Connect with us

ದಿನದ ಸುದ್ದಿ

ದಲಿತ ರಾಜಕೀಯ – ದಲಿತ ಚಳವಳಿಯ ಚಿಲ್ಲರೆ ಅಂಗಡಿಗಳ ಜೋರು ವ್ಯಾಪಾರದ ಈ ಕಾಲದಲ್ಲಿ

Published

on

  • ಬಿ.ಎಲ್.ರಾಜು, ಪ್ರಾಧ್ಯಾಪಕರು, ಸಾಗರ

ನಾವು ನಮಗೆ ಕೇಳಿಕೊಳ್ಳಲೇಬೇಕಾದ ಕೆಲವು ಪ್ರಶ್ನೆಗಳು ನನ್ನನ್ನು ಕಾಡುತ್ತಿವೆ. ಭೂಮಿ, ಬಂಡವಾಳ ಮತ್ತು ರಾಜಕೀಯಾಧಿಕಾರಗಳನ್ನು ಮೇಲ್ಜಾತಿಗಳ ಶಾಶ್ವತ ಕಬ್ಜಾದಲ್ಲಿರಿಸಿ ಸೃಷ್ಟಿಸಲಾಗಿರುವಂತದ್ದು ಜಾತಿವ್ಯವಸ್ಥೆ. ಇದೊಂದು ಶುದ್ದ ರಾಜಕೀಯ- ಆರ್ಥಿಕ ಸಂಚು. ಆದರೆ ಅದು ಕಾರ್ಯಾಚರಣೆ ಮಾಡುವುದು ಸಮಾಜದಲ್ಲಿ. ಸಾಮಾಜಿಕ ಕ್ರಿಯೆಗಳ ಮೂಲಕ ಆ ರಾಜಕೀಯ ಆರ್ಥಿಕ ವ್ಯವಸ್ಥೆಗಳು ತಮ್ಮ ಶಕ್ತಿ- ಸಂಪನ್ಮೂಲಗಳನ್ನು ಕೆಳಜಾತಿಗಳಿಗೆ ನಿರಾಕರಿಸುತ್ತವೆ. ಅದರ ಭಾಗವಾಗಿ ಮಡಿ, ಮೈಲಿಗೆ, ಮೇಲು ಕೀಳು, ಶುದ್ಧ ಅಶುದ್ದ ಪರಿಕಲ್ಪನೆಗಳನ್ನು ಗ್ರಹಿಸಬೇಕು.

ಆ ರಾಜಕೀಯ ಆರ್ಥಿಕ ಶಕ್ತಿ ಸಂಪನ್ಮೂಲಗಳ ಮೇಲೆ ದಲಿತರು ಹಿಡಿತ ಸಾಧಿಸಲು ಎಲ್ಲಿಯವರೆಗೆ ಸಾಧ್ಯವಿಲ್ಲವೊ ಅಲ್ಲಿಯವರೆಗೆ ಜಾತಿ ತಾರತಮ್ಯಗಳು ಸಾಯುವುದಿಲ್ಲ. ಜಾತಿ ವ್ಯವಸ್ಥೆ ನಿರಂತರವಾಗಿ ಮುಂದುವರೆಯುತ್ತದೆ.

ಭೂಮಿ ಬಂಡವಾಳ ರಾಜಕೀಯಾಧಿಕಾರಗಳ ನಿರಂತರ ನಿರಾಕರಣೆಗೆ ಒಳಗಾದ ಈ ದೇಶದ ಸಾವಿರಾರು ತಬ್ಬಲಿ ಕೆಳಜಾತಿ ಸಮುದಾಯಗಳಿಗೆ ಬಿಡುಗಡೆಯ ದಾರಿಯನ್ನು ತೋರಿದ್ದು ಬಾಬಾಸಾಹೇಬರು. ಅವರು ತಮ್ಮ ಚಿಂತನೆ, ಕ್ರಿಯೆ ಮತ್ತು ಹೋರಾಟಗಳ ಮೂಲಕ ರೂಢಿಸಿಕೊಟ್ಟ ಜ್ಞಾನಮಾರ್ಗವೇ ದಲಿತರ ಬಿಡುಗಡೆಯ ದಾರಿ. ಇದೇ ದಾರಿಯಲ್ಲಿ ಹೋಗಿದ್ದರೆ ತಳಸಮುದಾಯಗಳು 21 ನೇ ಶತಮಾನದ ಸವಾಲುಗಳನ್ನೆದುರಿಸಲು ಸಜ್ಜಾದ ಜ್ಞಾನಸಮುದಾಯಗಳಾಗಿ ಮೇಲೇಳುವ ಎಲ್ಲಾ ಅವಕಾಶಗಳಿದ್ದವು.

ಆದರೆ ಜ್ಞಾನ ಮಾರ್ಗವನ್ನು ಬಲವಾಗಿ ಅಪ್ಪಿಕೊಂಡು ಮುನ್ನಡೆಯಬೇಕಿದ್ದ ದಲಿತ ಸಮುದಾಯಗಳು ಆತ್ಮವಂಚನೆಯ ವಿರಾಟ್ ಕಾಲಘಟ್ಟದಲ್ಲಿವೆ. ಸವಲತ್ತುಗಳನ್ನ ಪಡೆದುಕೊಂಡ ದಲಿತರಲ್ಲಿನ ಮಧ್ಯಮ ಮತ್ತು ಮೇಲ್ವರ್ಗಗಳು, ಜಾತಿವ್ಯವಸ್ಥೆಯಲ್ಲಿರುವ ಮೇಲ್ಜಾತಿಗಳ ಎಲ್ಲಾ ವ್ಯಸನಗಳನ್ನು ತಮ್ಮದನ್ನಾಗಿಸಿಕೊಂಡಿವೆ. ಆ ವ್ಯಸನಗಳನ್ನೇ ತಮ್ಮ ಶ್ರೇಷ್ಟತೆಯ ಗುರುತುಗಳನ್ನಾಗಿ ಮಾಡಿಕೊಂಡಿವೆ. ಈ ಎರಡೂ ವರ್ಗಗಳಿಗೆ ಬಾಬಾಸಾಹೇಬರು ಕಟ್ಟಿಕೊಟ್ಟ ಮೌಲ್ಯಗಳಾಗಲಿ, ತೋರಿದ ಜ್ಞಾನಮಾರ್ಗವಾಗಲಿ, ಆಧ್ಯಾತ್ಮದ ದಾರಿಯಾಗಲಿ ಬೇಕಿಲ್ಲದ ಸ್ಥಿತಿಗೆ ಬಂದು ನಿಂತಿವೆ. ತಮ್ಮ ಶೋಷಕ ವ್ಯವಸ್ಥೆಯು ಕಟ್ಟಿಕೊಟ್ಟ ಮನುಪ್ರಣೀತ ಆಚರಣೆ, ಸಂಪ್ರದಾಯಗಳಲ್ಲೆ ಸುಖಿಸುತ್ತಿವೆ. ಇದೊಂತರ ಸ್ಟಾಕ್ ಹೋಂ ಸಿಂಡ್ರೋಪಮ್. ಶೋಷಕನನ್ನೆ ಮೆಚ್ಚಿ ಅನುಕರಿಸುವುದು.

ಇದೇ ದಲಿತ ಮಧ್ಯಮ, ಮೇಲ್ವರ್ಗಗಳು ತಮ್ಮ ಅಹಮ್ಮಿಗೆ, ಅನುಕೂಲಕ್ಕೆ, ಸವಲತ್ತುಗಳಿಗೆ ಏಟುಬಿದ್ದಾಗ ಮಾತ್ರ ಅಂಬೇಡ್ಕರರ ಸಂವಿಧಾನದ ಆಸರೆ ಪಡೆಯುತ್ತವೆ.

ಸಂಖ್ಯೆಯಲ್ಲಿ ಬಹುಸಂಖ್ಯಾತರಾದ ದಲಿತರ ಕೆಳ/ಬಡವರ್ಗ ತನ್ನ ಅಸ್ಥಿತ್ವಕ್ಕಾಗಿ ಅನ್ನ, ಸೂರು, ಬಟ್ಟೆಗಳಂತ ಪ್ರಾಥಮಿಕ ಅವಶ್ಯಕತೆಗಳಿಗಾಗಿ ಸಂವಿಧಾನ ಜಾರಿಗೆ ಬಂದು 75 ವರ್ಷಗಳ ನಂತರವೂ ಹೆಣಗಾಡುತ್ತಲೇ ಇವೆ. ಈಗಲೂ ಅವು ಅತ್ಯಂತ ಹೀನಾಯ & ಅನಾಥ ಸ್ಥಿತಿಯಲ್ಲಿವೆ.

ಭಾರತದ ಮಟ್ಟಿಗೆ ತುಂಬಾ ಅತ್ಯಂತ ವೈಚಾರಿಕ ಮಾನವೀಯತೆಯ ನೆಲೆಗಟ್ಟನ್ನ ಪ್ರತಿಪಾದಿಸಿ, ಪ್ರಜಾಪ್ರಭುತ್ವದ ಆತ್ಯಂತಿಕ ಆದರ್ಶಗಳನ್ನು ಸಂವಿಧಾನಕ್ಕೆ ಅಳವಡಿಸಿದ ಬಾಬಾಸಾಹೇಬರ ಚಿಂತನಾಧಾರೆ ಭಾರತೀಯರಿಗೆ ಧಾರಾಳವಾಗಿ ಹರಿದುಬಂದದ್ದು ಅವರ ಮಹಾಪರಿನಿಬ್ಬಾಣದ ನಂತರವೆ.. ಅದರಲ್ಲೂ ಎಪ್ಪತ್ತರ ದಶಕದಲ್ಲಿ.
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಪ್ರೊ. ಬಿ. ಕೃಷ್ಣಪ್ಪನವರು ದಲಿತ ಸಂಘರ್ಷ ಸಮಿತಿಯನ್ನು ಹುಟ್ಟುಹಾಕಿದ ನಂತರ.

ಪ್ರೊ. ಬಿ.ಕೆ.ಯವರು ಬಾಬಾಸಾಹೇಬರ ಚಿಂತನೆಯನ್ನು ತನ್ನ ಭಾಷಣ, ಹಾಡು, ಹೋರಾಟ, ಪ್ರತಿಭಟನೆಗಳ ಭಾಗವಾಗಿಸಿಕೊಂಡು ರಾಜ್ಯದ ಪ್ರತಿ ದಲಿತರ ಕೇರಿಗೆ ಕೊಂಡೊಯ್ದರು. ಸಾವಿರಾರು ವರ್ಷ ಅಸ್ಪೃಶ್ಯತೆಯ ಕಳಂಕ ಹೊತ್ತು ಗುಲಾಮಗಿರಿಯಲ್ಲೇ ಉಸಿರಾಡಿಕೊಂಡಿದ್ದ ಜನರ ನರನಾಡಿಗಳಿಗೆ ಬಾಬಾಸಾಹೇಬರ ಚಿಂತನೆಯನ್ನು ತುಂಬಿದರು, ಆ ಮೂಲಕ ರಾಜಕೀಯ ಪ್ರಜ್ಞೆ ಮತ್ತು ಪ್ರತಿಭಟನೆಯ ಕೆಚ್ಚನ್ನು ಜಾಗೃತಗೊಳಿಸಿದರು.

ದಲಿತರ ನೋವಿಗಷ್ಟೇ ಅಲ್ಲ, ಹಿಂದುಳಿದ ವರ್ಗಗಳ ಪಾಲಿಗೂ ಭರವಸೆ ತುಂಬಿದವರು ಪ್ರೊ. ಬಿ.ಕೆ.
ಆ ಹೊತ್ತಿಗೆ ಎಚ್ಚೆತ್ತ ದಲಿತ ಅಕ್ಷರಸ್ಥ ತಲೆಮಾರು ಪ್ರೊ. ಬಿ. ಕೃಷ್ಣಪ್ಪನವರ ಹೋರಾಟದ ಸಾಗರಕ್ಕೆ ಹರಿದು ಬಂತು. ಅವರ ಅದಮ್ಯ ಹೋರಾಟದ ಕುಲುಮೆಯಲ್ಲಿ ಕವಿಗಳಾಗಿ, ಹೋರಾಟಗಾರರಾಗಿ, ಸಾಹಿತಿಗಳಾಗಿ, ಯುವ ಮುಂದಾಳುಗಳಾಗಿ ಮೇಲೆದ್ದರು. ಅಷ್ಟರಮಟ್ಟಿಗೆ ಸ್ಥಗಿತಕೊಂಡಿದ್ದ ರಾಜ್ಯದ ರಾಜಕಾರಣವನ್ನು ಬೆಚ್ಚಿಬೀಳಿಸಿದ್ದು, ಫ್ಯೂಡಲ್ ಶಕ್ತಿಗಳನ್ನು ಬಗ್ಗಿಸಿದ್ದ ಪ್ರೊ. ಬಿ. ಕೃಷ್ಣಪ್ಪ ದಲಿತ ಚಳವಳಿ ಕರ್ನಾಟಕದ ಚೆರಿತ್ರೆಯನ್ನು ಇನ್ನೊಂದು ಮಗ್ಗುಲಿಗೆ ಹೊರಳಿಸಿದರು.

ಬಿ. ಕೆ. ಯವರ ನಂತರ ಬಂದ ದಲಿತ ರಾಜಕಾರಣಿಗಳು ಮತ್ತು ಹೋರಾಟದ ದಾರಿಗೆ ನುಸುಳಿದ ಅವಕಾಶವಾದಿಗಳಿಬ್ಬರೂ ಸೇರಿ ಪ್ರೊ. ಬಿ.ಕೆ.ಕಟ್ಟಿದ ದಲಿತ ಚಳವಳಿಯನ್ನು ಒಳಜಾತಿಗಳ ಆಧಾರದ ಮೇಲೆ ಹತ್ತಾರು ಬಣಗಳಾಗಿ ಒಡೆದರು. ಅವರ ವಯಕ್ತಿಕ ದರ್ದುಗಳ ನಿವಾರಣೆಗೆ ಚಳವಳಿಯನ್ನು ಬಲಿಕೊಟ್ಟರು. ದಲಿತರ ಮೇಲಿ ದೌರ್ಜನ್ಯಗಳು ಮಿತಿಮೀರಿದ ಹೊತ್ತಲ್ಲೆ ಈ ದಲಿತ ರಾಜಕಾರಣ-ಚಳವಳಿಯ (ನ)ಕಲಿಗಳು ತಮ್ಮ ಹೊಟ್ಟೆ ತುಂಬಿಸಿಕೊಂಡರು.

ಪ್ರೊ. ಬಿ. ಕೆ. ಯವರೇ ಕೊನೆ..
ಆನಂತರ ರಾಜ್ಯದ ಯಾವ ಮೂಲೆಯಿಂದಲಾದರೂ ಸರಿ, ಅಖಂಡ ದಲಿತ ಸಮುದಾಯದ ಏಳಿಗೆಗೆ ಬದ್ಧನಾದ ಒಬ್ಬನೇ ಒಬ್ಬ ರಾಜಕೀಯ ನಾಯಕನಾಗಲಿ, ಅಖಂಡ ದಲಿತ ಚಳವಳಿಗೆ ಕಟಿಬದ್ಧನಾದ ಒಬ್ಬ ಚಳವಳಿಗಾರನಾಗಲಿ ಈ ಹೊತ್ತಿಗೂ ಹುಟ್ಟಿಬರಲಿಲ್ಲ. ದಲಿತ ರಾಜಕಾರಣ ಮತ್ತು ದಲಿತ ಚಳವಳಿಗಳು ಈಗ ಕೇವಲ ಒಳಜಾತಿಗಳ ಮೇಲಾಟಗಳು ಮಾತ್ರ. ಅಂಬೇಡ್ಕರರು ಕೇವಲ ಒಂದು ಫೋಟೊ ಆಗುವುದು ಮತ್ತು ಬಿ.ಕೆ.ಯವರನ್ನು ಒಂದು ಹೆಸರನ್ನಾಗಿಸಿ ಮರೆವಿಗೆ ಸರಿಸುವುದು ಅವರ ಹಿಡನ್ ಅಜೆಂಡಾ.

ಇದನ್ನು ಸರಳವಾಗಿ ರೂಪಕಾತ್ಮಕವಾಗಿ ಹೇಳುವುದಾದರೆ ದಲಿತರ ಬೀದಿಗಳಲ್ಲಿ ರಾಜಕೀಯ ಮತ್ತು ಚಳವಳಿಗಳ ಚಿಲ್ಲರೆ ಅಂಗಡಿಗಳು ತಲೆ ಎತ್ತಿವೆ. ಒಂದೊಂದು ಅಂಗಡಿಯಲ್ಲಿ ಒಂದೊಂದು ವ್ಯಾಪಾರ. ಲಾಭವೇ ವ್ಯಾಪಾರದ ಅಂತಿಮ ಗುರಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಹಳೆ ಪಿಂಚಣಿ ಪದ್ಧತಿ ಮರುಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ನಿರ್ಣಯ

Published

on

ಸುದ್ದಿದಿನಡೆಸ್ಕ್:ಹಳೆ ಪಿಂಚಣಿ ಪದ್ಧತಿ ಮರು ಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ವಿವಿಧ ಹಂತಗಳಲ್ಲಿ ಹೋರಾಟ ಸೇರಿದಂತೆ ಇನ್ನಿತರೆ ನಿರ್ಣಯಗಳಿಗೆ ಬೆಂಬಲ ಸೂಚಿಸಲು ದಾವಣಗೆರೆಯಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸಭೆ ನಿರ್ಧರಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ತಿಳಿಸಿದ್ದಾರೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗದು ರಹಿತ ಚಿಕಿತ್ಸೆ ಯೋಜನೆಯ ತ್ವರಿತ ಜಾರಿಗೆ ಒತ್ತಾಯಿಸುವುದು, 2026ಕ್ಕೆ ಕೇಂದ್ರ ಸರ್ಕಾರದ ಮಾದರಿ ವೇತನಕ್ಕಾಗಿ ಹೋರಾಟ ರೂಪಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಿ ಆಂಡ್ ಆರ್ ನಿಯಮಕ್ಕೆ ತಿದ್ದುಪಡಿ ತರುವಂತೆ ಆಗ್ರಹಿಸಿ, ನಡೆಸಲಾಗುವ ಹೋರಾಟವನ್ನು ಬೆಂಬಲಿಸುವುದು, ವೈದ್ಯಕೀಯ ವೆಚ್ಚ ಮರುಪಾವತಿ ಬಿಲ್‌ಗಳಿಗೆ ಶೀಘ್ರವೇ ಹಣ ಬಿಡುಗಡೆ ಮಾಡಿಸುವ ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದು ಸಿ.ಎಸ್.ಷಡಕ್ಷರಿ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಬೈಲಹೊಂಗಲದಲ್ಲಿ ಚಾಲನೆ

Published

on

ಸುದ್ದಿದಿನಡೆಸ್ಕ್:ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ-2025ಕ್ಕೆ ಇಂದು ಮುಂಜಾನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ರಾಯಣ್ಣನ ಜನ್ಮಸ್ಥಳ ಸಂಗೊಳ್ಳಿಯಲ್ಲಿ ಅದ್ದೂರಿ ಚಾಲನೆ ನೀಡಲಾಯಿತು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಲಾಗಿರುವ ಉತ್ಸವವು ಪ್ರತಿವರ್ಷದಂತೆ ಸಾಂಪ್ರದಾಯಿಕವಾಗಿ ಆರಂಭಗೊಂಡಿದೆ. ಸಂಗೊಳ್ಳಿಯ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠದ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪ್ರಾತಃಕಾಲದ ಪೂಜೆ ಸಲ್ಲಿಸಲಾಯಿತು.

ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಜ್ಯೋತಿಯನ್ನು ಸ್ವಾಗತಿಸಿದರು. ಉಪ ವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪುರ, ಸಂಗೊಳ್ಳಿ ರಾಯಣ್ಣ ಸ್ಮಾರಕ ಭವನದ ಆವರಣದಲ್ಲಿ ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರವೇರಿಸಿದರು. ಬಳಿಕ ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ, ಜಾನಪದ ಕಲಾವಾಹಿನಿಗೆ ಚಾಲನೆ ನೀಡಿದರು.

ಪೂರ್ಣ ಕುಂಭ ಹೊತ್ತ ಮಹಿಳೆಯರು, ಪೂಜಾ ಕುಣಿತ, ನಂದಿಕೋಲು, ವೀರಗಾಸೆ, ಡೊಳ್ಳು, ಬೊಂಬೆ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಉತ್ಸವಕ್ಕೆ ಮೆರುಗು ತಂದಿತು. ಸಂಗೊಳ್ಳಿ ರಾಯಣ್ಣ ಸ್ಮಾರಕದ ಬಳಿಯಿಂದ ಆರಂಭಗೊಂಡ ಕಲಾವಾಹಿನಿಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಇಂದು ಸಂಜೆ 8 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉತ್ಸವದ ಅಧಿಕೃತ ಉದ್ಘಾಟನೆ ನೆರವೇರಿಸಲಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕಾರ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ನಾಳೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ವೀರರ ಸ್ಮರಣಾರ್ಥ ದೀಪೋತ್ಸವ, ರಾಯಣ್ಣನ ಕುರಿತಾದ ವಿಚಾರ ಸಂಕಿರಣ, ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಸೇರಿದಂತೆ ಇತರೆ ಸ್ಪರ್ಧೆಗಳು ನಡೆಯಲಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಾಳೆಯಿಂದ ಜಗಳೂರಿನಲ್ಲಿ ಜಿಲ್ಲಾ 14 ನೇ ಕನ್ನಡ ಸಾಹಿತ್ಯ ಸಮ್ಮೇಳನ

Published

on

ಸುದ್ದಿದಿನ,ದಾವಣಗೆರೆ:ಜಗಳೂರು ಪಟ್ಟಣದಲ್ಲಿ ಜನವರಿ 11 ಮತ್ತು 12 ರಂದು ಜಗಳೂರು ಪಟ್ಟಣದ ಬಯಲು ರಂಗಮಂದಿರದಲ್ಲಿ ಜಿಲ್ಲಾ 14 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ.

ಜನವರಿ 11 ರಂದು ಬೆಳಿಗ್ಗೆ 8 ಗಂಟೆಗೆ ಅಪರ ಜಿಲ್ಲಾಧಿಕಾರಿ ಪಿ ಎನ್ ಲೋಕೇಶ್ ರಾಷ್ಟ್ರ ಧ್ವಜಾರೋಹಣ ನೆರೆವೇರಿಸುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ವಾಮದೇವಪ್ಪ ಪರಿಷತ್ತಿನ ಧ್ವಜಾರೋಹಣ ನೆರೆವೇರಿಸುವರು.ಜಗಳೂರು ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ನಾಡ ಧ್ವಜಾರೋಹಣ ನೆರೆವೇರಿಸುವರು. ನವಚೇತನ ಶಾಲೆಯ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆ, ನಾಡಗೀತೆ ಹಾಡುವರು.

ಅಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ತಾಯಿ ಭುವನೇಶ್ವರಿ ಮತ್ತು ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡುವರು.

ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ, ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷರಾದ ಲೋಕಮ್ಮ ಜೆ ಸಿ ಓಬಣ್ಣ, ಡಿ.ಡಿ.ಪಿ.ಯು ಕರಿಸಿದ್ದಪ್ಪ ಎಸ್.ಜಿ, ಡಿ.ಡಿ.ಪಿ.ಐ ಕೋಟ್ರೇಶ್.ಜಿ, ಜಗಳೂರು ವೃತ್ತ ನಿರೀಕ್ಷಕರು ಶ್ರೀನಿವಾಸರಾವ್, ತಾಲ್ಲೂಕು ಪಂಚಾಯಿತಿ, ಸಿ.ಇ.ಓ ಕೆಂಚಪ್ಪ, ಜಗಳೂರು ಬಿ.ಇ.ಓ ಹಾಲಮೂರ್ತಿ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಬೀರೇಂದ್ರ ಕುಮಾರ್ ಭಾಗವಹಿಸುವರು. ಮೆರವಣಿಗೆ ತಾಲೂಕು ಕಚೇರಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ, ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ಬಯಲು ರಂಗಮಂದಿರವರೆಗೆ ತಾಯಿ ಭುವನೇಶ್ವರಿ ಮೆರವಣಿಗೆ ನಡೆಯುತ್ತದೆ.

ಡೊಳ್ಳು ಕುಣಿತ,ಹಗಲುವೇಷ, ಬೊಂಬೆ ಮೇಳ, ಉರುಮೆ, ತಪ್ಪಡಿ, ಕಹಳೆ, ವೀರಗಾಸೆ, ಕರಡಿ ಮಜಲು, ನಂದಿಧ್ವಜ, ಭಜನೆ, ಕೋಲಾಟ, ಎತ್ತಿನಗಾಡಿಗಳ ಮೆರವಣಿಗೆ, ಮಹಿಳೆಯರಿಂದ ಪೂರ್ಣಕುಂಭ, ಇಲಾಖೆಗಳ ಸ್ತಬ್ಧ ಚಿತ್ರಗಳು ಇತ್ಯಾದಿ.

ಬೆಳಿಗ್ಗೆ 11 ಗಂಟೆಗೆ ಸಮ್ಮೇಳನದ ಉದ್ಘಾಟನಾ ಸಮಾರಂಭವನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸಾಹಿತಿಗಳಾದ ಡಾ.ಪುರುಷೋತ್ತಮ ಬಿಳಿಮಲೆ ಉದ್ಘಾಟಿಸುವರು. ಜಗಳೂರು ಶಾಸಕರಾದ ಬಿ.ದೇವೆಂದ್ರಪ್ಪ ಅಧ್ಯಕ್ಷತೆ ವಹಿಸುವರು.

ಸಂಸ್ಕøತಿ ಚಿಂತಕರು ಸಾಹಿತಿಗಳಾದ ಡಾ.ಎ.ಬಿ.ರಾಮಚಂದ್ರಪ್ಪ ಸಮ್ಮೇಳನಾಧ್ಯಕ್ಷರಾಗಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ವಾಮದೇವಪ್ಪ ಆಶಯ ನುಡಿಗಳಾನ್ನಾಡುವರು. ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಮಹಲಿಂಗರಂಗ ವೇದಿಕೆಯನ್ನು ಉದ್ಘಾಟಿಸುವರು. ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಚಿನ್ನಹಗರಿಯ ನುಡಿ ತೇರು ಸ್ಮರಣ ಸಂಚಿಕೆಯ ಲೋಕಾರ್ಪಣೆ ಮಾಡುವರು. ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ಜೆ.ಎಂ ಇಮಾಮ್ ಮಹಾದ್ವಾರವನ್ನು ಉದ್ಘಾಟಿಸುವರು.

ಕ.ಸಾ.ಪ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಅವರು ವಿದ್ಯಾರತ್ನ ಡಾ.ಟಿ.ತಿಪ್ಪೇಸ್ವಾಮಿ ಸಭಾಂಗಣವನ್ನು ಉದ್ಘಾಟಿಸುವರು. ನಿಕಟ ಪೂರ್ವ ಸಮ್ಮೇಳಧ್ಯಕ್ಷರಾದ ಪ್ರೊ.ಸಿ.ವಿ ಪಾಟೀಲ್ ಕನ್ನಡ ಧ್ವಜ ಹಸ್ತಾಂತರ ಮಾಡುವರು. ಜಗಳೂರು ಕ್ಷೇತ್ರದ ಮಾಜಿ ಶಾಸಕರಾದ ಟಿ.ಗುರುಸಿದ್ದನಗೌಡ, ಎಸ್.ವಿ ರಾಮಚಂದ್ರಪ್ಫ, ಹೆಚ್.ಪಿ.ರಾಜೇಶ್ ಕೃತಿಗಳ ಲೋಕಾರ್ಪಣೆ ಮಾಡುವರು.

ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ ಪ್ರೊ.ಎಸ್.ಬಿ ರಂಗನಾಥ್ ಪುಸ್ತಕ ಮಳಿಗೆ ಉದ್ಘಾಟಿಸುವರು. ಜಗಳೂರು ಪಟ್ಟಣದ ಅಧ್ಯಕ್ಷರಾದ ಕೆ.ಎಸ್ ನವೀನ್ ಕುಮಾರ್ ಡಾ.ಎಂ.ಜಿ.ಈಶ್ವರಪ್ಪ ವಸ್ತು ಪ್ರದರ್ಶನ ಮಳಿಗೆ ಉದ್ಘಾಟಿಸುವರು.

ಮುಖ್ಯ ಅತಿಥಿಗಳಾಗಿ ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ, ಹೊನ್ನಾಳಿ ಶಾಸಕರಾದ ಡಿ.ಜಿ.ಶಾಂತನಗೌಡ, ಹರಿಹರ ಶಾಸಕರಾಧ ಬಿ.ಪಿ ಹರೀಶ್, ಚನ್ನಗಿರಿ ಶಾಸಕರಾದ ಬಸವರಾಜ ವಿ. ಶಿವಗಂಗ, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಅಸಗೋಡು ಜಯಸಿಂಹ, ತಾಂಡ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಎನ್ ಜಯದೇವ ನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್ ನವೀನ್, ನಾ.ರವಿಕುಮಾರ, ಡಿ.ಟಿ.ಶ್ರೀನಿವಾಸ್, ಡಾ.ಚಿದಾನಂದ ಎಂ.ಗೌಡ, ಜಿ.ಸ.ನೌ ಸಂಘದ ಅಧ್ಯಕ್ಷರಾದ ವೀರೇಶ್ ಎಸ್ ಒಡೇನಪುರ, ಜಿಲ್ಲಾ ವರದಿಗಾರರ ಕೂಟ ನಾಗರಾಜ್.ಎಸ್ ಬಡದಾಳ್, ಯುವ ಮುಖಂಡರಾದ ಕೆ.ಪಿ ಪಾಲಯ್ಯ, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಮಂಜುನಾಥ ಕುರ್ಕಿ, ತಾ.ಸ.ನೌ ಸಂಘದ ಎ.ಎಲ್ ತಿಪ್ಪೇಸ್ವಾಮಿ, ಕಾರ್ಯಕಾರಿ ಸಮಿಯಿಯ ಅಧ್ಯಕ್ಷರಾದ ಜಿ.ರುದ್ರಯ್ಯ, ಪ್ರಗತಿಪರ ಕೃಷಿಕರು ಕಲ್ಲೇರುದ್ರೇಶ್ ಪಾಲ್ಗೋಳ್ಳುವರು.

ಮಧ್ಯಾಹ್ನ 2 ಗಂಟೆಗೆ ಗೋಷ್ಠಿ-1ರಲ್ಲಿ. ಸಾಹಿತ್ಯ ಮತ್ತು ಸಾಮಾಜಿಕ ನೆಲೆಗಳು, ಮಧ್ಯಾಹ್ನ 3:45 ಕ್ಕೆ ಗೋಷ್ಠಿ -2ರಲ್ಲಿ ಸೌಹಾರ್ದತೆ- ಸಮಾನತೆ-ಸಾಮಾಜಿಕ ನ್ಯಾಯ, ಗೋಷ್ಠಿ-3ರಲ್ಲಿ ಸಂಜೆ 5.30ಕ್ಕೆ ದಾವಣಗೆರೆ ಜಿಲ್ಲೆಯ ಐತಿಹಾಸಿಕ ನೆಲೆಗಳು, ಗೋಷ್ಠಿಗಳು ನಡೆಸಲಾಗುವುದು.

ಸಂಜೆ 6:15 ಗಂಟೆಗೆ ಜಗಳೂರು ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ ಕಾರ್ಯಕ್ರಮ ಇರುತ್ತದೆ. ನಂತರ ಡಾ. ಶುಭಾ ಮರವಂತೆ, ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿಂದ ಹಾಸ್ಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending