Connect with us

ಕ್ರೀಡೆ

ಅಮೆರಿಕಾ ಪರ ಆಡಿ ಪಾಕಿಸ್ತಾನ ಸೋಲಿಸಿದ ಆ ಬೌಲರ್ಸ್ ಮೂಲ ಚಿಕ್ಕಮಗಳೂರು, ಮುಂಬೈ !

Published

on

ನೋಸ್ತುಶ್ ಪ್ರದೀಪ್ ಕೆಂಜಿಗೆ | ಸೌರಭ್ ನೇತ್ರಾವಲ್ಕರ್
  • ಸಿದ್ದು ಸತ್ಯಣ್ಣನವರ್

ಸದ್ಯ ನಡೆದಿರುವ T-20 ಕ್ರಿಕೆಟ್ ವಿಶ್ವಕಪ್ ನಲ್ಲಿ ದಿಟ್ಟ ಆಟವಾಡಿದ ಅಮೆರಿಕಾ ತಂಡ ಬಲಿಷ್ಟ ಪಾಕಿಸ್ತಾನ ತಂಡವನ್ನು ಸೂಪರ್ ಓವರಿನಲ್ಲಿ 5 ರನ್ ಅಂತರದಿಂದ ಸೋಲಿಸಿತು. ವಿವಿಧ ರಾಷ್ಟ್ರಗಳ ಮೂಲದ ಆಟಗಾರರನ್ನೇ ಹೆಚ್ಚು ಹೊಂದಿರುವ ಅಮೆರಿಕಾ ತಂಡದ ಗೆಲುವಿನಲ್ಲಿ ಗಮನ ಸೆಳೆದ ಹೆಸರು ಕರ್ನಾಟಕದ ಚಿಕ್ಕಮಗಳೂರಿನ ನೋಸ್ತುಶ್ ಪ್ರದೀಪ್ ಕೆಂಜಿಗೆ ಹಾಗೂ ಮುಂಬೈ ಮೂಲದ ಸೌರಭ್ ನೇತ್ರಾವಲ್ಕರ್ ಅವರದು. ನೋಸ್ತುಶ್ ಅವರು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಕೆಂಜಿಗೆ ಗ್ರಾಮದವರು. ಕನ್ನಡದ ಹೆಸರಾಂತ ಸಾಹಿತಿಗಳಾದ ಪೂರ್ಣಚಂದ್ರ ತೇಜಸ್ವಿಯವರೊಡನೆ ಮಿಲೇನಿಯಮ್ ಸರಣಿಯ ಪುಸ್ತಕಗಳನ್ನು ನೀಡಿದ ಸಾಹಿತಿ, ಕಾಫಿ ಬೆಳೆಗಾರರಾದ ಪ್ರದೀಪ್ ಕೆಂಜಿಗೆ ಅವರ ಪುತ್ರ ನೋಸ್ತುಶ್.

ಅಮೆರಿಕಾ ತಂಡ ತನ್ನ ಕೋಟಾದ 20 ಓವರ್ ಬೌಲಿಂಗ್ ಮುಗಿಸಿದಾಗ ಸ್ಕೋರ್ ಬೋರ್ಡ್ ಮೇಲೆ ನೋಸ್ತುಶ್ ಅವರ ಆಟದ ವೈಖರಿಯ ಅಂಕಿಸಂಖ್ಯೆ 4-0-30-3.
ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದದ್ದು ಪಂದ್ಯದ ತಿರುವುಗಳಲ್ಲೊಂದು. ಪಾಕ್ ನೀಡಿದ 160 ರನ್ ಲಕ್ಷ್ಯ ಬೆನ್ನಟ್ಟಿದ ಅಮೆರಿಕನ್ನರು 159 ರನ್ ಗಳಿಸಿದ್ದರಿಂದ ಪಂದ್ಯ ಟೈಗೊಂಡ ಕಾರಣಕೆ ಸೂಪರ್ ಓವರಿನಲ್ಲಿ ಪಾಕಿಸ್ತಾನಕ್ಕೆ ಗೆಲ್ಲಲು ಅಮೆರಿಕ ನೀಡಿದ ಗುರಿ 19 ರನ್. ಆಗ ಈ ಮೊತ್ತವನ್ನು ರಕ್ಷಿಸಿಕೊಳ್ಳಲು ಅಮೆರಿಕಾ ತಂಡದ ನಾಯಕ ಚೆಂಡಿತ್ತದ್ದು ಎಡಗೈ ವೇಗಿ ಸೌರಭ್ ನೇತ್ರಾವಲ್ಕರ್ ಅವರ ಕೈಗೆ. ಆರು ಎಸೆತಗಳಲ್ಲಿ 13 ರನ್ ಅಷ್ಟೇ ನೀಡಿದ ನೇತ್ರಾವಲ್ಕರ್ ಅಮೆರಿಕ ತಂಡದ ಜಯಕ್ಕೆ ಕಾರಣರಾದರು. ಭಾರತದ ಪರ ಕೆ.ಎಲ್. ರಾಹುಲ್ ನಾಯಕತ್ವದಲ್ಲಿ U-19 ವಿಶ್ವಕಪ್ ಆಡಿದ್ದ ಹಾಗೂ ಮುಂಬೈ ಪರ ರಣಜಿ ಪಂದ್ಯಗಳಲ್ಲೂ ಮಿಂಚಿದ್ದ ನೇತ್ರಾವಲ್ಕರ್ ಸದ್ಯ ಅಮೆರಿಕಾದಲ್ಲಿ ಟೆಕ್ಕಿ. ಅಮೆರಿಕಾ ಪರ 40ಕ್ಕೂ ಹೆಚ್ಚು ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿ, ತಂಡದ ಪ್ರಮುಖ ಖಾಯಂ ಸದಸ್ಯರಾಗಿದ್ದಾರೆ.

ನೋಸ್ತುಶ್ ಕೆಂಜಿಗೆ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ, ಕ್ರಿಕೆಟ್ ತರಬೇತಿ ಪಡೆದರೂ, ಕ್ಲಬ್ ಕ್ರಿಕೆಟ್ ಆಡಿದರೂ ಭಾರತದಲ್ಲಿ ಸ್ಪರ್ಧೆ ಹೆಚ್ಚಾಗಿರುವ ಕಾರಣಕೆ ಅವಕಾಶ ಸಿಗುವ ಸಾಧ್ಯತೆ ಬಹಳ ಕಷ್ಟವಿತ್ತು. ಆ ಕಾರಣಕೆ ಉದ್ಯೋಗ ನಿಮಿತ್ತ ಅಮೆರಿಕಾ ತೆರಳಿದವರಿಗೆ ಅಲ್ಲಿಯ ರಾಷ್ಟ್ರೀಯ ತಂಡಕ್ಕೆ ಆಡುವ ಸುಯೋಗ ಒಲಿಯಿತು. 2017ರಲ್ಲಿ ನೋಸ್ತುಶ್ ಅವರು ಅಮೆರಿಕಾ ಪರ ಪಾದಾರ್ಪಣೆ ಮಾಡಿದಾಗ ಅವರ ಸಮಕಾಲೀನರಾದ ಈಗಾಗಲೇ ಭಾರತದ ಪರ ಜನಪ್ರಿಯರಾಗಿರುವ ಬ್ಯಾಟರ್ ಗಳಾದ ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಶ್ರೇಯಸ್ ಅಯ್ಯರ್ ಜೊತೆ ಆಡಿದವರು. ಎಡಗೈ ಸ್ಪಿನ್, ಬಲಗೈ ಬ್ಯಾಟಿಂಗ್ ಕೌಶಲ ಹೊಂದಿರುವ ನೋಸ್ತುಶ್ ಹಾಗೂ ಸೌರಭ್ ಅವರ ಪಾಕಿಸ್ತಾನದ ವಿರುದ್ಧದ ಆಟ ಅಮೆರಿಕಾ ತಂಡಕ್ಕೆ ಗೆಲುವು ಕೊಡಿಸಿತು. ಆ ಮೂಲಕ ಕ್ರಿಕೆಟ್ ಶಿಶು ಎಂದು ಕರೆಯಲ್ಪಟ್ಟರೂ ಬಲಿಷ್ಟ ಪಾಕಿಸ್ತಾನವನ್ನು ಸೋಲಿಸಲು ಕಾರಣವಾದ ಅಮೆರಿಕಾ ತಂಡದ ಸಂತಸಕೆ ಕನ್ನಡಿಗನ ಕೊಡುಗೆಯು ಸೇರಿ ಮುಂಬೈ ಮೂಲದ ಸೌರಭ್ ಅವರ ಪ್ರದರ್ಶನವು ಕಾರಣವಾಯಿತು.

ಅಮೆರಿಕ ತಂಡ ಪಾಕ್ ವಿರುದ್ಧ ಗೆಲ್ಲಲು ಮಾಡಿದ ಸಂಘಟಿತ ಹೋರಾಟ ಖಂಡಿತ ಕ್ರಿಕೆಟ್ ಪ್ರಿಯರ ಮನಸೆಳೆಯುವಂತಿತ್ತು. ಈ ಜಯ ಹಾಗೂ ವಿಶ್ವಕಪ್ ಆತಿಥ್ಯದಿಂದ ಅಮೆರಿಕದಲ್ಲಿ ಕ್ರಿಕೆಟ್ ಜನಪ್ರಿಯವಾಗಿ ಬೆಳೆಯಲು ಕಾರಣವಾಗಬಹುದು. (ಕೃಪೆ : ಸಿದ್ದು ಸತ್ಯಣ್ಣನವರ್ ಫೇಸ್ ಬುಕ್ ಪೇಜ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

Olympic Games Paris 2024 | ಇಂದು ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ ; ಭವ್ಯ ಸಮಾರಂಭಕ್ಕೆ ಸೀನ್ ನದಿ ಸಜ್ಜು

Published

on

ಸುದ್ದಿದಿನಡೆಸ್ಕ್:ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಸೀನ್ ನದಿಯ ಮೇಲೆ ಇಂದು ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಪರೇಡ್‌ನಲ್ಲಿ ಭಾರತದ ಧ್ವಜಧಾರಿಗಳಾದ ಶರತ್ ಕಮಲ್ ಮತ್ತು ಪಿ.ವಿ.ಸಿಂಧು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕೆಲ ಪಂದ್ಯಗಳಿಗೆ ಚಾಲನೆ ನೀಡಲಾಗಿದೆ. ಅದರಂತೆ ಜುಲೈ 24 ರಿಂದ ಫುಟ್‌ಬಾಲ್ ಮತ್ತು ರಗ್ಬಿ ಪಂದ್ಯಗಳು ಶುರುವಾಗಿದ್ದು, ನಿನ್ನೆ ಬಿಲ್ಲುಗಾರಿಕೆ ಸ್ಪರ್ಧೆ ಆರಂಭವಾಗಿದೆ. ಈ ಸ್ಪರ್ಧೆಯೊಂದಿಗೆ ಭಾರತ ಒಲಿಂಪಿಕ್ಸ್ ಅಭಿಯಾನ ಆರಂಭಿಸುತ್ತಿರುವುದು ವಿಶೇಷವಾಗಿದೆ.

ಬಿಲ್ಲುಗಾರಿಕೆಯ ಶ್ರೇಯಾಂಕದ ಸುತ್ತಿನಲ್ಲಿ ಅಂಕಿತ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಅವರನ್ನೊಳಗೊಂಡ ಭಾರತೀಯ ಮಹಿಳಾ ತಂಡ, 1 ಸಾವಿರದ 983 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಗಳಿಸಿ, ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಟಿ-20 ವಿಶ್ವಕಪ್ ಪ್ರಶಸ್ತಿ ವಿಜೇತ ಭಾರತ ಕ್ರಿಕೆಟ್ ತಂಡ ಇಂದು ದೆಹಲಿಗೆ ಆಗಮನ ; ಸಂಜೆ ರೋಡ್ ಶೋ

Published

on

ಸುದ್ದಿದಿನಡೆಸ್ಕ್:ಟಿ-20ವಿಶ್ವಕಪ್ ಪ್ರಶಸ್ತಿ ವಿಜೇತ ಭಾರತ ಕ್ರಿಕೆಟ್ ತಂಡ ಇಂದು ಬೆಳಗ್ಗೆ ರಾಜಧಾನಿ ದೆಹಲಿಗೆ ಆಗಮಿಸಿತು. ವಿಮಾನ ನಿಲ್ದಾಣದಲ್ಲಿ ಭಾರತದ ಆಟಗಾರರಿಗೆ ಆತ್ಮೀಯ ಸ್ವಾಗತ ಕೋರಲಾಯಿತು. ಪಂದ್ಯಾವಳಿಯ ಫೈನಲ್ ಪಂದ್ಯ ನಡೆದ ಬಾರ್ಬಡೋಸ್‌ನಿಂದ ತಂಡವು ಹಿಂತಿರುಗಿತು.

ಬೆರಿಲ್ ಚಂಡಮಾರುತದಿಂದಾಗಿ ಭಾರತ ತಂಡದ ಆಗಮನ ವಿಳಂಬವಾಯಿತು. ರಾಷ್ಟ್ರದ ರಾಜಧಾನಿಯಲ್ಲಿ ಭಾರತೀಯ ತಂಡವನ್ನು ಸ್ವಾಗತಿಸಲು ಕ್ರಿಕೆಟ್ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಸೇರಿದ್ದಾರೆ. ಆ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಕೈಗೊಂಡಿದ್ದಾರೆ. ಮುಂಬೈಗೆ ತೆರಳುವ ಮುನ್ನ ಭಾರತ ತಂಡ ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಲಿದೆ.

ಚಾಂಪಿಯನ್ ತಂಡ ಮುಂಬೈನಲ್ಲಿ ಇಂದು ಸಂಜೆ ತೆರೆದ ಬಸ್‌ನಲ್ಲಿ ರೋಡ್ ಶೋನಲ್ಲಿ ಭಾಗವಹಿಸಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ -ಬಿಸಿಸಿಐ ಕಾರ್ಯದರ್ಶಿ ಜೈ ಶಾ ತಿಳಿಸಿದ್ದಾರೆ.

ಸಂಜೆ 5ರಿಂದ 7ರವರೆಗೆ ನಾರಿಮನ್ ಪಾಯಿಂಟ್‌ನಿಂದ ವಾಂಖೆಡೆ ಕ್ರೀಡಾಂಗಣದವರೆಗೆ ವಿಜಯಯಾತ್ರೆ ನಡೆಯಲಿದೆ. ಅದರ ನಂತರ ವಾಂಖೆಡೆ ಕ್ರೀಡಾಂಗಣದಲ್ಲಿ ಸನ್ಮಾನ ಸಮಾರಂಭ ನಡೆಯಲಿದ್ದು, ಅಲ್ಲಿ ಬಿಸಿಸಿಐ ಭಾರತ ತಂಡಕ್ಕೆ ಬಹುಮಾನ ಮೊತ್ತವನ್ನು ನೀಡಲಿದೆ. ಟಿ-20 ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡದ ರೋಡ್ ಶೋಗೆ ಪೊಲೀಸರು ವ್ಯಾಪಕ ಭದ್ರತಾ ವ್ಯವಸ್ಥೆಯನ್ನು ಕೈಗೊಂಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

11 ವರ್ಷಗಳ ನಂತರ ಭಾರತ ತಂಡಕ್ಕೆ ಐಸಿಸಿ ಟಿ-20 ವಿಶ್ವಕಪ್ ಕಿರೀಟ ; ಗಣ್ಯರ ಮೆಚ್ಚುಗೆ

Published

on

ಸುದ್ದಿದಿನಡೆಸ್ಕ್:ಬಾರ್ಬಡೋಸ್ ನ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಕಳೆದ ರಾತ್ರಿ 7 ರನ್ ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ರೋಹಿತ್ ಶರ್ಮ ನೇತೃತ್ವದ ಭಾರತ ತಂಡ, 17 ವರ್ಷಗಳ ನಂತರ ಐಸಿಸಿ ಪುರುಷರ ಟಿ-20 ವಿಶ್ವಕಪ್ ಗೆದ್ದಸಾಧನೆ ಮಾಡಿದೆ.

ಭಾರತ ನೀಡಿದ 177 ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಲಷ್ಟೇ ಶಕ್ತಗೊಂಡಿತು. ದಕ್ಷಿಣ ಆಫ್ರಿಕಾ ಪರ ಹೆನ್ರಿಚ್ ಕ್ಲಾಸೆನ್ 52 ರನ್ ಗಳಿಸಿದರೆ, ಭಾರತ ತಂಡದ ಪರ ಹಾರ್ದಿಕ್ ಪಾಂಡ್ಯ 3, ಜಸ್ ಪ್ರಿತ್ ಬುಮ್ರಾ ಮತ್ತು ಅರ್ಷ್ ದೀಪ್ ಸಿಂಗ್ ತಲಾ 2 ವಿಕೆಟ್ ಪಡೆದರು.

ಟೂರ್ನಿಯಲ್ಲಿ ಅತ್ಯುತ್ತಮ ಇನಿಂಗ್ಸ್ ಆಡಿದ ವಿರಾಟ್ ಕೊಹ್ಲಿ ಸಹಜವಾಗಿಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಹಾಗೆಯೇ 8 ಪಂದ್ಯಗಳಿಂದ 15 ವಿಕೆಟ್ ಉರುಳಿಸಿದ ವೇಗಿ ಜಸ್ ಪ್ರಿತ್ ಬುಮ್ರಾ ಟೂರ್ನಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು. 2007ರ ನಂತರ ಭಾರತ ಟಿ20 ವಿಶ್ವಕಪ್ ಗೆದ್ದರೆ, 2013ರ ಚಾಂಪಿಯನ್ಸ್ ಟ್ರೋಫಿ ಬಳಿಕ ಐಸಿಸಿ ಟ್ರೋಫಿ ತನ್ನದಾಗಿಸಿಕೊಂಡಿದೆ.

ಈ ಮಧ್ಯೆ, ಭಾರತ ತಂಡ 2ನೇ ಬಾರಿ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಕ್ರಿಕೆಟ್ ನ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಗೆ ನಿವೃತ್ತಿ ಪ್ರಕಟಿಸಿದ್ದಾರೆ. 2024ರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಿ ಅಭಿನಂದನೆ ಸಲ್ಲಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending