ದಿನದ ಸುದ್ದಿ
ರಕ್ತವನ್ನು ಶುದ್ಧವಾಗಿಟ್ಟುಕೊಳ್ಳಿ : ರೆಡ್ಕ್ರಾಸ್ ಕಾರ್ಯದರ್ಶಿ ಮಂಜುನಾಥ್ ಕರೆ
ಸುದ್ದಿದಿನ,ದಾವಣಗೆರೆ : ಶುದ್ಧ ರಕ್ತದಾನವು ಮತ್ತೊಬ್ಬರ ಜೀವ ಉಳಿವಿಗೆ ಕಾರಣವಾಗುತ್ತದೆ. ಆದ್ದರಿಂದ ರಕ್ತದ ಮಹತ್ವ ಅರಿತುಕೊಳ್ಳಿ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ದಾವಣಗೆರೆ ಜಿಲ್ಲಾ ಶಾಖೆಯ ಕಾರ್ಯದರ್ಶಿ ಮಂಜುನಾಥ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಅವರು ದಾವಣಗೆರೆ ರೆಡ್ ಕ್ರಾಸ್ ಸಂಸ್ಥೆ ಹಾಗೂ ದಾವಣಗೆರೆ ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿಯವರ ಸಹಯೋಗದಲ್ಲಿ ತಾಲ್ಲೂಕಿನ ಗೋಪನಾಳ್ ಗ್ರಾಮದ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಹಮ್ಮಿಕೊಂಡಿದ್ದ ಉಚಿತ ರಕ್ತ ಗುಂಪು ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಅನ್ನದಾನ, ವಿದ್ಯಾದಾನದಂತೆ ರಕ್ತದಾನವೂ ಕೂಡ ಮಹಾದಾನಗಳಲ್ಲಿ ಒಂದಾಗಿದೆ. ರಕ್ತವು ಮಾನವನ ಚೈತನ್ಯಕ್ಕೆ ಅವಶ್ಯವಾದ ಅಂಗಾಂಶ. ರಕ್ತದಾನ ಮಾಡಿದರೆ ಮತ್ತೆ ಹೊಸ ಚೈತನ್ಯಯುಕ್ತ ರಕ್ತ ಉತ್ಪತ್ತಿಯಾಗುತ್ತದೆ. ಆದ್ದರಿಂದ ಭಯಪಡುವ ಅಗತ್ಯವಿಲ್ಲ. 18 ವರ್ಷ ತುಂಬಿದ ನಂತರ ವಿದ್ಯಾರ್ಥಿಗಳು ರಕ್ತದಾನ ನೀಡಲು ಮುಂದಾಗಬೇಕು ಎಂದರು. ಪ್ರಸ್ತುತ ಅತ್ಯವಶ್ಯ ಎನಿಸಿರುವ ಆಧಾರ್ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್ ನಂತೆ ರಕ್ತ ಗುಂಪಿನ ಕಾರ್ಡ್ ಸಹ ನಮ್ಮ ಬಳಿ ಇರಬೇಕಾಗಿದೆ ಎಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಸತಿ ಶಾಲೆಯ ಪ್ರಾಚಾರ್ಯ ವಿ.ಸಿ ಅಂಜಿನಪ್ಪ ಮಾತನಾಡಿ, ಸರ್ಕಾರಿ ಶಾಲಾ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ರಕ್ತ ಗುಂಪು ಪರೀಕ್ಷೆಯನ್ನು ಉಚಿತವಾಗಿ ಆಯೋಜಿಸಿದ ಎರಡೂ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದರಲ್ಲದೆ ಎರಡೂ ಸಂಸ್ಥೆಗಳ ಪದಾಧಿಕಾರಿಗಳಿಗೆ ಕೃತಜ್ಞತಾಪೂರ್ವಕ ವಂದನೆಗಳನ್ನು ಅರ್ಪಿಸಿದರು.
ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ್ ಅವರಿಗೆ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.ರೆಡ್ಕ್ರಾಸ್ ಸಂಸ್ಥೆಯ ಖಜಾಂಚಿ ಗೌಡ್ರು ಚನ್ನಬಸಪ್ಪ, ಅಕಾಡೆಮಿಯ ಸಂಸ್ಥಾಪಕ ಕಾರ್ಯದರ್ಶಿ ಎನ್.ಕೆ ಕೊಟ್ರೇಶ್ ವೇದಿಕೆಯಲ್ಲಿದ್ದರು.ಈ ಸಂದರ್ಭದಲ್ಲಿ ಅಕಾಡೆಮಿಯ ಸದಸ್ಯರಾದ ಅರವಿಂದ್, ಟೆಕ್ನಿಷಿಯನ್ ವಿನಯ್, ನಾಗಣ್ಣ ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಜರಿದ್ದರು.ಶಿಬಿರದಲ್ಲಿ 100 ವಿದ್ಯಾರ್ಥಿಗಳ ರಕ್ತ ಗುಂಪು ಪರೀಕ್ಷೆ ಮಾಡಿ ಕಾರ್ಡ್ ನೀಡಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9986715401
ದಿನದ ಸುದ್ದಿ
ದಾವಣಗೆರೆ ತಂಬಾಕು ಮುಕ್ತ ನಗರ : ಅಧಿಕಾರಿಗಳಿಗೆ ಸನ್ಮಾನ

ಸುದ್ದಿದಿನ, ದಾವಣಗೆರೆ : “ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ(ಕೋಟಾ)-2003” ರ ಅಡಿಯಲ್ಲಿ ದಾವಣಗೆರೆ ನಗರ ಶೇಕಡಾ 90 ರಷ್ಟು ಅನುಷ್ಠಾನ ಹೊಂದಿರುವ ಪ್ರಯುಕ್ತ ‘ತಂಬಾಕು ಮುಕ್ತ ದಾವಣಗೆರೆ ನಗರ’ ವನ್ನಾಗಿ ಘೋಷಿಸಿದ್ದು, ಇದಕ್ಕೆ ಶ್ರಮಿಸಿದ ಅಂತರ ಇಲಾಖೆ ಅಧಿಕಾರಿಗಳಿಗೆ ಇದೇ ವೇಳೆ ಗೌರವ ಸ್ಮರಣಿಯನ್ನು ನೀಡಿ ಸನ್ಮಾನಿಸಲಾಯಿತು.
ಜಿಲ್ಲಾಡಳಿತ ವತಿಯಿಂದ ಜ.26 ರಂದು ಬೆಳಿಗ್ಗೆ 9 ಗಂಟೆಗೆ ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಕೋಶದ ಉಪಾಧ್ಯಕ್ಷರಾದ ಪ್ರಭಾರ ಪೊಲೀಸ್ ವರಿಷ್ಠಾಧಿಕಾರಿ ಎಂ.ರಾಜೀವ್, ಜಿಲ್ಲಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಪದ್ಮಾ ಬಸವಂತಪ್ಪ, ಅಪರ ಜಿಲ್ಲಾಧಿಕಾರಿಗಳು ಹಾಗೂ ಕೋಶದ ನೋಡಲ್ ಅಧಿಕಾರಿ ಪೂಜಾರ ವೀರಮಲ್ಲಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾಗರಾಜ್, ಮಹಾನಗರಪಾಲಿಕೆಯ ಆಯುಕ್ತ ವಿಶ್ವನಾಥ ಮುದಜ್ಜಿ, ಅಬಕಾರಿ ಇಲಾಖೆಯ ಉಪ ಆಯುಕ್ತರು, ನಗರ ಪೊಲೀಸ್ ಇಲಾಖೆಯ ಉಪಾಧೀಕ್ಷಕರು, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಹಾಗೂ ಕಾರ್ಯಕ್ರಮಾಧಿಕಾರಿಗಳು, ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು, ವಾರ್ತಾ ಮತ್ತು ಪ್ರಸಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಇವರಿಗೆ ಗೌರವ ಸ್ಮರಣಿಕೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎ ರವೀಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು, ಸಂಸದರಾದ ಜಿ.ಎಂ.ಸಿದ್ದೇಶ್ವರ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಾಂತಕುಮಾರಿ ಕೆ.ವಿ, ಮಹಾನಗರಪಾಲಿಕೆ ಮಹಾಪೌರರಾದ ಬಿ.ಜಿ.ಅಜಯಕುಮಾರ್, ದೂಡಾ ಅಧ್ಯಕ್ಷ ಶಿವಕುಮಾರ್, ಪ್ರಭಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಎಂ, ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಕಾಧಿಕಾರಿ ಪದ್ಮ ಬಸವಂತಪ್ಪ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಇತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕೊರೊನಾ ಸಂದರ್ಭದಲ್ಲಿ ಸರ್ಕಾರ ಜನರ ನೆರವಿಗೆ ನಿಂತಿದೆ : ಸಚಿವ ಭೈರತಿ ಬಸವರಾಜ್

ಸುದ್ದಿದಿನ,ದಾವಣಗೆರೆ :1947ರ ಆಗಸ್ಟ್ 15 ರಂದು ಸ್ವಾತಂತ್ರ್ಯ ಪಡೆದ ಭಾರತ, 1950ರ ಜನವರಿ 26 ರಂದು ಸಂವಿಧಾನವನ್ನು ಅಂಗೀಕರಿಸಿ, ಸಾರ್ವಭೌಮ ರಾಷ್ಟ್ರವಾಗಿ ಹೊರಹೊಮ್ಮಿದೆ. ಕೊರೊನಾದಂತಹ ಸಂದರ್ಭವನ್ನೂ ದೇಶ ಸಮರ್ಥವಾಗಿ ಎದುರಿಸಿ ಜನರ ನೆರವಿಗೆ ಸರ್ಕಾರ ನಿಂತಿದೆ ಎಂದು ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ(ಭೈರತಿ) ನುಡಿದರು.
ಜಿಲ್ಲಾಡಳಿತ ವತಿಯಿಂದ ಜ.26 ರಂದು ಬೆಳಿಗ್ಗೆ 9 ಗಂಟೆಗೆ ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ನೆರೆವೇರಿಸಿ ಗಣರಾಜ್ಯೋತ್ಸವ ಸಂದೇಶ ನೀಡಿ ಮಾತನಾಡಿದರು.
ಮಹಾತ್ಮಾ ಗಾಂಧಿ, ನೆಹರೂ, ಜವಹರಲಾಲ್, ಸರ್ದಾರ್ ವಲ್ಲಭಬಾಯಿ ಪಟೇಲ್ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ರಂಥ ನಾಯಕರ ಹೋರಾಟ, ತ್ಯಾಗ ಮತ್ತು ಬಲಿದಾನದ ಫಲವಾಗಿ ಪಡೆದ ಸ್ವಾತಂತ್ರ್ಯ ಸತ್ಯ-ಶಾಂತಿ ಹಾಗೂ ಅಹಿಂಸೆಯಿಂದ ಪ್ರೇರಿತ ಗೊಂಡದ್ದಾಗಿದೆ. ಈ ಹಿನ್ನೆಲೆಯಲ್ಲಿ ಅಸ್ತಿತ್ವಕ್ಕೆ ಬಂದ ಭಾರತಕ್ಕೆ ಈಗ 74 ರ ಹರೆಯ. ಭಾರತಕ್ಕೆ ಸಂವಿಧಾನ ಪ್ರಾಪ್ತವಾಗಿ 72 ವರ್ಷಗಳು ಸಂದದ್ದೂ ಅವಿಸ್ಮರಣೀಯ.
ಸಂವಿಧಾನದ ಕರಡು ರಚನಾ ಸಮಿತಿಯಲ್ಲಿ ಡಾ|| ಅಂಬೇಡ್ಕರ್ ಅವರ ಪಾತ್ರ ಮಹತ್ತರವಾಗಿತ್ತು. ತಮ್ಮ ಪಾತ್ರವನ್ನು ಸಂಪೂರ್ಣವಾಗಿ ನಿರ್ವಹಿಸುವಲ್ಲಿ ಅಂಬೇಡ್ಕರ್ ಅವರಿಗೆ ಹಲವಾರು ದೇಶಗಳ ಸಂವಿಧಾನಗಳನ್ನು ಆಳವಾಗಿ ಅಧ್ಯಯನ ಮಾಡಿದ ಅನುಭವ ನೆರವಾಯಿತು. ಡಾ|| ಅಂಬೇಡ್ಕರ್ರವರ ಸೇವೆಗೆ ದೊರೆತ ಮನ್ನಣೆಗೆ ಇವರನ್ನು “ಸಂವಿಧಾನದ ಪಿತಾಮಹ” ಎಂದು ನಾವು ಸ್ಮರಿಸುವಂತಾಗಿದೆ.
ಗಣರಾಜ್ಯವಾದ ತರುವಾಯ ದಾವಣಗೆರೆ ಜಿಲ್ಲೆಯು ಅನೇಕ ಬೆಳವಣಿಗೆಯನ್ನು ಕಂಡಿದೆ. ಈ ಜಿಲ್ಲೆಯ ಇತಿಹಾಸ ನೋಡುವುದಾದರೆ ದಾವಣಗೆರೆ ಜಿಲ್ಲೆಯು ಭೌಗೋಳಿಕವಾಗಿ ಧಾರವಾಡ ಶಿಲಾ ಪದರಿನ ವಿನ್ಯಾಸದ ಮೇಲೆ ರಚನೆಗೊಂಡಿದ್ದು, ಆಗಸ್ಟ್ 15, 1997 ರಲ್ಲಿ ನೂತನ ಜಿಲ್ಲೆಯಾಗಿ ರೂಪುಗೊಂಡಿತು.
2020 ರ ಆರಂಭದಲ್ಲಿ ಕಾಣಿಸಿಕೊಂಡ ಕೊರೊನಾ ಮಹಾಮಾರಿ ಜಗತ್ತೇ ತಲ್ಲಣಿಸುವಂತೆ ಮಾಡಿದ ಸಂದರ್ಭದಲ್ಲಿ ಜಿಲ್ಲಾಡಳಿತ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಕಟ್ಟಿಹಾಕಲು ಕಾರ್ಯೋನ್ಮುಖವಾಗಿ ಮಾಡಿದ ವ್ಯವಸ್ಥಿತ ಹೋರಾಟದ ಫಲವಾಗಿ ಇಂದು ಕೊರೊನಾ ನಿಯಂತ್ರಣಕ್ಕೆ ಬಂದಿದ್ದು, ಇದಕ್ಕಾಗಿ ಶ್ರಮಿಸಿದ ಜಿಲ್ಲಾಡಳಿತದ ಕಾರ್ಯವನ್ನು ಶ್ಲಾಘಿಸುತ್ತೇನೆ. ಸಾವಿರ ಸಂಖ್ಯೆಯಲ್ಲಿದ್ದ ಕೊರೊನಾ ಪ್ರಕರಣಗಳು ಇಂದು ಎರಡಂಕಿಗೆ ಬಂದಿವೆ.. ಇದೇ ಸಂದರ್ಭದಲ್ಲಿ ಸಂಜೀವಿನಿಯಂತೆ ಬಂದಿರುವ ಲಸಿಕೆ ನಮ್ಮಲ್ಲಿ ಮತ್ತಷ್ಟು ಹುಮ್ಮಸ್ಸನ್ನು ತುಂಬಿದೆ. ಈ ಲಸಿಕೆ ಅಭಿಯಾನವು ಜಿಲ್ಲಾದ್ಯಂತ ಯಶಸ್ವಿಯಾಗಿ ನಡೆಯುತ್ತಿದೆ.
ಕೊರೊನಾ ಸಂದರ್ಭದಲ್ಲಿ ನಮ್ಮ ಸರ್ಕಾರ ಎಲ್ಲ ಜನ ವರ್ಗಗಳ ಶ್ರೇಯೋಭಿವೃದ್ದಿಗಾಗಿ ಕಂಕಣಬದ್ದವಾಗಿ ಶ್ರಮಿಸಿ, ರೈತರು, ಕಾರ್ಮಿಕರು, ನೇಕಾರರು ಸೇರಿದಂತೆ ದುಡಿಯುವ ವರ್ಗಗಳ ನೆರವಿಗೆ ನಿಂತಿದ್ದು, ಇದೇ ಸಂದರ್ಭದಲ್ಲಿ ಅತಿವೃಷಿಯಿಂದಾದ ಬೆಳೆ, ಮನೆ, ಜಾನುವಾರು ಹಾನಿಗಳಿಗೆ ಪರಿಹಾರವನ್ನು ನೀಡಿ ಎಲ್ಲರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಕೋವಿಡ್-19ರ ಹೋರಾಟದಲ್ಲಿ ಸೇನಾನಿಗಳಾಗಿ ಕಾರ್ಯನಿರ್ವಹಿಸಿ ಮೃತಪಟ್ಟ ನಾಲ್ಕು ಪೊಲೀಸರ ಕುಟುಂಬಗಳಿಗೆ ತಲಾ 30 ಲಕ್ಷದಂತೆ ಪರಿಹಾರ ನೀಡಲಾಗಿದೆ.
ಮಹನೀಯರೇ, ಜನಸಮಾನ್ಯರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಕೊಳ್ಳುತ್ತಿದ್ದು, ಸರ್ಕಾರದ ಉತ್ತಮ ಕಾರ್ಯಗಳಿಗೆ ಸಾರ್ವಜನಿಕರು ಒತ್ತಾಸೆಯಾಗಿ ನಿಲ್ಲಬೇಕು ಮತ್ತು ಅವುಗಳ ಸಂಪೂರ್ಣ ಲಾಭವನ್ನು ವೈಯಕ್ತಿಕವಾಗಿ ಮತ್ತು ಸಮಷ್ಠಿಯಾಗಿ ಪಡೆಯಬೇಕು ಎಂದು ವಿನಂತಿಸುತ್ತೇನೆ ಎಂದರು.
ದಾವಣಗೆರೆ ಜಿಲ್ಲೆಯಲ್ಲಿ 2020-21 ನೇ ಸಾಲಿನಲ್ಲಿ 826 ಮಿಮೀ ಮಳೆಯಾಗಿದ್ದು ಶೇ.25 ರಷ್ಟು ಹೆಚ್ಚು ಮಳೆಯಾಗಿರುತ್ತದೆ. 2020-21 ನೇ ಸಾಲಿನಲ್ಲಿ ಇದುವರೆಗೂ ವಿವಿಧ ಬೆಳೆಗಳ ವಿವಿಧ ತಳಿಗಳ 17070 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಲಾಗಿದೆ.
2019-20 ನೇ ಸಾಲಿನ ಕೃಷಿ ಪ್ರಶಸ್ತಿ ಯೋಜನೆಯಡಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಶೇಂಗಾ ಬೆಳೆಯಲ್ಲಿ ಹೊನ್ನಾಳಿ ತಾಲ್ಲೂಕಿನ ಬೆಳಗುತ್ತಿ ಗ್ರಾಮದ ರಮೇಶಪ್ಪ ಕೆ ಇವರು ಪ್ರಥಮ ಸ್ಥಾನ ಹಾಗೂ ನಾಗರಾಜಪ್ಪ ಇವರು ದ್ವಿತೀಯ ಸ್ಥಾನ ಮತ್ತು ಭತ್ತ (ನೀರಾವರಿ) ಬೆಳೆಯಲ್ಲಿ ಹರಿಹರ ತಾಲ್ಲೂಕಿನ ಧೂಳೆಹೊಳೆಯ ರಮೇಶ್ ಜಿ. ಎನ್. ಇವರು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ಜಿಲ್ಲೆಯಲ್ಲಿ ಕೋವಿಡ್ನ್ನು ಎಲ್ಲರ ಸಹಕಾರದಿಂದ ದಿಟ್ಟವಾಗಿ ಎದುರಿಸಲಾಗಿದ್ದು, ಪಾಸಿಟಿವಿಟಿ ದರವು 0.6% ಇರುತ್ತದೆ. ಕೋವಿಡ್-19 ಸೋಂಕು ಹೊಂದಿದ ರೋಗಿಗಳಿಗೆ 240 ಹಾಸಿಗೆಗಳ ಆಕ್ಸಿಜನ್ ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ. ಕೋವಿಡ್-19 ಸೋಂಕು ಹೊಂದಿದ ರೋಗಿಗಳಿಗೆ 20 ಹಾಸಿಗೆಗಳ ವೈದ್ಯಕೀಯ ತೀವ್ರ ನಿಗಾ ಘಟಕದ ವ್ಯವಸ್ಥೆ ಮಾಡಲಾಗಿದೆ. 6000 ಲೀಟರ್ ಸಾಮಥ್ರ್ಯದ ಮೆಡಿಕಲ್ ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ ವ್ಯವಸ್ಥೆ ಮಾಡಲಾಗಿದ್ದು, ಕೋವಿಡ್-19 ರೋಗಿಗಳಿಗೆ ದಿನದ 24 ಗಂಟೆ ಆಕ್ಸಿಜನ್ ವ್ಯವಸ್ಥೆ ದೊರೆಯುವಂತೆ ಮಾಡಲಾಗಿದೆ. ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್-19 ರೋಗ ಪತ್ತೆಗಾಗಿ ದಿನಕ್ಕೆ ಒಂದು ಸಾವಿರ ಪರೀಕ್ಷಾ ಪ್ರಯೋಗಗಳ ವ್ಯವಸ್ಥೆ ಇರುವ ಸುಸಜ್ಜಿತ ಆರ್.ಟಿ.ಪಿ.ಸಿ.ಆರ್ ಪ್ರಯೋಗಾಲಯವನ್ನು ಸ್ಥಾಪಿಸಿದ್ದು, ಇಲ್ಲಿಯವರೆಗೆ 1 ಲಕ್ಷದ 40 ಸಾವಿರ ಪ್ರಯೋಗಗಳನ್ನು ಮಾಡಿದ್ದು, ಅದರಿಲ್ಲಿ 5429 ಪಾಸಿಟೀವ್ ಪ್ರಕರಣಗಳು ದಾಖಲಾಗಿವೆ.
ಲಾಕ್ಡೌನ್ ವೇಳೆಯಲ್ಲಿ ಸರ್ಕಾರ ವಿವಿಧ ಯೋಜನೆಗಳಡಿ ಸಂತ್ರಸ್ತರಿಗೆ ಪರಿಹಾರ ನೀಡಿ ಸಂತ್ರಸ್ತರ ನೆರವಿಗೆ ನಿಂತಿದ್ದು, ಮೆಕ್ಕೆಜೋಳ ಬೆಳೆದ 66148 ರೈತರಿಗೆ ರೂ. 33.7 ಕೋಟಿ, ಹೂ, ಹಣ್ಣು ಹಾಗೂ ತರಕಾರಿ ಬೆಳೆದ 4199 ರೈತರಿಗೆ 3. 97 ಕೋಟಿ, ಕಟ್ಟಡ ಕಾರ್ಮಿಕರಿಗೆ ರೂ. 45.90 ಕೋಟಿ, 1438 ಕ್ಷೌರಿಕರು ಹಾಗೂ 2200 ಅಗಸರು ಒಟ್ಟು 3638 ಫಲಾನುಭವಿಗಳಿಗೆ 1.81 ಕೋಟಿ ಮತ್ತು 5159 ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ರೂ. 2,57,95,000/- ಸಹಾಯಧನ ವಿತರಿಸಲಾಗಿರುತ್ತದೆ.
ಲಾಕ್ಡೌನ್ ವೇಳೆ ನಗರ ಸ್ಥಳೀಯ ಸಂಸ್ಥೆ ವತಿಯಿಂದ 5.73 ಲಕ್ಷ ಲೀಟರ್ ಹಾಲು ವಿತರಣೆ ಮಾಡಲಾಗಿರುತ್ತದೆ. 13.19 ಲಕ್ಷ ರ 583 ಪಡಿತರ ಚೀಟಿದಾರರಿಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ 6979 ವಲಸೆ ಕಾರ್ಮಿಕರು, ಅಲೆಮಾರಿಗಳು, ಸಂಕಷ್ಟದಲ್ಲಿದ್ದ ಪಡಿತರಚೀಟಿರಹಿತ ಕುಟುಂಬಗಳು, ಭಿಕ್ಷುಕರು, ತೃತೀಯ ಲಿಂಗಿಗಳಿಗೆ ರೂ. 67.69 ಮೊತ್ತದ ಆಹಾರ ಕಿಟ್ಗಳನ್ನು ನೀಡಲಾಗಿರುತ್ತದೆ.
ಗ್ರಾಮವಿಕಾಸ ಯೋಜನೆಯಡಿ ದಾವಣಗೆರೆ ಜಿಲ್ಲೆಯ 07 ವಿಧಾನಸಭಾ ಕ್ಷೇತ್ರದ 27 ಗ್ರಾಮಗಳನ್ನು ಆಯ್ಕೆ ಮಾಡಿ, ರೂ. 14.19 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿರುತ್ತದೆ. ಹಾಗೂ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಒಟ್ಟು 25 ಗ್ರಾಮಗಳು ಆಯ್ಕೆಯಾಗಿದ್ದು, ಪ್ರತಿ ಗ್ರಾಮಕ್ಕೆ ರೂ. 1 ಕೋಟಿಯಂತೆ ನಿಗದಿಯಾಗಿದ್ದು ಈವರೆಗೆ ಸರ್ಕಾರದಿಂದ ರೂ. 13.87 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಎಲ್ಲಾ ಗ್ರಾಮಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 28 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಪೂರ್ಣಗೊಂಡು ಕಾರ್ಯಾಚರಣೆÉಯಲ್ಲಿವೆ.
ಕ್ಷೀರಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿನ 1723 ಅಂಗನವಾಡಿ ಕೇಂದ್ರಗಳ ಮುಖಾಂತರ 6 ತಿಂಗಳಿಂದ 6 ವರ್ಷ ಒಳಪಟ್ಟ 1,11,264 ಫಲಾನುಭವಿಗಳಿಗೆ ಪ್ರತಿ ತಿಂಗಳು ಕೆನೆಸಹಿತ ಹಾಲಿನ ಪುಡಿ ವಿತರಿಸಲಾಗುತ್ತಿದೆ. ಭಾಗ್ಯಲಕ್ಷ್ಮಿ ಯೋಜನೆಯಡಿ 2020-21ನೇ ಸಾಲಿಗೆ 5068 ಹೆಣ್ಣು ಮಕ್ಕಳಿಗೆ ತಲಾ ರೂ.1 ಲಕ್ಷ ಮೌಲ್ಯದ ಭಾಗ್ಯಲಕ್ಷ್ಮಿ ಬಾಂಡ್ಗಳನ್ನು ಒದಗಿಸಲಾಗಿದೆ.
ಕೋವಿಡ್ 19 ರ ಪ್ರಯುಕ್ತ ಮಾರ್ಚ್-2020 ರಿಂದ ಇಲ್ಲಿಯವರೆಗೆ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಿಲಾಗಿದ್ದು, ಈ ಅವಧಿಯಲ್ಲಿ ಎಲ್ಲಾ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಹಾಗು ಸಹಾಯಕಿಯರಿಂದ ಹಾಲಿನ ಪುಡಿ, ಮೊಟ್ಟೆ, ಅಕ್ಕಿ, ಗೋಧಿ, ಹೆಸರುಕಾಳು, ಶೇಂಗಾ ಬೀಜ, ಮಸಾಲೆ ಪುಡಿ, ಸಕ್ಕರೆ ಹಾಗೂ ಇತರೆ ಆಹಾರ ಪದಾರ್ಥಗಳನ್ನು ಕಿಟ್ ರೂಪದಲ್ಲಿ ಫಲಾನುಭವಿಗಳ ಮನೆ-ಮನೆಗೆ ವಿತರಿಸಲಾಗುತ್ತಿದೆ. ಅಲ್ಲದೇ ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯ ತಪಾಸಣೆಯನ್ನು ಸಹ ಮಾಡಿಸಲಾಗುತ್ತಿದೆ.
2019-20ನೇ ಸಾಲಿನಲ್ಲಿ ಡಾ|| ಬಿ.ಆರ್.ಅಂಬೇಡ್ಕರ್, ಡಾ|| ಬಾಬು ಜಗಜೀವನ್ ರಾಂ ಸಮುದಾಯ ಭವನಗಳ ನಿರ್ಮಾಣ ಕಾರ್ಯಕ್ರಮದಡಿ ದಾವಣಗೆರೆ ಜಿಲ್ಲೆಗೆ ಒಟ್ಟು 29 ಭವನಗಳ ನಿರ್ಮಾಣಕ್ಕೆ ರೂ.404 ಲಕ್ಷಗಳ ಮಂಜೂರಾತಿಯೊಂದಿಗೆ ಕೇಂದ್ರ ಕಛೇರಿಯಿಂದ ಮೊದಲನೇ ಕಂತಾಗಿ ಬಿಡುಗಡೆ ಮಾಡಲಾದ ರೂ.121.20 ಲಕ್ಷಗಳ ಅನುದಾನ ವೆಚ್ಚ ಭರಿಸಲಾಗಿರುತ್ತದೆ.
2018-19ಸಾಲಿನಲ್ಲಿ ಸ್ವಯಂ ಉದ್ಯೋಗದ ವಿವಿಧ ಕಾರ್ಯಕ್ರಮಗಳಿಗೆ (ಹೈನುಗಾರಿಕೆ, ಹಸು/ಎಮ್ಮೆ ಕರು ಘಟಕ, ಕುರಿ / ಮೇಕೆ ಘಟಕ,ಸರಕು ಸಾಗಾಣಿಕೆ ವಾಹನ, ಮೊಲ ಸಾಕಾಣಿಕೆ) ಜಿಲ್ಲೆಗೆ ಒಟ್ಟು 164 ಫಲಾನಭವಿಗಳಿಗೆ ಆಯ್ಕೆ ಮಾಡಿ ರೂ. 127.00 ಲಕ್ಷಗಳನ್ನು ಬಿಡುಗಡೆ ಮಾಡಿ ಫಲಾನುಭವಿಗಳಿಗೆ ಚೆಕ್ ಮೂಲಕ ವಿತರಿಸಲಾಗಿದೆ. ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸರಳ ವಿವಾಹವಾದ ಪರಿಶಿಷ್ಟ ಪಂಗಡದ ಪ್ರತಿ ಜೋಡಿಗೆ ರೂ. 50,000/-ಗಳಂತೆ ಒಟ್ಟು 178 ಜೋಡಿಗಳಿಗೆ 89 ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನವನ್ನು ಮಂಜೂರು ಮಾಡಲಾಗಿರುತ್ತದೆ.
‘ರಾಷ್ಟ್ರೀಯ ತೋಟಗಾರಿಕೆ ಮಿಷನ್’ (ಎನ್.ಹೆಚ್.ಎಂ.) ಅಡಿಯಲ್ಲಿ ವಿವಿಧ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆಗೆ ಸಹಾಯಧನ ಕಲ್ಪಿಸಲಾಗುವುದು ಹಾಗೂ ಸಂಸ್ಕರಣಾಘಟಕ, ಪ್ಯಾಕ್ ಹೌಸ್ಗಳು, ಹಣ್ಣು ಮಾಗಿಸುವ ಘಟಕ, ಹಸಿರುಮನೆ, ನೆರಳು ಪರದೆಗಳ ನಿರ್ಮಾಣಕ್ಕೆ ಹಾಗೂ ಇತರೇ ಕಾರ್ಯಕ್ರಮಗಳಿಗೆ ರೂ.892 ಲಕ್ಷಗಳ ಮೊತ್ತವನ್ನು ನಿಗದಿಪಡಿಸಲಾಗಿದ್ದು ಅದರಲ್ಲಿ ಇದುವರೆಗೂ 762.00 ಬಿಡುಗಡೆಯಾಗಿದ್ದು 812 ಪಲಾನುಭವಿಗಳಿಗೆ 526 ಲಕ್ಷ ಸಹಾಯಧನ ವಿತರಿಸಲಾಗಿದೆ.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ 2020-21 ನೇ ಸಾಲಿನಲ್ಲಿ ಸಾಮಾನ್ಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರೈತರಿಗೆ ಹನಿ ನೀರಾವರಿ ಅಳವಡಿಸಲು ಶೇಕಡಾ 90 ರಷ್ಟು ಸಹಾಯಧನ ಒದಗಿಸುತ್ತಿದ್ದು ಒಟ್ಟು ರೂ. 28.70 ಕೋಟಿಗಳ ಅನುದಾನ ನಿಗದಿಪಡಿಸಲಾಗಿದ್ದು ಅದರಲ್ಲಿ ಇದುವರೆಗೂ ರೂ.16.33 ಕೋಟಿ ಬಿಡುಗಡೆಯಾಗಿದ್ದು 2864 ಪಲಾನುಭವಿಗಳಿಗೆ ರೂ. 14.60 ಕೋಟಿ ಸಹಾಯಧನ ವಿತರಿಸಲಾಗಿದೆ.
ಸ್ಮಾರ್ಟ್ಸಿಟಿ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಒಟ್ಟಾರೆ ರೂ.1,014 ಕೋಟಿಗಳ ಯೋಜನಾ ಮೊತ್ತದಲ್ಲಿ 95 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ದಾವಣಗೆರೆ ನಗರಕ್ಕೆ ಎ.ಡಿ.ಬಿ. ಅನುದಾನದಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ನಿರಂತರ (24*7) ಕುಡಿಯುವ ನೀರು ಸರಬರಾಜು ಯೋಜನೆಯ ಯಶಸ್ಸಿಗೆ ಅವಶ್ಯವಿರುವ ನೀರಿನ ಮೂಲವನ್ನು ಶಾಶ್ವತವಾಗಿ ಬಲಪಡಿಸಲು ತುಂಗಭದ್ರ ನದಿಗೆ ಅಡ್ಡಲಾಗಿ ರೂ.91.86 ಕೋಟಿ ವೆಚ್ಚದಲ್ಲಿ ಬ್ಯಾರೇಜ್ ನಿರ್ಮಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಯು ಪ್ರಗತಿಯಲ್ಲಿರುತ್ತದೆ.
ಪೌರಕಾರ್ಮಿಕರಿಗೆ 381 ಜಿ+1 ಮಾದರಿಯಲ್ಲಿ ವಸತಿ ಸಮುಚ್ಛಯಗಳನ್ನು ನಿರ್ಮಿಸುವ ಕಾಮಗಾರಿಯು ಪ್ರಗತಿಯ ಹಂತದಲ್ಲಿದ್ದು ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಿ ಪೌರಕಾರ್ಮಿಕರಿಗೆ ಹಸ್ತಾಂತರಿಸಲು ಕ್ರಮ ವಹಿಸಲಾಗುತ್ತದೆ.
ಜಲಸಿರಿ ಯೋಜನೆಯಡಿಯಲ್ಲಿ ದಾವಣಗೆರೆ ಸಿಟಿಗೆ (24ಘಿ7) ನೀರು ಪೂರೈಸಲು ಅಂದಾಜು ಮೊತ್ತ ರೂ 83.37 ಕೋಟಿಯಲ್ಲಿ ರಾಜನಹಳ್ಳಿಯಲ್ಲಿ 120 ಎಂಎಲ್ಡಿ ಸಾಮಥ್ರ್ಯದ ಜಾಕ್ವೆಲ್ ಮತ್ತು ಬಾತಿಯಲ್ಲಿ 40 ಎಂ.ಎಲ್.ಡಿ ಸಾಮಥ್ರ್ಯದ ನೀರು ಶುದ್ಧೀಕರಣ ಘಟಕ ಹಾಗೂ ದಾವಣಗೆರೆ ನಗರದವರೆಗೆ ಮುಖ್ಯ ನೀರು ಸರಬರಾಜು ಕೊಳವೆಯನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಶಿಸ್ತಿನ ಪಥಸಂಚಲನ
ಡಿಎಆರ್ ಪೊಲೀಸ್ ತಂಡ, ನಾಗರಿಕ ಪೊಲೀಸ್ ತಂಡ, ಗೃಹ ರಕ್ಷಕದಳ, ಅರಣ್ಯ ಇಲಾಖೆ, ಅಬಕಾರಿ ಪೊಲೀಸ್ ತಂಡ, ಅಗ್ನಿಶಾಮಕ ದಳಗಳು ಪೊಲೀಸ್ ವಾದ್ಯವೃಂದದ ಹಿಮ್ಮೇಳದಲ್ಲಿ ಶಿಸ್ತಿನ ಪಥಸಂಚಲನ ನಡೆಸಿದವು.
ಸನ್ಮಾನ
ಕೋವಿಡ್ ಹಿನ್ನೆಲೆಯಲ್ಲಿ ಸೇವೆ ಸಲ್ಲಿಸಿದ ಡಾ. ಮುನಾವರ್ ಹುಸೇನ್, ವೈದ್ಯರು, ಚಿಗಟೇರಿ ಜಿಲ್ಲಾ ಆಸ್ಪತ್ರೆ ದಾವಣಗೆರೆ. ಡಾ. ಚಂದ್ರಪ್ಪ, ಆಡಳಿತ ವೈದ್ಯಾಧಿಕಾರಿಗಳು ಸಾರ್ವಜನಿಕ ಆಸ್ಪತ್ರೆ ಹೊನ್ನಾಳಿ. ಡಾ. ಆರ್.ಎಮ್.ಗಿರಿ, ಆಡಳಿತ ವೈದ್ಯಾಧಿಕಾರಿಗಳು, ಸಾರ್ವಜನಿಕ ಆಸ್ಪತ್ರೆ ಚನ್ನಗಿರಿ. ಡಾ.ಹರ್ಷ ಬಿ.ಎಮ್.ವೈದ್ಯಕೀಯ ನಿರ್ದೇಶಕರು ಬಾಪೂಜಿ ಮಕ್ಕಳ ಆಸ್ಪತ್ರೆ ದಾವಣಗೆರೆ. ಡಾ.ನವೀನ್, ಹೆಚ್.ಎನ್.ವೈದ್ಯಕೀಯ ನಿರ್ದೇಶಕರು, ಸ್ಪಂದನಾ ಯೂರಾಲಜಿ ಸೆಂಟರ್ ದಾವಣಗೆರೆ. ಕುಮಾರಿ ಶ್ರೀಷ್ಮ ಹೆಗಡೆ ಎನ್.ಸಿ.ಸಿ ದಾವಣಗೆರೆ. ಕುಮಾರ ಮಹಮ್ಮದ್ ಮುಸವೀರ್ ಪಾಷಾ ಎನ್.ಸಿ.ಸಿ ದಾವಣಗೆರೆ. ಕುಮಾರಿ ಇಂಫನಾ ಆರ್.ಎ ಎನ್.ಸಿ.ಸಿ ದಾವಣಗೆರೆ. ಕುಮಾರಿ ಅನುಶ್ರೀ ಬಿ.ಜಿ ಎನ್.ಸಿ.ಸಿ ದಾವಣಗೆರೆ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಶಾಲೆಯ ಮಕ್ಕಳಿಗೆ ಸಂವಿಧಾನದ ಪಾಠ ಮಾಡಿದ ಟಗರು ಡಾಲಿ : ವೈರಲ್ ಆಯ್ತು ವಿಡಿಯೋ..!

ಸುದ್ದಿದಿನ ಡೆಸ್ಕ್ : ನಟ ಧನಂಜಯ ಕೇವಲ ನಟನಲ್ಲ ಅವರಲ್ಲೊಬ್ಬ ಸಾಮಾಜಿಕ ಕಳಕಳಿಯ ಹೋರಾಟಗಾರನೂ ಇದ್ದಾನೆ. ಪ್ರಸ್ತುತ ವಿದ್ಯಾಮಾಗಳಿಗೆ ತೀಕ್ಷ್ಣವಾಗಿ ಅವರು ಪ್ರತಿಕ್ರಿಯೆಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಈ ಹಿಂದೆ ಚಕ್ರವರ್ತಿ ಸೂಲೆಬೇಲಿಗೆ ‘ಮೊದಲು ಮಾನವನಾಗು’ ಎಂದು ಕೌಂಟರ್ ಕೂಡಾ ಕೊಟ್ಟಿದ್ದರು. ವಚನ ಸಾಹಿತ್ಯದ ಓದುಗ ಪ್ರೇಮಿಯಾಗಿರುವ ಧನಂಜಯ ಸಾಮಾಜಿಕ ಅಸಮಾನತೆಯ ಕುರಿತಾಗಿ ಕೆಲವು ಸಂದರ್ಶನಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕ್ಕೊಂಡಿದ್ದಾರೆ ಕೂಡ.
ಜನವರಿ 26 ಮಂಗಳವಾರ ತಮ್ಮ ‘ ರತ್ನನ್ ಪರ್ಚಂಚ’ ಸಿನೆಮಾದ ಚಿತ್ರೀಕರಣದಲ್ಲಿ ಹಳ್ಳಿಯೊಂದರಲ್ಲಿ ತೊಡಗಿದ್ದ ಅವರನ್ನು ಹಳ್ಳಿಯ ಶಾಲೆಯ ಅಥಿತಿಯಾಗಿ ಶಿಕ್ಷಕರು ಆಹ್ವಾನಿಸಿದ್ದರು. ಈ ಸಂದರ್ಭದಲ್ಲಿ ಅಂಬೇಡ್ಕರ್ ಮತ್ತು ಸಂವಿಧಾನದ ಕುರಿತಾಗಿ ಹಲವು ವಿಷಯಗಳನ್ನು ಮಕ್ಕಳ ಮುಂದೆ ಹಂಚಿಕೊಂಡರು.
ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಲೆಯ ವಿಡಿಯೋವನ್ನು ತಮ್ಮ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಪ್ರಶಂಶೆ ಪಡೆದಿದೆ.
ವಿಡಿಯೋ ಲಿಂಕ್ ಇಲ್ಲಿದೆ ಕ್ಲಿಕ್ ಮಾಡಿ ನೋಡಿ
https://www.instagram.com/tv/CKfwMNVhCuD/?igshid=q1uhfeo2o41p
https://m.facebook.com/story.php?story_fbid=259559738862856&id=100044264957540
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಲಜ್ಜೆಗೆಟ್ಟ ರಾಜಕಾರಣಕ್ಕೆ ಕರ್ನಾಟಕವೇ ತವರು..!
-
ದಿನದ ಸುದ್ದಿ7 days ago
ರಾಷ್ಟ್ರೀಯ ತನಿಖಾ ದಳದಿಂದ ಸಮನ್ಸ್ ಪಡೆದಿದ್ದ ಖಾಲ್ಸಾ ಏಡ್ ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನ..!
-
ದಿನದ ಸುದ್ದಿ7 days ago
ಕುರುಬ ಎಸ್ ಟಿ ಹೋರಾಟ | ಪಾದಯಾತ್ರೆಯಲ್ಲಿ ಕಾಗಿನೆಲೆ ಶ್ರೀ ಸರ್ಕಾರಕ್ಕೆ ಕೊಟ್ರು ಡೆಡ್ ಲೈನ್..!
-
ದಿನದ ಸುದ್ದಿ4 days ago
ಸಿನಿಮಾ ಪಯಣಕ್ಕೆ ರೀ ಎಂಟ್ರಿ ಕೊಟ್ಟ ಮಂದಹಾಸ ಬೆಡಗಿ : ಬಿಂದುಶ್ರೀ
-
ದಿನದ ಸುದ್ದಿ24 hours ago
ದಾವಣಗೆರೆ | ಅತ್ಯಾಚಾರ ಅಪರಾಧಿಗೆ 15 ವರ್ಷ ಸಜೆ, 26 ಸಾವಿರ ದಂಡ
-
ದಿನದ ಸುದ್ದಿ2 days ago
ದಾವಣಗೆರೆ | ಪ್ರವಾಸಿ ಟ್ಯಾಕ್ಸಿಗೆ ಸಹಾಯಧನ : ಅಂತಿಮ ಆಯ್ಕೆ ಪಟ್ಟಿಗೆ ಆಕ್ಷೇಪಣೆಗಳ ಆಹ್ವಾನ
-
ದಿನದ ಸುದ್ದಿ7 days ago
ನಾರಾಯಣ ಗೌಡರು ಯಾರು..? ಅಂದ ಸಚಿವ ಡಾ.ಸುಧಾಕರ್ ಕ್ಷಮೆಯಾಚಿಸಲೇ ಬೇಕು
-
ಕ್ರೀಡೆ2 days ago
ಸಹಾಯಧನ ನೀಡಲು ಕ್ರೀಡಾಪಟುಗಳಿಂದ ಪ್ರಸ್ತಾವನೆಗಳ ಆಹ್ವಾನ