ದಿನದ ಸುದ್ದಿ
ಬಿ.ಆರ್. ಜೋಯಪ್ಪ ಅವರ ‘ಕಾಟಿಬೆಟ್ಟದ ಕಥೆಗಳು’ ಪುಸ್ತಕ ಲೋಕಾರ್ಪಣೆ
ಸುದ್ದಿದಿನ, ಮಡಿಕೇರಿ : ಕೊಡಗು ಲೇಖಕ ಮತ್ತು ಕಲಾವಿದರ ಬಳಗ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಸಾಹಿತಿ ಬಿ.ಆರ್.ಜೋಯಪ್ಪ ಅವರು ಬರೆದ ‘ಕಾಟಿಬೆಟ್ಟದ ಕಥೆಗಳು’ ಪುಸ್ತಕ ಲೋಕಾರ್ಪಣೆ ಸಮಾರಂಭವು ಶನಿವಾರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸಭಾಂಗಣದಲ್ಲಿ ನಡೆಯಿತು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ರಂಗಕರ್ಮಿ ಶಿವಮೊಗ್ಗದ ಕವಿ ಕಾವ್ಯ ಟ್ರಸ್ಟ್ನ ಪ್ರಸನ್ನ ಅವರು ಸಣ್ಣ ಊರಿನಲ್ಲಿದ್ದು, ಸಣ್ಣ ಸಣ್ಣ ವಿಚಾರಗಳನ್ನು ಅದ್ಭುತ ಸಾಹಿತ್ಯ ರೂಪದಲ್ಲಿ ಪುಸ್ತಕದಲ್ಲಿ ಅನಾವರಣ ಮಾಡಿದ್ದಾರೆ ಎಂದರು. ಬಿ.ಆರ್.ಜೋಯಪ್ಪ ಅವರ ಬಾಲ್ಯದಲ್ಲಿ ಕಂಡಂತಹ ಅನುಭವವು ಕಥೆ ರೂಪದಲ್ಲಿ ಮೂಡಿ ಬಂದಿರುವುದು ಸಂತಸದ ವಿಷಯವಾಗಿದೆ ಎಂದರು.
ಮನುಷ್ಯನ ಜೀವನದಲ್ಲಿ ಪ್ರಕೃತಿ ಮತ್ತು ಪುರುಷ ಸಂಬಂಧದ ಬಾಂಧವ್ಯವನ್ನು ಈ ಪುಸ್ತಕವು ತೋರಿಸಿಕೊಡುತ್ತದೆ. ಸಭ್ಯತೆಯ ಬಾಲ್ಯ ಕಾಲದಲ್ಲಿ ಪ್ರಕೃತಿ ಮತ್ತು ಮನುಷ್ಯನ ಒಡನಾಟ ಮತ್ತು ಮನುಷ್ಯ ಬೆಳೆದಂತೆ ಪ್ರಕೃತಿಯ ಮೇಲೆ ಅತಿಕ್ರಮಣವಾಗುತ್ತ ಪ್ರಕೃತಿಯನ್ನು ವಿಕಾರಗೊಳಿಸುವ ಘಟನೆಗಳು ಈ ಪುಸ್ತಕದಲ್ಲಿ ಮೂಡಿಬಂದಿದೆ ಎಂದು ಅವರು ನುಡಿದರು.
ಶಿಕ್ಷಣ ಬೌದ್ಧಿಕ ಜ್ಞಾನವೂ ಹೌದು ಹಾಗೂ ಹೃದಯದ ಅನುಭವವು ಹೌದು. ಇಂದಿನ ವಿದ್ಯಾರ್ಥಿಗಳು ಅವಸರದ ಬದುಕಿನಿಂದ ಹೊರಬಂದು ತಮ್ಮ ಪರಿಸರವನ್ನು ಗಮನಿಸಿ ನೆರೆ ಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ನಮ್ಮ ಭಾಷೆ, ನಮ್ಮ ಪರಿಸರದ ಬಗ್ಗೆ ಕೆಲಸ ಮಾಡಬೇಕು. ಬೇಕಾದದ್ದನ್ನು ಇಟ್ಟುಕೊಂಡು ಬೇಡವಾದದನ್ನು ಬಿಟ್ಟು ಸಮೃದ್ಧ ನಾಡನ್ನು ಕಟ್ಟುವಂತಹ ಕೆಲಸಗಳು ಮುಂದುವರೆಯಬೇಕು ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ಹೆಸರಾಂತ ಕಥೆಗಾರರು ಹಾಗೂ ಮೈಸೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರಾದ ಅಬ್ದುಲ್ ರಶೀದ್ ಅವರು ಮಾತನಾಡಿ ಕಾಟಿಬೆಟ್ಟದ ಕಥೆಗಳು ಪುಸ್ತಕದಲ್ಲಿ ಬಿ.ಆರ್.ಜೋಯಪ್ಪ ಅವರು ತಮ್ಮ ಬಾಲ್ಯದ ತಮ್ಮ ಮನೆಯ ಪರಿಸರದ ಸುತ್ತಮುತ್ತಲಿನ ಆಗು ಹೋಗುಗಳು ಕಥೆಯ ರೂಪದಲ್ಲಿ ಅನಾವರಣಗೊಳಿಸಿದ್ದಾರೆ. ಕೊಡಗಿನ ಜೀವನ ಶೈಲಿ, ತಮ್ಮ ಸುತ್ತಮುತ್ತಲಿನ ಅನುಭವ, ಜೀವನ ಶಿಕ್ಷಣವನ್ನು ಕೃತಿಯಲ್ಲಿ ತೋರಿಸಿಕೊಟ್ಟಿದ್ದಾರೆ.
ವಿದ್ಯಾರ್ಥಿ ದಿನದಲ್ಲಿ ಸಾಹಿತ್ಯದ ಪ್ರಭಾವದಿಂದ ತಮಗಾದ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತ ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ತಮ್ಮಲ್ಲಿ ಇರುವ ಸಾಹಿತ್ಯದ ಅಭಿರುಚಿಯನ್ನು ವೃದ್ಧಿಪಡಿಸಿಕೊಂಡು ತಂತ್ರಜ್ಞಾನವನ್ನು ತಮ್ಮ ಬೆಳವಣಿಗೆಗೆ ಉಪಯುಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಪ್ರಯತ್ನಶೀಲ ಬದುಕಿನಲ್ಲಿ ಯಶಸ್ಸಿನ ಗುಟ್ಟು ಅಡಗಿದೆ ಎಂಬುದನ್ನು ಕಾಟಿಬೆಟ್ಟದ ಕಥೆಗಳು ಪುಸ್ತಕದಲ್ಲಿ ಅಡಕವಾಗಿದೆ. ಬಿ.ಆರ್.ಜೋಯಪ್ಪ ಅವರು ಶಿಕ್ಷಕರಾಗಿ, ಲೇಖಕರಾಗಿ, ಅವರ ಪರಿಶ್ರಮದ ಅನಾವರಣ, ಗ್ರಾಮೀಣ ಪರಿಸರ, ಬಡತನದ ಅನಾವರಣ, ನಾಟಿ ಔಷಧಿಯ ಮಹತ್ವ, ಅವರ ಕಾಲಘಟ್ಟದ ಬದುಕಿನ ಚಿತ್ರಣವನ್ನು ಸೊಗಸಾಗಿ ಈ ಪುಸ್ತಕದಲ್ಲಿ ಅನಾವರಣಗೊಳಿಸಿದ್ದಾರೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಕಥೆಗಳ ಲೇಖಕರಾದ ಬಿ.ಆರ್.ಜೋಯಪ್ಪ ಅವರುಕಾಟಿಬೆಟ್ಟದ ಈ ಪುಸ್ತಕ ರಚಿಸಲು ತಮಗೆ ಪ್ರೇರಣೆ ನೀಡಿದ ಮಹನೀಯರಿಗೆ ಕೃತಜ್ಞತೆ ಸಲ್ಲಿಸುತ್ತಾ ಕಥೆ ಬರೆಯುವ ಸಂದರ್ಭವನ್ನು ಹಂಚಿಕೊಳ್ಳುತ್ತಾ ತಮ್ಮ ಕುಟುಂಬ ಸದಸ್ಯರ ಸಹಕಾರ ಈ ಮುಂಚೆ ತಾವು ಬರೆದ ಪುಸ್ತಕಗಳ ಮಾಹಿತಿಗಳನ್ನು ನೀಡಿ ಪುಸ್ತಕವು ಉತ್ತಮ ರೀತಿಯಲ್ಲಿ ಮೂಡಿಬರಲು ಸಹಕಾರ ನೀಡಿದ ಎಲ್ಲಾ ಮಾರ್ಗದರ್ಶಕರಿಗೆ ವಿಮರ್ಶಕರಿಗೆ ಧನ್ಯವಾದ ತಿಳಿಸಿದರು.
ಕೊಡಗು ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಅವರು ಮಾತನಾಡಿ ಶಾಲಾ ಕಾಲೇಜುಗಳಲ್ಲಿ ಸಾಹಿತ್ಯದ ಬೆಳವಣಿಗೆ ಆಗಬೇಕೆಂಬ ಉದ್ದೇಶದಿಂದ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ.ಆರ್.ವಿಜಯ, ಚಿಂತನ-ಚಿತ್ತಾರ ಪ್ರಕಾಶನದ ಡಿ.ನಿಂಗರಾಜು ಚಿತ್ತಣ್ಣನವರ್, ಲೇಖಕರ ಕುಟುಂಬಸ್ಥರು ಇತರರು ಇದ್ದರು. ಕೊಡಗು ಲೇಖಕ ಮತ್ತು ಕಲಾವಿದರ ಬಳಗದ ಪ್ರಧಾನ ಕಾರ್ಯದರ್ಶಿ ವಿಲ್ಪರ್ಡ್ ಕ್ರಾಸ್ತಾ ನಿರೂಪಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ದಸರಾ,ದೀಪಾವಳಿ ಹಬ್ಬ ; ಹಣ ವಸೂಲಿಗೆ ಇಳಿದ ಖಾಕಿ ಪಡೆ
- ವಿಶೇಷ ವರದಿ : ಗಿರೀಶ್ ಕುಮಾರ್ ಗೌಡ, ಬಳ್ಳಾರಿ
5, 10 ಸಾವಿರ ರೂಪಾಯಿ ಪ್ರತಿ ಅಂಗಡಿ, ಲಾಡ್ಜ್, ಹೋಟೆಲ್ ಗಳಿಂದ ಹಣ ವಸೂಲಿಗೆ ಇಳಿದ ಖಾಕಿ ಪಡೆ.
ಸುದ್ದಿದಿನಡೆಸ್ಕ್:ದೇಶ ಹಾಗೂ ರಾಜ್ಯ ರಕ್ಷಣೆಗೆ ಪೋಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಪಾತ್ರ ಮುಖ್ಯವಾಗಿದೆ. ಆದರೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕು ಹಾಗೂ ಇನ್ನಿತರ ತಾಲೂಕುಗಳಲ್ಲಿ ದಸರಾ ಹಾಗೂ ದೀಪಾವಳಿ ಹಬ್ಬಕ್ಕೆ ಐದಾರು ಪೊಲೀಸ್ ಸಿಬ್ಬಂದಿಗಳು ಸೇರಿ ದುಡ್ಡಿನ ಮಾಮೂಲು ಎತ್ತುವ ಕಾರ್ಯಕ್ಕೆ ಮುಂದಾಗಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ವಿವಿಧ ಪೋಲೀಸ್ ಠಾಣೆಯ ಕೆಲ ಸಿಬ್ಬಂದಿಗಳು ಸಾರ್ವಜನಿಕರ ಅಂಗಡಿ, ಹೋಟೆಲ್, ಲಾಡ್ಜ್, ಬಾರ್ ಹಾಗೂ ರೆಸ್ಟೋರೆಂಟ್, ಸಂಘ ಸಂಸ್ಥೆಗಳು ಅಧ್ಯಕ್ಷರ ಬಳಿ ಹಾಗೂ ಇನ್ನಿತರ ವ್ಯಾಪಾರ ಮಾಡುವವರ ಹತ್ತಿರ ಹಾಗೂ ಅವರ ಮಾಲೀಕರ ಬಳಿ ಹೋಗಿ ನಾವು ಪೋಲಿಸರು ದಸರ ಮತ್ತು ದೀಪಾವಳಿ ಹಬ್ಬಕ್ಕೆ ಮಾಮೂಲಿ ಕೊಡಿ ಎಂದು ದೌರ್ಜನ್ಯ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದು ಪೋಲೀಸ್ ಇಲಾಖೆಗೆ ನಾಚಿಕೆಗೇಡಿನ ಸಂಗತಿಯಾಗಿದೆ.
ಇನ್ನು ಈ ವಿಚಾರವಾಗಿ ಪೋಲೀಸ್ ಠಾಣೆಯಲ್ಲಿ ಯಾವ ಸಿಬ್ಬಂದಿಗಳು ಹೆಚ್ಚಿನ ಹಣದ ಸವಾಲು ಹಾಕುತ್ತಾರೋ ಅವರು ಈ ನಗರದಲ್ಲಿ ಇವರ ಠಾಣೆಗೆ ಬರುವ ವ್ಯಾಪ್ತಿಯಲ್ಲಿ ಹಣವನ್ನು ದಬ್ಬಾಳಿಕೆ ಮತ್ತು ದೌರ್ಜನ್ಯ ಮಾಡಿ ಹಣವನ್ನು ಕೀಳುತ್ತಾರೆ. ಇದರಿಂದ ನಗರದಲ್ಲಿ ವ್ಯಾಪಾರ, ವ್ಯವಹಾರ ಮಾಡುವವರು ಮನನೊಂದಿದ್ದಾರೆ.
ಅನೇಕ ವರ್ಷಗಳಿಂದ ಈ ದಸರಾ ದೀಪಾವಳಿ ಮಾಮೂಲಿ ಹಣ ವಸೂಲಿ ಮಾಡುವ ಕಾರ್ಯ ಇರಲಿಲ್ಲ. ಮತ್ತೆ 2024 ರಲ್ಲಿ ವಿಜಯನಗರ ಜಿಲ್ಲೆಯ ವಿವಿಧ ತಾಲೂಕಿನ ಪೋಲೀಸ್ ಠಾಣೆಯ ಕೆಲ ಸಿಬ್ಬಂದಿಗಳು ಠಾಣೆಯ ಪರವಾಗಿ ಹಣ ವಸೂಲಿಗೆ ಇಳಿದಿದ್ದಾರೆ ಎಂದು ಖಾಸಗಿ ಸಂಘದ ಅಧ್ಯಕ್ಷರೊಬ್ಬರು ತಿಳಿಸಿದರು.
ಲಕ್ಷಗಟ್ಟಲೆ ಹಣವನ್ನು ಸಾರ್ವಜನಿಕರಿಂದ ಅಂಗಡಿ ಮಾಲೀಕರಿಂದ ಪಡೆದು ನಂತರ ಠಾಣೆಯಲ್ಲಿ ಇರುವ ಪೋಲೀಸ್ ಅಧಿಕಾರಿಗಳಿಗೆ, ಎಸ್.ಐ ಮತ್ತು ಎ.ಎಸ್.ಐ ಹಾಗೂ ಮುಖ್ಯಪೇದೆ, ಪೇದೆಗಳಿಗೆ ಹಣವನ್ನು ಭಾಗ ಮಾಡಿ ಹಂಚಿಕೊಳ್ಳುತ್ತಾರೆ. ಸವಾಲು ಯಾರು ಮಾಡಿರುತ್ತಾರೋ ಅವರಿಗೆ ಲಕ್ಷಗಟ್ಟಲೆ ಹಣ ಬರುತ್ತದೆ. ಇವರುಗಳು ಬಹಳ ವರ್ಷಗಳಿಂದ ಇದ್ದ ಠಾಣೆಯಲ್ಲಿ ಉಳಿದುಕೊಂಡಿದ್ದಾರೆ.
ಇನ್ನು ನಗರದ ಶಾನ್ ಭೋಗ ಹೋಟೆಲ್ ಪಕ್ಕದಲ್ಲಿ ಇರುವ ರಸ್ತೆಯಲ್ಲಿ ನಿಂತುಕೊಂಡು ಐವರು ಪೊಲೀಸರು ಸಿವಿಲ್ ಡ್ರಸ್ ನಲ್ಲಿ ಇಳಿದು ಹಣ ವಸೂಲಿ ಮಾಡುತ್ತಿರುವ ದುರ್ಘಟನೆ ನಡೆದಿದೆ.
- ಈ ವಿಷಯದ ಬಗ್ಗೆ ಏನಾದ್ರೂ ಆಧಾರಗಳು ಇದ್ದರೆ ಹೇಳಿ, ಸಿಸಿ ಕ್ಯಾಮರಗಳನ್ನು ಚೆಕ್ ಮಾಡಿಸುವೆ, ಈ ಕೂಡಲೇ ಡಿವೈಎಸ್ಪಿ ಅವರ ಬಳಿ ಮಾತನಾಡುತ್ತೇನೆ ಎಂದರು.
| ಹರಿಬಾಬು – ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ
ವಿಜಯನಗರ ಜಿಲ್ಲೆ
ಸವಾಲು ಹಾಕಿದ ಪೋಲೀಸ್ ಪೇದೆಗಳು ಒಂದು ಠಾಣೆಯಿಂದ ಐದಾರು ಸಿಬ್ಬಂದಿಗಳು ಸೇರಿ, ಅವರ ಠಾಣೆಯ ವ್ಯಾಪ್ತಿಗೆ ಬರುವ ಪ್ರತಿ ಅಂಗಡಿ, ಹೋಟೆಲ್, ಲಾಡ್ಜ್, ಬಾರ್ ಮತ್ತು ರೆಸ್ಟೋರೆಂಟ್ ಗಳಿಗೆ ಹೋಗಿ ಬುಕ್ ಕೊಟ್ಟು ನಿಮ್ಮ ಹೆಸರು ಬರೆದು 5 ಸಾವಿರ, 10 ಸಾವಿರ ಹಣ ಕೊಡಿ ದಸರಾ-ದೀಪಾವಳಿ ಮಾಮೂಲು ಎಂದು ಹಣವನ್ನು ವಸೂಲಿ ಮಾಡುತ್ತಿದ್ದಾರೆ.
ಪ್ರತಿಯೊಂದು ಠಾಣೆಯ ಪಿ.ಎಸ್.ಐ ಹಾಗೂ ಡಿವೈಎಸ್ಪಿ ಅವರಿಗೂ ಇದರ ಬಗ್ಗೆ ಮಾಹಿತಿ ಇರುತ್ತದೆ ಆದರೆ ಸಿಬ್ಬಂದಿಗಳು ಮಾತ್ರ ಬಲಿಯಾಗುತ್ತಾರೆ ಎನ್ನುವ ಆರೋಪ ಸಹ ಇದೆ.
ವಿಜಯನಗರ ಜಿಲ್ಲೆಯ ಪ್ರತಿಯೊಂದು ಠಾಣೆಯಲ್ಲಿ ಐದಾರು ಸಿಬ್ಬಂದಿಗಳು ಈ ಮಾಮೂಲು ತರುವ ಕೆಲಸ ಮಾಡುತ್ತಾರೆ ಅವರಿಗೆ ಯಾವುದೇ ಡ್ಯೂಟಿ ಸಹ ಇರೋಲ್ಲ. ಇದರಲ್ಲಿ ಎಸ್.ಬಿ, ಕ್ರೈಮ್ ಸಿಬ್ಬಂದಿಗಳು ಇರುತ್ತಾರೆ. ಅದೇ ಊರಿನ ಸಿಬ್ಬಂದಿಗಳು ಬಹಳ ವರ್ಷಗಳಿಂದ ಇದೇ ಕೆಲಸ ಮಾಡುತ್ತಾರೆ ಎನ್ನುವ ದೊಡ್ಡ ಆರೋಪ ಸಹ ಇದೆ.
ಈ ‘ಮಾಮೂಲು’ ವಿರುದ್ಧ ವಿಜಯನಗರ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಹರಿಬಾಬು ಅವರು ಕ್ರಮತೆಗೆದು ಕೊಳ್ಳುತ್ತಾರೋ ಇಲ್ಲವೋ ಕಾದು ನೋಡಬೇಕಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ದಾವಣಗೆರೆ | ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ
ಸುದ್ದಿದಿನ,ದಾವಣಗೆರೆ : ಕಳದೆ 15 ದಿನಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯೊಬ್ಬರ ಮೃತ ದೇಹ ಅಸ್ಥಿಪಂಜರದ ರೂಪದಲ್ಲಿ ಪೊದೆಯೊಂದರಲ್ಲಿ ಪತ್ತೆಯಾದ ಘಟನೆ ದಾವಣಗೆರೆ ತಾಲೂಕಿನ ಅಣಜಿ ಕೆರೆ ಏರಿಯ ಬಳಿ ನಡೆದಿದೆ.
ದಾವಣಗೆರೆ ತಾಲೂಕಿನ ಕಡ್ಲೇಬಾಳು ಗ್ರಾಮದ ತಿಪ್ಪೇಶ್ ಎಂಬಾತ ಕಳೆದ 15 ದಿನಗಳ ಹಿಂದೆ ಕಾಣೆಯಾಗಿದ್ದು ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ನಾಪತ್ತೆಯಾಗಿದ್ದ ತಿಪ್ಪೇಶ್ ಮೃತ ಬೈಕ್ ಪಕ್ಕದಲ್ಲೇ ಪೊದೆಯೊಂದರಲ್ಲಿ ಅಸ್ಥಿಪಂಜರದ ರೂಪದಲ್ಲಿ ಪತ್ತೆಯಾಗಿದೆ. ಕುರಿ ಮೇಯಿಸಲು ಹೋಗಿದ್ದ ಕುರಿಗಾಯಿಗಳು ಪೊದೆಯೊಳೆಗೆ ಬೈಕ್ ಹಾಗೂ ಅಸ್ಥಿಪಂಜರ ಕಂಡಿದ್ದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಬೈಕ್ ನಂಬರ್ ಪರಿಶೀಲಿಸಿದಾಗ ಕಡ್ಲೇಬಾಳು ಗ್ರಾಮದಲ್ಲಿ ನಾಪತ್ತೆಯಾಗಿದ್ದ ತಿಪ್ಪೇಶ್ ಎಂದು ವಿಷಯ ತಿಳಿದಿದ್ದು ಕೂಡಲೇ ಗ್ರಾಮಸ್ಥರನ್ನ ಕರೆಯಿಸಿ ಪರಿಶೀಲನೆ ನಡೆಸಿದಾಗ ತಿಪ್ಪೇಶ್ ಮೃತ ಎಂದು ಗೊತ್ತಾಗಿದ್ದು, ಇದೀಗ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಜಗಳೂರು | ಗೃಹಲಕ್ಷ್ಮಿ ಹಣ ಕೊಡದಿದ್ದಕ್ಕೆ ಪತ್ನಿ ಕೊಂದ ಪತಿ
ಸುದ್ದಿದಿನ,ದಾವಣಗೆರೆ : ಗೃಹಲಕ್ಷ್ಮಿ ಹಣ ಕೊಡದಿದ್ದಕ್ಕೆ ಪತ್ನಿಯನ್ನ ಪತಿ ಕೊಲೆ ಮಾಡಿರುವ ಘಟನೆ ಜಗಳೂರು ತಾಲೂಕಿನ ಹೊಸಬುಳ್ಳಾಪುರ ಗ್ರಾಮದಲ್ಲಿ ನಡೆದಿದೆ.
ಸತ್ಯಮ್ಮ ಎಂಬಾಕೆ ಪತಿಯಿಂದ ಕೊಲೆಯಾಗಿದ್ದು, ತಾಲೂಕಿನ ಹೊಸಬುಳ್ಳಾಪುರ ಗ್ರಾಮದ ಆಕೆಯನ್ನ ಕಳೆದ 12 ವರ್ಷಗಳ ಹಿಂದೆ ಜಗಳೂರು ತಾಲೂಕಿನ ಉಜ್ಜಪ್ಪವಡೆಯರಹಳ್ಳಿಯ ಅಣ್ಣಪ್ಪ ಎಂಬಾಂತ ಪ್ರೇಮಿಸಿ ಮದುವೆಯಾಗಿದ್ದ. ಇವರಿಬ್ಬರ ಸುಖ ಸಂಸಾರಕ್ಕೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಕೂಡ ಇತ್ತು. ಗಾರೆ ಕೆಲಸಕ್ಕೆ ಹೋಗುತ್ತಿದ್ದ ಅಣ್ಣಪ್ಪ ಕುಡಿತದ ಚಟಕ್ಕೆ ದಾಸನಾಗಿದ್ದ.
ಕುಡಿದು ಬಂದು ಹಣಕ್ಕಾಗಿ ಪೀಡಿಸುತ್ತಿದ್ದ ಅಣ್ಣಪ್ಪ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಈ ಬಗ್ಗೆ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಎರಡು ಬಾರಿ ರಾಜಿ ಸಂದಾನ ಕೂಡ ನಡೆದಿದ್ದು ಪೊಲೀಸರು ಹೊಂದಿ ಕೊಂಡು ಹೋಗುವಂತೆ ಬುದ್ದಿ ಹೇಳಿದ್ದರು. ಆದರೂ ಕುಡಿದು ಬಂದು ಹೆಂಡತಿಗೆ ಮಾನಸಿಕ ಹಿಂಸೆ ನೀಡುತ್ತಿದ್ದ ಅಣ್ಣಪ್ಪ ನಿತ್ಯ ದುಡ್ಡಿಗಾಗಿ ಹೆಂಡತಿಯನ್ನ ಪೀಡಿಸುತ್ತಿದ್ದ. ಅದೇ ರೀತಿ ಗೃಹಲಕ್ಷ್ಮಿ ಹಣ ಕಳೆದ ವಾರವಷ್ಟೇ ಸತ್ಯಮ್ಮನ ಅಕೌಂಟ್ ಗೆ ಬಂದಿದೆ. ಅತಿಯಾದ ಮಳೆಯಿಂದ ಕೂಲಿ ಕೆಲಸ ಇಲ್ಲದೇ ಪರದಾಡುತ್ತಿದ್ದ ಅಣ್ಣಪ್ಪ ಪತ್ನಿ ಸತ್ಯಮ್ಮಳಿಗೆ ಗೃಹ ಲಕ್ಷ್ಮಿ ಹಣ ಬಿಡಿಸಿಕೊಡುವಂತೆ ಪೀಡಿಸುತ್ತಿದ್ದನಂತೆ.
ಅಣ್ಣಪ್ಪನ ಕಾಟ ತಾಳಲಾರದೆ ಸತ್ಯಮ್ಮ ಮಗನೊಂದಿಗೆ ಅಸಗೋಡು ಗ್ರಾಮದ ಕೆನರಾ ಬ್ಯಾಂಕ್ ಶಾಖೆಗೆ ಹಣ ಬಿಡಿಸಿಕೊಳ್ಳಲು ಬಂದಾಗ ಹಿಂಬಾಲಿಸಿದ ಅಣ್ಣಪ್ಪ ಬ್ಯಾಂಕ್ ನಲ್ಲೆ ಹಣ ಕೊಡು ಎಂದು ಹೆಂಡತಿಯೊಂದಿಗೆ ಜಗಳ ತೆಗೆದು ಹಲ್ಲೆ ಮಾಡಿದ್ದಾನೆ. ಕೊನೆಗೆ ಸ್ಥಳೀಯರು ಜಗಳ ಬಿಡಿಸಿ ಕಳುಹಿಸಿದ್ದಾರೆ. ಬಳಿಕ ಉಜ್ಜಪ್ಪರವಡೇರಹಳ್ಳಿ ಸಮೀಪದ ಜಮೀನಿಗೆ ಕರೆದೊಯ್ದು ಕೊಲೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದು, ಕೊಲೆ ಮಾಡಿ ಮೈನ್ಸ್ ವಯರ್ ಕೆಳಗೆ ಬಿಸಾಕಿ ಹೋಗಿದ್ದಾನೆ. ಅಲ್ಲದೆ ಕರೆಂಟ್ ಹೊಡೆದು ಸತ್ತೋಗಿದ್ದಾಳೆ ಎಂದು ಕಥೆ ಕಟ್ಟಿದ್ದನಂತೆ.
ಇನ್ನು ಸತ್ಯಮ್ಮ ಸತ್ತಾಗಿನಿಂದ ಅಣ್ಣಪ್ಪ ಹಾಗೂ ಆತನ ಕುಟುಂಭಸ್ಥರು ತಲೆಮರೆಸಿಕೊಂಡಿದ್ದು. ಮೃತದೇಹವನ್ನು ಜಿಲ್ಲಾಸ್ಪತ್ರೆಯ ರವಾನೆ ಮಾಡಿದ್ದು, ಕೊಲೆ ಆರೋಪಿ ಅಣ್ಣಪ್ಪ ವಿರುದ್ದ ಸತ್ಯಮ್ಮ ಸಂಬಂಧಿಕರು ಅಕ್ರೋಶ ಹೊರ ಹಾಕಿದ್ದು, ಆತನಿಗೆ ತಕ್ಕ ಶಿಕ್ಷೇಯಾಗಲಿ ಎಂದು ಹಿಡಿ ಶಾಪ ಹಾಕಿದರು.
ಇದೀಗ ಅಣ್ಣಪ್ಪ ತಲೆ ಮರೆಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ಕರ್ನಾಟಕದಲ್ಲಿ ವಿವಿಧ ಕ್ಷೇತ್ರಗಳ ಐವರು ಸಾಧಕರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ
-
ದಿನದ ಸುದ್ದಿ6 days ago
ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ5 days ago
ಚಿತ್ರದುರ್ಗ ಜಿಲ್ಲೆಯಲ್ಲಿ 6ಮತಗಟ್ಟೆಗಳ ಸ್ಥಳಾಂತರ ಹಾಗೂ ಮತಗಟ್ಟೆಗಳ ಹೆಸರು ಪರಿಷ್ಕರಣೆ
-
ದಿನದ ಸುದ್ದಿ5 days ago
ಮೈಸೂರಿನಲ್ಲಿ ಮುಡಾ ಕಚೇರಿ ಮೇಲೆ ಇಡಿ ಅಧಿಕಾರಿಗಳ ದಾಳಿ
-
ದಿನದ ಸುದ್ದಿ5 days ago
ಸಾಲ ಸೌಲಭ್ಯ ಯೋಜನೆ ; ಅ.23 ರಂದು ಆಯ್ಕೆ ಸಮಿತಿ ಸಭೆ
-
ದಿನದ ಸುದ್ದಿ5 days ago
ಪೊಕ್ಸೋ ಕಾಯ್ದೆಯ ಬೆಂಬಲ ವ್ಯಕ್ತಿಗಳಿಗಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ಎಸ್ ಬಿ ಐ ಬ್ಯಾಂಕ್ ನಿರ್ಲಕ್ಷ್ಯ; ಗ್ರಾಹಕರಿಗೆ ಬಡ್ಡಿ ಸಮೇತ ಪರಿಹಾರ ನೀಡಲು ನ್ಯಾಯಾಲಯ ಆದೇಶ
-
ದಿನದ ಸುದ್ದಿ5 days ago
ವಾಮಾಚಾರಕ್ಕೆ ಬೆಚ್ಚಿಬಿದ್ದ ಕಾಫಿನಾಡು..!