Connect with us

ಬಹಿರಂಗ

ನಮ್ಮ ನಡುವಿನ ಮನು ನಮ್ಮೊಳಗಿನ ಸ್ಮೃತಿ

Published

on

ಈ ಲೇಖನ ಬೇರೊಂದು ಸಂದರ್ಭದಲ್ಲಿ ಬರೆದದ್ದು, ಎರಡು ತಿಂಗಳ ಹಿಂದೆ, ಇವತ್ತಿನ ಸಂದರ್ಭಕ್ಕೂ ಅನ್ವಯಿಸುತ್ತದೆ. ಹಾಗಾಗಿ ಮತ್ತೊಮ್ಮೆ ಓದುಗರ ಮುಂದೆ.

  • ನಾ ದಿವಾಕರ

ಭಾರತ ಮತ್ತೊಮ್ಮೆ ವಿಕೃತಿಯೆಡೆಗೆ ಹೊರಳುತ್ತಿರುವಂತಿದೆ. ಮನುಕುಲದ ಅಸ್ತಿತ್ವವನ್ನೇ ಇಲ್ಲವಾಗಿಸುವ ಯುದ್ಧಗಳನ್ನು ಪ್ರೀತಿಯಿಂದ ಅಪ್ಪಿಕೊಳ್ಳುವ ಮನಸುಗಳು ಹೆಚ್ಚಾಗುತ್ತಿವೆ. ಮತ್ತೊಂದೆಡೆ ಮಾನವ ಸಮಾಜದಲ್ಲಿ ಸಹಜೀವನವನ್ನು ಗಟ್ಟಿಗೊಳಿಸುವ ಪ್ರೀತಿ ಪ್ರೇಮ ಬಾಂಧವ್ಯಗಳನ್ನು ಯುದ್ಧ ಎಂದು ಬಣ್ಣಿಸಲಾಗುತ್ತಿದೆ.

ಪ್ರೀತಿ ಎನ್ನುವುದು ಒಂದು ರೀತಿಯಲ್ಲಿ ಯುದ್ಧವೇ ಸರಿ ಆದರೆ ಜೀವಕಂಟಕ ಯುದ್ಧವಲ್ಲ, ಎರಡು ಜೀವಗಳನ್ನು ಬೆಸೆಯುವ ಯುದ್ಧ. ಎರಡು ಹೃದಯ ಸಾಮ್ರಾಜ್ಯಗಳ ನಡುವೆ ನಡೆಯುವ ಯುದ್ಧದಲ್ಲಿ ಅಂತಿಮವಾಗಿ ಗೆಲ್ಲುವುದು ಮಾನವನ ಆಂತರ್ಯದಲ್ಲಿರುವ ಸಂವೇದನೆ, ಸಹನೆ ಮತ್ತು ಮಾನವೀಯತೆ. ಈ ಮೂರು ಮೌಲ್ಯಗಳು ಇಲ್ಲದಾದಾಗ ಇದು ಜಿಹಾದ್‍ನಂತೆ (ಧರ್ಮಯುದ್ಧ) ಕಾಣುತ್ತದೆ. ಭಾರತದಲ್ಲಿ ಆಗುತ್ತಿರುವುದೂ ಇದೇ.

20ನೆಯ ಶತಮಾನ ಇಡೀ ಮನುಕುಲಕ್ಕೆ ಸಂವೇದನೆಯನ್ನು ಕಲಿಸಬೇಕಿತ್ತು. ಏಕೆಂದರೆ ಇದು ಆಧುನಿಕ ಜಗತ್ತಿನ ಕನ್ನಡಿಯಂತೆ. ಒಂದು ಶತಮಾನದ ಅವಧಿಯಲ್ಲಿ ಮಾನವ ಸಮಾಜ ಕಂಡ ಸಾವು, ನೋವು, ಹಿಂಸೆ, ಕ್ರೌರ್ಯ, ದೌರ್ಜನ್ಯ ಮತ್ತು ವಿನಾಶಕಾರಿ ಬೆಳವಣಿಗೆಗಳು ನಮ್ಮಲ್ಲಿ, ಅಂದರೆ ಮಾನವ ಸಮಾಜದಲ್ಲಿ, ಮಾನವ ಪ್ರೀತಿಯನ್ನು, ಸೂಕ್ಷ್ಮ ಸಂವೇದನೆಯನ್ನು ಹೆಚ್ಚಿಸಬೇಕಿತ್ತು. ಭೀಕರ ಯುದ್ಧದ ನಡುವೆಯೂ ಪ್ರೀತಿಯನ್ನು ಹುಡುಕುವ ಹೃದಯಗಳು ಆಗಲೂ ಇದ್ದವು. ವಿಯಟ್ನಾಂ ಯುದ್ಧದ ಸಂದರ್ಭದಲ್ಲಿ, ಹಿಟ್ಲರನ ಕ್ರೌರ್ಯದ ನಡುವೆ, ತೈಲ ಮಾರುಕಟ್ಟೆಗಾಗಿ ನಡೆದ ವಿಧ್ವಂಸಕ ಸಮರಗಳಲ್ಲಿ, ಸಾಮ್ರಾಜ್ಯಶಾಹಿ ಬೆಳೆಸಿದ ಭಯೋತ್ಪಾದನೆಯಲ್ಲಿ, ಮತಧರ್ಮಗಳು ಬೆಳೆಸಿದ ಮತಾಂಧತೆಯಲ್ಲಿ ಪ್ರೀತಿಯನ್ನು ಹೆಕ್ಕಿ ತೆಗೆಯುವ ಪ್ರಯತ್ನಗಳೂ ನಡೆದೇ ಇದ್ದವು.

ಆದರೆ ಕೊನೆಯಲ್ಲಿ ಗೆದ್ದಿದ್ದು ಹಿಂಸೆಯೇ, ವಿಕ್ರಮ ಸಾಧಿಸಿದ್ದು ಯುದ್ಧಪರಂಪರೆಯೇ. ಪ್ರೀತಿಸಲು ಕಾರಣ ಬೇಕಿಲ್ಲ ಎರಡು ಹೃದಯಗಳು ಸ್ಪಂದಿಸಿದರೆ ಪ್ರೀತಿ ಹುಟ್ಟುತ್ತದೆ, ಎರಡೂ ಹೃದಯಗಳನ್ನು ಸಾಯಲು ಬಿಡದೆ ಕಾಪಾಡುತ್ತದೆ. ಆದರೆ ಯುದ್ಧ ಮಾಡಲು ಕಾರಣ ಬೇಕು. ನಿಮಿತ್ತ ಬೇಕು. ಅದು ಭೌಗೋಳಿಕ ಹಸಿವು, ಸಂಪತ್ತಿನ ಮೋಹ, ಅಧಿಪತ್ಯದ ಹಪಹಪಿ, ಶ್ರೇಷ್ಠತೆಯ ಪಾರಮ್ಯ, ದಿಗ್ವಿಜಯದ ಅಹಮಿಕೆ ಹೀಗೆ ಹಲವು ಕಾರಣಗಳು ಇಲ್ಲದೆ ಯುದ್ಧ ಸಂಭವಿಸುವುದಿಲ್ಲ.

ಈ ಕಾರಣಗಳನ್ನು ನಾವು ಇಸ್ಲಾಂ ಹೆಸರಿನಲ್ಲಿ ಸಾವಿರಾರು ಕೊಲೆ ಮಾಡಿರುವ ಭಯೋತ್ಪಾದಕರಲ್ಲಿ, ಹಿಂದುತ್ವದ ಹೆಸರಿನಲ್ಲಿ ಸಾವಿರಾರು ಶವಯಾತ್ರೆಗಳನ್ನು ಸಂಭ್ರಮಿಸಿರುವ ಮತಾಂಧರಲ್ಲಿ, ಜಾತಿ ಶ್ರೇಷ್ಠತೆಗಾಗಿ ನೂರಾರು ಜೀವಗಳನ್ನು ದಹಿಸಿ ವಿಕೃತಿ ಮೆರೆದಿರುವ ಮೇಲ್ಜಾತಿಗಳಲ್ಲಿ ಮತ್ತು ವರ್ಣಬೇಧ ನೀತಿಯನ್ನು ಸಂರಕ್ಷಿಸಲು ಪಣತೊಟ್ಟಿರುವ ಮನಸುಗಳಲ್ಲಿ ಕಾಣಲು ಸಾಧ್ಯ. 21ನೆಯ ಶತಮಾನದ ಆಧುನಿಕ ಭಾರತ, ಸಾವಿರಾರು ವರ್ಷಗಳ ಸಾಂಸ್ಕøತಿಕ ಪರಂಪರೆಯನ್ನು ಹೊಂದಿರುವ ಭಾರತ ಈ ವಿಕೃತಿಯಿಂದ ಹೊರಬರಬೇಕಿತ್ತು. ಏಕೆಂದರೆ ಜಗತ್ತಿನ ಯಾವುದೇ ಒಂದು ದೇಶದಲ್ಲಿ ಕಾಣಲಾಗದಷ್ಟು ಸಮಾಜ ಸುಧಾರಣೆಯ ಪ್ರಯತ್ನಗಳು ಇಲ್ಲಿ ನಡೆದಿವೆ. ಚಾರ್ವಾಕನಿಂದ ಅಂಬೇಡ್ಕರ್ ವರೆಗೆ ಇದನ್ನು ಕಂಡಿದ್ದೇವೆ.

ಆದರೆ ಈ ಮನಸ್ಥಿತಿ ಬದಲಾಗದಿರುವಂತೆ ಈ ದೇಶದ ಸ್ಥಾಪಿತ ಜಾತಿ ವ್ಯವಸ್ಥೆ ಮತ್ತು ಮತಧಾರ್ಮಿಕ ನೆಲೆಗಳು ಇತಿಹಾಸದ ಪ್ರತಿಯೊಂದು ಕಾಲಘಟ್ಟದಲ್ಲೂ ಎಚ್ಚರವಹಿಸಿವೆ. ಸಮಾಜ ಸುಧಾರಕರನ್ನು ತನ್ನೊಳಗೆ ಸಮೀಕರಿಸಿಕೊಳ್ಳುವ ಮೂಲಕ ಅಥವಾ ಸಂಪೂರ್ಣವಾಗಿ ನಿರಾಕರಿಸುವ ಮೂಲಕ ಅಥವಾ ಪರಂಪರೆ ಮತ್ತು ಸಾಂಸ್ಕೃತಿಕ ಇತಿಹಾಸದ ನೆಲೆಯಲ್ಲಿ ಯಥಾಸ್ಥಿತಿಯನ್ನು ಸಂರಕ್ಷಿಸುವ ಮೂಲಕ ವಿಕೃತ ಮನಸ್ಥಿತಿಯನ್ನು ಉಳಿಸಿಕೊಳ್ಳಲಾಗಿದೆ.

ಈ ಮನಸ್ಥಿತಿಯನ್ನೇ ಮನುಸ್ಮೃತಿ ಎನ್ನುವ ಪ್ರಾಚೀನ ಸಂಹಿತೆಗಳ ಗ್ರಂಥ ಪ್ರತಿಪಾದಿಸುತ್ತದೆ. ಪ್ರೀತಿಸಬೇಕಾದ ಎರಡು ಹೃದಯಗಳು ಮತಧಾರ್ಮಿಕ ಕಾರಣದಿಂದಲೋ, ಜಾತಿ ಬೇಧದ ಕಾರಣದಿಂದಲೋ ಅಥವಾ ಶ್ರೇಷ್ಠ-ಕನಿಷ್ಠದ ಅಸ್ಮಿತೆಗಳ ಕಾರಣದಿಂದಲೋ, ಪರಿಶುದ್ಧತೆ ಮತ್ತು ಮಾಲಿನ್ಯದ ಕಾರಣದಿಂದಲೋ ಏಕೆ ದೂರವೇ ಇರಬೇಕು, ಹೇಗೆ ದೂರ ಇರಬೇಕು ಮತ್ತು ಒಂದು ವೇಳೆ ಹತ್ತಿರ ಬಂದರೆ ಏನೇನು ಅನಾಹುತಗಳು ಸಂಭವಿಸುತ್ತವೆ ಎಂದು ವ್ಯಾಖ್ಯಾನಿಸುವ ಒಂದು ಕೃತಿ ಮನುಸ್ಮೃತಿ. ಇದಕ್ಕಿಂತಲೂ ಹೆಚ್ಚಿನದಾಗಿ ಏನೂ ಹೇಳದ ಒಂದು ಗ್ರಂಥ. ಆದರೆ ಇದನ್ನು ಹೇಳಲು ಧರ್ಮಶಾಸ್ತ್ರಗಳನ್ನು ಉಲ್ಲೇಖಿಸುವ ಮೂಲಕ ಮೇಲ್ಜಾತಿಗಳಲ್ಲಿ ಸಾರ್ವಕಾಲಿಕ ಮಾನ್ಯತೆ ಪಡೆದಿರುವ ಒಂದು ಗ್ರಂಥ.

ಮನುಸ್ಮೃತಿಯ ಅನುಸರಣೆಗೆ ದೊರೆಯುವ ಮಾನ್ಯತೆ, ಈ ಗ್ರಂಥವನ್ನು ಧಿಕ್ಕರಿಸುವ ಧೋರಣೆಗೆ ದೊರೆಯುವುದಿಲ್ಲ ಎನ್ನುವುದೇ ಭಾರತೀಯ ಸಮಾಜದ ದೌರ್ಬಲ್ಯ . ಏಕೆ ಹೀಗೆ ? ಏಕೆಂದರೆ ನಾವು ಮನುಸ್ಮೃತಿ ಎನ್ನುವ ಗ್ರಂಥವನ್ನು ಮಾತ್ರ ಸುಟ್ಟಿದ್ದೇವೆ, ಈ ಗ್ರಂಥ ನಮ್ಮ ಸಾಮಾಜಿಕ ವಲಯದಲ್ಲಿ, ಸಾಂಸ್ಥಿಕವಾಗಿ, ವ್ಯಕ್ತಿಗತವಾಗಿ, ಸಂಘಟನಾತ್ಮಕವಾಗಿ ಮತ್ತು ರಾಜಕೀಯವಾಗಿ ಗಟ್ಟಿಯಾದ ನೆಲೆ ಕಂಡುಕೊಂಡಿದೆ.

ಗ್ರಂಥದ ಅಧ್ಯಯನದ ಅವಶ್ಯಕತೆಯೇ ಇಲ್ಲದೆ,ಮನು ಎಂಬ ಒಬ್ಬ ಸನಾತನಿ ಭಾರತದಲ್ಲಿ ಬ್ರಾಹ್ಮಣ್ಯದ ನೆಲೆಯನ್ನು ಗಟ್ಟಿಗೊಳಿಸಲು ರೂಪಿಸಿದ ಸಂಹಿತೆಗಳನ್ನು ಚಾಚೂತಪ್ಪದಂತೆ ಪಾಲಿಸಿಕೊಂಡು ಬರುವ ಒಂದು ಬೃಹತ್ ಜನಸಮುದಾಯ ನಮ್ಮ ನಡುವೆ ಇದೆ. ಒಂದು ಸಮಾಜೋ ಸಾಂಸ್ಕೃತಿಕ ಪರಂಪರೆ ವ್ಯವಸ್ಥೆಯಾಗಿ ರೂಪುಗೊಂಡು, ಇಡೀ ಭೌಗೋಳಿಕ ಪ್ರದೇಶದ ಜನತೆಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎನ್ನಲು ಇದೊಂದು ನಿದರ್ಶನ.

ಹಾಗಾಗಿಯೇ ಟಿ ವಿ ವಾಹಿನಿಯಲ್ಲಿ ಬರುವ ಒಂದು ಕಾರ್ಯಕ್ರಮದಲ್ಲಿ ಮನುಸ್ಮೃತಿಯ ದಹನದ ಪ್ರಶ್ನೆ ಕೇಳಿಬಂದರೆ ಈ ಸಮಾಜೋ ಸಾಂಸ್ಕೃತಿಕ ವ್ಯವಸ್ಥೆ ಸಿಡಿದೇಳುತ್ತದೆ. ಕೌನ್ ಬನೇಗ ಕರೋಡ್‍ಪತಿ ಕಾರ್ಯಕ್ರಮದಲ್ಲಿ ಈ ಪ್ರಶ್ನೆ ಪ್ರಶ್ನೋತ್ತರದ ಒಂದು ಭಾಗವಾಗಿ ಮೂಡಿಬಂದಿದೆ. ಕಾರ್ಯಕ್ರಮದ ನಿರೂಪಕ ಅಮಿತಾಬ್ ಬಚ್ಚನ್ ಅಂಬೇಡ್ಕರ್ ವಾದಿಯೇನಲ್ಲ. ವ್ಯಕ್ತಿಗತ ನೆಲೆಯಲ್ಲಿ ಮನುಸ್ಮೃತಿಯನ್ನು ಕುರಿತು ಅವರ ನಿಲುವು ಏನು ಎನ್ನುವುದೂ ಅಸ್ಪಷ್ಟವೇ.

ಆದರೂ ಅವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಅಂದರೆ ಮನುಸ್ಮೃತಿ ಪ್ರಶ್ನಾತೀತವಾಗಿದೆ ಎಂದರ್ಥ ಅಲ್ಲವೇ ? ಭಾರತದ ಮಧ್ಯಮ ವರ್ಗಗಳಿಗೆ, ದಲಿತರನ್ನೂ ಸೇರಿದಂತೆ ಇದೊಂದು ಕ್ಷುಲ್ಲಕ ಘಟನೆಯಾಗಿ ಮರೆಯಾಗಿಬಿಡುತ್ತದೆ. ಪ್ರಸ್ತುತ ಆಡಳಿತದ ಚುಕ್ಕಾಣಿ ಹಿಡಿರುವ ಸಾಂಸ್ಕೃತಿಕ ರಾಜಕಾರಣಕ್ಕೆ ಇದು ಮತ್ತೊಂದು ರಸ್ತೆ ವಿಭಜಕವಾಗಿ ಜನರನ್ನು ಕವಲುಹಾದಿಗಳಲ್ಲಿ ನಿಲ್ಲಿಸಲು ಸಹಾಯಕವಾಗುತ್ತದೆ.

ಆದರೆ ಭಾರತದ ಸಾಮಾಜಿಕ-ಸಾಂಸ್ಕೃತಿಕ ಬದುಕಿನಲ್ಲಿ ಈ ಪ್ರಶ್ನೆ ಇನ್ನೂ ಬಹಳ ವರ್ಷಗಳ ಕಾಲ ಕೇಳಿಬರುತ್ತಲೇ ಇರುತ್ತದೆ. ಮನುಸ್ಮೃತಿ ಏಕೆ ಪ್ರಶ್ನಾತೀತವಾಗಿರಬೇಕು ? “ ಡಾ ಅಂಬೇಡ್ಕರ್ ಮನುಸ್ಮೃತಿಯನ್ನು ದಹಿಸಲು ಕಾರಣವೇನು ” ಎಂಬ ವಿಚಾರದ ಬಗ್ಗೆ ಈ ದೇಶದ ಎಷ್ಟು ಶಾಲೆಗಳಲ್ಲಿ ಪ್ರಬಂಧ ಅಥವಾ ಚರ್ಚಾಸ್ಪರ್ಧೆ ಆಯೋಜಿಸಲು ಸಾಧ್ಯ ? ಈ ಪ್ರಶ್ನೆಯೇ ಎಷ್ಟು ಚರ್ಚಾಸ್ಪದವಾಗಬಹುದು.

ಯೋಚಿಸೋಣ. ಡಾ ಬಿ ಆರ್ ಅಂಬೇಡ್ಕರ್ ಮನುಸ್ಮೃತಿಯನ್ನು ದಹಿಸುವ ಮೂಲಕ, ಆ ಗ್ರಂಥ ಭಾರತೀಯ ಸಮಾಜಕ್ಕೆ ಎಷ್ಟು ಅಪಾಯಕಾರಿ ಎನ್ನುವುದನ್ನು ಶೋಷಿತ ಸಮುದಾಯಗಳಿಗೆ ಮನದಟ್ಟು ಮಾಡಿದ್ದರು. ಹಾಗೆಯೇ “ ನಾವು ಇಂದು ಕೇವಲ ಗ್ರಂಥವನ್ನು ಸುಡುತ್ತಿದ್ದೇವೆ ಮುಂದೊಂದು ದಿನ ಈ ಗ್ರಂಥದಲ್ಲಿನ ಜಾತಿ ಶ್ರೇಷ್ಠತೆಯ ವಿಕೃತ ಚಿಂತನೆಗಳನ್ನೂ ಹೀಗೆಯೇ ದಹಿಸುತ್ತೇವೆ ” ಎಂದು ಈ ದೇಶದ ಜಾತಿ ವ್ಯವಸ್ಥೆಯ ವಾರಸುದಾರರಿಗೂ ಎಚ್ಚರಿಕೆಯ ಸಂದೇಶ ನೀಡಿದ್ದರು.

ಅವರ ಮೊದಲನೆಯ ಸಂದೇಶವನ್ನು ಈಗಲೂ ಭಾರತದ ಜಾತಿಪೀಡಿತ ಮನಸುಗಳು, ಶ್ರೇಷ್ಠತೆಯ ಪ್ರತಿಪಾದಕ ಸಮುದಾಯಗಳು ಪಠಿಸುತ್ತಿವೆ. ಆದರೆ ಎರಡನೆಯ ಸಂದೇಶ ಬಹುಶಃ ನೇಪಥ್ಯಕ್ಕೆ ಸರಿದಿದೆ. ಏಕೆಂದರೆ ಮನುಸ್ಮೃತಿ ಮತಧರ್ಮದ ಹೆಸರಿನಲ್ಲಿ ಆಚರಣಾತ್ಮಕವಾಗಿ ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ನವ ಬ್ರಾಹ್ಮಣ್ಯ ಎಲ್ಲ ಜಾತಿಗಳಲ್ಲೂ ಆವರಿಸಿದೆ.

ಜಾತಿ ಶ್ರೇಣೀಕರಣ ಮತ್ತು ಶ್ರೇಷ್ಠತೆಯನ್ನು ಪ್ರತಿಪಾದಿಸುವ ಮತ್ತು ಇದನ್ನು ಸಂರಕ್ಷಿಸುವ ಮೂಲಕವೇ ಜಾತಿಗಳ ಮೂಲಕ ಜನಸಾಮಾನ್ಯರನ್ನು ವಿಭಜಿಸುತ್ತಾ ಬ್ರಾಹ್ಮಣ್ಯದ ಪ್ರಾಬಲ್ಯವನ್ನು ಉಳಿಸಿಕೊಂಡು ಹೋಗುವ ಮನುಸ್ಮೃತಿಯ ಧ್ಯೇಯ ಸಾಧಿಸಲು ಸಂಘಪರಿವಾರ ತನ್ನದೇ ಆದ ವ್ಯೂಹ ರಚಿಸಿರುವುದನ್ನು ಹಿಂದುತ್ವ ರಾಜಕಾರಣದಲ್ಲಿ ನಾವು ಕಾಣಬೇಕಲ್ಲವೇ ? ರಾಮಮಂದಿರ ಮತ್ತು ಕಾಶ್ಮೀರ ಈ ವ್ಯೂಹದ ಎರಡು ಧೃವಗಳು ಎನ್ನುವುದನ್ನು ಹಿಂದುತ್ವದೊಡನೆ ಗುರುತಿಸಿಕೊಂಡಿರುವ ಅಂಬೇಡ್ಕರ್ ಅನುಯಾಯಿಗಳಿಗೆ ಅರ್ಥವಾಗಬೇಕಲ್ಲವೇ ?

ಕಂಬಾಲಪಲ್ಲಿಯಿಂದ ಹಥ್ರಾಸ್‍ವರೆಗಿನ ಬೆಳವಣಿಗೆಗಳನ್ನು ಖೈರ್ಲಾಂಜಿಯ ಮೂಲಕ ಸೂಕ್ಷ್ಮವಾಗಿ ಗಮನಿಸಿದರೆ ಇದರ ಒಳಸುಳಿಗಳನ್ನು ನಾವು ಅರ್ಥಮಾಡಿಕೊಳ್ಳಬಹುದು. 20 ವರ್ಷಗಳ ಹಿಂದೆ, ಗತ ಶತಮಾನದ ಕೊನೆಯ ವರ್ಷದಲ್ಲಿ, ಕಂಬಾಲಪಲ್ಲಿಯಲ್ಲಿ ಒಂದು ದಲಿತ ಕುಟುಂಬದ ಸಜೀವ ದಹನವಾಗಿತ್ತು. ಏಳು ಜೀವಗಳು ಸುಟ್ಟುಹೋಗಿದ್ದವು.

ಇಡೀ ದೇಶದಲ್ಲಿ ಆಕ್ರೋಶ ಭುಗಿಲೆದ್ದಿತ್ತು. ದಲಿತ ಅಸ್ಮಿತೆ ಮತ್ತು ಜಾತಿ ಶ್ರೇಷ್ಠತೆಯ ನಡುವಿನ ಸಂಘರ್ಷ ತಾರಕಕ್ಕೇರಿತ್ತು. ಆರು ವರ್ಷಗಳ ನಂತರ 2006ರಲ್ಲಿ ಖೈರ್ಲಾಂಜಿಯಲ್ಲಿ ಇಬ್ಬರು ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಸಾರ್ವಜನಿಕವಾಗಿಯೇ ಸಂಭವಿಸಿತ್ತು. ದಲಿತ ಹೆಣ್ಣುಮಕ್ಕಳ ಸಾರ್ವಜನಿಕ ಬೆತ್ತಲೆ ಮೆರವಣಿಗೆ ಮತ್ತು ಕೊಲೆ ಸದ್ದಿಲ್ಲದೆ ಅಡಗಿಹೋಯಿತು. 2020ರಲ್ಲಿ ಹಥ್ರಾಸ್‍ನಲ್ಲಿ ಒಂದು ಹೆಣ್ಣು ಮಗು ಮೇಲ್ಜಾತಿಯವರಿಂದ ಅತ್ಯಾಚಾರಕ್ಕೊಳಗಾಗಿ ಅಸುನೀಗಿದಳು. ಆಕೆಯ ಶವವನ್ನು ಸದ್ದಿಲ್ಲದೆ ಆಡಳಿತ ವ್ಯವಸ್ಥೆಯ ಮೇಲ್ವಿಚಾರಣೆಯಲ್ಲೇ ದಹಿಸಲಾಯಿತು.

ಕಂಬಾಲಪಲ್ಲಿಗೂ ಹಥ್ರಾಸ್‍ಗೂ ಇರುವ ವ್ಯತ್ಯಾಸವಾದರೂ ಏನು ? ಸುಟ್ಟವರು ಯಾರು ಎಂಬುದಷ್ಟೇ. ಎರಡೂ ಪ್ರಕರಣಗಳಲ್ಲಿ ಮತ್ತು ಖೈರ್ಲಾಂಜಿಯಲ್ಲೂ ಸಹ ದೌರ್ಜನ್ಯಕ್ಕೆ ಕಾರಣವಾಗಿದ್ದು ಮನುಸ್ಮೃತಿಯಲ್ಲಿ ಹೇಳಲಾಗುವ ಜಾತಿ ಶ್ರೇಷ್ಠತೆಯ ಪಾರಮ್ಯ ಮತ್ತು ಪ್ರಾಬಲ್ಯ . ಮನು ಅಪರಾಧಗಳನ್ನು ಶ್ರೇಣೀಕರಣಗೊಳಿಸುವಂತೆಯೇ ಅಪರಾಧಿಗಳನ್ನೂ ಶ್ರೇಣೀಕರಣಗೊಳಿಸುತ್ತಾನೆ.

ಮನುಷ್ಯನ ಹುಟ್ಟು ಅವನ ಅಪರಾಧಿ ಸ್ಥಾನವನ್ನೂ ನಿರ್ಧರಿಸುತ್ತದೆ. ಮನುಸ್ಮೃತಿಯನ್ನು ರಚಿಸಿದ ಕಾಲಘಟ್ಟದಲ್ಲಿ ಭಾರತೀಯ ಸಮಾಜ ಇನ್ನೂ ನಾಗರಿಕ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿರಲಿಲ್ಲ ಎಂದು ಹೇಳಬಹುದಾದರೆ, ಇಂದಿನ ಪರಿಸ್ಥಿತಿಯಲ್ಲಿ ಏನು ಹೇಳಬಹುದು ? ಹಥ್ರಾಸ್ ಘಟನೆಯಲ್ಲೂ ಇದೇ ಅನಾಗರಿಕ ಪ್ರಜ್ಞೆ ಅನಾವರಣವಾಗಿರುವುದನ್ನು ಕಂಡಿದ್ದೇವೆ ಅಲ್ಲವೇ ?

ಈ ಮೂರೂ ಘಟನೆಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುವುದಿಲ್ಲ ಎನ್ನುವುದು ನಿಶ್ಚಿತ. ಎರಡು ಘಟನೆಗಳನ್ನು ನಾವು ಮರೆತಿದ್ದೇವೆ. ನಡುವೆ ಊನ ಗ್ರಾಮದಲ್ಲಿ ನಡೆದ ಘಟನೆಯನ್ನು ಒಂದು ಸಿನೆಮಾದ ಚಿತ್ರೀಕರಣದಂತೆ ನೇಪಥ್ಯಕ್ಕೆ ಸರಿಸಿಬಿಟ್ಟಿದ್ದೇವೆ. ಹಥ್ರಾಸ್ ಸಹ ಮೆಲ್ಲನೆ ಬದಿಗೆ ಸರಿದುಬಿಡುತ್ತದೆ. ಇಷ್ಟರ ನಡುವೆ ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿರುವ ಒಂದು ಸಂದೇಶ ಮನುಸ್ಮೃತಿಯನ್ನು ಮತ್ತೊಮ್ಮೆ ಮುನ್ನೆಲೆಗೆ ತರುವಂತಿದೆ.

ಅಸ್ಪೃಶ್ಯ ಸಮುದಾಯಗಳು, ದಲಿತರು ನಾಲ್ಕು ಗೋಡೆಗಳ ನಡುವೆ ಅನುಭವಿಸುವ ಜಾತಿ ನಿಂದನೆಯ ಅಪಮಾನಗಳು ಎಸ್‍ಸಿ/ಎಸ್‍ಟಿ (ದೌರ್ಜನ್ಯ ಪ್ರತಿಬಂಧಕ) ಕಾಯ್ದೆಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ದೇಶದ ಸರ್ವೋಚ್ಚ ನ್ಯಾಯಾಲಯವೇ ಹೇಳಿರುವುದನ್ನು ಗಮನಿಸಿದರೆ ಈ ದೇಶ ಸಂವಿಧಾನಕ್ಕಿಂತಲೂ ಹೆಚ್ಚು ಮನುಸ್ಮೃತಿಯನ್ನೇ ಅನುಸರಿಸುತ್ತಿದೆ ಎಂಬ ಶಂಕೆ ಕಾಡುತ್ತದೆ.

ಖೈರ್ಲಾಂಜಿ, ಕಂಪಾಲಪಲ್ಲಿ ಘಟನೆಗಳು “ಖುಲೇ ಆಕಾಶ್ ಕೆ ನೀಚೆ” ಎಂದು ಹಿಂದಿಯಲ್ಲಿ ಹೇಳುವಂತೆ ಎಲ್ಲರ ಕಣ್ಣೆದುರಿನಲ್ಲೇ ನಡೆಯಿತಲ್ಲವೇ ? ಅಲ್ಲಿ ಸಂತ್ರಸ್ತರಿಗೆ ನ್ಯಾಯ ದೊರಕಿತೇ ? ಈ ದೇಶದ ಅಸ್ಪೃಶ್ಯ ಸಮುದಾಯದ ಅಮಾಯಕರು ನಾಲ್ಕು ಗೋಡೆಗಳ ನಡುವೆ ದೌರ್ಜನ್ಯ ಅಪಮಾನಗಳನ್ನು ಮೌನವಾಗಿ ಸಹಿಸುತ್ತಲೇ ಬಂದಿದ್ದಾರೆ.

ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲೂ, ವಿದ್ಯಾಸಂಸ್ಥೆಗಳಲ್ಲೂ, ಪ್ರತ್ಯಕ್ಷವಾಗಿ ಪರೋಕ್ಷವಾಗಿ, ಬೌದ್ಧಿಕವಾಗಿ ಇದು ನಡೆಯುತ್ತಲೇ ಇರುತ್ತದೆ. ಅಪಮಾನ ಅಥವಾ ಮಾನಸಿಕ ಚಿತ್ರಹಿಂಸೆ ಎನ್ನುವುದು ವ್ಯಕ್ತಿಗತ ನೆಲೆಯಲ್ಲಿ ಒಂದು ನೊಂದ, ದಮನಿತ ಮನಸು ಅನುಭವಿಸುವ ಯಾತನೆಯೇ ಹೊರತು, ಸಾರ್ವಜನಿಕವಾಗಿ ನಿರ್ವಚಿಸಬಹುದಾದ ವಿದ್ಯಮಾನವಲ್ಲ. ನ್ಯಾಯ ವಿತರಣಾ ವ್ಯವಸ್ಥೆ ಸಾಕ್ಷಿ ಪುರಾವೆಗಳನ್ನು ಅವಲಂಬಿಸುವುದರಿಂದ ಈ ಸೂಕ್ಷ್ಮ ಅರ್ಥವಾಗದಿರಬಹುದು. ಆದರೆ ಕಾರ್ಯಾಂಗ ಮತ್ತು ಶಾಸಕಾಂಗಕ್ಕೆ ಅರ್ಥವಾಗಬೇಕಲ್ಲವೇ ?

ಕಾರ್ಯಾಂಗ ಮತ್ತು ಶಾಸಕಾಂಗದಲ್ಲಿ ಅಸ್ಪೃಶ್ಯ ಸಮುದಾಯವನ್ನು, ಶೋಷಿತರನ್ನು ಮತ್ತು ದಲಿತರನ್ನು ಪ್ರತಿನಿಧಿಸುವ ದೇಹಗಳು ಹೇರಳವಾಗಿವೆ. ಮನಸುಗಳು ಇಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಏಕೆಂದರೆ ಅಧಿಕಾರ ಕೇಂದ್ರಗಳು ಈ ಮನಸುಗಳಲ್ಲಿ ಮನುಸ್ಮೃತಿಯ ಚಿಂತನೆಗಳನ್ನೇ ಬಿತ್ತುತ್ತವೆ. ಮನುಸ್ಮೃತಿ ಕೇವಲ ಒಂದು ಮತಧಾರ್ಮಿಕ ಸಂಹಿತೆಯಲ್ಲ.

ಅಧಿಕಾರ ರಾಜಕಾರಣದ ಒಂದು ನೀತಿ ಸಂಹಿತೆಯೂ ಹೌದು. ಇದು ಕಳೆದ 20-30 ವರ್ಷಗಳ ರಾಜಕಾರಣದಲ್ಲಿ, ವಿಶೇಷವಾಗಿ ಹಿಂದುತ್ವ ರಾಜಕಾರಣ ಮತ್ತು ಸಾಂಸ್ಕೃತಿಕ ರಾಷ್ಟ್ರೀಯತೆಯ ನೆಲೆಯಲ್ಲಿ ಸ್ಪಷ್ಟವಾಗಿದೆ. ಸುಪ್ರೀಂಕೋರ್ಟ್‍ನ ತೀರ್ಪು, ಹಥ್ರಾಸ್ ಘಟನೆಯ ಬಗ್ಗೆ ಶೋಷಿತ ಸಮುದಾಯಗಳ ಮೌನ ಮತ್ತು ಈ ಸಮುದಾಯವನ್ನು ಪ್ರತಿನಿಧಿಸುವವರ ಜಾಣ ಕುರುಡು ಇದನ್ನು ಮತ್ತಷ್ಟು ದೃಢಪಡಿಸುತ್ತದೆ.

ಮನುಸ್ಮೃತಿ ಇಲ್ಲಿ ತನ್ನ ಅಸ್ತಿತ್ವ ಮತ್ತು ಪ್ರಾಬಲ್ಯವನ್ನು ತೋರುತ್ತದೆ. ಅಪರಾಧದ ಶ್ರೇಣೀಕರಣ ಮತ್ತು ಅಪರಾಧಿಗಳ ಶ್ರೇಣೀಕರಣವನ್ನೂ ಸಹ ಮನುಸ್ಮೃತಿಯ ನೆಲೆಯಲ್ಲೇ ಇಂದಿನ ಆಡಳಿತ ವ್ಯವಸ್ಥೆ ನಿರೂಪಿಸುತ್ತಿದೆ. ನಾವು ಮತಧಾರ್ಮಿಕ ಅಸ್ಮಿತೆ, ಜಾತಿ ಅಸ್ಮಿತೆ ಮತ್ತು ರಾಜಕೀಯ ನಿಷ್ಠೆಯ ಹೆಸರಿನಲ್ಲಿ ಇದನ್ನು ಗಮನಿಸುತ್ತಿಲ್ಲ.

ಸ್ಟಾನ್ ಸ್ವಾಮಿ, ಆನಂದ ತೇಲ್ತುಂಬ್ಡೆ, ಸುಧಾ ಭರದ್ವಾಜ್, ಗೌತಮ್ ನವಲಖಾ, ವರಾವರರಾವ್, ಪ್ರೊ. ಸಾಯಿಬಾಬಾ ಇವರೆಲ್ಲರನ್ನೂ ಒಂದೆಡೆ ನಿಲ್ಲಿಸಿ ಅರ್ನಾಬ್ ಗೋಸ್ವಾಮಿಯನ್ನು ಮುಖಾಮುಖಿಯಾಗಿಸಿದಾಗ ನಮಗೆ ಮನುಸ್ಮೃತಿಯ ಶ್ರೇಣೀಕೃತ ವ್ಯವಸ್ಥೆಯ ವಿಕೃತ ಸ್ವರೂಪ ಸ್ಪಷ್ಟವಾಗಿ ಗೋಚರಿಸುತ್ತದೆ. ನವ ಬ್ರಾಹ್ಮಣ್ಯ ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ಆಳವಾಗಿ ಬೇರೂರಿರುವಂತೆಯೇ ಆಡಳಿತ ವ್ಯವಸ್ಥೆಯಲ್ಲೂ ಬೇರೂರಿರುವುದನ್ನು ಈಗಲೂ ಗಮನಿಸದೆ ಹೋದರೆ ನಾವು ಸಂವಿಧಾನವನ್ನು ಕಳೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚು.

ಡಾ ಅಂಬೇಡ್ಕರ್ ಮನುಸ್ಮೃತಿಯ ಮುದ್ರಿತ ಅಕ್ಷರಗಳನ್ನು ಸುಟ್ಟುಹಾಕುವ ಮೂಲಕ ತಮ್ಮ ಹಾಗೂ ತಾವು ಪ್ರತಿನಿಧಿಸುವ ಶೋಷಿತ ಸಮುದಾಯದ ಆಕ್ರೋಶವನ್ನು ಸಾಂಕೇತಿಕವಾಗಿ ವ್ಯಕ್ತಪಡಿಸಿದ್ದರು. ಈ ಘಟನೆ ನಡೆದು ಶತಮಾನ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ನಾವು ಸುಡಬೇಕಿರುವುದು ನಮ್ಮ ಮನಸಿನಲ್ಲಿ ಬೇರೂರಿರುವ ಆ ಸ್ಮೃತಿಯ ಬೇರುಗಳನ್ನು ,ಪಳೆಯುಳಿಕೆಗಳನ್ನು. ಸುಶಿಕ್ಷಿತ, ಆಧುನಿಕ, ಪಾಶ್ಚಾತ್ಯ ಚಿಂತನೆ ಮತ್ತು ದೇಸಿ ಸಂಸ್ಕೃತಿಯನ್ನು ಮೇಳೈಸಿಕೊಂಡಿರುವ ಮಧ್ಯಮ ವರ್ಗಗಳಲ್ಲಿ, ಹಿತವಲಯದ “ನಾಗರಿಕ ಪ್ರಜೆಗಳಲ್ಲಿ”, ಇವರ ಪ್ರಜ್ಞೆಯಲ್ಲಿ ಬೇರೂರಿರುವ ಮನು ನಿರ್ವಚಿಸಿದ ಸ್ಮೃತಿಯನ್ನು ಸುಡುವುದು ನಮ್ಮ ಆದ್ಯತೆಯಾಗಬೇಕಿದೆ. ಈ ಸ್ಮೃತಿಯಿಂದ ಹೊರತಾಗಿದ್ದೇವೆ ಎಂದು ಮೇಲ್ನೋಟಕ್ಕೆ ಪ್ರದರ್ಶಿಸಿಕೊಳ್ಳುತ್ತಲೇ ಮನುಸ್ಮೃತಿಯ ಆರಾಧಕರೊಡನೆ ಗುರುತಿಸಿಕೊಂಡಿರುವವರೂ ಇದನ್ನು ತಮ್ಮ ಆದ್ಯತೆ ಎಂದೇ ಪರಿಗಣಿಸಬೇಕಿದೆ.

ಇಲ್ಲವಾದಲ್ಲಿ ಇಂದು ಮದುವೆಯಾಗಲು ಮತಾಂತರ ನಿಷಿದ್ಧ ಎನ್ನುವ ವ್ಯವಸ್ಥೆ ನಾಳೆ ಜಾತಿ ದೌರ್ಜನ್ಯದಿಂದ ಬೇಸತ್ತು ಮತಾಂತರವಾಗುವುದನ್ನೂ ನಿಷೇಧಿಸುತ್ತದೆ. ಅಂತರ್ ಧರ್ಮೀಯ ವಿವಾಹಗಳಂತೆಯೇ ಅಂತರ್ ಜಾತಿ ವಿವಾಹಗಳೂ ಸಹ ಮಸಣದಲ್ಲಿ ನ್ಯಾಯ ಕೇಳಬೇಕಾದ ವಿದ್ಯಮಾನಗಳಾಗಿಬಿಡುತ್ತವೆ. ನಾವು ಗ್ರಂಥದತ್ತ ನೋಡುತ್ತಿದ್ದೇವೆ ಅವರು ಸ್ಮೃತಿಯನ್ನು ವ್ಯವಸ್ಥಿತವಾಗಿ ಬಿತ್ತುತ್ತಿದ್ದಾರೆ. ಇದು ಯೋಚಿಸಬೇಕಾದ ವಿಚಾರವಲ್ಲವೇ ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

ಮಧ್ಯಾಹ್ನದ ಪ್ರಮುಖ ಸುದ್ದಿಗಳು 

Published

on

ಸುದ್ದಿದಿನ ಕನ್ನಡ ನ್ಯೂಸ್ ಮಧ್ಯಾಹ್ನದ ಪ್ರಮುಖ ಸುದ್ದಿಗಳು 

  1. ದೇಶದಲ್ಲಿ ಲೋಕಸಭಾ ಚುನಾವಣೆಯ 6ನೇ ಹಂತಕ್ಕಾಗಿ ಇಂದು ಮತದಾನ ಪ್ರಗತಿಯಲ್ಲಿದೆ. 11 ಗಂಟೆಯ ವೇಳೆಗೆ ಬಂದ ವರದಿಯ ಪ್ರಕಾರ ಒಟ್ಟಾರೆ 6ನೇ ಹಂತದ 58 ಕ್ಷೇತ್ರಗಳಲ್ಲಿ ಶೇಕಡ 25.76ರಷ್ಟು ಮತದಾನವಾಗಿದೆ. ಬಿಹಾರದಲ್ಲಿ ಶೇಕಡ 23.67, ಹರಿಯಾಣದ ಶೇಕಡ 22.09, ಜಾರ್ಖಂಡ್‌ನಲ್ಲಿ ಶೇಕಡ 27.80, ಒಡಿಶಾದ ಶೇಕಡ 21.30, ಉತ್ತರಪ್ರದೇಶದ 27.06, ಪಶ್ಚಿಮಬಂಗಾಳದಲ್ಲಿ 36.88, ದೆಹಲಿಯಲ್ಲಿ 21.69 ಹಾಗೂ ಜಮ್ಮು-ಕಾಶ್ಮೀರದಲ್ಲಿ ಶೇಕಡ 23.11ರಷ್ಟು ಮತದಾನವಾಗಿದೆ.
  2. ದೆಹಲಿಯಲ್ಲಿಂದು ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್, ಕೇಂದ್ರ ಸಚಿವರಾದ ಡಾ. ಎಸ್. ಜೈಶಂಕರ್, ಹರ್‌ದೀಪ್ ಸಿಂಗ್ ಪುರಿ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಆಪ್ ನಾಯಕಿ ಅತೀಶಿ ಸಿಂಗ್ ಸೇರಿದಂತೆ ಹಲವು ಪ್ರಮುಖರು ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ಸಾರ್ವಜನಿಕರನ್ನು ಮತದಾನದಲ್ಲಿ ಭಾಗವಹಿಸಲು ಪ್ರೇರೇಪಿಸಿದ್ದಾರೆ.
  3. ಮಳೆಗಾಲ ಆರಂಭವಾಗಿದ್ದು, ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಹಾವೇರಿ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
  4. ಎರಡು ದಿನಗಳ ಹಿಂದೆ ಬಾಗಲಕೋಟೆ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆ ಹಾಗೂ ಗಾಳಿಯಿಂದ ಉಂಟಾದ ಹಾನಿಗೆ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆಯೂ ಆಗಿರುವ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದ್ದಾರೆ.
  5. ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ – ಎನ್‌ಐಎ ಬಂಧಿಸಿದೆ. ಹುಬ್ಬಳ್ಳಿಯ 35 ವರ್ಷದ ಶೋಯಬ್ ಅಹಮದ್ ಮಿರ್ಜಾ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 5ನೇ ಆರೋಪಿಯಾಗಿದ್ದು, ಲಷ್ಕರ್ ಎ ತೊಯ್ಬಾದ ಭಯೋತ್ಪಾದನಾ ಸಂಚು ಪ್ರಕರಣದಲ್ಲಿ ಮಾಜಿ ಆರೋಪಿಯಾಗಿದ್ದಾನೆ ಎಂದು ಎನ್‌ಐಎ ತಿಳಿಸಿದೆ.
  6. ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆಯುತ್ತಿರುವ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ಸ್ ಪಂದ್ಯದಲ್ಲಿ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು, ವಿಶ್ವದ 20ನೇ ಶ್ರೇಯಾಂಕಿತ ಥೈಲ್ಯಾಂಡ್‌ನ ಬುಸಾನನ್ ಆಂಗ್‌ಬಾಮ್‌ರುಂಗ್‌ಫಾನ್ ವಿರುದ್ಧ ಫೈನಲ್ಸ್ ಪ್ರವೇಶಿಸಲು ಸೆಣಸಲಿದ್ದಾರೆ.
  7. ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 36 ರನ್‌ಗಳ ಗೆಲುವು ದಾಖಲಿಸಿದ್ದು, ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆದಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಭಾರತದ ಜನಸಂಖ್ಯೆ ವರವೋ..? ಶಾಪವೋ..?

Published

on

ಸಾಂದರ್ಭಿಕ ಚಿತ್ರ

 

  • ಅಂಬಿಕಾ. ಕೆ
    ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ
    ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
    ಬೆಂಗಳೂರು ವಿಶ್ವವಿದ್ಯಾಲಯ

 

ವಿಶ್ವ ಸಂಸ್ಥೆಯು ಪಾಪುಲೇಷನ್ ಫಂಡ್ ಮಾಡಿರುವ ಅಂದಾಜಿನ ಪ್ರಕಾರ ಭಾರತವು ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎನಿಸಿಕೊಂಡಿದೆ.

ದೇಶದ ಒಟ್ಟು ಜನಸಂಖ್ಯೆಯು 142.86 ಕೋಟಿಗೆ ಏರಿಕೆಯಾಗಿದ್ದು, ಚೀನಾ ಎರಡನೇ ಸ್ಥಾನಕ್ಕೆ ಇಳಿದಿದೆ, ಇಂತಹದೊಂದು ಹಿರಿಮೆಗೆ ಭಾರತವು ಪಾತ್ರವಾಗಲಿದೆ ಎಂಬುದರ ಅರಿವು ಹಿಂದೆಯೇ ಇತ್ತು. ಹೊಸ ಭಾರತದ ಜನಸಂಖ್ಯೆಯ ಸ್ವರೂಪವೇನು ಮತ್ತು ಯಾವ ವಯೋ ಮಾನದವರು ಎಷ್ಟಿದ್ದಾರೆ. ಆದಾಯ ಮಟ್ಟ ಹೇಗಿದೆ, ಆದಾಯ ಹಂಚಿಕೆ ಹೇಗಿದೆ ಎಂಬುದರ ಕುರಿತು ಕೂಡ ಚರ್ಚೆಗಳು ನಡೆಯುತ್ತಿವೆ. ಒಟ್ಟು ಜನಸಂಖ್ಯೆಯ ಜತೆಗೆ ಈ ಎಲ್ಲಾ ಅಂಶಗಳು ಕೂಡ ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮ ರೂಪಿಸುವಿಕೆ ಮೇಲೆ ಪ್ರಭಾವ ಬೀರುತ್ತವೆ. ರಾಜಕೀಯ ಪಕ್ಷಗಳು ಮತ್ತು ಗುಂಪುಗಳು ರಾಜಕೀಯ ಹಾಗೂ ಸಾಮಾಜಿಕ ಸ್ಥಾನಗಳನ್ನು ನಿರ್ಧರಿಸುವಲ್ಲಿಯೂ ಈ ಅಂಶಗಳು ಪಾತ್ರವಹಿಸುತ್ತವೆ ಭಾರತದಲ್ಲಿ ಗರಿಷ್ಠ ಸಂಖ್ಯೆಯು ಯುವ ಜನರಿದ್ದಾರೆ.

ಹಾಗೆಯೇ ಮುಂದುವರೆಯಲಿದೆ 15 ರಿಂದ 24 ವರ್ಷದೊಳಗಿನವರ ಸಂಖ್ಯೆಯು 25.4 ಕೋಟಿ ಎಂದು ಅಂದಾಜಿಸಲಾಗಿದೆ ಇನ್ನು ದೀರ್ಘಕಾಲ ಭಾರತವು ಈ ಸ್ಥಿತಿ ಕಾಯ್ದುಕೊಳ್ಳಲಿದೆ ಎಂಬುದರಲ್ಲಿಯೂ ಅನುಮಾನ ಇಲ್ಲ ಜನಸಂಖ್ಯೆಯಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನಕ್ಕೆ ಏರುವುದು, ಗೌರವ ಏನು ಅಲ್ಲ ಬದಲಿಗೆ ಇದು ದೇಶಕ್ಕೆ ಹಲವು ಸವಾಲುಗಳನ್ನು ಹುಟ್ಟುತ್ತದೆ ಜತೆಗೆ ಅವಕಾಶಗಳ ಬಾಗಿಗಳನ್ನು ತೆರೆಯುತ್ತದೆ ಆದರೆ, ಜನರನ್ನು ಸಕಾಲಿಕವಾಗಿ ಮತ್ತು ಪರಿಣಾಮಕಾರಿಯಾಗಿ ಬಲಿಸಿಕೊಳ್ಳದೆ ಇದ್ದರೆ ಜನಸಂಖ್ಯೆಯೇ ಶಾಪವಾಗಿ ದೊಡ್ಡ ಸವಾಲಾಗಿ ಪರಿಣಮಿಸಬಹುದು. ದೇಶ ಪ್ರತಿ ವರ್ಷವೂ ಹೆಚ್ಚು ಹೆಚ್ಚು ಜನರಿಗೆ ಆಹಾರ ಬಟ್ಟೆ ಶಿಕ್ಷಣ ಆರೋಗ್ಯ ಸೇವೆ ಉದ್ಯೋಗಾವಕಾಶಗಳನ್ನು ಒದಗಿಸಬೇಕಾಗುತ್ತದೆ.

ಅಂಬಿಕಾ. ಕೆ

ಹೀಗೆ ಮುಂದುವರೆದರೆ ಉದ್ಯೋಗಾವಕಾಶಗಳು ದೊರೆಯದೆ ಜನರ ಜೀವನ ಮಟ್ಟ ಸುಧಾರಿಸಿಕೊಳ್ಳುವುದು ಕಷ್ಟವೇ ಸರಿ ಕೆಲಸ ಮಾಡುವ ವಯೋಮಾನದ ಜನರನ್ನು ಸಮಂಜಸವಾಗಿ ಬಳಸಿಕೊಂಡರೇ ಮಾತ್ರ ಜನಸಂಖ್ಯೆಯು ದೇಶದ ಅಭಿವೃದ್ಧಿಗೆ ಪೂರಕವಾಗಿ ಪರಿಣಮಿಸುತ್ತದೆ. ದೇಶದಲ್ಲಿ ದೊಡ್ಡ ಸಂಖ್ಯೆಯ ಜನರಿಗೆ ಈಗಲೂ ಮೂಲ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ ಆದ್ದರಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಸಂಬಂಧಿಸಿದ ನೀತಿಗಳು ಮತ್ತು ಕಾರ್ಯತಂತ್ರ ಗಳಿಗೆ ಸಂಬಂಧಿಸಿದ ಪ್ರಯತ್ನಗಳನ್ನು ನಡೆಸದೇ ಇದ್ದರೆ ಜನಸಂಖ್ಯೆ ಹೆಚ್ಚಳದ ಲಾಭವು ದೊರೆಯದೆ ಹೋಗಬಹುದು ಇದರ ಪರಿಣಾಮವಾಗಿ ಲಾಭದ ಹೆಸರಿನಲ್ಲಿ ನಷ್ಟವೇ ಹೆಚ್ಚು ಅದುವೇ ಒಂದು ಹೊರೆಯುವಾಗಬಹುದು.

ಯುವ ಜನರಿಗೆ ಸೌಲಭ್ಯಗಳು ಮತ್ತು ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಹೆಚ್ಚುತ್ತಲೇ ಇರುವ ಹಿರಿಯ ನಾಗರಿಕರ ಹಾರೈಕೆಯು ವ್ಯವಸ್ಥೆ ಮಾಡಬೇಕಿದೆ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವುದು ಮತ್ತು ಸವಾಲುಗಳನ್ನು ಎದುರಿಸುವುದು ಭಾರತೀಯರ ಹೊರೆಗಾರಿಕೆ ದೇಶದ ಜನರ ಅಗತ್ಯಗಳನ್ನು ಪೂರೈಸಲು ವಿಫಲವಾದರೆ, ಸಾಮಾಜಿಕ ಸಂಘರ್ಷ ಮತ್ತು ರಾಜಕೀಯ ದೃಷ್ಟಿ ಉಂಟಾಗಿ ಅದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಮುಂದೆ ಜನಸಂಖ್ಯಾ ಸ್ಫೋಟವಾದರೂ ಆಶ್ಚರ್ಯ ಪಡಬೇಕಾಗಿಲ್ಲ ಈಗಿನ ಸನ್ನಿವೇಶದಲ್ಲಿ ದೊರಕುತ್ತಿರುವ ಸಂಪನ್ಮೂಲಗಳ ಗರಿಷ್ಠ ಬಳಕೆ ಮತ್ತು ಪರಿಣಾಮಕಾರಿ ಬಳಕೆ ಬಹಳ ಮಹತ್ವವಾಗಿದೆ.

ಮೀಸಲಾತಿ, ವಲಸೆ , ರಾಜಕೀಯ ಪ್ರಾತಿನಿಧ್ಯ ಸಂಪನ್ಮೂಲಗಳ ಹಂಚಿಕೆ ಮತ್ತು ಇದರ ವಿಚಾರಗಳು ಚರ್ಚೆಗೆ ಒಳಗಾಗುವ ಸಾಧ್ಯತೆ ಇದೆ ಸಮಾಜದ ಎಲ್ಲಾ ವರ್ಗಗಳನ್ನು ಸಮಾನವಾಗಿ ಒಳಗೊಳ್ಳುವ ಆರ್ಥಿಕ ಪ್ರಗತಿಯು ಸಾಧ್ಯವಾದರೆ ಜನಸಂಖ್ಯೆ ಏರಿಕೆ ಸವಾಲಾಗಿ ಪರಿಣಮಿಸಬಹುದು ಮಾನವ ಅಭಿವೃದ್ಧಿಯೇ ಅತ್ಯುತ್ತಮ ಕುಟುಂಬ ಕಲ್ಯಾಣ ಯೋಜನೆ ಇದರಿಂದ ಜನಸಂಖ್ಯೆಯ ಏರಿಕೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು ಜನಸಂಖ್ಯೆ ಹೆಚ್ಚಳ ಯಾವುದೋ ಒಂದು ಸಮುದಾಯ ಕಾರಣ ಎಂದು ದೂಷಿಸುವ ಪ್ರವೃತ್ತಿಗೆ ಜ್ಞಾನದಾದ ಆಧಾರ ಇಲ್ಲದ ಪೂರ್ವಗ್ರಹ ಕಾರಣದಿಂದ ಮತ್ತು ಇದು ತಪ್ಪು ನಡವಳಿಕೆಯ ಜನಸಂಖ್ಯೆಗೆ ಸಂಬಂಧಿಸಿದ ಸವಾಲುಗಳನ್ನು ಉತ್ತಮವಾಗಿ ಮತ್ತು ಜಾಣ್ಮೆಯಿಂದ ನಿರ್ವಹಿಸಿದರೆ ಈ ಶತಮಾನವನ್ನು ಭಾರತದ ಶತಮಾನವನ್ನಾಗಿ ಪರಿವರ್ತಿಸುವ ಅವಕಾಶ ನಮ್ಮ ಮುಂದೆ ಇದೆ ಜನರೇ ನಮ್ಮ ದೇಶದ ಸಂಪನ್ಮೂಲವನ್ನಾಗಿ ಮಾರ್ಪಾಡು ಮಾಡಿಕೊಳ್ಳುವ ಅವಕಾಶ ನಮ್ಮ ನಿಮ್ಮೆಲ್ಲರ ಮೇಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಾಬಾ ಸಾಹೇಬ ಅಂಬೇಡ್ಕರರ ‘ಧ್ಯಾನ’ ಗಾಯನ ; ವಿನೂತನ

Published

on

 

  • ವೆನ್ನೆಲಾ ಕೆ.
    ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ,
    ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,
    ಬೆಂಗಳೂರು ವಿಶ್ವವಿದ್ಯಾಲಯ,ಬೆಂಗಳೂರು

ತ್ತೀಚೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದ 132ನೇ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ಜನುಮ ನಿಮಿತ್ತವಾಗಿ “ಧಾನ್ಯ” ‘ಗಾಯನವು’ ವಿನೂತನವಾದ ಈ ಕಾರ್ಯಕ್ರಮವು 5 ಘಂಟೆ, 1ನಿಮಿಷ, 14 ಸೆಕೆಂಡ್ ಗೆ ಆರಂಭವಾಗಿದ್ದು ಅವಿಸ್ಮರಣೀಯವಾದ ದಿನ, ಇದೊಂದು ಭಾರತ ಇತಿಹಾಸದ ಪುಟದ ಚರಿತ್ರೆಯಲ್ಲೇ ಹೊಸ ದಾಖಲೆಯೂ ಅಂತ ಹೇಳಬಹುದು.

ಈ ಕಾರ್ಯಕ್ರಮವನ್ನು ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ವು ಇಡೀ ಭಾರತದಲ್ಲೇ ಯಾರು ಮಾಡಿರದ ಈ ವಿನೂತವಾದ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಬೆಂಗಳೂರು ನಗರದಲ್ಲಿರುವ ಗಾಂಧಿ ಭವನದ ಆವರಣದಲ್ಲಿ ‘ಅನನ್ಯ ಸಂಸ್ಥೆ’ ವತಿಯಿಂದ 132 ನೇ ‘ವಿಶ್ವದ ವೀರ ವಿದ್ಯಾರ್ಥಿ ಹುಟ್ಟಿದ ದಿನ’ ಹಾಗೂ ‘ರಾಷ್ಟ್ರದ ಸ್ಫೂರ್ತಿಯ ದಿನ’ ‘ಸರ್ವ ಸಮುದಾಯದ ಶಕ್ತಿಯ ದಿನ’ ಇದೊಂದು ನಮ್ಮೆಲ್ಲರ ಹಬ್ಬದ ದಿನ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಇಂತಹ ಮೇರು ಶಿಖರ ಟ್ಯಾಗ್ ಲೈನ್ ಗಳಿಂದ ಅದ್ಭುತವಾಗಿ
ಆಯೋಜಿಸಿದ ಕಾರ್ಯಕ್ರಮಕ್ಕೆ ರಾಜ್ಯ ಕಂಡ ಪ್ರಸಿದ್ಧ ಐಪಿಎಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ಸಿನಿಮಾ ಸೆಲೆಬ್ರಿಟಿಗಳು, ಸಮಸ್ತ ವಿದ್ಯಾರ್ಥಿ ಸಮೂಹ, ಸಾಮಾಜಿಕ ನ್ಯಾಯದ ವಿಚಾರಶೀಲರು, ಬರಹಗಾರರು, ಪತ್ರಕರ್ತರು ಇನ್ನೂ ಅನೇಕ ಮುಂತಾದವರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಇದಕ್ಕೆ ಮುಖ್ಯ ಕಾರಣಕರ್ತರಾದ ಅನನ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಂಪುರ ರಾಜೇಶ್ ರವರ ನಿರ್ದೇಶನದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿದ್ದು ಹೆಮ್ಮೆಯ ವಿಷಯ.

ಇದರ ಹಿನ್ನೆಲೆ: ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ದಲ್ಲಿ ಅತ್ಯುತ್ತಮ ಹಾಗೂ ಅತ್ಯಂತ ತುಂಬಾ ಮನಸ್ಸಿನಿಂದಲ್ಲೇ ವಿಶೇಷವಾದ ಆಸಕ್ತಿಯನ್ನು ಅಂಬೇಡ್ಕರ್ ರವರು ಸಂಗೀತ ಪ್ರಿಯರು ಹಾಗೂ ಅಂಬೇಡ್ಕರ್ ರವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು. ಹಾಗೇಯೆ ಇವರಿಗೆ ಚಿತ್ರಕಲೆಯೂ ಸಹ ಒಲಿದಿತ್ತು ಎಂಬುದು ಗಮನಾರ್ಹ ಸಂಗತಿ. ಇಂತಹ ವಿಷಯವನ್ನು ಯಾರು ಸಹ ಬೆಳಕು ಚೆಲ್ಲುವ ಸಾಹಸಕ್ಕೆ ಕೈ ಹಾಕಿ ಇರಲಿಲ್ಲ. ಇದೊಂದು ಅನನ್ಯ ಸಂಸ್ಥೆ ವತಿಯಿಂದ ಇಂತಹ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಐತಿಹಾಸಿಕ ಚರಿತ್ರೆಗೆ ಮುನ್ನುಡಿವಾಗಿದೆ.

ಅಂಬೇಡ್ಕರ್ ರವರಿಗೆ ತಮ್ಮ ಬಿಡುವಿನ ವೇಳೆಯಲ್ಲಿ ಅದ್ಭುತವಾದ ಒಬ್ಬ ಸಂಗೀತ ಪ್ರಿಯರಾಗಿದ್ದರು. ಇವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು ಹಾಗೂ ವಿಶೇಷವಾಗಿ ಚಿತ್ರಕಲೆ ಸಹ ಸರಳವಾಗಿ ಮಾಡುವ ಮೂಲಕ ತಮ್ಮ ಮನದಲ್ಲಿ ಆಸಕ್ತಿ ಹೊಂದಿದ್ದರು. ಇನ್ನು ಹಲವಾರು ವಿಷಯದಲ್ಲಿ ಅಂದರೆ ಅಂಬೇಡ್ಕರ್ ರವರಿಗೆ ವಿಶೇಷವಾದ ಇವುಗಳಲ್ಲಿ ಆಸಕ್ತಿ ಮತ್ತು ಅಭಿರುಚಿಯನ್ನು ಹೊಂದಿದ್ದರು ಎಂಬುದನ್ನು ಮನಗಂಡ ಅನನ್ಯ ಸಂಸ್ಥೆಯ ವತಿಯಿಂದ ಆಯೋಜಿಸಿದ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಅತ್ಯುತ್ತಮವಾಗಿ ಮೂಡಿಬಂದಿದೆ.

ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ವಿಶೇಷವಾಗಿ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಚಿತ್ರ ಸಾಹಿತ್ಯಗಳು, ಅಂಬೇಡ್ಕರ್ ವಾದಿಗಳು ಮತ್ತು ಚಿತ್ರರಂಗದ ಬಹುಮುಖ ಪ್ರತಿಭೆ, ಮಹಾಗುರುಗಳಾದ ಡಾ. ಹಂಸಲೇಖ ರವರು ಹೊಸದಾಗಿ ಹಾಡನ್ನು ಬರೆದದ್ದು ತುಂಬಾ ಅವಿಸ್ಮರಣೀಯ ಅಂತ ಹೇಳಬಹುದು. ಇವರು ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರೊತ್ಸಾಹ ನೀಡಿದ್ದು, ಸರ್ವ ಸಮುದಾಯದಕ್ಕೆ ಹೊಸ ಶಕ್ತಿ ತುಂಬಿದ್ದು ಮೇರು ವ್ಯಕ್ತಿಯಾಗಿದ್ದಾರೆ.

ವೆನ್ನೆಲಾ ಕೆ.

ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ಮುಖ್ಯವಾದ ಅಂಶವೆಂದರೆ ಇದರಲ್ಲಿ ಒಟ್ಟು ನಾಲ್ಕು ಭಗವಾನ್ ಬುದ್ಧ, ಅಂಬೇಡ್ಕರ್, ಬಸವೇಶ್ವರ ಮುಂತಾದರವರನ್ನು ವಿಷಯಗಳನ್ನು ಪರಿಗಣಿಸಿ ಅಂಬೇಡ್ಕರ್ ಧ್ಯಾನ ಹಾಡುಗಳ ರಚಿಸಿವುದರಲ್ಲಿ ಪ್ರಮುಖವಾಗಿ ರಾಜ್ಯದ ಹೆಸರಾಂತ ಸಾಹಿತಿ, ಪ್ರಗತಿಪರ ಚಿಂತಕರು ಹಾಗೂ ಮಾಜಿ ಅಧ್ಯಕ್ಷರಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರಿನ ಪ್ರೊ.ಎಸ್.ಜಿ.ಸಿದ್ದರಾಮಯ್ಯನವರ
‘ಧೀ ಶಕ್ತಿಯೇ … ಜ್ಞಾನ ಪರ್ವತದ … ಧೀಮಂತ ಧೀಶಕ್ತಿಯೇ …
ಇಂತಹ ಸಾಲುಗಳನ್ನು, ಡಾ. ಕೈ.ವೈ.ನಾರಾಯಣಸ್ವಾಮಿರವರ ದೀಪಾ …. ಎಲ್ಲರೆದೆಯಲಿ … ಹಚ್ಚಿದ ದೀಪಾ .. ಭೂಪಾ … ಭೂಪಾ … ಭೀಮಾ ಭೂಪಾ .. ಬಾಬಾ .. ಸಾಹೇಬ್.. ಜೀವಸ್ವರವೇ … ಬಾಬಾ.. ಹಾಗೂ ರವಿ ಮರಿಯಪ್ಪರವರ ಹತ್ತು ಸಾವಿರ ವಯಲಿನನ್ನು … ವೀಣೆಗಳು ನೂರೆಂಟು … ಕೋಟಿ ಕೋಟಿ ಎದೆ ಸದ್ದಿನ ಡೊಳ್ಳು … ಸಂಯೋಜಿಸಿದರೇ .. ಸಂವಿಧಾನಾ … ಮತ್ತು ಚಿತ್ರ ಸಾಹಿತಿ, ಹೆಸರಾಂತ ಸಂಗೀತ ನಿರ್ದೇಶಕರು ಡಾ. ಹಂಸಲೇಖ ರವರು ನಿನ್ನ ಮೌನಾ … ದೀನ ಗಾನಾ… ನಿನ್ನ ಧ್ಯಾನಾ .. ಸಂವಿಧಾನಾ … ಈ ನಾಲ್ಕು ಅಂಬೇಡ್ಕರ್ ಧ್ಯಾನ ರಚನೆಗೆ ಇವರುಗಳ ಬರೆದಿರುವ ಅದ್ಭುತವಾದ ಅಂಬೇಡ್ಕರ್ ರವರ ಧ್ಯಾನ ಹಾಡುಗಳನ್ನು ನಮ್ಮ ಹಿಂದುಸ್ತಾನಿ ಸಂಗೀತ ಹಾಡುಗಳ ಮೂಲಕ ಕನ್ವರ್ಟ್ ಮಾಡುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತು.

ಹಾಗೆಯೇ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಬಹಳಷ್ಟು ಯಶಸ್ವಿಯಾಗಬೇಕಾದರೆ ಈ ಮೊದಲು ಪುಟ್ಟರಾಜ ಗವಾಯಿಗಳ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ಶ್ರೀ ಡಿ. ಕುಮಾರ್ ದಾಸ್ ಅವರ ವಿದ್ವತ್ ಶರೀರದಲ್ಲಿ ‘ಧ್ಯಾನ ಗಾಯನ’ ಹಾಗೂ ಇವರ ತಂಡದ ವತಿಯಿಂದ ನಡೆಸಿಕೊಟ್ಟ ಅದ್ಭತವಾದ ಅಂಬೇಡ್ಕರ್ ರವರ ಧ್ಯಾನವು ಹಿಂದುಸ್ತಾನಿ ಸಂಗೀತದ ಕನ್ವರ್ಟ್ ಮಾಡುವ ಮುಖಾಂತರ ಈ ಹಾಡುಗಳನ್ನು ಬಹಳ ಸೊಗಸಾಗಿ ಮೂಡಿಬಂದಿದ್ದು ಹೊಸ ದಾಖಲೆಗೆ ಸೇರ್ಪಡೆಯಾಗಿದೆ.

ಇನ್ನು ಮುಂಬರುವ ದಿನಗಳಲ್ಲಿ ಅದಷ್ಟು ಹಲವಾರು ವಿನೂತನವಾದ ಭಗವಾನ್ ಬುದ್ಧರ, ಬಸವೇಶ್ವರರ ಹಾಗೂ ವಿಶ್ವದ ವೀರ ವಿದ್ಯಾರ್ಥಿಯಾದ ಮೇರು ರಾಷ್ಟ್ರದ
ನಾಯಕರಾದ ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ರವರ ಹಲವಾರು ಹಾಡುಗಳನ್ನು
ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದರೆ ಇನ್ನುಷ್ಟು ಭಾರತದ ಇತಿಹಾಸದ ಪುಟಗಳಲ್ಲಿ ಮರೆತು ಹೋಗಿರುವ ಹಲವು ಬಗ್ಗೆ ದಾಖಲೆ ಇಲ್ಲದ ನೈಜ ಸಂಗತಿಗಳನ್ನು ಪುನಃ ಹೊಸ ದಾಖಲೆಗೆ ಉಪಯುಕ್ತವಾದ ವಿಶಿಷ್ಟವಾದ ಮೇರು ನಾಯಕನ
ಅಂಬೇಡ್ಕರ್ ರವರ ವಿಚಾರ ಧಾರೆಗಳು ತಾವು ಅನುಭವಿಸಿದ ನೋವು, ನಲಿವು, ಭಾರತದ ರಾಜ್ಯಾಂಗದ ಶಿಲ್ಪಿಯನ್ನು ಮುಂಬರುವ ದಿನಗಳಲ್ಲಿ ಹೊಸ ಪೀಳಿಗೆಯ ಪರಿಚಯಿಸುವ ಕೀರ್ತಿದಾಯಿಕವಾಗಲಿ ಮತ್ತು ಅದಷ್ಟು ಮುಂಬರುವ ದಿನಗಳಲ್ಲಿ ಅಂಬೇಡ್ಕರ್ ರವರ ಆಸಕ್ತಿದಾಯಕ ವಿಚಾರಗಳು ಹಾಗೂ ಸಂಗೀತದ ಬಗ್ಗೆ ಹಲವಾರು ಮಾಹಿತಿಗಳು ಸಮಸಮಸಮಾಜಕ್ಕೆ ತಲುಪುವ ವ್ಯವಸ್ಥೆಗೆ ಸಾಕ್ಷಿಯಾಗಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending