ರಾಜಕೀಯ
ಮಾತು, ಮೌನ ಮತ್ತು ಮಿಥ್ಯಾವಾಸ್ತವ
ಈಗ ಮಾತುಗಳದ್ದೇ ಆರ್ಭಟ. ಮಾತು, ಪ್ರತಿಮಾತು, ದಿಢೀರನೆ ಪ್ರತಿಕ್ರಿಯಿಸಿಬಿಡುವ ಸಿಟ್ಟು-ಸೆಡವಿನ ಪ್ರವೃತ್ತಿಗಳ ವಿಜೃಂಭಣೆ. ನಾಯಕರೆನ್ನಿಸಿಕೊಂಡು ಜನಪ್ರಿಯಗೊಂಡವರ ವಿರುದ್ಧ ಯಾರೂ ಉಸಿರೆತ್ತುವ ಹಾಗಿಲ್ಲ. ಆರಾಧನೆಯ ಗುಂಗಿನೊಳಗೆ ಪ್ರಶ್ನಿಸಿದವರನ್ನು ಸುಮ್ಮನಾಗಿಸಿಬಿಡುವ ಜಾಯಮಾನಗಳದ್ದೇ ಪ್ರಭಾವಳಿ. ಅನುಭವಕ್ಕೆ ಬಂದ ಮತ್ತು ಕಣ್ಣಮುಂದಿನ ವಾಸ್ತವಗಳನ್ನು ನೋಡಿಯೂ ನೋಡದಂತಿದ್ದು ಎಲ್ಲರ ಹಾಗೆ ಹೊಗಳುವ ಮನೋವೃತ್ತಿಯನ್ನು ಒತ್ತಾಯಪೂರ್ವಕವಾಗಿ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ. ಇಂಥದ್ದೊಂದು ವಾತಾವರಣವನ್ನೇ ಸಮಕಾಲೀನ ರಾಜಕಾರಣ ನಿರೀಕ್ಷಿಸುತ್ತಿದೆ. ಮಾತು ಮತ್ತು ಮೌನಗಳ ಚಾಣಾಕ್ಷಯುತ ನಿರ್ವಹಣೆಯ ಮೂಲಕ ಅದು ಹೊಸ ಪೀಳಿಗೆಯ ಯೋಚಿಸುವ ಶಕ್ತಿಯನ್ನು ಕೊಂದುಬಿಟ್ಟಿದೆ. ಅಧಿಕಾರರೂಢ ಮತ್ತು ವಿರೋಧ ಪಕ್ಷಗಳು ಯಾವುದು ವಾಸ್ತವವಲ್ಲವೋ ಅದನ್ನು ಸೃಷ್ಟಿಸಿ ಸಮ್ಮತಿಯನ್ನು ಉತ್ಪಾದಿಸಿಕೊಳ್ಳುತ್ತಿವೆ. ವಾಸ್ತವವನ್ನು ಮುಚ್ಚಿಟ್ಟು ಭಾವುಕ ಸಂಗತಿಗಳ ದಾಳಗಳನ್ನು ಎಸೆದು ಪ್ರಜಾಪ್ರಭುತ್ವದ ಅಖಾಡದ ಸಂವೈಧಾನಿಕ ನಿಯಮಾವಳಿಗಳನ್ನು ಉಲ್ಲಂಘಿಸುತ್ತಿವೆ.
ಈಗ ನಮಗೆ ಎಂಥ ರಾಜಕಾರಣ ಬೇಕಾಗಿದೆ ಎಂದರೆ ನಮ್ಮ ಬದುಕು ಅದರಿಂದ ಉದ್ಧರಿಸಲ್ಪಡುವಂತಿರಬೇಕು. ಈ ನಮ್ಮ ಬದುಕಿನ ವ್ಯಾಪ್ತಿಯೊಳಗೆ ಎಲ್ಲ ಧರ್ಮಗಳವರೂ ಇರಬೇಕು. ಎಲ್ಲ ಜಾತಿಗಳವರೂ ಇರಬೇಕು. ಅವರವರ ನಂಬಿಕೆಗಳ ಭಾವಜಗತ್ತನ್ನು ಮತ್ತಷ್ಟು ಉದಾತ್ತಗೊಳಿಸುವ ಪ್ರಯತ್ನಗಳಿಗೆ ಅಲ್ಲಿ ಅವಕಾಶವಿರಬೇಕು. ಆ ಮೂಲಕ ಹೊಸ ವಿಶ್ವಾಸಾರ್ಹತೆ ಮೂಡಬೇಕು. ಅಪನಂಬಿಕೆ ಮತ್ತು ಮೂಢನಂಬಿಕೆಗಳ ಜಾಡ್ಯಗಳನ್ನು ತೊರೆಯುವ ಹೃದಯವೈಶಾಲ್ಯತೆ ನೆಲೆಗೊಳ್ಳಬೇಕು. ಹಾಗಾಗುವ ಹಾಗೆ ರಾಜಕಾರಣವು ನಾಯಕತ್ವವನ್ನು ಚಿಗುರಿಸಬೇಕು. ಮಾತಿನ ಭಾಷಿಕ ಅಬ್ಬರದ ಬದಲು ಮಿತಭಾಷಿಕ ಸೌಜನ್ಯವನ್ನು ಸೃಷ್ಟಿಸಬೇಕು.
ಘಾಸಿಗೊಳ್ಳುತ್ತಿರುವ ಆಯ್ಕೆ ಹಕ್ಕು
ಹಾಗೆ ಆಗುತ್ತಿಲ್ಲ. ಸ್ವಾತಂತ್ರ್ಯಾನಂತರ ಹಲವು ದಶಕಗಳಾದರೂ ಭಾರತದ ಕನಸುಗಳ್ಯಾವುವೂ ಸಾಕಾರಗೊಳ್ಳಲಿಲ್ಲ ಮತ್ತು ಅಧಿಕಾರದಲ್ಲಿದ್ದ ಹಿಂದಿನವರು ಉದ್ದೇಶಪೂರ್ವಕವಾಗಿ ಆ ಕನಸುಗಳನ್ನು ಸಾಕಾರಗೊಳಿಸುವುದರ ಕಡೆಗೆ ಗಮನಹರಿಸಲಿಲ್ಲ ಎಂಬ ಕೊರಗುಗಳನ್ನು ಮುಂದಿಡುತ್ತಲೇ ತಮ್ಮ ಪರವಾದ ಅಲೆಯನ್ನು ಸೃಷ್ಟಿಸಿಕೊಂಡ ರಾಜಕೀಯ ಪಡೆಗಳು ಅಧಿಕಾರಕ್ಕೆ ಬಂದ ತಕ್ಷಣ ಮತ್ತದೇ ಸ್ಥಗಿತತೆಯ ಜಾಡ್ಯವನ್ನೇ ಪರಮಲಕ್ಷಣವಾಗಿಸಿಕೊಂಡಿವೆ. ಯಾವುದನ್ನು ವಿರೋಧಿಸಿ ಅಧಿಕಾರಕ್ಕೆ ಬರುತ್ತಾರೋ ಅವರೇ ತಾವು ಹಿಂದೆ ವಿರೋಧಿಸಿದ್ದ ನಡೆಯನ್ನೇ ಮರುಪ್ರತಿಷ್ಠಾಪಿಸಿಕೊಳ್ಳುವುದು ರಾಜಕಾರಣಿ, ರಾಜಕೀಯ ಪಕ್ಷಗಳ ಅಲಿಖಿತ ಕಡ್ಡಾಯ ನಿಯಮವಾಗಿಬಿಟ್ಟಿದೆಯೇನೋ ಎಂದು ಭಾಸವಾಗುತ್ತಿದೆ. ಈ ವಿಚಿತ್ರ ನಡೆಗಳು ಭಾರತದ ಪ್ರಜೆಗಳ ಆಯ್ಕೆಯ ಹಕ್ಕನ್ನು ಘಾಸಿಗೊಳಿಸಿವೆ.
ನಿರ್ಲಿಪ್ತ ಭಾವ
ಅಧಿಕಾರದಲ್ಲಿದ್ದವರನ್ನು ಪ್ರಶ್ನಿಸಬೇಕು ಎಂಬ ಮನೋಭಾವವು ವಿರೋಧ ಪಕ್ಷಗಳಿಂದ ಪ್ರಚೋದಿತವಾಗಬೇಕಿಲ್ಲ. ಮಾಧ್ಯಮಗಳ ವಿಶ್ಲೇಷಣೆಗಳನ್ನೇ ನೆಚ್ಚಿಕೊಂಡು ಪ್ರಶ್ನಿಸುವ ಅಗತ್ಯವಿಲ್ಲ. ಈ ದೇಶದ ಸಂವಿಧಾನ ಒದಗಿಸಿರುವ ಪ್ರಶ್ನಿಸುವ ಅವಕಾಶವನ್ನು ಬಳಸಿಕೊಳ್ಳುವ ವಿವೇಕ ನಮ್ಮೆಲ್ಲರದ್ದಾಗಿರಬೇಕು. ಈ ವಿವೇಕವನ್ನು ಪ್ರಖರಗೊಳಿಸುವ ನಿಟ್ಟಿನಲ್ಲಿ ವಿರೋಧ ಪಕ್ಷಗಳು ಮತ್ತು ಮಾಧ್ಯಮಗಳು ಗಮನಾರ್ಹ ಪಾತ್ರನಿರ್ವಹಿಸಬೇಕು. ಪ್ರಶ್ನೆ ಕೇಳುವ ಸಾಧ್ಯತೆಗಳನ್ನು ವರ್ತಮಾನದ ರಾಜಕಾರಣ ಹೇಗೆ ಮೊಟಕುಗೊಳಿಸುತ್ತಿದೆ ಎಂದರೆ ಕಣ್ಣಮುಂದೆ ಎಷ್ಟೆಲ್ಲಾ ಊನಗಳಿದ್ದರೂ, ಸ್ವತಃ ವ್ಯವಸ್ಥೆಯ ಲೋಪಗಳ ಕಾರಣಕ್ಕಾಗಿಯೇ ನೋವು ಅನುಭವಿಸಿದರೂ ಅವುಗಳ ಬಗ್ಗೆ ಮಾತನಾಡಬಾರದು ಎಂಬ ನಿರ್ಲಿಪ್ತ ಭಾವವನ್ನೇ ನೆಚ್ಚಿಕೊಳ್ಳುವಂತೆ ಒತ್ತಡಗಳು ಸೃಷ್ಟಿಯಾಗುತ್ತಿವೆ.
ಪ್ರತಿಮೆಯ ನೆಗೆತ!
ಅಧಿಕಾರಕ್ಕೆ ಹತ್ತಿರವಾಗುವ ರಹಸ್ಯ ಕಾರ್ಯಸೂಚಿಯೊಂದಿಗೆ ರಾಜಕೀಯ ಪಡೆಗಳು ಇತಿಹಾಸದ ಮೌಲಿಕ ಸಂಸ್ಥೆಯನ್ನು ತಮ್ಮ ಹತಾರೆಗಳೊಂದಿಗೆ ಈಗಾಗಲೇ ಪ್ರವೇಶಿಸಿಬಿಟ್ಟಿವೆ. ಈಗಾಗಲೇ ಆಗಿಹೋದ ಸಂಗತಿಯೊಂದರ ವಿವರವನ್ನು ತಮ್ಮ ಉದ್ದೇಶಕ್ಕೆ ತಿರುಗಿಸಿಕೊಳ್ಳುವ ಚಾಣಾಕ್ಷ ನಡೆಗಳೊಂದಿಗೆ ಅವು ಯಶಸ್ಸು ಸಾಧಿಸುತ್ತಿವೆ. ಈಗಾಗಲೇ ಆಗಿಹೋದವರನ್ನು ಟೀಕಿಸುವ ಹುಮ್ಮಸ್ಸಿನಲ್ಲಿ ಸದ್ಯಕ್ಕೆ ಸರಿಯಾದ ಹಾದಿ ತೋರಿಸುವ ಆದರ್ಶದ ಐತಿಹಾಸಿಕ ಪರಂಪರೆಯ ಮೌಲಿಕತೆಯನ್ನು ಉದ್ದೇಶಪೂರ್ವಕವಾಗಿ ಹಿನ್ನೆಲೆಗೆ ಸರಿಸಲಾಗುತ್ತಿದೆ. ಈ ಹಿಂದಿನವರು ವಿಜೃಂಭಿಸಿದ ಪ್ರತಿಮಾ ರಾಜಕಾರಣವು ಇದೀಗ ಹೊಸದೊಂದು ನೆಗೆತ ನೆಗೆದಿದೆ ಅಷ್ಟೇ. ಯಾರ ಆದರ್ಶಗಳನ್ನು ನಾವು ಬದುಕಿನೊಳಗೆ ಅಳವಡಿಸಿಕೊಳ್ಳುತ್ತಾ ಸಾಗುವ ಬದಲು ಅವುಗಳನ್ನು ನಾಮ್ಕೇವಾಸ್ತೆ ಎಂಬಂತೆ ನೆನಪಿಸಿಕೊಳ್ಳುತ್ತಾ ಅವರ ಮೂರ್ತಿಗಳನ್ನು ಆರಾಧಿಸಿದೆವು. ಹಾಗೆ ಆರಾಧಿಸುವ ಹಾಗೆ ನಮ್ಮ ಮೇಲೆ ಭಾವುಕ ಪ್ರಭಾವವನ್ನು ಬೀರಲಾಯಿತು. ಈಗ ಆ ತರಹದ ಪ್ರಭಾವ ದಟ್ಟವಾಗಿ ಪ್ರತಿಮಾ ರಾಜಕಾರಣ ಹೊಸದೊಂದು ಕಾರ್ಯಸೂಚಿಯನ್ನು ಕಾರ್ಯಗತಗೊಳಿಸುವುದರ ಕಡೆಗೆ ಕಾರ್ಯೋನ್ಮುಖವಾಗಿದೆ.
ಇತಿಹಾಸ ತಿರುಚುವ ರೋಚಕ ಶೈಲಿ
ಇತಿಹಾಸವನ್ನು ಜನಪ್ರಿಯ ಶೈಲಿಯಲ್ಲಿ ತಿರುಚುವ ನಕಾರಾತ್ಮಕ ಶೈಲಿಯು ಒಂದು ಟ್ರೆಂಡ್ನ ರೂಪದಲ್ಲಿ ಇದೀಗ ಅಸ್ತಿತ್ವದಲ್ಲಿದೆ. ಈಗಾಗಲೇ ಆಗಿಹೋದ ಇತಿಹಾಸದಲ್ಲಿ ನಾವು ನಿಖರ ವಿವರಗಳ ಆಧಾರದಲ್ಲಿ ಮಹತ್ವದ ವ್ಯಕ್ತಿತ್ವಗಳ ಕೊಡುಗೆಗಳನ್ನು ಗ್ರಹಿಸಿಕೊಂಡಿರುತ್ತೇವೆ. ಆ ಕೊಡುಗೆಗಳು ವರ್ತಮಾನ ಮತ್ತು ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವ ರೀತಿಯಲ್ಲಿಯೇ ಚರ್ಚಿತವಾಗಬೇಕು ಎಂಬ ಎಚ್ಚರವನ್ನೂ ಇದೇ ಇತಿಹಾಸದ ವಿವೇಚನಾತ್ಮಕ ವಿಶ್ಲೇಷಣೆಗಳು ನಮ್ಮೊಳಗೆ ನೆಲೆಗೊಳಿಸಿರುತ್ತವೆ. ರಾಜಕೀಯ ಪಡೆಗಳ ಕಾರ್ಯಸೂಚಿಗಳು ಈ ವಿವೇಚನಾತ್ಮಕ ಎಚ್ಚರದ ಪ್ರಜ್ಞೆಯನ್ನು ಒಡೆದುಬಿಡುತ್ತವೆ. ಇಲ್ಲಿಯವರೆಗೆ ಸರಿಯಾಗಿ ಗ್ರಹಿಸಿದವರ ತಲೆಮಾರಿನ ಪ್ರಜ್ಞೆಯನ್ನು ಛಿದ್ರಗೊಳಿಸಿದ್ದಲ್ಲದೇ ಹೊಸ ಪೀಳಿಗೆಯೊಳಗೂ ಅನುಮಾನಗಳನ್ನು ಬಿತ್ತಿ ಅಧಿಕಾರದ ಗಮ್ಯವನ್ನು ತಲುಪಿಕೊಳ್ಳುವ ಹುನ್ನಾರಗಳು ತೀವ್ರಗೊಳ್ಳುವ ಹಾಗೆಯೇ ಈ ಒಡೆಯುವಿಕೆಯು ಅಗಾಧವಾಗಿರುತ್ತದೆ. ಅಹಿಂಸೆಯಿಂದಲಷ್ಟೇ ಸ್ವಾತಂತ್ರ್ಯ ಹೋರಾಟಕ್ಕೆ ಯಶಸ್ಸು ದಕ್ಕಲಿಲ್ಲ, ಗಾಂಧೀಜಿಯೊಬ್ಬರಿಂದಲೇ ಎಲ್ಲವೂ ಆಗಲಿಲ್ಲ, ಹಿಂಸೆಗೆ ಪ್ರಚೋದನೆ ನೀಡಿದವರು ಇಲ್ಲದಿದ್ದರೆ ಸ್ವಾತಂತ್ರ್ಯ ದಕ್ಕುತ್ತಿರಲಿಲ್ಲ, ಸಂವಿಧಾನವನ್ನು ಈ ದೇಶದ ಆಚಾರ-ವಿಚಾರಗಳಿಗೆ ಅನುಗುಣವಾಗಿ ಬದಲಿಸಬೇಕು, ಅದರಲ್ಲಿ ಅನೇಕ ಸಮಸ್ಯೆಗಳಿವೆ, ಇಂಥವರ ಬದಲು ಇಂಥವರು ಪ್ರಧಾನಿಯಾಗಿದ್ದಿದ್ದರೆ ಈ ದೇಶದ ಚಿತ್ರಣವೇ ಬದಲಾಗಿಬಿಟ್ಟಿರುತ್ತಿತ್ತು… – ಹೀಗೆ ವಿವಿಧ ರೀತಿಗಳಲ್ಲಿ ತರಹೇವಾರಿ ವಿತಂಡವಾದಿ ದೃಷ್ಟಿಕೋನಗಳನ್ನು ಹರಿಬಿಟ್ಟು ಇತಿಹಾಸದ ಸಾಂಸ್ಥಿಕ ಮೌಲ್ಯಕ್ಕೆ ಧಕ್ಕೆಯುಂಟುಮಾಡಲಾಗುತ್ತಿದೆ.
ಭಾವುಕ ಸರೋವರಕ್ಕೆ ವಿಷ ಬೆರೆಕೆ
ಒಂದು ಕಡೆಗೆ ದೇವರು, ಧರ್ಮ, ನಂಬಿಕೆಗಳ ಕುರಿತ ಜಿಜ್ಞಾಸೆ. ಮತ್ತೊಂದು ಕಡೆಗೆ ಯಾತನೆಗಳೊಂದಿಗೇ ಬದುಕು ದೂಡುವ ಅನಿವಾರ್ಯತೆ ಎದುರಿಸುತ್ತಿರುವ ಜನರು. ಸಮಸ್ಯೆಗಳನ್ನು ನಿವಾರಿಸುವ ಮಹತ್ವದ ಹೊಣೆಗಾರಿಕೆಯನ್ನು ನಿಭಾಯಿಸಬೇಕಿದ್ದ ಅಧಿಕಾರರೂಢ ಆಡಳಿತಾತ್ಮಕ ವ್ಯವಸ್ಥೆಯು ತನ್ನ ಪಾಡಿಗೆ ತಾನಿರುತ್ತಾ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುತ್ತಾ ಸಹನಶೀಲತೆಯು ಭಾರತೀಯ ಪರಂಪರೆಯ ಬಹುದೊಡ್ಡ ಹೆಮ್ಮೆ ಎಂಬುದನ್ನೇ ಮುನ್ನೆಲೆಗೆ ತರುತ್ತದೆ. ಬದಲಾವಣೆಗೆ ಕಾಯಬೇಕು, ಸಮಸ್ಯೆಗಳಿದ್ದರೆ ಸಹಿಸಿಕೊಳ್ಳಬೇಕು, ಒಂದಲ್ಲ ಒಂದು ದಿವಸ ಅವು ಪರಿಹಾರ ಕಾಣುತ್ತವೆ, ಅದಕ್ಕಾಗಿಯೇ ನಾವು ಶ್ರಮಿಸುತ್ತಿರುವುದು ಎಂದು ಅಧಿಕಾರರೂಢ ರಾಜಕಾರಣ ನಂಬಿಸುತ್ತದೆ. ಪ್ರಶ್ನೆಗಳು, ಪ್ರತಿರೋಧದ ಅಲೆ ಶುರುವಾಗುತ್ತಿದ್ದಂತೆ ದೇವರು, ಧರ್ಮ ಮತ್ತು ನಂಬಿಕೆಗಳಿಗೆ ಸಂಬಂಧಿಸಿದ ಭಾವುಕ ಸಂಗತಿಗಳ ಸರೋವರಕ್ಕೆ ಕಲ್ಲೆಸೆದು ವೈರುಧ್ಯದ ಅಲೆಗಳನ್ನೇಳಿಸಿಬಿಡುತ್ತದೆ.ಶುದ್ಧ ತಿಳಿವಿನ ತಿಳಿನೀರಿನೊಳಗೆ ಧರ್ಮ, ಜಾತಿ, ಲಿಂಗ ಬೇಧದ ವಿವಾದದ ವಿಷವನ್ನು ಬೆರೆಸಿ ರಾಡಿ ಎಬ್ಬಿಸಿಬಿಡುತ್ತದೆ.
ಸ್ವಯಂದ್ವಂದ್ವಗಳ ಒದ್ದಾಟ
ಇದಾವುದರ ಅರಿವಿಲ್ಲದ ಮುಗ್ಧ ಜನರು ದೇವರೇ ಅವತಾರವೆತ್ತಿ ಮುಂದೊಂದು ದಿನ ತಮ್ಮ ಸಮಸ್ಯೆಗೆ ಪರಿಹಾರ ನೀಡುತ್ತಾರೆ ಅಂದುಕೊಳ್ಳುತ್ತಾ, ತಮ್ಮ ಬದುಕನ್ನು ಉದ್ಧರಿಸಿಕೊಳ್ಳುವ ಸಂವಿಧಾನಾತ್ಮಕ ಅವಕಾಶಗಳನ್ನು ನಿರಾಕರಿಸುತ್ತಾ ಅದೇ ರಾಡಿಯೊಳಗೇ ಸಿಲುಕಿ ಹೊರಬರಲಾಗದೇ ಒದ್ದಾಡುತ್ತಿರುತ್ತಾರೆ. ದೇವಾಲಯ ಪ್ರವೇಶಿಸಬೇಕೇ? ಬೇಡವೇ? ಪ್ರವೇಶಿಸದಿದ್ದರೆ ಏನಾಗುತ್ತದೆ? ಪ್ರವೇಶಿಸಿದರೆ ಏನಾಗುತ್ತದೆ? ದೇವಾಲಯ ಪ್ರವೇಶದ ಮೂಲಕವೇ ಭಾರತದ ಸಮಾನತೆಯ ಕನಸು ಸಾಕಾರಗೊಳ್ಳುವ ಮೊದಲ ಹೆಜ್ಜೆ ಶುರುವಾಗಬೇಕು? ಎಂಬ ಪ್ರಶ್ನೆಗಳನ್ನೇ ದೃಷ್ಟಿಯಲ್ಲಿರಿಸಿಕೊಂಡ ಚರ್ಚೆಗಳೇ ಪ್ರಧಾನ ಆದ್ಯತೆ ಪಡೆದುಕೊಂಡುಬಿಡುತ್ತವೆ. ದೇವಾಲಯದೊಳಗೆ ಪ್ರವೇಶ ಸರಿಯೇ ತಪ್ಪೇ? ದೇವಸ್ಥಾನದೊಳಗೆ ಪ್ರವೇಶಿಸಿ ಆಮೇಲೆ ದೇವರು ಕುಪಿತಗೊಂಡರೆ? ಈ ತರಹದ ಸ್ವಯಂದ್ವಂದ್ವಗಳೊಂದಿಗೆ ಜನರು ಒದ್ದಾಡುವ ಹಾಗೆ ವಿಚಿತ್ರ ಸನ್ನಿವೇಶ ಸೃಷ್ಟಿಯಾಗುತ್ತದೆ. ಅಂಥ ಒದ್ದಾಟವನ್ನೇ ರಾಜಕಾರಣ ತನ್ನ ಸಂಕುಚಿತ ಇರುವಿಕೆಯನ್ನು ನಿರಂತರವಾಗಿ ಚಾಲ್ತಿಯಲ್ಲಿರಿಸಿಕೊಳ್ಳುವುದಕ್ಕೆ ಬಳಸಿಕೊಳ್ಳುತ್ತದೆ.
ತಿರುಚಿದ ವಿವರಗಳ ವೈಭವ!
ಸರಿಯಾಗಿ ಆಲೋಚಿಸುವ ಮತ್ತು ಸರಿಯಾಗಿ ಆಲೋಚಿಸದ ಎರಡು ಗುಂಪುಗಳಲ್ಲಿ ಚಿಂತಕರು ವಿಭಜಿಸಲ್ಪಡುತ್ತಿದ್ದಾರೆ. ಸರಿಯಾಗಿ ಆಲೋಚಿಸುವ ಗುಂಪಿನೊಳಗೂ ಸರಿಯಾಗಿ ಆಲೋಚಿಸದವರೂ ಇರಬಹುದು. ಅಂಥವರು ಅತ್ಯಂತ ವಿವೇಚನಾಪೂರ್ಣವಾಗಿ ಯೋಚಿಸಿ ಪ್ರತಿಕ್ರಿಯಿಸುವವರು. ಓದಿಕೊಳ್ಳುವ, ತಿಳಿದುಕೊಳ್ಳುವ, ಇತಿಹಾಸಕ್ಕೆ ಅಪಚಾರ ಬಗೆಯದ ಸಂಯಮದ ವ್ಯಕ್ತಿತ್ವಗಳವರು ಅವರು. ಈ ಗುಂಪಿನಲ್ಲಿಯೂ ಸರಿಯಾಗಿ ಆಲೋಚಿಸದವರೂ ಸಿಗಬಹುದು. ಸರಿಯಾಗಿ ಯೋಚಿಸುವ ಮತ್ತು ಯೋಚಿಸದ ಸಮ್ಮಿಶ್ರ ಗುಂಪಿಗೆ ಪ್ರತಿಯಾಗಿ ಮತ್ತೊಂದು ಗುಂಪು ಯೋಚಿಸುವ ಸಹನೆಯನ್ನೇ ಹೊಂದಿರುವುದಿಲ್ಲ. ಯಥಾಸ್ಥಿತಿ ವಾದಗಳನ್ನೇ ಅತ್ಯಂತ ರಂಜನೀಯವಾಗಿ ಬಿಂಬಿಸುವುದರಲ್ಲಿಯೇ ಖುಷಿ ಕಾಣುವವರು ಇವರು. ತಾವೂ ಯೋಚಿಸುವುದಿಲ್ಲ, ಇನ್ನೊಬ್ಬರು ಯೋಚಿಸುವುದಕ್ಕೂ ಬಿಡುವುದಿಲ್ಲ. ಅಂಥ ಕೆಟಗರಿಯವರು. ಇಂಥ ಗುಂಪುಗಳ ವೈರುಧ್ಯಗಳನ್ನೇ ಇವತ್ತಿನ ರಾಜಕಾರಣವು ತನ್ನ ಮೂಗಿನ ನೇರಕ್ಕೆ ಬಳಸಿಕೊಂಡು ಹೊಸಪೀಳಿಗೆಯನ್ನು ದಾರಿ ತಪ್ಪಿಸುವ ತನ್ನ ಅಜೆಂಡಾವನ್ನು ಅನುಷ್ಠಾನಗೊಳಿಸುತ್ತಿದೆ. ಇತಿಹಾಸದ ಯಾವ ಗಂಧಗಾಳಿ ಗೊತ್ತಿಲ್ಲದವರ ಮುಂದೆ ತಿರುಚಿದ ವಿವರಗಳನ್ನು ಮುಂದಿಟ್ಟಾಗ ಸಹಜವಾಗಿಯೇ ಆರಾಧನಾ ಭಾವ ಹುಟ್ಟಿಕೊಳ್ಳುತ್ತದೆ.
ಚಿಂತಕರ ಅಪಹರಣ
ಈಗಿನ ವೈಚಿತ್ರ್ಯವೆಂದರೆ ಈ ಆರಾಧನೆಯ ಭಾವೋನ್ಮಾದವು ಸರಿಯಾಗಿ ಆಲೋಚಿಸಬೇಕಾದ ಚಿಂತಕರನ್ನೂ ಆವರಿಸಿಕೊಂಡಿದೆ. ತಮಗಿರುವ ಯೋಚಿಸುವ ಶಕ್ತಿಯನ್ನು ಅಧಿಕಾರದಲ್ಲಿರುವವರ ಸುಪರ್ದಿಗೆ ಒಪ್ಪಿಸಿ ಅವರು ಇಟ್ಟ ಹೆಜ್ಜೆಗಳೆಲ್ಲವೂ ಸರಿ ಎಂಬ ಮೂಢನಂಬಿಕೆಯೊಂದಿಗೆ ಇದ್ದು, ಆ ಮೌಢ್ಯವನ್ನು ವರ್ಣರಂಜಿತ ಪದಗಳ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಈ ಗುಂಪಿನಲ್ಲಿ ಈಗಾಗಲೇ ಜನಪ್ರಿಯರಾದ ಲೇಖಕರಿದ್ದಾರೆ. ಸುದಿ ಮಾಧ್ಯಮ ಪ್ರತಿನಿಧಿಸುವ ಹಿರಿಯ ಪತ್ರಕರ್ತರಿದ್ದಾರೆ. ನಟರುಗಳಿದ್ದಾರೆ. ನಟಿಯರಿದ್ದಾರೆ. ತಮ್ಮ ಪ್ರತಿಭೆಯ ಮೂಲಕ ಪಡೆದ ಜನರ ಮನ್ನಣೆಯನ್ನು ಅವರು ಅಧಿಕಾರದಲ್ಲಿರುವವರನ್ನು ಆರಾಧಿಸುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅದೇ ಆರಾಧನಾ ಮನೋಭಾವನೆಯನ್ನು ಜನರೂ ತಾಳುವಂತೆ ಪ್ರಚೋದಿಸುತ್ತಿದ್ದಾರೆ.
ವಿತಂಡವಾದಿ ಸರಳಸೂತ್ರ
ಇಂಥ ಸಂದರ್ಭದಲ್ಲೆಲ್ಲಾ ಅವರು ಸರಳ ಸೂತ್ರವನ್ನು ಅಳವಡಿಸಿಕೊಳ್ಳುತ್ತಾರೆ. ಅಧಿಕಾರದಲ್ಲಿರುವವರನ್ನು ನೀವು ಪ್ರಶ್ನಿಸುತ್ತೀರಿ ಎಂದಾದರೆ, ಯಾರನ್ನು ಆಯ್ಕೆ ಮಾಡುತ್ತೀರಿ? ಇಂಥವರನ್ನಾ? ಎಂದು ಎಸೆದದ್ದಷ್ಟೇ ಅಲ್ಲ, ಇತಿಹಾಸದಲ್ಲಿ ಆಗಿಹೋದ ನಕಾರಾತ್ಮಕ ಸಂಗತಿಗಳನ್ನು ದೇವರು, ಧರ್ಮ ಮತ್ತು ನಂಬಿಕೆಗಳಂತಹ ವಿಷಯಗಳಿಗೆ ತಳುಕು ಹಾಕಿ ಸರಳೀಕರಿಸಿ ವಿತಂಡವಾದವನ್ನು ಮುಂದಿಡುತ್ತಾರೆ. ಟಿವಿ ಚಾನಲ್ಗಳ ಆ್ಯಂಕರ್ಗಳು, ‘ಸುದ್ದಿಮಿತ್ರರು’ ಈ ವಿತಂಡವಾದದ ಒಳಗೇ ಲಭ್ಯವಾಗುವ ವಿವರಗಳನ್ನೇ ಆಧರಿಸಿ ತಾವೇನೋ ಮಹತ್ವದ್ದನ್ನು ಸಂಶೋಧಿಸಿದ್ದೇವೆ ಎನ್ನುವಂತೆ ಮಾತನಾಡುತ್ತಾರೆ. ಈ ಬಗೆಯ ದಾರಿ ತಪ್ಪಿಸುವ ಆಟ ಬಹಳ ದಿವಸಗಳ ಕಾಲ ನಡೆಯುವುದಿಲ್ಲ ಎಂಬ ಸತ್ಯ ಅವರಿಗೆ ಗೊತ್ತಿದ್ದರೂ ನಡೆದಷ್ಟು ದಿವಸ ಮಾಧ್ಯಮಗಳಿಗೆ ಲಾಭ ದಕ್ಕಿದರೆ ಸಾಕಲ್ಲವೇ ಎಂಬ ಭಂಡಧೈರ್ಯದೊಂದಿಗೆ ಇರುತ್ತಾರೆ.
ಪ್ರಶ್ನಿಸಬೇಕು, ದ್ವೇಷಿಸಬಾರದು
ಪ್ರಶ್ನಿಸಬೇಕು, ದ್ವೇಷಿಸಬಾರದು. ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿದವರನ್ನು ತಾರ್ಕಿಕವಾಗಿ ಪ್ರಶ್ನಿಸಿ ಸರಿಹಾದಿಯಲ್ಲಿರುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಚಿಂತಕರು ನಿರ್ವಹಿಸಬೇಕು. ಯಾರೇ ಅಧಿಕಾರಕ್ಕೆ ಬಂದರೂ ಅವರನ್ನು ಎಚ್ಚರಿಸಬೇಕು. ಜನರು ಸರಿಯಾಗಿ ಆಲೋಚಿಸುವಂತೆ ಪ್ರೇರಣೆ ನೀಡಬೇಕು. ಚಿಂತಕರು ಮುಖ್ಯವಾಗಿ ಯಾವುದೇ ರಾಜಕೀಯ ಪಕ್ಷಗಳ ಕಾರ್ಯಕರ್ತರಾಗಿರುವುದಿಲ್ಲ ಎಂಬ ವಿಶ್ವಾಸ ಜನರಲ್ಲಿದೆ. ಆ ವಿಶ್ವಾಸವನ್ನು ಕಳೆದುಕೊಳ್ಳಬಾರದು. ಈ ದೇಶದ ಉನ್ನತ ಹುದ್ದೆಯಿಂದ ಕೆಳಹಂತಗಳ ಆಡಳಿತಾತ್ಮಕ ಸಂಸ್ಥೆಗಳನ್ನು ಪ್ರತಿನಿಧಿಸುವ ನಾಯಕರೆನ್ನಿಸಿಕೊಂಡವರೆಲ್ಲರೂ ನಮಗೆ ಮುಖ್ಯ. ಅವರು ಆ ಹುದ್ದೆಗಳನ್ನು ಅಲಂಕರಿಸಿದ ನಂತರ ಅವರ ಹೊಣೆಗಾರಿಕೆ ಹೆಚ್ಚುತ್ತಲೇ ಇರುತ್ತದೆ ಎಂಬುದನ್ನು ಚಿಂತಕರೆನ್ನಿಸಿಕೊಂಡವರು ನೆನಪಿಸುತ್ತಲೇ ಇರಬೇಕು. ಆದರೆ, ಇಂಥ ಜವಾಬ್ದಾರಿಯನ್ನು ಕೆಲವೇ ಕೆಲವು ಬದ್ಧತೆಯುಳ್ಳವರು ನಿರ್ವಹಿಸುತ್ತಿದ್ದಾರೆ. ಉಳಿದ ಅನೇಕರು ಅಧಿಕಾರದಲ್ಲಿರುವವರ ಬಗ್ಗೆ ಅಂಧಾಭಿಮಾನ ಪ್ರದರ್ಶಿಸುತ್ತಿದ್ದಾರೆ. ಇಂಥವರನ್ನೇ ಬಳಸಿಕೊಂಡು ರಾಜಕೀಯ ಪಡೆಗಳು ತಮ್ಮ ರಹಸ್ಯ ಕಾರ್ಯಸೂಚಿಯನ್ನು ಪ್ರಯೋಗಿಸುತ್ತಿವೆ. ಚಿಂತಕರ ಆ ಪಂಥ ಮತ್ತು ಈ ಪಂಥಗಳನ್ನು ಪರಸ್ಪರ ಸಂಘರ್ಷಕ್ಕಿಳಿಸಿ ಇತಿಹಾಸದ ವ್ಯಾಪ್ತಿಯನ್ನು ಸಂಕುಚಿತಗೊಳಿಸಿ ತಮ್ಮ ಅಧಿಕಾರದಾಹದ ಉದ್ದೇಶಗಳನ್ನು ಈಡೇರಿಸಿಕೊಳ್ಳುತ್ತಿವೆ.
–ಡಾ.ಎನ್.ಕೆ.ಪದ್ಮನಾಭ

ದಿನದ ಸುದ್ದಿ
ಡಾ. ಶಾಮನೂರು ಶಿವಶಂಕರಪ್ಪ ನಿಧನ ; ವೀರಶೈವ ವಿಧಿವಿಧಾನದಂತೆ ಕಲ್ಲೇಶ್ವರ ಮಿಲ್ನಲ್ಲಿ ಅಂತ್ಯ ಸಂಸ್ಕಾರ
ಸುದ್ದಿದಿನ,ದಾವಣಗೆರೆ:ಮಾಜಿ ಸಚಿವರು ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ; ಶಾಮನೂರು ಶಿವಶಂಕರಪ್ಪನವರು ನಿಧನರಾಗಿದ್ದು ಅವರ ಅಂತ್ಯ ಸಂಸ್ಕಾರವು ಸರ್ಕಾರಿ ಸಕಲ ಗೌರವಗಳೊಂದಿಗೆ ಹಾಗೂ ವೀರಶೈವ ಸಂಪ್ರದಾಯದಂತೆ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ಅಪಾರ ಜನಸ್ತೋಮದೊಂದಿಗೆ ಸೋಮವಾರ ಸಂಜೆ ಜರುಗಿತು.
ಡಾ; ಶಾಮನೂರು ಶಿವಶಂಕರಪ್ಪನವರಿಗೆ 95 ವರ್ಷವಾಗಿದ್ದು ವಯೋಸಹಜ ಅನಾರೋಗ್ಯದಿಂದ ಡಿಸೆಂಬರ್ 14 ರಂದು ನಿಧನ ಹೊಂದಿದ್ದರು. 6 ಭಾರಿ ಶಾಸಕರಾಗಿ, ಒಮ್ಮೆ ಸಂಸದರಾಗಿ ಸುಧೀರ್ಘ ರಾಜಕೀಯ ಸೇವೆಯಲ್ಲಿದ್ದ ಇವರು ರಾಜ್ಯ ಸೇರಿದಂತೆ ದಾವಣಗೆರೆಗೆ ಹೊಸ ರೂಪಕೊಟ್ಟಿದ್ದರು.
ಸೋಮವಾರ ಬೆಳಗ್ಗೆ 7.30 ಗಂಟೆಯಿಂದ ಪಾರ್ಥಿವ ಶರೀರಕ್ಕೆ ಸ್ವಗೃಹದಲ್ಲಿ ಕುಟುಂಬಸ್ಥರ ವಿವಿಧ ಪೂಜೆ ಪುನಸ್ಕಾರಗಳೊಂದಿಗೆ ವಿಧಿ ವಿಧಾನಗಳು ನಡೆದು, ಮಧ್ಯಾಹ್ನದಿಂದ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲಾಗಿತ್ತು. ಸಾವಿರಾರು ಜನರು ಆಗಮಿಸಿ ಸರತಿ ಸಾಲಿನಲ್ಲಿ ಅಂತಿಮ ದರ್ಶನ ಪಡೆದರು.
ಮಧ್ಯಾಹ್ನ 3.30 ರಿಂದ ಹೈಸ್ಕೂಲ್ ಮೈದಾನದಿಂದ ಹೊರಟು ಹಳೇ ದಾವಣಗೆರೆ ಮಂಡಿಪೇಟೆ, ಕಾಯಿಪೇಟೆ, ಅರಳಿವೃತ್ತದ ಮೂಲಕ ಕಲ್ಲೇಶ್ವರ ಮಿಲ್ಗೆ ಪಾರ್ಥಿವ ಶರೀರ ತಲುಪಿತು. ಸಂಜೆ 4.30 ರಿಂದ ಅಂತಿಮ ವಿಧಿ ವಿಧಾನಗಳು ನಡೆದವು.
ಅಂತಿಮ ಸಂಸ್ಕಾರದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ರಾಜ್ಯಸಭೆ ವಿರೋಧ ಪಕ್ಷದ ನಾಯಕರು ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, ಉಪ ಮುಖ್ಯಮಂತ್ರಿಯವರಾದ ಡಿ.ಕೆ.ಶಿವಕುಮಾರ್ ಅವರು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಅರಣ್ಯ ಸಚಿವರಾದ ಈಶ್ವರ ಖಂಡ್ರೆ, ಬೃಹತ್ ಕೈಗಾರಿಕೆ ಸಚಿವರಾದ ಎಂ.ಬಿ.ಪಾಟೀಲ್ ಅವರು, ಇಂಧನ ಸಚಿವರಾದ ಕೆ.ಜೆ.ಜಾರ್ಜ್ರವರು, ಸಮಾಜ ಕಲ್ಯಾಣ ಸಚಿವರಾದ ಡಾ; ಹೆಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್, ಆಹಾರ ಸಚಿವರಾದ ಕೆ.ಎಚ್.ಮುನಿಯಪ್ಪ, ಅಲ್ಪಸಂಖ್ಯಾತರ ಕಲ್ಯಾಣ, ವಸತಿ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್ ಖಾನ್, ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ ಪಾಟೀಲ, ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ.ಎಸ್.ಪಾಟೀಲ, ಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಡಿ.ಸುಧಾಕರ್ ಸೇರಿದಂತೆ ಶಾಸಕರು ಸೇರಿದಂತೆ ವಿವಿಧ ಮಠಾಧೀಶರು ಭಾಗವಹಿಸಿ ಪುಷ್ಪ ನಮನ ಸಲ್ಲಿಸಿ ಅಂತಿಮ ದರ್ಶನ ಪಡೆದರು.
ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ರಾಷ್ಟ್ರಧ್ವಜವನ್ನು ಪಾರ್ಥಿವ ಶರೀರಕ್ಕೆ ಹೊದಿಸಿ ಪೊಲೀಸ್ ಬ್ಯಾಂಡ್ ಮೂಲಕ ರಾಷ್ಟ್ರಗೀತೆ ನುಡಿಸಿ ಗೌರವ ಸಲ್ಲಿಸಲಾಯಿತು. ನಂತರ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿ ಅಂತಿಮವಾಗಿ ಶೋಕ ವ್ಯಕ್ತಪಡಿಸಲಾಯಿತು. ರಾಷ್ಟ್ರಧ್ವಜವನ್ನು ಅವರ ಪುತ್ರರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಸ್ತಾಂತರಿಸಿದರು. ನಂತರ ಸಾಂಪ್ರದಾಯಿಕ ಪೂಜೆ, ವಿಧಿ, ವಿಧಾನಗಳೊಂದಿಗೆ ಪಾರ್ಥಿವ ಶರೀರವನ್ನು ಐಕ್ಯ ಮಂಟಪದಲ್ಲಿ ಇಡಲಾಯಿತು.
ಡಾ; ಶಾಮನೂರು ಶಿವಶಂಕರಪ್ಪನವರ ಪುತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಸೊಸೆ ಹಾಗೂ ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್, ಇನ್ನಿಬ್ಬರು ಪುತ್ರರಾದ ಎಸ್.ಎಸ್.ಬಕ್ಕೇಶ್, ಎಸ್.ಎಸ್.ಗಣೇಶ್ ಸೇರಿದಂತೆ ಶಾಮನೂರು ಶಿವಶಂಕರಪ್ಪನವರ ಕುಟುಂಬಸ್ಥರು ಅಂತಿಮ ವಿಧಿ ವಿಧಾನದಲ್ಲಿ ಭಾಗವಹಿಸಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎಸ್.ಆರ್.ಬೊಮ್ಮಾಯಿ, ಗೃಹ ಸಚಿವರಾದ ಜಿ.ಪರಮೇಶ್ವರ್, ಕಂದಾಯ ಸಚಿವರಾದ ಕೃಷ್ಣಬೈರೇಗೌಡ, ಕೃಷಿ ಸಚಿವರಾದ ಚಲುವರಾಯಸ್ವಾಮಿ, ಬಿ.ಜೆ.ಪಿ.ಪಕ್ಷದ ರಾಜ್ಯಾದ್ಯಕ್ಷರಾದ ಬಿ.ವೈ.ವಿಜಯೇಂದ್ರ ಸೇರಿದಂತೆ ಅನೇಕ ಶಾಸಕರು, ವಿಧಾನ ಪರಿಷತ್ ಸದಸ್ಯರು ಅಂತಿಮ ದರ್ಶನ ಪಡೆದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ
ಸುದ್ದಿದಿನ,ದೆಹಲಿ:2027ರ ಜನಗಣತಿಯನ್ನು ನಡೆಸಲು ಸಂಪುಟವು 11 ಸಾವಿರದ 718 ಕೋಟಿ ರೂಪಾಯಿಗಳ ಬಜೆಟ್ಅನ್ನು ಅಂಗೀಕರಿಸಿದೆ. ಈ ಕುರಿತು ಮಾಹಿತಿ ನೀಡಿದ ಸಚಿವರು, 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಹೇಳಿದರು.
ಇದು ಮೊದಲ ಡಿಜಿಟಲ್ ಜನಗಣತಿಯಾಗಲಿದೆ. 2027 ರ ಜನಗಣತಿಯು ಒಟ್ಟಾರೆ 16ನೇ ಮತ್ತು ಸ್ವಾತಂತ್ರ್ಯದ ನಂತರದ 8 ನೇ ಜನಗಣತಿಯಾಗಲಿದೆ. ಭಾರತದ ಜನಗಣತಿಯನ್ನು ವಿಶ್ವದ ಅತಿದೊಡ್ಡ ಆಡಳಿತಾತ್ಮಕ ಮತ್ತು ಸಂಖ್ಯಾಶಾಸ್ತ್ರೀಯ ಕ್ರಮವೆಂದು ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು.
ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2026ರ ಹಂಗಾಮಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಗೆ ಅನುಮೋದನೆ ನೀಡಿದೆ. ಬೆಳೆಗಾರರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವ ಸಲುವಾಗಿ, ಸರ್ಕಾರವು 2018-19 ರ ಕೇಂದ್ರ ಬಜೆಟ್ನಲ್ಲಿ ಎಲ್ಲಾ ಕಡ್ಡಾಯ ಬೆಳೆಗಳ ಎಂಎಸ್ಪಿ ಅನ್ನು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ನಿಗದಿಪಡಿಸಲಾಗುವುದು ಎಂದು ಘೋಷಿಸಿತ್ತು. ಮಿಲ್ಲಿಂಗ್ ಕೊಬ್ಬರಿಗೆ ಎಂಎಸ್ಪಿಯನ್ನು ಕ್ವಿಂಟಲ್ಗೆ 445 ರೂಪಾಯಿಗಳಿಂದ 12 ಸಾವಿರದ 27 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಮತ್ತು ಅದೇ ಅವಧಿಗೆ ಉಂಡೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 2026ರ ಹಂಗಾಮಿಗೆ ಕ್ವಿಂಟಲ್ಗೆ 400 ರೂಪಾಯಿಗಳಿಂದ 12 ಸಾವಿರದ 500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯು ತೆಂಗಿನ ಬೆಳೆಗಾರರಿಗೆ ಉತ್ತಮ ಲಾಭದಾಯಕ ಆದಾಯವನ್ನು ಖಚಿತಪಡಿಸುವುದಲ್ಲದೆ, ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೊಬ್ಬರಿ ಉತ್ಪಾದನೆಯನ್ನು ವಿಸ್ತರಿಸಲು ರೈತರನ್ನು ಪ್ರೋತ್ಸಾಹಿಸುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೋಲ್ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
ಸುದ್ದಿದಿನ,ದೆಹಲಿ:ಕೇಂದ್ರ ಸರ್ಕಾರವು ’ಕೋಲ್ಸೇತು’ ನೀತಿಯನ್ನು ಅನುಮೋದಿಸಿದೆ. ಇದು ವಿವಿಧ ಕೈಗಾರಿಕಾ ಬಳಕೆಗಳು ಮತ್ತು ರಫ್ತಿಗೆ ಕಲ್ಲಿದ್ದಲು ಸಂಪರ್ಕಗಳ ಹರಾಜಿಗೆ ಹೊಸ ವ್ಯವಸ್ಥೆ ಸೃಷ್ಟಿಸುತ್ತದೆ, ಹಾಗೂ ಸಂಪನ್ಮೂಲಗಳ ನ್ಯಾಯಯುತ ಪ್ರವೇಶ ಮತ್ತು ಅತ್ಯುತ್ತಮ ಬಳಕೆಯನ್ನು ಖಚಿತಪಡಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ನಿನ್ನೆ ತಡೆರಹಿತ, ದಕ್ಷ ಮತ್ತು ಪಾರದರ್ಶಕ ಬಳಕೆಗಾಗಿ ಕಲ್ಲಿದ್ದಲು ಸಂಪರ್ಕದ ಹರಾಜು ನೀತಿಗೆ ಅನುಮೋದನೆ ನೀಡಿತು.
ನವದೆಹಲಿಯಲ್ಲಿ ನಿನ್ನೆ ಸಂಜೆ ಸಂಪುಟದ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, 2016ರ ಎನ್ಆರ್ಎಸ್ ನಿಯಂತ್ರಿತವಲ್ಲದ ವಲಯದ ಸಂಪರ್ಕ ಹರಾಜು ನೀತಿಯಲ್ಲಿ ’ಕೋಲ್ಸೇತು’ ಎಂಬ ಪ್ರತ್ಯೇಕ ವ್ಯವಸ್ಥೆಯನ್ನು ಸೇರಿಸುವ ಮೂಲಕ ಯಾವುದೇ ಕೈಗಾರಿಕಾ ಬಳಕೆ ಮತ್ತು ರಫ್ತಿಗೆ ದೀರ್ಘಾವಧಿಯವರೆಗೆ ಹರಾಜು ಆಧಾರದ ಮೇಲೆ ಕಲ್ಲಿದ್ದಲು ಸಂಪರ್ಕಗಳ ಹಂಚಿಕೆಗೆ ಈ ನೀತಿಯು ಅವಕಾಶ ನೀಡುತ್ತದೆ ಎಂದು ಹೇಳಿದರು.
ಕಲ್ಲಿದ್ದಲು ಅಗತ್ಯವಿರುವ ಯಾವುದೇ ದೇಶೀಯ ಖರೀದಿದಾರರು ಅಂತಿಮ ಬಳಕೆಯನ್ನು ಲೆಕ್ಕಿಸದೆ ಸಂಪರ್ಕ ಹರಾಜಿನಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಬೆಂಬಲ ಬೆಲೆ | ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪ್ರಾರಂಭ: ಡಿಸಿ ಗಂಗಾಧರಸ್ವಾಮಿ
-
ದಿನದ ಸುದ್ದಿ6 days agoಯಮ ಸ್ವರೂಪಿ ಗ್ಯಾಸ್ ಗೀಸರ್ ಬಳಸೋ ಮುನ್ನ ಎಚ್ಚರ ; ಇವಿಷ್ಟನ್ನು ಪಾಲಿಸಿ ಅಪಾಯ ತಡೆಗಟ್ಟಿ
-
ದಿನದ ಸುದ್ದಿ5 days agoಪತ್ರಿಕೋದ್ಯಮ ಪದವೀಧರರಿಗೆ ಸಿಹಿ ಸುದ್ದಿ | ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ತರಬೇತಿ ; ಅರ್ಜಿ ಆಹ್ವಾನ
-
ದಿನದ ಸುದ್ದಿ3 days agoಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ
-
ದಿನದ ಸುದ್ದಿ4 days agoಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಸೌಲಭ್ಯ
-
ದಿನದ ಸುದ್ದಿ3 days agoಕೋಲ್ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
-
ದಿನದ ಸುದ್ದಿ3 days ago2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ
-
ದಿನದ ಸುದ್ದಿ3 hours agoಡಾ. ಶಾಮನೂರು ಶಿವಶಂಕರಪ್ಪ ನಿಧನ ; ವೀರಶೈವ ವಿಧಿವಿಧಾನದಂತೆ ಕಲ್ಲೇಶ್ವರ ಮಿಲ್ನಲ್ಲಿ ಅಂತ್ಯ ಸಂಸ್ಕಾರ

