Connect with us

ದಿನದ ಸುದ್ದಿ

ನವಿಲೇಹಾಳಿನಲ್ಲಿ 67ನೇ ಕನ್ನಡ ರಾಜ್ಯೋತ್ಸವ ; ಪುನೀತ್ ರಾಜ್ ಕುಮಾರ್ ಪುಣ್ಯಸ್ಮರಣೆ

Published

on

ಸುದ್ದಿದಿನ,ದಾವಣಗೆರೆ: ಚನ್ನಗಿರಿ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ,ಗ್ರಾಮ ಘಟಕ ನವಿಲೇಹಾಳಿನಲ್ಲಿ 67 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಶನಿವಾರ ನಡೆಯಿತು.

ಕನ್ನಡ ದ್ವಜಾರೋಹಣವನ್ನು ಮಂಗಳೂರು ಘಟಕದ ಆರಕ್ಷಕ ಉಪ ನಿರೀಕ್ಷಕರಾದ ಶ್ರೀಯುತ ಪ್ರದೀಪ್ ರವರು ನಾಡಗೀತೆ ಯೊಂದಿಗೆ ನೆರವೇರಿಸಿದರು.

ಬೃಹತ್ ಗಾತ್ರದ ನಾಡ ಬಾವುಟದ ಮೆರವಣಿಗೆಗೆ ನವಿಲೇಹಾಳು ಪದ್ಮಶ್ರೀ ಪ್ರೌಢ ಶಾಲೆಗೆ ಭೂ ಧಾನ ಮಾಡಿದ ಶ್ರೀಯುತ ಎನ್.ವಿ. ಮಂಜುನಾಥರವರು ಚಾಲನೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸದರಿ ಗ್ರಾಮದ
ಕ.ರ.ವೇ ಗೌರವಾಧ್ಯಕ್ಷರಾದ ಶ್ರೀ ಜಿ.ಮಹೇಶ್ವರಪ್ಪ ವಹಿಸಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಉದಯ ಟಿವಿ ಹರಟೆ ಖ್ಯಾತಿಯ ಹಾಸ್ಯ ಭಾಷಣ
ಕಾರರಾದ ಕಲಬುರುಗಿಯ ಶ್ರೀಮತಿ ಇಂದುಮತಿ ಸಾಲಿಮಠ್ ರವರು ನೆರವೇರಿಸಿ, ತಮ್ಮ ಹಾಸ್ಯ ಭಾಷಣದಿಂದ ಮತ್ತು ಹಾಸ್ಯ ಹಾಡುಗಳಿಂದ ನೆರೆದಿದ್ದ ಗ್ರಾಮಸ್ಥರ ಜನಸ್ತೋಮವನ್ನು ನಗೆ ಕಡಲಿನಲ್ಲಿ ತೇಲಿಸಿದರು. ವರ ನಟ ಡಾ. ರಾಜಕುಮಾರ್ ರವರ ಸುಪುತ್ರ ಕರ್ನಾಟಕ ರತ್ನ,ಚಂದನ ವನದ ಧ್ರುವತಾರೆ ಪುನೀತ್ ರಾಜಕುಮಾರ್ ರವರ ಸಾಮಾಜಿಕ ಸೇವೆಯನ್ನು ತಾವೆಲ್ಲರೂ ಅನುಸರಿಸಬೇಕು, ಅಪ್ಪುತಮ್ಮ ಕಣ್ಣಿನ ಧಾನದಿಂದ ಇಂದು ನಾಲ್ಕು ಜನರ ಜೀವನಕ್ಕೆ ಬೆಳಕಾಗಿದೆ ಎಂದರು.

ಇಂದು ನೀವೆಲ್ಲರೂ ಈ ಕಾರ್ಯಕ್ರಮದಲ್ಲಿ ಅಪ್ಪು ಮೊದಲ ವರ್ಷದ ಪುಣ್ಯ ಸ್ಮರಣೆ ಹಮ್ಮಿಕೊಂಡಿರುವುದು ಅತೀವ ಸಂತೋಷ ತಂದಿದೆ,ನಾನು ಕೂಡ ನನ್ನ ದೇಹವನ್ನು ಈಗಾಗಲೇ ತನ್ನ ಮರಣದ ನಂತರ ಧಾನ ಮಾಡಲಿಕ್ಕೆ ನೊಂದಣಿ ಮಾಡಿಕೊಂಡಿರುವ ಸತ್ಯ ಸಂಗತಿಯನ್ನು ತಿಳಿಸಿ,ಇಂದು ನವಿಲೇಹಾಳು ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಊರಿನ ಹಿರಿಯರು- ಕಿರಿಯರು,ಗ್ರಾಮಸ್ಥರು,ಶಾಲಾ ಮಕ್ಕಳು,ಕನ್ನಡ ಮನಗಳು,ಕ.ರ.ವೇ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ತಾಯಿ ಭುವನೇಶ್ವರಿ ಕೃಪೆಗೆ ಪಾತ್ರರಾಗಿರುವುದ್ದಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಮದ್ಯಪಾನ ಒಳ್ಳೆಯ ಅಭ್ಯಾಸ ಅಲ್ಲ,ಯಾರು ಸಹ ಕುಡಿಯಬೇಡಿ ಎಂಬ ಉತ್ತಮ ಸಂದೇಶವನ್ನು ತಿಳಿಸಿದರು.ಎಲ್ಲರೂ ಸಹ ಕನ್ನಡ ಕಲಿಯಿರಿ,ಕಲಿಸಿರಿ,
ಕನ್ನಡವನ್ನು ಉಳಿಸಿರಿ, ಕನ್ನಡ ನಾಡು-ನುಡಿ ಸೇವೆಗೆ ತಮ್ಮ ಸಮಯ ಮೀಸಲಿಡಿ ಎಂಬುದಾಗಿ ತಿಳಿಸಿದರು.

ಕಾರ್ಯಕ್ರಮದ ಕೇಂದ್ರ ಬಿಂದುಗಳಾದ ನವಿಲೇಹಾಳಿನ ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಒಂದಕ್ಕಿಂತ ಒಂದು ಆಕರ್ಷಣೆಯಾಗಿ,ಎಲ್ಲಾರ ಪ್ರಶಂಸೆಯೊಂದಿಗೆ ಮೆಚ್ಚುಗೆ ಗಳಿಸಿದವು.ಮುಖ್ಯ ಅಥಿತಿಗಳಾಗಿ ಆಗಮನಿಸಿದ್ದ ಚಾಮರಾಜನಗರದ ಸಾಹಿತಿಗಳಾದ ಶ್ರೀ ಕೆ.ಶ್ರೀಧರ್(ಕೆ. ಸಿರಿ)ನವಿಲೇಹಾಳುನ ಸಾಹಿತಿಗಳಾದ ಡಾ.ಶ್ರೀ ಷಕೀಬ್ ಕಣದ್ಮನೆ ರವರು ರಚಿಸಿರುವ ನಮ್ಮೂರು ನವಿಲೂರು ಎಂಬ ಕವನ ವಾಚನ ದೊಂದಿಗೆ ತಮ್ಮ ಮಾತನ್ನು ಪ್ರಾರಂಭಿಸಿ, ಇತಿಹಾಸದ ಪುಟಗಳ ಸಂಗ್ರಹದೊಂದಿಗೆ ನವಿಲೂರು ನವಿಲೇಹಾಳು ಆದ ಸಂಗತಿಯನ್ನು ಬಿಚ್ಚಿಟ್ಟರು.ಹಾಗೂ ನವಿಲೇಹಾಳು ಗ್ರಾಮದಲ್ಲಿನ ಹಿಂದೂ-ಮುಸ್ಲಿಂ ಜನತೆಯ ಬಾಂಧವ್ಯವನ್ನು ಕೊಂಡಾಡಿದರು.

ಆರಕ್ಷಕ ಉಪ ನಿರೀಕ್ಷಕರಾದ ಶ್ರೀ ಪ್ರದೀಪ್ ರವರು ಮಾತನಾಡಿ ತಮ್ಮ ವ್ಯಾಪ್ತಿಗೆ ಬಂದತಹ ಎರಡು ಸೂಕ್ಷ್ಮ ಅಪರಾಧ ತನಿಖೆಗಳನ್ನು ಕೆಲವೇ ದಿನಗಳಲ್ಲಿ ಗುರುತಿಸಿದ್ದಕ್ಕಾಗಿ ಕರ್ನಾಟಕ ಸರ್ಕಾರ ತಮ್ಮ ಸೇವೆ ಗುರುತಿಸಿ,ಮುಖ್ಯ ಮಂತ್ರಿ ಪದಕ ನೀಡಿದ ಸಂಗತಿಯನ್ನು ತಿಳಿಸಿದರು.

ನಮ್ಮೂರು ಎಲ್ಲಾ ಗ್ರಾಮಸ್ಥರ ಪ್ರೋತ್ಸಾಹದೊಂದಿಗೆ ಶೈಕ್ಷಣಿಕವಾಗಿ, ಆರ್ಥಿಕವಾಗಿ,ಸಾಮಾಜಿಕವಾಗಿ ಉನ್ನತ ಅಭಿವೃದ್ಧಿಯೊಂದಿಗೆ ಸ್ವಚ್ಛ ಗ್ರಾಮವಾಗಿ ಹೊರಹೊಮ್ಮಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹಾಲಕ್ಕಿ ನುಡಿತೈತೆ ಕೃತಿ ಬಿಡುಗಡೆ

67 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ನವಿಲೇಹಾಳು ಪ್ರತಿಭೆ ಭದ್ರಾವತಿಯ ನವಚೇತನ ಕನ್ನಡ ಶಾಲೆಯ ಶಿಕ್ಷಕರಾದ ಸಿ.ಎಚ್.ನಾಗೇಂದ್ರಪ್ಪ ರವರ ಚೊಚ್ಚಲ ಕೃತಿಯಾದ ಹಾಲಕ್ಕಿ ನುಡಿತೈತೆ ಕವನ ಸಂಕಲನವನ್ನು
ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಜಿ.ಮಹೇಶ್ವರಪ್ಪ ರವರು ಮರು ಬಿಡುಗಡೆ ಗೊಳಿಸಿದರು.

ಹಾಲಕ್ಕಿ ನುಡಿತೈತೆ ಕೃತಿ ಬಿಡುಗಡೆ

ಸನ್ಮಾನ ಕಾರ್ಯಕ್ರಮ

ನವಿಲೇಹಾಳಿನ ಪದ್ಮಶ್ರೀ ಪ್ರೌಢ ಶಾಲೆಗೆ ಭೂ ಧಾನ ಮಾಡಿದ ನಿವಾಸಿಗಳಾದ ಶ್ರೀಯುತ ಎನ್.ವಿ.ಮಂಜುನಾಥ್ ಮತ್ತು ಹಿರಿಯರಾದ ಶ್ರೀಯುತ ದೊಡ್ಡ ಹನುಮಪ್ಪ ರವರನ್ನು, ಮಂಗಳೂರು ವಿಭಾಗದ ಆರಕ್ಷಕ ಉಪ ನಿರೀಕ್ಷಕರಾದ ಶ್ರೀ ಪ್ರದೀಪ್ ರವರನ್ನು,ಶ್ರೀಮತಿ ಇಂದುಮತಿ ಸಾಲಿಮಠ ರವರನ್ನು,ಶ್ರೀ ಕೆ.ಶ್ರೀಧರ್ ರವರನ್ನು,ನೇತಾಜಿ ಪ್ರೌಢಶಾಲೆ,
ಬಲ್ಲಮಾವಟಿ ಗ್ರಾಮ,ಕೊಡುಗು ಜಿಲ್ಲೆಯ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ನವಿಲೇಹಾಳು ಗ್ರಾಮದ ಶ್ರೀ ಎನ್.ಕೆ. ಮಹಬೂಬ್ ಸಾಬ್ ರವರನ್ನು, ಸ್ಥಳೀಯ ಪ್ರತಿಭೆಗಳಾದ ರಾಜ್ಯಮಟ್ಟದ ಬಸವ ಪ್ರಶಸ್ತಿ ಪುರಸ್ಕೃತರು,ಶಿಕ್ಷಕ,ಯುವ ಸಾಹಿತಿಗಳಾದ ಶ್ರೀ ಡಿ.ಸನಾವುಲ್ಲಾ ರವರನ್ನು,ಸುದ್ದಿದಿನ ಕನ್ನಡ ದಿನಪತ್ರಿಕೆಯ ಸಂಪಾದಕರು, ಸಾಹಿತಿಗಳಾದ ಶ್ರೀ ಗೋವರ್ಧನ್ ರವರನ್ನು,ರಾಜ್ಯಮಟ್ಟದ ಉದ್ಯೋನ್ಮುಖ ಕಾವ್ಯ ಚೇತನ ಪ್ರಶಸ್ತಿ ವಿಜೇತರಾದ ಯುವ ಕವಿ ಶ್ರೀ ವಿಜಯ್ ಕುಮಾರ್ ರವರನ್ನು,ಕರ್ನಾಟಕ ಶಿಲ್ಪಾಕಲಾ ಅಕಾಡಮಿ ಪ್ರಶಸ್ತಿ ವಿಜೇತರಾದ ಶ್ರೀ ಸದ್ದಾಂ ಹುಸೇನ್ ಸನ್ಮಾನಿಸಲಾಯಿತು.

ನವಿಲೇಹಾಳು ಕ.ರ.ವೇ ಘಟಕದ ಗೌರವಾಧ್ಯಕ್ಷರಾದ ಶ್ರೀ ಜಿ. ಮಹೇಶ್ವರರವನ್ನು,ಈ ದಿನದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಂಡ ಹಾಲಕ್ಕಿ ನುಡಿತೈತೆ ಕೃತಿಯ ಲೇಖಕರಾದ,ಸಾಹಿತಿ ಶಿಕ್ಷಕರಾದ ಶ್ರೀ ಸಿ.ಎಚ್.ನಾಗೇಂದ್ರಪ್ಪ ರವರನ್ನು,
ನವಿಲೇಹಾಳು ಘಟಕದ ಕ.ರ.ವೇ ಅಧ್ಯಕ್ಷರಾದ ಶ್ರೀ ಎಸ್.ಶೇಕ್ ಹುಸೇನ್ ರವರನ್ನು,ನವಿಲೇಹಾಳು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಬಿ.ಹೆಚ್.ಶಬ್ ನಮ್ ರವರನ್ನು,ಉಪಾಧ್ಯಕ್ಷರಾದ ಶ್ರೀ ಹನುಮಂತಪ್ಪ ರವರನ್ನು,ಸದಸ್ಯರಾದ ಶ್ರೀ ಎಸ್. ಎನ್.ದೇವಣ್ಣ ರವರನ್ನು,ಪದ್ಮಶ್ರೀ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಶಿವಪ್ಪ ರವರನ್ನು ಇದೇ ಸಂದರ್ಭದಲ್ಲಿ ಕ.ರ.ವೇ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಗೌರವಿಸಿ ಸನ್ಮಾನಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಕೃಷ್ಣಪ್ಪ, ಸ್ವಾಗತವನ್ನು ಶಿಕ್ಷಕರಾದ ಶ್ರೀ ಇಸ್ಮಾಯಿಲ್ ರವರು, ವಂದನಾರ್ಪಣೆಯನ್ನು ಶ್ರೀ ಎನ್. ಎಸ್.ಜಗದೀಶ್ ರವರು ನಡೆಸಿಕೊಟ್ಟರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕೆ. ಬೇವಿನಹಳ್ಳಿ, ಸಾಲಕಟ್ಟೆ ಗ್ರಾಮದಲ್ಲಿ ರಕ್ತದಾನ ಶಿಬಿರ

Published

on

ಸುದ್ದಿದಿನ,ದಾವಣಗೆರೆ:ಕೆ. ಬೇವಿನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರದಲ್ಲಿ 21 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಇದೇ ವೇಳೆ ಸಾಲಕಟ್ಟೆ ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹರಿಹರ ಇವರ ಸಂಯುಕ್ತ ಆಶ್ರಯದಲ್ಲಿ 11 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

ಶಿಬಿರದಲ್ಲಿ ಸತ್ಯನಾರಾಯಣ ಕ್ಯಾಂಪ್‌ನ ಡಾ. ರಾಮಾಂಜನೇಯ ಸ್ವಾಮಿ ಅವರು ಇದುವರೆಗೆ 110 ಬಾರಿ ರಕ್ತದಾನ ಮಾಡಿರುವುದು ವಿಶೇಷವಾಗಿದ್ದು, ಈ ಬಾರಿ ತಮ್ಮ ಮಗನೊಂದಿಗೆ ರಕ್ತದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಅಲ್ಲದೆ ವಿರೂಪಾಕ್ಷಪ್ಪ ಬಿ.ಕೆ. (ವಿ.ಆರ್.ಡಬ್ಲ್ಯೂ) ಎಂಬ ವಿಶೇಷ ಚೇತನರು 5ನೇ ಬಾರಿ ರಕ್ತದಾನ ಮಾಡಿ ಗಮನಾರ್ಹರಾಗಿದ್ದಾರೆ.

ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ (ಟಿ.ಎಚ್.ಒ) ಉಮಣ್ಣ ಅವರು ಮಾತನಾಡಿ, ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲವಾದುದರಿಂದ ರಕ್ತದಾನದ ಮಹತ್ವ ಅತ್ಯಂತ ಮಹತ್ತರವಾಗಿದೆ ಎಂದು ತಿಳಿಸಿದರು.

ವೈದ್ಯಾಧಿಕಾರಿಗಳಾದ ಡಾ. ರೇವತಿ ಎಚ್ ಬುಟ್ಟೆ ಅವರು ಮಾತನಾಡಿ, ಗ್ರಾಮದ ಜನರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿರುವುದು ಸಂತೋಷದ ಸಂಗತಿ. ಅತಿ ತುರ್ತು ಪರಿಸ್ಥಿತಿಗಳಲ್ಲಿ ರಕ್ತದಾನವು ಅನೇಕ ರೋಗಿಗಳ ಜೀವ ಉಳಿಸಲು ಸಹಾಯಕವಾಗುತ್ತದೆ ಎಂದು ಹೇಳಿದರು. ದಾವಣಗೆರೆ ಕೇಂದ್ರ ರಕ್ತ ನಿಧಿಯ ಡಾ. ಗೀತಾ ಡಿ.ಎಚ್. ಹಾಗೂ ಸಿಬ್ಬಂದಿಗಳು ರಕ್ತವನ್ನು ಸಂಗ್ರಹಿಸಿದರು.

ಈ ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಕರಾದ ಉಮೇಶ್ ಎಂ.ಆರ್.ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು ಹಾಗೂ ಗ್ರಾಮಸ್ಥರಾದ ವಿಶ್ವನಾಥ್ ಡಿ.ಆರ್. (ಉಪನ್ಯಾಸಕರು), ವಿಶ್ವನಾಥ್ ಎ.ಎಸ್., ಬನ್ನಿಕೋಡು ಸುರೇಶ್, ರೇವಣಸಿದ್ದಪ್ಪ, ಕೆ.ಜಿ. ಸಂತೋಷ್, ಜಿ.ಎಂ. ಮುರುಗೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಕೆ. ಬೇವಿನಹಳ್ಳಿ ಮತ್ತು ಸಾಲಕಟ್ಟೆ ಗ್ರಾಮಸ್ಥರ ಸಹಕಾರದಿಂದ ರಕ್ತದಾನ ಶಿಬಿರ ಯಶಸ್ವಿಯಾಗಿ ನೆರವೇರಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕಾಂಗ್ರೆಸ್ ನ ಹಿರಿಯ ಮುಖಂಡ ಕೆರೆಕಟ್ಟೆ ಸೈಯದ್ ಸೈಫುಲ್ಲಾ ನಿಧನ

Published

on

ಸುದ್ದಿದಿನ,ದಾವಣಗೆರೆ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಮುಸ್ಲಿಂ ಸಮಾಜದ ನಾಯಕರಾಗಿದ್ದ ಸೈಯದ್ ಕೆರೆಕಟ್ಟೆ ಸೈಫುಲ್ಲಾ ಸೈಫುಲ್ಲಾ ಸಾಬ್ (79ವರ್ಷ) ಅವರು ಇಂದು ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ದಾವಣಗೆರೆಯ ನಂಜಪ್ಪ ಆಸ್ಪತ್ರೆಯಲ್ಲಿ ದಾಖಲಾಗಿದ್ದರು . ಮೃತರ ನಿಧನಕ್ಕೆ ಮುಸ್ಲಿಂ ಸಮುದಾಯದ ಮುಖಂಡರು, ವಿವಿಧ ಪಕ್ಷಗಳ ನಾಯಕರು ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

ಕರೆಕಟ್ಟೆಜನಾಬ್ ಸೈಯದ್ ಸೈಫುಲ್ಲ ಸಾಬ್ಮಿ ಲ್ಲತ್ ವಿದ್ಯಾ ಸಂಸ್ಥೆಗಳ ಸಂಸ್ಥಾಪಕರೂ ಆಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದ ಸೈಯದ್ ಸೈಫುಲ್ಲಾ ಸಾಬ್ ಅವರು ಸಿಎಂ ಸಿದ್ದರಾಮಯ್ಯ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಸೇರಿದಂತೆ ಕಾಂಗ್ರೆಸ್ ಹಿರಿಯ ನಾಯಕರ ಆಪ್ತರಾಗಿದ್ದರು.

ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಅವರನ್ನು ಸೇರಿದಂತೆ ಕುಟುಂಬಸ್ಥರು, ಅಪಾರ ಬಂಧುಬಳಗದವರನ್ನು ಸೈಯದ್ ಕೆರೆಕಟ್ಟೆ ಸೈಫುಲ್ಲಾ ಸಾಬ್ ಅವರು ಅಗಲಿದ್ದಾರೆ.

2013ರಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಜೆಡಿಎಸ್ ಸೇರಿ ಈ ಪಕ್ಷದಿಂದ ಸ್ಪರ್ಧಿಸಿ 26 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಶಾಮನೂರು ಶಿವಶಂಕರಪ್ಪರ ವಿರುದ್ಧ ಸೋತರೂ ಎರಡನೇ ಸ್ಥಾನ ಪಡೆದಿದ್ದರು. ಆಗ ಬಿಜೆಪಿ ಮೂರನೇ ಸ್ಥಾನಕ್ಕೆ ಹೋಗಿತ್ತು. ಮತ್ತೆ ಕಾಂಗ್ರೆಸ್ ಪಕ್ಷ ಸೇರಿದ್ದ ಅವರು, ಸಿದ್ದರಾಮಯ್ಯರ ಜೊತೆ ಉತ್ತಮ ಒಡನಾಟ ಹೊಂದಿದ್ದರು. ಅವರು ಸ್ನಾತಕೋತ್ತರ ವೃತ್ತಿಪರ ಬಿಎಸ್ಸಿ ಅನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದಿದ್ದರು. ದಾವಣಗೆರೆಯ ಡಿಆರ್ ಎಂ ಕಾಲೇಜಿನಲ್ಲಿ ಬಿ. ಎಡ್ ವ್ಯಾಸಂಗ ಮಾಡಿದ್ದರು. ಎಂ. ಎಂ. ಬಸಪ್ಪ ಶಿಕ್ಷಣ ಸಂಘದ ಕಾಲೇಜಿನಲ್ಲಿ ಪದವಿ ಪೂರೈಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕೆರೆಗಳ ಸಂರಕ್ಷಣೆ; ಒತ್ತುವರಿ ತೆರವಿಗೆ ಕಟ್ಟುನಿಟ್ಟಿನ ಕ್ರಮ : ಡಿಸಿ ಗಂಗಾಧರಸ್ವಾಮಿ ಜಿ.ಎಂ

Published

on

ಸುದ್ದಿದಿನ,ದಾವಣಗೆರೆ:ಈ ವರ್ಷ ಬರಗಾಲದ ಲಕ್ಷಣಗಳಿರುವುದರಿಂದ ಜಲಚರಗಳ ರಕ್ಷಣೆ ಹಾಗೂ ಕುಡಿಯುವ ನೀರಿನ ಲಭ್ಯತೆಗೆ ಮೊದಲ ಆದ್ಯತೆ ನೀಡಬೇಕು. ಜಿಲ್ಲೆಯ ಕೆರೆಗಳಲ್ಲಿರುವ ನೀರಿನ ಪ್ರಮಾಣದ ಬಗ್ಗೆ ನಿಖರವಾದ ಅಧ್ಯಯನ ನಡೆಸಿ ವರದಿ ನೀಡುವಂತೆ , ಜಿಲ್ಲೆಯ ಕೆರೆಗಳ ಸಂರಕ್ಷಣೆ ಹಾಗೂ ಒತ್ತುವರಿ ತೆರವಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರರುಗಳಿಗೆ ಜಿಲ್ಲಾಧಿಕಾರಿಗಳಾದ ಗಂಗಾಧರಸ್ವಾಮಿ ಜಿ.ಎಂ ಅವರು ಸೂಚನೆ ನೀಡಿದರು.

ಅವರು (ಏ.15) ಕೆರೆಗಳ ಸಂರಕ್ಷಣೆ, ಒತ್ತುವರಿ ತೆರವು ಹಾಗೂ ಮುಂಬರುವ ಬೇಸಿಗೆಯ ಕುಡಿಯುವ ನೀರಿನ ನಿರ್ವಹಣೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ಒಟ್ಟು 533 ಕೆರೆಗಳ ಪೈಕಿ ಇನ್ನೂ 20 ಕೆರೆಗಳ ಒತ್ತುವರಿ ತೆರವು ಕಾರ್ಯ ಬಾಕಿ ಇದೆ. ಚನ್ನಗಿರಿ ತಾಲ್ಲೂಕಿನ 5 ಕೆರೆಗಳಾದ ಹರೇಗಂಗೂರು, ಸಾಗರಪೇಟೆ, ದಾಗಿನಕಟ್ಟೆ, ತ್ಯಾವಣಿಗ ಮತ್ತು ಸೂಳೆಕೆರೆ; ಹರಿಹರ ತಾಲ್ಲೂಕಿನ 7 ಕೆರೆಗಳಾದ ಹಿಂಡಸಗಟ್ಟ, ಜಿಗಳಿ, ಹಾಲಿವಾಣ, ಕಮಲಾಪುರ, ಗುಡ್ಡದತುಮ್ಮಿನಕಟ್ಟೆ, ಕುಂಬಳೂರು, ಯಲವಟ್ಟಿ; ದಾವಣಗೆರೆ ತಾಲ್ಲೂಕಿನ ಹೊನ್ನೂರು, ಹದಡಿ, ಮಾಳಗೊಂಡನಹಳ್ಳಿಯ 3 ಕೆರೆಗಳು ಹಾಗೂ ಹೊನ್ನಾಳಿ ತಾಲ್ಲೂಕಿನ ನೆಲಹೊನ್ನೆ, ಬನ್ನಿಕೊಡು, ಕುಂಬಳೂರು, ಸಾಸ್ವೆಹಳ್ಳಿ ಮತ್ತು ಬಲಮುರಿ ಕೆರೆಗಳನ್ನು ಶೀಘ್ರವಾಗಿ ಗುರುತಿಸಿ ತೆರವುಗೊಳಿಸಲು ಕ್ರಮವಹಿಸಬೇಕು. ತೆರವು ಕಾರ್ಯಾಚರಣೆಯನ್ನು ಛಾಯಾಚಿತ್ರ ಮತ್ತು ವಿಡಿಯೋ ಚಿತ್ರೀಕರಣದೊಂದಿಗೆ ಪಾರದರ್ಶಕವಾಗಿ ನಡೆಸಿ ಗ್ರಾಮ ಪಂಚಾಯತಿಗಳಿಗೆ ಅಧಿಕೃತವಾಗಿ ಹಸ್ತಾಂತರಿಸಬೇಕು ಎಂದು ತಿಳಿಸಿದರು.

ಚನ್ನಗಿರಿ ಹಾಗೂ ದಾವಣಗೆರೆ ತಾಲ್ಲೂಕಿನ ಹಲವು ಕೆರೆಗಳಿಗೆ ಕೊಳಚೆ ನೀರು ಸೇರುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಉದ್ದೇಶಕ್ಕೆ ಬಳಸುವ ಕೆರೆಗಳ ನೀರಿನ ಮಾದರಿಯನ್ನು ಪ್ರತಿ ತಿಂಗಳು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ವರದಿ ಸಲ್ಲಿಸಬೇಕು. ಯೋಗ್ಯವಾಗಿದ್ದರೆ ಮಾತ್ರ ಕುಡಿಯಲು ಬಳಸಬೇಕು ಎಂದರು.

ಕೆರೆಗಳಲ್ಲಿ ಹೂಳೆತ್ತುವ ಕಾರ್ಯವನ್ನು ಕೇವಲ ರೈತರಿಗೆ ಮಾತ್ರ ಸೀಮಿತಗೊಳಿಸಬೇಕು. ಅಕ್ರಮ ಮಣ್ಣು ಸಾಗಾಟಕ್ಕೆ ಆಸ್ಪದ ನೀಡದಂತೆ ಭೂ-ವಿಜ್ಞಾನ ಇಲಾಖೆ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಲು ಹಾಗೂ ಮಣ್ಣಿನ ಮೂಲ ಪದರ ಹಾನಿಯಾಗದಂತೆ ಕ್ರಮವಹಿಸಬೇಕೆಂದು ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೆರೆಗಳನ್ನು ಒತ್ತುವರಿಯಿಂದ ಶಾಶ್ವತವಾಗಿ ಮುಕ್ತಗೊಳಿಸಲು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಕೆರೆಗಳ ಬಫರ್ ವಲಯದಲ್ಲಿ ಸಸಿಗಳನ್ನು ನೆಟ್ಟು ಜೈವಿಕ ಬೇಲಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಮುಂಬರುವ ಮಳೆಗಾಲದ ವೇಳೆಗೆ ಸಸಿಗಳನ್ನು ನೆಡಲು ಸಿದ್ಧತೆ ಮಾಡಿಕೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ವ್ಯಾಪ್ತಿಯಲ್ಲಿ ಕೆರೆಗಳ ನೀರಿನ ಸಂಗ್ರಹಣಾ ಮಟ್ಟದ ಕುರಿತು ವಿವರ (ಮಾರ್ಚ್ 31 ಅಂತ್ಯಕ್ಕೆ)

ಪೂರ್ಣ ತುಂಬಿದ ಕೆರೆಗಳು: ಜಿಲ್ಲೆಯ ಒಟ್ಟು 08 ಕೆರೆಗಳು ಶೇ. 100 ರಷ್ಟು ಭರ್ತಿಯಾಗಿವೆ.

ಶೇ. 51 ರಿಂದ ಶೇ. 99 ರಷ್ಟು: ಒಟ್ಟು 47 ಕೆರೆಗಳಲ್ಲಿ ಉತ್ತಮ ನೀರಿನ ಸಂಗ್ರಹವಿದೆ.

ಶೇ. 31 ರಿಂದ ಶೇ. 50 ರಷ್ಟು: ಸುಮಾರು 164 ಕೆರೆಗಳು ಅರ್ಧದಷ್ಟು ನೀರಿನ ಮಟ್ಟವನ್ನು ಹೊಂದಿವೆ.

ಶೇ. 1 ರಿಂದ ಶೇ. 30 ರಷ್ಟು: ಜಿಲ್ಲೆಯ ಗರಿಷ್ಠ ಅಂದರೆ 250 ಕೆರೆಗಳಲ್ಲಿ ಕನಿಷ್ಠ ಪ್ರಮಾಣದ ನೀರು ಸಂಗ್ರಹವಾಗಿದೆ.

ಶೂನ್ಯ ಮಟ್ಟ (ತುಂಬಿರದ ಕೆರೆಗಳು): ಪ್ರಸ್ತುತ ಜಿಲ್ಲೆಯ 64 ಕೆರೆಗಳಲ್ಲಿ ನೀರಿನ ಸಂಗ್ರಹವಿಲ್ಲದೆ ಖಾಲಿಯಾಗಿವೆ.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರಣ್ಣನವರ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್‌, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರುಗಳು, ಬೃಹತ್‌ ಮತ್ತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು , ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending