ನೆಲದನಿ
ತತ್ವಪದಕಾರ ಡಿ.ಬಿ.ಓಬಯ್ಯ ಅವರ ದಾರ್ಶನಿಕ ನೆಲೆಯಲ್ಲಿ ಕನ್ನಡ ನೆಲದ ಸೊಗಡು

ತತ್ವಪದ ಸಾಹಿತ್ಯ ಪ್ರಕಾರವು ಜಾನಪದದ ಒಂದು ಸ್ವತಂತ್ರ ಭಾಗವಾಗಿ ಬೆಳೆದುಬಂದಿದೆ. ತತ್ವಪದಕಾರರು ತಾವು ಕಂಡುಂಡ ನೋವು, ನಲಿವು ಹಾಗೂ ಬದುಕಿನ ಹತಾಶೆಗಳನ್ನು ತಮ್ಮ ಅನುಭಾವಿಕ ದರ್ಶನದ ಮೂಲಕ ಪದಕಟ್ಟಿ ಹಾಡುತ್ತ ಬಂದಿದ್ದಾರೆ. ಕರ್ನಾಟಕದಲ್ಲಿ ತತ್ವಪದ ಪರಂಪರೆಯು ಉಲುಸಾಗಿ ಬೆಳೆದು ಬಂದಿರುವುದು ಉತ್ತರ ಕರ್ನಾಟಕದಲ್ಲಿ.
ಈ ಭಾಗದಲ್ಲಿ ಇದು ತನ್ನ ನೆಲೆಯನ್ನು ಕಂಡುಕೊಳ್ಳುವುದಕ್ಕೆ ಹಲವಾರು ಕಾರಣಗಳಿವೆ. ಇದನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ಪ್ರಾಂತ್ಯವು ಅತ್ಯಂತ ಹಿಂದುಳಿದ ಭಾಗವಾಗಿದ್ದು ಸಾಮಾನ್ಯ ಜನತೆ ಹಾಗೂ ದೀನ ದಲಿತರ ಬದುಕು ತುಂಬ ದುಸ್ತರದಲ್ಲಿತ್ತು. ಹಾಗೆಯೇ “14ನೇ ಶತಮಾನದಿಂದ ಕರ್ನಾಟಕದ ಉತ್ತರ ಭಾಗದಲ್ಲಿ ಇಸ್ಲಾಮ್ ಮೂಲದ ಬಹಮನಿ ರಾಜ್ಯವು ಹುಟ್ಟಿಕೊಂಡು ನೆಲೆಯೂರಲು ಸ್ಥಳೀಯ ಜನಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡವು. ಉತ್ತರದಿಂದ ಬಂದ ಸೂಫಿ ಪಂಥದ ಸಂತರು ಜನಸಾಮಾನ್ಯರ ಸಮುದಾಯಗಳಲ್ಲಿ ಬೆರೆತರು. ತಮ್ಮ ಸರಳ ಜೀವನ ಕ್ರಮದಿಂದ ಅನುಭಾವದಿಂದ ಜನರಿಗೆ ಹತ್ತಿರವಾದರು.
ಧರ್ಮ ಹೊರತಾಗಿ ಧಾರ್ಮಿಕ ನೆಲೆಯಿಂದ ತಮ್ಮ ಸರಳ ತತ್ವಗಳನ್ನು ಪ್ರಸಾರ ಮಾಡಿದರು. ಸ್ಥಳೀಯ ಜನಸಮುದಾಯಗಳಲ್ಲಿ ಯೋಗ, ಧ್ಯಾನ ಅನುಭಾವದ ಜೀವನ ಇತ್ತು. ಅವುಗಳ ಜೊತೆಗೆ ಸೂಫಿ ಪಂಥವು ಸೇರಿಕೊಂಡಿತು.” (ಅಮರೇಶ ನುಗಡೋಣ , ತತ್ವಪದ ಸಾಹಿತ್ಯ, ಪು-20) ಹಾಗೆಯೇ ಶರಣ ಚಳವಳಿಯು ರೂಪ ತಳೆದದ್ದು ಕೂಡ ಉತ್ತರ ಕರ್ನಾಟಕದ ಭೌಗೋಳಿಕ ಪರಿಸರದಲ್ಲಿ. ಹೀಗಾಗಿ ಈ ಭಾಗದ ಜನತೆಯ ಸಂವೇದನೆಯನ್ನು ಜಾನಪದ ನೆಲೆಗಟ್ಟಿನಲ್ಲಿ ತತ್ವಪದಕಾರರು ಪದಕಟ್ಟಿ ಹಾಡುತ್ತ ಬಂದಿದ್ದಾರೆ. ಈ ತತ್ವಪದಕಾರರು ತಮ್ಮ ಆರಾಧ್ಯ ದೈವ ಅಥವಾ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿನ ಸ್ಥಳೀಯ ಗುರುವಿನ ಮುಖಾಂತರ ದೀಕ್ಷೆ ಪಡೆದು ಇಲ್ಲವೇ ಅವರ ಶಿಷ್ಯನಾಗಿ ತತ್ವಪದ ಪರಂಪರೆಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಈ ತತ್ವಪದಕಾರರು ಜನ ಬದುಕಿನ ಒಂದು ಭಾಗವಾಗಿಯೂ ಸ್ವತಂತ್ರ ನೆಲೆಯಲ್ಲಿ ತತ್ವಪದಗಳನ್ನು ರಚಿಸಿಕೊಂಡು ಹಾಡು ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
ಇಂತಹ ತತ್ವಪದಕಾರರಲ್ಲಿ ಡಿ.ಬಿ.ಓಬಯ್ಯನವರು ಒಬ್ಬರಾಗಿದ್ದಾರೆ. ಶ್ರೀಯುತರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಚಿನ್ನೋಬನಹಳ್ಳಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಇವರು ‘ಕುಡತಿನಿ ಶಂಕ್ರಪ್ಪತಾತ’ನವರ ಅನುಯಾಯಿ ಪಂಥದಿಂದ ದೀಕ್ಷೆಯನ್ನು ಪಡೆದುಕೊಂಡು ತತ್ವಪದ ಪರಂಪರೆಯಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
ನಮ್ಮ ಸಮಾಜದಲ್ಲಿ ದಲಿತ ತತ್ವಪದಕಾರರನ್ನು ತೃತಿಯ ಜಗತ್ತನ ತತ್ವಪದಕಾರರು ಎಂಬುದಾಗಿ ಗುರುತಿಸಲಾಗಿದೆ. ಇವರು ಸಮಾಜದಲ್ಲಿ ಅತ್ಯಂತ ತಿರಸ್ಕಾರಕ್ಕೆ ಗುರಿಯಾಗಿರುವ ಕಾರಣದಿಂದ ಇವರನ್ನು ತೃತಿಯ ಜಗತ್ತಿನ ತತ್ವಪದಕಾರರೆಂದು ಕರೆಯಲಾಗಿದೆ. ಈ ವರ್ಗದ ಅನುಭಾವಿಗಳು ಜಾತಿ, ಮತ, ಪಂಥಗಳನ್ನು ಮೆಟ್ಟಿನಿಂತು ಸಮಾಜದ ಎಲ್ಲ ವಲಯಗಳನ್ನು ಕುರಿತು ಪದಕಟ್ಟಿ ಹಾಡಿದ್ದಾರೆ. “ತೃತಿಯ ಜಗತ್ತಿನ ತತ್ವಪದಕಾರರು ಇತರೆ ತತ್ವಪದಕಾರರಿಗಿಂತ ಕಡಿಮೆ ಇಲ್ಲವೆಂಬ ಸತ್ವವನ್ನು ಮನನ ಮಾಡಿಕೊಟ್ಟಿದ್ದಾರೆ. ಈ ಹೊತ್ತಿನ ದಲಿತ ಬಂಡಾಯದ ಸ್ಮøತಿ ಪಟಲಗಳಿರಲಿಲ್ಲ. ಆಕ್ರೋಶದ ಅಲೆಗ ಇರಲಿಲ್ಲ. ಕಠೋರತೆಯ ವ್ಯಾಕುಲತೆ ಇಲ್ಲ. ಇವರು ‘ದೇಶಿ’ಯಲ್ಲಿ ಪ್ರಾದೇಶಿಕತೆಯೊಳಗೆ ತಿರಸ್ಕøತ ಜನರ ಜೀವಂತ ಪರದೆಯಲ್ಲಿ ಹೊಸತನ್ನು ಆ ಕಾಲಘಟ್ಟದಲ್ಲಿ ಕಟ್ಟಿ ಹಾಡಿದ್ದಾರೆ. ಇವರ ತತ್ವಪದಗಳ ಒಳಸುಳಿಯೊಳಗೆ ಮುಟ್ಟಿಸಿಕೊಳ್ಳಲಾರದ ಅಳಲು, ದಾಸ್ಯತ್ವ ದಿನನಿತ್ಯದ ಜ್ವಲಂತ ಅಸ್ಪøಶ್ಯತೆ, ಬದುಕಿನ ಜಂಜಾಟ, ಕಂಡುಂಡ ನೋವು, ಅನುಭವಿಸಿದ ಭಯಂಕರವಾದ ಗುಲಾಮತ್ವ, ಶತಶತಮಾನ ಗಳಿಂದಲೂ ಶೋಷಣೆಗೆ ಬಲಿಯಾಗಿ ಬೆಳಕನ್ನು ಕಾಣದ ಪರಿಸರದಲ್ಲಿ ಜೀವಿಸುವ ಜೀವಂತ ಬದುಕಿನ ಬವಣೆಗಳ ಚಿತ್ರಣವನ್ನು ಕೊಟ್ಟಿದ್ದಾರೆ. ಇವರ ವೈಚಾರಿಕ ತಾತ್ವಿಕತೆಯು ತತ್ವಪದಗಳಲ್ಲಿ ಅಡಗಿಕೊಂಡಿದೆ. ಅಲ್ಲಿ ಭ್ರಷ್ಟತೆ, ಮೋಸ, ದಗ, ವಂಚನೆ, ತಲೆಹಿಡುಕತನ, ಅನ್ಯಾಯದ ವಿರುದ್ಧ ಕಿಡಿಕಾರುವುದು ಕಂಡುಬರುತ್ತದೆ.” (ಹೆಬ್ಬಾಲೆ. ಕೆ. ನಾಗೇಶ್, ಬಿಂಬದೊಳಗಣ ಪ್ರಾಣ, ಪು-65) ಇಂತಹ ದಲಿತ ತತ್ವಪದಕಾರರ ಪರಂಪರೆಯ ಮುಂದುವರೆದ ರೂಪವಾಗಿ ಕಾಣುವ ಡಿ.ಬಿ.ಓಬಯ್ಯನವರು ಸಮಾಜಿಕ ತಲ್ಲಣಗಳನ್ನು ಕುರಿತ ತತ್ವಪದಗಳನ್ನು ಹಾಡುತ್ತ ಹಾಗೂ ಸ್ವತಃ ತತ್ವಪದಗಳನ್ನು ರಚಿಸುವ ಮೂಲಕ ಈ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
ಇವರು ಹಲವು ಕಡೆಗಳಲ್ಲಿ ನಡೆಸುವ ಯುವಜನೋತ್ಸವ, ಧಾರ್ಮಿಕ ಕಾರ್ಯಗಳು ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕವಾಗಿ ತತ್ವಪದ ಪ್ರಕಾರವನ್ನು ಬೆಳೆಸಿಕೊಂಡು ಬಂದಿದ್ದಾರೆ. ಜಾನಪದದ ಶ್ರೀಮಂತ ಸೆಲೆಯಾಗಿರುವ ಚಿನ್ನೋಬನಹಳ್ಳಿ ಗ್ರಾಮಕ್ಕೆ ಇವರ ಈ ಕೊಡುಗೆಯು ಕೂಡ ಮಹತ್ತರವಾದ ಮೈಲಿಗಲ್ಲನ್ನು ನಿರ್ಮಿಸಿದೆ. ಜಾನಪದ ಕ್ಷೇತ್ರದ ಬಗೆಗಿನ ನನ್ನ ವೈಯಕ್ತಿಕ ಆಸಕ್ತಿ ಹಾಗೂ ಕುತುಹಲದಿಂದಾಗಿ ಈ ಗ್ರಾಮದ ದಲಿತ ಸಮುದಾಯದ ಆರಾಧ್ಯ ದೈವವಾದ ಕಂಚೋಬಳೇಶ್ವರ ದೇವರ ಮೇಲೆ ಜಾನಪದ ಹಾಡುಗಾರ್ತಿಯರು ಸೋಬಾನೆ ಪದಗಳನ್ನು ಹಾಡುತ್ತಾರೆಂಬ ಜಾಡುಹಿಡಿದು ಹೋದಾಗ ಈ ಕ್ಷೇತ್ರದಲ್ಲಿ ಪರಿಣ ತಿ ಇರುವ ಡಿ.ಬಿ.ಓಬಯ್ಯನವರ ಹೆಂಡತಿಯಾದ ಮಾರಕ್ಕನವರ ಹೆಸರು ಸೂಚಿಸಿದರು. ಸಂಜೆಯ ವೇಳೆ ಬಿಡುವಿನ ವೇಳೆಯನ್ನು ಗುರುತಿಸಿಕೊಂಡು ಅವರ ಒಂದು ಸಂಚಿಕೆಯ ಧಾರವಾಯಿ ದಿನಕ್ಕೆ ಕನ್ನಹಾಕಿ, ದೇವರ ಮೇಲಿನ ಸೋಬಾನೆ ಹಾಡುಗಳನ್ನು ಹಾಡುವಂತೆ ಕೇಳಿಕೊಂಡೆವು. ಕ್ಷಣಾರ್ಧದಲ್ಲಿ ನಾವು ಮಾರಕ್ಕ ಓಬಯ್ಯ ದಂಪತಿಗಳ ಕುಟುಂಬದ ಸದಸ್ಯರಾಗಿ ಮಾರಕ್ಕನವರ ತಂಡದಿಂದ ದೇವರ ಮೇಲಿನ ಸೋಬಾನೆ ಹಾಡುಗಳನ್ನು ಹಾಡಿಸಿ ಅವುಗಳನ್ನು ದಾಖಲಿಕರಿಸಿಕೊಂಡೆವು.
ಈ ಸಂದರ್ಭಕ್ಕಾಗಲೇ ಮಾರಕ್ಕನ ಗಂಡನಾದ ಡಿ.ಬಿ.ಓಬಯ್ಯನವರು ತತ್ವಪದಕಾರರೆಂಬ ವಿಚಾರ ತಿಳಿದು ಅವರಿಂದ ಕೆಲವು ತತ್ವಪದ ಹಾಡುಗಳನ್ನು ಕೇಳಬೇಕೆಂಬ ಕುತುಹಲ ಉಂಟಾಯಿತು. ಆ ವೇಳೆಗಾಗಲೇ ರಾತ್ರಿ ತುಂಬ ಸಮಯವಾದ ಕಾರಣ ಅಳುಕಿನಿಂದಲೇ ಒಂದಿಷ್ಟು ತತ್ವಪದಗಳನ್ನು ಹಾಡುವಂತೆ ಕೇಳಿಕೊಂಡೆವು. ಆ ವೇಳೆಗಾಗಲೇ ನಮ್ಮನ್ನು ಕುಟುಂಬದ ಸದಸ್ಯರಂತೆ ನೋಡಿಕೊಂಡಿದ್ದ ಅವರು ತುಂಬು ಮನಸ್ಸಿನಿಂದ ಹಾಡುವುದಕ್ಕೆ ಮುಂದಾದರು. ಅಂದು ಓಬಯ್ಯನವರು ಹಾಡಿದ ತತ್ವಪದ ಹಾಡುಗಳಲ್ಲಿ ಕನ್ನಡ ನಾಡಿನ ಸಾಂಸ್ಕøತಿಕ ಹಿರಿಮೆಯನ್ನು ಸಾರುವ ‘ಚೆಲುವ ಕನ್ನಡ’ ನಾಡು ಎಂಬ ತತ್ವಪದವು ಪ್ರಾದೇಶಿಕ ಹಿರಿಮೆಯನ್ನು ಸಾರುವ ಬಗೆಯನ್ನು ಕುರಿತು ಪ್ರಸ್ತುತ ಲೇಖನದ ಅಡಿಯಲ್ಲಿ ಸಂಕ್ಷಿಪ್ತವಾಗಿ ವಿಶ್ಲೇಷಣೆಗೆ ಒಳಪಡಿಸಲಾಗುವುದು. ಈ ಕನ್ನಡ ನಾಡಿನ ಹಿರಿಮೆಯನ್ನು ಸಾರುವ ತತ್ವಪದವು ಈ ಮುಂದಿನಂತಿದೆ.
ಇದೇ ನಮ್ಮ ನಾಡು | ಚೆಲುವ ಕನ್ನಡನಾಡು
ಶಿವಶರಣರಾಳಿದಂತ ನಾಡು ದೇವಾ…s | ಶಿವಶರಣರಾಳಿದಂತ ನಾಡು ||ಪ||
ನಾಯಕನಟ್ಟಿ ತಿಪ್ಪೇಸ್ವಾಮಿ | ಕಾನಮಡುಗು ಶಿವಶರಣೇಶ ||
ಉಜ್ಜನಿ ಮರುಳಸಿದ್ಧೇಶ ಅವತರಿಸಿದ ಕನ್ನಡನಾಡು ||
ಇದೇ ನಮ್ಮ ನಾಡು | ಚೆಲುವ ಕನ್ನಡನಾಡು
ಶಿವಶರಣರಾಳಿದಂತ ನಾಡು ದೇವಾ…s | ಶಿವಶರಣರಾಳಿದಂತ ನಾಡು ||ಪ||
ಕುಡತಿನಿ ಶಂಕ್ರಪ್ಪ ತಾತ | ಕೊಟ್ಟೂರು ಗುರುಬಸವೇಶ ||
ತಿಪ್ಪಗಿರಿ ಬೊಂ ಬೊಂ ತಾತ ಅವತರಿಸಿದ ಕನ್ನಡನಾಡು ||2||
ಇದೇ ನಮ್ಮ ನಾಡು | ಚೆಲುವ ಕನ್ನಡನಾಡು
ಶಿವಶರಣರಾಳಿದಂತ ನಾಡು ದೇವಾ…s | ಶಿವಶರಣರಾಳಿದಂತ ನಾಡು ||ಪ||
ತಿರುಪತಿ ವೆಂಕಟೇಶ | ರಾಯದುರ್ಗ ಶೇಕಬ್ದುಲ್ಲ ತಾತ ||
ಪಾವಗಡದ ಶನಿಮಾತ್ಮ ಅವತರಿಸಿದ ಕನ್ನಡನಾಡು ||2||
ಇದೇ ನಮ್ಮ ನಾಡು | ಚೆಲುವ ಕನ್ನಡನಾಡು
ಶಿವಶರಣರಾಳಿದಂತ ನಾಡು ದೇವಾ…s | ಶಿವಶರಣರಾಳಿದಂತ ನಾಡು ||ಪ||
ಶೃಗೇರಿ ಶಾರದಾಂಬ | ಕೊಲ್ಲೂರು ಮೂಕಾಂಭಿಕೆ ||
ಬೆಟ್ಟದ ಚಾಮುಂಡೇಶ್ವರಿ ಅವತರಿಸಿದ ಕನ್ನಡನಾಡು ||2||
ಇದೇ ನಮ್ಮ ನಾಡು | ಚೆಲುವ ಕನ್ನಡನಾಡು
ಶಿವಶರಣರಾಳಿದಂತ ನಾಡು ದೇವಾ…s | ಶಿವಶರಣರಾಳಿದಂತ ನಾಡು ||ಪ||
ಓಂ ಶಿವಾಯಃ ಓಂ ನಮಃ ಶಿವಾಯಃ ||
ಓಂ ಶಿವಾಯಃ ಓಂ ನಮಃ ಶಿವಾಯಃ || (ಡಿ.ಬಿ.ಓಬಯ್ಯ, ವಯಸ್ಸು 70, ಚಿಕ್ಕೋಬನಹಳ್ಳಿ, ಮೊಳಕಾಲ್ಮೂರು).
ತತ್ವಪದಕಾರರು ಸ್ಥಾಪಿತ ನೆಲೆಯಲ್ಲಿ ನಿಂತು ಕನಿಷ್ಟ ಭಾವನೆಗಳನ್ನು ಸೃಷ್ಟಿಮಾಡುವುದಿಲ್ಲ. ಸರ್ವರನ್ನು ಸಮಾನ ನೆಲೆಯಲ್ಲಿಯೇ ಗ್ರಹಿಸುವ ಅನುಭಾವಿಕ ಮಾರ್ಗವನ್ನು ಅನುಸರಿಸಿಕೊಂಡು ಬಂದಿದ್ದಾರೆ. “ಈ ತತ್ವಪದಕಾರರಿಗೆ ಸಮಾಜದಲ್ಲಿರುವ ವಿವಿಧ ವರ್ಗಗಳ ದೈವಗಳ ಮೇಲೆ ದ್ವೇಷವಾಗಲಿ, ವಿರೋಧವಾಗಲಿ ಕಂಡುಬರುವುದಿಲ್ಲ. ಎಲ್ಲ ದೇವಕ್ಕೂ ವಿಧೇಯರಾಗಿ ಅವುಗಳನ್ನು ಸಮೀಕರಿಸಿಕೊಂಡು ಬಂದಿದ್ದಾರೆ. ತತ್ವಪದಕಾರರು ತಮ್ಮ ಅನುಭಾವಿಕತೆಯಿಂದ ‘ಮೇಲು-ಕೀಳು’ಗಳ ನಡುವೆ ಬೆಳೆದಿರುವ ಮೌಢ್ಯತೆಯನ್ನು ಬಯಲಿಗೆ ಹಾಕುವ ನೆಲೆಯಲ್ಲಿ ತಮ್ಮ ವಿಚಾರಗಳನ್ನು ವ್ಯಕ್ತಪಡಿಸುತ್ತ ಬಂದಿದ್ದಾರೆ. ಈ ತತ್ವಪದಕಾರರು ವಸಾಹತುಶಾಹಿ ಸೃಷ್ಟಿಸಿರುವ ಮತ್ತು ಸೃಷ್ಟಿಸುತ್ತಿರುವ ತಲ್ಲಣಗಳಿಗೆ ಪ್ರತಿಕ್ರಿಯೆ ನೀಡುವಂತೆ, ಸಮಾಜದಲ್ಲಿ ಪುರೋಹಿತಶಾಹಿಯು ಸೃಷ್ಟಿಸಿರುವ ಜಾತಿಯತೆಯ ಕಟ್ಟಳೆಗಳಿಗೂ ತಮ್ಮ ಪ್ರತಿಕ್ರಿಯೆ ನೀಡಿರುವುದನ್ನು ದಲಿತ ತತ್ವಪದಕಾರರಲ್ಲಿ ಗುರುತಿಸಬಹುದಾಗಿದೆ.” (ಕೆ. ಎ ಓಬಳೇಶ್, ಅಸ್ಮಿತೆ ಮತ್ತು ಆತ್ಮವಿಮರ್ಶೆ, ಪು-112, 113) ಅದೇ ರೀತಿ ಇಲ್ಲಿ ಓಬಯ್ಯನವರು ಹಾಡಿರುವ ಕನ್ನಡ ನಾಡು ನುಡಿಯೊಂದಿಗೆ ಜನಮನದಲ್ಲಿ ಬೆರೆತುಹೋಗಿರುವ ವಿವಿಧ ವರ್ಗವನ್ನು ಪ್ರತಿನಿಧಿಸುವ ದೈವಗಳು ಹಾಗೂ ಅವಧೂತರನ್ನು ಅಖಂಡ ಕರ್ನಾಟಕದ ಭಾಗವಾಗಿ ಬೆಸೆಯುವ ವಿಶಿಷ್ಟ ಬಗೆಯೊಂದು ಇಲ್ಲಿ ಕಂಡುಬರುತ್ತದೆ.
ಭಾರತದಲ್ಲಿ ಅಸಮಾನತೆಯನ್ನು ಧಾರ್ಮಿಕ ನೆಲೆಯಲ್ಲಿ ಕಾಪಾಡಿಕೊಂಡು ಬಂದಿರುವ ಪುರೋಹಿತಶಾಹಿಗೆ ಲೋಕವನ್ನು ಒಡೆದು ನೋಡುವ ಗುಣ ಪರಂಪರಾಗತವಾಗಿ ಬೆಳೆದುಬಂದಿದೆ. ಇಲ್ಲಿ ಸಮಾನತೆ, ಸಹಕಾರ, ಸಹಭಾಳ್ವೆಯಂತಹ ಉದಾರವಾದಿ ಮಾನವೀಯ ತತ್ವಗಳಿಗೆ ಅವಕಾಶವಿಲ್ಲ. ಈ ಶಿಷ್ಟ ಪರಂಪರೆಯವರಿಗೆ ಮಡಿ ಮೈಲಿಗೆಯನ್ನು ಕಾಪಾಡಿಕೊಳ್ಳುವುದೆ ಸಾಮಾಜಿಕ ಮೌಲ್ಯ ಹಾಗೂ ಘನತೆಯ ಪ್ರಶ್ನೆಯಾಗಿದೆ. ಆದರೆ ಲೋಕದ ಪ್ರತಿಯೊಂದು ಜೀವ ಸಂಕುಲವನ್ನು ಕಾರುಣ್ಯದ ನೆಲೆಯಲ್ಲಿ ನೋಡುವ ಗುಣವು ಮೌಖಿಕ ಪರಂಪರೆಯ ಜಾನಪದರಲ್ಲಿ ಕಂಡುಬರುತ್ತದೆ. ಇಲ್ಲಿ ತತ್ವಪದಕಾರರು ಚೆಲುವ ಕನ್ನಡನಾಡಿನ ಅಡಿಯಲ್ಲಿ ಆರಾಧನ ನೆಲೆಯಲ್ಲಿ ಪದಕಟ್ಟಿ ಹಾಡಿರುವ ದೈವಗಳು ಹಾಗೂ ಸಾಂಸ್ಕøತಿಕ ನಾಯಕರುಗಳು ವಿವಿಧ ಸಮುದಾಯಗಳಿಂದ ಬಂದವರಾದರು ಸಹ ಇವರನ್ನು ತಮ್ಮ ಬದುಕಿನ ಬಂದು ಭಾಗವಾಗಿ ಸ್ವೀಕರಿಸಿಕೊಂಡು ಬಂದಿದ್ದಾರೆ. ಇಲ್ಲಿ ಚಿತ್ರತವಾಗಿರುವ ಸ್ಥಳೀಯ ಆರಾಧ್ಯ ದೈವಗಳಾದ ನಾಯಕನಹಟ್ಟಿ ತಿಪ್ಪೇಸ್ವಾಮಿ, ಕಾನಮಡುಗು ಶಿವಶರಣ, ಉಜ್ಜನಿ ಮರುಳಸಿದ್ಧ, ಕುಡತಿನಿ ಶಂಕ್ರಪ್ಪ ತಾತ, ಕೊಟ್ಟೂರು ಗುರುಬಸವೇಶ, ತಿಪ್ಪಗಿರಿ ಬೊಂ ಬೊಂ ತಾತ, ರಾಯದುರ್ಗ ಶೇಕಬ್ದುಲ್ಲ ತಾತ ಇವರುಗಳು ಸಮಾಜ ಸುಧಾರಣೆಗಾಗಿ ಜನ್ಮವೆತ್ತ ಬಂದ ಅವಧೂತರಾಗಿದ್ದಾರೆ. ಇವರೆಲ್ಲರೂ ಸಮಸಮಾಜದ ಕನಸೊತ್ತು ತಮ್ಮ ಹೋರಾಟವನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
ಇವರಿಗೆ ‘ಮೇಲು-ಕೀಳು’ ಎಂಬ ಎಂಬ ಯಾವುದೇ ತರತಮ ಭಾವವಿಲ್ಲ. ಶರಣ ಚಳವಳಿಯ ಆಶಯಗಳನ್ನು ಪುನರ್ ಸ್ಥಾಪಿಸುವ ನೆಲೆಗಟ್ಟಿನಲ್ಲಿ ಇವರೆಲ್ಲ ತಮ್ಮ ಹೋರಾಟವನ್ನು ಕೈಗೊಂಡವರು. ಈ ಮೇಲೆ ಉಲ್ಲೇಖಿಸಿರುವ ಕ್ರಾಂತಿಪುರುಷರು ವಿವಿಧ ಜಾತಿ, ಸಮುದಾಯದಿಂದ ಬಂದವರಾದರು ಸಹ ಇವರ ಹೋರಾಟದ ಗುರಿ ಮಾತ್ರ ಜಾತಿ, ಮತ, ಪಂಥವನ್ನು ಮೀರಿದ ಸಮಾನತೆಯನ್ನು ಪ್ರತಿಪಾದಿಸುವುದಾಗಿತ್ತು. ಆದರೆ ತಳವರ್ಗಗಳ ಪ್ರಗತಿಗಾಗಿ ವಿವಿಧ ವರ್ಗಗಳಲ್ಲಿ ಜನ್ಮವೆತ್ತಿ ಬಂದ ಇವರನ್ನು ಮೂಲಭೂತವಾದಿಗಳು ಆಯಾ ಜಾತಿ, ಮತ, ಪಂಥಗಳ ಪ್ರತಿಮೆಗಳಾಗಿಸಿ ಮೂಲಭೂತವಾದವನ್ನು ಪ್ರತಿಪಾದಿಸುತ್ತ ಬಂದಿದ್ದಾರೆ. ಆದರೆ ತಳವರ್ಗಗಳ ಪರವಾಗಿ ತುಡಿದ ಈ ಶಕ್ತಿಗಳನ್ನು ದಲಿತ ಹಾಗೂ ತಳ ವರ್ಗಗಳ ತತ್ವಪದಕಾರರು ಮಾತ್ರ ಅವರ ಮೂಲ ಆಶಯಗಳ ಅಡಿಯಲ್ಲಿ ಇವರನ್ನು ಆಶ್ರಯಿಸಿ ಮುನ್ನಡೆಯುತ್ತಿದ್ದಾರೆ. ಹಾಗೆಯೇ ವೈದಿಕರ ಪಿತ್ರಾರ್ಜಿತ ಆಸ್ತಿಯೆಂಬಂತೆ ಕಂಡುಬರುವ ತಿರುಪತಿ ವೆಂಕಟೇಶ, ಶೃಂಗೇರಿ ಶಾರದೆ, ಕೊಲ್ಲೂರು ಮೂಕಾಂಬಿಕೆ ಹಾಗೂ ಮೈಸೂರು ಬೆಟ್ಟದ ಚಾಮುಂಡಿಯನ್ನು ದೈವಿಕ ನೆಲೆಯಲ್ಲಿ ಆರಾಧಿಸುತ್ತ ಬಂದ ನಮ್ಮ ತತ್ವಪದಕಾರರು ಇವರನ್ನು ಕನ್ನಡ ನಾಡಿನ ಹಿರಿಮೆ ಗರಿಮೆಯ ಪ್ರತೀಕವಾಗಿಸುತ್ತಾರೆ. ಜಾತಿ, ಮತ, ಭೇದವನ್ನು ಮರೆತು ಇವರು ಅಖಂಡ ನೆಲೆಯಲ್ಲಿ ಸಮಾಜವನ್ನು ಗ್ರಹಿಸುವ ವಿಶ್ವಮಾನವರಾಗಿ ಕಂಡುಬರುತ್ತಾರೆ. ಜೀವಸಂಕುಲಕ್ಕೆ ಪ್ರಧಾನತೆಯನ್ನು ಕೊಡುವ ತತ್ವಪದಕಾರರು ಜೀವ ಕಾರಣ್ಯದ ಸೆಲೆಯನ್ನು ತಮ್ಮಲ್ಲಿ ಗರ್ಭಿಕರಿಸಿಕೊಂಡು ಬಂದಿದ್ದಾರೆ.
ಮಾನವ ಸಮಾಜದಲ್ಲಿ ‘ಮೇಲು-ಕೀಳು’ ಎಂಬ ತರತಮ ಭಾವನೆಗಳನ್ನು ಸೃಷ್ಟಿಸಿಕೊಂಡು ಬಂದಿರುವ ವೈದಿಕತೆಯ ಸ್ಥಾಪಿತ ಮೌಲ್ಯಗಳಿಗೆ ಪ್ರತಿರೋಧದ ನೆಲೆಯಲ್ಲಿ ಪರ್ಯಾಯವಾದ ಜೀವಪರ ಮಾರ್ಗವನ್ನು ರೂಪಿಸಿಕೊಂಡು ಬಂದ ಕೀರ್ತಿಯು ನಮ್ಮ ತಳವರ್ಗದ ತತ್ವಪದಕಾರರಿಗೆ ಸಲ್ಲುತ್ತದೆ. ಇವರು ಸಮಾಜದ ತರತಮ ಭಾವಗಳಿಂದ ನೊಂದವರು. ಈ ನೋವಿಗೆ ಪ್ರತಿಯಾಗಿ ಅವರ ಆಂತರ್ಯದಲ್ಲಿ ಒಡಮೂಡಿದ ಜೀವಕಾರುಣ್ಯದ ಸೆಲೆಗಳೆ ತತ್ವಪದದ ನೆಲೆಯಲ್ಲಿ ಪದಗಳಾಗಿ ಹೊರಹೊಮ್ಮಿವೆ. ವೈದಿಕತೆಯು ಯಾವುದನ್ನು ತುಚ್ಚಿಕರಿಸುತ್ತ ಬಂದಿತೊ ಅದರಲ್ಲಿಯೇ ಸತ್ವ ಹಾಗೂ ಮೌಲ್ಯಗಳನ್ನು ಗುರುತಿಸಿದವರು ಈ ತತ್ವಪದಕಾರರು. ಹೀಗಾಗಿಯೇ ವೈದಿಕತೆಯು ಒಡೆದು ನೋಡುವ ದೇವಾನುದೇವತೆಗಳನ್ನು ಅಖಂಡ ನಾಡಿನ ಭಾಗವಾಗಿ ಗುರುತಿಸುವ ಕೀರ್ತಿಯು ನಮ್ಮ ತತ್ವಪದಕಾರರಿಗೆ ಸಲ್ಲುತ್ತದೆ. ತಮ್ಮ ಸ್ಥಳೀಯ ಪರಿಸರದಲ್ಲಿ ಕಂಡುಬರುವ ಅವಧೂತರಿಂದ ದೀಕ್ಷೆ ಪಡೆದು ಗುರುವಿನ ಮಾರ್ಗದಲ್ಲಿ ಮುನ್ನಡೆಯುತ್ತ ಬಂದಿರುವ ಈ ತತ್ವಪದಕಾರರು ಸಮಕಾಲೀನ ಸಮಾಜದ ಡಂಭಾಚಾರಗಳನ್ನು ವಿಮರ್ಶೆಗೊಳಪಡಿಸುತ್ತ ಮುನ್ನಡೆಯುತ್ತಿದ್ದಾರೆ.
ಇಂತಹ ಅವಧೂತ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ ಡಿ.ಬಿ.ಓಬಯ್ಯ ನವರ ತತ್ವಪದ ಹಾಡಿನಲ್ಲಿ ಕನ್ನಡನಾಡಿನ ನಾಡು ನುಡಿಯ ಬಗೆಗೆ ಪ್ರಶಂಸೆಯಿದೆ. ಇದರೊಂದಿಗೆ ಕನ್ನಡನಾಡಿನಲ್ಲಿ ನೆಲೆಸಿರುವ ದೇವತೆಗಳೆಲ್ಲ ಒಂದೆ ಎಂಬ ನೀತಿ ತತ್ವವಿದೆ. ಹೀಗಾಗಿ ಜನಪದರ ಬದುಕಲ್ಲಿ ಬೆರೆತು ಹೋಗಿರುವ ತತ್ವಪದ ಸಾಹಿತ್ಯದಲ್ಲಿ ಅಡಗಿರುವ ವಿಶ್ವದೃಷ್ಟಿಯನ್ನು ಎತ್ತಿಹಿಡಿಯುವುದು ಪ್ರಸ್ತುತ ಲೇಖನದ ಉದ್ದೇಶವಾಗಿದೆ. ರಾಷ್ಟ್ರೀಯತೆಯನ್ನು ರಾಜಕೀಯ ಅಜೆಂಡವಾಗಿ ಬಳಸಿಕೊಂಡು ತಮ್ಮ ಸ್ವಾರ್ಥ ಸಾಧನೆಯನ್ನು ಪೂರೈಸಿಕೊಳ್ಳವವರು ಒಂದು ಕಡೆಯಲ್ಲಿ ಸಮಾಜದ ಶಾಂತಿಯನ್ನು ಕದಡುತ್ತಿದ್ದಾರೆ. ಆದರೆ ನಿಜವಾದ ರಾಷ್ಟ್ರೀಯತೆ, ನಾಡು ನುಡಿಯ ಬಗೆಗಿನ ಅಭಿಮಾನವನ್ನು ಹೊಂದಿರುವ ವರ್ಗವೊಂದು ಎಲೆ ಮರೆಯ ಕಾಯಿಯಂತಿದ್ದು, ಮಾನವತ್ವದ ನೆಲೆಯಲ್ಲಿ ಸಮಾಜವನ್ನು ನಿರ್ಮಿಸುವ ಆಶಯವೊತ್ತು ಮುನ್ನಡೆಯುತ್ತಿದೆ. ನಮ್ಮ ಮುಂದಿರುವ ಈ ಎರಡು ವರ್ಗಗಳಲ್ಲಿ ಯಾವುದು ಮಹತ್ವದ ಪಾತ್ರವನ್ನು ನಿರ್ವಹಿಸಿಕೊಂಡು ಬಂದಿದೆ ಎಂಬುದನ್ನು ನಾವು ಆಲೋಚಿಸಬೇಕಿದೆ, ಅದನ್ನು ಅಳವಡಿಸಿಕೊಳ್ಳಬೇಕಿದೆ. ಆ ಮೂಲಕ ಶಾಂತಿಯುತ ಸಮಾನತೆಯ ಸಮಾಜವನ್ನು ಕಟ್ಟಬೇಕಾದ ಅನಿವಾರ್ಯತೆ ಇದೆ.

ದಿನದ ಸುದ್ದಿ
ಲೇಖಕಿ ಬಾನು ಮುಸ್ತಾಕ್ ಅವರಿಗೆ ಅಂತಾರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿ ; ಗಣ್ಯರ ಅಭಿನಂದನೆ

ಸುದ್ದಿದಿನಡೆಸ್ಕ್:ಅಂತಾರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾಗಿರುವ ಕನ್ನಡದ ಹೆಮ್ಮೆಯ ಲೇಖಕಿ ಬಾನು ಮುಸ್ತಾಕ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇದು ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಸಂಭ್ರಮಿಸುವ ಹೊತ್ತು.
ಈ ನೆಲದ ಸೌಹಾರ್ದತೆ, ಜಾತ್ಯತೀತತೆ ಮತ್ತು ಸೋದರತ್ವದ ನಿಜ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬರೆಯುತ್ತಿರುವ ಬಾನು ಮುಸ್ತಾಕ್ ಅವರು ಕನ್ನಡದ ಹಿರಿಮೆಯ ಬಾವುಟವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿ ನಮಗೆಲ್ಲ ಗೌರವ ತಂದುಕೊಟ್ಟಿದ್ದಾರೆ.
ಅವರು ಇನ್ನಷ್ಟು ಕಾಲ ಸತ್ವಯುತವಾಗಿ ಬರೆಯುತ್ತಾ ಕನ್ನಡದ ಕಂಪನ್ನು ಜಗದಗಲಕ್ಕೆ ಪಸರಿಸುತ್ತಾ ಇರಲಿ ಎಂದು ಹಾರೈಸುತ್ತೇನೆ.
ಬೂಕರ್ ಪ್ರಶಸ್ತಿಗೆ ಭಾಜನವಾಗಿರುವ ಅವರ ಕೃತಿ ‘ಎದೆಯ ಹಣತೆ’ಯನ್ನು ಇಂಗ್ಲೀಷ್ ಗೆ ಅನುವಾದಿಸಿರುವ ಪ್ರತಿಭಾವಂತ ಲೇಖಕಿ ದೀಪಾ ಭಸ್ತಿ ಅವರಿಗೂ ಕನ್ನಡಿಗರೆಲ್ಲರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ
ಹಾಗೇ ನಾಡಿನ ಸಾಹಿತ್ಯ ಪ್ರೇಮಿಗಳು, ಹೋರಾಟಗಾರರು ಸೇರಿದಂತೆ ಕನ್ನಡಿಗರು ಸಂಭ್ರಮಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಚನ್ನಗಿರಿ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ’; ವಿದ್ಯಾರ್ಥಿಗಳ ಕಲರವ

ಸುದ್ದಿದಿನ,ಚನ್ನಗಿರಿ:ಪಟ್ಟಣದ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ (ಮಾರ್ಚ್-22) ‘ಜಾನಪದ ಉತ್ಸವ – 2025″ ಅದ್ದೂರಿಯಾಗಿ ನಡೆಯಿತು.
ಜಾನಪದ ತಜ್ಞ, ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಬಸವರಾಜ ನೆಲ್ಲಿಸರ, ಅವರು ಉತ್ಸವಕ್ಕೆ ಚಾಲನೆ ನೀಡಿದರು.
ಎತ್ತಿನ ಬಂಡಿಯಲ್ಲಿ ಅಧ್ಯಾಪಕರು, ಅತಿಥಿಗಳ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ನೀರು ತುಂಬಿದ ಪೂರ್ಣ ಕುಂಭಗಳನ್ನು ಹೊತ್ತು ಅತಿಥಿಗಳನ್ನು ಸ್ವಾಗತಿಸಿದರು.
ಅಂದು ಕಾಲೇಜಿನಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ವರ್ಷದಲ್ಲಿ ಬರುವ ಯುಗಾದಿ, ಸಂಕ್ರಾಂತಿ, ಶಿವರಾತ್ರಿ, ಕ್ರಿಸ್ ಮಸ್, ರಂಜಾನ್, ದಸರಾ, ಭೂಮಿ ಹುಣ್ಣಿಮೆ, ರಾಶಿ ಪೂಜೆ ಸೇರಿದಂತೆ, ಬಳೆಗಾರ, ಕಣಿಹೇಳುವ, ಚೌಕಾಬಾರಾ, ಗುರುಕುಲ, ಆಯುರ್ವೇದ, ಗೋ ಪೂಜೆ ಎಲ್ಲವೂ ಜಾನಪದ ಸಂಸ್ಕೃತಿಯನ್ನು ಪುನರ್ ನಿರ್ಮಾಣಮಾಡಿದ್ದವು.
ಉತ್ಸವದಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು, ಪಂಚೆ, ಅಂಗಿ, ಕುರ್ತಾ, ಲಂಗಾದಾವಣಿ, ಸೀರೆ ಉಟ್ಟು ,ಬುರ್ಕಾ, ತೊಟ್ಟು ಸಡಗರ ಸಂಭ್ರಮದಿಂದ ಕುಣಿದಾಡಿದರು.
ರಾಮನವಮಿಯ ಬೆಲ್ಲದ ಪಾನಕ – ಕೋಸಂಬರಿ, ಕ್ರಿಸ್ಮಸ್ ನ ಕೇಕ್, ರಂಜಾನ್ ಹಬ್ಬದ ಇಪ್ತಾರ್ ಕೂಟದ ಫಲಾಹಾರ, ಗಣಪತಿ ಹಬ್ಬದ ಕಡುಬು, ಯುಗಾದಿಯ ಹೋಳಿಗೆ, ಭೂಮಿಪೂಜೆಯ ಪಾಯಸ ಹೀಗೆ ವಿವಿಧ ಬಗೆಯ ತಿಂಡಿತಿನಿಸುಗಳು 30 ಜಿಲ್ಲೆಗಳ ವಿಶೇಷ ಖಾಧ್ಯಗಳು ಹಬ್ಬದ ಸಡಗರವನ್ನು ಇಮ್ಮಡಿಗೊಳಿಸಿದವು.
ವಸ್ತು ಪ್ರದರ್ಶನ
ಸುಮಾರು ವರ್ಷಗಳ ಹಿಂದೆ ಬಳಕೆಯಲ್ಲಿದ್ದ ಬೀಸು ಕಲ್ಲು, ಒನಕೆ, ಸೌದೆ ಒಲೆ, ಕೊಡಲಿ, ಮಚ್ಚು, ಬರ್ಜಿ, ಚನ್ನೆಮಣೆ, ಕೀಲುಗೊಂಬೆ, ಪಾರಂಪರಿಕ ಔಷಧಿ, ಕುಡುಗೋಲು, ಬಂಡಿ,ನಾಣ್ಯಗಳು,ಸೇರು, ಒಳಕಲ್ಲು, ಶಹನಾಯಿ,ಮಜ್ಜಿಗೆಯ ಕಡೆಗೋಲು, ತಾಳ, ಹಾರ್ಮೊನಿಯಂ, ಗಂಡುಕೊಡಲಿ,ಶಾವಿಗೆ ಒತ್ತು,ಹುತ್ತದ ಮಾದರಿ,ವಿಭಿನ್ನ ಬಗೆಯ ರಂಗವಲ್ಲಿ, ವಿವಿಧ ಧಾನ್ಯದ ರಾಶಿ,ಕಳಸ, ದಸರಾ ಗೊಂಬೆಗಳು, ನವರಾತ್ರಿಯ ಮಾತೃದೇವತೆ, ಕುರಾನ್ ಪ್ರತಿ, ಜಾನಮಾಜ್,ಕ್ರಿಸ್ತನ ಜನನದ ಗೋದರಿ, ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನ ಮಾದರಿ ಚಿತ್ರಗಳು ವಸ್ತುಪ್ರದರ್ಶನದಲ್ಲಿದ್ದವು.
ದೇಸೀ ಆಟಗಳು
ದೇಸೀ ಆಟಗಳಾದ ಹಗ್ಗ ಜಗ್ಗಾಟ, ಲಗೋರಿ, ಬುಗುರಿ, ಕುಂಟೋಬಿಲ್ಲೆ ಹಾಗೂ ಜನಪದ ನೃತ್ಯ-ಹಾಡು ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಸಂತಸದಿಂದ ಭಾಗವಹಿಸಿದರು.
ಉತ್ಸವದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಬಿ.ಜಿ.ಅಮೃತೇಶ್ವರ ಅವರು ವಹಿಸಿಕೊಂಡಿದ್ದರು. ಹಾಗೂ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಪಕ ಹಾಗೂ ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಷ್ಮುಖಪ್ಪ ಕೆ.ಹೆಚ್, ಐಕ್ಯುಎಸಿ ಸಂಚಾಲಕ ಪ್ರೊ.ವಿಜಯ್ ಕುಮಾರ್, ಉತ್ಸವದ ಕ್ರೀಡೆಗಳ ಆಯೋಜಕ ಹಾಗೂ ದೈಹಿಕ ನಿರ್ದೇಶಕರಾದ ಕಲ್ಲೇಶಪ್ಪ ಎಸ್.ಜಿ ಹಾಗೂ ಕಾಲೇಜಿನ ಎಲ್ಲಾ ಅಧ್ಯಾಪಕರು ಹಾಗೂ ಬೋಧಕೇತರ ಸಿಬಂದಿಗಳು ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಭಾಗವಹಿಸಿದ್ದರು.

ಜಾನಪದ ಕಲೆ, ಸಂಸ್ಕೃತಿಯು ಹಿಂದಿನಿಂದಲೂ ಮನುಷ್ಯ ಜೀವನದೊಂದಿಗೆ ಸಂಬಂಧ ಹೊಂದಿದ್ದು ಇಂದಿನ ಪೀಳಿಗೆಯ ಮಕ್ಕಳು ಜಾನಪದ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಜನಪದ ಪರಂಪರೆಯ ಪ್ರತೀಕವಾಗಿ ‘ಜನಪದ ಉತ್ಸವ – 2025’ ನಮ್ಮಸಂಸ್ಕೃತಿ ನಮ್ಮ ಹೆಮ್ಮೆ ಹೆಚ್ಚು ಅರ್ಥ ಪೂರ್ಣವಾಗಿ ಮೂಡಿ ಬಂದಿದೆ.
| ಜಾನಪದ ತಜ್ಞ, ವಿಶ್ರಾಂತ ಪ್ರಾಧ್ಯಾಪಕ ಡಾ.ಬಸವರಾಜ ನೆಲ್ಲಿಸರ

ನಮ್ಮ ದೇಶಿ ಸಂಸ್ಕೃತಿಯನ್ನು ಸಂರಕ್ಷಿಸಿ, ಮನುಷ್ಯನ ಬದುಕಿನೊಂದಿಗೆ ಅವಿನಾಭಾವ ಸಂಬಂಧವನ್ನು ತಲೆಮಾರುಗಳಿಂದ ಹೊಂದಿರುವ, ಆಯಾ ಪ್ರಾದೇಶಿಕ ಗ್ರಾಮೀಣ ವ್ಯಾಪ್ತಿಯಲ್ಲಿ ಆಚರಣೆಯಲ್ಲಿರುವ ಈ ಮೌಖಿಕ ಪರಂಪರೆಯ ಜಾನಪದ ಸಂಸ್ಕೃತಿಯ ಸೊಗಡುಗಳು ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸುವ ಒಂದು ಅತ್ಯುತ್ತಮ ಪ್ರಯತ್ನ ‘ಜಾನಪದ ಉತ್ಸವ’-2025.
| ಡಾ.ಬಿ.ಜಿ.ಅಮೃತೇಶ್ವರ, ಪ್ರಾಂಶುಪಾಲರು

ಜನಪದರ ಬದುಕು, ಆಧುನಿಕ ಜಾಗತೀಕರಣದ ಕಾಲದಲ್ಲಿ ಹೆಚ್ಚು ಪ್ರಸ್ತುತವಾಗುತ್ತಿದೆ ಅದರ ಸದಾಶಯವನ್ನು ಕಾಲೇಜು ಶಿಕ್ಷಣ ಇಲಾಖೆಯ ಸುತ್ತೋಲೆಯಂತೆ ನಮ್ಮ ಕಾಲೇಜಿನ ವಿಧ್ಯಾರ್ಥಿಗಳು ಎಲ್ಲಾ ಅಧ್ಯಾಪಕರ ಸಹಾಯದಿಂದ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ಅವರಿಗೆ ಅಭಿನಂದನೆಗಳು.
| ಷಣ್ಮುಖಪ್ಪ ಕೆ ಎಚ್ ,ಕಾರ್ಯಕ್ರಮದ ನಿರ್ದೇಶಕರು, ಸಂಚಾಲಕರು,ಸಾಂಸ್ಕೃತಿಕ ವೇದಿಕೆ

ಅಂತರಂಗ
ಮಹಿಳಾ ದಿನಾಚರಣೆ | ಸಾಧನೆಯ ಸುಗಂಧ, ಪ್ರೇರಣೆಯ ಬೆಳಕು

- ಡಾ. ವೆಂಕಟೇಶ ಬಾಬು ಎಸ್, ಸಹ ಪ್ರಾಧ್ಯಾಪಕರು, ದಾವಣಗೆರೆ
ಇಂದು ಮಹಿಳಾ ದಿನಾಚರಣೆ ಪ್ರಯುಕ್ತ ಎಲ್ಲಾ ಮಹಿಳೆಯರಿಗೆ ಶುಭಾಷಯಗಳು
ಪ್ರತಿಯೊಂದು ಮಹಿಳೆ ತನ್ನ ಜೀವನದಲ್ಲಿ ವಿವಿಧ ಹಂತಗಳನ್ನು ದಾಟುತ್ತಾ, ಆತ್ಮವಿಶ್ವಾಸ, ಪ್ರೇರಣೆ ಹಾಗೂ ಶಕ್ತಿ ಹೊಂದುವ ಪ್ರತಿರೂಪವಾಗಿರುತ್ತಾರೆ. ವಿಶ್ವ ಮಹಿಳಾ ದಿನವನ್ನು ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ, ಇದು ಮಹಿಳೆಯರ ಹಕ್ಕುಗಳು, ಸಾಧನೆಗಳು ಮತ್ತು ಅವರ ಜಗತ್ತಿನ ಮೇಲೆ ಬೀರಿದ ಪ್ರಭಾವವನ್ನು ಗೌರವಿಸುವ ಒಂದು ಅದ್ಭುತ ಅವಕಾಶ.
ಮಹಿಳೆಯರ ಬದುಕು ಕೇವಲ ಕುಟುಂಬದ ಕೇಂದ್ರದಲ್ಲಿಯೇ ಸೀಮಿತವಾಗಿಲ್ಲ; ಅವರು ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲೂ ಮಹತ್ತರ ಪಾತ್ರ ವಹಿಸುತ್ತಿದ್ದಾರೆ. ಅಮ್ಮನಾಗಿ, ಪತ್ನಿಯಾಗಿ, ಮಗುವಾಗಿ, ಸಂಸ್ಥಾಪಕಿಯಾಗಿ, ನಾಯಕಿಯಾಗಿ, ವೈಜ್ಞಾನಿಕರಾಗಿ, ಕ್ರೀಡಾಪಟುವಾಗಿ – ಎಲ್ಲಾ ಪಾತ್ರಗಳಲ್ಲೂ ಮಹಿಳೆಯರು ತಮ್ಮ ಅದ್ಭುತ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ.
ಈಗ ಮಹಿಳೆಯರು ತಮ್ಮ ಇಚ್ಛಾಶಕ್ತಿಯೊಂದಿಗೆ ಮತ್ತು ಶಿಕ್ಷಣದ ಹಾದಿಯ ಮೂಲಕ ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಇಂದು ಕಲ್ಪನಾ ಚಾವ್ಲಾ, ಮೇರೀ ಕೋಮ್, ಸುಧಾ ಮುರ್ತಿ, ಕಿರಣ್ ಮಜುಂದಾರ್ ಶಾ, ಫಾಲ್ಗುಣಿ ನಾಯರ್ ಮುಂತಾದ ಅನೇಕ ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡುತ್ತಿದ್ದಾರೆ.
ಮಹಿಳಾ ದಿನಾಚರಣೆ – ಇತಿಹಾಸ ಮತ್ತು ಹಿನ್ನೆಲೆ
ಮಹಿಳಾ ದಿನಾಚರಣೆ (International Women’s Day – IWD) ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ. ಇದು ಮಹಿಳೆಯರ ಹಕ್ಕುಗಳು, ಸಶಕ್ತೀಕರಣ, ಸಾಧನೆಗಳು ಮತ್ತು ಲಿಂಗ ಸಮಾನತೆಯ ಪ್ರಗತಿ ಕುರಿತು ಜಾಗೃತಿಯನ್ನು ಮೂಡಿಸುವ ಮಹತ್ವದ ದಿನ.
ಮಹಿಳಾ ದಿನಾಚರಣೆಯ ಇತಿಹಾಸ
ಮಹಿಳಾ ದಿನಾಚರಣೆಯ ಮೂಲವು 1900ರ ದಶಕದ ಪ್ರಾರಂಭದಲ್ಲಿ ಕೈಗೆತ್ತಿಕೊಳ್ಳಲಾದ ಮಹಿಳಾ ಹಕ್ಕುಗಳ ಹೋರಾಟಕ್ಕೆ ಸರಿಹೊಂದಿದೆ. ಈ ದಿನವನ್ನು ಆಚರಿಸಲು ಪ್ರೇರಣೆ ನೀಡಿದ ಪ್ರಮುಖ ಘಟನೆಗಳು ಹೀಗಿವೆ:
1. 1908 – ಮಹಿಳಾ ಹಕ್ಕುಗಳ ಹೋರಾಟ:
ಅಮೇರಿಕಾದ ನ್ಯೂಯಾರ್ಕ್ ನಗರದಲ್ಲಿ ಸಾವಿರಾರು ಮಹಿಳಾ ಕಾರ್ಮಿಕರು ಕಡಿಮೆ ಕೆಲಸದ ಘಂಟೆಗಳು, ಉತ್ತಮ ಸಂಬಳ ಮತ್ತು ಮತದಾನದ ಹಕ್ಕುಕ್ಕಾಗಿ ಪ್ರತಿಭಟನೆ ನಡೆಸಿದರು.
2. 1909 – ಮೊದಲ ಮಹಿಳಾ ದಿನಾಚರಣೆ:
ಫೆಬ್ರವರಿ 28, 1909 ರಂದು ಅಮೆರಿಕಾದ ಸೋಶಲಿಸ್ಟ್ ಪಾರ್ಟಿ ದೇಶದಾದ್ಯಂತ ಮಹಿಳಾ ದಿನವನ್ನು ಆಚರಿಸಿತು.
3. 1910 – ಅಂತಾರಾಷ್ಟ್ರೀಯ ಹೋರಾಟ:
ಡೆನ್ಮಾರ್ಕ್ನ ಕೊಪನ್ಹೇಗನ್ ನಲ್ಲಿ ನಡೆದ ಸೋಶಲಿಸ್ಟ್ ವುಮೆನ್ಸ್ ಕಾನ್ಫರೆನ್ಸ್ ನಲ್ಲಿ ಜರ್ಮನಿಯ ಕ್ಲಾರಾ ಜೆಟ್ಕಿನ್ ಅವರು ಪ್ರಪಂಚದಾದ್ಯಂತ ಮಹಿಳಾ ದಿನ ಆಚರಿಸುವ ಸಲಹೆ ನೀಡಿದರು.
4. 1911 – ಪ್ರಥಮ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ:
ಮೊದಲ ಬಾರಿ ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್ ದೇಶಗಳಲ್ಲಿ ಮಹಿಳಾ ದಿನವನ್ನು ಮಾರ್ಚ್ 19ರಂದು ಆಚರಿಸಲಾಯಿತು.
5. 1913 – ಮಾರ್ಚ್ 8ಕ್ಕೆ ದಿನಾಂಕ ಬದಲಾವಣೆ:
1913ರಿಂದ ಮಾರ್ಚ್ 8ನೇ ತಾರೀಖನ್ನು ಅಧಿಕೃತವಾಗಿ ಮಹಿಳಾ ದಿನಾಚರಣೆಗೆ ಮೀಸಲಾಗಿಸಲಾಯಿತು.
6. 1975 – ವಿಶ್ವ ಮಹಿಳಾ ವರ್ಷ:
UNO1975ನೇ ವರ್ಷವನ್ನು “ಅಂತರಾಷ್ಟ್ರೀಯ ಮಹಿಳಾ ವರ್ಷ” ಎಂದು ಘೋಷಿಸಿ, ಮಹಿಳಾ ದಿನವನ್ನು ಅಧಿಕೃತವಾಗಿ ಅಂಗೀಕರಿಸಿತು
7. 2011 – 100ನೇ ವಾರ್ಷಿಕೋತ್ಸವ:
2011ರಲ್ಲಿ ಮಹಿಳಾ ದಿನಾಚರಣೆ ಶತಮಾನೋತ್ಸವವನ್ನು ಪೂರೈಸಿತು.
ಮಹಿಳಾ ದಿನಾಚರಣೆಯ ಉದ್ದೇಶ
ಮಹಿಳಾ ದಿನವನ್ನು ಆಚರಿಸುವ ಪ್ರಮುಖ ಉದ್ದೇಶಗಳು:
✔ ಮಹಿಳಾ ಸಮಾನತೆ ಮತ್ತು ಹಕ್ಕುಗಳನ್ನು ಬಲಪಡಿಸುವುದು.
✔ ಮಹಿಳೆಯರ ಸಾಧನೆಗಳನ್ನು ಗುರುತಿಸಿ, ಗೌರವ ನೀಡುವುದು.
✔ ಅವರ ಸಮಸ್ಯೆಗಳನ್ನು ಅರಿತು, ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು.
✔ ಮಹಿಳಾ ಶಕ್ತಿ ಮತ್ತು ಸ್ವಾವಲಂಬನೆಯ ಕುರಿತು ಜಾಗೃತಿಯನ್ನು ಹರಡುವುದು.
ಮಹಿಳಾ ದಿನಾಚರಣೆ – ಇಂದಿನ ಪ್ರಸ್ತುತತೆ
ಇಂದಿನ ಹೊತ್ತಿನಲ್ಲಿ, ಮಹಿಳೆಯರು ಶಿಕ್ಷಣ, ಉದ್ಯಮ, ರಾಜಕೀಯ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ಸೇವಾ ಕ್ಷೇತ್ರ ಮತ್ತು ಉದ್ಯಮಶೀಲತೆ ಎಲ್ಲೆಲ್ಲಿಯೂ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ಮಹಿಳಾ ದಿನವು “Gender Equality – ಲಿಂಗ ಸಮಾನತೆ”, “Break the Bias – ಲಿಂಗತಾತ್ವಿಕ ಭೇದಭಾವವನ್ನು ಕಳಚುವುದು”, “DigitALL: Innovation and technology for gender equality” ಮುಂತಾದ ವಿಶೇಷ ಥೀಮ್ಗಳೊಂದಿಗೆ ಪ್ರತಿವರ್ಷ ಜಾಗೃತಿಯನ್ನು ಮೂಡಿಸುತ್ತದೆ.
ಮಹಿಳೆಯರು ಬದುಕಿನ ಉತ್ಸಾಹ
ಮಹಿಳೆಯರು ತಮ್ಮ ಕುಟುಂಬ, ಸಮಾಜ ಮತ್ತು ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರಲ್ಲಿರುವ ಹೃದಯಸ್ಪರ್ಶಿ ಭಾವನೆ, ತ್ಯಾಗ, ಶ್ರಮ ಹಾಗೂ ಪ್ರೀತಿ ಅವರ ಬದುಕಿನ ಹಾದಿಯನ್ನು ಮಾದರಿಯಾಗಿ ಮಾಡುತ್ತದೆ. ಶಿಕ್ಷಣ, ಉದ್ಯೋಗ, ರಾಜಕೀಯ, ಕಲೆ, ಕ್ರೀಡೆ, ವಿಜ್ಞಾನ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ.
ಅನೇಕ ಮಹಿಳೆಯರು ಸಂಕಷ್ಟಗಳನ್ನು ಎದುರಿಸುತ್ತಾ, ಸಾಧನೆಗೆ ಹೊಸ ಪರಿಮಾಣ ನೀಡಿದ ಉದಾಹರಣೆಗಳಿವೆ. ಐದು ದಶಕಗಳ ಹಿಂದೆಯೂ ಮಹಿಳೆಯರು ಮನೆಯಲ್ಲಿ ಸೀಮಿತವಾಗಿದ್ದರೆ, ಇಂದು ಅವರು ಅಂತರಿಕ್ಷ ಯಾತ್ರೆ, ವ್ಯವಹಾರ ನಿರ್ವಹಣೆ, ಕಾನೂನು, ತಂತ್ರಜ್ಞಾನ, ಆಡಳಿತ ಮತ್ತು ರಾಜಕೀಯದಲ್ಲಿ ಮುಂಚೂಣಿಯಲ್ಲಿದ್ದಾರೆ.
ಸಾಧನೆಗಳ ಬೆಳಕು
1. ಶಿಕ್ಷಣ ಮತ್ತು ಸಶಕ್ತೀಕರಣ:
ಜಗತ್ತಿನ ಅನೇಕ ದೇಶಗಳಲ್ಲಿ ಈಗ ಮಹಿಳಿಯರಿಗೆ ಶಿಕ್ಷಣ ಹಕ್ಕುಗಳನ್ನು ಒದಗಿಸಲಾಗುತ್ತಿದೆ, ಇದರಿಂದ ಮಹಿಳೆಯರು ಸಮಾಜದ ಮುಖ್ಯಧಾರೆಯಲ್ಲಿರಲು ಸಾಧ್ಯವಾಗಿದೆ. ಭಾರತದಲ್ಲಿ ಸವಿತ್ರಿಬಾಯಿ ಫುಲೆ, ಇಂದಿರಾ ಗಾಂಧಿ, ಕಲ್ಪನಾ ಚಾವ್ಲಾ, ಮೇರೀ ಕೋಮ್ ಮುಂತಾದವರು ಮಹಿಳಾ ಶಿಕ್ಷಣ ಮತ್ತು ಸಶಕ್ತೀಕರಣದಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ.
2. ಉದ್ಯೋಗ ಹಾಗೂ ಉದ್ಯಮಶೀಲತೆ:
ಈಗ ಮಹಿಳೆಯರು ಉದ್ಯೋಗ ಮಾತ್ರವಲ್ಲದೆ, ಸ್ವಂತ ಉದ್ಯಮಗಳನ್ನು ನಿರ್ಮಿಸಿ ಉದ್ಯಮಶೀಲತೆ ತೋರಿಸುತ್ತಿದ್ದಾರೆ. ಫಾಲ್ಗುಣಿ ನಾಯರ್ (ನೈಕಾ), ಕಿರಣ್ ಮಜುಂದಾರ್ ಶಾ (ಬಯೋಕಾನ್), ವಂದನಾ ಲೂತರ (ಪೇಪರ್ ಶೈರಿ) ಮುಂತಾದವರು ಉದ್ಯಮ ವಲಯದಲ್ಲಿ ತಮ್ಮ ಅಚ್ಚಳಿಯದ ಗುರುತು ಮೂಡಿಸಿದ್ದಾರೆ.
3. ಕ್ರೀಡೆ ಮತ್ತು ಸಾಹಸ:
ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರು ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ. ಸೈನಾ ನೆಹ್ವಾಲ್, ಮೇರೀ ಕೋಮ್, ಪಿ.ವಿ. ಸಿಂಧು, ಮಿಥಾಲಿ ರಾಜ್ ಮುಂತಾದವರು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಮ್ಮೆ ಹೆಚ್ಚಿಸಿದ್ದಾರೆ.
4. ಸಮಾಜಸೇವೆ ಮತ್ತು ಪ್ರಭಾವ:
ಮಹಿಳೆಯರು ಕೇವಲ ತಮ್ಮ ವ್ಯಕ್ತಿಗತ ಜೀವನದಲ್ಲಷ್ಟೇ ಅಲ್ಲದೆ, ಸಮಾಜಸೇವೆಯಲ್ಲಿ ಕೂಡ ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಮದರ್ ತೆರೆಸಾ, ಸುಧಾ ಮುರ್ತಿ ಮುಂತಾದವರು ತಮ್ಮ ಸಮಾಜಮುಖಿ ಕಾರ್ಯಗಳಿಂದ ಲಕ್ಷಾಂತರ ಜನರಿಗೆ ಪ್ರೇರಣೆ ನೀಡಿದ್ದಾರೆ.
ಸಮಾಜದ ಹೊಣೆಗಾರಿಕೆ – ಮಹಿಳಾ ಸಮಾನತೆ ಮತ್ತು ಗೌರವ
ಮಹಿಳೆಯರನ್ನು ಗೌರವಿಸುವ, ಅವರ ಆತ್ಮವಿಶ್ವಾಸ ಹೆಚ್ಚಿಸುವ, ಅವರಿಗೆ ಸಮಾನ ಅವಕಾಶ ಒದಗಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಮಹಿಳಾ ಸುರಕ್ಷತೆ, ಸಂವೇದನಾಶೀಲತೆ ಮತ್ತು ಗೌರವ ಹೊಂದಿದ ಸಮಾಜವನ್ನು ನಿರ್ಮಿಸುವುದು ಅನಿವಾರ್ಯ.
ನಮ್ಮ ಕರ್ತವ್ಯ – ಮಹಿಳಾ ಶಕ್ತಿಗೆ ಸಾಥ್
ಈ ಮಹಿಳಾ ದಿನಾಚರಣೆ ದಿನದಂದು ನಾವು ನಮ್ಮ ಜೀವನದಲ್ಲಿ ಶಕ್ತಿ, ಪ್ರೇರಣೆ, ಪ್ರೀತಿಯ ಬೆಳಕು ತುಂಬುವ ಮಹಿಳೆಯರಿಗೆ ಕೃತಜ್ಞತೆ ಸಲ್ಲಿಸೋಣ. ಅವರ ಸಾಧನೆಗಳನ್ನು ಗೌರವಿಸೋಣ ಮತ್ತು ಹೊಸ ತಲೆಮಾರಿನ ಮಹಿಳೆಯರಿಗೆ ಇನ್ನಷ್ಟು ಉತ್ಸಾಹ, ಶಿಕ್ಷಣ ಮತ್ತು ಅವಕಾಶಗಳನ್ನು ಒದಗಿಸುವ ಮೂಲಕ ಅವರನ್ನು ಸಶಕ್ತಗೊಳಿಸೋಣ.
“ಮಹಿಳೆಯರ ಪ್ರಗತಿ – ರಾಷ್ಟ್ರದ ಪ್ರಗತಿ!”(ಲೇಖನ-ಡಾ. ವೆಂಕಟೇಶ ಬಾಬು ಎಸ್,ಸಹ ಪ್ರಾಧ್ಯಾಪಕರು, ದಾವಣಗೆರೆ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ5 days ago
ಹನಿಗವಿತೆಗಳು | ಬೆಳಕಿನ ಬೆನ್ನ ಹಿಂದೆ
-
ದಿನದ ಸುದ್ದಿ4 days ago
ದಾವಣಗೆರೆ | ಕಾಂಗ್ರೆಸ್ ಸಾಧನೆಯ ಸಮರ್ಪಣೆ ಕಾರ್ಯಕ್ರಮ : ಮೇ.20 ರಂದು ಸಾರಿಗೆ ಬಸ್ಸುಗಳ ಸಂಚಾರದಲ್ಲಿ ವ್ಯತ್ಯಯ
-
ದಿನದ ಸುದ್ದಿ4 days ago
ಹೊಸಪೇಟೆ ನಗರದ ತುಂಬೆಲ್ಲಾ ಜಾಹೀರಾತುಗಳ ಹಾವಳಿ ; ಕಣ್ಣ್ಮುಚ್ಚಿ ಕುಳಿತ ಅಧಿಕಾರಿಗಳು
-
ದಿನದ ಸುದ್ದಿ4 days ago
ದಾವಣಗೆರೆ | ಬ್ಯಾಂಕ್ ಆಫ್ ಬರೋಡದಲ್ಲಿ ಮಾಜಿ ಸೈನಿಕರಿಗೆ ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಮಲೇಬೆನ್ನೂರು ಪುರಸಭೆ | ಗೌರವಧನ ಆಧಾರದ ಮೇಲೆ ತಾತ್ಕಾಲಿಕ ಸೇವೆ ಪಡೆಯಲು ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಹೃದಯಾಘಾತದಿಂದ ತಪ್ಪಿಸಿಕೊಳ್ಳುವುದು ಹೇಗೇ..?
-
ದಿನದ ಸುದ್ದಿ3 days ago
ಇಂದಿನ ಅಡಿಕೆ ದರ ಪಟ್ಟಿ
-
ದಿನದ ಸುದ್ದಿ4 days ago
ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ