ವಿಧಾನಪರಿಷತ್ ಗೆ ನಾಮಕರಣಗೊಂಡರು? ಎಷ್ಟುಮಂದಿ ತಮ್ಮ ಕುಟುಂಬದ ಸದಸ್ಯರಿಗೆ ಕಾಂಗ್ರೆಸ್ ಪಕ್ಷದಿಂದ ಚುನಾವಣಾ ಸ್ಪರ್ಧೆಗೆ ಟಿಕೆಟ್ ಕೊಡಿಸಿದರು? ಇವರನ್ನು ಕಾಂಗ್ರೆಸ್ ಪಕ್ಷದ ಜತೆ ಜೋಡಿಸಿ ಗೇಲಿ ಮಾಡುತ್ತಿರುವವರು ದಯವಿಟ್ಟು ಇವರು ಸರ್ಕಾರದಿಂದ ಪಡೆದಿರುವ ಲಾಭಗಳೇನು ಎನ್ನುವುದನ್ನು ತಿಳಿಸಿ.
ತಮ್ಮ ವಯಸ್ಸು-ಆರೋಗ್ಯವನ್ನು ಮರೆತು ಕೋಮುವಾದದ ವಿರುದ್ಧ ಏಕಾಂಗಿಗಳಾಗಿ ಹೋರಾಟಕ್ಕಿಳಿದಿರುವ ಒಬ್ಬ ಶ್ರೀನಿವಾಸ ಕಾರ್ಕಳ, ಒಬ್ಬ ಸುರೇಶ್ ಭಟ್ ಬಾಕ್ರಬೈಲ್, ಒಬ್ಬ ಸನತ್ ಕುಮಾರ ಬೆಳಗಲಿ ಸರ್ಕಾರದಿಂದ ಪಡೆದ ಲಾಭಗಳೇನು? ತನ್ನ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವ ಪುರುಷೋತ್ತಮ ಬಿಳಿಮಲೆಯವರು ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ದುಡ್ಡು ಬೇಡ ಎಂದವರು ಗೊತ್ತಾ?
ಹೌದು, ಇವರಲ್ಲಿ ಹೆಚ್ಚಿನವರು ಅಕಾಡೆಮಿ-ಪ್ರಾಧಿಕಾರದ ಪದಾಧಿಕಾರಿಗಳಾಗಿ ನೇಮಕಗೊಂಡಿದ್ದಾರೆ. ಯಾವುದೇ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದಾಗ ವಿಶಾಲ ಅರ್ಥದಲ್ಲಿ ಸೈದ್ಧಾಂತಿಕ ಸಹಮತ ಹೊಂದಿರುವವರನ್ನು ಸಾಹಿತ್ಯ-ಸಾಂಸ್ಕೃತಿಕ ಸಂಘಟನೆಗಳಿಗೆ ನೇಮಕಮಾಡುತ್ತದೆ ಮತ್ತು ಆ ರೀತಿಯೇ ನೇಮಕ ಮಾಡಬೇಕು. ಇವರನ್ನು ಬಿಟ್ಟು ಭೈರಪ್ಪ, ಚಿದಾನಂದ ಮೂರ್ತಿ, ದೊಡ್ಡರಂಗೇಗೌಡರನ್ನು ನೇಮಕಮಾಡೋಕ್ಕಾಗುತ್ತಾ?
ಈ ರೀತಿ ನೇಮಕಗೊಂಡವರಲ್ಲಿ ಯಾರಾದರೂ ತಮ್ಮ ಸೈದ್ಧಾಂತಿಕ ಬದ್ದತೆಯಲ್ಲಿ ರಾಜಿ ಮಾಡಿಕೊಂಡ ಉದಾಹರಣೆಗಳಿದ್ದರೆ ತಿಳಿಸಿ. ಇವರಲ್ಲಿ ಯಾರಾದರೂ ತಮ್ಮ ಅರ್ಹತೆಯನ್ನು ಮೀರಿ ಸ್ಥಾನಮಾನ ಗಳಿಸಿದ್ದರೆ ಅದನ್ನೂ ತಿಳಿಸಿ.
ಪ್ರಗತಿಪರರು ಯಾರು ಎನ್ನುವ ವ್ಯಾಖ್ಯಾನದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ ಸ್ವಾಮಿ. ಬಹಳ ಸರಳವಾಗಿದೆ. ಪ್ರಗತಿವಿರೋಧಿಗಳಲ್ಲದವರೆಲ್ಲರೂ ಪ್ರಗತಿಪರರೇ ಆಗಿರುತ್ತಾರೆ. ಪ್ರಗತಿ ಎಂದರೆ ಏನು ಎನ್ನುವ ಉಡಾಫೆ ಪ್ರಶ್ನೆ ಕೇಳಿದರೆ ಅದಕ್ಕೆ ನನ್ನ ಉತ್ತರ: ಬಸವ,ಗಾಂಧಿ,ಅಂಬೇಡ್ಕರ್, ಲೋಹಿಯಾ ಹೇಳಿರುವ ಪ್ರಗತಿ.
ಪ್ರಗತಿಪರರು ಪರಿಪೂರ್ಣರೇ? ಖಂಡಿತ ಅಲ್ಲ, ಮನುಷ್ಯ ಮಾತ್ರರಾದ ಅವರಲ್ಲಿಯೂ ಸಣ್ಣಪುಟ್ಟ ಆಸೆ, ಲೋಭ, ಸ್ವಾರ್ಥ, ಅಸೂಯೆಗಳಿರಬಹುದು. ಇವರ ನಡುವೆ ಪರಸ್ಪರ ಆಂತರಿಕ ಭಿನ್ನಾಭಿಪ್ರಾಯಗಳೂ ಇರಬಹುದು. ಹೀಗಿದ್ದರೂ ಫ್ಯಾಸಿಸಮ್, ಸರ್ವಾಧಿಕಾರ ಮತ್ತು ಕೋಮುವಾದದ ಪ್ರಶ್ನೆಗಳು ಎದುರಾದಾಗ ಭಿನ್ನತೆಗಳನ್ನೆಲ್ಲವನ್ನೂ ಮರೆತು ಒಂದಾಗಿ ಇವರು ಕೈಕೈ ಹಿಡಿದು ಬೀದಿಗಿಳಿದಿದ್ದಾರೆ. ದೇಶ-ಕಾಲದ ಕರೆಗೆ ತಕ್ಕ ಹಾಗೆ ತಮ್ಮ ಶತ್ರುಗಳನ್ನು ಅವರು ಬದಲಾಯಿಸಿಕೊಂಡಿದ್ದಾರೆ, ಅಷ್ಟೆ.
ಕಾಲದ ಚಕ್ರ ಒಂದು ಸುತ್ತು ಮುಗಿಸಿದೆ. ಕಾಂಗ್ರೆಸ್ ಜಾಗದಲ್ಲಿ ಬಿಜೆಪಿ ಬಂದು ನಿಂತಿದೆ. ಹಳೆಯ ಸರ್ವಾಧಿಕಾರಿ ಇಂದಿರಾಗಾಂಧಿಯ ಸ್ಥಾನದಲ್ಲಿ ಕೋಮುವಾದದ ವಿಷಯೇರಿಸಿಕೊಂಡ ಹೊಸ ಸರ್ವಾಧಿಕಾರಿ ಅಬ್ಬರಿಸುತ್ತಿದ್ದಾರೆ.ಸರ್ವಾಧಿಕಾರಕ್ಕೆ ಬಲಿಯಾದವರೇ ಸರ್ವಾಧಿಕಾರಿಯ ಭಕ್ತರಾಗಿರುವ ವಿಚಿತ್ರ ಪರಿಸ್ಥಿತಿಯಲ್ಲಿ ‘’ಮೆದುಳು ತೊಳೆಯಲು’’ ನಮಗೆ ಇನ್ನಷ್ಟು ಸಂಖ್ಯೆಯ ಪ್ರಗತಿಪರರು ಬೇಕು. ಸಾಧ್ಯವಾದರೆ ಈ ಪ್ರಯತ್ನಕ್ಕೆ ಇದಕ್ಕೆ ಕೈಜೋಡಿಸಿ. ಅದು ಬಿಟ್ಟು ಅಡ್ಡಗೋಡೆಯ ಮೇಲೆ ಕೂತು ಅವರತ್ತ ಕಲ್ಲೆಸೆದು, ಅವರ ಬಗ್ಗೆ ಇನ್ನಷ್ಟು ಸಂಶಯಗಳನ್ನು ಹುಟ್ಟುಹಾಕಿ ನೈತಿಕವಾಗಿ ಅವರು ಕುಸಿಯುವಂತೆ ಮಾಡುವ ಜನದ್ರೋಹದ ಕೆಲಸ ಮಾಡಬೇಡಿ
ಪ್ರಗತಿಪರರನ್ನು ಹಂಗಿಸಿ, ನಿಂದಿಸಿ ಮೂಲೆಗೆ ತಳ್ಳುವ ಈ ಹುನ್ನಾರ ಪ್ರಾರಂಭಿಸಿದವರು ಬಲಪಂಥೀಯ ಪಡೆ. ಈಗ ನಮ್ಮವರೇ ಕೆಲವರು ಆ ಖೆಡ್ಡಾದಲ್ಲಿ ಬಿದ್ದಿದ್ದಾರೆ. ಅರಿವಿಲ್ಲದೆ ಖೆಡ್ಡಾದಲ್ಲಿ ಬಿದ್ದಿದ್ದರೆ ಅವರನ್ನೂ ಎತ್ತಿ ನಮ್ಮೊಂದಿಗೆ ಕರೆದೊಯ್ಯೋಣ. ಎಲ್ಲವೂ ಅರಿವಿದ್ದು ಆ ಕಡೆಯಿಂದ ಸುಫಾ ರಿ ಪಡೆದಿದ್ದರೆ ಅವರವರ ಕರ್ಮ ನಾವೇನು ಮಾಡಲಾಗದು. ನಾವು ಅಂಪೈರ್ ಗಳಲ್ಲ, ಆಟಗಾರರು. ಗೆಲುವು ನಮ್ಮದೇ.
(ಇಷ್ಟು ಬರೆಯಲು ಸ್ಪೂರ್ತಿ ನೀಡಿದ N A Mahamad Ismail ಪೋಸ್ಟ್ ಗೆ ಋಣಿಯಾಗಿದ್ದೇನೆ)
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಪ್ರವಾಸೋದ್ಯಮ ಇಲಾಖೆ | ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಪರಿಶಿಷ್ಟ ಜಾತಿಗೆ ಸೇರಿದ 292 ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ 162 ಅಭ್ಯರ್ಥಿಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅತಿಥ್ಯ ಕ್ಷೇತ್ರದ ಸಂಸ್ಥೆಗಳಾದ ಆಹಾರ ಕರಕುಶಲ ಸಂಸ್ಥೆ ಮೈಸೂರು ( Food Craft Institute ) ಮತ್ತು ಹೋಟೆಲ್ ನಿರ್ವಹಣಾ ಸಂಸ್ಥೆ ಬೆಂಗಳೂರು (Institute Of Hotel Management ) ಇವರ ಸಹಯೋಗದಲ್ಲಿ ವಸತಿ ಸಹಿತ ಕಾರ್ಯಕ್ರಮವನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದ್ದು, ಈ ಸಂಬಂಧ ಅರ್ಹ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಮಲ್ಟಿ ಕ್ಯೂಸಿನ್ ಕುಕ್ ( Multi Cusine Cook ) ಮತ್ತು ಫುಡ್ ಅಂಡ್ ಬೇವರೇಜ್ ಸರ್ವಿಸ್ ಸ್ಟೇವಾರ್ಡ್ ( Food And Beverage Service Steward ) ನಲ್ಲಿ ತರಬೇತಿ ಪಡೆಯಲು ಇಚ್ಛಿಸುವ ಜಿಲ್ಲೆಯ ಅಭ್ಯರ್ಥಿಗಳು ಮಾ.25 ರಿಂದ ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿನ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ದ್ವಿ-ಪ್ರತಿಯಲ್ಲಿ ಏಪ್ರಿಲ್ 3 ರೊಳಗೆ ನೇರವಾಗಿ ಇಲಾಖೆಗೆ ಸಲ್ಲಿಸಬೇಕು ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಬಿ.ಕಾವ್ಯ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಜಯಲಕ್ಷ್ಮಿ ಕಾರಂತ್ ಅವರಿಗೆ ‘ಯಕ್ಷ ಧ್ರುವ’ ರಾಜ್ಯ ಪ್ರಶಸ್ತಿ ಪ್ರದಾನ

ಸುದ್ದಿದಿನ,ದಾವಣಗೆರೆ:ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕೇರಳ ಗಡಿನಾಡ ಶಾಖೆಯ ಅಧ್ಯಕ್ಷರೂ, ಹಿರಿಯ ಸಾಹಿತಿ, ಯಕ್ಷಗಾನ ವಿದ್ವಾಂಸರು, ತಾಳಮದ್ದಳೆಯ ಅರ್ಥಧಾರಿಗಳಾದ ಜಯಲಕ್ಷ್ಮಿ ಕಾರಂತ್ರವರಿಗೆ ಇತ್ತೀಚಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ನ ಭಂಟರ ಭವನದಲ್ಲಿ ಮಂಗಳೂರಿನ ಯಕ್ಷ ಧ್ರುವ ಪಟ್ಲ ಪೌಂಡೇಷನ್ ಟ್ರಸ್ಟ್ ಹಮ್ಮಿಕೊಳ್ಳಲಾದ ಮಹಿಳಾ ಘಟಕದ 8ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ “ಯಕ್ಷ ಧ್ರುವ” ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು ಎಂದು ಕಲಾಕುಂಚ ಯಕ್ಷರಂಗದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಹಿರಿಯ, ಕಿರಿಯ ಮಹಿಳೆಯರಿಗೆ, ಮಕ್ಕಳಿಗೆ ಯಕ್ಷಗಾನ ಮದ್ದಳೆ ತರಬೇತಿ, ಮಹಾಭಾರತ, ರಾಮಾಯಣ ಪರಂಪರೆಯ ಪೌರಾಣಿಕ ಪ್ರಸಂಗಗಳ ರಚನೆ, ನಿವೃತ್ತಿ ಶಿಕ್ಷಕಿಯಾದರೂ ಶೈಕ್ಷಣಿಕ ಕಾಳಜಿಯ ಸ್ವಯಂ ಸೇವೆಯೊಂದಿಗೆ, ಕಲೆ, ಸಾಹಿತ್ಯ, ಸಂಗೀತ, ಭಜನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಗುರುತಿಸಿ ಶ್ರೀಮತಿ ಜಯಲಕ್ಷ್ಮಿ ಕಾರಂತ್ರನ್ನು ಮಹತ್ವಪೂರ್ಣ ಈ ಪ್ರಶಸ್ತಿಗೆ ಭಾಜನಾಗಿದ್ದು ಕಲಾಕುಂಚ ಯಕ್ಷರಂಗ ಸೇರಿದಂತೆ ವಿವಿಧ ಸಂಘಟನೆಗಳ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿಮಾನದಿಂದ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ಅಲರ್ಟ್..!

- ಸುನೀತ ಕುಶಾಲನಗರ
ನದಿಯ ನೇವರಿಸಿದ ಗಾಳಿ
ಮುದಗೊಳಿಸಿ ಸರಿಯಿತು.
ಜಡಿ ಮಳೆ ಧೋ ಎಂದು
ಸಕಾಲಿಕವಾಗಿ ಸುರಿದು
ಹೊಸ ಹುಟ್ಟು.
ಆದರೇನು?
ಹಿಂಗಾರು, ಮುಂಗಾರು
ಆಗೊಮ್ಮೆ ಈಗೊಮ್ಮೆ
ಪದೇ ಪದೇ ಅದೇ ರಾಗ .
ಸುರಿದು ತುಂತುರು
ಕಾಣಿಸಿ ನಿಂತಿತೆನ್ನುವಾಗ
ಮತ್ತೆ ನಿಲ್ಲದ ಹಠ.
ಮಳೆಗೆ ಈಗ ಮುಟ್ಟು
ನಿಲ್ಲುವ ಸಮಯವೋ?
ಗುಡುಗು,ಮಿಂಚಿನಿಂದ
ಮುಟ್ಟಿನಲ್ಲಿ ಏರುಪೇರೋ ?
ಒಟ್ಟಿನಲ್ಲಿ
ನದಿಯ ಸೋಕಿದ ಗಾಳಿ
ಸಮುದ್ರದೊಳಗೆ ವಿಲೀನ.
ಅಕಾಲಿಕ ಮಳೆ…
ಇಳೆಗೆ ಸೊಂಟ ಬೇನೆ
ನದಿಯ ತಾಕಿದ ಬೆಳದಿಂಗಳು
ಕಿವಿಯಲ್ಲಿ ಉಸುರಿತು
ಹರಿಯುತ್ತಿರುವ ನದಿಯು
ಬೀಸುವ ಗಾಳಿಯು
ತಲೆಯೆತ್ತಿ ನಿಂತ ಬೆಟ್ಟವೂ
ಸ್ಥಾನ ಬದಲಿಸಲು
ಹೊತ್ತು ಬೇಕೆ?
ನಿಲ್ಲದ ಮಳೆಯ ಮುಟ್ಟಿಗೆ
ಸಲ್ಲುವ ಘೋಷಣೆ
ಹೈ ಅಲರ್ಟ್!
ಬದುಕಿನ ಧ್ಯಾನ
ಯೆಲ್ಲೋ, ಆರೆಂಜ್, ರೆಡ್
ಬಣ್ಣಗಳ ಅಲರ್ಟ್ ನಲ್ಲೇ
ಕಳೆದು ಹೋಗುತ್ತಿದೆ.
ಕಾಮನ ಬಿಲ್ಲ ತೋರಿಸಿ
ಸರಿದು ಬಿಡು ಮಳೆಯೇ
ಇಳೆಯ ಉಸಿರು
ಹಸಿರಾಗಲಿ. (ಕವಯಿತ್ರಿ: ಸುನೀತ ಕುಶಾಲನಗರ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days ago
ಕೆರೆಬಿಳಚಿ | ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ; 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ಕ್ಯೂ-ಸ್ಪೈಡರ್ಸ್ ವತಿಯಿಂದ ಉಚಿತ ಉದ್ಯೋಗದರಿತ ಕೌಶಲ್ಯ ತರಬೇತಿ ಆಯ್ಕೆ ಪ್ರಕ್ರಿಯೆ
-
ದಿನದ ಸುದ್ದಿ7 days ago
ಪ್ರತ್ಯೇಕ ದಾವಣಗೆರೆ-ಚಿತ್ರದುರ್ಗ ಮೆಗಾ ಡೈರಿ ಆರಂಭಿಸಿ : ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯ
-
ದಿನದ ಸುದ್ದಿ6 days ago
ಅಮಾನವೀಯ ಕೃತ್ಯ | ಹೆಣ್ಣು ಮಗು ಮಾರಾಟ ಮಾಡಿದ ಪೋಷಕರು
-
ಅಂಕಣ6 days ago
ಸಿದ್ಧಾಂತ ಮತ್ತು ಪತ್ರಿಕೋದ್ಯಮ
-
ದಿನದ ಸುದ್ದಿ6 days ago
ದಾವಣಗೆರೆ | ನಾಳೆಯಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭ, 81 ಕೇಂದ್ರಗಳಲ್ಲಿ 22579 ವಿದ್ಯಾರ್ಥಿಗಳು
-
ದಿನದ ಸುದ್ದಿ6 days ago
ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಅಗತ್ಯ : ಪ್ರಾಚಾರ್ಯ ಎಂ.ನಾಸಿರುದ್ದೀನ್
-
ಅಂಕಣ3 days ago
ಕವಿತೆ | ಅಲರ್ಟ್..!