ರಾಜಕೀಯ
ನೌಕರರು, ನಾಯಕರು ಮತ್ತು ಆಡಳಿತ
ಇತ್ತೀಚೆಗೆ ನಡೆದ ಸಾಹಿತ್ಯೋತ್ಸವವೊಂದರ ಗೋಷ್ಠಿಯಲ್ಲಿ ಇಬ್ಬರು ಭಾಷಣಕಾರರು ಕಾರ್ಯಾಂಗದ ಅನುಷ್ಠಾನ ಬದ್ಧತೆಯ ಕೊರತೆಯ ಕಾರಣಕ್ಕಾಗಿ ಈ ದೇಶದಲ್ಲಿ ನಾಯಕರ ಸುಧಾರಣೆಯ ಕನಸುಗಳು ಸಾಕಾರಗೊಳ್ಳುತ್ತಿಲ್ಲ ಎಂಬ ತಕರಾರು ಎತ್ತಿದರು. ಅಷ್ಟೇ ಅಲ್ಲ, ಅವರು ಇನ್ನೂ ಸ್ಪಷ್ಟವಾಗಿ ಕಾರ್ಯಾಂಗದ ವೈಖರಿಯ ಮೇಲೆ ಅತ್ಯಂತ ಸರಳೀಕೃತವಾದ ತಾರ್ಕಿಕವಲ್ಲದ ಜಾಳುಜಾಳಾದ ಹೇಳಿಕೆಯನ್ನು ತೇಲಿಬಿಟ್ಟರು. ಜನಸಾಮಾನ್ಯನ ಪ್ರಾಮಾಣಿಕತೆಯ ಕಾರಣಕ್ಕಾಗಿ ಸಂದಾಯವಾಗುತ್ತಿರುವ ತೆರಿಗೆಯ ಹಣಕ್ಕೆ ಪ್ರತಿಯಾಗಿ ಕಾರ್ಯಾಂಗವು ಕೇವಲ ನೋವು, ಹತಾಶೆಗಳನ್ನಷ್ಟೇ ನೀಡುತ್ತಿದೆಯೇ ಹೊರತು ತಕ್ಕುದಾದ ಫಲಶೃತಿಗಳನ್ನಲ್ಲ ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡರು. ಆದರೆ, ಈ ಹೇಳಿಕೆಯಲ್ಲಿರುವ ಪೂರ್ವಗ್ರಹಪೀಡಿತ ದೃಷ್ಟಿಕೋನದ ಅಪಾಯಕಾರಿ ಸ್ವರೂಪ ಅಲ್ಲಿದ್ದವರ್ಯಾರ ಗಮನಕ್ಕೆ ಬರಲೇ ಇಲ್ಲ. ಹಾಗೆ ಬರದ ಹಾಗೆ ಅವರಿಬ್ಬರ ಭಾಷಿಕ ಪ್ರೌಢಿಮೆಯು ತನ್ನ ಚಾಣಾಕ್ಷತೆಯನ್ನು ಮೆರೆದಿತ್ತು. “ಸುಧಾರಣೆಯ ಹೆಜ್ಜೆಗಳು ಎಲ್ಲ ಕಾಲದ ನಾಯಕರ ಆಳ್ವಿಕೆಯ ವೇಳೆ ಕಾಣಿಸಿಕೊಳ್ಳುತ್ತವೆ. ಆದರೆ, ಸುಧಾರಣೆಯ ನೀತಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾದ ಕಾರ್ಯಾಂಗ ನಿರ್ಲಿಪ್ತವಾಗಿರುವುದರಿಂದಲೇ ಅನೇಕ ಸಮಸ್ಯೆಗಳಿವೆ” ಎಂದು ತೀರ್ಪು ನೀಡಿಬಿಟ್ಟರು.ಸಂಕೀರ್ಣ ವಾಸ್ತವಾಂಶಗಳುಈ ಹೇಳಿಕೆಯನ್ನು ಯಥಾವತ್ತಾಗಿ ಮುಗ್ಧವಾಗಿ ಸ್ವೀಕರಿಸಿದರೆ ಸಮಸ್ಯೆಯ ಸಂಕೀರ್ಣತೆಯ ಹಿಂದಿನ ವಾಸ್ತವಾಂಶಗಳು ಗಮನಕ್ಕೇ ಬರುವುದಿಲ್ಲ. ಗಮನಕ್ಕೆ ತಂದುಕೊಂಡರೂ ನಾಯಕರೆಡೆಗಿನ ಭಾವನಾತ್ಮಕ ಅಭಿಮಾನದ ಪ್ರಭಾವಳಿ ಅಂಥ ಸಾಧ್ಯತೆಯನ್ನು ಆ ಕ್ಷಣಕ್ಕೇ ಮೊಟಕುಗೊಳಿಸಿಬಿಡುತ್ತದೆ. ಇದನ್ನು ಇನ್ನಷ್ಟು ಸ್ಪಷ್ಟವಾಗಿಸಿಕೊಳ್ಳಬಹುದಾದರೆ, ಈ ಹೇಳಿಕೆಯ ಮೊನಚಾದ ದಾಳಿ ಸರ್ಕಾರಿ ನೌಕರರ ಮೇಲೆಯೇ ನಡೆದಿತ್ತು. ಟೀಕೆ, ಅಸಮಾಧಾನ, ಆಕ್ರೋಶ, ವ್ಯಂಗ್ಯ, ಹಾಸ್ಯ, ಅಪಹಾಸ್ಯ ಸೇರಿದಂತೆ ನಿಂದನೆಯ ನಾನಾ ಬಗೆಗಳಿಗೆ ಈಡಾಗುತ್ತಲೇ ನಿರಂತರವಾಗಿ ಸವಾಲುಗಳನ್ನು ನೌಕರವರ್ಗ ಎದುರಿಸುತ್ತಲೇ ಇದೆ. ಭ್ರಷ್ಟಾಚಾರ ಮತ್ತು ವಿಳಂಬನೀತಿ ಎಂಬ ಎರಡು ನಕಾರಾತ್ಮಕ ಸಂಗತಿಗಳು ನೌಕರರ ನಿಜವಾದ ಶಕ್ತಿಯನ್ನು ಹಿನ್ನೆಲೆಗೆ ಸರಿಸಿವೆ.
ಶಾಸಕಾಂಗವು ಶಾಸನಗಳನ್ನು ರೂಪಿಸುವ ಹೊಣೆಗಾರಿಕೆ ನಿಭಾಯಿಸುತ್ತದೆ. ಅವುಗಳನ್ನು ಜಾರಿಗೆ ತರುವ ಜವಾಬ್ದಾರಿ ಕಾರ್ಯಾಂಗದ್ದು. ಅಂದರೆ ಉನ್ನತ ಹಂತದಿಂದ ಹಿಡಿದು ಕೆಳಹಂತದವರೆಗಿನ ಆಡಳಿತಾತ್ಮಕ ಪ್ರಕ್ರಿಯೆಯು ಕಾರ್ಯಾಂಗವನ್ನು ಪ್ರತಿನಿಧಿಸುವ ನೌಕರರಿಂದಲೇ ಏರ್ಪಡುತ್ತದೆ. ಹೀಗೆ ಏರ್ಪಡುವ ಕಾಲಕ್ಕೇ ಬದಲಾವಣೆಯು ಕಾಣಿಸಿಕೊಳ್ಳುತ್ತಿರುತ್ತದೆ. ಈ ಬದಲಾವಣೆಯು ಆಯಾ ದೇಶಗಳ ನಾಯಕರು, ರಾಜಕಾರಣ ಮತ್ತು ಜನರ ಬೌದ್ಧಿಕ ವಿವೇಚನೆಗೆ ತಕ್ಕಂತೆಯೇ ನಡೆಯುತ್ತದೆ. ಈ ವಿವೇಚನೆ ಇಲ್ಲದಿದ್ದಾಗ ನಾಯಕರು ಕಾಣಿಸಿಕೊಳ್ಳುವುದಿಲ್ಲ. ನಾಯಕರೇ ಇಲ್ಲವೆಂದ ಮೇಲೆ ರಾಜಕಾರಣವು ಒಂದು ನಿರ್ದಿಷ್ಟ ಗೊತ್ತುಗುರಿಯಿಲ್ಲದೆ ತನ್ನ ನಕಾರಾತ್ಮಕ ಶಕ್ತಿಯನ್ನು ವಿಸ್ತರಿಸಿಕೊಳ್ಳುತ್ತದೆ.ಸ್ಥಾಯಿಯಾದ ಯಥಾಸ್ಥಿತಿವಾದ
ಈ ಹಂತದಲ್ಲಿಯೇ ಸಮಾಜದಲ್ಲಿ ಬದಲಾವಣೆಯ ಬದಲು ಯಥಾಸ್ಥಿತಿಯು ಸ್ಥಾಯಿಯಾಗಿಬಿಡುತ್ತದೆ. ಬದಲಾವಣೆಯ ಗಮ್ಯವನ್ನು ಮುಖ್ಯವಾಗಿಸಿಕೊಂಡ ಪ್ರಜಾಪ್ರಭುತ್ವದ ಮೌಲ್ಯಗಳು ಅರ್ಥ ಕಳೆದುಕೊಳ್ಳುತ್ತವೆ. ಸಂವಿಧಾನದ ನಮ್ಯತೆಯ ಗುಣಲಕ್ಷಣವನ್ನು ಹದಗೆಡಿಸುವ ಹುನ್ನಾರಗಳು ನಡೆದುಬಿಡುತ್ತವೆ. ಅನಿವಾರ್ಯವಾಗಿ ಆಗಲೇಬೇಕಾದ ಬದಲಾವಣೆಯ ಪ್ರಯತ್ನಗಳು ನಿಂತುಬಿಡುವುದು ಇಂಥ ಹುನ್ನಾರಗಳ ಕಾರಣಕ್ಕಾಗಿಯೇ. ಸರ್ಕಾರಿ ನೌಕರರೆಂಬ ಜೀವಿಗಳು ಸಂಕಟ-ಸಂಕೀರ್ಣತೆಯ ನಡುವೆ ಕಾರ್ಯನಿರ್ವಹಿಸುವ ಮುಜುಗರದ ಅನುಭವಗಳೊಂದಿಗಿರಬೇಕಾಗುತ್ತದೆ. ಶಾಸಕಾಂಗವೇ ನೀತಿಗಳನ್ನು ನಿರೂಪಿಸುವ ಸಂವಿಧಾನಾತ್ಮಕ ಸಂಸ್ಥೆಯಾಗಿರುವುದರಿಂದ ಬದಲಾವಣೆಯ ಚಿಂತನೆಯು ಅಲ್ಲಿಂದಲೇ ಶುರುವಾಗಬೇಕಾಗುತ್ತದೆ. ಆದರೆ ಈ ದೇಶದಲ್ಲಿ ಹಾಗಾಗುತ್ತಿಲ್ಲ. ಈಗಾಗಲೇ ಇರುವ ನೀತಿಗಳ ಜಾಗದಲ್ಲಿ ಹೊಸದಾದುವುಗಳನ್ನು ಪ್ರತಿಷ್ಠಾಪಿಸುವ ಪ್ರಯತ್ನಗಳೇ ಆಗುತ್ತಿಲ್ಲ. ಹಳೆಯ ನೀತಿಗಳಿದ್ದರೆ ಭ್ರಷ್ಟಾಚಾರದ ಸ್ವಹಿತಾಸಕ್ತ ಉದ್ದೇಶ ಈಡೇರುತ್ತದೆ. ಹೊಸ ನೀತಿಗಳು ಬಂದರೆ ತಮ್ಮ ಅಸ್ತಿತ್ವಕ್ಕೇ ಕೊಡಲಿಪೆಟ್ಟು ಬೀಳುತ್ತದೆ ಎಂದುಕೊಳ್ಳುವ ನಾಯಕರಲ್ಲದ ರಾಜಕಾರಣಿಗಳು ತಮ್ಮ ತಮ್ಮ ಪಕ್ಷಗಳ ಸಾಂಸ್ಥಿಕ ಶ್ರೇಷ್ಠತೆಯನ್ನು ಮೊಟಕುಗೊಳಿಸಿಕೊಳ್ಳುವ ಹಾಗೆಯೇ ವರ್ತಿಸುತ್ತಾರೆ. ಯಥಾಸ್ಥಿತಿವಾದವನ್ನು ಉಳಿಸಿ ಅದರ ಮೇಲೆ ತಮ್ಮ ಅಸ್ತಿತ್ವವವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಹಂಬಲಗಳನ್ನೇ ಕಾಡಿಸಿಕೊಳ್ಳುತ್ತಾರೆ.ಉದ್ದೇಶಪೂರ್ವಕ ಹುನ್ನಾರ
ಅವರು ಜನರಿಗೆ ಬಹುಕಾಲದವರೆಗೆ ಅನುಕೂಲ ಒದಗಿಸಿಕೊಡುವ ಶಾಶ್ವತವಾದ ಯೋಜನೆಗಳನ್ನು ರೂಪಿಸುವ ಬದಲು ಬರೀ ಜನರ ತಾತ್ಪೂರ್ತಿಕ ಆಸೆಗಳನ್ನು ಈಡೇರಿಸುವಂಥ ಜನಪ್ರಿಯ ನೀತಿಗಳನ್ನು ರಚಿಸುತ್ತಾರೆ. ಅವುಗಳು ಅಂಗೀಕೃತವಾಗುವಂತೆಯೂ ನೋಡಿಕೊಳ್ಳುತ್ತಾರೆ. ಮತಗಳಿಕೆಯ ಲೆಕ್ಕಾಚಾರದ ಉದ್ದೇಶಗಳನ್ನೇ ಮುಖ್ಯವಾಗಿಸಿಕೊಂಡು ಯಶಸ್ವಿಯಾಗುತ್ತಾರೆ. ಜನಪ್ರಿಯ ಯೋಜನೆಗಳ ಅನುಷ್ಠಾನದಲ್ಲಿ ನೌಕರರು ಕಾರ್ಯನಿರ್ವಹಿಸಿದರೂ ಅದರ ಕ್ರೆಡಿಟ್ ಅವರಿಗೆ ಹೋಗುವುದಿಲ್ಲ. ನಾಯಕರೆನಿಸಿಕೊಂಡವರ ಪಾಲಾಗುತ್ತದೆ. ಅವರು ದೂರದೃಷ್ಟಿಯ ಚಿಂತನೆಗಳನ್ನು ಉದ್ದೇಶಪೂರ್ವಕವಾಗಿ ಹತ್ತಿಕ್ಕಿಬಿಡುತ್ತಾರೆ. ಜನಪ್ರಿಯ ಯೋಜನೆಗಳಿಗೆ ಯಶಸ್ಸು ದೊರಕಿದರೆ ಅದರ ಲಾಭವನ್ನು ತಾವು ಪಡೆಯುತ್ತಾರೆ. ಟೀಕೆಗೀಡಾದರೆ ವೈಫಲ್ಯಕ್ಕೆ ಸರ್ಕಾರಿ ನೌಕರರೆಡೆಗೆ ಬೊಟ್ಟು ಮಾಡುತ್ತಾರೆ.
ಹಿಂದೊಮ್ಮೆ ಬ್ರಿಟಿಷ್ ಹಿಡಿತಕ್ಕೊಳಗಾಗಿದ್ದ ಈ ದೇಶದಲ್ಲಿ ಅದರ ಆಡಳಿತಾತ್ಮಕ ಪಳೆಯುಳಿಕೆಯ ಹಲವು ವಿಧಾನಗಳು ಈಗಲೂ ಅನುಸರಿಸಲ್ಪಡುತ್ತಿವೆ. ಏಣಿಶ್ರೇಣಿ ವ್ಯವಸ್ಥೆಯ ವಿವಿಧ ಹಂತಗಳು ಉನ್ನತ ಅಧಿಕಾರಿಗಳ ಪ್ರತಿಷ್ಠೆಯ ಹಂಗುಗಳ ಚೌಕಟ್ಟುಗಳಡಿ ನಲುಗುತ್ತಿವೆ. ರಾಜಕಾರಣಿ ಮತ್ತು ಉನ್ನತ ಹಂತದ ಅಧಿಕಾರಿಗಳ ನಡುವಿನ ಅಸಂಬದ್ಧ ಮೈತ್ರಿಯ ನಡೆಗಳು ಆಡಳಿತವನ್ನು ಸುಧಾರಿಸುವ ಬದಲು ಅದರ ಒಟ್ಟು ಶಕ್ತಿಯನ್ನು ಕಳೆದಿಡುತ್ತಿವೆ.ಸಮಗ್ರ ಒಳಗೊಳ್ಳುವಿಕೆಯ ಕೊರತೆ ಉನ್ನತಾಧಿಕಾರ ಕೇಂದ್ರದ ನಂತರದ ಹಂತಗಳಲ್ಲಿ ಕಾರ್ಯನಿರ್ವಹಿಸುವ ನೌಕರರು ಆದೇಶಗಳನ್ನು ಪಾಲಿಸುವುದಕ್ಕಷ್ಟೇ ಸೀಮಿತವಾಗುಳಿಯುವ ಅನಿವಾರ್ಯತೆ ಎದುರಿಸುತ್ತಾರೆ. ಅವರನ್ನು ಒಳಗೊಳ್ಳುವಂಥ ಆಡಳಿತಾತ್ಮಕ ಕ್ರಮಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಗುತ್ತದೆ. ಒಂದು ವೇಳೆ ಎಲ್ಲ ಹಂತಗಳ ಸರ್ಕಾರಿ ನೌಕರರನ್ನು ಒಳಗೊಳ್ಳುವಂಥ ಆಡಳಿತಾತ್ಮಕ ಪ್ರಕ್ರಿಯೆಯು ಏರ್ಪಟ್ಟಿದ್ದಿದ್ದರೆ ಸರ್ಕಾರದ ಕಾರ್ಯವೈಖರಿ ಖಾಸಗಿ ವಲಯಕ್ಕಿಂತ ಭಿನ್ನ ಎಂದೆನ್ನಿಸಿಕೊಳ್ಳುತ್ತಿತ್ತು. ಆದರೆ, ಹಾಗಾಗಲಿಲ್ಲ. ಆಡಳಿತದ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸುವ ನೌಕರರು ಶೋಷಣೆಗೊಳಗಾಗುತ್ತಲೇ ಹೋದರು. ಸರ್ಕಾರಿ ಇಲಾಖೆಗಳ ಕಾರ್ಯವೈಖರಿ ಅಷ್ಟೇನೂ ಸರಿಯಲ್ಲ ಎಂಬ ಸಾರ್ವತ್ರಿಕ ಅಭಿಪ್ರಾಯ, ಟೀಕೆಗಳಿಗೆ ಗುರಿಯಾಗಬೇಕಾಯಿತು.ಹೀಗಳೆಯುವ ಉಡಾಫೆಯ ವ್ಯಂಗ್ಯಕ್ಕೀಡಾದ ನೌಕರರು ಇಷ್ಟೇ ಅಲ್ಲದೇ, ಪ್ರತಿ ಸಲ ವೇತನ ಹೆಚ್ಚಳದ ವರದಿಗಳು ಮುಖಪುಟದ ಆದ್ಯತೆಯೊಂದಿಗೆ ಪ್ರಕಟವಾದಾಗಲಂತೂ ಇವರಿಗೇಕೆ ಸಂಬಳ ಹೆಚ್ಚಿಸಬೇಕು ಎಂಬ ಸರಳೀಕೃತವಾದ ಪ್ರಶ್ನೆಗಳನ್ನು ಅವರು ಎದುರಿಸುತ್ತಲೇ ಇದ್ದಾರೆ. ವೇತನ ಹೆಚ್ಚಳ ಆಯಾ ಕಾಲದ ಆರ್ಥಿಕ ಅವಶ್ಯಕತೆಗಳಿಗೆ ಅನುಗುಣವಾಗಿ ನಡೆಯುತ್ತದೆ. ಇದು ಅತ್ಯಂತ ಸಹಜವಾದ ಆಡಳಿತಾತ್ಮಕ ಪ್ರಕ್ರಿಯೆ. ಇದು ಸಾಧ್ಯವಾಗುವುದಕ್ಕೂ ನೌಕರರು ಬಹುದಿನಗಳ ಕಾಲ ಕಾಯಬೇಕಾಗುತ್ತದೆ. ಆಡಳಿತದ ಚುಕ್ಕಾಣಿ ಹಿಡಿದವರಿಗೆ ಮತ್ತೆ ಮತ್ತೆ ನೆನಪಿಸಬೇಕಾಗುತ್ತದೆ. ಬೇಡಿಕೆ ಮುಂದಿಡಬೇಕಾಗುತ್ತದೆ. ಸರ್ಕಾರದ ನೇತೃತ್ವ ವಹಿಸಿದವರು ರಾಜಕೀಯ ಲೆಕ್ಕಾಚಾರದೊಂದಿಗೇ ಉನ್ನತಾಧಿಕಾರಿಗಳ ಜೊತೆಗೆ ಚರ್ಚಿಸಿ ವೇತನ ಹೆಚ್ಚಳದ ಘೋಷಣೆ ಮಾಡುತ್ತಾರೆ. ಕೊನೆಗೂ ಸರ್ಕಾರ ಸ್ಪಂದಿಸಿತು ಎಂಬ ಕೃತಾರ್ಥ ಭಾವ ನೌಕರರದ್ದಾಗುತ್ತದೆ. ಆದರೆ, ಇದಕ್ಕೆ ಸಂಬಂಧಿಸಿದ ಸುದ್ದಿ ಪ್ರಚುರವಾದಾಗ ಸರ್ಕಾರಿ ನೌಕರರನ್ನು ಹೀಗಳೆಯುವ ಉಡಾಫೆಯ ವ್ಯಂಗ್ಯದ ತಿವಿತಗಳಿಗೆ ಈಡಾಗಬೇಕಾಗುತ್ತದೆ. ಹೀಗಾಗಿಯೇ ನೌಕರರು ಒಂದು ಬಗೆಯ ಅಸಮಾಧಾನ, ಅತೃಪ್ತಿಯೊಂದಿಗೇ ಕಾರ್ಯನಿರ್ವಹಿಸಬೇಕಾಗುತ್ತದೆ. ಇದು ಇಲಾಖಾವಾರು ಕಾರ್ಯವೈಖರಿಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಅಡಗಿರುವ ಹತ್ತುಹಲವು ಲೋಪದೋಷಗಳು.
ಅತಾರ್ಕಿಕ ಟೀಕೆಗಳು
ಈ ಹಂತದಲ್ಲಿಯೇ ಸರ್ಕಾರಿ ಕೆಲಸ ಮತ್ತು ಸರ್ಕಾರಿ ನೌಕರರು ಸರಳೀಕೃತವಾದ, ಅತಾರ್ಕಿಕ ಟೀಕೆಗಳಿಗೆ ತುತ್ತಾಗಬೇಕಾಯಿತು. ಕ್ಲೀಷೆ ಎನ್ನಿಸುವಷ್ಟರ ಮಟ್ಟಿಗೆ ಟೀಕೆಗೆ ಒಳಗಾದ, ವ್ಯಂಗ್ಯಕ್ಕೆ ತುತ್ತಾದ ಒಂದು ಜನಜನಿತ ಉಲ್ಲೇಖವೆಂದರೆ ‘ಸರ್ಕಾರಿ ಕೆಲಸ ದೇವರ ಕೆಲಸ’. ಇದನ್ನು ತಪ್ಪಾಗಿ ಅರ್ಥೈಸಲಾಗಿದೆ. ತಪ್ಪಾಗಿ ಗ್ರಹಿಸಲಾಗಿದೆ. ಸರ್ಕಾರದ ಕೆಲಸ ದೇವರದ್ದಾಗಿರುವುದರಿಂದ ಮನುಷ್ಯರಿಗೆ ಅಲ್ಲಿ ನಿರ್ವಹಿಸಲು ಕೆಲಸವೇ ಇರುವುದಿಲ್ಲ, ಹಾಗಾಗಿಯೇ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ನಿರೀಕ್ಷಿತ ರೀತಿಯಲ್ಲಿ ಕೆಲಸಗಳಾಗುವುದಿಲ್ಲ ಎಂಬ ಉಲ್ಲೇಖಗಳು ವ್ಯಂಗ್ಯಾತ್ಮಕವಾಗಿಯೇ ವ್ಯಕ್ತವಾಗುತ್ತವೆ.
ಈ ಉಲ್ಲೇಖವನ್ನು ಹೀಗೆ ತಪ್ಪಾಗಿ ಅರ್ಥೈಸಿಕೊಳ್ಳುವುದಕ್ಕಿಂತ ಅದರ ಹಿಂದಿನ ಉದ್ದೇಶವನ್ನು ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ. ನೌಕರರೊಳಗೆ ನೈತಿಕ ಶ್ರದ್ಧೆಯನ್ನು ರೂಪಿಸುವ ಒತ್ತಾಸೆಯೊಂದಿಗೆ ಸರ್ಕಾರದ ಕೆಲಸವನ್ನು ದೇವರ ಕೆಲಸಕ್ಕೆ ಹೋಲಿಸಿ ವ್ಯಾಖ್ಯಾನಿಸಿರಬಹುದು. ದೇವರ ಕೆಲಸವೆಂದರೆ ನೌಕರರೊಳಗೆ ಶ್ರದ್ಧೆ ಹುಟ್ಟಿಕೊಳ್ಳುತ್ತದೆ ಎಂಬ ನಿರೀಕ್ಷೆಯಲ್ಲಿ ಅಂಥದ್ದೊಂದು ವ್ಯಾಖ್ಯಾನ ಹುಟ್ಟಿಕೊಂಡಿರಬಹುದು. ಆದರೆ, ಹಾಗಾಗಲಿಲ್ಲ. ಬದಲಾಗಿ ಸರ್ಕಾರಿ ನೌಕರರು ಕೆಲಸ ಮಾಡದೇ ಇದ್ದರೂ ನಡೆಯುತ್ತದೆ ಎಂಬ ಮನೋಭಾವದೊಂದಿಗೆ ಈ ಉದ್ಧರಣ ತಳುಕುಹಾಕಿಕೊಂಡಿತು. ಈ ಉದ್ಧರಣಕ್ಕಿಂತ ಮುಖ್ಯವೆನ್ನಿಸುವ ಉದಾತ್ತವಾದುದು ‘ಕಾಯಕವೇ ಕೈಲಾಸ’ ಪರಿಕಲ್ಪನೆ. ನಿರ್ವಹಿಸಬೇಕಾದ ಕೆಲಸವನ್ನು ಕೈಲಾಸಕ್ಕೆ ಸಮೀಕರಿಸಿ ನೋಡುವ ಈ ದೃಷ್ಟಿಕೋನವನ್ನು ಆಧರಿಸಿ ಸರ್ಕಾರಿ ಆಡಳಿತ ಮರುರೂಪುಗೊಂಡರೆ ಬೆಳವಣಿಗೆಯ ಪ್ರಕ್ರಿಯೆಗೆ ಹೊಸ ಆಯಾಮ ದೊರಕುತ್ತದೆ.
ಸೀಮಿತ ಗ್ರಹಿಕೆಯ ಮಿತಿಗಳು
ಭಾರತದಲ್ಲಿ ಸಾರ್ವಜನಿಕ ಆಡಳಿತದ ಪರಿಕಲ್ಪನೆಯು ಚಲನೆಯ ಸಂಕೇತವಾಗಿ ಚಾಲ್ತಿಗೆ ಬರಲೇ ಇಲ್ಲ. ಅದು ಕೇವಲ ಸರ್ಕಾರದ ಕೆಲಸ ಎಂಬರ್ಥದ ಸೀಮಿತ ಗ್ರಹಿಕೆಯೇ ಆದ್ಯತೆ ಪಡೆದು ಉನ್ನತ ಹಂತದ ನಾಯಕರೆನ್ನಿಸಿಕೊಂಡವರು ಅದಕ್ಕನುಗುಣವಾಗಿಯೇ ಆಡಳಿತವನ್ನು ವ್ಯಾಖ್ಯಾನಿಸಿಕೊಂಡರು. ಬದಲಾವಣೆ, ಬೆಳವಣಿಗೆ, ಪ್ರಗತಿ, ಅಭಿವೃದ್ಧಿ ಎಂಬ ಪದಗಳೊಂದಿಗೆ ಆಡಳಿತವನ್ನು ಜೋಡಿಸಿ ಮಾತನಾಡುವ ಜಾಣ್ಮೆಯನ್ನು ರೂಢಿಸಿಕೊಂಡರೇ ಹೊರತು ಅದನ್ನು ದೇಶ ಮತ್ತು ಜನತೆಯ ಉಜ್ವಲ ಭವಿಷ್ಯವನ್ನು ಸಾಧ್ಯವಾಗಿಸುವ ಸಂಕಲ್ಪಕ್ಕೆ ಸಂಯೋಜಿಸುವುದರ ಕಡೆಗೆ ಗಮನವನ್ನೇ ಹರಿಸಲಿಲ್ಲ. ಪ್ರಧಾನಿ ಮತ್ತು ಮುಖ್ಯಮಂತ್ರಿ ಹುದ್ದೆಗಳನ್ನು ಅಲಂಕರಿಸಿದ ಕೆಲವರು ಈ ಕುರಿತು ಯೋಚಿಸಿ ಯೋಜಿಸಿದರೂ ಆಡಳಿತಾತ್ಮಕ ಕಾರ್ಯಾನುಷ್ಠಾನ ಸಾಧ್ಯವಾಗಲಿಲ್ಲ. ಭಿನ್ನವಾಗಿ ಯೋಚಿಸುವ ನಾಯಕರು ಉನ್ನತ ಹುದ್ದೆಗಳನ್ನು ಅಲಂಕರಿಸಿದಾಗಲೂ ಇದೇ ಸಮಸ್ಯೆ ಮುಂದುವರೆಯಿತು. ಹೀಗೆ ಆಲೋಚಿಸುವ ನಾಯಕರಿದ್ದಾಗ ಉನ್ನತ ಹಂತಗಳ ಅಧಿಕಾರಿವರ್ಗ ಹಾಗೆ ಯೋಚಿಸಲಿಲ್ಲ. ಹಾಗೆ ಯೋಚಿಸುವ ಅಧಿಕಾರಿ ವರ್ಗ ಉನ್ನತ ಹಂತಗಳಲಿದ್ದಾಗ ಸ್ಪಂದಿಸುವ ಗುಣದ ದಾರ್ಶನಿಕ ನಾಯಕತ್ವದ ಕೊರತೆ ಕಾಡಿತು.
ಅಗಾಧ ಶ್ರಮದ ಅಪವ್ಯಯ
ಇಂಥ ಸಂಕೀರ್ಣತೆಯ ಮಧ್ಯೆಯೇ ಸರ್ಕಾರಿ ನೌಕರರು ಕಾರ್ಯನಿರ್ವಹಿಸಬೇಕಾಯಿತು. ಜನಹಿತದ ಪ್ರಶ್ನೆಗಳನ್ನು ಕಾಡಿಸಿಕೊಂಡು ಕಾರ್ಯನಿರ್ವಹಿಸುವ ಸಾಮೂಹಿಕ ಹೊಣೆಗಾರಿಕೆಯ ಪ್ರಜ್ಞೆ ಇದ್ದರೂ ಅದು ಪ್ರಯೋಗಕ್ಕೊಳಪಡಲಿಲ್ಲ.ಪ್ರಯೋಗಕ್ಕೊಳಪಡದಂತೆ ಅಡತಡೆಗಳನ್ನು ಉಂಟುಮಾಡುವ ಸಂಕುಚಿತ ರಾಜಕಾರಣ ಚಿಗುರೊಡೆಯಿತು. ಅದನ್ನು ರಾಜಕೀಯ ಪಕ್ಷಗಳು ಅತ್ಯಂತ ಚಾಣಾಕ್ಷಯುತವಾಗಿ ಪೋಷಿಸಿದವು. ನೌಕರರ ಅಗಾಧ ಶ್ರಮದ ಅಪವ್ಯಯ ಇಲ್ಲಿಂದಲೇ ಆರಂಭವಾಯಿತು. ನಾವಿನ್ನೂ ಜನರನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿಸುವುದರ ಕಡೆಗೇ ಶ್ರಮವನ್ನು ವ್ಯಯಿಸುತ್ತಿದ್ದೇವೆ ಎಂಬ ಟೀಕೆ ತಾರ್ಕಿಕವೆನ್ನಿಸತೊಡಗಿತು. ಇದನ್ನು ಅಲ್ಲಗಳೆಯುವ ಆಡಳಿತಾತ್ಮಕ ದಿಟ್ಟಹೆಜ್ಜೆಗಳು ನಾಯಕರೆನ್ನಿಸಿಕೊಂಡವರಿಂದಾಗಲೀ, ಕಾರ್ಯಾಂಗದ ರಚನಾತ್ಮಕತೆಯನ್ನು ವಿಸ್ತರಿಸುವ ಹೊಣೆಗಾರಿಕೆಯುಳ್ಳ ಉನ್ನತ ಹಂತದ ಅಧಿಕಾರಿ ವರ್ಗದಿಂದಾಗಲೀ ವ್ಯಕ್ತವಾಗಲಿಲ್ಲ. ರಾಜಕಾರಣಿಗಳ ಅಪ್ರಬುದ್ಧತೆ ಆಡಳಿತವನ್ನು ಸಡಿಲಗೊಳಿಸಿತು. ಉನ್ನತಾಧಿಕಾರಿ ವರ್ಗದ್ದು ಕೇವಲ ಮೂಕಪ್ರೇಕ್ಷಕ ಪಾತ್ರವಾಯಿತು. ಆಡಳಿತದ ಅನುಕೂಲಕ್ಕಾಗಿ ರೂಪುಗೊಂಡಿದ್ದ ಏಣಿಶ್ರೇಣಿ ವ್ಯವಸ್ಥೆ ಪ್ರತಿಷ್ಠೆಯ ಚೌಕಟ್ಟಿನೊಳಗೆ ಬಂಧಿಯಾಯಿತು. ದರ್ಪ, ದರ್ಬಾರು, ನಿಂದನೆ, ಕಿರುಕುಳ ಮತ್ತು ಶೋಷಣೆಗಳ ನಡುವೆ ಕೆಲಸ ಮಾಡುವ ಅನಿವಾರ್ಯತೆ ನಂತರದ ಆಡಳಿತಾತ್ಮಕ ಹಂತಗಳ ನೌಕರರಿಗೆ ಎದುರಾಯಿತು.
ಆಕ್ರಾಮಕ ನೀತಿಗಳ ಸವಾರಿ ಸರ್ಕಾರಿ ನೌಕರರು ಮತ್ತು ಅವರ ನೌಕರಿಯನ್ನು ಅಪವ್ಯಾಖ್ಯಾನಿಸಿ ಅವರ ಅಸ್ತಿತ್ವವನ್ನು ನಗಣ್ಯವಾಗಿಸಿ ಅಪವ್ಯಾಖ್ಯಾನಕ್ಕೆ ಒಳಪಡಿಸುವ ಹುನ್ನಾರ ರಾಜಕಾರಣ ಮತ್ತು ಆಡಳಿತಾತ್ಮಕ ಉನ್ನತ ಹಂತಗಳಿಂದಲೇ ಶುರುವಾಯಿತು. ಈ ಅಪವ್ಯಾಖ್ಯಾನ ಸರ್ಕಾರಿ ವಲಯವನ್ನು ನೆಗೆಟಿವ್ ಆಗಿ ನೋಡುವುದಕ್ಕೆ ಪ್ರಚೋದಿಸಿತು. ಆಡಳಿತವನ್ನು ಯಂತ್ರವನ್ನಾಗಿ ತಪ್ಪಾಗಿ ಬಿಂಬಿಸಿತು. ನೌಕರರನ್ನು ದುಡಿಯುವ ಯಂತ್ರಗಳನ್ನಾಗಿ ನೋಡುವ ವಿಚಿತ್ರ ವಾತಾವರಣ ಸೃಷ್ಟಿಯಾಯಿತು. ನೌಕರರು ಯಂತ್ರಗಳಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳುವ ಹೊತ್ತಿಗೆ ಕಾಲ ಮಿಂಚಿತ್ತು. ತೊಂಭತ್ತರ ದಶಕದ ಆಕ್ರಾಮಕ ನೀತಿಗಳ ಸವಾರಿ ಆರಂಭವಾಗಿತ್ತು. ಬೃಹತ್ ಕಂಪನಿಗಳ ವಾಣಿಜ್ಯಿಕ ಕೌಶಲ್ಯಗಳು ಶ್ರೇಷ್ಠ ಎಂದೆನ್ನಿಸಿ ನಮ್ಮದೇ ಸರ್ಕಾರದ ವಿವಿಧ ಹಂತಗಳು ಪೇಲವ ಎನ್ನಿಸತೊಡಗಿದವು. ಇಡೀ ಸಾರ್ವಜನಿಕ ಆಡಳಿತ ಟೊಳ್ಳು ಎಂಬ ಭಾವನೆಯನ್ನು ಉದ್ದೇಶಪೂರ್ವಕವಾಗಿ ಬಿತ್ತಲಾಯಿತು.
ಆದ್ಯತಾವಲಯಗಳೆಡೆಗೆ ನಿರ್ಲಕ್ಷ್ಯ
ಆದರೆ, ಸ್ವಾತಂತ್ರ್ಯಾನಂತರ ಇಡೀ ದೇಶ ಆಡಳಿತಾತ್ಮಕವಾಗಿ ಮಹತ್ವದ್ದನ್ನು ಸಾಧಿಸಬೇಕಾಗಿತ್ತು. ಆಡಳಿತವನ್ನು ಸಂಪನ್ಮೂಲ ಕೇಂದ್ರವಾಗಿಸುವ ದಾರ್ಶನಿಕತೆಯ ವ್ಯಕ್ತವಾಗಬೇಕಾಗಿತ್ತು. ಅಂಥ ದಾರ್ಶನಿಕತೆಯನ್ನು ನಿರೂಪಿಸುವ ನಾಯಕರ ಸಂಖ್ಯೆ ಹೆಚ್ಚಾಗಬೇಕಾಗಿತ್ತು. ನೌಕರರನ್ನು ಮಕ್ಕಳಂತೆ ನೋಡುವ ತಾಯಿಯ ಅಂತಃಕರಣ ಉನ್ನತ ಹಂತದ ನಾಯಕತ್ವ ಮತ್ತು ಅತ್ಯುನ್ನತ ಹಂತದ ಅಧಿಕಾರ ವಲಯದಿಂದ ಅಭಿವ್ಯಕ್ತಗೊಳ್ಳಬೇಕಿತ್ತು. ಅಂಥ ಉದಾತ್ತತೆಯ ಬದಲು ಆಡಳಿತ ಸುಧಾರಣೆಯ ನೆಪದಲ್ಲಿ ನೌಕರರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಲಾಯಿತು. ಪ್ರಯೋಜನವಾದಿ ವಾಣಿಜ್ಯಿಕ ಲಾಭದ ಉದ್ಯಮದ ವ್ಯಾಪ್ತಿಗೆ ಸರ್ಕಾರಿ ವ್ಯವಸ್ಥೆಯನ್ನು ತರಲಾಯಿತು. ನೌಕರರ ಸಂಖ್ಯೆ ತಗ್ಗಿಸುವ ಯೋಚನೆ, ಪಿಂಚಣಿ ಸೌಲಭ್ಯ ನಿರಾಕರಣೆ, ಖಾಸಗಿಯವರೊಂದಿಗೆ ಗುರುತಿಸಿಕೊಳ್ಳುವ ಪ್ರಯೋಜನವಾದಿ ಹಂಬಲ, ನೇಮಕಾತಿ, ಬಡ್ತಿ ಮತ್ತಿತರ ಸಂಗತಿಗಳಿಗೆ ಸಂಬಂಧಿಸಿದಂತೆ ಬಿಕ್ಕಟ್ಟುಗಳು ನಿರಂತರವಾದವು. ಈ ಬಿಕ್ಕಟ್ಟುಗಳು ಬಿಗಡಾಯಿಸಿದಾಗ ಯಥಾಸ್ಥಿತಿವಾದದ ಹ್ಯಾಂಗ್ ಓವರ್ಗೆ ಆಡಳಿತ ಮತ್ತು ನಾಯಕತ್ವ ಈಡಾಗಬೇಕಾಯಿತು. ಸಾಮಾಜಿಕತೆ, ಶಿಕ್ಷಣ, ಆರೋಗ್ಯ, ಮಾನವ ಸಂಪನ್ಮೂಲ ಸೇರಿದಂತೆ ಮಹತ್ವದ ಆದ್ಯತಾ ವಲಯಗಳು ನಿರ್ಲಕ್ಷ್ಯಕ್ಕೆ ತುತ್ತಾದವು.
ಆಶಾವಾದದ ಮಾರ್ಗ ಹಾಗಾದರೆ, ಸರ್ಕಾರಿ ನೌಕರರೂ ಸೇರಿದಂತೆ ವಿವಿಧ ವಲಯಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರೋಪಾಯಗಳೇ ಇಲ್ಲವೇ? ಹಾಗೆ ನಿರಾಸೆಗೊಳ್ಳಬೇಕಿಲ್ಲ. ಬಲದಾವಣೆಯು ಮೇಲುಹಂತದಿಂದ ಕೆಳಹಂತದವರೆಗೆ ಪ್ರವಹಿಸುವಂಥ ಪ್ರಕ್ರಿಯೆ ತೀವ್ರಗೊಳ್ಳಬೇಕು. ರಾಜಕಾರಣಿಗಳು ದಾರ್ಶನಿಕ ನಾಯಕರಾಗಿ ಮಾರ್ಪಾಡಾಗಬೇಕು. ವಿವಿಧ ವಲಯಗಳನ್ನು ಪ್ರತಿನಿಧಿಸಿ ಮಹತ್ವದ್ದನ್ನು ಸಾಧಿಸುವಂಥ ಮಹತ್ವಾಕಾಂಕ್ಷೆಯೊಂದಿಗೆ ರಾಜಕಾರಣವನ್ನು ಜನಮುಖಿಯಾಗಿಸಬೇಕು. ಕಾರ್ಯಾಂಗದ ಚಲನಶೀಲತೆಯನ್ನು ತೀವ್ರಗೊಳಿಸುವ ಸಂಕಲ್ಪದೊಂದಿಗೆ ಶಾಸಕಾಂಗ ಹೆಜ್ಜೆಯಿರಿಸಬೇಕು. ಆ ಮೂಲಕ ತನ್ನ ಶಕ್ತಿಯನ್ನು ಮರುರೂಪಿಸಿಕೊಳ್ಳಬೇಕು. ಅಂಥ ಶಕ್ತಿಯನ್ನು ವಿಸ್ತರಿಸಲು ಸಾಧ್ಯವಾಗಿಸುವಂತೆ ಸಾರ್ವಜನಿಕ ಆಡಳಿತಾಂಗವನ್ನು ಪ್ರತಿನಿಧಿಸುವ ಉನ್ನತ ಮತ್ತು ತದನಂತರದ ಹಂತಗಳ ಅಧಿಕಾರಿಗಳು ನೋಡಿಕೊಳ್ಳಬೇಕು. ಸರ್ಕಾರಿ ನೌಕರರರ ಸಂಪನ್ಮೂಲ ಸಾಮಥ್ರ್ಯವನ್ನು ವಿಸ್ತರಿಸಬೇಕು. ಅವರ ಹಿತಾಸಕ್ತಿಗಳನ್ನು ರಕ್ಷಿಸುತ್ತಲೇ ಸಾರ್ವಜನಿಕ ಆಡಳಿತವನ್ನು ಪುನಃಶ್ಚೇತನಗೊಳಿಸಿ ಪ್ರಜಾಪ್ರಭುತ್ವದ ಸದಾಶಯಗಳ ಸಾಕಾರಕ್ಕೆ ಶ್ರಮಿಸಬೇಕು. ಆ ಮೂಲಕ ಸಾರ್ವಜನಿಕ ವಲಯದ ಅಸ್ತಿತ್ವವನ್ನು ಉಳಿಸಿಕೊಂಡು ಅಪ್ಪಟ ದೇಶಿ ಪ್ರಜ್ಞೆಯ ಆಧಾರದಲ್ಲಿ ಭಾರತದ ಭವಿಷ್ಯವನ್ನು ಉಜ್ವಲಗೊಳಿಸುವ ನಡೆಗಳು ಪುನರಾವರ್ತಿತವಾಗಬೇಕು.
-ಡಾ.ಎನ್.ಕೆ.ಪದ್ಮನಾಭ

ದಿನದ ಸುದ್ದಿ
ಸ್ವಾತಂತ್ರ್ಯವನ್ನು ಗೌರವಿಸಿ, ಭವಿಷ್ಯವನ್ನು ಪ್ರೇರೇಪಿಸೋಣ: ವಿವಿಐಎಸ್ನಲ್ಲಿ ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ
ಸುದ್ದಿದಿನ,ಬೆಂಗಳೂರು: ವಿಶ್ವ ವೆಂಕಟೇಶ್ವರ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ನಲ್ಲಿ “ಸ್ವಾತಂತ್ರ್ಯವನ್ನು ಗೌರವಿಸಿ, ಭವಿಷ್ಯವನ್ನು ಪ್ರೇರೇಪಿಸೋಣ” ಎಂಬ ಆಶಯದೊಂದಿಗೆ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕಟ್ಟಾ ಬಾಲಾಜಿ ಬಾಬು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ತಮ್ಮ ಪ್ರೇರಣಾದಾಯಕ ಭಾಷಣದಲ್ಲಿ ಅವರು, ದೇಶಭಕ್ತಿ ಕೇವಲ ಘೋಷಣೆಗಳಿಗೆ ಸೀಮಿತವಾಗದೆ, ಪ್ರತಿಯೊಬ್ಬರೂ ತಮ್ಮ ಮೂಲಭೂತ ಕರ್ತವ್ಯಗಳನ್ನು ಅರಿತು, ತಮ್ಮ ಸಾಮರ್ಥ್ಯ, ಆಸಕ್ತಿ ಹಾಗೂ ಅಭಿರುಚಿಗೆ ತಕ್ಕಂತೆ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುವುದರಲ್ಲಿ ಅಡಗಿದೆ ಎಂದು ಕರೆ ನೀಡಿದರು. ಪ್ರಾಮಾಣಿಕ ಪರಿಶ್ರಮ ಮತ್ತು ಜವಾಬ್ದಾರಿಯುತ ನಾಗರಿಕತ್ವವೇ ಬಲಿಷ್ಠ ಭಾರತದ ನಿರ್ಮಾಣಕ್ಕೆ ಅಡಿಪಾಯ ಎಂದರು.
ವಿದ್ಯಾರ್ಥಿಗಳ ಮನೋಜ್ಞ ಸಾಂಸ್ಕೃತಿಕ ಕಾರ್ಯಕ್ರಮಗಳು, ದೇಶಭಕ್ತಿ ಪ್ರದರ್ಶನಗಳು ಹಾಗೂ ಶಿಸ್ತುಬದ್ಧ ಮೆರವಣಿಗೆಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದವು. ಕೊಡಿಪಾಳ್ಯ ಮತ್ತು ಕೆಂಗೇರಿಯಲ್ಲಿ 445 ಮೀಟರ್ ಇರುವ ವಿಶೇಷ ಧ್ವಜದೊಂದಿಗೆ ವಿದ್ಯಾರ್ಥಿಗಳ ಮೆರವಣಿಗೆ ಗಮನ ಸೆಳೆಯಿತು. ಶತಪ್ರತಿಶತ ಫಲಿತಾಂಶ ಸಾಧಿಸಿದ ಬೋಧಕ ಸಿಬ್ಬಂದಿಯನ್ನು ಮತ್ತು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ನೇರ ಪ್ರಸಾರವೂ ನಡೆಯಿತು. 2,500 ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ವಿಶೇಷ ಮಧ್ಯಾಹ್ನದ ಊಟ ಮತ್ತು ಸಿಹಿತಿಂಡಿ ವ್ಯವಸ್ಥೆ ಮಾಡಲಾಗಿದ್ದು, ಒಗ್ಗಟ್ಟು ಮತ್ತು ದೇಶಪ್ರೇಮದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.
ಈ ಸಂದರ್ಭದಲ್ಲಿ ವಿವಿಐಎಸ್ ನ ಅಕಾಡೆಮಿಕ್ ಅಡ್ವೈಸರ್ ಡಾ. ರಾಜೇಶ್ವರಿ ದತ್ತಾತ್ರಿ, ವಿವಿ ವಿದ್ಯಾಸಂಸ್ಥೆಯ ಡೀನ್ ಶ್ರೀ ಕಿಶೋರ್ ಕಟ್ಟ, ಪ್ರಾಂಶುಪಾಲೆ ಶ್ರೀಮತಿ ಲಕ್ಷ್ಮಿ ಟಿ.ಎನ್, ಕೆಪಿಸಿ ಪಿಯು ಕಾಲೇಜು ಪ್ರಾಂಶುಪಾಲರಾದ ಡಾ. ಐ. ಚೆನ್ನಾರೆಡ್ಡಿ, ಸಿಬಿಎಸ್ಇ ಪ್ರಾಂಶುಪಾಲರಾದ ಪ್ರೊ. ಪ್ರಹ್ಲಾದ, ಉಪಪ್ರಾಂಶುಪಾಲರಾದ ಶ್ರೀ ಮದನ್ ರಾಜ್, ಪ್ರಾಂಶುಪಾಲರಾದ ಡಾ. ಸುರೇಶ್ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸ್ವಾತಂತ್ರ್ಯವೆಂದರೆ ಬರಿ ಹಕ್ಕಲ್ಲ ದೇಶದ ಬಗ್ಗೆ ಜವಾಬ್ದಾರಿ ಹೊಂದುವುದೂ ಕೂಡ : ಯೋಗೀಶ್ ಸಹ್ಯಾದ್ರಿ
ಸುದ್ದಿದಿನ,ಚಿತ್ರದುರ್ಗ : ಸ್ವಾತಂತ್ರ್ಯವೆಂದರೆ ಕೇವಲ ಹಕ್ಕುಗಳ ಅನುಭವವಲ್ಲ, ದೇಶದ ಬಗ್ಗೆ ಜವಾಬ್ದಾರಿ ಹೊಂದುವುದೂ ಸಹ ಹೌದು. ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳನ್ನು ಸದಾ ಸ್ಮರಿಸಬೇಕು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು, ಶಿಸ್ತು, ಪ್ರಾಮಾಣಿಕತೆ ಮತ್ತು ದೇಶಪ್ರೇಮವನ್ನು ಬೆಳೆಸಿಕೊಂಡು ರಾಷ್ಟ್ರದ ಭವಿಷ್ಯದ ಉತ್ತಮ ನಾಗರಿಕರಾಗಬೇಕು ರೋಟರಿ ಕ್ಲಬ್ ಆಫ್ ಚಿತ್ರದುರ್ಗ ಅಧ್ಯಕ್ಷರಾದ ರೊ. ಯೋಗೀಶ್ ಸಹ್ಯಾದ್ರಿ ತಿಳಿಸಿದರು.
ನಗರದ ರೋಟರಿ ವಿದ್ಯಾಲಯದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮ, ಸಡಗರ ಹಾಗೂ ದೇಶಭಕ್ತಿಯ ವಾತಾವರಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಬಳಿಕ ಮಾತನಾಡಿದ ಅವರು ಮಾತನಾಡಿದರು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತಿರುವುದು ಅನೇಕ ಮಹನೀಯರ ತ್ಯಾಗದ ಫಲ. ಮಹಾತ್ಮ ಗಾಂಧೀಜಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಅಸಂಖ್ಯಾತ ಹೋರಾಟಗಾರರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನು ಅರ್ಪಿಸಿದ್ದಾರೆ. ಅವರ ತ್ಯಾಗವನ್ನು ಸ್ಮರಿಸುವುದರ ಜೊತೆಗೆ, ಅವರು ಕಂಡ ಕನಸಿನ ಭಾರತವನ್ನು ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸದಾ ಸ್ಮರಿಸಿ, ಏಕತೆ, ಶಿಸ್ತು, ಶಿಕ್ಷಣ ಮತ್ತು ಸೇವೆಯ ಮೂಲಕ ಶ್ರೇಷ್ಠ ಭಾರತವನ್ನು ನಿರ್ಮಿಸುವ ಸಂಕಲ್ಪವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ಅವರು ಕರೆ ನೀಡಿದರು. ಎಲ್ಲಾ ವಿದ್ಯಾರ್ಥಿಗಳು ದೇಶದ ಹೆಮ್ಮೆ ಮತ್ತು ಭವಿಷ್ಯದ ಆಶಾಕಿರಣಗಳಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೊ. PHF. PDG. ಮಧುಪ್ರಸಾದ್ ಕೆ. ಅವರು ವಹಿಸಿದ್ದರು. ಅವರು ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ಉತ್ತಮ ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳುವುದು ಇಂದಿನ ಯುವಜನತೆಯ ಕರ್ತವ್ಯವಾಗಿದೆ. ಸ್ವಾತಂತ್ರ್ಯ ನಮಗೆ ಹಕ್ಕುಗಳನ್ನು ನೀಡಿದಂತೆ ಕರ್ತವ್ಯಗಳನ್ನೂ ನೀಡಿದೆ. ಸಂವಿಧಾನವನ್ನು ಗೌರವಿಸುವುದು, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು, ಪರಿಸರವನ್ನು ಸಂರಕ್ಷಿಸುವುದು, ಸಾರ್ವಜನಿಕ ಆಸ್ತಿಯನ್ನು ಕಾಪಾಡುವುದು ಹಾಗೂ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯನ್ನು ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ರೋಟರಿ ಟ್ರಸ್ಟ್ ನ ಖಜಾಂಚಿ ರೊ. ಸತ್ಯನಾರಾಯಣಾಚಾರ್,
ರೊ. ಜಿ.ಎ. ವಿಶ್ವನಾಥ್ ಬಾಬು, ರೋಟರಿ ಕ್ಲಬ್ ಆಫ್ ಚಿತ್ರದುರ್ಗದ ಸದಸ್ಯರು, ಹಾಗೂ ರೊ. ಶಂಕರಪ್ಪ, ಆಡಳಿತಾಧಿಕಾರಿ, ರೋಟರಿ ವಿದ್ಯಾಲಯ, ಉಪಸ್ಥಿತರಿದ್ದು , ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ತಿಳಿಸಿ, ದೇಶದ ಪ್ರಗತಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ತಮ್ಮದೇ ಆದ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕುರಿತು ಭಾಷಣ ಮಾಡಲು ಅವಕಾಶ ನೀಡಲಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ದೇಶಭಕ್ತಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಹಾಗೂ ರಾಷ್ಟ್ರದ ಅಭಿವೃದ್ಧಿಯ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳ ಭಾಷಣಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.
ವಿದ್ಯಾರ್ಥಿಗಳ ಪೋಷಕರು ಕೂಡ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಉಮಾದೇವಿ ಹೆಚ್.ಎಂ. ಅವರು ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಶಿಕ್ಷಕಿ ಜ್ಯೋತಿ ಆರ್. ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಹಿರಿಯ ಶಿಕ್ಷಕಿ ಗೌರಮ್ಮ ಅವರು ವಂದನಾರ್ಪಣೆ ಸಲ್ಲಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ರೋಟರಿ ಪದಾಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಕೃತಜ್ಞತೆ ಸಲ್ಲಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನವಿಲೇಹಾಳು | 80ನೇ ಸ್ವಾತಂತ್ರ್ಯ ದಿನಾಚರಣೆ ; ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸಿಹಿ ಹಂಚಿ ಸಂಭ್ರಮ
ಸುದ್ದಿದಿನ,ದಾವಣಗೆರೆ: ಜಿಲ್ಲೆಯ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ, ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನವಿಲೇಹಾಳು ಗ್ರಾಮದಲ್ಲಿ ಸಿಹಿ ಹಂಚುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಸಾರ್ವಜನಿಕರಿಗೆ ಸಿಹಿ ವಿತರಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯ ಮಹತ್ವ, ದೇಶದ ಏಕತೆ, ಸಾಮರಸ್ಯ ಹಾಗೂ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ಕುರಿತು ಸಂದೇಶ ನೀಡಲಾಯಿತು.
ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷರಾದ ಜಾಫರ್ ಅವರು ಮಾತನಾಡಿ, ಸ್ವಾತಂತ್ರ್ಯವೆಂಬುದು ಕೇವಲ ಆಚರಣೆಗೆ ಸೀಮಿತವಾಗದೆ, ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು, ನ್ಯಾಯ ಹಾಗೂ ಅಭಿವೃದ್ಧಿಯ ಅವಕಾಶ ದೊರೆಯುವಂತಾಗಬೇಕು. ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಯುವಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯಗಳನ್ನು ಕೋರಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ನವಿಲೇಹಾಳು ಗ್ರಾಮ ಪಂಚಾಯಿತಿಗೆ ಭೇಟಿ ; ಗ್ರಾಮಸಭೆ – ಗ್ರಾಮಾಭಿವೃದ್ಧಿಗೆ ಮನವಿ
-
ದಿನದ ಸುದ್ದಿ2 days agoನವಿಲೇಹಾಳು | 80ನೇ ಸ್ವಾತಂತ್ರ್ಯ ದಿನಾಚರಣೆ ; ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸಿಹಿ ಹಂಚಿ ಸಂಭ್ರಮ
-
ದಿನದ ಸುದ್ದಿ2 days agoಸ್ವಾತಂತ್ರ್ಯವೆಂದರೆ ಬರಿ ಹಕ್ಕಲ್ಲ ದೇಶದ ಬಗ್ಗೆ ಜವಾಬ್ದಾರಿ ಹೊಂದುವುದೂ ಕೂಡ : ಯೋಗೀಶ್ ಸಹ್ಯಾದ್ರಿ
-
ದಿನದ ಸುದ್ದಿ22 hours agoಸ್ವಾತಂತ್ರ್ಯವನ್ನು ಗೌರವಿಸಿ, ಭವಿಷ್ಯವನ್ನು ಪ್ರೇರೇಪಿಸೋಣ: ವಿವಿಐಎಸ್ನಲ್ಲಿ ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ


