ದಿನದ ಸುದ್ದಿ
ಮಂಗಳೂರಿನ ಚರ್ಚ್ ಗಳನ್ನು ದ್ವಂಸ ಮಾಡಿದ್ದನೇ ಟಿಪ್ಪು? ಇತಿಹಾಸ ಏನು ಹೇಳುತ್ತೆ?
- ನವೀನ್ ಸೂರಿಂಜೆ
ಟಿಪ್ಪು ಕೊಡವರ ಹತ್ಯಾಕಾಂಡ ನಡೆಸಿರುವುದು ಸುಳ್ಳು ಎಂದು ಇತಿಹಾಸಕಾರರು ಹೇಳಿದ ನಂತರ ಇದೀಗ ಕರಾವಳಿ ಭಾಗದಲ್ಲಿ ಟಿಪ್ಪು ಕ್ರಿಶ್ಚಿಯನ್ನರ ಮರಣಹೋಮ ನಡೆಸಿದ್ದ ಎಂದು ಸುದ್ದಿ ಹರಿಬಿಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ 27 ಚರ್ಚುಗಳನ್ನು ಕೆಡವಿದ್ದ ಎಂದು ಸುದ್ದಿ ಹಬ್ಬಿಸಲಾಗ್ತಿದೆ. 1750 ರಲ್ಲಿ ಜನಿಸಿದ ಟಿಪ್ಪು ಸುಲ್ತಾನ್ ಕರಾವಳಿಯಲ್ಲಿ 1784 ರಿಂದ 1799 ರವರೆಗೆ ಅಧಿಪತ್ಯವನ್ನು ಸ್ಥಾಪಿಸಿದ್ದ.
ಈ ಸಂಧರ್ಭದಲ್ಲಿ ಕರಾವಳಿಯಲ್ಲಿ ಬ್ರಿಟೀಷರು ಹೆಚ್ಚು ಸಕ್ರೀಯಗೊಂಡಿದ್ದನ್ನು ಅರಿತಿದ್ದ. ಆ ಕಾರಣಕ್ಕಾಗಿ ಬ್ರಿಟೀಷರ ಪ್ರಾರ್ಥನಾ ಮಂದಿರಗಳ ಬಗ್ಗೆ ಒಂದು ರೀತಿಯ ಸಂಶಯದ ಗಮನವನ್ನು ಇಡುವುದು ಆಗಿನ ರಾಜನೀತಿಯಾಗಿತ್ತು. ಆದರೆ 27 ಚರ್ಚುಗಳನ್ನು ಕೆಡವಿದ್ದ ಎಂಬುದು ಸುಳ್ಳು ಇತಿಹಾಸ. ಅದಕ್ಕಾಗಿ 1784 ರಿಂದ ಟಿಪ್ಪು ಮರಣದವರೆಗೆ ಕರಾವಳಿಯಲ್ಲಿ ಇದ್ದ ಚರ್ಚುಗಳು ಯಾವುದು ಮತ್ತು ಅದರ ಇತಿಹಾಸ ಏನು ಹೇಳುತ್ತದೆ ಎಂಬುದನ್ನು ನೋಡಬೇಕು.
ಕರಾವಳಿಯ ಅತೀ ಪುರಾತನ ಚರ್ಚುಗಳಲ್ಲಿ ಮೊದಲನೆಯದಾಗಿ ಕಾಣುವುದು 1680 ರಲ್ಲಿ ಕಟ್ಟಲ್ಪಟ್ಟ ಹಂಪನಕಟ್ಟೆಯ ಮಿಲಾಗ್ರಿಸ್ ಚರ್ಚ್ ಮತ್ತು ಕಲ್ಯಾಣಪುರದ ಮಿಲಾಗ್ರಿಸ್ ಚರ್ಚ್. ಹಂಪನಕಟ್ಟೆಯ ಮಿಲಾಗ್ರಿಸ್ ಚರ್ಚನ್ನು ಟಿಪ್ಪು ಒಡೆದು ಹಾಕಿರೋ ಬಗ್ಗೆ ಎಲ್ಲೂ ಇತಿಹಾಸ ಹೇಳುವುದಿಲ್ಲ. ಟಿಪ್ಪು ಮರಣದ ನಂತರ ಬ್ರಿಟೀಷರು ಮಿಲಾಗ್ರಿಸ್ ಚರ್ಚನ್ನು ಹೆಚ್ಚು ದೊಡ್ಡದಾಗಿ ಕಟ್ಟಿದರು ಎಂದಷ್ಟೇ ಹೇಳುತ್ತದೆ.
ಅದಕ್ಕಿಂತಲೂ ಹೆಚ್ಚು ಕುತೂಹಲಕರವಾಗಿರೋದು ಮಿಲಾಗ್ರಿಸ್ ವ್ಯಾಪ್ತಿಯ ಸಾಲ್ವಡಾರ್ ಪಿಂಟೋ ಎಂಬ ಅಧಿಕಾರಿಯೇ ಟಿಪ್ಪುವಿನ ಕಾರ್ಯದರ್ಶಿ ಆಗಿದ್ದರು. ಟಿಪ್ಪು ಮರಣದ ನಂತರ ಫಾದರ್ ಮೆಂಡೇಝ್ ಮತ್ತು ಟಿಪ್ಪುವಿನ ಮಾಜಿ ಮುನ್ಶಿ(ಕಾರ್ಯದರ್ಶಿ) ಸಾಲ್ವಡಾರ್ ಪಿಂಟೋ ಜೊತೆ ಸೇರಿ 600 ರೂಪಾಯಿಗಳನ್ನು ಸಂಗ್ರಹಿಸಿ 1811 ರಲ್ಲಿ ವಿಶಾಲ ಮಿಲಾಗ್ರಿಸ್ ಚರ್ಚನ್ನು ಪುನರ್ ನಿರ್ಮಾಣ ಮಾಡಿದರು ಎಂದು ಇತಿಹಾಸ ಹೇಳುತ್ತದೆ. ಇಲ್ಲಿ ಮುಖ್ಯವಾದುದು ಟಿಪ್ಪುವಿನ ಕಾರ್ಯದರ್ಶಿ ಒಬ್ಬ ಕ್ರಿಶ್ಚಿಯನ್ ಆಗಿದ್ದರು ಮತ್ತು ಅವರು ಧರ್ಮಾಭಿಮಾನಿಯಾಗಿದ್ದರು ಎನ್ನುವುದು.
ಇನ್ನು ಉಡುಪಿಯ ಕಲ್ಯಾಣಪುರ ಚರ್ಚ್ ಕೂಡಾ 1680 ರಲ್ಲಿ ಪ್ರಾರಂಭವಾದರೂ ಟಿಪ್ಪುನಿಂದ ಕೆಡವಲ್ಪಟ್ಟಿಲ್ಲ. 1784 ರ ಅವಧಿಯಲ್ಲಿ ಟಿಪ್ಪು ಕರಾವಳಿಯ ಬ್ರಿಟೀಷರ ಆಶ್ರಯತಾಣವನ್ನು ಹುಡುಕಿಕೊಂಡು ಚರ್ಚುಗಳಿಗೆ ಬಂದಾಗ ಕಲ್ಯಾಣಪುರ ಚರ್ಚನ್ನು ಕೆಡವಿದ ಬಗ್ಗೆ ದಾಖಲೆಗಳು ಇಲ್ಲ.
ಇತಿಹಾಸ ಬದಿಗಿಟ್ಟು ಪವಾಡವನ್ನು ಗಮನಿಸಿದರೂ ಕಲ್ಯಾಣಪುರ ಮಿಲಾಗ್ರಿಸ್ ಚರ್ಚಿನ ಪವಾಡದ ಕತೆ ಹೀಗೆ ಹೇಳುತ್ತದೆ : ಟಿಪ್ಪು ಸುಲ್ತಾನ್ ಎಂಬ ರಾಜ ಬ್ರಿಟೀಷರನ್ನು ಹುಡುಕಿಕೊಂಡು ಕಲ್ಯಾಣಪುರ ಪವಾಡ ಮಾತೆಯ ಮಿಲಾಗ್ರಿಸ್ ಚರ್ಚಿಗೆ ದಾಳಿ ಮಾಡಲು ಬಂದ. ಆಗ ಎಲ್ಲೋ ಇದ್ದ ಜೇನು ನೊಣಗಳು ಟಿಪ್ಪುವಿನ ಸೈನ್ಯದ ಮೇಲೆ ಮುತ್ತಿಗೆ ಹಾಕಿದವು. ಸೈನಿಕರು ಓಡಿ ನದಿಯಲ್ಲಿ ಮುಳುಗಿದರೂ ಜೇನುನೊಣಗಳು ಬಿಡಲಿಲ್ಲ. ಕೊನೆಗೂ ಕಲ್ಯಾಣಪುರ ಪವಾಡ ಮಾತೆಯ ಚರ್ಚನ್ನು ಕೆಡವಲಾಗಲಿಲ್ಲ. ಇದು ಊರಿಡೀ ಪ್ರತೀತಿಯಾಗಿ ಹಿಂದೂಗಳು ಕೂಡಾ ಈ ಚರ್ಚನ್ನು ಮಿಲಾಗ್ರಿಯಮ್ಮನ ದೇವಸ್ಥಾನ ಎನ್ನಲಾರಂಬಿಸಿದ್ರು ಎಂಬುದು ಜನಪದೀಯ ಕತೆಯಾಗಿದೆ.
ಇದರ ಬಳಿಕ ಅತ್ಯಂತ ಪುರಾತನ ಚರ್ಚುಗಳ ಪೈಕಿ ನಮಗೆ ಕಾಣಸಿಗುವುದು ಮೂಡಬಿದ್ರೆಯ ಹೊಸಬೆಟ್ಟು ಚರ್ಚ್. 1761 ರಲ್ಲಿ ನಿರ್ಮಾಣಗೊಂಡ ಚರ್ಚಿನ ಇತಿಹಾಸವನ್ನು ಓದಿದಾಗ ಟಿಪ್ಪುವಿನ ಉಲ್ಲೇಖಗಳು ಬರುತ್ತದೆ. ಮೂಡಬಿದ್ರೆಯ ಜೈನ ಅರಸನ ವ್ಯಾಪ್ತಿಗೂ ಬರುತ್ತಿದ್ದ ಈ ಚರ್ಚು ಸ್ಥಳೀಯ ಅರಸನ ಕೆಂಗಣ್ಣಿಗೆ ಗುರಿಯಾಗಿತ್ತು. ಟಿಪ್ಪು ಹಲವು ಚರ್ಚುಗಳ ಬಗ್ಗೆ ಅಸಮಾದಾನ ಹೊಂದಿದ್ದರೂ ಈ ಚರ್ಚಿನ ಉಸಾಬರಿಗೆ ಬಂದಿಲ್ಲ ಎಂದು ಚರ್ಚ್ ಇತಿಹಾಸ ಸ್ಪಷ್ಟವಾಗಿ ಹೇಳುತ್ತದೆ.
1784 ಎಂಬುದು ಟಿಪ್ಪು ಇತಿಹಾಸದಲ್ಲಿ ಅತ್ಯಂತ ಪ್ರಮುಖ ಸಂಧರ್ಭ. ಇದೇ ಇಸವಿಯಲ್ಲಿ ಆತ ಬ್ರಿಟೀಷರನ್ನು ಹತ್ತಿಕ್ಕುವುದಕ್ಕಾಗಿ ಚರ್ಚ್ ಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ನಿರ್ಧಾರ ಮಾಡಿ ಕರಾವಳಿಯಾದ್ಯಂತ ಸೈನಿಕರ ಜೊತೆ ಪರ್ಯಟಣೆ ಮಾಡುತ್ತಾನೆ. ಇದೇ ಸಮಯದಲ್ಲಿ ಅಂದರೆ 1784 ರಲ್ಲಿಯೇ ಕಿನ್ನಿಗೋಳಿ ಸಮೀಪ ಐಕಳದಲ್ಲಿ ಕಿರೆಂ ಚರ್ಚ್ ಅನ್ನು ಕಟ್ಟಲಾಗುತ್ತದೆ. ಚರ್ಚ್ ಕಟ್ಟುತ್ತಿರೋ ಬಗ್ಗೆ ಟಿಪ್ಪು ಗಮನಕ್ಕೆ ಬಂದು ಚರ್ಚ್ ಸ್ಥಳಕ್ಕೆ ಟಿಪ್ಪು ಸೈನಿಕರ ಜೊತೆ ಬರುತ್ತಾನೆ.
ನೇರವಾಗಿ ಚರ್ಚಿಗೆ ದಾಳಿ ಮಾಡುವ ಎಲ್ಲಾ ಅವಕಾಶಗಳು ಟಿಪ್ಪುವಿನಂತಹ ರಾಜನಿದ್ದರೂ ಆತ ಅದನ್ನು ಮಾಡದೇ ಸ್ಥಳೀಯ ಆಡಳಿತವನ್ನು ನೋಡಿಕೊಳ್ಳುತ್ತಿದ್ದ ಐಕಳಬಾವ, ತಾಳಿಪಾಡಿ ಗುತ್ತು, ಏಳಿಂಜೆ ಗುತ್ತಿನ ಬಂಟ ಮನೆತನದವರನ್ನು ಕರೆಸಿ ಮಾತನಾಡುತ್ತಾನೆ. ಬಂಟ ಮನೆತನಗಳವರು ಚರ್ಚಿನ ಬಗ್ಗೆ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸುವುದಲ್ಲದೆ, ಈ ಚರ್ಚಿಗೆ ನಡೆದುಕೊಳ್ಳುವ ಕ್ರಿಶ್ಚಿಯನ್ನರು ಯಾರೂ ಕೂಡಾ ಬ್ರಿಟೀಷರ ಜೊತೆ ಕೈ ಜೋಡಿಸಿಲ್ಲ ಮತ್ತು ಇವರೂ ನಮ್ಮಂತೆ ಕೃಷಿಕರು ಎಂಬುದನ್ನು ಮನವರಿಕೆ ಮಾಡಿಕೊಡುತ್ತಾರೆ. ತನ್ನ ರಾಜ್ಯದ ಹಿತದೃಷ್ಟಿಯಿಂದ ತನಿಖೆ ನಡೆಸಿದ ಟಿಪ್ಪು, ಆ ಚರ್ಚಿಗೆ ಯಾವ ತೊಂದರೆಯನ್ನೂ ಮಾಡದೇ ಮರಳುತ್ತಾನೆ. ಅದರ ನೆನಪಿಗಾಗಿ ಈಗಲೂ ಪ್ರತೀ ವರ್ಷ ನವೆಂಬರ್ 25 ರಂದು ಈ ಗುತ್ತಿನ ಮನೆತನಗಳಿಗೆ ಬಾಳೆಗೊನೆಯನ್ನು ಇಲ್ಲಿನ ಧರ್ಮಗುರುಗಳು ನೀಡುತ್ತಾ ಬಂದಿದ್ದಾರೆ.
ಟಿಪ್ಪು ಕ್ರಿಶ್ಚಿಯನ್ ವಿರೋಧಿಯಾಗಿರಲಿಲ್ಲ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಜಮಲಾಬಾದ್ ಕೋಟೆ
ಮತ್ತು ಅದರ ಸನಿಹದಲ್ಲಿರುವ ಚರ್ಚ್. 1682 ರಲ್ಲಿ ಹಿಂದೂ ಮರಾಠ ರಾಜ ಸಾಂಭಾಜಿ ಗೋವಾವನ್ನು ಆಕ್ರಮಿಸಿದಾಗ ಕ್ರಿಶ್ಚಿಯನ್ನರು ನಿರಾಶ್ರಿತರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಗಡಾಯ್ ಕಲ್ಲು ಎಂಬಲ್ಲಿ ಆಶ್ರಯ ಪಡೆಯುತ್ತಾರೆ. ಅದೇ ಗಡಾಯಿಕಲ್ ಪ್ರದೇಶದಲ್ಲಿ ಟಿಪ್ಪು ಜಮಲಾಬಾದ್ ಕೋಟೆಯನ್ನು ಕಟ್ಟುತ್ತಾನೆ. ಆ ಕೋಟೆಯ ಸುತ್ತಮುತ್ತ ಹಳ್ಳಿಗಳಲ್ಲಿ ಕ್ರಿಶ್ಚಿಯನ್ನು ಇರುತ್ತಾರೆ. ಟಿಪ್ಪು ಕ್ರಿಶ್ಚಿಯನ್ ವಿರೋಧಿ ಆಗಿದ್ದಿದ್ರೆ ಜಮಲಾಬಾದ್ ಕೋಟೆಯ ಸುತ್ತಾಮುತ್ತ ಕ್ರಿಶ್ಚಿಯನ್ನರು ಯಾಕೆ ವಾಸವಾಗ್ತಿದ್ರು ಎಂಬ ಪ್ರಶ್ನೆ ಬರುತ್ತದೆ.
ಅಲ್ಲೇ ಸಣ್ಣ ಗುಡಿಸಲು ರೀತಿಯಲ್ಲಿ ಚರ್ಚ್ ಕೂಡಾ ನಿರ್ಮಿಸಿ ಪ್ರಾರ್ಥನೆ ನಡೆಸುತ್ತಿರುತ್ತಾರೆ. ಯಾವ ಯುದ್ದವೂ ಕ್ರಿಶ್ಚಿಯನ್ನರ ಮೇಲಾಗಲೀ, ಗುಡಿಸಲಿನ ಚರ್ಚಿನ ಮೇಲಾಗಲೀ ಪರಿಣಾಮ ಬೀರದಂತೆ ಟಿಪ್ಪು ನೋಡಿಕೊಳ್ಳುತ್ತಾನೆ. ಟಿಪ್ಪು 1799 ರಲ್ಲಿ ಮರಣ ಹೊಂದಿದ ಬಳಿಕವೂ ಚರ್ಚ್ ಅಲ್ಲೇ ಇರುತ್ತದೆ. 1885 ರ ವೇಳೆಗೆ ಜಮಲಾಬಾದ್ ಕೋಟೆಯ ಸುತ್ತ ಇದ್ದ ಪ್ರದೇಶದಲ್ಲಿ ಕಾಯಿಲೆ ವ್ಯಾಪಿಸಿದ್ದರಿಂದ ಚರ್ಚ್ ಅನ್ನು ಸ್ವಲ್ಪ ದೂರಕ್ಕೆ ಸ್ಥಳಾಂತರಿಸಲಾಯ್ತು.
1784 ರಿಂದ 1799 ರವರೆಗೆ ಕರಾವಳಿಯಲ್ಲಿದ್ದ ಚರ್ಚ್ ಗಳು ಮೂರ್ನಾಲ್ಕು ಮಾತ್ರ. ಉಳಿದಂತೆ ಹಳ್ಳಿಗಳಲ್ಲಿ ಇದ್ದ ಕ್ರಿಶ್ಚಿಯನ್ನರು ದೊಡ್ಡ ಮನೆಯನ್ನು ಆಯ್ಕೆಮಾಡಿಕೊಂಡು ಸಾಮೂಹಿಕ ಪ್ರಾರ್ಥನೆಗೆ ಒಂದೆಡೆ ಸೇರುತ್ತಿದ್ದರು. ಉದಾಹರಣೆಗೆ ಎಸ್ ಇ ಝಡ್ ವಿರೋಧಿ ಹೋರಾಟಗಾರ ಕಳವಾರಿನ ಗ್ರೆಗೋರಿ ಪತ್ರಾವೋ ಮನೆ.
ನಂತರದ ಚರ್ಚುಗಳಿಗೂ ಟಿಪ್ಪುವಿಗೂ ಸಂಬಂಧವೇ ಇಲ್ಲ. ಕಿನ್ನಿಗೋಳಿ ಚರ್ಚ್ 1804 ರಲ್ಲೂ, ಕುಲಶೇಖರ ಕೋರ್ಡೆಲ್ ಚರ್ಚ್ ಮತ್ತು ಬೋಂದೆಲ್ ಚರ್ಚ್ 1873 ರಲ್ಲೂ, ಬೆಳ್ಮನ್ ಚರ್ಚ್ 1894, ಪಾಲಡ್ಕ ಚರ್ಚ್ 1913, ಬಳ್ಕುಂಜೆ ಚರ್ಚ್ 1915, ನಿಡ್ಡೋಡಿ ಚರ್ಚ್ 1937, ನೀರುಡೆ ಚರ್ಚ್ 1945, ಬೋಳ ಚರ್ಚ್ 1964, ಕಟೀಲು ಚರ್ಚ್ 1971, ಮುಂಡ್ಕೂರು ಚರ್ಚ್ 1998 ರಲ್ಲೂ ಪ್ರಾರಂಭವಾಯ್ತು.
ಇದ್ಯಾವುದೂ ಟಿಪ್ಪು ಕಾಲಮಾನದಲ್ಲಿ ಸ್ಥಾಪನೆಯಾದ ಚರ್ಚುಗಳು ಅಲ್ಲ. ಟಿಪ್ಪು ಕಾಲಮಾನದ ಯಾವ ಚರ್ಚಿನ ಇತಿಹಾಸವೂ ಚರ್ಚು ಕೆಡವಿದ ಕತೆಯನ್ನು ಹೇಳುವುದಿಲ್ಲ. ಬದಲಾಗಿ ಬ್ರಿಟೀಷರ ಕಾರಣಕ್ಕಾಗಿ ಚರ್ಚುಗಳ ಪರಿಶೀಲನೆ ನಡೆಸಿದ್ದ ಮತ್ತು ಮನವರಿಕೆಯಾದ ನಂತರ ರಕ್ಷಣೆ ಮಾಡಿದ್ದ ಎಂದಷ್ಟೇ ಇತಿಹಾಸ ಮತ್ತು ಕ್ರಿಶ್ಚಿಯನ್ ಪ್ರಚಲಿತ ಪವಾಡದ ಕತೆಗಳು ಹೇಳುತ್ತದೆ. ಟಿಪ್ಪು ಚರ್ಚ್ ಗಳನ್ನು ಕೆಡವಿದ್ದ ಎನ್ನುವುದು ಇತಿಹಾಸಕ್ಕೂ, ಚರ್ಚಿನ ಪವಾಡಕ್ಕೂ ಮಾಡುವ ಅಪಚಾರವಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಆಯುರ್ವೇದ ಆರೋಗ್ಯಕರ ಜೀವನ ಶೈಲಿ
ಸುದ್ದಿದಿನ,ದಾವಣಗೆರೆ:ಭಾರತದ ವೈದ್ಯಕೀಯ ಪರಂಪರೆಯು ಅತ್ಯಂತ ಪ್ರಾಚೀನ ಹಾಗೂ ಸಮೃದ್ಧವಾದುದಾಗಿದೆ. ಆಯುರ್ವೇದವು ಕೇವಲ ರೋಗಗಳಿಗೆ ಚಿಕಿತ್ಸೆ ನೀಡುವ ವಿಜ್ಞಾನವಲ್ಲ, ಅದೊಂದು ಆರೋಗ್ಯಕರ ಜೀವನ ಶೈಲಿಯಾಗಿದೆ ಎಂದು ಘನವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು.
ಅವರು ಶನಿವಾರ ತಪೋವನ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಸಂಸ್ಥೆಯು ಏರ್ಪಡಿಸಿದ್ದ ದ್ವಿತೀಯ ಘಟಿಕೋತ್ಸವ ಸಮಾರಂಭವನ್ನು ಉದ್ಪಾಟಿಸಿ ಮಾತನಾಡಿದರು.
ಈಗಿನ ದಿನಮಾನಗಳಲ್ಲಿ ಇಡೀ ಜಗತ್ತು ಮಾನಸಿಕ ಒತ್ತಡ ಹಾಗೂ ಪರಿಸರ ಸವಾಲುಗಳನ್ನು ಎದುರಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಆಯುರ್ವೇದ, ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಪದ್ಧತಿಗಳ ಪ್ರಸ್ತುತತೆ ಹಾಗೂ ಮಹತ್ವ ಮತ್ತಷ್ಟು ಹೆಚ್ಚಾಗಿದೆ, ವೈದ್ಯರು ತಮ್ಮ ವೃತ್ತಿ ಜೀವನದಲ್ಲಿ ಮಾನವೀಯ ಮೌಲ್ಯಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ತಿಳಿಸಿದರು.
ಭಾರತದ ವೈದ್ಯಕೀಯ ಪರಂಪರೆಯು ಅತ್ಯಂತ ಪ್ರಾಚೀನ ಹಾಗೂ ಸಮೃದ್ಧವಾದುದಾಗಿದೆ. ಆಯುರ್ವೇದವು ಕೇವಲ ರೋಗಗಳಿಗೆ ಚಿಕಿತ್ಸೆ ನೀಡುವ ವಿಜ್ಞಾನವಲ್ಲ, ಅದೊಂದು ಆರೋಗ್ಯಕರ ಜೀವನ ಶೈಲಿಯಾಗಿದೆ. ಜಗತ್ತು ಮಾನಸಿಕ ಒತ್ತಡ ಹಾಗೂ ಪರಿಸರ ಸವಾಲುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಆಯುರ್ವೇದ, ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಪದ್ಧತಿಗಳ ಪ್ರಸ್ತುತತೆ ಹಾಗೂ ಮಹತ್ವ ಮತ್ತಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.
ಆಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI) ಮತ್ತು ಡಿಜಿಟಲ್ ಆರೋಗ್ಯ ಸೇವೆಗಳು ಇಂದಿನ ವೈದ್ಯಕೀಯ ಕ್ಷೇತ್ರದ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಾಯಿಸುತ್ತಿವೆ. ಇಂತಹ ತಾಂತ್ರಿಕ ಕ್ರಾಂತಿಯ ಯುಗದಲ್ಲಿ ಪದವಿ ಪಡೆದು ಹೊರಬರುತ್ತಿರುವ ನೂತನ ವೈದ್ಯರು ಕೇವಲ ಸಾಂಪ್ರದಾಯಿಕ ವೈದ್ಯಕೀಯ ಜ್ಞಾನಕ್ಕೆ ಸೀಮಿತವಾಗದೆ, ಆಧುನಿಕ ವಿಜ್ಞಾನದ ನೂತನ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಉಭಯ ಕ್ಷೇತ್ರಗಳ ನಡುವೆ ಬಲವಾದ ಸೇತುವೆಯಾಗಿ ಕೆಲಸ ಮಾಡಬೇಕಾದ ತುರ್ತು ಅಗತ್ಯವಿದೆ ಎಂದರು.
ಕೃತಕ ಬುದ್ಧಿಮತ್ತೆಯು ರೋಗನಿರ್ಣಯವನ್ನು ಹೆಚ್ಚು ನಿಖರ ಹಾಗೂ ವೇಗವಾಗಿಸಲು ನೆರವಾದರೆ, ಡಿಜಿಟಲ್ ಆರೋಗ್ಯ ಸೇವೆಗಳು ದೂರದ ಊರುಗಳಿಗೂ ಚಿಕಿತ್ಸೆಯನ್ನು ತಲುಪಿಸಲು ಸಹಕಾರಿಯಾಗಿವೆ. ಆದ್ದರಿಂದ, ಹೊಸ ತಲೆಮಾರಿನ ವೈದ್ಯರು ಕೇವಲ ದಿನನಿತ್ಯದ ಕ್ಲಿನಿಕ್ ಅಥವಾ ಆಸ್ಪತ್ರೆಯ ಚಿಕಿತ್ಸೆಗೆ ಸೀಮಿತವಾಗದೆ, ತಂತ್ರಜ್ಞಾನದ ದತ್ತಾಂಶಗಳನ್ನು ಬಳಸಿಕೊಂಡು ಹೊಸ ರೋಗಗಳಿಗೆ ಪರಿಹಾರ ಕಂಡುಕೊಳ್ಳುವ ಉತ್ತಮ ಸಂಶೋಧಕರಾಗಬೇಕು. ಇದರೊಂದಿಗೆ, ಸಮಾಜದಲ್ಲಿ ತಂತ್ರಜ್ಞಾನ ಮತ್ತು ಆರೋಗ್ಯದ ಕುರಿತು ಇರುವ ತಪ್ಪು ಕಲ್ಪನೆಗಳನ್ನು ದೂರಾಗಿಸಿ, ಮಾನವೀಯ ಕಾಳಜಿಯೊಂದಿಗೆ ಜನರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ನೈಜ ಮಾರ್ಗದರ್ಶಕರಾಗಿ ಹೊರಹೊಮ್ಮಬೇಕಿದೆ ಎಂದು ತಿಳಿಸಿದರು.
ವೈದ್ಯಕೀಯ ಸೇವೆಯು ಅತ್ಯಂತ ಪವಿತ್ರವಾದ ಮಾನವೀಯ ಸೇವೆಯಾಗಿದೆ. ರೋಗಿಗಳಿಗೆ ಔಷಧಿಗಿಂತ ಮುಂಚಿತವಾಗಿ ವೈದ್ಯರ ಪ್ರೀತಿಯ ನುಡಿಗಳು ಹಾಗೂ ಸಕಾರಾತ್ಮಕ ನಡವಳಿಕೆಯ ಅಗತ್ಯವಿರುತ್ತದೆ. ಆದ್ದರಿಂದ ವೈದ್ಯರು ತಮ್ಮ ವೃತ್ತಿ ಜೀವನದಲ್ಲಿ ಮಾನವೀಯ ಮೌಲ್ಯಗಳಿಗೆ ಮೊದಲ ಆದ್ಯತೆ ನೀಡಬೇಕು. ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯವು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಗುಜರಾತ್ನ ಜಾಮ್ನಗರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಗ್ಲೋಬಲ್ ಟ್ರೆಡಿಷನಲ್ ಮೆಡಿಸಿನ್ ಸೆಂಟರ್’ ಸ್ಥಾಪಿಸುತ್ತಿದೆ ಎಂದು ತಿಳಿಸಿದರು.
ರಾಜ್ಯಸಭಾ ಸದಸ್ಯರಾದ ಶ್ರೀ ನಾರಾಯಣಸಾ ಭಾಂಡಗೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾಜಿ ಡೀನ್ ಡಾ: ಶ್ರೀನಿವಾಸ್ ಬನ್ನಿಗೊಳ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಎಸ್.ವಿ.ಹಲಸೆ, ತಪೋವನ ಸಂಸ್ಥೆಯ ಅಧ್ಯಕ್ಷ ಡಾ. ಶಶಿಕುಮಾರ್ ವಿ.ಎಂ, ಆಯುರ್ವೇದ ಕಾಲೇಜಿನ ಪ್ರಾಚಾರ್ಯರಾದ ಡಾ. ಅಶ್ವಿನಿ ಕೆ.ಆರ್., ಡಾ.ಸುಮನ ಭಟ್ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
ಸುದ್ದಿದಿನ,ದಾವಣಗೆರೆ: ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಜೂನ್ 15 ಮತ್ತು 16 ರಂದು ಆಯೋಜಿಸಲಾಗಿದೆ.
ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ವಸತಿ ಯೋಜನೆಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ವಸತಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಜೂನ್ 12 ಕೊನೆಯ ದಿನವಾಗಿರುತ್ತದೆ.
ಈ ಯೋಜನೆಯಡಿ ಸೌಲಭ್ಯ ಒದಗಿಸಲು ನಿಗಧಿತ ಅರ್ಜಿ ನಮೂನೆಯಲ್ಲಿ ಅವಶ್ಯಕ ದಾಖಲಾತಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಗ್ರೇಡ್-1ರವರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಚನ್ನಗಿರಿ ಕಚೇರಿಯನ್ನು ಸಂಪರ್ಕಿಸಬಹುದೆಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


