ರಾಜಕೀಯ
ಮಾತು, ಮೌನ ಮತ್ತು ಮಿಥ್ಯಾವಾಸ್ತವ

ಈಗ ಮಾತುಗಳದ್ದೇ ಆರ್ಭಟ. ಮಾತು, ಪ್ರತಿಮಾತು, ದಿಢೀರನೆ ಪ್ರತಿಕ್ರಿಯಿಸಿಬಿಡುವ ಸಿಟ್ಟು-ಸೆಡವಿನ ಪ್ರವೃತ್ತಿಗಳ ವಿಜೃಂಭಣೆ. ನಾಯಕರೆನ್ನಿಸಿಕೊಂಡು ಜನಪ್ರಿಯಗೊಂಡವರ ವಿರುದ್ಧ ಯಾರೂ ಉಸಿರೆತ್ತುವ ಹಾಗಿಲ್ಲ. ಆರಾಧನೆಯ ಗುಂಗಿನೊಳಗೆ ಪ್ರಶ್ನಿಸಿದವರನ್ನು ಸುಮ್ಮನಾಗಿಸಿಬಿಡುವ ಜಾಯಮಾನಗಳದ್ದೇ ಪ್ರಭಾವಳಿ. ಅನುಭವಕ್ಕೆ ಬಂದ ಮತ್ತು ಕಣ್ಣಮುಂದಿನ ವಾಸ್ತವಗಳನ್ನು ನೋಡಿಯೂ ನೋಡದಂತಿದ್ದು ಎಲ್ಲರ ಹಾಗೆ ಹೊಗಳುವ ಮನೋವೃತ್ತಿಯನ್ನು ಒತ್ತಾಯಪೂರ್ವಕವಾಗಿ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ. ಇಂಥದ್ದೊಂದು ವಾತಾವರಣವನ್ನೇ ಸಮಕಾಲೀನ ರಾಜಕಾರಣ ನಿರೀಕ್ಷಿಸುತ್ತಿದೆ. ಮಾತು ಮತ್ತು ಮೌನಗಳ ಚಾಣಾಕ್ಷಯುತ ನಿರ್ವಹಣೆಯ ಮೂಲಕ ಅದು ಹೊಸ ಪೀಳಿಗೆಯ ಯೋಚಿಸುವ ಶಕ್ತಿಯನ್ನು ಕೊಂದುಬಿಟ್ಟಿದೆ. ಅಧಿಕಾರರೂಢ ಮತ್ತು ವಿರೋಧ ಪಕ್ಷಗಳು ಯಾವುದು ವಾಸ್ತವವಲ್ಲವೋ ಅದನ್ನು ಸೃಷ್ಟಿಸಿ ಸಮ್ಮತಿಯನ್ನು ಉತ್ಪಾದಿಸಿಕೊಳ್ಳುತ್ತಿವೆ. ವಾಸ್ತವವನ್ನು ಮುಚ್ಚಿಟ್ಟು ಭಾವುಕ ಸಂಗತಿಗಳ ದಾಳಗಳನ್ನು ಎಸೆದು ಪ್ರಜಾಪ್ರಭುತ್ವದ ಅಖಾಡದ ಸಂವೈಧಾನಿಕ ನಿಯಮಾವಳಿಗಳನ್ನು ಉಲ್ಲಂಘಿಸುತ್ತಿವೆ.
ಈಗ ನಮಗೆ ಎಂಥ ರಾಜಕಾರಣ ಬೇಕಾಗಿದೆ ಎಂದರೆ ನಮ್ಮ ಬದುಕು ಅದರಿಂದ ಉದ್ಧರಿಸಲ್ಪಡುವಂತಿರಬೇಕು. ಈ ನಮ್ಮ ಬದುಕಿನ ವ್ಯಾಪ್ತಿಯೊಳಗೆ ಎಲ್ಲ ಧರ್ಮಗಳವರೂ ಇರಬೇಕು. ಎಲ್ಲ ಜಾತಿಗಳವರೂ ಇರಬೇಕು. ಅವರವರ ನಂಬಿಕೆಗಳ ಭಾವಜಗತ್ತನ್ನು ಮತ್ತಷ್ಟು ಉದಾತ್ತಗೊಳಿಸುವ ಪ್ರಯತ್ನಗಳಿಗೆ ಅಲ್ಲಿ ಅವಕಾಶವಿರಬೇಕು. ಆ ಮೂಲಕ ಹೊಸ ವಿಶ್ವಾಸಾರ್ಹತೆ ಮೂಡಬೇಕು. ಅಪನಂಬಿಕೆ ಮತ್ತು ಮೂಢನಂಬಿಕೆಗಳ ಜಾಡ್ಯಗಳನ್ನು ತೊರೆಯುವ ಹೃದಯವೈಶಾಲ್ಯತೆ ನೆಲೆಗೊಳ್ಳಬೇಕು. ಹಾಗಾಗುವ ಹಾಗೆ ರಾಜಕಾರಣವು ನಾಯಕತ್ವವನ್ನು ಚಿಗುರಿಸಬೇಕು. ಮಾತಿನ ಭಾಷಿಕ ಅಬ್ಬರದ ಬದಲು ಮಿತಭಾಷಿಕ ಸೌಜನ್ಯವನ್ನು ಸೃಷ್ಟಿಸಬೇಕು.
ಘಾಸಿಗೊಳ್ಳುತ್ತಿರುವ ಆಯ್ಕೆ ಹಕ್ಕು
ಹಾಗೆ ಆಗುತ್ತಿಲ್ಲ. ಸ್ವಾತಂತ್ರ್ಯಾನಂತರ ಹಲವು ದಶಕಗಳಾದರೂ ಭಾರತದ ಕನಸುಗಳ್ಯಾವುವೂ ಸಾಕಾರಗೊಳ್ಳಲಿಲ್ಲ ಮತ್ತು ಅಧಿಕಾರದಲ್ಲಿದ್ದ ಹಿಂದಿನವರು ಉದ್ದೇಶಪೂರ್ವಕವಾಗಿ ಆ ಕನಸುಗಳನ್ನು ಸಾಕಾರಗೊಳಿಸುವುದರ ಕಡೆಗೆ ಗಮನಹರಿಸಲಿಲ್ಲ ಎಂಬ ಕೊರಗುಗಳನ್ನು ಮುಂದಿಡುತ್ತಲೇ ತಮ್ಮ ಪರವಾದ ಅಲೆಯನ್ನು ಸೃಷ್ಟಿಸಿಕೊಂಡ ರಾಜಕೀಯ ಪಡೆಗಳು ಅಧಿಕಾರಕ್ಕೆ ಬಂದ ತಕ್ಷಣ ಮತ್ತದೇ ಸ್ಥಗಿತತೆಯ ಜಾಡ್ಯವನ್ನೇ ಪರಮಲಕ್ಷಣವಾಗಿಸಿಕೊಂಡಿವೆ. ಯಾವುದನ್ನು ವಿರೋಧಿಸಿ ಅಧಿಕಾರಕ್ಕೆ ಬರುತ್ತಾರೋ ಅವರೇ ತಾವು ಹಿಂದೆ ವಿರೋಧಿಸಿದ್ದ ನಡೆಯನ್ನೇ ಮರುಪ್ರತಿಷ್ಠಾಪಿಸಿಕೊಳ್ಳುವುದು ರಾಜಕಾರಣಿ, ರಾಜಕೀಯ ಪಕ್ಷಗಳ ಅಲಿಖಿತ ಕಡ್ಡಾಯ ನಿಯಮವಾಗಿಬಿಟ್ಟಿದೆಯೇನೋ ಎಂದು ಭಾಸವಾಗುತ್ತಿದೆ. ಈ ವಿಚಿತ್ರ ನಡೆಗಳು ಭಾರತದ ಪ್ರಜೆಗಳ ಆಯ್ಕೆಯ ಹಕ್ಕನ್ನು ಘಾಸಿಗೊಳಿಸಿವೆ.
ನಿರ್ಲಿಪ್ತ ಭಾವ
ಅಧಿಕಾರದಲ್ಲಿದ್ದವರನ್ನು ಪ್ರಶ್ನಿಸಬೇಕು ಎಂಬ ಮನೋಭಾವವು ವಿರೋಧ ಪಕ್ಷಗಳಿಂದ ಪ್ರಚೋದಿತವಾಗಬೇಕಿಲ್ಲ. ಮಾಧ್ಯಮಗಳ ವಿಶ್ಲೇಷಣೆಗಳನ್ನೇ ನೆಚ್ಚಿಕೊಂಡು ಪ್ರಶ್ನಿಸುವ ಅಗತ್ಯವಿಲ್ಲ. ಈ ದೇಶದ ಸಂವಿಧಾನ ಒದಗಿಸಿರುವ ಪ್ರಶ್ನಿಸುವ ಅವಕಾಶವನ್ನು ಬಳಸಿಕೊಳ್ಳುವ ವಿವೇಕ ನಮ್ಮೆಲ್ಲರದ್ದಾಗಿರಬೇಕು. ಈ ವಿವೇಕವನ್ನು ಪ್ರಖರಗೊಳಿಸುವ ನಿಟ್ಟಿನಲ್ಲಿ ವಿರೋಧ ಪಕ್ಷಗಳು ಮತ್ತು ಮಾಧ್ಯಮಗಳು ಗಮನಾರ್ಹ ಪಾತ್ರನಿರ್ವಹಿಸಬೇಕು. ಪ್ರಶ್ನೆ ಕೇಳುವ ಸಾಧ್ಯತೆಗಳನ್ನು ವರ್ತಮಾನದ ರಾಜಕಾರಣ ಹೇಗೆ ಮೊಟಕುಗೊಳಿಸುತ್ತಿದೆ ಎಂದರೆ ಕಣ್ಣಮುಂದೆ ಎಷ್ಟೆಲ್ಲಾ ಊನಗಳಿದ್ದರೂ, ಸ್ವತಃ ವ್ಯವಸ್ಥೆಯ ಲೋಪಗಳ ಕಾರಣಕ್ಕಾಗಿಯೇ ನೋವು ಅನುಭವಿಸಿದರೂ ಅವುಗಳ ಬಗ್ಗೆ ಮಾತನಾಡಬಾರದು ಎಂಬ ನಿರ್ಲಿಪ್ತ ಭಾವವನ್ನೇ ನೆಚ್ಚಿಕೊಳ್ಳುವಂತೆ ಒತ್ತಡಗಳು ಸೃಷ್ಟಿಯಾಗುತ್ತಿವೆ.
ಪ್ರತಿಮೆಯ ನೆಗೆತ!
ಅಧಿಕಾರಕ್ಕೆ ಹತ್ತಿರವಾಗುವ ರಹಸ್ಯ ಕಾರ್ಯಸೂಚಿಯೊಂದಿಗೆ ರಾಜಕೀಯ ಪಡೆಗಳು ಇತಿಹಾಸದ ಮೌಲಿಕ ಸಂಸ್ಥೆಯನ್ನು ತಮ್ಮ ಹತಾರೆಗಳೊಂದಿಗೆ ಈಗಾಗಲೇ ಪ್ರವೇಶಿಸಿಬಿಟ್ಟಿವೆ. ಈಗಾಗಲೇ ಆಗಿಹೋದ ಸಂಗತಿಯೊಂದರ ವಿವರವನ್ನು ತಮ್ಮ ಉದ್ದೇಶಕ್ಕೆ ತಿರುಗಿಸಿಕೊಳ್ಳುವ ಚಾಣಾಕ್ಷ ನಡೆಗಳೊಂದಿಗೆ ಅವು ಯಶಸ್ಸು ಸಾಧಿಸುತ್ತಿವೆ. ಈಗಾಗಲೇ ಆಗಿಹೋದವರನ್ನು ಟೀಕಿಸುವ ಹುಮ್ಮಸ್ಸಿನಲ್ಲಿ ಸದ್ಯಕ್ಕೆ ಸರಿಯಾದ ಹಾದಿ ತೋರಿಸುವ ಆದರ್ಶದ ಐತಿಹಾಸಿಕ ಪರಂಪರೆಯ ಮೌಲಿಕತೆಯನ್ನು ಉದ್ದೇಶಪೂರ್ವಕವಾಗಿ ಹಿನ್ನೆಲೆಗೆ ಸರಿಸಲಾಗುತ್ತಿದೆ. ಈ ಹಿಂದಿನವರು ವಿಜೃಂಭಿಸಿದ ಪ್ರತಿಮಾ ರಾಜಕಾರಣವು ಇದೀಗ ಹೊಸದೊಂದು ನೆಗೆತ ನೆಗೆದಿದೆ ಅಷ್ಟೇ. ಯಾರ ಆದರ್ಶಗಳನ್ನು ನಾವು ಬದುಕಿನೊಳಗೆ ಅಳವಡಿಸಿಕೊಳ್ಳುತ್ತಾ ಸಾಗುವ ಬದಲು ಅವುಗಳನ್ನು ನಾಮ್ಕೇವಾಸ್ತೆ ಎಂಬಂತೆ ನೆನಪಿಸಿಕೊಳ್ಳುತ್ತಾ ಅವರ ಮೂರ್ತಿಗಳನ್ನು ಆರಾಧಿಸಿದೆವು. ಹಾಗೆ ಆರಾಧಿಸುವ ಹಾಗೆ ನಮ್ಮ ಮೇಲೆ ಭಾವುಕ ಪ್ರಭಾವವನ್ನು ಬೀರಲಾಯಿತು. ಈಗ ಆ ತರಹದ ಪ್ರಭಾವ ದಟ್ಟವಾಗಿ ಪ್ರತಿಮಾ ರಾಜಕಾರಣ ಹೊಸದೊಂದು ಕಾರ್ಯಸೂಚಿಯನ್ನು ಕಾರ್ಯಗತಗೊಳಿಸುವುದರ ಕಡೆಗೆ ಕಾರ್ಯೋನ್ಮುಖವಾಗಿದೆ.
ಇತಿಹಾಸ ತಿರುಚುವ ರೋಚಕ ಶೈಲಿ
ಇತಿಹಾಸವನ್ನು ಜನಪ್ರಿಯ ಶೈಲಿಯಲ್ಲಿ ತಿರುಚುವ ನಕಾರಾತ್ಮಕ ಶೈಲಿಯು ಒಂದು ಟ್ರೆಂಡ್ನ ರೂಪದಲ್ಲಿ ಇದೀಗ ಅಸ್ತಿತ್ವದಲ್ಲಿದೆ. ಈಗಾಗಲೇ ಆಗಿಹೋದ ಇತಿಹಾಸದಲ್ಲಿ ನಾವು ನಿಖರ ವಿವರಗಳ ಆಧಾರದಲ್ಲಿ ಮಹತ್ವದ ವ್ಯಕ್ತಿತ್ವಗಳ ಕೊಡುಗೆಗಳನ್ನು ಗ್ರಹಿಸಿಕೊಂಡಿರುತ್ತೇವೆ. ಆ ಕೊಡುಗೆಗಳು ವರ್ತಮಾನ ಮತ್ತು ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವ ರೀತಿಯಲ್ಲಿಯೇ ಚರ್ಚಿತವಾಗಬೇಕು ಎಂಬ ಎಚ್ಚರವನ್ನೂ ಇದೇ ಇತಿಹಾಸದ ವಿವೇಚನಾತ್ಮಕ ವಿಶ್ಲೇಷಣೆಗಳು ನಮ್ಮೊಳಗೆ ನೆಲೆಗೊಳಿಸಿರುತ್ತವೆ. ರಾಜಕೀಯ ಪಡೆಗಳ ಕಾರ್ಯಸೂಚಿಗಳು ಈ ವಿವೇಚನಾತ್ಮಕ ಎಚ್ಚರದ ಪ್ರಜ್ಞೆಯನ್ನು ಒಡೆದುಬಿಡುತ್ತವೆ. ಇಲ್ಲಿಯವರೆಗೆ ಸರಿಯಾಗಿ ಗ್ರಹಿಸಿದವರ ತಲೆಮಾರಿನ ಪ್ರಜ್ಞೆಯನ್ನು ಛಿದ್ರಗೊಳಿಸಿದ್ದಲ್ಲದೇ ಹೊಸ ಪೀಳಿಗೆಯೊಳಗೂ ಅನುಮಾನಗಳನ್ನು ಬಿತ್ತಿ ಅಧಿಕಾರದ ಗಮ್ಯವನ್ನು ತಲುಪಿಕೊಳ್ಳುವ ಹುನ್ನಾರಗಳು ತೀವ್ರಗೊಳ್ಳುವ ಹಾಗೆಯೇ ಈ ಒಡೆಯುವಿಕೆಯು ಅಗಾಧವಾಗಿರುತ್ತದೆ. ಅಹಿಂಸೆಯಿಂದಲಷ್ಟೇ ಸ್ವಾತಂತ್ರ್ಯ ಹೋರಾಟಕ್ಕೆ ಯಶಸ್ಸು ದಕ್ಕಲಿಲ್ಲ, ಗಾಂಧೀಜಿಯೊಬ್ಬರಿಂದಲೇ ಎಲ್ಲವೂ ಆಗಲಿಲ್ಲ, ಹಿಂಸೆಗೆ ಪ್ರಚೋದನೆ ನೀಡಿದವರು ಇಲ್ಲದಿದ್ದರೆ ಸ್ವಾತಂತ್ರ್ಯ ದಕ್ಕುತ್ತಿರಲಿಲ್ಲ, ಸಂವಿಧಾನವನ್ನು ಈ ದೇಶದ ಆಚಾರ-ವಿಚಾರಗಳಿಗೆ ಅನುಗುಣವಾಗಿ ಬದಲಿಸಬೇಕು, ಅದರಲ್ಲಿ ಅನೇಕ ಸಮಸ್ಯೆಗಳಿವೆ, ಇಂಥವರ ಬದಲು ಇಂಥವರು ಪ್ರಧಾನಿಯಾಗಿದ್ದಿದ್ದರೆ ಈ ದೇಶದ ಚಿತ್ರಣವೇ ಬದಲಾಗಿಬಿಟ್ಟಿರುತ್ತಿತ್ತು… – ಹೀಗೆ ವಿವಿಧ ರೀತಿಗಳಲ್ಲಿ ತರಹೇವಾರಿ ವಿತಂಡವಾದಿ ದೃಷ್ಟಿಕೋನಗಳನ್ನು ಹರಿಬಿಟ್ಟು ಇತಿಹಾಸದ ಸಾಂಸ್ಥಿಕ ಮೌಲ್ಯಕ್ಕೆ ಧಕ್ಕೆಯುಂಟುಮಾಡಲಾಗುತ್ತಿದೆ.
ಭಾವುಕ ಸರೋವರಕ್ಕೆ ವಿಷ ಬೆರೆಕೆ
ಒಂದು ಕಡೆಗೆ ದೇವರು, ಧರ್ಮ, ನಂಬಿಕೆಗಳ ಕುರಿತ ಜಿಜ್ಞಾಸೆ. ಮತ್ತೊಂದು ಕಡೆಗೆ ಯಾತನೆಗಳೊಂದಿಗೇ ಬದುಕು ದೂಡುವ ಅನಿವಾರ್ಯತೆ ಎದುರಿಸುತ್ತಿರುವ ಜನರು. ಸಮಸ್ಯೆಗಳನ್ನು ನಿವಾರಿಸುವ ಮಹತ್ವದ ಹೊಣೆಗಾರಿಕೆಯನ್ನು ನಿಭಾಯಿಸಬೇಕಿದ್ದ ಅಧಿಕಾರರೂಢ ಆಡಳಿತಾತ್ಮಕ ವ್ಯವಸ್ಥೆಯು ತನ್ನ ಪಾಡಿಗೆ ತಾನಿರುತ್ತಾ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುತ್ತಾ ಸಹನಶೀಲತೆಯು ಭಾರತೀಯ ಪರಂಪರೆಯ ಬಹುದೊಡ್ಡ ಹೆಮ್ಮೆ ಎಂಬುದನ್ನೇ ಮುನ್ನೆಲೆಗೆ ತರುತ್ತದೆ. ಬದಲಾವಣೆಗೆ ಕಾಯಬೇಕು, ಸಮಸ್ಯೆಗಳಿದ್ದರೆ ಸಹಿಸಿಕೊಳ್ಳಬೇಕು, ಒಂದಲ್ಲ ಒಂದು ದಿವಸ ಅವು ಪರಿಹಾರ ಕಾಣುತ್ತವೆ, ಅದಕ್ಕಾಗಿಯೇ ನಾವು ಶ್ರಮಿಸುತ್ತಿರುವುದು ಎಂದು ಅಧಿಕಾರರೂಢ ರಾಜಕಾರಣ ನಂಬಿಸುತ್ತದೆ. ಪ್ರಶ್ನೆಗಳು, ಪ್ರತಿರೋಧದ ಅಲೆ ಶುರುವಾಗುತ್ತಿದ್ದಂತೆ ದೇವರು, ಧರ್ಮ ಮತ್ತು ನಂಬಿಕೆಗಳಿಗೆ ಸಂಬಂಧಿಸಿದ ಭಾವುಕ ಸಂಗತಿಗಳ ಸರೋವರಕ್ಕೆ ಕಲ್ಲೆಸೆದು ವೈರುಧ್ಯದ ಅಲೆಗಳನ್ನೇಳಿಸಿಬಿಡುತ್ತದೆ.ಶುದ್ಧ ತಿಳಿವಿನ ತಿಳಿನೀರಿನೊಳಗೆ ಧರ್ಮ, ಜಾತಿ, ಲಿಂಗ ಬೇಧದ ವಿವಾದದ ವಿಷವನ್ನು ಬೆರೆಸಿ ರಾಡಿ ಎಬ್ಬಿಸಿಬಿಡುತ್ತದೆ.
ಸ್ವಯಂದ್ವಂದ್ವಗಳ ಒದ್ದಾಟ
ಇದಾವುದರ ಅರಿವಿಲ್ಲದ ಮುಗ್ಧ ಜನರು ದೇವರೇ ಅವತಾರವೆತ್ತಿ ಮುಂದೊಂದು ದಿನ ತಮ್ಮ ಸಮಸ್ಯೆಗೆ ಪರಿಹಾರ ನೀಡುತ್ತಾರೆ ಅಂದುಕೊಳ್ಳುತ್ತಾ, ತಮ್ಮ ಬದುಕನ್ನು ಉದ್ಧರಿಸಿಕೊಳ್ಳುವ ಸಂವಿಧಾನಾತ್ಮಕ ಅವಕಾಶಗಳನ್ನು ನಿರಾಕರಿಸುತ್ತಾ ಅದೇ ರಾಡಿಯೊಳಗೇ ಸಿಲುಕಿ ಹೊರಬರಲಾಗದೇ ಒದ್ದಾಡುತ್ತಿರುತ್ತಾರೆ. ದೇವಾಲಯ ಪ್ರವೇಶಿಸಬೇಕೇ? ಬೇಡವೇ? ಪ್ರವೇಶಿಸದಿದ್ದರೆ ಏನಾಗುತ್ತದೆ? ಪ್ರವೇಶಿಸಿದರೆ ಏನಾಗುತ್ತದೆ? ದೇವಾಲಯ ಪ್ರವೇಶದ ಮೂಲಕವೇ ಭಾರತದ ಸಮಾನತೆಯ ಕನಸು ಸಾಕಾರಗೊಳ್ಳುವ ಮೊದಲ ಹೆಜ್ಜೆ ಶುರುವಾಗಬೇಕು? ಎಂಬ ಪ್ರಶ್ನೆಗಳನ್ನೇ ದೃಷ್ಟಿಯಲ್ಲಿರಿಸಿಕೊಂಡ ಚರ್ಚೆಗಳೇ ಪ್ರಧಾನ ಆದ್ಯತೆ ಪಡೆದುಕೊಂಡುಬಿಡುತ್ತವೆ. ದೇವಾಲಯದೊಳಗೆ ಪ್ರವೇಶ ಸರಿಯೇ ತಪ್ಪೇ? ದೇವಸ್ಥಾನದೊಳಗೆ ಪ್ರವೇಶಿಸಿ ಆಮೇಲೆ ದೇವರು ಕುಪಿತಗೊಂಡರೆ? ಈ ತರಹದ ಸ್ವಯಂದ್ವಂದ್ವಗಳೊಂದಿಗೆ ಜನರು ಒದ್ದಾಡುವ ಹಾಗೆ ವಿಚಿತ್ರ ಸನ್ನಿವೇಶ ಸೃಷ್ಟಿಯಾಗುತ್ತದೆ. ಅಂಥ ಒದ್ದಾಟವನ್ನೇ ರಾಜಕಾರಣ ತನ್ನ ಸಂಕುಚಿತ ಇರುವಿಕೆಯನ್ನು ನಿರಂತರವಾಗಿ ಚಾಲ್ತಿಯಲ್ಲಿರಿಸಿಕೊಳ್ಳುವುದಕ್ಕೆ ಬಳಸಿಕೊಳ್ಳುತ್ತದೆ.
ತಿರುಚಿದ ವಿವರಗಳ ವೈಭವ!
ಸರಿಯಾಗಿ ಆಲೋಚಿಸುವ ಮತ್ತು ಸರಿಯಾಗಿ ಆಲೋಚಿಸದ ಎರಡು ಗುಂಪುಗಳಲ್ಲಿ ಚಿಂತಕರು ವಿಭಜಿಸಲ್ಪಡುತ್ತಿದ್ದಾರೆ. ಸರಿಯಾಗಿ ಆಲೋಚಿಸುವ ಗುಂಪಿನೊಳಗೂ ಸರಿಯಾಗಿ ಆಲೋಚಿಸದವರೂ ಇರಬಹುದು. ಅಂಥವರು ಅತ್ಯಂತ ವಿವೇಚನಾಪೂರ್ಣವಾಗಿ ಯೋಚಿಸಿ ಪ್ರತಿಕ್ರಿಯಿಸುವವರು. ಓದಿಕೊಳ್ಳುವ, ತಿಳಿದುಕೊಳ್ಳುವ, ಇತಿಹಾಸಕ್ಕೆ ಅಪಚಾರ ಬಗೆಯದ ಸಂಯಮದ ವ್ಯಕ್ತಿತ್ವಗಳವರು ಅವರು. ಈ ಗುಂಪಿನಲ್ಲಿಯೂ ಸರಿಯಾಗಿ ಆಲೋಚಿಸದವರೂ ಸಿಗಬಹುದು. ಸರಿಯಾಗಿ ಯೋಚಿಸುವ ಮತ್ತು ಯೋಚಿಸದ ಸಮ್ಮಿಶ್ರ ಗುಂಪಿಗೆ ಪ್ರತಿಯಾಗಿ ಮತ್ತೊಂದು ಗುಂಪು ಯೋಚಿಸುವ ಸಹನೆಯನ್ನೇ ಹೊಂದಿರುವುದಿಲ್ಲ. ಯಥಾಸ್ಥಿತಿ ವಾದಗಳನ್ನೇ ಅತ್ಯಂತ ರಂಜನೀಯವಾಗಿ ಬಿಂಬಿಸುವುದರಲ್ಲಿಯೇ ಖುಷಿ ಕಾಣುವವರು ಇವರು. ತಾವೂ ಯೋಚಿಸುವುದಿಲ್ಲ, ಇನ್ನೊಬ್ಬರು ಯೋಚಿಸುವುದಕ್ಕೂ ಬಿಡುವುದಿಲ್ಲ. ಅಂಥ ಕೆಟಗರಿಯವರು. ಇಂಥ ಗುಂಪುಗಳ ವೈರುಧ್ಯಗಳನ್ನೇ ಇವತ್ತಿನ ರಾಜಕಾರಣವು ತನ್ನ ಮೂಗಿನ ನೇರಕ್ಕೆ ಬಳಸಿಕೊಂಡು ಹೊಸಪೀಳಿಗೆಯನ್ನು ದಾರಿ ತಪ್ಪಿಸುವ ತನ್ನ ಅಜೆಂಡಾವನ್ನು ಅನುಷ್ಠಾನಗೊಳಿಸುತ್ತಿದೆ. ಇತಿಹಾಸದ ಯಾವ ಗಂಧಗಾಳಿ ಗೊತ್ತಿಲ್ಲದವರ ಮುಂದೆ ತಿರುಚಿದ ವಿವರಗಳನ್ನು ಮುಂದಿಟ್ಟಾಗ ಸಹಜವಾಗಿಯೇ ಆರಾಧನಾ ಭಾವ ಹುಟ್ಟಿಕೊಳ್ಳುತ್ತದೆ.
ಚಿಂತಕರ ಅಪಹರಣ
ಈಗಿನ ವೈಚಿತ್ರ್ಯವೆಂದರೆ ಈ ಆರಾಧನೆಯ ಭಾವೋನ್ಮಾದವು ಸರಿಯಾಗಿ ಆಲೋಚಿಸಬೇಕಾದ ಚಿಂತಕರನ್ನೂ ಆವರಿಸಿಕೊಂಡಿದೆ. ತಮಗಿರುವ ಯೋಚಿಸುವ ಶಕ್ತಿಯನ್ನು ಅಧಿಕಾರದಲ್ಲಿರುವವರ ಸುಪರ್ದಿಗೆ ಒಪ್ಪಿಸಿ ಅವರು ಇಟ್ಟ ಹೆಜ್ಜೆಗಳೆಲ್ಲವೂ ಸರಿ ಎಂಬ ಮೂಢನಂಬಿಕೆಯೊಂದಿಗೆ ಇದ್ದು, ಆ ಮೌಢ್ಯವನ್ನು ವರ್ಣರಂಜಿತ ಪದಗಳ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಈ ಗುಂಪಿನಲ್ಲಿ ಈಗಾಗಲೇ ಜನಪ್ರಿಯರಾದ ಲೇಖಕರಿದ್ದಾರೆ. ಸುದಿ ಮಾಧ್ಯಮ ಪ್ರತಿನಿಧಿಸುವ ಹಿರಿಯ ಪತ್ರಕರ್ತರಿದ್ದಾರೆ. ನಟರುಗಳಿದ್ದಾರೆ. ನಟಿಯರಿದ್ದಾರೆ. ತಮ್ಮ ಪ್ರತಿಭೆಯ ಮೂಲಕ ಪಡೆದ ಜನರ ಮನ್ನಣೆಯನ್ನು ಅವರು ಅಧಿಕಾರದಲ್ಲಿರುವವರನ್ನು ಆರಾಧಿಸುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅದೇ ಆರಾಧನಾ ಮನೋಭಾವನೆಯನ್ನು ಜನರೂ ತಾಳುವಂತೆ ಪ್ರಚೋದಿಸುತ್ತಿದ್ದಾರೆ.
ವಿತಂಡವಾದಿ ಸರಳಸೂತ್ರ
ಇಂಥ ಸಂದರ್ಭದಲ್ಲೆಲ್ಲಾ ಅವರು ಸರಳ ಸೂತ್ರವನ್ನು ಅಳವಡಿಸಿಕೊಳ್ಳುತ್ತಾರೆ. ಅಧಿಕಾರದಲ್ಲಿರುವವರನ್ನು ನೀವು ಪ್ರಶ್ನಿಸುತ್ತೀರಿ ಎಂದಾದರೆ, ಯಾರನ್ನು ಆಯ್ಕೆ ಮಾಡುತ್ತೀರಿ? ಇಂಥವರನ್ನಾ? ಎಂದು ಎಸೆದದ್ದಷ್ಟೇ ಅಲ್ಲ, ಇತಿಹಾಸದಲ್ಲಿ ಆಗಿಹೋದ ನಕಾರಾತ್ಮಕ ಸಂಗತಿಗಳನ್ನು ದೇವರು, ಧರ್ಮ ಮತ್ತು ನಂಬಿಕೆಗಳಂತಹ ವಿಷಯಗಳಿಗೆ ತಳುಕು ಹಾಕಿ ಸರಳೀಕರಿಸಿ ವಿತಂಡವಾದವನ್ನು ಮುಂದಿಡುತ್ತಾರೆ. ಟಿವಿ ಚಾನಲ್ಗಳ ಆ್ಯಂಕರ್ಗಳು, ‘ಸುದ್ದಿಮಿತ್ರರು’ ಈ ವಿತಂಡವಾದದ ಒಳಗೇ ಲಭ್ಯವಾಗುವ ವಿವರಗಳನ್ನೇ ಆಧರಿಸಿ ತಾವೇನೋ ಮಹತ್ವದ್ದನ್ನು ಸಂಶೋಧಿಸಿದ್ದೇವೆ ಎನ್ನುವಂತೆ ಮಾತನಾಡುತ್ತಾರೆ. ಈ ಬಗೆಯ ದಾರಿ ತಪ್ಪಿಸುವ ಆಟ ಬಹಳ ದಿವಸಗಳ ಕಾಲ ನಡೆಯುವುದಿಲ್ಲ ಎಂಬ ಸತ್ಯ ಅವರಿಗೆ ಗೊತ್ತಿದ್ದರೂ ನಡೆದಷ್ಟು ದಿವಸ ಮಾಧ್ಯಮಗಳಿಗೆ ಲಾಭ ದಕ್ಕಿದರೆ ಸಾಕಲ್ಲವೇ ಎಂಬ ಭಂಡಧೈರ್ಯದೊಂದಿಗೆ ಇರುತ್ತಾರೆ.
ಪ್ರಶ್ನಿಸಬೇಕು, ದ್ವೇಷಿಸಬಾರದು
ಪ್ರಶ್ನಿಸಬೇಕು, ದ್ವೇಷಿಸಬಾರದು. ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿದವರನ್ನು ತಾರ್ಕಿಕವಾಗಿ ಪ್ರಶ್ನಿಸಿ ಸರಿಹಾದಿಯಲ್ಲಿರುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಚಿಂತಕರು ನಿರ್ವಹಿಸಬೇಕು. ಯಾರೇ ಅಧಿಕಾರಕ್ಕೆ ಬಂದರೂ ಅವರನ್ನು ಎಚ್ಚರಿಸಬೇಕು. ಜನರು ಸರಿಯಾಗಿ ಆಲೋಚಿಸುವಂತೆ ಪ್ರೇರಣೆ ನೀಡಬೇಕು. ಚಿಂತಕರು ಮುಖ್ಯವಾಗಿ ಯಾವುದೇ ರಾಜಕೀಯ ಪಕ್ಷಗಳ ಕಾರ್ಯಕರ್ತರಾಗಿರುವುದಿಲ್ಲ ಎಂಬ ವಿಶ್ವಾಸ ಜನರಲ್ಲಿದೆ. ಆ ವಿಶ್ವಾಸವನ್ನು ಕಳೆದುಕೊಳ್ಳಬಾರದು. ಈ ದೇಶದ ಉನ್ನತ ಹುದ್ದೆಯಿಂದ ಕೆಳಹಂತಗಳ ಆಡಳಿತಾತ್ಮಕ ಸಂಸ್ಥೆಗಳನ್ನು ಪ್ರತಿನಿಧಿಸುವ ನಾಯಕರೆನ್ನಿಸಿಕೊಂಡವರೆಲ್ಲರೂ ನಮಗೆ ಮುಖ್ಯ. ಅವರು ಆ ಹುದ್ದೆಗಳನ್ನು ಅಲಂಕರಿಸಿದ ನಂತರ ಅವರ ಹೊಣೆಗಾರಿಕೆ ಹೆಚ್ಚುತ್ತಲೇ ಇರುತ್ತದೆ ಎಂಬುದನ್ನು ಚಿಂತಕರೆನ್ನಿಸಿಕೊಂಡವರು ನೆನಪಿಸುತ್ತಲೇ ಇರಬೇಕು. ಆದರೆ, ಇಂಥ ಜವಾಬ್ದಾರಿಯನ್ನು ಕೆಲವೇ ಕೆಲವು ಬದ್ಧತೆಯುಳ್ಳವರು ನಿರ್ವಹಿಸುತ್ತಿದ್ದಾರೆ. ಉಳಿದ ಅನೇಕರು ಅಧಿಕಾರದಲ್ಲಿರುವವರ ಬಗ್ಗೆ ಅಂಧಾಭಿಮಾನ ಪ್ರದರ್ಶಿಸುತ್ತಿದ್ದಾರೆ. ಇಂಥವರನ್ನೇ ಬಳಸಿಕೊಂಡು ರಾಜಕೀಯ ಪಡೆಗಳು ತಮ್ಮ ರಹಸ್ಯ ಕಾರ್ಯಸೂಚಿಯನ್ನು ಪ್ರಯೋಗಿಸುತ್ತಿವೆ. ಚಿಂತಕರ ಆ ಪಂಥ ಮತ್ತು ಈ ಪಂಥಗಳನ್ನು ಪರಸ್ಪರ ಸಂಘರ್ಷಕ್ಕಿಳಿಸಿ ಇತಿಹಾಸದ ವ್ಯಾಪ್ತಿಯನ್ನು ಸಂಕುಚಿತಗೊಳಿಸಿ ತಮ್ಮ ಅಧಿಕಾರದಾಹದ ಉದ್ದೇಶಗಳನ್ನು ಈಡೇರಿಸಿಕೊಳ್ಳುತ್ತಿವೆ.
–ಡಾ.ಎನ್.ಕೆ.ಪದ್ಮನಾಭ

ದಿನದ ಸುದ್ದಿ
ಕರ್ನಾಟಕದ 5 ಸೇರಿದಂತೆ ದೇಶದ 103 ಅಭಿವೃದ್ಧಿಪಡಿಸಿದ ರೈಲ್ವೆ ನಿಲ್ದಾಣಗಳ ಲೋಕಾರ್ಪಣೆ

ಸುದ್ದಿದಿನಡೆಸ್ಕ್:ದೇಶಾದ್ಯಂತ ರೈಲು ನಿಲ್ದಾಣಗಳ ಅಭಿವೃದ್ಧಿ ತ್ವರಿತವಾಗಿ ಪೂರ್ಣಗೊಳ್ಳುತ್ತಿದೆ. ಸದ್ಯ ಕಾಮಗಾರಿ ಪೂರ್ಣಗೊಂಡ ಕರ್ನಾಟಕದ 5 ರೈಲ್ವೆ ನಿಲ್ದಾಣಗಳು ಸೇರಿದಂತೆ ದೇಶದ 103 ರೈಲ್ವೆ ನಿಲ್ದಾಣಗಳನ್ನು ಪ್ರಧಾನಿ ನರೇಂದ್ರ ಮೋದಿ ಇಂದು ವರ್ಚುವಲ್ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ.
18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 86 ಜಿಲ್ಲೆಗಳಲ್ಲಿ ಈ ರೈಲ್ವೈ ನಿಲ್ದಾಣಗಳನ್ನು ಒಂದು ಸಾವಿರದ ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ರಾಜಸ್ಥಾನದ ಬಿಕೇನರ್ ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅವರು ಅಭಿವೃದ್ಧಿಪಡಿಸಿದ ನೂತನ ರೈಲ್ವೈ ನಿಲ್ದಾಣಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ಅವರು 26ಸಾವಿರ ಕೋಟಿ ರೂಪಾಯಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ನೈರುತ್ವ ರೈಲ್ವೆ ವಿಭಾಗದ ಧಾರವಾಡ, ಗದಗ, ಬಾಗಲಕೋಟೆ, ಗೋಕಾಕ ಮತ್ತು ಮುನಿರಾಬಾದ್ ಸೇರಿದಂತೆ ವಿವಿಧ ರೈಲ್ವೆ ನಿಲ್ದಾಣಗಳನ್ನು ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಪುನಾರಾಭಿವೃದ್ಧಿಗೊಳಿಸಲಾಗಿದೆ.
ಸಮಯದ ಉಳಿತಾಯದ ಜೊತೆಗೆ ಪರಿಸರ ಸ್ನೇಹಿ ವಾತಾವರಣದ ಮೂಲಕ ಪ್ರಯಾಣಿಕರಿಗೆ ರೈಲು ನಿಲ್ದಾಣಗಳಲ್ಲಿ ಅತ್ಯಾಧುನಿಕ ಸೌಲಭ್ಯ ಲಭ್ಯವಾಗಲಿದೆ. ಪ್ರಯಾಣಿಕರ ಸುಗಮ ಸಂಚಾರಕ್ಕೆ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.
ಈ ಅಮೃತ ಭಾರತ ರೈಲ್ವೆ ಯೋಜನೆಯಡಿ ದೇಶವ್ಯಾಪಿ ರೈಲು ನಿಲ್ದಾಣಗಳನ್ನು ಉನ್ನತೀಕರಣಗೊಳಿಸಲಾಗುತ್ತಿದೆ. ಅಮೃತ ಭಾರತ ರೈಲ್ವೆ ಯೋಜನೆಯಡಿ ಬಾಗಲಕೋಟೆ ರೈಲ್ವೆ ನಿಲ್ದಾಣವನ್ನು ಸುಮಾರು 16 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅತ್ಯಾಧುನಿಕವಾಗಿ ನವೀಕರಿಸಲಾಗಿದೆ. ರೈಲ್ವೆ ನಿಲ್ದಾಣದಲ್ಲಿ ಸುಸಜ್ಜಿತ ತಂಗುದಾಣ, ಶೌಚಾಲಯ ಹಾಗೂ ನೂತನ ಪ್ಲಾಟ್ ಫಾರ್ಮ್ ಮತ್ತು ಎಸ್ಕಲೇಟರ್ ನಿರ್ಮಾಣ ಸೇರಿದಂತೆ ಶುದ್ಧ ಕುಡಿಯುವ ನೀರು ವ್ಯವಸ್ಥೆ ಜೊತೆಗೆ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ.
ಬಾಗಲೋಕೋಟೆ ವಿದ್ಯಾರ್ಥಿ ಭೈರೇಗೌಡ ಮಾತನಾಡಿ, ಕೇಂದ್ರ ಸರ್ಕಾರ ರೈಲ್ವೆ ನಿಲ್ದಾಣಗಳನ್ನು ಪುನರಾಭಿವೃದ್ಧಿಗೊಳಿಸುವ ಮೂಲಕ ಜನರಿಗೆ ಹೆಚ್ಚಿನ ಅನುಕೂಲ ಕಲ್ಪಿಸುತ್ತಿದೆ, ನವೀಕರಣಗೊಂಡ ನಿಲ್ದಾಣ ಪ್ರಯಾಣಿಕ ಸ್ನೇಹಿಯಾಗಿರುವುದು ಸಂತಸದ ಸಂಗತಿ ಎಂದರು.
ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಎ.ಎ ದಂಡಿಯಾ ಮಾತನಾಡಿ, ಬ್ರಿಟಿಷ್ ಕಾಲದಲ್ಲಿ ನಿರ್ಮಾಣಗೊಂಡ ನಿಲ್ದಾಣವನ್ನು ಕೇಂದ್ರ ಸರ್ಕಾರ ನವೀನ ಮಾದರಿಯಲ್ಲಿ ಅಭಿವೃದ್ಧಿಗೊಳಿಸಿರುವುದು ಹೆಮ್ಮೆಯ ಸಂಗತಿ ಎಂದು ಅಭಿಪ್ರಾಯಪಟ್ಟರು.
ಮುಖ್ಯ ರೈಲ್ವೆ ವಾಣಿಜ್ಯ ನಿರೀಕ್ಷಕ ಚಂದ್ರಶೇಖರ್ ಮಾತನಾಡಿ, ಅಮೃತ ಭಾರತ ರೈಲ್ವೆ ಯೋಜನೆಯಡಿ ಹೈಟೆಕ್ ಮಾದರಿಯಲ್ಲಿ ನಿಲ್ದಾಣವನ್ನು ನವೀಕರಿಸಲಾಗಿದೆ, ಆಧುನಿಕ ಸೌಲಭ್ಯಗಳೊಂದಿಗೆ ಸೋಲಾರ್ ವಿದ್ಯುತ್ ಘಟಕಗಳನ್ನು ಸಹ ನಿರ್ಮಿಸಲಾಗಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಸ್ಥಳೀಯ ಉತ್ಪನ್ನಗಳ ಮಾರಾಟ ಮಳಿಗೆಗಳನ್ನು ಸಹ ನಿರ್ಮಿಸಿರುವುದು ವಿಶೇಷವಾಗಿದೆ ಎಂದು ಹೇಳಿದರು.
ಹುಬ್ಬಳಿ-ಧಾರವಾಡ ರೈಲ್ವೆ ನಿಲ್ದಾಣವನ್ನು ಆಧುನಿಕ ಸೌಲಭ್ಯಗಳನ್ನು ಒಳಗೊಂಡಂತೆ ನವೀಕರಿಸಿ, ಸುಮಾರು ೧೭ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮೇಲ್ದರ್ಜೆರಿಸಲಾಗಿದೆ. ನೈರುತ್ಯ ರೈಲ್ವೆ ವಿಭಾಗದ ಐದು ಪ್ರಮುಖ ರೈಲ್ವೆ ನಿಲ್ದಾಣಗಳನ್ನು ಅತ್ಯಾಧುನಿಕ ಮಾದರಿಯಲ್ಲಿ ಪುನಾರಾಭಿವೃದ್ಧಿಗೊಳಿಸಲಾಗಿದೆ.
ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಗಣೇಶ ಸಿಂಗ ಬ್ಯಾಳಿ ಮಾತನಾಡಿ, ಹೈಟೆಕ್ ರೂಪದಲ್ಲಿ ರೈಲ್ವೆ ನಿಲ್ದಾಣವನ್ನು ನವೀಕರಿಸಲಾಗಿರುವುದು ಸಂತಸದ ಸಂಗತಿಯಾಗಿದ್ದು, ಶುದ್ಧ ಕುಡಿಯುವ ನೀರು, ಸುಸಜ್ಜಿತ ತಂಗುದಾಣದೊಂದಿಗೆ, ಎಕ್ಸಲೇಟರ್ ವ್ಯವಸ್ಥೆಯನ್ನು ನಿರ್ಮಿಸಲಾಗಿದ್ದು ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.

ದಿನದ ಸುದ್ದಿ
ಬಾಕಿ ಕಾಮಗಾರಿ ಬೇಗ ಪೂರ್ಣಗೊಳಿಸಿ ; ಕಿರಿದಾದ ರಸ್ತೆ ವಿಸ್ತರಿಸಿ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಿ : ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ

ಸುದ್ದಿದಿನ,ದಾವಣಗೆರೆ:ಜಿಲ್ಲೆಯ ವಿವಿದೆಡೆ ಬಾಕಿ ಇರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಹಲವೆಡೆ ಕಿರಿದಾದ ರಸ್ತೆ ಹಾಗೂ ಅಂಡರ್ ಪಾಸ್, ಸೇವಾ ರಸ್ತೆ ಸ್ಥಾಪಿಸಿ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸಂಸದರಾದ ಡಾ;ಪ್ರಭಾ ಮಲ್ಲಿಕಾರ್ಜುನ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ರಸ್ತೆ ಸುರಕ್ಷತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರದ ಎಸ್.ಎಸ್.ಹೈಟೆಕ್ ಮುಖ್ಯ ಆಸ್ಪತ್ರೆಯ ಮುಖ್ಯ ದ್ವಾರ ರಾಷ್ಟ್ರೀಯ ಹೆದ್ದಾರಿ-48ರ, ಚೈನೇಜ್ ಅಂಡರ್ ಪಾಸ್ ಬಳಿ ಭಾರಿ ವಾಹನ, ನಗರ ಸಾರಿಗೆ, ಲಾರಿ, ಬಸ್ ವಾಹನಗಳು ಸಂಚರಿಸುತ್ತಿವೆ. ಇಲ್ಲಿನ ಕೆಳ ಸೇತುವೆ ತುಂಬಾ ಕಿರಿದಾಗಿದ್ದು, ಸಂಚಾರ ದಟ್ಟಣೆ ಹೆಚ್ಚಾಗಿದೆ. ಈ ಕುರಿತು ಮಾಹಿತಿ ಪಡೆದ ಸಂಸದೆ ಶೀಘ್ರದಲ್ಲಿಯೇ ಇದನ್ನು ಪರಿಶೀಲಿಸಿ ಸಮಗ್ರ ಮಾಹಿತಿ ಒದಗಿಸಬೇಕು ಎಂದು ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಷ್ಟೇ ಅಲ್ಲದೇ ಕೆಲವು ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್ಗಳಲ್ಲಿ ಸೂಕ್ತವಾದ ಬೆಳಕಿನ ವ್ಯವಸ್ಥೆ ಇಲ್ಲಾ. ಸಂಜೆ ಹಾಗೂ ರಾತ್ರಿಯ ಸಮಯದಲ್ಲಿ ಸಾರ್ವಜನಿಕರು, ಮಹಿಳೆಯರು, ವಿದ್ಯಾರ್ಥಿಗಳು ಸಂಚರಿಸುತ್ತಿರುತ್ತಾರೆ. ಅವರುಗಳಿಗೆ ತೊಂದರೆಯಾಗದಂತೆ ಅಗತ್ಯವಿರವ ಕಡೆ ಕ್ಯಾರೇಜ್-ವೇ ಹೆಚ್ಚಿಸುವುದರ ಜೊತೆಗೆ ಬೆಳಕಿನ ವಿದ್ಯುತ್ದೀಪದ ವ್ಯವಸ್ಥೆ ಮಾಡಬೇಕು. ಇದರಿಂದ ಕಳ್ಳತನ, ಅಪಘಾತ ಸೇರಿದಂತೆ ಇನ್ನಿತರೆ ಅಹಿತಕರ ಘಟನೆಗಳು ಜರುಗುವ ಸಂಭವ ಕಡಿಮೆಯಾಗುತ್ತದೆ ಎಂದ ಅವರು, ಮಳೆಗಾಲ ಆರಂಭವಾಗಿದೆ, ಹಲವೆಡೆ ನೀರು ನಿಲ್ಲುವ ಕುರಿತು ವರದಿ, ಆರೋಪ ಕೇಳಿ ಬರುತ್ತಿವೆ. ಆದ್ದರಿಂದ ಅಂತಹ ಸ್ಥಳಗಳನ್ನು ಗುರುತಿಸಿ ಸರಿಪಡಿಸಬೇಕು ಎಂದರು.
ಹರಿಹರ ತಾಲ್ಲೂಕಿನ ಹರಗನಹಳ್ಳಿ ಹಾಗೂ ಆನಗೋಡು, ಹೆಬ್ಬಾಳು ಬಳಿ ಏಕಾ-ಏಕಿ ತಿರುವು ಪಡೆದುಕೊಳ್ಳುವ ವಾಹನಗಳಿಗೆ ಡಾಬಾ ಹೋಟೆಲ್, ಪೆಟ್ರೋಲ್ ಬಂಕ್, ಇನ್ನಿತರೆ ಅಂಗಡಿ ಮುಂಗಟ್ಟುಗಳು ಅವೈಜ್ಞಾನಿಕ ಮತ್ತು ಅನಧಿಕೃತವಾಗಿ ನಿರ್ಮಿಸಿರುವುದರಿಂದ ಅಪಘಾತ ಹೆಚ್ಚಾಗುತ್ತಿವೆ. ಅಲ್ಲಿನ ಅನಧಿಕೃತ, ಮತ್ತು ನಿಯಮಬಾಹಿರವಾಗಿ ಇರುವವರ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.
ಟೋಲ್ಗಳಲ್ಲಿ ಎನ್ಪಿಆರ್ ನಂಬರ್ ಪ್ಲೇಟ್ ನೊಂದಣಿ ಮಾಡಿಕೊಳ್ಳುವ ಉತ್ತಮ ಗುಣಮಟ್ಟದ ಸಿಸಿಟಿವಿ ಮತ್ತು ಬೆಳಕಿನ ವಿದ್ಯುದೀಪಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ನಿರ್ದೇಶಿಸಿದರು. ಇದಕ್ಕೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಕರಾತ್ಮಕವಾಗಿ ಸ್ಪಂದಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ವ್ಯಾಪ್ತಿಯಲ್ಲಿ ಪ್ರತಿ 70 ಕಿ.ಮೀ ವ್ಯಾಪ್ತಿಗೆ 2 ಅಂಬುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕು. ಯಾವುದೇ ರೀತಿಯ ಅಪಘಾತಗಳು ಸಂಭವಿಸಿದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡಲೇ ಸ್ಪಂದಿಸಬೇಕು. ಪ್ರಾಧಿಕಾರದ ಸಹಾಯವಾಣಿ ಸಂಖ್ಯೆ 1033 ಸಂಖ್ಯೆ ಸರಿಯಾದ ರೀತಿಯಲ್ಲಿ ಬಳಕೆಯಾಗುತ್ತಿಲ್ಲ. ಆದ್ದರಿಂದ ಸಹಾಯವಾಣಿ ಸಂಖ್ಯೆಯನ್ನು ಸ್ಥಳೀಯ ಭಾಷೆಯಲ್ಲಿ ಸಂವಹನ ನಡೆಸಲು ಸಹಾಯವಾಗುವಂತೆ ಕ್ರಮವಹಿಸಬೇಕು. ಕೆಲವು ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿ ಇದ್ದಾಗ ಅಪಘಾತಗಳು ಸಂಭವಿಸಿದಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತುರ್ತು ಗಮನಹರಿಸಿ ಸರಿಯಾದ ಸಂದರ್ಭದಲ್ಲಿ ಅಂಬುಲೆನ್ಸ್, ರಕ್ಷಣೆ ಮಾಡುವ ಮೂಲಕ ಸ್ಪಂದಿಸಲು ತಿಳಿಸಿದರು.
ಅದೇ ರೀತಿ ಜಿಲ್ಲೆಯಲ್ಲಿ ಹಾದು ಹೋಗಿರುವ ಕುಂದವಾಡ ರಸ್ತೆಯಲ್ಲಿ ಸೇವಾ ರಸ್ತೆ ನಿರ್ಮಿಸಿಲ್ಲ. ಸೂಕ್ತ ಚರಂಡಿ ವ್ಯವಸ್ತೆ ಕಲ್ಪಿಸದ ಕಾರಣ ಮಳೆ ನೀರು ಸಂಪೂರ್ಣ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಠಿಯಾಗಿದೆ. ಇಂತಹ ಅವೈಜ್ಞಾನಿಕವಾದ ಕಾಮಗಾರಿ ನಿರ್ಮಿಸಿರುವುದಕ್ಕೆ ಅಸಮಧಾನ ವ್ಯಕ್ತಪಡಿಸಿದರು.
ರಸ್ತೆಯ ಇಕ್ಕೆಲಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದು, ಸಾರ್ವಜನಿಕರಿಗೆ, ಸವಾರರಿಗೆ ತೊಡಕುಂಟಾಗಿರುವ ಕುರಿತು ದೂರುಗಳು ಕೇಳಿ ಬರುತ್ತಿವೆ. ಆದ್ದರಿಂದ ತ್ವರಿತವಾಗಿ ತೆರವು ಮಾಡಿಸಿಸುವ ಮೂಲಕ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಲು ತಿಳಿಸಿದರು.
ಹೂವಿನ ಗೂಡಂಗಡಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಸೂಚನೆ: ನಗರದ ಪಿ.ಬಿ ರಸ್ತೆಯ ದೇವರಾಜ ಅರಸು ವೃತ್ತದ ಬಳಿ ಇರುವ ಬಿಎಸ್ಎನ್ಎಲ್ ಕಚೇರಿಯ ಮುಂಭಾಗ ಸುಮಾರು 15-15 ಹೂವಿನ ಗೂಡಂಗಿಡಿಗಳಿದ್ದು, ಅವರುಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ವಾಹನ ಸಂಚಾರಕ್ಕೆ ಅಡ್ಡಿಪಡಿಸದಂತೆ ತಾತ್ಕಾಲಿಕವಾಗಿ ಸೂಕ್ತ ಕ್ರಮವಹಿಸಬೇಕು. ತದನಂತರದ ದಿನಗಳಲ್ಲಿ ಒಂದೆಡೆ ಶಾಶ್ವತ ಸ್ಥಳ ಗುರುತಿಸಿ ಸ್ಥಳಾಂತರಿಸುವ ಕಾರ್ಯ ಮಾಡಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ ತಿಳಿಸಿದರು.
ಈ ವೇಳೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ನರೇಂದ್ರಬಾಬು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಕುಮಾರ್ ಎಂ ಸಂತೋಷ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮಹಾಂತೇಶ್, ವಿಭಾಗೀಯ ನಿಯಂತ್ರಣಾಧಿಕಾರಿ ಫಕ್ರುದ್ದೀನ್, ಡಿಹೆಚ್ಓ ಡಾ.ಷಣ್ಮುಖಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮುಂದಿನ 3 ವರ್ಷಗಳಲ್ಲಿ ಉಳಿದ ಎಲ್ಲಾ ಭರವಸೆಗಳ ಈಡೇರಿಕೆ : ಸಿಎಂ ಸಿದ್ದರಾಮಯ್ಯ

ಸುದ್ದಿದಿನ,ಹೊಸಪೇಟೆ:ಚುನಾವಣೆ ವೇಳೆ ಜನರಿಗೆ ನೀಡಿದ ಭರವಸೆಗಳಲ್ಲಿ 142 ಭರವಸೆಗಳನ್ನು ಎರಡು ವರ್ಷದಲ್ಲಿ ಪೂರೈಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸರ್ಕಾರ ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ಕಂದಾಯ ಇಲಾಖೆ ಹೊಸಪೇಟೆಯಲ್ಲಿ ಆಯೋಜಿಸಿದ್ದ “ಸಮರ್ಪಣೆ ಸಂಕಲ್ಪ” ಸಮಾವೇಶದಲ್ಲಿ 1 ಲಕ್ಷದ 11 ಸಾವಿರದ 111 ಮಂದಿಗೆ ಹಕ್ಕುಪತ್ರ ವಿತರಣೆ ಮಾಡಿ ಮಾತನಾಡಿದ ಅವರು, ಮುಂದಿನ ಮೂರು ವರ್ಷಗಳಲ್ಲಿ ಉಳಿದ ಭರವಸೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕೇಂದ್ರದ ಯೋಜನೆಗಳಿಗೆ ರಾಜ್ಯ ಸರ್ಕಾರ ರಾಜ್ಯದ ಪಾಲನ್ನು ಪೂರ್ತಿ ನೀಡಿದ್ದು, ಕೇಂದ್ರ ಸರ್ಕಾರ ತಮ್ನ ಪಾಲನ್ನು ಕೊಡದೆ ಅನ್ಯಾಯ ಮಾಡುತ್ತಿದೆ ಎಂದು ದೂರಿದ್ದಾರೆ.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಗ್ಯಾರಂಟಿ ಯೋಜನೆಗಳನ್ನು ರಾಜ್ಯದಲ್ಲಿ ಸರ್ಕಾರ ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಒಂದು ಲಕ್ಷದ 111 ಜನರಿಗೆ ಹಕ್ಕು ಪತ್ರಗಳ ವಿತರಣೆ ಮಾಡಲಾಯಿತು.
ನಂತರ ಸರ್ಕಾರದ ಎಲ್ಲ ಇಲಾಖೆಗಳ ಸಾಧನೆಯ ಕಿರು ಹೊತ್ತಿಗೆಗಳನ್ನು ಬಿಡುಗಡೆಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರ ಪುತ್ತಳಿಯನ್ನು ಅನಾವರಣಗೊಳಿಸಿದರು.

-
ದಿನದ ಸುದ್ದಿ6 days ago
ಗ್ಯಾರಂಟಿಗೆ 90 ಸಾವಿರ ಕೋಟಿ ರೂ ಖರ್ಚು, ಗ್ಯಾರಂಟಿಯಿ0ದ ಸರ್ಕಾರ ದಿವಾಳಿಯಾಗಿಲ್ಲ : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ6 days ago
ನುಡಿದಂತೆ ನಡೆದ ಸರ್ಕಾರಕ್ಕೆ 2 ವರ್ಷ | ಮೇ 20 ರಂದು ಹೊಸಪೇಟೆಯಲ್ಲಿ ಸಮರ್ಪಣಾ ಸಂಕಲ್ಪ ಸಮಾವೇಶ ; 1.03 ಲಕ್ಷ ಹಕ್ಕುಪತ್ರ ವಿತರಣೆ : ಸಿಎಂ ಸಿದ್ದರಾಮಯ್ಯ
-
ಅಂಕಣ4 days ago
ಹನಿಗವಿತೆಗಳು | ಬೆಳಕಿನ ಬೆನ್ನ ಹಿಂದೆ
-
ದಿನದ ಸುದ್ದಿ3 days ago
ದಾವಣಗೆರೆ | ಕಾಂಗ್ರೆಸ್ ಸಾಧನೆಯ ಸಮರ್ಪಣೆ ಕಾರ್ಯಕ್ರಮ : ಮೇ.20 ರಂದು ಸಾರಿಗೆ ಬಸ್ಸುಗಳ ಸಂಚಾರದಲ್ಲಿ ವ್ಯತ್ಯಯ
-
ದಿನದ ಸುದ್ದಿ4 days ago
ಹೊಸಪೇಟೆ ನಗರದ ತುಂಬೆಲ್ಲಾ ಜಾಹೀರಾತುಗಳ ಹಾವಳಿ ; ಕಣ್ಣ್ಮುಚ್ಚಿ ಕುಳಿತ ಅಧಿಕಾರಿಗಳು
-
ದಿನದ ಸುದ್ದಿ7 days ago
ಚನ್ನಗಿರಿ | ರೈತರಿಗೆ, ವ್ಯಾಪಾರಿಗಳಿಗೆ ರಿಯಾಯಿತಿ ದರದಲ್ಲಿ ಗೋದಾಮುಗಳ ಬಾಡಿಗೆ
-
ದಿನದ ಸುದ್ದಿ3 days ago
ದಾವಣಗೆರೆ | ಬ್ಯಾಂಕ್ ಆಫ್ ಬರೋಡದಲ್ಲಿ ಮಾಜಿ ಸೈನಿಕರಿಗೆ ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ3 days ago
ಮಲೇಬೆನ್ನೂರು ಪುರಸಭೆ | ಗೌರವಧನ ಆಧಾರದ ಮೇಲೆ ತಾತ್ಕಾಲಿಕ ಸೇವೆ ಪಡೆಯಲು ಅರ್ಜಿ ಆಹ್ವಾನ