ದಿನದ ಸುದ್ದಿ
‘ಸರಕಾರ’ ಬಡವನ ಬುತ್ತಿಯಿಂದ ರೊಟ್ಟಿಕಸಿಯುವ ನಾಯಿಯಾಗಬಾರದು
- ಬಿ.ಪೀರ್ ಬಾಷ
ಮುಖ್ಯಮಂತ್ರಿ, ಸಾರಿಗೆ ಮಂತ್ರಿಗಳೇ;
ಹಣಗಳಿಸಲು ಸರಕಾರದಿಂದ ಬೇರೆ ವ್ಯಾಪಾರ ನಡೆಸಿ, ಬಡವರ ಒಡಲಿಗೆ ಬೆಂಕಿ ಇಡಬೇಡಿ.
ಕರೊನಾ ಎಂಬ ಸಿರಿವಂತರು ಹುಟ್ಡಿಸಿದ ಮಾರಿಬೇನೆಗೆ ಬಡವರು ಒಡಲು ಬೆಂದು ಹೋಗುತ್ತಿದೆ. ಹಾಗೆ ದುಡುತ್ತಿರುವ ಒಡಲಿಗೆ ಕೊಳ್ಳಿ ತಿವಿಯುವ ಕೆಲಸ ಬಹುಶಃ ಕಳ್ಳನೂ, ಕಟುಕನೂ, ಕಡುಪಾಪಿಯೂ ಮಾಡಲಾರ. ಆದರೆ ನಮ್ಮ ಸರಕಾರ ಏನು ಮಾಡುತ್ತಿದೆ?
ಎರಡು ಹೊತ್ತಿನ ತುತ್ತನ್ನು ಗಳಿಸಿಕೊಳ್ಳಲು ಬೆಂಗಳೂರಿಗೆ ಬಂದು, ಕಂಡಲ್ಲಿ ಜೋಪಡಿ ಕಟ್ಟಿಕೊಂಡು, ಕಲ್ಲು ಹೂಡಿ ಒಲೆಮಾಡಿ ಅನ್ನದಕಾಳು ಕುಚ್ಚಿಕೊಂಡು ಉಂಡು ಮಲಗುತ್ತಿದ್ದ ಕೂಲಿ ಸಾವಿರಾರು ಕಾರ್ಮಿಕರು ಲಾಕ್ಡೌನ್ ಆದ ಕ್ಷಣದಿಂದ ತತ್ತರಿಸಿಹೋಗಿದ್ದಾರೆ. ಅವರವರ ಹಳ್ಳಿಗಳಲ್ಲಿದ್ದಿದ್ದರೆ ಗಂಜಿ ಕುಡಿದು ಅಂಗಳದಲ್ಲಾದರೂ ಮಲಗುವ ಸಮಾಧಾನವಾದರೂ ಇರುತ್ತಿತ್ತು. ಇಲ್ಲಿ ಈ ಶಹರದಲ್ಲಿ, ಹಗಲು ಕೂಲಿಯಿಲ್ಲವೆಂದರೆ ರಾತ್ರಿ ಊಟವಿಲ್ಲ, ಇಂತಹ ಸ್ಥಿತಿಯಿರುವಾಗ ಕಳೆದ ಸು. ಒಂದೂವರೆ ತಿಂಗಳಿನಿಂದ ಅದು ಹೇಗೆ ಬದುಕಿರಬಹುದು? ಅವರ ಕಣ್ಣುಗಳಿಂದ ಅದೆಷ್ಟು ನೀರು ಹರಿದಿರಬಹುದು? ಹಸಿದು ಅಳುವ ಮಕ್ಕಳನ್ನು ಹೇಗೆ ಸುಮ್ಮನಿರಿಸಿರಬಹುದು?
ಹೇಗಾದರೂ ಮಾಡಿ ಊರು ಮುಟ್ಟಿದರೆ ಸಾಕೆಂದು, ಲೆಕ್ಕಹಾಕಿ ಸರಿಯಾಗಿ ಬಸ್ ಚಾರ್ಜ್ ಗೆ ಆಗುವಷ್ಟು ಹಣವನ್ನು ಸೀರೆ ಸೆರಗಿನಲ್ಲಿ, ಸೊಂಟದ ಮಡಿಕೆಯಲ್ಲಿ ಗಂಟು ಗಂಟಿಕೊಂಡು ಊರಿಗೆ ಹೋಗಬಹುದು ಎಂಬ ಸುದ್ದಿ ಕೇಳುತ್ತಲೇ ಬಸ್ಟ್ಯಾಂಡಿಗೆ ಬಂದರೆ ಇಲ್ಲಿ ದುಪ್ಪಟ್ಟು, ಮೂರುಪಟ್ಟು ಬಸ್ ಚಾರ್ಜ್ ಎಂದು ಹೇಳಿದರೆ ಅವರಿಗೆ ಎಷ್ಟು ಸಂಕಟವಾಗಿರಲಿಕ್ಕಿಲ್ಲ. ಬೆಳಗಾವಿಗೆ 800ಬಾಗಲಕೋಟೆಗೆ 700 ರೂ ಇದ್ದ ಬಸ್ ಚಾರ್ಜು, ಏಕಾಏಕಿ ಬೆಳಗಾವಿಗೆ1478 ಬಾಗಲಕೋಟೆಗೆ 1311ಎಂದರೆ ಇದು, ಹಸಿದ ಬಡವನ ಬುತ್ತಿಯಿಂದ ರೊಟ್ಟಿಕಸಿಯುವ ನಾಯಿಗಿಂತಲೂ ಕೀಳಾದ ಕೆಲಸವಲ್ಲವೇ?
ಆನಂದ್ ಸಿಂಗ್ ರಂತಹ ಧಣಿಗಳು ವಿಮಾನವನ್ನೇ ಬಾಡಿಗೆಗೆ ಪಡೆದು ವಿದೇಶದಲ್ಲಿದ್ದ ಮಕ್ಕಳನ್ನು ಕರೆದುಕೊಂಡು ಬಂದರು. ದೇಶದ ಸರಕಾರವೂ ಲಕ್ಷಾಂತರ ಸಂಬಳ ಪಡೆಯುವವರನ್ನು, ಕೋಟ್ಯಾಂತರ ತೆರಿಗೆ ಕಟ್ಟುವವರನ್ನು ವಿಶೇಷ ವಿಮಾನಗಳಿಂದ ಕರೆತರುವ ಪ್ರಯತ್ನವನ್ನೂ ಮಾಡೀತು? ಆದರೆ ಈ ಬಡಜೀವಿಗಳ ಇವರಿಗ್ಯಾವ ಲೆಕ್ಕ? ಸತ್ತರೆ ಮರ್ಯಾದೆ ಹೋದೀತೆಂಬ ಕಾರಣಕ್ಕೆ ಅಗ್ಗದ ರೇಷನನ್ನು ಕೊಡುವಂತೆ ಮಾಡಿ ಫೋಟೋ ತೆಗೆದಿಕೊಂಡರೆ ಸಾಕು ಜನೋಪಕಾರಿಯೆಂದು ಹೇಳಿಕೊಳ್ಳಲು. ಇನ್ನು ಬೆಂಗಳೂರೆಂಬ ಮಾಯಾನಗರದಲ್ಲಿ ಬದುಕೆಂಬ ಬದುಕೇ ಮೂರಾಬಟ್ಟೆಯಾಗಿ ಬಿಸಿಲಲ್ಲಿ ಬಾಡಿ ಗಾಳಿಪಾಲಾಗಿ ಕಸದಗುಂಟ ಹರಿದು ಹಂಚಿಹೋಗಿರುವ ಹೊತ್ತು ಮುಖ್ಯಮಂತ್ರಿ, ಪ್ರಧಾನ ಮಂತ್ರಿಗಳಿಗೆ ಇಂಥವರ ಬಗ್ಗೆ ಖಬರು ಇಲ್ಲವೆಂದರೆ ಏನು ಮಾಡಬೇಕು?
ಇಂಥ ಕೂಲಿ ಕಾರ್ಮಿಕರ ಸಂಖ್ಯೆ ಈಗ ದೇಶದಲ್ಲಿ ಹದಿನೈದಿಪ್ಪತ್ತು ಕೋಟಿಗೂ ಹೆಚ್ಚು. ಇವರು ಈಗ ಟಿ.ವಿ.ಚಾನೆಲುಗಳಿಗೆ ಸುದ್ದಿಯ ವಸ್ತುವಲ್ಲ. ಅವರಿಗಿರುವ ಉಮೇದಿಯೇ ಬೇರೆ. ಇನ್ನು ಸರಕಾರಗಳಿಗೆ ಕಾಪಾಡಬೇಕಿರುವುದು ಯಾರ ಹಿತಾಸಕ್ತಿಯನ್ನು? ಅದೂ ಆಗಿಯೇ ಹೋಯಿತು! ಸಾವಿರಾರು ಕೋಟಿ ಲೂಟಿಯೂ ಮಾಫ್ ಆಯಿತು!!
ಆದರೆ ಇಂಥ ವಿಶ್ವಜಗದ್ಗುರು ಮಹಾನುಭಾವರು ಅವರ ಪಟಾಲಂಗಳ ಸರಕಾರಗಳಿಗೆ ಕೂಲಿಕಾರ್ಮಿಕರನ್ನು ಉಚಿತವಾಗಿ ಅವರವರ ಮನೆಗಳಿಗೆ ಸರಕಾರಿ ಬಸ್ಸಿನಲ್ಲಿ ಮನೆ ಸೇರಿಸುವ ಯೋಗ್ಯತೆಯೂ ಇಲ್ಲದಾಯಿತೇ? ನಾಚಿಕೆಗೇಡು! ಅದು ಹೋಗಲಿ, ಇಂತಹ ಹೊತ್ತಿನಲ್ಲಿ ಬಸ್ ಚಾರ್ಜ್ ಪಡೆದು ಬಸ್ ಹತ್ತಿಸಿಕೊಂಡರೂ ನಾಚಿಕೆಗೇಡೇ ಆದರೂ ಇನ್ನು ಡಬಲ್ ತ್ರಿಪಲ್ ಚಾರ್ಜು ಪೀಕುತ್ತಾರೆ ಎಂದರೆ ಇದೊಂದು ಸರಕಾರವಾ ಅಥವಾ ? ಮನುಷ್ಯತ್ವ ಇರುವ ಯಾರಿಗಾದರೂ ಸಿಟ್ಟು ಬರದೇ ಇದ್ದೀತೇ?
ಹಸಿದು ಅಳುವ ಕೂಸಿಗೆ ನಾಲ್ಕು ರೂಪಾಯಿಯ ಬಿಸ್ಕೀಟು ಕೊಡಿಸಲು ಕಣ್ಣೀರು ತಂದುಕೊಳ್ಳುತ್ತಿರುವ ತಂದೆತಾಯಿಗಳು ಅಂತಹ ಆರೇಳು ವರ್ಷದ ಮಕ್ಕಳಿಗೂ ಸಾವಿರಾರು ರೂಪಾಯಿ ಬಸ್ ಚಾರ್ಜು ಕೊಡಬೇಕು ಎಂದರೆ…ಎದೆಯೊಡೆಯದಿದ್ದೀತೇ? ಹಣವೇ ಇಲ್ಲದವರು ಏನು ಮಾಡಬೇಕು? ಅವರವರ ಊರ ಮುಖ ನೋಡದೇ ಬೀದಿ ಹೆಣವಾಗಬೇಕೇ? ಏನಾಗಿದೆ ಈ ಸರ್ಕಾರಕ್ಕೆ? ಏನು ತುಂಬಿದೆ ಈ ಅಧಿಕಾರಿಗಳ ತಲೆಯಲ್ಲಿ? ಸಾವಿರಾರು ಕೋಟಿ ಆಗಬೇಕಾದಲ್ಲಿ ಆಗಿದೆ. ಆದರೆ ಈ ನಷ್ಟವನ್ನು ಬಡವರ ಬುತ್ತಿಗಂಟು ಕಸಿದು ಭರ್ತಿ ಮಾಡಿಕೊಳ್ಳಬೇಕೇ?
ಕೊಲ್ಲುವುದಷ್ಟೇ ಅಲ್ಲ, ಸಾವೇ ಸುಖ ಎಂಬಷ್ಟು ಕಷ್ಟ ಕೊಡುವುದು ಕೊಲೆಗಿಂತಲೂ ಕ್ರೂರ ನಡವಳಿಕೆ. ಇಂತಹ ಸ್ಥಾನದಲ್ಲಿ ಈಗ ಸರಕಾರಗಳೇ ಇವೆ ಎಂಬುದು ನಿಜಕ್ಕೂ ಮಾರಿಬೇನೆಗಿಂತಲೂ ಭೀಕರ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಾವಿನಲ್ಲೂ ಒಂದಾದ ಪ್ರೇಮಿಗಳು: ಪ್ರೇಮಿಯ ಪಕ್ಕದಲ್ಲೇ ಪ್ರೇಯಸಿಯ ಅಂತ್ಯಸಂಸ್ಕಾರ!
ಸುದ್ದಿದಿನ,ಕುಂಬಳೆ: ಪ್ರೀತಿ ಎನ್ನುವುದು ಸಾವಿನ ನಂತರವೂ ಶಾಶ್ವತ ಎಂಬುದಕ್ಕೆ ಕೇರಳದ ಕಾಸರಗೋಡಿನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ನಿಶ್ಚಿತಾರ್ಥವಾಗಿದ್ದ ಯುವಕ ಮೃತಪಟ್ಟ ಬೆನ್ನಲ್ಲೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿಯ ಅಂತ್ಯಸಂಸ್ಕಾರವನ್ನು ಆಕೆಯ ಇಚ್ಛೆಯಂತೆ ಯುವಕನ ಸಮಾಧಿಯ ಪಕ್ಕದಲ್ಲೇ ನೆರವೇರಿಸಲಾಗಿದೆ.
ನಡೆದಿದ್ದೇನು?
ಕಿದೂರು ಕುಂಟಂಗೇರಡ್ಕದ ಪ್ರಫುಲ್ಲ (26) ಮತ್ತು ತಮಿಳುನಾಡು ನಿವಾಸಿಯಾದ ಬ್ಯಾಂಕ್ ನೌಕರ ಮಣಿ ಎಂಬವರಿಗೆ ನಾಲ್ಕು ತಿಂಗಳ ಹಿಂದೆ ಅದ್ಧೂರಿಯಾಗಿ ಮದುವೆ ನಿಶ್ಚಿತಾರ್ಥ ನಡೆದಿತ್ತು. ಇನ್ನೇನು ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಎನ್ನುವಷ್ಟರಲ್ಲಿ, ಒಂದು ತಿಂಗಳ ಹಿಂದೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಮಣಿ ಮೃತಪಟ್ಟಿದ್ದರು.
ಡೆತ್ ನೋಟ್ನಲ್ಲಿತ್ತು ಕೊನೆಯ ಆಸೆ
ತನ್ನ ಭಾವಿ ಪತಿಯ ಅಗಲಿಕೆಯಿಂದ ತೀವ್ರವಾಗಿ ನೊಂದಿದ್ದ ಪ್ರಫುಲ್ಲ, ಕಳೆದ ಭಾನುವಾರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿಗೂ ಮುನ್ನ ಆಕೆ ಬರೆದಿದ್ದ ಡೆತ್ ನೋಟ್ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ. “ನನ್ನ ಮೃತದೇಹವನ್ನು ಮಣಿಯ ಸಮಾಧಿಯ ಸಮೀಪದಲ್ಲೇ ಅಂತ್ಯಸಂಸ್ಕಾರ ಮಾಡಬೇಕು” ಎಂದು ಆಕೆ ತನ್ನ ಕೊನೆಯ ಆಸೆಯನ್ನು ಬರೆದಿಟ್ಟಿದ್ದರು.
ತಮಿಳುನಾಡಿನಲ್ಲಿ ಅಂತ್ಯಕ್ರಿಯೆ
ಯುವತಿಯ ಆಸೆಯಂತೆ ಉಭಯ ಕುಟುಂಬದವರು ಮಾತುಕತೆ ನಡೆಸಿದರು. ಅದರಂತೆ ನಿನ್ನೆ ಕಾಸರಗೋಡಿನಿಂದ ಪ್ರಫುಲ್ಲರ ಮೃತದೇಹವನ್ನು ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ವಳ್ಳಿಯೂರು ಎಂಬಲ್ಲಿಗೆ ಕೊಂಡೊಯ್ಯಲಾಯಿತು. ಅಲ್ಲಿ ಮಣಿಯ ಸಮಾಧಿಯ ಪಕ್ಕದಲ್ಲೇ ಪ್ರಫುಲ್ಲರ ಅಂತ್ಯಸಂಸ್ಕಾರವನ್ನು ನೆರವೇರಿಸುವ ಮೂಲಕ ಪ್ರೇಮಿಗಳಿಬ್ಬರನ್ನು ಸಾವಿನಲ್ಲೂ ಒಂದಾಗಿಸಲಾಯಿತು.
ಅಂತ್ಯಸಂಸ್ಕಾರದ ವೇಳೆ ಎರಡೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದು, ಮರುಗುವ ಪ್ರೇಮಕಥೆಗೆ ಕಂಬನಿಯ ವಿದಾಯ ಹೇಳಿದರು. ಈ ವಿಡಿಯೋ ಮತ್ತು ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ಜೋಡಿಯ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ಡಿಪ್ಲೋಮಾ ಕೋರ್ಸ್; ಪ್ರವೇಶಾತಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ: 2026-27ನೇ ಶೈಕ್ಷಣಿಕ ಸಾಲಿಗೆ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿನ ಮೂರು ವರ್ಷಗಳ ಡಿಪ್ಲೋಮಾ (ಡಿ.ಹೆಚ್.ಟಿ.ಟಿ) ಹಾಗೂ ಎರಡನೇ ವರ್ಷದ ನೇರ ಪ್ರವೇಶಕ್ಕೆ (Lateral Entry) ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ 2026 ರ ಜುಲೈ 01ಕ್ಕೆ ಅನ್ವಯಿಸುವಂತೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 23 ವರ್ಷ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 25 ವರ್ಷ ಮೀರಿರಬಾರದು. ಒಟ್ಟು 39 ಅಭ್ಯರ್ಥಿಗಳನ್ನು (ಪುರುಷ ಮತ್ತು ಮಹಿಳಾ) ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಪ್ರತಿಯೊಬ್ಬ ವಿದ್ಯಾರ್ಥಿಗೆ ಪ್ರತಿ ತಿಂಗಳು ರೂ. 2,500/- ಗಳ ಶಿಷ್ಯವೇತನ ನೀಡಲಾಗುವುದು., ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಇಂಗ್ಲಿಷ್ ಅನ್ನು ಒಂದು ವಿಷಯವಾಗಿ ಅಭ್ಯಸಿಸಿ ಉತ್ತೀರ್ಣರಾಗಿರಬೇಕು.
ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಡಿಪ್ಲೋಮಾ ಕೋರ್ಸ್ಗೆ ನೇರ ಪ್ರವೇಶಕ್ಕೆ https://khtigadag.ac.in/
ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿಗಳಿಗಾಗಿ ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್, ಕಾಲೇಜು ರಸ್ತೆ, ನಿಟ್ಟುವಳ್ಳಿ, ದಾವಣಗೆರೆ ಅಥವಾ ದೂರವಾಣಿ ಸಂಖ್ಯೆ: 08192-262362 ಸಂಪರ್ಕಿಸುವಂತೆ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಿನದ ಸುದ್ದಿ
ದಾವಣಗೆರೆ| ಅಪರಿಚಿತರು ನೀಡಿದ ಟೆಲಿಗ್ರಾಮ್ ಲಿಂಕ್ ಕ್ಲಿಕ್ ಮಾಡಿ 14 ಲಕ್ಷ ಕಳೆದುಕೊಂಡ ಉಪನ್ಯಾಸಕ
ಸುದ್ದಿದಿನ,ದಾವಣಗೆರೆ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಬರುತ್ತದೆ ಎಂಬುದಾಗಿ ಉಪನ್ಯಾಸಕರೊಬ್ಬರಿಗೆ ಆಮಿಷ ತೋರಿಸಿದ ದುಷ್ಕರ್ಮಿಗಳು 14 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ದಾವಣಗೆರೆಯ ಭೂಮಿಕಾ ನಗರದ ನಿವಾಸಿಯಾಗಿರುವ 52 ವರ್ಷದ ಸರ್ಕಾರಿ ಕಾಲೇಜಿನ ಉಪನ್ಯಾಸಕ ಹಣ ಕಳೆದುಕೊಂಡಿದ್ದಾರೆ.
ಉಪನ್ಯಾಸಕರು ಮೊದಲಿಗೆ ಟೆಲಿಗ್ರಾಂ ಮೂಲಕ ಲಿಂಕ್ ಕ್ಲಿಕ್ ಮಾಡಿದ್ದಾರೆ. ಅಲ್ಲಿ ವಂಚಕರು ಹೇಳಿದಂತೆ ಹಲವು ಲಿಂಕ್ಗಳನ್ನು ಕ್ಲಿಕ್ ಮಾಡುತ್ತಾ ಹೋಗಿದ್ದು, ಹಂತಹಂತವಾಗಿ ಹಣ ಕಳೆದುಕೊಂಡಿದ್ದಾರೆ.
ಲಾಭದ ನಿರೀಕ್ಷೆಯಲ್ಲಿದ್ದ ಉಪನ್ಯಾಸಕರಿಗೆ ಲಾಭ ಹೋಗಲಿ, ಅಸಲೂ ಬಾರದ ಕಾರಣ ಅನುಮಾನಗೊಂಡು ತಾನು ಹಣ ಕಳೆದುಕೊಂಡಿರುವುದು ದೃಢಪಟ್ಟಿದೆ. ನಂತರ ಸೈಬರ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ2 days ago2.5 ಕೋಟಿ ಖರೀದಿಯಲ್ಲಿ ಅವ್ಯವಹಾರ ; ಆಯುಕ್ತೆ ಮಂಜುಶ್ರೀ ಸೇರಿ 6 ಅಧಿಕಾರಿಗಳ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ6 days agoದಾವಣಗೆರೆ | ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬೆಂಕಿ ರಹಿತ ಕುಕಿಂಗ್ ಕಾರ್ಯಕ್ರಮ
-
ದಿನದ ಸುದ್ದಿ6 days agoಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣಕ್ಕೆ ಉಚಿತ ಅವಕಾಶ : ಕೂಡಲೇ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ
-
ದಿನದ ಸುದ್ದಿ2 days agoದಾವಣಗೆರೆ | ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸಮಾರೋಪ ಸಮಾರಂಭ
-
ದಿನದ ಸುದ್ದಿ6 days agoಸಂಶೋಧಕರಿಂದ ಪಶ್ಚಿಮ ಘಟ್ಟಗಳಲ್ಲಿ ಮೂರು ಅಣಬೆಯ ಹೊಸ ಶಿಲೀಂಧ್ರ ಜಾತಿಗಳ ಪತ್ತೆ
-
ಕ್ರೀಡೆ6 days agoಹಿರಿಯ ಕ್ರಿಕೆಟ್ ಪಟು ಎನ್ಆರ್ಎಚ್ ರಮೇಶ್ ನಿಧನ
-
ಅಂಕಣ1 day agoಪ್ರಜಾಪ್ರಭುತ್ವ: ಸಮಾನತೆ, ಸಾಮಾಜಿಕ ನ್ಯಾಯ ಮತ್ತು ನೈತಿಕ ಹೊಣೆಗಾರಿಕೆ
-
ದಿನದ ಸುದ್ದಿ1 day agoದಾವಣಗೆರೆ| ಅಪರಿಚಿತರು ನೀಡಿದ ಟೆಲಿಗ್ರಾಮ್ ಲಿಂಕ್ ಕ್ಲಿಕ್ ಮಾಡಿ 14 ಲಕ್ಷ ಕಳೆದುಕೊಂಡ ಉಪನ್ಯಾಸಕ

