ಭಾವ ಭೈರಾಗಿ
ಕುರ್ಡ
- ಶಾಂತಾ ಜಯಾನಂದ್
ಯಾರಾದ್ರು ರಸ್ತೆಯಲ್ಲಿ ಸಡನ್ ಆಗಿ ಅಡ್ಡ ಬಂದ್ರೆ ಅಥವಾ ಅಪ್ಪಿ ತಪ್ಪಿ ಏನಾದ್ರೂ ಮಾಡಿದ್ರೆ, ಏ, ಕುರ್ಡ ಕಣ್ ಕಾಣೋಕಿಲ್ವಾ? ಎಂಬ ಮೊದಲಿಕೆಯ ಮಾತು ಎಲ್ಲೆಡೆ ಸರ್ವೇ ಸಾಮಾನ್ಯ ಅದನ್ನ ಬಹಳ ಸರಿ ಯೋಚಿಸ್ತೇನೆ ಮಾರ್ಕೆಟ್ನಲ್ಲೋ ಶಾಪಿಂಗ್ ನಲ್ಲೋ ಪಡ್ಡೆ ಹುಡುಗ್ರು ಡಿಕ್ಕಿ ಹೊಡ್ಕಂಡು ಹೋದ್ರೆ ಕಣ್ ಕಾಣಲ್ವಾ.
ಕುರುಡನ ಹಾಗೆ ನುಗ್ತ್ತಾನೆ ಎನ್ನುವಂತಹ ಮಾತಿದೆ. ಪಾಪ, ನಾನು ನೋಡ್ದಂಗೆ ನಿಜವಾದ ಕಣ್ಣಿಲ್ಲದವರೂ ಯಾರಿಗೂ ತೊಂದ್ರೆ ಕೊಡದೆ ಬರೀ ಶಬ್ಧಗಳನ್ನ ಗ್ರಹಿಸ್ತಾ ಕೋಲನ್ನ ಹಿಡಿದೂ, ಅಥವಾ ಅವರವರೇ ಕೈ ಹಿಡಿದೊ, ರಸ್ತೆ ದಾಟುತ್ತಾರೆ. ಯಾವುದೇ ರೀತಿಯ ತಲೆಹರಟೆಯಿಂದ ವರ್ತಿಸುವುದಿಲ್ಲ.
ಆದರೂ ಯಾರಾದರೂ ಈ ರೀತಿಯ ತಲೆಹರಟೆ, ತರಲೆಗಳನ್ನು ಮಾಡಿದಾಗ ಕುರ್ಡ ಕಣ್ ಕೊಟ್ಟಾ| ಅಂತಾನೊ ಆ ಕುರಡ ನನ್ನ ಮಗ, ಹಂಗ್ ಮಾಡ್ದಾ, ಹೀಂಗ್ ಮಾಡ್ದಾ, ಅಂತ ಮಾತುಗಳು.
ಹೌದು ಈ ಕುರುಡುತನ, ಎಂಬುದು ಹೀಗೇ? ಅಲ್ವಾ. ಹುಟ್ಟು ಕುರುಡ ಮಧ್ಯದಲ್ಲಿ ಯಾವುದೋ ಕಾರಣಕ್ಕಾಗಿ ಕುರುಡಾದವರೋ, ಯಾವುದೋ ಅಪಘಾತದಲ್ಲಿ ಕಣ್ಣು ಕಳೆದುಕೊಂಡವರು, ಬೆಂಕಿಯ ಆಘಾತ, ಕಡೆಗೆ ಸಕ್ಕರೆ ಕಾಯಿಲೆ ಹೆಚ್ಚಾಗಿ ಸಹ ಕಣ್ಣು ಕಳೆದುಕೊಂಡವರೊ, ಆದರೇ ಹುಟ್ಟು ಕುರುಡನ ಕಥೆ ಹೆಂಗೆ ಕತ್ತಲೊಳಗೆ ಕೈ ಆಡಿದಂತೆ, ಏನೂ ಇಲ್ಲ, ಶೂನ್ಯ, ಶೂನ್ಯ ಬರೀ ಶೂನ್ಯ, ದೇವರು ಏನೋ ಒಂದು ಸಿಕ್ಸ್ತ್ ಸೆನ್ಸ್ ಕೊಟ್ಟರ್ತಾನೋ, ಸ್ಪರ್ಶ ಜ್ಞಾನ, ಶಬ್ದಗ್ರಹಣ ವಾತಾವರಣದ ವ್ಯತ್ಯಾಸ, ಮುಂತದವುಗಳಿಂದ ಅಂತ ಸಂದರ್ಭವನ್ನು ನಿರ್ಧರಿಸಬೇಕಾಗುತ್ತದೆ.
ಹುಟ್ಟು ಕುರುಡರಿಗೆ ಪ್ರಪಂಚದ ಕಲ್ಪನೆಯೇ ಇರುವುದಿಲ್ಲ ಅಲ್ವಾ; ನಾನು ಕಲ್ಪನೆ ಮಾಡಿಕೊಂಡು ಕಣ್ಮುಚ್ಚಿ ಮನೆಯಲ್ಲಿ ಓಡಾಡಲು ಹೋಗಿ, ಮಂಚಕ್ಕೆ ಸರಿಯಾಗಿ ತಾಗಿ ಎಡವಿದ್ದು ಉಂಟು, ಮೂತಿ ಹೊಡೆದು ಹೋಗುವ ಹಾಗೆ ಈ ಕತ್ತಲು ಅಂದರೆ ಭಯ ಹುಟ್ಟಿಸುವಂತೆ, ಯಾವಾಗಲೂ ಕಿವಿ, ಅಲರ್ಟ್ ಆಗಿರಲೇಬೇಕು. ನಮಗೆ ತಿಳಿದ ಭಾಗ, ನಮ್ಮ ಮನೆ, ನಮ್ಮ ಕೊಠಡಿ, ಮುಂತಾದ ಕಡೆ, ಓಡಾಡಲೂ ಹೇಗೆ ಎಡವಿ ಬಿದ್ದು, ನಮಗೆ ಅಬ್ಭಾ, ಈ ಅಂಧರು ಹೇಗೆ ಓಡಾಡುತ್ತಾರೆ.
ಒಂದು ನಿಮಿಷ ಅವರ ಸ್ಥಾನದಲ್ಲಿ ನಿಂತು ಕಲ್ಪಿಸಿಕೊಳ್ಳಲು ಆಗುವುದಿಲ್ಲ. ನಾನು ಸಹ ಬಿಗಿಯಾಗಿ ಕಣ್ಮುಚ್ಚಿ ಶೂನ್ಯದಲ್ಲಿ ಕೈಯಾಡಿಸಿಕೊಂಡು ಓಡಾಡಿ ನೋಡಿದ್ದುಂಟು. ಇನ್ನೊಂದು ಈ ಪ್ರಾಣಿ ಗಳು ಕುರುಡಾದ್ರೆ ಏನ್ಮಾಡ್ತವೋ ಅಂತ ನಮ್ಮ ಮನೆ, ನಾಯಿಯನ್ನೇ ದಿಟ್ಟುಸುತ್ತೇನೆ. ಅಂಧ ಮಕ್ಕಳ ಆಶ್ರಮ ಅದು ಇದು ಅಂತ, ಬಹಳಷ್ಟು ಅಂಧ ಮಕ್ಕಳಶಾಲೆ ಎಲ್ಲಾ ಉಂಟು. ಆದರೆ, ನನಗನ್ನಿಸುತ್ತೆ ನಮ್ಮಗಳ ಜೊತೆಯೋ ಅವರನ್ನ ಬೆಳೆಸುತ್ತಾ ಮನೆಯವರೇ ಜವಾಬ್ದಾರಿ ಇರಿಸಿಕೊಂಡು ಏಕೆ ಒಟ್ಟಿಗೆ ಬಾಳ್ವೆ ಮಾಡಬಾರದು, ಇಲ್ಲಿ ಬಡವರ ಸಿರಿವಂತರ ಪ್ರಶ್ನೆ ಅಲ್ಲ.
ಬಡವರು ಬೇರೆ ಮಕ್ಕಳನ್ನು ಬಡತನ ಇದೆ ಎಂದು ಸಾಕುವುದಿಲ್ವೇ, ಹಾಗೇ, ಶಾಲೆಗೆ ಕಳಿಸಲಿ, ಏಕೆ ಹೀಗೆ, ಅನಾಥ ಆಶ್ರಮಕ್ಕೆ ಸೇರಿಸ್ತಾರೋ ತಿಳಿಯುವುದಿಲ್ಲ. ಅವರೇನೋ, ಅನಾಥರಲ್ಲವಲ್ಲ ಬೆಂಗಳೂರಿನ ಹಲವು ಬೀದಿಗಳಲ್ಲಿ (ಬೇರೆ ಬೇರೆ ಊರುಗಳಲ್ಲೂ ಸಹ ಇರಬಹುದು), ಮೈಕ್ ಇಟ್ಕೊಂಡು, ಹಾಡೇಳಿಕೊಂಡು ಪಾಪ ಒಂದು ಬೇರೆ ರೀತಿಯ ಬಿಕ್ಷೆ ಅನ್ನಿಸುತ್ತದೆ. ಹಾಡೇಳುತ್ತಾ ಇರುತ್ತಾರೆ.
ಯಾಕ್ರೀ ಹೆತ್ತವರೇ ಇಷ್ಟೇ ಬಡತನ ಇರಲಿ, ಶ್ರೀಮಂತಿಕೆ ಇರಲಿ, ನೀವು ಹೆತ್ತ ಮಕ್ಕಳನ್ನು ನೀವು ಸಾಕುವುದಿಲ್ವಾ? ಕುರುಡರಾದ ತಕ್ಷಣ ಈ ರೀತಿ ಏಕೆ ಆಶ್ರಮಕ್ಕೆ ಸೇರಿಸ್ತೀರಾ? ಅಂತ, ಗಟ್ಟಿಸಿ ಕೇಳಬೇಕೆನಿಸುತ್ತದೆ. ಹಾಗೆ ಕೈಲಾದಷ್ಟು ವೈದ್ಯರ ಸಹಾಯ ಪಡೆದು ಅವರಿಗೆ ದೃಷ್ಟಿ ಕೊಡಿಸಲು ಪ್ರಯತ್ನಸಿ ಅಂತ ಅನ್ನಬೇಕೆನಿಸುತ್ತದೆ.
ಜಗತ್ತಿನ ಪ್ರಕೃತಿ ಸೌಂದರ್ಯವಾದ “ಸ್ವಿಜ್ಜರ್ಲ್ಯಾಂಡ್” ಗೆ ಹೋಗಿದ್ದೆವು. ಪ್ರಕೃತಿ ಸೌಂದರ್ಯವನ್ನು ನೋಡು, ಮನಸ್ಸು ಗಾಳಿ ತುಂಬಿದ ಬೆಲೂನಿನಂತೆ ಹಾರಾಡುತ್ತಿತ್ತು ಸಲ್ವಾ ದೈವ ಸೃಷ್ಟಿಯೋ ಅಂತ, ಆ ಹಿಮಾಚ್ಛಾದಿತ ಪರ್ವತಗಳು ಸ್ವಲ್ಪ ಬಿಸಿಲಿಗೆ ಹೀಗೆ, ಯಾಕೋ ಸಡನ್ ಆಗಿ ಕುರುಡರ ನೆನಪಾಯ್ತು. ದೇವ್ರೆ, ಖಂಡಿತ, ಈ ಜಗತ್ತಿನಲ್ಲಿ ಕುರುಡರನ್ನು ಮಾತ್ರ ಸೃಷ್ಠಿಸಬೇಡಪ್ಪಾ – ದೇವ್ರೇ ಅಂತ ಕಾಣದ ದೇವರಲ್ಲಿ ಮೊರೆ ಇಟ್ಟಿದ್ದು ಸತ್ಯ, ನಾನು ಸಹ ಬೆಂಗಳೂರಿಗೆ ಬಂದ ತಕ್ಷಣ ನಾರಾಯಣ ನೇತ್ರಾಲಯಕ್ಕೆ ನೇತ್ರದಾನಕ್ಕೆ ಬರೆಸಿ ರಿಜಿಸ್ಟರ್ ಮಾಡಿ ಬಂದು ಒಂದು ನಿಟ್ಟುಸಿರಿಟ್ಟಿದ್ದಂತೂ ನಿಜ.
ಮಕ್ಕಳ ಕೈಯಲ್ಲಿ ಕಾರ್ಡನ್ನು ತೋರಿಸಿ, ನಾನು ಸತ್ತ ನಂತರ ದಯವಿಟ್ಟು ನನ್ನ ನೇತ್ರದಾನ ಮಾಡಿ ಎಂದು ಹೇಳಿದ್ದು ಅತ್ಯಂತ ಪ್ರಕೃತಿ ಪ್ರಿಯಳಾದ ನನಗೆ ಅದಕ್ಕೆಂದೇ ಬಹಳಷ್ಟು ಪ್ರವಾಸಗಳನ್ನು ಕೈಗೊಳ್ಳುವ ನನಗೆ ಆ ಸೌಂದರ್ಯದಲ್ಲಿ ಮೈಮರೆಯುವ ಹುಚ್ಚು. ಅಂಧರಿಗೆ ಹೇಗೆ, ಇದರ ಕಲ್ಪನೆಯನ್ನು ಹೇಳಲು ಸಾಧ್ಯವಿಲ್ಲ ಅಲ್ವಾ? ಅನ್ನಿಸುತ್ತದೆ. ಯಾವುದೇ ಕುಳಿ ಗಾಳಿ, ಪ್ರಕೃತಿ ಸುವಾಸನೆಯನ್ನು ಆಸ್ವಾದಿಸಿದರೂ ಆ ಕಲ್ಪನೆಯ ಚಿತ್ರ ಬರಲು ಸಾಧ್ಯವೇ ಇಲ್ಲ.
“ಕುರುಡ ಆನೆ ಮುಟ್ಟಿದಂತೆ” ಎಂಬ ಗಾದೆ ಮಾತು ಸತ್ಯ, ಇಲ್ಲಿ ಇನ್ನೊಂದು ಮಾತು ಅಂದ್ರೆ, ಇಷ್ಟು ಹುಟ್ಟು ಕುರುಡರ ಕಥೆ ಆದ್ರೆ, ಮಧ್ಯದಲ್ಲಿ ಅಪಘಾತದಲ್ಲೋ ಅಥವಾ ಆರೋಗ್ಯದ ಕಾರಣದಿಂದಲೋ ಕಣ್ಣು (ದೃಷ್ಠಿಹೀನ) ಹೋದರೆ, ಅವರು ಮೊದಲು ಕಂಡ, ಬೆಳಕು, ಕತ್ತಲೆ, ಸೂರ್ಯ, ಚಂದ್ರ, ನೀರು ಬಣ್ಣಗಳು ಎಲ್ಲವೂ ಸಹ ನೆನಪಿಗೆ ಬರುತ್ತದೆ ಅಲ್ವಾ? ನಾವು ಏನನ್ನಾದರೂ ಹೇಳಿದರೇ ಕಲ್ಪಿಸಿಕೊಳ್ಳುವಷ್ಟಾದರೂ, ಇರುತ್ತದೆ.
ಆದರೆ ಹುಟ್ಟು ಅಂಧಕಾರ ಬಹಳ ಭಯಂಕರ ಬಿಡ್ರಿ. ನ್ಯಾಯದೇವತೆಯು ಕಣ್ಣೆಗೆ ಬಟ್ಟೆ ಕಟ್ಟಿ ಅಂಧ ಕಾನೂನು ಅಂತಾರೆ. ಕಾನೂನು ಏನು ತಿಳಿಯದೇ ತೀರ್ಪು ಕೊಡುತ್ತೆ ಅಂತಾನಾ? ಇನ್ನು ಪ್ರೇಮ ರಾಗ, ನಮ್ಮ ಶೃಂಗಾರ ಸೌಂದರ್ಯಗಳಲ್ಲಂತೂ ಕಣ್ಣು ಸರಿಯಾಗಿ ಕಾಣದಿದ್ದರೇ, ಕನ್ನಡಕ ಬಂತು ಎಷ್ಟು ಸಂಶೋಧನೆಗಳನ್ನು ಮಾಡಿ, ಅವರ ದೃಷ್ಠಿ ದೋಷಕ್ಕೆ ಕಾರಣವಾದ ಮಸೂರ, ತೆಳು ಗಾಜು ಕಣ್ಣಿಗೆ ಹಾಕೇ ಇಲ್ಲ ಎನ್ನುವಂತಹ ಕನ್ನಡಕಗಳು ಬಂದವು.
ಅಬ್ಬಾ ಈಗ ಕನ್ನಡಕ ಇಲ್ಲ ಲೆನ್ಸ್ ಬಂತು. ಆ ಕಣ್ಣ ಗುಡ್ಡೆಗೆ ಲೆನ್ಸ್ ಹಾಕುವುದು ಮನಸ್ಸಿನ ವಿಜ್ಞಾನಿಗಳ ವೈದ್ಯ ತಂಡದ ಚಮತ್ಕಾರಕ್ಕೇ ತಲೆದೂಗಲೇ ಬೇಕು. ಹೋ ಈಗಂತೂ, 10 ನಿಮಿಷದಲ್ಲಿ ಲೇಸರ್ ಆಪರೇಷನ್, ಕಣ್ಣಿನ ರೆಟಿನಾವನ್ನೇ ಸರಿಪಡಿಸಿ ಹೋಗಿ ಆರಾಮವಾಗಿ ಹತ್ತು ನಿಮಿಷದಲ್ಲೇ ಓಡಾಡಿಕೊಂಡಿರುವಂತೆ ಮಾಡುತ್ತಾರೆ. ಗ್ರೇಟ್ ಅಲ್ವಾ? ನಿಜಕ್ಕೂ ಕಣ್ಣಿನ ವಿಷಯದಲ್ಲಿ ಏನೇನೋ ಅದ್ಭುತಗಳು ಬಂದಿವೆ. ಸತ್ತ ಮನುಷ್ಯನ ಕಣ್ಣನ್ನು ತೆಗೆದು, ಒಬ್ಬ ಅಂಧನಿಗೆ ಜೋಡಿಸಿ ಅವನಿಗೆ ದೃಷ್ಠ ಬರುವಂತೆ, ಮಾಡುವುದು, ವಿಜ್ಞಾನದ ಅದ್ಭುತಗಳಲ್ಲಿ ಒಂದು.
ವಯಸ್ಸಾದ ಮೇಲೆ ಸಹ ಕಣ್ಣು ಕಾಣುವಂತಹ ಅನೇಕ ಸಲ್ಯೂಷನ್ಗಳನ್ನು ವೈದ್ಯ ವಿಜ್ಞಾನಿಗಳ ಲೋಕ ಕಂಡು ಹಿಡಿದದ್ದು ಅದ್ಭುತವೇ ಸರಿ. ಇಲ್ಲಿ ನಮ್ಮ ನೇತ್ರ ತಜ್ಞ ಮೋದಿಯವರನ್ನು ಸಹ ನೆನೆಯಲೇ ಬೇಕು. ಎಷ್ಟು ಜನರಿಗೆ ದೃಷ್ಠಿ ನೀಡಿದ್ದಾರೋ, ಕಣ್ಣೆ ಎಲ್ಲಾ, ನಿನ್ನ ಕೈಗನ್ನಡಿಯಲ್ಲಿ, ಚೆಲುವೆಯ ಅಂದದ ಮೊಗಕೆ, ಕಣ್ಣು ಕಣ್ಣು ಕಲೆತಾಗ, ಹೀಗೆ ಕಣ್ಣಿನ ಬಗ್ಗೆ ಅನೇಕ ಹಾಡುಗಳನ್ನೇ ನೂರಾರು ಉದಾಹರಿಸಬಹುದಾಗಿದೆ.
ಕವಿಯ ಕಲ್ಪನೆಯಲ್ಲಿ ಮುಖದ ಚೆಲುವಿಗೆ ಕಣ್ಣೆ ಸಾಕು. ನಮ್ಮ ಡಿಂಡಿಮ ಕವಿಯು “ಕಮಲೇ ಕಮಲೋತ್ಪತ್ತಿಃ” ಎಂದು ಕಮಲದಂತಹ ಮುಖದಲ್ಲಿ ಉತ್ಪತ್ತಿಯಾದಂತಹ ಕಮಲಗಳು ಎಂಥ ಕಣ್ಣುಗಳು, ಎಂಬಂತಹ ಅರ್ಥ ಕೊಡುತ್ತದೆ. ಯಾವುದೇ ಕಾವ್ಯ ಓದುವಾಗ ಹೆಣ್ಣಿನ ಬಣ್ಣನೆ ಇದ್ದರೆ ಅದಕ್ಕೆ ಕಣ್ಣೇ ಕಾರಣ. ಇನ್ನು ಎಲ್ಲಾ ಭಾವನೆಗಳನ್ನು ಮನುಷ್ಯನು ತನ್ನ ಕಣ್ಣುಗಳಿಂದಲೇ ವ್ಯಕ್ತಪಡಿಸುವುದು.
ದುಃಖ, ಸಂತೋಷ, ಪ್ರೇಮ, ಕಾಮ, ತುಂಟಾಟ, ನವರಸಗಳನ್ನು ಸಹ ಕಣ್ಣಿನಿಂದಲೇ ವ್ಯಕ್ತಪಡಿಸಲು ಸಾಧ್ಯ ಅಲ್ಲವೇ? ಅಂತಹ ಕಣ್ಣೇ ಇಲ್ಲ ಅಂದ್ರೆ ಹೇಗಲ್ವಾ ದೇವರೇ ಅಂತ, ನಮ್ಮ ಕಣ್ಣಿನ ವೈದ್ಯರಿಗೆ, ನಿಜವಾಗ್ಲೂ ಎರಡು ಕೈ ಎತ್ತಿ ಮುಗಿಯಬೇಕು. ವೈದ್ಯರುಗಳು ಕಣ್ಣಿನ ಬಗ್ಗೆ ವಿಶೇಷವಾಗಿ ಓದಿ, ದೃಷ್ಠಿ ದಾನದಂತಹ ಅದ್ಭುತ ಚಮತ್ಕಾರದ ಆಪರೇಷನ್ ಮಾಡಿ ದೃಷ್ಠಿ ಬರುವಂತೆ ಮಾಡುತ್ತಾರೆ ಎಂದ್ರೆ ಅಬ್ಬಾ! ಮನುಷ್ಯನ ಬುದ್ದಿವಂತಿಕೆಗೆ ವೈದ್ಯ ಲೋಕಕ್ಕೆ ಭೇಷ್ ಅಂತ ಅನ್ನಲೇಬೇಕು. ವಯಸ್ಸಾದವರಿಗೆ ಕಣ್ಣಿನ ಪೊರೆ, ತೆಗೆದು ಮಾಡುವ ಆಪರೇಷನ್, ಕಣ್ಣಿನ ದೃಷ್ಠಿಯನ್ನು ಹೊಳಪು ಬರಿಸುವುದು, ಏನೀ ವಿಸ್ಮಯವೇ?
ನಾನು, ಮೊದಲು ಅಂದುಕೊಳ್ಳುತ್ತಾ ಇದ್ದೆ, ಪುಣ್ಯಾತ್ಮ ಅಲ್ವಾ? ಇನ್ನು ಹುಟ್ಟು ಅಂಧಕಾರದಲ್ಲಿರುವವರು ಎಲ್ಲಾ ಸ್ಪರ್ಶ ಜ್ಞಾನದಿಂದಲೇ ತಿಳಿಯಬೇಕಲ್ಲವೇ? ಅದಕ್ಕೆ ಓದು ಬರಹದ ಕಲ್ಪನೆಯಲ್ಲಿ ಬ್ರೈಲ್ ಲಿಪಿ ಕಂಡು ಹಿಡಿದ “ಲೂಯಿಸ್ ಬ್ರೈಲ್” ಫ್ರೆಂಚ್ ಶಿಕ್ಷಣ ತಜ್ಞರನ್ನು ಜ್ಞಾಪಿಸಿಕೊಳ್ಳಲೇ ಬೇಕು. ಅಲ್ಲಿಂದ ಆರಂಭವಾದ ಬ್ರೈಲ್ ಆಕ್ಟ್, ಕುರುಡರಿಗೆ ಉಪಯುಕ್ತವಾದಂತಹ ಎಷ್ಟೋ ಸಂಗತಿಗಳನ್ನು ಕಂಡುಹಿಡಿಯುತ್ತಲೇ ಇದ್ದಾರೆ.
ಅವರಿಗೆ ಕಣ್ಣು ಗ್ರಹಣ ಶಕ್ತಿ ಬಹಳ ಸೂಕ್ಷ್ಮವಾಗಿರುವುದರಿಂದ ಇರಬೇಕು. ಬಹಳಷ್ಟು ಕುರುಡರು ಸಂಗೀತಗಾರರಾಗಿ ತಮ್ಮ ಜೀವಿತವನ್ನು ಕಳೆದಿದ್ದಾರೆ ಎಂದು ಹೇಳಬಹುದು. ಹಿಂದೆ ಸಿಡುಬು ರೋಗದಂತಹ ಮಾರಕ (ಅಮ್ಮ) ಬಂದರೂ ಸಹ ಈ ದೃಷ್ಟಿ ಮಾಂಧ್ಯತೆ, ಬರುತ್ತಲಿತ್ತು. ಆ ಸಿಡುಬಿನ ಭೀಕರ ಪರಿಣಾಮದಿಂದ ಅಂಧಕಾರವಾಗ್ತ ಇತ್ತು. ಈಗ ಬಹಳಷ್ಟು ಅಂಧ ಮಕ್ಕಳು ನೃತ್ಯ ಪ್ರಕಾರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಏನೋ ಒಟ್ಟಿನಲ್ಲಿ ಅಂಧರ ಬಗ್ಗೆ ಯೋಚಿಸುತ್ತಿದ್ದರೆ, ಬಹಳಷ್ಟು ಚಿಂತನೆಗಳು ತಲೆಯಲ್ಲಿ ತುಂಬುತ್ತವೆ. ಅವರನ್ನು ಅಂಧರೆಂದು, ಗುರುತಿಸಲಿ, ಅವರಿಗೇ ಯಾರು ತೊಂದರೆ ಕೊಡದಿರಲಿ ಎಂಬ ಕಾರಣಕ್ಕಾಗಿಯೇ ಕಪ್ಪು ಗ್ಲಾಸಿನ ಕನ್ನಡಕವೇನೋ ಚಾಲ್ತಿಯಲ್ಲಿವೆ.
ಹಾಗೆ ಸ್ಪರ್ಶ ಜ್ಞಾನ ತಿಳಿಯಲು ವಾಕಿಂಗ್ ಸ್ಟಿಕ್ನಂತಹ ಕೋಲು ಸಹ ಇದೆ. ಹಾಗೇ ನಾವು ಸರ್ಯನ ಕಣ್ಣಿಗೆ ತಡೆಯೊಡ್ಡಲು, ಹಾಗೇ ಫ್ಯಾಶನ್ಗೆ ಸಹ ಕಪ್ಪು ಕನ್ನಡಕವನ್ನು ಧರಿಸುತ್ತೇವೆ. ಆಗ ಸಹ ಏನೋ ನಾನೂನೂ ಕುರ್ಡನಾ? ಅನ್ನುವ ಮಾತು, ನನಗೇ ಯಾರಾದರೂ ಆ ಮಾತೆತ್ತಿದರೆ ತುಂಬವೇ ಕೋಪ ಬರುತ್ತೆ. ಬಹಳಷ್ಟು ಕುರುಡರ ಬಗ್ಗೆ ಚಿತ್ರಗಳೂ ಸಹ ಬಂದಿವೆ. ಮನಮುಟ್ಟುವಷ್ಟು ಪರಿಣಾಮಕಾರಿಯಾದಂತಹ ಚಲನ ಚಿತ್ರಗಳನ್ನು ನೋಡಿದ್ದು, ನನಗೆ ನೆನಪಿಲ್ಲ.
ಹಾಂ, ಅಂದ ಹಾಗೆ ನನಗೆ ನೆನಪಾಯ್ತು ಪ್ರಾಣ , ಪಕ್ಷಿಗಳ ಕುರುಡಿನ ಬಗ್ಗೆ ಯೋಚಿಸ್ತಾ ಇದ್ದೆ. ನನಗೇ ತಿಳಿದಿಲ್ಲ. ಒಂದು ಘಟನೆಯಂತೂ ನೆನಪಿದೆ, ಒಂದ್ಸಾರಿ ನಮ್ಮ ಮನೆಯಲ್ಲಿ ಅಮ್ಮ ಮೀನು ಸಾರು ಮಾಡಿ ಇಟ್ಟಿದ್ರು, ಅದರ ವಾಸನೆಗೆ ಬೆಕ್ಕು ಬಂದಿತ್ತು, ಅಡಿಗೆ ಮನೆಯಲ್ಲಿ ಯಾರು ಇಲ್ಲದಾಗ, ಆ ಬೆಕ್ಕು ಹೋಗಿ ಆ ಸಾರಿನ ಪಾತ್ರೆಗೆ ಮುಖ ಹಾಕಿ ಸಾರು ಖಾಲಿ ಮಾಡಿದೆ. ಚಿಕ್ಕ ಬಾಯಿಯ ಪಾತ್ರೆ ಅದು ಪೂರ್ತಿ ಸಾರನ್ನು ತಿಂದ ನಂತರ ತಲೆ ಎತ್ತಲು ಹೋಗಿದೆ.
ಆಚೆ ಬರಲು ಆಗಿಲ್ಲ, ಪಾತ್ರೆ ಸಮೇತ ಹೊರಗೆ ಬಂದು ದಾಂಧಲೆ ಎಬ್ಬಿಸ್ತಾ ಇತ್ತು. ನಾವೆಲ್ಲಾ ಹೋದ ಗಾಬರಿಗೆ, ಸಿಕ್ಕ ಸಿಕ್ಕೆಲ್ಲಾ ಕಡೆ, ಓಡೋಗಿ ಗೋಡೆಗೆ ಡ್ಯಾಷ್ ಹೊಡೆದು, ಹೇಗ್ಹೇಗೋ ಓಡಾಡ್ತಾ ಇತ್ತು. ಕಡೇಗೆ ಅದನ್ನ ಹಿಡಿದು ಪಾತ್ರೆ ಹೊರ ತೆಗೆದು ಅದರ ಮುಖ ಕ್ಲೀನ್ ಮಾಡಿ ಬಿಡುವಾಗ ಸಾಕೋ ಸಾಕಾಯ್ತು. ಹೀಗೆ ಇನ್ನು ಕಣ್ಣಿಲ್ಲದ ಪ್ರಾಣ ಗಳ ಕಥೆ ಹೇಗೇ ಅಂತ.
ಅಂತೂ ಯಾವಗಲೂ ಪ್ರಕೃತಿಯ ಸೌಂದರ್ಯ, ಹೂವು ಬೆಟ್ಟ-ಗುಡ್ಡ, ಕಾಡು-ಮೇಡು, ಮೋಡ ಎಲ್ಲಾ ಬಗೆಯ ಪ್ರಕೃತಿಯ ವೈಚಿತ್ರ್ಯಗಳನ್ನು ಕಾಣುವಾಗ, ಆನಂದಿಸುವಾಗ, ಭಾವಾವೇಶಕ್ಕೆ ಒಳಗಾದಾಗ, ಇಲ್ಲಿ ಇನ್ನೊಂದು ವಿಷಯ ಪ್ರೀತಿ ಕುರುಡು ಅನ್ನುವಂತಹ ಮಾತಿದೆ. ಬಹುಶಃ ಈ ಮಾತು, ಏಕೆ ಬಂದಿರಬಹುದು ಅಂದ್ರೆ, ಪ್ರೀತಿ ಎಂಬುದು ಭಾವಕ್ಕೆ ಭಾವನೆಗಳಿಗೆ ಸಂಬಂಧಪಟ್ಟಿದ್ದು ಎನಿಸುತ್ತೆ. ಅದಕ್ಕೆ ಕಾಣುವಿಕೆ ಮುಖ್ಯವಲ್ಲ ಅನ್ನಿಸುತ್ತೆ. ಭಾವಕ್ಕೆ ಭಾವಸ್ಪಂದನೆ ಉಂಟಾಗಬೇಕು. ಆದ್ದರಿಂದ ಪ್ರೀತಿಯನ್ನು ಕುರುಡುತನಕ್ಕೆ “love is blind“ ಅಂತ ಹೇಳ್ತಾರೆ ಅಂತ ಕಾಣುತ್ತೆ ಒಟ್ಟಿನಲ್ಲಿ ನನ್ನದು ದೇವನಲ್ಲಿ ಒಂದೇ ಒಂದು ಮನಃಪೂರ್ವಕ ಪ್ರಾರ್ಥನೆ.
ಇಂತಹ ಸುಂದರ
ಸೃಷ್ಠಿಯ ಸೃಷ್ಠಿಸಿದ
ಹೇ, ಭಗವಂತಾ
ಅಂಧರ ಸೃಷ್ಠಿಸಬೇಡ
ಈ ಜಗದೊಳು…
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕವಿತೆ | ಮಣ್ಣ ಮಕ್ಕಳು
- ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ
ಮಣ್ಣ ಮಕ್ಕಳು ನಾವು
ಹಗಳಿರುಳೆನ್ನದೆ ಬೆವರು ಬಸಿದು
ಹಸಿದ ಹೊಟ್ಟೆಯಲಿ ಉಸಿರು ಹಿಡಿದವರು
ಕಸದಲಿ ರಸ ತೆಗದು ಬದುಕಿನುದ್ದಕ್ಕೂ ಉಳ್ಳವರ
ಕಸುಬಿಗೆ ಆಳಾದವರು ಸವಳು ನೀರಲಿ ಮೈತೊಳೆದು
ಚಿಂದಿ ಅಂಗಿಯಲಿ ಶಾಲೆಗೆ ದಾಖಲಾದವರು.
ಬರಿಗಾಲಲಿ ಕಾಡು ದಾರಿಯಲಿ ಮೈಲು ದೂರ ನಡೆದು
ನೆಗ್ಗಿಲ ಮುಳ್ಳು ತುಳಿದವರು ; ನಿಬ್ಬು ನೆಗ್ಗಿದ ಪೆನ್ನಿನಲಿ
ಹೆಸರು ಬರೆಯಲು ಕಲಿತವರು ಹರಿದ ಪಠ್ಯದಲಿ ಅಕ್ಷರ ಹುಡುಕಿ ಒಡೆದ ಪ್ಲೇಟಿನಲಿ ಬರೆದವರು.
ತೂತು ಬಿದ್ದ ಸೂರಿನಲಿ ಇಣುಕಿದ ಚುಕ್ಕಿ ಚಂದ್ರಮರ ನೋಡಿ
ವಿದ್ಯುತ್ ದೀಪದ ಕನಸು ಕಂಡವರು
ಮೋಸ ವಂಚನೆಗೆ ಬಗ್ಗದೆ ಶೋಷಣೆಗೆ ಸಿಡಿದವರು
ಮಣ್ಣ ಮಕ್ಕಳು ನಾವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬಿ.ಶ್ರೀನಿವಾಸ ಅವರ ‘ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು’ ಕೃತಿಯ ಕುರಿತು
ಸಂಡೂರಿನ ಜನರ ಮುದುಡಿದ ಅಂಗಿಯ ಮೇಲೆ,ಹೆಂಗಸರು ಮಾಸಿದ ಸೀರೆಯ ಸೆರಗಿನ ಮೇಲೆ ಬಿ.ಶ್ರೀನಿವಾಸ ಅಕ್ಷರ ಬಿಡಿಸುತ್ತಾರೆ.
ಅನ್ನದ ಅಗುಳು,ಧೂಳು,ಕಾಗದದ ಚೂರು,ಆಟಿಕೆ ಸಾಮಾನು,ಕಿಡ್ನಿ,ಈ ಸಣ್ಣವು ಗಳಲ್ಲಿ ಜೀವಸಾಕ್ಷಿ ಹುಡುಕುವ ಕಥೆಗಳಿವು.ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಅನ್ನದ ಅಗಳು,ಕಾಗದದ ಚೂರನ್ನು ಎತ್ತಿಹಿಡಿಯುವ ಗೆಳೆಯ ಶ್ರೀನಿವಾಸ *ಧೂಳನ್ನೇ ಅಕ್ಷರಗಳನ್ನಾಗಿಸಿದ ಲೇಖಕ.
- ಬಸವರಾಜ ಹೂಗಾರ
ಇಲ್ಲಿನ ಹುಚ್ಚರ ಕತೆಗಳನ್ನು ಓದುವಾಗ ಕುಂ.ವೀ.ಯವರ ಹಾಗೂ ಸಾದತ್ ಹಸನ್ ಮಾಂಟೋ ಅವರ ಹುಚ್ಚರ ಕತೆಗಳು ನೆನಪಾಗುತ್ತವೆ.ಇಲ್ಲಿನ ನತದೃಷ್ಟರ ಬದುಕನ್ನು ಹಿಡಿದಿಡಲು ಲೇಖಕರು ಕಂಡುಕೊಂಡಿರುವ ಅಭಿವ್ಯಕ್ತಿ ವಿನ್ಯಾಸ ವಿಶಿಷ್ಟವಾಗಿದೆ. ಬರಹಗಳು ದೀರ್ಘವಾಗಿಲ್ಲ. ಚುಟುಕಾಗಿವೆ. ಕವನಗಳೊ, ಗದ್ಯಗಳೊ ಎಂದು ಹೇಳಲಾಗದ ರೂಪದಲ್ಲಿವೆ.
ಗಾಢವಾದ ಅರ್ಥವನ್ನು ಕೆಲವೇ ಸಾಲುಗಳಲ್ಲಿ ವ್ಯಂಗ್ಯ ಮತ್ತು ವಿಡಂಬನೆಗಳಲ್ಲಿ ಹಿಡಿಯಲು ಯತ್ನಿಸುತ್ತವೆ.
ಇಲ್ಲಿರುವ ಲೋಕದ ನೋವಿಗೆ ಮಿಡಿವ ಸಂವೇದನೆ,ಓದುವ ಓದುಗರನ್ನೂ ಆವರಿಸಿಕೊಂಡು,ಚಿಂತನೆಗೆ ಹಚ್ಚುತ್ತದೆ.ಓದುತ್ತ,ಓದುತ್ತಾ ನಿಟ್ಟುಸಿರು ಹೊಮ್ಮುತ್ತದೆ.ಮನಸ್ಸು ಮಂಕಾಗುತ್ತದೆ.ಇಂತಹ ಬರಹಗಳನ್ನು ಕೊಟ್ಟಿರುವ ಶ್ರೀನಿವಾಸ ತಮ್ಮ ಅಂತಃಕರಣ ,ಚೂಪಾದ ಗ್ರಹಿಕೆ,ಆಳವಾದ ಸಂವೇದನೆಗಳನ್ನು ಇತರೆ ಪ್ರಕಾರಗಳಲ್ಲಿಯೂ ಪ್ರಕಟಿಸುವ ಜರೂರಿಯಿದೆ.
- ಡಾ.ರಹಮತ್ ತರೀಕೆರೆ
ಒಬ್ಬ ಮನುಷ್ಯ ಮತ್ತೊಬ್ಬನನ್ನು ಕಿತ್ತು ತಿನ್ನಬಾರದು.ಹೊಟ್ಟೆಪಾಡಿಗಾಗಿ ನಿರ್ವಹಿಸುವ ಪ್ರತಿ ಕೆಲಸವೂ ಸೃಜನಶೀಲವಾಗಿರಬೇಕು-ಎಂಬ ಧಾವಂತದಲ್ಲಿ ಹುಟ್ಟಿದ ಮನದ ಪ್ರಕ್ರಿಯೆಗಳಿಗೆಲ್ಲ ಇಲ್ಲಿ ಹರಡಿಕೊಂಡಿವೆ.
- ಬಿ.ಶ್ರೀನಿವಾಸ,ಕೃತಿ ಲೇಖಕ
ಖಾಲಿ ಗೋಡೆಯ ಗುರುತಿಲ್ಲದ ಚಿತ್ರಗಳು ನೊಂದವರ ಮನದಲ್ಲಿ ಅಲ್ಪಾವಧಿ ಗುರುತು ಮೂಡಿಸಬಹುದು ನಿಮ್ಮ ಈ ಪುಸ್ತಕ ಮತ್ತು ಅದರಲ್ಲಿರುವ ಎಷ್ಟೋ ವಿಚಾರಗಳು ನನ್ನನ್ನು ಡಿಸ್ಟರ್ಬ್ ಮಾಡಿವೆ. ಕೇವಲ ವಾಟ್ಸಾಪ್ ಲೈನ್ ಸಾಕಾಗಲ್ಲ ಎದುರುಗಡೆ ಕುಳಿತು ಇನ್ನು ಹೆಚ್ಚು ತಿಳಿದುಕೊಳ್ಳಬೇಕೇನಿಸುತ್ತದೆ. ಸಂಡೂರಿನ ದಾರುಣ ಚಿತ್ರಗಳನ್ನು,ಕೋರ್ಟಿನ ಚಿತ್ರಗಳನ್ನು,ಬದುಕಿನ ಚಿತ್ರಗಳನ್ನು ಕಣ್ಣಿಗೆ ರಾಚುವಂತೆ ಮೂಡಿಸಿದ್ದೀರಿ.
ಸಾವಿಗಿಂತ ಹಸಿವು ಬಹಳ ಕ್ರೂರಿ ಎನ್ನುವುದು: ನೋವಿನ ಬದಲು ಹಸಿವಿನ ಏಟುಗಳು ಬೀಳಬೇಕಿತ್ತು ಎನ್ನುವ ಸಾಲುಗಳಂತೂ Geographical Hungrey ಪುಸ್ತಕ ನೆನಪಿಸುತ್ತವೆ. ಸೊಂಡೂರಿನ ಚಿತ್ರಗಳ ಮೂಡಿಸಿದೆ ಗಾಢ ವಿಷಾದತೆ, ನನ್ನನ್ನು ಹೊರಬರಲು ಬಿಡುತ್ತಿಲ್ಲ.
“ಉಳ್ಳವರು ಹೊತ್ತ ಮೂಟೆಗಳಲ್ಲಿ ಬಡವರ ಹಸಿವಿನದ್ದೇ ಭಾರ”ಇವೆಲ್ಲ ಹಸಿವನ್ನು ಅನುಭವಿಸಿದವರಿಗೆ ಮಾತ್ರ ಸರಿಯಾಗಿ ಅರ್ಥವಾಗುವ ಸಾಲುಗಳು.
ಇನ್ನು ,ಕೋರ್ಟಿನ ಚಿತ್ರಗಳು, ಎಷ್ಟು ಜನ ಇರ್ತಾರೆ ಇವನ್ನೆಲ್ಲ ಸೂಕ್ಷ್ಮ ವಾಗಿ ತಿಳಿದುಕೊಳ್ಳುವವರು ?
ಶಾಲೆ ಹಿಂದೆ ತಿರುಗಬಾರದು ಕೋರ್ಟ್ ಕಚೇರಿ ಮುಂದೆ ತಿರುಗಬಾರದು ಎಂದು ನಮ್ಮ ಜನಪದರು ಹೇಳ್ವ ಮಾತು ಎಷ್ಟೋ ಸಲ ಸತ್ಯ ಎನಿಸುತ್ತದೆ.
ನೀವು ಹಿಡಿದಿಟ್ಟ ಬದುಕಿನ ಚಿತ್ರಗಳಲ್ಲಿನ “ಶವಪೆಟ್ಟಿಗೆ ಸಣ್ಣದಿದ್ದಷ್ಟು ಹೊರುವುದು ಬಹಳ ಕಷ್ಟ “ಎಂಬ ಮಾತಂತೂ ಚಿಕ್ಕಮಕ್ಕಳ ತಂದೆತಾಯಿಯರ ಕಣ್ಣಲ್ಲಿ ನೀರು ತರಿಸುವುದು.
ತಲೆ ಮ್ಯಾಲೆ ಮಲ ಸುರುವಿಕೊಂಡೆವಲ್ಲ ಸರ್ ಅವತ್ತೇ… ನಾವ್ ಹುಟ್ಟಿದ್ದು ಎನ್ನುವ ಸವಣೂರಿನ ಭಂಗಿಯ ಮಾತನ್ನು ಎಷ್ಟು ಅರ್ಥಗರ್ಭಿತವಾಗಿ ಸೋ ಕಾಲ್ಡ್ ಸೊಸೈಟಿಗೆ ಮುಟ್ಟಿ ನೋಡಿಕೊಳ್ಳುವಂತೆ ಬರೆದಿದ್ದೀರಿ. ಆಕೆ ಏನನ್ನೋ ಆಯ್ಕೆ ಮಾಡಿಕೊಂಡಿದ್ದಾಳೆ ಎಂಬ ವಿಚಾರಗಳು ಕೇವಲ ವಿಚಾರಗಳಲ್ಲ ,ಬದುಕಿನ ಸತ್ಯ ಚಿತ್ರಣಗಳು ದಿನ ನಿತ್ಯ ನಮ್ಮ ನಡುವೆ ನಡೆಯುವಂತವು.ಅವನ್ನು ಕಾಣುವಂತ ದೃಷ್ಟಿ ಇದ್ದವರಿಗೆ ಮಾತ್ರ ಇವು ಕಾಣುತ್ತವೆ ಸರ್ .
ನಿಮ್ಮ ನೈಜ ದೃಷ್ಟಿಗೆ ದನ್ಯವಾದಗಳು ಸರ್, ಉಳಿದದ್ದು ಎದುರು ಬದುರು ಕುಳಿತು ಮಾತಾಡೋಣ
- ಡಾ.ರಾಮಚಂದ್ರ ಹಂಸನೂರು, ಬೆಟಗೇರಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಅಂತಃಕರಣೆಯ ಹುಡುಕುತ್ತಾ..
- ಬಿ.ಶ್ರೀನಿವಾಸ
ಒಂದು ಊರಿನ ಮೌನ ಅರ್ಥವಾಗಬೇಕಾದರೆ, ದುಃಖ ಅರ್ಥವಾಗಬೇಕಾದರೆ ನಾವು ಏನನ್ನು ಮಾಡಬೇಕು? ನಾವು ಹೇಗೆ ಬದುಕಬೇಕು? ಗಾಯಗೊಂಡ ಬೆಟ್ಟ-ಗುಡ್ಡ ,ನದಿ ತೊರೆಗಳ ಬತ್ತಿಹೋದ ನೆಲದ ಕಣ್ಣಿಂದ ಪ್ರಾಣಿ-ಪಕ್ಷಿಗಳ ಆ ದೈನೇಸಿ ನೋಟಗಳಿಂದ ತಪ್ಪಿಸಿಕೊಳ್ಳುವುದಾದರೂ ಹೇಗೆ? ಪ್ರೀತಿ ,ಸಹಾನುಭೂತಿ ಗಳನ್ನು ಕಳೆದುಕೊಂಡವರು ಮಾತ್ರ ನಮ್ಮ ಸುತ್ತಮುತ್ತಲ ಬದುಕು ನರಕ ಸದೃಶವಾಗಿದ್ದರೂ ನೆಮ್ಮದಿಯಿಂದ ಉಣ್ಣ ಬಲ್ಲರು. ನಿದ್ರಿಸಬಲ್ಲರು, ಬರೆಯಬಲ್ಲರು.
ಬಳ್ಳಾರಿ ಜಿಲ್ಲೆಯ ಸೊಂಡೂರು ಮತ್ತು ಸುತ್ತಮುತ್ತಲಿನ ಪ್ರದೇಶದ ಬಹುತೇಕ ಹಳ್ಳಿಗಳು ರೋಗಗ್ರಸ್ತ ಪೀಡಿತರಂತೆ ಕಾಣುತ್ತಿವೆ .ಕಳೆದ ದಶಕದ ಅವಧಿಯೊಂದರಲ್ಲಿ ನಡೆದ ಗಣಿಗಾರಿಕೆಯಿಂದಾಗಿ ಇಡೀ ಪ್ರದೇಶ ಶಾಶ್ವತ ಬರಪೀಡಿತ ಪ್ರದೇಶವಾಗಿ ಬಿಟ್ಟಿದೆ. ಅದಿರು ಸಾಗಾಣಿಕೆಯ ಹೆಚ್ಚಳದಿಂದಾಗಿ ಕಾರ್ಬನ್ ಡೈಯಾಕ್ಸೈಡ್ ಆಸ್ಫೋಟಿಸಿದೆ. ಅಪರೂಪದ ಗಿಡ-ಮರಗಳು, ಪಕ್ಷಿಗಳು ,ಅಳಿವಿನಂಚಿಗೆ ತಳ್ಳಲ್ಪಟ್ಟಿವೆ.
ಶಾಲೆಗಳು ಮಕ್ಕಳಿಲ್ಲದೆ ಮುಚ್ಚಲ್ಪಟ್ಟವು. ಅದಿರು ಹೊತ್ತ ಲಾರಿಗಳಲ್ಲಿ ಮಕ್ಕಳ ಅಕ್ಷರಗಳನ್ನು ತುಂಬಿ ಕಳುಹಿಸಲಾಯಿತು. ಜನರು ಇಂತಹ ಬದುಕಿಗೆ ಹೊಂದಿಕೊಳ್ಳದೆ ಅನ್ಯ ಮಾರ್ಗವೇ ಇರಲಿಲ್ಲ. ಸತತ ಒಂದೂವರೆ ದಶಕಕ್ಕೂ ಹೆಚ್ಚು ಕಾಲ ನಡೆದ ಗಣಿಗಾರಿಕೆಯಿಂದಾಗಿ ಜನರ ಸಾಕ್ಷರತೆಯ ಪ್ರಮಾಣ ಮತ್ತು ಜೀವನಾಯುಷ್ಯ ಪ್ರಮಾಣ ಪಾತಾಳಕ್ಕೆ ಕುಸಿದಿದೆ . ರಕ್ತಹೀನತೆಯಿಂದ ಬಳಲುವ ಮಹಿಳೆಯರ ಸಂಖ್ಯೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಗಿಂತಲೂ ಜಾಸ್ತಿಯಾಗಿದೆ. 5 ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣವು ಅಧಿಕವಾಗಿದೆ.
ಇಲ್ಲಿನ ಸಂಪನ್ಮೂಲ ಇರುವುದೇ ತಮ್ಮ ಭೋಗ ವಿಲಾಸಕ್ಕೆ ಎಂದು ರಾಜಕೀಯವರ್ಗ,ಉದ್ಯಮಿಗಳು ಮತ್ತು ಕೆಲ ಆಡಳಿತಶಾಹಿ ಅಧಿಕಾರಿಗಳು ತಿಳಿದುಕೊಂಡಿದ್ದರು ಬಳ್ಳಾರಿ ಜಿಲ್ಲೆ ಇರುವುದೇ ಲೋಲುಪತೆ ಗೋಸ್ಕರ ಇಲ್ಲಿ ಹಣವೊಂದಿದ್ದರೆ ಏನೆಲ್ಲಾ ಸಾಧಿಸಬಹುದು ಮತಗಳನ್ನು ಮತದಾರರನ್ನು ಕೊಂಡುಕೊಳ್ಳಬಹುದು, ರಾಜಕೀಯ ಚುನಾವಣಾ ಪ್ರಚಾರಕ್ಕೆ ದಿನವೊಂದಕ್ಕೆ ಲಕ್ಷದಂತೆ ತಿಂಗಳುಗಟ್ಟಲೆ ಪ್ರಚಾರ ಮಾಡಿದ ಸಿನಿತಾರೆಯರಿಗೇನೂ ಕಡಿಮೆ ಇಲ್ಲ.ಸಂಪನ್ಮೂಲಗಳ ಹಗಲು ದರೋಡೆ ರಾಜಾರೋಷವಾಗಿ ನಡೆದುಹೋಯಿತು.
ಈ ಊರುಗಳಲ್ಲಿ ಬುಡುಬುಡುಕಿಯವರಿದ್ದರು, ಹಗಲುವೇಷಗಾರರು, ನಕ್ಕುನಗಿಸುವ ಹಾಡುಗಾರರು, ಬಯಲಾಟದವರು,ಕುರ್ರಮಾಮುಡು ವಸ್ತುನ್ನಾಡು…ಟಿಮ್ ಟಿಮ್….ಎನ್ನುತ್ತ ಬರುವವರು,ಗಿಣಿಶಾಸ್ತ್ರ ಹೇಳುವವರು ,ಬಣ್ಣಬಣ್ಣದ ಹರಳು ಮಾರುವ ಮಹಾ ಗಟ್ಟಿಗಿತ್ತಿಯರು, ಕಾಡಿನ ಗರ್ಭ ಹೊಕ್ಕು ಒಣ ಮರದ ಕಟ್ಟಿಗೆ ತಂದು, ಹೊತ್ತು ಮಾರಿ ಜೀವಿಸುವ ಲಂಬಾಣಿ ಯಾಡಿಗಳಿದ್ದರು. ಜೊತೆಗೆ ಅವರ ಉಡಿಗಳಲ್ಲಿ ಕಾರಿ, ಕವಳಿ,ಪುಟ್ಲಾಸು, ಬಿಕ್ಕಿ ಹಣ್ಣಿನಂತಹ ಹಣ್ಣುಗಳು ಇರುತ್ತಿದ್ದವು.
ಆಹಾರ ಸಂಪಾದನೆಯ ಬೇರೆ ಮೂಲಗಳೇ ಗೊತ್ತಿಲ್ಲದ ಇವರಿಗೆ ಭಿಕ್ಷೆಯೊಂದೇ ಉಳಿದಿರುವ ಮಾರ್ಗ. ಇವರುಗಳೆಲ್ಲಾ ಸಮಾಜದ ಕಣ್ಣಿನಲ್ಲಿ ಅಪರಾಧಿಗಳಂತೆ ಕಾಣುತ್ತಿರುವುದು ಪರಿಸ್ಥಿತಿಯ ವ್ಯಂಗ್ಯ .ಇವರನ್ನು ಇವರ ಕಲೆಯನ್ನು ಗೌರವಿಸುವ ಒಂದು ಸಮುದಾಯವೇ ನಾಶವಾಗಿಹೋಯಿತು.ರೊಕ್ಕಾ ಕೊಟ್ಟರೆ ಏನು ಬೇಕಾದುದನ್ನು ಪಡೆಯಬಹುದೆಂಬ ಅಹಂ-ಭಾವಹೀನ ಮನುಷ್ಯರನ್ನು ಸೃಷ್ಟಿಸುತ್ತಾ ನಡೆದಿದೆ.
ಸೊಂಡೂರು -ಬಳ್ಳಾರಿ ಜಿಲ್ಲೆಯ ಮಲೆನಾಡು .ಪುಟ್ಟ ಕಾಶ್ಮೀರ. ಬೆಟ್ಟ ಗುಡ್ಡಗಳಿಂದ ಆವೃತವಾದ ಸುಂದರನಾಡು .ಅತಿ ಫಲವತ್ತಾದ ಮಣ್ಣು ತುಂಬಿದ ನೆಲ. ಜಲಮೂಲಗಳುಳ್ಳ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ, ಸೊಂಡೂರಿನ ಸುತ್ತಮುತ್ತ ಸುಮಾರು 40 ಕಿಲೋಮೀಟರ್ ಉದ್ದದ, 15 ಕಿಲೋಮೀಟರುಗಳಷ್ಟು ಅಗಲದ ಬೆಟ್ಟಗಳಲ್ಲಿ ಕಬ್ಬಿಣ, ತಾಮ್ರ ಮತ್ತು ಮ್ಯಾಂಗನೀಸ್ ಅದಿರಿನ ಗಣಿಗಳಿವೆ. ಇಲ್ಲಿ ದೊರೆಯುವ ಹೆಮಟೈಟ್ ಉತ್ತಮ ದರ್ಜೆಯ ಕಬ್ಬಿಣದ ಅದಿರು. ಹಾಗೆಯೇ ಮ್ಯಾಂಗನೀಸ್ ಕೂಡ ಡೇರಸ್ ಫಿಲೈಟ್ ಎಂಬ ಕಲ್ಲುಗಳಲ್ಲಿ ಹೇರಳವಾಗಿ ದೊರೆಯುತ್ತದೆ.
ಇದೇ ರೀತಿಯ ಸಂಪತ್ತು ಬೇರೆ ಕಡೆಗಳಲ್ಲಿ ಸಿಗುವುದಿಲ್ಲ ಎಂದಲ್ಲ. ವಿಶ್ವದರ್ಜೆಯ ಶ್ರೇಷ್ಠ ಮಟ್ಟದ ಮ್ಯಾಂಗನೀಸ್ ಅದಿರಿನ ನಿಕ್ಷೇಪಗಳು ಸುಬ್ರಾಯನಹಳ್ಳಿ ,ರಾಮಘಡಗಳಂತಹ ಹಳ್ಳಿಗಳ ಶಿಖರಗಳಲ್ಲಿ ದೊರೆಯುತ್ತವೆ. ಈ ಅದಿರಿನ ವಿಶೇಷವೆಂದರೆ ಬಹುತೇಕ ಅದಿರುಗಳಲ್ಲಿ ಸೇರಿಹೋಗಿರುವ ಫಾಸ್ಪೇಟ್ ಮತ್ತು ಸಲ್ಫರ ನಿಗದಿತ ಅಂಶಕ್ಕಿಂತ ಕಡಿಮೆ ಇರುವುದರಿಂದ ಇಲ್ಲಿನ ಮ್ಯಾಂಗನೀಸ್ ವಿಶ್ವ ಪ್ರಸಿದ್ಧವಾಗಿದೆ ಹಾಗಾಗಿ ಇಲ್ಲಿನ ಅದಿರಿಗೆ ವಿಶೇಷ ಬೇಡಿಕೆ.
ಬಳ್ಳಾರಿ ಜಿಲ್ಲೆಯ ಸೊಂಡೂರು ಕೇವಲ ಒಂದು ಊರು,ಪ್ರದೇಶ ಆಗಿರಬಹುದು .ಆದರೆ ಆತ ಊರಿನ ದುರಂತ ಇಡೀ ಪ್ರಪಂಚವನ್ನೇ ಪ್ರತಿನಿಧಿಸುವುದರ ಸಂಕೇತ. ಗಣಿಗಾರಿಕೆ ಆರಂಭವಾದಾಗಲೇ ಊರಿನ ಅವನತಿಯ ಆರಂಭವಾಯಿತು. ಯಥೇಚ್ಛವಾಗಿ ಗಣಿಗಾರಿಕೆಗೆ ಸರ್ಕಾರವೇ ಅನುಮತಿ ನೀಡುವಾಗ ಅದರ ಹೆಸರಿನಲ್ಲಿ ರಾಜಕಾರಣಿಗಳು ಅಕ್ರಮ ಗಣಿಗಾರಿಕೆ ನಡೆಸುವಾಗಲಂತೂ ಊರು ಆಹುತಿಯಾಗಿ ಬಿಟ್ಟಿತ್ತು. ಮನುಷ್ಯರು ಕೂಲಿಯ ಯಂತ್ರಗಳಾಗಿ ಹೋದರು.
ಮನುಷ್ಯನೇ ಸಂಶೋಧಿಸಿದ ಮೂಲ ಕಸುಬುಗಳಾದ ಕೃಷಿ ,ಬಡಗಿತನ, ಕ್ರೀಡೆ ಹಾಗೂ ಮೈಥುನಗಳು ಸಹ ಕೇವಲ ಯಾಂತ್ರಿಕವೆಂಬಂತೆ ಆಗಿಹೋದವು.ಎಷ್ಟೋ ದಿನಗಟ್ಟಲೆ,ತಿಂಗಳುಗಟ್ಟಲೆ, ಗಣಿಗಾರಿಕೆ ಬೆಟ್ಟಗಳ ತುತ್ತತುದಿಯಲ್ಲಿ ನಡೆಯುತ್ತಿತ್ತು.ಕೂಲಿಯವರೂ ಅಷ್ಟೂ ದಿನಗಳ ಕಾಲ ಅಲ್ಲಿಯೇ ಇರಬೇಕಾಗುತ್ತಿತ್ತು. ಕೂಲಿಯ ಹೆಣ್ಣು ಗಂಡುಗಳು ಅದಿರಿನ ನಿಕ್ಷೇಪದ ಬಯಲಿನಲ್ಲಿಯೇ ಮೈಥುನಕ್ಕಿಳಿದುಬಿಡುತ್ತಿದ್ದರು.ಮಕ್ಕಳು ಉಣ್ಣುವ ಅನ್ನದಲ್ಲಿ ಕೆಂಪುಧೂಳು ಸೇರಿಸಿಯೇ ಉಣ್ಣಬೇಕಾಗುತ್ತತ್ತು. ಕಂಟೇನರುಗಳಲ್ಲಿಯೇಇವರ ಜೀವನ ಮುಗಿದುಹೋಗಿರುತ್ತಿತ್ತು.ಮನುಷ್ಯ ಹೀಗೂ ಬದುಕಬಲ್ಲ ಎಂಬುದನ್ನು ಯಾರೂ ಕೂಡ ಯೋಚಿಸಲಿಲ್ಲ.
ಗಣಿ ಸಾವ್ಕಾರಗಳು ಸಾಮಾನ್ಯ ಜನರ ಕಣ್ಣಿಗೆ ಇಂದಿಗೂ ವೈಭೋಗದ ತುಣುಕುಗಳ ಹಾಗೆ ಕಾಣಿಸುತ್ತಿದ್ದಾರೆ. ಜನರನ್ನು ,ಅವರ ಗಮನವನ್ನು ಬೇರೆಡೆಗೆ ಸೆಳೆಯದಂತೆ ಎಷ್ಟು ಪ್ರಯತ್ನಗಳು ನಡೆದಿರುತ್ತವೆ ಎಂದರೆ, ಊರಿನಲ್ಲಿ ಎಲೆಕ್ಷನ್ ಇರಲಿ ,ಇಲ್ಲದಿರಲಿ ,ಧಣಿ- ರಾಜಕಾರಣಿಯ ವಿವಿಧ ರೀತಿಯ ಬಣ್ಣಬಣ್ಣದ ಕಟೌಟುಗಳು ದಾರಿಯುದ್ದಕ್ಕೂ ರಾರಾಜಿಸುತ್ತವೆ. ಪ್ರತಿವಾರವೂ ಕಟೌಟ್ಗಳು ಬದಲಾಗುತ್ತಲೇ ಇರುತ್ತದೆ.
ಇನ್ನು ಕೆಲ ಸಾಹುಕಾರ ಗಳಂತೂ ತಾವೇ ಆಧುನಿಕ ಶ್ರೀ ಕೃಷ್ಣದೇವರಾಯ ಎಂದು ಭಾವಿಸಿ ,ಅವನಂತೆಯೇ ವೇಷಧರಿಸಿ ನಿಂತು ಬೃಹತ್ ಕಟೌಟುಗಳನ್ನು ನಗರದ ವಿವಿಧ ಕಡೆಗಳಲ್ಲಿ ನಿಲ್ಲಿಸಲಾಯಿತು.ಬಳ್ಳಾರಿಯ ಗಣಿಧಣಿಗಳದ್ದೂ ಇನ್ನೊಂದು ರೀತಿ.ಮುಂಜಾನೆಯ ಟಿಫನ್ನಿಗೆ ಬೆಂಗಳೂರಿನ ಎಂ.ಟಿ.ಆರ್.ಹೋಟೆಲ್ಲಿಗೆ ಹೆಲಿಕಾಪ್ಟರ್ ನಲ್ಲಿ ಹೋದರೆ,ಅದಕ್ಕೂ ಮುನ್ನ ಹೆಲಿಕಾಪ್ಟರ್ ನಲ್ಲಿ ಹೈದರಾಬಾದ್ ವರೆಗೂ ವಾಕಿಂಗ್ ಹೋಗುವವರಿದ್ದರು.ವಿಮಾನದಲ್ಲಿ ಮಧ್ಯಾನ್ಹದ ಊಟಕ್ಕೆ ಬೊಂಬಾಯಿಗೆ ಹೋಗುತ್ತಿದ್ದರು.ರಾತ್ರಿ ಮತ್ತೆಲ್ಲಿಗೋ…!ಎಷ್ಟೋ ಜನ ಸಿನಿಮಾದವರು ರಾತ್ರೋರಾತ್ರಿ ಬಂದುಹೋಗುವುದನ್ನು ನೋಡಿದವರು ಇದ್ದರು.
ಲೋಲುಪತೆಗೆ ಜನರ ಬದುಕನ್ನೆ ಆಹುತಿ ತೆಗೆದುಕೊಂಡ ಧಣಿಗಳು,ಕೊನೆಗೆ ಜನರು ತಮ್ಮ ಕಡೆಗೆ ದೃಷ್ಟಿ ಹರಿಸಲೆಂದು ಸದಾ ಒಂದಿಲ್ಲೊಂದು ಸುದ್ದಿಯಿಂದ ಜನರನ್ನು ಭ್ರಮಾಲೋಕದಲ್ಲಿ ತಿರುಗುವಂತೆ ನೋಡಿಕೊಂಡರು.”ಸಾಮೂಹಿಕ ಮದುವೆ”ಗಳಂತಹ ಕೃತ್ರಿಮ ಕಾರ್ಯಕ್ರಮಗಳಿಗೆ ಕೈ ಹಾಕಿದರು.ಆ ಮೂಲಕ ಅಲ್ಲಿ ಬಂದ ವಧು-ವರರಿಗೆ ತಾಳಿ- ಬಟ್ಟೆ ಕೊಡುವುದರ ಮೂಲಕ “ದಾನಶೂರ”ರು ಎನಿಸಿಕೊಂಡರು.ಆದರೆ ಇಂತಹ ವಿವಾಹಗಳು ಹೆಸರಿನಲ್ಲಿ ಜನರು ಪ್ರಶ್ನೆ ಕೇಳುವುದನ್ನು,ಆಲೋಚನೆಯನ್ನೆ ಮಾಡದಿರುವ ಹಾಗೆ,ಅರ್ಥಮಾಡಿಕೊಳ್ಳುವ ಅವರು ಗುಣವನ್ನೆ ನಾಶಪಡಿಸಲಾಯಿತು.ಇಂತಹ ಗಣಿಧಣಿಗಳ ಭಿಕ್ಷೆಗೆ ಕೆಲ ಮಠಾಧೀಶರು ಕೈಚಾಚಿದರು.
ಜನರ ಬದುಕು ಕುಸಿಯಲು ಎಷ್ಟೊಂದು ಜನ ಒಂದಾದರು?
ನೆನೆಸಿಕೊಂಡರೆ ರೋಷ ಆವೇಶವೂ ಅಂತಕರುಣೆಯೂ ಒಟ್ಟಿಗೆಉಕ್ಕಿಬರುತ್ತದೆ.
ಜಿಲ್ಲೆಯ ಗಡಿಪ್ರದೇಶದ ಒಂದು ಬಹುಮುಖ್ಯವಾದ ಹಳ್ಳಿ ಕಮ್ಮತ್ತೂರು. ಈ ಊರಿನಲ್ಲಿ ನಡೆದಷ್ಟು ಗಣಿಗಾರಿಕೆ ಮತ್ತು ಡಿಪ್ಪಿಂಗ್ ಬೇರೆಲ್ಲೂ ನಡೆದಿರಲಿಕ್ಕಿಲ್ಲ .ಊರಿನ ಮನೆ ಗಳಿಗಿಂತಲೂ ಅಧಿಕವಾದ ಸ್ಟಾಕ್ ಯಾರ್ಡ್ಗಳು ನಿರ್ಮಾಣವಾದವು. ಧೂಳಿನಿಂದಾಗಿ ಮತ್ತು ವಿಪರೀತ ಶಬ್ದದಿಂದಾಗಿ ಅಸ್ತಮಕ್ಕೆ, ಕಿವುಡುತನಕ್ಕೆ ಬಲಿಯಾದವರಿಗೆ ಲೆಕ್ಕವಿಲ್ಲ. ಅಪರಿಮಿತ ಗಣಿಗಾರಿಕೆಯ ಪ್ರಭಾವದಿಂದಾಗಿ ಆಕ್ಸಿಜನ್ ಪ್ರಮಾಣ ಕುಸಿತ ಕಂಡಿತು. ಇಡೀ ಊರಿಗೆ ಊರೇ ಐಸಿಯುನಲ್ಲಿ ಇರುವಂತೆ ಭಾಸವಾಗುತ್ತಿದೆ.ಇಂತಹ ಎಷ್ಟೋ ಹಳ್ಳಿಗಳು ಉಸಿರಾಡಲು ಕಷ್ಟಪಡುತ್ತಿವೆ.
ಒಂದು ಕಾಲದ ರೈತ ಹೊಲ, ಗದ್ದೆ, ಮಣ್ಣನ್ನು ಪೂಜಿಸುತ್ತಿದ್ದ. ಆರಾಧಿಸುತ್ತಿದ್ದ .ಗುಡ್ಡಬೆಟ್ಟ ಸೂರ್ಯ ಚಂದ್ರ ತಾರೆಯರೇ ಆತನ ದೇವರುಗಳಾಗಿದ್ದವು. ದುಡಿಮೆಯೇ ಆತನ ಸಂಪತ್ತು. ಇಂತಹ ಕುಟುಂಬಗಳು ಇಲ್ಲದ, ಪ್ರಕೃತಿಯೂ ಇಲ್ಲದ ,ಅಭಿಶಾಪದ ಊರುಗಳಲ್ಲಿ ಶಾಪಗ್ರಸ್ತರಂತೆ ಮತ್ತೊಮ್ಮೆ ಯುದ್ಧಕ್ಕೆ ಹೊರಟ ಕೆಂಪು ಸೈನಿಕರಂತೆ ಇಲ್ಲಿನ ಜನ ಕಾಣಿಸುತ್ತಾರೆ.
ಎಲ್ಲಾ ಮುಗಿದ ಮೇಲೆ ಊರ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ದಿನಾಂಕ: 6 -10-2016 ರಂದು ಸರ್ಕಾರ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿ ಆದೇಶಿಸಿತು.
ಕಾಲವೀಗ ತಣ್ಣಗೆ ನಿಶ್ಯಬ್ದ..!
ಯಾರದ್ದೋ ಹೆಣವೊಂದು ಸದ್ದಿಲ್ಲದೆ ಬಿದ್ದುಕೊಂಡಿರುವ, ಇನ್ನೂ ಯಾರೋ ಬರುವವರಿದ್ದಾರೆ ಎಂದು ಹೆಣವನ್ನು ಎತ್ತದೆ, ಕಾದು ಕುಳಿತಿರುವಂತೆ ಸೊಂಡೂರಿನ ಬೀದಿಗಳಿವೆ.
ಬಡತನದ ರೇಖೆಗಳನ್ನೆಲ್ಲಾ ಮೈಮೇಲೆ ಹೊದ್ದು ಕುಳಿತವರಂತೆ ಕಾಣುವ ಮುದುಕರು ,ಸಾಯಲಿಕ್ಕೂ ಆಗದೆ ಬದುಕಲೂ ಆಗಿದೆ, ದುಸ್ಥಿತಿಗೆ ಕಾರಣವನ್ನು ಹುಡುಕುತ್ತಿರುವವರ ಹಾಗೆ ಹಣೆಗೆ ಕೈ ಹಚ್ಚಿ ಕುಳಿತ ದೃಶ್ಯಗಳು ಹೃದಯವನ್ನು ಕಲಕುತ್ತದೆ .ಇದು ನಾಗರಿಕ ಸಮಾಜವೊಂದು ತನ್ನದೇ ಊರಿನ ಸಮುದಾಯವನ್ನು ಚಿತ್ರಹಿಂಸೆಗೆ ಒಳಪಡಿಸಿದ ಹಾಗೆ.ನಾನು ಕಂಡು ಮಾತನಾಡಿಸಿದರವಲ್ಲಿ ” ನನ್ನ ಹಣೆಬರಹ…ನೋಡಪಾ, ಅಲಸಂದಿ,ಅವರೆ,ಜ್ವಾಳ,ನವಣಿ,
ಸಜ್ಜಿ ಬೆಳೀತಿದ್ದೆ. ಏಪೆಂಪ್ಸಿಗೆ ಹಾಕಿ ರೊಕ್ಕ ಎಣಿಸ್ಕಂಡು ಬರ್ತಿದ್ದೆ.ಮಕ್ಕಳು ಮೀರಿ ಎಲ್ಲ ಆರಾಮಾಗಿದ್ವಿ…ಮೈನ್ಸು ಮೈನ್ಸೂ ಅಂತಂದು ಮೈಯೆಲ್ಲಾ ತಗಂಬುಡ್ತು ನನ್ನಪ್ಪನೆ” ಎಂದು ವಿಷಾದದಿಂದ ಹೇಳುತ್ತಾರೆ.
ದೂರದ ಊರುಗಳ ಗೆಳೆಯರಿಗೆ ಸೊಂಡೂರು ಎನ್ನುವುದು ಸುಂದರ ಸ್ವಪ್ನದ ಹಾಗೆ, ಕಾಡುತ್ತಲೇ ಇರುತ್ತದೆ. ಗಣಿಗಾರಿಕೆಯಿಂದ ರಾಜ್ಯ,ದೇಶ ವ್ಯಾಪಿ ಸುದ್ದಿಯಾಗಿ, ಅಂತರಾಷ್ಟ್ರೀಯ ಪ್ರಖ್ಯಾತಿಯನ್ನು ಗಳಿಸಿಬಿಟ್ಟಿತು. ಈಗಲೂ ‘ಚುನಾವಣೆ ‘ಎಂಬ ಶಬ್ದ ಕೇಳಿದರೆ ಸಾಕು, ಜನರ ಕಣ್ಣಲ್ಲಿ ಹೊಳಪು ಮೂಡುತ್ತದೆ. ಬಾಯಲ್ಲಿ ನೀರೂರುತ್ತದೆ. ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಹಬ್ಬ ಎಂದು ನಾವು ಭಾವಿಸಿದ್ದು ,ಇಲ್ಲಿ ಅಣಕದಂತೆ ಭಾಸವಾಗುತ್ತಿದೆ.
*******
ಆದರೆ ,ಅಭಿವೃದ್ಧಿಯ ದೃಷ್ಟಿಯಿಂದ ಹೊರಗಿನ ಪ್ರಪಂಚಕ್ಕೆ ಸಾಕಷ್ಟು ಶ್ರೀಮಂತ, ಎಲ್ಲಾ ಬ್ರಾಂಡೆಡ್ ಕಂಪನಿಗಳ ಅಂಗಡಿಗಳಿರುವ ಹೊಸಪೇಟೆ-ಬಳ್ಳಾರಿಯಂತಹ ಊರುಗಳಲ್ಲಿ ಸ್ಟಾರ್ ಹೋಟೆಲ್ಗಳು ನಡೆಯುತ್ತಿವೆ. ಸೊಂಡೂರಿನ ಗಾಂಧಿ ಕರಕುಶಲ ಕೈಗಾರಿಕಾ ಕೇಂದ್ರಕ್ಕೂ ಬೀಗ ಬಿದ್ದಿದೆ.
ಹೌದು, ಅಭಿವೃದ್ಧಿಯೆಂದರೆ ಈ ಪ್ರದೇಶಗಳ ಜನತೆ ಹಸಿವಿನಿಂದ ಸ್ವಾತಂತ್ರ್ಯ ಪಡೆದಿದ್ದಾರೆಯೆ ?ಲಿಂಗ ಅಸಮಾನತೆಯಿಂದ ಸಾಮಾಜಿಕ ಅಸಮಾನತೆಯ,ಅವಮಾನಳಿಂದ ಸ್ವಾತಂತ್ರ್ಯ ಪಡೆದಿದ್ದಾರೆಯೆ ?ಎನ್ನುವ ಅಮರ್ತ್ಯಸೇನರು ಕೇಳುವ ಪ್ರಶ್ನೆಗಳನ್ನು ಕೇಳಿಕೊಂಡರೆ…ಎಲ್ಲಾ ಪ್ರಶ್ನೆಗಳಿಗೂ “ಇಲ್ಲ”ಎಂಬ ರೆಡಿ ಉತ್ತರ ದೊರಕುವುದು.
ಈ ಎಲ್ಲಾ ಸ್ವಾತಂತ್ರ್ಯಗಳನ್ನು ಯಾರೋ ಕೊಡಲು ಸಾಧ್ಯವಿಲ್ಲ.ಅವರು ಪಡೆದುಕೊಳ್ಳುವ ಸಾಮರ್ಥ್ಯವನ್ನು ನಿರ್ಮಾಣ ಮಾಡುವುದು ನಮ್ಮ ನಿಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ.
***
ವಯಸ್ಸಾಗಿ ಮುದುಕರಾದಾಗ ಮೂಲೆಯಲ್ಲಿ ಎಲ್ಲೋ ಒಂದು ಕಡೆ ಕುಳಿತು ಅಂತರ್ಮುಖಿಗಳಾಗಿಬಿಡುವುದು ವಯೋಸಹಜ ಗುಣ. ಆದರಿಲ್ಲಿ ಮಕ್ಕಳೂ ಅಂತರ್ಮುಖಿಗಳಾದರೆ… ?ಕಥೆಗಳು ಬೆಂಕಿಯ ಕೆನ್ನಾಲಗೆ ಹಾಗೆ ಸುಡುತ್ತಿವೆ. ಈ ಜನಗಳು ಅನುಭವಿಸಿದ, ಅನುಭವಿಸುತ್ತಿರುವ ಕರಾಳ ನೋವುಗಳನ್ನು ಹಿಡಿದಿಡಲು ಒಂದು ಜೀವನ ಸಾಕಾಗುವುದಿಲ್ಲ ಎನಿಸುತ್ತಿದೆ.
ಇಲ್ಲಿನ ಎಲ್ಲಾ ಅಕ್ಷರಗಳು ವರ್ತಮಾನದ ಒತ್ತಡಗಳಿಂದಲೇ ಬಂದಿರುವುವು ಎಂದೇ ಭಾವಿಸಿದ್ದೇನೆ. ಹಿಂದಿನಿಂದಲೂ ನನ್ನನ್ನು ಕಾಡುತ್ತಿದ್ದ ಘಟನೆಗಳು, ನಂತರದಲ್ಲಿ ಗಣಿಗಾರಿಕೆಯೆಂಬ ಪೀಕ್ ಅವಧಿಯಲ್ಲಿನ ಘಟನೆಗಳು ,ಜನರ ಬದುಕು, ನಂತರದ ದಿನಗಳಲ್ಲಿ ಅಕ್ರಮ ಗಣಿಗಾರಿಕೆಯಿಂದ ಬೀದಿಪಾಲಾದ ಕುಟುಂಬಗಳ ರೋದನವನ್ನು ಕೆಲಮಟ್ಟಿಗಾದರೂ ತಿಳಿಸಬೇಕಿತ್ತು.
ಬರಹಗಾರನೊಬ್ಬ ಯಾಕೆ ಬರೆಯುತ್ತಾನೆ ಎಂಬುದನ್ನು ಪೂರ್ಣ ಅರ್ಥಮಾಡಿಸಿದ್ದು ಈ ಬರಹಗಳೆ.ಎದೆಯ ಮೂಲೆಯಲ್ಲಿ ಅಡಗಿದ್ದ ಭಾವಗಳು ಕಾಡಿದಾಗಲೆಲ್ಲ ಸಣ್ಣ ಸಣ್ಣ ಚೀಟಿಗಳಲ್ಲಿ ಬರೆದು,ಇತ್ತೀಚೆಗೆ ಮೊಬೈಲಿನಲ್ಲಿ ಟೈಪಿಸಿ ಕೊಂಡು ನಿರಾಳವಾಗುತ್ತಿದ್ದೆ.ಬಹಳ ವರ್ಷಗಳ ಹಿಂದಿನಿಂದಲೂ ಹಿಡಿದಿಟ್ಟುಕೊಂಡಿದ್ದ ಕರಾಳ ಸತ್ಯಗಳನ್ನು ಬರೆಯುವಾಗ ಕಣ್ಣು ಮುಂಜಾದದ್ದು,ಎದೆ ಭಾರವಾದದ್ದೂ ಇದೆ.ಸಾಮಾನ್ಯ ಕೃಷಿಕನೋರ್ವ ಕಣ್ಣೆದುರೇ ಹುಚ್ಚನಾಗಿ ತಿರುಗಾಡುವಾಗ ತುಂಬಾ ಡಿಸ್ಟರ್ಬ್ ಆಗಿದ್ದಿದೆ.
ಹೀಗೆ ನನ್ನನ್ನು ,ಡಿಸ್ಟರ್ಬ್ ಮಾಡಿದ ಈ ಭಾವಗಳು ನನ್ನ ಎದೆಯಿಂದ ಹಾರಿ ಹೀಗೆ ಹೊರಬರುವ ತನಕವೂ ಸಮಾಧಾನವಿದ್ದಿಲ್ಲ.ನಾನು ಸಾಮಾಜಿಕ ಜವಾಬ್ದಾರಿಯೊಂದಿಗೆ ನನಗನಿಸಿದ ಭಾವಗಳನ್ನು ಹೊರಹಾಕಿರುವೆ…..ನಿಟ್ಟುಸಿರಿನೊಂದಿಗೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ನಿಷೇಧ : ಸಚಿವ ದಿನೇಶ್ ಗುಂಡೂರಾವ್
-
ದಿನದ ಸುದ್ದಿ7 days ago
ವಿಶ್ವ ಫ್ಲಂಬರ್ ದಿನಾಚರಣೆ
-
ದಿನದ ಸುದ್ದಿ7 days ago
ಪಿಎಚ್ ಡಿ ; ಅವಧಿ ವಿಸ್ತರಣೆ
-
ದಿನದ ಸುದ್ದಿ7 days ago
ದಾವಣಗೆರೆ ವಿಶ್ವವಿದ್ಯಾಲಯ | 11ನೇ ಘಟಿಕೋತ್ಸವ :ದೀಪ್ತಿಗೆ ಐದು ; ಸಿಂಧುಬಾಯಿಗೆ ಮೂರು ಚಿನ್ನದ ಪದಕ
-
ದಿನದ ಸುದ್ದಿ7 days ago
ದಾವಣಗೆರೆ ವಿವಿ ಘಟಿಕೋತ್ಸವ ; ಮೂವರಿಗೆ ಗೌರವ ಡಾಕ್ಟರೇಟ್
-
ದಿನದ ಸುದ್ದಿ4 days ago
ರಶ್ಮಿ ಚಂದ್ರಗಿರಿ ಅವರಿಗೆ ಪಿಎಚ್.ಡಿ ಪದವಿ
-
ದಿನದ ಸುದ್ದಿ8 hours ago
ಚುನಾವಣಾ ಬಾಂಡ್ ಕುರಿತ ದತ್ತಾಂಶ ಬಿಡುಗಡೆ
-
ದಿನದ ಸುದ್ದಿ7 hours ago
ಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ