Connect with us

ಬಹಿರಂಗ

ಸಾಮಾಜಿಕ ಪ್ರಜ್ಞೆಯೂ ಸಾಂಸ್ಕೃತಿಕ ಭೂಮಿಕೆಗಳೂ

Published

on


ಬೌದ್ಧಿಕ ಆಲೋಚನಾಕ್ರಮವನ್ನು ಮೊಳಕೆಯಲ್ಲೇ ಚಿವುಟುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ.


  • ನಾ ದಿವಾಕರ

ಳುವ ವರ್ಗಗಳು ಸದಾ ಸಮಾಜದಲ್ಲಿನ ಪ್ರಬಲ ವರ್ಗಗಳ ಭಾಷೆಯಲ್ಲೇ ಮಾತನಾಡಲಿಚ್ಚಿಸುತ್ತದೆ. ಪ್ರಜಾಪ್ರಭುತ್ವದಲ್ಲೂ ಸಹ ಸಾಂವಿಧಾನಿಕ ಮಾರ್ಗಗಳ ಮೂಲಕವೇ ಪ್ರಬಲ ವರ್ಗಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಪ್ರಾಬಲ್ಯ ಸಾಧಿಸುವ ಸಾಧ್ಯತೆಗಳಿರುವುದರಿಂದ ಆಡಳಿತ ವ್ಯವಸ್ಥೆಯ ಎಲ್ಲ ಕವಲುಗಳಲ್ಲೂ ಇದೇ ವರ್ಗಗಳ ಅಭಿಪ್ರಾಯ, ಪ್ರತಿಪಾದನೆ ಮತ್ತು ತಾತ್ವಿಕ ನೆಲೆಗಳು ತಮ್ಮ ಪಾರಮ್ಯ ಕಂಡುಕೊಳ್ಳುತ್ತವೆ.

ವರ್ತಮಾನ ಭಾರತದ ಸಂದರ್ಭದಲ್ಲಿ ಈ ವರ್ಗಗಳನ್ನು ನಾವು ಮೂರು ಮಜಲುಗಳಲ್ಲಿ ಗುರುತಿಸಬಹುದು. ಮೊದಲನೆಯದು ಊಳಿಗಮಾನ್ಯ ವ್ಯವಸ್ಥೆಯ ಪಳೆಯುಳಿಕೆಗಳಾಗಿಯೇ ಈಗ ಕಾರ್ಪೋರೇಟ್‌ ಮಾರುಕಟ್ಟೆಯ ವಾರಸುದಾರರಾಗಿ ರೂಪಾಂತರಗೊಂಡಿರುವ ಔದ್ಯಮಿಕ ವರ್ಗ. ಎರಡನೆಯದು ಪ್ರಜಾಪ್ರಭುತ್ವದ ನೆರಳಿನಲ್ಲೇ, ಸಾಂವಿಧಾನಿಕ ಮಾರ್ಗದಲ್ಲೇ ಜನಪ್ರಾತಿನಿಧ್ಯದ ವಾರಸುದಾರಿಕೆ ವಹಿಸಿಕೊಂಡಿರುವ ಅಧಿಕಾರ ರಾಜಕಾರಣದ ಉತ್ತರಾಧಿಕಾರಿಗಳು.

ಮೂರನೆಯದು ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಆಧುನಿಕತೆಯ ಕವಚದೊಂದಿಗೆ ಯಥಾವತ್ತಾಗಿ ಕಾಪಾಡಿಕೊಂಡು ಬಂದಿರುವ ಸಾಂಸ್ಕೃತಿಕ ಆಧಿಪತ್ಯದ ವಾರಸುದಾರರು. ಈ ಮೂರೂ ವರ್ಗಗಳನ್ನು ಚುನಾವಣಾ ರಾಜಕಾರಣದ ಅಂಗಳದಲ್ಲಿ ಪ್ರತ್ಯೇಕಿಸಬಹುದಾದರೂ, ಪ್ರಭುತ್ವದ ಆಡಳಿತ ನೀತಿಗಳನ್ನು ರೂಪಿಸುವ ಸಂದರ್ಭದಲ್ಲಿ ಏಕಾಭಿಪ್ರಾಯ ಹೊಂದಿರುವ ಒಂದು ಗುಂಪಾಗಿ ಕಾಣಬಹುದು.

ಸಾಮಾಜಿಕವಾಗಿ ಭಾರತ ತನ್ನ ಸಾಂವಿಧಾನಿಕ ಮೌಲ್ಯಗಳಿಗನುಗುಣವಾಗಿ ಎಷ್ಟೇ ಸಮಾನತೆಯ ಹಾದಿಯಲ್ಲಿ ಸಾಗುತ್ತಿದ್ದರೂ, ಪ್ರಬಲ ಜಾತಿ ಸಮುದಾಯಗಳು ಗ್ರಾಮದಿಂದ ದೆಹಲಿಯವರೆಗೆ ತಮ್ಮ ಆಧಿಪತ್ಯವನ್ನು ಸಾಧಿಸಿವೆ. ಸಮತಲ ನೆಲೆಯಲ್ಲಿ ಕಾಣಬಹುದಾದ ಸಮಾನತೆಯ ಹಾದಿಗಳು ಲಂಬ ನೆಲೆಯಲ್ಲಿ ಸಮತೋಲನವನ್ನು ಕಳೆದುಕೊಳ್ಳುವುದನ್ನೂ ಗಮನಿಸುತ್ತಿದ್ದೇವೆ. ಹಾಗಾಗಿಯೇ ಮೀಸಲಾತಿಯ ಫಲಾನುಭವಿಗಳೂ ಕೆಲವೊಮ್ಮೆ ಲಂಬನೆಲೆಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ.

ಊಳಿಗಮಾನ್ಯ ಧೋರಣೆ ಮತ್ತು ಪಿತೃಪ್ರಧಾನ ಮನಸ್ಥಿತಿ ಇಂದಿಗೂ ಜೀವಂತವಾಗಿರುವ ಭಾರತೀಯ ಸಮಾಜದಲ್ಲಿ ಈ ಮೇಲರಿಮೆಯ ಅಹಮಿಕೆಗಳು ಮತ್ತು ಶ್ರೇಷ್ಠತೆಯ ಜೀವಂತಿಕೆಯೇ ಇಲ್ಲಿನ ಕಾರ್ಪೋರೇಟ್‌ ಮಾರುಕಟ್ಟೆ ವ್ಯವಸ್ಥೆಯ ಬಂಡವಾಳಶಾಹಿ ಅಭಿವೃದ್ಧಿ ಮಾರ್ಗಗಳನ್ನು ಇಂದಿಗೂ ರಕ್ಷಿಸುತ್ತಿವೆ. ಸಾಮಾಜಿಕ ಸಮಾನತೆಯೊಂದಿಗೆ ಆರ್ಥಿಕ ಸಮಾನತೆಯನ್ನೂ ಸಾಧಿಸದಿದ್ದರೆ ಪ್ರಜಾಪ್ರಭುತ್ವ ಪರಿಪೂರ್ಣವಾಗುವುದಿಲ್ಲ ಎಂಬ ಅಂಬೇಡ್ಕರ್‌ ಅವರ ಮಾತುಗಳನ್ನು ಇಲ್ಲಿ ಗಮನಿಸಬೇಕಾಗುತ್ತದೆ.

ಬಂಡವಾಳಶಾಹಿ ಆರ್ಥಿಕತೆಯನ್ನೇ ಪೋಷಿಸಿಕೊಂಡು ಬಂದಿರುವ ಭಾರತದ ಆಳುವ ವರ್ಗಗಳು, ಪಕ್ಷಾತೀತವಾಗಿ ಈ ತರತಮಗಳನ್ನೂ ಕಾಪಾಡಿಕೊಂಡು ಬಂದಿವೆ. ಭಾರತದ ಮೇಲ್ಪದರದ ಶೇ 10ರಷ್ಟು ಜನರ ಬಳಿ ದೇಶದ ಶೇ 77ರಷ್ಟು ಸಂಪತ್ತು ಕ್ರೋಢೀಕೃತವಾಗಿದ್ದರೆ, ಶೇ 57ರಷ್ಟು ರಾಷ್ಟ್ರೀಯ ಆದಾಯದ ಪಾಲನ್ನು ಹೊಂದಿದೆ. ಶೇ 1ರಷ್ಟು ಜನರ ಬಳಿ ಶೇ 22ರಷ್ಟು ರಾಷ್ಟ್ರೀಯ ಆದಾಯ ಶೇಖರಣೆಯಾಗಿದೆ. 2017ರ ನಂತರ ಉತ್ಪಾದನೆಯಾದ ಶೇ 73ರಷ್ಟು ರಾಷ್ಟ್ರೀಯ ಸಂಪತ್ತು ಮೇಲ್ಪದರದ ಶೇ 1ರಷ್ಟು ಜನರ ಪಾಲಾಗಿದೆ.

ಭಾರತ ಜಾಗತಿಕ ಬಂಡವಾಳ ಮಾರುಕಟ್ಟೆಯಲ್ಲಿ ಯಾವ ಸ್ಥಾನವನ್ನು ಗಳಿಸಿದರೂ, ತಳಮಟ್ಟದ ವಾಸ್ತವ ಸನ್ನಿವೇಶವನ್ನು ಗಮನಿಸಿದಾಗ ಅನೌಪಚಾರಿಕ ಕ್ಷೇತ್ರವೇ ಅತಿ ಹೆಚ್ಚು ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತಿರುವುದು ಕಂಡುಬರುತ್ತದೆ. ಎನ್‌ಎಸ್‌ಎಸ್‌ಒ ಬಿಡುಗಡೆ ಮಾಡಿರುವ ಇತ್ತೀಚಿನ ಅಧಿಕೃತ ವರದಿಯ ಪ್ರಕಾರ ಭಾರತದ ಕಾರ್ಮಿಕರಲ್ಲಿ ಶೇ 93ರಷ್ಟು ಅನೌಪಚಾರಿಕ ವಲಯದಲ್ಲಿದ್ದಾರೆ.

ಕೋವಿದ್‌ ಲಾಕ್‌ಡೌನ್‌ ಸಂದರ್ಭದಲ್ಲಿ ತೀವ್ರ ಆಘಾತಕ್ಕೊಳಗಾದ ಈ ವಲಯ ನಂತರ ಚೇತರಿಸಿಕೊಂಡಿದ್ದರೂ, ಮುಂಚಿನ ಸ್ಥಿತಿಗೆ ತಲುಪಲು ಸಾಧ್ಯವಾಗಿಲ್ಲ. 2021ರ ಸಮೀಕ್ಷೆಯ ಪ್ರಕಾರ ದೇಶದಲ್ಲಿರುವ ಒಟ್ಟು 6.36 ಕೋಟಿ ಉದ್ಯಮಗಳ ಪೈಕಿ ಶೇ 99.7ರಷ್ಟು ಉದ್ದಿಮೆಗಳು ಅಸಂಘಟಿತ ಕ್ಷೇತ್ರದಲ್ಲಿದೆ.

ನೋಂದಣಿಯಾಗಿರುವ ಔಪಚಾರಿಕ ಕ್ಷೇತ್ರದ ಉದ್ದಿಮೆಗಳ ಸಂಖ್ಯೆ ಕೇವಲ 1 ಲಕ್ಷ 70 ಸಾವಿರ ಅಥವಾ ಶೇ 0.3ರಷ್ಟಿದೆ. ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದಿರುವ ಶ್ರಮಿಕರ ನೆರವಿಗೆ ಸೂಕ್ತ ಯೋಜನೆಗಳನ್ನು ರೂಪಿಸುವ ಸಲುವಾಗಿ ರಚಿಸಿರುವ ಇ-ಶ್ರಮ್‌ ಪೋರ್ಟಲ್‌ನಲ್ಲಿ ಅನೌಪಚಾರಿಕ ಕ್ಷೇತ್ರದ ಎಲ್ಲ ದುಡಿಮೆಗಾರರೂ ನೋಂದಣಿ ಮಾಡಿಸಬೇಕಿದೆ. ನಿಖರವಾಗಿ ಈ ವಲಯದಲ್ಲಿರುವ ಕಾರ್ಮಿಕರನ್ನು ಗುರುತಿಸುವುದೇ ಸಾಧ್ಯವಾಗದೆ ಇರುವುದರಿಂದ ನೋಂದಾಯಿತ 27.69 ಕೋಟಿ ಕಾರ್ಮಿಕರ ಪೈಕಿ ಶೇ 94ರಷ್ಟು ಕಾರ್ಮಿಕರ ಮಾಸಿಕ ಆದಾಯ 10 ಸಾವಿರ ರೂಗಳಿಗಿಂತಲೂ ಕಡಿಮೆ ಇದೆ.

ನೋಂದಾಯಿತವಾಗಿರುವ 27.69 ಕೋಟಿ ಕಾರ್ಮಿಕರ ಪೈಕಿ ಶೇ 74ರಷ್ಟು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಕಾರ್ಮಿಕರಿದ್ದಾರೆ. ಶೇ 45.32 ಒಬಿಸಿ, ಶೇ 20.95 ಪರಿಶಿಷ್ಟ ಜಾತಿ ಮತ್ತು ಶೇ 8.17ರಷ್ಟು ಪರಿಶಿಷ್ಟ ಪಂಗಡಗಳ ಕಾರ್ಮಿಕರಿದ್ದಾರೆ. ಅನೌಪಚಾರಿಕ ಕ್ಷೇತ್ರದಲ್ಲಿ ಶೇ 94.11ರಷ್ಟು ಕಾರ್ಮಿಕರ ಮಾಸಿಕ ಆದಾಯ 10 ಸಾವಿರ ರೂಗಳಿಗಿಂತಲೂ ಕಡಿಮೆ ಇದೆ. ಶೇ 4.36ರಷ್ಟು ಕಾರ್ಮಿಕರ ಮಾಸಿಕ ಆದಾಯ 10 ರಿಂದ 15 ಸಾವಿರ ರೂಗಳಷ್ಟಿದೆ.

ದೇಶದಲ್ಲಿ ಒಟ್ಟು 38 ಕೋಟಿ ಅನೌಪಚಾರಿಕ ವಲಯದ ಕಾರ್ಮಿಕರಿರುವುದಾಗಿ ಅಂದಾಜು ಮಾಡಲಾಗಿದ್ದು, ಈ ದತ್ತಾಂಶಗಳನ್ನು ಪರಿಶೀಲಿಸಿದರೆ ದೇಶದ ಆರ್ಥಿಕತೆಯಲ್ಲಿ ಅಸಮಾನತೆ ಢಾಳಾಗಿ ಕಾಣುತ್ತದೆ. ಈ ಕಾರ್ಮಿಕ ಕುಟುಂಬಗಳಿಗೆ ಸರ್ಕಾರದ ಕಲ್ಯಾಣ ಯೋಜನೆಗಳನ್ನು ತಲುಪಿಸುವುದು ಇ-ಶ್ರಮ್‌ ಪೋರ್ಟಲ್‌ನ ಸ್ಥಾಪಿತ ಉದ್ದೇಶವಾಗಿದೆ.

ಈ ಸಮೀಕ್ಷೆಯ ಅನುಸಾರ ನೋಂದಾಯಿತ ಶೇ 61.72ರಷ್ಟು ಕಾರ್ಮಿಕರ ವಯಸ್ಸು 18 ರಿಂದ 40 ವರ್ಷಗಳಷ್ಟಿದೆ. ಶೇ 22.12ರಷ್ಟು ಕಾರ್ಮಿಕರು 40 ರಿಂದ 40 ವಯೋಮಾನದವರಾಗಿದ್ದಾರೆ. ಶೇ 2.98ರಷ್ಟು ಕಾರ್ಮಿಕರ ವಯೋಮಾನ 16 ರಿಂದ 18 ವರ್ಷಗಳಾಗಿವೆ. ನೋಂದಾಯಿತ ಮಹಿಳಾ ಕಾರ್ಮಿಕರ ಸಂಖ್ಯೆ ಶೇ 52.18ರಷ್ಟಿದೆ. ಕೃಷಿ ಕ್ಷೇತ್ರವನ್ನು ಅವಲಂಬಿಸಿದ ಕಾರ್ಮಿಕರ ಸಂಖ್ಯೆಯೇ ಶೇ 52.11ರಷ್ಟಿದೆ. ಅಂದರೆ ಅರ್ಧಕ್ಕಿಂತಲೂ ಹೆಚ್ಚಿನ ಅಸಂಘಟಿತ ಕಾರ್ಮಿಕರು ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳನ್ನೇ ಅವಲಂಬಿಸಿರುವುದು ಭಾರತೀಯ ಆರ್ಥಿಕತೆಯ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ.

ಈ ಅಸಮಾನತೆಗಳು ಢಾಳಾಗಿ ಕಾಣುತ್ತಿರುವಂತೆಯೇ ದೇಶದ ಅನೌಪಚಾರಿಕ ವಲಯದ ಲಕ್ಷಾಂತರ ದುಡಿಮೆಯ ಕೈಗಳು ಬೀದಿಪಾಲಾಗುತ್ತಿವೆ. ಓಲಾ, ಊಬರ್‌, ಜಮೋಟೋ, ಸ್ವಿಗಿ ಮುಂತಾದ ಆದಾಯ ಮಾರ್ಗಗಳಲ್ಲಿ ಎದುರಾಗುತ್ತಿರುವ ಬಿಕ್ಕಟ್ಟು ಈ ದೇಶದ ನಿರುದ್ಯೋಗಿ ಯುವ ಜನತೆಯನ್ನು ಬಾಣಲೆಯಿಂದ ಬೆಂಕಿಗೆ ಬೀಳಿಸುತ್ತಿವೆ. ತಾತ್ಕಾಲಿಕವಾಗಿ ಜೀವನ ನಿರ್ವಹಣೆಗೆ ನೆರವಾಗುವ ಯಾವುದೇ ಉದ್ಯೋಗವೂ ಒಂದು ಸುಸ್ಥಿರ ಸಮಾಜವನ್ನು ನಿರ್ಮಿಸಲು ಪೂರಕವಾಗಿರುವುದಿಲ್ಲ. ಬಹುಶಃ ಇನ್ನು ಹತ್ತು ವರ್ಷಗಳಲ್ಲಿ ಭಾರತ ಈ ಸಂದಿಗ್ಧತೆಯನ್ನು ಎದುರಿಸುತ್ತದೆ.

ಸ್ವಯಂ ಉದ್ಯೋಗ, ಕೌಶಲ್ಯಾಧಾರಿತ ಉದ್ಯೋಗ ಮತ್ತು ತ್ವರಿತ ಆದಾಯ ಗಳಿಕೆಯ ಮಾರ್ಗಗಳು ಮಾರುಕಟ್ಟೆ ಅರ್ಥವ್ಯವಸ್ಥೆಯಲ್ಲಿ ಅದ್ಭುತ ಫಲಿತಾಂಶಗಳನ್ನು ತೋರುವುದಾದರೂ, ದೀರ್ಘಾವಧಿಯಲ್ಲಿ ಒಂದು ಅಸ್ಥಿರ ಸಮಾಜವನ್ನು ಸೃಷ್ಟಿಸುವುದನ್ನು ಹಲವು ದೇಶಗಳಲ್ಲಿ ಕಾಣಬಹುದು. ಹಾಗೆಯೇ ಮಾರುಕಟ್ಟೆ ವ್ಯವಸ್ಥೆ ರೂಪಿಸುವ ಉದ್ಯೋಗಾವಕಾಶಗಳು ಹಣಕಾಸು ಬಂಡವಾಳದ ಅವಶ್ಯಕತೆಗಳಿಗನುಗುಣವಾಗಿಯೇ ಇರುವುದರಿಂದ, ಈ ನೌಕರಿಯನ್ನು ಅವಲಂಬಿಸುವವರು ಮಾರುಕಟ್ಟೆ ವ್ಯತ್ಯಯಗಳ ಮೊದಲ ಬಲಿ ಆಗುತ್ತಾರೆ.

ಈ ಬಲಿಪೀಠಗಳನ್ನು ಸೃಷ್ಟಿಸಲೆಂದೇ ಸರ್ಕಾರಗಳು ಹಲವು ಯೋಜನೆಗಳನ್ನೂ, ಆಡಳಿತ ನೀತಿಗಳನ್ನೂ ರೂಪಿಸುತ್ತಿರುತ್ತವೆ. ಹಾಗಾಗಿಯೇ ಇಂದು ಲಕ್ಷಾಂತರ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಬಿಸಿಯೂಟ ಯೋಜನೆಯ ನೌಕರರು ತಮ್ಮ ಬದುಕಿನ ಘನತೆಗಾಗಿ, ಹಕ್ಕಿಗಾಗಿ ಹೋರಾಡುವಂತಾಗಿದೆ.

ದೇಶದ ಒಂದು ಬೃಹತ್‌ ಜನಸಮೂಹ ತಮ್ಮ ಜೀವನ ನಿರ್ವಹಣೆಗೆ ಪರದಾಡುತ್ತಿರುವುದನ್ನು ಅಧಿಕೃತ ಅಂಕಿಅಂಶಗಳೇ ಸಾಬೀತುಪಡಿಸುತ್ತವೆ. ಕರ್ನಾಟಕದಲ್ಲೇ 42 ಸಾವಿರ ಆಶಾ ಕಾರ್ಯಕರ್ತೆಯರು ತಮ್ಮ ಸೇವಾ ಭತ್ಯೆಗಳಿಗಾಗಿ, ಸುಭದ್ರ ನೌಕರಿಗಾಗಿ ಹೋರಾಡುತ್ತಿದ್ದಾರೆ. ದೇಶಾದ್ಯಂತ 10 ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿರುವ ಆಶಾ ಕಾರ್ಯಕರ್ತೆಯರು ಕನಿಷ್ಟ ವೇತನದೊಂದಿಗೆ, ಉದ್ಯೋಗ ಭದ್ರತೆ ಇಲ್ಲದೆ ಅನಿಶ್ಚಿತ ಬದುಕು ಎದುರಿಸುತ್ತಿದ್ದಾರೆ.

ಕರ್ನಾಟಕದಲ್ಲಿ 60 ವರ್ಷ ದಾಟಿದ ಕಾರಣಕ್ಕಾಗಿಯೇ ಹೊರಹಾಕಲ್ಪಟಿರುವ 12 ಸಾವಿರ ಬಿಸಿಯೂಟ ಯೋಜನೆಯ ಮಹಿಳೆಯರು ತಮ್ಮ ಜೀವನ ಭದ್ರತೆಗಾಗಿ ಹೋರಾಡುತ್ತಿದ್ದಾರೆ. ದೇಶಾದ್ಯಂತ 13 ಲಕ್ಷ ಅಂಗನವಾಡಿ ನೌಕರರು, ಬಹುಪಾಲು ಮಹಿಳೆಯರು, ಹೊಸ ಶಿಕ್ಷಣ ನೀತಿಯ ಪರಿಣಾಮ ತಮ್ಮ ನೆಲೆ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ದೇಶದ ಬಹುದೊಡ್ಡ ಉದ್ಯೋಗದಾತ ಸಾರ್ವಜನಿಕ ಸಂಸ್ಥೆ ರೈಲ್ವೆ ಇಲಾಖೆಯಲ್ಲಿ 72 ಸಾವಿರ ಹುದ್ದೆಗಳನ್ನು ರದ್ದುಪಡಿಸಲಾಗಿದೆ. ಬಿಜೆಪಿ ಸಂಸದ ವರುಣ್‌ ಗಾಂಧಿ ಇತ್ತೀಚೆಗೆ ಹೇಳಿದಂತೆ 60 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಉಳಿದಿವೆ.

ಭಾರತದ ಬೃಹತ್‌ ಜನಸಮೂಹದ ಬದುಕಿನ ಪ್ರಶ್ನೆಯಾಗಿರುವ ಈ ಸಮಸ್ಯೆಗಳು ಇಂದಿನ ಸಾರ್ವಜನಿಕ ಸಂಕಥನದ ಒಂದು ಭಾಗವಾಗಬೇಕಿತ್ತು. ಆದರೆ ಭಾರತ ಇಂತಹ ಒಂದು ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೂ, 45 ವರ್ಷಗಳಲ್ಲೇ ಅತಿ ಹೆಚ್ಚಿನ ನಿರುದ್ಯೋಗ ಪ್ರಮಾಣ ದಾಖಲಾಗಿದ್ದರೂ, ಎಂಟು ವರ್ಷಗಳಲ್ಲೇ ಅತಿ ಹೆಚ್ಚು ಹಣದುಬ್ಬರ ದಾಖಲಾಗಿದ್ದರೂ ಸಾರ್ವಜನಿಕ ಹಾಗೂ ಬೌದ್ಧಿಕ ವಲಯದ ಸಂಕಥನಗಳು ಭಿನ್ನ ಮಾರ್ಗದಲ್ಲಿ ಸಾಗುತ್ತಿವೆ. ಈ ವಿಕೃತ ಬೆಳವಣಿಗೆಯ ಮೂಲವನ್ನು ನಾವು ಸಾಂಸ್ಕೃತಿಕ ಹಾಗೂ ರಾಜಕೀಯ ಭೂಮಿಕೆಗಳಲ್ಲಿ ಶೋಧಿಸಬೇಕಿದೆ.

ಇಲ್ಲಿ ಬೌದ್ಧಿಕ ವಲಯದ ತಾತ್ವಿಕ ಗ್ರಹಿಕೆ ಮತ್ತು ಸಾಂಸ್ಕೃತಿಕ ವಲಯದ ಪ್ರಾಮಾಣಿಕತೆ ಮುಖ್ಯವಾಗುತ್ತದೆ. ರಾಜಕೀಯ ಮತ್ತು ಸೈದ್ಧಾಂತಿಕ ನಿಲುಮೆಗಳು ವಸ್ತುನಿಷ್ಠವಾಗದೆ ಹೋದರೆ ಸತ್ಯದ ಸಮಾಧಿಯಾಗುತ್ತದೆ. ತಾವು ಅನುಕರಿಸುವ ನಾಯಕರಲ್ಲಿ ಸರ್ವಶ್ರೇಷ್ಠತೆಯನ್ನು, ಸಾರ್ವಭೌಮತ್ವವನ್ನು ಕಾಣುವಂತಹ ವಂಧಿಮಾಗದ ಸಂಸ್ಕೃತಿಯನ್ನು ತಳಮಟ್ಟದವರೆಗೂ ತಲುಪಿಸಿರುವ ಭಾರತದ ರಾಜಕೀಯ ಪರಂಪರೆ ಇಂದು ದೇಶದ ಭವಿಷ್ಯತ್ತಿಗೆ ಮುಳುವಾಗಲಿದೆ. ಆಂತರಿಕ ಪ್ರಜಾತಂತ್ರದ ಮೌಲ್ಯಗಳನ್ನೇ ಮರೆತಿರುವ ರಾಜಕೀಯ ಪಕ್ಷಗಳು ಅಧಿಕಾರ ರಾಜಕಾರಣವನ್ನು ಒಂದು ಅವಕಾಶದ ಭೂಮಿಕೆ ಎಂದು ಭಾವಿಸದೆ, ತಮ್ಮ ವಾರಸುದಾರಿಕೆ ಅಥವಾ ಉತ್ತರಾಧಿಕಾರದ ವೇದಿಕೆ ಎಂದು ಭಾವಿಸುತ್ತಿರುವುದೇ ಇಂದಿನ ಸಕಲ ಸಮಸ್ಯೆಗಳಿಗೆ ಕಾರಣವಾಗಿದೆ.

ವರ್ತಮಾನದ ಭಾರತ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು ಈ ದೇಶದ ಸಂಸ್ಕೃತಿಯಷ್ಟೇ ವೈವಿಧ್ಯಮಯ ಅಷ್ಟೇ ಜಟಿಲ. ಆದರೆ ಈ ಸಮಸ್ಯೆಗಳಿಗೆ ಅಧಿಕಾರ ರಾಜಕಾರಣ ಸೂಚಿಸುತ್ತಿರುವ ಪರಿಹಾರ ಮಾರ್ಗಗಳು ಜನಸಾಮಾನ್ಯರಿಗೆ ಅರ್ಥವೇ ಆಗದಷ್ಟು ಸಂಕೀರ್ಣವಾಗಿರುತ್ತವೆ. ಹಾಗಾಗಿಯೇ ಎಲ್ಲ ಅಭಿವೃದ್ಧಿ ಕಾರ್ಯಗಳನ್ನೂ ಡ್ರೋನ್‌ ಮೂಲಕ ವೀಕ್ಷಿಸುತ್ತಿದ್ದೇನೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯಿಂದ ಇಡೀ ದೇಶವೇ ಪುಳಕಿತವಾಗುತ್ತದೆ.

ಆದರೆ ಈ ಡ್ರೋನ್‌ ವೀಕ್ಷಣೆಗೆ ಕರ್ನಾಟಕದ ಭ್ರಷ್ಟಾಚಾರದ ಕೂಪಗಳು ನಿಲುಕದೆ ಹೋಗುತ್ತವೆ. ರಾಜಕೀಯ ಭ್ರಷ್ಟಾಚಾರ ಭಾರತದ ಆಡಳಿತ ವ್ಯವಸ್ಥೆಯ ಒಂದು ಅವಿಭಾಜ್ಯ ಅಂಗ ಎನ್ನುವ ವಾಸ್ತವವನ್ನು ಅರಿತಿದ್ದರೂ ಜನಸಾಮಾನ್ಯರು ಭ್ರಷ್ಟರನ್ನೇ ಪೋಷಿಸಲು ತತ್ವ ಸಿದ್ಧಾಂತಗಳ ಮೊರೆ ಹೋಗುತ್ತಿದ್ದಾರೆ. ಕರ್ನಾಟಕದಲ್ಲಿ ಕೇಳಿಬರುತ್ತಿರುವ 40 % ಕಮಿಷನ್‌ ದಂಧೆ, ಪಿಎಸ್‌ಐ ಪರೀಕ್ಷೆಯ ಹಗರಣ, ಕೆಪಿಎಸ್‌ಸಿ ಹಗರಣ ಇವೆಲ್ಲವೂ ಕೇವಲ ಅಧಿಕಾರಶಾಹಿಯ ಚೌಕಟ್ಟಿನಲ್ಲೇ ಕಂಡುಬರುತ್ತವೆ.

ಸಾರಿಗೆ ನೌಕರರ ಸಂಘಟಿತ ಶಕ್ತಿಯನ್ನು ಭಂಗಗೊಳಿಸುವ ಉದ್ದೇಶದಿಂದಲೇ ತಮ್ಮ ಪರಿಣತ ಕ್ಷೇತ್ರವನ್ನು ಬಿಟ್ಟು ಕಾರ್ಮಿಕ ಸಂಘಟನೆಗೆ ಮುಂದಾದ ಕೋಡಿಹಳ್ಳಿ ಚಂದ್ರಶೇಖರ್‌ ಈಗ ಬೃಹತ್‌ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದರೂ, ಪ್ರಾಮಾಣಿಕತೆಯನ್ನೇ ಹೊದ್ದಿಕೊಂಡಿರುವ ಆಮ್‌ ಆದ್ಮಿ ಪಕ್ಷ ಅವರನ್ನು ಉಚ್ಚಾಟಿಸಲು ಹಿಂಜರಿಯುತ್ತದೆ. ಕಾನೂನು ಪಾಲನೆ ರಕ್ಷಣೆ ಮತ್ತು ಸಾರ್ವಜನಿಕ ಸ್ವಾಸ್ಥ್ಯದ ಹೊಣೆ ಹೊರಬೇಕಾಗಿರುವ ಪೊಲೀಸ್‌ ಇಲಾಖೆಯ ನೇಮಕಾತಿ ಪ್ರಕ್ರಿಯೆಯಲ್ಲೇ ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವಾಡುತ್ತಿದೆ. ತಾಂಡವಾಡುತ್ತಿದೆ

ಈ ಎಲ್ಲ ಬೆಳವಣಿಗೆಗಳೂ ಅಭಿವೃದ್ಧಿ ಕಾಮಗಾರಿಗಳ ಒಂದು ಭಾಗವಾಗಿಯೇ ಇರುವಾಗ, ಡ್ರೋನ್‌ ವೀಕ್ಷಣೆಯಲ್ಲಿ ಕಾಣದೆ ಹೋಗುವುದಾದರೂ ಹೇಗೆ ? ಇಷ್ಟೆಲ್ಲಾ ಅಕ್ರಮಗಳ ನಡುವೆಯೂ ಸರ್ಕಾರಗಳು ಅಬಾಧಿತವಾಗಿರುತ್ತವೆ, ಸಂಬಂಧಪಟ್ಟ ಸಚಿವರು ʼಮೇಲಿನವರʼ ಕೃಪಾಕಟಾಕ್ಷದೊಂದಿಗೆ ನಿರಾಳವಾಗಿರುತ್ತಾರೆ. ಸಾರ್ವಜನಿಕ ವಲಯದಲ್ಲೂ ಇದು ಯಾವುದೇ ಪ್ರತಿರೋಧದ ದನಿಗಳನ್ನು ಮೂಡಿಸುವುದಿಲ್ಲ. ಏಕೆಂದರೆ ಜನಸಾಮಾನ್ಯರ ಸಾಮಾಜಿಕ ಪ್ರಜ್ಞೆ ಯಾವುದೋ ಒಂದು ನಿಷ್ಠೆಗೊಳಗಾಗಿ ನಿಷ್ಕ್ರಿಯವಾಗಿರುತ್ತದೆ.

ಈ ತಾರತಮ್ಯಗಳನ್ನು ಯಥಾವತ್ತಾಗಿ ಕಾಪಾಡಲೆಂದೇ ಅಥವಾ ಮತ್ತಷ್ಟು ಕಂದರಗಳನ್ನು ಸೃಷ್ಟಿಸುವ ಸಲುವಾಗಿಯೇ ರೂಪಿಸಲಾಗುವ ಆಡಳಿತ ನೀತಿಗಳನ್ನು ಜಾರಿಗೊಳಿಸಲು ಗ್ರಾಮ ಮಟ್ಟದಿಂದ ದೆಹಲಿಯವರೆಗೂ ಒಂದು ಸಾಮಾಜಿಕ ವ್ಯವಸ್ಥೆ ಇನ್ನೂ ಜೀವಂತವಾಗಿದೆ. ಈ ಸಾಮಾಜಿಕ ಚೌಕಟ್ಟು ಶತಮಾನಗಳ ಬುನಾದಿ ಇರುವ ಜಾತಿ ವ್ಯವಸ್ಥೆಯಿಂದ ನಿಯಂತ್ರಿಸಲ್ಪಡುತ್ತದೆ. ದಿನನಿತ್ಯ ಕೇಳಿಬರುವ ಜಾತಿ ದೌರ್ಜನ್ಯಗಳು ನಮ್ಮ ಆಂತರಿಕ ಪ್ರಜ್ಞೆಯನ್ನು ಕದಡುತ್ತಿಲ್ಲ. ಏಕೆಂದರೆ ದೌರ್ಜನ್ಯಕ್ಕೊಳಗಾಗುತ್ತಿರುವುದು ಆರ್ಥಿಕ ನೆಲೆಯಲ್ಲಿ ಕೆಳಸ್ತರಕ್ಕೆ ಸೇರಿದವರಾಗಿದ್ದಾರೆ.

ಇಲ್ಲಿರುವ ಜಾತ್ಯತೀತ ಲಕ್ಷಣ ರಾಜಕೀಯ ನೆಲೆಯಲ್ಲಾಗಲೀ, ಸಾಂಸ್ಕೃತಿಕ ನೆಲೆಯಲ್ಲಾಗಲೀ ಕಂಡುಬರುವುದಿಲ್ಲ. ಅಂದರೆ, ಮತನಿರಪೇಕ್ಷವಾಗಿ, ಜಾತಿ ಗೋಡೆಗಳನ್ನು ಮೀರಿದ ಒಂದು ಅಸಮಾನತೆ ನಮ್ಮ ಸಮಾಜದಲ್ಲಿ ಬೇರೂರುತ್ತಿದೆ. ಶ್ರೀಮಂತಿಕೆ ಮತ್ತು ದಾರಿದ್ರ್ಯತೆಯ ನಡುವಿನ ಕಂದರದಲ್ಲಿ ಹುದುಗಿಹೋಗುವ ಅಸಂಖ್ಯಾತ ಅಸಹಾಯಕ ದನಿಗಳು ತಮ್ಮ ಪ್ರತಿರೋಧವನ್ನು ದಾಖಲಿಸಲೂ ಸಾಧ್ಯವಾಗದಂತೆ ಕಾಯ್ದೆ ಕಾನೂನುಗಳನ್ನು ರೂಪಿಸಲಾಗುತ್ತಿದೆ. ಎಲ್ಲ ಜಾತಿ ಮತದ ನೆಲೆಗಳಲ್ಲಿ ವಿಸ್ತರಿಸಿರುವ ಈ ತಾರತಮ್ಯಗಳನ್ನು ವಿರೋಧಿಸಲು ಅತ್ಯವಶ್ಯವಾದ ಒಂದು ಜಾತ್ಯತೀತ ಭೂಮಿಕೆಯನ್ನು ಶೈಶಾವಸ್ಥೆಯಲ್ಲೇ ಭಗ್ನಗೊಳಿಸಲಾಗುತ್ತಿದೆ.

ಯಾವುದೇ ಭೌಗೋಳಿಕ ರಾಷ್ಟ್ರದ ಸಾಮಾಜಿಕ ಮತ್ತು ಸಾಂಸ್ಕೃತಿಕ ವಾತಾವರಣದಲ್ಲಿ ಜಾಗೃತವಾಗಿರಬೇಕಾದ ಸಾರ್ವಜನಿಕ ಅರಿವು ಮತ್ತು ಸಾಮಾಜಿಕ ಪ್ರಜ್ಞೆಯನ್ನು ಮೊಳಕೆಯಲ್ಲೇ ಚಿವುಟಿ, ಯಾವುದೋ ಒಂದು ಆಧಿಪತ್ಯಕ್ಕೊಳಪಡಿಸುವ ನಿಟ್ಟಿನಲ್ಲಿ ಇಂದು ರಾಷ್ಟ್ರ ರಾಜಕಾರಣ ಬೆಳೆಯುತ್ತಿದೆ. ಅಂತರಿಕವಾಗಿ ಜಾತಿ, ಉಪಜಾತಿ, ಒಳಜಾತಿ ಮತ್ತು ಮೇಲ್ಜಾತಿಗಳ ಆಧಿಪತ್ಯಗಳು ಬಲವಾಗುತ್ತಿರುವಂತೆಯೇ ವ್ಯಾಪಕ ನೆಲೆಯಲ್ಲಿ ಮತಧರ್ಮಗಳ ಆಧಿಪತ್ಯದ ನೆಲೆಗಳೂ ಪ್ರಬಲವಾಗುತ್ತಿವೆ.

ಈ ಆಧಿಪತ್ಯದ ನೆಲೆಗಳು ತಮ್ಮ ಸಾಂಸ್ಥಿಕ, ಸಾಂಘಿಕ ಅಸ್ತಿತ್ವವನ್ನು ಕಾಪಾಡಿಕೊಳ್ಳಲೆಂದೇ ಸಾರ್ವಜನಿಕ ಸಂಕಥನಗಳ ನಿರೂಪಣೆಗಳನ್ನೂ ನಿರ್ಧರಿಸುತ್ತವೆ. ಆಳುವ ವರ್ಗಗಳು ಈ ಆಧಿಪತ್ಯದ ನೆಲೆಗಳನ್ನೇ ಬಳಸಿಕೊಂಡು ಇಂತಹ ಸಾಪೇಕ್ಷ ನಿರೂಪಣೆಗಳಿಗೆ ಸಾರ್ವತ್ರಿಕತೆಯನ್ನು ಕಲ್ಪಿಸಲು ಸಾಂವಿಧಾನಿಕ ಮಾರ್ಗಗಳನ್ನೇ ಅನುಸರಿಸುತ್ತವೆ. ತಂತ್ರಜ್ಞಾನ ಯುಗದಲ್ಲಿ ವಿದ್ಯುನ್ಮಾನ ಮಾಧ್ಯಮಗಳು ಮತ್ತು ಡಿಜಿಟಲ್‌ ವೇದಿಕೆಗಳು ಇದಕ್ಕೆ ಸಹಾಯಕವಾಗಿರುತ್ತವೆ. ಇಂದು ಸಾರ್ವಜನಿಕವಾಗಿ ಬಹುಚರ್ಚಿತವಾಗಿರುವ ಪಠ್ಯ ಪರಿಷ್ಕರಣೆಯೂ ಇದರ ಒಂದು ಭಾಗವಷ್ಟೇ ಆಗಿದೆ.

ಹಿಂದುತ್ವ ರಾಜಕಾರಣ ಈ ಮೇಲ್ಜಾತಿ, ಮೇಲ್ವರ್ಗ ಮತ್ತು ವೈದಿಕಶಾಹಿ ಸಾಂಸ್ಕೃತಿಕ ನೆಲೆಗಳ ಸಮ್ಮಿಶ್ರಣವಾಗಿರುವುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳಲ್ಲಿ ಈ ಆಧಿಪತ್ಯ ರಾಜಕಾರಣದ ಮಹತ್ವಾಕಾಂಕ್ಷೆಗೆ ಒಂದು ಪ್ರಜಾಸತ್ತಾತ್ಮಕ ಪ್ರತಿರೋಧದ ನೆಲೆಯನ್ನು ರೂಪಿಸುವುದು ಈ ಸಂದರ್ಭದ ಅನಿವಾರ್ಯತೆಯೂ ಆಗಿದೆ. ಭಾರತದ ಸಂವಿಧಾನ ಈ ನಿಟ್ಟಿನಲ್ಲಿ ನಮಗೆ ದಾರಿದೀಪವಾಗಬಹುದು ಹಾಗೆಯೇ ನಮ್ಮೊಳಗಿನ ಜಾಗೃತ ಸಾಮಾಜಿಕ ಪ್ರಜ್ಞೆ ಬೆಳಕಿನ ಕಿಂಡಿಯೂ ಆಗಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಭ್ರಷ್ಟಾಚಾರದ ವಿರುದ್ಧ ಶಂಕರ್ ಇನ್ನೊಂದು ಹೋರಾಟ!

Published

on

  • ಚೇತನ್ ನಾಡಿಗೇರ್

ಣಿರತ್ನಂ ಏನೇ ಮಾಡಲಿ, ಯಾವುದೇ ಚಿತ್ರ ತೆಗೆಯಲಿ, ಅದರ ಮೂಲ ಸೆಲೆ ಪ್ರೀತಿಯಾಗಿರುತ್ತದೆ. ಪ್ರೀತಿಯ ಬೇರೆಬೇರೆ ವ್ಯಾಖ್ಯಾನಗಳನ್ನು, ಬೇರೆಬೇರೆ ಹಿನ್ನೆಲೆಯಲ್ಲಿ ಮಣಿರತ್ನಂ ಪ್ರತಿಚಿತ್ರದಲ್ಲೂ ಹೇಳುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಅದೇ ರೀತಿ, ರಾಮ್‍ಗೋಪಾಲ್‍ ವರ್ಮ ಏನೇ ಚಿತ್ರ ಮಾಡಿದರೂ, ಕ್ರೈಮ್‍ ಹಿನ್ನೆಲೆಯಲ್ಲೇ ಮಾಡುತ್ತಾರೆ. ಹೀಗೆ ಬೇರೆಬೇರೆ ನಿರ್ದೇಶಕರು ಒಂದೇ ವಿಷಯವನ್ನಿಟ್ಟುಕೊಂಡು ಬೇರೆಬೇರೆ ರೀತಿ ವ್ಯಾಖ್ಯಾನಿಸುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ.

ಈಗ್ಯಾಕಪ್ಪಾ ಈ ಮಾತು ಎಂದರೆ, ಶಂಕರ್ ನಿರ್ದೇಶನದ ‘ಇಂಡಿಯನ್‍ 2’ ನಾಳೆ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ತಮ್ಮದೇ ಯಶಸ್ವಿ ಚಿತ್ರ ‘ಇಂಡಿಯನ್‍’ನ ಮುಂದುವರೆದ ಭಾಗ ಇದು. ಆ ಚಿತ್ರ ಬಿಡುಗಡೆಯಾಗಿ 26 ವರ್ಷಗಳ ನಂತರ ‘ಇಂಡಿಯನ್‍ 2’ ಬಿಡುಗಡೆಯಾಗುತ್ತಿದೆ. ಅಷ್ಟೇ ಅಲ್ಲ, ಭ್ರಷ್ಟಾಚಾರದ ವಿಷಯವನ್ನಿಟ್ಟುಕೊಂಡು ಶಂಕರ್‍ ನಿರ್ದೇಶಿಸುತ್ತಿರುವ ಏಳನೇ ಚಿತ್ರ ಇದು.

ಶಂಕರ್‍ ಚಿತ್ರಗಳೆಂದರೆ ಅದ್ಧೂರಿತನ, ಹಿಟ್‍ ಹಾಡುಗಳು, ದೊಡ್ಡ ಕ್ಯಾನ್ವಾಸ್‍, ಮಾಸ್ ಅಂಶಗಳು ಇವೆಲ್ಲವೂ ಕಾಣುತ್ತದೆ. ಅದೇ ರೀತಿ ಗಮನಸೆಳೆಯುವ ಒಂದು ವಿಷಯವೆಂದರೆ, ಅದು ಭ್ರಷ್ಟಾಚಾರದ ವಿರುದ್ಧ ಶಂಕರ್‍ ನಿರಂತರ ಹೋರಾಟ. ತಮ್ಮ ನಿರ್ದೇಶನದ ಮೊದಲ ಚಿತ್ರದಿಂದಲೂ ಶಂಕರ್‍ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಲೇ ಇದ್ದಾರೆ. ಶಂಕರ್‍ ಈ 31 ವರ್ಷಗಳಲ್ಲಿ ನಿರ್ದೇಶಿಸಿರುವುದು ಕೇವಲ 14 ಚಿತ್ರಗಳನ್ನು. ಆ ಪೈಕಿ ಏಳು ಚಿತ್ರಗಳು ಭ್ರಷ್ಟಾಚಾರ ಎಂಬ ವಿಷಯವನ್ನಿಟ್ಟುಕೊಂಡು ಮೂಲವಾಗಿಟ್ಟುಕೊಂಡು ಮಾಡಲಾಗಿದೆ.

ಈ ಪ್ರಯಾಣ ಶುರುವಾಗಿದ್ದು 1993ರಲ್ಲಿ ಬಿಡುಗಡೆಯಾದ ‘ಜಂಟಲ್‍ಮ್ಯಾನ್’ ಚಿತ್ರದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ಕುರಿತು ಕಥೆ ಮಾಡಿದ್ದರು. ಶಿಕ್ಷಣ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ಮತ್ತು ಲಂಚಾವತಾರದಿಂದ ಹೇಗೆ ಪ್ರತಿಭಾವಂತ ಯುವಕರು ಅವಕಾಶವಂಚಿತರಾಗುತ್ತಿದ್ದಾರೆ ಎಂದು ಹೇಳಿದರು. ಒಬ್ಬ ಸಾಮಾನ್ಯ ಮನುಷ್ಯ ಹೇಗೆ ಈ ವ್ಯವಸ್ಥೆಯ ವಿರುದ್ಧ ಹೋರಾಡುತ್ತಾನೆ ಎಂದು ತೋರಿಸಿದ್ದರು. ಆ ನಂತರ ‘ಇಂಡಿಯನ್‍’, ‘ಮುದಲ್ವನ್‍’, ‘ಅನ್ನಿಯನ್‍’, ‘ಶಿವಾಜಿ: ದಿ ಬಾಸ್‍’ ಮತ್ತು ‘ಇಂಡಿಯನ್‍ 2’ ಚಿತ್ರಗಳ ಮೂಲಕ ಅವರು ಇದೇ ವಿಷಯವನ್ನು ಹೇಳುವ ಪ್ರಯತ್ನವನ್ನು ಮಾಡಿದ್ದಾರೆ.

ವಿಷಯ ಅದೇ ಭ್ರಷ್ಟಾಚಾರ ಅಥವಾ ಲಂಚಾವತಾರವಿರಬಹುದು. ಅದೇ ವಿಷಯವನ್ನಿಟ್ಟುಕೊಂಡು ಶಂಕರ್‍ ಬೇರೆಬೇರೆ ರೀತಿಯಲ್ಲಿ ಕಮರ್ಷಿಯಲ್‍ ಆಗಿ ಚಿತ್ರಗಳನ್ನು ರೂಪಿಸಿರುವುದಿದೆಯಲ್ಲಾ ಅದು ವಿಶೇಷ ಎನಿಸುತ್ತದೆ. ‘ಇಂಡಿಯನ್‍’ನಲ್ಲಿ ಸ್ವಾತಂತ್ರ್ಯ ಹೋರಾಟಗಾರನೊಬ್ಬ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾನೆ. ತನ್ನ ಮಗನೇ ದೊಡ್ಡ ಭ್ರಷ್ಟ ಎಂದು ಗೊತ್ತಾದಾಗ ಅವನನ್ನೇ ಸಾಯಿಸುತ್ತಾನೆ. ‘ಮುದಲ್ವನ್’ ಎಂಬ ಚಿತ್ರದಲ್ಲಿ ಒಬ್ಬ ಸಾಮಾನ್ಯ ಮನುಷ್ಯ ಒಂದು ದಿನದ ಮುಖ್ಯಮಂತ್ರಿಯಾಗಿ ಭ್ರಷ್ಟಾಚಾರ ತಡೆಯುವ ಪ್ರಯತ್ನವನ್ನು ತನ್ನದೇ ಶೈಲಿಯಲ್ಲಿ ಮಾಡುತ್ತಾನೆ. ‘ಅನ್ನಿಯನ್‍’ನಲ್ಲಿ ಭ್ರಷ್ಟಾಚಾರ, Multiple Personality Disorder ಮತ್ತು ಗರುಡ ಪುರಾಣವನ್ನು ಶಂಕರ್‍ ಸೇರಿಸಿ ಕಥೆ ಮಾಡಿರುವ ರೀತಿಯೇ ವಿಶಿಷ್ಟ. ‘ಶಿವಾಜಿ’ಯಲ್ಲಿ ನೂರಾರು ಕೋಟಿ ಆಸ್ತಿ ಇರುವ ಶ್ರೀಮಂತನೊಬ್ಬ ಈ ವ್ಯವಸ್ಥೆಯಿಂದ ಬೇಸತ್ತು ಹೋರಾಟಕ್ಕೆ ಇಳಿಯುತ್ತಾನೆ. ಈಗ ‘ಇಂಡಿಯನ್‍ 2’ ಚಿತ್ರದಲ್ಲಂತೂ ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ಎಂದು Second War of Independence ಬಣ್ಣಿಸಿದ್ದಾರೆ. ಅಲ್ಲಿಗೆ ಭ್ರಷ್ಟಾಚಾರದ ವಿರುದ್ಧ ಶಂಕರ್‍ ಮತ್ತೊಂದು ಹೋರಾಟ ಶುರು ಮಾಡಿದ್ದಾರೆ.

ಇಷ್ಟಕ್ಕೂ ಶಂಕರ್‍ ಯಾಕೆ ಈ ವಿಷಯದ ಮೇಲೆ ಮೇಲಿಂದ ಮೇಲೆ ಸಿನಿಮಾ ಮಾಡುತ್ತಾರೆ? ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಯಾವುದೇ ವಿಷಯ ನನ್ನನ್ನು ಕಾಡಿದರೂ, ಆ ಕುರಿತು ಕಥೆ ಮಾಡುವುದಕ್ಕೆ ಪ್ರಯತ್ನ ಮಾಡುತ್ತೇನೆ. ಈ ಭ್ರಷ್ಟಾಚಾರ ನನ್ನನ್ನು ಪದೇಪದೇ ಕಾಡಿದೆ. ಅದನ್ನು ಕಮರ್ಷಿಯಲ್‍ ರೂಪದಲ್ಲಿ, ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನ ಮಾಡುತ್ತಾ ಬಂದಿದ್ದೇನೆ. ಒಂದು ವಿಷಯ ಸ್ಪಷ್ಟವಾದ ಮೇಲೆ, ಅದನ್ನು ಹೇಗೆ ತರಬೇಕು ಎಂದು ಯೋಚಿಸುತ್ತೇನೆ. ಪ್ರೇಕ್ಷಕರ ದೃಷ್ಟಿಕೋನದಿಂದ ಯೋಚಿಸುವುದಕ್ಕೆ ಪ್ರಯತ್ನಿಸುತ್ತೇನೆ. ಅವರಿಗೆ ಬೋರ್‍ ಆಗಬಾರದು ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಚಿತ್ರಕಥೆ ಮಾಡುತ್ತಾ ಹೋಗುತ್ತೇನೆ’ ಎಂದು ಹೇಳಿಕೊಂಡಿದ್ದಾರೆ ಶಂಕರ್.

ಬಹುಶಃ ಅದೇ ಅವರ ಯಶಸ್ಸು ಎನ್ನಬಹುದೇನೋ? ಶಂಕರ್‍ ಒಂದು ಚಿತ್ರದ ಕಥೆಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೋ, ಮನರಂಜನಾತ್ಮಕ ಅಂಶಗಳಿಗೂ ಅಷ್ಟೇ ಪ್ರಾಮುಖ್ಯತೆ ಕೊಡುತ್ತಾರೆ. ಕೆಲವೊಮ್ಮೆ ಶಂಕರ್‍ ಪಾತ್ರಗಳು Larger than life ಎಂದನಿಸಬಹುದು. ಕೆಲವೊಮ್ಮೆ ತುಂಬಾ exaggeration ಅಂತನಿಸಬಹುದು. ಒಂದು ದಿನಕ್ಕೆ ಮುಖ್ಯಮಂತ್ರಿ ಆಗುವುದಕ್ಕೆ ಸಾಧ್ಯವಾ? ಪಾರ್ಥಸಾರಥಿ ರಾಮಾನುಜ ಅಯ್ಯಂಗಾರ್‍ಗೆ ಅನ್ನಿಯನ್‍ ಆಗುವುದಕ್ಕೆ ಸಾಧ್ಯವಾ? 78ರ ವೃದ್ಧನೊಬ್ಬ ಸೇನಾಪತಿಯಾಗಿ ಹಾಗೆ ಹೊಡೆದಾಡುವುದಕ್ಕೆ ಸಾಧ್ಯವೇ? ಈ ಪ್ರಶ್ನೆಗಳು ಬರಬಹುದು. ತಾರ್ಕಿಕವಾಗಿ ನೋಡಿದರೆ ಇದು ಕಷ್ಟ. ಆದರೆ, ಶಂಕರ್ ಲಾಜಿಕ್‍ಗಿಂತ ಮ್ಯಾಜಿಕ್‍ನಲ್ಲಿ ನಂಬಿಕೆ ಇಟ್ಟವರು. ಏನೇನೋ ಮ್ಯಾಜಿಕ್‍ ಮಾಡಿ ಪ್ರೇಕ್ಷಕರನ್ನು ನಂಬಿಸುತ್ತಾರೆ. ತಮ್ಮ ಪ್ರಪಂಚದಲ್ಲಿ ಎಳೆದುಕೊಳ್ಳುತ್ತಾರೆ.

ಈಗೆಲ್ಲಾ Cinematic Universeಗಳ ಕಾಲ. ಯಶ್‍ರಾಜ್‍ ಸ್ಪೈ ಯೂನಿವರ್ಸ್‍, ಲೋಕೇಶ್‍ ಕನಕರಾಜ್‍ ಯೂನಿವರ್ಸ್, ರೋಹಿತ್‍ ಶೆಟ್ಟಿ ಪೊಲೀಸ್‍ ಯೂನಿವರ್ಸ್‍ಗಳು ಹೆಚ್ಚು ಸದ್ದು ಮಾಡುತ್ತಿವೆ. ಆದರೆ, ಕೆಲವು ವರ್ಷಗಳ ಹಿಂದೆಯೇ ‘ಇಂಡಿಯನ್‍’ನ ಸೇತುಪತಿ, ‘ಶಿವಾಜಿ: ದಿ ಬಾಸ್‍’ನ ಶಿವಾಜಿ ಮತ್ತು ‘ಮುದಲ್ವನ್‍’ನ ಪುಗಳೇಂದಿಯನ್ನಿಟ್ಟುಕೊಂಡು ಏಕೆ ಒಂದು ಚಿತ್ರ ಮಾಡಬಾರದು ಎಂದು ಅವರು ಕೆಲವು ವರ್ಷಗಳ ಹಿಂದೆಯೇ ಯೋಚಿಸಿದ್ದರಂತೆ. ಆದರೆ, ಸೂಕ್ತ ಪ್ರೋತ್ಸಾಹ ಸಿಗದ ಕಾರಣ ಸುಮ್ಮನಾದರಂತೆ.

ಈ ಕುರಿತು ಮಾತನಾಡಿರುವ ಅವರು, ‘2008ರಲ್ಲಿ ‘ಎಂದಿರನ್‍’ ಚಿತ್ರ ಮಾಡುವಾಗ, ಯಾಕೆ ನಾನೇ ಸೃಷ್ಟಿಸಿದ ಮೂರು ಪಾತ್ರಗಳನ್ನು ಒಂದೇ ಚಿತ್ರದಲ್ಲಿ ಯಾಕೆ ತರಬಾರದು ಎಂದನಿಸಿತು. ಒಂದು ಕ್ಷಣ ರೋಮಾಂಚನವಾಯ್ತು. ಖುಷಿಯಿಂದ ನನ್ನ ಸಹಾಯಕ ನಿರ್ದೇಕರನ್ನು ಕರೆದು ಐಡಿಯಾ ಹೇಳಿದೆ. ಅವರೆಲ್ಲರೂ ಇದು ಸಾಧ್ಯವಾ? ಎಂದು ಅನುಮಾನದಿಂದ ನೋಡಿದರು. ನಂತರ ಕೆಲವು ಹಿರಿಯ ತಂತ್ರಜ್ಞರಿಗೆ ಮತ್ತು ನನ್ನ ಸ್ನೇಹಿತರಿಗೆ ಹೇಳಿದೆ. ನನ್ನ ಮನಸ್ಸಿಗೆ ನೋವಾಗಬಹುದು ಎಂದು ಚೆನ್ನಾಗಿದೆ ಎಂದಷ್ಟೇ ಹೇಳಿ ಹೊರಟು ಹೋದರು. ಬಹುಶಃ ನನಗೆ ಆಗ ಪ್ರೋತ್ಸಾಹ ಸಿಕ್ಕಿದ್ದರೆ ಚಿತ್ರ ಮಾಡಿಬಿಟ್ಟಿರುತ್ತಿದ್ದೆನೇನೋ? ಕೆಲವು ವರ್ಷಗಳ ನಂತರ ‘ಅವೆಂಜರ್ಸ್’ ಚಿತ್ರ ನೋಡಿದಾಗ, ಅದು ಸಹ Marvel Cinematic Universeನ ಒಂದು ಭಾಗ ಆಗಿತ್ತು. ಒಂದು ಒಳ್ಳೆಯ ಐಡಿಯಾ ಇದ್ದರೆ, ತಕ್ಷಣವೇ ಅದನ್ನು ಕಾರ್ಯರೂಪಕ್ಕೆ ಇಳಿಸಬೇಕು ಎಂದು ನನಗೆ ಆಗ ಅರ್ಥವಾಯ್ತು. ಏಕೆಂದರೆ, ನಮ್ಮ ತರಹವೇ ಜಗತ್ತಿನಾದ್ಯಂತ ಹಲವರು ಹೊಸ ವಿಷಯಗಳ ಬಗ್ಗೆ ಯೋಚಿಸುತ್ತಿರುತ್ತಾರೆ. ಅವರು ಅದನ್ನು ಕಾರ್ಯರೂಪಕ್ಕೆ ತರುವ ಮುನ್ನ, ಮೊದಲು ನಾವು ಆ ಕೆಲಸ ಮಾಡಬೇಕು’ ಎಂದು ಹೇಳಿಕೊಂಡಿದ್ದಾರೆ ಶಂಕರ್‍.

Shankar Cinematic Universe ಯಾವತ್ತು ಕಾರ್ಯರೂಪಕ್ಕೆ ಬರುತ್ತದೋ ಗೊತ್ತಿಲ್ಲ. ಸೇತುಪತಿ, ಶಿವಾಜಿ ಮತ್ತು ಪುಗಳೇಂದಿಯನ್ನು ಒಟ್ಟಿಗೆ ಮುಂದಿಟ್ಟುಕೊಂಡು ಯಾವಾಗ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾರೋ ಗೊತ್ತಿಲ್ಲ. ಆದರೆ, ಸದ್ಯಕ್ಕಂತೂ ಭ್ರಷ್ಟಾಚಾರದ ವಿರುದ್ಧ ಶಂಕರ್ ತಮ್ಮ ಹೋರಾಟ ಮುಂದುವರೆಸಿದ್ದಾರೆ. ‘ಇಂಡಿಯನ್‍ 2’ ಬಿಡುಗಡೆಯಾಗಿ ಆರು ತಿಂಗಳಲ್ಲೇ ಅದೇ ಸೇತುಪತಿ, ‘ಇಂಡಿಯನ್‍ 3’ ಆಗಿ ಮತ್ತೆ ಬರಲಿದ್ದಾರೆ. ಅದಾಗಿ ಸ್ವಲ್ಪ ದಿನಗಳಿಗೆ ‘ಗೇಮ್‍ ಚೇಂಜರ್‍’ ಎಂಬ ರಾಮ್‍ಚರಣ್‍ ತೇಜ ಅಭಿನಯದ ಇನ್ನೊಂದು ಚಿತ್ರದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರೆಸಲಿದ್ದಾರೆ. ಪಾತ್ರಗಳು ಬದಲಾಗಬಹುದು, ಶಂಕರ್‍ ಹೋರಾಟ ಮಾತ್ರ ನಿರಂತರವಾಗಿ ಮುಂದುವರೆಯುತ್ತಿರುವುದು ವಿಶೇಷ. (ಬರಹ : ಚೇತನ್ ನಾಡಿಗೇರ್, ಫೇಸ್‌ಬುಕ್‌ ಬರಹ)ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಮಹಾತ್ಮ ಗಾಂಧಿ ಬಿಟ್ಟರೆ ನಾನೇ ಫಾದರ್‍ ಆಫ್‍ ದಿ ನೇಷನ್‍ ಅಂತಾರೆ..!

Published

on

  • ಚೇತನ್ ನಾಡಿಗೇರ್

‘ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳ ಜಾಸ್ತಿ ಆಗ್ತಿಲ್ಲ, ಆ ಬಗ್ಗೆ ಮಾತಾಡೋಣ. ಆಟೋ ಚಾಲಕರಿಗೆ ಬೈಕ್‍ ಸವಾರರಿಂದ ತೊಂದರೆ ಆಗುತ್ತಿದೆ ಆ ಬಗ್ಗೆ ಮಾತಾಡೋಣ. ಸರ್ಕಾರಿ ಶಾಲೆಗಳಲ್ಲಿ ಬಿಸಿಊಟ ಅಡುಗೆ ಮಾಡುವವರಿಗೆ ತಿಂಗಳಿಗೆ ಮೂರು ಸಾವಿರ ರೂಪಾಯಿ ಸಂಬಳ. ಅದರ ಬಗ್ಗೆ ಮಾತಾಡೋಣ. ಮಿಕ್ಕವರೆಲ್ಲಾ ಬಹಳ ಬ್ಯುಸಿಯಾಗಿರುವುದರಿಂದ ನಾವು ಇದರ ಬಗ್ಗೆ ಮಾತಾಡೋಣ್ವಾ?’

ಮಾರ್ಮಿಕವಾಗಿ ಕೇಳಿದರು ಪ್ರಕಾಶ್‍ ರೈ. ಅವರಿಗೆ ಆ ವಿಷಯದ ಬಗ್ಗೆ ಮಾತಾಡುವುದಕ್ಕೆ ಇಷ್ಟವಿರಲಿಲ್ಲ. ಆದರೂ ಕನ್ನಡ ಚಿತ್ರರಂಗದಲ್ಲಿ ಕಳೆದ ಒಂದು ತಿಂಗಳಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂಬ ಪ್ರಶ್ನೆ ಬಂತು. ಅದನ್ನು ಬಹಳ ಜಾಣ್ಮೆಯಿಂದ ತಳ್ಳಿಹಾಕಿದರು ರೈ. ಅದೊಂದು ಬಿಟ್ಟು ಹಲವು ವಿಷಯಗಳ ಬಗ್ಗೆ ಮಾತನಾಡಿದರು. ತಮ್ಮ ಇಷ್ಟದ ಚಿತ್ರದ ಬಗ್ಗೆ, ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿಯ ಬಗ್ಗೆ, ಸೋಷಿಯಲ್ ಮೀಡಿಯಾವನ್ನು ಕೆಲವರು ಕೆಟ್ಟದಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ, ತಂದೆ-ಮಗನ ಸಂಬಂಧದ ಬಗ್ಗೆ, STARDOM ಸಂಭಾಳಿಸುವ ಬಗ್ಗೆ, ಕಲಿಕೆಯ ಬಗ್ಗೆ … ಹೀಗೆ ಹಲವು ವಿಷಯಗಳನ್ನು ಅವರು ಮಾತನಾಡಿದರು. ಅದಕ್ಕೆ ವೇದಿಕೆಯಾಗಿದ್ದು, ಆರ್. ಚಂದ್ರು ನಿರ್ಮಾಣದ, ‘ಡಾರ್ಲಿಂಗ್‍’ ಕೃಷ್ಣ ಅಭಿನಯದ ‘ಫಾದರ್‍’ ಚಿತ್ರದ ಪತ್ರಿಕಾಗೋಷ್ಠಿ. ಈ ಚಿತ್ರದಲ್ಲಿನ ತಮ್ಮ ಪಾತ್ರ ಮತ್ತ ತಂದೆಯ ವ್ಯಾಖ್ಯಾನವನ್ನು ರೈ ಎಷ್ಟು ಚೆನ್ನಾಗಿ ಮಾಡಿದರು ಗೊತ್ತಾ? ನೀವೇ ಓದಿ …

ನಾನು ನನ್ನ ಮೂರು ದಶಕಗಳ ವೃತ್ತಿಜೀವನದಲ್ಲಿ ಯಶಸ್ಸಿನಿಂದ ಹಾಳಾದ ಬಹಳಷ್ಟು ಜನರನ್ನು ನೋಡಿದ್ದೇನೆ. ಸೋಲಿನಿಂದ ಹಾಳಾದವರನ್ನು ನೋಡಿದ್ದು ಕಡಿಮೆ. ಯಶಸ್ಸು ಎನ್ನುವುದು ಒಂದು ನಶೆ. ಯಶಸ್ವಿಯಾಗುವುದು ದೊಡ್ಡ ವಿಷಯವಲ್ಲ. ಅದನ್ನು ದಕ್ಕಿಸಿಕೊಳ್ಳೋದು, ಉಳಿಸಿಕೊಳ್ಳೋದು ಬಹಳ ಮುಖ್ಯ. ಹಾಗಾಗಿ, ಡಾ. ರಾಜಕುಮಾರ್, ರಜನಿಕಾಂತ್‍, ಕಮಲ್ ಹಾಸನ್‍ ಮುಂತಾದವರು ಆರು ದಶಕ, ಐದು ದಶಕಗಳ ಕಾಲ ಕೆಲಸ ಮಾಡಿದವರನ್ನು ನಾವು ನೋಡಬಹುದು. ಈಗ ಅಂಥವರು ಸಿಗುವುದೇ ಇಲ್ಲ ನಮಗೆ. ಬಹಳಷ್ಟು ಯುವಕರು stardomಗೆ ತಯಾರಾಗಿರುವುದಿಲ್ಲ. ಎಷ್ಟು ನಾವು ಅದನ್ನು ಇಳಿಸಿಕೊಂಡು ಹೊರಗೆ ಬರುತ್ತೀವೋ, ಅಷ್ಟು ಒಳ್ಳೆಯದು. ಇಲ್ಲದಿದ್ದರೆ ಅದು ನಮ್ಮನ್ನು ಸುಟ್ಟುಹಾಕುತ್ತದೆ. ಕೆಲವರು ಕಲಿಯುತ್ತಿದ್ದಾರೆ, ಕೆಲವರು ಕಲಿಯುವುದಿಲ್ಲ.

ಪ್ರತಿಯೊಬ್ಬರಿಗೂ ಇಗೋ ಇರಬೇಕು. ಅದು ಸ್ವಾಭಿಮಾನವಾಗಿರುವವರೆಗೂ ಇರಬೇಕು. ಅದು ಅಹಂಕಾರವಾದರೆ ಇಬ್ಬರಿಗೂ ಒಳ್ಳೆಯದಲ್ಲ. ಒಂದು ಇಗೋ ನನ್ನನ್ನು ಬೆಳೆಸುವುದಕ್ಕೆ ಸಾಧ್ಯವಾದರೆ, ಇನ್ನೊಂದನ್ನು ರೂಪಿಸುವುದಕ್ಕೆ ಸಾಧ್ಯವಾದರೆ, ಒಂದು ಧಾರ್ಮಿಕ ಕೋಪವಾದರೆ ಒಳ್ಳೆಯದಲ್ವಾ? ಅದು ಆಯಾ ಪರಿಸ್ಥಿತಿಗೆ ಬದಲಾಗುತ್ತಿರುತ್ತದೆ. ಒಂದು ಪದದ ಅರ್ಥ ಪದಕೋಶದಲ್ಲಿ ಸಿಗುವುದಿಲ್ಲ, ಆ ಸಂದರ್ಭದಲ್ಲಿ ಸಿಗುತ್ತದೆ. ಯಾವ ಸಂದರ್ಭದಲ್ಲಿ ಆ ಪದವನ್ನು ಉಪಯೋಗಿಸುತ್ತೀವೋ, ಆ ಪದಕ್ಕೆ ಅರ್ಥ ಇರುತ್ತದೆಯೇ ಹೊರತು, ಇಗೋ ಎಂದರೆ ಒಂದು definite ಅರ್ಥವಿರುವುದಿಲ್ಲ.

ಕೆಲವು ನಟರು ಸಹ ತಾವು ಜಿಮ್‍ಗೆ ಹೋಗಿಯೇ ನಟ ಆಗುತ್ತೀನಿ ಎಂದರೆ ಆಗುವುದಿಲ್ಲ. ಭಾಷೆ, ಸಂಸ್ಕೃತಿ, ಸಾಹಿತ್ಯದ ಬಗ್ಗೆ ತಿಳಿದುಕೊಳ್ಳೋದು, ಕಲೆಯ ಪ್ರಕಾರಗಳನ್ನು ಅರಿತುಕೊಳ್ಳೋದು, ಅದರಿಂದ ನನಗೆ ಹೆಸರಾಗಬೇಕೆಂದು ಬಯಸೋದು ಸಹ ಮುಖ್ಯ. ಎಲ್ಲಕ್ಕಿಂತ ಹೆಚ್ಚಾಗಿ, ಪ್ರತಿಯೊಬ್ಬರು ಗೆಲ್ಲಬೇಕೆಂಬ ಒತ್ತಡ ಯಾಕೆ? ಸೋಲು ಸಂತೋಷ ಯಾಕೆ ನಾವು ಕೊಟ್ಟಿಲ್ಲ? ಕ್ಷಮಿಸುವ ಸಂತೋಷವನ್ನು ನಾವು ಯಾಕೆ ಕೊಟ್ಟಿಲ್ಲ? ನಮಗೂ ಅವನೇನು ಹೇಳುತ್ತೇನೆ ಎನ್ನುವ ತಾಳ್ಮೆಯೇ ಇಲ್ಲ. ನಾನು ಅಂದುಕೊಂಡಿರುವ ಸಿನಿಮಾ ತೆಗೆದಿದ್ದೀಯಾ? ಅಂತಲೇ ಎಲ್ಲರೂ ಕೇಳೋದು. ಏನು ಹೇಳುತ್ತಾನೆ ಎನ್ನುವ ತಾಳ್ಮೆಯೇ ಯಾರಿಗೂ ಇಲ್ಲ.

ನಾನೇ ಈಗ ಮತ್ತೆ ಕಲಿಯಬೇಕಾದ ಪರಿಸ್ಥಿತಿಯಲ್ಲಿದ್ದೀನಿ. ಇಷ್ಟು ಸಿನಿಮಾಗಳನ್ನು ಮಾಡಿದ್ದೇನೆ, ಹೊಸಹೊಸ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದೇನೆ. ಇವತ್ತು ಹೊಸಬರ ಜೊತೆಗೆ ಮಾಡುವಾಗ, ಅವರು ಬೇರೇನೋ ಕೇಳುತ್ತಿದ್ದಾರೆ ಅಂತನಿಸುತ್ತಿದೆ. ಹಾಗಾಗಿ, ಇದುವರೆಗೂ ಕಲಿತಿದ್ದನ್ನು ಮರೆತು, ಹೊಸದಾಗಿ ಕಲಿಯಬೇಕು. ಇದೊಂದು ಸವಾಲು. ಖುಷಿಯಾಗುತ್ತಿದೆ. ಇತ್ತೀಚೆಗೆ ‘ರಾಯನ್‍’ ಸಿನಿಮಾದ ಸಮಾರಂಭದಲ್ಲಿದ್ದೆ. ಆ ಚಿತ್ರಕ್ಕೆ ರೆಹಮಾನ್‍ ಸಂಗೀತ ಸಂಯೋಜಿಸುತ್ತಿದ್ದು, ರೆಹಮಾನ್‍ ಚಿತ್ರರಂಗಕ್ಕೆ ಬಂದು 30 ವರ್ಷಗಳಾಗಿವೆ. ನನ್ನ ಮೊದಲ ತಮಿಳು ಚಿತ್ರಕ್ಕೆ ಅವರೇ ಸಂಗೀತ ನಿರ್ದೇಶಕರು.

30 ವರ್ಷಗಳ ನಂತರವೂ ನಾವಿನ್ನೂ ಇದ್ದೀವಲ್ಲ ಎನ್ನುವುದೇ ಬಹಳ ಸಂತೋಷದ ವಿಷಯ. ಒಬ್ಬ ಕಲಾವಿದ ಬೆಳೆಯೋದು ಬರೀ ಅವನ ಪ್ರತಿಭೆಯಿಂದ ಮಾತ್ರವಲ್ಲ. ಜನರ ಪ್ರೀತಿಯಿಂದ ಮತ್ತು ಅದಕ್ಕಿಂತ ಜನರು ಅವನ ಮೇಲಿಟ್ಟಿರುವ ನಂಬಿಕೆಯಿಂದ. ಆ ನಂಬಿಕೆಯನ್ನು 30 ವರ್ಷಗಳ ಕಾಲ ಉಳಿಸಿಕೊಂಡಿದ್ದೇವೆ ಎನ್ನುವುದೇ ನಮ್ಮ ಹೆಮ್ಮೆ ಆಗುತ್ತದೆ. ಏಕೆಂದರೆ, ಅವರು ನಮ್ಮನ್ನು ನಂಬಿ ಒಂದು ವೇದಿಕೆ ಕೊಟ್ಟಿದ್ದಾರೆ. ಅವರಿಗೆ ಇಷ್ಟ ಆದರಂತೂ, ನಿಮ್ಮನ್ನು ಪ್ರೀತಿಸೋಕೆ ಕಾರಣಗಳನ್ನು ಹುಡುಕುತ್ತಾನೆ. ಒಬ್ಬ ವ್ಯಕ್ತಿಯ ಬೆಳವಣಿಗೆ ಬರೀ ಅವನು ಬೆಳೆದ ಎತ್ತರ ನೋಡಿ ಲೆಕ್ಕ ಹಾಕುವುದಲ್ಲ, ಅವನು ಎತ್ತರವಾಗಿ ಬೆಳೆದ ಮೇಲೆ ಎಷ್ಟು ಜನರನ್ನ ಬೆಳೆಸಿದ ಎನ್ನುವುದು ಬಹಳ ಮುಖ್ಯ.

‘ನಾನು ನನ್ನ ಕನಸು’ ಇರಬಹುದು, ‘ಒಗ್ಗರಣೆ’ ಅಥವಾ ‘ಇದೆಂಥಾ ರಾಮಾಯಣ’ ಚಿತ್ರಗಳು ನನ್ನ ಅಭಿರುಚಿ. ತಂದೆ-ಮಗನ ಸಂಬಂಧದ ಕುರಿತು ಸಾಕಷ್ಟು ಚಿತ್ರೆಗಳು ಬಂದಿವೆ. ಮಹಾತ್ಮ ಗಾಂಧಿ ಬಿಟ್ಟರೆ ನಾನೇ ಫಾದರ್‍ ಆಫ್‍ ದಿ ನೇಷನ್‍ ಅಂತಾರೆ. ಏಕೆಂದರೆ, ಅಷ್ಟೊಂದು ತಂದೆಯ ಪಾತ್ರಗಳನ್ನು ನಾನು ಇದುವರೆಗೂ ಮಾಡಿಬಿಟ್ಟಿದ್ದೀನಿ. ಇದು ತೀವ್ರವಾಗಿ ಕಾಡುವ ಸಿನಿಮಾ. ತಂದೆ-ಮಗನ ಬಾಂಧವ್ಯಕ್ಕಿಂತ, ಇಲ್ಲಿ ಮಗನನ್ನು ಅರ್ಥ ಮಾಡಿಕೊಳ್ಳುವುದರ ಜೊತೆಗೆ ಹಿರಿಯರನ್ನೂ ಅರ್ಥ ಮಾಡಿಕೊಳ್ಳಬೇಕು ಎಂದು ಸೂಕ್ಷ್ಮವಾಗಿ ಹೇಳಲಾಗಿದೆ. ಪರಿಸ್ಥಿತಿಯ ವಿಕೋಪಗಳಿಗೆ ಅಥವಾ ಕೆಲವು ಒತ್ತಡಗಳಿಗೆ ಆ ಸಂಬಂಧ ಪ್ರಶ್ನಿಸಲ್ಪಡುತ್ತದೆ. ಜೀವನದಲ್ಲಿ ಕೆಲವು ಸಂಘರ್ಷಗಳು ಬಂದಾಗ ನಮಗೊಂದು ಲಿಬರೇಶನ್ ‍ಸಿಗುತ್ತದೆ. ಒಂದು ಪರಿಸ್ಥಿತಿ ಎದುರಾದಾಗ ನಮ್ಮಳೊಗಿರುವ ಇನ್ನೊಂದು ಶಕ್ತಿ ನಮಗೆ ಅರ್ಥವಾಗೋದು ಅಥವಾ ನಾವು ಇನ್ನಷ್ಟು ಬೆಳೆಯೋದಕ್ಕೆ ಸಾಧ್ಯ. ಅದನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ಇದೊಂದು ಜನ ಸಾಮಾನ್ಯರ ಸಿನಿಮಾ. ನಿಜವಾಗಲೂ ಕಾಡುವ ಸಿನಿಮಾ.

ಒಬ್ಬ ಗಂಡಸು ಮಕ್ಕಳು ಹುಟ್ಟುವ ತನಕ ಬರೀ ಒಬ್ಬ ಗಂಡ ಆಗಿರುತ್ತಾನೆ. ಮಕ್ಕಳು ಹುಟ್ಟಿದ ನಂತರ ಅಪ್ಪ ಎನ್ನುವ ಸ್ಥಿತಿ. ಅಪ್ಪನಿಗೂ, ಮಕ್ಕಳಿಗೂ ಒಂದೇ ವಯಸ್ಸು. ಅದರಲ್ಲೂ ಒಂದು ಹೆಣ್ಣು ಮಗಳ ಜೊತೆಗಿನ ಸಂಬಂಧ ಎಂದರೆ, ಅವನ ಜೀವನದಲ್ಲಿ ಬರುವ ಎಲ್ಲಾ ಸಂಬಂಧಗಳು, ಅಂದರೆ ತಾಯಿ ಇರಬಹುದು, ಹೆಂಡತಿ ಇರಬಹುದು, ತಂಗಿ ಇರಬಹುದು, ಸ್ನೇಹಿತೆ ಇರಬಹುದು. ಆದರೆ, ಮಗಳ ಜೊತೆಗೆ ಬೇರೆ ಸಂಬಂಧ ಇರುತ್ತದೆ. ಚೆನ್ನಾಗಿ ಬೆಳಸಿ ಯಾವುದನ್ನೂ ಎದುರು ನೋಡದೆ ಬಿಟ್ಟು ಕೊಡುವುದು. ತಂದೆ-ಮಗನ ಸಂಬಂಧ ಹಾಗಿರುವುದಿಲ್ಲ. ನನ್ನ ನಂತರ ನೀನು, ನನ್ನ ಇನ್ನೊಂದು ಛಾಯೆ ನೀನು ಎನ್ನುವ ಸಂಬಂಧ ಅದು. ಅದೊಂಥರಾ Love-Hate relationship. ತಂದೆ ತನ್ನ ಮಗನಿಗೆ ಕಲಿಸೋದಕ್ಕಿಂತ, ಅವನ behaviourನಿಂದ ಮಕ್ಕಳು ಕಲಿಯೋದು ತುಂಬಾ ಇರುತ್ತದೆ.

ನನಗೆ ನನ್ನ ಮಗಳ ಜೊತೆಗೆ ಇರುವ relationship ಬೇರೆ, ಮಗನ ಜೊತೆಗೆ ಇರುವ ಸಂಬಂಧ ಬೇರೆ. ಇವತ್ತಿನ ಪ್ರಪಂಚದಲ್ಲಿ ಹೊರಗೆ ಹೋಗಬೇಕು. ಸಾಕಷ್ಟು ಸಮಸ್ಯೆಗಳು ಇರುತ್ತವೆ. ಅದನ್ನು ಹೇಳಿಕೊಳ್ಳುವುದಕ್ಕೆ ಆಗಲ್ಲ. ಅದನ್ನು ಅವರೇ ನಿಭಾಯಿಸಬೇಕು. ಮಗ ಎಷ್ಟೇ ದೊಡ್ಡವನಾದರೂ, ತಂದೆಗೆ ಇನ್ನೂ ಚಿಕ್ಕವನು ಎಂದನಿಸುತ್ತದೆ. ಅದರ ಜೊತೆಗ ಮಗನಿಗೆ ತನ್ನದೇ ಆದ ನಿರ್ಧಾರಗಳೂ ಇರುತ್ತವೆ. ಅದನ್ನೂ ಒಪ್ಪಿಕೊಳ್ಳಬೇಕಾಗುತ್ತದೆ. ನಾನು ನಿನಗೆ ಇಷ್ಟು ಮಾಡಿದೆ, ನೀನೇನು ವಾಪಸ್ಸು ಕೊಡುತ್ತೀಯ ಎನ್ನುವುದಕ್ಕಿಂತ ಅವನನ್ನೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಒಬ್ಬ ನಟನಾಗಿ ನನಗೆ ‘ನಾನು ನನ್ನ ಕನಸು’ ಬಹಳ ಇಷ್ಟವಾದ ಮತ್ತು ಕಾಡುವ ಸಿನಿಮಾ. ಏಕೆಂದರೆ, ನನ್ನ ಹೆಂಡತಿ ನನ್ನ ಹೆಂಡತಿಯಾಗಿಯೇ ಇರುತ್ತಾಳೆ. ಮಗಳು ಮದುವೆಯಾದಾಗ, ಮಾವ ಆಗ ನನಗೆ ಅರ್ಥಾವಾಗುತ್ತಾನೆ. ಅಲ್ಲಿಯವರೆಗೂ ಹೆಂಡತಿ ಅಪ್ಪ ಅಂತ ಜಗಳ ಆಡುತ್ತಿರುತ್ತೀವಿ. ನನ್ನ ಮಗಳಿಗೆ ಮಾವ ಸಿಗುತ್ತಾನೆ ಎಂದಾಗ, ನನಗೆ ಹೆಂಡತಿ ಅರ್ಥವಾಗುತ್ತಾ ಹೋಗುತ್ತಾಳೆ. ಅವಳು ಇನ್ನೊಬ್ಬಳ ಮಗಳಾಗಿದ್ದಳು, ನಾನು ಅವಳನ್ನು ಇನ್ನೊಬ್ಬರ ಮಗಳು ಅಂತ ನೋಡಿರಲೇ ಇಲ್ಲ. ನನ್ನ ಮಗಳನ್ನು ನಾನು ನೋಡುತ್ತಿದ್ದ ಹಾಗೆ, ಅವಳ ಅಪ್ಪ ಸಹ ಅವಳನ್ನು ಹಾಗೆಯೇ ನೋಡುತ್ತಿದ್ದ. ಮಗಳು ಮತ್ತು ತಂದೆಯ ಸಂಬಂಧದಲ್ಲಿ ಆ ಚಿತ್ರ ನನಗೆ ಬಹಳಷ್ಟು ವಿಷಯಗಳನ್ನು ಕಲಿಸಿತು. ಆ ಚಿತ್ರವನ್ನು ಬರೆಯುತ್ತಾ, ನಿರ್ದೇಶನ ಮಾಡುತ್ತಾ ತುಂಬಾ ಕಲಿತೆ. ಹಾಗಾಗಿ, ನನಗೆ ಅದು ಬಹಳ ಇಷ್ಟವಾದ ಚಿತ್ರ.

ಮಾಣಿಕ್ಯ ಒಳ್ಳೆಯದೇ? ಅದು ಕೋತಿ ಕೈಗೆ ಸಿಕ್ಕಿದರೆ? ಅದರ ಬಗ್ಗೆ ನಾವು ಯೋಚಿಸಬೇಕು. ಪ್ಲಸ್‍, ಮೈನಸ್‍ ಇದ್ದೇ ಇರುತ್ತದೆ. ಒಳಗಿನ ಅಸಹ್ಯವೂ ಹೊರಗೆ ಬರುತ್ತದೆ, ವಿಕಾರಗಳೂ ಹೊರಗ ಬರುತ್ತಿವೆ. ಅವೆರಡೂ ಬರಬೇಕು. ಸೋಷಿಯಲ್‍ ಮೀಡಿಯಾಗಳು ಬಹಳ ಮುಖ್ಯವಾದ ವಿಷಯಗಳನ್ನು ತಲುಪಿಸೋಕೆ ಮಹತ್ವದ ಪಾತ್ರ ವಹಿಸುತ್ತಿದೆ. ಇದರಲ್ಲಿ ಒಳ್ಳೆಯದೂ ಇದೆ, ಕೆಟ್ಟದ್ದೂ ಇದೆ. ಅವೆರಡರಲ್ಲಿ ನಾವು ಯಾವುದನ್ನು ತೆಗೆದುಕೊಳ್ಳುತ್ತೇವೆ ಎನ್ನುವುದು ಬಹಳ ಮುಖ್ಯ. ‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಲ್ಲಿ ಅನಂತ್‍ ನಾಗ್‍ ಒಂದು ಸಂಭಾಷಣೆ ಹೇಳ್ತಾರೆ. ‘ನಮ್ಮೆಲ್ಲರಲ್ಲೂ ಕಪ್ಪು ನಾಯಿ, ಬಿಳಿ ನಾಯಿ ಇರತ್ತೆ. ಕಪ್ಪು ನಾಯಿ ಕೆಟ್ಟದ್ದು, ಬಿಳಿ ನಾಯಿ ಒಳ್ಳೇದು.

ಅವೆರಡರಲ್ಲಿ ನಾವು ಯಾವುದಕ್ಕೆ ಊಟ ಜಾಸ್ತಿ ಹಾಕುತ್ತೇವೆ ಅನ್ನೋದು ಮುಖ್ಯ’ ಅಂತಾರೆ. ನಾವು ಎರಡನ್ನೂ ನೋಡಬೇಕು. ಅಣು ಬಾಂಬ್‍ ಕಂಡುಹಿಡಿದಿದ್ದು ಎನರ್ಜಿಗೆ, ಇನ್ನೊಬ್ಬರನ್ನು ಕೊಲ್ಲುವುದಕ್ಕೆ ಅಲ್ಲ. ಇಲ್ಲಿ ನಮ್ಮ ಮನಸ್ಸಾಕ್ಷಿ, ಆತ್ಮಾವಲೋಕನ ಬಹಳ ಮುಖ್ಯ. ಇದನ್ನು ಯಾರೋ ಒಬ್ಬರು ನೋಡುವುದಿಲ್ಲ. ಹೆಣ್ಮಕ್ಕಳು ನೋಡುತ್ತಿರುತ್ತಾರೆ. ಸಮಾಜದ ಒಂದು ಸ್ವಾಸ್ತ್ಯ ನೋಡುತ್ತಿರುತ್ತದೆ. ಅವರಿಗೆ ನಾವೇನು ತಲುಪಿಸಬೇಕು, ಯಾವುದು ಮುಖ್ಯ ಆಗಬೇಕು ಎಂಬುದು ನಮ್ಮ ಕೈಯಲ್ಲಿರೋದು. ಇವತ್ತಿನ ಯುವ ಜನಾಂಗದ ತಪ್ಪೇನು ಇಲ್ಲ. ಒಬ್ಬಿಬ್ಬರು ತಪ್ಪು ಮಾಡಿದರೆ, ಎಲ್ಲರೂ ತಪ್ಪು ಮಾಡುತ್ತಾರೆ ಎನ್ನುವುದು ತಪ್ಪು. Let’s be responsible ಅಷ್ಟೇ. (ಬರಹ : ಚೇತನ್ ನಾಡಿಗೇರ್, ಫೇಸ್ ಬುಕ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಶ್ರಮ ಸಂಸ್ಕೃತಿ ಗೌರವಿಸುವ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ

Published

on

  • ಶಂಕರ ದೇವರು ಹಿರೇಮಠ, ಸಾಹಿತಿಗಳು

ಮಸ್ಕಿ ಭಾರತ ದೇಶ ಕೃಷಿ ಪ್ರಧಾನವಾದ ದೇಶ.ಇಲ್ಲಿ ಹಲವಾರು ಭಾಷೆ, ಹಲವಾರು ಸಂಸ್ಕೃತಿ ಹಾಗೂ ಹಲವಾರು ರಾಜ್ಯಗಳನ್ನು ಒಳಗೊಂಡ ಭಾರತ. ತನ್ನೊಳಗೆ ವಿಭಿನ್ನ ಸಂಸ್ಕೃತಿಯನ್ನು ಐತಿಹಾಸಿಕ ಹಿನ್ನೆಲೆಯನ್ನು ಒಳಗೊಂಡಿದೆ. ಇಲ್ಲಿ ಆಚರಿಸುವ ಬಹುತೇಕ ಹಬ್ಬಗಳು ಹಳ್ಳಿಯ ಸೊಗಡಿನೊಂದಿಗೆ ಸಮ್ಮಿಲಿತಗೊಂಡಿವೆ. ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಬಹುತೇಕ ಹಬ್ಬಗಳ ಹಿನ್ನೆಲೆಯನ್ನು ಒಳಗೊಂಡಿವೆ .

ಮಳೆಗಾಲದಲ್ಲಿ ಬರುವ ವಿಶೇಷ ಹಬ್ಬವೇ ಮಣ್ಣೆತ್ತಿನ ಅಮಾವಾಸ್ಯೆ. ಮಳೆಗಾಲದ ಪ್ರಾರಂಭದ ದಿನಗಳಲ್ಲಿ ಬರುವ ಈ ಹಬ್ಬ ಉತ್ತರ ಕರ್ನಾಟಕದಲ್ಲಿ ಸಂಭ್ರಮ ಮನೆ ಮಾಡುತ್ತದೆ .ಮುಂಗಾರು ಪ್ರಾರಂಭವಾಗಿ ರೈತರು ಕೃಷಿ ಚಟುವಟಿಕೆಯನ್ನು ಪ್ರಾರಂಭಿಸಿ ಹೊಲಗಳನ್ನು ಹಸನು ಮಾಡಿ ಬಿತ್ತನೆ ಹಾಗೂ ನಾಟಿಯನ್ನು ಮಾಡಿರುತ್ತಾರೆ. ಹೊಲಗಳು ಹಸಿರಿನಿಂದ ಕಂಗೊಳಿಸುತ್ತಿರುತ್ತವೆ ಇಂತಹ ದಿನಗಳಲ್ಲಿ ರೈತರು ವಿಶ್ರಾಂತಿಯನ್ನು ಪಡೆಯುವ ಜೊತೆಗೆ ತಮ್ಮ ಒಡನಾಡಿಯಾದ ಜಾನುವಾರುಗಳನ್ನು, ಎತ್ತುಗಳನ್ನು ಪ್ರೀತಿಯಿಂದ ಪೋಷಿಸುತ್ತಾರೆ .ಕಾರ ಹುಣ್ಣಿಮೆಯ ನಂತರ ಬರುವ ಮಣ್ಣೆತ್ತಿನ ಅಮವಾಸೆ ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಬಹು ಸಂಭ್ರಮದ ಹಬ್ಬ .

ರೈತರ ಒಡನಾಡಿ ಹಾಗೂ ರೈತರ ಉಸಿರೆಂದರೆ ಎತ್ತುಗಳು ಎತ್ತುಗಳೊಂದಿಗೆ ರೈತರು ಅವಿನಾಭಾವ ಸಂಬಂಧವನ್ನು ಹೊಂದಿರುತ್ತಾರೆ .ಎತ್ತುಗಳನ್ನು ಕೇವಲ ಪ್ರಾಣಿಗಳೆಂದು ಪರಿಗಣಿಸದೆ ತಮ್ಮ ಮನೆಯ ಸದಸ್ಯರಂದೇ ಪರಿಗಣಿಸಿ ಅವುಗಳನ್ನು ಪ್ರೀತಿಯಿಂದ ಅಕ್ಕರೆಯಿಂದ ಸಾಕುತ್ತಿರುತ್ತಾರೆ. ರಾಮ, ಲಕ್ಷ್ಮಣ ಭೀಮ, ಕರಿಯ, ಚೆನ್ನ,ಬಸವ, ಕೆಂಪ ಹಾಗೂ ತಮ್ಮ ನೆಚ್ಚಿನ ನಾಯಕ ನಟರ ಹೆಸರನ್ನು ತಮ್ಮ ಪ್ರೀತಿಯ ಎತ್ತುಗಳಿಗೆ ಇಟ್ಟು ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಾರೆ. ರೈತರ ಕಷ್ಟ ,ಸುಖಗಳಲ್ಲಿ ಹಾಗೂ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗುವ ಎತ್ತುಗಳಿಗೆ ರೈತರು ಅಪಾರ ಗೌರವವನ್ನು ನೀಡುತ್ತಾರೆ.

ಶಂಕರ ದೇವರು ಹಿರೇಮಠ, ಸಾಹಿತಿಗಳು

ಮಣ್ಣೆತ್ತಿನ ಅಮಾವಾಸ್ಯೆ ದಿನದ ಮೊದಲೇ ಹಳ್ಳ, ಹೊಳೆ, ಗದ್ದೆಗಳಿಂದ ಮಣ್ಣನ್ನು ತಂದು ಜೋಡಿ ಎತ್ತುಗಳನ್ನು ಮಾಡಿ ಎತ್ತುಗಳಿಗೆ ಮೇವು ಹಾಕುವ ಒಂದು ಗೋದಲಿಯನ್ನು ಮಾಡುತ್ತಾರೆ. ಎತ್ತುಗಳನ್ನು ಮಣ್ಣಿನಿಂದಲೇ ಮಾಡಿ ಅವುಗಳನ್ನು ದೇವರ ಮನೆಯ ಜಗಲಿ ಮೇಲಿಟ್ಟು ಪೂಜೆ ಮಾಡುತ್ತಾರೆ. ಇನ್ನೂ ಕೆಲವರು ಹೊಲಗಳಿಗೆ ತೆಗೆದುಕೊಂಡು ಹೋಗಿ ಅಲ್ಲಿ ಪೂಜೆ ಮಾಡುತ್ತಾರೆ .

ರೈತ ಹಾಗೂ ಎತ್ತುಗಳಿಗೆ ಅವಿನಾಭಾವ ಸಂಬಂಧ ಶತಶತಮಾನಗಳಿಂದ ಇದೆ. ಭಾರತದ ಪ್ರತಿಯೊಂದು ಕೃಷಿ ಕುಟುಂಬವು ಕೃಷಿಯೊಂದಿಗೆ ಹಾಗೂ ಮಣ್ಣಿನೊಂದಿಗೆ ಅವಿನಾಭಾವ ಸಂಬಂಧದ ನಂಟಿದೆ .ಮಳೆಗಾಲದಲ್ಲಿ ಬಿತ್ತನೆಯಾಗಿ ಬೆಳೆ ಬೆಳೆದು ಹಸಿರಿನಿಂದ ಭೂಮಿ ಕಂಗೊಳಿಸುತ್ತಿರುವ ಈ ದಿನಗಳಲ್ಲಿ ಕೃಷಿಯಲ್ಲಿ ಭಾಗಿಯಾಗುವ ಎತ್ತುಗಳಿಗೆ ಗೌರವಿಸುವ ಮೂಲಕ ಈ ದಿನಗಳಲ್ಲಿ ಶ್ರಮ ಶ್ರಮ ಸಂಸ್ಕೃತಿಯನ್ನು ಗೌರವಿಸುವ ಕಾರ್ಯ ಶತಮಾನಗಳಿಂದ ನಡೆದುಕೊಂಡು ಬಂದಿದೆ .

ಹಳ್ಳಿಗಳಲ್ಲಿ ಕುಂಬಾರರು ತಯಾರಿಸಿದ ಸುಂದರವಾದ ಎತ್ತುಗಳನ್ನು ಕೊಂಡು ತಂದು ಅವುಗಳಿಗೆ ಪೂಜೆ ಸಲ್ಲಿಸಿ ಸಂಭ್ರಮಿಸಿ ಸಂತೋಷಪಡುವರು. ರೈತರು ಹಿಂದೆ ಎತ್ತುಗಳನ್ನು ಕೊಟ್ಟು ಅದರ ಬದಲಾಗಿ ದವಸ ಧಾನ್ಯಗಳನ್ನು ಪಡೆಯುತ್ತಿದ್ದರು. ಇಂದು ನಗರೀಕರಣದ ಪರಿಣಾಮ ಎತ್ತುಗಳು ಮಾರಾಟದ ಸರಕಾಗಿ ಪರಿಣಮಿಸಿವೆ. ಆದರೂ ಇನ್ನೂ ಹಳ್ಳಿಗಳಲ್ಲಿ ಎತ್ತುಗಳನ್ನು ಪೂಜ್ಯನೀಯ ಸ್ಥಾನದಲ್ಲಿ ಇಟ್ಟು ಗೌರವಿಸುತ್ತಾರೆ. ಮಣ್ಣೆತ್ತಿನ ಅಮಾವಾಸ್ಯೆ ವಿಶೇಷವಾಗಿ ಮಕ್ಕಳಿಗೆ ಸಂಭ್ರಮದ ಹಬ್ಬ. ಹಬ್ಬದ ಮರುದಿನ ಮಕ್ಕಳು ಮನೆ ಮನೆಗೆ ತೆರಳಿ ಕುಂಟೆತ್ತು ಬಂದಿದೆ ಅಂತ ಹೇಳಿ ಅಕ್ಕಿ, ಜೋಳ, ಕಾಳು, ಬೆಲ್ಲ ತಂದು ಅವುಗಳಿಂದ ಸಿಹಿ ಅಡಿಗೆ ಮಾಡಿಕೊಂಡು ಎಲ್ಲ ಮಕ್ಕಳು ಊಟ ಮಾಡಿ ಎತ್ತುಗಳಿಗೆ ಮತ್ತೊಮ್ಮೆ ಪೂಜೆ ಸಲ್ಲಿಸಿ ಅವುಗಳನ್ನು ವಿಸರ್ಜಿಸುವ ಪದ್ಧತಿ ರೂಢಿ ಇದೆ. ಮಕ್ಕಳೆಲ್ಲ ಸಂಭ್ರಮದಿಂದ ಈ ಕಾರ್ಯದಲ್ಲಿ ಭಾಗವಹಿಸಿ ಮಣ್ಣೆತ್ತಿನ ಅಮಾವಾಸ್ಯೆ ಯನ್ನು ಜೀವಂತವಾಗಿಸುವ ಕಾರ್ಯವನ್ನು ಈಗಲೂ ಮಾಡುತ್ತಿದ್ದಾರೆ .

ಈಗೀಗ ಕೃಷಿ ಚಟುವಟಿಕೆಗಳಿಗೆ ಹೆಚ್ಚಾಗಿ ಯಂತ್ರಗಳನ್ನು ಹಾಗೂ ಟ್ರ್ಯಾಕ್ಟರ್ ಗಳನ್ನು ಬಳಸುತ್ತಿರುವ ಕಾರಣದಿಂದ ಎತ್ತುಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ರೈತರ ಒಡನಾಡಿಯಾದ ಎತ್ತುಗಳು ಇಂದು ಪ್ರತಿಷ್ಠೆಯ ಪ್ರತೀಕವಾಗಿ ಇನ್ನೂ ಕುಟುಂಬದ ಕೆಲವರು ಲಕ್ಷ ಲಕ್ಷ ಹಣ ಕೊಟ್ಟು ಖರೀದಿಸಿ ಮನೆಗೆ ತಂದು ಎತ್ತುಗಳನ್ನು ಸಾಕುತ್ತಿದ್ದಾರೆ. ಎತ್ತುಗಳು ನಮ್ಮ ಅನ್ನದಾತರ ಗೌರವ ಪ್ರತೀಕ .ನಾವೆಲ್ಲರೂ ಕುಳಿತು ಊಟ ಮಾಡುವ ಪ್ರತಿಯೊಂದು ಅನ್ನದ ಅಗಳಿನ ಹಿಂದೆ ಕೋಟಿಗಟ್ಟಲೆ ರೈತರ ಶ್ರಮ ಇದೆ .ಆ ಶ್ರಮದ ಹಿಂದೆ ಎತ್ತುಗಳ ಒಡೆಯನಾದ ರೈತನ ಮೇಲಿನ ಪ್ರೀತಿ ಇದೆ .(ಬರಹ-ಶಂಕರ ದೇವರು ಹಿರೇಮಠ, ಸಾಹಿತಿಗಳು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending