ದಿನದ ಸುದ್ದಿ
ಮಂಗಳೂರಿನ ಚರ್ಚ್ ಗಳನ್ನು ದ್ವಂಸ ಮಾಡಿದ್ದನೇ ಟಿಪ್ಪು? ಇತಿಹಾಸ ಏನು ಹೇಳುತ್ತೆ?
- ನವೀನ್ ಸೂರಿಂಜೆ
ಟಿಪ್ಪು ಕೊಡವರ ಹತ್ಯಾಕಾಂಡ ನಡೆಸಿರುವುದು ಸುಳ್ಳು ಎಂದು ಇತಿಹಾಸಕಾರರು ಹೇಳಿದ ನಂತರ ಇದೀಗ ಕರಾವಳಿ ಭಾಗದಲ್ಲಿ ಟಿಪ್ಪು ಕ್ರಿಶ್ಚಿಯನ್ನರ ಮರಣಹೋಮ ನಡೆಸಿದ್ದ ಎಂದು ಸುದ್ದಿ ಹರಿಬಿಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ 27 ಚರ್ಚುಗಳನ್ನು ಕೆಡವಿದ್ದ ಎಂದು ಸುದ್ದಿ ಹಬ್ಬಿಸಲಾಗ್ತಿದೆ. 1750 ರಲ್ಲಿ ಜನಿಸಿದ ಟಿಪ್ಪು ಸುಲ್ತಾನ್ ಕರಾವಳಿಯಲ್ಲಿ 1784 ರಿಂದ 1799 ರವರೆಗೆ ಅಧಿಪತ್ಯವನ್ನು ಸ್ಥಾಪಿಸಿದ್ದ.
ಈ ಸಂಧರ್ಭದಲ್ಲಿ ಕರಾವಳಿಯಲ್ಲಿ ಬ್ರಿಟೀಷರು ಹೆಚ್ಚು ಸಕ್ರೀಯಗೊಂಡಿದ್ದನ್ನು ಅರಿತಿದ್ದ. ಆ ಕಾರಣಕ್ಕಾಗಿ ಬ್ರಿಟೀಷರ ಪ್ರಾರ್ಥನಾ ಮಂದಿರಗಳ ಬಗ್ಗೆ ಒಂದು ರೀತಿಯ ಸಂಶಯದ ಗಮನವನ್ನು ಇಡುವುದು ಆಗಿನ ರಾಜನೀತಿಯಾಗಿತ್ತು. ಆದರೆ 27 ಚರ್ಚುಗಳನ್ನು ಕೆಡವಿದ್ದ ಎಂಬುದು ಸುಳ್ಳು ಇತಿಹಾಸ. ಅದಕ್ಕಾಗಿ 1784 ರಿಂದ ಟಿಪ್ಪು ಮರಣದವರೆಗೆ ಕರಾವಳಿಯಲ್ಲಿ ಇದ್ದ ಚರ್ಚುಗಳು ಯಾವುದು ಮತ್ತು ಅದರ ಇತಿಹಾಸ ಏನು ಹೇಳುತ್ತದೆ ಎಂಬುದನ್ನು ನೋಡಬೇಕು.
ಕರಾವಳಿಯ ಅತೀ ಪುರಾತನ ಚರ್ಚುಗಳಲ್ಲಿ ಮೊದಲನೆಯದಾಗಿ ಕಾಣುವುದು 1680 ರಲ್ಲಿ ಕಟ್ಟಲ್ಪಟ್ಟ ಹಂಪನಕಟ್ಟೆಯ ಮಿಲಾಗ್ರಿಸ್ ಚರ್ಚ್ ಮತ್ತು ಕಲ್ಯಾಣಪುರದ ಮಿಲಾಗ್ರಿಸ್ ಚರ್ಚ್. ಹಂಪನಕಟ್ಟೆಯ ಮಿಲಾಗ್ರಿಸ್ ಚರ್ಚನ್ನು ಟಿಪ್ಪು ಒಡೆದು ಹಾಕಿರೋ ಬಗ್ಗೆ ಎಲ್ಲೂ ಇತಿಹಾಸ ಹೇಳುವುದಿಲ್ಲ. ಟಿಪ್ಪು ಮರಣದ ನಂತರ ಬ್ರಿಟೀಷರು ಮಿಲಾಗ್ರಿಸ್ ಚರ್ಚನ್ನು ಹೆಚ್ಚು ದೊಡ್ಡದಾಗಿ ಕಟ್ಟಿದರು ಎಂದಷ್ಟೇ ಹೇಳುತ್ತದೆ.
ಅದಕ್ಕಿಂತಲೂ ಹೆಚ್ಚು ಕುತೂಹಲಕರವಾಗಿರೋದು ಮಿಲಾಗ್ರಿಸ್ ವ್ಯಾಪ್ತಿಯ ಸಾಲ್ವಡಾರ್ ಪಿಂಟೋ ಎಂಬ ಅಧಿಕಾರಿಯೇ ಟಿಪ್ಪುವಿನ ಕಾರ್ಯದರ್ಶಿ ಆಗಿದ್ದರು. ಟಿಪ್ಪು ಮರಣದ ನಂತರ ಫಾದರ್ ಮೆಂಡೇಝ್ ಮತ್ತು ಟಿಪ್ಪುವಿನ ಮಾಜಿ ಮುನ್ಶಿ(ಕಾರ್ಯದರ್ಶಿ) ಸಾಲ್ವಡಾರ್ ಪಿಂಟೋ ಜೊತೆ ಸೇರಿ 600 ರೂಪಾಯಿಗಳನ್ನು ಸಂಗ್ರಹಿಸಿ 1811 ರಲ್ಲಿ ವಿಶಾಲ ಮಿಲಾಗ್ರಿಸ್ ಚರ್ಚನ್ನು ಪುನರ್ ನಿರ್ಮಾಣ ಮಾಡಿದರು ಎಂದು ಇತಿಹಾಸ ಹೇಳುತ್ತದೆ. ಇಲ್ಲಿ ಮುಖ್ಯವಾದುದು ಟಿಪ್ಪುವಿನ ಕಾರ್ಯದರ್ಶಿ ಒಬ್ಬ ಕ್ರಿಶ್ಚಿಯನ್ ಆಗಿದ್ದರು ಮತ್ತು ಅವರು ಧರ್ಮಾಭಿಮಾನಿಯಾಗಿದ್ದರು ಎನ್ನುವುದು.
ಇನ್ನು ಉಡುಪಿಯ ಕಲ್ಯಾಣಪುರ ಚರ್ಚ್ ಕೂಡಾ 1680 ರಲ್ಲಿ ಪ್ರಾರಂಭವಾದರೂ ಟಿಪ್ಪುನಿಂದ ಕೆಡವಲ್ಪಟ್ಟಿಲ್ಲ. 1784 ರ ಅವಧಿಯಲ್ಲಿ ಟಿಪ್ಪು ಕರಾವಳಿಯ ಬ್ರಿಟೀಷರ ಆಶ್ರಯತಾಣವನ್ನು ಹುಡುಕಿಕೊಂಡು ಚರ್ಚುಗಳಿಗೆ ಬಂದಾಗ ಕಲ್ಯಾಣಪುರ ಚರ್ಚನ್ನು ಕೆಡವಿದ ಬಗ್ಗೆ ದಾಖಲೆಗಳು ಇಲ್ಲ.
ಇತಿಹಾಸ ಬದಿಗಿಟ್ಟು ಪವಾಡವನ್ನು ಗಮನಿಸಿದರೂ ಕಲ್ಯಾಣಪುರ ಮಿಲಾಗ್ರಿಸ್ ಚರ್ಚಿನ ಪವಾಡದ ಕತೆ ಹೀಗೆ ಹೇಳುತ್ತದೆ : ಟಿಪ್ಪು ಸುಲ್ತಾನ್ ಎಂಬ ರಾಜ ಬ್ರಿಟೀಷರನ್ನು ಹುಡುಕಿಕೊಂಡು ಕಲ್ಯಾಣಪುರ ಪವಾಡ ಮಾತೆಯ ಮಿಲಾಗ್ರಿಸ್ ಚರ್ಚಿಗೆ ದಾಳಿ ಮಾಡಲು ಬಂದ. ಆಗ ಎಲ್ಲೋ ಇದ್ದ ಜೇನು ನೊಣಗಳು ಟಿಪ್ಪುವಿನ ಸೈನ್ಯದ ಮೇಲೆ ಮುತ್ತಿಗೆ ಹಾಕಿದವು. ಸೈನಿಕರು ಓಡಿ ನದಿಯಲ್ಲಿ ಮುಳುಗಿದರೂ ಜೇನುನೊಣಗಳು ಬಿಡಲಿಲ್ಲ. ಕೊನೆಗೂ ಕಲ್ಯಾಣಪುರ ಪವಾಡ ಮಾತೆಯ ಚರ್ಚನ್ನು ಕೆಡವಲಾಗಲಿಲ್ಲ. ಇದು ಊರಿಡೀ ಪ್ರತೀತಿಯಾಗಿ ಹಿಂದೂಗಳು ಕೂಡಾ ಈ ಚರ್ಚನ್ನು ಮಿಲಾಗ್ರಿಯಮ್ಮನ ದೇವಸ್ಥಾನ ಎನ್ನಲಾರಂಬಿಸಿದ್ರು ಎಂಬುದು ಜನಪದೀಯ ಕತೆಯಾಗಿದೆ.
ಇದರ ಬಳಿಕ ಅತ್ಯಂತ ಪುರಾತನ ಚರ್ಚುಗಳ ಪೈಕಿ ನಮಗೆ ಕಾಣಸಿಗುವುದು ಮೂಡಬಿದ್ರೆಯ ಹೊಸಬೆಟ್ಟು ಚರ್ಚ್. 1761 ರಲ್ಲಿ ನಿರ್ಮಾಣಗೊಂಡ ಚರ್ಚಿನ ಇತಿಹಾಸವನ್ನು ಓದಿದಾಗ ಟಿಪ್ಪುವಿನ ಉಲ್ಲೇಖಗಳು ಬರುತ್ತದೆ. ಮೂಡಬಿದ್ರೆಯ ಜೈನ ಅರಸನ ವ್ಯಾಪ್ತಿಗೂ ಬರುತ್ತಿದ್ದ ಈ ಚರ್ಚು ಸ್ಥಳೀಯ ಅರಸನ ಕೆಂಗಣ್ಣಿಗೆ ಗುರಿಯಾಗಿತ್ತು. ಟಿಪ್ಪು ಹಲವು ಚರ್ಚುಗಳ ಬಗ್ಗೆ ಅಸಮಾದಾನ ಹೊಂದಿದ್ದರೂ ಈ ಚರ್ಚಿನ ಉಸಾಬರಿಗೆ ಬಂದಿಲ್ಲ ಎಂದು ಚರ್ಚ್ ಇತಿಹಾಸ ಸ್ಪಷ್ಟವಾಗಿ ಹೇಳುತ್ತದೆ.
1784 ಎಂಬುದು ಟಿಪ್ಪು ಇತಿಹಾಸದಲ್ಲಿ ಅತ್ಯಂತ ಪ್ರಮುಖ ಸಂಧರ್ಭ. ಇದೇ ಇಸವಿಯಲ್ಲಿ ಆತ ಬ್ರಿಟೀಷರನ್ನು ಹತ್ತಿಕ್ಕುವುದಕ್ಕಾಗಿ ಚರ್ಚ್ ಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ನಿರ್ಧಾರ ಮಾಡಿ ಕರಾವಳಿಯಾದ್ಯಂತ ಸೈನಿಕರ ಜೊತೆ ಪರ್ಯಟಣೆ ಮಾಡುತ್ತಾನೆ. ಇದೇ ಸಮಯದಲ್ಲಿ ಅಂದರೆ 1784 ರಲ್ಲಿಯೇ ಕಿನ್ನಿಗೋಳಿ ಸಮೀಪ ಐಕಳದಲ್ಲಿ ಕಿರೆಂ ಚರ್ಚ್ ಅನ್ನು ಕಟ್ಟಲಾಗುತ್ತದೆ. ಚರ್ಚ್ ಕಟ್ಟುತ್ತಿರೋ ಬಗ್ಗೆ ಟಿಪ್ಪು ಗಮನಕ್ಕೆ ಬಂದು ಚರ್ಚ್ ಸ್ಥಳಕ್ಕೆ ಟಿಪ್ಪು ಸೈನಿಕರ ಜೊತೆ ಬರುತ್ತಾನೆ.
ನೇರವಾಗಿ ಚರ್ಚಿಗೆ ದಾಳಿ ಮಾಡುವ ಎಲ್ಲಾ ಅವಕಾಶಗಳು ಟಿಪ್ಪುವಿನಂತಹ ರಾಜನಿದ್ದರೂ ಆತ ಅದನ್ನು ಮಾಡದೇ ಸ್ಥಳೀಯ ಆಡಳಿತವನ್ನು ನೋಡಿಕೊಳ್ಳುತ್ತಿದ್ದ ಐಕಳಬಾವ, ತಾಳಿಪಾಡಿ ಗುತ್ತು, ಏಳಿಂಜೆ ಗುತ್ತಿನ ಬಂಟ ಮನೆತನದವರನ್ನು ಕರೆಸಿ ಮಾತನಾಡುತ್ತಾನೆ. ಬಂಟ ಮನೆತನಗಳವರು ಚರ್ಚಿನ ಬಗ್ಗೆ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸುವುದಲ್ಲದೆ, ಈ ಚರ್ಚಿಗೆ ನಡೆದುಕೊಳ್ಳುವ ಕ್ರಿಶ್ಚಿಯನ್ನರು ಯಾರೂ ಕೂಡಾ ಬ್ರಿಟೀಷರ ಜೊತೆ ಕೈ ಜೋಡಿಸಿಲ್ಲ ಮತ್ತು ಇವರೂ ನಮ್ಮಂತೆ ಕೃಷಿಕರು ಎಂಬುದನ್ನು ಮನವರಿಕೆ ಮಾಡಿಕೊಡುತ್ತಾರೆ. ತನ್ನ ರಾಜ್ಯದ ಹಿತದೃಷ್ಟಿಯಿಂದ ತನಿಖೆ ನಡೆಸಿದ ಟಿಪ್ಪು, ಆ ಚರ್ಚಿಗೆ ಯಾವ ತೊಂದರೆಯನ್ನೂ ಮಾಡದೇ ಮರಳುತ್ತಾನೆ. ಅದರ ನೆನಪಿಗಾಗಿ ಈಗಲೂ ಪ್ರತೀ ವರ್ಷ ನವೆಂಬರ್ 25 ರಂದು ಈ ಗುತ್ತಿನ ಮನೆತನಗಳಿಗೆ ಬಾಳೆಗೊನೆಯನ್ನು ಇಲ್ಲಿನ ಧರ್ಮಗುರುಗಳು ನೀಡುತ್ತಾ ಬಂದಿದ್ದಾರೆ.
ಟಿಪ್ಪು ಕ್ರಿಶ್ಚಿಯನ್ ವಿರೋಧಿಯಾಗಿರಲಿಲ್ಲ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಜಮಲಾಬಾದ್ ಕೋಟೆ
ಮತ್ತು ಅದರ ಸನಿಹದಲ್ಲಿರುವ ಚರ್ಚ್. 1682 ರಲ್ಲಿ ಹಿಂದೂ ಮರಾಠ ರಾಜ ಸಾಂಭಾಜಿ ಗೋವಾವನ್ನು ಆಕ್ರಮಿಸಿದಾಗ ಕ್ರಿಶ್ಚಿಯನ್ನರು ನಿರಾಶ್ರಿತರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಗಡಾಯ್ ಕಲ್ಲು ಎಂಬಲ್ಲಿ ಆಶ್ರಯ ಪಡೆಯುತ್ತಾರೆ. ಅದೇ ಗಡಾಯಿಕಲ್ ಪ್ರದೇಶದಲ್ಲಿ ಟಿಪ್ಪು ಜಮಲಾಬಾದ್ ಕೋಟೆಯನ್ನು ಕಟ್ಟುತ್ತಾನೆ. ಆ ಕೋಟೆಯ ಸುತ್ತಮುತ್ತ ಹಳ್ಳಿಗಳಲ್ಲಿ ಕ್ರಿಶ್ಚಿಯನ್ನು ಇರುತ್ತಾರೆ. ಟಿಪ್ಪು ಕ್ರಿಶ್ಚಿಯನ್ ವಿರೋಧಿ ಆಗಿದ್ದಿದ್ರೆ ಜಮಲಾಬಾದ್ ಕೋಟೆಯ ಸುತ್ತಾಮುತ್ತ ಕ್ರಿಶ್ಚಿಯನ್ನರು ಯಾಕೆ ವಾಸವಾಗ್ತಿದ್ರು ಎಂಬ ಪ್ರಶ್ನೆ ಬರುತ್ತದೆ.
ಅಲ್ಲೇ ಸಣ್ಣ ಗುಡಿಸಲು ರೀತಿಯಲ್ಲಿ ಚರ್ಚ್ ಕೂಡಾ ನಿರ್ಮಿಸಿ ಪ್ರಾರ್ಥನೆ ನಡೆಸುತ್ತಿರುತ್ತಾರೆ. ಯಾವ ಯುದ್ದವೂ ಕ್ರಿಶ್ಚಿಯನ್ನರ ಮೇಲಾಗಲೀ, ಗುಡಿಸಲಿನ ಚರ್ಚಿನ ಮೇಲಾಗಲೀ ಪರಿಣಾಮ ಬೀರದಂತೆ ಟಿಪ್ಪು ನೋಡಿಕೊಳ್ಳುತ್ತಾನೆ. ಟಿಪ್ಪು 1799 ರಲ್ಲಿ ಮರಣ ಹೊಂದಿದ ಬಳಿಕವೂ ಚರ್ಚ್ ಅಲ್ಲೇ ಇರುತ್ತದೆ. 1885 ರ ವೇಳೆಗೆ ಜಮಲಾಬಾದ್ ಕೋಟೆಯ ಸುತ್ತ ಇದ್ದ ಪ್ರದೇಶದಲ್ಲಿ ಕಾಯಿಲೆ ವ್ಯಾಪಿಸಿದ್ದರಿಂದ ಚರ್ಚ್ ಅನ್ನು ಸ್ವಲ್ಪ ದೂರಕ್ಕೆ ಸ್ಥಳಾಂತರಿಸಲಾಯ್ತು.
1784 ರಿಂದ 1799 ರವರೆಗೆ ಕರಾವಳಿಯಲ್ಲಿದ್ದ ಚರ್ಚ್ ಗಳು ಮೂರ್ನಾಲ್ಕು ಮಾತ್ರ. ಉಳಿದಂತೆ ಹಳ್ಳಿಗಳಲ್ಲಿ ಇದ್ದ ಕ್ರಿಶ್ಚಿಯನ್ನರು ದೊಡ್ಡ ಮನೆಯನ್ನು ಆಯ್ಕೆಮಾಡಿಕೊಂಡು ಸಾಮೂಹಿಕ ಪ್ರಾರ್ಥನೆಗೆ ಒಂದೆಡೆ ಸೇರುತ್ತಿದ್ದರು. ಉದಾಹರಣೆಗೆ ಎಸ್ ಇ ಝಡ್ ವಿರೋಧಿ ಹೋರಾಟಗಾರ ಕಳವಾರಿನ ಗ್ರೆಗೋರಿ ಪತ್ರಾವೋ ಮನೆ.
ನಂತರದ ಚರ್ಚುಗಳಿಗೂ ಟಿಪ್ಪುವಿಗೂ ಸಂಬಂಧವೇ ಇಲ್ಲ. ಕಿನ್ನಿಗೋಳಿ ಚರ್ಚ್ 1804 ರಲ್ಲೂ, ಕುಲಶೇಖರ ಕೋರ್ಡೆಲ್ ಚರ್ಚ್ ಮತ್ತು ಬೋಂದೆಲ್ ಚರ್ಚ್ 1873 ರಲ್ಲೂ, ಬೆಳ್ಮನ್ ಚರ್ಚ್ 1894, ಪಾಲಡ್ಕ ಚರ್ಚ್ 1913, ಬಳ್ಕುಂಜೆ ಚರ್ಚ್ 1915, ನಿಡ್ಡೋಡಿ ಚರ್ಚ್ 1937, ನೀರುಡೆ ಚರ್ಚ್ 1945, ಬೋಳ ಚರ್ಚ್ 1964, ಕಟೀಲು ಚರ್ಚ್ 1971, ಮುಂಡ್ಕೂರು ಚರ್ಚ್ 1998 ರಲ್ಲೂ ಪ್ರಾರಂಭವಾಯ್ತು.
ಇದ್ಯಾವುದೂ ಟಿಪ್ಪು ಕಾಲಮಾನದಲ್ಲಿ ಸ್ಥಾಪನೆಯಾದ ಚರ್ಚುಗಳು ಅಲ್ಲ. ಟಿಪ್ಪು ಕಾಲಮಾನದ ಯಾವ ಚರ್ಚಿನ ಇತಿಹಾಸವೂ ಚರ್ಚು ಕೆಡವಿದ ಕತೆಯನ್ನು ಹೇಳುವುದಿಲ್ಲ. ಬದಲಾಗಿ ಬ್ರಿಟೀಷರ ಕಾರಣಕ್ಕಾಗಿ ಚರ್ಚುಗಳ ಪರಿಶೀಲನೆ ನಡೆಸಿದ್ದ ಮತ್ತು ಮನವರಿಕೆಯಾದ ನಂತರ ರಕ್ಷಣೆ ಮಾಡಿದ್ದ ಎಂದಷ್ಟೇ ಇತಿಹಾಸ ಮತ್ತು ಕ್ರಿಶ್ಚಿಯನ್ ಪ್ರಚಲಿತ ಪವಾಡದ ಕತೆಗಳು ಹೇಳುತ್ತದೆ. ಟಿಪ್ಪು ಚರ್ಚ್ ಗಳನ್ನು ಕೆಡವಿದ್ದ ಎನ್ನುವುದು ಇತಿಹಾಸಕ್ಕೂ, ಚರ್ಚಿನ ಪವಾಡಕ್ಕೂ ಮಾಡುವ ಅಪಚಾರವಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಾವಿನಲ್ಲೂ ಒಂದಾದ ಪ್ರೇಮಿಗಳು: ಪ್ರೇಮಿಯ ಪಕ್ಕದಲ್ಲೇ ಪ್ರೇಯಸಿಯ ಅಂತ್ಯಸಂಸ್ಕಾರ!
ಸುದ್ದಿದಿನ,ಕುಂಬಳೆ: ಪ್ರೀತಿ ಎನ್ನುವುದು ಸಾವಿನ ನಂತರವೂ ಶಾಶ್ವತ ಎಂಬುದಕ್ಕೆ ಕೇರಳದ ಕಾಸರಗೋಡಿನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ನಿಶ್ಚಿತಾರ್ಥವಾಗಿದ್ದ ಯುವಕ ಮೃತಪಟ್ಟ ಬೆನ್ನಲ್ಲೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿಯ ಅಂತ್ಯಸಂಸ್ಕಾರವನ್ನು ಆಕೆಯ ಇಚ್ಛೆಯಂತೆ ಯುವಕನ ಸಮಾಧಿಯ ಪಕ್ಕದಲ್ಲೇ ನೆರವೇರಿಸಲಾಗಿದೆ.
ನಡೆದಿದ್ದೇನು?
ಕಿದೂರು ಕುಂಟಂಗೇರಡ್ಕದ ಪ್ರಫುಲ್ಲ (26) ಮತ್ತು ತಮಿಳುನಾಡು ನಿವಾಸಿಯಾದ ಬ್ಯಾಂಕ್ ನೌಕರ ಮಣಿ ಎಂಬವರಿಗೆ ನಾಲ್ಕು ತಿಂಗಳ ಹಿಂದೆ ಅದ್ಧೂರಿಯಾಗಿ ಮದುವೆ ನಿಶ್ಚಿತಾರ್ಥ ನಡೆದಿತ್ತು. ಇನ್ನೇನು ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಎನ್ನುವಷ್ಟರಲ್ಲಿ, ಒಂದು ತಿಂಗಳ ಹಿಂದೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಮಣಿ ಮೃತಪಟ್ಟಿದ್ದರು.
ಡೆತ್ ನೋಟ್ನಲ್ಲಿತ್ತು ಕೊನೆಯ ಆಸೆ
ತನ್ನ ಭಾವಿ ಪತಿಯ ಅಗಲಿಕೆಯಿಂದ ತೀವ್ರವಾಗಿ ನೊಂದಿದ್ದ ಪ್ರಫುಲ್ಲ, ಕಳೆದ ಭಾನುವಾರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿಗೂ ಮುನ್ನ ಆಕೆ ಬರೆದಿದ್ದ ಡೆತ್ ನೋಟ್ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ. “ನನ್ನ ಮೃತದೇಹವನ್ನು ಮಣಿಯ ಸಮಾಧಿಯ ಸಮೀಪದಲ್ಲೇ ಅಂತ್ಯಸಂಸ್ಕಾರ ಮಾಡಬೇಕು” ಎಂದು ಆಕೆ ತನ್ನ ಕೊನೆಯ ಆಸೆಯನ್ನು ಬರೆದಿಟ್ಟಿದ್ದರು.
ತಮಿಳುನಾಡಿನಲ್ಲಿ ಅಂತ್ಯಕ್ರಿಯೆ
ಯುವತಿಯ ಆಸೆಯಂತೆ ಉಭಯ ಕುಟುಂಬದವರು ಮಾತುಕತೆ ನಡೆಸಿದರು. ಅದರಂತೆ ನಿನ್ನೆ ಕಾಸರಗೋಡಿನಿಂದ ಪ್ರಫುಲ್ಲರ ಮೃತದೇಹವನ್ನು ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ವಳ್ಳಿಯೂರು ಎಂಬಲ್ಲಿಗೆ ಕೊಂಡೊಯ್ಯಲಾಯಿತು. ಅಲ್ಲಿ ಮಣಿಯ ಸಮಾಧಿಯ ಪಕ್ಕದಲ್ಲೇ ಪ್ರಫುಲ್ಲರ ಅಂತ್ಯಸಂಸ್ಕಾರವನ್ನು ನೆರವೇರಿಸುವ ಮೂಲಕ ಪ್ರೇಮಿಗಳಿಬ್ಬರನ್ನು ಸಾವಿನಲ್ಲೂ ಒಂದಾಗಿಸಲಾಯಿತು.
ಅಂತ್ಯಸಂಸ್ಕಾರದ ವೇಳೆ ಎರಡೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದು, ಮರುಗುವ ಪ್ರೇಮಕಥೆಗೆ ಕಂಬನಿಯ ವಿದಾಯ ಹೇಳಿದರು. ಈ ವಿಡಿಯೋ ಮತ್ತು ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ಜೋಡಿಯ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ಡಿಪ್ಲೋಮಾ ಕೋರ್ಸ್; ಪ್ರವೇಶಾತಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ: 2026-27ನೇ ಶೈಕ್ಷಣಿಕ ಸಾಲಿಗೆ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿನ ಮೂರು ವರ್ಷಗಳ ಡಿಪ್ಲೋಮಾ (ಡಿ.ಹೆಚ್.ಟಿ.ಟಿ) ಹಾಗೂ ಎರಡನೇ ವರ್ಷದ ನೇರ ಪ್ರವೇಶಕ್ಕೆ (Lateral Entry) ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ 2026 ರ ಜುಲೈ 01ಕ್ಕೆ ಅನ್ವಯಿಸುವಂತೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 23 ವರ್ಷ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 25 ವರ್ಷ ಮೀರಿರಬಾರದು. ಒಟ್ಟು 39 ಅಭ್ಯರ್ಥಿಗಳನ್ನು (ಪುರುಷ ಮತ್ತು ಮಹಿಳಾ) ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಪ್ರತಿಯೊಬ್ಬ ವಿದ್ಯಾರ್ಥಿಗೆ ಪ್ರತಿ ತಿಂಗಳು ರೂ. 2,500/- ಗಳ ಶಿಷ್ಯವೇತನ ನೀಡಲಾಗುವುದು., ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಇಂಗ್ಲಿಷ್ ಅನ್ನು ಒಂದು ವಿಷಯವಾಗಿ ಅಭ್ಯಸಿಸಿ ಉತ್ತೀರ್ಣರಾಗಿರಬೇಕು.
ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಡಿಪ್ಲೋಮಾ ಕೋರ್ಸ್ಗೆ ನೇರ ಪ್ರವೇಶಕ್ಕೆ https://khtigadag.ac.in/
ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿಗಳಿಗಾಗಿ ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್, ಕಾಲೇಜು ರಸ್ತೆ, ನಿಟ್ಟುವಳ್ಳಿ, ದಾವಣಗೆರೆ ಅಥವಾ ದೂರವಾಣಿ ಸಂಖ್ಯೆ: 08192-262362 ಸಂಪರ್ಕಿಸುವಂತೆ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಿನದ ಸುದ್ದಿ
ದಾವಣಗೆರೆ| ಅಪರಿಚಿತರು ನೀಡಿದ ಟೆಲಿಗ್ರಾಮ್ ಲಿಂಕ್ ಕ್ಲಿಕ್ ಮಾಡಿ 14 ಲಕ್ಷ ಕಳೆದುಕೊಂಡ ಉಪನ್ಯಾಸಕ
ಸುದ್ದಿದಿನ,ದಾವಣಗೆರೆ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಬರುತ್ತದೆ ಎಂಬುದಾಗಿ ಉಪನ್ಯಾಸಕರೊಬ್ಬರಿಗೆ ಆಮಿಷ ತೋರಿಸಿದ ದುಷ್ಕರ್ಮಿಗಳು 14 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ದಾವಣಗೆರೆಯ ಭೂಮಿಕಾ ನಗರದ ನಿವಾಸಿಯಾಗಿರುವ 52 ವರ್ಷದ ಸರ್ಕಾರಿ ಕಾಲೇಜಿನ ಉಪನ್ಯಾಸಕ ಹಣ ಕಳೆದುಕೊಂಡಿದ್ದಾರೆ.
ಉಪನ್ಯಾಸಕರು ಮೊದಲಿಗೆ ಟೆಲಿಗ್ರಾಂ ಮೂಲಕ ಲಿಂಕ್ ಕ್ಲಿಕ್ ಮಾಡಿದ್ದಾರೆ. ಅಲ್ಲಿ ವಂಚಕರು ಹೇಳಿದಂತೆ ಹಲವು ಲಿಂಕ್ಗಳನ್ನು ಕ್ಲಿಕ್ ಮಾಡುತ್ತಾ ಹೋಗಿದ್ದು, ಹಂತಹಂತವಾಗಿ ಹಣ ಕಳೆದುಕೊಂಡಿದ್ದಾರೆ.
ಲಾಭದ ನಿರೀಕ್ಷೆಯಲ್ಲಿದ್ದ ಉಪನ್ಯಾಸಕರಿಗೆ ಲಾಭ ಹೋಗಲಿ, ಅಸಲೂ ಬಾರದ ಕಾರಣ ಅನುಮಾನಗೊಂಡು ತಾನು ಹಣ ಕಳೆದುಕೊಂಡಿರುವುದು ದೃಢಪಟ್ಟಿದೆ. ನಂತರ ಸೈಬರ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ2 days ago2.5 ಕೋಟಿ ಖರೀದಿಯಲ್ಲಿ ಅವ್ಯವಹಾರ ; ಆಯುಕ್ತೆ ಮಂಜುಶ್ರೀ ಸೇರಿ 6 ಅಧಿಕಾರಿಗಳ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ6 days agoದಾವಣಗೆರೆ | ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬೆಂಕಿ ರಹಿತ ಕುಕಿಂಗ್ ಕಾರ್ಯಕ್ರಮ
-
ದಿನದ ಸುದ್ದಿ6 days agoಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣಕ್ಕೆ ಉಚಿತ ಅವಕಾಶ : ಕೂಡಲೇ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ
-
ದಿನದ ಸುದ್ದಿ2 days agoದಾವಣಗೆರೆ | ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸಮಾರೋಪ ಸಮಾರಂಭ
-
ದಿನದ ಸುದ್ದಿ6 days agoಸಂಶೋಧಕರಿಂದ ಪಶ್ಚಿಮ ಘಟ್ಟಗಳಲ್ಲಿ ಮೂರು ಅಣಬೆಯ ಹೊಸ ಶಿಲೀಂಧ್ರ ಜಾತಿಗಳ ಪತ್ತೆ
-
ಕ್ರೀಡೆ6 days agoಹಿರಿಯ ಕ್ರಿಕೆಟ್ ಪಟು ಎನ್ಆರ್ಎಚ್ ರಮೇಶ್ ನಿಧನ
-
ಅಂಕಣ1 day agoಪ್ರಜಾಪ್ರಭುತ್ವ: ಸಮಾನತೆ, ಸಾಮಾಜಿಕ ನ್ಯಾಯ ಮತ್ತು ನೈತಿಕ ಹೊಣೆಗಾರಿಕೆ
-
ದಿನದ ಸುದ್ದಿ1 day agoದಾವಣಗೆರೆ| ಅಪರಿಚಿತರು ನೀಡಿದ ಟೆಲಿಗ್ರಾಮ್ ಲಿಂಕ್ ಕ್ಲಿಕ್ ಮಾಡಿ 14 ಲಕ್ಷ ಕಳೆದುಕೊಂಡ ಉಪನ್ಯಾಸಕ

