ಲೈಫ್ ಸ್ಟೈಲ್
ಪ್ರವಾಸ ಕಥನ | ಗೋಕಾಕ್ ನಲ್ಲೊಂದು ಸುತ್ತು..!
Õಪ್ರವಾಸ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಮಗುವಿನಿಂದ ಹಿಡಿದು ಮುದುಕರವರೆಗೆ ಎಲ್ಲರೂ ಪ್ರವಾಸವನ್ನು ಆನಂದಿಸುವವರೇ ಹೆಚ್ಚು. ಅದರಲ್ಲೂ ನಾನು ಒಬ್ಳು ಪ್ರವಾಸ ಪ್ರೇಮಿ. ಪ್ರವಾಸ ಕಥನಗಳೆಂದರೆ ಅಚ್ಚುಮೆಚ್ಚು. ಹಾಗಂತ ನಾ ಏನು ಹೆಚ್ಚು ಪ್ರವಾಸ ಮಾಡಿಲ್ಲ. ನನಗೆ ಪ್ರಕೃತಿಯ ಸೊಬಗು ಹಾಗೂ ಹಳ್ಳಿಯ ಸೊಬಗನ್ನು ಸಂಪೂರ್ಣವಾಗಿ ಅನುಭವಿಸ್ಬೇಕು ಎಂಬ ಮಹಾದಾಸೆ. ನಾ ಹೋಗುವ ಪ್ರವಾಸಕ್ಕೆ ಇಂಥದ್ದೇ ಜಾಗವಾಗಬೇಕು ಎಂಬ ಅಭಿಲಾಶೆ ಏನಿಲ್ಲ. ಬಂಧುಗಳ ಮನೆಗಳನ್ನ ಹೊರತು ಪಡಿಸಿ ಕಾಡಿನ ಬುಡಕಟ್ಟು ಜನಾಂಗ, ಶೋಷಿತರ, ದಲಿತರ ಮನೆಗಳಿಗೆ ಹೋಗಿ ಅವರ ಜೀವನವನ್ನು ಗಮನಿಸುವುದರಲ್ಲಿ ನನಗದು ಹೆಚ್ಚು ಖುಷಿ.
ಆದರೆ ನಗರ ವಾಸಿಯಾದ ನನಗೆ ಹಳ್ಳಿಯ ಸೊಬಗನಾಗಲಿ ಪ್ರಕೃತಿಯ ಸೊಬಗನ್ನಾಗಲಿ ಅನುಭವಿಸುವುದಕ್ಕೆ ಅವಕಾಶಗಳು ದೊರೆಯಲೇ ಇಲ್ಲ. ಪುಸ್ತಕ ಪ್ರೇಮಿಯಾದ ನನಗೆ ಹಳ್ಳಿಯ ವಾತಾವರಣ, ಬಡವರ ಬವಣೆ, ಶೋಷಿತರ ಜೀವನದ ಕುರಿತ ಕಲ್ಪನೆಗಳು ನನಗಿವೆ. ಹೀಗಿರುವಾಗ ನಾನು ವಿಮಾನದಲ್ಲಿ ಹಾರುವುದು ಬಿಡಿ ಅದನ್ನ ಹತ್ತಿರದಿಂದಲೂ ಒಮ್ಮೆಯೂ ನೋಡಿಲ್ಲ; ವೋಲ್ವೋ ಬಸ್ಸಲ್ಲೂ ಕೂತಿಲ್ಲ. ಸ್ಲೀಪಿಂಗ್ ಕೋಚ್ ಬಸ್ಸಿನ ಮೆತ್ತನೆ ಹಾಸಿಗೆಯಲ್ಲೂ ನಿದ್ರಾ ಸುಖ ಅನುಭವಿಸಿಲ್ಲ. ಆದರೆ ಸಾಕಷ್ಟು ಬಾರಿ ರೈಲು ಪ್ರಯಾಣ ಮಾಡಿದ್ದೇನೆ ಅಷ್ಟೇ.
ಅಂತದ್ದೇ ಒಂದು ರೈಲು ಪ್ರಯಾಣ ಮತ್ತೊಮ್ಮೆ ದೊರಕಿತು. ಇಲ್ಲಿಯವರೆಗೂ ಅಪ್ಪ ಅಮ್ಮನನ್ನು ಬಿಟ್ಟು ದೂರದೂರಿಗೆ ಎಲ್ಲಿಯೂ ಹೋಗದ ನಾನು ಮೊದಲ ಬಾರಿಗೆ ಸ್ನೇಹಿತರೊಡನೆ ಕೂಡಿ ಗೋಕಾಕ್ ಕಡೆ ಪ್ರವಾಸ ಹೋಗುತ್ತಿರುವುದು ಮನಸಿಗೆ ಹೆಚ್ಚು ಖುಷಿ ನೀಡಿತು. ಕಾಯುತ್ತಿದ್ದ ಆ ದಿನವೂ ಬಂತು. ಅಪ್ಪ ಅಮ್ಮನಿಗೆ ಟಾಟಾ ಹೇಳಿ ಆಶೀರ್ವಾದವನ್ನು ಪಡೆದುಕೊಂಡು ಮಧ್ಯರಾತ್ರಿ 1.30ಕ್ಕೆ 7 ಜನರ ತಂಡ ಮನೆ ಬಿಟ್ಟೆವೂ. ಅದರಲ್ಲಿ ಶರತ್,ಶಿವರಾಜ್, ಚಂದ್ರಶೇಖರ್ ದೊಡ್ಡಮನಿ, ಗುರುಸ್ವಾಮಿ, ಗೌತಮಿ ಸೇರಿದಂತೆ ಇವರೆಲ್ಲಾ ನನ್ನ ಸೀನಿಯರ್ಸ್ ಆಗಿದ್ದರು. ವಿಶೇಷ ಅಂದ್ರೆ ನಮ್ಮೊಂದಿಗೆ ನನ್ನ ತಂಗಿ ಯುಗಶ್ರೀಯು ಬಂದಿದ್ದಳು. ಟ್ರೈನ್ ತುಂಬಾ ರೆಷ್ ಆಗಿದ್ದರಿಂದ ನಮಗೆ ಕುಳಿತುಕೊಳ್ಳಲು ಸ್ಥಳ ಸಿಗಲಿಲ್ಲ. ಕೊನೆಯ ಭೋಗಿಯಲ್ಲಿ ಸ್ಥಳ ಸಿಕ್ಕಿತು. ಇನ್ನೆನ್ನೂ ನಿದ್ದೆ ಜೋಂಪಿಗೆ ಹೋದ ನಮಗೆ ಯಾರೋ ಬಂದು ಹೊಡೆದು ಎಬ್ಬಿಸಿದ ಹಾಗಾಯ್ತು. ಕಣ್ಣು ಬಿಟ್ಟು ನೋಡಿದರೆ ನಾವು ಹುಬ್ಬಳ್ಳಿಯಲ್ಲಿ ಇದ್ದೆವು.
ರೈಲು ತನ್ನ ಕೊನೆ ಭೋಗಿಯನ್ನ ಕಳಚುವುದರ ಪರಿಣಾಮ ಆ ಭೋಗಿಯನ್ನು ಬಿಟ್ಟು ಬೇರೆಯ ಕಡೆ ಹೋಗಬೇಕಾಯ್ತು ಆದರೆ ಕುಳಿತುಕೊಳ್ಳಲು ಸ್ಥಳ ಸಿಗದೆ ಹೇಗೋ ನಾವು ಮುಂಜಾನೆ 10 ಗಂಟೆಗೆ ಗೋಕಾಕ್ ಸ್ಥಳಕ್ಕೆ ಬಂದಿಳಿದ್ದೆವು. ಕರ್ನಾಟಕದ ಹಲವೆಡೆ ಓಡಾಡಿದ್ದರೂ ಬೆಳಗಾವಿ ಜಿಲ್ಲೆಗೆ ಬಂದದ್ದು ಇದೇ ಮೊದಲು. ಬೆಳಗಾವಿ ಜಿಲ್ಲೆಯಲ್ಲಿ ಎರಡನೇ ಅತೀ ದೊಡ್ಡ ನಗರವಾದ ಗೋಕಾಕ್ ಪಶ್ಚಿಮ ಘಟ್ಟಗಳಿಂದ ಸುತ್ತುವರೆದಿದೆ. ಹಚ್ಚ ಹಸಿರು ವಾತಾವರಣ ಹಾಗೂ ಏಸಿಯ ಹಾಗೆ ಸದಾ ಕೂಲ್ ಅಗಿರುವಂತಹ ಸ್ಥಳಕ್ಕೆ ನಮ್ಮನ್ನ ನಾವು ಮೈಗೂಡಿಸಿಕೊಂಡು ನಡೆಯಲಾರಂಭಿಸಿದೇವು.ಗೋಕಾಕ್ದಲ್ಲಿಯೂ ಹಳದಿ ಕೆಂಪು ತೋರಣಗಳು, ಬಾವುಟಗಳು ನಮಗೆ ಸ್ವಾಗತ ಕೋರಿದವು.
ತುಂಬಾ ಹಸಿದಿದ್ದ ನಾವು ಅಲ್ಲೇ ಒಂದು ಅಂಗಡಿಯಲ್ಲಿ ಮೆಣಸಿನಕಾಯಿ ಬಜ್ಜಿ, ಪೂರಿ, ಪಲಾವ್ ತಿಂದು ಟೀ ಕುಡಿದು ಗೋಕಾಕ್ ಅರಬ್ಬಿಯ ಕಡೆಗೆ ನಡೆದೆವು. ನಮ್ಮ ರಾಜ್ಯ ಜಲಪಾತಗಳ ತವರೂರು. ಸಿರಿ ಸೌಂದರ್ಯದ ರುದ್ರರಮಣೀಯ ಖಣಜಗಳು ಎಂದರೆ ಇಲ್ಲಿನ ಫಾಲ್ಸ್. ನಿಸರ್ಗ ಪ್ರಿಯರ ಆಕರ್ಷಣಿಯ ಕೇಂದ್ರ ಬಿಂದುವೂ ಹೌದು. ಪ್ರಕೃತಿಯ ಸುಂದರ ತಾಣಗಳಲ್ಲಿ ಒಂದಾದ ಹಾಗೂ ಮಳೆಗಾಲದಲ್ಲಿ ಮೈದುಂಬಿ ಹರಿಯುವುದು ಗೋಕಾಕ್ ಜಲಪಾತದ ವಿಶೇಷ. ಮಳೆಗಾಲ ಇದೀಗ ಪ್ರಾರಂಭವಾದರಿಂದ ನೀರು ತೀರಾ ಕಡಿಮೆ ಇತ್ತು.
ಗೋಕಾಕ್ ಜಲಪಾತವನ್ನು ಪ್ರವೇಶಿಸುತ್ತಿದ್ದಾಗೆ ನಮ್ಮ ಕಣ್ಣಿಗೆ ಕಂಡದ್ದು ಹಳೆಕಾಲದ ಕಾಟನ್ ಮಿಲ್ ಅದು ನೋಡುವುದ್ದಕ್ಕೆ ಡಿಟೋ ಇಂಡಿಯನ್ ಆಕ್ಸ್ಫಾರ್ಡ್ ವಿಶ್ವವಿದ್ಯಾನಿಲಯದ ತರನೆ ಇತ್ತು. ಅಲ್ಲಿಂದ ಕೆಳಗಿಳಿದು ಹೋದರೆ ನಮ್ಮ ಕಣ್ಣಿಗೆ ಕಾಣಸಿಗುವುದು ತೂಗು ಸೇತುವೆ.
ಅಪರೂಪದ ತೂಗು ಸೇತುವೆ
ಪೂರ್ವಭಿಮುಖವಾಗಿ ಹರಿಯುವ ಘಟಪ್ರಭೆಗೆ, ದಕ್ಷಿಣೋತ್ತರವಾಗಿ ತಂತಿಯ ತೂಗು ಸೇತುವೆಯನ್ನು ನಿರ್ಮಿಸಲಾಗಿದೆ. ಅಪರೂಪದ ತೂಗುವ ತಂತಿಯ ಸೇತುವೆ ಕರ್ನಾಟಕದಲ್ಲಿ ಬೇರಾವ ನದಿಗೂ ನಿರ್ಮಿಸಿಲ್ಲ. ಇದರ ಮೇಲೆ ನಿಂತು ನದಿಯ ಅಂದವನ್ನು ವೀಕ್ಷಿಸುವುದೇ ಒಂದು ಭಾಗ್ಯ. ಈ ಸೇತುವೆಯ ಮೇಲೆ ನಡೆದಾಡುವುದರೊಂದಿಗೆ ಪುಳಕಗೊಳ್ಳುವ ಅವಕಾಶ ಇರುವುದು ಗೋಕಾಕ್ ಜಲಪಾತದಲ್ಲಿ ಮಾತ್ರ.
1 ಮೀ ಅಗಲ, 210ಮೀ (659 ಅಡಿ) ಉದ್ದವಿರುವ ಅಪರೂಪದ ಈ ತಂತಿ ಸೇತುವೆ ಅದ್ಭುತವಾಗಿದೆ. ನದಿಯ ಒಂದು ದಂಡೆಯಿಂದ ಇನ್ನೊಂದು ದಂಡೆಗೆ ಕಾಲ್ನಡಿಗೆಯಲ್ಲಿ ತಲುಪಲು ಈ ತೂಗುಸೇತುವೆ ಸರಳ ದಾರಿಯಾಗಿದೆ. ನದಿಯ ಕಲ್ಲುಬಂಡೆ ಹಾಸಿಗೆಯಿಂದ 14ಮೀ (46 ಅಡಿ) ಎತ್ತರದಲ್ಲಿ ಈ ತೂಗು ಸೇತುವೆ ನಿರ್ಮಿಸಲಾಗಿದ್ದು, ನದಿಯಲ್ಲಿ ಭರ್ತಿ ನೀರು ಬಂದಾಗ ಸೇತುವೆ ಮೇಲಿಂದ ಅಡ್ಡಾಡುವುದೇ ಒಂದು ರಸಘಳಿಗೆ. ಇದರ ಮೇಲೆ ಚಲಿಸುವಾಗ ಹೊಸಬರಾದ ನಮಗೆ ಭಯವಾದದ್ದು ಸಹಜ. ಕೆಳಗೆ ರಭಸದಿಂದ ಹರಿಯುವ ಕತ್ತಿ(ನೀರು ಅತ್ಯಂತ ರಭಸವಾಗಿ ಹರಿಯುವುದರಿಂದ ಕತ್ತಿ ನದಿಯೆಂಬ ಹೆಸರು ಬಂದಿದೆ) ನದಿಯ ಮೇಲಿನ ನಾವೆಯಲ್ಲಿ ಕುಳಿತು ಪ್ರಯಾಣಿಸಿದ ಅನುಭವವಾಗುತ್ತದೆ.
ಇಂತಹ ಸೇತುವೆ ಮೇಲೆ ನಡೆದಾಡುವುದೇ ಒಂದು ಥ್ರಿಲ್. ಇದರ ಮೇಲೆ ನಡೆದುಕೊಂಡು ಹೋಗುವಾಗ ವಾಯುದೇವನೂ ಕೂಡಾ ಒಂದು ಕ್ಷಣ ಎಂತಹ ಮನಸುಗಳಲ್ಲೂ ಭಯದ ವಾತವರಣವನ್ನು ಸೃಷ್ಟಿಸಿಬಿಡುತ್ತಾನೆ. ರಭಸವಾಗಿ ಗಾಳಿ ಬೀಸಿದರೆ ಸಾಕು ಆಯ ತಪ್ಪಿ ಎಲ್ಲಿ ನಾವೇ ಗಾಳಿಯೊಂದಿಗೆ ತೇಲಿಹೋಗುತ್ತೇವೆಯೋ ಎಂಬ ಭಯದಲ್ಲೊಮ್ಮೆ ಚಿಟಾರನೆ ಚಿರುವುಂತಹ ಘಳಿಗೆ ರಸದೌತಣವಾಗಿರುತ್ತದೆ. ಕತ್ತಿಹೊಳೆಯೆಂದೆ ಖ್ಯಾತಿಪಡೆದ ಘಟಪ್ರಭೆ ಬೆಳಗಾವಿ ಜಿಲ್ಲೆಯಲ್ಲಿ ಎರಡನೇ ಅತೀ ದೊಡ್ಡ ನಗರವಾಗಿದ್ದು ಪಶ್ಚಿಮ ಘಟ್ಟಗಳಿಂದ ಸುತ್ತುವರೆದಿದೆ. ಘಟಪ್ರಭಾ ನದಿಗೆ ಕತ್ತಿಹೊಳೆ ಎಂದು ಕರೆಯುತ್ತಾರೆ. ತಾಮ್ರಪರ್ಣಿ ಮತ್ತು ಹಿರಣ್ಯಕೇಶಿ ನದಿಗಳು ಘಟಪ್ರಭೆಯನ್ನು ಸೇರುತ್ತವೆ. ಮಳೆಗಾಲದಲ್ಲಿ ಕಾಫಿ ಚಹಾ ವರ್ಣಕ್ಕೆ ತಿರುಗುತ್ತವೆ. ಶ್ವೇತವರ್ಣದಲ್ಲು ತಿಳಿಗೊಂಡು ಹಾಲಿನಂತೆ ನೊರೆ ನೊರೆಯಾಗಿ ಹರಿಯುತ್ತದೆ. ಇದರ ಸೊಬಗನ್ನು ನೋಡಲು ಕಣ್ಣೆರಡು ಸಾಲದು. ನೀರಿನ ರಭಸ, ಹಾಲ್ನೊರೆಯಂತಹ ಬಣ್ಣ, ಗಂಭೀರವಾದಂತಹ ಸದ್ದು, ಹತ್ತಿರದ ಸ್ಥಳಗಳಲ್ಲಿ ತಂಪಾದ ನೀರಿನ ಚಿಕ್ಕ ಚಿಕ್ಕ ಹನಿಗಳ ಸಿಂಚನ ಇವೆಲ್ಲವೂ ಸೇರಿ ನಮ್ಮ ಮನದಲ್ಲಿ ರೋಮಾಂಚನದೊಂದಿಗೆ ತಾಜತನದ ಅನುಭವವನ್ನು ನೀಡುತ್ತಿತ್ತು.
ಇದರ ಸುಂದರತೆ ಮತ್ತು ರಮಣೀಯತೆಯನ್ನು ಅತೀ ಸಮೀಪದಿಂದ ಸವಿಯುವಂತಹ ವಾತವರಣವಿದ್ದು, ಧಬಧಬ ಧರೆಗಿಳಿಯುವ ಭಯಂಕರ ಪ್ರವಾಹದಂತೆ ಘಟಪ್ರಭೆ 84 ಅಡಿ ಎತ್ತರದಿಂದ ಧುಮ್ಮಿಕ್ಕುವ ದೃಶ್ಯವನ್ನು ನೋಡಿಯೇ ಸವಿಯಬಹುದು. ಘಟಪ್ರಭೆ ಭಾರಿ ರಭಸದಿಂದ ಪ್ರಪಾತಕ್ಕೆ ಧುಮುಕುವಾಗ, ಸಿಡಿ ಮದ್ದು ಸಿಡಿದಂತೆ ನೀರು ಝಲ್ಲೆಂದು ಪುಟಿದೇಳುತ್ತದೆ. ಪ್ರಕೃತಿಯ ಆ ಅಗಾಧ ಸೌಂದರ್ಯವನ್ನು ಕಣ್ಣಿಂದ ಕಾಣಬೇಕು ಮತ್ತು ಇಂಪಾದ ಸದ್ದನ್ನು ಕಿವಿಂದ ಆಲಿಸಬೇಕು. ಪ್ರವಾಹದಂತೆ ಧುಮುಕುವ ಘಟಪ್ರಭೆ ನಂತರ ಮಂದಗಮನೆಯಾಗಿ ಮೆಲ್ಲನೆ ಚಲಿಸುವ ಈಕೆಯ ಸೌಂದರ್ಯ ನೋಡುವುದೇ ಸಂಭ್ರಮ.
ಭಾರತದ ನಯಾಗರ ಫಾಲ್ಸ್ ಎಂಬ ಹೆಗ್ಗಳಿಕೆ
ಘಟಪ್ರಭೆಯ ಸುತ್ತಲೂ ಎಲ್ಲಿ ನೋಡಿದರೂ ಹಚ್ಚ ಹಸಿರು. ಬೆಟ್ಟ ಗುಡ್ಡಗಳದ್ದೇ ಕಾರುಬಾರು.
ಇಲ್ಲಿಗೆ ಬರುವ ಪ್ರವಾಸಿಗರನ್ನು ಹಸಿರು ದೇವತೆ ಪ್ರೀತಿಸುವ ಬಗೆಯನ್ನು ಕಂಡು ಇಲ್ಲಿಂದ ಹೊರಡಲು ಮನಸ್ಸಾಗದಷ್ಟು ರಮಣೀಯತೆ ಇಲ್ಲಿದೆ. ನಿಸರ್ಗದ ಸಂಧರತೆಯನ್ನು ಸವಿಯುವುದರೊಂದಿಗೆ ಇಲ್ಲಿ ಐತಿಹಾಸಿಕ ಮಹಾಲಿಂಗೇಶ್ವರನ ದೇವಾಲಯವಿದೆ.
177 ಮೀಟರ್ (581 ಅಡಿ) ಅಗಲದ ಬಂಡೆಗಳಲ್ಲಿ ಮೇಲಿಂದ 52 ಮೀಟರ್ (171 ಅಡಿ) ಆಳದ ಕಂದಕಕ್ಕೆ ಘಟಪ್ರಭಾ ನದಿಯ ನೀರು ಧುಮ್ಮಿಕ್ಕುವುದು ಗೋಕಾಕ್ ಜಲಪಾತದ ವೈಶಿಷ್ಟ್ಯ. ವಿಶಾಲ ಬಂಡೆಗಲ್ಲಿನ ಮೇಲಿಂದ ನೀರು ಧುಮ್ಮಿಕ್ಕುವುದರಿಂದ ಈ ಜಲಪಾತವನ್ನು “ಮಿನಿ ನಯಾಗರಾ” ಎಂದು ಕರೆಯಲಾಗುತ್ತದೆ.
ಮೊದಲ ಬಾರಿಗೆ ವಿದ್ಯುತ್ ಉತ್ಪಾದಿಸಿದ ಕೇಂದ್ರ
ನೀರು ಧುಮ್ಮಿಕ್ಕುವ ಕಂದಕದ ಬಳಿ ಇರುವ ವಿದ್ಯುತ್ ಉತ್ಪಾದನೆ ಕೇಂದ್ರವನ್ನು ಬ್ರಿಟೀಷ್ ಕಾಲದಲ್ಲೇ ನಿರ್ಮಿಸಲಾಗಿದೆ. 1887ರಲ್ಲಿ ಕಾರ್ಯರಂಭ ಮಾಡಿದ್ದು, ರಾಜ್ಯದಲ್ಲೇ ಮೊದಲ ಬಾರಿ ವಿದ್ಯುತ್ ಉತ್ಪಾದಿಸಿದ ಕೇಂದ್ರ ಎಂಬ ಹೆಗ್ಗಳಿಕೆ ಪಡೆದಿದೆ. ತದನಂತರ ಬೆಂಗಳೂರಿನಲ್ಲಿ ಆರಂಭಿಸಲಾಯಿತು.ಮಹಾಲಿಂಗೇಶ್ವರ ದೇವಾಸ್ಥಾನ ಇನ್ನೂ ಈ ಸ್ಥಳದ ಕುತೂಹಲಕಾರಿ ಅಂಶವೆಂದರೆ ಚಾಲುಕ್ಯರ ಕಾಲಕ್ಕೆ ಸೇರಿದ ಸ್ಮಾರಕಗಳು ಇಲ್ಲಿನ ಕಲ್ಲಿನ ಕಣಿವೆಯ ಎರಡೂ ದಂಡೆಗಳಲ್ಲಿ ದೊರೆತಿರುವುದು. ಈ ಸ್ಥಳದ ಮತ್ತೊಂದು ಆಕರ್ಷಣೆ ಎಂದರೆ ಚಾಲುಕ್ಯ ವಾಸ್ತುಶೈಲಿಯಲ್ಲಿ ನಿರ್ಮಿಸಲಾದ ಮಹಾಲಿಂಗೇಶ್ವರನ ದೇವಾಸ್ಥಾನ.
ಟ್ರೆಕ್ಕಿಂಗ್ ಗೆ ಹೇಳಿಮಾಡಿಸಿದ ಸ್ಥಳ
ಗೋಕಾಕ್ ಫಾಲ್ಸ್ ಧುಮ್ಮಿಕ್ಕುವುದ್ದನ್ನು ಕೆಳಗಿನಿಂದ ನೋಡಬೇಕೆಂದರೆ ಸುಮಾರು 2 ರಿಂದ 3 ಕಿ.ಮೀ ಕೆಳಗೆ ನಡೆದುಹೋಗಬೇಕು. ಕರ್ನಾಟಕದ ಕರಾವಳಿ ಮತ್ತು ಮಲೆನಾಡಲ್ಲಿ ಧೋ ಧೋ ಎಂದು ಮಳೆಯಾಗಿ ಒಂದು ಹಂತಕ್ಕೆ ಬಂದು ನಿಂತ ಮೇಲೆ ಟ್ರೆಕ್ಕಿಂಗ್ಗೆ ಅಣಿಯಾಗುವಂತಹ ಸಾಹಸಿಗರಿಗೆ ಗೋಕಾಕ್ ಜಲಪಾತ ಹೇಳಿಮಾಡಿಸಿದಂತಹ ಸ್ಥಳವಾಗಿದೆ. ಇಲ್ಲಿ ನಡೆಯುತ್ತ ಹೋದರೆ ಡಿಟೋ 6-5=2 ಮೂವೀಯಲ್ಲಿ ಇರುವಂತಹ ಟ್ರೆಕ್ಕಿಂಗ್ನ ಅನುಭವ ನೀಡುತ್ತದೆ. ಆದರೆ ಅಲ್ಲಿ ದೆವ್ವ ಇರುತ್ತೆ ಇಲ್ಲಿ ನಾವೇ ದೆವ್ವಗಳಾಗಿರುತ್ತವೆ. ದೊಡ್ಡ ದೊಡ್ಡ ಬಂಡೆಗಳು, ಜಾರುವಂತಹ ಕಲ್ಲುಗಳು, ತೊರೆಗಳು, ಗಿಡ ಮರಗಳು, ನಮ್ಮ ಧ್ವನಿ ನಮಗೆ ಪಿಸುಗುಡುವಂತಹ ನಿಶಬ್ಧ ವಾತವರಣ ಹೀಗೆ ಇವೆಲ್ಲಾ ಸೇರಿ ಎಂತಹವರಿಗೂ ಪ್ರಕೃತಿ ಮೇಲೆ ಲವ್ ಆಗಿಬಿಡುತ್ತದೆ.
ಗೋಕಾಕ್ ಸ್ಪೇಷಲ್ ಕರದಂಟು
ಗೋಕಾಕ್ ಬಗ್ಗೆ ಇಷ್ಟೇಲ್ಲಾ ಹೇಳಿ ಕರದಂಟನ್ನು ಮರೆಯಲು ಸಾಧ್ಯವೇ? ಬೆಳಗಾವಿಯತ್ತ ಪ್ರಯಾಣ ಬೆಳೆಸಿದರೆ ಅಲ್ಲಿಯ ಕುಂದ ಹಾಗೂ ಗೋಕಾಕ್ನ ಕರದಂಟು ಅಥವಾ ಅಂಟುಹುಂಡೆಯನ್ನು ಸವಿಯದೆ ಬಂದವರೆ ಇಲ್ಲ. ಅಂಟು ಹಾಕಿ ತಯಾರಿಸುವ ಈ ಉಂಡೆಯನ್ನು ಕರ(ಕೈ)ದಲ್ಲಿ ಉಂಡೆ ಕಟ್ಟುವುದರಿಂದ ಈ ಹೆಸರು ಬಂದಿರಲೂಬಹುದು ಅಲ್ವಾ? ಅದೇನೆ ಇರಲಿ, ಖರ್ಜೂರ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಒಣ ಕೊಬ್ಬರಿ ತುರಿ, ಗಸಗಸೆ, ಅಂಟು, ಬೆಲ್ಲ, ತುಪ್ಪ ಹೀಗೆ ಇವೆಲ್ಲವನ್ನು ಹಾಕಿ ಮಾಡಿದಂತಹ ಕರದಂಟು ಆರೋಗ್ಯಕರವಾದಂತಹ ತಿನಿಸಾಗಿದೆ. ಈ ಗಿರಮಿಟ್ ಜತೆ ಗೋಕಾಕ್ನ ಕರದಂಟನ್ನು ಮೆಲ್ಲುತ್ತ ಭೋರ್ಗರೆಯುವ ಜಲಪಾತ ನೋಡುತ್ತಿದ್ದಾರೆ ನಮ್ಮ ಕಣ್ಣಿಗೆ ಹಬ್ಬವಾಗುವುದರೊಂದಿಗೆ ಬಾಯಿಗೆ ಸಿಹಿಯೂ ಆಗುವುದರಲ್ಲಿ ಸಂಶಯವೇ ಇಲ್ಲ!
ಪ್ರವಾಸಿಗರ ತಾಣ
ನೋಡುಗರ ಆಕರ್ಷಣೀಯ ಕೇಂದ್ರ ಬಿಂದುವಾದ ಗೋಕಾಕ್ ಫಾಲ್ಸ್ ಅನ್ನು ನೋಡಲು ಪಕ್ಕದ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ದೂರದೂರದ ಊರಿಂದ ಪ್ರವಾಸಿಗರು ಈ ಸೌಂದರ್ಯವನ್ನು ಸವಿಯಲು ಬರುತ್ತಾರೆ. ಸೆಲ್ಫೀ, ಫೋಟೋ ತೆಗೆಸಿಕೊಳ್ಳುವುದರೊಂದಿಗೆ ಬೆಟ್ಟದ ಇಕ್ಕೆಲ್ಲಗಳಲ್ಲಿ ಜೋಡಿಸಿರುವ ತೂಗು ಸೇತುವೆಯಲ್ಲಿ ಕೇಕೆ ಹೊಡೆದು ಕುಣಿದು ಕುಪ್ಪಳಿಸುತ್ತಾರೆ. ಒಟ್ಟಾರೆಯಾಗಿ ಈ ಸಮಯವೂ ಪ್ರವಾಸಿಗರಿಗೆ ಪ್ರವಾಸ ಮಾಡಲು ಹೇಳಿಮಾಡಿಸಿದಂತಹ ಸ್ಥಳವಾಗಿದೆ.
ಮಾರ್ಗ
ಗೋಕಾಕ್ ಜಲಪಾತ ಬೆಳಗಾವಿಯಿಂದ 58 ಕಿ.ಮೀ. ಹಾಗೂ ಗೋಕಾಕ್ ಪಟ್ಟಣದಿಂದ 6 ಕಿ.ಮೀ ದೂರದಲ್ಲಿದೆ. ಈ ಜಲಪಾತ ಕೊಲ್ಲಾಪುರದಿಂದ 100 ಕಿ.ಮೀ., ಸಾಂಗ್ಲಿಯಿಂದ 66 ಕಿ.ಮೀ ಪಣಜಿಯಿಂದ 140 ಕಿ.ಮೀ ದೂರದಲ್ಲಿದೆ. ಗೋಕಾಕ್ ರೋಡ್ ಮತ್ತು ಘಟಪ್ರಭಾ ರೈಲ್ವೆ ನಿಲ್ದಾಣಗಳು ಜಲಪಾತದಿಂದ 10 ಕಿ.ಮೀ ಅಂತರದಲ್ಲಿದೆ. ಬೆಳಗಾವಿ, ಗೋಕಾಕ್ ಮತ್ತು ನಗರ ಪ್ರದೇಶಗಳಿಂದ ಜಲಪಾತಕ್ಕೆ ಸಾರಿಗೆ ಸಂಸ್ಥೆಯ ಬಸ್ ಸೌಕರ್ಯ ಇದೆ. ಖಾಸಾಗಿ ವಾಹನಗಳ ಮೂಲಕವೂ ಗೋಕಾಕ್ ಜಲಪಾತದ ಸ್ಥಳ ತಲುಪಬಹುದು.
–ಪ್ರೀತಿ.ಟಿ.ಎಸ್
ಪತ್ರಿಕೋದ್ಯಮ ವಿದ್ಯಾರ್ಥಿನಿ
3ನೇ ಸೆಮಿಸ್ಟರ್
ದಾವಣಗೆರೆ ವಿಶ್ವವಿದ್ಯಾನಿಲಯ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್ಲೈನ್ ರಸ್ತೆಯಲ್ಲಿ ನಡೆದಿದೆ.
23 ವರ್ಷದ ಅಂಜಲಿ ಕೊಲೆಯಾದ ಯುವತಿಯಾಗಿದ್ದು, ರಾಜೀವ್ ಬಂಧಿತ ಆರೋಪಿ. ಕಳೆದ ಮೂರು-ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಪರಿಚಯವಾಗಿ ಸ್ನೇಹ ಬೆಳೆದು, ಬಳಿಕ ಅದು ಪ್ರೀತಿಗೆ ತಿರುಗಿತ್ತು.
ಆದರೆ ರಾಜೀವ್ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ ಅಂಜಲಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಕುಟುಂಬಸ್ಥರನ್ನು ಒಪ್ಪಿಸಲು ರಾಜೀವ್ ಪ್ರಯತ್ನಿಸಿದ್ದರೂ ಫಲಿಸಿರಲಿಲ್ಲ. ಇತ್ತೀಚೆಗೆ ಪೋಷಕರ ಒತ್ತಾಯಕ್ಕೆ ಮಣಿದ ಅಂಜಲಿ ರಾಜೀವ್ನಿಂದ ದೂರವಾಗಲು ಆರಂಭಿಸಿದ್ದಳು. ಇಂದು ಸಂಜೆ ಅಂಜಲಿಯನ್ನು ಊಟದ ನೆಪದಲ್ಲಿ ಕರೆಸಿಕೊಂಡಿದ್ದ ರಾಜೀವ್, ಮತ್ತೊಮ್ಮೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ರಾಜೀವ್ ಚಾಕುವಿನಿಂದ ಅಂಜಲಿಯ ಕುತ್ತಿಗೆಗೆ ಇರಿದಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃ*ತಪಟ್ಟಿದ್ದಾಳೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ, ಕೆಲವೇ ನಿಮಿಷಗಳಲ್ಲಿ ಆರೋಪಿ ರಾಜೀವ್ನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಚನ್ನಗಿರಿ | ಲವ್ ಮ್ಯಾರೇಜ್ ; ಪೊಲೀಸ್ ಠಾಣೆ ಆವರಣದಲ್ಲೇ ಯುವಕನಿಗೆ ಚಾಕು ಇರಿತ
-
ದಿನದ ಸುದ್ದಿ4 days agoದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು
-
ದಿನದ ಸುದ್ದಿ5 days ago
ಮತದಾರರ ಪಟ್ಟಿ ಪರಿಷ್ಕರಣೆ | ಪ್ರತಿಯೊಬ್ಬರ ಮನೆಬಾಗಿಲಿಗೆ ತಲುಪಲಿವೆ ಫಾರಂಗಳು ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ
-
ದಿನದ ಸುದ್ದಿ2 days agoಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ
-
ಅಂಕಣ13 hours agoಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ


