ಬಹಿರಂಗ
ಸ್ವಾಭಿಮಾನ v/s ಜೀತಗಾರಿಕೆ
ಸ್ವಾಭಿಮಾನ ಅಥವಾ ಆತ್ಮಗೌರವ ಅಥವಾ ಸ್ವಂತಿಕೆ… ಹೀಗೆ ಹೇಗೆ ಬೇಕಾದರೂ ಕರೆಯಿರಿ ಅದು ಮಾನವ ಜೀವನದ ಬಹುದೊಡ್ಡ ಅಂಗ ಅಥವಾ ಅಂಶ. ಅದು ಹೇಗಿರುತ್ತದೆ? ಯಾವ ರೂಪದಲ್ಲಿ ಇರುತ್ತದೆ? ಬಹುಶಃ ಅದನ್ನು ಪದಗಳಲ್ಲಿ ಹೇಳುವುದು, ವರ್ಣಿಸುವುದು ಅಸಾಧ್ಯ. ಬದಲಿಗೆ ಬದುಕಿ ತೋರಬೇಕಷ್ಟೆ. ಬದುಕು ಎಂದಾಕ್ಷಣ ಸ್ವಾಭಿಮಾನ ಎಂಬ ಆ ಅಂಶ ಸಂದರ್ಭದ ರೂಪದಲ್ಲಿ ಎದುರಾಗುತ್ತದೆ, ಕಾಲದ ನಿರಂತರ ಪರೀಕ್ಷೆಯಲ್ಲಿ ಅದು ಮತ್ತೆ ಮತ್ತೆ ಎದುರು ಬರುತ್ತದೆ.
ಉದಾಹರಣೆಗೆ ಒಬ್ಬ ಮಹಿಳೆಗೆ ಒಬ್ಬ ಪುರುಷನ ಎದುರು ಸ್ವಾಭಿಮಾನ ಮತ್ತು ಸ್ವಾವಲಂಬನೆ ಸರಿದೂಗಿಸಕೊಳ್ಳುವುದು ಅಥವಾ ಕಾಪಾಡಿಕೊಳ್ಳುವುದು ಕಷ್ಟವಾದರೆ, ಒಬ್ಬ ಬಡವನಿಗೆ ಸಿರಿವಂತನ ಎದುರು ಅದೇ ಸ್ವಾಭಿಮಾನ ಸರಿದೂಗಿಸಿಕೊಳ್ಳುವುದು, ಕಾಪಾಡಿಕೊಳ್ಳುವುದು ಕಷ್ಟ. ಅಂದಹಾಗೆ ಸ್ವಾಭಾವಿಕವಾಗಿ ಅಲ್ಲಿ ಸಂಘರ್ಷದ ವಾತಾವರಣ ಏರ್ಪಡುತ್ತದೆ ಮತ್ತು ಅಂತಹ ಸಂಘರ್ಷದ ವಾತಾವರಣವನ್ನು ಪರಸ್ಪರರು ನಿಭಾಯಿಸುವುದರ ಮೂಲಕ ಪರಸ್ಪರರ ಸ್ವಾಭಿಮಾನವನ್ನು ಕಾಪಾಡಿಕೊಳ್ಳಬಹುದು. ವಾಸ್ತವವೆಂದರೆ ಹೀಗೆಯೇ ಶೋಷಿತ ಸಮುದಾಯಗಳು ಮತ್ತು ಮೇಲ್ವರ್ಗಗಳ ನಡುವೆ ಕೂಡ ಇಂತಹ ಸ್ವಾಭಿಮಾನದ ಪ್ರಶ್ನೆ ಬರುತ್ತದೆ ಎಂಬುದು.
ನಿಜ, ಸ್ವಾಭಿಮಾನದ ಪ್ರಶ್ನೆ ಎದುರಾದಾಗ ಅಲ್ಲಿ ಮತ್ತದೆ ಸಂಘರ್ಷದ ಪ್ರಶ್ನೆ ಕೂಡ ಎದುರಾಗುತ್ತದೆ. “ನಿನ್ನನ್ನು ಮುಟ್ಟಿಸಿಕೊಳ್ಳುವುದಿಲ್ಲ, ನೀನು ಆಚೆ ನಿಲ್ಲು, ನೀನು ದೇವಸ್ಥಾನ ಪ್ರವೇಶಿಸಬೇಡ, ನೀನು ನಮ್ಮ ಬೀದಿ ಪ್ರವೇಶಿಸಬೇಡ, ನೀನು ನಮ್ಮ ಬೀದಿಯ ಕೀಳು ಕೆಲಸಗಳನ್ನು ಮಾಡಲೆಂದೇ ಇರುವುದು, ನೀನು ನಮ್ಮ ಜಮೀನಿನಲ್ಲಿ ಜೀತಮಾಡಲೆಂದೇ ಇರುವುದು…” ಇತ್ಯಾದಿ ಸಂದರ್ಭಗಳು ಶೋಷಿತ ಸಮುದಾಯಗಳ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲವು ಸಂದರ್ಭಗಳು. ಹಾಗಂತ ಇಲ್ಲಿ ಸ್ವಾಭಿಮಾನ ಅಡ ಇಡಬೇಕೆ? ಖಂಡಿತ ಸಲ್ಲದು. ಇದನ್ನೆ ಬಾಬಾಸಾಹೇಬ್ ಅಂಬೇಡ್ಕರ್ರವರು ಹೇಳಿದ್ದು “ಸ್ವಾಭಿಮಾನ ಇಲ್ಲದ ಮನುಷ್ಯನ ಬಾಳು ಜೀವಂತ ಶವದಂತೆ” ಎಂದು. ಅರ್ಥಾತ್ ಸ್ವಾಭಿಮಾನ ಗಳಿಸಿಕೊಳ್ಳಲು ಶೋಷಿತ ಸಮುದಾಯಗಳು ನಿರಂತರ ಯತ್ನಿಸಬೇಕು ಎಂಬುದು ಅಂಬೇಡ್ಕರರ ಆಶಯ.
ಈ ಸಂದರ್ಭದಲ್ಲಿ ಇಲ್ಲಿ ಮತ್ತದೇ ಅಂದರೆ ಸಂಘರ್ಷದ ಪ್ರಶ್ನೆ ಬರುತ್ತದೆ. ಏಕೆಂದರೆ ಶೋಷಿತ ಸಮುದಾಯಗಳಿಗೆ ಬಡತನ ಇರುತ್ತದೆ, ಸ್ವಾವಲಂಬನೆಗಾಗಿ ಉದ್ಯೊÃಗ ಇರುವುದಿಲ್ಲ, ಜಮೀನು ಇರುವುದಿಲ್ಲ. ಹಾಗೆಯೇ ಆತನಿಗೆ ಆತನ ಮಾನ-ಪ್ರಾಣದ ಪ್ರಶ್ನೆ ಎದುರಾಗುತ್ತದೆ. ತನ್ನ ಮನೆಯ ಹೆಣ್ಣು ಮಕ್ಕಳ ಮಾನದ ಪ್ರಶ್ನೆ ಎದುರಾಗುತ್ತದೆ. ಏಕೆಂದರೆ ತನ್ನ ಬಡತನದ ಕಾರಣಕ್ಕಾಗಿ ಆತ ಮೇಲ್ವರ್ಗದವರ ಮುಂದೆ ಕೈಚಾಚಬೇಕಾಗಬಹುದು, ಉದ್ಯೊÃಗ ಇಲ್ಲದ ಕಾರಣಕ್ಕಾಗಿ ಅವರ ಮುಂದೆ ಕೈಚಾಚಬೇಕಾಗಬಹುದು. ಹಾಗೆಯೇ ತನ್ನ ಮನೆಯ ಹೆಣ್ಣು ಮಕ್ಕಳ ರಕ್ಷಣೆಗಾಗಿ ಆತ ಮೇಲ್ವರ್ಗದವರ ಮುಂದೆ ಕೈಚಾಚಬೇಕಾಗಬಹುದು.
ಖಂಡಿತ, ಇಂತಹ ಕೈಚಾಚುವಿಕೆಯ ಸಂದರ್ಭ ಬರುತ್ತದೆ ಎಂಬ ಕಾರಣಕ್ಕಾಗಿಯೇ ಅಂಬೇಡ್ಕರ್ರವರು ಶೋಷಿತ ಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕೊಡಿಸಿದ್ದು. ಬಜೆಟ್ನಲ್ಲಿ ಸರ್ಕಾರ ಇವರಿಗೋಸ್ಕರ ಸಾಕಷ್ಟು ಅನುದಾನ ಮೀಸಲಿಡುವ ಪದ್ಧತಿ ಜಾರಿಗೆ ತಂದದ್ದು. ಹಾಗೆಯೇ ಇವರ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ, ಸಂಘರ್ಷದ ವಾತಾವರಣ ಮೂಡುತ್ತದೆ, ರಕ್ಷಣೆ ಸಿಗಲಿ ಎಂಬ ಕಾರಣಕ್ಕಾಗಿಯೇ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯಿದೆ ರೂಪಿಸುವಿಕೆಗೆ ಸಂವಿಧಾನದಲ್ಲಿ ಅವಕಾಶ ನೀಡಿದ್ದು.
ಅಂದಹಾಗೆ ಇಂತಹ ಸಾರ್ವಜನಿಕ ಅವಕಾಶಗಳನ್ನು ನೀಡಿಸುವುದರಷ್ಟರಲ್ಲಿಯೇ ಅಂಬೇಡ್ಕರ್ರವರು ತೃಪ್ತಿ ಹೊಂದಿದರೇ? ಊಹ್ಞೂಂ, ಸ್ವತಃ ಅವರೇ ಸ್ವಾಭಿಮಾನದ ಸಂಕೇತವಾಗಿ ಬದುಕಿದರು. ಉದಾಹರಣೆಗೆ ಯಾವ ಸಮಾಜ ಕನಿಷ್ಠ ಶಿಕ್ಷಣ ಪಡೆಯಲು ಪರದಾಡುತ್ತಿತ್ತೋ ಅಂತಹ ಸಮಾಜದ ಮುಂದೆ ಅಂಬೇಡ್ಕರ್ರವರು ಸ್ವತಃ ಸಾಲು ಸಾಲು ಪದವಿಗಳನ್ನು ಪಡೆದರು, ಮಾದರಿಯಾದರು. ಹಾಗೆಯೇ ಯಾವ ಸಮಾಜ ಬರೀ ಹರಿದ, ಚಿಂದಿಯಾದ ಕೊಳಕು ಬಟ್ಟೆಗಳನ್ನು ಧರಿಸಿ ಸಮಾಜದ ಮುಂದೆ ತನ್ನನ್ನು ತಾನಿರುವುದೇ ಹೀಗೆ ಎಂದು ಬಿಂಬಿಸಿಕೊಂಡಿತ್ತೊ ಅಥವಾ ಸಮಾಜ ಹಾಗೆ ಬಿಂಬಿಸಿತ್ತೊ ಅದಕ್ಕೆ ವಿರುದ್ಧವಾಗಿ ಅಂಬೇಡ್ಕರ್ರವರು ಸದಾ ಗರಿ ಗರಿ ಕೋಟು ಧರಿಸಿದರು. ಮಾದರಿಯಾದರು. ಹಾಗೆಯೇ ಯಾವ ಸಮಾಜ ತನ್ನ ನಡುವಿನ ಮೇಲ್ವರ್ಗದವರನ್ನು ಸದಾ “ಬುದ್ಧಿ, ಸ್ವಾಮಿ” ಎಂದು ಉಚ್ಛಾರಣೆಯಲ್ಲಿಯೂ ಜೀತಗಾರಿಕೆ ತೋರುತ್ತಿತ್ತೊ, ಸ್ವಾಭಿಮಾನ ಮರೆಯುತ್ತಿತ್ತೊ ಅಂತಹ ಉಚ್ಛಾರಣೆಯ ಜೀತಗಾರಿಕೆಯ ನಡುವೆ ಅಂಬೇಡ್ಕರ್ರವರು “ಮಿಸ್ಟರ್, ಸರ್” ಎಂಬ ಪದ ಬಳಸಿದರು. ಉದಾಹರಣೆಗೆ 1932ರಲ್ಲಿ ಅಂದರೆ ಸುಮಾರು 90 ವರ್ಷಗಳ ಹಿಂದೆಯೇ ಪೂನಾ ಒಪ್ಪಂದದ ಸಂದರ್ಭದಲ್ಲಿ ಅಂಬೇಡ್ಕರ್ರವರು ಸ್ವತಃ ಮಹಾತ್ಮ ಗಾಂಧಿಯವರನ್ನು “ಮಿಸ್ಟರ್ ಗಾಂಧಿ” ಎಂದು ಉಚ್ಛರಿಸಿರುವುದನ್ನು ಅವರ ಬರಹಗಳು ಮತ್ತು ಭಾಷಣಗಳಲ್ಲಿ ನಾವು ಈಗಲೂ ಕಾಣಬಹುದು. ಈ ನಿಟ್ಟಿನಲ್ಲಿ ಹೇಳುವುದಾದರೆ ಅದು ಉಚ್ಛಾರಣೆಯಲ್ಲಿಯೂ ಸ್ವಾಭಿಮಾನದ ಸಂಕೇತಿಸುವಿಕೆಗೆ ಶೋಷಿತ ಸಮುದಾಯಗಳಿಗೆ ಅಕ್ಷರಶಃ ಮಾದರಿಯಾಗುತ್ತದೆ.
ಹಾಗಿದ್ದರೆ ಅಂಬೇಡ್ಕರ್ರವರು ಹೀಗೆಲ್ಲ ಕಾನೂನಾತ್ಮಕ ಮತ್ತು ವಯಕ್ತಿಕ ಬದುಕಿನ ಮೂಲಕ ನಮಗೆ ಸ್ವಾಭಿಮಾನದ ದಾರಿ ತೋರಿಸಿದರು ಎಂದಾಕ್ಷಣ ಸ್ವಾಭಿಮಾನ ಸಿಕ್ಕಿಯೇ ಬಿಟ್ಟಿತು ಎಂದರ್ಥವೇ? ಖಂಡಿತ ಇಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಅಂಬೇಡ್ಕರ್ರವರು ಹಿಂದೂ ಧರ್ಮದಲ್ಲಿಯೇ ಶೋಷಿತ ಸಮುದಾಯದ ವ್ಯಕ್ತಿಯೋರ್ವ ಉಳಿದರೆ ಆತನ ಮುಂದೆ ಮತ್ತದೇ ಸ್ವಾಭಿಮಾನದ ಸಂಘರ್ಷದ ಸಂದರ್ಭ ಎದುರಾಗುತ್ತದೆ ಎಂದು ಮತಾಂತರದ ಮತ್ತೊಂದು ಹಾದಿ ತೋರಿದರು.
ಮತಾಂತರ, ಅದೊಂದು ಈಗಿರುವ ಸಾಮಾಜಿಕ ಮತ್ತು ಸಾಂಸ್ಕೃತಿಕ ವಾತಾವರಣದ ಬದಲಾವಣೆಯಷ್ಟೆ ಹೊರತು ಇನ್ನೊಬ್ಬರ ಸ್ವಾಭಿಮಾನಕ್ಕೆ ಧಕ್ಕೆ ತರುವ ಕ್ರಿಯೆಯಲ್ಲ. ಈ ನಿಟ್ಟಿನಲ್ಲಿ ಸ್ವತಃ ಅಂಬೇಡ್ಕರ್ರವರು ಬೌದ್ಧ ಧರ್ಮಕ್ಕೆ ತಮ್ಮ 10 ಲಕ್ಷ ಅನುಯಾಯಿಗಳೊಡನೆ ಅ ಕಾಲದಲ್ಲೆ ಮತಾಂತರ ಹೊಂದಿದರು. ಎಲ್ಲಿ ಸ್ವಾಭಿಮಾನವಿಲ್ಲವೋ ಅಲ್ಲಿ ನನ್ನ ಚಪ್ಪಲಿಯನ್ನೂ ಸಹ ಬಿಡುವುದಿಲ್ಲ ಎಂದು ವ್ಯವಸ್ಥೆಗೆ ಸಾರಿ ಹೇಳಿದರು ಮತ್ತು ಹಾಗೆ ಬದುಕಿ ತೋರಿಸಿದರೂ ಕೂಡ. ಅಕ್ಷರಶಃ ಅಂಬೇಡ್ಕರ್ರವರು ಅನುಸರಿಸಿದ ಈ ಬೌದ್ಧ ಧರ್ಮದೆಡೆಗಿನ ಮತಾಂತರದ ಹಾದಿ ಕೂಡ ಪ್ರಸ್ತುತದ ಶೋಷಿತ ಸಮುದಾಯಗಳ ಸ್ವಾಭಿಮಾನದ ತಾಕಲಾಟಕ್ಕೆ ಖಂಡಿತ ಉತ್ತರವಾಗುತ್ತದೆ.
ಈ ನಡುವೆ ಬಾಬಾಸಾಹೇಬ್ ಅಂಬೇಡ್ಕರ್ರವರ ಬದುಕು ಎಂದಾಕ್ಷಣ ಅಲ್ಲಿ ರಾಜಕೀಯ ಬದುಕಿನ ಪ್ರಶ್ನೆಯೂ ಬರುತ್ತದೆ. ಅಲ್ಲಿಯೂ ಅಷ್ಟೆ ಅಂಬೇಡ್ಕರ್ರವರು ತಮ್ಮದೇ ಸ್ವಂತ ಪಕ್ಷಗಳ ಮೂಲಕ ರಾಜಕಾರಣ ಮಾಡಿ ಬದುಕಿದರೇ ವಿನಹ ಆಗ ಅಸ್ತಿತ್ವದಲ್ಲಿದ್ದ ಇತರೆ ರಾಜಕೀಯ ಪಕ್ಷಗಳನ್ನು ಅವರು ಸೇರಲಿಲ್ಲ. ಮತ್ತೆ ಹೇಳುವುದಾದರೆ ಇಲ್ಲಿಯೂ ಅವರಿಗೆ ಎದುರಾದದ್ದು ಮತ್ತದೇ ಸ್ವಾಭಿಮಾನದ ಪ್ರಶ್ನೆ.
ಹೀಗಿರುವಾಗ, ಅಂಬೇಡ್ಕರ್ರವರು ಶೋಷಿತ ಸಮುದಾಯಗಳಿಗೆ ಒದಗಿಸಿಕೊಟ್ಟ ಹಕ್ಕುಗಳು ಮತ್ತು ಅವರು ಬದುಕಿದ ರೀತಿ ಹೀಗಿರುವಾಗ ಅಂದರೆ ಸ್ವಾಭಿಮಾನದ ದಿಟ್ಟ ಮಾರ್ಗವಾಗಿರುವಾಗ ಶೋಷಿತ ಸಮುದಾಯಗಳು ಪ್ರಸ್ತುತ ಹೇಗೆ ಬದುಕಬೇಕು ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಸ್ವಾಭಿಮಾನದ ನಡೆಗಳಿಗೆ ವಿರುದ್ಧವಾಗಿ ರಾಜಿಯಾಗಬೇಕೆ? ಆತ್ಮಗೌರವ ಮಾರಿಕೊಳ್ಳಬೇಕೆ? ಎಂಬ ಪ್ರಶ್ನೆಗಳು ಮೂಡಿಬರುತ್ತವೆ. ಅಕ್ಷರಶಃ ಹೇಳುವುದಾದರೆ ಶೋಷಿತ ಸಮುದಾಯಗಳು ಸ್ವಾಭಿಮಾನಕ್ಕೆ, ಸ್ವಾಭಿಮಾನ ಉಳಿಸಿಕೊಳ್ಳುವ ದಿಕ್ಕಿನಲ್ಲಿ ಎಂದಿಗೂ ರಾಜಿಯಾಗಬಾರದು ಎಂಬುದು.
ಹಾಗಿದ್ದರೆ ಸಂಘರ್ಷ? ಉತ್ತರ: ಸಂಘರ್ಷದ ವಾತಾವರಣದಿಂದ ದೂರ ಸರಿಯಬೇಕಷ್ಟೆ. ಉದಾಹರಣೆಗೆ ಬಾಬಾಸಾಹೇಬ್ ಅಂಬೇಡ್ಕರ್ರವರು ಶೋಷಿತ ಸಮುದಾಯಗಳಿಗಾಗಿ ಪ್ರತ್ಯೇಕ ಹಳ್ಳಿಗಳ ವ್ಯವಸ್ಥೆ ಮಾಡಬೇಕು ಎಂದಿದ್ದರು. ಇದರರ್ಥ ಹಿಂದೂಗಳೊಡಗಿನ ಸಂಘರ್ಷದಿಂದ ಮುಕ್ತರಾಗುವುದೇ ಆಗಿತ್ತು. ಹಾಗೆಯೇ ಅಸಮಾನ ಸಾಮಾಜಿಕ ವಾತಾವರಣದಿಂದ ಹೊರಬರಲು ಪಟ್ಟಣ ಪ್ರದೇಶಗಳಿಗೆ ವಲಸೆ ಹೋಗುವುದು ಮತ್ತು ಅಲ್ಲಿ ತಮ್ಮಿಷ್ಟ ಬಂದ ಉದ್ಯೋಗ ಅನುಸರಿಸುವುದು… ಇದೂ ಕೂಡ ಸ್ವಾಭಿಮಾನದ ಮಾರ್ಗವಾಗಿದೆ. ಹಾಗೆಯೇ ಧಾರ್ಮಿಕ ಸ್ವಾಭಿಮಾನಕ್ಕೆ ಧಕ್ಕೆ. ಮೊದಲೇ ಹೇಳಿದ ಹಾಗೆ ಇದಕ್ಕೂ ಕೂಡ ಅಂಬೇಡ್ಕರರು ತೋರಿದ ಬೌದ್ಧ ಧರ್ಮದ ಪರಿಹಾರವಿದೆ. ಇನ್ನು ರಾಜಕಾರಣ, ಅಲ್ಲಿಯೂ ಕೂಡ ತಮ್ಮದೇ ಸ್ವಂತ ಪಕ್ಷಗಳ ಮೂಲಕ ರಾಜಕಾರಣ ಮಾಡುವ ಪರಿಹಾರವಿದೆ. ಇನ್ನು ಶಿಕ್ಷಣ, ಉದ್ಯೋಗ, ಉತ್ತಮ ಬದುಕು, ಉತ್ತಮ ಮಾತುಕತೆಯ(ಮೇಲ್ವರ್ಗದವರೊಡನೆ) ಶೈಲಿ, ಉತ್ತಮ ಆರೋಗ್ಯ… ಇವೆಲ್ಲವೂ ಕೂಡ ಸ್ವಾಭಿಮಾನದ ಬದುಕಿನ ವಿವಿಧ ಮಾದರಿಗಳಾಗಿವೆ. ಅಂಬೇಡ್ಕರರು ಬದುಕಿದ ರೀತಿಗಳಾಗಿವೆ.
ಹಾಗಿದ್ದರೆ ಇಂತಹ ಸ್ವಾಭಿಮಾನ ಮತ್ತು ಅದಕ್ಕೆ ವಿರುದ್ಧವಾದ ಪರಿಕಲ್ಪನೆಯಾದ ಜೀತಗಾರಿಕೆ ಅರ್ಥಾತ್ ಗುಲಾಮಗಿರಿಯ ಬದುಕು ಇವುಗಳ ನಡುವೆ ಅಂತಹ ವ್ಯತ್ಯಾಸವೇನಿದೆ ಎಂಬ ಪ್ರಶ್ನೆ ಬರುತ್ತದೆ. ಉತ್ತರವೇನೆಂದರೆ ಅವೆರಡರ ಅಂದರೆ ಸ್ವಾಭಿಮಾನ ಮತ್ತು ಜೀತಗಾರಿಕೆಯ ನಡುವಿನ ಅಂತರ ತುಂಬಾ ತೆಳುವಾದದ್ದು ಎಂಬುದು. ಹಾಗಿದ್ದರೆ ಅದರ ವ್ಯಾಖ್ಯಾನ? ಖಂಡಿತ, ಅದನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಬದಲಿಗೆ ನಾವು ಬದುಕುವ ರೀತಿಯ ಮೇಲೆ ಅದು ನಿರ್ಧರಿತವಾಗುತ್ತದೆ. ಅಂದರೆ ಹೆಜ್ಜೆ ಹೆಜ್ಜೆಗೂ ಶೋಷಿತ ಸಮುದಾಯಗಳಿಗೆ ಸೇರಿದ ವ್ಯಕ್ತಿಗಳಿಗೆ ತಾನು ಜೀತಗಾರಿಕೆಗೆ ಬೀಳುವುದಿಲ್ಲ ಅಥವಾ ತನ್ನ ಸಮುದಾಯವನ್ನು ಬೀಳಿಸುವುದಿಲ್ಲ, ಬದಲಿಗೆ ಸ್ವಾಭಿಮಾನದಿಂದ ಬದುಕುತ್ತೇನೆ, ಆ ಮಾರ್ಗದಲ್ಲಿಯೇ ನಡೆಯುತ್ತೇನೆ ಎಂಬ ಪ್ರಜ್ಞೆ ಇರಬೇಕು. ನಿಜ ಇದು ಕಷ್ಟದ ಹಾದಿ. ಆದರೆ ಅನಿವಾರ್ಯದ ಹಾದಿ ಕೂಡ ಇದಾಗಿದೆ. ಹಾಗೆಯೇ ಇದು ಬರೀ ಸಿದ್ಧಾಂತವಲ್ಲ. ಬದಲಿಗೆ ನಿರಂತರ ಪ್ರಾಯೋಗಿಕವಾದುದು. ಹಾಗೆ ಇದು ಯಾರೋ ಒಬ್ಬರಿಗೆ ಅಥವಾ ಶೋಷಿತ ಸಮುದಾಯಗಳೊಳಗೆ ಬರುವ ಯಾವುದೋ ಒಂದು ಉಪಜಾತಿಗೆ ಅನ್ವಯವಾಗುತ್ತದೆಯೆಂಬಂತೆಯಲ್ಲ. ಬದಲಿಗೆ ಎಲ್ಲಾ ಉಪಜಾತಿಗಳಿಗೆ ಹೆಣ್ಣು-ಗಂಡು ಎಂಬ ಭೇದವಿಲ್ಲದೆ ಇದು ಅನ್ವಯವಾಗುತ್ತದೆ.ಉದಾಹರಣೆಗೆ ಮಲ ಹೊರುವ, ಶೌಚಾಲಯ ಶುಚಿಗೊಳಿಸುವ ವೃತ್ತಿಯಲ್ಲಿ ಅಂತಹ ಸ್ವಾಭಿಮಾನದ ಅಂಶವೇನಿದೆ? ಖಂಡಿತ ಇಲ್ಲ. ಪರಿಹಾರ ಅಂತಹ ವೃತ್ತಿಗಳನ್ನು ಮಾಡುವುದನ್ನು ಕೈಬಿಡುವುದೇ ಆಗಿದೆ.
ಆದ್ದರಿಂದ ಅಂಬೇಡ್ಕರ್ ಜಯಂತಿಯ ಈ ಸಂದರ್ಭದಲ್ಲಿ ಶೋಷಿತ ಸಮುದಾಯಗಳಿಗೆ ಸೇರಿದ ಪ್ರತಿಯೊಬ್ಬ ವ್ಯಕ್ತಿಯೂ ಸ್ವಾಭಿಮಾನದ ಇಂತಹ ಪಾಠ ಕಲಿಯಬೇಕಿದೆ. ಆ ಮೂಲಕ ಸಮಾನತೆಯ ಬದುಕಿನೆಡೆಗೆ ದಿಟ್ಟ ಹೆಜ್ಜೆ ಇಡಬೇಕಿದೆ.
–ರಘೋತ್ತಮ ಹೊ.ಬ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ
ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.
ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.
ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್ಷಾ |
|
http://Visit : www.suddidina.com
ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ
ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.
9 ಆನೆಗಳ ತೂಕದ ಆಧಾರದಲ್ಲೇ ಆಹಾರ
ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.
ಅಂಬಾರಿ ಆನೆ ಯಾರು? ಕುತೂಹಲ
ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.
ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.
ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ
ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”
– ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್
ದಸರಾ ಗಜಪಡೆಯ ತೂಕದ ವಿವರ
- ಶ್ರೀಕಂಠ: 5,790 ಕೆಜಿ
- ಏಕಲವ್ಯ: 5,600 ಕೆಜಿ
- ಧನಂಜಯ: 5,530 ಕೆಜಿ
- ಮಹೇಂದ್ರ: 5,490 ಕೆಜಿ
- ಪ್ರಶಾಂತ: 5,205 ಕೆಜಿ
- ಗೋಪಿ: 5,170 ಕೆಜಿ
- ಶ್ರೀರಾಮ: 4,820 ಕೆಜಿ
- ಲಕ್ಷ್ಮೀ: 3,990 ಕೆಜಿ
- ಕಾವೇರಿ: 3,075 ಕೆಜಿ

ದಿನದ ಸುದ್ದಿ
ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್ಮೆಂಟ್ಗೆ ‘ಡೆಮಾಲಿಷನ್’ ಶುರು!
ಕೂಡ್ಲುಗೇಟ್ನ ಎಸ್ಎನ್ಎನ್ ರಾಜ್ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ
ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್ನ ಎಸ್ಎನ್ಎನ್ ಎಸ್ಟೇಟ್ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್ಎನ್ಎನ್ ರಾಜ್ ಕಾರ್ಪ್ ಸಂಸ್ಥೆಯು ಎಚ್ಎಸ್ಆರ್ ಲೇಔಟ್ನಲ್ಲಿರುವ ತನ್ನ ಎಸ್ಎನ್ಎನ್ ರಾಜ್ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್ಮೆಂಟ್ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.
₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ
ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ
ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್ಎನ್ಎನ್ ಅಪಾರ್ಟ್ಮೆಂಟ್ ನಿರ್ದೇಶಕ ಅನೂಜ್ ತಿಳಿಸಿದ್ದಾರೆ. ಫ್ಲ್ಯಾಟ್ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.
ಅದೇ ಜಾಗದಲ್ಲಿ ಹೊಸ ಅಪಾರ್ಟ್ಮೆಂಟ್ ನಿರ್ಮಾಣ
ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್ಮೆಂಟ್ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್ಗಳು ಮುಂಗಡವಾಗಿ ಬುಕ್ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.
ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

ದಿನದ ಸುದ್ದಿ
ಪಾಕ್ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ
ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.
ಹೈಲೈಟ್ಸ್ |
|
http://Visit : www.suddidina.com
ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್
ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.
3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ
ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.
ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.
ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ
ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿಯಲ್ಲಿ ಹೆಚ್ಚಿದ ಕಣ್ಗಾವಲು
ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.
ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.



