ರಾಜಕೀಯ
ಮಾತು, ಮೌನ ಮತ್ತು ಮಿಥ್ಯಾವಾಸ್ತವ
ಈಗ ಮಾತುಗಳದ್ದೇ ಆರ್ಭಟ. ಮಾತು, ಪ್ರತಿಮಾತು, ದಿಢೀರನೆ ಪ್ರತಿಕ್ರಿಯಿಸಿಬಿಡುವ ಸಿಟ್ಟು-ಸೆಡವಿನ ಪ್ರವೃತ್ತಿಗಳ ವಿಜೃಂಭಣೆ. ನಾಯಕರೆನ್ನಿಸಿಕೊಂಡು ಜನಪ್ರಿಯಗೊಂಡವರ ವಿರುದ್ಧ ಯಾರೂ ಉಸಿರೆತ್ತುವ ಹಾಗಿಲ್ಲ. ಆರಾಧನೆಯ ಗುಂಗಿನೊಳಗೆ ಪ್ರಶ್ನಿಸಿದವರನ್ನು ಸುಮ್ಮನಾಗಿಸಿಬಿಡುವ ಜಾಯಮಾನಗಳದ್ದೇ ಪ್ರಭಾವಳಿ. ಅನುಭವಕ್ಕೆ ಬಂದ ಮತ್ತು ಕಣ್ಣಮುಂದಿನ ವಾಸ್ತವಗಳನ್ನು ನೋಡಿಯೂ ನೋಡದಂತಿದ್ದು ಎಲ್ಲರ ಹಾಗೆ ಹೊಗಳುವ ಮನೋವೃತ್ತಿಯನ್ನು ಒತ್ತಾಯಪೂರ್ವಕವಾಗಿ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ. ಇಂಥದ್ದೊಂದು ವಾತಾವರಣವನ್ನೇ ಸಮಕಾಲೀನ ರಾಜಕಾರಣ ನಿರೀಕ್ಷಿಸುತ್ತಿದೆ. ಮಾತು ಮತ್ತು ಮೌನಗಳ ಚಾಣಾಕ್ಷಯುತ ನಿರ್ವಹಣೆಯ ಮೂಲಕ ಅದು ಹೊಸ ಪೀಳಿಗೆಯ ಯೋಚಿಸುವ ಶಕ್ತಿಯನ್ನು ಕೊಂದುಬಿಟ್ಟಿದೆ. ಅಧಿಕಾರರೂಢ ಮತ್ತು ವಿರೋಧ ಪಕ್ಷಗಳು ಯಾವುದು ವಾಸ್ತವವಲ್ಲವೋ ಅದನ್ನು ಸೃಷ್ಟಿಸಿ ಸಮ್ಮತಿಯನ್ನು ಉತ್ಪಾದಿಸಿಕೊಳ್ಳುತ್ತಿವೆ. ವಾಸ್ತವವನ್ನು ಮುಚ್ಚಿಟ್ಟು ಭಾವುಕ ಸಂಗತಿಗಳ ದಾಳಗಳನ್ನು ಎಸೆದು ಪ್ರಜಾಪ್ರಭುತ್ವದ ಅಖಾಡದ ಸಂವೈಧಾನಿಕ ನಿಯಮಾವಳಿಗಳನ್ನು ಉಲ್ಲಂಘಿಸುತ್ತಿವೆ.
ಈಗ ನಮಗೆ ಎಂಥ ರಾಜಕಾರಣ ಬೇಕಾಗಿದೆ ಎಂದರೆ ನಮ್ಮ ಬದುಕು ಅದರಿಂದ ಉದ್ಧರಿಸಲ್ಪಡುವಂತಿರಬೇಕು. ಈ ನಮ್ಮ ಬದುಕಿನ ವ್ಯಾಪ್ತಿಯೊಳಗೆ ಎಲ್ಲ ಧರ್ಮಗಳವರೂ ಇರಬೇಕು. ಎಲ್ಲ ಜಾತಿಗಳವರೂ ಇರಬೇಕು. ಅವರವರ ನಂಬಿಕೆಗಳ ಭಾವಜಗತ್ತನ್ನು ಮತ್ತಷ್ಟು ಉದಾತ್ತಗೊಳಿಸುವ ಪ್ರಯತ್ನಗಳಿಗೆ ಅಲ್ಲಿ ಅವಕಾಶವಿರಬೇಕು. ಆ ಮೂಲಕ ಹೊಸ ವಿಶ್ವಾಸಾರ್ಹತೆ ಮೂಡಬೇಕು. ಅಪನಂಬಿಕೆ ಮತ್ತು ಮೂಢನಂಬಿಕೆಗಳ ಜಾಡ್ಯಗಳನ್ನು ತೊರೆಯುವ ಹೃದಯವೈಶಾಲ್ಯತೆ ನೆಲೆಗೊಳ್ಳಬೇಕು. ಹಾಗಾಗುವ ಹಾಗೆ ರಾಜಕಾರಣವು ನಾಯಕತ್ವವನ್ನು ಚಿಗುರಿಸಬೇಕು. ಮಾತಿನ ಭಾಷಿಕ ಅಬ್ಬರದ ಬದಲು ಮಿತಭಾಷಿಕ ಸೌಜನ್ಯವನ್ನು ಸೃಷ್ಟಿಸಬೇಕು.
ಘಾಸಿಗೊಳ್ಳುತ್ತಿರುವ ಆಯ್ಕೆ ಹಕ್ಕು
ಹಾಗೆ ಆಗುತ್ತಿಲ್ಲ. ಸ್ವಾತಂತ್ರ್ಯಾನಂತರ ಹಲವು ದಶಕಗಳಾದರೂ ಭಾರತದ ಕನಸುಗಳ್ಯಾವುವೂ ಸಾಕಾರಗೊಳ್ಳಲಿಲ್ಲ ಮತ್ತು ಅಧಿಕಾರದಲ್ಲಿದ್ದ ಹಿಂದಿನವರು ಉದ್ದೇಶಪೂರ್ವಕವಾಗಿ ಆ ಕನಸುಗಳನ್ನು ಸಾಕಾರಗೊಳಿಸುವುದರ ಕಡೆಗೆ ಗಮನಹರಿಸಲಿಲ್ಲ ಎಂಬ ಕೊರಗುಗಳನ್ನು ಮುಂದಿಡುತ್ತಲೇ ತಮ್ಮ ಪರವಾದ ಅಲೆಯನ್ನು ಸೃಷ್ಟಿಸಿಕೊಂಡ ರಾಜಕೀಯ ಪಡೆಗಳು ಅಧಿಕಾರಕ್ಕೆ ಬಂದ ತಕ್ಷಣ ಮತ್ತದೇ ಸ್ಥಗಿತತೆಯ ಜಾಡ್ಯವನ್ನೇ ಪರಮಲಕ್ಷಣವಾಗಿಸಿಕೊಂಡಿವೆ. ಯಾವುದನ್ನು ವಿರೋಧಿಸಿ ಅಧಿಕಾರಕ್ಕೆ ಬರುತ್ತಾರೋ ಅವರೇ ತಾವು ಹಿಂದೆ ವಿರೋಧಿಸಿದ್ದ ನಡೆಯನ್ನೇ ಮರುಪ್ರತಿಷ್ಠಾಪಿಸಿಕೊಳ್ಳುವುದು ರಾಜಕಾರಣಿ, ರಾಜಕೀಯ ಪಕ್ಷಗಳ ಅಲಿಖಿತ ಕಡ್ಡಾಯ ನಿಯಮವಾಗಿಬಿಟ್ಟಿದೆಯೇನೋ ಎಂದು ಭಾಸವಾಗುತ್ತಿದೆ. ಈ ವಿಚಿತ್ರ ನಡೆಗಳು ಭಾರತದ ಪ್ರಜೆಗಳ ಆಯ್ಕೆಯ ಹಕ್ಕನ್ನು ಘಾಸಿಗೊಳಿಸಿವೆ.
ನಿರ್ಲಿಪ್ತ ಭಾವ
ಅಧಿಕಾರದಲ್ಲಿದ್ದವರನ್ನು ಪ್ರಶ್ನಿಸಬೇಕು ಎಂಬ ಮನೋಭಾವವು ವಿರೋಧ ಪಕ್ಷಗಳಿಂದ ಪ್ರಚೋದಿತವಾಗಬೇಕಿಲ್ಲ. ಮಾಧ್ಯಮಗಳ ವಿಶ್ಲೇಷಣೆಗಳನ್ನೇ ನೆಚ್ಚಿಕೊಂಡು ಪ್ರಶ್ನಿಸುವ ಅಗತ್ಯವಿಲ್ಲ. ಈ ದೇಶದ ಸಂವಿಧಾನ ಒದಗಿಸಿರುವ ಪ್ರಶ್ನಿಸುವ ಅವಕಾಶವನ್ನು ಬಳಸಿಕೊಳ್ಳುವ ವಿವೇಕ ನಮ್ಮೆಲ್ಲರದ್ದಾಗಿರಬೇಕು. ಈ ವಿವೇಕವನ್ನು ಪ್ರಖರಗೊಳಿಸುವ ನಿಟ್ಟಿನಲ್ಲಿ ವಿರೋಧ ಪಕ್ಷಗಳು ಮತ್ತು ಮಾಧ್ಯಮಗಳು ಗಮನಾರ್ಹ ಪಾತ್ರನಿರ್ವಹಿಸಬೇಕು. ಪ್ರಶ್ನೆ ಕೇಳುವ ಸಾಧ್ಯತೆಗಳನ್ನು ವರ್ತಮಾನದ ರಾಜಕಾರಣ ಹೇಗೆ ಮೊಟಕುಗೊಳಿಸುತ್ತಿದೆ ಎಂದರೆ ಕಣ್ಣಮುಂದೆ ಎಷ್ಟೆಲ್ಲಾ ಊನಗಳಿದ್ದರೂ, ಸ್ವತಃ ವ್ಯವಸ್ಥೆಯ ಲೋಪಗಳ ಕಾರಣಕ್ಕಾಗಿಯೇ ನೋವು ಅನುಭವಿಸಿದರೂ ಅವುಗಳ ಬಗ್ಗೆ ಮಾತನಾಡಬಾರದು ಎಂಬ ನಿರ್ಲಿಪ್ತ ಭಾವವನ್ನೇ ನೆಚ್ಚಿಕೊಳ್ಳುವಂತೆ ಒತ್ತಡಗಳು ಸೃಷ್ಟಿಯಾಗುತ್ತಿವೆ.
ಪ್ರತಿಮೆಯ ನೆಗೆತ!
ಅಧಿಕಾರಕ್ಕೆ ಹತ್ತಿರವಾಗುವ ರಹಸ್ಯ ಕಾರ್ಯಸೂಚಿಯೊಂದಿಗೆ ರಾಜಕೀಯ ಪಡೆಗಳು ಇತಿಹಾಸದ ಮೌಲಿಕ ಸಂಸ್ಥೆಯನ್ನು ತಮ್ಮ ಹತಾರೆಗಳೊಂದಿಗೆ ಈಗಾಗಲೇ ಪ್ರವೇಶಿಸಿಬಿಟ್ಟಿವೆ. ಈಗಾಗಲೇ ಆಗಿಹೋದ ಸಂಗತಿಯೊಂದರ ವಿವರವನ್ನು ತಮ್ಮ ಉದ್ದೇಶಕ್ಕೆ ತಿರುಗಿಸಿಕೊಳ್ಳುವ ಚಾಣಾಕ್ಷ ನಡೆಗಳೊಂದಿಗೆ ಅವು ಯಶಸ್ಸು ಸಾಧಿಸುತ್ತಿವೆ. ಈಗಾಗಲೇ ಆಗಿಹೋದವರನ್ನು ಟೀಕಿಸುವ ಹುಮ್ಮಸ್ಸಿನಲ್ಲಿ ಸದ್ಯಕ್ಕೆ ಸರಿಯಾದ ಹಾದಿ ತೋರಿಸುವ ಆದರ್ಶದ ಐತಿಹಾಸಿಕ ಪರಂಪರೆಯ ಮೌಲಿಕತೆಯನ್ನು ಉದ್ದೇಶಪೂರ್ವಕವಾಗಿ ಹಿನ್ನೆಲೆಗೆ ಸರಿಸಲಾಗುತ್ತಿದೆ. ಈ ಹಿಂದಿನವರು ವಿಜೃಂಭಿಸಿದ ಪ್ರತಿಮಾ ರಾಜಕಾರಣವು ಇದೀಗ ಹೊಸದೊಂದು ನೆಗೆತ ನೆಗೆದಿದೆ ಅಷ್ಟೇ. ಯಾರ ಆದರ್ಶಗಳನ್ನು ನಾವು ಬದುಕಿನೊಳಗೆ ಅಳವಡಿಸಿಕೊಳ್ಳುತ್ತಾ ಸಾಗುವ ಬದಲು ಅವುಗಳನ್ನು ನಾಮ್ಕೇವಾಸ್ತೆ ಎಂಬಂತೆ ನೆನಪಿಸಿಕೊಳ್ಳುತ್ತಾ ಅವರ ಮೂರ್ತಿಗಳನ್ನು ಆರಾಧಿಸಿದೆವು. ಹಾಗೆ ಆರಾಧಿಸುವ ಹಾಗೆ ನಮ್ಮ ಮೇಲೆ ಭಾವುಕ ಪ್ರಭಾವವನ್ನು ಬೀರಲಾಯಿತು. ಈಗ ಆ ತರಹದ ಪ್ರಭಾವ ದಟ್ಟವಾಗಿ ಪ್ರತಿಮಾ ರಾಜಕಾರಣ ಹೊಸದೊಂದು ಕಾರ್ಯಸೂಚಿಯನ್ನು ಕಾರ್ಯಗತಗೊಳಿಸುವುದರ ಕಡೆಗೆ ಕಾರ್ಯೋನ್ಮುಖವಾಗಿದೆ.
ಇತಿಹಾಸ ತಿರುಚುವ ರೋಚಕ ಶೈಲಿ
ಇತಿಹಾಸವನ್ನು ಜನಪ್ರಿಯ ಶೈಲಿಯಲ್ಲಿ ತಿರುಚುವ ನಕಾರಾತ್ಮಕ ಶೈಲಿಯು ಒಂದು ಟ್ರೆಂಡ್ನ ರೂಪದಲ್ಲಿ ಇದೀಗ ಅಸ್ತಿತ್ವದಲ್ಲಿದೆ. ಈಗಾಗಲೇ ಆಗಿಹೋದ ಇತಿಹಾಸದಲ್ಲಿ ನಾವು ನಿಖರ ವಿವರಗಳ ಆಧಾರದಲ್ಲಿ ಮಹತ್ವದ ವ್ಯಕ್ತಿತ್ವಗಳ ಕೊಡುಗೆಗಳನ್ನು ಗ್ರಹಿಸಿಕೊಂಡಿರುತ್ತೇವೆ. ಆ ಕೊಡುಗೆಗಳು ವರ್ತಮಾನ ಮತ್ತು ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವ ರೀತಿಯಲ್ಲಿಯೇ ಚರ್ಚಿತವಾಗಬೇಕು ಎಂಬ ಎಚ್ಚರವನ್ನೂ ಇದೇ ಇತಿಹಾಸದ ವಿವೇಚನಾತ್ಮಕ ವಿಶ್ಲೇಷಣೆಗಳು ನಮ್ಮೊಳಗೆ ನೆಲೆಗೊಳಿಸಿರುತ್ತವೆ. ರಾಜಕೀಯ ಪಡೆಗಳ ಕಾರ್ಯಸೂಚಿಗಳು ಈ ವಿವೇಚನಾತ್ಮಕ ಎಚ್ಚರದ ಪ್ರಜ್ಞೆಯನ್ನು ಒಡೆದುಬಿಡುತ್ತವೆ. ಇಲ್ಲಿಯವರೆಗೆ ಸರಿಯಾಗಿ ಗ್ರಹಿಸಿದವರ ತಲೆಮಾರಿನ ಪ್ರಜ್ಞೆಯನ್ನು ಛಿದ್ರಗೊಳಿಸಿದ್ದಲ್ಲದೇ ಹೊಸ ಪೀಳಿಗೆಯೊಳಗೂ ಅನುಮಾನಗಳನ್ನು ಬಿತ್ತಿ ಅಧಿಕಾರದ ಗಮ್ಯವನ್ನು ತಲುಪಿಕೊಳ್ಳುವ ಹುನ್ನಾರಗಳು ತೀವ್ರಗೊಳ್ಳುವ ಹಾಗೆಯೇ ಈ ಒಡೆಯುವಿಕೆಯು ಅಗಾಧವಾಗಿರುತ್ತದೆ. ಅಹಿಂಸೆಯಿಂದಲಷ್ಟೇ ಸ್ವಾತಂತ್ರ್ಯ ಹೋರಾಟಕ್ಕೆ ಯಶಸ್ಸು ದಕ್ಕಲಿಲ್ಲ, ಗಾಂಧೀಜಿಯೊಬ್ಬರಿಂದಲೇ ಎಲ್ಲವೂ ಆಗಲಿಲ್ಲ, ಹಿಂಸೆಗೆ ಪ್ರಚೋದನೆ ನೀಡಿದವರು ಇಲ್ಲದಿದ್ದರೆ ಸ್ವಾತಂತ್ರ್ಯ ದಕ್ಕುತ್ತಿರಲಿಲ್ಲ, ಸಂವಿಧಾನವನ್ನು ಈ ದೇಶದ ಆಚಾರ-ವಿಚಾರಗಳಿಗೆ ಅನುಗುಣವಾಗಿ ಬದಲಿಸಬೇಕು, ಅದರಲ್ಲಿ ಅನೇಕ ಸಮಸ್ಯೆಗಳಿವೆ, ಇಂಥವರ ಬದಲು ಇಂಥವರು ಪ್ರಧಾನಿಯಾಗಿದ್ದಿದ್ದರೆ ಈ ದೇಶದ ಚಿತ್ರಣವೇ ಬದಲಾಗಿಬಿಟ್ಟಿರುತ್ತಿತ್ತು… – ಹೀಗೆ ವಿವಿಧ ರೀತಿಗಳಲ್ಲಿ ತರಹೇವಾರಿ ವಿತಂಡವಾದಿ ದೃಷ್ಟಿಕೋನಗಳನ್ನು ಹರಿಬಿಟ್ಟು ಇತಿಹಾಸದ ಸಾಂಸ್ಥಿಕ ಮೌಲ್ಯಕ್ಕೆ ಧಕ್ಕೆಯುಂಟುಮಾಡಲಾಗುತ್ತಿದೆ.
ಭಾವುಕ ಸರೋವರಕ್ಕೆ ವಿಷ ಬೆರೆಕೆ
ಒಂದು ಕಡೆಗೆ ದೇವರು, ಧರ್ಮ, ನಂಬಿಕೆಗಳ ಕುರಿತ ಜಿಜ್ಞಾಸೆ. ಮತ್ತೊಂದು ಕಡೆಗೆ ಯಾತನೆಗಳೊಂದಿಗೇ ಬದುಕು ದೂಡುವ ಅನಿವಾರ್ಯತೆ ಎದುರಿಸುತ್ತಿರುವ ಜನರು. ಸಮಸ್ಯೆಗಳನ್ನು ನಿವಾರಿಸುವ ಮಹತ್ವದ ಹೊಣೆಗಾರಿಕೆಯನ್ನು ನಿಭಾಯಿಸಬೇಕಿದ್ದ ಅಧಿಕಾರರೂಢ ಆಡಳಿತಾತ್ಮಕ ವ್ಯವಸ್ಥೆಯು ತನ್ನ ಪಾಡಿಗೆ ತಾನಿರುತ್ತಾ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುತ್ತಾ ಸಹನಶೀಲತೆಯು ಭಾರತೀಯ ಪರಂಪರೆಯ ಬಹುದೊಡ್ಡ ಹೆಮ್ಮೆ ಎಂಬುದನ್ನೇ ಮುನ್ನೆಲೆಗೆ ತರುತ್ತದೆ. ಬದಲಾವಣೆಗೆ ಕಾಯಬೇಕು, ಸಮಸ್ಯೆಗಳಿದ್ದರೆ ಸಹಿಸಿಕೊಳ್ಳಬೇಕು, ಒಂದಲ್ಲ ಒಂದು ದಿವಸ ಅವು ಪರಿಹಾರ ಕಾಣುತ್ತವೆ, ಅದಕ್ಕಾಗಿಯೇ ನಾವು ಶ್ರಮಿಸುತ್ತಿರುವುದು ಎಂದು ಅಧಿಕಾರರೂಢ ರಾಜಕಾರಣ ನಂಬಿಸುತ್ತದೆ. ಪ್ರಶ್ನೆಗಳು, ಪ್ರತಿರೋಧದ ಅಲೆ ಶುರುವಾಗುತ್ತಿದ್ದಂತೆ ದೇವರು, ಧರ್ಮ ಮತ್ತು ನಂಬಿಕೆಗಳಿಗೆ ಸಂಬಂಧಿಸಿದ ಭಾವುಕ ಸಂಗತಿಗಳ ಸರೋವರಕ್ಕೆ ಕಲ್ಲೆಸೆದು ವೈರುಧ್ಯದ ಅಲೆಗಳನ್ನೇಳಿಸಿಬಿಡುತ್ತದೆ.ಶುದ್ಧ ತಿಳಿವಿನ ತಿಳಿನೀರಿನೊಳಗೆ ಧರ್ಮ, ಜಾತಿ, ಲಿಂಗ ಬೇಧದ ವಿವಾದದ ವಿಷವನ್ನು ಬೆರೆಸಿ ರಾಡಿ ಎಬ್ಬಿಸಿಬಿಡುತ್ತದೆ.
ಸ್ವಯಂದ್ವಂದ್ವಗಳ ಒದ್ದಾಟ
ಇದಾವುದರ ಅರಿವಿಲ್ಲದ ಮುಗ್ಧ ಜನರು ದೇವರೇ ಅವತಾರವೆತ್ತಿ ಮುಂದೊಂದು ದಿನ ತಮ್ಮ ಸಮಸ್ಯೆಗೆ ಪರಿಹಾರ ನೀಡುತ್ತಾರೆ ಅಂದುಕೊಳ್ಳುತ್ತಾ, ತಮ್ಮ ಬದುಕನ್ನು ಉದ್ಧರಿಸಿಕೊಳ್ಳುವ ಸಂವಿಧಾನಾತ್ಮಕ ಅವಕಾಶಗಳನ್ನು ನಿರಾಕರಿಸುತ್ತಾ ಅದೇ ರಾಡಿಯೊಳಗೇ ಸಿಲುಕಿ ಹೊರಬರಲಾಗದೇ ಒದ್ದಾಡುತ್ತಿರುತ್ತಾರೆ. ದೇವಾಲಯ ಪ್ರವೇಶಿಸಬೇಕೇ? ಬೇಡವೇ? ಪ್ರವೇಶಿಸದಿದ್ದರೆ ಏನಾಗುತ್ತದೆ? ಪ್ರವೇಶಿಸಿದರೆ ಏನಾಗುತ್ತದೆ? ದೇವಾಲಯ ಪ್ರವೇಶದ ಮೂಲಕವೇ ಭಾರತದ ಸಮಾನತೆಯ ಕನಸು ಸಾಕಾರಗೊಳ್ಳುವ ಮೊದಲ ಹೆಜ್ಜೆ ಶುರುವಾಗಬೇಕು? ಎಂಬ ಪ್ರಶ್ನೆಗಳನ್ನೇ ದೃಷ್ಟಿಯಲ್ಲಿರಿಸಿಕೊಂಡ ಚರ್ಚೆಗಳೇ ಪ್ರಧಾನ ಆದ್ಯತೆ ಪಡೆದುಕೊಂಡುಬಿಡುತ್ತವೆ. ದೇವಾಲಯದೊಳಗೆ ಪ್ರವೇಶ ಸರಿಯೇ ತಪ್ಪೇ? ದೇವಸ್ಥಾನದೊಳಗೆ ಪ್ರವೇಶಿಸಿ ಆಮೇಲೆ ದೇವರು ಕುಪಿತಗೊಂಡರೆ? ಈ ತರಹದ ಸ್ವಯಂದ್ವಂದ್ವಗಳೊಂದಿಗೆ ಜನರು ಒದ್ದಾಡುವ ಹಾಗೆ ವಿಚಿತ್ರ ಸನ್ನಿವೇಶ ಸೃಷ್ಟಿಯಾಗುತ್ತದೆ. ಅಂಥ ಒದ್ದಾಟವನ್ನೇ ರಾಜಕಾರಣ ತನ್ನ ಸಂಕುಚಿತ ಇರುವಿಕೆಯನ್ನು ನಿರಂತರವಾಗಿ ಚಾಲ್ತಿಯಲ್ಲಿರಿಸಿಕೊಳ್ಳುವುದಕ್ಕೆ ಬಳಸಿಕೊಳ್ಳುತ್ತದೆ.
ತಿರುಚಿದ ವಿವರಗಳ ವೈಭವ!
ಸರಿಯಾಗಿ ಆಲೋಚಿಸುವ ಮತ್ತು ಸರಿಯಾಗಿ ಆಲೋಚಿಸದ ಎರಡು ಗುಂಪುಗಳಲ್ಲಿ ಚಿಂತಕರು ವಿಭಜಿಸಲ್ಪಡುತ್ತಿದ್ದಾರೆ. ಸರಿಯಾಗಿ ಆಲೋಚಿಸುವ ಗುಂಪಿನೊಳಗೂ ಸರಿಯಾಗಿ ಆಲೋಚಿಸದವರೂ ಇರಬಹುದು. ಅಂಥವರು ಅತ್ಯಂತ ವಿವೇಚನಾಪೂರ್ಣವಾಗಿ ಯೋಚಿಸಿ ಪ್ರತಿಕ್ರಿಯಿಸುವವರು. ಓದಿಕೊಳ್ಳುವ, ತಿಳಿದುಕೊಳ್ಳುವ, ಇತಿಹಾಸಕ್ಕೆ ಅಪಚಾರ ಬಗೆಯದ ಸಂಯಮದ ವ್ಯಕ್ತಿತ್ವಗಳವರು ಅವರು. ಈ ಗುಂಪಿನಲ್ಲಿಯೂ ಸರಿಯಾಗಿ ಆಲೋಚಿಸದವರೂ ಸಿಗಬಹುದು. ಸರಿಯಾಗಿ ಯೋಚಿಸುವ ಮತ್ತು ಯೋಚಿಸದ ಸಮ್ಮಿಶ್ರ ಗುಂಪಿಗೆ ಪ್ರತಿಯಾಗಿ ಮತ್ತೊಂದು ಗುಂಪು ಯೋಚಿಸುವ ಸಹನೆಯನ್ನೇ ಹೊಂದಿರುವುದಿಲ್ಲ. ಯಥಾಸ್ಥಿತಿ ವಾದಗಳನ್ನೇ ಅತ್ಯಂತ ರಂಜನೀಯವಾಗಿ ಬಿಂಬಿಸುವುದರಲ್ಲಿಯೇ ಖುಷಿ ಕಾಣುವವರು ಇವರು. ತಾವೂ ಯೋಚಿಸುವುದಿಲ್ಲ, ಇನ್ನೊಬ್ಬರು ಯೋಚಿಸುವುದಕ್ಕೂ ಬಿಡುವುದಿಲ್ಲ. ಅಂಥ ಕೆಟಗರಿಯವರು. ಇಂಥ ಗುಂಪುಗಳ ವೈರುಧ್ಯಗಳನ್ನೇ ಇವತ್ತಿನ ರಾಜಕಾರಣವು ತನ್ನ ಮೂಗಿನ ನೇರಕ್ಕೆ ಬಳಸಿಕೊಂಡು ಹೊಸಪೀಳಿಗೆಯನ್ನು ದಾರಿ ತಪ್ಪಿಸುವ ತನ್ನ ಅಜೆಂಡಾವನ್ನು ಅನುಷ್ಠಾನಗೊಳಿಸುತ್ತಿದೆ. ಇತಿಹಾಸದ ಯಾವ ಗಂಧಗಾಳಿ ಗೊತ್ತಿಲ್ಲದವರ ಮುಂದೆ ತಿರುಚಿದ ವಿವರಗಳನ್ನು ಮುಂದಿಟ್ಟಾಗ ಸಹಜವಾಗಿಯೇ ಆರಾಧನಾ ಭಾವ ಹುಟ್ಟಿಕೊಳ್ಳುತ್ತದೆ.
ಚಿಂತಕರ ಅಪಹರಣ
ಈಗಿನ ವೈಚಿತ್ರ್ಯವೆಂದರೆ ಈ ಆರಾಧನೆಯ ಭಾವೋನ್ಮಾದವು ಸರಿಯಾಗಿ ಆಲೋಚಿಸಬೇಕಾದ ಚಿಂತಕರನ್ನೂ ಆವರಿಸಿಕೊಂಡಿದೆ. ತಮಗಿರುವ ಯೋಚಿಸುವ ಶಕ್ತಿಯನ್ನು ಅಧಿಕಾರದಲ್ಲಿರುವವರ ಸುಪರ್ದಿಗೆ ಒಪ್ಪಿಸಿ ಅವರು ಇಟ್ಟ ಹೆಜ್ಜೆಗಳೆಲ್ಲವೂ ಸರಿ ಎಂಬ ಮೂಢನಂಬಿಕೆಯೊಂದಿಗೆ ಇದ್ದು, ಆ ಮೌಢ್ಯವನ್ನು ವರ್ಣರಂಜಿತ ಪದಗಳ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಈ ಗುಂಪಿನಲ್ಲಿ ಈಗಾಗಲೇ ಜನಪ್ರಿಯರಾದ ಲೇಖಕರಿದ್ದಾರೆ. ಸುದಿ ಮಾಧ್ಯಮ ಪ್ರತಿನಿಧಿಸುವ ಹಿರಿಯ ಪತ್ರಕರ್ತರಿದ್ದಾರೆ. ನಟರುಗಳಿದ್ದಾರೆ. ನಟಿಯರಿದ್ದಾರೆ. ತಮ್ಮ ಪ್ರತಿಭೆಯ ಮೂಲಕ ಪಡೆದ ಜನರ ಮನ್ನಣೆಯನ್ನು ಅವರು ಅಧಿಕಾರದಲ್ಲಿರುವವರನ್ನು ಆರಾಧಿಸುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅದೇ ಆರಾಧನಾ ಮನೋಭಾವನೆಯನ್ನು ಜನರೂ ತಾಳುವಂತೆ ಪ್ರಚೋದಿಸುತ್ತಿದ್ದಾರೆ.
ವಿತಂಡವಾದಿ ಸರಳಸೂತ್ರ
ಇಂಥ ಸಂದರ್ಭದಲ್ಲೆಲ್ಲಾ ಅವರು ಸರಳ ಸೂತ್ರವನ್ನು ಅಳವಡಿಸಿಕೊಳ್ಳುತ್ತಾರೆ. ಅಧಿಕಾರದಲ್ಲಿರುವವರನ್ನು ನೀವು ಪ್ರಶ್ನಿಸುತ್ತೀರಿ ಎಂದಾದರೆ, ಯಾರನ್ನು ಆಯ್ಕೆ ಮಾಡುತ್ತೀರಿ? ಇಂಥವರನ್ನಾ? ಎಂದು ಎಸೆದದ್ದಷ್ಟೇ ಅಲ್ಲ, ಇತಿಹಾಸದಲ್ಲಿ ಆಗಿಹೋದ ನಕಾರಾತ್ಮಕ ಸಂಗತಿಗಳನ್ನು ದೇವರು, ಧರ್ಮ ಮತ್ತು ನಂಬಿಕೆಗಳಂತಹ ವಿಷಯಗಳಿಗೆ ತಳುಕು ಹಾಕಿ ಸರಳೀಕರಿಸಿ ವಿತಂಡವಾದವನ್ನು ಮುಂದಿಡುತ್ತಾರೆ. ಟಿವಿ ಚಾನಲ್ಗಳ ಆ್ಯಂಕರ್ಗಳು, ‘ಸುದ್ದಿಮಿತ್ರರು’ ಈ ವಿತಂಡವಾದದ ಒಳಗೇ ಲಭ್ಯವಾಗುವ ವಿವರಗಳನ್ನೇ ಆಧರಿಸಿ ತಾವೇನೋ ಮಹತ್ವದ್ದನ್ನು ಸಂಶೋಧಿಸಿದ್ದೇವೆ ಎನ್ನುವಂತೆ ಮಾತನಾಡುತ್ತಾರೆ. ಈ ಬಗೆಯ ದಾರಿ ತಪ್ಪಿಸುವ ಆಟ ಬಹಳ ದಿವಸಗಳ ಕಾಲ ನಡೆಯುವುದಿಲ್ಲ ಎಂಬ ಸತ್ಯ ಅವರಿಗೆ ಗೊತ್ತಿದ್ದರೂ ನಡೆದಷ್ಟು ದಿವಸ ಮಾಧ್ಯಮಗಳಿಗೆ ಲಾಭ ದಕ್ಕಿದರೆ ಸಾಕಲ್ಲವೇ ಎಂಬ ಭಂಡಧೈರ್ಯದೊಂದಿಗೆ ಇರುತ್ತಾರೆ.
ಪ್ರಶ್ನಿಸಬೇಕು, ದ್ವೇಷಿಸಬಾರದು
ಪ್ರಶ್ನಿಸಬೇಕು, ದ್ವೇಷಿಸಬಾರದು. ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿದವರನ್ನು ತಾರ್ಕಿಕವಾಗಿ ಪ್ರಶ್ನಿಸಿ ಸರಿಹಾದಿಯಲ್ಲಿರುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಚಿಂತಕರು ನಿರ್ವಹಿಸಬೇಕು. ಯಾರೇ ಅಧಿಕಾರಕ್ಕೆ ಬಂದರೂ ಅವರನ್ನು ಎಚ್ಚರಿಸಬೇಕು. ಜನರು ಸರಿಯಾಗಿ ಆಲೋಚಿಸುವಂತೆ ಪ್ರೇರಣೆ ನೀಡಬೇಕು. ಚಿಂತಕರು ಮುಖ್ಯವಾಗಿ ಯಾವುದೇ ರಾಜಕೀಯ ಪಕ್ಷಗಳ ಕಾರ್ಯಕರ್ತರಾಗಿರುವುದಿಲ್ಲ ಎಂಬ ವಿಶ್ವಾಸ ಜನರಲ್ಲಿದೆ. ಆ ವಿಶ್ವಾಸವನ್ನು ಕಳೆದುಕೊಳ್ಳಬಾರದು. ಈ ದೇಶದ ಉನ್ನತ ಹುದ್ದೆಯಿಂದ ಕೆಳಹಂತಗಳ ಆಡಳಿತಾತ್ಮಕ ಸಂಸ್ಥೆಗಳನ್ನು ಪ್ರತಿನಿಧಿಸುವ ನಾಯಕರೆನ್ನಿಸಿಕೊಂಡವರೆಲ್ಲರೂ ನಮಗೆ ಮುಖ್ಯ. ಅವರು ಆ ಹುದ್ದೆಗಳನ್ನು ಅಲಂಕರಿಸಿದ ನಂತರ ಅವರ ಹೊಣೆಗಾರಿಕೆ ಹೆಚ್ಚುತ್ತಲೇ ಇರುತ್ತದೆ ಎಂಬುದನ್ನು ಚಿಂತಕರೆನ್ನಿಸಿಕೊಂಡವರು ನೆನಪಿಸುತ್ತಲೇ ಇರಬೇಕು. ಆದರೆ, ಇಂಥ ಜವಾಬ್ದಾರಿಯನ್ನು ಕೆಲವೇ ಕೆಲವು ಬದ್ಧತೆಯುಳ್ಳವರು ನಿರ್ವಹಿಸುತ್ತಿದ್ದಾರೆ. ಉಳಿದ ಅನೇಕರು ಅಧಿಕಾರದಲ್ಲಿರುವವರ ಬಗ್ಗೆ ಅಂಧಾಭಿಮಾನ ಪ್ರದರ್ಶಿಸುತ್ತಿದ್ದಾರೆ. ಇಂಥವರನ್ನೇ ಬಳಸಿಕೊಂಡು ರಾಜಕೀಯ ಪಡೆಗಳು ತಮ್ಮ ರಹಸ್ಯ ಕಾರ್ಯಸೂಚಿಯನ್ನು ಪ್ರಯೋಗಿಸುತ್ತಿವೆ. ಚಿಂತಕರ ಆ ಪಂಥ ಮತ್ತು ಈ ಪಂಥಗಳನ್ನು ಪರಸ್ಪರ ಸಂಘರ್ಷಕ್ಕಿಳಿಸಿ ಇತಿಹಾಸದ ವ್ಯಾಪ್ತಿಯನ್ನು ಸಂಕುಚಿತಗೊಳಿಸಿ ತಮ್ಮ ಅಧಿಕಾರದಾಹದ ಉದ್ದೇಶಗಳನ್ನು ಈಡೇರಿಸಿಕೊಳ್ಳುತ್ತಿವೆ.
–ಡಾ.ಎನ್.ಕೆ.ಪದ್ಮನಾಭ

ದಿನದ ಸುದ್ದಿ
ಶಿಕ್ಷಕರು, ವಾರ್ಡನ್ಗಳಿಗೆ ಪೋಕ್ಸೊ ಕಾಯ್ದೆ ತರಬೇತಿ ನೀಡಿ
ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ‘ಚೈಲ್ಡ್ ಹೆಲ್ಪ್ಲೈನ್’ ಸಂಖ್ಯೆಯನ್ನು ಪ್ರದರ್ಶಿಸಬೇಕು ಹಾಗೂ ಶಿಕ್ಷಕರು ಮತ್ತು ವಾರ್ಡನ್ಗಳಿಗೆ ಪೋಕ್ಸೊ ಕಾಯ್ದೆ, ಮಕ್ಕಳ ಹಕ್ಕುಗಳು ಹಾಗೂ ಆನ್ಲೈನ್ ವಂಚನೆಗಳ ಕುರಿತು ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ. ಶಮ್ಲಾ ಇಕ್ಬಾಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಹಮ್ಮಿಕೊಳ್ಳಲಾಗಿದ್ದ ದಾವಣಗೆರೆ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ತಂತ್ರಜ್ಞಾನ ಆಧಾರಿತ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ‘ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್’ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಸಭೆಯಲ್ಲಿದ್ದ ಜಿಲ್ಲಾಧಿಕಾರಿಗಳಾದ ಗಂಗಾಧರಸ್ವಾಮಿ ಜಿ.ಎಂ ಅವರು ಮಾಹಿತಿ ನೀಡಿ, ಈ ಯೋಜನೆಗಾಗಿ ಸುಮಾರು 20 ಕೋಟಿ ರೂಪಾಯಿಗಳ ಅನುದಾನವನ್ನು ಕೋರಲಾಗಿದ್ದು, ಪ್ರಾಥಮಿಕ ಹಂತವಾಗಿ ಕನಿಷ್ಠ 10 ಕೋಟಿ ರೂಪಾಯಿ ಬಿಡುಗಡೆಯಾದರೂ ತಕ್ಷಣವೇ ಕಾಮಗಾರಿ ಆರಂಭಿಸಲಾಗುವುದು ಎಂದರು. ಈ ಯೋಜನೆಗೆ ಸಂಬಂಧಿಸಿದಂತೆ ಸಚಿವರು ಹಾಗೂ ಐಟಿ ಇಲಾಖೆಯ ಉನ್ನತ ಅಧಿಕಾರಿಗಳು ಈಗಾಗಲೇ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ವಿವರಿಸಿದರು.
ಪ್ರಸ್ತುತ ಶಾಲಾ-ಕಾಲೇಜುಗಳಿಗೆ ರಜೆ ಇರುವುದರಿಂದ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಲ್ಲದಿದ್ದರೂ, ಮುಂಬರುವ ಹೊಸ ಶೈಕ್ಷಣಿಕ ವರ್ಷಕ್ಕೆ ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇನ್ನುಮುಂದೆ ಪ್ರತಿ ತಿಂಗಳು ವಸತಿ ನಿಲಯಗಳಲ್ಲಿ ಸಂಜೆ ವೇಳೆ ಅರ್ಧ ಗಂಟೆಗಳ ಕಾಲ ವಚನ ಸಾಹಿತ್ಯ, ದಲಿತ ಸಾಹಿತ್ಯ ಹಾಗೂ ಮಹಿಳಾ ಸಾಹಿತ್ಯದ ಕುರಿತು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದ್ದು, ಮುಂದಿನ ತಿಂಗಳಿಂದ ಮಾನ್ಯ ಸಂಸದರ ನೇತೃತ್ವದಲ್ಲಿ ಇದಕ್ಕೆ ಚಾಲನೆ ನೀಡಲಾಗುವುದು. ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿದ್ದ ಸಮಾಜ ಕಲ್ಯಾಣ, ಬಿ.ಸಿ.ಎಂ, ಅಲ್ಪಸಂಖ್ಯಾತರ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಎಲ್ಲಾ ವಸತಿ ನಿಲಯಗಳಿಗೆ ಸ್ವಂತ ನಿವೇಶನಗಳನ್ನು ಮಂಜೂರು ಮಾಡಲಾಗಿದ್ದು, ಅನುದಾನ ಬಂದ ತಕ್ಷಣ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದರು.
ವಸತಿ ನಿಲಯದ ಮಕ್ಕಳಿಗೆ ‘ಹೆಲ್ತ್ ಕಾರ್ಡ್’ ವಿತರಿಸಲಾಗುತ್ತಿದ್ದು, ಪ್ರತಿ ತಿಂಗಳು ಕಡ್ಡಾಯ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಫಲಿತಾಂಶವನ್ನು ಉತ್ತಮಪಡಿಸಲು ಶಿಕ್ಷಣ ಇಲಾಖೆ ವಿಶೇಷ ಶ್ರಮವಹಿಸುತ್ತಿದ್ದು, ಫಲಿತಾಂಶದಲ್ಲಿ ಹಿಂದುಳಿದಿರುವ ಶಾಲೆಗಳನ್ನು ಅಧಿಕಾರಿಗಳು ದತ್ತು ಪಡೆದುಕೊಂಡು ನಿರಂತರ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಮತ್ತು ಸಿಇಒ ಸ್ವತಃ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಗುಣಮಟ್ಟವನ್ನು ಪರಿಶೀಲಿಸುತ್ತಿದ್ದು, ಹಿಂದುಳಿದ ವಿದ್ಯಾರ್ಥಿಗಳಿಗೆ ಮುಂಜಾನೆ ಮತ್ತು ಸಂಜೆ ವಿಶೇಷ ತರಗತಿಗಳನ್ನು ಆಯೋಜಿಸುತ್ತಿದ್ದಾರೆ ಎಂದರು.
ಕಳೆದ ವರ್ಷ ಜಿಲ್ಲೆಯಲ್ಲಿ ಯಾವುದೇ ಬಾಲ್ಯವಿವಾಹ ಪ್ರಕರಣಗಳು ದಾಖಲಾಗಿರಲಿಲ್ಲ. ಆದರೆ, ಕಳೆದ ತಿಂಗಳು ಶಾದಿಮಹಲ್ನಲ್ಲಿ ನಡೆಯುತ್ತಿದ್ದ ವಿವಾಹವೊಂದರ ಮೇಲೆ ದಾಳಿ ನಡೆಸಿ, ಅಪ್ರಾಪ್ತ ಬಾಲಕಿಯರ ಬಾಲ್ಯವಿವಾಹವನ್ನು ಯಶಸ್ವಿಯಾಗಿ ತಡೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳು ಸಭೆಗೆ ತಿಳಿಸಿದರು. ಇನ್ನು ಮುಖ್ಯ ಕಾರ್ಯದರ್ಶಿಗಳ ಆದೇಶದಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಸಿ.ಇ.ಒ ಅವರು ಜಿಲ್ಲೆಯ ಆಸ್ಪತ್ರೆಗಳಿಗೆ ಆಕಸ್ಮಿಕ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೆಲವು ನರ್ಸಿಂಗ್ ಹೋಂಗಳಲ್ಲಿ ಶೇಕಡಾ 100 ರಷ್ಟು ಸಿಸೇರಿಯನ್ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ, ವೈದ್ಯರ ಸಭೆ ಕರೆದು ಕಡ್ಡಾಯವಾಗಿ ನೈಸರ್ಗಿಕ ಹೆರಿಗೆಗೆ ಆದ್ಯತೆ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ತಾಯಿ ಮರಣ ಪ್ರಮಾಣವನ್ನು ಯಶಸ್ವಿಯಾಗಿ ನಿಯಂತ್ರಿಸಲಾಗಿದ್ದು, ಪ್ರಸ್ತುತ ಇದು ರಾಜ್ಯದ ಸರಾಸರಿಗಿಂತ ಕಡಿಮೆ ಇರುವುದು ಜಿಲ್ಲೆಯ ದೊಡ್ಡ ಸಾಧನೆಯಾಗಿದೆ. ಜಿಲ್ಲೆಯಲ್ಲಿ ಸದ್ಯ ಚರ್ಮರೋಗ ತಜ್ಞರು, ಸ್ತ್ರೀರೋಗ ತಜ್ಞರು ಹಾಗೂ ಅರಿವಳಿಕೆ ತಜ್ಞರ ಹುದ್ದೆಗಳು ಖಾಲಿ ಇದ್ದು, ಲಭ್ಯವಿರುವ ಸಂಪನ್ಮೂಲಗಳಲ್ಲೇ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಕೃಷಿ, ನೀರಾವರಿ ಹಾಗೂ ನಾಗರಿಕ ಸೌಲಭ್ಯಗಳು
ಮುಂಬರುವ ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ ಸಂಪೂರ್ಣ ಸಜ್ಜಾಗಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಪ್ರಮಾಣದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ಅಡಿಕೆ-ತೆಂಗಿನ ಜೊತೆಗೆ ಹಣ್ಣು ಮತ್ತು ತರಕಾರಿ ಬೆಳೆಗಳಿಗೂ ಉತ್ತೇಜನ ನೀಡಲಾಗುತ್ತಿದ್ದು, ಹನಿ ನೀರಾವರಿ ಯೋಜನೆ ಸಬ್ಸಿಡಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ.
ಗ್ರಾಮೀಣ ಭಾಗದ ‘ಜಲಜೀವನ್ ಮಿಷನ್’ ಯೋಜನೆಯಡಿ ಪೈಪ್ಲೈನ್ ಮತ್ತು ನಲ್ಲಿ ಸಂಪರ್ಕ ಕಾರ್ಯಗಳು ಕೊನೆಯ ಹಂತದಲ್ಲಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗದಂತೆ ಇಂಜಿನಿಯರ್ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ನಗರದ ಪ್ರಮುಖ ರಸ್ತೆಗಳ ನವೀಕರಣ, ಸ್ಮಾರ್ಟ್ ರಸ್ತೆಗಳ ನಿರ್ಮಾಣ ಹಾಗೂ ಒಳಚರಂಡಿ ಆಧುನೀಕರಣ ಪ್ರಗತಿಯಲ್ಲಿದೆ. ಘನತ್ಯಾಜ್ಯ ನಿರ್ವಹಣೆಯನ್ನು ಮತ್ತಷ್ಟು ವ್ಯವಸ್ಥಿತಗೊಳಿಸಲು ಸೂಚಿಸಲಾಗಿದೆ.
ಸುಪ್ರೀಂ ಕೋರ್ಟ್ ಆದೇಶಕ್ಕೂ ಮುನ್ನವೇ ದಾವಣಗೆರೆಯಲ್ಲಿ ಬೀದಿನಾಯಿಗಳಿಗೆ ವ್ಯಾಕ್ಸಿನೇಷನ್ ಮತ್ತು ಸ್ಟೆರಿಲೈಸೇಶನ್ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದ್ದು, ಈಗಾಗಲೇ ಶೇಕಡಾ 80 ರಷ್ಟು ಯಶಸ್ಸು ಸಾಧಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಶೇಖರ್ ಹೆಚ್.ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿಗಳಾದ ಗಿತ್ತೆ ಮಾಧವ ವಿಠ್ಠಲರಾವ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಲಾರಿ, ಟ್ರಾಕ್ಟರ್ ಗಳಿಗೆ ಟ್ರಿಪ್ ಚೀಟಿ ಇಲ್ಲದೆ ಅಕ್ರಮ ಸಾಗಾಣಿಕೆ ; ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಶಾಮೀಲು..!?
ಡಾ. ಗಿರೀಶ್ ಕುಮಾರ್ ಗೌಡ ಬಳ್ಳಾರಿ
ಸುದ್ದಿದಿನ,ಬಳ್ಳಾರಿ:ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ನಾಪತ್ತೆ. ಲಾರಿಗಳ ಮಾಲೀಕರೊಂದಿಗೆ ಶ್ಯಾಮಿಲು. ಲಾರಿ, ಟ್ರಾಕ್ಟರ್ ಗಳಿಗೆ ಟ್ರಿಪ್ ಚೀಟಿ ಇಲ್ಲದೇ, ಅಕ್ರಮ ಕೆಂಪು ಮಣ್ಣು, ಜಲ್ಲಿ, ಕಲ್ಲು ಸಾಗಾಣಿಕೆ, ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ ಎನ್ನುವ ಬಹು ದೊಡ್ಡ ಆರೋಪ ಕೇಳಿಬಂದಿದೆ.
ಬಳ್ಳಾರಿ ನಗರದ ಹೊರವಲಯದ ಕಪ್ಪಗಲ್ಲು ರಸ್ತೆಯಲ್ಲಿನ ಲೇಔಟ್ ಮನೆ ನಿರ್ಮಾಣಕ್ಕೆ ಅಕ್ರಮ ಕೆಂಪು ಮಣ್ಣು ಸಾಗಾಣಿಕೆ ಮಾಡುತ್ತಿರುವ ದೃಶ್ಯ ಕಂಡುಬಂದಿದೆ.
ಇನ್ನು ಲಾರಿಯಲ್ಲಿ ಅಕ್ರಮವಾಗಿ ಕೆಂಪು ಮಣ್ಣು ಸಾಗಾಣಿಕೆ ಮಾಡುತ್ತಿದ್ದು ಹೊನ್ನಳ್ಳಿ ತಾಂಡಾದ ತರುಣ್ ಎನ್ನುವ ಮಾಲೀಕರಿಗೆ ಸೇರಿದ ಲಾರಿಯಾಗಿದ್ದು. ಲಾರಿ ನಂಬರ್ ಕೆ.ಎ 35 ಸಿ 2813 ಆಗಿದೆ. ಸಂಜೆ 5 ಗಂಟೆ 30 ನಿಮಿಷಕ್ಕೆ ಕಪ್ಪಗಲ್ಲು ರಸ್ತೆಯಲ್ಲಿನ ಲೇಔಟ್ ಮನೆ ನಿರ್ಮಾಣಕ್ಕೆ ಅಕ್ರಮ ಕೆಂಪು ಮಣ್ಣು ಲಾರಿಯಲ್ಲಿ ಸಾಗಾಣಿಕೆ ಮಾಡಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಹೊಂದಾಣಿಕೆ
ನಾವು ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಯಾವುದೇ ಟ್ರಿಪ್ ಚೀಟಿ ಇಲ್ಲದೆ ಕೆಂಪು ಮಣ್ಣು ಲಾರಿಗಳಲ್ಲಿ ಸಾಗಾಟ ಮಾಡುತ್ತೆವೆ ಎಂದರು.
ಇನ್ನು ಲಾರಿ ಚಾಲಕನಿಗೆ ಟ್ರಿಪ್ ಚೀಟಿ ಕೇಳಿದರೆ ಇಲ್ಲ ಸಾರ್ ನಾವು ಒಂದು ಟ್ರಿಪ್ ಚೀಟಿ ಪಡೆದು ಎರಡು ಮೂರು ಕೆಂಪು ಮಣ್ಣು, ಜಲ್ಲಿ, ಕಲ್ಲು ಹೊಡೆಯುತ್ತೆವೆ ಎಂದು ವ್ಯಕ್ತಿ ಮತ್ತೊಂದು ಬಾರಿ ಟ್ರಿಪ್ ಚೀಟಿ ತೋರಿಸಿ ನೋಡೋಣ ಎಂದರೆ ಲಾರಿ ಮಾಲೀಕ ತರುಣ್ ಗೆ ಪೋನ್ ಕೊಟ್ಟಿದ್ದಾನೆ. ಮಾಲೀಕ ತರುಣ್ ಇಲ್ಲ ಸಾರ್ ನಾವು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಾಗಾಣಿಕೆ ಮಾಡುತ್ತೇವೆ ಎಂದರು. ಯಾವುದೇ ಟ್ರಿಪ್ ಚೀಟಿ ಪಡೆಯಲ್ಲ ಎಂದರು.
ಇನ್ನು ಬಳ್ಳಾರಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಈ ರೀತಿಯಾಗಿ ಅಕ್ರಮ ಕೆಂಪು ಮಣ್ಣು, ಜಲ್ಲಿ, ಕಲ್ಲು ಬಿಂಚೆ ಸರ್ಕಾರಕ್ಕೆ ತೆರಿಗೆ ಪಾವತಿ ಮಾಡದೇ ನಷ್ಟ ಉಂಟು ಮಾಡುತ್ತಿದ್ದಾರೆ.
ಬಳ್ಳಾರಿ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಮೂರಂ , ಕಲ್ಲು, ಬಿಂಚೆ, ಕೆಂಪು ಮಣ್ಣು ಸಾಗಾಣಿಕೆ ಮಾಡುತ್ತಿರುವ ಲಾರಿಗಳನ್ನು ಹಿಡಿಯದೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಲಂಚ ಪಡೆದ, ಲಾರಿ ಮಾಲೀಕರಿಗೆ ಸಹಕಾರಿ ನೀಡಿ, ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಮಾಡುತ್ತಿದ್ದಾರೆ ಎನ್ನುವ ಬಹು ದೊಡ್ಡ ಆರೋಪ ಸಹ ಕೇಳಿ ಬಂದಿದೆ.
ಫೀಲ್ಡ್ ವರ್ಕ್ ಮಾಡದೆ ಅಧಿಕಾರಿಗಳು ನಿದ್ದೆಗೆ ಜಾರಿದ್ದಾರೆ:
ಬಳ್ಳಾರಿ ಜಿಲ್ಲೆಯ ಬಳ್ಳಾರಿ ನಗರ, ಗ್ರಾಮಾಂತರ , ಸಿರುಗುಪ್ಪ, ಕಂಪ್ಲಿ, ಕುರುಗೋಡು ತಾಲೂಕಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಫೀಲ್ಡ್ ವರ್ಕ್ ಮಾಡದೆ ನಿದ್ದೆಗೆ ಜಾರಿದ್ದಾರೆ. ಅವರು ಸರ್ಕಾರಕ್ಕೆ ತೆರಿಗೆ ಪಾವತಿ ಮಾಡಿಸದೇ ನಷ್ಟ ಉಂಟು ಮಾಡುತ್ತಿದ್ದಾರೆ.
ಬಳ್ಳಾರಿ ನಗರದ ಬಂಡಿಹಟ್ಟಿ, ಹೊನ್ನಳ್ಳಿ, ಹೊನ್ನಳ್ಳಿ ತಾಂಡಾ, ಮೋಕಾ, ಸಂಗನಕಲ್ಲು, ಸಿರವಾರ, ಕಪ್ಪಗಲ್ಲು ಸಿಂದಾವಾಳ, ಕಂಪ್ಲಿ, ಸಿರುಗುಪ್ಪ, ಕಂಪ್ಲಿ, ಕುರುಗೋಡು ತಾಲೂಕಿನಲ್ಲಿ ಈ ಕಲ್ಲು, ಬಿಂಚೆ, ಕೆಂಪು ಮಣ್ಣು, ಮರಂ ಅಕ್ರಮವಾಗಿ ಲಾರಿಗಳಲ್ಲಿ ಯಾವುದೇ ಟ್ರಿಪ್ ಚೀಟಿ ಇಲ್ಲದೇ ಸಾಗಾಣಿಕೆ ಮಾಡುತ್ತಿರುವ ದುರಂತವಾಗಿದೆ. ಇನ್ನು ಕಪ್ಪಗಲ್ಲು ಸಿರವಾರ ರಸ್ತೆಯಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೆ ಲಾರಿಗಳಲ್ಲಿ ಯಾವುದೇ ಟ್ರಿಪ್ ಚೀಟಿ ಇಲ್ಲದೇ ಕಲ್ಲು ಬಿಂಚೆ ಕೆಂಪು ಮಣ್ಣು ಸಾಗಾಣಿಕೆ ಮಾಡುತ್ತಿದ್ದಾರೆ. ಅಧಿಕಾರಿಗಳು ಮಾತ್ರ ನಾಪತ್ತೆ.
ಶಾಸಕರ, ಸಂಸದರ ಪ್ರೊತ್ಸಾಹ
ಇನ್ನು ಈ ಲಾರಿಗಳಲ್ಲಿ ಯಾವುದೇ ಟ್ರಿಪ್ ಚೀಟಿ ಇಲ್ಲದೇ ಅಕ್ರಮ ಗಣಿಗಾರಿಕೆಯ ಕಲ್ಲು ಬಿಂಚೆ ಕೆಂಪು ಮಣ್ಣು ಸಾಗಾಣಿಕೆ ಮಾಡುತ್ತಿರುವ ಬಳ್ಳಾರಿ ಜಿಲ್ಲೆಯ ವಿವಿಧ ತಾಲೂಕಿನ ಶಾಸಕರು ಹಾಗೂ ಸಂಸದರು ಮತ್ತು ಅವರ ಬೆಂಬಲಿಗರ ಪ್ರೊತ್ಸಾಹ ನೀಡುತ್ತಿದ್ದಾರೆ ಎನ್ನುವ ಬಹು ದೊಡ್ಡ ಆರೋಪ ಸಹ ಇದೆ.
ಒಟ್ಟಾರೆಯಾಗಿ ಜಿಲ್ಲಾಧಿಕಾರಿ ನಾಗೇಂದ್ರ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿಚಾರಣೆ ಮಾಡಿ ಶಿಸ್ತು ಕ್ರಮ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ನೀಟ್ ಸೃಷ್ಟಿಸಿದ ಅವಾಂತರಗಳು ಮತ್ತು ಅದರ ಬಹುಮುಖಿ ಬಿಕ್ಕಟ್ಟುಗಳು: ಒಂದು ವಿಮರ್ಶಾತ್ಮಕ ನೋಟ
~ಡಾ.ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಭಾರತದ ವೈದ್ಯಕೀಯ ಶಿಕ್ಷಣ ರಂಗದಲ್ಲಿ ಏಕರೂಪತೆ ಮತ್ತು ಪಾರದರ್ಶಕತೆಯನ್ನು ತರುವ ಆಶಯದೊಂದಿಗೆ ಜಾರಿಗೆ ಬಂದರೂ, ಪ್ರಾಯೋಗಿಕವಾಗಿ ಅದು ದೇಶದ ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ನೆಲೆಗಳಲ್ಲಿ ತೀವ್ರ ಸ್ವರೂಪದ ಬಿಕ್ಕಟ್ಟುಗಳನ್ನು ಸೃಷ್ಟಿಸಿದೆ. ಕೇವಲ ಒಂದು ತಾಂತ್ರಿಕ ಪ್ರವೇಶ ಪರೀಕ್ಷೆಯಾಗಿ ಕಾಣುವ ಈ ವ್ಯವಸ್ಥೆಯು, ವಾಸ್ತವದಲ್ಲಿ ಭಾರತದ ಬಹುಸಂಸ್ಕೃತಿ ಮತ್ತು ಒಕ್ಕೂಟ ತತ್ತ್ವದ ಆಳವಾದ ರಚನೆಗಳ ಮೇಲೆ ಪ್ರಹಾರ ನಡೆಸುತ್ತಿದೆ. ಗುಣಮಟ್ಟದ ಶಿಕ್ಷಣದ ಹೆಸರಿನಲ್ಲಿ ತರಲಾದ ಈ ಕೇಂದ್ರೀಕೃತ ಮಾದರಿಯು ಹೇಗೆ ಸಾಮಾನ್ಯ ವಿದ್ಯಾರ್ಥಿ ಸಮೂಹವನ್ನು ಶೈಕ್ಷಣಿಕ ಪ್ರಕ್ರಿಯೆಯಿಂದ ಹೊರದೂಡುತ್ತಿದೆ, ಪ್ರಾದೇಶಿಕ ಸ್ವಾಯತ್ತತೆಯನ್ನು ಧ್ವಂಸಗೊಳಿಸುತ್ತಿದೆ ಮತ್ತು ಸಾಂಪ್ರದಾಯಿಕ ಶ್ರೇಣೀಕೃತ ಅಸಮಾನತೆಗಳನ್ನು ಆಧುನಿಕ ರೂಪದಲ್ಲಿ ಮರುಸ್ಥಾಪಿಸುತ್ತಿದೆ ಎಂಬುದನ್ನು ಸಾಮಾಜಿಕ ನ್ಯಾಯ ಮತ್ತು ವಿಮರ್ಶಾತ್ಮಕ ಸಿದ್ಧಾಂತಗಳ ಹಿನ್ನೆಲೆಯಲ್ಲಿ ವಿವರವಾಗಿ ವಿಶ್ಲೇಷಿಸಬೇಕಾಗಿದೆ.
1. ತಾರತಮ್ಯದ ಆರ್ಥಿಕ ಮತ್ತು ಪಠ್ಯಕ್ರಮದ ನೆಲೆಗಳು (Socio-Economic and Curricular Discrimination)
ನೀಟ್ ಪರೀಕ್ಷೆಯು “ಎಲ್ಲರಿಗೂ ಸಮಾನ ಅವಕಾಶ” ಎಂಬ ಭ್ರಮೆಯನ್ನು ಸೃಷ್ಟಿಸುತ್ತದೆಯಾದರೂ, ಅದರ ಒಳಗಣ್ಣು ಕೇವಲ ಒಂದು ನಿರ್ದಿಷ್ಟ ವರ್ಗದ ಪರವಾಗಿ ಕೆಲಸ ಮಾಡುತ್ತಿದೆ. ಈ ಪರೀಕ್ಷಾ ಪದ್ಧತಿಯು ಭಾರತೀಯ ಸಮಾಜದಲ್ಲಿ ಹೊಸದೊಂದು ಆರ್ಥಿಕ ತಾರತಮ್ಯವನ್ನು ಕಾನೂನುಬದ್ಧಗೊಳಿಸಿದೆ. ಇಂದು ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕೇವಲ ವಿದ್ಯಾರ್ಥಿಯ ಪ್ರತಿಭೆಯನ್ನಷ್ಟೇ ಅವಲಂಬಿಸಿಲ್ಲ, ಬದಲಿಗೆ ಆ ಪೋಷಕರ ಆರ್ಥಿಕ ಸೌಲಭ್ಯವನ್ನು ಅವಲಂಬಿಸಿದೆ. ಲಕ್ಷಾಂತರ ರೂಪಾಯಿ ಶುಲ್ಕ ವಸೂಲಿ ಮಾಡುವ ಕಾರ್ಪೊರೇಟ್ ಕೋಚಿಂಗ್ ಉದ್ಯಮದ (Coaching Industry) ಹಬ್ಗಳಾದ ಹಲವಾರು ಪ್ರತಿಷ್ಠಿತ ಕೇಂದ್ರಗಳಿಗೆ ಪ್ರವೇಶ ಪಡೆಯಲು ಸಾಧ್ಯವಾಗದ ಬಡ ಮತ್ತು ಕೆಳಮಧ್ಯಮ ವರ್ಗದ ಗ್ರಾಮೀಣ ವಿದ್ಯಾರ್ಥಿಗಳು ಸ್ಪರ್ಧೆಯ ಆರಂಭಿಕ ಹಂತದಲ್ಲೇ ಸೋಲಿಸಲ್ಪಡುತ್ತಿದ್ದಾರೆ. ಇದರೊಂದಿಗೆ, ಪಠ್ಯಕ್ರಮದ ತಾರತಮ್ಯವು ಈ ಬಿಕ್ಕಟ್ಟನ್ನು ಮತ್ತಷ್ಟು ತೀವ್ರಗೊಳಿಸಿದೆ. ದೇಶದ ವೈವಿಧ್ಯಮಯ ರಾಜ್ಯಗಳು ತಮ್ಮದೇ ಆದ ಸಾಂಸ್ಕೃತಿಕ ಮತ್ತು ಪ್ರಾದೇಶಿಕ ಅಗತ್ಯಗಳಿಗನುಗುಣವಾಗಿ ರೂಪಿಸಿಕೊಂಡ ರಾಜ್ಯ ಪಠ್ಯಕ್ರಮಗಳನ್ನು (State Syllabus) ಸಂಪೂರ್ಣವಾಗಿ ನಿರ್ಲಕ್ಷಿಸಿ, ಕೇವಲ ಸಿಬಿಎಸ್ಇ (NCERT) ಪಠ್ಯಕ್ರಮವನ್ನು ಮಾತ್ರ ಮಾನದಂಡವಾಗಿರಿಸಿಕೊಳ್ಳಲಾಗಿದೆ. ಇದು ಪ್ರಾದೇಶಿಕ ಭಾಷಾ ಮಾಧ್ಯಮಗಳಲ್ಲಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಓದಿದ ಸಮಾಜದ ಕಟ್ಟಕಡೆಯ ವಿದ್ಯಾರ್ಥಿಗಳನ್ನು ವೈದ್ಯಕೀಯ ಶಿಕ್ಷಣದ ಕನಸಿನಿಂದಲೇ ವಂಚಿಸುವ ವ್ಯವಸ್ಥಿತ ತಾರತಮ್ಯವಾಗಿದೆ.
2. ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವ್ಯವಸ್ಥೆಯ ವಿಶ್ವಾಸಾರ್ಹತೆಯ ಕುಸಿತ
ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆಯು ಅತ್ಯಂತ ಸುರಕ್ಷಿತ ಮತ್ತು ಭ್ರಷ್ಟಾಚಾರ ಮುಕ್ತ ಎಂಬ ವಾದವನ್ನು ನೀಟ್ ಪರೀಕ್ಷೆಯ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆಗಳು (Paper Leaks) ಮತ್ತು ಅಕ್ರಮಗಳು ಸಂಪೂರ್ಣವಾಗಿ ಬೆತ್ತಲೆಗೊಳಿಸಿವೆ. ಇಡೀ ದೇಶಕ್ಕೆ ಒಂದೇ ಪರೀಕ್ಷೆ ಎಂಬ ಹಠದ ಪರಿಣಾಮವಾಗಿ, ಪ್ರಶ್ನೆ ಪತ್ರಿಕೆಗಳು ವ್ಯವಸ್ಥಿತ ಜಾಲಗಳ ಮೂಲಕ ಕೋಟ್ಯಂತರ ರೂಪಾಯಿಗಳಿಗೆ ಮಾರಾಟವಾಗುತ್ತಿರುವುದು ಪರೀಕ್ಷಾ ಮಂಡಳಿಗಳ ಸಾಂಸ್ಥಿಕ ವಿಫಲತೆಯನ್ನು ಎತ್ತಿ ತೋರಿಸುತ್ತದೆ. ಪ್ರಾಮಾಣಿಕವಾಗಿ ಹಗಲಿರುಳು ಶ್ರಮಿಸಿದ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಭವಿಷ್ಯವು, ಕಪ್ಪುಹಣ ಮತ್ತು ರಾಜಕೀಯ ಪ್ರಭಾವ ಬಳಸಿ ಪ್ರಶ್ನೆ ಪತ್ರಿಕೆಯನ್ನು ಮೊದಲೇ ಖರೀದಿಸುವ ಪ್ರಭಾವಿ ತರಬೇತಿ ಕೇಂದ್ರಗಳು ಹಾಗೂ ದಲ್ಲಾಳಿಗಳ ಪಾಲಾಗುತ್ತಿದೆ. ಇಂತಹ ವ್ಯವಸ್ಥಿತ ಹಗರಣಗಳು ಕೇವಲ ಅರ್ಹ ವಿದ್ಯಾರ್ಥಿಗಳಿಗೆ ಮಾಡುವ ಅನ್ಯಾಯವಷ್ಟೇ ಅಲ್ಲ; ಇಡೀ ಶೈಕ್ಷಣಿಕ ಆಡಳಿತದ ಮೇಲಿರುವ ಸಾರ್ವಜನಿಕ ವಿಶ್ವಾಸಾರ್ಹತೆಯನ್ನೇ ಧ್ವಂಸಗೊಳಿಸಿವೆ. ಪಾರದರ್ಶಕತೆಯ ಹೆಸರಿನಲ್ಲಿ ತರಲಾದ ವ್ಯವಸ್ಥೆಯು ಇಂದು ಭ್ರಷ್ಟಾಚಾರದ ಅತಿ ದೊಡ್ಡ ಆಡುಂಬೊಲವಾಗಿ ಮಾರ್ಪಟ್ಟಿರುವುದು ಈ ಪರೀಕ್ಷಾ ಮಾದರಿಯ ನೈತಿಕ ಪತನಕ್ಕೆ ಸಾಕ್ಷಿಯಾಗಿದೆ.
3. ವ್ಯವಸ್ಥೆ ಸೃಷ್ಟಿಸಿದ ಆತ್ಮಹತ್ಯೆಗಳು ಮತ್ತು ಮಾನಸಿಕ ಹಿಂಸೆ (Institutional Tragedies and Mental Trauma)
ನೀಟ್ ಹೇರಿರುವ ಕಠಿಣ ಪರೀಕ್ಷಾ ಸ್ವರೂಪ ಮತ್ತು ಪದೇಪದೇ ಉಂಟಾಗುವ ಸಾಂಸ್ಥಿಕ ಲೋಪಗಳು ದೇಶದ ಯುವ ಸಮುದಾಯದ ಮೇಲೆ ಅಭೂತಪೂರ್ವ ಮಾನಸಿಕ ಒತ್ತಡವನ್ನು ಸೃಷ್ಟಿಸಿವೆ. ಇವು ಕೇವಲ ವೈಯಕ್ತಿಕ ವೈಫಲ್ಯದ ಸಾವುಗಳಲ್ಲ, ಬದಲಿಗೆ ಇವುಗಳನ್ನು “ಸಾಂಸ್ಥಿಕ ಕೊಲೆಗಳು” (Institutional Murders) ಎಂದು ಕರೆಯಬೇಕಾಗುತ್ತದೆ. ವಿದ್ಯಾರ್ಥಿಯೊಬ್ಬನ ಸುದೀರ್ಘ ವರ್ಷಗಳ ಶ್ರಮ, ಅರ್ಹತೆ ಮತ್ತು ಇಡೀ ಬದುಕಿನ ಸಾಮರ್ಥ್ಯವನ್ನು ಕೇವಲ ಮೂರು ಗಂಟೆಗಳ ಒಂದು ಅಮಾನವೀಯ ವಸ್ತುನಿಷ್ಠ (MCQ) ಪರೀಕ್ಷೆಯಲ್ಲಿ ನಿರ್ಧರಿಸುವ ಕ್ರೂರ ನಡೆ ಇದು. ಕೃಷಿ ಅಥವಾ ಶ್ರಮಿಕ ಹಿನ್ನೆಲೆಯಿಂದ ಬಂದ ಪೋಷಕರು ತಮ್ಮ ಇಡೀ ಜೀವಮಾನದ ದುಡಿಮೆಯನ್ನು ಸಾಲದ ರೂಪದಲ್ಲಿ ಸುರಿದು ಮಕ್ಕಳನ್ನು ಓದಿಸುತ್ತಿರುವಾಗ, ಆ ಸಾಲದ ಹೊರೆ, ಪರೀಕ್ಷಾ ಅಕ್ರಮಗಳ ಆತಂಕ ಮತ್ತು ಸಾಮಾಜಿಕ ನಿರೀಕ್ಷೆಗಳು ವಿದ್ಯಾರ್ಥಿಗಳ ಮೇಲೆ ಅತಿಯಾದ ಮಾನಸಿಕ ಹಿಂಸೆಯಾಗಿ ರೂಪಾಂತರಗೊಳ್ಳುತ್ತವೆ. ತಮಿಳುನಾಡಿನ ಅನಿತ್ಯಾಳಿಂದ ಹಿಡಿದು ದೇಶದ ನೂರಾರು ಪ್ರತಿಭಾವಂತ ಗ್ರಾಮೀಣ ವಿದ್ಯಾರ್ಥಿ ಹಾಗೂ ಕೋಟಾದಲ್ಲಿ ತರಬೇತಿ ಪಡೆಯುತ್ತಿದ್ದ ಅಭ್ಯರ್ಥಿಗಳ ಸಾಲು ಸಾಲು ಆತ್ಮಹತ್ಯೆಗಳು ಈ ಕಠಿಣ ಶೈಕ್ಷಣಿಕ ವ್ಯವಸ್ಥೆಯ ಕ್ರೂರತೆಗೆ ಸಾಕ್ಷಿಯಾಗಿವೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವುದನ್ನು ಇಡೀ ಬದುಕಿನ ಸೋಲು ಎಂಬಂತೆ ಬಿಂಬಿಸುವ ಇಂತಹ ಮಾರುಕಟ್ಟೆ ಕೇಂದ್ರಿತ ವ್ಯವಸ್ಥೆಯು, ಶಿಕ್ಷಣದ ಮೂಲ ಆಶಯವಾದ ವ್ಯಕ್ತಿತ್ವ ವಿಕಸನವನ್ನು ಕೊಲೆ ಮಾಡಿ ಯುವ ಮನಸ್ಸುಗಳಲ್ಲಿ ಕೀಳರಿಮೆ ಹಾಗೂ ತೀವ್ರ ಖಿನ್ನತೆಯನ್ನು ಬಿತ್ತುತ್ತಿದೆ.
4. ಪ್ರಾದೇಶಿಕ ಪ್ರಾಬಲ್ಯ ಮತ್ತು ಒಕ್ಕೂಟ ವ್ಯವಸ್ಥೆಯ ಮೇಲಿನ ಪ್ರಹಾರ
ಭಾರತೀಯ ಸಂವಿಧಾನದ ಆಶಯದಂತೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಜಂಟಿ ಪಟ್ಟಿಯಲ್ಲಿದ್ದು (Concurrent List), ಪ್ರಾದೇಶಿಕ ಅಗತ್ಯಗಳಿಗೆ ತಕ್ಕಂತೆ ನೀತಿಗಳನ್ನು ರೂಪಿಸಿಕೊಳ್ಳುವ ಹಕ್ಕು ರಾಜ್ಯ ಸರ್ಕಾರಗಳಿಗಿದೆ. ಆದರೆ ನೀಟ್ ಪದ್ಧತಿಯು ರಾಜ್ಯಗಳ ಈ ಸಾಂವಿಧಾನಿಕ ಹಕ್ಕುಗಳನ್ನು ಸಂಪೂರ್ಣವಾಗಿ ಹರಣ ಮಾಡಿದೆ. ರಾಜ್ಯ ಸರ್ಕಾರಗಳು ತಮ್ಮ ತೆರಿಗೆದಾರರ ಹಣದಿಂದ, ತಮ್ಮದೇ ಭೂಮಿಯಲ್ಲಿ ನಿರ್ಮಿಸಿದ ವೈದ್ಯಕೀಯ ಕಾಲೇಜುಗಳ ಸೀಟುಗಳ ಮೇಲಿನ ನಿಯಂತ್ರಣವನ್ನು ಕೇಂದ್ರದ ಏಜೆನ್ಸಿಯೊಂದು ಕಸಿದುಕೊಂಡಿರುವುದು ಒಕ್ಕೂಟ ವ್ಯವಸ್ಥೆಯ (Federalism) ಮೇಲಿನ ಗಂಭೀರ ಪ್ರಹಾರವಾಗಿದೆ. ಇದರ ಪರಿಣಾಮವಾಗಿ, ಸ್ಥಳೀಯ ಭಾಷೆ, ಸಂಸ್ಕೃತಿ ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಗಳ ಅರಿವಿಲ್ಲದ ಭಿನ್ನ ಪ್ರಾಂತ್ಯಗಳ ವಿದ್ಯಾರ್ಥಿಗಳು ದಕ್ಷಿಣದ ಅಥವಾ ನಿರ್ದಿಷ್ಟ ರಾಜ್ಯಗಳ ಗ್ರಾಮೀಣ ಕೋಟಾಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸ್ಥಳೀಯ ರೋಗಿಗಳೊಂದಿಗೆ ಭಾಷಾ ಸಂವಹನ ನಡೆಸಲಾಗದ ಇಂತಹ ವೈದ್ಯರಿಂದಾಗಿ ಗ್ರಾಮೀಣ ಸಾರ್ವಜನಿಕ ಆರೋಗ್ಯ ರಕ್ಷಣಾ ವ್ಯವಸ್ಥೆಯು (Public Healthcare) ಸಂಪೂರ್ಣವಾಗಿ ದುರ್ಬಲಗೊಳ್ಳುತ್ತಿದೆ. ಸ್ಥಳೀಯ ಸಮುದಾಯಗಳ ಅಗತ್ಯಗಳಿಗೆ ಸ್ಪಂದಿಸುವ ಮತ್ತು ಗ್ರಾಮೀಣ ಭಾಗಗಳಲ್ಲಿ ಸೇವೆ ಸಲ್ಲಿಸಲು ಸಿದ್ಧರಿರುವ ವೈದ್ಯರ ಲಭ್ಯತೆಯನ್ನು ಕಡಿತಗೊಳಿಸುವ ಮೂಲಕ ಈ ವ್ಯವಸ್ಥೆಯು ಪ್ರಾದೇಶಿಕ ಜನಸಂಖ್ಯಾಶಾಸ್ತ್ರ ಮತ್ತು ಆರೋಗ್ಯ ಸಮತೋಲನವನ್ನು ಏರುಪೇರು ಮಾಡಿದೆ.
5. ಜಾತೀಯತೆಯ ಕರಾಳತೆ ಮತ್ತು ಯಜಮಾನಿಕೆಯ ಮರುಸ್ಥಾಪನೆ (Perpetuation of Caste Hegemony)
ಸಮಕಾಲೀನ ಸನ್ನಿವೇಶದಲ್ಲಿ ನೀಟ್ ಪರೀಕ್ಷೆಯು “ಮೆರಿಟ್” (Meritocracy) ಮತ್ತು “ಪ್ರತಿಭೆ” ಎಂಬ ಅತ್ಯಂತ ಆಕರ್ಷಕ ಮುಖವಾಡವನ್ನು ಧರಿಸಿ ಬಂದಿದೆ. ಆದರೆ, ವಿಮರ್ಶಾತ್ಮಕವಾಗಿ ನೋಡಿದಾಗ ಈ ‘ಮೆರಿಟ್’ ಎನ್ನುವುದು ಕೇವಲ ವೈಯಕ್ತಿಕ ಸಾಮರ್ಥ್ಯವಲ್ಲ, ಬದಲಿಗೆ ಅದು ತಲೆಮಾರುಗಳಿಂದ ಒಂದು ನಿರ್ದಿಷ್ಟ ವರ್ಗವು ಅನುಭವಿಸಿಕೊಂಡು ಬಂದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬಂಡವಾಳದ (Cultural Capital) ಹೊಸ ರೂಪವೇ ಹೊರತು ಬೇರೇನಲ್ಲ. ಶತಶತಮಾನಗಳಿಂದ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿ, ಈಗಷ್ಟೇ ಮೊದಲ ತಲೆಮಾರಿನ ಶಿಕ್ಷಣ ಪಡೆಯುತ್ತಿರುವ ದಲಿತ, ಹಿಂದುಳಿದ ಮತ್ತು ಬುಡಕಟ್ಟು ಸಮುದಾಯಗಳ ವಿದ್ಯಾರ್ಥಿಗಳಿಗೆ ಆಧುನಿಕ ಇಂಗ್ಲಿಷ್ ತರಬೇತಿ, ದುಬಾರಿ ಕೋಚಿಂಗ್ ಅಥವಾ ಇತ್ತೀಚಿನ ಪತ್ರಿಕೆ ಸೋರಿಕೆಯಂತಹ ಕರಾಳ ದಂಧೆಗಳ ರಹಸ್ಯ ಜಾಲಗಳಿಗೆ ಪ್ರವೇಶ ಪಡೆಯುವ ಸಾಮಾಜಿಕ ಹಿನ್ನೆಲೆ ಇರುವುದಿಲ್ಲ. ನೀಟ್ ವ್ಯವಸ್ಥೆಯು ಇಂತಹ ಐತಿಹಾಸಿಕ ಅಸಮಾನತೆಗಳನ್ನು ಸಂಪೂರ್ಣವಾಗಿ ಕಣ್ಣುಮುಚ್ಚಿ ಕುಳಿತು, ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವ ಮೂಲಕ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯ ಆಶಯಗಳನ್ನು ತಾಂತ್ರಿಕವಾಗಿ ತಲೆಕೆಳಗು ಮಾಡುತ್ತಿದೆ. ಇದರ ಪರಿಣಾಮವಾಗಿ, ವೈದ್ಯಕೀಯ ಕ್ಷೇತ್ರವು ಸಮಾಜದ ಬಹುಪಾಲು ಶ್ರಮಿಕ ಮತ್ತು ತಳಸಮುದಾಯಗಳ ಕೈತಪ್ಪಿ, ಮತ್ತೆ ಕೇವಲ ಆಯ್ದ ಕೆಲವು ಉನ್ನತ ವರ್ಗಗಳ ಯಜಮಾನಿಕೆಯ (Hegemony) ತಾಣವಾಗಿ ಬದಲಾಗುತ್ತಿದೆ. ಇದು ಸಾಂಪ್ರದಾಯಿಕ ಜಾತೀಯತೆಯ ಶ್ರೇಣೀಕೃತ ಕರಾಳತೆಯನ್ನು ಅತ್ಯಂತ ಸೂಕ್ಷ್ಮ ಹಾಗೂ ಆಧುನಿಕ ಶೈಕ್ಷಣಿಕ ನಿಯಮಗಳ ಮೂಲಕ ಪುನರುತ್ಪಾದಿಸುವ ಅಪಾಯಕಾರಿ ನೆಲೆಯಾಗಿದೆ.
6. ಸಮನ್ವಯದ ದಾರಿ….
ನೀಟ್ ಸೃಷ್ಟಿಸಿರುವ ಈ ಸಾಂಸ್ಥಿಕ, ಆರ್ಥಿಕ ಮತ್ತು ಸಾಮಾಜಿಕ ಅವಾಂತರಗಳು ನಮಗೆ ಶಿಕ್ಷಣ ವ್ಯವಸ್ಥೆಯ ಮರುಚಿಂತನೆಯ ತುರ್ತು ಅಗತ್ಯವನ್ನು ನೆನಪಿಸುತ್ತವೆ. ಪ್ರಜಾಪ್ರಭುತ್ವದ ನಿಜವಾದ ಆಶಯವಿರುವುದು ಕೇವಲ ಕಾಗದದ ಮೇಲಿನ ತಾಂತ್ರಿಕ “ಏಕರೂಪತೆ”ಯಲ್ಲಲ್ಲ, ಬದಲಿಗೆ ಭಿನ್ನ ಹಿನ್ನೆಲೆಯ ಜನರನ್ನು ಒಳಗೊಳ್ಳುವ “ಸಮಾನತೆ” ಮತ್ತು “ಸಾಮಾಜಿಕ ನ್ಯಾಯ”ದಲ್ಲಿ ಮಾತ್ರ. ಕೇವಲ ಬಂಡವಾಳಶಾಹಿ ಮಾರುಕಟ್ಟೆಯ, ಕೋಚಿಂಗ್ ಮಾಫಿಯಾಗಳ ಮತ್ತು ಪ್ರಶ್ನೆ ಪತ್ರಿಕೆ ಮಾರಾಟ ಮಾಡುವ ಕರಾಳ ಜಾಲಗಳ ಹಿತಾಸಕ್ತಿಯನ್ನು ಕಾಯುವ ಇಂತಹ ಪ್ರವೇಶ ಪರೀಕ್ಷೆಗಳು ವೈದ್ಯಕೀಯ ಕ್ಷೇತ್ರವನ್ನು ಕೇವಲ ವ್ಯಾಪಾರೀಕರಣದ ಕೇಂದ್ರವನ್ನಾಗಿ ಮಾಡುತ್ತವೆಯೇ ಹೊರತು ಮಾನವೀಯತೆಯುಳ್ಳ ವೈದ್ಯರನ್ನು ಸೃಷ್ಟಿಸಲಾರವು. ಈ ಹಿನ್ನೆಲೆಯಲ್ಲಿ, ಪ್ರಾದೇಶಿಕ ಸ್ವಾಯತ್ತತೆ, ಬಹುತ್ವ ಮತ್ತು ತಳಸಮುದಾಯಗಳ ಶೈಕ್ಷಣಿಕ ಹಕ್ಕುಗಳನ್ನು ರಕ್ಷಿಸಲು ನೀಟ್ ಮಾದರಿಯ ಕೇಂದ್ರೀಕೃತ ಪರೀಕ್ಷೆಗಳ ತಾರತಮ್ಯದ ನೆಲೆಗಳನ್ನು ತಕ್ಷಣವೇ ಮರುಪರಿಶೀಲಿಸಬೇಕಾಗಿದೆ; ಇಲ್ಲದಿದ್ದರೆ ಇದು ದೇಶದ ಒಕ್ಕೂಟ ರಚನೆ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ತುಂಬಲಾರದ ನಷ್ಟವನ್ನು ಉಂಟುಮಾಡುವುದು ಖಂಡಿತ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoನಕಲಿ ಬಿಲ್ಲುಗಳ ಮೂಲಕ ಲಕ್ಷಾಂತರ ರೂಪಾಯಿ ಅವ್ಯವಹಾರ | ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ನಾಗರಾಜ ವಿರುದ್ಧ ಲೋಕಾಗೆ ದೂರು
-
ಅಂಕಣ7 days agoಪ್ರಜಾಪ್ರಭುತ್ವ: ಸಮಾನತೆ, ಸಾಮಾಜಿಕ ನ್ಯಾಯ ಮತ್ತು ನೈತಿಕ ಹೊಣೆಗಾರಿಕೆ
-
ದಿನದ ಸುದ್ದಿ4 days agoಬ್ಯಾಕ್ಲಾಗ್ ನಿಯಮಾವಳಿ ಉಲ್ಲಂಘನೆ ; ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕ ಕರಿಚಣ್ಣನವರ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ7 days agoದಾವಣಗೆರೆ| ಅಪರಿಚಿತರು ನೀಡಿದ ಟೆಲಿಗ್ರಾಮ್ ಲಿಂಕ್ ಕ್ಲಿಕ್ ಮಾಡಿ 14 ಲಕ್ಷ ಕಳೆದುಕೊಂಡ ಉಪನ್ಯಾಸಕ
-
ದಿನದ ಸುದ್ದಿ5 days agoನಟ ದಿಲೀಪ್ ರಾಜ್ ಆ ಒಂದು ತಪ್ಪು ಪ್ರಾಣಕ್ಕೆ ಮುಳುವಾಯ್ತು
-
ದಿನದ ಸುದ್ದಿ6 days agoಸಾವಿನಲ್ಲೂ ಒಂದಾದ ಪ್ರೇಮಿಗಳು: ಪ್ರೇಮಿಯ ಪಕ್ಕದಲ್ಲೇ ಪ್ರೇಯಸಿಯ ಅಂತ್ಯಸಂಸ್ಕಾರ!
-
ದಿನದ ಸುದ್ದಿ5 days agoನಾಳೆ ಹರಿಹರ ರೈಲು ನಿಲ್ದಾಣದಲ್ಲಿ ವಾರ್ಷಿಕ ವಿಪತ್ತು ನಿರ್ವಹಣೆ ಅಣುಕು ಅಭ್ಯಾಸ
-
ಅಂಕಣ2 days agoನೀಟ್ ಸೃಷ್ಟಿಸಿದ ಅವಾಂತರಗಳು ಮತ್ತು ಅದರ ಬಹುಮುಖಿ ಬಿಕ್ಕಟ್ಟುಗಳು: ಒಂದು ವಿಮರ್ಶಾತ್ಮಕ ನೋಟ

