Connect with us

ಅಂತರಂಗ

ಯಜ್ಞದ ಬಗ್ಗೆ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದು..!

Published

on

  • ಡಾ.ಬಿ.ಆರ್.ಅಂಬೇಡ್ಕರ್

ರ್ಯಧರ್ಮವು ಯಜದಿಂದ ಕೂಡಿದ ಧರ್ಮವಾಗಿತ್ತು, ಯಜ್ಞವು ದೇವತ್ವವನ್ನು ಹೊಂದುವ ಅಂದರೆ ದೇವಗಣದಲ್ಲಿ ಪ್ರವೇಶ ಪಡೆಯುವ ಒಂದು ಸಾಧನವಾಗಿತ್ತು.

ಅಷ್ಟೇ ಅಲ್ಲ, ಅದು ದೇವತೆಗಳನ್ನು ನಿಯಂತ್ರಿಸುವ ಸಾಧನವೂ ಆಗಿತ್ತು. ಸಂಪ್ರದಾಯದಂತೆ ಯಜ್ಞಗಳ ಸಂಖ್ಯೆ ಇಪ್ಪತ್ತೊಂದು, ಅವುಗಳನ್ನು ಏಳರ ಮೂರು ಗುಂಪುಗಳನ್ನಾಗಿ ವಿಭಾಗಿಸಲಾಗಿತ್ತು. ಮೊದಲನೆಯ ಗುಂಪಿನಲ್ಲಿ ಬೆಣ್ಣೆ, ಹಾಲು, ಧಾನ್ಯ ಮೊದಲಾದವುಗಳ ಯಜ್ಞಗಳು ಸೇರಿದ್ದವು. ಎರಡನೆಯ ಗುಂಪಿನಲ್ಲಿ ಸೋಮ ಯಾಗಗಳು ಸೇರಿದ್ದವು.

ಮತ್ತು ಪಶು ಯಾಗಗಳು ಮೂರನೆಯ ಗುಂಪಿಗೆ ಸೇರಿದ್ದವು. ಯಜ್ಞಗಳು ಅಲ್ಪಕಾಲವಿರಬಹುದು ಅಥವಾ ಒಂದು ವರ್ಷ ಅಥವಾ ಅದಕ್ಕೂ ಹೆಚ್ಚು ದೀರ್ಘ ಅವಧಿಯ ಯಜ್ಞವಾಗಬಹುದು. ಈ ಎರಡನೆ ಜಾತಿಯ ಯಜ್ಞವನ್ನು ‘ಸತ್ರ’ವೆಂದು ಕರೆಯುತ್ತಿದ್ದರು. ಯಜ್ಞದ ಪರವಾಗಿ ಹೀಗೆ ವಾದಮಾಡಲಾಗುತ್ತದೆ: ಯಜ್ಞ ಮಾಡುವವನು ಶಾಶ್ವತ ಪುಣ್ಯವನ್ನು ಪಡೆಯುತ್ತಾನೆ.

ಕೇವಲ ಯಜ್ಞ ಮಾಡುವ ಯಜಮಾನನ ಆತ್ಮವೊಂದೇ ಅಲ್ಲ, ಅವನ ಪಿತೃಗಳೂ ಸಹ ಯಜ್ಞದಿಂದ ಲಾಭ ಪಡೆಯುತ್ತಾರೆ. ಅವನು ತಾನು ಅರ್ಪಿಸುವ ಆಹುತಿಗಳಿಂದ ಪಿತೃಗಳಿಗೆ ಸಂತೋಷವನ್ನು ಕೊಡುತ್ತಾನೆ. ಅಷ್ಟೇ ಅಲ್ಲ, ಅವರ ಸ್ಥಾನವನ್ನು ಹೆಚ್ಚಿಸುತ್ತಾನೆ ಮತ್ತು ಉನ್ನತ ಲೋಕದ ವಾಸಿಯಾಗಲು (ಅವರನ್ನು) ಮೇಲೆ ಕಳುಹಿಸುತ್ತಾನೆ.

ಯಜ್ಜವು ಕೇವಲ: ಪಾರಲೌಕಿಕ ಸುಖವನ್ನು ಸಂಪಾದಿಸುವ ಸಾಧನವೊಂದೇ ಆಗಿರಲಿಲ್ಲ. ಮಹಾಯಜ್ಞಗಳಲ್ಲಿ ಹಲವು ಈ ಜಗತ್ತಿನ ಒಳ್ಳೆಯ ವಸ್ತುಗಳನ್ನು ಸಂಪಾದಿಸುವುದಕ್ಕೆಂದೇ ಇದ್ದುವು. ಲಾಭಾಕಾಂಕ್ಷೆಯಿಲ್ಲದೇ ನಿರುದ್ದಿಶ್ಯವಾಗಿ ಯಜ್ಞ ಮಾಡುವುದು ಆರ್ಯರಿಗೇ ಅರಿಯದ ವಿಷಯವಾಗಿತ್ತು. ವೈದಿಕ ಕಾಲದ ಭಾರತದಲ್ಲಿ ಕೃತಜ್ಞತಾರ್ಪಣೆಯೂ ಇರಲಿಲ್ಲ.

ಸಾಮಾನ್ಯವಾಗಿ ಯಾವ ದೇವತೆಯನ್ನು ಕುರಿತು ಯಜ್ಞ ಮಾಡಲಾಗುತ್ತಿತ್ತೋ, ಆ ದೇವತೆಯು (ತನಗೆ ಅರ್ಪಿಸಿದ ಆಹುತಿಗಳಿಗೆ ಪ್ರತಿಯಾಗಿ ಕೊಡುವ ಉಡುಗೊರೆಯೇ ಯಜ್ಞದಿಂದಾಗುವ ಲಾಭ, ಯಜ್ಞವು ಈ ಮಾತುಗಳಿಂದ ಪ್ರಾರಂಭವಾಗುತ್ತಿತ್ತು. ಅವನು ದೇವನಿಗೆ ಈ ಮಾತುಗಳಿಂದ ಯಜ್ಞವನ್ನು ಅರ್ಪಿಸುತ್ತಾನೆ. “ನೀನು ನನಗೆ ಕೊಡು, ನಾನು ನಿನಗೆ ಕೊಡುವೆನು, ನೀನು ನನಗೆ ಅನುಗ್ರಹಿಸು, ನಾನು ನಿನಗೆ ಅರ್ಪಿಸುವನು.”

ಯಜ್ಞ ಸಮಾರಂಭವು ಭಯಭಕ್ತಿಯನ್ನು ಹುಟ್ಟಿಸುವಂತೆ ಇರುತ್ತಿತ್ತು, ಆಡುವ ಪ್ರತಿಯೊಂದು ಶಬ್ದವೂ ಪರಿಣಾಮಕಾರಿಯಾಗಿರುತ್ತಿತ್ತು ಮತ್ತು ಶಬ್ದ ಉಚ್ಚಾರ ಅಥವಾ ಸ್ವರವೂ ಸಹ ಮಹತ್ವಪೂರ್ಣವಾಗಿರುತ್ತಿತ್ತು. ಅಲ್ಲದೆ ಸಮಾರಂಭದ ಬಹುಭಾಗ ಕೈಚಳಕದಿಂದ ಕೂಡಿದ್ದಿತು ಮತ್ತು ತೋರುವಷ್ಟು ಮಹತ್ವವುಳ್ಳದ್ದಾಗಿಲ್ಲವೆಂದು ಪುರೋಹಿತರೆಲ್ಲರೂ ತಿಳಿದಿದ್ದರು ಎಂಬ ಸೂಚನೆಗಳು (ಅಲ್ಲಲ್ಲಿ) ಕಂಡುಬರುತ್ತವೆ.

ಯಜ್ಞವೆಂದರೆ ಪುರೋಹಿತರಿಗೆ ದಕ್ಷಿಣೆಯೆಂದರ್ಥ, ದಕ್ಷಿಣೆಯ ಬಗೆಗೆ ನಿಯಮಗಳು ಸ್ಪಷ್ಟವಾಗಿದ್ದವು. ಮತ್ತು ಅವುಗಳನ್ನು ಪ್ರತಿಪಾದಿಸುವವರಿಗೆ ಯಾವುದೇ ಸಂಕೋಚವಿರಲಿಲ್ಲ, ಪುರೋಹಿತರು ದಕ್ಷಿಣೆಗಾಗಿಯೇ ಯಜ್ಞವನ್ನು ಮಾಡುತ್ತಿದ್ದರು. ಅಲ್ಲಿ ಬೆಲೆಯುಳ್ಳ ಬಟ್ಟೆಗಳು, ಗೋವುಗಳು, ಕುದುರೆ ಅಥವಾ ಬಂಗಾರ ಹೀಗೆ ಯಾವುದನ್ನು ಯಾವಾಗ ಕೊಡಬೇಕೆಂಬುದನ್ನೂ ಲಕ್ಷಪೂರ್ವಕವಾಗಿ ಹೇಳಿದ್ದಾರೆ.

ಪುರೋಹಿತರು ಬಹುಸಂಕೀರ್ಣವಾದ ವಿಧಾನಗಳನ್ನು ಏರ್ಪಾಡು ಮಾಡಿಕೊಂಡಿದ್ದರು ಮತ್ತು ಪ್ರತಿಯೊಂದು ಸಂದರ್ಭದಲ್ಲಿಯೂ ದಕ್ಷಿಣೆಯನ್ನು ಕೇಳುತ್ತಿದ್ದರು. ಯಾವನ ಲಾಭಕ್ಕಾಗಿ ಯಜ್ಞವನ್ನು ಮಾಡುತ್ತಾನೋ ಅವನೊಬ್ಬನೇ ಯಜ್ಞದ ಎಲ್ಲ ಖರ್ಚನ್ನೂ ವಹಿಸಬೇಕೆಂದ ಮೇಲೆ ಖರ್ಚು ಅತಿಯಾಗುವುದು ಸಹಜ. ಒಂದು ಕಡೆ, ಯಜ್ಞದ ದಕ್ಷಿಣೆಯು ಒಂದು ಸಾವಿರ ಆಕಳುಗಳಷ್ಟು ಎಂದು ಹೇಳಿದೆ.

ಅಂದಮೇಲೆ ಯಜ್ಞ ಎಷ್ಟು ದುಬಾರಿಯಾಗಿತ್ತೆಂಬುದನ್ನು ತಿಳಿಯಬಹುದು. ಈ ಲೋಭಕ್ಕಾಗಿ ಸಾವಿರ ಆಕಳುಗಳನ್ನು ಕೊಟ್ಟವನು ಸರ್ಗದಲ್ಲಿ ಎಲ್ಲವನ್ನು ಪಡೆಯುತ್ತಾನೆಂದು ಪುರೋಹಿತನು ಘೋಷಿಸುವಂತೆ ಆಯಿತು. ಈ ವಿಷಯದಲ್ಲಿ ಪುರೋಹಿತನು ಒಳ್ಳೆಯ ದೃಷ್ಟಾಂತಗಳನ್ನು ಕೊಡಬಹುದಿತ್ತು. ಸ್ವರ್ಗದಲ್ಲಿಯ ದೇವತೆಗಳು ತಮ್ಮ ಜೊತೆಯ ದೇವತೆಗಳಿಗೆ ಸಹಾಯ ಮಾಡಿದಾಗ ಪ್ರತಿಫಲವನ್ನು ಕೇಳುವ ಹಕ್ಕು ಇದ್ದೇ ಇರುತ್ತದೆ.

ಪಶು ಯಜ್ಞವು ಮುಖ್ಯ ಯಜ್ಞವಾಗಿತ್ತು. ಅದು ಬಹಳ ವೆಚ್ಚ ಮತ್ತು ಅನಾಗರಿಕವೂ ಆಗಿತ್ತು. ಆರ್ಯರ ಧರ್ಮದಲ್ಲಿ ಐದು ತೆರನಾದ ಪಶುಗಳನ್ನು ಯಜ್ಞಕ್ಕೆ ಯೋಗ್ಯವೆಂದು ಹೇಳಲಾಗಿದೆ. ಯಜ್ಞಕ್ಕೆ ಯೋಗ್ಯವಾದ ಪಶುಗಳ ಪಟ್ಟಿಯಲ್ಲಿ ಮನುಷ್ಯನು ಮೊದಲಿಗನು, ಮನುಷ್ಯ ಯಜ್ಞವು ಅತ್ಯಂತ ದುಬಾರಿಯಾಗಿತ್ತು. ಮನುಷ್ಯ ಯಜ್ಞದ ನಿಯಮಗಳ ಪ್ರಕಾರ ಕೊಲ್ಲಲ್ಪಡುವ ವ್ಯಕ್ತಿಯು ಮರೋಹಿತ (ವರ್ಗದವ)ನೂ ಆಗಿರಬಾರದು, ದಾಸನೂ ಆಗಿರಬಾರದು.

ಅವನು ಕ್ಷತ್ರಿಯ ಅಥವಾ ವೈಶ್ಯನಿರಬೇಕು. ಆ ಕಾಲದ ಸಾಮಾನ್ಯ ಮೌಲ್ಯದ ಪ್ರಕಾರ ಯಜ್ಞ ಪಶುವಾದ ಮನುಷ್ಯನನ್ನು ಕೊಳ್ಳಬೇಕಾದರೆ ಅವನ ಬೆಲೆ ಒಂದು ಸಾವಿರ ಆಕಳು, ಮನುಷ್ಯ ಯಜ್ಞವು ಬಹುವೆಚ್ಚದ್ದೂ ಮತ್ತು ಅನಾಗರಿಕವೂ ಆಗಿತ್ತಲ್ಲದೆ ಅದು ಓಕರಿಕ ಬರುವಂತಹದೂ ಆಗಿದ್ದಿರಬೇಕು. ಏಕೆಂದರೆ ಯಜ್ಞ ಮಾಡುವವರು ಯಜ್ಞ ಪಶುವಾದ ಮನುಷ್ಯನನ್ನು ಕೊಲ್ಲುವುದಷ್ಟೇ ಅಲ್ಲ, ಅವನನ್ನು ತಿನ್ನಬೇಕಾಗಿತ್ತು. ಮನುಷ್ಯನ ಅನಂತರದ ಸ್ಥಾನ ಕುದುರೆಯದು.

ಅದೂ ಸಹ ಬಹಳ ವೆಚ್ಚದ ಯಜ್ಞವಾಗಿತ್ತು. ಏಕೆಂದರೆ ಕುದುರೆಯು ಆರ್ಯರಿಗೆ ಭಾರತವನ್ನು ಜಯಿಸುವಲ್ಲಿ ಅಪರೂಪದ ಹಾಗೂ ಅವಶ್ಯಕವಾದ ಪಾಣಿಯಾಗಿತ್ತು. ಇಂತಹ ಸೈನಿಕ ಮಹತ್ವದ ಮತ್ತು ಸಮರ್ಥವಾದ ಪ್ರಾಣಿಯನ್ನು ಯಜ್ಞ ಪಶುವನ್ನಾಗಿ ಸಂಹರಿಸಿ ಆಹುತಿಗಳನ್ನು ಅರ್ಪಿಸುವುದು ಆರ್ಯರಿಗೆ ಸುಲಭವಾಗಿರಲಿಲ್ಲ. ಅಶ್ವಮೇಧ (ಕುದುರೆಯ ಯಜ್ಜುವು ಓಕರಿಕೆ ಬರುವಂತಹುದೂ ಆಗಿರಬೇಕು, ಏಕೆಂದರೆ ಅದರ ವಿಧಿಗಳಲ್ಲಿ ಒಂದರ ಪ್ರಕಾರ ಕುದುರೆಯನ್ನು ಕೊಲ್ಲುವುದಕ್ಕಿಂತ ಮೊದಲು ಯಜ್ಞಮಾಡುವವನ ಹೆಂಡತಿಯ ಜೊತೆ ಕುದುರೆಯು ಸಂಭೋಗ ಮಾಡಬೇಕಾಗಿತ್ತು.

ಜನರು ಕೃಷಿಯ ಉದ್ದೇಶಗಳಿಗಾಗಿ ಉಪಯೋಗಿಸುತ್ತಿದ್ದ ದನಗಳನ್ನೇ ಹೆಚ್ಚಾಗಿ ಯಜ್ಞಗಳಲ್ಲಿ ಬಲಿಕೊಡುತ್ತಿದ್ದರು. ಸಾಮಾನ್ಯವಾಗಿ ಅವು ಆಕಳುಗಳು ಮತ್ತು ಎತ್ತುಗಳಾಗಿದ್ದವು. ಯಜ್ಞಗಳ ವೆಚ್ಚ ಅತಿಯಾಗಿತ್ತು. ಆದುದರಿಂದ ಅವುಗಳಿಗೆ ಬೇಕಾದ ದುಬಾರಿ ಖರ್ಚಿನ ವಿಚಾರ

ಮಾಡಿದರೆ ಅವು ಕಣ್ಮರೆಯಾಗಬೇಕಾಗಿತ್ತು. ಆದರೆ ಅವು ಹಾಗೆ ಕಣ್ಮರೆಯಾಗಲಿಲ್ಲ. ಕಾರಣವಿಷ್ಟೇ, ಯಜ್ಞ ನಿಂತುಹೋದರೆ ಮರೋಹಿತರ ದಕ್ಷಿಣೆಯೂ ಇಲ್ಲದಂತೆ ಆಗುತ್ತಿತ್ತು. ಯಜ್ಜಗಳನ್ನು ಮಾಡದಿದ್ದರೆ ದಕ್ಷಿಣೆಯಿಲ್ಲ. (ದಕ್ಷಿಣೆಯಿಲ್ಲದಿದ್ದರೆ) ಬ್ರಾಹ್ಮಣರು ಉಪವಾಸ ಸಾಯಬೇಕಾಗುತ್ತಿತ್ತು. ಆದ್ದರಿಂದ ಬ್ರಾಹ್ಮಣರು ಅತಿವೆಚ್ಚದ ಯಜ್ಞ ಪಶುಗಳಿಗೆ ಬದಲಿ ವಸ್ತುಗಳನ್ನು ಕಂಡುಹಿಡಿದರು.

ಮನುಷ್ಯ ಯಜ್ಞದಲ್ಲಿ ಬ್ರಾಹ್ಮಣರು ಜೀವಂತ ಮನುಷ್ಯನಿಗೆ ಬದಲಾಗಿ ಹುಲ್ಲಿನ, ಲೋಹದ ಅಥವಾ ಮಣ್ಣಿನ ಮನುಷ್ಯನನ್ನು ಅರ್ಪಿಸಲು ಅನುಮತಿ ನೀಡಿದರು. ಆದರೆ ಅವರು ನರ ಯಜ್ಞವನ್ನು ಸಂಪೂರ್ಣವಾಗಿ ತ್ಯಜಿಸಲಿಲ್ಲ. ಹಾಗೆ ಮಾಡಿದರೆ ಆ ಯಜ್ಞವೇ ನಿಂತು ಹೋಗಬಹುದು ಮತ್ತು ತಮಗೆ ದಕ್ಷಿಣೆ ಸಿಗುವುದಿಲ್ಲವೆಂಬ ಹೆದರಿಕೆ ಅವರಿಗೆ ಇರಬೇಕು. ಮನುಷ್ಯ ಯಜ್ಞವು ಅಪರೂಪವಾಗುತ್ತ ಬಂದಂತೆ, ಅದಕ್ಕೆ ಬದಲಾಗಿ ಪಶು ಯಜ್ಞವು ಹೆಚ್ಚಾಗಿ ರೂಢಿಯಲ್ಲಿ ಬಂದಿತು, ಪಶು ಯಜ್ಞವು ಸಹ ಲೌಕಿಕರಿಗೆ ಖರ್ಚಿನ ಸಮಸ್ಯೆಯಾಗಿತ್ತು.

ಇಲ್ಲಿಯೂ ಯಜ್ಞವು ಸಂಪೂರ್ಣ ಕಣ್ಮರೆಯಾಗಬಾರದೆಂದು, ಮನುಷ್ಯ ಮತ್ತು ಕುದುರೆಗಳ ಬದಲಿಗೆ ದನಗಳನ್ನು ಅನುಮತಿಸಿದಂತೆ, ದನಗಳ ಬದಲಿಗೆ ಇನ್ನೂ ಚಿಕ್ಕ ಪ್ರಾಣಿಗಳನ್ನು ಬಲಿಕೊಡಲು ಬ್ರಾಹ್ಮಣರು ಅನುಮತಿಸಿದರು. ಇವೆಲ್ಲವೂ ಯಜ್ಞದ ಆಚರಣೆಯನ್ನು ಉಳಿಸಿಕೊಳ್ಳುವುದಕ್ಕಾಗಿತ್ತು. ಹೀಗೆ ಮಾಡುವುದರಿಂದ ಬ್ರಾಹ್ಮಣರ ಉಪಜೀವನಕ್ಕೆ ಬೇಕಾದ ದಕ್ಷಿಣೆಗೆ ಸಂಚಕಾರ ಬರಲಿಲ್ಲ. ಯಜ್ಞಗಳನ್ನು ಮುಂದುವರಿಸಿಕೊಂಡು ಹೋಗಬೇಕೆಂಬ ಬ್ರಾಹ್ಮಣರ ಹಟ ಎಷ್ಟಿತ್ತೆಂದರೆ ಕೇವಲ ಅನ್ನವನ್ನು ಬಲಿಯಾಗಿ ಅರ್ಪಿಸುವುದರಿಂದಲೂ ಅವರು ತೃಪ್ತರಾದರು.

ಆದರೆ, ಆರ್ಯರ ಯಜಗಳ ಬದಲಿ ವ್ಯವಸ್ಥೆಯಿಂದ ಅದರ ಭೀಕರತೆ ಕಡಿಮೆಯಾಯಿತೆಂದು ಭಾವಿಸಬಾರದು. ಬದಲಿ ವ್ಯವಸ್ಥೆಯೆಂದರೆ, ಅತಿ ಖರ್ಚಿನ ಮತ್ತು ಬಹಳ ಭೀಕರವಾದ ಯಜ್ಞಗಳನ್ನು ಪೂರ್ಣವಾಗಿ ತ್ಯಜಿಸಿ ಕಡಿಮೆ ಖರ್ಚಿನ ಹಾಗೂ ಸೌಮ್ಯವಾದ ಯಜ್ಞಗಳನ್ನು ಮಾಡುವುದಾಗಿರಲಿಲ್ಲ. ಯಜ್ಞಮಾಡುವವನು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಆಹುತಿಗಳನ್ನು ಅರ್ಪಿಸಬೇಕೆನ್ನುವುದೇ ಆದರ ಅರ್ಥ, ಅವನು ಬಡವನಾಗಿದ್ದರೆ ಅನ್ನವನ್ನು ಆಹುತಿಯಾಗಿ ಅರ್ಪಿಸಬಹುದು. ಸುಸ್ಥಿತಿಯಲ್ಲಿದ್ದರೆ ಒಂದು ಆಡನ್ನು ಬಲಿ ಕೊಡಬಹುದು.

ಅವನು ಶ್ರೀಮಂತನಿದ್ದರೆ ಮನುಷ್ಯ ಅಥವಾ ಕುದುರೆ ಅಥವಾ ಆಕಳು ಅಥವಾ ಎತ್ತು ಬಲಿ ಪಶು ಆಗಬಹುದು. ಬದಲಿ ವ್ಯವಸ್ಥೆಯ ಪರಿಣಾಮವೆಂದರೆ, ಯಜ್ಞವನ್ನು ಎಲ್ಲರ ಸಾಮರ್ಥ್ಯಕ್ಕೆ ಒಳಪಡಿಸಿದಂತಾಯ್ತು ಮತ್ತು ಒಟ್ಟಿನಲ್ಲಿ ಬ್ರಾಹ್ಮಣರು ಹೆಚ್ಚು ಲಾಭ ಪಡೆಯುವಂತಾಯಿತು. ಆದರಿಂದ ಪಶುಯಜ್ಞವನ್ನು ನಿಲ್ಲಿಸಲಾಗಿಲ್ಲ. ಬದಲಾಗಿ ಸಾವಿರಾರು ಪಶುಗಳನ್ನು ಬಲಿಕೊಡುವುದು ನಡೆದೇ ಇತ್ತು.

ಯಜ್ಞಗಳಲ್ಲಿ ಆಗಾಗ್ಗೆ ದನಗಳ ಕಗ್ಗೋಲೆ ನಡೆಯುತ್ತಿತ್ತು. ಅಲ್ಲಿ ಬ್ರಾಹ್ಮಣರು ಕಟುಕರಾಗಿದ್ದರು. ಬೌದ್ಧ ಸಾಹಿತ್ಯದಲ್ಲಿ ಬರುವ ಯಜ್ಞದ ಉಲ್ಲೇಖಗಳನ್ನು ನೋಡಿದಾಗ ಈ ಮುಗ್ಧಪಶುಗಳ ಕಗ್ಗೋಲೆಯ ವ್ಯಾಪಕತೆಯ ಕಲ್ಪನೆ ಬರುತ್ತದೆ. ‘ಸುತ್ತನಿಪಾತ’ದಲ್ಲಿ ಕೋಸಲದ ರಾಜ, ಪಸನದಿ ಮಾಡಬೇಕಾದ ಯಜ್ಞದ ವರ್ಣನೆಯಿದೆ. ಅಲ್ಲಿ ಹೀಗೆ ಹೇಳಿದೆ: ಯಜ್ಞದಲ್ಲಿ ಕೊಲ್ಲುವುದಕ್ಕಾಗಿ ಐದು ನೂರು ಎತ್ತುಗಳು, ಐದು ನೂರು ಕುರಿಗಳನ್ನು ಕಂಬಗಳಿಗೆ ಕಟ್ಟಿದ್ದರು ಮತ್ತು ಪುರೋಹಿತರು ಹೇಳಿದ ಕೆಲಸಗಳನ್ನು ಮಾಡುವುದಕ್ಕಾಗಿ ನಿಯಮಿಸಲ್ಪಟ್ಟಿದ್ದ ರಾಜನ ಸೇವಕರು ಅಶ್ರುಪೂರ್ಣ ಕಣ್ಣುಳ್ಳವರಾಗಿ ತಮ್ಮ ತಮ್ಮ ಕೆಲಸಗಳನ್ನು ಮಾಡುತ್ತಿದ್ದರು.

ಯಜ್ಞವು ಕಗ್ಗೋಲೆಯನ್ನು ಒಳಗೊಂಡಿತ್ತಷ್ಟೇ ಅಲ್ಲ. ಅದೊಂದು ಸ್ವಚ್ಛಾ ವಿಹಾರೋತ್ಸವವಾಗಿತ್ತು. ಸುಟ್ಟ ಮಾಂಸವಲ್ಲದೆ ಮದ್ಯವೂ ಅಲ್ಲಿರುತ್ತಿತ್ತು. ಬ್ರಾಹ್ಮಣರು ಸೋಮ ಮತ್ತು ಸುರಾಪಾನ ಮಾಡುತ್ತಿದ್ದರು. ಪ್ರತಿಯೊಂದು ಯಜ್ಞ ಮುಗಿದ ನಂತರ ಜೂಜಾಟವಾಡುತ್ತಿದ್ದರು ಮತ್ತು ಇನ್ನೂ ಅಸಾಧಾರಣವಾದ ಒಂದು ಮಾತೆಂದರೆ ಅದರ ಜೊತೆಯಲ್ಲಿಯೇ ಬಯಲಿನಲ್ಲಿ ಮೈಥುನ ನಡೆಯುತ್ತಿತ್ತು. ಯಜ್ಞವೆಂದರೆ ವ್ಯಭಿಚಾರವಾಗಿತ್ತು ಮತ್ತು ಅದರಲ್ಲಿ ಧರ್ಮವೆಂಬುದೇನೂ ಉಳಿದಿರಲಿಲ್ಲ. ಆರ್ಯರ ಧರ್ಮವು ಕೇವಲ ಆಚರಣೆಗಳ ಸರಮಾಲೆಯಾಗಿತ್ತು. ಈ ಆಚರಣೆಗಳ ಹಿಂದೆ

ಒಳ್ಳೆಯ ಮತ್ತು ನೈತಿಕ ಜೀವನಕ್ಕಾಗಿ ಹಂಬಲವಿರಲಿಲ್ಲ. ಸಚ್ಚಾರಿತ್ರಕ್ಕಾಗಿ ಪಿಪಾಸೆಯಿರಲಿಲ್ಲ. ಅವರ ಧರ್ಮದಲ್ಲಿ ಅಧ್ಯಾತ್ಮದ ಯಾವ ತಳಹದಿಯೂ ಇರಲಿಲ್ಲವೆಂಬ ಬಗ್ಗೆ ‘ಋಗೈದ’ದ ಸೂಕ್ತಗಳು ಒಳ್ಳೆಯ ಸಾಕ್ಷ್ಯವನ್ನೊದಗಿಸುತ್ತವೆ. ಸೂಕ್ತಗಳೆಂದರೆ ಆರ್ಯರು ತಮ್ಮ ದೇವತೆಗಳನ್ನು ಉದ್ದೇಶಿಸಿ ಮಾಡಿದ ಪ್ರಾರ್ಥನೆಗಳು. ಈ ಪ್ರಾರ್ಥನೆಗಳಲ್ಲಿ ಅವರು ಏನನ್ನು ಬೇಡುತ್ತಾರೆ? ಆಮಿಷಗಳಿಂದ ತಮ್ಮನ್ನು ದೂರ ಇಡಬೇಕೆಂದು ಬೇಡುತ್ತಾರೆಯೆ? ಬಹಳ ಸೂಕ್ತಗಳು ಇಂದ್ರನ ಸ್ತುತಿ ಪರವಾಗಿದೆ.

ಆರ್ಯರ ಶತ್ರುಗಳನ್ನು ನಾಶ ಮಾಡಿದ್ದಕ್ಕಾಗಿ ಅವನನ್ನು ಅವು ಸ್ತುತಿಸುತ್ತವೆ. ಕೃಷ್ಣನೆಂಬ ಅಸುರನ ಗರ್ಭಿಣಿಯರಾದ ಎಲ್ಲ ಹೆಂಡಂದಿರನ್ನು ಕೊಂದದ್ದಕ್ಕಾಗಿ ಅವನನ್ನು ಸ್ತುತಿಸುತ್ತವೆ. ಲಕ್ಷಗಟ್ಟಲೆ ಅಸುರರನ್ನು ಸಂಹಾರ ಮಾಡಿದ್ದಕ್ಕಾಗಿ ಅವನನ್ನು ಸುತ್ತಿಸುತ್ತವೆ. ಅನಾರ್ಯರ ಆಹಾರ ಧಾನ್ಯಗಳೆಲ್ಲ ತಮಗೆ ದೊರೆಯಬೇಕು ಮತ್ತು ಅನಾರ್ಯರ ಧನ ಸಂಪತ್ತೆಲ್ಲ ತಮಗೇ ಸಿಗಬೇಕು ಎಂಬ ಆಸೆಯಿಂದ ಅನಾರ್ಯರನ್ನು ಇನ್ನೂ ಹೆಚ್ಚಾಗಿ ನಾಶಪಡಿಸು ಎಂದು ಆರ್ಯರು ಇಂದ್ರನನ್ನು ಪ್ರಾರ್ಥಿಸುತ್ತಾರೆ. ಆಧ್ಯಾತ್ಮಿಕವಾಗಿರುವುದನ್ನು ಮತ್ತು ಉದಾತ್ತವಾಗಿರುವುದನ್ನು ಬಿಟ್ಟು ‘ಋಗ್ವದ’ದ ಸೂತ್ರಗಳು ಕೆಟ್ಟ ವಿಚಾರಗಳು ಮತ್ತು ಕೆಟ್ಟ ಉದ್ದೇಶಗಳಿಂದ ತುಂಬಿವೆ. ನೈತಿಕ ಜೀವನವೆಂದು ಯಾವುದನ್ನು ಕರೆಯಬಹುದೋ ಅದರ ಬಗೆಗೆ ಆರ್ಯರ ಧರ್ಮವು ಯಾವ ಕಾಲಕ್ಕೂ ಕಾಳಜಿ ಹೊಂದಿರಲಿಲ್ಲ.

-ಮಾಹಿತಿ ಮೂಲ: ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಸುಪ್ರಸಿದ್ಧ ಗ್ರಂಥ “ಪ್ರಾಚೀನ ಭಾರತದಲ್ಲಿ‌ ಕ್ರಾಂತಿ ಮತ್ತು ಪ್ರತಿಕ್ರಾಂತಿ”.
ಸಂಪುಟ-3. ಪುಟ ಸಂಖ್ಯೆ- 190,191,192,193.

(ಪೋಸ್ಟ್ ಸೆಲೆ: Vikas R Mourya ಫೇಸ್‌ಬುಕ್‌ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ

Published

on

~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.

ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.

ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.

ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.

ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.

ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.

ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.

ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.

ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.

ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.

ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.

ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.

ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ

Published

on

~ಗೋವರ್ಧನ ನವಿಲೇಹಾಳು 

ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು‌ ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.

ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .

ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್‌ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.

ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.

ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.

ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.

ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.

ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.

ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.

ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ಅಂತರಂಗ

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

Published

on

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು

ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.

ಖರ್ಗೋನ್‌ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.

ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.

ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Continue Reading

Trending