Connect with us

ಭಾವ ಭೈರಾಗಿ

ಕಾಳಾರಾಮ ದೇವಾಲಯ ಪ್ರವೇಶ ಮತ್ತು ಕುವೆಂಪು ‘ಜಲಗಾರ’ ನಾಟಕ : 90 ವರ್ಷಾಚರಣೆಯ ಹೊತ್ತಿನಲ್ಲಿ

Published

on

  • ಡಾ.ವಡ್ಡಗೆರೆ ನಾಗರಾಜಯ್ಯ

ನಾಸಿಕ್ ನಲ್ಲಿರುವ ಕಾಳಾರಾಮ ದೇವಸ್ಥಾನಕ್ಕೆ ಅಸ್ಪೃಶ್ಯರಿಗೆ ಪ್ರವೇಶ ದೊರಕಿಸಿಕೊಡುವ ಮೂಲಕ ಸಾಮಾಜಿಕ- ಧಾರ್ಮಿಕ ಸಮಾನತೆಗಾಗಿ ಆಗ್ರಹಿಸಿ ಭಾರತದಲ್ಲಿ ಡಾ,ಬಿ.ಆರ್. ಅಂಬೇಡ್ಕರ್ ಅವರು 1930 ರಲ್ಲಿ ನಡೆಸಿರುವ ಹೋರಾಟ ಇಂದಿಗೂ ಒಂದು ಮೈಲಿಗಲ್ಲು. ಈ ಚಳವಳಿಗೆ ಮಾರ್ಚ್ 2020 ಕ್ಕೆ ಬರೋಬ್ಬರಿ 90 ವರ್ಷಗಳಾಗುತ್ತವೆ.

ಇದೇ 1930 ರ ಸಮಯದಲ್ಲಿ ಕಾಕತಾಳೀಯ ಎಂಬಂತೆ ಕರ್ನಾಟಕದಲ್ಲಿ ವಿಶ್ವಮಾನವ ಕವಿ ಕುವೆಂಪು ಅವರು ತನ್ನ 24 ನೇ ವಯಸ್ಸಿನಲ್ಲಿ ರಚಿಸಿರುವ “ಜಲಗಾರ” ನಾಟಕದ ಪ್ರಕಟಣೆಗೂ 90 ವರ್ಷಗಳಾಗುತ್ತಿವೆ. ಕುವೆಂಪು ಅವರು ‘ಜಲಗಾರ’ ನಾಟಕದಲ್ಲಿ ಶಿವನನ್ನು ‘ಜಗದ ಜಲಗಾರ’ ಮಾಡುವುದರ ಮೂಲಕ ನಮಗೆ ‘ಅಸ್ಪೃಶ್ಯ ಶಿವ’ನ ದರ್ಶನ ಮಾಡಿಸಿದ್ದಾರೆ.

ಪುರೋಹಿತಶಾಹಿಯು ಅಸ್ಪೃಶ್ಯತೆ ಆಚರಣೆಯನ್ನು ಧಾರ್ಮಿಕ ಮತ್ತು ಸಾಮಾಜಿಕ ಹಕ್ಕು ನಿಷೇಧಗಳಿಂದ ಊರ್ಜಿತದಲ್ಲಿಟ್ಟಿರುತ್ತದೆ. ಇಂತಹ ಜಾತಿ ಅಹಂಕಾರವನ್ನು ಭಂಜಿಸುವ ಕೆಲಸವನ್ನು ಸಾಮಾಜಿಕ ಚಳವಳಿಗಾರನಾಗಿ ಚಳವಳಿಯ ಮೂಲಕ ಬಾಬಾ ಸಾಹೇಬರೂ ಮತ್ತು ಒಬ್ಬ ಯುವ ಬಂಡುಕೋರ ಕವಿಯಾಗಿ ‘ಜಲಗಾರ’ ನಾಟಕದ ಮೂಲಕ ಕುವೆಂಪು ಅವರೂ ಮಾಡಿ ತೋರಿಸಿದ್ದಾರೆ.

ಆ ಕಾಲಕ್ಕೆ ಗೊಡ್ಡು ಆಚರಣೆಗಳ ಪಾಲಕರಾಗಿದ್ದ ಪುರೋಹಿತಶಾಹಿಗಳಿಗೆ ಈ ಎರಡೂ ಘಟನೆಗಳು ಯಾವ ಪರಿ ತಾಕಿರಬಹುದೆಂದು ನಾನೀಗ ಕಲ್ಪಿಸಿಕೊಳ್ಳುತ್ತಿದ್ದೇನೆ. ವಿಶಾಲ ಭಾರತ ರಾಷ್ಟ್ರೀಯ ಮಟ್ಟದಲ್ಲಿ ಅಂಬೇಡ್ಕರ್ ರವರ ಸಾಮಾಜಿಕ ಚಳವಳಿಯ ದಂಗೆ ಹಾಗೂ ವಿಶಾಲ ಮೈಸೂರು ರಾಜ್ಯ ಮಟ್ಟದಲ್ಲಿ ಕುವೆಂಪು ಅವರ ಕ್ರಾಂತಿಕಾರಿ ಸಾಹಿತ್ಯ ದಂಗೆ ಏಕಕಾಲದಲ್ಲಿ ನಡೆದಿರುವುದು ಕಾಕತಾಳೀಯವೂ ವಿಸ್ಮಯಕಾರಕ ಸಂಗತಿಯೂ ಆಗಿದೆ.

“ಕಸ ಗುಡಿಸುವ ಜಲಗಾರನಿಗೆ ‘ಪೊರಕೆ ಆರತಿ’, ಗುಡಿಸುವುದು ದೇವರ ಪೂಜೆ, ‘ನನ್ನ ಶಿವ ಕೊಳೆತ ಕಸದೊಳಿಹನು, ಕಪ್ಪುರದೊಳಗಿಲ್ಲ’ ಎಂಬುದು, ಜಲಗಾರನು ತಾನು ಕಂಡುಕೊಂಡ ಶಿವದರ್ಶನ. ಶಿವನು ಜಗದ ಜಲಗಾರನಾಗಿ ಬಂದು ”ಬೀದಿಗುಡಿಸುವ ಬಡವನೆದೆಯಲ್ಲಿ ನಾನಿರುವೆ ಉಳುತಿರುವ ಒಕ್ಕಲಿಗನೆದೆಯಲ್ಲಿ ನಾನಿರುವೆ ಎಲ್ಲಿ ಹೊಲೆಯನು ತನ್ನ ಕಾರ್ಯದಲ್ಲಿ ತೊಡಗಿಹನೋ ಅಲ್ಲಿ ನಾನವನ ಪಕ್ಕದೊಳಿರುವೆ. ಕುಂಟರನು ಕುರುಡರನು ದೀನರನು ಅನಾಥರನು ಕೈ ಹಿಡಿದು ಪೊರೆಯುತಿಹನೆಡೆಯಿರುವೆ,” ಎಂದು ಹೇಳುವಾಗ ಕುವೆಂಪು ಅವರು, ಶರಣ ಮಾದಾರ ಧೂಳಯ್ಯನು ಅಟ್ಟೆಯ ಚುಚ್ಚುವ ಉಳಿಮೊನೆಯಲ್ಲಿ ಶಿವದರ್ಶನವನ್ನು ಕಂಡು ಕಾಯಕದ ನಡುವೆ ಸುಳಿದು ಅಡ್ಡಿಪಡಿಸಬೇಡವೆಂದು ಜಬರಿಸಿದ ಕಾಯಕಜೀವಿಯ ‘ಸಾಮಾಜಿಕ ಅಧ್ಯಾತ್ಮ’ದ ದರ್ಶನಾತ್ಮಕತೆಯನ್ನೇ ಜಲಗಾರನಲ್ಲಿ ತೋರಿಸಿಕೊಟ್ಟಿದ್ದಾರೆ.

ಅಂಬೇಡ್ಕರ್ ಮತ್ತು ಕುವೆಂಪು ಈ ಇಬ್ಬರನ್ನೂ ಹಿಂದೂಧರ್ಮ ವಿರೋಧಿಗಳು ಅರ್ಥಾತ್ ಬ್ರಾಹ್ಮಣಧರ್ಮ ವಿರೋಧಿಗಳು ಎಂದು ಕರೆದು ಹಣೆಪಟ್ಟಿ ಅಂಟಿಸುವ ಕೆಲಸವೂ ಕೆಲವು ಮನುವಾದಿ ಮನಸ್ಸುಗಳಿಂದ ನಡೆದದ್ದುಂಟು. ಅಂಬೇಡ್ಕರ್ ಅವರು ಇಂತಹ ಸಾಮಾಜಿಕ ಭೇದನ್ಯಾಯ ಸೃಷ್ಟಿಯ ರಚನೆಗಳಾದ ಗುಡಿಗೋಪುರ ಮಂದಿರ ಮಸೀದಿಗಳಿಗೆ ಅಸ್ಪೃಶ್ಯರು ಹೋಗಬಾರದೆಂದು, ಬದಲಾಗಿ ಅವರು ದೇಶವನ್ನು ಆಳುವ ರಾಜಕೀಯ ಚುಕ್ಕಾಣಿ ಹಿಡಿಯಬೇಕೆಂದು ಮುಂದಿನ ದಿನಗಳಲ್ಲಿ ಕರೆ ನೀಡುತ್ತಾರೆ. ಕುವೆಂಪು ಅವರೂ ಸಹ ‘ನೂರಾರು ದೇವತೆಗಳನ್ನು ನೂಕಾಚೆ ದೂರ’ ‘ಗುಡಿ ಚರ್ಚು ಮಂದಿರ ಮಸೀದಿ ಬಿಟ್ಟು ಹೊರಬನ್ನಿ’ ಎಂದು ಕರೆ ನೀಡುತ್ತಾರೆ.

ಕುವೆಂಪು ಅವರ “ಜಲಗಾರ” ನಾಟಕ ಪ್ರಕಟಣೆಗೆ ಮತ್ತು ಅಂಬೇಡ್ಕರ್ ರೂಪಿಸಿದ ಕಾಳಾರಾಮ ದೇವಾಲಯ ಪ್ರವೇಶ ಚಳವಳಿಗೆ 90 ವರ್ಷಗಳು ತುಂಬುತ್ತಿರುವ ಈ ಹೊತ್ತಿನಲ್ಲಿ, ಮೊನ್ನೆ 02-12-2019 ರ ಸೋಮವಾರದಂದು, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ತಾಲ್ಲೂಕಿನ ಕಡಂದಲೆ ಗ್ರಾಮದ ಸುಬ್ರಹ್ಮಣ್ಯ ದೇವಾಲಯದಲ್ಲಿ, ದಲಿತ ಮಹಿಳೆ ಎನ್ನುವ ಕಾರಣಕ್ಕೆ ಕರ್ತವ್ಯನಿರತ ದಲಿತ ಮಹಿಳಾ ಪೊಲೀಸ್ ಪೇದೆಯನ್ನು, ಸುಬ್ರಹ್ಮಣ್ಯ ದೇವಸ್ಥಾನದಲ್ಲಿನ ಬ್ರಾಹ್ಮಣ ಅರ್ಚಕರು ದೇವಸ್ಥಾನದಿಂದ ಹೊರಕ್ಕೆ ಕಳುಹಿಸಿದ ಅಮಾನವೀಯ ಘಟನೆ ನಡೆದಿದೆ.

ಇದನ್ನು ಟೀಕಿಸಿದವರು ಕುವೆಂಪು ಮತ್ತು ಅಂಬೇಡ್ಕರ್ ಅವರಂತೆ ಹಿಂದೂಧರ್ಮದ ವಿರೋಧಿಗಳೆಂಬ ಹಣೆಪಟ್ಟಿಯನ್ನು ಕಟ್ಟಿಕೊಳ್ಳಬೇಕಾಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಮ್ಮ‌ ಪೂರ್ವಿಕ ಶಿವನೂ ; ಅವರ ಡುಬಾಕು ಸನಾತನವೂ..

Published

on

  • ಹರ್ಷಕುಮಾರ್ ಕುಗ್ವೆ

ಲಿಂಗವು ದೇವರಲ್ಲ ಶಿವನು ದೇವರಲ್ಲ
ಶಕ್ತಿಯೂ ದೇವರಲ್ಲ. ಮನುಷ್ಯನ ಕಲ್ಪನೆಯ ಆಳವನ್ನು ಮೀರಿದ ಯಾವ ದೇವರೂ ಇಲ್ಲ. ಅಸಲಿಗೆ ಇಡೀ ಜಗತ್ತನ್ನು ನಡೆಸುವ ದೇವರೆಂಬುದೇ ಇಲ್ಲ.

ಶಿವನು ನಮ್ಮ ಪೂರ್ವಿಕ, ಗೌರಿ ಅತವಾ ಶಕ್ತಿ ನಮ್ಮ ಪೂರ್ವಿಕಳು. ಗಂಗೆ ನಮ್ಮ ಬದುಕು. ಶಿವನ ಕೊರಳಿನ ನಾಗ ನಮ್ಮ ಕುಲ. ಲಿಂಗ ಫಲವಂತಿಕೆಯ ಸಂಕೇತವೂ ಹೌದು, ಶಿವ ಶಕ್ತಿಯರ ಸಮಾಗಮದ ಸಂಕೇತವೂ ಹೌದು. ನಮ್ಮ ಜನರಿಗೆ ಸಂಕೇತಗಳು ಶಕ್ತಿಯಾಗಿದ್ದವು, ಪ್ರೇರಣೆಯಾಗಿದ್ದವು. ಡೊಳ್ಳು ಹೊಡೆದು ಕೇಕೆ ಹಾಕಿದಾಗ ಮಳೆ ಬಂದರೆ, ನಮ್ಮ ಡೊಳ್ಳಿನ ಸದ್ದಿನ ಶಕ್ತಿಯಿಂದಲೇ, ನಮ್ಮ ಕೇಕೆಯಿಂದಲೇ ಮಳೆ ಬಂತು ಎಂದು ನಂಬಿದರು. ಇದನ್ನು primitive magic ಪರಿಕಲ್ಪನೆ ಎನ್ನಲಾಗಿದೆ.‌ ನಮ್ಮ ಬಳ್ಳಾರಿಯ ಸಂಗನಕಲ್ಲಿನಲ್ಲಿ 3000 ವರ್ಷಗಳ ಹಿಂದೆ ಕಲ್ಲು ಬಂಡೆಗಳ ಮೇಲೆ ಕೆತ್ತಿದ ಹೋರಿ ಮತ್ತು ಉದ್ದ ಕೊಂಬಿನ ಕೆತ್ತನೆಗಳು ಸಹ ಇಂತಹ ಒಂದು ಆದಿಮ ಮಾಂತ್ರಿಕ ಶಕ್ತಿಯ ಆಚರಣೆಯಾಗಿದೆ.

ನಂಬಿಕೆಗಳನ್ನು ಸಂಸ್ಕೃತಿಯಾಗಿ, ಪರಂಪರೆಯಾಗಿ ಗ್ರಹಿಸಬೇಕೇ ಹೊರತು ದೇವರಾಗಿ ಅಲ್ಲ. ದೇವ ಎಂಬ ಕಲ್ಪನೆಯೇ ದ್ರಾವಿಡರಲ್ಲಿ ಇರಲಿಲ್ಲ. 50 ಸಾವಿರ ವರ್ಷಗಳಿಂದ ಬಂದ ಲಿಂಗ- ಯೋನಿ ಪೂಜೆ, ಗೌರಿ ಪೂಜೆ, 9,000 ವರ್ಷಗಳಿಂದ ಬಂದ ಬೂಮ್ತಾಯಿ ಪೂಜೆ, ಅರಳಿ ಮರದ ಪೂಜೆ, ಐದು ಸಾವಿರ ವರ್ಷಗಳಿಂದ ಬಂದ ಶಿವನ ಪೂಜೆ, ಗಣಪತಿ ಪೂಜೆ, ನಾಗನ ಪೂಜೆ, 4000 ವರ್ಷಗಳಿಂದ ಬಂದ ಗತಿಸಿದ ಹಿರೀಕರ ಪೂಜೆ, ಇದರ ಮುಂದುವರಿಕೆಯಾಗಿಯೇ 2600 ವರ್ಷಗಳ ಹಿಂದೆ ಬುದ್ದ ಗುರುವು ತೀರಿದ ಬಳಿಕ ಅವನ ಅಸ್ತಿಯನ್ನು ಇಟ್ಟ ಸ್ತೂಪಗಳನ್ನು ಪೂಜಿಸಿದೆವು, ದೂಪ ಹಾಕಿದೆವು..‌. ಇದುವೇ ಈ ನೆಲದ ಪೂಜನ ಸಂಸ್ಕತಿಯಾಗಿತ್ತು.

‘ದೇವ’ ಮತ್ತು ಅಸುರ ಇಬ್ಬರೂ ಬಂದಿದ್ದು ಮಧ್ಯ ಏಷ್ಯಾದಿಂದ ಹೊರಟಿದ್ದ ಆರ್ಯರಿಂದಲೇ. ಅವರಿಗೆ ಪೂಜೆ ಗೊತ್ತಿರಲಿಲ್ಲ. ಯಜ್ಞ ಗೊತ್ತಿತ್ತು, ಹೋಮ ಗೊತ್ತಿತ್ತು. ‘ದೇವ’ ಅತವಾ “ದ-ಏವ” ಕೂಡಾ ಮೂಲದಲ್ಲಿ ಆರ್ಯರ ಪೂರ್ವಿಕ ಕುಲ ನಾಯಕರೇ ಆಗಿದ್ದಾರು.‌.. ಹೀಗಾಗಿಯೇ ಆರ್ಯ ವೈದಿಕರ ದೇವ ಎಂದರೆ ಅವರ ದಾಯಾದಿಗಳಾಗಿದ್ದ ಪಾರ್ಸಿಯನ್ (ಜೊರಾಸ್ಟ್ರಿಯನ್) ಆರ್ಯ ಅವೆಸ್ತನ್ನರಿಗೆ ಕೆಡುಕಿನ ಸಂಕೇತ‌ವಾಗಿತ್ತು. ಹಾಗೇ ಆರ್ಯ ವೈದಿಕರು ಕೆಡುಕು ಎಂದ ಅಸುರ (ಅಹುರ) ಆರ್ಯ ಅವೆಸ್ತನ್ನರ ಪಾಲಿಗೆ “ನಾಯಕ”ನಾಗಿದ್ದ. ಅವರನ್ನು ಅಹುರ ಮಜ್ದಾ ಎಂದು ಕರೆದು ಆರಾದಿಸಿದರು.

ಭಾರತಕ್ಕೆ ಪ್ರವೇಶಿಸಿದ ಬಳಿಕ ಆರ್ಯ ವೈದಿಕರಿಗೆ ಈ ನೆಲದ ಮೊದಲ ನಿವಾಸಿಗಳ ಮೇಲೆ ಯಜಮಾನಿಕೆ ಸ್ತಾಪಿಸಬೇಕಿತ್ತು. ಅದಕ್ಕಾಗಿ ನಮ್ಮಿಂದ ಪೂಜೆಗೊಳ್ಳುತ್ತಿದ್ದ ಪೂರ್ವಿಕರನ್ನು ತಮ್ಮ “ದೇವರು” ಮಾಡಿದರು. ಆ ದೇವರ ಪೂಜೆಗೆ ಅವರೇ ನಿಂತರು. ತಮ್ಮ ಜುಟ್ಟು ಬಿಟ್ಟುಕೊಂಡು ನಮ್ಮ ಜುಟ್ಟು ಹಿಡಿದರು. ನಾವು ಪೂರ್ವಿಕರನ್ನು ಬಿಟ್ಟು ಕೊಟ್ಟು, ಅವರ ಕೈಯಲ್ಲಿ ದೇವರುಗಳ ಪೂಜೆ ನಡೆಯುವಾಗ ನಮ್ಮ ಪೂರ್ವಿಕರಿಗೆ ಗೊತ್ತೇ ಇರದಿದ್ದ ವೇದ ಮಂತ್ರಗಳನ್ನ ಕೇಳಿ ಪುನೀತರಾದೆವು. ಈ ಮಂತ್ರ ಭಾಷೆಯೇ ದೇವರಿಗೆ ಅರ್ಥವಾಗುವುದು ಎಂದು ಪುಂಗಿದ್ದಕ್ಕೆ ತಲೆಯಾಡಿಸಿ ಕೈಮುಗಿದು ಗರ್ಭಗುಡಿಯ ಹೊರಗೆ ಸಾಲಿನಲ್ಲಿ ನಿಂತೆವು.‌ ಮುಂದಿನ 2000 ವರ್ಷಗಳ ಕಾಲ ಗುಲಾಮರಾದೆವು.‌ ಪುರಾಣಗಳನ್ನು ಕೇಳಿದೆವು, ನಂಬಿದೆವು ಮತಿಗೆಟ್ಟೆವು, ಗತಿಗೆಟ್ಟೆವು.

ಇನ್ನೂ ಉಳಿದಿರುವುದೇನು?
ನಾವು ಶಿವನ ವಕ್ಕಲು, ಗೌರಿ- ಗಂಗೆಯರ ಒಕ್ಕಲು. ಅವರು ಇಂದ್ರ ಅಗ್ನಿಯರ ವಕ್ಕಲಾಗಿದ್ದವರು ತಮ್ಮ ದೇವರಿಗೆ ಕಿಮ್ಮತ್ತಿಲ್ಲ ಎಂದರಿತು ಅವರನ್ನೇ ಬಿಟ್ಟರು. ಈಗ ಹೇಳುತ್ತಾರೆ ನಾವೇ ಸನಾತನರು ಎಂದು! ಅವರ ಡುಬಾಕು ಸನಾತನದಲ್ಲಿ ನಮ್ಮತನ ಕಳೆದುಕೊಂಡ “ಶೂದ್ರ ಮುಂಡೇಮಕ್ಕಳಾಗಿ”, ಅವರಿಗಾಗಿ ಬಾಳು ಬದುಕು ಹಾಳುಮಾಡಿಕೊಂಡು, ಅವರ ಹೋಮ ಹವನ ಮಾಡಿಸಿ, ನಮ್ಮ ಉಳಿಕೆ ಕಾಸು ಕಳೆದುಕೊಂಡು, ಗೌರವ ಗನತೆ ಕಳೆದುಕೊಳ್ಳುವುದೇ ಇವತ್ತಿನ ಸನಾತನ!

– ಹರ್ಷಕುಮಾರ್ ಕುಗ್ವೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕವಿತೆ | ಗಾಯದ ಬೆಳಕು

Published

on

  • ಕಾವ್ಯ ಎಂ ಎನ್, ಶಿವಮೊಗ್ಗ

ನೋವ ಹಾಡುವುದನ್ನೇ ಕಲಿತೆ
ಬದುಕು ಬಿಕ್ಕಿತು..

ಗಾಯದ ಬೆಳಕು
ಹೊತ್ತಿ ಉರಿದು
ತಮವೆಲ್ಲ ತಣ್ಣಗಾದಾಗ
ಚುಕ್ಕಿಬೆರಳಿಗೆ ಮುಗಿಲು ತೋರಿದೆ
ಕೆಂಡದಂತ ಹಗಲು ನೆತ್ತಿಪೊರೆಯಿತು.

ಅದ್ಯಾವ ಕಾಡು ಮಲ್ಲಿಗೆಯ
ಹಾಡು ಕರೆಯಿತೊ ಏನೊ
ಎದೆ ಹಾದಿಯ ತುಂಬೆಲ್ಲಾ ಬೇಸಿಗೆ.

ಒಡಲು ತುಂಬಿ ಕಡಲು
ಜೀಕಿ ದಡ ಮುಟ್ಟಿದ
ಕಪ್ಪೆಚಿಪ್ಪಿನೊಳಗೆಲ್ಲಾ
ಸ್ವಾತಿ ಮುತ್ತು…

ಓಡುವ ಆಮೆಯಂತ ಗಡಿಯಾರ
ಮೈತುಂಬ ಮುಳ್ಳ ಹೊತ್ತು
ಸಾಗಿಸುತ್ತಿದೆ ಭವದ ಭಾರ.

ನನ್ನ ನಿನ್ನ ರೂಹು ತಿಳಿದ
ಕಾಡು ಗಿಡ ಮರ ಬೆಟ್ಟ ಬಯಲೆಲ್ಲಾ
ಕಥೆ ಕಟ್ಟಿ ಪಿಸುಗುಡುತ್ತಿವೆ
ಉಟ್ಟ ಉಸಿರಿನ ಬಟ್ಟೆ ಕಳಚಿದ ಮೇಲೆ
ಎಲ್ಲವೂ ಬೆತ್ತಲೆ…

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕವಿತೆ | ನಾನೊಲಿದೆನಯ್ಯಾ

Published

on

  • ರಮ್ಯ ಕೆ ಜಿ, ಮೂರ್ನಾಡು

ಲೆಯುತ್ತಿದೆ ಈ ರೂಹು
ನನ್ನೊಳಗಿಂದ ಚಿಗಿದು
ನಿನ್ನ ತುದಿಬೆರಳಲಿ ಕುಣಿದು
ಗಾಳಿತುಟಿಯ ಸೋಕಿದಾಕ್ಷಣ
ಬೆವೆತು,
ಮಳೆ ಹೊಯ್ಯಿಸಿ
ಮಣ್ಣ ಘಮದೊಳಗೆ
ಲೀನವಾಗುವಂತೆ.

ಹೊಳೆಯುತ್ತದೆ ನಿನ್ನ
ಕಣ್ಣಬೊಂಬೆಯೊಳಗೆ,
ಎಷ್ಟೋ ನೋವು ಕುಡಿದ
ನದಿಯೆದೆಯೊಳಗೆ,
ನೆನಪ ಮೀಟುವ ಘಳಿಗೆಗೆಲ್ಲ
ಪಾರಿಜಾತದ ಪರಿಮಳವುಳಿವಂತೆ.

ಕಲೆಯುತ್ತದೆ ಮತ್ತೆ,
ನಿನ್ನ ಮಾತು ಜೀವವಾಗುವಂತೆ
ನಗೆಬೆಳಕು ಕೈಹಿಡಿದು
ಜೊತೆ ನಡೆಯುವಂತೆ
ಅನಂತ ಬಾನು-
ಪ್ರೇಮಗಡಲಿಗೆ ಬಾಗುವಂತೆ
ತಿರುವುಗಳಲಿ ಹೊರಳಿ,
ಕವಲಾಗುವಾಗ
ಹಾಡೊಂದು ಕಾಡುವಂತೆ
ಜಪಮಣಿ ಎಣಿಸುವ
ಬೆರಳು, ಲೆಕ್ಕ ಮರೆತು
ಉಸಿರ ಪಲುಕನು
ಚಿತ್ರವಾಗಿಸುವಂತೆ.

ಕವಯಿತ್ರಿ : ರಮ್ಯ ಕೆ.ಜಿ,ಮೂರ್ನಾಡು

ಕವಿತೆ : ರಮ್ಯ ಕೆ ಜಿ, ಮೂರ್ನಾಡು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending