Connect with us

ಬಹಿರಂಗ

ರೈತ ಪ್ರತಿಭಟನೆಯ ಜಾಗತಿಕ ಆಯಾಮ

Published

on

 

  • ಮೂಲ : ಉತ್ಸಾ ಪಟ್ನಾಯಕ್( ಹಿಂದೂ ದಿನಪತ್ರಿಕೆ 30-12-20) ಅನುವಾದ : ನಾ ದಿವಾಕರ

ರೈತರೊಂದಿಗೆ ಮಾತುಕತೆಯನ್ನೂ ನಡೆಸದೆ, ಕೇಂದ್ರ ಸರ್ಕಾರ ಸಂಸತ್ತಿನಲ್ಲಿಯೂ ಚರ್ಚೆ ನಡೆಸದೆ ಅವಸರದಲ್ಲಿ ಜಾರಿಗೊಳಿಸಿರುವ ಮೂರು ಕೃಷಿ ಮಸೂದೆಗಳನ್ನು ಹಿಂಪಡೆಯಲು ಆಗ್ರಹಿಸಿ ದೇಶದ ರೈತರು ನಡೆಸುತ್ತಿರುವ ಆಂದೋಲನ ಎರಡನೆ ತಿಂಗಳಿಗೆ ಕಾಲಿಟ್ಟಿದೆ. ರೈತರ ಈ ಆಂದೋಲನ ಚಾರಿತ್ರಿಕ ಮಹತ್ವ ಪಡೆದಿದೆ.

ರೈತಾಪಿಯ ಈ ಮುಷ್ಕರ ಕೇವಲ ಕನಿಷ್ಠ ಬೆಂಬಲ ಬೆಲೆಗೆ ಸೀಮಿತವಾದದ್ದಲ್ಲ. ಸಾರ್ವಜನಿಕ ಆಹಾರ ಧಾನ್ಯಗಳ ಸಾರ್ವಜನಿಕ ಸಂಗ್ರಹಣೆ ಮತ್ತು ವಿತರಣೆಯ ವ್ಯವಸ್ಥೆಯ ಉಳಿವಿಗೂ ಈ ಹೋರಾಟ ನಿರ್ಣಾಯಕವಾಗಿದೆ. ಭಾರತದ ಆಹಾರ ಕಣಜ ಎಂದೇ ಹೇಳಬಹುದಾದ ಉತ್ತರ ಭಾರತದ ಆಹಾರ ಧಾನ್ಯ ಉತ್ಪಾದನೆಯ ಆರ್ಥಿಕ ಸಕ್ಷಮತೆಯನ್ನು ಕಾಪಾಡದೆ ಹೋದಲ್ಲಿ ಇಡೀ ದೇಶದ ಸಾರ್ವಜನಿಕ ಆಹಾರ ಸಂಗ್ರಹಣೆ ವಿತರಣೆಯ ಪ್ರಕ್ರಿಯೆ ದುರ್ಬಲವಾಗುತ್ತದೆ. ಪ್ರಸ್ತುತ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಏನೇ ಕೊರತೆ, ಲೋಪದೋಷಗಳಿದ್ದರೂ ಇದು ದೇಶದ ಬಹುಸಂಖ್ಯೆಯ ಜನರಿಗೆ ಜೀವನಾಧಾರ ಒದಗಿಸುತ್ತಿರುವುದನ್ನು ಇಲ್ಲಿ ಗಮನಿಸಬೇಕಿದೆ.

ವಸಾಹತುಕಾಲ ಸ್ಥಿತಿಯ ಮರುನಿರ್ಮಾಣ

ಉತ್ತರದ ಔದ್ಯಮಿಕ ದೇಶಗಳಾದ ಅಮೆರಿಕ, ಕೆನಡಾ ಮತ್ತು ಐರೋಪ್ಯ ಸಂಘಟನೆಯ ರಾಷ್ಟ್ರಗಳಲ್ಲಿ ಅಲ್ಲಿನ ಗ್ರಾಹಕರಿಂದಲೇ ಹೆಚ್ಚಿನ ಬೇಡಿಕೆ ಇರುವ ಉಷ್ಣವಲಯದ ಮತ್ತು ಉಪ ಉಷ್ಣವಲಯದ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುವುದಿಲ್ಲ. ಆದರೆ ಈ ದೇಶಗಳ ಹವಾಮಾನಕ್ಕೆ ಅನುಗುಣವಾಗಿ ಅಲ್ಲಿನ ಏಕ ಬೆಳೆಯ ಭೂಮಿಯಲ್ಲಿ ಬೆಳೆಯಲಾಗುವ ಆಹಾರ ಧಾನ್ಯಗಳು ಮತ್ತು ಹೈನು ಉತ್ಪನ್ನಗಳು ಹೇರಳವಾಗಿ ಸಂಗ್ರಹವಾಗಿರುತ್ತವೆ.

ಈ ಧಾನ್ಯಗಳಿಗೆ ಮತ್ತು ಉತ್ಪನ್ನಗಳಿಗೆ ರಫ್ತು ಮಾರುಕಟ್ಟೆಯನ್ನು ಕಂಡುಕೊಳ್ಳುವುದು ಈ ದೇಶಗಳಿಗೆ ಅನಿವಾರ್ಯವಾಗಿರುತ್ತದೆ. ಎರಡು ದಶಕಗಳಿಗೂ ಹೆಚ್ಚು ಕಾಲ ಈ ಶ್ರೀಮಂತ ರಾಷ್ಟ್ರಗಳು ಭಾರತ ಮತ್ತಿತರ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಒತ್ತಡ ಹೇರುತ್ತಿದ್ದು ಆಹಾರ ಧಾನ್ಯ ಸಂಗ್ರಹಣೆಯ ಪದ್ಧತಿಯನ್ನು ಕೈಬಿಡುವಂತೆ ಒತ್ತಾಯಿಸುತ್ತಿವೆ.

ಬದಲಾಗಿ ಈ ರಾಷ್ಟ್ರಗಳು ಶ್ರೀಮಂತ ರಾಷ್ಟ್ರಗಳಿಂದ ಆಹಾರಧಾನ್ಯಗಳನ್ನು ಆಮದು ಮಾಡಿಕೊಂಡು,ಇಲ್ಲಿನ ಆಹಾರ ಧಾನ್ಯ ಬೆಳೆಯುವ ಭೂಮಿಯನ್ನು ಗುತ್ತಿಗೆ ಕೃಷಿ ಪದ್ಧತಿಗೆ ಒಳಪಡಿಸಿ ರಫ್ತು ಬೆಳೆಗಳನ್ನು ಬೆಳೆಯುವಂತೆ ಒತ್ತಡ ಹೇರಲಾಗುತ್ತಿದೆ. ಈ ರೀತಿಯ ಒತ್ತಡಕ್ಕೆ ಕಾರಣವೇನೆಂದರೆ ಈ ಔದ್ಯಮಿಕ ರಾಷ್ಟ್ರಗಳಲ್ಲಿ ಭಾರತದಲ್ಲಿ ಬೆಳೆಯುವಂತಹ ಆಹಾರ ಧಾನ್ಯಗಳನ್ನು ಬೆಳೆಯಲಾಗುವುದಿಲ್ಲ. ಅಂದರೆ ವಸಾಹತು ಕಾಲಘಟ್ಟದ ಆರ್ಥಿಕ ಸನ್ನಿವೇಶವನ್ನು ಪುನರ್ ಸೃಷ್ಟಿಸುವತ್ತ ಔದ್ಯಮಿಕ ರಾಷ್ಟ್ರಗಳು ಮುನ್ನಡೆದಿವೆ.

1990ರ ದಶಕದಲ್ಲಿ ಫಿಲಿಪೈನ್ಸ್ ಮತ್ತು ಹತ್ತು ವರ್ಷಗಳ ನಂತರ ಆಫ್ರಿಕಾ ಖಂಡದ ಬೋಸ್ಟ್ವಾನಾ ದೇಶಗಳು ಈ ರೀತಿಯ ಒತ್ತಡಕ್ಕೆ ಬಲಿಯಾಗಿದ್ದವು. ಈ ಸಂದರ್ಭದಲ್ಲೇ ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ಧಾನ್ಯಗಳ ಬೆಳೆಯನ್ನು ಎಥನಾಲ್ ಉತ್ಪಾದನೆಗೆ ಬಳಸಲು ಆರಂಭಿಸಿದ್ದರ ಪರಿಣಾಮವಾಗಿ 2007ರ ನಂತರ ಜಾಗತಿಕ ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳ ಬೆಲೆಗಳು ಗಗನಕ್ಕೇರಿದವು. ಆಹಾರ ಧಾನ್ಯಗಳಿಗಾಗಿ ಆಮದು ಪದಾರ್ಥಗಳನ್ನೇ ಅವಲಂಬಿಸಿದ್ದ 37 ದೇಶಗಳಲ್ಲಿ ಹಾಹಾಕಾರ ಉಂಟಾಗಿದ್ದು, ಆಹಾರಕ್ಕಾಗಿ ದಂಗೆಗಳು ಉಂಟಾಗಿದ್ದವು. ನಗರ ಪ್ರದೇಶದ ಜನರು ಹೆಚ್ಚಿನ ಬಡತನಕ್ಕೆ ನೂಕಲ್ಪಟ್ಟರು.

ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆಹಾರ ಭದ್ರತೆ ಅತ್ಯಂತ ಮಹತ್ವದ ಸಂಗತಿಯಾಗಿದ್ದು ಇದನ್ನು ಜಾಗತಿಕ ಮಾರುಕಟ್ಟೆಯ ನಿಯಂತ್ರಣಕ್ಕೆ ಒಪ್ಪಿಸುವುದು ಅಪಾಯಕಾರಿಯಾಗುತ್ತದೆ. ಆದಾಗ್ಯೂ ಆಹಾರ ಭದ್ರತೆಯನ್ನು ಸಾಧಿಸಲು ಈ ದೇಶಗಳ ಸಾರ್ವಜನಿಕ ಆಹಾರ ಸಂಗ್ರಹಗಳ ಮೇಲೆ ನಿರಂತರ ದಾಳಿ ನಡೆಯುತ್ತಲೇ ಇದೆ. ಒಂದು ದಶಕದ ಹಿಂದೆಯಷ್ಟೇ ಭಾರತ ಈ ನಿಟ್ಟಿನಲ್ಲಿ ಜಾಗೃತವಾಗಿ ತನ್ನ ಆಹಾರ ಸಂಗ್ರಹವನ್ನು ಸಂರಕ್ಷಿಸಲು ಯಶಸ್ವಿಯಾಗಿತ್ತು.

2008ರ ಬೆಲೆ ಏರಿಕೆಗೂ ಮುನ್ನ ಆರು ವರ್ಷಗಳ ಕಾಲ ತಟಸ್ಥವಾಗಿದ್ದ ಬೆಂಬಲ ಬೆಲೆಗಳನ್ನು ಹೆಚ್ಚಿಸಲಾಗಿತ್ತು. ಆರ್ಥಿಕ ಪುನಶ್ಚೇತನದ ಪರಿಣಾಮ ಪಂಜಾಬ್ ನಲ್ಲಿ ಜಡಗಟ್ಟಿದ್ದ ಆಹಾರ ಧಾನ್ಯ ಉತ್ಪಾದನೆ ಹೆಚ್ಚಾಗಿತ್ತು. ಆದರೆ ಬಹುಸಂಖ್ಯೆಯ ಬಡಜನತೆಯನ್ನು “ ಬಡತನ ರೇಖೆಯ ಕೆಳಗಿರುವ ” ಪಡಿತರ ವ್ಯವಸ್ಥೆಯಿಂದ ಹೊರಗುಳಿಯುವಂತೆ ಮಾಡಿದ ಪರಿಣಾಮ ಆಹಾರ ಧಾನ್ಯಗಳ ಬಳಕೆ ಹೆಚ್ಚಾಗಲಿಲ್ಲ. 2016ರ ನೋಟು ರದ್ದತಿಯಿಂದ ಉಂಟಾದ ನಿರುದ್ಯೋಗ ಮತ್ತು 2020ರ ಕೋವಿದ್ ಪರಿಣಾಮದಿಂದ ಸೃಷ್ಟಿಯಾದ ಉದ್ಯೋಗ ಕೊರತೆ ಆಹಾರ ಧಾನ್ಯಗಳ ಒಟ್ಟಾರೆ ಬೇಡಿಕೆಯ ಪ್ರಮಾಣ ಚಾರಿತ್ರಿಕ ಕುಸಿತ ಕಾಣುವಂತೆ ಮಾಡಿವೆ.

ಭಾರತದ ರೈತಾಪಿ ಯಾವುದೇ ತರ್ಕಬದ್ಧ ಕಾರಣಗಳೇ ಇಲ್ಲದೆ ಅಪ್ರಾಮಾಣಿಕ ವ್ಯಾಪಾರದ ತಂತ್ರಗಾರಿಕೆಗಳಿಗೆ ಬಲಿಯಾಗಬೇಕಾಯಿತು. ಜಾಗತಿಕ ಬೆಲೆಗಳ ಏರುಪೇರುಗಳ ಪರಿಣಾಮ ಭಾರತದ ರೈತರು ತೀವ್ರ ಸಾಲದ ಹೊರೆಗೆ ಸಿಲುಕಿ ಸಂಕಷ್ಟಕ್ಕೀಡಾಗಬೇಕಾಯಿತು. ಪಂಜಾಬ್ ನ ಒಂದು ಗ್ರಾಮದಲ್ಲಿ ಆತ್ಮಹತ್ಯೆಯಿಂದ ತಮ್ಮ ಗಂಡಂದಿರನ್ನು ಕಳೆದುಕೊಂಡ 59 ವಿಧವೆಯರಿದ್ದಾರೆ.

ಅಭಿವೃದ್ಧಿ ಹೊಂದಿದ ದೇಶಗಳೊಡನೆ ಭಾರತ ಪೈಪೋಟಿ ನಡೆಸುವುದು ತರವಲ್ಲ. ಏಕೆಂದರೆ 1990ರ ದಶಕದಲ್ಲಿ ಈ ಶ್ರೀಮಂತ ರಾಷ್ಟ್ರಗಳು ತಮ್ಮ ಬೆಂಬಲ ಬೆಲೆ ಪದ್ಧತಿಯನ್ನು ಪರಿಷ್ಕರಿಸುವ ಮೂಲಕ ಅಲ್ಲಿನ ರೈತರಿಗೆ ಸಹಾಯಧನವನ್ನು ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡಲು ಆರಂಭಿಸಿದ್ದವು.

ಅಂತಾರಾಷ್ಟ್ರೀಯ ಕೃಷಿ ಒಡಂಬಡಿಕೆಯ ಸಹಾಯಧನವನ್ನು ಕಡಿಮೆ ಮಾಡುವ ಒಪ್ಪಂದದ ಅನುಸಾರ ಈ ರೀತಿ ನೇರ ನಗದು ನೀಡುವುದು ನಿಯಮಗಳ ಉಲ್ಲಂಘನೆಯಾಗಿದ್ದರೂ, ಇದು ಒಡಂಬಡಿಕೆಯಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳದಂತೆ ಈ ದೇಶಗಳು ಎಚ್ಚರವಹಿಸಿದ್ದವು. ಇದರಿಂದ ಉಂಟಾಗಬಹುದಾದ ಪರಿಣಾಮವನ್ನು ಗಮನಿಸದೆಯೇ ಭಾರತ ಮತ್ತಿತರ ರಾಷ್ಟ್ರಗಳು ಈ ಒಡಂಬಡಿಕೆಗೆ ಸಹಿ ಹಾಕಿದ್ದವು.

ಅಮೆರಿಕದ 20 ಲಕ್ಷ ರೈತರಿಗೆ ನೀಡುವ ನೇರ ನಗದು ಸಹಾಯಧನದ ಪ್ರಮಾಣ ಆ ದೇಶದ ಒಟ್ಟು ಕೃಷಿ ಉತ್ಪನ್ನದ ಮೌಲ್ಯದಲ್ಲಿ ಅರ್ಧದಷ್ಟಾಗುತ್ತದೆ. ಇದಕ್ಕೆ ಅಮೆರಿಕದ ಬಜೆಟ್ ನ ಶೇ 1ರಷ್ಟು ನಿದಿ ಬಳಕೆಯಾಗುತ್ತದೆ. ಭಾರತದಲ್ಲಿ ಇದೇ ರೀತಿ ಒಟ್ಟು ಕೃಷಿ ಉತ್ಪಾದನಾ ಮೌಲ್ಯದ ಶೇ 25ರಷ್ಟು ಪ್ರಮಾಣವನ್ನು ಒಂದು ಕೋಟಿ 20 ಲಕ್ಷ ರೈತರಿಗೆ ಸಹಾಯಧನದ ರೂಪದಲ್ಲಿ ನೀಡಿದರೂ ಕೇಂದ್ರ ಬಜೆಟ್ ನಲ್ಲಿ ಶೇ 50ರಷ್ಟು ನಿಧಿಯ ಬಳಕೆಯಾಗುತ್ತದೆ. ಇದು ಆರ್ಥಿಕವಾಗಿ ಅಸಾಧ್ಯವಾಗಿದ್ದು ಆಡಳಿತ ವ್ಯವಸ್ಥೆಗೆ ಮಾರಕವಾಗಿ ಪರಿಣಮಿಸುತ್ತದೆ.

ಸಮರ್ಪಕ ಬೆಲೆಯ ನಿಷ್ಕರ್ಷೆ

ತಮಗೆ ಅಲ್ಪ ಪ್ರಮಾಣದ ನಗದು ಪಾವತಿ ಮಾಡುವುದನ್ನು ಭಾರತದ ರೈತರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ದೇಶದ ಸಮಸ್ತ ಜನತೆಗಾಗಿ ತಾವು ಬೆಳೆಯುವ ಆಹಾರ ಧಾನ್ಯಗಳಿಗೆ ಸಮರ್ಪಕವಾದ, ತರ್ಕಬದ್ಧವಾದ ಬೆಲೆ ನೀಡುವಂತೆ ರೈತರು ಆಗ್ರಹಿಸುತ್ತಿದ್ದಾರೆ. ಹಾಗಾದಲ್ಲಿ ಮಾತ್ರ ರೈತರು ತಮ್ಮ ಬೇಸಾಯದ ವೆಚ್ಚವನ್ನು ಸರಿದೂಗಿಸಿ ಸಾಧಾರಣ ಬದುಕು ನಡೆಸಲು ಸಾಧ್ಯವಾಗುತ್ತದೆ.

ಭಾರತದ ಸಂದರ್ಭದಲ್ಲಿ ಬೆಂಬಲ ಬೆಲೆ ಪದ್ಧತಿಯೊಂದೇ ನ್ಯಾಯಯುತವಾಗಿ ಕಾಣುತ್ತದೆ. ಪಂಜಾಬ್ ನಲ್ಲಿ ಅಂತರ್ಜಲ ಕುಸಿಯುತ್ತಿರುವುದು ಆತಂಕಕಾರಿ ವಿಷಯವೇ ಆದರೂ ಇಲ್ಲಿ ನೂತನ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸುವುದು ಮುಖ್ಯವಾಗುತ್ತದೆ. ಕಡಿಮೆ ನೀರು ಬಳಕೆಯಾಗುವಂತಹ ಮಾದರಿಗಳನ್ನು ಬಳಸಬೇಕಾಗುತ್ತದೆ. ( ಕೃಷಿ ವಿಜ್ಞಾನಿಗಳು ಕಂಡುಹಿಡಿದಿರುವ Rice Intensification ಪದ್ಧತಿಯಲ್ಲಿ ಭತ್ತ ಬೆಳೆಯಲು ಹೆಚ್ಚಿನ ಸಾವಯವ ಗೊಬ್ಬರವನ್ನು ಬಳಸುವುದು ಮತ್ತು ಹೆಚ್ಚಿನ ಅಂತರದಲ್ಲಿ ಭತ್ತದ ನಾಟಿ ಮಾಡುವುದು, ಚೌಕಾಕಾರದಲ್ಲಿ ನಾಟಿ ಮಾಡುವುದರ ಮೂಲಕ ನಡುವೆ ಹೆಚ್ಚಿನ ಜಲಸಾಂದ್ರತೆಯನ್ನು ತಡೆಗಟ್ಟಿ, ತೇವಾಂಶವನ್ನು ಉಳಿಸಿಕೊಳ್ಳುವುದು, ಅಂತರ್ಜಲ ಸಂರಕ್ಷಣೆಯ ಒಂದು ವಿಧಾನವಾಗಿದೆ-ಅನುವಾದಕ)

ಅಂತಾರಾಷ್ಟ್ರೀಯ ಕೃಷಿ ಒಡಂಬಡಿಕೆಗಳಲ್ಲಿ ಅಭಿವೃದ್ಧಿ ಹೊಂದಿದ ಶ್ರೀಮಂತ ರಾಷ್ಟ್ರಗಳು ಅಸಂಬದ್ಧ ರೀತಿಯಲ್ಲಿ, ನಿಷ್ಪ್ರಮಾಣವಾದ ನಿಯಮಗಳನ್ನು ರೂಪಿಸಿದ್ದು, ಈ ನಿಯಮಗಳ ಅಡಿಯಲ್ಲೇ ಆಹಾರ ಧಾನ್ಯಗಳ ಬೆಂಬಲ ಬೆಲೆ ನಿರ್ಧರಿಸುವುದನ್ನೂ ಅಳವಡಿಸಲಾಗಿದೆ. ಇದು ಉದ್ದೇಶಪೂರ್ವಕವಾಗಿ ಮಾಡಿರುವ ಒಂದು ನಿಯಮವಾಗಿದೆ.

2018ರಲ್ಲಿ ವಿಶ್ವ ವಾಣಿಜ್ಯ ಸಂಸ್ಥೆಗೆ ಭಾರತದ ವಿರುದ್ಧ ದೂರು ಸಲ್ಲಿಸಿದ್ದ ಅಮೆರಿಕ ಸರ್ಕಾರ, ಭಾರತದಲ್ಲಿ 1986-88ರ ಮೂಲ ಬೆಲೆಯನ್ನೇ ಆಧಾರವಾಗಿಟ್ಟುಕೊಂಡು, ಅಂದಿನ ಡಾಲರ್ ಮೌಲ್ 12.5 ರೂಗಳಿಗೆ ಅನುಗುಣವಾಗಿ ಭಾರತ 2013-14ರಲ್ಲಿ ಭತ್ತ ಮತ್ತು ಗೋಧಿಗೆ ಒಂದು ಕ್ವಿಂಟಾಲಿಗೆ ಕ್ರಮವಾಗಿ 235 ರೂ ಮತ್ತು 354 ರೂ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಕೋರಿತ್ತು. ಆದರೆ ಭಾರತದಲ್ಲಿ ಈ ವೇಳೆಗೆ ಬೆಂಬಲ ಬೆಲೆ ಕ್ರಮವಾಗಿ 1348 ರೂ ಮತ್ತು 1386 ರೂಗಳಷ್ಟಿತ್ತು.

ಕ್ವಿಂಟಲ್‍ಗೆ ಒಂದು ಸಾವಿರ ರೂ ಹೆಚ್ಚಾಗಿತ್ತು. ಇದನ್ನು 2013-14ರ ಭತ್ತ ಮತ್ತು ಗೋಧಿ ಉತ್ಪನ್ನದ ಒಟ್ಟು ಮೌಲ್ಯದೊಡನೆ ಗುಣಾಕಾರ ಮಾಡಿದರೆ ಇದು ಒಟ್ಟು ಉತ್ಪಾದನೆಯ ಶೇ 77 ಮತ್ತು ಶೇ 67ರಷ್ಟಾಗುತ್ತದೆ. ಈ ಲೆಕ್ಕಾಚಾರವನ್ನು ವಿಶ್ವ ವಾಣಿಜ್ಯ ಸಂಸ್ಥೆಯ ಮುಂದಿರಿಸಿದ್ದ ಅಮೆರಿಕ ಸರ್ಕಾರ , ಭಾರತದ ಈ ನೀತಿ ಅಂತಾರಾಷ್ಟ್ರೀಯ ಒಪ್ಪಂದದಲ್ಲಿ ನಿಗದಿಪಡಿಸಿರುವ ಗರಿಷ್ಟ ಶೇ 10ರಷ್ಟು ಬೆಂಬಲ ನೀಡುವ ನಿಯಮದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿತ್ತು.

ಎರಡು ತಿಂಗಳ ಹಿಂದೆ ಅಮೆರಿಕ ಭಾರತಕ್ಕೆ ಮತ್ತಷ್ಟು ಹೊಸ ಸವಾಲುಗಳನ್ನು ಹಾಕಿದೆ. ದುರ್ಬಲ ಅಭಿವೃದ್ಧಿಶೀಲ ದೇಶಗಳನ್ನು ನಿಯಂತ್ರಿಸುವ ಉದ್ದೇಶದಿಂದಲೇ ಕೃಷಿ ಒಡಂಬಡಿಕೆಯಲ್ಲಿ ಅಪ್ರಮಾಣಿಕವಾದ, ಅಸಂಬದ್ಧ ನಿಯಮಗಳನ್ನು ಅಳವಡಿಸಲಾಗಿದೆ.

ಭಾರತದ ರೈತರು ವಿಶ್ವದಲ್ಲೇ ಅತಿ ಕಡಿಮೆ ವೆಚ್ಚದಲ್ಲಿ ಆಹಾರ ಉತ್ಪನ್ನ ಮಾಡುತ್ತಿದ್ದು 2013-14ರಲ್ಲಿ 60.5ರಷ್ಟಿದ್ದ ಡಾಲರ್ ಮೌಲ್ಯಕ್ಕೆ ತುಲನೆ ಮಾಡಿದರೆ ಭಾರತ ನೀಡುತ್ತಿರುವ ಬೆಂಬಲ ಬೆಲೆ ಜಾಗತಿಕ ಬೆಲೆಗಳಿಗಿಂತಲೂ ಸಾಕಷ್ಟು ಕಡಿಮೆ ಪ್ರಮಾಣದಲ್ಲಿದೆ. ಅಂದರೆ ವಾಸ್ತವವಾಗಿ ಬೆಂಬಲ ಬೆಲೆ ನಕಾರಾತ್ಮಕವಾಗಿಯೇ ಕಂಡುಬರುತ್ತದೆ.

ಪ್ರಸ್ತುತ ಸಂದರ್ಭದಲ್ಲಿ ಜಾಗತಿಕ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ನೋಡಿದಾಗ ಭತ್ತ ಮತ್ತು ಗೋಧಿಯ ಬೆಲೆಗಳು ಚಾರಿತ್ರಿಕ ಕುಸಿತ ಕಂಡಿವೆ. ಇದೇ ವೇಳೆ ಅಭಿವೃದ್ಧಿ ಹೊಂದಿದ ಶ್ರೀಮಂತ ದೇಶಗಳಲ್ಲಿ ಕೃಷಿ ಸಹಾಯಧನ ತೀವ್ರ ಹೆಚ್ಚಳ ಕಂಡಿದೆ. ಈ ಹಿನ್ನೆಲೆಯಲ್ಲೇ ಈ ದೇಶಗಳು ತಮ್ಮ ಕೃಷಿ ಉತ್ಪನ್ನಗಳನ್ನು ಭಾರತದಂತಹ ದೇಶಗಳ ಮಾರುಕಟ್ಟೆಗಳಲ್ಲಿ ತಂದು ಸುರಿಯಲು ಹತಾಶರಾಗಿವೆ.

ಈ ದೃಷ್ಟಿಯಿಂದ ನೋಡಿದಾಗ ಭಾರತದ ರೈತ ಸಂಘಟನೆಗಳು ತಾವು ವಿರೋಧಿಸುತ್ತಿರುವ ಮೂರು ಕೃಷಿ ಮಸೂದೆಗಳಿಂದ ಸ್ಥಳೀಯ ಉದ್ಯಮಿಗಳಿಗೆ ಹೆಚ್ಚು ಲಾಭವಾಗುತ್ತದೆ ಎನ್ನುವುದನ್ನು ಸರಿಯಾಗಿ ಗುರುತಿಸಿದ್ದು, ವಿದೇಶಿ ಕೃಷಿ ಉದ್ದಿಮೆಗಳು ಭಾರತದ ಕೃಷಿ ವ್ಯವಸ್ಥೆಗೆ ಮಾರಕವಾಗುವುದನ್ನೂ ಸಮರ್ಪಕವಾಗಿ ಗುರುತಿಸಿವೆ.

ಪಂಜಾಬ್ ಮತ್ತು ಹರಿಯಾಣದಲ್ಲಿ ಈಗಾಗಲೇ ರೈತರು ವಿದೇಶಿ ಕೃಷಿ ಉದ್ದಿಮೆಗಳೊಡನೆ ಗುತ್ತಿಗೆ ಕೃಷಿಯನ್ನು ನಡೆಸಿ ಅದರ ದುಷ್ಪರಿಣಾಮಗಳನ್ನು ಎದುರಿಸಿದ್ದಾರೆ. ತಮ್ಮ ಅನುಕೂಲಕ್ಕೆ ತಕ್ಕಂತೆ ಬೆಲೆ ಮತ್ತು ಗುಣಮಟ್ಟದ ಬಗ್ಗೆ ಒಪ್ಪಿತ ನಿಯಮಗಳನ್ನೂ ಉಲ್ಲಂಘಿಸುವ ಮೂಲಕ ರೈತರಿಗೆ ವಂಚಿಸುವ ಈ ಅಗೋಚರ ಖಾಸಗಿ ಕಾರ್ಪೋರೇಟ್ ಉದ್ದಿಮೆಗಳೊಡನೆ ತಾವು ಯಾವುದೇ ರೀತಿಯಲ್ಲೂ ವ್ಯವಹರಿಸಲು ಸಿದ್ಧರಾಗಿಲ್ಲ ಎಂದು ರೈತ ಸಮುದಾಯ ಸ್ಪಷ್ಟವಾಗಿ ಹೇಳಿದೆ.

ಎಷ್ಟೇ ಅದಕ್ಷತೆ ಇದ್ದರೂ, ಹಣ ಪಾವತಿಯಲ್ಲಿ ವಿಳಂಬ ಉಂಟಾದರೂ, ತಮ್ಮ ಉತ್ಪನ್ನಗಳನ್ನು ಸರ್ಕಾರಿ ಏಜೆಂಟರಿಗೆ ನಿಗದಿತ ಬೆಂಬಲ ಬೆಲೆಗೆ ಮಾರಾಟ ಮಾಡಲು ರೈತರು ಸಿದ್ಧರಾಗಿದ್ದಾರೆ. ನೂತನ ಕೃಷಿ ಕಾಯ್ದೆಗಳ ಅನುಸಾರ ಮಾರುಕಟ್ಟೆ ನಿಯಂತ್ರಣ ನಿಯಮಗಳನ್ನು ಸಡಿಲಗೊಳಿಸಿದರೆ ಕೃಷಿ ಕ್ಷೇತ್ರದಲ್ಲಿ ಸ್ಥಳೀಯ ಉದ್ದಿಮೆಗಳೊಡನೆ ವಿದೇಶಿ ಕೃಷಿ ಉದ್ದಿಮೆಗಳೂ ಪ್ರವೇಶಿಸುತ್ತವೆ, ಇದರಿಂದ ಕನಿಷ್ಟ ಬೆಂಬಲ ಬೆಲೆ ಪದ್ಧತಿಗೂ ಪೆಟ್ಟಾಗುವುದಲ್ಲದೆ, ಸಾರ್ವಜನಿಕ ಸಂಗ್ರಹಣೆಯ ಪದ್ಧತಿಯೂ ಇಲ್ಲವಾಗುತ್ತದೆ ಎನ್ನುವ ರೈತರ ಆತಂಕ ನ್ಯಾಯಯುತವಾಗಿದೆ.

ಸಹಾಯಧನ ಪಡೆಯುವ ವಿದೇಶಿ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುವುದರಿಂದ ಭಾರತದಲ್ಲಿನ ಬಡ ಗ್ರಾಹಕರಿಗೆ ಅನುಕೂಲವಾಗುತ್ತದೆ ಎಂದು ಹಲವು ಕೃಷಿ ವಿಶ್ಲೇಷಕರು ಪ್ರತಿಪಾದಿಸುತ್ತಾರೆ. ಆದರೆ ಈ ಅಭಿವೃದ್ಧಿ ಹೊಂದಿದ ಶ್ರೀಮಂತ ರಾಷ್ಟ್ರಗಳಲ್ಲಿ ಹಸಿರು ಇಂಧನ ಬಳಕೆಯ ಆಗ್ರಹ ಹೆಚ್ಚಾಗುತ್ತಿದ್ದು ಹೆಚ್ಚಿನ ಪ್ರಮಾಣದ ಆಹಾರ ಧಾನ್ಯಗಳನ್ನು ಎಥನಾಲ್ ಉತ್ಪಾದನೆಗೆ ಬಳಕೆಯಾಗುತ್ತದೆ ಎನ್ನುವ ವಾಸ್ತವಾಂಶವನ್ನು ಈ ತಜ್ಞರು ಮರೆಮಾಚುತ್ತಿದ್ದಾರೆ.

ಹಾಗಾಗಿ ಇಂದು ಕಡಿಮೆ ಬೆಲೆಯ ಆಹಾರ ಧಾನ್ಯಗಳ ಆಮದು ಪ್ರಕ್ರಿಯೆಗೆ ಅವಕಾಶ ನೀಡಿದರೆ ಮುಂಬರುವ ದಿನಗಳಲ್ಲಿ ಇದರಿಂದ ಭಾರತದ ರೈತರು ವಿನಾಶದ ಅಂಚಿಗೆ ತಲುಪುವುದೇ ಅಲ್ಲದೆ, ಬೆಲೆ ಏರಿಕೆ ತೀವ್ರವಾಗಿ ಈ ಹಿಂದೆ ಕೆಲವು ಅಭಿವೃದ್ಧಿಶೀಲ ದೇಶಗಳು ಎದುರಿಸಿದ್ದ ಸಂಕಷ್ಟಗಳನ್ನೇ ಭಾರತವೂ ಎದುರಿಸಬೇಕಾಗುತ್ತದೆ. ತಮ್ಮ ಬೆವರು ಹರಿಸಿ ವ್ಯವಸಾಯದಲ್ಲಿ ತೊಡಗಿರುವ ಭಾರತದ ರೈತಾಪಿಯ ಬಗ್ಗೆ ಕಾಳಜಿ ಇರುವ ಯಾರೇ ಆದರೂ ಈ ಕೃಷಿ ಮಸೂದೆಗಳನ್ನು ವಿರೋಧಿಸುವುದೇ ಅಲ್ಲದೆ, ಸ್ಥಳೀಯ ಮತ್ತು ವಿದೇಶಿ ಉದ್ಯಮಿಗಳ ಕುತಂತ್ರಗಳ ವಿರುದ್ಧ ದನಿ ಎತ್ತಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ದಾವಣಗೆರೆ | ಪ್ರೊ. ಎಸ್.ಬಿ. ರಂಗನಾಥ್ ಅವರಿಗೆ ಕೇಂದ್ರ ಕ ಸಾ ಪ ದತ್ತಿ ಪ್ರಶಸ್ತಿ ಪ್ರದಾನ

Published

on

ಸುದ್ದಿದಿನ,ದಾವಣಗೆರೆ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಕ ಸಾ ಪ ಮಾಜಿ ಅಧ್ಯಕ್ಷ ಪ್ರೊ . ಎಸ್ ಬಿ ರಂಗನಾಥ್ ಅವರಿಗೆ ಕೇಂದ್ರ ಕ ಸಾ ಪ ದತ್ತಿನಿಧಿ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ತರಳಬಾಳು ಬಡಾವಣೆಯ ಅವರ ನಿವಾಸದಲ್ಲಿ ಜಿಲ್ಲಾ ಕ ಸಾ ಪ ಅಧ್ಯಕ್ಷ ಬಿ ವಾಮದೇವಪ್ಪ ಮತ್ತು ಪದಾಧಿಕಾರಿಗಳು ಇಂದು ಪ್ರದಾನ ಮಾಡಿ ಗೌರವಿಸಿದರು.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು  ಅನುವಾದ ಸಾಹಿತ್ಯಕ್ಕಾಗಿ ನೀಡುವ 2023ರ ‘ಶ್ರೀಮತಿ ಭಾರತಿ ಮೋಹನ ಕೋಟಿ ದತ್ತಿ ಪಶಸ್ತಿ’ ಗೆ  ಪ್ರೊ. ಎಸ್.ಬಿ.ರಂಗನಾಥ್  ಅನುವಾದಿಸಿದ ಖ್ಯಾತ ಲೇಖಕ ಶಶಿ ತರೂರು ಅವರ ‘ಕಗ್ಗತ್ತಲ ಕಾಲ’ ಕೃತಿಯು ಆಯ್ಕೆಯಾಗಿತ್ತು. ಶಶಿ ತರೂರ್ ಅವರ ಇಂಗ್ಲಿಷ್ An Era of Darkness ಎಂಬ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ಇದನ್ನು ಪ್ರೊ. ರಂಗನಾಥ್ ಅವರು ಕೊರೊನಾ ಕಾಲದ ಲಾಕ್ ಡೌನ್‌ ಸಂದರ್ಭದಲ್ಲಿ ಕನ್ನಡಕ್ಕೆ ಅನುವಾದಿಸಿದ್ದರು. 2022ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಈ ಕೃತಿಯನ್ನು ಪ್ರಕಟಿಸಿತ್ತು.

ಪ್ರೊ. ರಂಗನಾಥ್ ಇದುವರೆಗೂ ‘ಪ್ರಜಾವಾಣಿ ‘ ಯ ಅಂಕಣ ಬರಹಗಳ ಸಂಗ್ರಹ ‘ಎಲೆಲೆ ಮಧುಬಾಲೆ’, ‘ಕಚಗುಳಿ(ಗೆ) ಕಾಲ’ ಸೇರಿದಂತೆ ಹತ್ತು ಕೃತಿಗಳ ಲೇಖಕರು. ಬಂಗಾಳಿಯ ಪ್ರಸಿದ್ಧ ಕಾದಂಬರಿಗಳಾದ ‘ಭುವನ್ ಸೋಮ್’ , ‘ಪ್ರತಿದ್ವಂದಿ’ ಮುಂತಾದ ಏಳು ಕೃತಿಗಳನ್ನು ಅನುವಾದಿಸಿದ್ದಾರೆ.  ಇವರ ‘ ಟಿಪ್ಪು ಸುಲ್ತಾನನ ಖಡ್ಗ’ ಕೃತಿಯು ಮೂರು ಮುದ್ರಣಗಳನ್ನು ಕಂಡಿದೆ. ಇತ್ತೀಚೆಗೆ ಅನುವಾದಿಸಿದ ನಿವೃತ್ತ ಐ ಎ ಎಸ್ ಅಧಿಕಾರಿ ಎಂ ಮದನಗೋಪಾಲ್ ಅವರ ‘ಕಾಮನ ಬಿಲ್ಲನು ಬಂಬತ್ತಿ’ ಕೃತಿಯು ರಾಯಚೂರಿನಲ್ಲಿ ಲೋಕಾರ್ಪಣೆಗೊಂಡಿತ್ತು.

ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಪ್ರೊ.ಎಸ್.ಬಿ.ರಂಗನಾಥ್ ಅವರು ತಮ್ಮ ತೀವ್ರ ಅನಾರೋಗ್ಯದ ಕಾರಣದಿಂದ ಹಾಜರಿರಲು ಸಾಧ್ಯವಾಗಿರಲಿಲ್ಲ. ಈಗ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿಯವರ ನಿರ್ದೇಶನದ ಮೇರೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಎಸ್.ಬಿ.ರಂಗನಾಥ್ ಅವರ ನಿವಾಸಕ್ಕೆ ತೆರಳಿ ಅವರಿಗೆ ಪ್ರಶಸ್ತಿ ಫಲಕ ಮತ್ತು ಹತ್ತು ಸಾವಿರ ನಗದನ್ನು  ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪರಿಷತ್ತಿನ ಪದಾಧಿಕಾರಿಗಳಾದ ರಾಘವೇಂದ್ರ ನಾಯರ್, ಎಸ್ ಎಂ ಮಲ್ಲಮ್ಮ, ರುದ್ರಾಕ್ಷಿ ಬಾಯಿ ಪುಟ್ಟನಾಯಕ್, ತಾಲ್ಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ಕಾರ್ಯದರ್ಶಿಗಳಾದ ನಾಗರಾಜ ಸಿರಿಗೆರೆ, ದಾಗಿನಕಟ್ಟೆ ಪರಮೇಶ್ವರಪ್ಪ, ನಿರ್ದೇಶಕರಾದ ಷಡಾಕ್ಷರಪ್ಪ ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ನಾಳೆ ಡಾ.ಅಂಬೇಡ್ಕರ್ ಬರಹಗಳು ಮತ್ತು ಅವರ ಪ್ರಭಾವಿತ ಸಾಧಕರ ಸಂದರ್ಶನ ಸರಣಿ ಕಾರ್ಯಕ್ರಮ

Published

on

ಸುದ್ದಿದಿನ,ಭದ್ರಾವತಿ: ಆಕಾಶವಾಣಿ ಭದ್ರಾವತಿ ಕೇಂದ್ರದ 60ನೇ ವರ್ಷದ ವಜ್ರಮಹೋತ್ಸವದ ಅಂಗವಾಗಿ ಶಿವಮೊಗ್ಗದ ಕುವೆಂಪು ವಿ.ವಿ.ಯ ಡಾ. ಅಂಬೇಡ್ಕರ್ ಅಧ್ಯಯನ ಕೇಂದ್ರ ಸಹಯೋಗದಲ್ಲಿ ವಿಶ್ವ ಮಾನವ ಡಾ. ಅಂಬೇಡ್ಕರ್ ಅವರ ಬರಹಗಳು ಮತ್ತು ಅವರ ಪ್ರಭಾವಿತ ಸಾಧಕರ ಸಂದರ್ಶನ ಸರಣಿಯನ್ನು ಪ್ರಸಾರ ಮಾಡಲಿದ್ದು, ಜೂನ್ 11 ರಂದು ಬೆಳಗ್ಗೆ 7.15 ಕ್ಕೆ ಕುವೆಂಪು ವಿವಿಯ ಕುಲಪತಿ ಡಾ. ಶರತ್ ಅನಂತಮೂರ್ತಿ ಅವರ ಮುನ್ನುಡಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.

ಈ ಸರಣಿಯಲ್ಲಿ ಒಟ್ಟು 52 ಕಾರ್ಯಕ್ರಮಗಳಿದ್ದು, ಪ್ರತೀ ಮಂಗಳವಾರ ಬೆಳಗ್ಗೆ 7.15 ಕ್ಕೆ ಪ್ರಸಾರ ಮಾಡಲಿದೆ. ಪ್ರಭಾವಿತ ಮಹನೀಯರ ಅನಿಸಿಕೆಯನ್ನು ಹಂಚಿಕೊಳ್ಳುವುದರೊಟ್ಟಿಗೆ ದೇಶವಿದೇಶದ ಕೇಳುಗರು ತಮ್ಮ ಮೇಲೆ ಅಂಬೇಡ್ಕರ್ ಅವರ ಪ್ರಭಾವನ್ನೂ ಆಕಾಶವಾಣಿಯಲ್ಲಿ ಹಂಚಿಕೊಳ್ಳಲು ವಾಟ್ಸ್ ಆಪ್ ಮೂಲಕ ಅವಕಾಶ ಕಲ್ಪಿಸಿದೆ.

ಕಾರ್ಯಕ್ರಮವು FM 103.05 ಹಾಗೂ MW 675 khz ನಲ್ಲಿ ಕೇಳುವುದರೊಟ್ಟಿಗೆ ಜಗತ್ತಿನಾದ್ಯಂತ Akashavani Bhadravathi live streaming ಮತ್ತು prasarbharati news on air app ನಲ್ಲಿ ಪ್ರಸಾರ ಸಮಯದಲ್ಲಿ ಹಾಗೂ Akashavani Bhadravati YouTube ನಲ್ಲಿ ಪ್ರಸಾರದ ನಂತವೂ ಕೇಳಬಹುದು ಎಂದು ಕಾರ್ಯಕ್ರಮದ ಮುಖ್ಯಸ್ಥ ಎಸ್.ಆರ್. ಭಟ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಆತ್ಮಕತೆ | ಮಹಾರಾಜಾ ಕಾಲೇಜಿನಲ್ಲಿ ಉಪನ್ಯಾಸಕನಾಗಿ : 1974-1976

Published

on

  • ರುದ್ರಪ್ಪ ಹನಗವಾಡಿ

1967ರಲ್ಲಿ ಎಸ್.ಎಸ್.ಎಲ್.ಸಿ. ಪಾಸು ಮಾಡಿದ ದಿನಗಳಿಂದಲೂ ಮುಂದಿನ ಕಲಿಕೆಗಾಗಿ ಮೈಸೂರಿಗೇ ಹೋಗಬೇಕೆಂದು ಕನಸು ಕಾಣುತ್ತಿದ್ದ ನನಗೆ ಅಲ್ಲಿಯೇ ಓದಿ ನಂತರ ಅಧ್ಯಾಪಕ ವೃತ್ತಿ ದೊರೆತದ್ದು ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಪ್ರಿನ್ಸಿಪಾಲರಾದ ಎನ್. ಶಂಕರಲಿಂಗಯ್ಯನವರು, ರಾಜ್ಯಶಾಸ್ತ್ರದ ಪಾಠ ಮಾಡುತ್ತಿದ್ದರು. ಮತ್ತು ಆಡಳಿತಾಧಿಕಾರಿಯಾಗಿದ್ದ, ಜೆ. ಬಿಲ್ಲಯ್ಯನವರು ನಮ್ಮದೇ ಅರ್ಥಶಾಸ್ತ್ರ ವಿಷಯದಲ್ಲಿ ಅಧ್ಯಾಪಕರಾಗಿದ್ದವರು. ನಮ್ಮ ಅರ್ಥಶಾಸ್ತç ವಿಭಾಗದಲ್ಲಿ ಇಲಾಖಾ ಮುಖ್ಯಸ್ಥರಾಗಿದ್ದ ಪ್ರೊ. ಸಿದ್ದೇಗೌಡರು, ಮತ್ತು ಹರಿಚರಣ್ ನನಗೆ ಎರಡು ವರ್ಷಗಳ ಹಿಂದೆ ಗುರುಗಳಾಗಿದ್ದವರು, ಉಳಿದಂತೆ ಇನ್ನಿಬ್ಬರು ಮಹಿಳಾ ಅಧ್ಯಾಪಕರುಗಳು ಮತ್ತು ಎಂ.ಎ.ನಲ್ಲಿ ನನಗಿಂತ ಹಿರಿಯರಾಗಿದ್ದ ಕೆ.ಸಿ. ಬಸವರಾಜ್ ಕೂಡ ಅಧ್ಯಾಪಕರಾಗಿದ್ದರು.

ಬಿ.ಎ. ಮತ್ತು ಎಂ.ಎ. ತರಗತಿಗಳಲ್ಲಿ ಓದುವಾಗ ಪಠ್ಯಗಳಿಗಿಂತಲೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ನನಗೆ ಈಗ ಪಠ್ಯಕ್ರಮಕ್ಕನುಗುಣವಾಗಿ ಒಂದು ಗಂಟೆಗೆ ಬೇಕಾದ ತಯಾರಿಯೊಡನೆ ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಮಾಡುವುದು ಸವಾಲಿನ ಪ್ರಶ್ನೆಯಾಗಿತ್ತು. ಪ್ರತಿ ತರಗತಿಗಳಲ್ಲಿ 50-60 ವಿದ್ಯಾರ್ಥಿಗಳಿದ್ದು ಕೆಲವರು ನನಗಿಂತ ಹೆಚ್ಚಿನ ವಯಸ್ಸು ಮತ್ತು ದೈಹಿಕವಾಗಿ ಬಲವಾಗಿದ್ದವರು ಕೂಡ ಇದ್ದರು. ವಾರಕ್ಕೆ 16 ಗಂಟೆಗಳ ಪಾಠ ಮಾಡುವುದು ಎಲ್ಲ ಅಧ್ಯಾಪಕರಿಗೆ ನಿಗದಿಯಾಗಿತ್ತು. ಹೊಸ ಅಧ್ಯಾಪಕರುಗಳಿಗೆ ವಿಶೇಷವಾಗಿ ದ್ವಿತೀಯ ಮತ್ತು ಅಂತಿಮ ಬಿ.ಎ. ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ ಅಧ್ಯಾಪಕರಿಗೆ ತಬ್ಬಿಬ್ಬು ಮಾಡುವುದು ನನಗೆ ಕೂಡ ಗೊತ್ತಿದ್ದ ವಿಷಯವಾಗಿತ್ತು. ಆ ಕಾರಣದಿಂದಲೇ ಸರಿರಾತ್ರಿಯರೆಗೆ ಓದಿಕೊಂಡು ಸಜ್ಜಾಗಿಯೇ ತರಗತಿಗಳಿಗೆ ಹೋಗುತ್ತಿದ್ದೆ. ನಿಜವಾದ ಅರ್ಥಶಾಸ್ತçದ ವಿದ್ಯಾರ್ಥಿಯಾಗಿದ್ದುದು, ನಾನು ಅಧ್ಯಾಪಕನಾಗಿ ಸೇರಿದ ಮೇಲೆಯೆ ಎಂದು ನನಗನ್ನಿಸತೊಡಗಿತು. ಪಾಠಗಳನ್ನು ಶಿಸ್ತಿನಿಂದ ಮಾಡಿಕೊಂಡು ಬರುತ್ತಿದ್ದ ಕಾಲದಲ್ಲಿ ಅಂತಿಮ ಬಿ.ಎ. ವಿದ್ಯಾರ್ಥಿಗಳ ತರಗತಿಗಳು ಜೂನಿಯರ್ ಮತ್ತು ಸೀನಿಯರ್ ಹಾಲ್‌ಗಳಲ್ಲಿ ನಡೆಯುತ್ತಿದ್ದವು. ಆಗ ಪ್ರತಿ ಪಿರಿಯಡ್‌ಗೆ ಹಾಜರಾತಿ ತೆಗೆದುಕೊಳ್ಳುವ ಪರಿಪಾಠವಿತ್ತು. ನಾನು ಹಾಜರಾತಿ ತೆಗೆದುಕೊಂಡು ಪಾಠ ಮಾಡಲು ಪ್ರಾರಂಭಿಸಿದಾಗ ಕೆಲವು ವಿದ್ಯಾರ್ಥಿಗಳು ನಾವು ತರಗತಿಯಿಂದ ಹೊರ ಹೋಗಲು ಅನುಮತಿ ನೀಡಬೇಕೆಂದು ಕೋರಿದರು. ಅದರ ಉದ್ದೇಶ ನಿಮ್ಮ ಪಾಠದ ಅಗತ್ಯವಿಲ್ಲ ಎನ್ನೋ ಧೋರಣೆಯಿಂದ ಕೇಳಿದ ಅವರಿಗೆ ನಾನು, ನೀವು ಹೊರಗೆ ಹೋದರೆ ನಿಮ್ಮ ಹಾಜರಾತಿ ದಾಖಲೆ ಪುಸ್ತಕದಲ್ಲಿ ಗೈರು ಹಾಜರಿ ಎಂದು ನಮೂದಿಸುವುದಾಗಿ ಹೇಳಿದೆ.

ಅದಕ್ಕೇನು ಉತ್ತರಿಸದೆ ಹಾಗೆ ಹೊರಗೆ ಹೋದ ಹುಡುಗರು, ಮಾರನೆಯ ದಿನ ಪ್ರಿನ್ಸಿಪಾಲರಾಗಿದ್ದ ಶಂಕರಲಿಂಗಯ್ಯನವರಿಗೆ ಹೋಗಿ ನಾನು ಮಾಡುವ ಪಾಠ ಅರ್ಥವಾಗುತ್ತಿಲ್ಲ ಎಂದೂ ಇವರ ಬದಲು ಬೇರೆ ಅಧ್ಯಾಪಕರನ್ನು ನೇಮಿಸಲು ಮೌಖಿಕವಾಗಿ ಕೇಳಿದ್ದರು. ಪ್ರಿನ್ಸಿಪಾಲರು ಅಲ್ಲೇ ಗದರಿಸಿ ಕಳಿಸುವುದನ್ನು ಬಿಟ್ಟು ನನ್ನನ್ನು ಕರೆಸಿ ಚರ್ಚಿಸಿದರು. ನಾನು ನಡೆದ ವಿಚಾರವನ್ನು ತಿಳಿಸಿದೆ. ಆಯ್ತು ನಾನೇ ನಾಳೆ ನಿಮ್ಮ ಕ್ಲಾಸಿಗೆ ಬರುವೆ ಎಂದು ಹೇಳಿದ ಅವರು ಬಂದು ಕೂತರು. ಅದೇನು ಅವರಿಗೆ ಅನ್ನಿಸಿತೋ, ಅಂತೂ ಕೊನೆಗೆ ಇನ್ನೂ ಹೇಗೆ ಪಾಠ ಮಾಡಬೇಕು ನಿಮಗೆ? ಎಂದು ವಿದ್ಯಾರ್ಥಿಗಳಿಗೆ ಕ್ಲಾಸಿನಲ್ಲಿ ಹೇಳಿ ಹೊರಟು ಹೋದರು.

ಆ ನಂತರ ಬೇರಾವ ಕ್ಲಾಸಿನಲ್ಲಿಯೂ ಈ ರೀತಿಯ ಘಟನೆಗಳು ನಡೆಯಲಿಲ್ಲ ದಿನ ಕಳೆದಂತೆ ನನ್ನ ಆತ್ಮವಿಶ್ವಾಸವೂ ಹೆಚ್ಚಿ ವಿದ್ಯಾರ್ಥಿಗಳು ಆತ್ಮೀಯತೆಯಿಂದ ಸ್ಪಂದಿಸಿ ಆಸಕ್ತಿಯಿಂದ ಕಲಿಯುತ್ತಿದ್ದರು. ನಾನು ತಾತ್ಕಾಲಿಕವಾಗಿ ಮಹೇಶನ ರೂಂನಿಂದ ಕಾಲೇಜಿಗೆ ಓಡಾಡುತ್ತಿದ್ದು ಬೇರೆ ಮನೆ ಅಥವಾ ಪ್ರತ್ಯೇಕ ರೂಮಿಗಾಗಿ ಸರಸ್ವತಿಪುರಂನಲ್ಲಿ ಹುಡುಕುತ್ತಿದ್ದೆ. ಈ ಮಧ್ಯೆ ನನಗೆ ಸೋಷಿಯಾಲಜಿ ವಿಭಾಗದಲ್ಲಿ ಸಂಶೋಧನ ಸಹಾಯಕನಾಗಿದ್ದಾಗ ಪರಿಚಯವಾಗಿದ್ದ ಡಾ. ಪಿ.ಕೆ. ಮಿಶ್ರಾಜಿ ಅವರು ( Director for South Indian Anthropoligical Survey of India ) ಅವರೂ ಕೂಡ ಅಮೇರಿಕನ್ ಸ್ನೇಹಿತರೊಬ್ಬರಿಗೆ ಮನೆಯನ್ನು ಹುಡುಕುತ್ತಿದ್ದರು. ಹೀಗೆ ನಾನೂ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಸೇರಿದ ಬಗ್ಗೆ ತಿಳಿಸಿ ಮನೆ ಹುಡುಕುತ್ತಿರುವ ವಿಷಯ ತಿಳಿಸಿದಾಗ ನೀವಿಬ್ಬರು ಯಾಕೆ ಒಟ್ಟಿಗೆ ಇರುವ ಬಗ್ಗೆ ಯೋಚಿಸಬಾರದು ಎಂದು ಸಲಹೆ ನೀಡಿದರು. ಅದರಂತೆ ನನಗೆ ಸರಸ್ವತಿಪುರಂನ 15ನೇ ಮುಖ್ಯರಸ್ತೆಯಲ್ಲಿ ಒಂದು ಸ್ವತಂತ್ರ ಮನೆ ಬಾಡಿಗೆಗೆ ಸಿಕ್ಕಿತು. 300 ರೂಗಳ ಬಾಡಿಗೆ ಮನೆ ನನ್ನ ಕಾಲೇಜಿಗೂ ಹತ್ತಿರವಾಗಿತ್ತು.

ನನ್ನ ಜೊತೆ ಪ್ರೊ. ಮಿಶ್ರಾಜಿ ಅವರಿಗೆ ಪರಿಚಿತರಾದ ಅಮೇರಿಕಾದ ಒರೆಗಾನ್ ವಿಶ್ವವಿದ್ಯಾಲಯದಿಂದ ಬಂದ ಪ್ರೊ. ಪಾಲ್ ಇ. ಸೈಮನ್ಸ್ ಅವರು ಖ್ಯಾತ ಮಾನವಶಾಸ್ತ್ರದ ಅಧ್ಯಾಪಕರಾಗಿದ್ದು, ಅವರು ನನ್ನೊಟ್ಟಿಗೆ ಇರಲು ಒಪ್ಪಿದರು. ಅವರು ಮೈಸೂರಿಗೆ ಮಂಗಗಳ ಸ್ವಭಾವಗಳ ಮೇಲೆ ಅಧ್ಯಯನ ಮಾಡಲು ಬಂದಿದ್ದರು. ಬೆಳಿಗ್ಗೆ 7 ಗಂಟೆಗೆ ಎದ್ದು ಕುಕ್ಕರಹಳ್ಳಿ ಕೆರೆ ಮೇಲೆ ಓಡಾಡುವ ಮಂಗಗಳ ಬಗ್ಗೆ ತನ್ನ ಕ್ಯಾಮರಾ ತೆಗೆದುಕೊಂಡು ಸೈಕಲ್‌ನಲ್ಲಿ ಹೊರ ಹೋಗಿ 9 ಗಂಟೆಗೆ ಬಂದು ಅವರು ಬೆಳಗಿನ ಉಪಹಾರ ಮಾಡುತ್ತಿದ್ದರು. ಮಧ್ಯಾಹ್ನ ಹಣ್ಣು ಮತ್ತು ಜ್ಯೂಸಿನಲ್ಲಿ ಕಾಲ ಕಳೆದು ಸಂಜೆ 7 ಗಂಟೆಗೆ ಊಟ ಮಾಡುತ್ತಿದ್ದರು. ಮಧ್ಯಾಹ್ನ ಓದು ಮತ್ತು ಬೆಳಗಿನ ಸಮಯದಲ್ಲಿ, ನೋಡಿ ಬಂದ ಮಂಗಗಳ ಬಗೆಗೆ ತನ್ನ ಅಬ್ಸರ್‌ವೇಷನ್‌ಗಳನ್ನು ನೋಟ್ಸ್ ಮಾಡುತ್ತಿದ್ದರು. ಅವರೇ ನಿಗದಿಪಡಿಸಿದ ಊಟಿಯಿಂದ ಬಂದಿದ್ದ ಅಡುಗೆ ಭಟ್ಟ ಚೆನ್ನಾಗಿ ತಿಂಡಿ ಊಟಗಳ ವ್ಯವಸ್ಥೆ ಮಾಡುತ್ತಿದ್ದ. ಮೊದಲ ದಿನ ರಾತ್ರಿ ಊಟ ಮಾಡುವ ಸಮಯಕ್ಕೆ ನಾನು ಬರುವುದು ತಡವಾಯಿತು. ಆತ 7 ಗಂಟೆಗೆ ಊಟ ಮಾಡಿ ಮುಗಿಸಿದ್ದ. ನನಗೆ ದೊಡ್ಡ ತಟ್ಟೆಯಲ್ಲಿ ಮಾಂಸಾಹಾರದ ಅಡುಗೆಯನ್ನು ಬಡಿಸಿಟ್ಟು ನನ್ನ ಮುಂದೆ ಹಿಡಿದು Hope this is sufficeint for you ? ಎಂದು ಕೇಳಿದರು. ನಾನು ಉಂಡು ಇನ್ನೊಬ್ಬರಿಗೂ ಆಗಿ ಮಿಗುವಷ್ಟು ಅದರಲ್ಲಿತ್ತು. ನಾನು ಬಾಡಿಗೆ ಮತ್ತು ವಿದ್ಯುತ್ ವೆಚ್ಚಗಳನ್ನು ನೋಡಿಕೊಂಡರೆೆ ಉಳಿದಂತೆ ಇತರೆ ಎಲ್ಲಾ ಖರ್ಚುಗಳು ಸೈಮನ್ಸ್ ನೋಡಿಕೊಳ್ಳುವಂತೆ ಮಾತಾಡಿ ಹಂಚಿಕೊಂಡಿದ್ದೆವು.

ತಿಂಗಳಲ್ಲಿ ಒಂದೆರಡು ಬಾರಿ ಗುಂಡ್ಲುಪೇಟೆ ಕಡೆ ಹೋಗಿ ಮಂಗಗಳ ಕುರಿತು ಮಾಹಿತಿ ಕಲೆಹಾಕುತ್ತಿದ್ದರು. ನಾನು ಅಮೆರಿಕನ್ ಜೊತೆ ಪ್ರತ್ಯೇಕ ಅಡುಗೆಯವನೊಬ್ಬನನ್ನು ಇರಿಸಿಕೊಂಡು ಊಟ ಉಪಚಾರ ನಡೆಯುತ್ತಿದ್ದುದರ ಬಗ್ಗೆ ನಮ್ಮ ಮೈಸೂರಿನ ಹಿರಿಕಿರಿ ಸ್ನೇಹಿತರು ವಿಶೇಷವೆಂಬಂತೆ ವಿಚಾರಿಸುತ್ತಿದ್ದರು. ನನ್ನ ಅನೇಕ ಸಮಾಜವಾದಿ ಯುವಜನ ಸಭಾ ಮತ್ತು ದಲಿತ ವಿದ್ಯಾರ್ಥಿ ಮಿತ್ರರು ನನ್ನಲ್ಲಿಗೆ ಬಂದಾಗ ನಮ್ಮಲ್ಲಿಯೇ ಊಟ ತಿಂಡಿ ಮಾಡಿಕೊಂಡು ಹೋಗುತ್ತಿದ್ದರು.

ನಾನು 1974 ಡಿಸೆಂಬರ್ 4 ರಂದು ಅಧ್ಯಾಪಕ ವೃತ್ತಿಗೆ ಸೇರಿದ್ದು, ಮಾರ್ಚ್ ಅಥವಾ ಏಪ್ರಿಲ್ ಶೈಕ್ಷಣಿಕ ವರ್ಷದ ಕೊನೆಯಲ್ಲಿ ರಿಲೀವ್ ಮಾಡುತ್ತಿದ್ದರು. ಸ್ಥಳೀಯ ಅಭ್ಯರ್ಥಿಯಾಗಿ ತೆಗೆದುಕೊಂಡ ಎಲ್ಲ ವಿಷಯದ ಅಧ್ಯಾಪಕರುಗಳಿಗೂ ಇದೇ ವ್ಯವಸ್ಥೆ ಆಗ ಜಾರಿಯಲ್ಲಿತ್ತು. ಅದರಲ್ಲಿ ಆರು ತಿಂಗಳಿಗಿಂತ ಹೆಚ್ಚು ದಿನ ಕೆಲಸ ಮಾಡಿದವರಿಗೆ ಶೈಕ್ಷಣಿಕವಾಗಿದ್ದ ರಜೆಯಲ್ಲೂ ಬೇಸಿಗೆಯ ಸಂಬಳ ನೀಡುತ್ತಿದ್ದರು. ನಾನು ಆರು ತಿಂಗಳಿಗಿAತಲೂ ಕಡಿಮೆ ಅವಧಿಗೆ ಕೆಲಸ ಮಾಡಿದ್ದ ಕಾರಣಕ್ಕೆ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಸೇರಿಕೊಂಡಿದ್ದೆ. ಆ ಕಾರಣದಿಂದ ನನಗೆ ಮತ್ತೆ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಪುನರ್ ನೇಮಕವಾಗುವವರೆಗೂ ಸಂಬಳವಿರಲಿಲ್ಲ. ಸುಮಾರು 3-4 ತಿಂಗಳು ರಜೆ ಮತ್ತು ಖರ್ಚಿಗೆ ಹಣವಿಲ್ಲದೆ ಚಿಂತಿತನಾಗಿದ್ದಾಗ ಡಾ. ಮಿಶ್ರಾಜಿ ಅವರು ನನ್ನ ಸಹಾಯಕ್ಕೆ ಬಂದರು.

ಈ ಮೂರು ತಿಂಗಳ ಕಾಲ ನಾನು ಪಾಲ್ ಇ. ಸೈಮನ್ಸ್ ಅವರಿಗೆ ಅನುವಾದಕನಾಗಿ ಕೆಲಸಮಾಡಲು ಸೂಚಿಸಿದ್ದರು. ಅದಕ್ಕಾಗಿ ನನಗೆ ತಿಂಗಳಿಗೆ 500 ರೂ ಸಂಬಳವನ್ನು ನಿಗದಿಪಡಿಸಿದ್ದರು. ಅದೇನು ಕಟ್ಟುನಿಟ್ಟಿನ ಕೆಲವಲ್ಲದೆ, ಸೈಮನ್ಸ್ ಕೇಳುವ ವಿಷಯಗಳ ಕೆಲವು ಹಾಗೂ ಸ್ಥಳೀಯ ಪ್ರದೇಶದ ಬಗ್ಗೆ ಕೇಳಿದಾಗ ಕನ್ನಡದಲ್ಲಿ ವಿಷಯ ಸಂಗ್ರಹಿಸಿ ಇಂಗ್ಲಿಷ್‌ನಲ್ಲಿ ವಿವರಿಸಿ ಹೇಳುವಂತಹದ್ದಾಗಿತ್ತು. ಆಗ ಅದೊಂದು ಕಷ್ಟದ ಕೆಲಸವಾಗೇನೂ ನನಗೆ ಅನ್ನಿಸಿರಲಿಲ್ಲ. ಆದರೆ ಈ ಕೆಲಸ ನನಗೆ ಹಣದ ಬಿಕ್ಕಟ್ಟಿನಿಂದ ಪಾರು ಮಾಡಿತ್ತು. ಅದು ನನ್ನ ಬೇಸಿಗೆ ರಜೆಯಲ್ಲಿ ಸಿಗದ ಸಂಬಳದ ಕೊರತೆಯನ್ನು ಕೂಡ ನೀಗಿಸಿತ್ತು.
ಈ ಮಧ್ಯೆ ಮೂರು ತಿಂಗಳ ರಜೆಯಲ್ಲಿ ನಮ್ಮ ಊರಿಗೆ ಡಾ. ಮಿಶ್ರಾಜಿ ಅವರನ್ನು ಕರೆದುಕೊಂಡು ಹೋಗುವ ಅವಕಾಶವಾಯಿತು. 1975ರ ಬೇಸಿಗೆ ದಿನಗಳಲ್ಲಿ ನಮ್ಮೂರಿಗೆ ಹೊರಟಿದ್ದೆವು. 1975ರ ನಮ್ಮ ಊರಲ್ಲಿ ನಮಗಿದ್ದ ಒಂದು ಮಾಳಿಗೆ ಮನೆ, ದನ ಕರುಗಳನ್ನು ಕಟ್ಟಲು ಬೇರೆ ತಗಡಿನ ಮನೆ ಇದ್ದವು. ಬಂದ ಅತಿಥಿಗಳಿಗೆ ಅನುಕೂಲವಾಗಲೆಂದು ವಾಸ್ತವ್ಯಕ್ಕೆ ಪ್ರತ್ಯೇಕ ಕೊಠಡಿಗಳಾಗಲೀ, ಹಾಸಿಗೆ ದಿಂಬುಗಳಾಗಲೀ ಮನೆಯಲ್ಲಿರಲಿಲ್ಲ. ಆದರೂ ಅದಾವುದರ ಬಗ್ಗೆ ಚಿಂತಿಸದೆ ಅವರನ್ನು ನಮ್ಮ ಊರಿಗೆ ಕರೆದುಕೊಂಡು ಹೋಗಿದ್ದೆ. ರಾತ್ರಿಗೆ ಊರು ಸೇರಿದ್ದ ನಾವು ಮನೆಯಲ್ಲಿ ಊಟ ಮಾಡಿ ಪ್ರೊ. ಮಿಶ್ರಾಜಿ ಅವರಿಗೆ ನಮ್ಮ ಹೊರಗಿನ ಜಗಲಿಯ ಮೇಲೆ ಸೊಳ್ಳೆಪರದೆ ಕಟ್ಟಿ ಮಲಗುವ ವ್ಯವಸ್ಥೆ ಮಾಡಿದೆ. ಬೆಳಗಿನ ಅಗತ್ಯಗಳಿಗೆ ಅವರನ್ನು ಸೀದಾ ಕರೆದುಕೊಂಡು ನಮ್ಮೂರ ಹತ್ತಿರವೇ ಹರಿಯುತ್ತಿರುವ ಸೂಳೆಕೆರೆ ಹಳ್ಳಕ್ಕೆ ಹೋಗಿ ಬೆಳಗಿನ ಕಾರ್ಯಗಳನ್ನು ಮುಗಿಸಿಕೊಂಡು ಬಂದೆವು. ಮನೆಯಲ್ಲಿ ಮಾಡಿದ ತಿಂಡಿ ತಿಂದು ಊರಲ್ಲಿನ ಗೆಳೆಯರಾದ ದಾವಣಗೆರೆ ನಾಗರಾಜ, ಬಾರಿಕರ ಮಾಂತೇಶಿ, ಮತ್ತಿತರ ಗೆಳೆಯರ ಜೊತೆ ತೋಟಕ್ಕೆ ಹೋದೆವು.

ಪ್ರೊ. ಮಿಶ್ರಾಜಿ ಅವರು ಒಬ್ಬ ಸಮಾಜ ವಿಜ್ಞಾನಿ – ಸಂಶೋಧಕ ಹಾಗೂ ಸಾಮಾಜಿಕ ಸಮಸ್ಯೆಗಳ ಆಳವಾದ ಜ್ಞಾನ ಉಳ್ಳವರಾಗಿದ್ದರು. ಊರಲ್ಲಿನ ಸಾಮಾಜಿಕ ಶೈಕ್ಷಣಿಕ ಹಾಗೂ ಕೂಲಿ ಕಾರ್ಮಿಕರ ಸ್ಥಿತಿಗತಿಗಳನ್ನು ವಿಚಾರಿಸುತ್ತಾ ಸೂಕ್ಷö್ಮವಾಗಿ ಎಲ್ಲರನ್ನು ಗಮನಿಸುತ್ತಿದ್ದರು. ಡಿ. ನಾಗರಾಜು ನಾನು ಪ್ರಾಥಮಿಕ ಶಾಲೆಯಲ್ಲಿ ಸಹಪಾಠಿಯಾಗಿದ್ದು ಈಗ ಊರಲ್ಲಿಯೇ ವೀಳ್ಯದೆಲೆ ತೋಟ ಮಾಡಿಕೊಂಡು ಆರಾಮವಾಗಿದ್ದನು. ಅವರ ತೋಟದಲ್ಲಿ ತೆರೆದ ಬಾವಿಯಲ್ಲಿ ಮಿಶ್ರಾಜಿಯೂ ನಾನು ಸೇರಿದಂತೆ ನಾವೆಲ್ಲರು ಈಜಾಡಿದೆವು. ಆಗ ಹೊರಬಂದು ತೋಟದಲ್ಲಿನ ತೆಂಗಿನ ಮರಗಳಿಂದ ಇಳಿಸಿದ ತೆಂಗಿನ ಹೆಂಡವನ್ನು ಸವಿದೆವು. ಮನೆಯಿಂದ ರೊಟ್ಟಿ ಬುತ್ತಿಯನ್ನು ಅಲ್ಲಿಗೇ ತರಿಸಿದ್ದು, ವೀಳ್ಯದೆಲೆಯ ತೋಟದಲ್ಲಿ ಎಲ್ಲರೂ ಕೂತು ಊಟ ಮಾಡಿದೆವು. ಮಿಶ್ರಾಜಿ ಅವರು ಸಂತೋಷದಿಂದಲೇ ಇಡೀ ದಿನ ಕಳೆದರು. ಮಾತಿನ ಮಧ್ಯೆ ನಮ್ಮೂರಲ್ಲಿನ ಶ್ರೀಮಂತರು ಮತ್ತು ದೊಡ್ಡ ರೀತಿಯಲ್ಲಿ ಒಕ್ಕಲುತನ ಮಾಡುವ ಬಣಕಾರ ಸಿದ್ದಪ್ಪನವರನ್ನು ನೋಡುವ ಆಸೆ ವ್ಯಕ್ತಪಡಿಸಿದರು. ಪ್ರೊ. ಅವರನ್ನು ಅವರ ಮನೆಗೂ ಕರೆದುಕೊಂಡು ಹೋದೆ. ನಮ್ಮಪ್ಪನ ಬಹುದೊಡ್ಡ ವಿಶ್ವಾಸಿಕರಾಗಿದ್ದ ಬಣಕಾರ ಸಿದ್ದಪ್ಪನವರು ಮಿಶ್ರಾಜಿ ಅವರ ಜೊತೆ ಗ್ರಾಮೀಣ ಅರ್ಥವ್ಯವಸ್ಥೆಯ, ಕೂಲಿಕಾರ್ಮಿಕರ, ಹಬ್ಬಹರಿದಿನಗಳ ಕುರಿತು ದೀರ್ಘವಾಗಿ ಚರ್ಚಿಸಿದರು. ಕೊನೆಗೆ ಟೀ ಕುಡಿದು ಅವರ ಮನೆಯಿಂದ ವಾಪಸ್ ಬಂದೆವು.

 

ಸಂಜೆ ಸಮಯಕ್ಕೆ ನಮ್ಮೂರಿನಲ್ಲಿಯೇ ಹೊಸದಾಗಿ ಕಲಿತಿದ್ದ ಬ್ಯಾಂಡ್‌ಅನ್ನು ಅವರ ಮುಂದೆ ಬಾರಿಸಿದರು. ಆ ಕಾಲಕ್ಕೆ ದೇಶ ವಿದೇಶಗಳನ್ನು ಪ್ರವಾಸ ಮಾಡಿ ನಮ್ಮ ದೇಶದಲ್ಲಿನ ದಕ್ಷಿಣ ಭಾರತಕ್ಕೆ ಮಾನವಶಾಸ್ತçದ ಅಧ್ಯಯನಕ್ಕೆ ಮುಖ್ಯಸ್ಥರಾಗಿದ್ದ, ಜಾತಿಯಲ್ಲಿ ಅತ್ಯುನ್ನತವಾದ ಶ್ರೇಣಿಗೆ ಸೇರಿದ ಬ್ರಾಹ್ಮಣರಾಗಿದ್ದ ಪ್ರಾಧ್ಯಾಪಕರೊಬ್ಬರು ಯಾವ ಹಮ್ಮು ಬಿಮ್ಮುಗಳಿಲ್ಲದೆ ಸಾಮಾನ್ಯ ಹಳ್ಳಿಗೆ ಬಂದು ಊರಲ್ಲಿಯ, ನಮ್ಮ ಮನೆಯಲ್ಲಿಯೇ ಉಳಿದು ಹೋಗಿದ್ದು ನಮ್ಮೂರಿನ ಮತ್ತು ನನ್ನ ಜೀವನ ಕಾಲಘಟ್ಟದಲ್ಲಿ ಮರೆಯಲಾಗದ ಸವಿನೆನಪಾಗಿ ಉಳಿದಿದೆ. ಅವರ ಸರಳ, ಸಜ್ಜನಿಕೆಯ ವ್ಯಕ್ತಿತ್ವದಿಂದಾಗಿ ಅಂದು ಪರಿಚಯವಾಗಿ, ನನಗೆ ಬೌದ್ಧಿಕ ಮತ್ತು ಆರ್ಥಿಕವಾಗಿ ಶಕ್ತಿ ನೀಡಿ, 50 ವರ್ಷಗಳ ನಂತರ ಇಂದಿಗೂ ನನ್ನ ಮಾರ್ಗದರ್ಶಕ ಗುರುಗಳಾಗಿ ಉಳಿದಿರುವುದು ನನ್ನ ಜೀವನದ ಭಾಗ್ಯವೆಂದೇ ಭಾವಿಸಿದ್ದೇನೆ. ಅವರು ಮಾಡಿದ ಯಾವ ಸಹಾಯವನ್ನೂ, ತಾನು ಮಾಡಿದೆನೆಂಬ ಅಹಂ ಎಲ್ಲೂ ಸುಳಿಯುವುದಿಲ್ಲ. ಅಂದು ನನಗೆ ಸಿಕ್ಕ ಈ ಪ್ರೊಫೆಸರ್ ನಂತರ ನನ್ನ ಸ್ನೇಹ ಬಳಗದ ಮಾದೇವ, ಅರ್ಕೇಶ, ಮಹೇಶ, ಭಕ್ತ, ಗೊಟ್ಟಿಗೆರೆ ಶಿವರಾಜು ಎಲ್ಲರಿಗೂ ಸ್ನೇಹದ ಗುರುಗಳಾಗಿ ಇಂದಿಗೂ ಉಳಿದಿದ್ದಾರೆ. ಈಗಲೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳಿಗೆ ವಿಶೇಷ ಉಪನ್ಯಾಸಕರಾಗಿ ಹೋಗಿ ಬರುತ್ತಿರುವುದನ್ನ ನೋಡಿದರೆ ಆಶ್ಚರ್ಯವಾಗುತ್ತದೆ. ಅವರಿಗಿಂತ ಇಪ್ಪತ್ತು ವರ್ಷಗಳಷ್ಟು ಕಿರಿಯರಾದ ನಾವುಗಳು ಅವರನ್ನು ಇಂದಿಗೂ ಅನುಸರಿಸುತ್ತಾ ಜೀವನ ಸಾಗಿಸುತ್ತಿದ್ದೇವೆ.

ನಾನು ಅಧ್ಯಾಪಕನಾಗಿದ್ದ ಸಮಯದಲ್ಲಿ ಶೈಕ್ಷಣಿಕ ವರ್ಷ ಮುಗಿದು ಮೂರು ತಿಂಗಳ ರಜೆಯಲ್ಲಿ ಊರಿಗೆ ಹೋಗಿದ್ದೆ. ಆಗ ಪಾಲ್ ಇ. ಸೈಮನ್ಸ್ಗೆ ನಾನು ಅನುವಾದಕನಾಗಿ ಕೆಲಸವೊಂದನ್ನು ಮಾಡಲು ಪ್ರೊ. ಮಿಶ್ರಾಜಿ ಅವರು ಒಪ್ಪಿಸಿದ್ದರು ಎಂಬುದನ್ನು ಆಗಲೇ ಹೇಳಿದ್ದೇನೆ. ಅದನ್ನು ನಾನು ಮಾಡುತ್ತಿದ್ದೆನಾದರೂ ನನಗೆ ಪ್ರತಿ ತಿಂಗಳು ಮುಗಿದಾಕ್ಷಣ ಸಂಬಳ ನೀಡಿರಲಿಲ್ಲ. ಆದರೆ ನಾನು ನನ್ನ ಹಳ್ಳಿಯಲ್ಲಿ ಇರುವಾಗ ಮೂರು ತಿಂಗಳ ಒಟ್ಟು ಸಂಬಳ 1500 ರೂಪಾಯಿಗಳನ್ನು ನನ್ನ ವಿಳಾಸಕ್ಕೆ ಮನಿ ಆರ್ಡರ್ ಮುಖಾಂತರ ಕಳಿಸಿದ್ದರು. ನಮ್ಮೂರಿಗೆ ಆಗತಾನೆ ಹೊಸದಾಗಿ ಬಂದಿದ್ದ ಪೋಸ್ಟ್ ಆಫೀಸ್ ಮತ್ತು ಅದರ ಉಸ್ತುವಾರಿಯನ್ನು ನಮ್ಮ ಊರಿನ ಗೌಡ್ರ ಈರಣ್ಣ ಎಂಬುವವರು ನೋಡಿಕೊಳ್ಳುತ್ತಿದ್ದರು. ಅವರು ನನಗೆ ಬಂದ 1500ರೂಗಳಷ್ಟು ಮನಿ ಆರ್ಡರ್ ಹಣ ನೋಡಿ ಆಶ್ರ‍್ಯಗೊಂಡಿದ್ದರು. ಆಗ ನಮ್ಮೂರಿಗೆ ಹೆಚ್ಚೆಂದರೆ 50-100ರೂಗಳು ಎಂ.ಓ. ಗಳು ಬರುತ್ತಿದ್ದ ಕಾಲ. ಇಷ್ಟೊಂದು ಹಣ ಬರುವಷ್ಟು ಈ ಹುಡುಗ ಹೆಂಗೆ ಬೆಳೆದ ಎಂಬೆಲ್ಲ ಯೋಚನೆ ಮಾಡುತ್ತಾ ಊರಿಗೆಲ್ಲ ಸುದ್ದಿ ಮಾಡಿದ್ದ. ಆಗ ನಮ್ಮ ಅಪ್ಪ ಇನ್ನೂ ಸಕ್ರಿಯವಾಗಿ ಕೆಲಸ ಕಾರ್ಯ ಮಾಡುತ್ತಿದ್ದರು. ‘ಅದೇನಪ್ಪ ಅಷ್ಟೊಂದು ದುಡ್ಡು, ಕಳಿಸಿದರ‍್ಯಾರು?’ ಎಂದು ಅಪ್ಪ ಕೂಡ ಆಶ್ಚರ್ಯದಿಂದ ಕೇಳಿದ್ದರು. ಆಗ ಪಡೆದ 1500 ರೂಗಳನ್ನು ಎಂ.ಓ. ಮೂಲಕ ಬಂದು ನೀಡಿದ ಸಂತೋಷವನ್ನು ಅಳೆಯಲಾಗದು. ಎಲ್ಲ ಕೊರತೆಗಳ ಆಗರದಲ್ಲಿ ಹೋರಾಡುತ್ತಿದ್ದ ನನಗೆ ಅದೊಂದು ಯಾವ ಮಾಪಕದಿಂದಲೂ ಅಳಿಯಲಾಗದ ಶಕ್ತಿವರ್ಧಕ ಔಷಧಿಯಂತೆ ಹುರುಪು ನೀಡಿ ಊರಲ್ಲಿ ನನ್ನ ಗೌರವ ಬೆಳೆಸಿತ್ತು.

ಮುಂದುವರಿಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending