Connect with us

ದಿನದ ಸುದ್ದಿ

ದಾವಣಗೆರೆ | ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಕಠಿಣ ಕ್ರಮ ; ಮೇ. 21 ರಿಂದ 24 ರವರೆಗೆ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್‍ಡೌನ್ : ಸಚಿವ ಭೈರತಿ ಬಸವರಾಜ್

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯ ತಾಲ್ಲೂಕು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಸಾಂಕ್ರಾಮಿಕ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ದಿನೇ ದಿನೇ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ರೋಗ ಹರಡುವಿಕೆಯ ಸರಪಳಿಯನ್ನು ತುಂಡರಿಸಲು, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೆಲವು ನಿಬಂಧನೆಗಳನ್ನು ಒಳಪಡಿಸಿ, ಮೇ. 21 ರಂದು ಬೆಳಿಗ್ಗೆ 10 ಗಂಟೆಯಿಂದ ಮೇ. 24 ರಂದು ಬೆಳಿಗ್ಗೆ 06 ಗಂಟೆಯವರೆಗೆ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್‍ಡೌನ್ ಜಾರಿಗೊಳಿಸಲಾಗಿದೆ.

ಮುಂದೆ ಸಂಭವಿಸಬಹುದಾದ ಅನಾಹುತವನ್ನು ತಡೆಗಟ್ಟುವ ಸಲುವಾಗಿ ಸಂಪೂರ್ಣ ಲಾಕ್‍ಡೌನ್‍ಗೆ ಸಾರ್ವಜನಿಕರು ಸಹಕರಿಸುವಂತೆ ಕೈಮುಗಿದು ಮನವಿ ಮಾಡಿಕೊಳ್ಳುತ್ತೇನೆ ಎಂದು ನಗರಾಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ್ ಹೇಳಿದರು.

ಜಿಲ್ಲೆಯಲ್ಲಿ ಮೇ. 21 ರಿಂದ ಮೂರು ದಿನಗಳ ಕಾಲ ಸಂಪೂರ್ಣ ಲಾಕ್‍ಡೌನ್ ಜಾರಿಗೊಳಿಸುವ ಕುರಿತಂತೆ ವಿವರಗಳನ್ನು ನೀಡಲು ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಇತ್ತೀಚೆಗೆ ನಡೆಸಿದ ಪ್ರಗತಿ ಪರಿಶೀಲಾ ಸಭೆಯಲ್ಲಿ ಪ್ರಸ್ತುತ ಕೋವಿಡ್-19 ಪರಿಸ್ಥಿತಿಯನ್ನು ಪರಿಗಣಿಸಿ ಪುನರಾವಲೋಕನ ಮಾಡಲಾಗಿತ್ತು. ಹೀಗಾಗಿ ಜಿಲ್ಲೆಯಲ್ಲಿ ಕೋವಿಡ್ ಸಾಂಕ್ರ್ರಾಮಿಕ ರೋಗ ತಡೆಗಟ್ಟಲು ಹೆಚ್ಚುವರಿಯಾಗಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ.

ಕಳೆದ ಮೇ. 12 ರಿಂದ 24 ರವರೆಗೆ ಕಠಿಣ ಕ್ರಮಗಳನ್ನು ಸರ್ಕಾರ ಜಾರಿಗೊಳಿಸಿತ್ತು. ಆದರೆ ಪ್ರಕರಣಗಳ ಸಂಖ್ಯೆ ಏರುತ್ತಲೆ ಇದೆ. ಹೀಗಾಗಿ ರೋಗ ಹರಡುವಿಕೆಯ ಸರಪಳಿಯನ್ನು ತುಂಡರಿಸಲು ಇನ್ನಷ್ಟು ಕಠಿಣ ಕ್ರಮ ಜರುಗಿಸುವುದು ಅನಿವಾರ್ಯವಾದ ಕಾರಣ ಮೂರು ದಿನ ಸಂಪೂರ್ಣ ಲಾಕ್‍ಡೌನ್ ಜಾರಿಗೊಳಿಸಲು ನಿರ್ಧರಿಸಲಾಗಿದೆ.

ಮೇ. 24 ರ ಬಳಿಕ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮುಖ್ಯಮಂತ್ರಿಗಳೇ ನಿರ್ಧಾರ ಕೈಗೊಳ್ಳಲಿದ್ದಾರೆ. ಸಾರ್ವಜನಿಕರು ಮುಂದೆ ಸಂಭವಿಸಬಹುದಾದ ಅನಾಹುತವನ್ನು ತಡೆಗಟ್ಟಲು ಮೂರು ದಿನಗಳ ಕಾಲ ಜಾರಿಗೊಳಿಸಿರುವ ಸಂಪೂರ್ಣ ಲಾಕ್‍ಡೌನ್‍ಗೆ ಸಹಕರಿಸಲು ಸಾರ್ವಜನಿಕರಲ್ಲಿ ಕೈಮುಗಿದು ಬೇಡಿಕೊಳ್ಳುತ್ತೇನೆ ಎಂದರು.

ಸಂಪೂರ್ಣ ಲಾಕ್‍ಡೌನ್ ನಿಬಂಧನೆಗಳು

ಜಿಲ್ಲೆಯಾದ್ಯಂತ ಮೇ. 21 ರಿಂದ ಮೇ. 24 ರವರೆಗೆ ಸಂಪೂರ್ಣ ಲಾಕ್‍ಡೌನ್ ಜಾರಿಗೊಳಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಆದೇಶ ಹೊರಡಿಸಿದ್ದಾರೆ. ಈ ಆದೇಶದ ಅನ್ವಯ, ಎಲ್ಲಾ ಅಂಗಡಿ ಮುಂಗಟ್ಟುಗಳು/ವಾಣಿಜ್ಯ/ಕೈಗಾರಿಕಾ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಸಾರ್ವಜನಿಕರು ಅಗತ್ಯ ಚಟುವಟಿಕೆಗಳಿಗೆ ವಾಹನಗಳಲ್ಲಿ ಸಂಚರಿಸುವುದನ್ನು ನಿರ್ಬಂಧಿಸಿ, ನಡೆದುಕೊಂಡು ಹೊಗಲು ಮಾತ್ರ ಅವಕಾಶ ನೀಡಲಾಗಿದೆ.

ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಮದುವೆ ಸಮಾರಂಭಕ್ಕೆ ಈಗಾಗಲೇ ನೀಡಲಾಗಿರುವ ಅನುಮತಿ ಪ್ರಕರಣಗಳಲ್ಲಿ ಕೇವಲ 10 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಮದುವೆಗಳಲ್ಲಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ನಿರ್ಬಂಧಿಸಲಾಗಿದೆ. ಉಳಿದ ಎಲ್ಲಾ ಸಾಮಾಜಿಕ, ಧಾರ್ಮಿಕ ಸಭೆ ಸಮಾರಂಭಗಳನ್ನು ಮೇ. 24 ರ ಬೆಳಿಗ್ಗೆ 6.00 ಗಂಟೆಯವರೆಗೆ ನಿರ್ಬಂಧಿಸಲಾಗಿದೆ.

ಅಂತ್ಯಸಂಸ್ಕಾರ/ಶವ ಸಂಸ್ಕಾರಗಳಲ್ಲಿ ಗರಿಷ್ಟ 5 ಜನರಿಗೆ ಮಾತ್ರ ಭಾಗವಹಿಸಲು ಅನುಮತಿಸಿದೆ. ದಾವಣಗೆರೆ ಜಿಲ್ಲೆಗೆ ಆಗಮಿಸುವವರನ್ನು ಪ್ರತೀ ಚೆಕ್ ಪೋಸ್ಟ್‍ಗಳಲ್ಲಿ ವಿಚಾರಣೆ ನಡೆಸಿ, ದಾವಣಗೆರೆ ಜಿಲ್ಲೆಯಲ್ಲಿ ವಾಸ್ತವ್ಯ ಹೂಡುವುದಾದಲ್ಲಿ ಎಲ್ಲಿ ತಂಗುತ್ತಾರೆ ಎಂಬ ಬಗ್ಗೆ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆನ್ನು ಪಡೆದುಕೊಳ್ಳಲಾಗುವುದು ಹಾಗೂ ಹೊರ ಜಿಲ್ಲೆಯಿಂದ ಆಗಮಿಸುವವರು ಕಡ್ಡಾಯವಾಗಿ 14 ದಿನಗಳ ಕಾಲ ಹೋಂ ಕ್ವಾರಂಟೈನ್‍ನಲ್ಲಿ ಇರಬೇಕು.

ವಾಹನ ಬಳಕೆಯನ್ನು ತುರ್ತು ವೈದ್ಯಕೀಯ ಸೇವೆಗಳಿಗೆ ಮಾತ್ರ ಬಳಸಬಹುದು, ವೈದ್ಯಕೀಯ ದಾಖಲೆಗಳನ್ನು ಚೆಕ್ ಪೋಸ್ಟ್‍ಗಳಲ್ಲಿ ತೋರಿಸಬೇಕು. ಇತರೆ ಎಲ್ಲಾ ಖಾಸಗಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ವೈದ್ಯಕೀಯ ಹಾಗೂ ತುರ್ತು ಸೇವೆಗಳ ಎಲ್ಲಾ ಅಧಿಕಾರಿಗಳು/ಸಿಬ್ಬಂದಿಗಳ ಕರ್ತವ್ಯ ನಿಮಿತ್ತ ಓಡಾಟಕ್ಕೆ ಯಾವುದೆ ನಿರ್ಬಂಧವಿರುವುದಿಲ್ಲ. ಆದರೆ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ತಪಾಸಣಾ ಸಿಬ್ಬಂದಿಗಳಿಗೆ ತೋರಿಸಬೇಕು.

ಕ್ಲಿನಿಕ್, ಆಸ್ಪತ್ರೆ, ಲಸಿಕೆ ಹಾಗೂ ಪರೀಕ್ಷೆ ಉದ್ದೇಶಗಳಿಗೆ ಕನಿಷ್ಟ ವೈದ್ಯಕೀಯ ದಾಖಲೆಗಳು, ವೈದ್ಯ ಸಲಹಾ ಚೀಟಿ, ಆಸ್ಪತ್ರೆಯಲ್ಲಿ ದಾಖಲಾದ ವಿವರಗಳ ರುಜುವಾತಿನೊಂದಿಗೆ ಸಂಚರಿಸಲು ಅನುಮತಿಸಲಾಗಿದೆ.

ಹೋಟೆಲ್, ರೆಸ್ಟೋರೆಂಟ್‍ಗಳು, ಉಪಾಹಾರ ಗೃಹಗಳು ಪಾರ್ಸಲ್ ಸೇವೆಗಳನ್ನು ಗ್ರಾಹಕರ ಮನೆ ಬಾಗಿಲಿಗೆ ವಿತರಿಸಲು ಮಾತ್ರ ಅನುಮತಿ ಇದೆ. ಯಾವುದೇ ರೀತಿಯ ಪಾರ್ಸ್‍ಲ್‍ಗಳನ್ನು ಗ್ರಾಹಕರು ನೇರವಾಗಿ ಖರೀದಿಸಲು ಅವಕಾಶವಿರುವುದಿಲ್ಲ.

ಕೋವಿಡ್-19ಕ್ಕೆ ಸಂಬಂಧಿಸಿದ ಕಾರ್ಯಕ್ಕೆ ನಿಯೋಜಿಸಿದ ಎಲ್ಲಾ ಕಛೇರಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸರ್ಕಾರದ ಆದೇಶ ಸಂಖ್ಯೆ ಆರ್‍ಡಿ/158/ಟಿಎನ್‍ಆರ್/2020 ದಿ.07.05.2021ರಂತೆ ಕಾರ್ಯನಿರ್ವಹಿಸಬೇಕು. ಆದರೆ, ಈ ಕಛೇರಿಗಳಿಗೆ ಸಾರ್ವಜನಿಕರ ಭೇಟಿಯನ್ನು ನಿರ್ಬಂಧಿಸಲಾಗಿದೆ.

ಜಿಲ್ಲೆಯಲ್ಲಿ ಕಛೇರಿ ವೇಳೆಯನ್ನು ಮೀರಿ ತಮ್ಮ ಕರ್ತವ್ಯಗಳಿಗೆ ಹಾಜರಾಗುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಜಿಲ್ಲೆಯ ನ್ಯಾಯಾಂಗದ ಅಧಿಕಾರಿ/ಸಿಬ್ಬಂದಿಗಳು ತಮ್ಮ ಅಧಿಕೃತ ಗುರುತಿನ ಚೀಟಿಯನ್ನು ತೋರಿಸಿ ಸಂಚರಿಸುವುದಕ್ಕೆ ಅನುಮತಿಸಿದೆ.

ಸರ್ಕಾರದ ಆದೇಶದ ಪ್ರಕಾರ ಸರ್ಕಾರೇತರ ಸಂಸ್ಥೆಗಳ ಕಛೇರಿಗಳು, ಇತರೆ ಎಲ್ಲಾ ಕಛೇರಿಗಳ ಸಿಬ್ಬಂದಿಗಳು ಮನೆಯಿಂದಲೇ ಕೆಲಸ ನಿರ್ವಹಿಸಬೇಕು. ತುರ್ತು ಸೇವೆಗಳಿಗೆ ಸಂಬಂಧಪಟ್ಟ ಇಲಾಖೆಗಳನ್ನು ಹೊರತುಪಡಿಸಿ ಉಳಿದ ಸರ್ಕಾರಿ, ಅರೆ ಸರ್ಕಾರಿ ಮತ್ತು ಖಾಸಗಿ ಕಛೇರಿಗಳ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮನೆಯಿಂದಲೇ ಕೆಲಸ ನಿರ್ವಹಿಸಬೇಕು.

ಹಾಲು, ಡೈರಿ ಹಾಗೂ ಹಾಲಿನ ಬೂತುಗಳು ಮತ್ತು ಮೊಟ್ಟೆ ಅಂಗಡಿಗಳು ಮಾತ್ರ ಪ್ರತಿದಿನ ಬೆಳಿಗ್ಗೆ 6.00 ಗಂಟೆಯಿಂದ ಬೆ.10.00 ಗಂಟೆಯವರೆಗೆ ತೆರೆಯಲು ಅನುಮತಿಸಲಾಗಿದೆ. ಔಷಧಿ ಅಂಗಡಿಗಳು ಹಾಗೂ ಅಗತ್ಯ ಸೇವೆಗಳಾದ ಅಂಬುಲೆನ್ಸ್ ಅಗ್ನಿಶಾಮಕ ಮತ್ತು ಇತರೆ ತುರ್ತು ವೈದ್ಯಕೀಯ ಸೇವೆಗಳು, ವಿದ್ಯುತ್, ಪೆಟ್ರೋಲ್ ಪಂಪ್, ಆಮ್ಲಜನಕ ಉತ್ಪಾದನಾ ಘಟಕ, ನೀರು, ನೈರ್ಮಲ್ಯ ಸೇವೆಗಳಿಗೆ ಅನುಮತಿಸಲಾಗಿದೆ.

ಆಟೋ ರಿಕ್ಷಾ ಮತ್ತು ಟ್ಯಾಕ್ಸಿಗಳ ಸಂಚಾರಕ್ಕೆ ಅಧಿಕೃತ ಪ್ರಯಾಣ ದಸ್ತಾವೇಜುಗಳು/ಟಿಕೆಟ್‍ಗಳನ್ನು ತೋರಿಸಿದರೆ ಮಾತ್ರ ಸಂಚರಿಸಲು ಅನುಮತಿಸಿದೆ. ಪಡಿತರ ನ್ಯಾಯಬೆಲೆ ಅಂಗಡಿಗಳು ತೆರೆಯಲು ಕೊಪನ್ ವ್ಯವಸ್ಥೆಯಿಂದ ಜನ ಗುಂಪು ಸೇರದಂತೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಷರತ್ತಿಗೊಳಪಟ್ಟು ಅನುಮತಿಸಲಾಗಿದೆ.

ಇಂದಿರಾ ಕ್ಯಾಂಟೀನ್ ತೆರೆಯಲು ಅನುಮತಿಸಲಾಗಿದೆ. ದಿನಪತ್ರಿಕೆ, ದೃಶ್ಯಮಾಧ್ಯಮಗಳ ಸೇವೆಗಳಿಗೆ ಅನುಮತಿಸಲಾಗಿದೆ. ಎಲ್ಲಾ ರೀತಿಯ ಸರಕುಗಳ ಸಾಗಾಣಿಕೆಗೆ ಮತ್ತು ಖಾಲಿ ವಾಹನಗಳಿಗೆ ಅನುಮತಿಸಲಾಗಿದೆ, ವಿಶೇಷವಾಗಿ ಅಮ್ಲಜನಕ ತರುವ ವಾಹನಗಳನ್ನು ತಡೆರಹಿತ ಸಾಗಾಟವನ್ನು ಅನುಮತಿಸಲಾಗಿದೆ.

ನಿರ್ಗತಿಕರ ಕೇಂದ್ರ, ವೃದ್ದಾಶ್ರಮ, ಬಾಲಮಂದಿರ, ಬಾಲಾಶ್ರಮ, ಅನಾಥಶ್ರಮ ಇವುಗಳಿಗೆ ಅನುಮತಿ ಇದೆ. ಅಂತರ ರಾಜ್ಯ ಮತ್ತು ಅಂತರ ಜಿಲ್ಲಾ ವ್ಯಕ್ತಿಗಳ ಸಂಚಾರವನ್ನು ಸರ್ಕಾರದ ಆದೇಶದಂತೆ ಅನುಮತಿ ಇದೆ. ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಹಾಪ್-ಕಾಮ್ಸ್ ಮೂಲಕ ಮಾತ್ರ ಸಾರ್ವಜನಿಕರಿಗೆ ತರಕಾರಿಗಳನ್ನು ಹಾಗೂ ಹಣ್ಣುಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ಮಾರಾಟ ಮಾಡಲು ಅನುಮತಿ ನೀಡಲಾಗಿದೆ.

ಹಾಪ್-ಕಾಮ್ಸ್ ಲಭ್ಯವಿಲ್ಲದಿರುವ ಪ್ರದೇಶಗಳಲ್ಲಿ ಆಯುಕ್ತರು, ಮಹಾನಗರಪಾಲಿಕೆ ಮತ್ತು ಸಂಬಂಧಪಟ್ಟ ತಹಶೀಲ್ದಾರರು ಸ್ಥಳೀಯವಾಗಿ ಸೀಮಿತ ಸಂಖ್ಯೆಯಲ್ಲಿ ತಳ್ಳುವ ಗಾಡಿಯ ಮೂಲಕ ಮನೆ ಬಾಗಿಲಿಗೆ ತರಕಾರಿಗಳನ್ನು ಹಾಗೂ ಹಣ್ಣುಗಳನ್ನು ಮಾರಾಟ ಮಾಡಲು ಅನುಮತಿ ಕಲ್ಪಿಸಲಾಗಿದೆ.

ಕಿರಾಣಿ ಅಂಗಡಿಗಳು, ದಿನಸಿ, ಹಣ್ಣು ತರಕಾರಿಗಳು, ಮಾಂಸ ಮತ್ತು ಮೀನು, ಹಾಗೂ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ. ಎಲ್ಲಾ ರೀತಿಯ ಮದ್ಯದಂಗಡಿಗಳನ್ನು ಮತ್ತು ಬಾರ್‍ಗಳನ್ನು ಈ ಅವಧಿಯಲ್ಲಿ ನಿಷೇಧಿಸಲಾಗಿರುತ್ತದೆ.

ಅಡುಗೆ ಅನಿಲ ಕಾರ್ಯನಿರ್ವಹಣೆಯನ್ನು ಮನೆ ಬಾಗಿಲಿಗೆ ತಲುಪಿಸುವ ಷರತ್ತಿಗೊಳಪಟ್ಟು ಕಾರ್ಯನಿರ್ವಹಣೆಯನ್ನು ಅನುಮತಿಸಲಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಸಗಟು ಮಾರಾಟಗಾರರು ತರಕಾರಿ ಹಾಗೂ ಹಣ್ಣುಗಳನ್ನು ಖರೀದಿಸಲು ಹಾಗೂ ಬೇರೆಡೆ ಸಾಗಿಸಲು ಯಾವುದೇ ನಿರ್ಬಂಧ ಇರುವುದಿಲ್ಲ.

ನಿರ್ಮಾಣ ಸ್ಥಳದಲ್ಲಿಯೇ ವಾಸವಾಗಿರುವ ಕಾರ್ಮಿಕರನ್ನು ಬಳಸಿಕೊಂಡು ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು ಅನುಮತಿಸಲಾಗಿದೆ. ಇ-ಕಾಮರ್ಸ್/ಹೋಮ್ ಡೆಲಿವರಿ ಸೇವೆಗಳ ಮುಖಾಂತರ ಎಲ್ಲಾ ವಸ್ತುಗಳನ್ನು ಮನೆಗೆ ಸರಬರಾಜು ಮಾಡಲು ಅನುಮತಿಸಲಾಗಿದೆ.

ವಿನಾಯತಿ ನೀಡಿರುವ ಅಗತ್ಯ ಚಟುವಟಿಕೆಗಳಲ್ಲಿ ಕೋವಿಡ್-19ರ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ನಿಗದಿಪಡಿಸಿದ ಮಾರ್ಗಸೂಚಿ ಅಥವಾ ನಿಬಂಧನೆಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ, 2005 ರ ವಿಭಾಗ 51 ರಿಂದ 60ರ ಅನ್ವಯ ಮತ್ತು ಐಪಿಸಿ ಸೆಕ್ಷನ್ 188 ರಂತೆ ಹಾಗೂ ಕರ್ನಾಟಕ ಸಾಂಕ್ರಾಮಿಕ ಕಾಯ್ದೆ, 2005ರ ವಿಭಾಗ 4, 5 ಮತ್ತು 10ರಂತೆ ಕ್ರಮ ಜರುಗಿಸಲಾಗುವುದು ಎಂದರು.

ಸಂಸದ ಜಿ.ಎಂ. ಸಿದ್ದೇಶ್ವರ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಶಾಸಕರುಗಳಾದ ಪ್ರೊ. ಲಿಂಗಣ್ಣ, ಎಸ್.ಎ. ರವೀಂದ್ರನಾಥ್, ಮಹಾನಗರಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಿಜಯ ಮಹಾಂತೇಶ್ ಸೇರಿದಂತೆ ವಿವಿಧ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಆತ್ಮಕತೆ | ವಿಶ್ವವಿದ್ಯಾಲಯದ ವಿರುದ್ಧ ನಡೆಸಿದ ಎರಡು ಧರಣಿಗಳು

Published

on

  • ರುದ್ರಪ್ಪ ಹನಗವಾಡಿ

ಮೈಸೂರು ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿ, ಕುವೆಂಪು ಅವರ ಮಾನಸಪುತ್ರರೆಂದೇ ಖ್ಯಾತರಾಗಿದ್ದ ಕನ್ನಡದ ಗದ್ಯ ಬರಹಗಾರ ಪ್ರೊ. ದೇ.ಜ.ಗೌ. ಅವರು ಎರಡು ಅವಧಿಗೆ ಉಪಕುಲಪತಿಗಳಾಗಿದ್ದರು. ಅವರ ಆಡಳಿತಾವಧಿಯಲ್ಲಿಯೇ ಹಲವು ಹೊಸ ಇಲಾಖೆ ಮತ್ತು ಗಂಗೋತ್ರಿಯಲ್ಲಿನ ಅನೇಕ ಹೊಸ ಕಟ್ಟಡಗಳು ಮತ್ತು ಇತರೆ ಮೂಲಭೂತ ಸೌಲಭ್ಯಗಳನ್ನು ಮಾಡಿಸಿದ್ದರು. ಹೀಗಿರುವಾಗ ನಾವು ಫೈನಲ್ ಎಂ.ಎ.ನಲ್ಲಿರುವಾಗ ಪ್ರಥಮ ಎಂ.ಎ., ಎಂ.ಎಸ್ಸಿ., ಎಂ.ಕಾಂ., ಗಳಲ್ಲಿ ಸೇರಿಸಿಕೊಳ್ಳುವಾಗ ಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂಬ ಕೂಗು ಬಂದ ಕಾರಣ ಸಮಾಜವಾದಿ ಯುವಜನ ಸಭಾ ವತಿಯಿಂದ ಪ್ರತಿಭಟಿಸಲು ತೀರ್ಮಾನಿಸಲಾಯಿತು.

ಮೊದಲನೆಯದಾಗಿ ವಿಶ್ವವಿದ್ಯಾಲಯದ ಪಿ.ಜಿ. ಗಳಲ್ಲಿ ಪ್ರವೇಶಾವಕಾಶಗಳು, ವಿದ್ಯಾರ್ಥಿಗಳು ಆಯಾ ವಿಷಯಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅವಕಾಶವನ್ನು ಪಡೆಯುತ್ತಿದ್ದರು. ನಾನು 1972-73ನೇ ಸಾಲಿನಲ್ಲಿ ಸೇರಿದಾಗಲೂ ಹಲವು ವಿಷಯಗಳಲ್ಲಿ ಪ್ರವೇಶಾವಕಾಶದ ಕೊನೆಯ ಹಂತದಲ್ಲಿ ಮಂತ್ರಿ ಮಹೋದಯರೋ ಇಲ್ಲ ವಿಶ್ವವಿದ್ಯಾಲಯದಲ್ಲಿನ ಪ್ರೊಫೆಸರ್‌ಗಳ ಶಿಫಾರಸ್ಸಿನಿಂದ ಒಂದೋ ಎರಡೋ ಕಡಿಮೆ ಅಂಕ ಪಡೆದವರಿಗೂ ಸೀಟು ಕೊಡುತ್ತಿದ್ದರು. ಇವೆಲ್ಲ ಬಹಳ ದಿನಗಳ ನಂತರ ತಿಳಿಯುತ್ತಿದ್ದವು. ಆದರೆ 1973-74 ಆರಂಭಿಕ ಪ್ರವೇಶದಲ್ಲಿ ಅನೇಕ ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆದಿದ್ದರೂ ಹಲವಾರು ವ್ಯಕ್ತಿಗಳ ಶಿಫಾರಸ್ಸಿನ ಹಿನ್ನೆಲೆಯಲ್ಲಿ 8-10 ವಿದ್ಯಾರ್ಥಿಗಳು ಹಲವಾರು ಸ್ನಾತಕೋತ್ತರ ಶಾಖೆಗಳಲ್ಲಿ ಸೇರ್ಪಡೆಯಾಗಿದ್ದರು.

ಅವುಗಳ ವಿರುದ್ಧ ಸಮಾಜವಾದಿ ಯುವಜನ ಸಭಾದ ವಿದ್ಯಾರ್ಥಿಗಳು ದೇವನೂರು ಮಹಾದೇವನ ನೇತೃತ್ವದಲ್ಲಿ ಕ್ರಾರ‍್ಡ್ ಹಾಲ್ ಎದುರು ಧರಣಿ ಕೂತಿದ್ದೆವು. ಸಣ್ಣದೊಂದು ಪೆಂಡಾಲ್ ಹಾಕಿಕೊಂಡು ವಿಶ್ವವಿದ್ಯಾಲಯದ ಅತ್ಯುನ್ನತ ಕಲಿಕಾ ಕೇಂದ್ರಗಳಲ್ಲಿ ಕ್ರಮಬದ್ಧವಲ್ಲದ ಪ್ರವೇಶಗಳನ್ನು ರದ್ದುಪಡಿಸಲು ಆಗ್ರಹಿಸಿ ಧರಣಿ ನಡೆಯುತ್ತಿತ್ತು. ಈ ಧರಣಿ ಪ್ರಾರಂಭವಾಗುತ್ತಿದ್ದಂತೆ ಎಲ್ಲೆಲ್ಲಿ ಎಷ್ಟೆಷ್ಟು ವಿದ್ಯಾರ್ಥಿಗಳನ್ನು ಶಿಫಾರಸ್ಸಿನ ಮೇರೆಗೆ ಪ್ರವೇಶ ಪಡೆದಿದ್ದಾರೆ ಎನ್ನುವ ಚರ್ಚೆ ಬಂದು ರಾಜ್ಯಶಾಸ್ತç ವಿಭಾಗದಲ್ಲಿ ಅತ್ಯಂತ ಹೆಚ್ಚು ಅನಧಿಕೃತ ಪ್ರವೇಶ ಆಗಿದ್ದವೆಂದು ತಿಳಿದು ಬಂದಿತ್ತು.

ಉಳಿದ ವಿಭಾಗಗಳಲ್ಲಿ ಒಂದು ಎರಡು ಹೀಗೆ ಇದ್ದರೆ, ಕೆ.ಬಿ.ವೈ. ತೋಟಪ್ಪನವರು ಮುಖ್ಯಸ್ಥರಾಗಿದ್ದ ರಾಜ್ಯಶಾಸ್ತç ವಿಭಾಗದಲ್ಲಿ ಅದು ಹೆಚ್ಚಾಗಿತ್ತು. ಹೀಗೆ ಧರಣಿ ಮಾಡುತ್ತಿದ್ದ ನಮ್ಮಲ್ಲಿಗೆ ಮಹೇಶ ರಾಜ್ಯಶಾಸ್ತç ವಿಭಾಗಕ್ಕೆ ಶಿಫಾರಸ್ಸಿನಲ್ಲೇ ಪ್ರವೇಶ ಪಡೆದವನು, ನಮಗೆಲ್ಲ ಇಡ್ಲಿ ಚಟ್ನಿ ಕಟ್ಟಿಸಿಕೊಂಡು ಬಂದು ಕೊಟ್ಟನು. ಅವನ ವಿರುದ್ಧವೇ ನಾವು ಧರಣಿ ಕೂತಿದ್ದರೂ, ಯಾವ ಭಾವಾವೇಶವೂ ಇಲ್ಲದೆ, ಅವನನ್ನು ನೋಡಿ ನಮಗೆ ಅತ್ಯಾಶ್ಚರ್ಯವಾಗಿತ್ತು. ಎಲ್ಲ ಅನಧಿಕೃತ ಪ್ರವೇಶಾರ್ಥಿಗಳನ್ನು ತೆಗೆದು ಹಾಕಿದರೆ ನನಗೇನು ಬೇಸರವಿಲ್ಲ. ನಮ್ಮಪ್ಪನಿಗೆ ಸ್ವಲ್ಪ ಬೇಜಾರಾಗಬಹುದೆಂದು ಹೇಳಿದ್ದು ಈಗ ನೆನಪಾಗುತ್ತಿದೆ. ನಮ್ಮ ಧರಣಿಯಿಂದಾಗಿ ಈಗಾಗಲೇ ಆಗಿರುವ ಪ್ರವೇಶಾರ್ಥಿಗಳನ್ನು ತೆಗೆದು ಹಾಕಲಿಲ್ಲ. ಮುಂದಿನ ವರ್ಷಗಳಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಯಾಗಿ ಪ್ರೊಫೆಸರ್‌ಗಳು ಪ್ರವೇಶಗಳಿಗೆ ಅರ್ಹವಾದ ವಿದ್ಯಾರ್ಥಿಗಳ ಅರ್ಜಿಗಳನ್ನು ಕುಲಪತಿಗಳ ಅನುಮೋದನೆ ಪಡೆದು, ನಂತರ ಪ್ರವೇಶಾರ್ಥಿಗಳಿಗೆ ಪ್ರವೇಶ ನೀಡುವ ಪರಿಪಾಲನೆ ಜಾರಿಗೆ ಬಂದಿದ್ದೊಂದು ಎಸ್.ವೈ.ಎಸ್. ಸಂಘಟನೆಯ ಸಾಧನೆ.

ಜೊತೆಗೆ ನಾನೂ ಕೂಡ, ಕಳೆದ ವರ್ಷವಷ್ಟೇ ಪಾರ್ವತಕ್ಕನವರ ಶಿಫಾರಸ್ಸಿನಿಂದ ಮೂರನೇ ಲಿಸ್ಟ್ನಲ್ಲಿ ಸೀಟು ಪಡೆದುಕೊಂಡಿದ್ದು, ಆ ಬಗ್ಗೆ ನನ್ನೊಳಗೆ ಅಪರಾಧಿ ಭಾವ ಇದ್ದೇ ಇತ್ತು. ಆಗ ಇದೊಂದು ದೊಡ್ಡ ಮಟ್ಟದ ಅನ್ಯಾಯವೆಂದು ಯಾರೂ ಪರಿಗಣಿಸದೆ ಮುಚ್ಚಿ ಹೋಯಿತು. ಈಗ ಅಂತಹ ಶಿಫಾರಸ್ಸಿನವರ ಸಂಖ್ಯೆಯೇ ಜಾಸ್ತಿಯಾಗಿ, ಅದರ ವಿರುದ್ಧ ಹೋರಾಟ ರೂಪಿಸುವಂತೆ ಆಗಿದ್ದು, ನಾನೂ ಕೂಡ ಭಾಗವಹಿಸಿದ್ದು ಆ ಕಾಲಘಟ್ಟದ ಎಚ್ಚರಿಕೆಯಲ್ಲಿದ್ದ ಸಂಘಟನೆಯ ಶಕ್ತಿಯಾಗಿತ್ತು.

ನಮ್ಮ ಧರಣಿಯ ವಿವರ ಮತ್ತು ಅನಧಿಕೃತ ಪ್ರವೇಶಾರ್ಥಿಗಳು ಅರ್ಥಶಾಸ್ತ್ರ ವಿಭಾಗದಲ್ಲೂ ಆಗಿರುವ ಬಗ್ಗೆ ಬಂಡಾಯ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವುಗಳ ಪ್ರತಿಗಳನ್ನು ನಾನು ಸ್ವತಃ ಕ್ಲಾಸಿನಲ್ಲಿ ಹಂಚಿದ್ದೆ. ಆದರೆ ನಮ್ಮ ವಿಭಾಗದ ಮುಖ್ಯಸ್ಥರಾದ ಜಿ.ಟಿ. ಹುಚ್ಚಪ್ಪನವರು ಯಾವುದೇ ವಿಚಾರಣೆ ನಡೆಸದೆ ಸುಮ್ಮನಾಗಿದ್ದರು. ಅವರು, ಆಗ ತೋರಿದ ದೊಡ್ಡತನ ಮರೆಯಲಾಗಿಲ್ಲ. ಅವರು ಮನಸ್ಸು ಮಾಡಿದ್ದರೆ ನನಗೆ ಶೈಕ್ಷಣಿಕವಾಗಿ ತೊಂದರೆ ಕೊಡಬಹುದಾಗಿತ್ತು. ಆದರೆ ಹಿರಿಯರಾಗಿದ್ದ ಪ್ರೊ. ಜಿ.ಟಿ. ಹುಚ್ಚಪ್ಪ ಅವರು ದೊಡ್ಡತನದಿಂದಲೇ ನಡೆದುಕೊಂಡಿದ್ದರು. ಗಂಗೋತ್ರಿ ತುಂಬಾ ಎಲ್ಲ ವಿಭಾಗಗಳ ಹೊರಗೆ ಅನಧಿಕೃತ ಪ್ರವೇಶಾರ್ಥಿಗಳ ಕುರಿತು ಘೋಷವಾಕ್ಯಗಳನ್ನು ಬರೆದಿದ್ದೆವು. ವಿಜ್ಞಾನ ಮತ್ತು ರಾಜ್ಯಶಾಸ್ತç ವಿಭಾಗದಲ್ಲಿ ಆಗಿದ್ದ ಪ್ರವೇಶಾರ್ಥಿಗಳ ವಿವರಗಳನ್ನು ಬಾಟನಿ ವಿಭಾಗದಲ್ಲಿ ರೀಡರ್ ಆಗಿದ್ದ ಪ್ರೊ. ರಾಮಲಿಂಗಮ್ ಅವರೊಡನೆ ಇತರೆ ಅಧ್ಯಾಪಕರುಗಳು ಕೂಡ ನಮಗೆ ವಿವರ ನೀಡುತ್ತಿದ್ದರು. ಎಲ್ಲಾ ವಿಭಾಗಗಳ ಮತ್ತು ಕನ್ನಡ ಅಧ್ಯಯನ ಸಂಸ್ಥೆಯ ಗೋಡೆಯ ಮೇಲೂ ಕೂಡ ಬರೆದಿದ್ದೆವು. ಮಾರನೆ ದಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ಹಾ.ಮಾ. ನಾಯಕ್ ಅವರು ಬಂದು ನೋಡಿ ಇದೆಲ್ಲಾ `ತಮ್ಮ ವಿದ್ಯಾರ್ಥಿ ಮಹಾದೇವನದೇ ಕೈವಾಡವೆಂದು ರೇಗಾಡಿದರೆಂತಲೂ, ಆತನಿಗೆ ತಕ್ಕ ಶಾಸ್ತಿ ಮಾಡುವುದಾಗಿ ಹೇಳಿದರೆಂದು’ ಆಲನಹಳ್ಳಿ ಕೃಷ್ಣ ಬಂದು ನನ್ನ ಬಳಿ ಹೇಳಿದರು.

ನಾನು ಮಹಾದೇವ ಬಂದಾಕ್ಷಣ ಅವನ ಕನ್ನಡ ವಿಭಾಗದಲ್ಲಿ ಆದ ಬೆಳವಣಿಗೆಯನ್ನು ತಿಳಿಸಿದೆ ಅದಕ್ಕವನು `ನಾವೆಲ್ಲ ಮಾಡುತ್ತಿರುವ ಹೋರಾಟದಲ್ಲಿ ನಿಮ್ಮಂತವರ ಬೆಂಬಲ ತಾತ್ವಿಕವಾಗಿ ಇರುವುದೆಂದು ಭಾವಿಸಿದ್ದೆವು, ಆದರೆ ನೀವು ಆಲನಹಳ್ಳಿ ಕೃಷ್ಣ ಅವರ ಬಳಿ ಆಡಿದ ಮಾತು ಕೇಳಿ ನನಗೆ ಜಿಗುಪ್ಸೆ ಮೂಡಿ ನಿಮ್ಮಂತಹವರ ಕೆಳಗೆ ವಿದ್ಯಾಭ್ಯಾಸ ಮುಂದುವರಿಸಲು ನಾಚಿಕೆಯಾಗುತ್ತದೆ’ ಎಂದು ಪತ್ರ ಬರೆದು ಹಾ.ಮಾ. ನಾಯಕ್ ಮತ್ತು ಪ್ರಜಾವಾಣಿ ಪತ್ರಿಕೆಗೂ ಕಳಿಸಿಕೊಟ್ಟುಬಿಟ್ಟ. ಇದಕ್ಕೆಲ್ಲ ಕಾರಣರಾದ ಆಲನಹಳ್ಳಿ ಅವರಿಗೆ ಪೀಕಲಾಟವಾಯಿತು. ಪೋಸ್ಟ್ ಹಾಕಿದ ಪತ್ರ ಹಾ.ಮಾ.ನಾ.ಗೆ ಮತ್ತು ಪ್ರಜಾವಾಣಿಗೆ ತಲುಪಿದರೂ ಪ್ರಕಟಿಸದಂತೆ ಪ್ರಜಾವಾಣಿಗೆ ಫೋನ್ ಮಾಡಲು ಪ್ರಯತ್ನಿಸಿದರು. ಆದರೆ ಹಾ.ಮಾ.ನಾ.ಗೆ ಬರೆದ ಪತ್ರ ತಲುಪಿ ಮಾದೇವನನ್ನು ಕರೆದು ಮಾತಾಡಿಸಿ, ಹಾ.ಮಾ.ನಾ. ನಾವುಗಳು ಮಾಡುತ್ತಿರುವ ಹೋರಾಟದ ಬಗ್ಗೆ ತಮ್ಮದೇನೂ ಅಭ್ಯಂತರವಿಲ್ಲವೆAದು ಹೇಳಿ ಕಳಿಸಿದರೆಂದು ನಂತರ ತಿಳಿಯಿತು. ಹಾಗಾಗಿ ಮಾದೇವ ಎಂ.ಎ. ಪೂರ್ತಿ ಮುಗಿಸುವ ತನಕ ಮತ್ತೇನು ತೊಂದರೆಯಾಗಲಿಲ್ಲ.

ನಮ್ಮ ಸೀನಿಯರ್ ಆಗಿದ್ದ ಬಸವಣ್ಯಪ್ಪ ಆಗಲೇ ಎಂ.ಎ. ಮುಗಿಸಿ ಪರ‍್ವತಕ್ಕನ ಸೋಷಿಯಾಲಜಿ ವಿಭಾಗದಲ್ಲಿ ಸಹಾಯಕ ನಿರ್ದೇಶಕನ ಕೆಲಸ ಮಾಡುತ್ತಿದ್ದ. ನಾನು ನನ್ನ ಎಸ್‌ವೈಎಸ್ ಚಟುವಟಿಕೆಗಳ ಬಗ್ಗೆ ಪತ್ರಿಕೆಗಳಲ್ಲಿ ವಿಶ್ವವಿದ್ಯಾಲಯದ ವಿಷಯ ಮುದ್ರಿಸಿ ತರಗತಿಯಲ್ಲಿ ಹಂಚಿದ ಬಗ್ಗೆ ತಿಳಿದು, ನನಗೆ ಎಚ್ಚರಿಕೆ ನೀಡಿ ನಿನಗೆ ಎಂ.ಎ.ನಲ್ಲಿ ಥರ್ಡ್ ಕ್ಲಾಸ್ ನೀಡಿ ಎಲ್ಲೂ ನಿನಗೆ ಕೆಲಸವಿದಲ್ಲದಂತೆ ಮಾಡುತ್ತಾರೆಂದು ತಿಳಿಸಿ ಆತಂಕ ವ್ಯಕ್ತಪಡಿಸಿದ್ದ. ಆದರೆ ಅಂತಹದ್ದೇನೂ ನಡೆಯದೆ ಫಲಿತಾಂಶ ಬಂದಾಗ ನಾನು ಎಂ.ಎ. ಸೆಕೆಂಡ್ ಕ್ಲಾಸ್‌ನಲ್ಲಿ ಪಾಸಾಗಿ ಹೊರಬಂದಿದ್ದೆ. ಅದಕ್ಕೆಲ್ಲ ಅಂದಿನ ಮುಖ್ಯಸ್ಥರಾಗಿದ್ದ ಪ್ರೊ. ಜಿ.ಟಿ. ಹುಚ್ಚಪ್ಪನವರ ವಿಶಾಲ ಹೃದಯದ ನಡವಳಿಕೆಯೇ ಕಾರಣವಾಗಿತ್ತು.

ಇನ್ನೊಂದು ಪ್ರಕರಣ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಸೋದರ ಸಂಬಂಧಿಯಾದ ಡಿ. ವಿಜಯರಾಜೇ ಅರಸ್ (ಡಿ.ವಿ. ಅರಸ್) ಅವರು ನೂತನ ರಿಜಿಸ್ಟಾçರ್ ಆಗಿ ಇದ್ದರು. ಅವರು ಬಿ.ಎ. (ಆರ‍್ಸ್) ಮಾಡಿ ಹಲವು ದೇಶಗಳನ್ನು ಸುತ್ತಿ ಬಂದ ಅನುಭವೀ ಆಡಳಿತಗಾರರಾಗಿದ್ದರು. ಅವರ ಆಡಳಿತ ಮತ್ತು ವೈಯಕ್ತಿಕ ಆಸಕ್ತಿಗೆ ತಕ್ಕಂತೆ ತಮ್ಮ ಛೇಂಬರ್‌ಗೆ ರೆಡ್ ಕಾರ್ಪೆಟ್ ಹಾಕಿಸಿಕೊಂಡದ್ದೊಂದು ದೊಡ್ಡ ಸುದ್ದಿಯಾಗಿತ್ತು. ಅದರ ವಿರುದ್ಧ ಎಸ್.ವೈ.ಎಸ್. ಧರಣಿ ಮಾಡಿ ಎಲ್ಲ ವಿದ್ಯಾರ್ಥಿಗಳಲ್ಲೂ ಚರ್ಚಿಸುವಂತೆ ಮತ್ತೆ ಪತ್ರಿಕೆಗಳಲ್ಲಿ ಬಂದು, ರಿಜಿಸ್ಟಾçರ್ ಅವರ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕೆಂದು ಧರಣಿ ಮಾಡಿದ್ದೆವು. ಈಗ ಯೋಚಿಸಿದರೆ ಆಗ ನಾವು ಮಾಡುತ್ತಿದ್ದ ಸಣ್ಣ ಸಣ್ಣ ಭ್ರಷ್ಟಾಚಾರ ಸ್ವಜನ ಪಕ್ಷಪಾತಗಳಿಗೆ ಪ್ರತಿಕ್ರಿಯಿಸುತ್ತಿದ್ದ ವಿದ್ಯಾರ್ಥಿ ಸಮೂಹ ಈಗ ಇಂತಹ ಯಾವುದೇ ಸ್ಪಂದನವನ್ನು ಕಾಣದೆ ಎಲ್ಲರೂ ತಮ್ಮ ತಮ್ಮ ಜಾತಿ ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿ ಸಮಾಜದ ಸಮಷ್ಟಿ ಬೆಳವಣಿಗೆಯ ಬಗ್ಗೆ ನಿರುತ್ಸಾಹ ಎದ್ದು ಕಾಣುತ್ತದೆ. ವಿಶ್ವವಿದ್ಯಾಲಯಗಳಲ್ಲಿ ವರ್ಷಗಟ್ಟಲೆ ಅಧ್ಯಾಪಕರಿಲ್ಲದೆ ಇದ್ದರೂ,ಆ ಬಗ್ಗೆ ದಿವ್ಯ ನಿರ್ಲಕ್ಷ್ಯ ದಿಂದ ಇರುವ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳಲ್ಲಿ ಸಂಘಟಿತ ಹೋರಾಟಗಳು ಇಲ್ಲವಾಗಿವೆ.

ಈ ಮೇಲಿನ ಎರಡು ಧರಣಿಗಳು ಎಲ್ಲಾ ವಿದ್ಯಾರ್ಥಿ ದೆಸೆಯ ಸಮಾಜವಾದಿ ಯುವಜನ ಸಭಾದ ಸಂಘಟನೆಯ ಮುಖಾಂತರ ನಡೆದವುಗಳು. ವಿದ್ಯಾರ್ಥಿಗಳಾಗಿ ನಾವು ವಿಶ್ವವಿದ್ಯಾಲಯದಲ್ಲಿನ ಸಮಸ್ಯೆಗಳಿಗೆ ಏನೂ ಮಾಡಲಾರೆವು ಎಂದು ಕೈಚೆಲ್ಲಿ ಕೂರದೆ ಸಂಘಟಿತ ಪ್ರತಿಭಟನೆ ಮಾಡಿದಾಗ ಆಗುವ ಬದಲಾವಣೆಯನ್ನು ಕೂಡ ಕಣ್ಣೆದುರಿಗೆ ತೋರಿಸುವಂತಾಗಿದ್ದವು. ಮುಂದಿನ ದಿನಗಳಲ್ಲಿ ಅಧಿಕಾರಸ್ಥರಿಗೆ ಸರಿಯಾದ ಮಾರ್ಗದಲ್ಲಿ ನಡೆಯಲು ದಿಕ್ಸೂಚಿಯಾಗಿ ನಿಂತವು ಎಂಬುದರಲ್ಲಿ ಎರಡು ಮಾತಿಲ್ಲ.

ಓ ನನ್ನ ಮೈಸೂರೆ !

ನಮ್ಮೂರ ಹಾಲಿವಾಣದ ಮುಳ್ಳುಗಳು
ಓಡಾಡೋ ದಾರಿಯ ಕೊರಕಲುಗಳು
ಒಪ್ಪಾರೆ ನೆರಕೆಯ ಹೋಟೆಲುಗಳ ಕಿಲುಬು ಕಪ್ಪುಗಳು
ಒಟ್ಟಾರೆ ಒಂದೆರಡಲ್ಲ ಹೀಗೆ ನೂರಾರು ಸಿಕ್ಕುಗಳ
ಮಡಿ ಮೈಲಿಗೆ ದಾಟಿ…

ನೇರ ಹರಿಯೋ ರೈಲುಹತ್ತಿ ಮೈಸೂರು ತಲುಪಿದ್ದು
ಮಹಾರಾಜರೇ ಕಟ್ಟಿದ ಕಾಲೇಜು ಮೆಟ್ಟಿದ್ದು
ಅರಮನೆ, ಚಾಮುಂಡಿ ಬೆಟ್ಟ
ಎತ್ತೆತ್ತಲೋ ಕೊಂಡೊಯ್ಯುವ ರಸ್ತೆಗಳು
ಹೌಹಾರುವ ನೋಟಗಳು
ಎಲ್ಲ ಹೊತ್ತೊಗೆದಿತ್ತು ನನ್ನ
ಜನ್ಮ ಜನ್ಮಾಂತರದ ಹೊರೆಯ
ಕಣ್ಣಿಗಂಟಿದಾ ಪೊರೆಯ…

ದಿವ್ಯ ದೇಗುಲದಾ ಒಳಗೆ
ಬೆಳಕ ತೋರೋ ಪಂಡಿತರು
ಕಾಸಿ ಕಾಸಿ ಹಣಿಯೋ ಕುಲುಮೆಗಳು
ಬೆಳ್ಳಿ ಬಂಗಾರದ ಭಂಡಾರಗಳು
ಉAಡು ಉಡಲು ಇತ್ತ
ರಾಜನ ಹೆಸರಿನ ತಂಗುದಾಣ
ಅದುವೇ ಪಂಚಾಮೃತ…

ಇದ್ದವರೆಲ್ಲ, ಇಲ್ಲಿ ನನ್ನಂತವರಲ್ಲ
ಆಗಲೇ ಸಿಗರೇಟು ಹಚ್ಚಿ
ಕಥೆ ಬರೆಯೋ ಮಾದೇವ
ಟರ್ಲಿನ್ ಷರ್ಟನಲ್ಲಿ ಬಂಗಾರದ ಚೈನು ಹಾಕಿ
ವಿಶಾಲ ಹೃದಯ ತೋರೋ ರೆಡ್ಡಿ
ತಾಯಿಗಡುಸಿನ ತಾವು ತೋರೋ ಮಹೇಶ
ಅವಸರದಲ್ಲೂ ಉಡದಂತೆ ಹಿಡಿದು ಒಪ್ಪಿಸೋ ಅರ್ಕೇಶ
ಅಕ್ಷರಗಳನಾಡಿಸಿ ಮಣಿಸೋ ಭಕ್ತ
ಸಮತಟ್ಟಲಿ ಹರಿಯೋ ಹೊಳೆಯಂತೆ ಗೊಟ್ಟಿಗೆರೆ ಶಿವರಾಜ
ವಾರವೆಲ್ಲ ಉಣದಿದ್ದರೂ ಬಣ್ಣಗೆಡದ ರಾಕೆ…

ಇಂತವರೆಲ್ಲರ ಕೂಡಿ ಹಾಕಿ ಮಾತಾಡೋ
ನಂಜುAಡಸ್ವಾಮಿ, ವಕೀಲ ಟಿ.ಎನ್.ಎನ್., ದಾನಿ ಪಿ. ಮಲ್ಲೇಶ್
ಅನಂತರಂಗಾಚಾರ್, ರಾಮದಾಸ್
ನೆಲಮೂಲದ ನೆರವು ತೋರೋ
ನೆಲಮನೆಯ ದೇವೇಗೌಡ
ಆಂದೋಲನದಾಳಕ್ಕೂ ಮುಳುಗಿನಿಂತ
ರಾಜಶೇಖರ ಕೋಟಿ
ಅರೆಜೀವಗೊಂಡವರ
ಹೊರೆಹೊತ್ತು ಬರುವಾ ಕೃಷ್ಣಪ್ಪ
ರಿಪೇರಿಯಲ್ಲೇ ಓಡೋ ಜೀಪಲ್ಲಿ ತೇಜಸ್ವಿ
ಕ್ರಾಂತಿಕವನಗಳ ಕಟ್ಟು ಹೊತ್ತ
ಸಂಕ್ರಮಣದ ಚಂಪಾ
ಸ್ಫೋಟಕ ಸುದ್ಧಿಯ ಪ್ರೊ. ರಾಮಲಿಂಗ
ಯುವಕರ ಕಣ್ಣಲ್ಲಿ ಮಿಂಚು ಹರಿಸೋ
ಅನಂತಮೂರ್ತಿ, ಲಂಕೇಶ, ರಾಮಮೂರ್ತಿ
ವಿಚಾರವಾದಿಗಳ ರಥಕತೆಯ
ರ‍್ಮಲಿಂಗಂ, ಕೊವೂರ್, ಪೆರಿಯಾರ್
ಹೆಚ್. ನರಸಿಂಹಯ್ಯ, ಕುವೆಂಪು, ಬಸವಲಿಂಗಪ್ಪ…

ಬದುಕು ಬರಹಗಳೇ
ರಸವಾಗಿ ಕೊಸರಾಗಿ ಮೈವೆತ್ತ
ಎಲ್. ಬಸವರಾಜು, ಸುಜನಾ
ಹೀಗೆ ಹರಿಯುತ್ತದೆ
ನನ್ನರಿವಿನಾ ಹರವು…
ಬೆರಗಾಗಿ – ಬೆಳಕಾಗಿ
ಕೆನೆಮೊಸರ ಕಡೆದಂತೆ
ಸೊಗಸಾಗಿ ಬೆಳೆದಿದೆ
ಇಂದಿಗೂ ತಲೆದಿಂಬಾಗಿ
ತಲೆ ಎತ್ತಿ ತಿರುಗಾಡುವ
ಅಂಬಾಗಿ…

ಮುಂದುವರಿಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಆರನೇ ಹಂತದ ಲೋಕಸಭಾ ಚುನಾವಣೆ ಮತದಾನ ಶಾಂತಿಯುತ

Published

on

ಸುದ್ದಿದಿನ ಡೆಸ್ಕ್ : ದೇಶದಲ್ಲಿ ಲೋಕಸಭಾ ಚುನಾವಣೆಯ 6ನೇ ಹಂತಕ್ಕಾಗಿ ಇಂದು ನಡೆದ ಮತದಾನ ಶಾಂತಿಯುತವಾಗಿ ಮುಕ್ತಾಯವಾಗಿದೆ.

ಈ ಹಂತದಲ್ಲಿ 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಒಳಗೊಂಡಂತೆ ಒಟ್ಟು 58 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಿತು. 5 ಗಂಟೆಯ ವೇಳೆಗೆ ಬಂದ ವರದಿಯ ಪ್ರಕಾರ, 6ನೇ ಹಂತದ 58 ಕ್ಷೇತ್ರಗಳಲ್ಲಿ ಒಟ್ಟಾರೆ ಶೇಕಡ 57.70 ರಷ್ಟು ಮತದಾನವಾಗಿದೆ.

ಬಿಹಾರದಲ್ಲಿ ಶೇಕಡ 52.24, ಜಾರ್ಖಂಡ್‌ನಲ್ಲಿ ಶೇಕಡ 61.41, ಹರ್ಯಾಣzಲ್ಲಿ ಶೇಕಡ 55.93, ಒಡಿಶಾದಲ್ಲಿ ಶೇಕಡ 59.60, ಉತ್ತರಪ್ರದೇಶದಲ್ಲಿ 52.02 ಮತ್ತು ಪಶ್ಚಿಮಬಂಗಾಳದಲ್ಲಿ 77.99, ದೆಹಲಿಯಲ್ಲಿ 53.73 ಹಾಗೂ ಜಮ್ಮು-ಕಾಶ್ಮೀರದಲ್ಲಿ ಶೇಕಡ 51.35ರಷ್ಟು ಮತದಾನವಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚನ್ನಗಿರಿ | ಆರೋಪಿ ಮೃತಪಟ್ಟ ಪ್ರಕರಣ ; ಅದು ಲಾಕಪ್ ಡೆತ್ ಅಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

Published

on

ಸುದ್ದಿದಿನ,ದಾವಣಗೆರೆ : ಚನ್ನಗಿರಿಯಲ್ಲಿ ಪೊಲೀಸ್ ವಶದಲ್ಲಿ ಆರೋಪಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಆರೋಪಿಗೆ ಮೂರ್ಛೆ ರೋಗವಿದ್ದು ಲಾಕಪ್ ಡೆತ್ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸ್ಪಷ್ಟನೆ

ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಪೊಲೀಸ್ ವಶದಲ್ಲಿದ್ದ ಆರೋಪಿ ಆದಿಲ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದು, ದೂರಿನ ಬೆನ್ನಲ್ಲೇ ಆದಿಲ್‌ನನ್ನು ಪೊಲೀಸರು ಠಾಣೆಗೆ ಕರೆತಂದಿದ್ದಾರೆ.

ಕರೆತಂದ ಕೆಲವೇ ನಿಮಿಷದಲ್ಲೇ ಆರೋಗ್ಯದಲ್ಲಿ ಏರುಪೇರಾಗಿ ಸಾವನ್ನಪ್ಪಿದ್ದಾನೆ. ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ಕಾರಣ ತಿಳಿದುಬರಲಿದೆ ಎಂದು ಹೇಳಿದ್ದಾರೆ.

ಆದಿಲ್ ಸಾವು ಬೆನ್ನಲ್ಲೇ ರೊಚ್ಚಿಗೆದ್ದ ಜನರು, ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದಾರೆ. ಚನ್ನಗಿರಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಚನ್ನಗಿರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending