Connect with us

ರಾಜಕೀಯ

ನೌಕರರು, ನಾಯಕರು ಮತ್ತು ಆಡಳಿತ

Published

on

ತ್ತೀಚೆಗೆ ನಡೆದ ಸಾಹಿತ್ಯೋತ್ಸವವೊಂದರ ಗೋಷ್ಠಿಯಲ್ಲಿ ಇಬ್ಬರು ಭಾಷಣಕಾರರು ಕಾರ್ಯಾಂಗದ ಅನುಷ್ಠಾನ ಬದ್ಧತೆಯ ಕೊರತೆಯ ಕಾರಣಕ್ಕಾಗಿ ಈ ದೇಶದಲ್ಲಿ ನಾಯಕರ ಸುಧಾರಣೆಯ ಕನಸುಗಳು ಸಾಕಾರಗೊಳ್ಳುತ್ತಿಲ್ಲ ಎಂಬ ತಕರಾರು ಎತ್ತಿದರು. ಅಷ್ಟೇ ಅಲ್ಲ, ಅವರು ಇನ್ನೂ ಸ್ಪಷ್ಟವಾಗಿ ಕಾರ್ಯಾಂಗದ ವೈಖರಿಯ ಮೇಲೆ ಅತ್ಯಂತ ಸರಳೀಕೃತವಾದ ತಾರ್ಕಿಕವಲ್ಲದ ಜಾಳುಜಾಳಾದ ಹೇಳಿಕೆಯನ್ನು ತೇಲಿಬಿಟ್ಟರು. ಜನಸಾಮಾನ್ಯನ ಪ್ರಾಮಾಣಿಕತೆಯ ಕಾರಣಕ್ಕಾಗಿ ಸಂದಾಯವಾಗುತ್ತಿರುವ ತೆರಿಗೆಯ ಹಣಕ್ಕೆ ಪ್ರತಿಯಾಗಿ ಕಾರ್ಯಾಂಗವು ಕೇವಲ ನೋವು, ಹತಾಶೆಗಳನ್ನಷ್ಟೇ ನೀಡುತ್ತಿದೆಯೇ ಹೊರತು ತಕ್ಕುದಾದ ಫಲಶೃತಿಗಳನ್ನಲ್ಲ ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡರು. ಆದರೆ, ಈ ಹೇಳಿಕೆಯಲ್ಲಿರುವ ಪೂರ್ವಗ್ರಹಪೀಡಿತ ದೃಷ್ಟಿಕೋನದ ಅಪಾಯಕಾರಿ ಸ್ವರೂಪ ಅಲ್ಲಿದ್ದವರ್ಯಾರ ಗಮನಕ್ಕೆ ಬರಲೇ ಇಲ್ಲ. ಹಾಗೆ ಬರದ ಹಾಗೆ ಅವರಿಬ್ಬರ ಭಾಷಿಕ ಪ್ರೌಢಿಮೆಯು ತನ್ನ ಚಾಣಾಕ್ಷತೆಯನ್ನು ಮೆರೆದಿತ್ತು. “ಸುಧಾರಣೆಯ ಹೆಜ್ಜೆಗಳು ಎಲ್ಲ ಕಾಲದ ನಾಯಕರ ಆಳ್ವಿಕೆಯ ವೇಳೆ ಕಾಣಿಸಿಕೊಳ್ಳುತ್ತವೆ. ಆದರೆ, ಸುಧಾರಣೆಯ ನೀತಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾದ ಕಾರ್ಯಾಂಗ ನಿರ್ಲಿಪ್ತವಾಗಿರುವುದರಿಂದಲೇ ಅನೇಕ ಸಮಸ್ಯೆಗಳಿವೆ” ಎಂದು ತೀರ್ಪು ನೀಡಿಬಿಟ್ಟರು.ಸಂಕೀರ್ಣ ವಾಸ್ತವಾಂಶಗಳುಈ ಹೇಳಿಕೆಯನ್ನು ಯಥಾವತ್ತಾಗಿ ಮುಗ್ಧವಾಗಿ ಸ್ವೀಕರಿಸಿದರೆ ಸಮಸ್ಯೆಯ ಸಂಕೀರ್ಣತೆಯ ಹಿಂದಿನ ವಾಸ್ತವಾಂಶಗಳು ಗಮನಕ್ಕೇ ಬರುವುದಿಲ್ಲ. ಗಮನಕ್ಕೆ ತಂದುಕೊಂಡರೂ ನಾಯಕರೆಡೆಗಿನ ಭಾವನಾತ್ಮಕ ಅಭಿಮಾನದ ಪ್ರಭಾವಳಿ ಅಂಥ ಸಾಧ್ಯತೆಯನ್ನು ಆ ಕ್ಷಣಕ್ಕೇ ಮೊಟಕುಗೊಳಿಸಿಬಿಡುತ್ತದೆ. ಇದನ್ನು ಇನ್ನಷ್ಟು ಸ್ಪಷ್ಟವಾಗಿಸಿಕೊಳ್ಳಬಹುದಾದರೆ, ಈ ಹೇಳಿಕೆಯ ಮೊನಚಾದ ದಾಳಿ ಸರ್ಕಾರಿ ನೌಕರರ ಮೇಲೆಯೇ ನಡೆದಿತ್ತು. ಟೀಕೆ, ಅಸಮಾಧಾನ, ಆಕ್ರೋಶ, ವ್ಯಂಗ್ಯ, ಹಾಸ್ಯ, ಅಪಹಾಸ್ಯ ಸೇರಿದಂತೆ ನಿಂದನೆಯ ನಾನಾ ಬಗೆಗಳಿಗೆ ಈಡಾಗುತ್ತಲೇ ನಿರಂತರವಾಗಿ ಸವಾಲುಗಳನ್ನು ನೌಕರವರ್ಗ ಎದುರಿಸುತ್ತಲೇ ಇದೆ. ಭ್ರಷ್ಟಾಚಾರ ಮತ್ತು ವಿಳಂಬನೀತಿ ಎಂಬ ಎರಡು ನಕಾರಾತ್ಮಕ ಸಂಗತಿಗಳು ನೌಕರರ ನಿಜವಾದ ಶಕ್ತಿಯನ್ನು ಹಿನ್ನೆಲೆಗೆ ಸರಿಸಿವೆ.

Rajadharma a column by Dr.N k padmanabh

ಶಾಸಕಾಂಗವು ಶಾಸನಗಳನ್ನು ರೂಪಿಸುವ ಹೊಣೆಗಾರಿಕೆ ನಿಭಾಯಿಸುತ್ತದೆ. ಅವುಗಳನ್ನು ಜಾರಿಗೆ ತರುವ ಜವಾಬ್ದಾರಿ ಕಾರ್ಯಾಂಗದ್ದು. ಅಂದರೆ ಉನ್ನತ ಹಂತದಿಂದ ಹಿಡಿದು ಕೆಳಹಂತದವರೆಗಿನ ಆಡಳಿತಾತ್ಮಕ ಪ್ರಕ್ರಿಯೆಯು ಕಾರ್ಯಾಂಗವನ್ನು ಪ್ರತಿನಿಧಿಸುವ ನೌಕರರಿಂದಲೇ ಏರ್ಪಡುತ್ತದೆ. ಹೀಗೆ ಏರ್ಪಡುವ ಕಾಲಕ್ಕೇ ಬದಲಾವಣೆಯು ಕಾಣಿಸಿಕೊಳ್ಳುತ್ತಿರುತ್ತದೆ. ಈ ಬದಲಾವಣೆಯು ಆಯಾ ದೇಶಗಳ ನಾಯಕರು, ರಾಜಕಾರಣ ಮತ್ತು ಜನರ ಬೌದ್ಧಿಕ ವಿವೇಚನೆಗೆ ತಕ್ಕಂತೆಯೇ ನಡೆಯುತ್ತದೆ. ಈ ವಿವೇಚನೆ ಇಲ್ಲದಿದ್ದಾಗ ನಾಯಕರು ಕಾಣಿಸಿಕೊಳ್ಳುವುದಿಲ್ಲ. ನಾಯಕರೇ ಇಲ್ಲವೆಂದ ಮೇಲೆ ರಾಜಕಾರಣವು ಒಂದು ನಿರ್ದಿಷ್ಟ ಗೊತ್ತುಗುರಿಯಿಲ್ಲದೆ ತನ್ನ ನಕಾರಾತ್ಮಕ ಶಕ್ತಿಯನ್ನು ವಿಸ್ತರಿಸಿಕೊಳ್ಳುತ್ತದೆ.ಸ್ಥಾಯಿಯಾದ ಯಥಾಸ್ಥಿತಿವಾದ
ಈ ಹಂತದಲ್ಲಿಯೇ ಸಮಾಜದಲ್ಲಿ ಬದಲಾವಣೆಯ ಬದಲು ಯಥಾಸ್ಥಿತಿಯು ಸ್ಥಾಯಿಯಾಗಿಬಿಡುತ್ತದೆ. ಬದಲಾವಣೆಯ ಗಮ್ಯವನ್ನು ಮುಖ್ಯವಾಗಿಸಿಕೊಂಡ ಪ್ರಜಾಪ್ರಭುತ್ವದ ಮೌಲ್ಯಗಳು ಅರ್ಥ ಕಳೆದುಕೊಳ್ಳುತ್ತವೆ. ಸಂವಿಧಾನದ ನಮ್ಯತೆಯ ಗುಣಲಕ್ಷಣವನ್ನು ಹದಗೆಡಿಸುವ ಹುನ್ನಾರಗಳು ನಡೆದುಬಿಡುತ್ತವೆ. ಅನಿವಾರ್ಯವಾಗಿ ಆಗಲೇಬೇಕಾದ ಬದಲಾವಣೆಯ ಪ್ರಯತ್ನಗಳು ನಿಂತುಬಿಡುವುದು ಇಂಥ ಹುನ್ನಾರಗಳ ಕಾರಣಕ್ಕಾಗಿಯೇ. ಸರ್ಕಾರಿ ನೌಕರರೆಂಬ ಜೀವಿಗಳು ಸಂಕಟ-ಸಂಕೀರ್ಣತೆಯ ನಡುವೆ ಕಾರ್ಯನಿರ್ವಹಿಸುವ ಮುಜುಗರದ ಅನುಭವಗಳೊಂದಿಗಿರಬೇಕಾಗುತ್ತದೆ. ಶಾಸಕಾಂಗವೇ ನೀತಿಗಳನ್ನು ನಿರೂಪಿಸುವ ಸಂವಿಧಾನಾತ್ಮಕ ಸಂಸ್ಥೆಯಾಗಿರುವುದರಿಂದ ಬದಲಾವಣೆಯ ಚಿಂತನೆಯು ಅಲ್ಲಿಂದಲೇ ಶುರುವಾಗಬೇಕಾಗುತ್ತದೆ. ಆದರೆ ಈ ದೇಶದಲ್ಲಿ ಹಾಗಾಗುತ್ತಿಲ್ಲ. ಈಗಾಗಲೇ ಇರುವ ನೀತಿಗಳ ಜಾಗದಲ್ಲಿ ಹೊಸದಾದುವುಗಳನ್ನು ಪ್ರತಿಷ್ಠಾಪಿಸುವ ಪ್ರಯತ್ನಗಳೇ ಆಗುತ್ತಿಲ್ಲ. ಹಳೆಯ ನೀತಿಗಳಿದ್ದರೆ ಭ್ರಷ್ಟಾಚಾರದ ಸ್ವಹಿತಾಸಕ್ತ ಉದ್ದೇಶ ಈಡೇರುತ್ತದೆ. ಹೊಸ ನೀತಿಗಳು ಬಂದರೆ ತಮ್ಮ ಅಸ್ತಿತ್ವಕ್ಕೇ ಕೊಡಲಿಪೆಟ್ಟು ಬೀಳುತ್ತದೆ ಎಂದುಕೊಳ್ಳುವ ನಾಯಕರಲ್ಲದ ರಾಜಕಾರಣಿಗಳು ತಮ್ಮ ತಮ್ಮ ಪಕ್ಷಗಳ ಸಾಂಸ್ಥಿಕ ಶ್ರೇಷ್ಠತೆಯನ್ನು ಮೊಟಕುಗೊಳಿಸಿಕೊಳ್ಳುವ ಹಾಗೆಯೇ ವರ್ತಿಸುತ್ತಾರೆ. ಯಥಾಸ್ಥಿತಿವಾದವನ್ನು ಉಳಿಸಿ ಅದರ ಮೇಲೆ ತಮ್ಮ ಅಸ್ತಿತ್ವವವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಹಂಬಲಗಳನ್ನೇ ಕಾಡಿಸಿಕೊಳ್ಳುತ್ತಾರೆ.ಉದ್ದೇಶಪೂರ್ವಕ ಹುನ್ನಾರ
ಅವರು ಜನರಿಗೆ ಬಹುಕಾಲದವರೆಗೆ ಅನುಕೂಲ ಒದಗಿಸಿಕೊಡುವ ಶಾಶ್ವತವಾದ ಯೋಜನೆಗಳನ್ನು ರೂಪಿಸುವ ಬದಲು ಬರೀ ಜನರ ತಾತ್ಪೂರ್ತಿಕ ಆಸೆಗಳನ್ನು ಈಡೇರಿಸುವಂಥ ಜನಪ್ರಿಯ ನೀತಿಗಳನ್ನು ರಚಿಸುತ್ತಾರೆ. ಅವುಗಳು ಅಂಗೀಕೃತವಾಗುವಂತೆಯೂ ನೋಡಿಕೊಳ್ಳುತ್ತಾರೆ. ಮತಗಳಿಕೆಯ ಲೆಕ್ಕಾಚಾರದ ಉದ್ದೇಶಗಳನ್ನೇ ಮುಖ್ಯವಾಗಿಸಿಕೊಂಡು ಯಶಸ್ವಿಯಾಗುತ್ತಾರೆ. ಜನಪ್ರಿಯ ಯೋಜನೆಗಳ ಅನುಷ್ಠಾನದಲ್ಲಿ ನೌಕರರು ಕಾರ್ಯನಿರ್ವಹಿಸಿದರೂ ಅದರ ಕ್ರೆಡಿಟ್ ಅವರಿಗೆ ಹೋಗುವುದಿಲ್ಲ. ನಾಯಕರೆನಿಸಿಕೊಂಡವರ ಪಾಲಾಗುತ್ತದೆ. ಅವರು ದೂರದೃಷ್ಟಿಯ ಚಿಂತನೆಗಳನ್ನು ಉದ್ದೇಶಪೂರ್ವಕವಾಗಿ ಹತ್ತಿಕ್ಕಿಬಿಡುತ್ತಾರೆ. ಜನಪ್ರಿಯ ಯೋಜನೆಗಳಿಗೆ ಯಶಸ್ಸು ದೊರಕಿದರೆ ಅದರ ಲಾಭವನ್ನು ತಾವು ಪಡೆಯುತ್ತಾರೆ. ಟೀಕೆಗೀಡಾದರೆ ವೈಫಲ್ಯಕ್ಕೆ ಸರ್ಕಾರಿ ನೌಕರರೆಡೆಗೆ ಬೊಟ್ಟು ಮಾಡುತ್ತಾರೆ.

ಹಿಂದೊಮ್ಮೆ ಬ್ರಿಟಿಷ್ ಹಿಡಿತಕ್ಕೊಳಗಾಗಿದ್ದ ಈ ದೇಶದಲ್ಲಿ ಅದರ ಆಡಳಿತಾತ್ಮಕ ಪಳೆಯುಳಿಕೆಯ ಹಲವು ವಿಧಾನಗಳು ಈಗಲೂ ಅನುಸರಿಸಲ್ಪಡುತ್ತಿವೆ. ಏಣಿಶ್ರೇಣಿ ವ್ಯವಸ್ಥೆಯ ವಿವಿಧ ಹಂತಗಳು ಉನ್ನತ ಅಧಿಕಾರಿಗಳ ಪ್ರತಿಷ್ಠೆಯ ಹಂಗುಗಳ ಚೌಕಟ್ಟುಗಳಡಿ ನಲುಗುತ್ತಿವೆ. ರಾಜಕಾರಣಿ ಮತ್ತು ಉನ್ನತ ಹಂತದ ಅಧಿಕಾರಿಗಳ ನಡುವಿನ ಅಸಂಬದ್ಧ ಮೈತ್ರಿಯ ನಡೆಗಳು ಆಡಳಿತವನ್ನು ಸುಧಾರಿಸುವ ಬದಲು ಅದರ ಒಟ್ಟು ಶಕ್ತಿಯನ್ನು ಕಳೆದಿಡುತ್ತಿವೆ.ಸಮಗ್ರ ಒಳಗೊಳ್ಳುವಿಕೆಯ ಕೊರತೆ ಉನ್ನತಾಧಿಕಾರ ಕೇಂದ್ರದ ನಂತರದ ಹಂತಗಳಲ್ಲಿ ಕಾರ್ಯನಿರ್ವಹಿಸುವ ನೌಕರರು ಆದೇಶಗಳನ್ನು ಪಾಲಿಸುವುದಕ್ಕಷ್ಟೇ ಸೀಮಿತವಾಗುಳಿಯುವ ಅನಿವಾರ್ಯತೆ ಎದುರಿಸುತ್ತಾರೆ. ಅವರನ್ನು ಒಳಗೊಳ್ಳುವಂಥ ಆಡಳಿತಾತ್ಮಕ ಕ್ರಮಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಗುತ್ತದೆ. ಒಂದು ವೇಳೆ ಎಲ್ಲ ಹಂತಗಳ ಸರ್ಕಾರಿ ನೌಕರರನ್ನು ಒಳಗೊಳ್ಳುವಂಥ ಆಡಳಿತಾತ್ಮಕ ಪ್ರಕ್ರಿಯೆಯು ಏರ್ಪಟ್ಟಿದ್ದಿದ್ದರೆ ಸರ್ಕಾರದ ಕಾರ್ಯವೈಖರಿ ಖಾಸಗಿ ವಲಯಕ್ಕಿಂತ ಭಿನ್ನ ಎಂದೆನ್ನಿಸಿಕೊಳ್ಳುತ್ತಿತ್ತು. ಆದರೆ, ಹಾಗಾಗಲಿಲ್ಲ. ಆಡಳಿತದ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸುವ ನೌಕರರು ಶೋಷಣೆಗೊಳಗಾಗುತ್ತಲೇ ಹೋದರು. ಸರ್ಕಾರಿ ಇಲಾಖೆಗಳ ಕಾರ್ಯವೈಖರಿ ಅಷ್ಟೇನೂ ಸರಿಯಲ್ಲ ಎಂಬ ಸಾರ್ವತ್ರಿಕ ಅಭಿಪ್ರಾಯ, ಟೀಕೆಗಳಿಗೆ ಗುರಿಯಾಗಬೇಕಾಯಿತು.ಹೀಗಳೆಯುವ ಉಡಾಫೆಯ ವ್ಯಂಗ್ಯಕ್ಕೀಡಾದ ನೌಕರರು ಇಷ್ಟೇ ಅಲ್ಲದೇ, ಪ್ರತಿ ಸಲ ವೇತನ ಹೆಚ್ಚಳದ ವರದಿಗಳು ಮುಖಪುಟದ ಆದ್ಯತೆಯೊಂದಿಗೆ ಪ್ರಕಟವಾದಾಗಲಂತೂ ಇವರಿಗೇಕೆ ಸಂಬಳ ಹೆಚ್ಚಿಸಬೇಕು ಎಂಬ ಸರಳೀಕೃತವಾದ ಪ್ರಶ್ನೆಗಳನ್ನು ಅವರು ಎದುರಿಸುತ್ತಲೇ ಇದ್ದಾರೆ. ವೇತನ ಹೆಚ್ಚಳ ಆಯಾ ಕಾಲದ ಆರ್ಥಿಕ ಅವಶ್ಯಕತೆಗಳಿಗೆ ಅನುಗುಣವಾಗಿ ನಡೆಯುತ್ತದೆ. ಇದು ಅತ್ಯಂತ ಸಹಜವಾದ ಆಡಳಿತಾತ್ಮಕ ಪ್ರಕ್ರಿಯೆ. ಇದು ಸಾಧ್ಯವಾಗುವುದಕ್ಕೂ ನೌಕರರು ಬಹುದಿನಗಳ ಕಾಲ ಕಾಯಬೇಕಾಗುತ್ತದೆ. ಆಡಳಿತದ ಚುಕ್ಕಾಣಿ ಹಿಡಿದವರಿಗೆ ಮತ್ತೆ ಮತ್ತೆ ನೆನಪಿಸಬೇಕಾಗುತ್ತದೆ. ಬೇಡಿಕೆ ಮುಂದಿಡಬೇಕಾಗುತ್ತದೆ. ಸರ್ಕಾರದ ನೇತೃತ್ವ ವಹಿಸಿದವರು ರಾಜಕೀಯ ಲೆಕ್ಕಾಚಾರದೊಂದಿಗೇ ಉನ್ನತಾಧಿಕಾರಿಗಳ ಜೊತೆಗೆ ಚರ್ಚಿಸಿ ವೇತನ ಹೆಚ್ಚಳದ ಘೋಷಣೆ ಮಾಡುತ್ತಾರೆ. ಕೊನೆಗೂ ಸರ್ಕಾರ ಸ್ಪಂದಿಸಿತು ಎಂಬ ಕೃತಾರ್ಥ ಭಾವ ನೌಕರರದ್ದಾಗುತ್ತದೆ. ಆದರೆ, ಇದಕ್ಕೆ ಸಂಬಂಧಿಸಿದ ಸುದ್ದಿ ಪ್ರಚುರವಾದಾಗ ಸರ್ಕಾರಿ ನೌಕರರನ್ನು ಹೀಗಳೆಯುವ ಉಡಾಫೆಯ ವ್ಯಂಗ್ಯದ ತಿವಿತಗಳಿಗೆ ಈಡಾಗಬೇಕಾಗುತ್ತದೆ. ಹೀಗಾಗಿಯೇ ನೌಕರರು ಒಂದು ಬಗೆಯ ಅಸಮಾಧಾನ, ಅತೃಪ್ತಿಯೊಂದಿಗೇ ಕಾರ್ಯನಿರ್ವಹಿಸಬೇಕಾಗುತ್ತದೆ. ಇದು ಇಲಾಖಾವಾರು ಕಾರ್ಯವೈಖರಿಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಅಡಗಿರುವ ಹತ್ತುಹಲವು ಲೋಪದೋಷಗಳು.
ಅತಾರ್ಕಿಕ ಟೀಕೆಗಳು
ಈ ಹಂತದಲ್ಲಿಯೇ ಸರ್ಕಾರಿ ಕೆಲಸ ಮತ್ತು ಸರ್ಕಾರಿ ನೌಕರರು ಸರಳೀಕೃತವಾದ, ಅತಾರ್ಕಿಕ ಟೀಕೆಗಳಿಗೆ ತುತ್ತಾಗಬೇಕಾಯಿತು. ಕ್ಲೀಷೆ ಎನ್ನಿಸುವಷ್ಟರ ಮಟ್ಟಿಗೆ ಟೀಕೆಗೆ ಒಳಗಾದ, ವ್ಯಂಗ್ಯಕ್ಕೆ ತುತ್ತಾದ ಒಂದು ಜನಜನಿತ ಉಲ್ಲೇಖವೆಂದರೆ ‘ಸರ್ಕಾರಿ ಕೆಲಸ ದೇವರ ಕೆಲಸ’. ಇದನ್ನು ತಪ್ಪಾಗಿ ಅರ್ಥೈಸಲಾಗಿದೆ. ತಪ್ಪಾಗಿ ಗ್ರಹಿಸಲಾಗಿದೆ. ಸರ್ಕಾರದ ಕೆಲಸ ದೇವರದ್ದಾಗಿರುವುದರಿಂದ ಮನುಷ್ಯರಿಗೆ ಅಲ್ಲಿ ನಿರ್ವಹಿಸಲು ಕೆಲಸವೇ ಇರುವುದಿಲ್ಲ, ಹಾಗಾಗಿಯೇ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ನಿರೀಕ್ಷಿತ ರೀತಿಯಲ್ಲಿ ಕೆಲಸಗಳಾಗುವುದಿಲ್ಲ ಎಂಬ ಉಲ್ಲೇಖಗಳು ವ್ಯಂಗ್ಯಾತ್ಮಕವಾಗಿಯೇ ವ್ಯಕ್ತವಾಗುತ್ತವೆ.

ಈ ಉಲ್ಲೇಖವನ್ನು ಹೀಗೆ ತಪ್ಪಾಗಿ ಅರ್ಥೈಸಿಕೊಳ್ಳುವುದಕ್ಕಿಂತ ಅದರ ಹಿಂದಿನ ಉದ್ದೇಶವನ್ನು ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ. ನೌಕರರೊಳಗೆ ನೈತಿಕ ಶ್ರದ್ಧೆಯನ್ನು ರೂಪಿಸುವ ಒತ್ತಾಸೆಯೊಂದಿಗೆ ಸರ್ಕಾರದ ಕೆಲಸವನ್ನು ದೇವರ ಕೆಲಸಕ್ಕೆ ಹೋಲಿಸಿ ವ್ಯಾಖ್ಯಾನಿಸಿರಬಹುದು. ದೇವರ ಕೆಲಸವೆಂದರೆ ನೌಕರರೊಳಗೆ ಶ್ರದ್ಧೆ ಹುಟ್ಟಿಕೊಳ್ಳುತ್ತದೆ ಎಂಬ ನಿರೀಕ್ಷೆಯಲ್ಲಿ ಅಂಥದ್ದೊಂದು ವ್ಯಾಖ್ಯಾನ ಹುಟ್ಟಿಕೊಂಡಿರಬಹುದು. ಆದರೆ, ಹಾಗಾಗಲಿಲ್ಲ. ಬದಲಾಗಿ ಸರ್ಕಾರಿ ನೌಕರರು ಕೆಲಸ ಮಾಡದೇ ಇದ್ದರೂ ನಡೆಯುತ್ತದೆ ಎಂಬ ಮನೋಭಾವದೊಂದಿಗೆ ಈ ಉದ್ಧರಣ ತಳುಕುಹಾಕಿಕೊಂಡಿತು. ಈ ಉದ್ಧರಣಕ್ಕಿಂತ ಮುಖ್ಯವೆನ್ನಿಸುವ ಉದಾತ್ತವಾದುದು ‘ಕಾಯಕವೇ ಕೈಲಾಸ’ ಪರಿಕಲ್ಪನೆ. ನಿರ್ವಹಿಸಬೇಕಾದ ಕೆಲಸವನ್ನು ಕೈಲಾಸಕ್ಕೆ ಸಮೀಕರಿಸಿ ನೋಡುವ ಈ ದೃಷ್ಟಿಕೋನವನ್ನು ಆಧರಿಸಿ ಸರ್ಕಾರಿ ಆಡಳಿತ ಮರುರೂಪುಗೊಂಡರೆ ಬೆಳವಣಿಗೆಯ ಪ್ರಕ್ರಿಯೆಗೆ ಹೊಸ ಆಯಾಮ ದೊರಕುತ್ತದೆ.
ಸೀಮಿತ ಗ್ರಹಿಕೆಯ ಮಿತಿಗಳು
ಭಾರತದಲ್ಲಿ ಸಾರ್ವಜನಿಕ ಆಡಳಿತದ ಪರಿಕಲ್ಪನೆಯು ಚಲನೆಯ ಸಂಕೇತವಾಗಿ ಚಾಲ್ತಿಗೆ ಬರಲೇ ಇಲ್ಲ. ಅದು ಕೇವಲ ಸರ್ಕಾರದ ಕೆಲಸ ಎಂಬರ್ಥದ ಸೀಮಿತ ಗ್ರಹಿಕೆಯೇ ಆದ್ಯತೆ ಪಡೆದು ಉನ್ನತ ಹಂತದ ನಾಯಕರೆನ್ನಿಸಿಕೊಂಡವರು ಅದಕ್ಕನುಗುಣವಾಗಿಯೇ ಆಡಳಿತವನ್ನು ವ್ಯಾಖ್ಯಾನಿಸಿಕೊಂಡರು. ಬದಲಾವಣೆ, ಬೆಳವಣಿಗೆ, ಪ್ರಗತಿ, ಅಭಿವೃದ್ಧಿ ಎಂಬ ಪದಗಳೊಂದಿಗೆ ಆಡಳಿತವನ್ನು ಜೋಡಿಸಿ ಮಾತನಾಡುವ ಜಾಣ್ಮೆಯನ್ನು ರೂಢಿಸಿಕೊಂಡರೇ ಹೊರತು ಅದನ್ನು ದೇಶ ಮತ್ತು ಜನತೆಯ ಉಜ್ವಲ ಭವಿಷ್ಯವನ್ನು ಸಾಧ್ಯವಾಗಿಸುವ ಸಂಕಲ್ಪಕ್ಕೆ ಸಂಯೋಜಿಸುವುದರ ಕಡೆಗೆ ಗಮನವನ್ನೇ ಹರಿಸಲಿಲ್ಲ. ಪ್ರಧಾನಿ ಮತ್ತು ಮುಖ್ಯಮಂತ್ರಿ ಹುದ್ದೆಗಳನ್ನು ಅಲಂಕರಿಸಿದ ಕೆಲವರು ಈ ಕುರಿತು ಯೋಚಿಸಿ ಯೋಜಿಸಿದರೂ ಆಡಳಿತಾತ್ಮಕ ಕಾರ್ಯಾನುಷ್ಠಾನ ಸಾಧ್ಯವಾಗಲಿಲ್ಲ. ಭಿನ್ನವಾಗಿ ಯೋಚಿಸುವ ನಾಯಕರು ಉನ್ನತ ಹುದ್ದೆಗಳನ್ನು ಅಲಂಕರಿಸಿದಾಗಲೂ ಇದೇ ಸಮಸ್ಯೆ ಮುಂದುವರೆಯಿತು. ಹೀಗೆ ಆಲೋಚಿಸುವ ನಾಯಕರಿದ್ದಾಗ ಉನ್ನತ ಹಂತಗಳ ಅಧಿಕಾರಿವರ್ಗ ಹಾಗೆ ಯೋಚಿಸಲಿಲ್ಲ. ಹಾಗೆ ಯೋಚಿಸುವ ಅಧಿಕಾರಿ ವರ್ಗ ಉನ್ನತ ಹಂತಗಳಲಿದ್ದಾಗ ಸ್ಪಂದಿಸುವ ಗುಣದ ದಾರ್ಶನಿಕ ನಾಯಕತ್ವದ ಕೊರತೆ ಕಾಡಿತು.
ಅಗಾಧ ಶ್ರಮದ ಅಪವ್ಯಯ
ಇಂಥ ಸಂಕೀರ್ಣತೆಯ ಮಧ್ಯೆಯೇ ಸರ್ಕಾರಿ ನೌಕರರು ಕಾರ್ಯನಿರ್ವಹಿಸಬೇಕಾಯಿತು. ಜನಹಿತದ ಪ್ರಶ್ನೆಗಳನ್ನು ಕಾಡಿಸಿಕೊಂಡು ಕಾರ್ಯನಿರ್ವಹಿಸುವ ಸಾಮೂಹಿಕ ಹೊಣೆಗಾರಿಕೆಯ ಪ್ರಜ್ಞೆ ಇದ್ದರೂ ಅದು ಪ್ರಯೋಗಕ್ಕೊಳಪಡಲಿಲ್ಲ.ಪ್ರಯೋಗಕ್ಕೊಳಪಡದಂತೆ ಅಡತಡೆಗಳನ್ನು ಉಂಟುಮಾಡುವ ಸಂಕುಚಿತ ರಾಜಕಾರಣ ಚಿಗುರೊಡೆಯಿತು. ಅದನ್ನು ರಾಜಕೀಯ ಪಕ್ಷಗಳು ಅತ್ಯಂತ ಚಾಣಾಕ್ಷಯುತವಾಗಿ ಪೋಷಿಸಿದವು. ನೌಕರರ ಅಗಾಧ ಶ್ರಮದ ಅಪವ್ಯಯ ಇಲ್ಲಿಂದಲೇ ಆರಂಭವಾಯಿತು. ನಾವಿನ್ನೂ ಜನರನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿಸುವುದರ ಕಡೆಗೇ ಶ್ರಮವನ್ನು ವ್ಯಯಿಸುತ್ತಿದ್ದೇವೆ ಎಂಬ ಟೀಕೆ ತಾರ್ಕಿಕವೆನ್ನಿಸತೊಡಗಿತು. ಇದನ್ನು ಅಲ್ಲಗಳೆಯುವ ಆಡಳಿತಾತ್ಮಕ ದಿಟ್ಟಹೆಜ್ಜೆಗಳು ನಾಯಕರೆನ್ನಿಸಿಕೊಂಡವರಿಂದಾಗಲೀ, ಕಾರ್ಯಾಂಗದ ರಚನಾತ್ಮಕತೆಯನ್ನು ವಿಸ್ತರಿಸುವ ಹೊಣೆಗಾರಿಕೆಯುಳ್ಳ ಉನ್ನತ ಹಂತದ ಅಧಿಕಾರಿ ವರ್ಗದಿಂದಾಗಲೀ ವ್ಯಕ್ತವಾಗಲಿಲ್ಲ. ರಾಜಕಾರಣಿಗಳ ಅಪ್ರಬುದ್ಧತೆ ಆಡಳಿತವನ್ನು ಸಡಿಲಗೊಳಿಸಿತು. ಉನ್ನತಾಧಿಕಾರಿ ವರ್ಗದ್ದು ಕೇವಲ ಮೂಕಪ್ರೇಕ್ಷಕ ಪಾತ್ರವಾಯಿತು. ಆಡಳಿತದ ಅನುಕೂಲಕ್ಕಾಗಿ ರೂಪುಗೊಂಡಿದ್ದ ಏಣಿಶ್ರೇಣಿ ವ್ಯವಸ್ಥೆ ಪ್ರತಿಷ್ಠೆಯ ಚೌಕಟ್ಟಿನೊಳಗೆ ಬಂಧಿಯಾಯಿತು. ದರ್ಪ, ದರ್ಬಾರು, ನಿಂದನೆ, ಕಿರುಕುಳ ಮತ್ತು ಶೋಷಣೆಗಳ ನಡುವೆ ಕೆಲಸ ಮಾಡುವ ಅನಿವಾರ್ಯತೆ ನಂತರದ ಆಡಳಿತಾತ್ಮಕ ಹಂತಗಳ ನೌಕರರಿಗೆ ಎದುರಾಯಿತು.

ಆಕ್ರಾಮಕ ನೀತಿಗಳ ಸವಾರಿ ಸರ್ಕಾರಿ ನೌಕರರು ಮತ್ತು ಅವರ ನೌಕರಿಯನ್ನು ಅಪವ್ಯಾಖ್ಯಾನಿಸಿ ಅವರ ಅಸ್ತಿತ್ವವನ್ನು ನಗಣ್ಯವಾಗಿಸಿ ಅಪವ್ಯಾಖ್ಯಾನಕ್ಕೆ ಒಳಪಡಿಸುವ ಹುನ್ನಾರ ರಾಜಕಾರಣ ಮತ್ತು ಆಡಳಿತಾತ್ಮಕ ಉನ್ನತ ಹಂತಗಳಿಂದಲೇ ಶುರುವಾಯಿತು. ಈ ಅಪವ್ಯಾಖ್ಯಾನ ಸರ್ಕಾರಿ ವಲಯವನ್ನು ನೆಗೆಟಿವ್ ಆಗಿ ನೋಡುವುದಕ್ಕೆ ಪ್ರಚೋದಿಸಿತು. ಆಡಳಿತವನ್ನು ಯಂತ್ರವನ್ನಾಗಿ ತಪ್ಪಾಗಿ ಬಿಂಬಿಸಿತು. ನೌಕರರನ್ನು ದುಡಿಯುವ ಯಂತ್ರಗಳನ್ನಾಗಿ ನೋಡುವ ವಿಚಿತ್ರ ವಾತಾವರಣ ಸೃಷ್ಟಿಯಾಯಿತು. ನೌಕರರು ಯಂತ್ರಗಳಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳುವ ಹೊತ್ತಿಗೆ ಕಾಲ ಮಿಂಚಿತ್ತು. ತೊಂಭತ್ತರ ದಶಕದ ಆಕ್ರಾಮಕ ನೀತಿಗಳ ಸವಾರಿ ಆರಂಭವಾಗಿತ್ತು. ಬೃಹತ್ ಕಂಪನಿಗಳ ವಾಣಿಜ್ಯಿಕ ಕೌಶಲ್ಯಗಳು ಶ್ರೇಷ್ಠ ಎಂದೆನ್ನಿಸಿ ನಮ್ಮದೇ ಸರ್ಕಾರದ ವಿವಿಧ ಹಂತಗಳು ಪೇಲವ ಎನ್ನಿಸತೊಡಗಿದವು. ಇಡೀ ಸಾರ್ವಜನಿಕ ಆಡಳಿತ ಟೊಳ್ಳು ಎಂಬ ಭಾವನೆಯನ್ನು ಉದ್ದೇಶಪೂರ್ವಕವಾಗಿ ಬಿತ್ತಲಾಯಿತು.
ಆದ್ಯತಾವಲಯಗಳೆಡೆಗೆ ನಿರ್ಲಕ್ಷ್ಯ
ಆದರೆ, ಸ್ವಾತಂತ್ರ್ಯಾನಂತರ ಇಡೀ ದೇಶ ಆಡಳಿತಾತ್ಮಕವಾಗಿ ಮಹತ್ವದ್ದನ್ನು ಸಾಧಿಸಬೇಕಾಗಿತ್ತು. ಆಡಳಿತವನ್ನು ಸಂಪನ್ಮೂಲ ಕೇಂದ್ರವಾಗಿಸುವ ದಾರ್ಶನಿಕತೆಯ ವ್ಯಕ್ತವಾಗಬೇಕಾಗಿತ್ತು. ಅಂಥ ದಾರ್ಶನಿಕತೆಯನ್ನು ನಿರೂಪಿಸುವ ನಾಯಕರ ಸಂಖ್ಯೆ ಹೆಚ್ಚಾಗಬೇಕಾಗಿತ್ತು. ನೌಕರರನ್ನು ಮಕ್ಕಳಂತೆ ನೋಡುವ ತಾಯಿಯ ಅಂತಃಕರಣ ಉನ್ನತ ಹಂತದ ನಾಯಕತ್ವ ಮತ್ತು ಅತ್ಯುನ್ನತ ಹಂತದ ಅಧಿಕಾರ ವಲಯದಿಂದ ಅಭಿವ್ಯಕ್ತಗೊಳ್ಳಬೇಕಿತ್ತು. ಅಂಥ ಉದಾತ್ತತೆಯ ಬದಲು ಆಡಳಿತ ಸುಧಾರಣೆಯ ನೆಪದಲ್ಲಿ ನೌಕರರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಲಾಯಿತು. ಪ್ರಯೋಜನವಾದಿ ವಾಣಿಜ್ಯಿಕ ಲಾಭದ ಉದ್ಯಮದ ವ್ಯಾಪ್ತಿಗೆ ಸರ್ಕಾರಿ ವ್ಯವಸ್ಥೆಯನ್ನು ತರಲಾಯಿತು. ನೌಕರರ ಸಂಖ್ಯೆ ತಗ್ಗಿಸುವ ಯೋಚನೆ, ಪಿಂಚಣಿ ಸೌಲಭ್ಯ ನಿರಾಕರಣೆ, ಖಾಸಗಿಯವರೊಂದಿಗೆ ಗುರುತಿಸಿಕೊಳ್ಳುವ ಪ್ರಯೋಜನವಾದಿ ಹಂಬಲ, ನೇಮಕಾತಿ, ಬಡ್ತಿ ಮತ್ತಿತರ ಸಂಗತಿಗಳಿಗೆ ಸಂಬಂಧಿಸಿದಂತೆ ಬಿಕ್ಕಟ್ಟುಗಳು ನಿರಂತರವಾದವು. ಈ ಬಿಕ್ಕಟ್ಟುಗಳು ಬಿಗಡಾಯಿಸಿದಾಗ ಯಥಾಸ್ಥಿತಿವಾದದ ಹ್ಯಾಂಗ್ ಓವರ್‍ಗೆ ಆಡಳಿತ ಮತ್ತು ನಾಯಕತ್ವ ಈಡಾಗಬೇಕಾಯಿತು. ಸಾಮಾಜಿಕತೆ, ಶಿಕ್ಷಣ, ಆರೋಗ್ಯ, ಮಾನವ ಸಂಪನ್ಮೂಲ ಸೇರಿದಂತೆ ಮಹತ್ವದ ಆದ್ಯತಾ ವಲಯಗಳು ನಿರ್ಲಕ್ಷ್ಯಕ್ಕೆ ತುತ್ತಾದವು.

ಆಶಾವಾದದ ಮಾರ್ಗ ಹಾಗಾದರೆ, ಸರ್ಕಾರಿ ನೌಕರರೂ ಸೇರಿದಂತೆ ವಿವಿಧ ವಲಯಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರೋಪಾಯಗಳೇ ಇಲ್ಲವೇ? ಹಾಗೆ ನಿರಾಸೆಗೊಳ್ಳಬೇಕಿಲ್ಲ. ಬಲದಾವಣೆಯು ಮೇಲುಹಂತದಿಂದ ಕೆಳಹಂತದವರೆಗೆ ಪ್ರವಹಿಸುವಂಥ ಪ್ರಕ್ರಿಯೆ ತೀವ್ರಗೊಳ್ಳಬೇಕು. ರಾಜಕಾರಣಿಗಳು ದಾರ್ಶನಿಕ ನಾಯಕರಾಗಿ ಮಾರ್ಪಾಡಾಗಬೇಕು. ವಿವಿಧ ವಲಯಗಳನ್ನು ಪ್ರತಿನಿಧಿಸಿ ಮಹತ್ವದ್ದನ್ನು ಸಾಧಿಸುವಂಥ ಮಹತ್ವಾಕಾಂಕ್ಷೆಯೊಂದಿಗೆ ರಾಜಕಾರಣವನ್ನು ಜನಮುಖಿಯಾಗಿಸಬೇಕು. ಕಾರ್ಯಾಂಗದ ಚಲನಶೀಲತೆಯನ್ನು ತೀವ್ರಗೊಳಿಸುವ ಸಂಕಲ್ಪದೊಂದಿಗೆ ಶಾಸಕಾಂಗ ಹೆಜ್ಜೆಯಿರಿಸಬೇಕು. ಆ ಮೂಲಕ ತನ್ನ ಶಕ್ತಿಯನ್ನು ಮರುರೂಪಿಸಿಕೊಳ್ಳಬೇಕು. ಅಂಥ ಶಕ್ತಿಯನ್ನು ವಿಸ್ತರಿಸಲು ಸಾಧ್ಯವಾಗಿಸುವಂತೆ ಸಾರ್ವಜನಿಕ ಆಡಳಿತಾಂಗವನ್ನು ಪ್ರತಿನಿಧಿಸುವ ಉನ್ನತ ಮತ್ತು ತದನಂತರದ ಹಂತಗಳ ಅಧಿಕಾರಿಗಳು ನೋಡಿಕೊಳ್ಳಬೇಕು. ಸರ್ಕಾರಿ ನೌಕರರರ ಸಂಪನ್ಮೂಲ ಸಾಮಥ್ರ್ಯವನ್ನು ವಿಸ್ತರಿಸಬೇಕು. ಅವರ ಹಿತಾಸಕ್ತಿಗಳನ್ನು ರಕ್ಷಿಸುತ್ತಲೇ ಸಾರ್ವಜನಿಕ ಆಡಳಿತವನ್ನು ಪುನಃಶ್ಚೇತನಗೊಳಿಸಿ ಪ್ರಜಾಪ್ರಭುತ್ವದ ಸದಾಶಯಗಳ ಸಾಕಾರಕ್ಕೆ ಶ್ರಮಿಸಬೇಕು. ಆ ಮೂಲಕ ಸಾರ್ವಜನಿಕ ವಲಯದ ಅಸ್ತಿತ್ವವನ್ನು ಉಳಿಸಿಕೊಂಡು ಅಪ್ಪಟ ದೇಶಿ ಪ್ರಜ್ಞೆಯ ಆಧಾರದಲ್ಲಿ ಭಾರತದ ಭವಿಷ್ಯವನ್ನು ಉಜ್ವಲಗೊಳಿಸುವ ನಡೆಗಳು ಪುನರಾವರ್ತಿತವಾಗಬೇಕು.

                                        -ಡಾ.ಎನ್.ಕೆ.ಪದ್ಮನಾಭ

ದಿನದ ಸುದ್ದಿ

ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ, ಗಿಗ್, ಸಿನಿ ಹಾಗೂ ಮನೆಗೆಲಸ ಕಾರ್ಮಿಕರ ಕಲ್ಯಾಣಕ್ಕಾಗಿ ಅಧಿನಿಯಮ ಜಾರಿಗೆ ಕ್ರಮ : ಸಚಿವ ಸಂತೋಷ್ ಲಾಡ್

Published

on

ಸುದ್ದಿದಿನ,ದಾವಣಗೆರೆ:ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕ ರಾಜ್ಯ ಸರ್ಕಾರ ಇ-ಕಾಮರ್ಸ್ ಫ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರು, ಸಿನಿಮಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಲಾ ಕಾರ್ಮಿಕರು ಹಾಗೂ ಮನೆಗೆಲಸದಲ್ಲಿ ತೊಡಗಿರುವ ಗೃಹ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಪ್ರತ್ಯೇಕ ಅಧಿನಿಯಮಗಳನ್ನು ರೂಪಿಸಿದೆ. ಮುಂಬರುವ ದಿನಗಳಲ್ಲಿ ಸದನದಲ್ಲಿ ಈ ಅಧಿಸೂಚನೆಗಳನ್ನು ಮಂಡಿಸಿ, ಅನುಮೋದನೆ ಪಡೆದು, ಕಾಯ್ದೆಗಳನ್ನಾಗಿ ಜಾರಿ ಮಾಡುವುದಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಶನಿವಾರ ನಗರದ ದೊಡ್ಡಬೂದಿಹಾಳ್ ರಸ್ತೆಯ ತಾಜ್ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ವಿವಿಧ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಈಗಾಗಲೇ ಇ-ಕಾಮರ್ಸ್ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ವಿಮಾ ಯೋಜನೆ ಜಾರಿಗೊಳಿಸಲಾಗಿದೆ. ಗಿಗ್ ಕಾರ್ಮಿಕರನ್ನು ನೋಂದಾಯಿಸಿ, ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಲು ಹಾಗೂ ಸಂಪನ್ಮೂಲ ಕ್ರೂಢೀಕರಣಕ್ಕಾಗಿ ‘ಕರ್ನಾಟಕ ಫ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕ ಅಧಿನಿಯಮ-2025’ ಜಾರಿ ಮಾಡಲಾಗುವುದು. ರಾಜ್ಯದಲ್ಲಿ ವರ್ಷಕ್ಕೆ ಸುಮಾರು 4 ಕೋಟಿ ಸಿನಿಮಾ ಟಿಕೆಟ್‌ಗಳು ಮಾರಾಟವಾಗುತ್ತವೆ.

ಈ ಟಿಕೆಟ್‌ಗಳ ಮೇಲೆ ಸೆಸ್ ವಿಧಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆಸಲಾಗುತ್ತಿದೆ. ಇದಕ್ಕಾಗಿ ‘ಕರ್ನಾಟಕ ಸಿನಿಮಾ ಮತ್ತು ಚಟುವಟಿಕೆಗಳಲ್ಲಿ ತೊಡಗಿದ ಕಾರ್ಮಿಕರ ಸುಂಕ ಅಧಿನಿಯಮ-2024’ ಅನ್ನು ರಚಿಸಲಾಗಿದೆ. ಇದರೊಂದಿಗೆ ಮನೆಗೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ಕಲ್ಯಾಣಕ್ಕಾಗಿ ‘ಕರ್ನಾಟಕ ಗೃಹ ಕಾರ್ಮಿಕರ ಅಧಿನಿಯಮ-2025’ ರಚಿಸಲಾಗಿದೆ. ಈ ಎಲ್ಲಾ ಅಧಿನಿಯಮಗಳ ನಿಯಾವಳಿಗಳನ್ನು ರೂಪಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಈ ಅಧಿನಿಯಮಗಳನ್ನು ಸದನದಲ್ಲಿ ಮಂಡಿಸಿ, ಅನುಮೋದನೆ ಪಡೆದು, ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.

ಗ್ಯಾರಂಟಿ ಯೋಜನೆಗಳಿಗೆ 5 ವರ್ಷದಲ್ಲಿ 3 ಲಕ್ಷ ಕೋಟಿ ಖರ್ಚು

ರಾಜ್ಯದಲ್ಲಿ ಜಾರಿಗೊಳಿಸಲಾಗಿರುವ ಪಂಚ ಗ್ಯಾರಂಟಿ ಯೋಜನೆಗಳಿಗೆ ಪ್ರತಿ ವರ್ಷ 56 ರಿಂದ 60 ಸಾವಿರ ಕೋಟಿ ರೂ. ವೆಚ್ಚವಾಗುತ್ತಿದೆ. ಈ ಮೊತ್ತ 5 ವರ್ಷಗಳಲ್ಲಿ 3 ಲಕ್ಷ ಕೋಟಿ ರೂ. ತಲುಪಬಹುದು. ದೇಶದ ಯಾವುದೇ ರಾಜ್ಯದಲ್ಲಿ ಇಷ್ಟೊಂದು ಮೊತ್ತದ ಹಣವನ್ನು ನೇರವಾಗಿ ಜನರ ಕಲ್ಯಾಣಕ್ಕಾಗಿ ವ್ಯಯಿಸುತ್ತಿಲ್ಲ. ರಾಜ್ಯದಲ್ಲಿ 30 ರಿಂದ 40 ಲಕ್ಷ ಅಸಂಘಟಿತ ಕಾರ್ಮಿಕರು ಇದ್ದು, ಕಾರ್ಮಿಕ ಇಲಾಖೆ 91 ವಿವಿಧ ಅಸಂಘಟಿತ ವರ್ಗಗಳ ಕಾರ್ಮಿಕರನ್ನು ಗುರುತಿಸಿದೆ. ಅಸಂಘಟಿತ ಕಾರ್ಮಿಕರನ್ನು ಉಚಿತವಾಗಿ ನೋಂದಾಯಿಸಿಕೊಂಡು ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ. ಇದಕ್ಕಾಗಿ ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆ ಜಾರಿ ಮಾಡಲಾಗಿದೆ. ಇದುವರೆಗೂ ರಾಜ್ಯದಲ್ಲಿ 25,45,607 ಕಾರ್ಮಿಕರು, ದಾವಣಗೆರೆ ಜಿಲ್ಲೆಯಲ್ಲಿ 89,493 ಕಾರ್ಮಿಕರು ನೊಂದಣಿಯಾಗಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.

ಮೋಟಾರು ಸಾರಿಗೆ ಹಾಗೂ ಇತರೆ ಸಂಬಂಧಿಸಿದ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯ ಮೂಲಕ, ಚಾಲಕರು, ನಿರ್ವಾಹಕ, ಕ್ಲೀನರ್, ನಿಲ್ದಾಣ ಸಿಬ್ಬಂದಿ, ಮಾರ್ಗ ಪರಿಶೀಲನಾ ಸಿಬ್ಬಂದಿ, ಬುಕಿಂಗ್, ನಗದು, ಡಿಪೋ ಗುಮಾಸ್ತರು ಸೇರಿದಂತೆ, ಮೋಟಾರು ಕ್ಷೇತ್ರದಲ್ಲಿ ದುಡಿಯತ್ತಿರುವ ಎಲ್ಲಾ ಕಾರ್ಮಿಕರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗುತ್ತಿದೆ ಎಂದರು.

ಖಾಸಗಿ ವಲಯದ ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುವ ಉದ್ದೇಶಿತ ದೃಷ್ಠಿಯಿಂದ ‘ಆಶಾದೀಪ’ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಈ ಯೋಜನೆಯಡಿ ಉದ್ಯೋಗದಾತ ಮಾಲಿಕರು ಪಾವತಿಸಿದ ಇ.ಎಸ್.ಐ ಮತ್ತು ಇ.ಪಿ.ಎಫ್ ವಂತಿಕೆ ಮರುಪಾವತಿ, ತರಬೇತಿ ನೇಮಿಸಿಕೊಂಡ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳ ಶಿಷ್ಯವೇತನ ಮರುಪಾವತಿ, ಹೊಸ ನೇಮಕಾತಿಗೊಂಡವರಿಗೆ ಪಾವತಿಸಿದ ವೇತನದ ಎರಡು ವರ್ಷಗಳ ಅವಧಿಗೆ ಪ್ರತಿ ಉದ್ಯೋಗಿಯ ಮಾಸಿಕ ತಲಾ 6000 ರೂ. ವೇತನವನ್ನು ಉದ್ಯೋಗದಾತರಿಗೆ ಮರುಪಾವತಿ ಮಾಡಲಾಗುವುದು ಎಂದು ಸಚಿವ ಸಂತೋಷ ಎಸ್. ಲಾಡ್ ತಿಳಿಸಿದರು.

ಸರ್ಕಾರದಿಂದ ಖಾಸಗಿ ಕಂಪನಿಗಳು ನೀಡುವ ಇ.ಪಿ.ಎಫ್‌ಗಳನ್ನು ಪ್ರತ್ಯೇಕವಾಗಿ ಬ್ಯಾಂಕ್ ಖಾತೆಗಳನ್ನು ತೆರದು ನಿರ್ವಹಣೆ ಮಾಡುವಂತೆ ನಿಯಮ ರೂಪಿಸಲಾಗಿದೆ. ಉದ್ಯೋಗಿ, ಕಂಪನಿ ತೊರೆದ ಸಂದರ್ಭದಲ್ಲಿ ಈ ಹಣ ನೇರವಾಗಿ ಉದ್ಯೋಗಿಯ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ಇದರಿಂದ ಕಾರ್ಮಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿ, ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಅವರು ಜಿಲ್ಲೆಯಲ್ಲಿ ಅರ್ಹ ಅಸಂಘಟಿತ ಕಾರ್ಮಿಕರನ್ನು ಗುರತಿಸಿ ಸ್ಮಾರ್ಟ್ಕಾರ್ಡ್ ವಿತರಿಸಲಾಗುತ್ತಿದೆ. ಸರ್ಕಾರದ ಯೋಜನೆ, ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಜನರಿಗೆ ಯೋಜನೆ ಮತ್ತು ಸೌಲಭ್ಯಗಳನ್ನು ಸಮಪರ್ಕವಾಗಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಕಾರ್ಮಿಕ ಇಲಾಖೆಯಿಂದ ಬಡವರ, ಕಾರ್ಮಿಕ ವರ್ಗದವರ ಕಷ್ಟಗಳ ಬಗ್ಗೆ ಅರಿತಿರುವ ಸಚಿವ ಸಂತೋಷ್ ಲಾಡ್ ಅವರು, ಅನೇಕ ಜನಕಲ್ಯಾಣ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾರ್ಮಿಕ ಇಲಾಖೆ ಮೂಲಕ ಅರ್ಹ ಫಲಾನುಭವಿಗಳಿಗೆ ತಲುಪಿಸುತ್ತಿದ್ದಾರೆ. ಈ ಹಿಂದೆ ಕಾರ್ಮಿಕ ಇಲಾಖೆಯಲ್ಲಿ ಮಾತ್ರ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತಿತ್ತು. ಆದರೆ ಸಚಿವ ಲಾಡ್ ಅವರಿಂದ ಪ್ರಸ್ತುತ ಮೇ 01ರಂದು ಎಲ್ಲಾ ಇಲಾಖೆ ಹಾಗೂ ಸರ್ಕಾರಿ ಕಚೇರಿಗಳು ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿಯೂ ಆಚರಿಸಲಾಗುತ್ತದೆ ಎಂದರು.

ವಿವಿಧ ಸೌಲಭ್ಯಗಳ ವಿತರಣೆ

ಕಾರ್ಯಕ್ರಮದಲ್ಲಿ ಅಪಘಾತದಿಂದ ಮರಣ ಹೊಂದಿದ ಖಾಸಗಿ ವಾಣಿಜ್ಯ ಚಾಲಕರ ಅವಲಂಬಿತ ಮಹಿಳೆ ಜಗಳೂರಿನ ಗೌರಮ್ಮನವರಿಗೆ ರೂ.5 ಲಕ್ಷ ಪರಿಹಾರ ಧನ, ಅಪಘಾತದಿಂದ ಮರಣ ಹೊಂದಿದ ಖಾಸಗಿ ವಾಣಿಜ್ಯ ವಾಹನ ಚಾಲಕರ ಮಕ್ಕಳಿಗೆ ರೂ.10,000 ಶೈಕ್ಷಣಿಕ ಧನಸಹಾಯದ ಚೆಕ್ ಹಾಗೂ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡುಗಳನ್ನು ವಿತರಿಸಲಾಯಿತು.

ಕಾರ್ಮಿಕ ಆಯುಕ್ತ ಡಾ.ಎಚ್.ಎನ್. ಗೋಪಾಲಕೃಷ್ಣ ಸಂವಿಧಾನ ಪೀಠಿಕೆ ಬೋಧಿಸಿದರು. ಉಪ ಕಾರ್ಮಿಕ ಆಯುಕ್ತ ಡಾ.ವೆಂಕಟೇಶ್ ಶಿಂದಿಹಟ್ಟಿ ಸ್ವಾಗತಿಸಿದರು. ಜಂಟಿ ಕಾರ್ಮಿಕ ಆಯುಕ್ತ ಡಾ. ಎಸ್.ಬಿ. ರವಿಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಚೇತನ್ ಹಾಗೂ ಸಂಡಿಗರ ಕಲಾತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಹೊನ್ನಾಳಿ ಶಾಸಕ ಡಿ.ಜಿ.ಶಾಂತನೌಡ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿ.ಪಂ.ಸಿಇಓ ಗಿತ್ತೆ ಮಾಧವ ವಿಠಲ ರಾವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

500 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ತೆರೆಯಲು ಸರ್ಕಾರ ನಿರ್ಧಾರ

Published

on

ಸುದ್ದಿದಿನಡೆಸ್ಕ್:ಗ್ರಾಮೀಣ ಪ್ರದೇಶದಲ್ಲಿ 500 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ಹಾಗೂ ನಗರ ಪ್ರದೇಶಗಳಲ್ಲಿ 800 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ತೆರೆಯಲು ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಮುಂದಿನ ಮೂರು ತಿಂಗಳಲ್ಲಿ 10 ಸಾವಿರ ನಿವೇಶನ ನೀಡುವ ಗುರಿ ಹೊಂದಲಾಗಿದೆ. ಈಗಾಗಲೇ 2 ಸಾವಿರದ 500 ಮನೆಗಳು ಮಂಜೂರಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ಕೂಡ ಅರ್ಹ ಫಲಾನುಭವಿಗಳಿಗೆ ಹಂಚಲಾಗುತ್ತದೆ ಎಂದು ಮಾಹಿತಿ ನೀಡಿದರು.

 

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರೆಣೆ

Published

on

ಸುದ್ದಿದಿನ,ದಾವಣಗೆರೆ:ಇದೇ 12 ರಂದು ಮಧ್ಯಾಹ್ನ 3 ಗಂಟೆಗೆ ನಗರದ ದೊಡ್ಡಬೂದಿಹಾಳ್ ರಸ್ತೆಯಲ್ಲಿರುವ ತಾಜ್ ಪ್ಯಾಲೇಸ್‍ನಲ್ಲಿ ದಾವಣಗೆರೆ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ವಿವಿಧ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ದಾವಣಗೆರೆ ಇವರ ಸಹಯೋಗದಲ್ಲಿ ಆಯೋಜಿಸಲಾದ ಕಾರ್ಯಕ್ರಮವನ್ನು ಕಾರ್ಮಿಕ ಸಚಿವರಾದ ಸಂತೋಷ್.ಎಸ್.ಲಾಡ್ ಉದ್ಘಾಟಿಸುವರು. ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸುವರು. ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಘನುಪಸ್ಥಿತರಿರುವರು.

ಮುಖ್ಯ ಅತಿಥಿಗಳಾಗಿ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ, ಜಗಳೂರು ಶಾಸಕ ಬಿ.ದೇವೇಂದ್ರಪ್ಪ, ಹೊನ್ನಾಳಿ ಶಾಸಕ ಶಾಂತನಗೌಡ ಡಿ.ಜಿ, ಚನ್ನಗಿರಿ ಶಾಸಕ ಬಸವರಾಜು ವಿ.ಶಿವಗಂಗಾ, ಹರಿಹರ ಶಾಸಕ ಬಿ.ಪಿ ಹರೀಶ್, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಚಿದಾನಂದ ಎಂ.ಗೌಡ, ಡಿ.ಎಸ್ ಅರುಣ್, ಕೆ.ಎಸ್.ನವೀನ್, ಕೆ.ಅಬ್ದುಲ್ ಜಬ್ಬಾರ್, ಡಾ.ಧನಂಜಯ್ ಸರ್ಜಿ, ಡಿ.ಟಿ.ಶ್ರೀನಿವಾಸ್, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಬಂಜಾರ ಅಭಿವೃದ್ದಿ ನಿಗಮದ ಅಧ್ಯಕ್ಷ ಜಯದೇವನಾಯ್ಕ್, ದೂಡಾ ಅಧ್ಯಕ್ಷರಾದ ದಿನೇಶ್.ಕೆ.ಶೆಟ್ಟಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾಧ ಶಾಮನೂರು.ಟಿ.ಬಸವರಾಜ್, ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ11 hours ago

ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ, ಗಿಗ್, ಸಿನಿ ಹಾಗೂ ಮನೆಗೆಲಸ ಕಾರ್ಮಿಕರ ಕಲ್ಯಾಣಕ್ಕಾಗಿ ಅಧಿನಿಯಮ ಜಾರಿಗೆ ಕ್ರಮ : ಸಚಿವ ಸಂತೋಷ್ ಲಾಡ್

ಸುದ್ದಿದಿನ,ದಾವಣಗೆರೆ:ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕ ರಾಜ್ಯ ಸರ್ಕಾರ ಇ-ಕಾಮರ್ಸ್ ಫ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರು, ಸಿನಿಮಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಲಾ ಕಾರ್ಮಿಕರು ಹಾಗೂ...

ದಿನದ ಸುದ್ದಿ11 hours ago

ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 9360 ಪ್ರಕರಣ ಇತ್ಯರ್ಥ ; ವಿಚ್ಚೇದನ ಕೋರಿ ಸಲ್ಲಿಸಿದ್ದ 23 ಜೋಡಿ ವೈವಾಹಿಕ ಜೀವನ ಸುಖಾಂತ್ಯ

ಸುದ್ದಿದಿನ,ದಾವಣಗೆರೆ:ಜಿಲ್ಲೆಯಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ಜುಲೈ 12 ರಂದು ರಾಷ್ಟ್ರೀಯ ಲೋಕ್ ಅದಾಲತ್‌ನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಪ್ರಕರಣಗಳ 18024 ಕೈಗೆತ್ತಿಕೊಂಡಿದ್ದು, ಅದರಲ್ಲಿ ಒಟ್ಟು 9,360 ಜಾರಿಯಲ್ಲಿರುವ ಪ್ರಕರಣಗಳು ಮುಕ್ತಾಯಗೊಂಡು,...

ದಿನದ ಸುದ್ದಿ1 day ago

500 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ತೆರೆಯಲು ಸರ್ಕಾರ ನಿರ್ಧಾರ

ಸುದ್ದಿದಿನಡೆಸ್ಕ್:ಗ್ರಾಮೀಣ ಪ್ರದೇಶದಲ್ಲಿ 500 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ಹಾಗೂ ನಗರ ಪ್ರದೇಶಗಳಲ್ಲಿ 800 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ತೆರೆಯಲು ಶೀಘ್ರದಲ್ಲೇ ಆದೇಶ...

ದಿನದ ಸುದ್ದಿ2 days ago

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಕೊರತೆ : ಕರವೇ ಮನವಿ

ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಎಲ್ಲಾ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಗಳನ್ನು ಸರಿಪಡಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಗಿತ್ತೆ ಮಾಧವ್ ವಿಠ್ಠಲ್ ರಾವ್ ರವರಿಗೆ ಕರವೇ(ಪ್ರವೀಣ...

ದಿನದ ಸುದ್ದಿ2 days ago

ದತ್ತಾಂಶ ನಿರ್ವಾಹಕ ಗ್ರೇಡ್ ಎ ಪರೀಕ್ಷೆಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಭಾರತ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು ದತ್ತಾಂಶ ನಿರ್ವಾಹಕ ಗ್ರೇಡ್ ‘ಎ’ ಪರೀಕ್ಷೆಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ...

ದಿನದ ಸುದ್ದಿ2 days ago

ವಿವಿಧ ಸೌಲಭ್ಯಗಳ್ನು ಪಡೆಯಲು ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ಮುಕ್ತ ನಿಧಿ ಅನುದಾನದಲ್ಲಿ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅರ್ಹ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಫಲಾನುಭವಿಗಳು ನಿಗಧಿತ ನಮೂನೆಯ ಅರ್ಜಿಯನ್ನು...

ದಿನದ ಸುದ್ದಿ2 days ago

ಉದ್ಯೋಗ | ಜುಲೈ 15 ರಂದದು ನೇರ ಸಂದರ್ಶನ

ಸುದ್ದಿದಿನ,ದಾವಣಗೆರೆ:ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ದಾವಣಗೆರೆ ಇವರ ವತಿಯಿಂದ ವಿಶ್ವ ಕೌಶಲ್ಯ ದಿನದ ಪ್ರಯುಕ್ತ ಜುಲೈ 15 ರಂದು ಬೆಳಗ್ಗೆ 10 ಗಂಟೆಗೆ ವಾಕ್-ಇನ್-ಇಂಟರ್‍ವೀವ್ ಆಯೋಜಿಸಲಾಗಿದೆ. ವಾಕ್-ಇನ್-ಇಂಟರ್‍ವೀವ್...

ದಿನದ ಸುದ್ದಿ3 days ago

ಪಿಹೆಚ್‍ಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿವೇತನ : ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ವಿಶ್ವವಿದ್ಯಾನಿಲಯಗಳಲ್ಲಿ ಪಿಹೆಚ್‍ಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಜೆ.ಆರ್.ಎಫ್ ಮಾದರಿಯಲ್ಲಿ ಫೇಲೋಶಿಪ್ ಅಥವಾ ವಿದ್ಯಾರ್ಥಿವೇತನಕ್ಕೆ ಅನ್‍ಲೈನ್ ಮೂಲಕ ಅರ್ಜಿ...

ದಿನದ ಸುದ್ದಿ3 days ago

ಜುಲೈ 12 ರಂದು ರಾಷ್ಟ್ರೀಯ ಲೋಕ್ ಅದಾಲತ್

ಸುದ್ದಿದಿನ,ದಾವಣಗೆರೆ:ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ದಾವಣಗೆರೆ ಜಿಲ್ಲೆಯಲ್ಲಿ ಜುಲೈ 12 ರಂದು ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್...

ದಿನದ ಸುದ್ದಿ3 days ago

ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರೆಣೆ

ಸುದ್ದಿದಿನ,ದಾವಣಗೆರೆ:ಇದೇ 12 ರಂದು ಮಧ್ಯಾಹ್ನ 3 ಗಂಟೆಗೆ ನಗರದ ದೊಡ್ಡಬೂದಿಹಾಳ್ ರಸ್ತೆಯಲ್ಲಿರುವ ತಾಜ್ ಪ್ಯಾಲೇಸ್‍ನಲ್ಲಿ ದಾವಣಗೆರೆ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ...

Trending