Connect with us

ಬಹಿರಂಗ

ಸಿಕ್ಕುಗಳಲ್ಲಿ ಶಾಲಾ ಉಡುಪು

Published

on

ಸಾಂದರ್ಭಿಕ ಚಿತ್ರ

ಶಿಕ್ಷಣ ತಜ್ಞರ ಸ್ವಾಯತ್ತತೆಯನ್ನು ಕಸಿಯುವ ಸಾಧನವಾಗಿ ರಾಜಕೀಯ ಅಸ್ತ್ರವಾಗಿ ಶಾಲಾಸಮವಸ್ತ್ರ

  • ಮೂಲ : ಪ್ರೊ.ಕೃಷ್ಣ ಕುಮಾರ್‌, ಅನುವಾದ : ನಾ ದಿವಾಕರ

ಶಾಲಾ ಸಮವಸ್ತ್ರವೂ ಕಲಿಕೆಯ ಪ್ರಕ್ರಿಯೆಯಲ್ಲಿ ಒಂದು ಭಾಗವಾಗುತ್ತದೆ ಎಂದು ಇತಿಹಾಸದಲ್ಲಿ ಎಲ್ಲಿಯೂ ಕೇಳಿರಲಿಕ್ಕೆ ಸಾಧ್ಯವಿಲ್ಲ. ಆದರೂ ಇಂದಿನ ದಿನಗಳಲ್ಲಿಲ ಸಮವಸ್ತ್ರ ಇಲ್ಲದ ಶಾಲೆಯನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ಜನರು ಶಾಲೆಯ ಬಗ್ಗೆ ಯೋಚಿಸುವಾಗ, ತಮ್ಮದೇ ಶಾಲೆಯಾಗಿದ್ದರೂ ಸಹ, ತಮ್ಮ ಮಕ್ಕಳನ್ನು ಇತರ ಶಾಲಾ ಮಕ್ಕಳಿಂದ ಭಿನ್ನವಾಗಿ ನೋಡುವಾಗ ಸಮವಸ್ತ್ರದ ಮೂಲಕವೇ ನೋಡುತ್ತಾರೆ.

ವಿಶೇಷವಾಗಿ ಹಬ್ಬದ ದಿನಗಳಲ್ಲಿ ಉತ್ಸವಗಳು ನಗರದ ಎಲ್ಲ ಶಾಲೆಯ ಮಕ್ಕಳನ್ನೂ ಒಟ್ಟಿಗೆ ಸೇರಿಸುವಾಗ ಪೋಷಕರು ತಮ್ಮ ಮಕ್ಕಳು ವಿಶಿಷ್ಟವಾದ ಸಮವಸ್ತ್ರದ ಪೋಷಾಕಿನಲ್ಲಿ ಮೆರೆಯುವುದನ್ನು ನೋಡಲು ಇಷ್ಟಪಡುತ್ತಾರೆ. ಈ ರೀತಿಯ ಸಾರ್ವಜನಿಕ ಪ್ರದರ್ಶನಗಳ ಬಗ್ಗೆ ಸಾರ್ವಜನಿಕರಲ್ಲಿ ಕಾಣಬಹುದಾದ ಒಂದು ವ್ಯಾಮೋಹ ಮತ್ತು ಶಾಲಾ ಸಮವಸ್ತ್ರದ ಇತಿಹಾಸ ಇವೆರಡೂ ಸಹ ಶಾಲಾ ಸಮವಸ್ತ್ರವು ವಹಿಸುವ ಮುಖ್ಯ ಪಾತ್ರವನ್ನು ಸೂಚಿಸುತ್ತದೆ.

ಇದು ಯುವಪೀಳಿಗೆಯನ್ನು ಶಿಸ್ತಿಗೊಳಪಡಿಸುವ ಒಂದು ವಿಧಾನವಾಗಿ ಕಾಣುತ್ತದೆ. ಒಂದೇ ರೀತಿಯ ವಸ್ತ್ರ ಧರಿಸುವ ಶಾಲಾ ಮಕ್ಕಳು ಶಾಲಾ ಶಿಕ್ಷಣದ ಎರಡು ಆದ್ಯರೂಪದ ರೂಪಕಗಳ ಪ್ರತೀಕವಾಗಿ ಕಾಣುತ್ತಾರೆ. ವಿಭಿನ್ನ ಹೂಗಳನ್ನರಳಿಸುವ ಹೂದೋಟ ಒಂದಾದರೆ ಮತ್ತೊಂದು ಒಟ್ಟಿಗೆ ಚಲಿಸುತ್ತಿರುವ ಸೈನಿಕರ ಪಡೆ.

ಇತಿಹಾಸ ಮತ್ತು ಸಾಮಾಜಿಕ ಪರಿಣಾಮ

ಶಾಲೆಗಳಲ್ಲಿ ಸಮವಸ್ತ್ರ ಧರಿಸುವುದನ್ನು ಕಡ್ಡಾಯ ಮಾಡಲಾಗಿರುವ ದೇಶಗಳು ಮತ್ತು ಕಡ್ಡಾಯ ಇಲ್ಲದ ದೇಶಗಳನ್ನು ಪ್ರತ್ಯೇಕಿಸಿ ನೋಡಿದಾಗ, ಇತಿಹಾಸ ತಂತಾನೇ ತೆರೆದುಕೊಳ್ಳುತ್ತದೆ. ವಿವಿಧ ರೀತಿಯ ವಸಾಹತು ಆಳ್ವಿಕೆಗೊಳಪಟ್ಟ ದೇಶಗಳಲ್ಲಿ ಉಗಮಿಸಿದ ಶಿಕ್ಷಣ ವ್ಯವಸ್ಥೆಯಲ್ಲಿ ಶಾಲಾ ಸಮವಸ್ತ್ರ ಕಡ್ಡಾಯವಾಗಿ ಜಾರಿಗೊಳಿಸಿರುವುದರ ಬಗ್ಗೆ ಒಲವು ತೋರುವುದನ್ನು ಗಮನಿಸಬಹುದು. ಅದರಲ್ಲಿ ಭಾರತವೂ ಒಂದು.

ನಮ್ಮ ಹಳೆಯ ನೆನಪುಗಳನ್ನು ಕೆದಕಿ, ಹಳೆಯ ಕಾಲದ ಫೋಟೋಗಳನ್ನು ಒಮ್ಮೆ ಅವಲೋಕಿಸಿದರೆ, ಶಾಲಾ ಸಮವಸ್ತ್ರದ ಆಲೋಚನೆಯು ನಗರೀಕರಣ, ಶ್ರೀಮಂತಿಕೆ ಮತ್ತು ಖಾಸಗೀಕರಣದ ಒಂದು ಭಾಗವಾಗಿಯೇ ಕಾಣುತ್ತದೆ. ಸ್ವಾತಂತ್ರ್ಯಾನಂತರದ ಭಾರತದಲ್ಲೂ ಸಹ ಗ್ರಾಮೀಣ ಮತ್ತು ಸಣ್ಣ ಪುಟ್ಟ ಊರುಗಳಲ್ಲಿನ ಶಾಲೆಗಳಲ್ಲಿ ಪ್ರತಿನಿತ್ಯ ಸಮವಸ್ತ್ರವನ್ನು ವಿಧಿಸಿರುವುದನ್ನು ಕಾಣಲಾಗುವುದಿಲ್ಲ. ವಾರದ ಕೆಲವು ದಿನಗಳು ಅಥವಾ ವಿಶೇಷ ದಿನಗಳಂದು ಮಾತ್ರವೇ ಸಮವಸ್ತ್ರ ಧರಿಸಲಾಗುತ್ತಿತ್ತು.

ಕ್ರಮೇಣ ವಿವಿಧ ರೀತಿಯ ಖಾಸಗಿ ಶಾಲೆಗಳು ಆರಂಭವಾದಂತೆಲ್ಲಾ ನಿಗದಿತ ಸಮವಸ್ತ್ರ ಧರಿಸುವುದನ್ನು ಕಡ್ಡಾಯಗೊಳಿಸಲಾರಂಭಿಸಿದವು. ವಿವಿಧ ಶಾಲೆಗಳ ಮಕ್ಕಳಿಗೆ ಸಮವಸ್ತ್ರಗಳನ್ನು ಪೂರೈಸುವುದು ಸ್ಥಳೀಯ ಜವಳಿ ವರ್ತಕರಿಗೆ, ದರ್ಜಿಗಳಿಗೆ ಮತ್ತು ಶೂ ಮಾರಾಟ ಮಳಿಗೆಗಳಿಗೆ ಉತ್ತಮ ವ್ಯಾಪಾರದ ಅವಕಾಶಗಳನ್ನೂ ಕಲ್ಪಿಸಿತ್ತು. ಸ್ಪರ್ಧಾತ್ಮಕ ಬೆಲೆಗಳನ್ನು ವಿಧಿಸುವ ಬದಲಾಗಿ ಸಮವಸ್ತ್ರದ ವ್ಯಾಪಾರವು ಸ್ಥಳೀಯ ಏಕಸ್ವಾಮ್ಯಕ್ಕೆ ದಾರಿಮಾಡಿಕೊಟ್ಟಿತ್ತು. ಅನೇಕ ಸಂದರ್ಭಗಳಲ್ಲಿ ಶಾಲೆಗಳೂ ಇದರಲ್ಲಿ ಭಾಗಿಯಾಗಲು ಒಪ್ಪಿ, ನಿರ್ದಿಷ್ಟ ವರ್ತಕರ ಬಳಿಯೇ ವ್ಯವಹರಿಸುವಂತೆ ಪೋಷಕರ ಮೇಲೆ ಒತ್ತಡ ಹೇರತೊಡಗಿದವು.

ಆದೇಶ ಆಧಾರಿತ ವ್ಯವಸ್ಥೆ

ಈ ಸಂಕ್ಷಿಪ್ತವಾದ, ಸಾಮಾನ್ಯೀಕರಿಸಲ್ಪಟ್ಟ ಸಾಮಾಜಿಕ ಚರಿತ್ರೆ ಇಂದು ಕರ್ನಾಟಕದಲ್ಲಿರುವ ಪರಿಸ್ಥಿತಿಗೆ ಅಷ್ಟೇನೂ ಪ್ರಸ್ತುತ ಎನಿಸಲಾರದು. ನಿರ್ದೇಶನಾಲಯದ ಆದೇಶ ಮತ್ತು ನ್ಯಾಯಾಲಯದ ತೀರ್ಪು ಇವೆರಡರ ನಡುವೆ ಸಿಲುಕಿ ಕೆಲವೇ ವಾರಗಳ ಅವಧಿಯಲ್ಲಿ ಸಂಪೂರ್ಣ ಸಮವಸ್ತ್ರ ನೀತಿಯನ್ನೇ ಜಾರಿಗೊಳಿಸಲಾಗಿದೆ.

ಈಗ ಸರ್ಕಾರದ ಈ ನಿಯಮವು ಶಾಲಾ ಕೊಠಡಿಯಷ್ಟೇ ಅಲ್ಲದೆ ಪರೀಕ್ಷಾ ಕೊಠಡಿಯನ್ನೂ ತನ್ನ ವ್ಯಾಪ್ತಿಗೊಳಪಡಿಸಿದೆ. ಕೇಂದ್ರೀಯ ವಿದ್ಯಾಲಯಗಳು ಯಾವುದೇ ರಾಜ್ಯ ಸರ್ಕಾರಗಳ ಆದೇಶಗಳಿಗೆ ಒಳಪಡುವುದಿಲ್ಲವಾದರೂ ಕರ್ನಾಟಕದಲ್ಲಿರುವ ಈ ಶಾಲೆಗಳೂ ಸಹ ಸರ್ಕಾರದ ನಿಯಮವನ್ನು ಪಾಲಿಸಿವೆ. ಪ್ರಸ್ತುತ ಸನ್ನಿವೇಶದಲ್ಲಿ ಈ ಶಾಲೆಗಳ ನಿಲುವನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ.

ಹೀಗೆ, ಭಾರತದ ಅತಿ ಹೆಚ್ಚು ಸಾಕ್ಷರತೆ ಹೊಂದಿದ, ಸಂಪದ್ಭರಿತ ರಾಜ್ಯ, ಜ್ಞಾನ ಆರ್ಥಿಕತೆಯಲ್ಲಿನ ತನ್ನ ಪ್ರಗತಿಗೆ ವಿಶ್ವ ಖ್ಯಾತಿಯನ್ನು ಗಳಿಸಿರುವ ಒಂದು ರಾಜ್ಯ ಇಂದು ಶೈಕ್ಷಣಿಕ ಸಾಂಪ್ರದಾಯಿಕತೆ ಮತ್ತು ನಿಯಂತ್ರಣದ ಅಗ್ನಿಪರೀಕ್ಷೆಗೆ ಒಳಗಾಗಿದೆ. ಶಾಲಾ ಸಮವಸ್ತ್ರ ಒಂದು ಹೊಸ ರಾಜಕೀಯ ಅಸ್ತ್ರವಾಗಿ ರೂಪಾಂತರ ಹೊಂದಿದೆ.

ತನ್ಮೂಲಕ ಪ್ರಾಂಶುಪಾಲರು ಮತ್ತು ಶಿಕ್ಷಕರು ಈಗ ಹೊಂದಿರುವಂತಹ ಸೀಮಿತವಾದ ಸ್ವಾಯತ್ತತೆಯನ್ನು ಮತ್ತಷ್ಟು ಕಡಿತಗೊಳಿಸಿದೆ. ಶಾಲಾ ಸಮವಸ್ತ್ರದ ವಿಚಾರದಲ್ಲಿನ ರಾಜಕಾರಣವು ಎಷ್ಟರ ಮಟ್ಟಿಗೆ ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಸಮಾಜ ವಿಜ್ಞಾನದ ಅಧ್ಯಯನಕ್ಕೆ ಸೂಕ್ತವಾದ ವಿಷಯವಾಗಿದೆ. ಶಾಲಾ ಸಮವಸ್ತ್ರ ಅದರ ಇತಿಹಾಸ ಮತ್ತು ಅದರ ಬಗ್ಗೆ ಇರುವ ವ್ಯಾಮೋಹ ಇವುಗಳ ವ್ಯವಸ್ಥಿತ ಅಧ್ಯಯನ ಅತ್ಯವಶ್ಯವಾಗಿದೆ.

ಆಸಕ್ತಿದಾಯಕ ಸಂಗತಿ ಎಂದರೆ 1960ರ ಪ್ರಮುಖ ಶೈಕ್ಷಣಿಕ ಸುಧಾರಣಾ ಕ್ರಮಗಳನ್ನು ಕಡೆಗಣಿಸಿ ಮುಂದುವರೆದ ಒಂದು ರಾಜ್ಯದಲ್ಲಿ ಮಾಧ್ಯಮಿಕ ಶಿಕ್ಷಣ ವಲಯದಲ್ಲಿ ಸಮವಸ್ತ್ರ ವಿವಾದದ ವಿಚಾರವಾಗಿದೆ. ಇಂದು ಪಿಯುಸಿ ಅಥವಾ ಜೂನಿಯರ್‌ ಕಾಲೇಜುಗಳು ಕೆಲವೇ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿವೆ. ದೇಶದ ಇತರ ರಾಜ್ಯಗಳಲ್ಲಿ ಕೊಥಾರಿ ಆಯೋಗದ ಶಿಫಾರಸಿನ ಅನುಸಾರ 10+2 ಶಿಕ್ಷಣ ವ್ಯವಸ್ಥೆಯೇ ಜಾರಿಯಲ್ಲಿದೆ. ಇದರಿಂದ ಶೈಕ್ಷಣಿಕ ವಲಯದ ಆಡಳಿತ ನಿರ್ವಹಣೆಯ ಪುನರ್‌ ಸಂಘಟನೆಯೂ ಸಾಧ್ಯವಾಗಿದೆ. ಈ ಶಾಲಾ ಕಾಲೇಜುಗಳ ಪ್ರಾಂಶುಪಾಲರಿಗೆ ಮತ್ತು ಶಿಕ್ಷಕರಿಗೆ ಹೆಚ್ಚಿನ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯ ನೀಡಿ ಸಂಸ್ಥೆಗಳ ನಿರ್ವಹಣಾ ನಿಯಮಗಳನ್ನು ರೂಪಿಸಲು ಅವಕಾಶ ನೀಡಿದ್ದಲ್ಲಿ ಈ ಪದ್ಧತಿಯ ಸಂಪೂರ್ಣ ಉಪಯುಕ್ತತತೆಯನ್ನು ಸಾಕಾರಗೊಳಿಸಬಹುದಿತ್ತು.

ಮತ್ತೊಂದೆಡೆ ಶಾಲೆಗಳ ದೈನಂದಿನ ಚಟುವಟಿಕೆಗಳಲ್ಲಿ ಸಮುದಾಯಕ್ಕೆ ಭಾಗವಹಿಸುವ ಅವಕಾಶವನ್ನು ನೀಡಲೂ ಸಾಧ್ಯವಾಗುತ್ತಿತ್ತು. ಕೊಥಾರಿ ಆಯೋಗದ ಸದಸ್ಯ ಕಾರ್ಯದರ್ಶಿ ಜೆ ಪಿ ನಾಯಕ್ ಅವರ ಸಲಹೆಯ ಮೇರೆಗೆ ರೂಪಿಸಲಾಗಿದ್ದ ಆಯೋಗದ ಮುನ್ನೋಟವನ್ನು ಪರಿಪೂರ್ಣವಾಗಿ ಸಾಕಾರಗೊಳಿಸಿದ್ದಲ್ಲಿ ಅಧಿಕಾರಶಾಹಿಯ ನಿಯಂತ್ರಣ ಕಡಿಮೆಯಾಗುತ್ತಿತ್ತು ಹಾಗೂ ಇದರಿಂದ ಶಾಲೆಗಳ ಸ್ವಾಯತ್ತತೆಯೂ ಹೆಚ್ಚಾಗುತ್ತಿತ್ತು.

ಇದರಿಂದ ಶಾಲೆಗಳೇ ಬೌದ್ಧಿಕ ಸಂಪನ್ಮೂಲವಾಗುವಂತಹ ಒಂದು ಭಿನ್ನ ರೀತಿಯ ರಾಜಕಾರಣ ಸೃಷ್ಟಿಯಾಗುವ ಸಾಧ್ಯತೆಗಳಿದ್ದವು. ಇಂತಹ ಒಂದು ಪರ್ಯಾಯ ಪ್ರಜಾಸತ್ತಾತ್ಮಕ ರಾಜಕಾರಣಕ್ಕೆ ಕರ್ನಾಟಕ ಸಾಮಾಜಿಕ ನೆಲೆಯಲ್ಲಿ ಒಂದು ಪ್ರಶಸ್ತ ಭೂಮಿಕೆಯಾಗಬಹುದಿತ್ತು. ಏಕೆಂದರೆ ವಿಕೇಂದ್ರೀಕರಣನ ಆಡಳಿತ ವ್ಯವಸ್ಥೆಯಲ್ಲಿ ಕರ್ನಾಟಕ ತನ್ನದೇ ಆದ ಪರಂಪರೆಯನ್ನೂ ಹೊಂದಿದೆ.

ಆದರೆ ಇತಿಹಾಸ ಬೇರೆ ರೀತಿಯ ತಿರುವು ಪಡೆದುಕೊಂಡಿತು. ಕರ್ನಾಟಕದಲ್ಲಿ ಒಬ್ಬ ಶಿಕ್ಷಕ ಅಥವಾ ಜೂನಿಯರ್‌ ಕಾಲೇಜಿನ ಪ್ರಾಂಶುಪಾಲರು ಒಂದು ಸಮವಸ್ತ್ರದ ಕಾರಣಕ್ಕಾಗಿ ವಿದ್ಯಾರ್ಥಿಯನ್ನು ಪರೀಕ್ಷಾ ಕೊಠಡಿಗೆ ಪ್ರವೇಶಿಸದಂತೆ ತಡೆಹಿಡಿಯುವ ದೃಶ್ಯ ಒಂದು ನಿರ್ದಯಿ ಕ್ರಿಯೆಯ ಸಂಕೇತವಾಗಿ ಬಹಳ ವರ್ಷಗಳ ಕಾಲ ಕಾಡಲಿದೆ. ಬಹುಶಃ ವಿದ್ಯಾರ್ಥಿಯ ಅವಸ್ಥೆ ಬೋಧಕರ ಶಿಕ್ಷಣ ಕಾಲೇಜುಗಳಲ್ಲಿ ಚರ್ಚೆಗೊಳಪಡಬೇಕಾದ ವಿಚಾರವೂ ಆಗಬೇಕಿದೆ.

ಇಲ್ಲಿ ಉದ್ಭವಿಸಬಹುದಾದ ಪ್ರಶ್ನೆ ಎಂದರೆ : “ ಆ ಶಿಕ್ಷಕಿ ಅಥವಾ ಪ್ರಾಂಶುಪಾಲೆ ಆದೇಶವನ್ನು ಪಾಲಿಸುವ ದೃಷ್ಟಿಯಿಂದ ಸ್ವ ಪ್ರೇರಣೆಯಿಂದ ಆ ವಿದ್ಯಾರ್ಥಿಯ ಬಗ್ಗೆ ಅಷ್ಟು ನಿಷ್ಕಾರುಣ್ಯವಾಗಿ ವರ್ತಿಸಿದರೇ ?” ಈ ನಿಟ್ಟಿನಲ್ಲಿ ಒಂದು ಆಡಳಿತಾತ್ಮಕ ಪ್ರಶ್ನೆಯೂ ಉದ್ಭವಿಸುತ್ತದೆ. ʼ ನಿಗದಿತ ಸಮವಸ್ತ್ರ ಧಾರಣೆಯ ಬಗ್ಗೆ ಶಿಕ್ಷಣ ನಿರ್ದೇಶನಾಲಯದ ಆದೇಶವು ಪರೀಕ್ಷಾ ಕೊಠಡಿಗೆ ಅನ್ವಯಿಸುವುದೇ ? ʼ. ತಾತ್ವಿಕವಾಗಿ ಅನ್ವಯಿಸುತ್ತದೆ.

ಅದರೆ ಇದು ಶಾಲಾ ಸಮವಸ್ತ್ರದ ಪಾತ್ರವನ್ನು ಮತ್ತಷ್ಟು ವಿಸ್ತರಿಸಿ ಸಾಮೂಹಿಕ ಸಾಂಸ್ಥಿಕ ಅಸ್ಮಿತೆಯನ್ನು ಕಲ್ಪಿಸುವತ್ತ ಸಾಗುತ್ತದೆ. ಈ ಅಸ್ಮಿತೆಯ ವ್ಯಾಪ್ತಿಯಲ್ಲಿ ಪರೀಕ್ಷಾ ಕೊಠಡಿಯನ್ನೂ ಒಳಗೊಳ್ಳುವುದೇ ಆದರೆ ವಿದ್ಯಾರ್ಥಿಗಳಿಗೆ ಹಾಲ್‌ ಟಿಕೆಟ್‌ ಅಥವಾ ಪ್ರವೇಶಾನುಮತಿ ಪತ್ರ ಏಕೆ ಬೇಕು ? ಅವರ ವೈಯಕ್ತಿಕ ಅಸ್ಮಿತೆಯನ್ನು ಗುರುತಿಸಲೆಂದೇ ? ಈ ವಿಚಾರದಲ್ಲಿ ಕಾನೂನು ವಲಯದಲ್ಲಿ ನಡೆಯುವ ವಾದಗಳು ಕಲಿಕಾರ್ಥಿಗಳ ಮತ್ತು ಪರೀಕ್ಷಾರ್ಥಿಗಳ ಬದುಕಿನ ಈ ಅಂಶದ ಬಗ್ಗೆಯೂ ಇರುತ್ತದೆ ಎಂದು ಅಪೇಕ್ಷಿಸೋಣ.

ಪ್ರಮುಖ ವ್ಯತ್ಯಾಸ

ಈ ಸಂದರ್ಭದಲ್ಲೂ ಸಹ ಒಂದು ಪ್ರಮುಖವಾದ ವ್ಯತ್ಯಾಸವನ್ನು ಗುರುತಿಸುವುದು ಉಚಿತ. ಸಮವಸ್ತ್ರಕ್ಕೂ ವಸ್ತ್ರ ಸಂಹಿತೆಗೂ ವ್ಯತ್ಯಾಸವಿದೆ. ವಸ್ತ್ರ ಸಂಹಿತೆಗಿಂತಲೂ ಸಮವಸ್ತ್ರಧಾರಣೆ ಹೆಚ್ಚು ಆದೇಶಾತ್ಮಕವಾಗಿರುತ್ತದೆ. ವಸ್ತ್ರ ಸಂಹಿತೆಯನ್ನು ವಿಧಿಸುವಾಗ ಮಕ್ಕಳು ಮತ್ತು ಪೋಷಕರು ಅವರ ಅಂತಸ್ತು ಮತ್ತು ಶ್ರೀಮಂತಿಕೆಗೆ ಅನುಗುಣವಾಗಿ ಉಡುಪು ಧರಿಸಲು ಸಾಧ್ಯವಾಗದಿರಬಹುದು. ಆದರೆ ಸಮವಸ್ತ್ರ ವಿಧಿಸಿದಾಗ, ಕೇವಲ ಉಡುಪಿನ ಬಣ್ಣ ಮಾತ್ರವೇ ಅಲ್ಲದೆ ಅದರ ವಿನ್ಯಾಸ ಮತ್ತು ಮಾದರಿಯೂ ಸಹ ನಿರ್ದಿಷ್ಟ ಶೈಲಿಯಲ್ಲೇ ಇರಬೇಕಾಗುತ್ತದೆ.

ಹಿಂದಿನ ಕಾಲದಲ್ಲಿ ಕೇವಲ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿವುದು ಸಾಕೆನಿಸುತ್ತಿತ್ತು ಆದರೆ ಇಂದು ಸಮವಸ್ತ್ರ ಹೀಗೇ ಇರಬೇಕೆಂಬ ಷರತ್ತು ವಿಧಿಸುವ ಸನ್ನಿವೇಶವನ್ನು ಕಾಣುತ್ತಿದ್ದೇವೆ. ವಿಶಿಷ್ಟ ಸಾಮಾಜಿಕ ಲಕ್ಷಣಗಳು ಕಣ್ಣಿಗೆ ಕಾಣುವಂತಹ ಬಳಕೆಯ ಹವ್ಯಾಸವನ್ನು ಪ್ರಚೋದಿಸುತ್ತದೆ. ಭೋಜನ ಕೂಟಗಳು ಶಾಲೆಗಳಷ್ಟೇ ಪರಿಣಾಮಕಾರಿಯಾಗಿ ಈ ಉದ್ದೇಶವನ್ನು ಈಡೇರಿಸುತ್ತವೆ. ಅಸಮಾನತೆಯು ಸರ್ವವ್ಯಾಪಿಯಾಗಿರುವ ಒಂದು ಸಮಾಜದಲ್ಲಿ ಸಮಾನತೆಯನ್ನು ಬಿಂಬಿಸುವ ಒಂದು ಸೂಚನೆಯಾಗಿ ಸಮವಸ್ತ್ರ ಕಾಣುತ್ತದೆ.

ಆದರೆ ಶಿಕ್ಷಣ ಎನ್ನುವುದು ಸಮಾಜದ ಎಲ್ಲ ವರ್ಗಗಳ ಮತ್ತು ಎಲ್ಲ ಸ್ತರಗಳ ಜನರಿಗೆ ಸಮಾನ ಅವಕಾಶಗಳನ್ನು ಪ್ರೋತ್ಸಾಹಿಸುವ ಒಂದು ಕ್ಷೇತ್ರವಾಗಿರಬೇಕೆಂದು ಅಪೇಕ್ಷಿಸಲಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಣವು ನೀಡಬಹುದಾದ ಬಹುಮುಖ್ಯವಾದ ಕೊಡುಗೆ ಎಂದರೆ ಸಾರ್ವಜನಿಕ ಚರ್ಚೆಯ ವ್ಯಾಪ್ತಿಯನ್ನು ಹೆಚ್ಚಿಸುವುದು , ತನ್ಮೂಲಕ ವಿಶೇಷವಾಗಿ ಶಿಕ್ಷಕರನ್ನು ಒಳಗೊಂಡಂತೆ ಎಲ್ಲ ಭಾಗಿದಾರರಿಗೂ ಭಾಗವಹಿಸಲು ಅವಕಾಶ ಮಾಡಿಕೊಡುವುದು. ವಿಭಿನ್ನ ಹಿನ್ನೆಲೆಯನ್ನು ಹೊಂದಿರುವ ವಿದ್ಯಾರ್ಥಿಗಳೊಡನೆ ಶಿಕ್ಷಕರು ನಿಕಟ ಸಂಪರ್ಕ ಹೊಂದಿರುತ್ತಾರೆ. ಆದುದರಿಂದ ಎಲ್ಲ ಮಕ್ಕಳಿಗೂ ಶಾಲಾ ಕೊಠಡಿಯು ಹೆಚ್ಚು ಹಿತಕರವಾಗಿರುವಂತೆ ಮಾಡುವುದರ ಬಗ್ಗೆ ಸೂಕ್ಷ್ಮ ಗ್ರಹಿಕೆ ಹೊಂದಿರುತ್ತಾರೆ.

ಈ ಸಾಮೂಹಿಕ ಇರುವಿಕೆಯ ಸ್ಥಿತಿಯ ಹಿಂದಿರುವ ಸಮಸ್ಯೆಗಳನ್ನು ಶ್ರೀ ಅರಬಿಂದೋ ವಿಶ್ಲೇಷಿಸಿರುವಂತೆ ಬಹುಶಃ ಯಾವುದೇ ಆಧುನಿಕ ತತ್ವಶಾಸ್ತ್ರಜ್ಞರು ವಿಶ್ಲೇಷಿಸಿಲ್ಲ. ತಮ್ಮ” ದ ಐಡಿಯಲ್‌ ಆಫ್‌ ಹ್ಯೂಮನ್‌ ಯೂನಿಟಿ ” ಪ್ರಬಂಧದಲ್ಲಿ ಅವರು ಪ್ರಕೃತಿಯ ವೈವಿಧ್ಯತೆಯ ನೆಲೆಯಲ್ಲೇ ಹೇಗೆ ಏಕರೂಪತೆ ಎನ್ನುವುದು ನಮ್ಮನ್ನು ಉತ್ತೇಜಿಸಿದರೂ, ಪರಸ್ಪರ ಸಂಬಂಧಗಳ ಅಥವಾ ಏಕತೆಯ ಪ್ರಜ್ಞೆಯನ್ನು ಮೂಡಿಸುವುದಿಲ್ಲ ಎನ್ನುವುದನ್ನು ವಿವರಿಸುತ್ತಾರೆ.

ಅವರು ತಮ್ಮ ವಿಶ್ಲೇಷಣೆಯನ್ನು ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ವಿಚಾರಗಳಿಗೂ ವಿಶ್ಲೇಷಿಸುತ್ತಾ ಅಂತರರಾಷ್ಟ್ರೀಯ ಸಂಬಂಧಗಳಿಗೂ ಅನ್ವಯಿಸುತ್ತಾರೆ. ನಮ್ಮ ವರ್ತಮಾನದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಉಂಟಾಗಿರುವ ಕ್ಷೋಭೆಯನ್ನು ಶಿಕ್ಷಣದ ಪಾತ್ರ ಮತ್ತು ಶಿಕ್ಷಣವು ಒಂದು ವ್ಯವಸ್ಥೆಯಾಗಿ ನಿರ್ವಹಿಸಬಹುದಾದ ಪಾತ್ರದ ಹಿನ್ನೆಲೆಯಲ್ಲಿ ವಿಶ್ಲೇಷಿಸಬೇಕಿದೆ. ಸಮವಸ್ತ್ರ ಎಂಬ ಪದವೇ ಸೂಚಿಸುವಂತೆ, ಸಮಾನ ಉಡುಪು ಎಲ್ಲ ತಾರತಮ್ಯ, ವ್ಯತ್ಯಯಗಳನ್ನೂ ದಾಟಲಾಗಿದೆ ಎಂಬ ಸಂದೇಶವನ್ನು ರವಾನಿಸುತ್ತದೆ.

ಕರ್ನಾಟಕದಲ್ಲಿ ಇದು ಸಾಧ್ಯವಾಗಿದ್ದ ಪಕ್ಷದಲ್ಲಿ, ಇದನ್ನು ಪರಿಪಾಲಿಸಲು ನಿರ್ದೇಶನಾಲಯವು ಆದೇಶ ಹೊರಡಿಸುವ ಅವಶ್ಯಕತೆ ಇರಲಿಲ್ಲ. ವಸಾಹತು ಅವಧಿಯಲ್ಲಿ ರಚಿಸಲ್ಪಟ್ಟ ಈ ಸಂಸ್ಥೆಯು ತನ್ನ ಅಧಿಕಾರಶಾಹಿ ಧೋರಣೆಯನ್ನು ಅರ್ಥಮಾಡಿಕೊಳ್ಳಲು, ಜೆ ಪಿ ನಾಯಕ್‌ ಅವರು ನನಗೆ ಹೇಳಿದ ಒಂದು ಪ್ರಸಂಗ ನೆರವಾಗಬಹುದು.

ಶಾಲಾ ಕೊಠಡಿಯ ಬೋಧನೆಯನ್ನು ರೂಢಮಾದರಿಯನ್ನಾಗಿ ಮಾಡದಿರುವಂತೆ ಮತ್ತು ಹೆಚ್ಚು ಜೀವಂತಿಕೆಯಿಂದ ಕೂಡಿದ ಮಕ್ಕಳ ಕೇಂದ್ರಿತವಾಗಿ ಮಾಡುವಂತೆ, ಕೊಥಾರಿ ಆಯೋಗವು ಹಲವು ಸಲಹೆಗಳನ್ನು ನೀಡಿತ್ತು. ಕೊಥಾರಿ ಆಯೋಗದ ವರದಿಯು ಅಧಿಕೃತವಾಗಿ ಅನುಮೋದನೆ ಪಡೆದ ಕೂಡಲೇ ಮಹಾರಾಷ್ಟ್ರದ ಶಿಕ್ಷಣ ನಿರ್ದೇಶನಾಲಯವು ಒಂದು ಅರೆ ಸರ್ಕಾರಿ ಆದೇಶ ಹೊರಡಿಸಿ , ಮೇಲಧಿಕಾರಿಗಳ ಆದೇಶದ ಮೇರೆಗೆ ಎಲ್ಲ ಶಾಲೆಗಳಲ್ಲೂ ಬೋಧನೆಯು ಮಕ್ಕಳ ಕೇಂದ್ರಿತವಾಗಿರತಕ್ಕದ್ದು ಎಂದು ಆಜ್ಞೆ ಹೊರಡಿಸಿತ್ತು !

(The School dress in cross hairs : ದ ಹಿಂದೂ 6-ಮೇ-2022) ( ಪ್ರೊ ಕೃಷ್ಣಕುಮಾರ್‌, ಎನ್‌ಸಿಇಆರ್‌ಟಿ ಮಾಜಿ ನಿರ್ದೇಶಕರು ಮತ್ತು ಸ್ಮಾಲರ್‌ ಸಿಟಿಜನ್ಸ್‌ ಕೃತಿಯ ಲೇಖಕರು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ದಾವಣಗೆರೆ | ಪ್ರೊ. ಎಸ್.ಬಿ. ರಂಗನಾಥ್ ಅವರಿಗೆ ಕೇಂದ್ರ ಕ ಸಾ ಪ ದತ್ತಿ ಪ್ರಶಸ್ತಿ ಪ್ರದಾನ

Published

on

ಸುದ್ದಿದಿನ,ದಾವಣಗೆರೆ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಕ ಸಾ ಪ ಮಾಜಿ ಅಧ್ಯಕ್ಷ ಪ್ರೊ . ಎಸ್ ಬಿ ರಂಗನಾಥ್ ಅವರಿಗೆ ಕೇಂದ್ರ ಕ ಸಾ ಪ ದತ್ತಿನಿಧಿ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ತರಳಬಾಳು ಬಡಾವಣೆಯ ಅವರ ನಿವಾಸದಲ್ಲಿ ಜಿಲ್ಲಾ ಕ ಸಾ ಪ ಅಧ್ಯಕ್ಷ ಬಿ ವಾಮದೇವಪ್ಪ ಮತ್ತು ಪದಾಧಿಕಾರಿಗಳು ಇಂದು ಪ್ರದಾನ ಮಾಡಿ ಗೌರವಿಸಿದರು.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು  ಅನುವಾದ ಸಾಹಿತ್ಯಕ್ಕಾಗಿ ನೀಡುವ 2023ರ ‘ಶ್ರೀಮತಿ ಭಾರತಿ ಮೋಹನ ಕೋಟಿ ದತ್ತಿ ಪಶಸ್ತಿ’ ಗೆ  ಪ್ರೊ. ಎಸ್.ಬಿ.ರಂಗನಾಥ್  ಅನುವಾದಿಸಿದ ಖ್ಯಾತ ಲೇಖಕ ಶಶಿ ತರೂರು ಅವರ ‘ಕಗ್ಗತ್ತಲ ಕಾಲ’ ಕೃತಿಯು ಆಯ್ಕೆಯಾಗಿತ್ತು. ಶಶಿ ತರೂರ್ ಅವರ ಇಂಗ್ಲಿಷ್ An Era of Darkness ಎಂಬ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ಇದನ್ನು ಪ್ರೊ. ರಂಗನಾಥ್ ಅವರು ಕೊರೊನಾ ಕಾಲದ ಲಾಕ್ ಡೌನ್‌ ಸಂದರ್ಭದಲ್ಲಿ ಕನ್ನಡಕ್ಕೆ ಅನುವಾದಿಸಿದ್ದರು. 2022ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಈ ಕೃತಿಯನ್ನು ಪ್ರಕಟಿಸಿತ್ತು.

ಪ್ರೊ. ರಂಗನಾಥ್ ಇದುವರೆಗೂ ‘ಪ್ರಜಾವಾಣಿ ‘ ಯ ಅಂಕಣ ಬರಹಗಳ ಸಂಗ್ರಹ ‘ಎಲೆಲೆ ಮಧುಬಾಲೆ’, ‘ಕಚಗುಳಿ(ಗೆ) ಕಾಲ’ ಸೇರಿದಂತೆ ಹತ್ತು ಕೃತಿಗಳ ಲೇಖಕರು. ಬಂಗಾಳಿಯ ಪ್ರಸಿದ್ಧ ಕಾದಂಬರಿಗಳಾದ ‘ಭುವನ್ ಸೋಮ್’ , ‘ಪ್ರತಿದ್ವಂದಿ’ ಮುಂತಾದ ಏಳು ಕೃತಿಗಳನ್ನು ಅನುವಾದಿಸಿದ್ದಾರೆ.  ಇವರ ‘ ಟಿಪ್ಪು ಸುಲ್ತಾನನ ಖಡ್ಗ’ ಕೃತಿಯು ಮೂರು ಮುದ್ರಣಗಳನ್ನು ಕಂಡಿದೆ. ಇತ್ತೀಚೆಗೆ ಅನುವಾದಿಸಿದ ನಿವೃತ್ತ ಐ ಎ ಎಸ್ ಅಧಿಕಾರಿ ಎಂ ಮದನಗೋಪಾಲ್ ಅವರ ‘ಕಾಮನ ಬಿಲ್ಲನು ಬಂಬತ್ತಿ’ ಕೃತಿಯು ರಾಯಚೂರಿನಲ್ಲಿ ಲೋಕಾರ್ಪಣೆಗೊಂಡಿತ್ತು.

ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಪ್ರೊ.ಎಸ್.ಬಿ.ರಂಗನಾಥ್ ಅವರು ತಮ್ಮ ತೀವ್ರ ಅನಾರೋಗ್ಯದ ಕಾರಣದಿಂದ ಹಾಜರಿರಲು ಸಾಧ್ಯವಾಗಿರಲಿಲ್ಲ. ಈಗ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿಯವರ ನಿರ್ದೇಶನದ ಮೇರೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಎಸ್.ಬಿ.ರಂಗನಾಥ್ ಅವರ ನಿವಾಸಕ್ಕೆ ತೆರಳಿ ಅವರಿಗೆ ಪ್ರಶಸ್ತಿ ಫಲಕ ಮತ್ತು ಹತ್ತು ಸಾವಿರ ನಗದನ್ನು  ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪರಿಷತ್ತಿನ ಪದಾಧಿಕಾರಿಗಳಾದ ರಾಘವೇಂದ್ರ ನಾಯರ್, ಎಸ್ ಎಂ ಮಲ್ಲಮ್ಮ, ರುದ್ರಾಕ್ಷಿ ಬಾಯಿ ಪುಟ್ಟನಾಯಕ್, ತಾಲ್ಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ಕಾರ್ಯದರ್ಶಿಗಳಾದ ನಾಗರಾಜ ಸಿರಿಗೆರೆ, ದಾಗಿನಕಟ್ಟೆ ಪರಮೇಶ್ವರಪ್ಪ, ನಿರ್ದೇಶಕರಾದ ಷಡಾಕ್ಷರಪ್ಪ ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ನಾಳೆ ಡಾ.ಅಂಬೇಡ್ಕರ್ ಬರಹಗಳು ಮತ್ತು ಅವರ ಪ್ರಭಾವಿತ ಸಾಧಕರ ಸಂದರ್ಶನ ಸರಣಿ ಕಾರ್ಯಕ್ರಮ

Published

on

ಸುದ್ದಿದಿನ,ಭದ್ರಾವತಿ: ಆಕಾಶವಾಣಿ ಭದ್ರಾವತಿ ಕೇಂದ್ರದ 60ನೇ ವರ್ಷದ ವಜ್ರಮಹೋತ್ಸವದ ಅಂಗವಾಗಿ ಶಿವಮೊಗ್ಗದ ಕುವೆಂಪು ವಿ.ವಿ.ಯ ಡಾ. ಅಂಬೇಡ್ಕರ್ ಅಧ್ಯಯನ ಕೇಂದ್ರ ಸಹಯೋಗದಲ್ಲಿ ವಿಶ್ವ ಮಾನವ ಡಾ. ಅಂಬೇಡ್ಕರ್ ಅವರ ಬರಹಗಳು ಮತ್ತು ಅವರ ಪ್ರಭಾವಿತ ಸಾಧಕರ ಸಂದರ್ಶನ ಸರಣಿಯನ್ನು ಪ್ರಸಾರ ಮಾಡಲಿದ್ದು, ಜೂನ್ 11 ರಂದು ಬೆಳಗ್ಗೆ 7.15 ಕ್ಕೆ ಕುವೆಂಪು ವಿವಿಯ ಕುಲಪತಿ ಡಾ. ಶರತ್ ಅನಂತಮೂರ್ತಿ ಅವರ ಮುನ್ನುಡಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.

ಈ ಸರಣಿಯಲ್ಲಿ ಒಟ್ಟು 52 ಕಾರ್ಯಕ್ರಮಗಳಿದ್ದು, ಪ್ರತೀ ಮಂಗಳವಾರ ಬೆಳಗ್ಗೆ 7.15 ಕ್ಕೆ ಪ್ರಸಾರ ಮಾಡಲಿದೆ. ಪ್ರಭಾವಿತ ಮಹನೀಯರ ಅನಿಸಿಕೆಯನ್ನು ಹಂಚಿಕೊಳ್ಳುವುದರೊಟ್ಟಿಗೆ ದೇಶವಿದೇಶದ ಕೇಳುಗರು ತಮ್ಮ ಮೇಲೆ ಅಂಬೇಡ್ಕರ್ ಅವರ ಪ್ರಭಾವನ್ನೂ ಆಕಾಶವಾಣಿಯಲ್ಲಿ ಹಂಚಿಕೊಳ್ಳಲು ವಾಟ್ಸ್ ಆಪ್ ಮೂಲಕ ಅವಕಾಶ ಕಲ್ಪಿಸಿದೆ.

ಕಾರ್ಯಕ್ರಮವು FM 103.05 ಹಾಗೂ MW 675 khz ನಲ್ಲಿ ಕೇಳುವುದರೊಟ್ಟಿಗೆ ಜಗತ್ತಿನಾದ್ಯಂತ Akashavani Bhadravathi live streaming ಮತ್ತು prasarbharati news on air app ನಲ್ಲಿ ಪ್ರಸಾರ ಸಮಯದಲ್ಲಿ ಹಾಗೂ Akashavani Bhadravati YouTube ನಲ್ಲಿ ಪ್ರಸಾರದ ನಂತವೂ ಕೇಳಬಹುದು ಎಂದು ಕಾರ್ಯಕ್ರಮದ ಮುಖ್ಯಸ್ಥ ಎಸ್.ಆರ್. ಭಟ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಆತ್ಮಕತೆ | ಮಹಾರಾಜಾ ಕಾಲೇಜಿನಲ್ಲಿ ಉಪನ್ಯಾಸಕನಾಗಿ : 1974-1976

Published

on

  • ರುದ್ರಪ್ಪ ಹನಗವಾಡಿ

1967ರಲ್ಲಿ ಎಸ್.ಎಸ್.ಎಲ್.ಸಿ. ಪಾಸು ಮಾಡಿದ ದಿನಗಳಿಂದಲೂ ಮುಂದಿನ ಕಲಿಕೆಗಾಗಿ ಮೈಸೂರಿಗೇ ಹೋಗಬೇಕೆಂದು ಕನಸು ಕಾಣುತ್ತಿದ್ದ ನನಗೆ ಅಲ್ಲಿಯೇ ಓದಿ ನಂತರ ಅಧ್ಯಾಪಕ ವೃತ್ತಿ ದೊರೆತದ್ದು ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಪ್ರಿನ್ಸಿಪಾಲರಾದ ಎನ್. ಶಂಕರಲಿಂಗಯ್ಯನವರು, ರಾಜ್ಯಶಾಸ್ತ್ರದ ಪಾಠ ಮಾಡುತ್ತಿದ್ದರು. ಮತ್ತು ಆಡಳಿತಾಧಿಕಾರಿಯಾಗಿದ್ದ, ಜೆ. ಬಿಲ್ಲಯ್ಯನವರು ನಮ್ಮದೇ ಅರ್ಥಶಾಸ್ತ್ರ ವಿಷಯದಲ್ಲಿ ಅಧ್ಯಾಪಕರಾಗಿದ್ದವರು. ನಮ್ಮ ಅರ್ಥಶಾಸ್ತç ವಿಭಾಗದಲ್ಲಿ ಇಲಾಖಾ ಮುಖ್ಯಸ್ಥರಾಗಿದ್ದ ಪ್ರೊ. ಸಿದ್ದೇಗೌಡರು, ಮತ್ತು ಹರಿಚರಣ್ ನನಗೆ ಎರಡು ವರ್ಷಗಳ ಹಿಂದೆ ಗುರುಗಳಾಗಿದ್ದವರು, ಉಳಿದಂತೆ ಇನ್ನಿಬ್ಬರು ಮಹಿಳಾ ಅಧ್ಯಾಪಕರುಗಳು ಮತ್ತು ಎಂ.ಎ.ನಲ್ಲಿ ನನಗಿಂತ ಹಿರಿಯರಾಗಿದ್ದ ಕೆ.ಸಿ. ಬಸವರಾಜ್ ಕೂಡ ಅಧ್ಯಾಪಕರಾಗಿದ್ದರು.

ಬಿ.ಎ. ಮತ್ತು ಎಂ.ಎ. ತರಗತಿಗಳಲ್ಲಿ ಓದುವಾಗ ಪಠ್ಯಗಳಿಗಿಂತಲೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ನನಗೆ ಈಗ ಪಠ್ಯಕ್ರಮಕ್ಕನುಗುಣವಾಗಿ ಒಂದು ಗಂಟೆಗೆ ಬೇಕಾದ ತಯಾರಿಯೊಡನೆ ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಮಾಡುವುದು ಸವಾಲಿನ ಪ್ರಶ್ನೆಯಾಗಿತ್ತು. ಪ್ರತಿ ತರಗತಿಗಳಲ್ಲಿ 50-60 ವಿದ್ಯಾರ್ಥಿಗಳಿದ್ದು ಕೆಲವರು ನನಗಿಂತ ಹೆಚ್ಚಿನ ವಯಸ್ಸು ಮತ್ತು ದೈಹಿಕವಾಗಿ ಬಲವಾಗಿದ್ದವರು ಕೂಡ ಇದ್ದರು. ವಾರಕ್ಕೆ 16 ಗಂಟೆಗಳ ಪಾಠ ಮಾಡುವುದು ಎಲ್ಲ ಅಧ್ಯಾಪಕರಿಗೆ ನಿಗದಿಯಾಗಿತ್ತು. ಹೊಸ ಅಧ್ಯಾಪಕರುಗಳಿಗೆ ವಿಶೇಷವಾಗಿ ದ್ವಿತೀಯ ಮತ್ತು ಅಂತಿಮ ಬಿ.ಎ. ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ ಅಧ್ಯಾಪಕರಿಗೆ ತಬ್ಬಿಬ್ಬು ಮಾಡುವುದು ನನಗೆ ಕೂಡ ಗೊತ್ತಿದ್ದ ವಿಷಯವಾಗಿತ್ತು. ಆ ಕಾರಣದಿಂದಲೇ ಸರಿರಾತ್ರಿಯರೆಗೆ ಓದಿಕೊಂಡು ಸಜ್ಜಾಗಿಯೇ ತರಗತಿಗಳಿಗೆ ಹೋಗುತ್ತಿದ್ದೆ. ನಿಜವಾದ ಅರ್ಥಶಾಸ್ತçದ ವಿದ್ಯಾರ್ಥಿಯಾಗಿದ್ದುದು, ನಾನು ಅಧ್ಯಾಪಕನಾಗಿ ಸೇರಿದ ಮೇಲೆಯೆ ಎಂದು ನನಗನ್ನಿಸತೊಡಗಿತು. ಪಾಠಗಳನ್ನು ಶಿಸ್ತಿನಿಂದ ಮಾಡಿಕೊಂಡು ಬರುತ್ತಿದ್ದ ಕಾಲದಲ್ಲಿ ಅಂತಿಮ ಬಿ.ಎ. ವಿದ್ಯಾರ್ಥಿಗಳ ತರಗತಿಗಳು ಜೂನಿಯರ್ ಮತ್ತು ಸೀನಿಯರ್ ಹಾಲ್‌ಗಳಲ್ಲಿ ನಡೆಯುತ್ತಿದ್ದವು. ಆಗ ಪ್ರತಿ ಪಿರಿಯಡ್‌ಗೆ ಹಾಜರಾತಿ ತೆಗೆದುಕೊಳ್ಳುವ ಪರಿಪಾಠವಿತ್ತು. ನಾನು ಹಾಜರಾತಿ ತೆಗೆದುಕೊಂಡು ಪಾಠ ಮಾಡಲು ಪ್ರಾರಂಭಿಸಿದಾಗ ಕೆಲವು ವಿದ್ಯಾರ್ಥಿಗಳು ನಾವು ತರಗತಿಯಿಂದ ಹೊರ ಹೋಗಲು ಅನುಮತಿ ನೀಡಬೇಕೆಂದು ಕೋರಿದರು. ಅದರ ಉದ್ದೇಶ ನಿಮ್ಮ ಪಾಠದ ಅಗತ್ಯವಿಲ್ಲ ಎನ್ನೋ ಧೋರಣೆಯಿಂದ ಕೇಳಿದ ಅವರಿಗೆ ನಾನು, ನೀವು ಹೊರಗೆ ಹೋದರೆ ನಿಮ್ಮ ಹಾಜರಾತಿ ದಾಖಲೆ ಪುಸ್ತಕದಲ್ಲಿ ಗೈರು ಹಾಜರಿ ಎಂದು ನಮೂದಿಸುವುದಾಗಿ ಹೇಳಿದೆ.

ಅದಕ್ಕೇನು ಉತ್ತರಿಸದೆ ಹಾಗೆ ಹೊರಗೆ ಹೋದ ಹುಡುಗರು, ಮಾರನೆಯ ದಿನ ಪ್ರಿನ್ಸಿಪಾಲರಾಗಿದ್ದ ಶಂಕರಲಿಂಗಯ್ಯನವರಿಗೆ ಹೋಗಿ ನಾನು ಮಾಡುವ ಪಾಠ ಅರ್ಥವಾಗುತ್ತಿಲ್ಲ ಎಂದೂ ಇವರ ಬದಲು ಬೇರೆ ಅಧ್ಯಾಪಕರನ್ನು ನೇಮಿಸಲು ಮೌಖಿಕವಾಗಿ ಕೇಳಿದ್ದರು. ಪ್ರಿನ್ಸಿಪಾಲರು ಅಲ್ಲೇ ಗದರಿಸಿ ಕಳಿಸುವುದನ್ನು ಬಿಟ್ಟು ನನ್ನನ್ನು ಕರೆಸಿ ಚರ್ಚಿಸಿದರು. ನಾನು ನಡೆದ ವಿಚಾರವನ್ನು ತಿಳಿಸಿದೆ. ಆಯ್ತು ನಾನೇ ನಾಳೆ ನಿಮ್ಮ ಕ್ಲಾಸಿಗೆ ಬರುವೆ ಎಂದು ಹೇಳಿದ ಅವರು ಬಂದು ಕೂತರು. ಅದೇನು ಅವರಿಗೆ ಅನ್ನಿಸಿತೋ, ಅಂತೂ ಕೊನೆಗೆ ಇನ್ನೂ ಹೇಗೆ ಪಾಠ ಮಾಡಬೇಕು ನಿಮಗೆ? ಎಂದು ವಿದ್ಯಾರ್ಥಿಗಳಿಗೆ ಕ್ಲಾಸಿನಲ್ಲಿ ಹೇಳಿ ಹೊರಟು ಹೋದರು.

ಆ ನಂತರ ಬೇರಾವ ಕ್ಲಾಸಿನಲ್ಲಿಯೂ ಈ ರೀತಿಯ ಘಟನೆಗಳು ನಡೆಯಲಿಲ್ಲ ದಿನ ಕಳೆದಂತೆ ನನ್ನ ಆತ್ಮವಿಶ್ವಾಸವೂ ಹೆಚ್ಚಿ ವಿದ್ಯಾರ್ಥಿಗಳು ಆತ್ಮೀಯತೆಯಿಂದ ಸ್ಪಂದಿಸಿ ಆಸಕ್ತಿಯಿಂದ ಕಲಿಯುತ್ತಿದ್ದರು. ನಾನು ತಾತ್ಕಾಲಿಕವಾಗಿ ಮಹೇಶನ ರೂಂನಿಂದ ಕಾಲೇಜಿಗೆ ಓಡಾಡುತ್ತಿದ್ದು ಬೇರೆ ಮನೆ ಅಥವಾ ಪ್ರತ್ಯೇಕ ರೂಮಿಗಾಗಿ ಸರಸ್ವತಿಪುರಂನಲ್ಲಿ ಹುಡುಕುತ್ತಿದ್ದೆ. ಈ ಮಧ್ಯೆ ನನಗೆ ಸೋಷಿಯಾಲಜಿ ವಿಭಾಗದಲ್ಲಿ ಸಂಶೋಧನ ಸಹಾಯಕನಾಗಿದ್ದಾಗ ಪರಿಚಯವಾಗಿದ್ದ ಡಾ. ಪಿ.ಕೆ. ಮಿಶ್ರಾಜಿ ಅವರು ( Director for South Indian Anthropoligical Survey of India ) ಅವರೂ ಕೂಡ ಅಮೇರಿಕನ್ ಸ್ನೇಹಿತರೊಬ್ಬರಿಗೆ ಮನೆಯನ್ನು ಹುಡುಕುತ್ತಿದ್ದರು. ಹೀಗೆ ನಾನೂ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಸೇರಿದ ಬಗ್ಗೆ ತಿಳಿಸಿ ಮನೆ ಹುಡುಕುತ್ತಿರುವ ವಿಷಯ ತಿಳಿಸಿದಾಗ ನೀವಿಬ್ಬರು ಯಾಕೆ ಒಟ್ಟಿಗೆ ಇರುವ ಬಗ್ಗೆ ಯೋಚಿಸಬಾರದು ಎಂದು ಸಲಹೆ ನೀಡಿದರು. ಅದರಂತೆ ನನಗೆ ಸರಸ್ವತಿಪುರಂನ 15ನೇ ಮುಖ್ಯರಸ್ತೆಯಲ್ಲಿ ಒಂದು ಸ್ವತಂತ್ರ ಮನೆ ಬಾಡಿಗೆಗೆ ಸಿಕ್ಕಿತು. 300 ರೂಗಳ ಬಾಡಿಗೆ ಮನೆ ನನ್ನ ಕಾಲೇಜಿಗೂ ಹತ್ತಿರವಾಗಿತ್ತು.

ನನ್ನ ಜೊತೆ ಪ್ರೊ. ಮಿಶ್ರಾಜಿ ಅವರಿಗೆ ಪರಿಚಿತರಾದ ಅಮೇರಿಕಾದ ಒರೆಗಾನ್ ವಿಶ್ವವಿದ್ಯಾಲಯದಿಂದ ಬಂದ ಪ್ರೊ. ಪಾಲ್ ಇ. ಸೈಮನ್ಸ್ ಅವರು ಖ್ಯಾತ ಮಾನವಶಾಸ್ತ್ರದ ಅಧ್ಯಾಪಕರಾಗಿದ್ದು, ಅವರು ನನ್ನೊಟ್ಟಿಗೆ ಇರಲು ಒಪ್ಪಿದರು. ಅವರು ಮೈಸೂರಿಗೆ ಮಂಗಗಳ ಸ್ವಭಾವಗಳ ಮೇಲೆ ಅಧ್ಯಯನ ಮಾಡಲು ಬಂದಿದ್ದರು. ಬೆಳಿಗ್ಗೆ 7 ಗಂಟೆಗೆ ಎದ್ದು ಕುಕ್ಕರಹಳ್ಳಿ ಕೆರೆ ಮೇಲೆ ಓಡಾಡುವ ಮಂಗಗಳ ಬಗ್ಗೆ ತನ್ನ ಕ್ಯಾಮರಾ ತೆಗೆದುಕೊಂಡು ಸೈಕಲ್‌ನಲ್ಲಿ ಹೊರ ಹೋಗಿ 9 ಗಂಟೆಗೆ ಬಂದು ಅವರು ಬೆಳಗಿನ ಉಪಹಾರ ಮಾಡುತ್ತಿದ್ದರು. ಮಧ್ಯಾಹ್ನ ಹಣ್ಣು ಮತ್ತು ಜ್ಯೂಸಿನಲ್ಲಿ ಕಾಲ ಕಳೆದು ಸಂಜೆ 7 ಗಂಟೆಗೆ ಊಟ ಮಾಡುತ್ತಿದ್ದರು. ಮಧ್ಯಾಹ್ನ ಓದು ಮತ್ತು ಬೆಳಗಿನ ಸಮಯದಲ್ಲಿ, ನೋಡಿ ಬಂದ ಮಂಗಗಳ ಬಗೆಗೆ ತನ್ನ ಅಬ್ಸರ್‌ವೇಷನ್‌ಗಳನ್ನು ನೋಟ್ಸ್ ಮಾಡುತ್ತಿದ್ದರು. ಅವರೇ ನಿಗದಿಪಡಿಸಿದ ಊಟಿಯಿಂದ ಬಂದಿದ್ದ ಅಡುಗೆ ಭಟ್ಟ ಚೆನ್ನಾಗಿ ತಿಂಡಿ ಊಟಗಳ ವ್ಯವಸ್ಥೆ ಮಾಡುತ್ತಿದ್ದ. ಮೊದಲ ದಿನ ರಾತ್ರಿ ಊಟ ಮಾಡುವ ಸಮಯಕ್ಕೆ ನಾನು ಬರುವುದು ತಡವಾಯಿತು. ಆತ 7 ಗಂಟೆಗೆ ಊಟ ಮಾಡಿ ಮುಗಿಸಿದ್ದ. ನನಗೆ ದೊಡ್ಡ ತಟ್ಟೆಯಲ್ಲಿ ಮಾಂಸಾಹಾರದ ಅಡುಗೆಯನ್ನು ಬಡಿಸಿಟ್ಟು ನನ್ನ ಮುಂದೆ ಹಿಡಿದು Hope this is sufficeint for you ? ಎಂದು ಕೇಳಿದರು. ನಾನು ಉಂಡು ಇನ್ನೊಬ್ಬರಿಗೂ ಆಗಿ ಮಿಗುವಷ್ಟು ಅದರಲ್ಲಿತ್ತು. ನಾನು ಬಾಡಿಗೆ ಮತ್ತು ವಿದ್ಯುತ್ ವೆಚ್ಚಗಳನ್ನು ನೋಡಿಕೊಂಡರೆೆ ಉಳಿದಂತೆ ಇತರೆ ಎಲ್ಲಾ ಖರ್ಚುಗಳು ಸೈಮನ್ಸ್ ನೋಡಿಕೊಳ್ಳುವಂತೆ ಮಾತಾಡಿ ಹಂಚಿಕೊಂಡಿದ್ದೆವು.

ತಿಂಗಳಲ್ಲಿ ಒಂದೆರಡು ಬಾರಿ ಗುಂಡ್ಲುಪೇಟೆ ಕಡೆ ಹೋಗಿ ಮಂಗಗಳ ಕುರಿತು ಮಾಹಿತಿ ಕಲೆಹಾಕುತ್ತಿದ್ದರು. ನಾನು ಅಮೆರಿಕನ್ ಜೊತೆ ಪ್ರತ್ಯೇಕ ಅಡುಗೆಯವನೊಬ್ಬನನ್ನು ಇರಿಸಿಕೊಂಡು ಊಟ ಉಪಚಾರ ನಡೆಯುತ್ತಿದ್ದುದರ ಬಗ್ಗೆ ನಮ್ಮ ಮೈಸೂರಿನ ಹಿರಿಕಿರಿ ಸ್ನೇಹಿತರು ವಿಶೇಷವೆಂಬಂತೆ ವಿಚಾರಿಸುತ್ತಿದ್ದರು. ನನ್ನ ಅನೇಕ ಸಮಾಜವಾದಿ ಯುವಜನ ಸಭಾ ಮತ್ತು ದಲಿತ ವಿದ್ಯಾರ್ಥಿ ಮಿತ್ರರು ನನ್ನಲ್ಲಿಗೆ ಬಂದಾಗ ನಮ್ಮಲ್ಲಿಯೇ ಊಟ ತಿಂಡಿ ಮಾಡಿಕೊಂಡು ಹೋಗುತ್ತಿದ್ದರು.

ನಾನು 1974 ಡಿಸೆಂಬರ್ 4 ರಂದು ಅಧ್ಯಾಪಕ ವೃತ್ತಿಗೆ ಸೇರಿದ್ದು, ಮಾರ್ಚ್ ಅಥವಾ ಏಪ್ರಿಲ್ ಶೈಕ್ಷಣಿಕ ವರ್ಷದ ಕೊನೆಯಲ್ಲಿ ರಿಲೀವ್ ಮಾಡುತ್ತಿದ್ದರು. ಸ್ಥಳೀಯ ಅಭ್ಯರ್ಥಿಯಾಗಿ ತೆಗೆದುಕೊಂಡ ಎಲ್ಲ ವಿಷಯದ ಅಧ್ಯಾಪಕರುಗಳಿಗೂ ಇದೇ ವ್ಯವಸ್ಥೆ ಆಗ ಜಾರಿಯಲ್ಲಿತ್ತು. ಅದರಲ್ಲಿ ಆರು ತಿಂಗಳಿಗಿಂತ ಹೆಚ್ಚು ದಿನ ಕೆಲಸ ಮಾಡಿದವರಿಗೆ ಶೈಕ್ಷಣಿಕವಾಗಿದ್ದ ರಜೆಯಲ್ಲೂ ಬೇಸಿಗೆಯ ಸಂಬಳ ನೀಡುತ್ತಿದ್ದರು. ನಾನು ಆರು ತಿಂಗಳಿಗಿAತಲೂ ಕಡಿಮೆ ಅವಧಿಗೆ ಕೆಲಸ ಮಾಡಿದ್ದ ಕಾರಣಕ್ಕೆ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಸೇರಿಕೊಂಡಿದ್ದೆ. ಆ ಕಾರಣದಿಂದ ನನಗೆ ಮತ್ತೆ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಪುನರ್ ನೇಮಕವಾಗುವವರೆಗೂ ಸಂಬಳವಿರಲಿಲ್ಲ. ಸುಮಾರು 3-4 ತಿಂಗಳು ರಜೆ ಮತ್ತು ಖರ್ಚಿಗೆ ಹಣವಿಲ್ಲದೆ ಚಿಂತಿತನಾಗಿದ್ದಾಗ ಡಾ. ಮಿಶ್ರಾಜಿ ಅವರು ನನ್ನ ಸಹಾಯಕ್ಕೆ ಬಂದರು.

ಈ ಮೂರು ತಿಂಗಳ ಕಾಲ ನಾನು ಪಾಲ್ ಇ. ಸೈಮನ್ಸ್ ಅವರಿಗೆ ಅನುವಾದಕನಾಗಿ ಕೆಲಸಮಾಡಲು ಸೂಚಿಸಿದ್ದರು. ಅದಕ್ಕಾಗಿ ನನಗೆ ತಿಂಗಳಿಗೆ 500 ರೂ ಸಂಬಳವನ್ನು ನಿಗದಿಪಡಿಸಿದ್ದರು. ಅದೇನು ಕಟ್ಟುನಿಟ್ಟಿನ ಕೆಲವಲ್ಲದೆ, ಸೈಮನ್ಸ್ ಕೇಳುವ ವಿಷಯಗಳ ಕೆಲವು ಹಾಗೂ ಸ್ಥಳೀಯ ಪ್ರದೇಶದ ಬಗ್ಗೆ ಕೇಳಿದಾಗ ಕನ್ನಡದಲ್ಲಿ ವಿಷಯ ಸಂಗ್ರಹಿಸಿ ಇಂಗ್ಲಿಷ್‌ನಲ್ಲಿ ವಿವರಿಸಿ ಹೇಳುವಂತಹದ್ದಾಗಿತ್ತು. ಆಗ ಅದೊಂದು ಕಷ್ಟದ ಕೆಲಸವಾಗೇನೂ ನನಗೆ ಅನ್ನಿಸಿರಲಿಲ್ಲ. ಆದರೆ ಈ ಕೆಲಸ ನನಗೆ ಹಣದ ಬಿಕ್ಕಟ್ಟಿನಿಂದ ಪಾರು ಮಾಡಿತ್ತು. ಅದು ನನ್ನ ಬೇಸಿಗೆ ರಜೆಯಲ್ಲಿ ಸಿಗದ ಸಂಬಳದ ಕೊರತೆಯನ್ನು ಕೂಡ ನೀಗಿಸಿತ್ತು.
ಈ ಮಧ್ಯೆ ಮೂರು ತಿಂಗಳ ರಜೆಯಲ್ಲಿ ನಮ್ಮ ಊರಿಗೆ ಡಾ. ಮಿಶ್ರಾಜಿ ಅವರನ್ನು ಕರೆದುಕೊಂಡು ಹೋಗುವ ಅವಕಾಶವಾಯಿತು. 1975ರ ಬೇಸಿಗೆ ದಿನಗಳಲ್ಲಿ ನಮ್ಮೂರಿಗೆ ಹೊರಟಿದ್ದೆವು. 1975ರ ನಮ್ಮ ಊರಲ್ಲಿ ನಮಗಿದ್ದ ಒಂದು ಮಾಳಿಗೆ ಮನೆ, ದನ ಕರುಗಳನ್ನು ಕಟ್ಟಲು ಬೇರೆ ತಗಡಿನ ಮನೆ ಇದ್ದವು. ಬಂದ ಅತಿಥಿಗಳಿಗೆ ಅನುಕೂಲವಾಗಲೆಂದು ವಾಸ್ತವ್ಯಕ್ಕೆ ಪ್ರತ್ಯೇಕ ಕೊಠಡಿಗಳಾಗಲೀ, ಹಾಸಿಗೆ ದಿಂಬುಗಳಾಗಲೀ ಮನೆಯಲ್ಲಿರಲಿಲ್ಲ. ಆದರೂ ಅದಾವುದರ ಬಗ್ಗೆ ಚಿಂತಿಸದೆ ಅವರನ್ನು ನಮ್ಮ ಊರಿಗೆ ಕರೆದುಕೊಂಡು ಹೋಗಿದ್ದೆ. ರಾತ್ರಿಗೆ ಊರು ಸೇರಿದ್ದ ನಾವು ಮನೆಯಲ್ಲಿ ಊಟ ಮಾಡಿ ಪ್ರೊ. ಮಿಶ್ರಾಜಿ ಅವರಿಗೆ ನಮ್ಮ ಹೊರಗಿನ ಜಗಲಿಯ ಮೇಲೆ ಸೊಳ್ಳೆಪರದೆ ಕಟ್ಟಿ ಮಲಗುವ ವ್ಯವಸ್ಥೆ ಮಾಡಿದೆ. ಬೆಳಗಿನ ಅಗತ್ಯಗಳಿಗೆ ಅವರನ್ನು ಸೀದಾ ಕರೆದುಕೊಂಡು ನಮ್ಮೂರ ಹತ್ತಿರವೇ ಹರಿಯುತ್ತಿರುವ ಸೂಳೆಕೆರೆ ಹಳ್ಳಕ್ಕೆ ಹೋಗಿ ಬೆಳಗಿನ ಕಾರ್ಯಗಳನ್ನು ಮುಗಿಸಿಕೊಂಡು ಬಂದೆವು. ಮನೆಯಲ್ಲಿ ಮಾಡಿದ ತಿಂಡಿ ತಿಂದು ಊರಲ್ಲಿನ ಗೆಳೆಯರಾದ ದಾವಣಗೆರೆ ನಾಗರಾಜ, ಬಾರಿಕರ ಮಾಂತೇಶಿ, ಮತ್ತಿತರ ಗೆಳೆಯರ ಜೊತೆ ತೋಟಕ್ಕೆ ಹೋದೆವು.

ಪ್ರೊ. ಮಿಶ್ರಾಜಿ ಅವರು ಒಬ್ಬ ಸಮಾಜ ವಿಜ್ಞಾನಿ – ಸಂಶೋಧಕ ಹಾಗೂ ಸಾಮಾಜಿಕ ಸಮಸ್ಯೆಗಳ ಆಳವಾದ ಜ್ಞಾನ ಉಳ್ಳವರಾಗಿದ್ದರು. ಊರಲ್ಲಿನ ಸಾಮಾಜಿಕ ಶೈಕ್ಷಣಿಕ ಹಾಗೂ ಕೂಲಿ ಕಾರ್ಮಿಕರ ಸ್ಥಿತಿಗತಿಗಳನ್ನು ವಿಚಾರಿಸುತ್ತಾ ಸೂಕ್ಷö್ಮವಾಗಿ ಎಲ್ಲರನ್ನು ಗಮನಿಸುತ್ತಿದ್ದರು. ಡಿ. ನಾಗರಾಜು ನಾನು ಪ್ರಾಥಮಿಕ ಶಾಲೆಯಲ್ಲಿ ಸಹಪಾಠಿಯಾಗಿದ್ದು ಈಗ ಊರಲ್ಲಿಯೇ ವೀಳ್ಯದೆಲೆ ತೋಟ ಮಾಡಿಕೊಂಡು ಆರಾಮವಾಗಿದ್ದನು. ಅವರ ತೋಟದಲ್ಲಿ ತೆರೆದ ಬಾವಿಯಲ್ಲಿ ಮಿಶ್ರಾಜಿಯೂ ನಾನು ಸೇರಿದಂತೆ ನಾವೆಲ್ಲರು ಈಜಾಡಿದೆವು. ಆಗ ಹೊರಬಂದು ತೋಟದಲ್ಲಿನ ತೆಂಗಿನ ಮರಗಳಿಂದ ಇಳಿಸಿದ ತೆಂಗಿನ ಹೆಂಡವನ್ನು ಸವಿದೆವು. ಮನೆಯಿಂದ ರೊಟ್ಟಿ ಬುತ್ತಿಯನ್ನು ಅಲ್ಲಿಗೇ ತರಿಸಿದ್ದು, ವೀಳ್ಯದೆಲೆಯ ತೋಟದಲ್ಲಿ ಎಲ್ಲರೂ ಕೂತು ಊಟ ಮಾಡಿದೆವು. ಮಿಶ್ರಾಜಿ ಅವರು ಸಂತೋಷದಿಂದಲೇ ಇಡೀ ದಿನ ಕಳೆದರು. ಮಾತಿನ ಮಧ್ಯೆ ನಮ್ಮೂರಲ್ಲಿನ ಶ್ರೀಮಂತರು ಮತ್ತು ದೊಡ್ಡ ರೀತಿಯಲ್ಲಿ ಒಕ್ಕಲುತನ ಮಾಡುವ ಬಣಕಾರ ಸಿದ್ದಪ್ಪನವರನ್ನು ನೋಡುವ ಆಸೆ ವ್ಯಕ್ತಪಡಿಸಿದರು. ಪ್ರೊ. ಅವರನ್ನು ಅವರ ಮನೆಗೂ ಕರೆದುಕೊಂಡು ಹೋದೆ. ನಮ್ಮಪ್ಪನ ಬಹುದೊಡ್ಡ ವಿಶ್ವಾಸಿಕರಾಗಿದ್ದ ಬಣಕಾರ ಸಿದ್ದಪ್ಪನವರು ಮಿಶ್ರಾಜಿ ಅವರ ಜೊತೆ ಗ್ರಾಮೀಣ ಅರ್ಥವ್ಯವಸ್ಥೆಯ, ಕೂಲಿಕಾರ್ಮಿಕರ, ಹಬ್ಬಹರಿದಿನಗಳ ಕುರಿತು ದೀರ್ಘವಾಗಿ ಚರ್ಚಿಸಿದರು. ಕೊನೆಗೆ ಟೀ ಕುಡಿದು ಅವರ ಮನೆಯಿಂದ ವಾಪಸ್ ಬಂದೆವು.

 

ಸಂಜೆ ಸಮಯಕ್ಕೆ ನಮ್ಮೂರಿನಲ್ಲಿಯೇ ಹೊಸದಾಗಿ ಕಲಿತಿದ್ದ ಬ್ಯಾಂಡ್‌ಅನ್ನು ಅವರ ಮುಂದೆ ಬಾರಿಸಿದರು. ಆ ಕಾಲಕ್ಕೆ ದೇಶ ವಿದೇಶಗಳನ್ನು ಪ್ರವಾಸ ಮಾಡಿ ನಮ್ಮ ದೇಶದಲ್ಲಿನ ದಕ್ಷಿಣ ಭಾರತಕ್ಕೆ ಮಾನವಶಾಸ್ತçದ ಅಧ್ಯಯನಕ್ಕೆ ಮುಖ್ಯಸ್ಥರಾಗಿದ್ದ, ಜಾತಿಯಲ್ಲಿ ಅತ್ಯುನ್ನತವಾದ ಶ್ರೇಣಿಗೆ ಸೇರಿದ ಬ್ರಾಹ್ಮಣರಾಗಿದ್ದ ಪ್ರಾಧ್ಯಾಪಕರೊಬ್ಬರು ಯಾವ ಹಮ್ಮು ಬಿಮ್ಮುಗಳಿಲ್ಲದೆ ಸಾಮಾನ್ಯ ಹಳ್ಳಿಗೆ ಬಂದು ಊರಲ್ಲಿಯ, ನಮ್ಮ ಮನೆಯಲ್ಲಿಯೇ ಉಳಿದು ಹೋಗಿದ್ದು ನಮ್ಮೂರಿನ ಮತ್ತು ನನ್ನ ಜೀವನ ಕಾಲಘಟ್ಟದಲ್ಲಿ ಮರೆಯಲಾಗದ ಸವಿನೆನಪಾಗಿ ಉಳಿದಿದೆ. ಅವರ ಸರಳ, ಸಜ್ಜನಿಕೆಯ ವ್ಯಕ್ತಿತ್ವದಿಂದಾಗಿ ಅಂದು ಪರಿಚಯವಾಗಿ, ನನಗೆ ಬೌದ್ಧಿಕ ಮತ್ತು ಆರ್ಥಿಕವಾಗಿ ಶಕ್ತಿ ನೀಡಿ, 50 ವರ್ಷಗಳ ನಂತರ ಇಂದಿಗೂ ನನ್ನ ಮಾರ್ಗದರ್ಶಕ ಗುರುಗಳಾಗಿ ಉಳಿದಿರುವುದು ನನ್ನ ಜೀವನದ ಭಾಗ್ಯವೆಂದೇ ಭಾವಿಸಿದ್ದೇನೆ. ಅವರು ಮಾಡಿದ ಯಾವ ಸಹಾಯವನ್ನೂ, ತಾನು ಮಾಡಿದೆನೆಂಬ ಅಹಂ ಎಲ್ಲೂ ಸುಳಿಯುವುದಿಲ್ಲ. ಅಂದು ನನಗೆ ಸಿಕ್ಕ ಈ ಪ್ರೊಫೆಸರ್ ನಂತರ ನನ್ನ ಸ್ನೇಹ ಬಳಗದ ಮಾದೇವ, ಅರ್ಕೇಶ, ಮಹೇಶ, ಭಕ್ತ, ಗೊಟ್ಟಿಗೆರೆ ಶಿವರಾಜು ಎಲ್ಲರಿಗೂ ಸ್ನೇಹದ ಗುರುಗಳಾಗಿ ಇಂದಿಗೂ ಉಳಿದಿದ್ದಾರೆ. ಈಗಲೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳಿಗೆ ವಿಶೇಷ ಉಪನ್ಯಾಸಕರಾಗಿ ಹೋಗಿ ಬರುತ್ತಿರುವುದನ್ನ ನೋಡಿದರೆ ಆಶ್ಚರ್ಯವಾಗುತ್ತದೆ. ಅವರಿಗಿಂತ ಇಪ್ಪತ್ತು ವರ್ಷಗಳಷ್ಟು ಕಿರಿಯರಾದ ನಾವುಗಳು ಅವರನ್ನು ಇಂದಿಗೂ ಅನುಸರಿಸುತ್ತಾ ಜೀವನ ಸಾಗಿಸುತ್ತಿದ್ದೇವೆ.

ನಾನು ಅಧ್ಯಾಪಕನಾಗಿದ್ದ ಸಮಯದಲ್ಲಿ ಶೈಕ್ಷಣಿಕ ವರ್ಷ ಮುಗಿದು ಮೂರು ತಿಂಗಳ ರಜೆಯಲ್ಲಿ ಊರಿಗೆ ಹೋಗಿದ್ದೆ. ಆಗ ಪಾಲ್ ಇ. ಸೈಮನ್ಸ್ಗೆ ನಾನು ಅನುವಾದಕನಾಗಿ ಕೆಲಸವೊಂದನ್ನು ಮಾಡಲು ಪ್ರೊ. ಮಿಶ್ರಾಜಿ ಅವರು ಒಪ್ಪಿಸಿದ್ದರು ಎಂಬುದನ್ನು ಆಗಲೇ ಹೇಳಿದ್ದೇನೆ. ಅದನ್ನು ನಾನು ಮಾಡುತ್ತಿದ್ದೆನಾದರೂ ನನಗೆ ಪ್ರತಿ ತಿಂಗಳು ಮುಗಿದಾಕ್ಷಣ ಸಂಬಳ ನೀಡಿರಲಿಲ್ಲ. ಆದರೆ ನಾನು ನನ್ನ ಹಳ್ಳಿಯಲ್ಲಿ ಇರುವಾಗ ಮೂರು ತಿಂಗಳ ಒಟ್ಟು ಸಂಬಳ 1500 ರೂಪಾಯಿಗಳನ್ನು ನನ್ನ ವಿಳಾಸಕ್ಕೆ ಮನಿ ಆರ್ಡರ್ ಮುಖಾಂತರ ಕಳಿಸಿದ್ದರು. ನಮ್ಮೂರಿಗೆ ಆಗತಾನೆ ಹೊಸದಾಗಿ ಬಂದಿದ್ದ ಪೋಸ್ಟ್ ಆಫೀಸ್ ಮತ್ತು ಅದರ ಉಸ್ತುವಾರಿಯನ್ನು ನಮ್ಮ ಊರಿನ ಗೌಡ್ರ ಈರಣ್ಣ ಎಂಬುವವರು ನೋಡಿಕೊಳ್ಳುತ್ತಿದ್ದರು. ಅವರು ನನಗೆ ಬಂದ 1500ರೂಗಳಷ್ಟು ಮನಿ ಆರ್ಡರ್ ಹಣ ನೋಡಿ ಆಶ್ರ‍್ಯಗೊಂಡಿದ್ದರು. ಆಗ ನಮ್ಮೂರಿಗೆ ಹೆಚ್ಚೆಂದರೆ 50-100ರೂಗಳು ಎಂ.ಓ. ಗಳು ಬರುತ್ತಿದ್ದ ಕಾಲ. ಇಷ್ಟೊಂದು ಹಣ ಬರುವಷ್ಟು ಈ ಹುಡುಗ ಹೆಂಗೆ ಬೆಳೆದ ಎಂಬೆಲ್ಲ ಯೋಚನೆ ಮಾಡುತ್ತಾ ಊರಿಗೆಲ್ಲ ಸುದ್ದಿ ಮಾಡಿದ್ದ. ಆಗ ನಮ್ಮ ಅಪ್ಪ ಇನ್ನೂ ಸಕ್ರಿಯವಾಗಿ ಕೆಲಸ ಕಾರ್ಯ ಮಾಡುತ್ತಿದ್ದರು. ‘ಅದೇನಪ್ಪ ಅಷ್ಟೊಂದು ದುಡ್ಡು, ಕಳಿಸಿದರ‍್ಯಾರು?’ ಎಂದು ಅಪ್ಪ ಕೂಡ ಆಶ್ಚರ್ಯದಿಂದ ಕೇಳಿದ್ದರು. ಆಗ ಪಡೆದ 1500 ರೂಗಳನ್ನು ಎಂ.ಓ. ಮೂಲಕ ಬಂದು ನೀಡಿದ ಸಂತೋಷವನ್ನು ಅಳೆಯಲಾಗದು. ಎಲ್ಲ ಕೊರತೆಗಳ ಆಗರದಲ್ಲಿ ಹೋರಾಡುತ್ತಿದ್ದ ನನಗೆ ಅದೊಂದು ಯಾವ ಮಾಪಕದಿಂದಲೂ ಅಳಿಯಲಾಗದ ಶಕ್ತಿವರ್ಧಕ ಔಷಧಿಯಂತೆ ಹುರುಪು ನೀಡಿ ಊರಲ್ಲಿ ನನ್ನ ಗೌರವ ಬೆಳೆಸಿತ್ತು.

ಮುಂದುವರಿಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending