Connect with us

ರಾಜಕೀಯ

ನೌಕರರು, ನಾಯಕರು ಮತ್ತು ಆಡಳಿತ

Published

on

ತ್ತೀಚೆಗೆ ನಡೆದ ಸಾಹಿತ್ಯೋತ್ಸವವೊಂದರ ಗೋಷ್ಠಿಯಲ್ಲಿ ಇಬ್ಬರು ಭಾಷಣಕಾರರು ಕಾರ್ಯಾಂಗದ ಅನುಷ್ಠಾನ ಬದ್ಧತೆಯ ಕೊರತೆಯ ಕಾರಣಕ್ಕಾಗಿ ಈ ದೇಶದಲ್ಲಿ ನಾಯಕರ ಸುಧಾರಣೆಯ ಕನಸುಗಳು ಸಾಕಾರಗೊಳ್ಳುತ್ತಿಲ್ಲ ಎಂಬ ತಕರಾರು ಎತ್ತಿದರು. ಅಷ್ಟೇ ಅಲ್ಲ, ಅವರು ಇನ್ನೂ ಸ್ಪಷ್ಟವಾಗಿ ಕಾರ್ಯಾಂಗದ ವೈಖರಿಯ ಮೇಲೆ ಅತ್ಯಂತ ಸರಳೀಕೃತವಾದ ತಾರ್ಕಿಕವಲ್ಲದ ಜಾಳುಜಾಳಾದ ಹೇಳಿಕೆಯನ್ನು ತೇಲಿಬಿಟ್ಟರು. ಜನಸಾಮಾನ್ಯನ ಪ್ರಾಮಾಣಿಕತೆಯ ಕಾರಣಕ್ಕಾಗಿ ಸಂದಾಯವಾಗುತ್ತಿರುವ ತೆರಿಗೆಯ ಹಣಕ್ಕೆ ಪ್ರತಿಯಾಗಿ ಕಾರ್ಯಾಂಗವು ಕೇವಲ ನೋವು, ಹತಾಶೆಗಳನ್ನಷ್ಟೇ ನೀಡುತ್ತಿದೆಯೇ ಹೊರತು ತಕ್ಕುದಾದ ಫಲಶೃತಿಗಳನ್ನಲ್ಲ ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡರು. ಆದರೆ, ಈ ಹೇಳಿಕೆಯಲ್ಲಿರುವ ಪೂರ್ವಗ್ರಹಪೀಡಿತ ದೃಷ್ಟಿಕೋನದ ಅಪಾಯಕಾರಿ ಸ್ವರೂಪ ಅಲ್ಲಿದ್ದವರ್ಯಾರ ಗಮನಕ್ಕೆ ಬರಲೇ ಇಲ್ಲ. ಹಾಗೆ ಬರದ ಹಾಗೆ ಅವರಿಬ್ಬರ ಭಾಷಿಕ ಪ್ರೌಢಿಮೆಯು ತನ್ನ ಚಾಣಾಕ್ಷತೆಯನ್ನು ಮೆರೆದಿತ್ತು. “ಸುಧಾರಣೆಯ ಹೆಜ್ಜೆಗಳು ಎಲ್ಲ ಕಾಲದ ನಾಯಕರ ಆಳ್ವಿಕೆಯ ವೇಳೆ ಕಾಣಿಸಿಕೊಳ್ಳುತ್ತವೆ. ಆದರೆ, ಸುಧಾರಣೆಯ ನೀತಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾದ ಕಾರ್ಯಾಂಗ ನಿರ್ಲಿಪ್ತವಾಗಿರುವುದರಿಂದಲೇ ಅನೇಕ ಸಮಸ್ಯೆಗಳಿವೆ” ಎಂದು ತೀರ್ಪು ನೀಡಿಬಿಟ್ಟರು.ಸಂಕೀರ್ಣ ವಾಸ್ತವಾಂಶಗಳುಈ ಹೇಳಿಕೆಯನ್ನು ಯಥಾವತ್ತಾಗಿ ಮುಗ್ಧವಾಗಿ ಸ್ವೀಕರಿಸಿದರೆ ಸಮಸ್ಯೆಯ ಸಂಕೀರ್ಣತೆಯ ಹಿಂದಿನ ವಾಸ್ತವಾಂಶಗಳು ಗಮನಕ್ಕೇ ಬರುವುದಿಲ್ಲ. ಗಮನಕ್ಕೆ ತಂದುಕೊಂಡರೂ ನಾಯಕರೆಡೆಗಿನ ಭಾವನಾತ್ಮಕ ಅಭಿಮಾನದ ಪ್ರಭಾವಳಿ ಅಂಥ ಸಾಧ್ಯತೆಯನ್ನು ಆ ಕ್ಷಣಕ್ಕೇ ಮೊಟಕುಗೊಳಿಸಿಬಿಡುತ್ತದೆ. ಇದನ್ನು ಇನ್ನಷ್ಟು ಸ್ಪಷ್ಟವಾಗಿಸಿಕೊಳ್ಳಬಹುದಾದರೆ, ಈ ಹೇಳಿಕೆಯ ಮೊನಚಾದ ದಾಳಿ ಸರ್ಕಾರಿ ನೌಕರರ ಮೇಲೆಯೇ ನಡೆದಿತ್ತು. ಟೀಕೆ, ಅಸಮಾಧಾನ, ಆಕ್ರೋಶ, ವ್ಯಂಗ್ಯ, ಹಾಸ್ಯ, ಅಪಹಾಸ್ಯ ಸೇರಿದಂತೆ ನಿಂದನೆಯ ನಾನಾ ಬಗೆಗಳಿಗೆ ಈಡಾಗುತ್ತಲೇ ನಿರಂತರವಾಗಿ ಸವಾಲುಗಳನ್ನು ನೌಕರವರ್ಗ ಎದುರಿಸುತ್ತಲೇ ಇದೆ. ಭ್ರಷ್ಟಾಚಾರ ಮತ್ತು ವಿಳಂಬನೀತಿ ಎಂಬ ಎರಡು ನಕಾರಾತ್ಮಕ ಸಂಗತಿಗಳು ನೌಕರರ ನಿಜವಾದ ಶಕ್ತಿಯನ್ನು ಹಿನ್ನೆಲೆಗೆ ಸರಿಸಿವೆ.

Rajadharma a column by Dr.N k padmanabh

ಶಾಸಕಾಂಗವು ಶಾಸನಗಳನ್ನು ರೂಪಿಸುವ ಹೊಣೆಗಾರಿಕೆ ನಿಭಾಯಿಸುತ್ತದೆ. ಅವುಗಳನ್ನು ಜಾರಿಗೆ ತರುವ ಜವಾಬ್ದಾರಿ ಕಾರ್ಯಾಂಗದ್ದು. ಅಂದರೆ ಉನ್ನತ ಹಂತದಿಂದ ಹಿಡಿದು ಕೆಳಹಂತದವರೆಗಿನ ಆಡಳಿತಾತ್ಮಕ ಪ್ರಕ್ರಿಯೆಯು ಕಾರ್ಯಾಂಗವನ್ನು ಪ್ರತಿನಿಧಿಸುವ ನೌಕರರಿಂದಲೇ ಏರ್ಪಡುತ್ತದೆ. ಹೀಗೆ ಏರ್ಪಡುವ ಕಾಲಕ್ಕೇ ಬದಲಾವಣೆಯು ಕಾಣಿಸಿಕೊಳ್ಳುತ್ತಿರುತ್ತದೆ. ಈ ಬದಲಾವಣೆಯು ಆಯಾ ದೇಶಗಳ ನಾಯಕರು, ರಾಜಕಾರಣ ಮತ್ತು ಜನರ ಬೌದ್ಧಿಕ ವಿವೇಚನೆಗೆ ತಕ್ಕಂತೆಯೇ ನಡೆಯುತ್ತದೆ. ಈ ವಿವೇಚನೆ ಇಲ್ಲದಿದ್ದಾಗ ನಾಯಕರು ಕಾಣಿಸಿಕೊಳ್ಳುವುದಿಲ್ಲ. ನಾಯಕರೇ ಇಲ್ಲವೆಂದ ಮೇಲೆ ರಾಜಕಾರಣವು ಒಂದು ನಿರ್ದಿಷ್ಟ ಗೊತ್ತುಗುರಿಯಿಲ್ಲದೆ ತನ್ನ ನಕಾರಾತ್ಮಕ ಶಕ್ತಿಯನ್ನು ವಿಸ್ತರಿಸಿಕೊಳ್ಳುತ್ತದೆ.ಸ್ಥಾಯಿಯಾದ ಯಥಾಸ್ಥಿತಿವಾದ
ಈ ಹಂತದಲ್ಲಿಯೇ ಸಮಾಜದಲ್ಲಿ ಬದಲಾವಣೆಯ ಬದಲು ಯಥಾಸ್ಥಿತಿಯು ಸ್ಥಾಯಿಯಾಗಿಬಿಡುತ್ತದೆ. ಬದಲಾವಣೆಯ ಗಮ್ಯವನ್ನು ಮುಖ್ಯವಾಗಿಸಿಕೊಂಡ ಪ್ರಜಾಪ್ರಭುತ್ವದ ಮೌಲ್ಯಗಳು ಅರ್ಥ ಕಳೆದುಕೊಳ್ಳುತ್ತವೆ. ಸಂವಿಧಾನದ ನಮ್ಯತೆಯ ಗುಣಲಕ್ಷಣವನ್ನು ಹದಗೆಡಿಸುವ ಹುನ್ನಾರಗಳು ನಡೆದುಬಿಡುತ್ತವೆ. ಅನಿವಾರ್ಯವಾಗಿ ಆಗಲೇಬೇಕಾದ ಬದಲಾವಣೆಯ ಪ್ರಯತ್ನಗಳು ನಿಂತುಬಿಡುವುದು ಇಂಥ ಹುನ್ನಾರಗಳ ಕಾರಣಕ್ಕಾಗಿಯೇ. ಸರ್ಕಾರಿ ನೌಕರರೆಂಬ ಜೀವಿಗಳು ಸಂಕಟ-ಸಂಕೀರ್ಣತೆಯ ನಡುವೆ ಕಾರ್ಯನಿರ್ವಹಿಸುವ ಮುಜುಗರದ ಅನುಭವಗಳೊಂದಿಗಿರಬೇಕಾಗುತ್ತದೆ. ಶಾಸಕಾಂಗವೇ ನೀತಿಗಳನ್ನು ನಿರೂಪಿಸುವ ಸಂವಿಧಾನಾತ್ಮಕ ಸಂಸ್ಥೆಯಾಗಿರುವುದರಿಂದ ಬದಲಾವಣೆಯ ಚಿಂತನೆಯು ಅಲ್ಲಿಂದಲೇ ಶುರುವಾಗಬೇಕಾಗುತ್ತದೆ. ಆದರೆ ಈ ದೇಶದಲ್ಲಿ ಹಾಗಾಗುತ್ತಿಲ್ಲ. ಈಗಾಗಲೇ ಇರುವ ನೀತಿಗಳ ಜಾಗದಲ್ಲಿ ಹೊಸದಾದುವುಗಳನ್ನು ಪ್ರತಿಷ್ಠಾಪಿಸುವ ಪ್ರಯತ್ನಗಳೇ ಆಗುತ್ತಿಲ್ಲ. ಹಳೆಯ ನೀತಿಗಳಿದ್ದರೆ ಭ್ರಷ್ಟಾಚಾರದ ಸ್ವಹಿತಾಸಕ್ತ ಉದ್ದೇಶ ಈಡೇರುತ್ತದೆ. ಹೊಸ ನೀತಿಗಳು ಬಂದರೆ ತಮ್ಮ ಅಸ್ತಿತ್ವಕ್ಕೇ ಕೊಡಲಿಪೆಟ್ಟು ಬೀಳುತ್ತದೆ ಎಂದುಕೊಳ್ಳುವ ನಾಯಕರಲ್ಲದ ರಾಜಕಾರಣಿಗಳು ತಮ್ಮ ತಮ್ಮ ಪಕ್ಷಗಳ ಸಾಂಸ್ಥಿಕ ಶ್ರೇಷ್ಠತೆಯನ್ನು ಮೊಟಕುಗೊಳಿಸಿಕೊಳ್ಳುವ ಹಾಗೆಯೇ ವರ್ತಿಸುತ್ತಾರೆ. ಯಥಾಸ್ಥಿತಿವಾದವನ್ನು ಉಳಿಸಿ ಅದರ ಮೇಲೆ ತಮ್ಮ ಅಸ್ತಿತ್ವವವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಹಂಬಲಗಳನ್ನೇ ಕಾಡಿಸಿಕೊಳ್ಳುತ್ತಾರೆ.ಉದ್ದೇಶಪೂರ್ವಕ ಹುನ್ನಾರ
ಅವರು ಜನರಿಗೆ ಬಹುಕಾಲದವರೆಗೆ ಅನುಕೂಲ ಒದಗಿಸಿಕೊಡುವ ಶಾಶ್ವತವಾದ ಯೋಜನೆಗಳನ್ನು ರೂಪಿಸುವ ಬದಲು ಬರೀ ಜನರ ತಾತ್ಪೂರ್ತಿಕ ಆಸೆಗಳನ್ನು ಈಡೇರಿಸುವಂಥ ಜನಪ್ರಿಯ ನೀತಿಗಳನ್ನು ರಚಿಸುತ್ತಾರೆ. ಅವುಗಳು ಅಂಗೀಕೃತವಾಗುವಂತೆಯೂ ನೋಡಿಕೊಳ್ಳುತ್ತಾರೆ. ಮತಗಳಿಕೆಯ ಲೆಕ್ಕಾಚಾರದ ಉದ್ದೇಶಗಳನ್ನೇ ಮುಖ್ಯವಾಗಿಸಿಕೊಂಡು ಯಶಸ್ವಿಯಾಗುತ್ತಾರೆ. ಜನಪ್ರಿಯ ಯೋಜನೆಗಳ ಅನುಷ್ಠಾನದಲ್ಲಿ ನೌಕರರು ಕಾರ್ಯನಿರ್ವಹಿಸಿದರೂ ಅದರ ಕ್ರೆಡಿಟ್ ಅವರಿಗೆ ಹೋಗುವುದಿಲ್ಲ. ನಾಯಕರೆನಿಸಿಕೊಂಡವರ ಪಾಲಾಗುತ್ತದೆ. ಅವರು ದೂರದೃಷ್ಟಿಯ ಚಿಂತನೆಗಳನ್ನು ಉದ್ದೇಶಪೂರ್ವಕವಾಗಿ ಹತ್ತಿಕ್ಕಿಬಿಡುತ್ತಾರೆ. ಜನಪ್ರಿಯ ಯೋಜನೆಗಳಿಗೆ ಯಶಸ್ಸು ದೊರಕಿದರೆ ಅದರ ಲಾಭವನ್ನು ತಾವು ಪಡೆಯುತ್ತಾರೆ. ಟೀಕೆಗೀಡಾದರೆ ವೈಫಲ್ಯಕ್ಕೆ ಸರ್ಕಾರಿ ನೌಕರರೆಡೆಗೆ ಬೊಟ್ಟು ಮಾಡುತ್ತಾರೆ.

ಹಿಂದೊಮ್ಮೆ ಬ್ರಿಟಿಷ್ ಹಿಡಿತಕ್ಕೊಳಗಾಗಿದ್ದ ಈ ದೇಶದಲ್ಲಿ ಅದರ ಆಡಳಿತಾತ್ಮಕ ಪಳೆಯುಳಿಕೆಯ ಹಲವು ವಿಧಾನಗಳು ಈಗಲೂ ಅನುಸರಿಸಲ್ಪಡುತ್ತಿವೆ. ಏಣಿಶ್ರೇಣಿ ವ್ಯವಸ್ಥೆಯ ವಿವಿಧ ಹಂತಗಳು ಉನ್ನತ ಅಧಿಕಾರಿಗಳ ಪ್ರತಿಷ್ಠೆಯ ಹಂಗುಗಳ ಚೌಕಟ್ಟುಗಳಡಿ ನಲುಗುತ್ತಿವೆ. ರಾಜಕಾರಣಿ ಮತ್ತು ಉನ್ನತ ಹಂತದ ಅಧಿಕಾರಿಗಳ ನಡುವಿನ ಅಸಂಬದ್ಧ ಮೈತ್ರಿಯ ನಡೆಗಳು ಆಡಳಿತವನ್ನು ಸುಧಾರಿಸುವ ಬದಲು ಅದರ ಒಟ್ಟು ಶಕ್ತಿಯನ್ನು ಕಳೆದಿಡುತ್ತಿವೆ.ಸಮಗ್ರ ಒಳಗೊಳ್ಳುವಿಕೆಯ ಕೊರತೆ ಉನ್ನತಾಧಿಕಾರ ಕೇಂದ್ರದ ನಂತರದ ಹಂತಗಳಲ್ಲಿ ಕಾರ್ಯನಿರ್ವಹಿಸುವ ನೌಕರರು ಆದೇಶಗಳನ್ನು ಪಾಲಿಸುವುದಕ್ಕಷ್ಟೇ ಸೀಮಿತವಾಗುಳಿಯುವ ಅನಿವಾರ್ಯತೆ ಎದುರಿಸುತ್ತಾರೆ. ಅವರನ್ನು ಒಳಗೊಳ್ಳುವಂಥ ಆಡಳಿತಾತ್ಮಕ ಕ್ರಮಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಗುತ್ತದೆ. ಒಂದು ವೇಳೆ ಎಲ್ಲ ಹಂತಗಳ ಸರ್ಕಾರಿ ನೌಕರರನ್ನು ಒಳಗೊಳ್ಳುವಂಥ ಆಡಳಿತಾತ್ಮಕ ಪ್ರಕ್ರಿಯೆಯು ಏರ್ಪಟ್ಟಿದ್ದಿದ್ದರೆ ಸರ್ಕಾರದ ಕಾರ್ಯವೈಖರಿ ಖಾಸಗಿ ವಲಯಕ್ಕಿಂತ ಭಿನ್ನ ಎಂದೆನ್ನಿಸಿಕೊಳ್ಳುತ್ತಿತ್ತು. ಆದರೆ, ಹಾಗಾಗಲಿಲ್ಲ. ಆಡಳಿತದ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸುವ ನೌಕರರು ಶೋಷಣೆಗೊಳಗಾಗುತ್ತಲೇ ಹೋದರು. ಸರ್ಕಾರಿ ಇಲಾಖೆಗಳ ಕಾರ್ಯವೈಖರಿ ಅಷ್ಟೇನೂ ಸರಿಯಲ್ಲ ಎಂಬ ಸಾರ್ವತ್ರಿಕ ಅಭಿಪ್ರಾಯ, ಟೀಕೆಗಳಿಗೆ ಗುರಿಯಾಗಬೇಕಾಯಿತು.ಹೀಗಳೆಯುವ ಉಡಾಫೆಯ ವ್ಯಂಗ್ಯಕ್ಕೀಡಾದ ನೌಕರರು ಇಷ್ಟೇ ಅಲ್ಲದೇ, ಪ್ರತಿ ಸಲ ವೇತನ ಹೆಚ್ಚಳದ ವರದಿಗಳು ಮುಖಪುಟದ ಆದ್ಯತೆಯೊಂದಿಗೆ ಪ್ರಕಟವಾದಾಗಲಂತೂ ಇವರಿಗೇಕೆ ಸಂಬಳ ಹೆಚ್ಚಿಸಬೇಕು ಎಂಬ ಸರಳೀಕೃತವಾದ ಪ್ರಶ್ನೆಗಳನ್ನು ಅವರು ಎದುರಿಸುತ್ತಲೇ ಇದ್ದಾರೆ. ವೇತನ ಹೆಚ್ಚಳ ಆಯಾ ಕಾಲದ ಆರ್ಥಿಕ ಅವಶ್ಯಕತೆಗಳಿಗೆ ಅನುಗುಣವಾಗಿ ನಡೆಯುತ್ತದೆ. ಇದು ಅತ್ಯಂತ ಸಹಜವಾದ ಆಡಳಿತಾತ್ಮಕ ಪ್ರಕ್ರಿಯೆ. ಇದು ಸಾಧ್ಯವಾಗುವುದಕ್ಕೂ ನೌಕರರು ಬಹುದಿನಗಳ ಕಾಲ ಕಾಯಬೇಕಾಗುತ್ತದೆ. ಆಡಳಿತದ ಚುಕ್ಕಾಣಿ ಹಿಡಿದವರಿಗೆ ಮತ್ತೆ ಮತ್ತೆ ನೆನಪಿಸಬೇಕಾಗುತ್ತದೆ. ಬೇಡಿಕೆ ಮುಂದಿಡಬೇಕಾಗುತ್ತದೆ. ಸರ್ಕಾರದ ನೇತೃತ್ವ ವಹಿಸಿದವರು ರಾಜಕೀಯ ಲೆಕ್ಕಾಚಾರದೊಂದಿಗೇ ಉನ್ನತಾಧಿಕಾರಿಗಳ ಜೊತೆಗೆ ಚರ್ಚಿಸಿ ವೇತನ ಹೆಚ್ಚಳದ ಘೋಷಣೆ ಮಾಡುತ್ತಾರೆ. ಕೊನೆಗೂ ಸರ್ಕಾರ ಸ್ಪಂದಿಸಿತು ಎಂಬ ಕೃತಾರ್ಥ ಭಾವ ನೌಕರರದ್ದಾಗುತ್ತದೆ. ಆದರೆ, ಇದಕ್ಕೆ ಸಂಬಂಧಿಸಿದ ಸುದ್ದಿ ಪ್ರಚುರವಾದಾಗ ಸರ್ಕಾರಿ ನೌಕರರನ್ನು ಹೀಗಳೆಯುವ ಉಡಾಫೆಯ ವ್ಯಂಗ್ಯದ ತಿವಿತಗಳಿಗೆ ಈಡಾಗಬೇಕಾಗುತ್ತದೆ. ಹೀಗಾಗಿಯೇ ನೌಕರರು ಒಂದು ಬಗೆಯ ಅಸಮಾಧಾನ, ಅತೃಪ್ತಿಯೊಂದಿಗೇ ಕಾರ್ಯನಿರ್ವಹಿಸಬೇಕಾಗುತ್ತದೆ. ಇದು ಇಲಾಖಾವಾರು ಕಾರ್ಯವೈಖರಿಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಅಡಗಿರುವ ಹತ್ತುಹಲವು ಲೋಪದೋಷಗಳು.
ಅತಾರ್ಕಿಕ ಟೀಕೆಗಳು
ಈ ಹಂತದಲ್ಲಿಯೇ ಸರ್ಕಾರಿ ಕೆಲಸ ಮತ್ತು ಸರ್ಕಾರಿ ನೌಕರರು ಸರಳೀಕೃತವಾದ, ಅತಾರ್ಕಿಕ ಟೀಕೆಗಳಿಗೆ ತುತ್ತಾಗಬೇಕಾಯಿತು. ಕ್ಲೀಷೆ ಎನ್ನಿಸುವಷ್ಟರ ಮಟ್ಟಿಗೆ ಟೀಕೆಗೆ ಒಳಗಾದ, ವ್ಯಂಗ್ಯಕ್ಕೆ ತುತ್ತಾದ ಒಂದು ಜನಜನಿತ ಉಲ್ಲೇಖವೆಂದರೆ ‘ಸರ್ಕಾರಿ ಕೆಲಸ ದೇವರ ಕೆಲಸ’. ಇದನ್ನು ತಪ್ಪಾಗಿ ಅರ್ಥೈಸಲಾಗಿದೆ. ತಪ್ಪಾಗಿ ಗ್ರಹಿಸಲಾಗಿದೆ. ಸರ್ಕಾರದ ಕೆಲಸ ದೇವರದ್ದಾಗಿರುವುದರಿಂದ ಮನುಷ್ಯರಿಗೆ ಅಲ್ಲಿ ನಿರ್ವಹಿಸಲು ಕೆಲಸವೇ ಇರುವುದಿಲ್ಲ, ಹಾಗಾಗಿಯೇ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ನಿರೀಕ್ಷಿತ ರೀತಿಯಲ್ಲಿ ಕೆಲಸಗಳಾಗುವುದಿಲ್ಲ ಎಂಬ ಉಲ್ಲೇಖಗಳು ವ್ಯಂಗ್ಯಾತ್ಮಕವಾಗಿಯೇ ವ್ಯಕ್ತವಾಗುತ್ತವೆ.

ಈ ಉಲ್ಲೇಖವನ್ನು ಹೀಗೆ ತಪ್ಪಾಗಿ ಅರ್ಥೈಸಿಕೊಳ್ಳುವುದಕ್ಕಿಂತ ಅದರ ಹಿಂದಿನ ಉದ್ದೇಶವನ್ನು ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ. ನೌಕರರೊಳಗೆ ನೈತಿಕ ಶ್ರದ್ಧೆಯನ್ನು ರೂಪಿಸುವ ಒತ್ತಾಸೆಯೊಂದಿಗೆ ಸರ್ಕಾರದ ಕೆಲಸವನ್ನು ದೇವರ ಕೆಲಸಕ್ಕೆ ಹೋಲಿಸಿ ವ್ಯಾಖ್ಯಾನಿಸಿರಬಹುದು. ದೇವರ ಕೆಲಸವೆಂದರೆ ನೌಕರರೊಳಗೆ ಶ್ರದ್ಧೆ ಹುಟ್ಟಿಕೊಳ್ಳುತ್ತದೆ ಎಂಬ ನಿರೀಕ್ಷೆಯಲ್ಲಿ ಅಂಥದ್ದೊಂದು ವ್ಯಾಖ್ಯಾನ ಹುಟ್ಟಿಕೊಂಡಿರಬಹುದು. ಆದರೆ, ಹಾಗಾಗಲಿಲ್ಲ. ಬದಲಾಗಿ ಸರ್ಕಾರಿ ನೌಕರರು ಕೆಲಸ ಮಾಡದೇ ಇದ್ದರೂ ನಡೆಯುತ್ತದೆ ಎಂಬ ಮನೋಭಾವದೊಂದಿಗೆ ಈ ಉದ್ಧರಣ ತಳುಕುಹಾಕಿಕೊಂಡಿತು. ಈ ಉದ್ಧರಣಕ್ಕಿಂತ ಮುಖ್ಯವೆನ್ನಿಸುವ ಉದಾತ್ತವಾದುದು ‘ಕಾಯಕವೇ ಕೈಲಾಸ’ ಪರಿಕಲ್ಪನೆ. ನಿರ್ವಹಿಸಬೇಕಾದ ಕೆಲಸವನ್ನು ಕೈಲಾಸಕ್ಕೆ ಸಮೀಕರಿಸಿ ನೋಡುವ ಈ ದೃಷ್ಟಿಕೋನವನ್ನು ಆಧರಿಸಿ ಸರ್ಕಾರಿ ಆಡಳಿತ ಮರುರೂಪುಗೊಂಡರೆ ಬೆಳವಣಿಗೆಯ ಪ್ರಕ್ರಿಯೆಗೆ ಹೊಸ ಆಯಾಮ ದೊರಕುತ್ತದೆ.
ಸೀಮಿತ ಗ್ರಹಿಕೆಯ ಮಿತಿಗಳು
ಭಾರತದಲ್ಲಿ ಸಾರ್ವಜನಿಕ ಆಡಳಿತದ ಪರಿಕಲ್ಪನೆಯು ಚಲನೆಯ ಸಂಕೇತವಾಗಿ ಚಾಲ್ತಿಗೆ ಬರಲೇ ಇಲ್ಲ. ಅದು ಕೇವಲ ಸರ್ಕಾರದ ಕೆಲಸ ಎಂಬರ್ಥದ ಸೀಮಿತ ಗ್ರಹಿಕೆಯೇ ಆದ್ಯತೆ ಪಡೆದು ಉನ್ನತ ಹಂತದ ನಾಯಕರೆನ್ನಿಸಿಕೊಂಡವರು ಅದಕ್ಕನುಗುಣವಾಗಿಯೇ ಆಡಳಿತವನ್ನು ವ್ಯಾಖ್ಯಾನಿಸಿಕೊಂಡರು. ಬದಲಾವಣೆ, ಬೆಳವಣಿಗೆ, ಪ್ರಗತಿ, ಅಭಿವೃದ್ಧಿ ಎಂಬ ಪದಗಳೊಂದಿಗೆ ಆಡಳಿತವನ್ನು ಜೋಡಿಸಿ ಮಾತನಾಡುವ ಜಾಣ್ಮೆಯನ್ನು ರೂಢಿಸಿಕೊಂಡರೇ ಹೊರತು ಅದನ್ನು ದೇಶ ಮತ್ತು ಜನತೆಯ ಉಜ್ವಲ ಭವಿಷ್ಯವನ್ನು ಸಾಧ್ಯವಾಗಿಸುವ ಸಂಕಲ್ಪಕ್ಕೆ ಸಂಯೋಜಿಸುವುದರ ಕಡೆಗೆ ಗಮನವನ್ನೇ ಹರಿಸಲಿಲ್ಲ. ಪ್ರಧಾನಿ ಮತ್ತು ಮುಖ್ಯಮಂತ್ರಿ ಹುದ್ದೆಗಳನ್ನು ಅಲಂಕರಿಸಿದ ಕೆಲವರು ಈ ಕುರಿತು ಯೋಚಿಸಿ ಯೋಜಿಸಿದರೂ ಆಡಳಿತಾತ್ಮಕ ಕಾರ್ಯಾನುಷ್ಠಾನ ಸಾಧ್ಯವಾಗಲಿಲ್ಲ. ಭಿನ್ನವಾಗಿ ಯೋಚಿಸುವ ನಾಯಕರು ಉನ್ನತ ಹುದ್ದೆಗಳನ್ನು ಅಲಂಕರಿಸಿದಾಗಲೂ ಇದೇ ಸಮಸ್ಯೆ ಮುಂದುವರೆಯಿತು. ಹೀಗೆ ಆಲೋಚಿಸುವ ನಾಯಕರಿದ್ದಾಗ ಉನ್ನತ ಹಂತಗಳ ಅಧಿಕಾರಿವರ್ಗ ಹಾಗೆ ಯೋಚಿಸಲಿಲ್ಲ. ಹಾಗೆ ಯೋಚಿಸುವ ಅಧಿಕಾರಿ ವರ್ಗ ಉನ್ನತ ಹಂತಗಳಲಿದ್ದಾಗ ಸ್ಪಂದಿಸುವ ಗುಣದ ದಾರ್ಶನಿಕ ನಾಯಕತ್ವದ ಕೊರತೆ ಕಾಡಿತು.
ಅಗಾಧ ಶ್ರಮದ ಅಪವ್ಯಯ
ಇಂಥ ಸಂಕೀರ್ಣತೆಯ ಮಧ್ಯೆಯೇ ಸರ್ಕಾರಿ ನೌಕರರು ಕಾರ್ಯನಿರ್ವಹಿಸಬೇಕಾಯಿತು. ಜನಹಿತದ ಪ್ರಶ್ನೆಗಳನ್ನು ಕಾಡಿಸಿಕೊಂಡು ಕಾರ್ಯನಿರ್ವಹಿಸುವ ಸಾಮೂಹಿಕ ಹೊಣೆಗಾರಿಕೆಯ ಪ್ರಜ್ಞೆ ಇದ್ದರೂ ಅದು ಪ್ರಯೋಗಕ್ಕೊಳಪಡಲಿಲ್ಲ.ಪ್ರಯೋಗಕ್ಕೊಳಪಡದಂತೆ ಅಡತಡೆಗಳನ್ನು ಉಂಟುಮಾಡುವ ಸಂಕುಚಿತ ರಾಜಕಾರಣ ಚಿಗುರೊಡೆಯಿತು. ಅದನ್ನು ರಾಜಕೀಯ ಪಕ್ಷಗಳು ಅತ್ಯಂತ ಚಾಣಾಕ್ಷಯುತವಾಗಿ ಪೋಷಿಸಿದವು. ನೌಕರರ ಅಗಾಧ ಶ್ರಮದ ಅಪವ್ಯಯ ಇಲ್ಲಿಂದಲೇ ಆರಂಭವಾಯಿತು. ನಾವಿನ್ನೂ ಜನರನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿಸುವುದರ ಕಡೆಗೇ ಶ್ರಮವನ್ನು ವ್ಯಯಿಸುತ್ತಿದ್ದೇವೆ ಎಂಬ ಟೀಕೆ ತಾರ್ಕಿಕವೆನ್ನಿಸತೊಡಗಿತು. ಇದನ್ನು ಅಲ್ಲಗಳೆಯುವ ಆಡಳಿತಾತ್ಮಕ ದಿಟ್ಟಹೆಜ್ಜೆಗಳು ನಾಯಕರೆನ್ನಿಸಿಕೊಂಡವರಿಂದಾಗಲೀ, ಕಾರ್ಯಾಂಗದ ರಚನಾತ್ಮಕತೆಯನ್ನು ವಿಸ್ತರಿಸುವ ಹೊಣೆಗಾರಿಕೆಯುಳ್ಳ ಉನ್ನತ ಹಂತದ ಅಧಿಕಾರಿ ವರ್ಗದಿಂದಾಗಲೀ ವ್ಯಕ್ತವಾಗಲಿಲ್ಲ. ರಾಜಕಾರಣಿಗಳ ಅಪ್ರಬುದ್ಧತೆ ಆಡಳಿತವನ್ನು ಸಡಿಲಗೊಳಿಸಿತು. ಉನ್ನತಾಧಿಕಾರಿ ವರ್ಗದ್ದು ಕೇವಲ ಮೂಕಪ್ರೇಕ್ಷಕ ಪಾತ್ರವಾಯಿತು. ಆಡಳಿತದ ಅನುಕೂಲಕ್ಕಾಗಿ ರೂಪುಗೊಂಡಿದ್ದ ಏಣಿಶ್ರೇಣಿ ವ್ಯವಸ್ಥೆ ಪ್ರತಿಷ್ಠೆಯ ಚೌಕಟ್ಟಿನೊಳಗೆ ಬಂಧಿಯಾಯಿತು. ದರ್ಪ, ದರ್ಬಾರು, ನಿಂದನೆ, ಕಿರುಕುಳ ಮತ್ತು ಶೋಷಣೆಗಳ ನಡುವೆ ಕೆಲಸ ಮಾಡುವ ಅನಿವಾರ್ಯತೆ ನಂತರದ ಆಡಳಿತಾತ್ಮಕ ಹಂತಗಳ ನೌಕರರಿಗೆ ಎದುರಾಯಿತು.

ಆಕ್ರಾಮಕ ನೀತಿಗಳ ಸವಾರಿ ಸರ್ಕಾರಿ ನೌಕರರು ಮತ್ತು ಅವರ ನೌಕರಿಯನ್ನು ಅಪವ್ಯಾಖ್ಯಾನಿಸಿ ಅವರ ಅಸ್ತಿತ್ವವನ್ನು ನಗಣ್ಯವಾಗಿಸಿ ಅಪವ್ಯಾಖ್ಯಾನಕ್ಕೆ ಒಳಪಡಿಸುವ ಹುನ್ನಾರ ರಾಜಕಾರಣ ಮತ್ತು ಆಡಳಿತಾತ್ಮಕ ಉನ್ನತ ಹಂತಗಳಿಂದಲೇ ಶುರುವಾಯಿತು. ಈ ಅಪವ್ಯಾಖ್ಯಾನ ಸರ್ಕಾರಿ ವಲಯವನ್ನು ನೆಗೆಟಿವ್ ಆಗಿ ನೋಡುವುದಕ್ಕೆ ಪ್ರಚೋದಿಸಿತು. ಆಡಳಿತವನ್ನು ಯಂತ್ರವನ್ನಾಗಿ ತಪ್ಪಾಗಿ ಬಿಂಬಿಸಿತು. ನೌಕರರನ್ನು ದುಡಿಯುವ ಯಂತ್ರಗಳನ್ನಾಗಿ ನೋಡುವ ವಿಚಿತ್ರ ವಾತಾವರಣ ಸೃಷ್ಟಿಯಾಯಿತು. ನೌಕರರು ಯಂತ್ರಗಳಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳುವ ಹೊತ್ತಿಗೆ ಕಾಲ ಮಿಂಚಿತ್ತು. ತೊಂಭತ್ತರ ದಶಕದ ಆಕ್ರಾಮಕ ನೀತಿಗಳ ಸವಾರಿ ಆರಂಭವಾಗಿತ್ತು. ಬೃಹತ್ ಕಂಪನಿಗಳ ವಾಣಿಜ್ಯಿಕ ಕೌಶಲ್ಯಗಳು ಶ್ರೇಷ್ಠ ಎಂದೆನ್ನಿಸಿ ನಮ್ಮದೇ ಸರ್ಕಾರದ ವಿವಿಧ ಹಂತಗಳು ಪೇಲವ ಎನ್ನಿಸತೊಡಗಿದವು. ಇಡೀ ಸಾರ್ವಜನಿಕ ಆಡಳಿತ ಟೊಳ್ಳು ಎಂಬ ಭಾವನೆಯನ್ನು ಉದ್ದೇಶಪೂರ್ವಕವಾಗಿ ಬಿತ್ತಲಾಯಿತು.
ಆದ್ಯತಾವಲಯಗಳೆಡೆಗೆ ನಿರ್ಲಕ್ಷ್ಯ
ಆದರೆ, ಸ್ವಾತಂತ್ರ್ಯಾನಂತರ ಇಡೀ ದೇಶ ಆಡಳಿತಾತ್ಮಕವಾಗಿ ಮಹತ್ವದ್ದನ್ನು ಸಾಧಿಸಬೇಕಾಗಿತ್ತು. ಆಡಳಿತವನ್ನು ಸಂಪನ್ಮೂಲ ಕೇಂದ್ರವಾಗಿಸುವ ದಾರ್ಶನಿಕತೆಯ ವ್ಯಕ್ತವಾಗಬೇಕಾಗಿತ್ತು. ಅಂಥ ದಾರ್ಶನಿಕತೆಯನ್ನು ನಿರೂಪಿಸುವ ನಾಯಕರ ಸಂಖ್ಯೆ ಹೆಚ್ಚಾಗಬೇಕಾಗಿತ್ತು. ನೌಕರರನ್ನು ಮಕ್ಕಳಂತೆ ನೋಡುವ ತಾಯಿಯ ಅಂತಃಕರಣ ಉನ್ನತ ಹಂತದ ನಾಯಕತ್ವ ಮತ್ತು ಅತ್ಯುನ್ನತ ಹಂತದ ಅಧಿಕಾರ ವಲಯದಿಂದ ಅಭಿವ್ಯಕ್ತಗೊಳ್ಳಬೇಕಿತ್ತು. ಅಂಥ ಉದಾತ್ತತೆಯ ಬದಲು ಆಡಳಿತ ಸುಧಾರಣೆಯ ನೆಪದಲ್ಲಿ ನೌಕರರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಲಾಯಿತು. ಪ್ರಯೋಜನವಾದಿ ವಾಣಿಜ್ಯಿಕ ಲಾಭದ ಉದ್ಯಮದ ವ್ಯಾಪ್ತಿಗೆ ಸರ್ಕಾರಿ ವ್ಯವಸ್ಥೆಯನ್ನು ತರಲಾಯಿತು. ನೌಕರರ ಸಂಖ್ಯೆ ತಗ್ಗಿಸುವ ಯೋಚನೆ, ಪಿಂಚಣಿ ಸೌಲಭ್ಯ ನಿರಾಕರಣೆ, ಖಾಸಗಿಯವರೊಂದಿಗೆ ಗುರುತಿಸಿಕೊಳ್ಳುವ ಪ್ರಯೋಜನವಾದಿ ಹಂಬಲ, ನೇಮಕಾತಿ, ಬಡ್ತಿ ಮತ್ತಿತರ ಸಂಗತಿಗಳಿಗೆ ಸಂಬಂಧಿಸಿದಂತೆ ಬಿಕ್ಕಟ್ಟುಗಳು ನಿರಂತರವಾದವು. ಈ ಬಿಕ್ಕಟ್ಟುಗಳು ಬಿಗಡಾಯಿಸಿದಾಗ ಯಥಾಸ್ಥಿತಿವಾದದ ಹ್ಯಾಂಗ್ ಓವರ್‍ಗೆ ಆಡಳಿತ ಮತ್ತು ನಾಯಕತ್ವ ಈಡಾಗಬೇಕಾಯಿತು. ಸಾಮಾಜಿಕತೆ, ಶಿಕ್ಷಣ, ಆರೋಗ್ಯ, ಮಾನವ ಸಂಪನ್ಮೂಲ ಸೇರಿದಂತೆ ಮಹತ್ವದ ಆದ್ಯತಾ ವಲಯಗಳು ನಿರ್ಲಕ್ಷ್ಯಕ್ಕೆ ತುತ್ತಾದವು.

ಆಶಾವಾದದ ಮಾರ್ಗ ಹಾಗಾದರೆ, ಸರ್ಕಾರಿ ನೌಕರರೂ ಸೇರಿದಂತೆ ವಿವಿಧ ವಲಯಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರೋಪಾಯಗಳೇ ಇಲ್ಲವೇ? ಹಾಗೆ ನಿರಾಸೆಗೊಳ್ಳಬೇಕಿಲ್ಲ. ಬಲದಾವಣೆಯು ಮೇಲುಹಂತದಿಂದ ಕೆಳಹಂತದವರೆಗೆ ಪ್ರವಹಿಸುವಂಥ ಪ್ರಕ್ರಿಯೆ ತೀವ್ರಗೊಳ್ಳಬೇಕು. ರಾಜಕಾರಣಿಗಳು ದಾರ್ಶನಿಕ ನಾಯಕರಾಗಿ ಮಾರ್ಪಾಡಾಗಬೇಕು. ವಿವಿಧ ವಲಯಗಳನ್ನು ಪ್ರತಿನಿಧಿಸಿ ಮಹತ್ವದ್ದನ್ನು ಸಾಧಿಸುವಂಥ ಮಹತ್ವಾಕಾಂಕ್ಷೆಯೊಂದಿಗೆ ರಾಜಕಾರಣವನ್ನು ಜನಮುಖಿಯಾಗಿಸಬೇಕು. ಕಾರ್ಯಾಂಗದ ಚಲನಶೀಲತೆಯನ್ನು ತೀವ್ರಗೊಳಿಸುವ ಸಂಕಲ್ಪದೊಂದಿಗೆ ಶಾಸಕಾಂಗ ಹೆಜ್ಜೆಯಿರಿಸಬೇಕು. ಆ ಮೂಲಕ ತನ್ನ ಶಕ್ತಿಯನ್ನು ಮರುರೂಪಿಸಿಕೊಳ್ಳಬೇಕು. ಅಂಥ ಶಕ್ತಿಯನ್ನು ವಿಸ್ತರಿಸಲು ಸಾಧ್ಯವಾಗಿಸುವಂತೆ ಸಾರ್ವಜನಿಕ ಆಡಳಿತಾಂಗವನ್ನು ಪ್ರತಿನಿಧಿಸುವ ಉನ್ನತ ಮತ್ತು ತದನಂತರದ ಹಂತಗಳ ಅಧಿಕಾರಿಗಳು ನೋಡಿಕೊಳ್ಳಬೇಕು. ಸರ್ಕಾರಿ ನೌಕರರರ ಸಂಪನ್ಮೂಲ ಸಾಮಥ್ರ್ಯವನ್ನು ವಿಸ್ತರಿಸಬೇಕು. ಅವರ ಹಿತಾಸಕ್ತಿಗಳನ್ನು ರಕ್ಷಿಸುತ್ತಲೇ ಸಾರ್ವಜನಿಕ ಆಡಳಿತವನ್ನು ಪುನಃಶ್ಚೇತನಗೊಳಿಸಿ ಪ್ರಜಾಪ್ರಭುತ್ವದ ಸದಾಶಯಗಳ ಸಾಕಾರಕ್ಕೆ ಶ್ರಮಿಸಬೇಕು. ಆ ಮೂಲಕ ಸಾರ್ವಜನಿಕ ವಲಯದ ಅಸ್ತಿತ್ವವನ್ನು ಉಳಿಸಿಕೊಂಡು ಅಪ್ಪಟ ದೇಶಿ ಪ್ರಜ್ಞೆಯ ಆಧಾರದಲ್ಲಿ ಭಾರತದ ಭವಿಷ್ಯವನ್ನು ಉಜ್ವಲಗೊಳಿಸುವ ನಡೆಗಳು ಪುನರಾವರ್ತಿತವಾಗಬೇಕು.

                                        -ಡಾ.ಎನ್.ಕೆ.ಪದ್ಮನಾಭ

ದಿನದ ಸುದ್ದಿ

ಬೆಂಬಲ ಬೆಲೆ | ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪ್ರಾರಂಭ: ಡಿಸಿ ಗಂಗಾಧರಸ್ವಾಮಿ

Published

on

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಮೆಕ್ಕೆಜೋಳವನ್ನು ಬುಧುವಾರದಿಂದ ರೈತರಿಂದ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ರವರು ತಿಳಿಸಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮೆಕ್ಕೆಜೋಳ ಖರೀದಿ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರತಿ ರೈತರಿಂದ ಎಕರೆಗೆ 12 ಕ್ವಿಂಟಾಲ್ ಹಾಗೂ ಗರಿಷ್ಠ 50 ಕ್ವಿಂಟಾಲ್‌ನಂತೆ ಮೆಕ್ಕೆಜೋಳ ಉತ್ಪನ್ನವನ್ನು ಬೆಂಬಲ ಬೆಲೆ ದರ ಪ್ರತಿ ಕ್ವಿಂಟಾಲ್‌ಗೆ ರೂ.2400.00 ರಂತೆ ಖರೀದಿಸಲಾಗುವುದು. ಮೆಕ್ಕೆಜೋಳ ಖರೀದಿದಾರರು ಡಿಸ್ಟಿಲರಿ ಮಾಲೀಕರಿಂದ ಮಾರಾಟದ ಮೊತ್ತ ಪಡೆದ ದಿನಾಂಕದಿಂದ ಮೂರು ದಿನಗಳಲ್ಲಿ ಸಂಬಂಧಪಟ್ಟ ರೈತರಿಗೆ ಡಿಬಿಟಿ ಮೂಲಕ ಪಾವತಿಸಲಾಗುವುದು. ಖರೀದಿ ಪ್ರಕ್ರಿಯೆಗೆ ಎನ್‌ಇಎಂಎಲ್ (NEML) ಸಂಸ್ಥೆಯ ತಂತ್ರಾಂಶ ಅಳವಡಿಸಿಕೊಂಡು ಸರ್ಕಾರದ ಪ್ರೂಟ್ಸ್ ಪೊರ್ಟಲ್(FRUITS Portal) ಮತ್ತು ಡಿಬಿಟಿ ಸಂಯೋಜನೆಯೊಂದಿಗೆ ರೈತರ ನೊಂದಣಿ ಕಾರ್ಯ ನಿರ್ವಹಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸುವಂತೆ ತಿಳಿಸಿದರು.

ಜಿಲ್ಲೆಯಲ್ಲಿ 730 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಲು ಗುರಿಯನ್ನು ಹೊಂದಲಾಗಿದೆ. ರೈತರು ಮೆಕ್ಕೆಜೋಳ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿ ಇದರ ಪ್ರಯೋಜನೆ ಪಡೆದುಕೊಳ್ಳುವಂತೆ ತಿಳಿಸಿದರು. ಸಹಕಾರ ಇಲಾಖೆ ಮತ್ತು ಎಪಿಎಂಸಿ ಅಧಿಕಾರಿಗಳು ಮೆಕ್ಕೆಜೋಳ ಖರೀದಿ ಕುರಿತು ಮಾಹಿತಿಯುಳ್ಳ ಕರಪತ್ರಗಳನ್ನು ಮುದ್ರಿಸಿ ರೈತರಿಗೆ ನೀಡಬೇಕು. ಮೆಕ್ಕೆಜೋಳ ಖರೀದಿಯಲ್ಲಿ ಯಾವುದೇ ಗೊಂದಲ ಆಗದಂತೆ ಅಧಿಕಾರಿಗಳು ಕ್ರಮವಹಿಸುವಂತೆ ತಿಳಿಸಿದರು.

ಸಭೆಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಧುಸೂಧನ್, ಸಹಕಾರ ಇಲಾಖೆ ಉಪನಿಬಂಧಕ ಮಧು ಶ್ರೀನಿವಾಸ್, ಅಬಕಾರಿ ಇಲಾಖೆಯ ಉಪ ಆಯುಕ್ತ ಜುನೈದ್ , ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಜಿಯಾವುಲ್ಲಾ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ರಾಘವೇಂದ್ರ ಪ್ರಸಾದ್ ಹಾಗೂ ಇತರರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ

Published

on

ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.

ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.

ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.

ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.

ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.

ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು‌.”

  • ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
  • ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ:2023-24ನೇ ಸಾಲಿನಲ್ಲಿ ಚನ್ನಗಿರಿ ತಾಲ್ಲೂಕಿನಲ್ಲಿ ಬರುವ ಸಮಸ್ಯಾತ್ಮಕ ಗ್ರಾಮಗಳಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರ ತನಿಖೆಗೆ ಒಳಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿ 5 ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ ದಾವಣಗೆರೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಗಿತ್ತೆ ಮಾಧವ್ ವಿಠ್ಠಲ್ ರಾವ್, ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳೇಶ್ ತಿಳಿಸಿದ್ದಾರೆ.

ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ದಾವಣಗೆರೆ ಇಲ್ಲಿಗೆ 2023-24ನೇ ಸಾಲಿನಲ್ಲಿ ಉಂಟಾದ ಮಳೆಯ ಅಭಾವ ಮತ್ತು ಬರದ ಕಾರಣದಿಂದ ಕೋಟ್ಯಾಂತರ ರೂಪಾಯಿಗಳನ್ನು ಕುಡಿಯುವ ನೀರಿಗಾಗಿ ಸರ್ಕಾರ ಬಿಡುಗಡೆ ಮಾಡಿರುತ್ತದೆ. ಆದರೆ ಕೆಲವು ಅಧಿಕಾರಿಗಳು ತುರ್ತು ಕುಡಿಯುವ ನೀರಿನ ಅನುದಾನವನ್ನು ದುರುಪಯೋಗಪಡಿಸಿಕೊಂಡ ಮಾಹಿತಿ ತಿಳಿದು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಉಪ ವಿಭಾಗ, ಚನ್ನಗಿರಿ ಇವರಿಂದ ಮಾಹಿತಿಹಕ್ಕು ಅಡಿಯಲ್ಲಿ ದಾಖಲೆ ಪಡೆಯಲಾಗಿದೆ.

ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಸಾಕಷ್ಟು ಅವ್ಯವಹಾರ ನಡೆದಿರುವುದು ಕಂಡುಬಂದ ಕಾರಣ ಸೂಕ್ತ ದಾಖಲೆಗಳೊಂದಿಗೆ ದಿನಾಂಕ: 05-07-2025 ರಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ, ದಾವಣಗೆರೆ ಇವರಿಗೆ ದೂರು ನೀಡಿ, ತನಿಖೆಗೆ ಒಳಪಡಿಸುವಂತೆ ಕೋರಿದ್ದರು. ದೂರು ನೀಡಿ 3 ತಿಂಗಳು ಕಳೆದರೂ ದೂರು ಅರ್ಜಿಗೆ ಸಂಬಂಧಿಸಿದಂತೆ ತನಿಖೆಯನ್ನು ಕೈಗೊಂಡ ಬಗ್ಗೆ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ದಿನಾಂಕ: 29-10-2025 ರಂದು ಜ್ಞಾಪನವನ್ನು ಸಹ ನೀಡಲಾಗಿತ್ತು.

ಆದರೆ ನಾವು ಜ್ಞಾಪನ ನೀಡಿ ಒಂದು ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ ದಾವಣಗೆರೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಗಿತ್ತೆ ಮಾಧವ್ ವಿಠ್ಠಲ್ ರಾವ್ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ವಕೀಲ ಡಾ.ಕೆ.ಎ.ಓಬಳೇಶ್ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ12 hours ago

ಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ

ಸುದ್ದಿದಿನ,ದಾವಣಗೆರೆ: ಪ್ರಸಕ್ತ ಸಾಲಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ, ಚೇತನಾ, ಧನಶ್ರೀ, ಲಿಂಗತ್ವ ಅಲ್ಪ ಸಂಖ್ಯಾತರ ಪುನರ್ವಸತಿ ಯೋಜನೆ ಹಾಗೂ ಮಾಜಿ ದೇವದಾಸಿ ಮಹಿಳೆಯರ...

ದಿನದ ಸುದ್ದಿ19 hours ago

ಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಸೌಲಭ್ಯ

ಸುದ್ದಿದಿನ,ದಾವಣಗೆರೆ:ಭಾರತೀಯ ಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಹೊಸ ಸೌಲಭ್ಯವನ್ನು ಆಯೋಜಿಸಲಾಗಿದೆ. ಈ ಸೌಲಭ್ಯದಿಂದ ನಾಗರಿಕರು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ಸ್ಪೀಡ್ ಪೊಸ್ಟ್ , ಪಾರ್ಸಲ್...

ದಿನದ ಸುದ್ದಿ2 days ago

ಪತ್ರಿಕೋದ್ಯಮ ಪದವೀಧರರಿಗೆ ಸಿಹಿ ಸುದ್ದಿ | ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ತರಬೇತಿ ; ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ದಾವಣಗೆರೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಪತ್ರಿಕೋದ್ಯಮ ಪದವೀಧರರಿಗೆ ಮಾಧ್ಯಮ ಕ್ಷೇತ್ರದಲ್ಲಿ ಮತ್ತು ಮಾಧ್ಯಮ ಚಟುವಟಿಕೆಗಳ...

ದಿನದ ಸುದ್ದಿ3 days ago

ಬೆಂಬಲ ಬೆಲೆ | ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪ್ರಾರಂಭ: ಡಿಸಿ ಗಂಗಾಧರಸ್ವಾಮಿ

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಮೆಕ್ಕೆಜೋಳವನ್ನು ಬುಧುವಾರದಿಂದ ರೈತರಿಂದ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ರವರು ತಿಳಿಸಿದರು. ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ...

ದಿನದ ಸುದ್ದಿ4 days ago

ಯಮ ಸ್ವರೂಪಿ ಗ್ಯಾಸ್ ಗೀಸರ್ ಬಳಸೋ ಮುನ್ನ ಎಚ್ಚರ ; ಇವಿಷ್ಟನ್ನು ಪಾಲಿಸಿ ಅಪಾಯ ತಡೆಗಟ್ಟಿ

~ಅನಿರೀಕ್ಷಿತ್ ನಾರಾಯಣ ಕೆಲ ಮುನ್ನೆಚ್ಚರಿಕೆಯ ಅಂಶಗಳನ್ನು ಪಾಲಿಸುವುದರಿಂದ ಗ್ಯಾಸ್ ಗೀಸರ್ ನಿಂದ ಆಗುವ ಅಪಾಯವನ್ನು ತಡೆಗಟ್ಟಬಹುದು. 1. ಮೊದಲಿಗೆ ಇದು ಎಲ್ಲರಿಗೂ ಗೊತ್ತಿರುವ ವಿಷಯ. ಗ್ಯಾಸ್ ಗೀಸರ್...

ದಿನದ ಸುದ್ದಿ7 days ago

ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ

ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು....

ದಿನದ ಸುದ್ದಿ7 days ago

ದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ

ಸುದ್ದಿದಿನ,ದಾವಣಗೆರೆ:ನಗರದ ಜಯದೇವ ವೃತ್ತದಲ್ಲಿರುವ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಗುರುವಾರ (ಡಿಸೆಂಬರ್.4) ಕನ್ನಡ ಚಳವಳಿಯ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಟಿ...

ದಿನದ ಸುದ್ದಿ1 week ago

ದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಮಿಸುತ್ತಿರುವ ಅರ್ಹ ಸಂಘ, ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳನ್ನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ...

ದಿನದ ಸುದ್ದಿ1 week ago

ದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು

ಸುದ್ದಿದಿನ,ದಾವಣಗೆರೆ:2023-24ನೇ ಸಾಲಿನಲ್ಲಿ ಚನ್ನಗಿರಿ ತಾಲ್ಲೂಕಿನಲ್ಲಿ ಬರುವ ಸಮಸ್ಯಾತ್ಮಕ ಗ್ರಾಮಗಳಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರ ತನಿಖೆಗೆ ಒಳಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿ 5 ತಿಂಗಳು...

ದಿನದ ಸುದ್ದಿ1 week ago

ಜಿಎಂ ವಿಶ್ವವಿದ್ಯಾಲಯ ರಂಗೋತ್ಸವ -2025 | ವಿದ್ಯಾರ್ಥಿಗಳ ಪ್ರತಿಭೆ ಅನಾವರಣ : ಸ್ಪರ್ಧೆಯಲ್ಲಿ ರಂಗ ಪ್ರೇಮ, ನಟನಾ ಚತುರತೆ ಬೆರಗು

ಸುದ್ದಿದಿನ,ದಾವಣಗೆರೆ:ನಗರದ ಜಿಎಂ ವಿಶ್ವವಿದ್ಯಾನಿಲಯದ ಜಿಎಂ ಹಾಲಮ್ಮ ಸಭಾಂಗಣದಲ್ಲಿ 1.12 2025 ರಂದು ರಂಗೋತ್ಸವ -2025 ರ ಅಂತಿಮ ಸುತ್ತು ಗ್ರ್ಯಾಂಡ್ ಫಿನಾಲೆಯನ್ನು ಏರ್ಪಡಿಸಲಾಗಿತ್ತು. ಜಿಎಂ ವಿಶ್ವವಿದ್ಯಾಲಯದ ಎಲ್ಲಾ...

Trending