ರಾಜಕೀಯ
ನೌಕರರು, ನಾಯಕರು ಮತ್ತು ಆಡಳಿತ
ಇತ್ತೀಚೆಗೆ ನಡೆದ ಸಾಹಿತ್ಯೋತ್ಸವವೊಂದರ ಗೋಷ್ಠಿಯಲ್ಲಿ ಇಬ್ಬರು ಭಾಷಣಕಾರರು ಕಾರ್ಯಾಂಗದ ಅನುಷ್ಠಾನ ಬದ್ಧತೆಯ ಕೊರತೆಯ ಕಾರಣಕ್ಕಾಗಿ ಈ ದೇಶದಲ್ಲಿ ನಾಯಕರ ಸುಧಾರಣೆಯ ಕನಸುಗಳು ಸಾಕಾರಗೊಳ್ಳುತ್ತಿಲ್ಲ ಎಂಬ ತಕರಾರು ಎತ್ತಿದರು. ಅಷ್ಟೇ ಅಲ್ಲ, ಅವರು ಇನ್ನೂ ಸ್ಪಷ್ಟವಾಗಿ ಕಾರ್ಯಾಂಗದ ವೈಖರಿಯ ಮೇಲೆ ಅತ್ಯಂತ ಸರಳೀಕೃತವಾದ ತಾರ್ಕಿಕವಲ್ಲದ ಜಾಳುಜಾಳಾದ ಹೇಳಿಕೆಯನ್ನು ತೇಲಿಬಿಟ್ಟರು. ಜನಸಾಮಾನ್ಯನ ಪ್ರಾಮಾಣಿಕತೆಯ ಕಾರಣಕ್ಕಾಗಿ ಸಂದಾಯವಾಗುತ್ತಿರುವ ತೆರಿಗೆಯ ಹಣಕ್ಕೆ ಪ್ರತಿಯಾಗಿ ಕಾರ್ಯಾಂಗವು ಕೇವಲ ನೋವು, ಹತಾಶೆಗಳನ್ನಷ್ಟೇ ನೀಡುತ್ತಿದೆಯೇ ಹೊರತು ತಕ್ಕುದಾದ ಫಲಶೃತಿಗಳನ್ನಲ್ಲ ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡರು. ಆದರೆ, ಈ ಹೇಳಿಕೆಯಲ್ಲಿರುವ ಪೂರ್ವಗ್ರಹಪೀಡಿತ ದೃಷ್ಟಿಕೋನದ ಅಪಾಯಕಾರಿ ಸ್ವರೂಪ ಅಲ್ಲಿದ್ದವರ್ಯಾರ ಗಮನಕ್ಕೆ ಬರಲೇ ಇಲ್ಲ. ಹಾಗೆ ಬರದ ಹಾಗೆ ಅವರಿಬ್ಬರ ಭಾಷಿಕ ಪ್ರೌಢಿಮೆಯು ತನ್ನ ಚಾಣಾಕ್ಷತೆಯನ್ನು ಮೆರೆದಿತ್ತು. “ಸುಧಾರಣೆಯ ಹೆಜ್ಜೆಗಳು ಎಲ್ಲ ಕಾಲದ ನಾಯಕರ ಆಳ್ವಿಕೆಯ ವೇಳೆ ಕಾಣಿಸಿಕೊಳ್ಳುತ್ತವೆ. ಆದರೆ, ಸುಧಾರಣೆಯ ನೀತಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾದ ಕಾರ್ಯಾಂಗ ನಿರ್ಲಿಪ್ತವಾಗಿರುವುದರಿಂದಲೇ ಅನೇಕ ಸಮಸ್ಯೆಗಳಿವೆ” ಎಂದು ತೀರ್ಪು ನೀಡಿಬಿಟ್ಟರು.ಸಂಕೀರ್ಣ ವಾಸ್ತವಾಂಶಗಳುಈ ಹೇಳಿಕೆಯನ್ನು ಯಥಾವತ್ತಾಗಿ ಮುಗ್ಧವಾಗಿ ಸ್ವೀಕರಿಸಿದರೆ ಸಮಸ್ಯೆಯ ಸಂಕೀರ್ಣತೆಯ ಹಿಂದಿನ ವಾಸ್ತವಾಂಶಗಳು ಗಮನಕ್ಕೇ ಬರುವುದಿಲ್ಲ. ಗಮನಕ್ಕೆ ತಂದುಕೊಂಡರೂ ನಾಯಕರೆಡೆಗಿನ ಭಾವನಾತ್ಮಕ ಅಭಿಮಾನದ ಪ್ರಭಾವಳಿ ಅಂಥ ಸಾಧ್ಯತೆಯನ್ನು ಆ ಕ್ಷಣಕ್ಕೇ ಮೊಟಕುಗೊಳಿಸಿಬಿಡುತ್ತದೆ. ಇದನ್ನು ಇನ್ನಷ್ಟು ಸ್ಪಷ್ಟವಾಗಿಸಿಕೊಳ್ಳಬಹುದಾದರೆ, ಈ ಹೇಳಿಕೆಯ ಮೊನಚಾದ ದಾಳಿ ಸರ್ಕಾರಿ ನೌಕರರ ಮೇಲೆಯೇ ನಡೆದಿತ್ತು. ಟೀಕೆ, ಅಸಮಾಧಾನ, ಆಕ್ರೋಶ, ವ್ಯಂಗ್ಯ, ಹಾಸ್ಯ, ಅಪಹಾಸ್ಯ ಸೇರಿದಂತೆ ನಿಂದನೆಯ ನಾನಾ ಬಗೆಗಳಿಗೆ ಈಡಾಗುತ್ತಲೇ ನಿರಂತರವಾಗಿ ಸವಾಲುಗಳನ್ನು ನೌಕರವರ್ಗ ಎದುರಿಸುತ್ತಲೇ ಇದೆ. ಭ್ರಷ್ಟಾಚಾರ ಮತ್ತು ವಿಳಂಬನೀತಿ ಎಂಬ ಎರಡು ನಕಾರಾತ್ಮಕ ಸಂಗತಿಗಳು ನೌಕರರ ನಿಜವಾದ ಶಕ್ತಿಯನ್ನು ಹಿನ್ನೆಲೆಗೆ ಸರಿಸಿವೆ.
ಶಾಸಕಾಂಗವು ಶಾಸನಗಳನ್ನು ರೂಪಿಸುವ ಹೊಣೆಗಾರಿಕೆ ನಿಭಾಯಿಸುತ್ತದೆ. ಅವುಗಳನ್ನು ಜಾರಿಗೆ ತರುವ ಜವಾಬ್ದಾರಿ ಕಾರ್ಯಾಂಗದ್ದು. ಅಂದರೆ ಉನ್ನತ ಹಂತದಿಂದ ಹಿಡಿದು ಕೆಳಹಂತದವರೆಗಿನ ಆಡಳಿತಾತ್ಮಕ ಪ್ರಕ್ರಿಯೆಯು ಕಾರ್ಯಾಂಗವನ್ನು ಪ್ರತಿನಿಧಿಸುವ ನೌಕರರಿಂದಲೇ ಏರ್ಪಡುತ್ತದೆ. ಹೀಗೆ ಏರ್ಪಡುವ ಕಾಲಕ್ಕೇ ಬದಲಾವಣೆಯು ಕಾಣಿಸಿಕೊಳ್ಳುತ್ತಿರುತ್ತದೆ. ಈ ಬದಲಾವಣೆಯು ಆಯಾ ದೇಶಗಳ ನಾಯಕರು, ರಾಜಕಾರಣ ಮತ್ತು ಜನರ ಬೌದ್ಧಿಕ ವಿವೇಚನೆಗೆ ತಕ್ಕಂತೆಯೇ ನಡೆಯುತ್ತದೆ. ಈ ವಿವೇಚನೆ ಇಲ್ಲದಿದ್ದಾಗ ನಾಯಕರು ಕಾಣಿಸಿಕೊಳ್ಳುವುದಿಲ್ಲ. ನಾಯಕರೇ ಇಲ್ಲವೆಂದ ಮೇಲೆ ರಾಜಕಾರಣವು ಒಂದು ನಿರ್ದಿಷ್ಟ ಗೊತ್ತುಗುರಿಯಿಲ್ಲದೆ ತನ್ನ ನಕಾರಾತ್ಮಕ ಶಕ್ತಿಯನ್ನು ವಿಸ್ತರಿಸಿಕೊಳ್ಳುತ್ತದೆ.ಸ್ಥಾಯಿಯಾದ ಯಥಾಸ್ಥಿತಿವಾದ
ಈ ಹಂತದಲ್ಲಿಯೇ ಸಮಾಜದಲ್ಲಿ ಬದಲಾವಣೆಯ ಬದಲು ಯಥಾಸ್ಥಿತಿಯು ಸ್ಥಾಯಿಯಾಗಿಬಿಡುತ್ತದೆ. ಬದಲಾವಣೆಯ ಗಮ್ಯವನ್ನು ಮುಖ್ಯವಾಗಿಸಿಕೊಂಡ ಪ್ರಜಾಪ್ರಭುತ್ವದ ಮೌಲ್ಯಗಳು ಅರ್ಥ ಕಳೆದುಕೊಳ್ಳುತ್ತವೆ. ಸಂವಿಧಾನದ ನಮ್ಯತೆಯ ಗುಣಲಕ್ಷಣವನ್ನು ಹದಗೆಡಿಸುವ ಹುನ್ನಾರಗಳು ನಡೆದುಬಿಡುತ್ತವೆ. ಅನಿವಾರ್ಯವಾಗಿ ಆಗಲೇಬೇಕಾದ ಬದಲಾವಣೆಯ ಪ್ರಯತ್ನಗಳು ನಿಂತುಬಿಡುವುದು ಇಂಥ ಹುನ್ನಾರಗಳ ಕಾರಣಕ್ಕಾಗಿಯೇ. ಸರ್ಕಾರಿ ನೌಕರರೆಂಬ ಜೀವಿಗಳು ಸಂಕಟ-ಸಂಕೀರ್ಣತೆಯ ನಡುವೆ ಕಾರ್ಯನಿರ್ವಹಿಸುವ ಮುಜುಗರದ ಅನುಭವಗಳೊಂದಿಗಿರಬೇಕಾಗುತ್ತದೆ. ಶಾಸಕಾಂಗವೇ ನೀತಿಗಳನ್ನು ನಿರೂಪಿಸುವ ಸಂವಿಧಾನಾತ್ಮಕ ಸಂಸ್ಥೆಯಾಗಿರುವುದರಿಂದ ಬದಲಾವಣೆಯ ಚಿಂತನೆಯು ಅಲ್ಲಿಂದಲೇ ಶುರುವಾಗಬೇಕಾಗುತ್ತದೆ. ಆದರೆ ಈ ದೇಶದಲ್ಲಿ ಹಾಗಾಗುತ್ತಿಲ್ಲ. ಈಗಾಗಲೇ ಇರುವ ನೀತಿಗಳ ಜಾಗದಲ್ಲಿ ಹೊಸದಾದುವುಗಳನ್ನು ಪ್ರತಿಷ್ಠಾಪಿಸುವ ಪ್ರಯತ್ನಗಳೇ ಆಗುತ್ತಿಲ್ಲ. ಹಳೆಯ ನೀತಿಗಳಿದ್ದರೆ ಭ್ರಷ್ಟಾಚಾರದ ಸ್ವಹಿತಾಸಕ್ತ ಉದ್ದೇಶ ಈಡೇರುತ್ತದೆ. ಹೊಸ ನೀತಿಗಳು ಬಂದರೆ ತಮ್ಮ ಅಸ್ತಿತ್ವಕ್ಕೇ ಕೊಡಲಿಪೆಟ್ಟು ಬೀಳುತ್ತದೆ ಎಂದುಕೊಳ್ಳುವ ನಾಯಕರಲ್ಲದ ರಾಜಕಾರಣಿಗಳು ತಮ್ಮ ತಮ್ಮ ಪಕ್ಷಗಳ ಸಾಂಸ್ಥಿಕ ಶ್ರೇಷ್ಠತೆಯನ್ನು ಮೊಟಕುಗೊಳಿಸಿಕೊಳ್ಳುವ ಹಾಗೆಯೇ ವರ್ತಿಸುತ್ತಾರೆ. ಯಥಾಸ್ಥಿತಿವಾದವನ್ನು ಉಳಿಸಿ ಅದರ ಮೇಲೆ ತಮ್ಮ ಅಸ್ತಿತ್ವವವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಹಂಬಲಗಳನ್ನೇ ಕಾಡಿಸಿಕೊಳ್ಳುತ್ತಾರೆ.ಉದ್ದೇಶಪೂರ್ವಕ ಹುನ್ನಾರ
ಅವರು ಜನರಿಗೆ ಬಹುಕಾಲದವರೆಗೆ ಅನುಕೂಲ ಒದಗಿಸಿಕೊಡುವ ಶಾಶ್ವತವಾದ ಯೋಜನೆಗಳನ್ನು ರೂಪಿಸುವ ಬದಲು ಬರೀ ಜನರ ತಾತ್ಪೂರ್ತಿಕ ಆಸೆಗಳನ್ನು ಈಡೇರಿಸುವಂಥ ಜನಪ್ರಿಯ ನೀತಿಗಳನ್ನು ರಚಿಸುತ್ತಾರೆ. ಅವುಗಳು ಅಂಗೀಕೃತವಾಗುವಂತೆಯೂ ನೋಡಿಕೊಳ್ಳುತ್ತಾರೆ. ಮತಗಳಿಕೆಯ ಲೆಕ್ಕಾಚಾರದ ಉದ್ದೇಶಗಳನ್ನೇ ಮುಖ್ಯವಾಗಿಸಿಕೊಂಡು ಯಶಸ್ವಿಯಾಗುತ್ತಾರೆ. ಜನಪ್ರಿಯ ಯೋಜನೆಗಳ ಅನುಷ್ಠಾನದಲ್ಲಿ ನೌಕರರು ಕಾರ್ಯನಿರ್ವಹಿಸಿದರೂ ಅದರ ಕ್ರೆಡಿಟ್ ಅವರಿಗೆ ಹೋಗುವುದಿಲ್ಲ. ನಾಯಕರೆನಿಸಿಕೊಂಡವರ ಪಾಲಾಗುತ್ತದೆ. ಅವರು ದೂರದೃಷ್ಟಿಯ ಚಿಂತನೆಗಳನ್ನು ಉದ್ದೇಶಪೂರ್ವಕವಾಗಿ ಹತ್ತಿಕ್ಕಿಬಿಡುತ್ತಾರೆ. ಜನಪ್ರಿಯ ಯೋಜನೆಗಳಿಗೆ ಯಶಸ್ಸು ದೊರಕಿದರೆ ಅದರ ಲಾಭವನ್ನು ತಾವು ಪಡೆಯುತ್ತಾರೆ. ಟೀಕೆಗೀಡಾದರೆ ವೈಫಲ್ಯಕ್ಕೆ ಸರ್ಕಾರಿ ನೌಕರರೆಡೆಗೆ ಬೊಟ್ಟು ಮಾಡುತ್ತಾರೆ.
ಹಿಂದೊಮ್ಮೆ ಬ್ರಿಟಿಷ್ ಹಿಡಿತಕ್ಕೊಳಗಾಗಿದ್ದ ಈ ದೇಶದಲ್ಲಿ ಅದರ ಆಡಳಿತಾತ್ಮಕ ಪಳೆಯುಳಿಕೆಯ ಹಲವು ವಿಧಾನಗಳು ಈಗಲೂ ಅನುಸರಿಸಲ್ಪಡುತ್ತಿವೆ. ಏಣಿಶ್ರೇಣಿ ವ್ಯವಸ್ಥೆಯ ವಿವಿಧ ಹಂತಗಳು ಉನ್ನತ ಅಧಿಕಾರಿಗಳ ಪ್ರತಿಷ್ಠೆಯ ಹಂಗುಗಳ ಚೌಕಟ್ಟುಗಳಡಿ ನಲುಗುತ್ತಿವೆ. ರಾಜಕಾರಣಿ ಮತ್ತು ಉನ್ನತ ಹಂತದ ಅಧಿಕಾರಿಗಳ ನಡುವಿನ ಅಸಂಬದ್ಧ ಮೈತ್ರಿಯ ನಡೆಗಳು ಆಡಳಿತವನ್ನು ಸುಧಾರಿಸುವ ಬದಲು ಅದರ ಒಟ್ಟು ಶಕ್ತಿಯನ್ನು ಕಳೆದಿಡುತ್ತಿವೆ.ಸಮಗ್ರ ಒಳಗೊಳ್ಳುವಿಕೆಯ ಕೊರತೆ ಉನ್ನತಾಧಿಕಾರ ಕೇಂದ್ರದ ನಂತರದ ಹಂತಗಳಲ್ಲಿ ಕಾರ್ಯನಿರ್ವಹಿಸುವ ನೌಕರರು ಆದೇಶಗಳನ್ನು ಪಾಲಿಸುವುದಕ್ಕಷ್ಟೇ ಸೀಮಿತವಾಗುಳಿಯುವ ಅನಿವಾರ್ಯತೆ ಎದುರಿಸುತ್ತಾರೆ. ಅವರನ್ನು ಒಳಗೊಳ್ಳುವಂಥ ಆಡಳಿತಾತ್ಮಕ ಕ್ರಮಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಗುತ್ತದೆ. ಒಂದು ವೇಳೆ ಎಲ್ಲ ಹಂತಗಳ ಸರ್ಕಾರಿ ನೌಕರರನ್ನು ಒಳಗೊಳ್ಳುವಂಥ ಆಡಳಿತಾತ್ಮಕ ಪ್ರಕ್ರಿಯೆಯು ಏರ್ಪಟ್ಟಿದ್ದಿದ್ದರೆ ಸರ್ಕಾರದ ಕಾರ್ಯವೈಖರಿ ಖಾಸಗಿ ವಲಯಕ್ಕಿಂತ ಭಿನ್ನ ಎಂದೆನ್ನಿಸಿಕೊಳ್ಳುತ್ತಿತ್ತು. ಆದರೆ, ಹಾಗಾಗಲಿಲ್ಲ. ಆಡಳಿತದ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸುವ ನೌಕರರು ಶೋಷಣೆಗೊಳಗಾಗುತ್ತಲೇ ಹೋದರು. ಸರ್ಕಾರಿ ಇಲಾಖೆಗಳ ಕಾರ್ಯವೈಖರಿ ಅಷ್ಟೇನೂ ಸರಿಯಲ್ಲ ಎಂಬ ಸಾರ್ವತ್ರಿಕ ಅಭಿಪ್ರಾಯ, ಟೀಕೆಗಳಿಗೆ ಗುರಿಯಾಗಬೇಕಾಯಿತು.ಹೀಗಳೆಯುವ ಉಡಾಫೆಯ ವ್ಯಂಗ್ಯಕ್ಕೀಡಾದ ನೌಕರರು ಇಷ್ಟೇ ಅಲ್ಲದೇ, ಪ್ರತಿ ಸಲ ವೇತನ ಹೆಚ್ಚಳದ ವರದಿಗಳು ಮುಖಪುಟದ ಆದ್ಯತೆಯೊಂದಿಗೆ ಪ್ರಕಟವಾದಾಗಲಂತೂ ಇವರಿಗೇಕೆ ಸಂಬಳ ಹೆಚ್ಚಿಸಬೇಕು ಎಂಬ ಸರಳೀಕೃತವಾದ ಪ್ರಶ್ನೆಗಳನ್ನು ಅವರು ಎದುರಿಸುತ್ತಲೇ ಇದ್ದಾರೆ. ವೇತನ ಹೆಚ್ಚಳ ಆಯಾ ಕಾಲದ ಆರ್ಥಿಕ ಅವಶ್ಯಕತೆಗಳಿಗೆ ಅನುಗುಣವಾಗಿ ನಡೆಯುತ್ತದೆ. ಇದು ಅತ್ಯಂತ ಸಹಜವಾದ ಆಡಳಿತಾತ್ಮಕ ಪ್ರಕ್ರಿಯೆ. ಇದು ಸಾಧ್ಯವಾಗುವುದಕ್ಕೂ ನೌಕರರು ಬಹುದಿನಗಳ ಕಾಲ ಕಾಯಬೇಕಾಗುತ್ತದೆ. ಆಡಳಿತದ ಚುಕ್ಕಾಣಿ ಹಿಡಿದವರಿಗೆ ಮತ್ತೆ ಮತ್ತೆ ನೆನಪಿಸಬೇಕಾಗುತ್ತದೆ. ಬೇಡಿಕೆ ಮುಂದಿಡಬೇಕಾಗುತ್ತದೆ. ಸರ್ಕಾರದ ನೇತೃತ್ವ ವಹಿಸಿದವರು ರಾಜಕೀಯ ಲೆಕ್ಕಾಚಾರದೊಂದಿಗೇ ಉನ್ನತಾಧಿಕಾರಿಗಳ ಜೊತೆಗೆ ಚರ್ಚಿಸಿ ವೇತನ ಹೆಚ್ಚಳದ ಘೋಷಣೆ ಮಾಡುತ್ತಾರೆ. ಕೊನೆಗೂ ಸರ್ಕಾರ ಸ್ಪಂದಿಸಿತು ಎಂಬ ಕೃತಾರ್ಥ ಭಾವ ನೌಕರರದ್ದಾಗುತ್ತದೆ. ಆದರೆ, ಇದಕ್ಕೆ ಸಂಬಂಧಿಸಿದ ಸುದ್ದಿ ಪ್ರಚುರವಾದಾಗ ಸರ್ಕಾರಿ ನೌಕರರನ್ನು ಹೀಗಳೆಯುವ ಉಡಾಫೆಯ ವ್ಯಂಗ್ಯದ ತಿವಿತಗಳಿಗೆ ಈಡಾಗಬೇಕಾಗುತ್ತದೆ. ಹೀಗಾಗಿಯೇ ನೌಕರರು ಒಂದು ಬಗೆಯ ಅಸಮಾಧಾನ, ಅತೃಪ್ತಿಯೊಂದಿಗೇ ಕಾರ್ಯನಿರ್ವಹಿಸಬೇಕಾಗುತ್ತದೆ. ಇದು ಇಲಾಖಾವಾರು ಕಾರ್ಯವೈಖರಿಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಅಡಗಿರುವ ಹತ್ತುಹಲವು ಲೋಪದೋಷಗಳು.
ಅತಾರ್ಕಿಕ ಟೀಕೆಗಳು
ಈ ಹಂತದಲ್ಲಿಯೇ ಸರ್ಕಾರಿ ಕೆಲಸ ಮತ್ತು ಸರ್ಕಾರಿ ನೌಕರರು ಸರಳೀಕೃತವಾದ, ಅತಾರ್ಕಿಕ ಟೀಕೆಗಳಿಗೆ ತುತ್ತಾಗಬೇಕಾಯಿತು. ಕ್ಲೀಷೆ ಎನ್ನಿಸುವಷ್ಟರ ಮಟ್ಟಿಗೆ ಟೀಕೆಗೆ ಒಳಗಾದ, ವ್ಯಂಗ್ಯಕ್ಕೆ ತುತ್ತಾದ ಒಂದು ಜನಜನಿತ ಉಲ್ಲೇಖವೆಂದರೆ ‘ಸರ್ಕಾರಿ ಕೆಲಸ ದೇವರ ಕೆಲಸ’. ಇದನ್ನು ತಪ್ಪಾಗಿ ಅರ್ಥೈಸಲಾಗಿದೆ. ತಪ್ಪಾಗಿ ಗ್ರಹಿಸಲಾಗಿದೆ. ಸರ್ಕಾರದ ಕೆಲಸ ದೇವರದ್ದಾಗಿರುವುದರಿಂದ ಮನುಷ್ಯರಿಗೆ ಅಲ್ಲಿ ನಿರ್ವಹಿಸಲು ಕೆಲಸವೇ ಇರುವುದಿಲ್ಲ, ಹಾಗಾಗಿಯೇ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ನಿರೀಕ್ಷಿತ ರೀತಿಯಲ್ಲಿ ಕೆಲಸಗಳಾಗುವುದಿಲ್ಲ ಎಂಬ ಉಲ್ಲೇಖಗಳು ವ್ಯಂಗ್ಯಾತ್ಮಕವಾಗಿಯೇ ವ್ಯಕ್ತವಾಗುತ್ತವೆ.
ಈ ಉಲ್ಲೇಖವನ್ನು ಹೀಗೆ ತಪ್ಪಾಗಿ ಅರ್ಥೈಸಿಕೊಳ್ಳುವುದಕ್ಕಿಂತ ಅದರ ಹಿಂದಿನ ಉದ್ದೇಶವನ್ನು ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ. ನೌಕರರೊಳಗೆ ನೈತಿಕ ಶ್ರದ್ಧೆಯನ್ನು ರೂಪಿಸುವ ಒತ್ತಾಸೆಯೊಂದಿಗೆ ಸರ್ಕಾರದ ಕೆಲಸವನ್ನು ದೇವರ ಕೆಲಸಕ್ಕೆ ಹೋಲಿಸಿ ವ್ಯಾಖ್ಯಾನಿಸಿರಬಹುದು. ದೇವರ ಕೆಲಸವೆಂದರೆ ನೌಕರರೊಳಗೆ ಶ್ರದ್ಧೆ ಹುಟ್ಟಿಕೊಳ್ಳುತ್ತದೆ ಎಂಬ ನಿರೀಕ್ಷೆಯಲ್ಲಿ ಅಂಥದ್ದೊಂದು ವ್ಯಾಖ್ಯಾನ ಹುಟ್ಟಿಕೊಂಡಿರಬಹುದು. ಆದರೆ, ಹಾಗಾಗಲಿಲ್ಲ. ಬದಲಾಗಿ ಸರ್ಕಾರಿ ನೌಕರರು ಕೆಲಸ ಮಾಡದೇ ಇದ್ದರೂ ನಡೆಯುತ್ತದೆ ಎಂಬ ಮನೋಭಾವದೊಂದಿಗೆ ಈ ಉದ್ಧರಣ ತಳುಕುಹಾಕಿಕೊಂಡಿತು. ಈ ಉದ್ಧರಣಕ್ಕಿಂತ ಮುಖ್ಯವೆನ್ನಿಸುವ ಉದಾತ್ತವಾದುದು ‘ಕಾಯಕವೇ ಕೈಲಾಸ’ ಪರಿಕಲ್ಪನೆ. ನಿರ್ವಹಿಸಬೇಕಾದ ಕೆಲಸವನ್ನು ಕೈಲಾಸಕ್ಕೆ ಸಮೀಕರಿಸಿ ನೋಡುವ ಈ ದೃಷ್ಟಿಕೋನವನ್ನು ಆಧರಿಸಿ ಸರ್ಕಾರಿ ಆಡಳಿತ ಮರುರೂಪುಗೊಂಡರೆ ಬೆಳವಣಿಗೆಯ ಪ್ರಕ್ರಿಯೆಗೆ ಹೊಸ ಆಯಾಮ ದೊರಕುತ್ತದೆ.
ಸೀಮಿತ ಗ್ರಹಿಕೆಯ ಮಿತಿಗಳು
ಭಾರತದಲ್ಲಿ ಸಾರ್ವಜನಿಕ ಆಡಳಿತದ ಪರಿಕಲ್ಪನೆಯು ಚಲನೆಯ ಸಂಕೇತವಾಗಿ ಚಾಲ್ತಿಗೆ ಬರಲೇ ಇಲ್ಲ. ಅದು ಕೇವಲ ಸರ್ಕಾರದ ಕೆಲಸ ಎಂಬರ್ಥದ ಸೀಮಿತ ಗ್ರಹಿಕೆಯೇ ಆದ್ಯತೆ ಪಡೆದು ಉನ್ನತ ಹಂತದ ನಾಯಕರೆನ್ನಿಸಿಕೊಂಡವರು ಅದಕ್ಕನುಗುಣವಾಗಿಯೇ ಆಡಳಿತವನ್ನು ವ್ಯಾಖ್ಯಾನಿಸಿಕೊಂಡರು. ಬದಲಾವಣೆ, ಬೆಳವಣಿಗೆ, ಪ್ರಗತಿ, ಅಭಿವೃದ್ಧಿ ಎಂಬ ಪದಗಳೊಂದಿಗೆ ಆಡಳಿತವನ್ನು ಜೋಡಿಸಿ ಮಾತನಾಡುವ ಜಾಣ್ಮೆಯನ್ನು ರೂಢಿಸಿಕೊಂಡರೇ ಹೊರತು ಅದನ್ನು ದೇಶ ಮತ್ತು ಜನತೆಯ ಉಜ್ವಲ ಭವಿಷ್ಯವನ್ನು ಸಾಧ್ಯವಾಗಿಸುವ ಸಂಕಲ್ಪಕ್ಕೆ ಸಂಯೋಜಿಸುವುದರ ಕಡೆಗೆ ಗಮನವನ್ನೇ ಹರಿಸಲಿಲ್ಲ. ಪ್ರಧಾನಿ ಮತ್ತು ಮುಖ್ಯಮಂತ್ರಿ ಹುದ್ದೆಗಳನ್ನು ಅಲಂಕರಿಸಿದ ಕೆಲವರು ಈ ಕುರಿತು ಯೋಚಿಸಿ ಯೋಜಿಸಿದರೂ ಆಡಳಿತಾತ್ಮಕ ಕಾರ್ಯಾನುಷ್ಠಾನ ಸಾಧ್ಯವಾಗಲಿಲ್ಲ. ಭಿನ್ನವಾಗಿ ಯೋಚಿಸುವ ನಾಯಕರು ಉನ್ನತ ಹುದ್ದೆಗಳನ್ನು ಅಲಂಕರಿಸಿದಾಗಲೂ ಇದೇ ಸಮಸ್ಯೆ ಮುಂದುವರೆಯಿತು. ಹೀಗೆ ಆಲೋಚಿಸುವ ನಾಯಕರಿದ್ದಾಗ ಉನ್ನತ ಹಂತಗಳ ಅಧಿಕಾರಿವರ್ಗ ಹಾಗೆ ಯೋಚಿಸಲಿಲ್ಲ. ಹಾಗೆ ಯೋಚಿಸುವ ಅಧಿಕಾರಿ ವರ್ಗ ಉನ್ನತ ಹಂತಗಳಲಿದ್ದಾಗ ಸ್ಪಂದಿಸುವ ಗುಣದ ದಾರ್ಶನಿಕ ನಾಯಕತ್ವದ ಕೊರತೆ ಕಾಡಿತು.
ಅಗಾಧ ಶ್ರಮದ ಅಪವ್ಯಯ
ಇಂಥ ಸಂಕೀರ್ಣತೆಯ ಮಧ್ಯೆಯೇ ಸರ್ಕಾರಿ ನೌಕರರು ಕಾರ್ಯನಿರ್ವಹಿಸಬೇಕಾಯಿತು. ಜನಹಿತದ ಪ್ರಶ್ನೆಗಳನ್ನು ಕಾಡಿಸಿಕೊಂಡು ಕಾರ್ಯನಿರ್ವಹಿಸುವ ಸಾಮೂಹಿಕ ಹೊಣೆಗಾರಿಕೆಯ ಪ್ರಜ್ಞೆ ಇದ್ದರೂ ಅದು ಪ್ರಯೋಗಕ್ಕೊಳಪಡಲಿಲ್ಲ.ಪ್ರಯೋಗಕ್ಕೊಳಪಡದಂತೆ ಅಡತಡೆಗಳನ್ನು ಉಂಟುಮಾಡುವ ಸಂಕುಚಿತ ರಾಜಕಾರಣ ಚಿಗುರೊಡೆಯಿತು. ಅದನ್ನು ರಾಜಕೀಯ ಪಕ್ಷಗಳು ಅತ್ಯಂತ ಚಾಣಾಕ್ಷಯುತವಾಗಿ ಪೋಷಿಸಿದವು. ನೌಕರರ ಅಗಾಧ ಶ್ರಮದ ಅಪವ್ಯಯ ಇಲ್ಲಿಂದಲೇ ಆರಂಭವಾಯಿತು. ನಾವಿನ್ನೂ ಜನರನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿಸುವುದರ ಕಡೆಗೇ ಶ್ರಮವನ್ನು ವ್ಯಯಿಸುತ್ತಿದ್ದೇವೆ ಎಂಬ ಟೀಕೆ ತಾರ್ಕಿಕವೆನ್ನಿಸತೊಡಗಿತು. ಇದನ್ನು ಅಲ್ಲಗಳೆಯುವ ಆಡಳಿತಾತ್ಮಕ ದಿಟ್ಟಹೆಜ್ಜೆಗಳು ನಾಯಕರೆನ್ನಿಸಿಕೊಂಡವರಿಂದಾಗಲೀ, ಕಾರ್ಯಾಂಗದ ರಚನಾತ್ಮಕತೆಯನ್ನು ವಿಸ್ತರಿಸುವ ಹೊಣೆಗಾರಿಕೆಯುಳ್ಳ ಉನ್ನತ ಹಂತದ ಅಧಿಕಾರಿ ವರ್ಗದಿಂದಾಗಲೀ ವ್ಯಕ್ತವಾಗಲಿಲ್ಲ. ರಾಜಕಾರಣಿಗಳ ಅಪ್ರಬುದ್ಧತೆ ಆಡಳಿತವನ್ನು ಸಡಿಲಗೊಳಿಸಿತು. ಉನ್ನತಾಧಿಕಾರಿ ವರ್ಗದ್ದು ಕೇವಲ ಮೂಕಪ್ರೇಕ್ಷಕ ಪಾತ್ರವಾಯಿತು. ಆಡಳಿತದ ಅನುಕೂಲಕ್ಕಾಗಿ ರೂಪುಗೊಂಡಿದ್ದ ಏಣಿಶ್ರೇಣಿ ವ್ಯವಸ್ಥೆ ಪ್ರತಿಷ್ಠೆಯ ಚೌಕಟ್ಟಿನೊಳಗೆ ಬಂಧಿಯಾಯಿತು. ದರ್ಪ, ದರ್ಬಾರು, ನಿಂದನೆ, ಕಿರುಕುಳ ಮತ್ತು ಶೋಷಣೆಗಳ ನಡುವೆ ಕೆಲಸ ಮಾಡುವ ಅನಿವಾರ್ಯತೆ ನಂತರದ ಆಡಳಿತಾತ್ಮಕ ಹಂತಗಳ ನೌಕರರಿಗೆ ಎದುರಾಯಿತು.
ಆಕ್ರಾಮಕ ನೀತಿಗಳ ಸವಾರಿ ಸರ್ಕಾರಿ ನೌಕರರು ಮತ್ತು ಅವರ ನೌಕರಿಯನ್ನು ಅಪವ್ಯಾಖ್ಯಾನಿಸಿ ಅವರ ಅಸ್ತಿತ್ವವನ್ನು ನಗಣ್ಯವಾಗಿಸಿ ಅಪವ್ಯಾಖ್ಯಾನಕ್ಕೆ ಒಳಪಡಿಸುವ ಹುನ್ನಾರ ರಾಜಕಾರಣ ಮತ್ತು ಆಡಳಿತಾತ್ಮಕ ಉನ್ನತ ಹಂತಗಳಿಂದಲೇ ಶುರುವಾಯಿತು. ಈ ಅಪವ್ಯಾಖ್ಯಾನ ಸರ್ಕಾರಿ ವಲಯವನ್ನು ನೆಗೆಟಿವ್ ಆಗಿ ನೋಡುವುದಕ್ಕೆ ಪ್ರಚೋದಿಸಿತು. ಆಡಳಿತವನ್ನು ಯಂತ್ರವನ್ನಾಗಿ ತಪ್ಪಾಗಿ ಬಿಂಬಿಸಿತು. ನೌಕರರನ್ನು ದುಡಿಯುವ ಯಂತ್ರಗಳನ್ನಾಗಿ ನೋಡುವ ವಿಚಿತ್ರ ವಾತಾವರಣ ಸೃಷ್ಟಿಯಾಯಿತು. ನೌಕರರು ಯಂತ್ರಗಳಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳುವ ಹೊತ್ತಿಗೆ ಕಾಲ ಮಿಂಚಿತ್ತು. ತೊಂಭತ್ತರ ದಶಕದ ಆಕ್ರಾಮಕ ನೀತಿಗಳ ಸವಾರಿ ಆರಂಭವಾಗಿತ್ತು. ಬೃಹತ್ ಕಂಪನಿಗಳ ವಾಣಿಜ್ಯಿಕ ಕೌಶಲ್ಯಗಳು ಶ್ರೇಷ್ಠ ಎಂದೆನ್ನಿಸಿ ನಮ್ಮದೇ ಸರ್ಕಾರದ ವಿವಿಧ ಹಂತಗಳು ಪೇಲವ ಎನ್ನಿಸತೊಡಗಿದವು. ಇಡೀ ಸಾರ್ವಜನಿಕ ಆಡಳಿತ ಟೊಳ್ಳು ಎಂಬ ಭಾವನೆಯನ್ನು ಉದ್ದೇಶಪೂರ್ವಕವಾಗಿ ಬಿತ್ತಲಾಯಿತು.
ಆದ್ಯತಾವಲಯಗಳೆಡೆಗೆ ನಿರ್ಲಕ್ಷ್ಯ
ಆದರೆ, ಸ್ವಾತಂತ್ರ್ಯಾನಂತರ ಇಡೀ ದೇಶ ಆಡಳಿತಾತ್ಮಕವಾಗಿ ಮಹತ್ವದ್ದನ್ನು ಸಾಧಿಸಬೇಕಾಗಿತ್ತು. ಆಡಳಿತವನ್ನು ಸಂಪನ್ಮೂಲ ಕೇಂದ್ರವಾಗಿಸುವ ದಾರ್ಶನಿಕತೆಯ ವ್ಯಕ್ತವಾಗಬೇಕಾಗಿತ್ತು. ಅಂಥ ದಾರ್ಶನಿಕತೆಯನ್ನು ನಿರೂಪಿಸುವ ನಾಯಕರ ಸಂಖ್ಯೆ ಹೆಚ್ಚಾಗಬೇಕಾಗಿತ್ತು. ನೌಕರರನ್ನು ಮಕ್ಕಳಂತೆ ನೋಡುವ ತಾಯಿಯ ಅಂತಃಕರಣ ಉನ್ನತ ಹಂತದ ನಾಯಕತ್ವ ಮತ್ತು ಅತ್ಯುನ್ನತ ಹಂತದ ಅಧಿಕಾರ ವಲಯದಿಂದ ಅಭಿವ್ಯಕ್ತಗೊಳ್ಳಬೇಕಿತ್ತು. ಅಂಥ ಉದಾತ್ತತೆಯ ಬದಲು ಆಡಳಿತ ಸುಧಾರಣೆಯ ನೆಪದಲ್ಲಿ ನೌಕರರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಲಾಯಿತು. ಪ್ರಯೋಜನವಾದಿ ವಾಣಿಜ್ಯಿಕ ಲಾಭದ ಉದ್ಯಮದ ವ್ಯಾಪ್ತಿಗೆ ಸರ್ಕಾರಿ ವ್ಯವಸ್ಥೆಯನ್ನು ತರಲಾಯಿತು. ನೌಕರರ ಸಂಖ್ಯೆ ತಗ್ಗಿಸುವ ಯೋಚನೆ, ಪಿಂಚಣಿ ಸೌಲಭ್ಯ ನಿರಾಕರಣೆ, ಖಾಸಗಿಯವರೊಂದಿಗೆ ಗುರುತಿಸಿಕೊಳ್ಳುವ ಪ್ರಯೋಜನವಾದಿ ಹಂಬಲ, ನೇಮಕಾತಿ, ಬಡ್ತಿ ಮತ್ತಿತರ ಸಂಗತಿಗಳಿಗೆ ಸಂಬಂಧಿಸಿದಂತೆ ಬಿಕ್ಕಟ್ಟುಗಳು ನಿರಂತರವಾದವು. ಈ ಬಿಕ್ಕಟ್ಟುಗಳು ಬಿಗಡಾಯಿಸಿದಾಗ ಯಥಾಸ್ಥಿತಿವಾದದ ಹ್ಯಾಂಗ್ ಓವರ್ಗೆ ಆಡಳಿತ ಮತ್ತು ನಾಯಕತ್ವ ಈಡಾಗಬೇಕಾಯಿತು. ಸಾಮಾಜಿಕತೆ, ಶಿಕ್ಷಣ, ಆರೋಗ್ಯ, ಮಾನವ ಸಂಪನ್ಮೂಲ ಸೇರಿದಂತೆ ಮಹತ್ವದ ಆದ್ಯತಾ ವಲಯಗಳು ನಿರ್ಲಕ್ಷ್ಯಕ್ಕೆ ತುತ್ತಾದವು.
ಆಶಾವಾದದ ಮಾರ್ಗ ಹಾಗಾದರೆ, ಸರ್ಕಾರಿ ನೌಕರರೂ ಸೇರಿದಂತೆ ವಿವಿಧ ವಲಯಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರೋಪಾಯಗಳೇ ಇಲ್ಲವೇ? ಹಾಗೆ ನಿರಾಸೆಗೊಳ್ಳಬೇಕಿಲ್ಲ. ಬಲದಾವಣೆಯು ಮೇಲುಹಂತದಿಂದ ಕೆಳಹಂತದವರೆಗೆ ಪ್ರವಹಿಸುವಂಥ ಪ್ರಕ್ರಿಯೆ ತೀವ್ರಗೊಳ್ಳಬೇಕು. ರಾಜಕಾರಣಿಗಳು ದಾರ್ಶನಿಕ ನಾಯಕರಾಗಿ ಮಾರ್ಪಾಡಾಗಬೇಕು. ವಿವಿಧ ವಲಯಗಳನ್ನು ಪ್ರತಿನಿಧಿಸಿ ಮಹತ್ವದ್ದನ್ನು ಸಾಧಿಸುವಂಥ ಮಹತ್ವಾಕಾಂಕ್ಷೆಯೊಂದಿಗೆ ರಾಜಕಾರಣವನ್ನು ಜನಮುಖಿಯಾಗಿಸಬೇಕು. ಕಾರ್ಯಾಂಗದ ಚಲನಶೀಲತೆಯನ್ನು ತೀವ್ರಗೊಳಿಸುವ ಸಂಕಲ್ಪದೊಂದಿಗೆ ಶಾಸಕಾಂಗ ಹೆಜ್ಜೆಯಿರಿಸಬೇಕು. ಆ ಮೂಲಕ ತನ್ನ ಶಕ್ತಿಯನ್ನು ಮರುರೂಪಿಸಿಕೊಳ್ಳಬೇಕು. ಅಂಥ ಶಕ್ತಿಯನ್ನು ವಿಸ್ತರಿಸಲು ಸಾಧ್ಯವಾಗಿಸುವಂತೆ ಸಾರ್ವಜನಿಕ ಆಡಳಿತಾಂಗವನ್ನು ಪ್ರತಿನಿಧಿಸುವ ಉನ್ನತ ಮತ್ತು ತದನಂತರದ ಹಂತಗಳ ಅಧಿಕಾರಿಗಳು ನೋಡಿಕೊಳ್ಳಬೇಕು. ಸರ್ಕಾರಿ ನೌಕರರರ ಸಂಪನ್ಮೂಲ ಸಾಮಥ್ರ್ಯವನ್ನು ವಿಸ್ತರಿಸಬೇಕು. ಅವರ ಹಿತಾಸಕ್ತಿಗಳನ್ನು ರಕ್ಷಿಸುತ್ತಲೇ ಸಾರ್ವಜನಿಕ ಆಡಳಿತವನ್ನು ಪುನಃಶ್ಚೇತನಗೊಳಿಸಿ ಪ್ರಜಾಪ್ರಭುತ್ವದ ಸದಾಶಯಗಳ ಸಾಕಾರಕ್ಕೆ ಶ್ರಮಿಸಬೇಕು. ಆ ಮೂಲಕ ಸಾರ್ವಜನಿಕ ವಲಯದ ಅಸ್ತಿತ್ವವನ್ನು ಉಳಿಸಿಕೊಂಡು ಅಪ್ಪಟ ದೇಶಿ ಪ್ರಜ್ಞೆಯ ಆಧಾರದಲ್ಲಿ ಭಾರತದ ಭವಿಷ್ಯವನ್ನು ಉಜ್ವಲಗೊಳಿಸುವ ನಡೆಗಳು ಪುನರಾವರ್ತಿತವಾಗಬೇಕು.
-ಡಾ.ಎನ್.ಕೆ.ಪದ್ಮನಾಭ

ದಿನದ ಸುದ್ದಿ
ಮಾಜಿ ರಾಜ್ಯಸಭಾ ಸದಸ್ಯ ಹೆಚ್ ಹನುಮಂತಪ್ಪ ನಿಧನ
ಸುದ್ದಿದಿನ,ಚಿತ್ರದುರ್ಗ:ಮಾಜಿ ರಾಜ್ಯಸಭಾ ಸದಸ್ಯರು ಹೆಚ್ ಹನುಮಂತಪ್ಪನವರು (95ವರ್ಷ) ವಯೋಸಹಜ ಅನಾರೋಗ್ಯದಿಂದ ದೈವಧೀನರಾಗಿದ್ದಾರೆ ಎಂದು ಪುತ್ರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೆಚ್ ಮೋಹನ್ ಅವರು ತಿಳಿಸಿದ್ದಾರೆ.
ಅಂತ್ಯಕ್ರಿಯೆಯನ್ನು ನಾಳೆ (ಸೋಮವಾರ) ಮಧ್ಯಾಹ್ನ 4:00 ಗಂಟೆಗೆ ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆ ಮುಕ್ತಿದಾಮದಲ್ಲಿ ನೆರವೇರಿಸಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ
ಸುದ್ದಿದಿನ,ಚಿತ್ರದುರ್ಗ: ಹರಳಯ್ಯ ಮಠದ ಸ್ವಾಮೀಜಿ ಮೇಲೆ ಮಾರಾಣಾಂತಿಕ ಹಲ್ಲೆಯನ್ನು ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಮಠಾಧೀಶರ ಮೇಲೆ ಇಂತಹ ದುಷ್ಕೃತ್ಯ ಹೆಚ್ಚಾಗಬಹುದು ಎಂದು ಮಾಜಿ ಸಚಿವ ಎಚ್.ಆಂಜನೇಯ ಆತಂಕ ವ್ಯಕ್ತಪಡಿಸಿದ್ದಾರೆ.
ಎಸಿ, ತಹಸೀಲ್ದಾರ್, ಪೊಲೀಸ್ ಅಧಿಕಾರಿಗಳು, ಗ್ರಾಮದ ಮುಖಂಡರೊಂದಿಗೆ ಐಮಂಗಲ ಸಮೀಪದ ಹರಳಯ್ಯ ಮಠಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿ, ಚಿತ್ರದುರ್ಗ ಜಿಲ್ಲಾಸ್ಪತ್ರೆ ಬಳಿಕ ಮಠಕ್ಕೆ ಶ್ರೀಗಳು ಬಂದಿದ್ದಾರೆಂದು ಭಾವಿಸಿ ಧೈರ್ಯ ಹೇಳಲು ಬಂದಿದ್ದೇನೆ. ಆದರೆ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿರುವುದು ಅವರ ಆರೋಗ್ಯ ಸ್ಥಿತಿ ಕುರಿತು ಕಳವಳ ವ್ಯಕ್ತವಾಗಿದೆ ಎಂದರು.
ಮುರುಘ ಮಠದ ಡಾ. ಶ್ರೀ ಶಿವಮೂರ್ತಿ ಮುರುಘ ಶರಣರು ಎಲ್ಲ ಶೋಷಿತ, ದಲಿತ, ಹಿಂದುಳಿದ ವರ್ಗಗಳಿಗೆ ಧಾರ್ಮಿಕ ಸ್ಥಾನ ನೀಡಲು ಹಲವರಿಗೆ ದೀಕ್ಷೆ ನೀಡಿ, ಜಮೀನು ಸೇರಿ ಅಗತ್ಯ
ಸಹಕಾರ ನೀಡಿದ್ದು ಸ್ಮರಣೀಯ. ಆ ಸಂದರ್ಭದಲ್ಲಿ ಹರಳಯ್ಯ ಮಠ ಸ್ಥಾಪನೆಗಾಗಿ ಜಮೀನು ಖರೀದಿಸಲು ಹಣ ಕೊಟ್ಟಿದ್ದರು. ಆ ಹಣದಲ್ಲಿ ಭೂಮಿ ಖರೀದಿಸಿ ಮಠ, ಶಾಲೆ ನಿರ್ಮಿಸಲು ಬಸವ ಹರಳಯ್ಯ ಸ್ವಾಮೀಜಿ ಶ್ರಮಿಸಿ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು.
ಮಠ-ಮಾನ್ಯಗಳು ಮಾಡಬೇಕಾದ ಕಾರ್ಯವನ್ನು ಅತ್ಯಂತ ಶ್ರದ್ಧೆ, ಸವಾಲುಗಳ ಮಧ್ಯೆ, ಹಗಲು-ರಾತ್ರಿ ಶ್ರಮಪಟ್ಟು ಹರಳಯ್ಯ ಸ್ವಾಮೀಜಿ ಮಾಡಿದ್ದಾರೆ. ಸಮಾಜ ಕಲ್ಯಾಣ
ಸಚಿವನಾಗಿದ್ದ ವೇಳೆ 1 ಕೋಟಿ ರೂ. ಅನುದಾನ ಕೊಡಿದ್ದೇ. ಬಳಿಕ ಅಸ್ಥಿತ್ವಕ್ಕೆ ಬಂದ ಸರ್ಕಾರ ಹಾಗೂ ಭಕ್ತರು, ಜನರಿಗೆ ದೇಣಿಗೆ ಸಂಗ್ರಹಿಸಿ ಭವ್ಯವಾದ ಮಠ ನಿರ್ಮಿಸಿದ್ದಾರೆ.
ಸುತ್ತಮುತ್ತಲ ಬಡ ಮಕ್ಕಳಿಗಾಗಿ ಶಾಲೆ, ಸತ್ ಚಿಂತನೆ ಮೂಡಿಸಲು ಧಾರ್ಮಿಕ ಕಾರ್ಯಕ್ಕಾಗಿ ಸಭಾಂಗಣ ನಿರ್ಮಿಸಿದ್ದಾರೆ ಎಂದರು.
ಈ ಸಂದರ್ಭ ತಗ್ಗುಗುಂಡಿ ಆಗಿದ್ದ ಅನುಪಯುಕ್ತ ಎರಡು ಗುಂಟೆ ಜಮೀನು ಗೊಂದಲದಿಂದ ಒತ್ತುವರಿ ಆಗಿದೆ. ಈ ವಿಷಯಕ್ಕಾಗಿ ಹಲವು ಬಾರಿ ವ್ಯಕ್ತಿಯೊರ್ವ ಗಲಾಟೆ ಮಾಡಿದ್ದಾನೆ. ಗೊತ್ತಿಲ್ಲದೆ ಎರಡು ಗುಂಟೆ ಜಾಗ ಒತ್ತುವರಿ ಆಗಿದ್ದು, ತಪ್ಪು ನನ್ನಿಂದಲೇ ಆಗಿದೆಯೆಂದು ಶ್ರೀಗಳು ಒಪ್ಪಿಕೊಂಡಿದ್ದಾರೆ. ಜತೆಗೆ ಆ ಜಾಗಕ್ಕೆ ಈಗಿನ ಮಾರುಕಟ್ಟೆ ಮೌಲ್ಯದಷ್ಟು ಹಣ ಕೊಡುತ್ತೇನೆ ಎಂದು ತಿಳಿಸಿದ್ದಾರೆ. ವ್ಯಕ್ತಿ ನಿರಾಕರಿಸಿದಾಗ ಒತ್ತುವರಿ ಜಾಗದಲ್ಲಿ ಕಟ್ಟಿದ್ದ ಕಾಂಪೌಂಡನ್ನು ಸ್ವಾಮೀಜಿ ಕೆಡವಿಸಿದ್ದಾರೆ. ಆದರೂ ಆ ವ್ಯಕ್ತಿ ದ್ವೇಷ ಮುಂದುವರಿಸಿದ್ದು ಏಕಾಏಕಿ ಮಠಕ್ಕೆ ನುಗ್ಗಿ ಸ್ವಾಮೀಜಿ ಮೇಲೆ
ಮಾರಾಣಾಂತಿಕ ಹಲ್ಲೆ ನಡೆಸಿದ್ದು, ದೂರು ಕೊಡಲು ಠಾಣೆಗೆ ತೆರಳಿರುವ ವಿಷಯ ತಿಳಿದು ಅಲ್ಲಿಗೆ ತೆರಳಿ ಕಾಲಿನಿಂದ ಸ್ವಾಮೀಜಿ ಎದೆಗೆ ಒದ್ದಿದ್ದಾನೆ ಎಂದರು.
ಧಾರ್ಮಿಕ ನೇತಾರರನ್ನು ಗೌರವಿಸುವ ನಾಡು ಭಾರತ. ಇಂತಹ ಸಂದರ್ಭ ಖಾವಿಧಾರಿಯೊಬ್ಬರ ಮೇಲೆ ಮಾರಾಣಾಂತಿಕವಾಗಿ ಹಲ್ಲೆ ನಡೆಸಿ, ಅವ್ಯಾಚ್ಯ ಶಬ್ದಗಳಿಂದ ನಿಂಧಿಸಿರುವುದು ಎಚ್ಚರಿಕೆ
ಗಂಟೆಯಾಗಿದೆ. ಈ ದುಷ್ಕೃತ್ಯವನ್ನು ನಾಡಿನ ಎಲ್ಲ ಮಠಾಧೀಶರು ಖಂಡಿಸಬೇಕು, ಸ್ವಾಮೀಜಿಗೆ ನೈತಿಕವಾಗಿ ಬೆಂಬಲಿಸಬೇಕು. ಇಲ್ಲದಿದ್ದರೇ ಇಂತಹ ಕೃತ್ಯಗಳು ಹೆಚ್ಚಾಗುವ ಸಾಧ್ಯತೆ ಎಂದು ಆತಂಕ ವ್ಯಕ್ತಪಡಿಸಿದರು.
ಹಲ್ಲೆ ನಡೆಸಿದ ಮೂವರನ್ನು ಮಟ್ಟಹಾಕುವ ಶಕ್ತಿ ನಮ್ಮಲ್ಲೂ ಇದೆ. ಆದರೆ, ನಾವು ವಾಮಮಾರ್ಗದಲ್ಲಿ ಸಾಗುವವರಲ್ಲ, ಕಾನೂನು ಪರಿಪಾಲಕರು. ನಮ್ಮ ಹಕ್ಕೋತ್ತಾಯ ಬಸವ
ತತ್ವದಡಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸ್ವಾಮೀಜಿ ಮೇಲೆ ಮಾರಾಣಾಂತಿಕ ಹಲ್ಲೆ ಭೀತಿ ಹುಟ್ಟಿಸುವಂತದ್ದಾಗಿದೆ. ಈ ಕುರಿತು ತಕ್ಷಣವೇ ಎಲ್ಲ ಮಠಾಧೀಶರು, ಧರ್ಮಗಳ ಪ್ರತಿಪಾದಕರು ಖಂಡಿಸಬೇಕು ಎಂದು ಕೋರಿದರು.
ಈಗ ಯಾವುದೇ ಕಾರಣಕ್ಕೂ ಸಂಧಾನ-ಚರ್ಚೆ ಅಗತ್ಯವಿಲ್ಲ. ಮಠದ ಸಾಮಾಜಿಕ ಕಾರ್ಯಕ್ಕಾಗಿ ಸರ್ಕಾರ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕು. ಅದಕ್ಕೆ ತಗಲುವ ವೆಚ್ಚವನ್ನು ನಾನೇ ಸ್ವಂತವಾಗಿ ಭರಿಸುತ್ತೇನೆ. ತಕ್ಷಣ ಅಧಿಕಾರಿಗಳು ಈ ಸಂಬಂಧ ಕಾರ್ಯಪ್ರವೃತ್ತರಾಗಬೇಕೆಂದು ಆಂಜನೇಯ ಆಗ್ರಹಿಸಿದರಲ್ಲದೇ ಒಂದು ವೇಳೆ ಭೂಮಿ ಯಾರದ್ದಾಗಿದ್ದರೇ ಅವರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಪರಿಹಾರ ನೀಡಬಹುದು. ಈ ನಿಟ್ಟಿನಲ್ಲಿ ನಾನು ತಗಲುವ ಸಂಪೂರ್ಣ ವೆಚ್ಚ ಭರಿಸುವೆ ಎಂದು ತಿಳಿಸಿದರು.
ಐಮಂಗಲ ಸುತ್ತಮುತ್ತಲ ಗ್ರಾಮಗಳ ಬಡ ಮಕ್ಕಳಿಗೆ ಶಿಕ್ಷಣ ನೀಡುವುದು, ಅನಾಥಾಲಯ ಸ್ಥಾಪನೆಯ ಸದುದ್ದೇಶ ಹೊಂದಿರುವ ಶ್ರೀಗಳ ಮೇಲೆ ಹಲ್ಲೆ ಇಡೀ ಧಾರ್ಮಿಕ ಮುಖಂಡರಿಗೆ ಮಾಡಿರುವ ಅಪಮಾನ ಮತ್ತು ಅವರಲ್ಲಿ ಭೀತಿ ಸೃಷ್ಠಿಸುವಂತದ್ದಾಗಿದೆ. ಆದ್ದರಿಂದ ಮಾರಾಣಾಂತಿಕ ಹಲ್ಲೆ ನಡೆಸಿದ ವ್ಯಕ್ತಿಗಳನ್ನು ತಕ್ಷಣವೇ ರಾಜ್ಯದಿಂದಲೇ ಗಡಿಪಾರು ಮಾಡಬೇಕು. ಜೊತೆಗೆ ಕಠಿಣ ಶಿಕ್ಷೆ ಆಗುವ ರೀತಿ ಕಾನೂನು ಪ್ರಕ್ರಿಯೆ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಸಿ ಕಾಂತರಾಜ್, ಡಿವೈಎಸ್ಪಿ ಶಿವಕುಮಾರ್, ಸಿಪಿಐ ಗುಡ್ಡಪ್ಪ ಹಾಗೂ ಗ್ರಾಮದ ಹಿರಿಯರು
ಉಪಸ್ಥಿತರಿದ್ದರು.
*ಪೋಟೊ ಕ್ಯಾಪ್ಷನ್* ಐಮಂಗಲದ ಹರಳಯ್ಯ ಗುರುಪೀಠಕ್ಕೆ ಶುಕ್ರವಾರ ಸಂಜೆ ಮಾಜಿಸಚಿವ ಎಚ್.ಆಂಜನೇಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ದಿನದ ಸುದ್ದಿ
ದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು
ಮುಖ್ಯಾಂಶಗಳು
ಟೆಂಡರ್ ಇಲ್ಲದೆ ಸಾಮಗ್ರಿ ಖರೀದಿ ಆರೋಪ
ಜುಲೈ 10ರ ವರೆಗೆ ಸ್ಥಳ ಪರಿಶೀಲನೆ, ದಾಖಲೆಗಳ ತಪಾಸಣೆ
ತನಿಖಾಧಿಕಾರಿಗಳ ಮುಂದೆ ಹಾಜರಾಗಲು ದೂರುದಾರರಿಗೆ ನೋಟಿಸ್
ಸುದ್ದಿದಿನ,ದಾವಣಗೆರೆ: ತಾಲೂಕು ಪಂಚಾಯಿತಿಯ 2022-23ನೇ ಸಾಲಿನ ಅನಿರ್ಬಂಧಿತ ಅನುದಾನದಡಿ ಕೈಗೊಳ್ಳಲಾದ ವಿವಿಧ ಕಾಮಗಾರಿಗಳ ಖರೀದಿ ವ್ಯವಹಾರದಲ್ಲಿ ನಿಯಮ ಉಲ್ಲಂಘಿಸಿ, ಸರ್ಕಾರಿ ಹಣ ದುರುಪಯೋಗಪಡಿಸಿಕೊಂಡಿರುವ ಗಂಭೀರ ಆರೋಪದ ಬೆನ್ನತ್ತಿರುವ ಲೋಕಾಯುಕ್ತ ಸಂಸ್ಥೆಯು ತನಿಖೆಯನ್ನು ತೀವ್ರಗೊಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದ ತಾಂತ್ರಿಕ ಮತ್ತು ಲೆಕ್ಕಪತ್ರ ಶಾಖೆಯ ಅಧಿಕಾರಿಗಳು ಜುಲೈ 7 ರಿಂದ 10 ರವರೆಗೆ ಜಿಲ್ಲೆಯಲ್ಲಿ ಬೀಡುಬಿಡಲಿದ್ದು, ಸ್ಥಳ ತನಿಖೆ ಹಾಗೂ ದಾಖಲೆಗಳ ಪರಿಶೀಲನೆ ನಡೆಸಲಿದ್ದಾರೆ.
ನಿಯಮ ಗಾಳಿಗೆ: ‘ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ– ಕರ್ನಾಟಕ’ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಕೆ.ಎ. ಓಬಳೇಶ್ ಅವರು 2025ರ ಜನೆವರಿ 21ರಂದು ಲೋಕಾಯುಕ್ತಕ್ಕೆ ಈ ಕುರಿತು ಅಧಿಕೃತ ದೂರು ನೀಡಿದ್ದರು. 2022-23ನೇ ಸಾಲಿನಲ್ಲಿ ದಾವಣಗೆರೆ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ವಿವಿಧ ಯೋಜನೆಗಳ ಕಾಮಗಾರಿಗಳಿಗೆ ಸಾಮಗ್ರಿಗಳನ್ನು ಖರೀದಿಸುವಾಗ ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸಿಲ್ಲ. ಅಧಿಕೃತ ಮಾರಾಟಗಾರರಿಂದ ದರಪಟ್ಟಿ (ಕೊಟೇಷನ್) ಪಡೆಯದೆ, ನಿಯಮಾವಳಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಸರ್ಕಾರದ ಹಣ ಪೋಲು ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ತನಿಖೆ ಎದುರಿಸುತ್ತಿರುವವರು
ಶ್ರೀ ಎನ್.ಜೆ. ಆನಂದ್, ಕಾರ್ಯನಿರ್ವಾಹಕ ಅಧಿಕಾರಿ (ಇಒ), ತಾಲೂಕು ಪಂಚಾಯಿತಿ, ದಾವಣಗೆರೆ.
ಶ್ರೀ ನಾಗರಾಜ್ ನಾಯ್ಕ್, ಸಹಾಯಕ ಲೆಕ್ಕಾಧಿಕಾರಿ, ತಾಲೂಕು ಪಂಚಾಯಿತಿ, ದಾವಣಗೆರೆ.
ಶ್ರೀ ಚನ್ನಪ್ಪ ಎ., ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ), ಜಿಲ್ಲಾ ಪಂಚಾಯತ್, ದಾವಣಗೆರೆ.
ಕಚೇರಿಯಲ್ಲಿ ತಪಾಸಣೆ
ದೂರಿನ ಅನ್ವಯ ಲೋಕಾಯುಕ್ತದ ತಾಂತ್ರಿಕ ಮತ್ತು ಲೆಕ್ಕಪತ್ರ ಶಾಖೆಯ ತನಿಖಾಧಿಕಾರಿ ಟಿ.ಸಿ. ಜಯರಾಮಯ್ಯ ಅವರು ತನಿಖಾ ವೇಳಾಪಟ್ಟಿ ಸಿದ್ಧಪಡಿಸಿದ್ದಾರೆ. ಜುಲೈ 7 ರಂದು ಬೆಳಗ್ಗೆ 11.30ಕ್ಕೆ ದಾವಣಗೆರೆ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ತನಿಖಾ ಪ್ರಕ್ರಿಯೆ ಆರಂಭವಾಗಿದ್ದು, ಜುಲೈ 10 ರವರೆಗೆ ಸರಣಿ ದಾಖಲೆಗಳ ಪರಿಶೀಲನೆ ನಡೆಯಲಿದೆ. ಸ್ಥಳ ತನಿಖೆಯ ಸಂದರ್ಭದಲ್ಲಿ ಖುದ್ದಾಗಿ ಹಾಜರಿದ್ದು, ಪೂರಕ ದಾಖಲೆಗಳೊಂದಿಗೆ ಸಹಕರಿಸುವಂತೆ ದೂರುದಾರರಿಗೂ ನೋಟಿಸ್ ನೀಡಲಾಗಿದೆ.
ಜಿಲ್ಲೆಯ ಪ್ರಭಾವಿ ಅಧಿಕಾರಿಗಳೇ ಲೋಕಾಯುಕ್ತ ತನಿಖೆಯ ಬಿಸಿಗೆ ಸಿಲುಕಿರುವುದು ಆಡಳಿತ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಚನ್ನಗಿರಿ | ಲವ್ ಮ್ಯಾರೇಜ್ ; ಪೊಲೀಸ್ ಠಾಣೆ ಆವರಣದಲ್ಲೇ ಯುವಕನಿಗೆ ಚಾಕು ಇರಿತ
-
ದಿನದ ಸುದ್ದಿ4 days agoದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು
-
ದಿನದ ಸುದ್ದಿ6 days ago
ಮತದಾರರ ಪಟ್ಟಿ ಪರಿಷ್ಕರಣೆ | ಪ್ರತಿಯೊಬ್ಬರ ಮನೆಬಾಗಿಲಿಗೆ ತಲುಪಲಿವೆ ಫಾರಂಗಳು ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ
-
ದಿನದ ಸುದ್ದಿ2 days agoಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ
-
ಅಂಕಣ1 day agoಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
-
ದಿನದ ಸುದ್ದಿ4 hours agoಮಾಜಿ ರಾಜ್ಯಸಭಾ ಸದಸ್ಯ ಹೆಚ್ ಹನುಮಂತಪ್ಪ ನಿಧನ


