ದಿನದ ಸುದ್ದಿ
ಯಾರು ಪ್ರಗತಿಪರರು? : ದಿನೇಶ್ ಅಮಿನ್ ಮಟ್ಟು

ನಾನು ಮುಸುಕಿನ ಗುದ್ದಾಟ ನಡೆಸಲು ಹೋಗುವುದಿಲ್ಲ, ಯಾರದೋ ಹೆಗಲ ಮೇಲೆ ಬಂದೂಕು ಇಡುವುದೂ ಇಲ್ಲ, ನನ್ನ ಅಭಿಪ್ರಾಯ ಮಂಡಿಸಲು ಥಿಯರಿಗಳ ಮೂಟೆಗಳನ್ನು ಉರುಳಿಸಿ ಯಾರನ್ನೂ ಗೊಂದಲಕ್ಕೀಡುಮಾಡುವುದೂ ಇಲ್ಲ. ನೇರವಾಗಿ ವಿಷಯಕ್ಕೆ ಬರ್ತೇನೆ.
ಪ್ರಗತಿಪರರು ಯಾರು ಎನ್ನುವ ಪ್ರಶ್ನೆಗೆ ಉತ್ತರ ಬೇಕಲ್ಲಾ? ಮುಸುಕು ತೆಗೆದಿದ್ದೇನೆ, ಹೆಸರು ಬರ್ಕೊಳ್ಳಿ: ದೊರೆಸ್ವಾಮಿ, ದೇವನೂರ,ಚಂಪಾ, ಸುಬ್ಬಯ್ಯ ಬರಗೂರು, ಮರುಳಸಿದ್ದಪ್ಪ, ಸಿದ್ದರಾಮಯ್ಯ,ಗೋವಿಂದರಾವ್, , ಬಿಳಿಮಲೆ, ಅಸ್ಸಾದಿ, ಚೆನ್ನಿ, ಸಿದ್ದಯ್ಯ, ಕಾಳೇಗೌಡ, ಇಂಧೂಧರ, ಬಂಜಗೆರೆ, ರಹಮತ್, ಹುಳಿಯಾರ್, ರವಿವರ್ಮಕುಮಾರ್, ಗಣೇಶ್ ದೇವಿ, ವಿಜಯಮ್ಮ, ಮಾಲಗತ್ತಿ…ಪಟ್ಟಿ ಉದ್ದ ಇದೆ.
ಇವರ ಜತೆ ಜನನುಡಿ, ಮೇ ಸಾಹಿತ್ಯಮೇಳ, ನಾವು ನಮ್ಮಲ್ಲಿ, ಉಡುಪಿ-ಗುಬ್ಬಿ-ಗುಡಿಬಂಡೆ ಚಲೋ, ದಿಡ್ಡಳ್ಳಿ ಚಲೋ ಮೊದಲಾದ ಸಂಘಟನೆಗಳಲ್ಲಿ ಸಕ್ರಿಯರಾಗಿರುವ ಕನಸುಕಂಗಳ ಸಾವಿರಾರು ಯುವಕ-ಯುವತಿಯರಿದ್ದಾರೆ. ಈ ಪಟ್ಟಿಯಲ್ಲಿ ಎಡಪಕ್ಷಗಳ ಸದಸ್ಯರಾಗಿರುವವರನ್ನು ನಾನು ಸೇರಿಸಿಲ್ಲ. ಸದ್ಯ ಇಷ್ಟಕ್ಕೆ ನಿಲ್ಲಿಸ್ತೇನೆ.
ಮೊದಲನೆಯದಾಗಿ, ಇವರು ಜಾತ್ಯತೀತತೆಯ ರಕ್ಷಣೆಯ ಸೈದ್ಧಾಂತಿಕ ಗುತ್ತಿಗೆಯನ್ನು ಪಡೆದಿರುವುದು ಬಸವಣ್ಣ, ಗಾಂಧೀಜಿ, ಅಂಬೇಡ್ಕರ್, ಲೋಹಿಯಾ, ಪೆರಿಯಾರ್ ಅವರಿಂದ ಹೊರತು ಕಾಂಗ್ರೆಸ್ ಪಕ್ಷದಿಂದ ಅಲ್ಲ.
ಇವರಲ್ಲಿ ಬಹುತೇಕ ಮಂದಿ 75-77ರ ಕಾಲದಲ್ಲಿ ಇಂದಿರಾಗಾಂಧಿಯವರ ತುರ್ತುಪರಿಸ್ಥಿತಿಯನ್ನು ವಿರೋಧಿಸಿದವರು, 1989ರಲ್ಲಿ ರಾಜೀವ್ ಗಾಂಧಿಯವರ ವಿರುದ್ಧ ಸಿಡಿದೆದ್ದಿದ್ದ ಮತ್ತು ಮಂಡಲ್ ವರದಿ ಜಾರಿಗೆ ತಂದಿದ್ದ ವಿ.ಪಿ.ಸಿಂಗ್ ಪರವಾಗಿ ನಿಂತವರು. ಈ ಎರಡೂ ಸಂದರ್ಭಗಳಲ್ಲಿ ಜನಸಂಘ-ಬಿಜೆಪಿ ಕಾರ್ಯಕರ್ತರು ಇವರ ಜತೆಗಿದ್ದರು. ಆಗ ಯಾರೂ ಇವರಿಗೆ ಕೇಸರಿ ಬಣ್ಣ ಬಳಿಯಲಿಲ್ಲ, ಚಡ್ಡಿ ಹಾಕಲಿಲ್ಲ, ಗಂಜಿ ಗಿರಾಕಿ ಅನ್ನಲಿಲ್ಲ.
ಎರಡನೆಯದಾಗಿ, ಹಿಂದಿನ ಇತಿಹಾಸ ಬೇಡ, ಕಳೆದ ಐದು ವರ್ಷಗಳ ಅವಧಿಯಲ್ಲಿ ಇವರೆಲ್ಲರೂ ರಾಜ್ಯದಲ್ಲಿ ಕೋಮುವಾದದ ವಿರುದ್ಧದ ಮತ್ತು, ಜಾತ್ಯತೀತತೆಯನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಬಿಜೆಪಿ ವಿರುದ್ಧ ಮಾತ್ರವಲ್ಲ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಮಾತನಾಡಿದ್ದಾರೆ. ಹೌದು, ಸಿದ್ದರಾಮಯ್ಯನವರ ವಿಷಯದಲ್ಲಿ ಸಕಾರಣವಾಗಿ ಮೆದುವಾಗಿದ್ದರು.
ಈ ಮೆದು ಧೋರಣೆಯಿಂದ ಇವರು ಪಡೆದ ಲಾಭಗಳೇನು? ಐದು ವರ್ಷಗಳ ಅವಧಿಯಲ್ಲಿ ಇವರಲ್ಲಿ ಎಷ್ಟು ಮಂದಿಯ ಆದಾಯ ದುಪ್ಪಟ್ಟಾಯಿತು? ಎಷ್ಟುಮಂದಿ ಸರ್ಕಾರಿ ಮನೆ-ಸೈಟು ತೆಗೆದುಕೊಂಡರು? ಎಷ್ಟುಮಂದಿ ವಿಧಾನಪರಿಷತ್ ಗೆ ನಾಮಕರಣಗೊಂಡರು? ಎಷ್ಟುಮಂದಿ ತಮ್ಮ ಕುಟುಂಬದ ಸದಸ್ಯರಿಗೆ ಕಾಂಗ್ರೆಸ್ ಪಕ್ಷದಿಂದ ಚುನಾವಣಾ ಸ್ಪರ್ಧೆಗೆ ಟಿಕೆಟ್ ಕೊಡಿಸಿದರು? ಇವರನ್ನು ಕಾಂಗ್ರೆಸ್ ಪಕ್ಷದ ಜತೆ ಜೋಡಿಸಿ ಗೇಲಿ ಮಾಡುತ್ತಿರುವವರು ದಯವಿಟ್ಟು ಇವರು ಸರ್ಕಾರದಿಂದ ಪಡೆದಿರುವ ಲಾಭಗಳೇನು ಎನ್ನುವುದನ್ನು ತಿಳಿಸಿ.
ತಮ್ಮ ವಯಸ್ಸು-ಆರೋಗ್ಯವನ್ನು ಮರೆತು ಕೋಮುವಾದದ ವಿರುದ್ಧ ಏಕಾಂಗಿಗಳಾಗಿ ಹೋರಾಟಕ್ಕಿಳಿದಿರುವ ಒಬ್ಬ ಶ್ರೀನಿವಾಸ ಕಾರ್ಕಳ, ಒಬ್ಬ ಸುರೇಶ್ ಭಟ್ ಬಾಕ್ರಬೈಲ್, ಒಬ್ಬ ಸನತ್ ಕುಮಾರ ಬೆಳಗಲಿ ಸರ್ಕಾರದಿಂದ ಪಡೆದ ಲಾಭಗಳೇನು? ತನ್ನ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವ ಪುರುಷೋತ್ತಮ ಬಿಳಿಮಲೆಯವರು ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ದುಡ್ಡು ಬೇಡ ಎಂದವರು ಗೊತ್ತಾ?
ಹೌದು, ಇವರಲ್ಲಿ ಹೆಚ್ಚಿನವರು ಅಕಾಡೆಮಿ-ಪ್ರಾಧಿಕಾರದ ಪದಾಧಿಕಾರಿಗಳಾಗಿ ನೇಮಕಗೊಂಡಿದ್ದಾರೆ. ಯಾವುದೇ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದಾಗ ವಿಶಾಲ ಅರ್ಥದಲ್ಲಿ ಸೈದ್ಧಾಂತಿಕ ಸಹಮತ ಹೊಂದಿರುವವರನ್ನು ಸಾಹಿತ್ಯ-ಸಾಂಸ್ಕೃತಿಕ ಸಂಘಟನೆಗಳಿಗೆ ನೇಮಕಮಾಡುತ್ತದೆ ಮತ್ತು ಆ ರೀತಿಯೇ ನೇಮಕ ಮಾಡಬೇಕು. ಇವರನ್ನು ಬಿಟ್ಟು ಭೈರಪ್ಪ, ಚಿದಾನಂದ ಮೂರ್ತಿ, ದೊಡ್ಡರಂಗೇಗೌಡರನ್ನು ನೇಮಕಮಾಡೋಕ್ಕಾಗುತ್ತಾ?
ಈ ರೀತಿ ನೇಮಕಗೊಂಡವರಲ್ಲಿ ಯಾರಾದರೂ ತಮ್ಮ ಸೈದ್ಧಾಂತಿಕ ಬದ್ದತೆಯಲ್ಲಿ ರಾಜಿ ಮಾಡಿಕೊಂಡ ಉದಾಹರಣೆಗಳಿದ್ದರೆ ತಿಳಿಸಿ. ಇವರಲ್ಲಿ ಯಾರಾದರೂ ತಮ್ಮ ಅರ್ಹತೆಯನ್ನು ಮೀರಿ ಸ್ಥಾನಮಾನ ಗಳಿಸಿದ್ದರೆ ಅದನ್ನೂ ತಿಳಿಸಿ.
ಪ್ರಗತಿಪರರು ಯಾರು ಎನ್ನುವ ವ್ಯಾಖ್ಯಾನದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ ಸ್ವಾಮಿ. ಬಹಳ ಸರಳವಾಗಿದೆ. ಪ್ರಗತಿವಿರೋಧಿಗಳಲ್ಲದವರೆಲ್ಲರೂ ಪ್ರಗತಿಪರರೇ ಆಗಿರುತ್ತಾರೆ. ಪ್ರಗತಿ ಎಂದರೆ ಏನು ಎನ್ನುವ ಉಡಾಫೆ ಪ್ರಶ್ನೆ ಕೇಳಿದರೆ ಅದಕ್ಕೆ ನನ್ನ ಉತ್ತರ: ಬಸವ,ಗಾಂಧಿ,ಅಂಬೇಡ್ಕರ್, ಲೋಹಿಯಾ ಹೇಳಿರುವ ಪ್ರಗತಿ.
ಪ್ರಗತಿಪರರು ಪರಿಪೂರ್ಣರೇ? ಖಂಡಿತ ಅಲ್ಲ, ಮನುಷ್ಯ ಮಾತ್ರರಾದ ಅವರಲ್ಲಿಯೂ ಸಣ್ಣಪುಟ್ಟ ಆಸೆ, ಲೋಭ, ಸ್ವಾರ್ಥ, ಅಸೂಯೆಗಳಿರಬಹುದು. ಇವರ ನಡುವೆ ಪರಸ್ಪರ ಆಂತರಿಕ ಭಿನ್ನಾಭಿಪ್ರಾಯಗಳೂ ಇರಬಹುದು. ಹೀಗಿದ್ದರೂ ಫ್ಯಾಸಿಸಮ್, ಸರ್ವಾಧಿಕಾರ ಮತ್ತು ಕೋಮುವಾದದ ಪ್ರಶ್ನೆಗಳು ಎದುರಾದಾಗ ಭಿನ್ನತೆಗಳನ್ನೆಲ್ಲವನ್ನೂ ಮರೆತು ಒಂದಾಗಿ ಇವರು ಕೈಕೈ ಹಿಡಿದು ಬೀದಿಗಿಳಿದಿದ್ದಾರೆ. ದೇಶ-ಕಾಲದ ಕರೆಗೆ ತಕ್ಕ ಹಾಗೆ ತಮ್ಮ ಶತ್ರುಗಳನ್ನು ಅವರು ಬದಲಾಯಿಸಿಕೊಂಡಿದ್ದಾರೆ, ಅಷ್ಟೆ.
ಕಾಲದ ಚಕ್ರ ಒಂದು ಸುತ್ತು ಮುಗಿಸಿದೆ. ಕಾಂಗ್ರೆಸ್ ಜಾಗದಲ್ಲಿ ಬಿಜೆಪಿ ಬಂದು ನಿಂತಿದೆ. ಹಳೆಯ ಸರ್ವಾಧಿಕಾರಿ ಇಂದಿರಾಗಾಂಧಿಯ ಸ್ಥಾನದಲ್ಲಿ ಕೋಮುವಾದದ ವಿಷಯೇರಿಸಿಕೊಂಡ ಹೊಸ ಸರ್ವಾಧಿಕಾರಿ ಅಬ್ಬರಿಸುತ್ತಿದ್ದಾರೆ.ಸರ್ವಾಧಿಕಾರಕ್ಕೆ ಬಲಿಯಾದವರೇ ಸರ್ವಾಧಿಕಾರಿಯ ಭಕ್ತರಾಗಿರುವ ವಿಚಿತ್ರ ಪರಿಸ್ಥಿತಿಯಲ್ಲಿ ‘’ಮೆದುಳು ತೊಳೆಯಲು’’ ನಮಗೆ ಇನ್ನಷ್ಟು ಸಂಖ್ಯೆಯ ಪ್ರಗತಿಪರರು ಬೇಕು. ಸಾಧ್ಯವಾದರೆ ಈ ಪ್ರಯತ್ನಕ್ಕೆ ಇದಕ್ಕೆ ಕೈಜೋಡಿಸಿ. ಅದು ಬಿಟ್ಟು ಅಡ್ಡಗೋಡೆಯ ಮೇಲೆ ಕೂತು ಅವರತ್ತ ಕಲ್ಲೆಸೆದು, ಅವರ ಬಗ್ಗೆ ಇನ್ನಷ್ಟು ಸಂಶಯಗಳನ್ನು ಹುಟ್ಟುಹಾಕಿ ನೈತಿಕವಾಗಿ ಅವರು ಕುಸಿಯುವಂತೆ ಮಾಡುವ ಜನದ್ರೋಹದ ಕೆಲಸ ಮಾಡಬೇಡಿ
ಪ್ರಗತಿಪರರನ್ನು ಹಂಗಿಸಿ, ನಿಂದಿಸಿ ಮೂಲೆಗೆ ತಳ್ಳುವ ಈ ಹುನ್ನಾರ ಪ್ರಾರಂಭಿಸಿದವರು ಬಲಪಂಥೀಯ ಪಡೆ. ಈಗ ನಮ್ಮವರೇ ಕೆಲವರು ಆ ಖೆಡ್ಡಾದಲ್ಲಿ ಬಿದ್ದಿದ್ದಾರೆ. ಅರಿವಿಲ್ಲದೆ ಖೆಡ್ಡಾದಲ್ಲಿ ಬಿದ್ದಿದ್ದರೆ ಅವರನ್ನೂ ಎತ್ತಿ ನಮ್ಮೊಂದಿಗೆ ಕರೆದೊಯ್ಯೋಣ. ಎಲ್ಲವೂ ಅರಿವಿದ್ದು ಆ ಕಡೆಯಿಂದ ಸುಫಾ ರಿ ಪಡೆದಿದ್ದರೆ ಅವರವರ ಕರ್ಮ ನಾವೇನು ಮಾಡಲಾಗದು. ನಾವು ಅಂಪೈರ್ ಗಳಲ್ಲ, ಆಟಗಾರರು. ಗೆಲುವು ನಮ್ಮದೇ.
(ಇಷ್ಟು ಬರೆಯಲು ಸ್ಪೂರ್ತಿ ನೀಡಿದ N A Mahamad Ismail ಪೋಸ್ಟ್ ಗೆ ಋಣಿಯಾಗಿದ್ದೇನೆ)
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಉಚಿತ ಲ್ಯಾಪ್ಟಾಪ್ ಪಡೆಯಲು ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿತ ಕಾರ್ಮಿಕರ ಮಕ್ಕಳು ಪ್ರಸಕ್ತ ಸಾಲಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ದಾವಣಗೆರೆ ಉಪ ವಿಭಾಗದ ಕಾರ್ಮಿಕ ಅಧಿಕಾರಿ ಇವರ ವ್ಯಾಪ್ತಿಯಲ್ಲಿ ನೋಂದಣಿಯಾಗಿರುವ ಕಾರ್ಮಿಕರು ಈ ಸೌಲಭ್ಯವನ್ನು ಪಡೆಯಬಹುದು. ಅರ್ಜಿ ನಮೂನೆಯನ್ನು ಸಂಬಂಧಿಸಿದ ಕಾರ್ಮಿಕ ನಿರೀಕ್ಷಕರ ಕಛೇರಿಯಿಂದ ಪಡೆದು ಅಗತ್ಯ ದಾಖಲೆಗಳೊಂದಿಗೆ ಕಾರ್ಮಿಕ ನಿರೀಕ್ಷಕರಿಗೆ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅಕ್ಟೋಬರ್ 11 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿಯವರ ಕಚೇರಿ ದೂ ಸಂ:08192-237332 ಸಂಪರ್ಕಿಸಲು ಕಾರ್ಮಿಕ ಅಧಿಕಾರಿ ಇಬ್ರಾಹಿಂ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ

ಸುದ್ದಿದಿನ ಡೆಸ್ಕ್ : ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನದಿ ನೀರು ಸಮಿತಿ ತೀರ್ಪಿನ ಕುರಿತು ಕಾನೂನು ತಜ್ಞರ ಜೊತೆ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ನಿನ್ನೆ ಹೇಳಿದ್ದಾರೆ.
ತಮಿಳುನಾಡಿಗೆ ನಾಳೆಯಿಂದ (ಸೆಪ್ಟಂಬರ್28) ಅಕ್ಟೋಬರ್ 15ರ ತನಕ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್ನಂತೆ ನೀರು ಹರಿಸುವಂತೆ, ಕಾವೇರಿ ನದಿ ನೀರು ಸಮಿತಿ ನಿನ್ನೆ ಕರ್ನಾಟಕಕ್ಕೆ ನಿರ್ದೇಶನ ನೀಡಿದೆ. ಕಾವೇರಿ ನದಿ ನೀರು ಸಮಿತಿ ವರ್ಚುವಲ್ ಮೂಲಕ ನಡೆದ ಸಭೆಯಲ್ಲಿ ಈ ನಿರ್ದೇಶನ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ

ಸುದ್ದಿದಿನ, ಬಳ್ಳಾರಿ : ಸಿರಿಗೇರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ಬಸವನಪೇಟೆ) ಮುಖ್ಯ ಗುರುಗಳಾದ ಶ್ರೀಮತಿ ಸುಮಂಗಳಾ ಮೇಟಿಯವರು 2023-24 ನೇ ಸಾಲಿನ ಬಳ್ಳಾರಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶಿಕ್ಷಕ ವೃತ್ತಿ ಧರ್ಮ ನೇ ತನ್ನ ಸರ್ವಸ್ವ ಎಂದು ತಿಳಿದುಕೊಂಡಂತಹ ಶ್ರೀಮತಿ ಸುಮಂಗಳಾ ಮೇಟಿಯವರು, ಶಿಕ್ಷಕ ವೃತ್ತಿಯಲ್ಲಿ ಉತ್ತಮ ಕರ್ತವ್ಯ ಹಾಗೂ ಸೇವೆಯನ್ನು ಸಲ್ಲಿಸಿದನ್ನು ಪರಿಗಣಿಸಿ ಈ ಹಿಂದೆಯೇ 2022-23 ನೇ ಸಾಲಿನ ಬಳ್ಳಾರಿ ಜಿಲ್ಲಾ ಮಟ್ಟದ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾಗಿದ್ದು, ಇವರ ಶಿಕ್ಷಣ ಕ್ಷೇತ್ರದಲ್ಲಿನ ಅಗಾಧವಾದ ಕರ್ತವ್ಯ ಮತ್ತು ಸೇವೆ ನಿಷ್ಠೆಯನ್ನು ಗುರುತಿಸಿದ ಶಾಲಾ ಶಿಕ್ಷಣ ಇಲಾಖೆ ಬಳ್ಳಾರಿ ವತಿಯಿಂದ 2023-24 ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಇದೇ ಸಂದರ್ಭದಲ್ಲಿ ಗ್ರಾಮಸ್ಥರು, ಸಮಸ್ತ ಶಿಕ್ಷಕರ ವರ್ಗದವರು, ಅತಿಥಿ ಶಿಕ್ಷಕರು, ಹಿತೈಷಿಗಳು, ಹಳೆಯ ವಿದ್ಯಾರ್ಥಿ ಬಳಗ, ಶಿಕ್ಷಣ ಪ್ರೇಮಿಗಳು, ಅಭಿಮಾನಿ ಬಳಗ,
ಮುಂತಾದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ1 day ago
ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ
-
ದಿನದ ಸುದ್ದಿ2 days ago
ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ : ಪೊಲೀಸ್ ಕಮೀಷನರ್ ದಯಾನಂದ್
-
ದಿನದ ಸುದ್ದಿ19 hours ago
ಉಚಿತ ಲ್ಯಾಪ್ಟಾಪ್ ಪಡೆಯಲು ಅರ್ಜಿ ಆಹ್ವಾನ
-
ದಿನದ ಸುದ್ದಿ1 day ago
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ