ದಿನದ ಸುದ್ದಿ
ಯುಗಾದಿ ಅಲ್ಲ ಉಗಾದಿ
ಉಗಾದಿ ಹಬ್ಬದ ದಿನ ಮಳವಳ್ಳಿಯ ಮಾಳವ ಜನಾಂಗದ ಕುಟುಂಬಗಳು ಧಾರ್ಮಿಕ ಮೆರವಣಿಗೆಯಲ್ಲಿ ತಮ್ಮೂರ ಅಮ್ಮನ ಗುಡಿಯಿ೦ದ ಬಹಳ ವರುಷಗಳಿ೦ದ ಗೊತ್ತು ಮಾಡಲಾದ ನೀರಿನ ಹೊ೦ಡ, ಕೆರೆ, ನದಿ, ಹಳ್ಳ, ಇಲ್ಲವೇ ಬಾವಿಗಳಿಗೆ ಹೊರಡುವ ಪದ್ಧತಿ ಬೆಳೆದು ಬಂದಿದೆ. ಅಲ್ಲಿಗೆ ತಲುಪಿದ ಮೇಲೆ ನೀರಿನ ಬಳಿ ಬಿ೦ದಿಗೆಗಳನ್ನು ಇಟ್ಟು ಅವುಗಳಿಗೆ ಪೂಜೆ ಮಾಡುತ್ತಾರೆ. ಉಗಾದಿ ಹಬ್ಬದಲ್ಲಿ ಮಾಳವರ ನಾಯಕನಾದ ಕುಲವಾಡಿ, ಚಕ್ರಿ, ನೀರಘಂಟಿ ಇಲ್ಲವೇ ಸಾಮಾನ್ಯವಾಗಿ ಆತನನ್ನು ಬೇರೆಯವರು ಕರೆಯುವ೦ತೆ ಊರ ಯಜಮಾನನಾದವನು ಉಗು ಮೆರವಣಿಗೆಗೆ ಪೂಜಾ ವಿಧಿವಿಧಾನಗಳನ್ನು ಸಲ್ಲಿಸಿ ಮೆರವಣಿಗೆಗೆ ಅಣಿಯಾದ ಎಲ್ಲ ಶೃದ್ಧಾಳುಗಳಿಗೂ ಒಂದೊಂದು ಬಿಂದಿಗೆ ಪವಿತ್ರ ನೀರನ್ನು ನೀರಿನ ಹೊರತೆಯಿ೦ದ ತೆಗೆದು ಕೊಡುತ್ತಾನೆ.
ನೀರು ತುಂಬಿದ ಬಿಂದಿಗೆಗಳನ್ನು ಪೂಜಿಸಿ ನೀರು ತು೦ಬಿಕೊ೦ಡ ಮೇಲೆ ಮಾಳವರು ಹಿ೦ತಿರುಗಿ ತಮ್ಮ-ತಮ್ಮ ಮನೆಗಳಿಗೆ ಪುನಃ ಮೆರವಣಿಗೆಯಲ್ಲಿ ಬಂದು ಮನೆಯ ದೇವರ ಕೋಣೆಯಲ್ಲಿ ಬಿ೦ದಿಗೆಗಳನ್ನು ಇಡುತ್ತಾರೆ. ಈ ಬಿಂದಿಗೆದುಂಬಿದ ನೀರನ್ನು ‘ಹೊಸನೀರು’ ಎಂದು ಕರೆಯಲಾಗುತ್ತದೆ. ಆ ಬಿ೦ದಿಗೆಗೆ ಪೂಜೆಸಲ್ಲಿಸಿ ಬಿಂದಿಗೆಯ ‘ಹೊಸನೀರ’ನ್ನು ಮನೆಯಲ್ಲಿ ತು೦ಬಿಟ್ಟು ಕೊ೦ಡಿರುವ ದಿನ ಬಳಕೆಯ ಹ೦ಡೆಗಳು, ತೊಟ್ಟಿಗಳು, ಬಿ೦ದಿಗೆಗಳು ಮತ್ತು ಬಕೇಟುಗಳ ನೀರಿಗೆ ತೊಟ್ಟು ಬೆರೆಸಿ ದಿನನಿತ್ಯದ ಅಡುಗೆ, ಸ್ನಾನ, ಪೂಜೆ ಪುನಸ್ಕಾರಾದಿ ಶುಭ ಕಾರ್ಯಗಳಿಗೆ ಬಳಸುವ ಪದ್ಧತಿ ಈಗಲೂ ಚಾಲ್ತಿಯಲ್ಲಿದೆ.
ಮಾಳವರು ಉಗಾದಿಯ ಸಾ೦ಯಕಾಲ ಮುಳುಗುವ ಸೂರ್ಯನಿಗೆ ಹಾಗೂ ಉದಯಿಸುವ ಚ೦ದ್ರನಿಗೆ ನಮಿಸುತ್ತಾರೆ. ಸುಮೇರಿಯನ್ ಭಾಷೆಯಲ್ಲಿ ‘ಉಗು’ ಎಂದರೆ ನೀರಾವರಿ ಭೂಮಿ. ಕರ್ನಾಟಕದ ಮಂಡ್ಯ ಜಿಲ್ಲೆ ಮಳವಳ್ಳಿ ಪ್ರದೇಶದ ಮಾಳವ ಜನಾಂಗದ ಭಾಷೆಯಲ್ಲಿಯೂ ಉಗು ಎಂದರೆ ಜಲ ಸಂಪನ್ನ ಭೂಮಿ. ‘ಉ’ ಎ೦ದರೆ ನೀರು. ಉಗಳು ಎ೦ದರೆ ಮಾನವನ ಬಾಯಿಯ ನೀರು. ಇಲ್ಲಿ ಗ ಅಥವಾ ಕ ಎ೦ದರೆ ಬಾಯಿ. ಳು ಎ೦ದರೆ ಮಾನವ ಅಥವಾ ವ್ಯಕ್ತಿ. ‘ಉಕು’ ಎಂಬ ಶಬ್ದದ ಅರ್ಥವೂ ನೀರಾವರಿ ಭೂಮಿ. ಉಕುರಗುಡ್ಡೆ ಹೊಲ ಎಂದರೆ ಬೆಟ್ಟದಂಚಿನಿಂದ ಸಮೃದ್ಧ ನೀರು ಪಡೆಯುವ ನೀರಾವರಿ ಜಮೀನು ಎಂದಾಗುತ್ತದೆ. ‘ಉಗುನಿ ಹಂಬು’ ನೀರಿನ ಮೇಲ್ಭಾಗದವರೆಗೆ ಬೆಳೆಯುವ ಹಚ್ಚಹಸುರು ಗಿಡಗಂಟಿಗಳೆಂದು ಸಹ ಅರ್ಥೈಸುವ ಹಾಗೆ ಇನ್ನಿತರ ಸಂಪ್ರದಾಯಗಳು ‘ಉಗು’ವಿನೊಂದಿಗೆ ಹೆಣೆದುಕೊಂಡಿವೆ.
ನೀರು, ಸೂರ್ಯ ಹಾಗೂ ಚಂದ್ರನನ್ನು ಪೂಜಿಸುವ ಹಬ್ಬವೇ ‘ಉಗಾದಿ’. ಮಾಳವರಲ್ಲಿ ‘ಆದಿ’ ಎಂದರೆ ಸೂರ್ಯನ ಹೆಸರು. ಉಗು ಮತ್ತು ಆದಿ ಸೇರಿದಾಗ ನೀರು ಮತ್ತು ಸೂರ್ಯ ಎಂದಾಗುತ್ತದೆ. ನಾಗಾ ಜನಾಂಗದ ನಾಗಧರ್ಮದ ಕಾಲದ ದಿನಗಳಲ್ಲೇ ಸಂಪ್ರದಾಯ ಹುಟ್ಟಿ ಬೆಳೆದಿರಬಹುದು. ಉಗ್,ಉಗಿ, ಉಗ್ಗು, ಉಪ್ಪು, ಉಮಾ, ಉಕ್ಕು, ಉ೦ಣು, ಉಕ್ಕಡ, ಉಕ್ಕಡಗಾತ್ರಿ ಮತ್ತು ಇತ್ಯಾದಿ ಪದಗಳು ‘ಉ’ ಅ೦ದರೆ ನೀರಿಗೆ ಅ೦ಟಿಕೊ೦ಡ ಪದಗಳಾಗಿವೆ. ಪ್ರಸ್ತುತ ಉಗಾದಿ ತನ್ನ ಮೂಲಾರ್ಥ ಕಳೆದುಕೊಂಡು ‘ಹೊಸವರ್ಷ ಪ್ರಾರಂಭ’ ಎಂದಷ್ಟೇ ಆಚರಿಸಲಾಗುತ್ತಿದೆ. ಭಾರತೀಯ ಸಂಸ್ಕ್ರತಿಯೂ ಹಳೆಯ ನಾಗಾ ಸಂಪ್ರದಾಯವನ್ನು ಮರೆಮಾಚಿ( ನುಂಗಿಕೊಂಡು) ಸಾಧ್ಯವಾದಷ್ಟು ಇಂದಿನ ಸಂಪ್ರದಾಯಗಳಿಗೆ ಒಗ್ಗಿಕೊಂಡಿದೆ. ಇದು ‘ಉಗಾದಿ’ ಹೊರತು ‘ಯುಗಾದಿ’ ಅಲ್ಲ. ಉಗಾದಿ ಎ೦ಬ ಪದ ಮೂಲ ದ್ರಾವಿಡ ಪದವೇ ಹೊರತು ಸ೦ಸ್ಕೃತದಿ೦ದ ಉದಯಿಸಿಲ್ಲ.

ದಿನದ ಸುದ್ದಿ
ದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಮಿಸುತ್ತಿರುವ ಅರ್ಹ ಸಂಘ, ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳನ್ನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮಹಿಳೆಯರು ಹಾಗೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆತ್ಮಸ್ಥೆರ್ಯದಿಂದ ಹೋರಾಡಿ ಜೀವನೋಪಾಯದಿಂದ ಪಾರು ಮಾಡಿದಂತಹ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಯನ್ನು ಉಪನಿರ್ದೇಶಕರು ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಾವಣಗೆರೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 24 ರೊಳಗಾಗಿ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ ಬಾಲಕರ ಬಾಲಮಂದಿರ ಕಟ್ಟಡ, 14ನೇ ಮುಖ್ಯ ರಸ್ತೆ, ಕುವೆಂಪುನಗರ, ಎಂ.ಸಿ.ಸಿ, ‘ಬಿ’ ಬ್ಲಾಕ್, ದಾವಣಗೆರೆ ದೂ.ಸಂ:08192-264056 ಸಲ್ಲಿಸಬೇಕೆಂದು ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:2023-24ನೇ ಸಾಲಿನಲ್ಲಿ ಚನ್ನಗಿರಿ ತಾಲ್ಲೂಕಿನಲ್ಲಿ ಬರುವ ಸಮಸ್ಯಾತ್ಮಕ ಗ್ರಾಮಗಳಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರ ತನಿಖೆಗೆ ಒಳಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿ 5 ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ ದಾವಣಗೆರೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಗಿತ್ತೆ ಮಾಧವ್ ವಿಠ್ಠಲ್ ರಾವ್, ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳೇಶ್ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ದಾವಣಗೆರೆ ಇಲ್ಲಿಗೆ 2023-24ನೇ ಸಾಲಿನಲ್ಲಿ ಉಂಟಾದ ಮಳೆಯ ಅಭಾವ ಮತ್ತು ಬರದ ಕಾರಣದಿಂದ ಕೋಟ್ಯಾಂತರ ರೂಪಾಯಿಗಳನ್ನು ಕುಡಿಯುವ ನೀರಿಗಾಗಿ ಸರ್ಕಾರ ಬಿಡುಗಡೆ ಮಾಡಿರುತ್ತದೆ. ಆದರೆ ಕೆಲವು ಅಧಿಕಾರಿಗಳು ತುರ್ತು ಕುಡಿಯುವ ನೀರಿನ ಅನುದಾನವನ್ನು ದುರುಪಯೋಗಪಡಿಸಿಕೊಂಡ ಮಾಹಿತಿ ತಿಳಿದು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಉಪ ವಿಭಾಗ, ಚನ್ನಗಿರಿ ಇವರಿಂದ ಮಾಹಿತಿಹಕ್ಕು ಅಡಿಯಲ್ಲಿ ದಾಖಲೆ ಪಡೆಯಲಾಗಿದೆ.
ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಸಾಕಷ್ಟು ಅವ್ಯವಹಾರ ನಡೆದಿರುವುದು ಕಂಡುಬಂದ ಕಾರಣ ಸೂಕ್ತ ದಾಖಲೆಗಳೊಂದಿಗೆ ದಿನಾಂಕ: 05-07-2025 ರಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ, ದಾವಣಗೆರೆ ಇವರಿಗೆ ದೂರು ನೀಡಿ, ತನಿಖೆಗೆ ಒಳಪಡಿಸುವಂತೆ ಕೋರಿದ್ದರು. ದೂರು ನೀಡಿ 3 ತಿಂಗಳು ಕಳೆದರೂ ದೂರು ಅರ್ಜಿಗೆ ಸಂಬಂಧಿಸಿದಂತೆ ತನಿಖೆಯನ್ನು ಕೈಗೊಂಡ ಬಗ್ಗೆ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ದಿನಾಂಕ: 29-10-2025 ರಂದು ಜ್ಞಾಪನವನ್ನು ಸಹ ನೀಡಲಾಗಿತ್ತು.
ಆದರೆ ನಾವು ಜ್ಞಾಪನ ನೀಡಿ ಒಂದು ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ ದಾವಣಗೆರೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಗಿತ್ತೆ ಮಾಧವ್ ವಿಠ್ಠಲ್ ರಾವ್ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ವಕೀಲ ಡಾ.ಕೆ.ಎ.ಓಬಳೇಶ್ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಜಿಎಂ ವಿಶ್ವವಿದ್ಯಾಲಯ ರಂಗೋತ್ಸವ -2025 | ವಿದ್ಯಾರ್ಥಿಗಳ ಪ್ರತಿಭೆ ಅನಾವರಣ : ಸ್ಪರ್ಧೆಯಲ್ಲಿ ರಂಗ ಪ್ರೇಮ, ನಟನಾ ಚತುರತೆ ಬೆರಗು
ಸುದ್ದಿದಿನ,ದಾವಣಗೆರೆ:ನಗರದ ಜಿಎಂ ವಿಶ್ವವಿದ್ಯಾನಿಲಯದ ಜಿಎಂ ಹಾಲಮ್ಮ ಸಭಾಂಗಣದಲ್ಲಿ 1.12 2025 ರಂದು ರಂಗೋತ್ಸವ -2025 ರ ಅಂತಿಮ ಸುತ್ತು ಗ್ರ್ಯಾಂಡ್ ಫಿನಾಲೆಯನ್ನು ಏರ್ಪಡಿಸಲಾಗಿತ್ತು.
ಜಿಎಂ ವಿಶ್ವವಿದ್ಯಾಲಯದ ಎಲ್ಲಾ ವಿಭಾಗಗಳಲ್ಲೂ ಇರುವ ರಂಗಾಸಕ್ತ,ಅಭಿನಯ ಪ್ರಿಯ ವಿದ್ಯಾರ್ಥಿಗಳ ಅಭಿನಯ ಕಲೆಯನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸುವ ಮಹತ್ತರ ಉದ್ದೇಶ ರಂಗೋತ್ಸವದಾಗಿದ್ದು, ಮೂರು ಹಂತಗಳಲ್ಲಿ ಈ ಸ್ಪರ್ಧೆಯನ್ನು ನಡೆಸಲಾಯಿತು.
ಪ್ರಥಮ ಹಂತ ಆಡಿಷನ್ (ಆಯ್ಕೆ) ಗುಂಪುಗಳ ರಚನೆ ,ಎರಡನೇ ಹಂತ ಪೌರಾಣಿಕ ಸುತ್ತು ಈ ಹಂತದಲ್ಲಿ ಎಲಿಮಿನೇಷನ್ ಪ್ರಕ್ರಿಯೆ ಇದ್ದು ಕಡಿಮೆ ಅಂಕಗಳಿಸಿದವರನ್ನು ಗುಂಪಿನಿಂದ ಹೊರಗುಳಿಸಲಾಯಿತು. ಮೂರನೇ ಹಂತ ಅಂತಿಮ ಸುತ್ತು ಗ್ರ್ಯಾಂಡ್ ಫಿನಾಲೆ ಆಗಿದ್ದು ಈ ಸುತ್ತಿಗೆ ಬಂದ ನಾಲ್ಕು ತಂಡಗಳಿಗೆ ‘ಸಾಮಾಜಿಕ ಜಾಗೃತಿ ‘ಎಂಬ ವಿಷಯ ನೀಡಲಾಗಿದ್ದು, ಲೈಂಗಿಕ ದೌರ್ಜನ್ಯ ರೈತರ ಬವಣೆ, ಹೆಣ್ಣು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು, ಡ್ರಗ್ಸ್ ಹಾವಳಿ ಈ ವಿಷಯಗಳನ್ನು ಕೇಂದ್ರೀಕರಿಸಿ ನಾಲ್ಕು ತಂಡಗಳು ಮನೋಜ್ಞವಾಗಿ ಅಭಿನಯಿಸಿದವು.
ತೀರ್ಪುಗಾರರಾಗಿ ಪ್ರೊ. ಗಣೇಶ್ ಜಿ ತಿಲ್ವೆ, ಪ್ರೊ. ದೀಪಿಕಾ ವಿ.ಬಿ, ಪ್ರೊ. ರಾಜೇಶ್ವರಿ ವೈ.ಎಂ ಮೂರು ಹಂತಗಳಲ್ಲೂ ತೀರ್ಪನ್ನು ನೀಡಿದರು. ಶೇಕಡ 70 ತೀರ್ಪುಗಾರರ ತೀರ್ಪು, ಶೇಕಡ 30 ಪ್ರೇಕ್ಷಕರ ಆನ್ಲೈನ್ ವೋಟಿಂಗ್ ಮೂಲಕ ಅಂತಿಮ ತೀರ್ಪನ್ನು ಪ್ರಕಟಿಸಲಾಯಿತು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಜಿಎಂ ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಸುನಿಲ್ ಕುಮಾರ್ ಬಿ.ಎಸ್, ವಿದ್ಯಾರ್ಥಿ ವ್ಯವಹಾರಗಳ ವಿಭಾಗದ ಉಪನಿರ್ದೇಶಕರಾದ ಡಾ. ಸಂತೋಷ್ ಕುಮಾರ್ ಎಂ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ದೀಪಾ ಬಿ.ಎಸ್ ಉಪಸ್ಥಿತರಿದ್ದು, ರಂಗೋತ್ಸವ-2025ರ ವಿನ್ನರ್ಸ್ ಟ್ರೋಫಿಯನ್ನು ಹಾಗೂ 10000 ನಗದು ಬಹುಮಾನವನ್ನು ಲಿಖಿತ ಮತ್ತು ತಂಡದವರಿಗೆ ಹಾಗೂ ಗೌತಮ್ ಮತ್ತು ತಂಡದವರಿಗೆ ರನ್ನರ್ಸ್ ಟ್ರೋಫಿ ಮತ್ತು 7500 ನಗದು ಬಹುಮಾನವನ್ನು ನೀಡಿದರು.
ಸಾಹಿತ್ಯ, ನಿರ್ದೇಶನ, ರಂಗಸಜ್ಜಿಕೆ ಎಲ್ಲವನ್ನು ಆಯಾ ತಂಡದ ವಿದ್ಯಾರ್ಥಿಗಳೇ ನಿರ್ವಹಿಸಿಕೊಂಡದ್ದು ವಿಶೇಷವಾಗಿತ್ತು. ಪ್ರಸ್ತುತ ಧಾವಂತದ ದಿನಮಾನಗಳಲ್ಲೂ ವಿದ್ಯಾರ್ಥಿಗಳಲ್ಲಿ ಹುದುಗಿರುವ ಈ ರಂಗ ಪ್ರೇಮ, ನಟನಾ ಚತುರತೆ ಪ್ರೇಕ್ಷಕರನ್ನು ಬೆರಗುಗೊಳಿಸಿತು.
ಕಾರ್ಯಕ್ರಮದ ಮೂರು ಹಂತಗಳಲ್ಲೂ ನಿಶಾ ನಿತ್ಯಾ ಕೆ, ಸಾಕಿದ್ ಬಿ.ಆರ್ ರವರು ಮನೋಜ್ಞವಾಗಿ ನಿರೂಪಿಸಿದರು ಹಾಗೂ ವಿದ್ಯಾರ್ಥಿ ವ್ಯವಹಾರಗಳ ವಿಭಾಗದ ವಿದ್ಯಾರ್ಥಿ ಕಾರ್ಯದರ್ಶಿಯಾದ ಸಚಿನ್ ರವರು ಹಾಗೂ ಎಲ್ಲಾ ವಿಭಾಗಗಳ ಸಾಂಸ್ಕೃತಿಕ ವಿದ್ಯಾರ್ಥಿ ಪ್ರತಿನಿಧಿಗಳು ಕಾರ್ಯಕ್ರಮದ ಎಲ್ಲಾ ಹಂತಗಳು ಸುಸೂತ್ರವಾಗಿ ನೆರವೇರಲು ಸಹಕರಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ1 day agoದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ2 days agoದುಡಿಯುವ ವರ್ಗಕ್ಕೆ ಸ್ಥಳದಲ್ಲೇ ಉಚಿತ ಚಿಕಿತ್ಸೆ : ಶಾಸಕ ಕೆ.ಎಸ್.ಬಸವಂತಪ್ಪ ‘ಸಂಚಾರಿ ಆರೋಗ್ಯ ಘಟಕ’ಕ್ಕೆ ಚಾಲನೆ
-
ದಿನದ ಸುದ್ದಿ2 days agoಜಿಎಂ ವಿಶ್ವವಿದ್ಯಾಲಯ ರಂಗೋತ್ಸವ -2025 | ವಿದ್ಯಾರ್ಥಿಗಳ ಪ್ರತಿಭೆ ಅನಾವರಣ : ಸ್ಪರ್ಧೆಯಲ್ಲಿ ರಂಗ ಪ್ರೇಮ, ನಟನಾ ಚತುರತೆ ಬೆರಗು
-
ದಿನದ ಸುದ್ದಿ2 days agoಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ
-
ದಿನದ ಸುದ್ದಿ2 days agoಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ7 hours agoದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ

