Connect with us

ದಿನದ ಸುದ್ದಿ

‘ಸರಕಾರ’ ಬಡವನ ಬುತ್ತಿಯಿಂದ ರೊಟ್ಟಿಕಸಿಯುವ ನಾಯಿಯಾಗಬಾರದು

Published

on

  • ಬಿ.ಪೀರ್ ಬಾಷ

ಮುಖ್ಯಮಂತ್ರಿ, ಸಾರಿಗೆ ಮಂತ್ರಿಗಳೇ;
ಹಣಗಳಿಸಲು ಸರಕಾರದಿಂದ ಬೇರೆ ವ್ಯಾಪಾರ ನಡೆಸಿ, ಬಡವರ ಒಡಲಿಗೆ ಬೆಂಕಿ ಇಡಬೇಡಿ.

ಕರೊನಾ ಎಂಬ ಸಿರಿವಂತರು ಹುಟ್ಡಿಸಿದ ಮಾರಿಬೇನೆಗೆ ಬಡವರು ಒಡಲು ಬೆಂದು ಹೋಗುತ್ತಿದೆ. ಹಾಗೆ ದುಡುತ್ತಿರುವ ಒಡಲಿಗೆ ಕೊಳ್ಳಿ ತಿವಿಯುವ ಕೆಲಸ ಬಹುಶಃ ಕಳ್ಳನೂ, ಕಟುಕನೂ, ಕಡುಪಾಪಿಯೂ ಮಾಡಲಾರ. ಆದರೆ ನಮ್ಮ ಸರಕಾರ ಏನು ಮಾಡುತ್ತಿದೆ?

ಎರಡು ಹೊತ್ತಿನ ತುತ್ತನ್ನು ಗಳಿಸಿಕೊಳ್ಳಲು ಬೆಂಗಳೂರಿಗೆ ಬಂದು, ಕಂಡಲ್ಲಿ ಜೋಪಡಿ ಕಟ್ಟಿಕೊಂಡು, ಕಲ್ಲು ಹೂಡಿ ಒಲೆಮಾಡಿ ಅನ್ನದಕಾಳು ಕುಚ್ಚಿಕೊಂಡು ಉಂಡು ಮಲಗುತ್ತಿದ್ದ ಕೂಲಿ ಸಾವಿರಾರು ಕಾರ್ಮಿಕರು ಲಾಕ್‌ಡೌನ್ ಆದ ಕ್ಷಣದಿಂದ ತತ್ತರಿಸಿಹೋಗಿದ್ದಾರೆ. ಅವರವರ ಹಳ್ಳಿಗಳಲ್ಲಿದ್ದಿದ್ದರೆ ಗಂಜಿ ಕುಡಿದು ಅಂಗಳದಲ್ಲಾದರೂ ಮಲಗುವ ಸಮಾಧಾನವಾದರೂ ಇರುತ್ತಿತ್ತು. ಇಲ್ಲಿ ಈ ಶಹರದಲ್ಲಿ, ಹಗಲು ಕೂಲಿಯಿಲ್ಲವೆಂದರೆ ರಾತ್ರಿ ಊಟವಿಲ್ಲ, ಇಂತಹ ಸ್ಥಿತಿಯಿರುವಾಗ ಕಳೆದ ಸು. ಒಂದೂವರೆ ತಿಂಗಳಿನಿಂದ ಅದು ಹೇಗೆ ಬದುಕಿರಬಹುದು? ಅವರ ಕಣ್ಣುಗಳಿಂದ ಅದೆಷ್ಟು ನೀರು ಹರಿದಿರಬಹುದು? ಹಸಿದು ಅಳುವ ಮಕ್ಕಳನ್ನು ಹೇಗೆ ಸುಮ್ಮನಿರಿಸಿರಬಹುದು?

ಹೇಗಾದರೂ ಮಾಡಿ ಊರು ಮುಟ್ಟಿದರೆ ಸಾಕೆಂದು, ಲೆಕ್ಕಹಾಕಿ ಸರಿಯಾಗಿ ಬಸ್ ಚಾರ್ಜ್ ಗೆ ಆಗುವಷ್ಟು ಹಣವನ್ನು ಸೀರೆ ಸೆರಗಿನಲ್ಲಿ, ಸೊಂಟದ ಮಡಿಕೆಯಲ್ಲಿ ಗಂಟು ಗಂಟಿಕೊಂಡು ಊರಿಗೆ ಹೋಗಬಹುದು ಎಂಬ ಸುದ್ದಿ ಕೇಳುತ್ತಲೇ ಬಸ್ಟ್ಯಾಂಡಿಗೆ ಬಂದರೆ ಇಲ್ಲಿ ದುಪ್ಪಟ್ಟು, ಮೂರುಪಟ್ಟು ಬಸ್ ಚಾರ್ಜ್ ಎಂದು ಹೇಳಿದರೆ ಅವರಿಗೆ ಎಷ್ಟು ಸಂಕಟವಾಗಿರಲಿಕ್ಕಿಲ್ಲ. ಬೆಳಗಾವಿಗೆ 800ಬಾಗಲಕೋಟೆಗೆ 700 ರೂ ಇದ್ದ ಬಸ್ ಚಾರ್ಜು, ಏಕಾಏಕಿ ಬೆಳಗಾವಿಗೆ1478 ಬಾಗಲಕೋಟೆಗೆ 1311ಎಂದರೆ ಇದು, ಹಸಿದ ಬಡವನ ಬುತ್ತಿಯಿಂದ ರೊಟ್ಟಿಕಸಿಯುವ ನಾಯಿಗಿಂತಲೂ ಕೀಳಾದ ಕೆಲಸವಲ್ಲವೇ?

ಆನಂದ್ ಸಿಂಗ್ ರಂತಹ ಧಣಿಗಳು ವಿಮಾನವನ್ನೇ ಬಾಡಿಗೆಗೆ ಪಡೆದು ವಿದೇಶದಲ್ಲಿದ್ದ ಮಕ್ಕಳನ್ನು ಕರೆದುಕೊಂಡು ಬಂದರು. ದೇಶದ ಸರಕಾರವೂ ಲಕ್ಷಾಂತರ ಸಂಬಳ ಪಡೆಯುವವರನ್ನು, ಕೋಟ್ಯಾಂತರ ತೆರಿಗೆ ಕಟ್ಟುವವರನ್ನು ವಿಶೇಷ ವಿಮಾನಗಳಿಂದ ಕರೆತರುವ ಪ್ರಯತ್ನವನ್ನೂ ಮಾಡೀತು? ಆದರೆ ಈ ಬಡಜೀವಿಗಳ ಇವರಿಗ್ಯಾವ ಲೆಕ್ಕ? ಸತ್ತರೆ ಮರ್ಯಾದೆ ಹೋದೀತೆಂಬ ಕಾರಣಕ್ಕೆ ಅಗ್ಗದ ರೇಷನನ್ನು ಕೊಡುವಂತೆ ಮಾಡಿ ಫೋಟೋ ತೆಗೆದಿಕೊಂಡರೆ ಸಾಕು ಜನೋಪಕಾರಿಯೆಂದು ಹೇಳಿಕೊಳ್ಳಲು. ಇನ್ನು ಬೆಂಗಳೂರೆಂಬ ಮಾಯಾನಗರದಲ್ಲಿ ಬದುಕೆಂಬ ಬದುಕೇ ಮೂರಾಬಟ್ಟೆಯಾಗಿ ಬಿಸಿಲಲ್ಲಿ ಬಾಡಿ ಗಾಳಿಪಾಲಾಗಿ ಕಸದಗುಂಟ ಹರಿದು ಹಂಚಿಹೋಗಿರುವ ಹೊತ್ತು ಮುಖ್ಯಮಂತ್ರಿ, ಪ್ರಧಾನ ಮಂತ್ರಿಗಳಿಗೆ ಇಂಥವರ ಬಗ್ಗೆ ಖಬರು ಇಲ್ಲವೆಂದರೆ ಏನು ಮಾಡಬೇಕು?

ಇಂಥ ಕೂಲಿ ಕಾರ್ಮಿಕರ ಸಂಖ್ಯೆ ಈಗ ದೇಶದಲ್ಲಿ ಹದಿನೈದಿಪ್ಪತ್ತು ಕೋಟಿಗೂ ಹೆಚ್ಚು. ಇವರು ಈಗ ಟಿ.ವಿ.ಚಾನೆಲುಗಳಿಗೆ ಸುದ್ದಿಯ ವಸ್ತುವಲ್ಲ. ಅವರಿಗಿರುವ ಉಮೇದಿಯೇ ಬೇರೆ. ಇನ್ನು ಸರಕಾರಗಳಿಗೆ ಕಾಪಾಡಬೇಕಿರುವುದು ಯಾರ ಹಿತಾಸಕ್ತಿಯನ್ನು? ಅದೂ ಆಗಿಯೇ ಹೋಯಿತು! ಸಾವಿರಾರು ಕೋಟಿ ಲೂಟಿಯೂ ಮಾಫ್ ಆಯಿತು!!

ಆದರೆ ಇಂಥ ವಿಶ್ವಜಗದ್ಗುರು ಮಹಾನುಭಾವರು ಅವರ ಪಟಾಲಂಗಳ ಸರಕಾರಗಳಿಗೆ ಕೂಲಿಕಾರ್ಮಿಕರನ್ನು ಉಚಿತವಾಗಿ ಅವರವರ ಮನೆಗಳಿಗೆ ಸರಕಾರಿ ಬಸ್ಸಿನಲ್ಲಿ ಮನೆ ಸೇರಿಸುವ ಯೋಗ್ಯತೆಯೂ ಇಲ್ಲದಾಯಿತೇ? ನಾಚಿಕೆಗೇಡು! ಅದು ಹೋಗಲಿ, ಇಂತಹ ಹೊತ್ತಿನಲ್ಲಿ ಬಸ್ ಚಾರ್ಜ್ ಪಡೆದು ಬಸ್ ಹತ್ತಿಸಿಕೊಂಡರೂ ನಾಚಿಕೆಗೇಡೇ ಆದರೂ ಇನ್ನು ಡಬಲ್ ತ್ರಿಪಲ್ ಚಾರ್ಜು ಪೀಕುತ್ತಾರೆ ಎಂದರೆ ಇದೊಂದು ಸರಕಾರವಾ ಅಥವಾ ? ಮನುಷ್ಯತ್ವ ಇರುವ ಯಾರಿಗಾದರೂ ಸಿಟ್ಟು ಬರದೇ ಇದ್ದೀತೇ?

ಹಸಿದು ಅಳುವ ಕೂಸಿಗೆ ನಾಲ್ಕು ರೂಪಾಯಿಯ ಬಿಸ್ಕೀಟು ಕೊಡಿಸಲು ಕಣ್ಣೀರು ತಂದುಕೊಳ್ಳುತ್ತಿರುವ ತಂದೆತಾಯಿಗಳು ಅಂತಹ ಆರೇಳು ವರ್ಷದ ಮಕ್ಕಳಿಗೂ ಸಾವಿರಾರು ರೂಪಾಯಿ ಬಸ್ ಚಾರ್ಜು ಕೊಡಬೇಕು ಎಂದರೆ…ಎದೆಯೊಡೆಯದಿದ್ದೀತೇ? ಹಣವೇ ಇಲ್ಲದವರು ಏನು ಮಾಡಬೇಕು? ಅವರವರ ಊರ ಮುಖ ನೋಡದೇ ಬೀದಿ ಹೆಣವಾಗಬೇಕೇ? ಏನಾಗಿದೆ ಈ ಸರ್ಕಾರಕ್ಕೆ? ಏನು ತುಂಬಿದೆ ಈ ಅಧಿಕಾರಿಗಳ ತಲೆಯಲ್ಲಿ? ಸಾವಿರಾರು ಕೋಟಿ ಆಗಬೇಕಾದಲ್ಲಿ ಆಗಿದೆ. ಆದರೆ ಈ ನಷ್ಟವನ್ನು ಬಡವರ ಬುತ್ತಿಗಂಟು ಕಸಿದು ಭರ್ತಿ ಮಾಡಿಕೊಳ್ಳಬೇಕೇ?

ಕೊಲ್ಲುವುದಷ್ಟೇ ಅಲ್ಲ, ಸಾವೇ ಸುಖ ಎಂಬಷ್ಟು ಕಷ್ಟ ಕೊಡುವುದು ಕೊಲೆಗಿಂತಲೂ ಕ್ರೂರ ನಡವಳಿಕೆ. ಇಂತಹ ಸ್ಥಾನದಲ್ಲಿ ಈಗ ಸರಕಾರಗಳೇ ಇವೆ ಎಂಬುದು ನಿಜಕ್ಕೂ ಮಾರಿಬೇನೆಗಿಂತಲೂ ಭೀಕರ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕೌಶಲ್ಯಯುತ ಶಿಕ್ಷಣ ವೃತ್ತಿ ಭವಿಷ್ಯಕ್ಕೆ ಆಧಾರ :‌ ಸಹಾಯಕ ಪ್ರಾಧ್ಯಾಪಕ ಎ.ಆರ್. ಸಲೀಮ್ ಮಲಿಕ್ ಕಿವಿಮಾತು

Published

on

ಸುದ್ದಿದಿನ,ಹರಿಹರ:ಪ್ರಸ್ತುತ ಉನ್ನತ ಶಿಕ್ಷಣ ಪಡೆಯುತ್ತಿರುವ ಯುವಜನರು ತಮ್ಮ ಕೌಶಲ್ಯವನ್ನು ಆಧರಿಸಿದ ಶಿಕ್ಷಣದ ಕಡೆ ಆಸಕ್ತಿ ತೋರಬೇಕು. ತಂತ್ರಜ್ಞಾನ ಸಂಬಂಧಿತ ಕೌಶ್ಯಲ್ಯಗಳು ವೃತ್ತಿ ಭವಿಷ್ಯಕ್ಕೆ ಉಜ್ವಲ ಅವಕಾಶಗಳನ್ನು ಪಡೆಯಬಹುದು ಎಂದು ದಾವಣಗೆರೆಯ ಜೆ.ಟಿ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಎ.ಆರ್.ಸಲೀಮ್ ಮಲಿಕ್ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐ.ಕ್ಯೂ.ಎ.ಸಿ ಮತ್ತು ಪ್ರೇರಣಾ ಕೋಶದ ಸಹಯೋಗದಲ್ಲಿ ‘ಮೃದು ಕೌಶಲ್ಯಗಳು ಮತ್ತು ವ್ಯಕ್ತಿತ್ವ ವಿಕಸನ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವ್ಯಕ್ತಿತ್ವ ವಿಕಸನ ಮಾಡಿಕೊಳ್ಳುವ ಮೂಲಕ ಜಾಗತಿಕ ಸಂದರ್ಭದಲ್ಲಿ ವೃತ್ತಿಪರ ವ್ಯಕ್ತಿಗಳು ಬೇರೆಯವರಿಗಿಂತ ಭಿನ್ನವಾಗಿ ತಮ್ಮನ್ನು ತಾವು ರೂಪಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದು ಸ್ಪರ್ಧಾತ್ಮಕ ಜಗತ್ತಿನಲ್ಲಿ ವೃತ್ತಿಪರ ಬದುಕು ಕಟ್ಟಿಕೊಳ್ಳುವ ಬಗ್ಗೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎನ್.ರಮೇಶ್ ಅವರು ಮಾತನಾಡಿ, ವೃತ್ತಿ ಆಧಾರಿತ ಶಿಕ್ಷಣದ ಜೊತೆಗೆ ಮೃದು ಕೌಶಲ್ಯಗಳನ್ನು ಪಡೆಯಿರಿ. ಸರ್ಕಾರದ ಸೌಲಭ್ಯಗಳನ್ನು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ಉತ್ತಮ ವೃತ್ತಿ ಭವಿಷ್ಯವನ್ನು ತಮ್ಮದಾಗಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಐ.ಕ್ಯೂ.ಎಸ್.ಸಿ ಸಂಯೋಜಕರಾದ ಡಾ.ಅನಂತನಾಗ್ ಹೆಚ್.ಪಿ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಬಾಬು ಕೆ.ಎ ಅವರುಗಳು ಉಪಸ್ಥಿತರಿದ್ದು ಮಾತನಾಡಿದರು.

ವಿದ್ಯಾರ್ಥಿನಿ ಕು.ಆಶ್ಲೇಷ ಎಸ್ ಪ್ರಾರ್ಥಿಸಿದರು, ಕಾಲೇಜಿನ ಪ್ರೇರಣಾ ಕೋಶದ ಸಂಚಾಲಕರು, ಭೌತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರು ಆದ ಬಸವರಾಜ ಬಿ.ಪಾಟೀಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ವಾಣಿಜ್ಯಶಾಸ್ತç ವಿಭಾಗದ ವಿದ್ಯಾರ್ಥಿ ಆಕಾಶ್ ವಂದಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಲೇಬೆನ್ನೂರು ಪುರಸಭೆ | ಗೌರವಧನ ಆಧಾರದ ಮೇಲೆ ತಾತ್ಕಾಲಿಕ ಸೇವೆ ಪಡೆಯಲು ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಮಲೇಬೆನ್ನೂರು ಪುರಸಭೆಯ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ ಮಿಷನ್ (ನ)-2.0 ಯೋಜನೆಯ ಮಾಹಿತಿ ಶಿಕ್ಷಣ ಮತ್ತು ಸಂವಹನ ಘಟಕದಡಿಯಲ್ಲಿ ಘನತ್ಯಾಜ್ಯ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯ ಕುರಿತಂತೆ ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ವಿವಿಧ ಬಗೆಯ ಚಟುವಟಿಕೆಗಳನ್ನು ಕೈಗೊಳ್ಳಲು ಸ್ವ-ಸಹಾಯ ಗುಂಪುಗಳ ಸದಸ್ಯೇತರ ನೇಮಕಾತಿ (ಘನತ್ಯಾಜ್ಯ, ಪಾರಂಪರಿಕ ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಸಿಡಿ ತ್ಯಾಜ್ಯ ನಿರ್ವಹಣೆ ಸ್ವಚ್ಛ-ಸರ್ವೇಕ್ಷಣ, ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಓಡಿಎಫ್, ಓಡಿಎಫ್, ಸ್ಟಾರ್ ರೇಟಿಂಗ್ಸ್ ಮತ್ತು ಇತರೆ ವಿಷಯಗಳ ಕುರಿತು ಮನೆ ಮನೆಗೂ ಭೇಟಿ ನೀಡಿ ನೇರವಾಗಿ ಮಾತನಾಡುವುದರ ಮೂಲಕ ಐ.ಇ.ಸಿ ಚಟುವಟಿಕೆಗಳನ್ನು ಕೈಗೊಳ್ಳಲು ಮಹಿಳಾ ಸ್ವ-ಸಹಾಯ ಗುಂಪುಗಳಿಂದ 2 ಸದಸ್ಯರುಗಳನ್ನು ಮಾಸಿಕ ಗೌರವಧನ ಆಧಾರದ ಮೇಲೆ ತಾತ್ಕಾಲಿಕ ಸೇವೆ ಪಡೆದುಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಮಹಿಳಾ ಅಭ್ಯರ್ಥಿಗಳು ಅಗತ್ಯ ದಾಖಲಾತಿಯೊಂದಿಗೆ ಮೇ.23 ರೊಳಗಾಗಿ ನಿಗಧಿತ ಅರ್ಜಿ ನಮೂನೆಯನ್ನು ಕಚೇರಿಯಿಂದ ಪಡೆದು ಮುಖ್ಯಾಧಿಕಾರಿಗಳು, ಪುರಸಭೆ, ಮಲೇಬೆನ್ನೂರು ವಿಳಾಸಕ್ಕೆ ದ್ವಿ-ಪ್ರತಿಯಲ್ಲಿ ಸಲ್ಲಿಸಬೇಕೆಂದು ಮುಖ್ಯಾಧಿಕಾರಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಬ್ಯಾಂಕ್ ಆಫ್ ಬರೋಡದಲ್ಲಿ ಮಾಜಿ ಸೈನಿಕರಿಗೆ ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಬ್ಯಾಂಕ್ ಆಫ್ ಬರೋಡದಲ್ಲಿ ಮಾಜಿ ಸೈನಿಕರಿಗಾಗಿ ಆಫೀಸ್ ಅಸಿಸ್ಟೆಂಟ್ ಹುದ್ದೆಗಳಿಗೆ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ವೆಬ್ ಸೈಟ್ www.bankofbaroda.co.in ನಲ್ಲಿ ಮೇ.23 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಬ್ಯಾಂಕ್‍ನ ಜಾಹೀರಾತು ಸಂಖ್ಯೆ-ಃBoB/HRM/REC/AVT//2025/05 ವೀಕ್ಷಿಸಬಹುದೆಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರಾದ ಡಾ.ಸಿ.ಎ.ಹಿರೇಮಠ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending