ಬಹಿರಂಗ
ಬೌದ್ಧಿಕ ಕ್ರೌರ್ಯವೂ ಮನದ ಮಾತಿನ ಮೌನವೂ
- ನಾ ದಿವಾಕರ
ತಣ್ಣನೆಯ ಮೌನ ಎಂತಹ ಭೀಭತ್ಸ ಕ್ರೌರ್ಯವನ್ನೂ ಮೀರಿಸುವಂತಹ ಬರ್ಬರ ಮನಸ್ಥಿತಿಯ ಸಂಕೇತ. ಭಾರತ ಮೂಲತಃ ಹಿಂಸೆಯ ನಾಡು. ಇಲ್ಲಿ ಹಿಂಸೆಯ ಪರಿಭಾಷೆ ಅಗೋಚರ ತಂತುಗಳಲ್ಲಿ ಅಡಗಿರುತ್ತದೆ. ಇತಿಹಾಸ ಕಾಲದಿಂದಲೂ ಭಾರತದ ಒಡಲಲ್ಲಿ ಈ ತಂತುಗಳು ನೆಲೆ ಕಂಡುಕೊಂಡಿವೆ.
ಪ್ರತ್ಯಕ್ಷವಾಗಿ ನಡೆಯುವ ಹಿಂಸೆಯನ್ನೂ ಸಾಪೇಕ್ಷ ನೆಲೆಯಲ್ಲಿ ನೋಡುವ ಮೂಲಕ ನಾವು ನಮ್ಮ ನಡುವಿನ ಅಹಿಂಸಾತ್ಮಕ ಧೋರಣೆಯನ್ನು ಮುನ್ನೆಲೆಗೆ ತರುತ್ತೇವೆ. ನಾವು ತೊಟ್ಟ ಅಥವಾ ತೊಡುವ ಮಸೂರಗಳು ಹಿಂಸೆ ಮತ್ತು ಅಹಿಂಸೆಯನ್ನು ನಿರ್ಧರಿಸುತ್ತವೆ. ಜಾತಿ ಶ್ರೇಣೀಕರಣದ ನೆಲೆಯಲ್ಲೇ ಭಾರತೀಯ ಸಮಾಜದಲ್ಲಿ ಹಿಂಸೆ ಮತ್ತು ಅಹಿಂಸೆಯ ವ್ಯಾಖ್ಯಾನಗಳೂ ಮೌಲ್ಯಯುತವಾಗಿಬಿಡುತ್ತವೆ.
ಭಾರತದ ಇತಿಹಾಸದಲ್ಲಿ ಅಹಿಂಸಾ ಬೋಧಕರು ಹೇರಳವಾಗಿ ಕಂಡುಬರುತ್ತಾರೆ. ಅಹಿಂಸೆಯನ್ನೇ ಮೂಲತತ್ವವನ್ನಾಗಿ ಬೋಧಿಸುವ ಜೈನ ಧರ್ಮವೂ ಭಾರತದಲ್ಲಿ ಹುಟ್ಟಿದೆ. ಇತರ ಯಾವುದೇ ದೇಶಗಳಿಗೆ ಹೋಲಿಸಿದರೆ ಇಲ್ಲಿ ಅಹಿಂಸೆಯ ಬೋಧನೆ ಹೆಚ್ಚು ಪರಿಣಾಮಕಾರಿಯಾಗಿದೆ. ಏಕೆಂದರೆ ಇಲ್ಲಿ ಹಿಂಸೆ ಸಮಾಜದ ಅಂತರ್ಗತ ಭಾಗವಾಗಿದೆ.
ಒಂದು ಸಂಸ್ಕøತಿಯಾಗಿದೆ. ಒಂದು ಒಪ್ಪಿತ ನಾಗರಿಕತೆಯೂ ಆಗಿದೆ. ಇಲ್ಲಿ ಹಿಂಸೆಯ ವ್ಯಾಖ್ಯಾನ, ಹಿಂಸೆಗೊಳಗಾದ ವ್ಯಕ್ತಿ, ಸಮುದಾಯ ಅಥವಾ ಅಸ್ಮಿತೆಗಳನ್ನಾಧರಿಸಿರುತ್ತದೆ. ಹಾಗಾಗಿಯೇ ಸಾರ್ವಜನಿಕ ಸಂಕಥನಗಳಲ್ಲಿ ಕೆಲವು ಹಿಂಸೆಗಳು ಸ್ವೀಕಾರಾರ್ಹ ಸಹಜ ಘಟನೆಗಳಾಗಿಬಿಡುತ್ತವೆ. ಅಥವಾ ಅನಿವಾರ್ಯ ಎನಿಸಿಬಿಡುತ್ತವೆ. ಕಾರಣ ಇಷ್ಟೆ, ಹಿಂಸೆಗೊಳಗಾದವರು ಒಂದು ಪ್ರಬಲ ವರ್ಗದ ದೃಷ್ಟಿಯಲ್ಲಿ ಅರ್ಹರೂ ಆಗಿಬಿಡುತ್ತಾರೆ. ಈ ಪ್ರಬಲ ವರ್ಗವೇ ದೇಶದ ಸಾರ್ವಜನಿಕ ಅಭಿಪ್ರಾಯದ ಜನಕ ಆಗಿರುತ್ತದೆ.
ಹಾಗಾಗಿಯೇ ಶತಮಾನಗಳ ನಂತರವೂ ಭಾರತೀಯ ಸಮಾಜದಲ್ಲಿ ಹಿಂಸೆ ಮತ್ತು ಅಹಿಂಸೆಯ ವ್ಯಾಖ್ಯಾನಕ್ಕೆ ಒಂದು ಮಾನವೀಯ ಸಂವೇದನೆಯ ಸ್ಪರ್ಶ ಇರಲೇ ಇಲ್ಲ. ದೇಶದ ಬಹುಸಂಖ್ಯಾತ ಜನರನ್ನು , ಮೂಲ ನಿವಾಸಿಗಳನ್ನು ಶೋಷಿತರಾಗಿಯೇ ಮುಂದುವರೆಸಿ ಶಿಕ್ಷಣ ಮತ್ತು ಸಾಮಾಜಿಕ ಘನತೆಯಿಂದ ವಂಚಿತರನ್ನಾಗಿ ಮಾಡಿದ್ದು ನಮ್ಮ ಲಿಖಿತ ಇತಿಹಾಸದಲ್ಲಿ ಹಿಂಸೆಯ ಚೌಕಟ್ಟಿನಲ್ಲಿ ಚರ್ಚೆಗೊಳಗಾಗಿಲ್ಲ.
ಪೇಶ್ವೆಯರ ಆಡಳಿತದಲ್ಲಿ ನಡೆಯುತ್ತಿದ್ದ ಜಾತಿ ದೌರ್ಜನ್ಯಗಳು ಇಂದಿಗೂ ಸಹ ಹಿಂಸೆಯ ಪರಿಕಲ್ಪನೆಯಲ್ಲಿ ವ್ಯಾಖ್ಯಾನಕ್ಕೊಳಗಾಗಿಲ್ಲ. ಈ ಅಮಾನುಷ ಪದ್ಧತಿಗಳನ್ನು ಭಾರತೀಯ ಸಮಾಜದ ನ್ಯೂನತೆ ಎಂದಷ್ಟೇ ಗುರುತಿಸಲಾಗುತ್ತಿದೆಯೇ ಹೊರತು, ಇದು ಭಾರತೀಯ ಶ್ರೇಣೀಕೃತ ಸಮಾಜದಲ್ಲಿ ಅಂತರ್ಗತವಾಗಿದ್ದ ಬೌದ್ಧಿಕ ಕ್ರೌರ್ಯ ಮತ್ತು ಹಿಂಸಾತ್ಮಕ ಧೋರಣೆಯ ಒಂದು ಆಯಾಮ ಎನ್ನುವ ವಿಶ್ಲೇಷಣೆಗಳು ಅಪರೂಪ.
ಈ ಬೌದ್ಧಿಕ ದಾರಿದ್ರ್ಯಕ್ಕೆ ಮೂಲ ಕಾರಣ ಎಂದರೆ ನಾವು ನಮ್ಮ ಸಮಾಜದಲ್ಲಿನ ಬೌದ್ಧಿಕ ಹಿಂಸೆ ಮತ್ತು ಕ್ರೌರ್ಯವನ್ನು ವ್ಯವಸ್ಥೆಯ ಒಂದು ಲೋಪ ಎಂದೇ ಭಾವಿಸಿದ್ದೇವೆಯೇ ಹೊರತು, ಇದು ಒಂದು ಸಮಾಜೋ ಸಾಂಸ್ಕೃತಿಕ ವ್ಯಸನ ಎಂದು ಭಾವಿಸಿಯೇ ಇಲ್ಲ.
ಹಾಗಾಗಿ ಸಮಕಾಲೀನ ಸಂದರ್ಭದಲ್ಲಿ ನಡೆದಿರುವ ಮತ್ತು ಈ ಹೊತ್ತಿನಲ್ಲೂ ಕಂಡುಬರುತ್ತಿರುವ ಕ್ರೌರ್ಯ ಮತ್ತು ಹಿಂಸೆ ಆಳುವ ವರ್ಗಗಳ ದೃಷ್ಟಿಯಲ್ಲಿ ಕಾನೂನು ಸಮಸ್ಯೆಯಾಗಿ ಕಂಡುಬಂದರೆ, ಸಮಾಜದ ದೃಷ್ಟಿಯಲ್ಲಿ ಸಹಜ ಸ್ವಾಭಾವಿಕ ಘಟನೆಗಳಾಗಿ ಕಂಡುಬರುತ್ತವೆ. ಹಥ್ರಾಸ್ ನಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆ, ಊನ ಗ್ರಾಮದಲ್ಲಿ ವ್ಯವಸ್ಥಿತ ಹಲ್ಲೆಗೊಳಗಾದ ಅಸ್ಪøಶ್ಯರು, ಒಂದು ಮಾಂಸದ ತುಂಡಿಗೆ ಬಲಿಯಾದ ಅಕ್ಲಾಖ್ ಮತ್ತು ಮಲಗುಂಡಿಯಲ್ಲಿ ಬಿದ್ದು ಅಸುನೀಗುತ್ತಿರುವ ಸ್ವಚ್ಚತಾ ಕಾರ್ಮಿಕರು ಹಿಂಸೆಯ ವ್ಯಾಖ್ಯಾನಕ್ಕೆ ಒಳಪಡುವುದಿಲ್ಲ.
21ನೆಯ ಶತಮಾನದ ಮೂರನೆಯ ದಶಕದಲ್ಲೂ ಅಸ್ಪೃಶ್ಯ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯ ಭಾರತೀಯ ಸಮಾಜದ ಅಭಿಪ್ರಾಯ ಜನಕರಿಗೆ ಹಿಂಸೆ ಎನಿಸುವುದಿಲ್ಲ. ಕೇವಲ ಒಂದು ಬಗೆಹರಿಸಬಹುದಾದ ಸಮಸ್ಯೆ ಎನಿಸುತ್ತದೆ. ಕಾಶ್ಮೀರದ ಉಗ್ರಗಾಮಿಗಳಿಂದ ನಡೆಯುವ ಹತ್ಯೆಗಳು ಹಿಂಸೆಯ ಪರಾಕಾಷ್ಠೆ ಎನಿಸುತ್ತದೆ.
ಕಂಬಾಲಪಲ್ಲಿ, ಕರಂಚೇಡು, ಖೈರ್ಲಾಂಜಿ, ಲಕ್ಷ್ಮಣಪುರಬಾತೆ, ಬತಾನಿತೊಲ, ತ್ಸೆಂಡೂರು ಇವಾವುದೂ ಹಿಂಸಾಕಾಂಡ ಎನಿಸುವುದಿಲ್ಲ. ಹತ್ತಾರು ಜನರನ್ನು ಬಲಿತೆಗೆದುಕೊಂಡ ಮುಂಬೈ ಭಯೋತ್ಪಾದಕ ದಾಳಿ ಶತಮಾನಗಳ ಕಾಲ ಭಾರತದ ಭೂಪಟದಲ್ಲಿ ಕಪ್ಪುಚುಕ್ಕೆಯಾಗುವಂತಹ ಹಿಂಸಾಕಾಂಡದಂತೆ ಕಾಣುತ್ತದೆ. ಸಾವಿರಾರು ಅಮಾಯಕರನ್ನು ಬಲಿಪಡೆದ ಗುಜರಾತ್ ಹಿಂಸಾಕಾಂಡ ರಾಜಧರ್ಮದ ವೈಫಲ್ಯದಂತೆ ಮಾತ್ರವೇ ಕಾಣುತ್ತದೆ.
ಹಿಂಸೆಯನ್ನು ನಾವು ಹೇಗೇ ಸಾಪೇಕ್ಷಗೊಳಿಸಿಬಿಟ್ಟಿದ್ದೇವೆ ಎನ್ನಲು ಇದಕ್ಕಿಂತಲೂ ಉತ್ತಮ ನಿದರ್ಶನ ಬೇಕಿಲ್ಲ. ಹಿಂಸೆಗೊಳಗಾಗುವವರು ಯಾರು ಮತ್ತು ಹಿಂಸೆಯ ಜನಕರು ಯಾರು ಎನ್ನುವ ಪ್ರಶ್ನೆಗಳೇ ನಮ್ಮ ದೇಶದಲ್ಲಿ ಕ್ರೌರ್ಯ ಮತ್ತು ಹಿಂಸೆಯ ಸಂಕಥನವನ್ನು ರೂಪಿಸುತ್ತದೆ. ಇದು ಮನುವಾದಿ ಬ್ರಾಹ್ಮಣ್ಯದ ಒಂದು ಚಾರಿತ್ರಿಕ ಕೊಡುಗೆಯಾದರೆ ಮತ್ತೊಂದೆಡೆ ಭಾರತೀಯ ಸಮಾಜದಲ್ಲಿ ಬೇರೂರಿರುವ ಊಳಿಗಮಾನ್ಯ ಧೋರಣೆಯ ಕೊಡುಗೆಯೂ ಹೌದು. ಕೋವಿದ್ ಸಂದರ್ಭದಲ್ಲಿ ಮೂರು ತಿಂಗಳ ಲಾಕ್ ಡೌನ್ ಬಂಧನದಿಂದ ಕಂಗೆಟ್ಟು ವಿಚಲಿತವಾದ ಒಂದು ಸಮಾಜಕ್ಕೆ ಕಾಶ್ಮೀರದ ಜನತೆ ಒಂದು ವರ್ಷದ ಕಾಲ ದಿಗ್ಬಂಧನಕ್ಕೆ ಒಳಗಾಗಿದ್ದುದು ಹಿಂಸೆ ಎನಿಸಲೇ ಇಲ್ಲ.
ಕಾರಣ ಏನೆಂದರೆ ದೈಹಿಕ ಹಿಂಸೆಯನ್ನಷ್ಟೇ ನಾವು ಹಿಂಸೆಯ ಪರಿಭಾಷೆಯಲ್ಲಿ ವ್ಯಾಖ್ಯಾನಿಸುತ್ತೇವೆ. ಬೌದ್ಧಿಕ ಹಿಂಸೆಯನ್ನು ಮಾನವ ಸಹಜ ಕ್ರಿಯೆ ಎಂದು ಭಾವಿಸಿಬಿಡುತ್ತೇವೆ. ಭಾರತದ ಶ್ರೇಣೀಕೃತ ಸಮಾಜದಲ್ಲಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ನರನಾಡಿಗಳಲ್ಲಿ ಹರಿಯುತ್ತಿರುವುದು ಬೌದ್ಧಿಕ ಕ್ರೌರ್ಯ ಮತ್ತು ಮಿದುಳಿನಲ್ಲಿ ಸದಾ ಜಾಗೃತವಾಗಿರುವುದು ಬೌದ್ಧಿಕ ಹಿಂಸೆ.
ಹಾಗಾಗಿಯೇ ತಲೆಯ ಮೇಲೆ ಮಲ ಹೊರುವುದು ನಮಗೆ ಕಸುಬು ಎನಿಸುತ್ತದೆ, ಹಿಂಸೆ ಎನಿಸುವುದಿಲ್ಲ. ಈ ಧೋರಣೆಯ ಒಂದು ಆಯಾಮವನ್ನು ನಾವು ಇಂದಿನ ರೈತ ಹೋರಾಟದ ನಡುವೆ ಕಾಣುತ್ತಿದ್ದೇವೆ. ಒಂದು ಪ್ರಜಾಸತ್ತಾತ್ಮಕ ದೇಶದ ಆಡಳಿತ ವ್ಯವಸ್ಥೆಯಲ್ಲಿ ಊಹಿಸಲೂ ಸಾಧ್ಯವಾಗದ ಮಟ್ಟಿಗೆ ಬೌದ್ಧಿಕ ಕ್ರೌರ್ಯ ನೆಲೆ ಮಾಡಿರುವುದನ್ನು ಭಾರತ ಸರ್ಕಾರದ ಧೋರಣೆಯಲ್ಲಿ ಕಾಣುತ್ತಿದ್ದೇವೆ.
ನವಂಬರ್ 26 , 2020ರಂದು ಆರಂಭವಾದ ರೈತರ ಪ್ರತಿಭಟನೆಗೆ ಇಂದಿಗೆ 40 ದಿನಗಳಾಗುತ್ತದೆ. ಒಂದು ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡುವ ಸಾರ್ವಭೌಮ ಪ್ರಜೆಗಳ ನಡುವೆ ಉಗ್ರಗಾಮಿಗಳನ್ನು, ಭಯೋತ್ಪಾದಕರನ್ನು ಹೆಕ್ಕಿ ತೆಗೆಯುವಷ್ಟು ಕ್ರೌರ್ಯ ಭಾರತದ ಮಣ್ಣಲ್ಲಿ ಇರಲು ಸಾಧ್ಯವೇ ? ಹೌದು ಎಂದೇ ಹೇಳಬೇಕಾಗುತ್ತದೆ.
ಏಕೆಂದರೆ ಇದೇ ಆಡಳಿತ ವ್ಯವಸ್ಥೆಯಲ್ಲಿ ಹತ್ತು, ಹದಿನೈದರ ಹರೆಯದ ಮಕ್ಕಳೂ ಉಗ್ರಗಾಮಿಗಳ ಪಟ್ಟಿಗೆ ಸೇರಿ ಗುಂಡೇಟಿಗೆ ಬಲಿಯಾಗಿದ್ದಾರೆ. ಇದೇ ಆಡಳಿತ ವ್ಯವಸ್ಥೆಯಲ್ಲಿ ಸಜೀವ ದಹನಕ್ಕೊಳಗಾದ ಅಮಾಯಕ ಜೀವಗಳು ನ್ಯಾಯವಂಚಿತವಾಗುತ್ತವೆ. ತಮ್ಮ ಸಾಂವಿಧಾನಿಕ ಮತ್ತು ಶೈಕ್ಷಣಿಕ ಹಕ್ಕುಗಳಿಗಾಗಿ ಹೋರಾಡುವ ವಿದ್ಯಾರ್ಥಿ ಯುವಜನರಲ್ಲಿ “ ನಗರ ನಕ್ಸಲರನ್ನು ತುಕಡೆ ತುಕಡೆ ಗುಂಪನ್ನು ” ಗುರುತಿಸಲಾಗುತ್ತದೆ.
ಇದೇ ಮಣ್ಣಲ್ಲಿ, ತಮ್ಮ ಅರಣ್ಯ ಹಕ್ಕುಗಳಿಗಾಗಿ, ಬದುಕುವ ಹಕ್ಕುಗಳಿಗಾಗಿ ಹೋರಾಡುವ ಆದಿವಾಸಿಗಳನ್ನು ಉಗ್ರಗಾಮಿಗಳಂತೆ ಕಾಣಲಾಗುತ್ತದೆ. ನಿಷ್ಕಾರುಣ್ಯವಾಗಿ ಅವರ ಶತಮಾನಗಳ ಮೂಲ ನೆಲೆಗಳನ್ನು ಧ್ವಂಸ ಮಾಡಲಾಗುತ್ತದೆ. ಇದೇ ಮಣ್ಣಿನಲ್ಲಿ ಒಂದು ಪ್ರಾಣಿಯ ಪಾವಿತ್ರ್ಯತೆಗಾಗಿ ನೂರಾರು ಮನುಜ ಜೀವಗಳನ್ನು ಬಲಿ ಕೊಡಲಾಗುತ್ತದೆ.
ಇದೇ ಮಣ್ಣಿನಲ್ಲಿ ಜಾತಿ, ಮತಧರ್ಮ ಮತ್ತು ಸಂಸ್ಕೃತಿ ರಕ್ಷಣೆಗಾಗಿ ನರಬಲಿ ನೀಡುವುದನ್ನು ಸಹಜ ಪ್ರಕ್ರಿಯೆಯಂತೆ ಸ್ವೀಕರಿಸಲಾಗಿದೆ. ಒಂದು ಪೂಜಾ ಸ್ಥಳ, ಒಂದು ಮಂದಿರ, ಒಂದು ಮಸೀದಿ ಅಥವಾ ಇಗರ್ಜಿ ಹಲವು ಜೀವಗಳಿಗೆ ಪ್ರಾಣಾಂತಿಕವಾಗುವ ಒಂದು ಸಮಾಜೋ ಸಾಂಸ್ಕøತಿಕ ವ್ಯವಸ್ಥೆಯನ್ನೂ ನಾವು ಕಂಡಿದ್ದೇವೆ. ಈ ವಿದ್ಯಮಾನಗಳಲ್ಲಿ ಕಂಡುಬರುವ ದೈಹಿಕ ಹಿಂಸೆಗಿಂತಲೂ ನಮ್ಮನ್ನು, ಅಂದರೆ ನಾಗರಿಕ ಪ್ರಜ್ಞೆ ಇರುವ ಜನರನ್ನು, ಹೆಚ್ಚು ಕಾಡಬೇಕಿರುವುದು ಈ ಮನಸುಗಳಲ್ಲಿ ಅಂತರ್ಗತವಾಗಿರುವ ಬೌದ್ಧಿಕ ಕ್ರೌರ್ಯ ಮತ್ತು ಹಿಂಸೆ.
ಈ ಬೌದ್ಧಿಕ ಕ್ರೌರ್ಯವನ್ನು ನಾವಿಂದು ಸಂಸದೀಯ ಪ್ರಜಾತಂತ್ರದ ಕಟಕಟೆಯಲ್ಲಿ ಕಾಣುತ್ತಿದ್ದೇವೆ. ಭಾರತದ ಪ್ರಜಾಸತ್ತಾತ್ಮಕ ಗಣತಂತ್ರ ವ್ಯವಸ್ಥೆಯ ಆವರಣದಲ್ಲಿ ಕಾಣುತ್ತಿದ್ದೇವೆ. ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತ ಚಳುವಳಿ ಈಗಾಗಲೇ ನಮ್ಮ ಆಡಳಿತ ವ್ಯವಸ್ಥೆಯ ನಿರ್ವೀರ್ಯತೆ, ನಿರ್ಲಜ್ಜತೆ ಮತ್ತು ಕ್ರೂರ ಮುಖವಾಡವನ್ನು ಕಳಚಿಹಾಕಿದೆ.
ರಾಜಧಾನಿಯ ನಾಲ್ಕೂ ಕಡೆ ನೆರೆದಿರುವ ಲಕ್ಷಾಂತರ ರೈತಾಪಿಯ ನಡುವೆ ಖಲಿಸ್ತಾನಿಗಳು, ಭಯೋತ್ಪಾದಕರು, ಉಗ್ರಗಾಮಿಗಳು, ನಗರ ನಕ್ಸಲರು, ದೇಶದ್ರೋಹಿಗಳು ಅಥವಾ ‘ ತುಕಡೆ ತುಕಡೆ ಗುಂಪುಗಳು’ ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಏಕೆಂದರೆ ಈ ಹೋರಾಟಗಾರರೊಡನೆ ಕೇಂದ್ರ ಸಚಿವರು ಭೋಜನದ ಸವಿ ಉಂಡಿದ್ದಾರೆ. ಆದರೂ ಈ ನೊಂದ ಜೀವಗಳಿಗೆ ಒಂದು ಮಾನವೀಯ ಸ್ಪಂದನೆ, ಅವರ ಸಮಸ್ಯೆಗಳಿಗೆ ಸಂವೇದನಾಶೀಲ ಸ್ಪರ್ಶ ದೊರೆಯುತ್ತಿಲ್ಲ.
ಈ ಹೋರಾಟ ತಡೆಯಲಸಾಧ್ಯವಾದ ಚಳಿಯಲ್ಲಿ ನಡೆಯುತ್ತಿದೆ, ಕಳೆದ ಹಲವು ದಿನಗಳಿಂದ ಮಳೆಯ ಪ್ರಮಾಣ, ಶೀತಲ ಗಾಳಿ ಹೆಚ್ಚಾಗಿದೆ. ಈಗಾಗಲೇ 50ಕ್ಕೂ ಹೆಚ್ಚು ರೈತರು ಅಸುನೀಗಿದ್ದಾರೆ. ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರದಲ್ಲಿ ಒಂದು ಸರ್ವಾಧಿಕಾರಿ ಆಡಳಿತವೇ ಇದ್ದಿದ್ದರೂ ಬಹುಶಃ, ಮೂರು ಕೃಷಿ ಮಸೂದೆಗಳನ್ನು ಭಿನ್ನಾಭಿಪ್ರಾಯಗಳು ಬಗೆಹರಿಯುವವರೆಗೂ ಅಮಾನತಿನಲ್ಲಿರಿಸುವ ಆಶ್ವಾಸನೆ ನೀಡಿ ಮುಷ್ಕರ ಕೊನೆಗೊಳಿಸಲು ಯತ್ನಿಸುತ್ತಿತ್ತು.
ಆದರೆ ಒಂದು ಚುನಾಯಿತ ಸರ್ಕಾರ ಈ ಕನಿಷ್ಠ ಪ್ರಜ್ಞೆಯನ್ನೂ ಕಳೆದುಕೊಂಡಿದೆ. ಮುಷ್ಕರ ನಿರತ ರೈತರ ಬಳಿಗೆ ಖುದ್ದಾಗಿ ಒಮ್ಮೆ ಭೇಟಿ ನೀಡುವ ಸಂಯಮವೂ ಇಲ್ಲದ ಪ್ರಧಾನಮಂತ್ರಿ, ಕನಿಷ್ಟ ಮಡಿದ ರೈತರಿಗೆ ಅನುಕಂಪ ಸೂಚಿಸುವ ಮಾತುಗಳನ್ನೂ ಆಡದಿರುವುದು ಈ ದೇಶದ ಆಡಳಿತ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಬೌದ್ಧಿಕ ಕ್ರೌರ್ಯವನ್ನು ಸೂಚಿಸುತ್ತದೆ.
ದೆಹಲಿ ಗಡಿಯಲ್ಲಿ ಸಂಭವಿಸಿರುವ ಸಾವುಗಳು ವ್ಯವಸ್ಥೆಯ ನಿಷ್ಕ್ರಿಯತೆಯ ಫಲ ಎಂದರೂ ತಪ್ಪೇನಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹಠಮಾರಿ ಧೋರಣೆ ಸಲ್ಲದು ಎನ್ನುವ ಕನಿಷ್ಟ ನಾಗರಿಕ ಪ್ರಜ್ಞೆ ಆಡಳಿತ ನಿರ್ವಹಣೆ ಮಾಡುವವರಲ್ಲಿ ಇರಬೇಕಲ್ಲವೇ ? ಹೆಂಗಸರು, ಮಕ್ಕಳು, ವೃದ್ಧರು, ಯುವಕರು, ನಿವೃತ್ತ ಯೋಧರು ಹೀಗೆ ವಯೋಮಾನ, ಲಿಂಗ, ಜಾತಿ, ಧರ್ಮ ಯಾವುದೇ ಬೇಧವಿಲ್ಲದೆ ರೈತರು ತಮ್ಮ ಹೋರಾಟ ಮುಂದುವರೆಸಿದ್ದಾರೆ.
ಕೊರೆವ ಚಳಿಯಲ್ಲಿ, ಸುರಿವ ಮಳೆಯ ನಡುವೆ ತಮ್ಮವರನ್ನು ಕಳೆದುಕೊಳ್ಳುತ್ತಿರುವ ರೈತರನ್ನು ಕುರಿತು “ ನೀವು ಮುಷ್ಕರ ಹಿಂಪಡೆಯಿರಿ, ನಿಮ್ಮ ಅನುಮಾನಗಳನ್ನು ಪರಿಶೀಲಿಸುತ್ತೇವೆ, ಅಲ್ಲಿಯವರೆಗೂ ಮೂರು ಕೃಷಿ ಮಸೂದೆಗಳ ಅನುಷ್ಟಾನವನ್ನು ತಡೆಹಿಡಿಯುತ್ತೇವೆ ” ಎಂದು ಹೇಳಿದ್ದರೂ ಸಾಕಿತ್ತು, ಈ ಸರ್ಕಾರಕ್ಕೆ ಮತ್ತು ಸರ್ಕಾರವನ್ನು ನಿರ್ವಹಿಸುವವರಿಗೆ ಮನುಷ್ಯತ್ವ ಇದೆ ಎಂದು ಹೇಳಬಹುದಿತ್ತು.
ಲಾಕ್ ಡೌನ್ ಸಂದರ್ಭದಲ್ಲಿ ಮಡಿದ 25ಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಪರಿಹಾರ ನೀಡಲೂ ಒಪ್ಪದ ಕೇಂದ್ರ ಸರ್ಕಾರ, ಈ ಕುರಿತ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಕೈತೊಳೆದುಕೊಂಡಿತ್ತು. ಈಗ ರಾಜಧಾನಿಯ ಪಕ್ಕದಲ್ಲೇ ರೈತರು ಸಾಯುತ್ತಿದ್ದಾರೆ, ನಮ್ಮ ಪ್ರಧಾನಮಂತ್ರಿಯವರು ತಮ್ಮ ಮನದ ಮಾತಿನಲ್ಲಿ ಮಾರುಕಟ್ಟೆಗೆ ಸಾಂತ್ವನದ ಮಾತುಗಳನ್ನಾಡುತ್ತಿದ್ದಾರೆ.
25 ವರ್ಷಗಳಲ್ಲಿ ಆತ್ಮಹತ್ಯೆಗೆ ಬಲಿಯಾದ ಮೂರೂವರೆ ಲಕ್ಷ ರೈತರಿಗೆ ಅನುಕಂಪ ತೋರದ ಆಡಳಿತ ವ್ಯವಸ್ಥೆಯಿಂದ ಇಲ್ಲಿ ಸತ್ತ 50 ರೈತರಿಗೆ ಸಾಂತ್ವನ ಬಯಸುವುದೂ ಸಹ ತಪ್ಪೇನೋ ಎನಿಸುತ್ತದೆ. ಅಸಂಖ್ಯಾತ ಜನರ ಮಾರಣಹೋಮಗಳನ್ನು ಸಂಭ್ರಮಿಸುತ್ತಾ, ಅಮಾಯಕರ ಸಮಾಧಿಗಳ ಮೇಲೆ ನುಣುಪಾದ ಹಾಸುಗಲ್ಲುಗಳನ್ನು ಹರಡಿ ಅಧಿಕಾರದ ಜಗನ್ನಾಥ ರಥಚಕ್ರಗಳನ್ನು ಉರುಳಿಸಿದ ಒಂದು ಪರಂಪರೆಯಿಂದ ಮಾನವೀಯ ಸ್ಪಂದನೆ, ಸಂವೇದನೆ ಮತ್ತು ಅನುಕಂಪ ನಿರೀಕ್ಷಿಸುವುದಾದರೂ ಹೇಗೆ ? ಅನ್ಯರ ನೋವಿನಿಂದ ವಿಚಲಿತಗೊಳ್ಳದ, ಮತ್ತೊಬ್ಬರ ಸಾವನ್ನು ಸಂಭ್ರಮಿಸುವ ಮನಸ್ಸುಗಳಷ್ಟೇ ಹೀಗಿರಲು ಸಾಧ್ಯ .
ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತ್ಯಂತ ಕರಾಳ ಅಧ್ಯಾಯ ಎಂದು ಪರಿಗಣಿಸಲಾಗುವ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಪ್ರಭುತ್ವ ತನ್ನ ಪ್ರಜೆಗಳ ಮೇಲೆ ದೌರ್ಜನ್ಯ ನಡೆಸಿತ್ತು, ಹಕ್ಕುಗಳನ್ನು ಕಸಿದುಕೊಂಡಿತ್ತು. ಆದರೆ ಅಂದೂ ಸಹ ಈ ರೀತಿಯ ಬೌದ್ಧಿಕ ಕ್ರೌರ್ಯ ಮತ್ತು ಹಿಂಸೆ ಕಂಡುಬಂದಿರಲಿಲ್ಲ. ಕಣ್ಣೆದುರಿನಲ್ಲೇ ನಡೆಯುವ ಸಾವು ನೋವುಗಳಿಗೂ ಸ್ಪಂದಿಸದಿರುವಷ್ಟು ಕ್ರೌರ್ಯ ಭಾರತದ ಪ್ರಜೆಗಳು ಕಂಡಿರಲೂ ಇಲ್ಲ.
ಇಡೀ ದೇಶದ ಪ್ರಜ್ಞಾವಂತ ಮನಸುಗಳನ್ನು ವಿಚಲಿತಗೊಳಿಸುತ್ತಿರುವ ಸಾವು ನೋವಿನ ಚಿತ್ರಣಗಳು ಮನದ ಕದವ ಬಡಿಯದೆ ಇದ್ದರೆ ಆ ಮನದಿಂದ ಸಾಂತ್ವನದ, ಸಂವೇದನೆಯ ಮಾತುಗಳು ಬರುವುದಾದರೂ ಹೇಗೆ ? ಮೌನವೇ ಸಾಕು ಕ್ರೌರ್ಯದ ಛಾಯೆ ಕವಿಯಲು.
ದೆಹಲಿಯ ಗಡಿಯಲ್ಲಿ ಕವಿದಿರುವ ಕಾರ್ಮೋಡಗಳಲ್ಲಿ ತುಂಬಿರುವುದು ಜಲಬಿಂದುಗಳಲ್ಲ, ಈ ದೇಶದ ಆಡಳಿತ ವ್ಯವಸ್ಥೆಯ ಕ್ರೌರ್ಯ ಮತ್ತು ಅಮಾನುಷ ಧೋರಣೆಯ ಜಲಾಗಾರ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಭಾರತದ ಜನಸಂಖ್ಯೆ ವರವೋ..? ಶಾಪವೋ..?
- ಅಂಬಿಕಾ. ಕೆ
ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಬೆಂಗಳೂರು ವಿಶ್ವವಿದ್ಯಾಲಯ
ವಿಶ್ವ ಸಂಸ್ಥೆಯು ಪಾಪುಲೇಷನ್ ಫಂಡ್ ಮಾಡಿರುವ ಅಂದಾಜಿನ ಪ್ರಕಾರ ಭಾರತವು ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎನಿಸಿಕೊಂಡಿದೆ.
ದೇಶದ ಒಟ್ಟು ಜನಸಂಖ್ಯೆಯು 142.86 ಕೋಟಿಗೆ ಏರಿಕೆಯಾಗಿದ್ದು, ಚೀನಾ ಎರಡನೇ ಸ್ಥಾನಕ್ಕೆ ಇಳಿದಿದೆ, ಇಂತಹದೊಂದು ಹಿರಿಮೆಗೆ ಭಾರತವು ಪಾತ್ರವಾಗಲಿದೆ ಎಂಬುದರ ಅರಿವು ಹಿಂದೆಯೇ ಇತ್ತು. ಹೊಸ ಭಾರತದ ಜನಸಂಖ್ಯೆಯ ಸ್ವರೂಪವೇನು ಮತ್ತು ಯಾವ ವಯೋ ಮಾನದವರು ಎಷ್ಟಿದ್ದಾರೆ. ಆದಾಯ ಮಟ್ಟ ಹೇಗಿದೆ, ಆದಾಯ ಹಂಚಿಕೆ ಹೇಗಿದೆ ಎಂಬುದರ ಕುರಿತು ಕೂಡ ಚರ್ಚೆಗಳು ನಡೆಯುತ್ತಿವೆ. ಒಟ್ಟು ಜನಸಂಖ್ಯೆಯ ಜತೆಗೆ ಈ ಎಲ್ಲಾ ಅಂಶಗಳು ಕೂಡ ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮ ರೂಪಿಸುವಿಕೆ ಮೇಲೆ ಪ್ರಭಾವ ಬೀರುತ್ತವೆ. ರಾಜಕೀಯ ಪಕ್ಷಗಳು ಮತ್ತು ಗುಂಪುಗಳು ರಾಜಕೀಯ ಹಾಗೂ ಸಾಮಾಜಿಕ ಸ್ಥಾನಗಳನ್ನು ನಿರ್ಧರಿಸುವಲ್ಲಿಯೂ ಈ ಅಂಶಗಳು ಪಾತ್ರವಹಿಸುತ್ತವೆ ಭಾರತದಲ್ಲಿ ಗರಿಷ್ಠ ಸಂಖ್ಯೆಯು ಯುವ ಜನರಿದ್ದಾರೆ.
ಹಾಗೆಯೇ ಮುಂದುವರೆಯಲಿದೆ 15 ರಿಂದ 24 ವರ್ಷದೊಳಗಿನವರ ಸಂಖ್ಯೆಯು 25.4 ಕೋಟಿ ಎಂದು ಅಂದಾಜಿಸಲಾಗಿದೆ ಇನ್ನು ದೀರ್ಘಕಾಲ ಭಾರತವು ಈ ಸ್ಥಿತಿ ಕಾಯ್ದುಕೊಳ್ಳಲಿದೆ ಎಂಬುದರಲ್ಲಿಯೂ ಅನುಮಾನ ಇಲ್ಲ ಜನಸಂಖ್ಯೆಯಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನಕ್ಕೆ ಏರುವುದು, ಗೌರವ ಏನು ಅಲ್ಲ ಬದಲಿಗೆ ಇದು ದೇಶಕ್ಕೆ ಹಲವು ಸವಾಲುಗಳನ್ನು ಹುಟ್ಟುತ್ತದೆ ಜತೆಗೆ ಅವಕಾಶಗಳ ಬಾಗಿಗಳನ್ನು ತೆರೆಯುತ್ತದೆ ಆದರೆ, ಜನರನ್ನು ಸಕಾಲಿಕವಾಗಿ ಮತ್ತು ಪರಿಣಾಮಕಾರಿಯಾಗಿ ಬಲಿಸಿಕೊಳ್ಳದೆ ಇದ್ದರೆ ಜನಸಂಖ್ಯೆಯೇ ಶಾಪವಾಗಿ ದೊಡ್ಡ ಸವಾಲಾಗಿ ಪರಿಣಮಿಸಬಹುದು. ದೇಶ ಪ್ರತಿ ವರ್ಷವೂ ಹೆಚ್ಚು ಹೆಚ್ಚು ಜನರಿಗೆ ಆಹಾರ ಬಟ್ಟೆ ಶಿಕ್ಷಣ ಆರೋಗ್ಯ ಸೇವೆ ಉದ್ಯೋಗಾವಕಾಶಗಳನ್ನು ಒದಗಿಸಬೇಕಾಗುತ್ತದೆ.
ಹೀಗೆ ಮುಂದುವರೆದರೆ ಉದ್ಯೋಗಾವಕಾಶಗಳು ದೊರೆಯದೆ ಜನರ ಜೀವನ ಮಟ್ಟ ಸುಧಾರಿಸಿಕೊಳ್ಳುವುದು ಕಷ್ಟವೇ ಸರಿ ಕೆಲಸ ಮಾಡುವ ವಯೋಮಾನದ ಜನರನ್ನು ಸಮಂಜಸವಾಗಿ ಬಳಸಿಕೊಂಡರೇ ಮಾತ್ರ ಜನಸಂಖ್ಯೆಯು ದೇಶದ ಅಭಿವೃದ್ಧಿಗೆ ಪೂರಕವಾಗಿ ಪರಿಣಮಿಸುತ್ತದೆ. ದೇಶದಲ್ಲಿ ದೊಡ್ಡ ಸಂಖ್ಯೆಯ ಜನರಿಗೆ ಈಗಲೂ ಮೂಲ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ ಆದ್ದರಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಸಂಬಂಧಿಸಿದ ನೀತಿಗಳು ಮತ್ತು ಕಾರ್ಯತಂತ್ರ ಗಳಿಗೆ ಸಂಬಂಧಿಸಿದ ಪ್ರಯತ್ನಗಳನ್ನು ನಡೆಸದೇ ಇದ್ದರೆ ಜನಸಂಖ್ಯೆ ಹೆಚ್ಚಳದ ಲಾಭವು ದೊರೆಯದೆ ಹೋಗಬಹುದು ಇದರ ಪರಿಣಾಮವಾಗಿ ಲಾಭದ ಹೆಸರಿನಲ್ಲಿ ನಷ್ಟವೇ ಹೆಚ್ಚು ಅದುವೇ ಒಂದು ಹೊರೆಯುವಾಗಬಹುದು.
ಯುವ ಜನರಿಗೆ ಸೌಲಭ್ಯಗಳು ಮತ್ತು ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಹೆಚ್ಚುತ್ತಲೇ ಇರುವ ಹಿರಿಯ ನಾಗರಿಕರ ಹಾರೈಕೆಯು ವ್ಯವಸ್ಥೆ ಮಾಡಬೇಕಿದೆ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವುದು ಮತ್ತು ಸವಾಲುಗಳನ್ನು ಎದುರಿಸುವುದು ಭಾರತೀಯರ ಹೊರೆಗಾರಿಕೆ ದೇಶದ ಜನರ ಅಗತ್ಯಗಳನ್ನು ಪೂರೈಸಲು ವಿಫಲವಾದರೆ, ಸಾಮಾಜಿಕ ಸಂಘರ್ಷ ಮತ್ತು ರಾಜಕೀಯ ದೃಷ್ಟಿ ಉಂಟಾಗಿ ಅದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಮುಂದೆ ಜನಸಂಖ್ಯಾ ಸ್ಫೋಟವಾದರೂ ಆಶ್ಚರ್ಯ ಪಡಬೇಕಾಗಿಲ್ಲ ಈಗಿನ ಸನ್ನಿವೇಶದಲ್ಲಿ ದೊರಕುತ್ತಿರುವ ಸಂಪನ್ಮೂಲಗಳ ಗರಿಷ್ಠ ಬಳಕೆ ಮತ್ತು ಪರಿಣಾಮಕಾರಿ ಬಳಕೆ ಬಹಳ ಮಹತ್ವವಾಗಿದೆ.
ಮೀಸಲಾತಿ, ವಲಸೆ , ರಾಜಕೀಯ ಪ್ರಾತಿನಿಧ್ಯ ಸಂಪನ್ಮೂಲಗಳ ಹಂಚಿಕೆ ಮತ್ತು ಇದರ ವಿಚಾರಗಳು ಚರ್ಚೆಗೆ ಒಳಗಾಗುವ ಸಾಧ್ಯತೆ ಇದೆ ಸಮಾಜದ ಎಲ್ಲಾ ವರ್ಗಗಳನ್ನು ಸಮಾನವಾಗಿ ಒಳಗೊಳ್ಳುವ ಆರ್ಥಿಕ ಪ್ರಗತಿಯು ಸಾಧ್ಯವಾದರೆ ಜನಸಂಖ್ಯೆ ಏರಿಕೆ ಸವಾಲಾಗಿ ಪರಿಣಮಿಸಬಹುದು ಮಾನವ ಅಭಿವೃದ್ಧಿಯೇ ಅತ್ಯುತ್ತಮ ಕುಟುಂಬ ಕಲ್ಯಾಣ ಯೋಜನೆ ಇದರಿಂದ ಜನಸಂಖ್ಯೆಯ ಏರಿಕೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು ಜನಸಂಖ್ಯೆ ಹೆಚ್ಚಳ ಯಾವುದೋ ಒಂದು ಸಮುದಾಯ ಕಾರಣ ಎಂದು ದೂಷಿಸುವ ಪ್ರವೃತ್ತಿಗೆ ಜ್ಞಾನದಾದ ಆಧಾರ ಇಲ್ಲದ ಪೂರ್ವಗ್ರಹ ಕಾರಣದಿಂದ ಮತ್ತು ಇದು ತಪ್ಪು ನಡವಳಿಕೆಯ ಜನಸಂಖ್ಯೆಗೆ ಸಂಬಂಧಿಸಿದ ಸವಾಲುಗಳನ್ನು ಉತ್ತಮವಾಗಿ ಮತ್ತು ಜಾಣ್ಮೆಯಿಂದ ನಿರ್ವಹಿಸಿದರೆ ಈ ಶತಮಾನವನ್ನು ಭಾರತದ ಶತಮಾನವನ್ನಾಗಿ ಪರಿವರ್ತಿಸುವ ಅವಕಾಶ ನಮ್ಮ ಮುಂದೆ ಇದೆ ಜನರೇ ನಮ್ಮ ದೇಶದ ಸಂಪನ್ಮೂಲವನ್ನಾಗಿ ಮಾರ್ಪಾಡು ಮಾಡಿಕೊಳ್ಳುವ ಅವಕಾಶ ನಮ್ಮ ನಿಮ್ಮೆಲ್ಲರ ಮೇಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬಾಬಾ ಸಾಹೇಬ ಅಂಬೇಡ್ಕರರ ‘ಧ್ಯಾನ’ ಗಾಯನ ; ವಿನೂತನ
- ವೆನ್ನೆಲಾ ಕೆ.
ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ,
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,
ಬೆಂಗಳೂರು ವಿಶ್ವವಿದ್ಯಾಲಯ,ಬೆಂಗಳೂರು
ಇತ್ತೀಚೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದ 132ನೇ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ಜನುಮ ನಿಮಿತ್ತವಾಗಿ “ಧಾನ್ಯ” ‘ಗಾಯನವು’ ವಿನೂತನವಾದ ಈ ಕಾರ್ಯಕ್ರಮವು 5 ಘಂಟೆ, 1ನಿಮಿಷ, 14 ಸೆಕೆಂಡ್ ಗೆ ಆರಂಭವಾಗಿದ್ದು ಅವಿಸ್ಮರಣೀಯವಾದ ದಿನ, ಇದೊಂದು ಭಾರತ ಇತಿಹಾಸದ ಪುಟದ ಚರಿತ್ರೆಯಲ್ಲೇ ಹೊಸ ದಾಖಲೆಯೂ ಅಂತ ಹೇಳಬಹುದು.
ಈ ಕಾರ್ಯಕ್ರಮವನ್ನು ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ವು ಇಡೀ ಭಾರತದಲ್ಲೇ ಯಾರು ಮಾಡಿರದ ಈ ವಿನೂತವಾದ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಬೆಂಗಳೂರು ನಗರದಲ್ಲಿರುವ ಗಾಂಧಿ ಭವನದ ಆವರಣದಲ್ಲಿ ‘ಅನನ್ಯ ಸಂಸ್ಥೆ’ ವತಿಯಿಂದ 132 ನೇ ‘ವಿಶ್ವದ ವೀರ ವಿದ್ಯಾರ್ಥಿ ಹುಟ್ಟಿದ ದಿನ’ ಹಾಗೂ ‘ರಾಷ್ಟ್ರದ ಸ್ಫೂರ್ತಿಯ ದಿನ’ ‘ಸರ್ವ ಸಮುದಾಯದ ಶಕ್ತಿಯ ದಿನ’ ಇದೊಂದು ನಮ್ಮೆಲ್ಲರ ಹಬ್ಬದ ದಿನ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಇಂತಹ ಮೇರು ಶಿಖರ ಟ್ಯಾಗ್ ಲೈನ್ ಗಳಿಂದ ಅದ್ಭುತವಾಗಿ
ಆಯೋಜಿಸಿದ ಕಾರ್ಯಕ್ರಮಕ್ಕೆ ರಾಜ್ಯ ಕಂಡ ಪ್ರಸಿದ್ಧ ಐಪಿಎಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ಸಿನಿಮಾ ಸೆಲೆಬ್ರಿಟಿಗಳು, ಸಮಸ್ತ ವಿದ್ಯಾರ್ಥಿ ಸಮೂಹ, ಸಾಮಾಜಿಕ ನ್ಯಾಯದ ವಿಚಾರಶೀಲರು, ಬರಹಗಾರರು, ಪತ್ರಕರ್ತರು ಇನ್ನೂ ಅನೇಕ ಮುಂತಾದವರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಇದಕ್ಕೆ ಮುಖ್ಯ ಕಾರಣಕರ್ತರಾದ ಅನನ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಂಪುರ ರಾಜೇಶ್ ರವರ ನಿರ್ದೇಶನದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿದ್ದು ಹೆಮ್ಮೆಯ ವಿಷಯ.
ಇದರ ಹಿನ್ನೆಲೆ: ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ದಲ್ಲಿ ಅತ್ಯುತ್ತಮ ಹಾಗೂ ಅತ್ಯಂತ ತುಂಬಾ ಮನಸ್ಸಿನಿಂದಲ್ಲೇ ವಿಶೇಷವಾದ ಆಸಕ್ತಿಯನ್ನು ಅಂಬೇಡ್ಕರ್ ರವರು ಸಂಗೀತ ಪ್ರಿಯರು ಹಾಗೂ ಅಂಬೇಡ್ಕರ್ ರವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು. ಹಾಗೇಯೆ ಇವರಿಗೆ ಚಿತ್ರಕಲೆಯೂ ಸಹ ಒಲಿದಿತ್ತು ಎಂಬುದು ಗಮನಾರ್ಹ ಸಂಗತಿ. ಇಂತಹ ವಿಷಯವನ್ನು ಯಾರು ಸಹ ಬೆಳಕು ಚೆಲ್ಲುವ ಸಾಹಸಕ್ಕೆ ಕೈ ಹಾಕಿ ಇರಲಿಲ್ಲ. ಇದೊಂದು ಅನನ್ಯ ಸಂಸ್ಥೆ ವತಿಯಿಂದ ಇಂತಹ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಐತಿಹಾಸಿಕ ಚರಿತ್ರೆಗೆ ಮುನ್ನುಡಿವಾಗಿದೆ.
ಅಂಬೇಡ್ಕರ್ ರವರಿಗೆ ತಮ್ಮ ಬಿಡುವಿನ ವೇಳೆಯಲ್ಲಿ ಅದ್ಭುತವಾದ ಒಬ್ಬ ಸಂಗೀತ ಪ್ರಿಯರಾಗಿದ್ದರು. ಇವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು ಹಾಗೂ ವಿಶೇಷವಾಗಿ ಚಿತ್ರಕಲೆ ಸಹ ಸರಳವಾಗಿ ಮಾಡುವ ಮೂಲಕ ತಮ್ಮ ಮನದಲ್ಲಿ ಆಸಕ್ತಿ ಹೊಂದಿದ್ದರು. ಇನ್ನು ಹಲವಾರು ವಿಷಯದಲ್ಲಿ ಅಂದರೆ ಅಂಬೇಡ್ಕರ್ ರವರಿಗೆ ವಿಶೇಷವಾದ ಇವುಗಳಲ್ಲಿ ಆಸಕ್ತಿ ಮತ್ತು ಅಭಿರುಚಿಯನ್ನು ಹೊಂದಿದ್ದರು ಎಂಬುದನ್ನು ಮನಗಂಡ ಅನನ್ಯ ಸಂಸ್ಥೆಯ ವತಿಯಿಂದ ಆಯೋಜಿಸಿದ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಅತ್ಯುತ್ತಮವಾಗಿ ಮೂಡಿಬಂದಿದೆ.
ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ವಿಶೇಷವಾಗಿ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಚಿತ್ರ ಸಾಹಿತ್ಯಗಳು, ಅಂಬೇಡ್ಕರ್ ವಾದಿಗಳು ಮತ್ತು ಚಿತ್ರರಂಗದ ಬಹುಮುಖ ಪ್ರತಿಭೆ, ಮಹಾಗುರುಗಳಾದ ಡಾ. ಹಂಸಲೇಖ ರವರು ಹೊಸದಾಗಿ ಹಾಡನ್ನು ಬರೆದದ್ದು ತುಂಬಾ ಅವಿಸ್ಮರಣೀಯ ಅಂತ ಹೇಳಬಹುದು. ಇವರು ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರೊತ್ಸಾಹ ನೀಡಿದ್ದು, ಸರ್ವ ಸಮುದಾಯದಕ್ಕೆ ಹೊಸ ಶಕ್ತಿ ತುಂಬಿದ್ದು ಮೇರು ವ್ಯಕ್ತಿಯಾಗಿದ್ದಾರೆ.
ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ಮುಖ್ಯವಾದ ಅಂಶವೆಂದರೆ ಇದರಲ್ಲಿ ಒಟ್ಟು ನಾಲ್ಕು ಭಗವಾನ್ ಬುದ್ಧ, ಅಂಬೇಡ್ಕರ್, ಬಸವೇಶ್ವರ ಮುಂತಾದರವರನ್ನು ವಿಷಯಗಳನ್ನು ಪರಿಗಣಿಸಿ ಅಂಬೇಡ್ಕರ್ ಧ್ಯಾನ ಹಾಡುಗಳ ರಚಿಸಿವುದರಲ್ಲಿ ಪ್ರಮುಖವಾಗಿ ರಾಜ್ಯದ ಹೆಸರಾಂತ ಸಾಹಿತಿ, ಪ್ರಗತಿಪರ ಚಿಂತಕರು ಹಾಗೂ ಮಾಜಿ ಅಧ್ಯಕ್ಷರಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರಿನ ಪ್ರೊ.ಎಸ್.ಜಿ.ಸಿದ್ದರಾಮಯ್ಯನವರ
‘ಧೀ ಶಕ್ತಿಯೇ … ಜ್ಞಾನ ಪರ್ವತದ … ಧೀಮಂತ ಧೀಶಕ್ತಿಯೇ …
ಇಂತಹ ಸಾಲುಗಳನ್ನು, ಡಾ. ಕೈ.ವೈ.ನಾರಾಯಣಸ್ವಾಮಿರವರ ದೀಪಾ …. ಎಲ್ಲರೆದೆಯಲಿ … ಹಚ್ಚಿದ ದೀಪಾ .. ಭೂಪಾ … ಭೂಪಾ … ಭೀಮಾ ಭೂಪಾ .. ಬಾಬಾ .. ಸಾಹೇಬ್.. ಜೀವಸ್ವರವೇ … ಬಾಬಾ.. ಹಾಗೂ ರವಿ ಮರಿಯಪ್ಪರವರ ಹತ್ತು ಸಾವಿರ ವಯಲಿನನ್ನು … ವೀಣೆಗಳು ನೂರೆಂಟು … ಕೋಟಿ ಕೋಟಿ ಎದೆ ಸದ್ದಿನ ಡೊಳ್ಳು … ಸಂಯೋಜಿಸಿದರೇ .. ಸಂವಿಧಾನಾ … ಮತ್ತು ಚಿತ್ರ ಸಾಹಿತಿ, ಹೆಸರಾಂತ ಸಂಗೀತ ನಿರ್ದೇಶಕರು ಡಾ. ಹಂಸಲೇಖ ರವರು ನಿನ್ನ ಮೌನಾ … ದೀನ ಗಾನಾ… ನಿನ್ನ ಧ್ಯಾನಾ .. ಸಂವಿಧಾನಾ … ಈ ನಾಲ್ಕು ಅಂಬೇಡ್ಕರ್ ಧ್ಯಾನ ರಚನೆಗೆ ಇವರುಗಳ ಬರೆದಿರುವ ಅದ್ಭುತವಾದ ಅಂಬೇಡ್ಕರ್ ರವರ ಧ್ಯಾನ ಹಾಡುಗಳನ್ನು ನಮ್ಮ ಹಿಂದುಸ್ತಾನಿ ಸಂಗೀತ ಹಾಡುಗಳ ಮೂಲಕ ಕನ್ವರ್ಟ್ ಮಾಡುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತು.
ಹಾಗೆಯೇ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಬಹಳಷ್ಟು ಯಶಸ್ವಿಯಾಗಬೇಕಾದರೆ ಈ ಮೊದಲು ಪುಟ್ಟರಾಜ ಗವಾಯಿಗಳ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ಶ್ರೀ ಡಿ. ಕುಮಾರ್ ದಾಸ್ ಅವರ ವಿದ್ವತ್ ಶರೀರದಲ್ಲಿ ‘ಧ್ಯಾನ ಗಾಯನ’ ಹಾಗೂ ಇವರ ತಂಡದ ವತಿಯಿಂದ ನಡೆಸಿಕೊಟ್ಟ ಅದ್ಭತವಾದ ಅಂಬೇಡ್ಕರ್ ರವರ ಧ್ಯಾನವು ಹಿಂದುಸ್ತಾನಿ ಸಂಗೀತದ ಕನ್ವರ್ಟ್ ಮಾಡುವ ಮುಖಾಂತರ ಈ ಹಾಡುಗಳನ್ನು ಬಹಳ ಸೊಗಸಾಗಿ ಮೂಡಿಬಂದಿದ್ದು ಹೊಸ ದಾಖಲೆಗೆ ಸೇರ್ಪಡೆಯಾಗಿದೆ.
ಇನ್ನು ಮುಂಬರುವ ದಿನಗಳಲ್ಲಿ ಅದಷ್ಟು ಹಲವಾರು ವಿನೂತನವಾದ ಭಗವಾನ್ ಬುದ್ಧರ, ಬಸವೇಶ್ವರರ ಹಾಗೂ ವಿಶ್ವದ ವೀರ ವಿದ್ಯಾರ್ಥಿಯಾದ ಮೇರು ರಾಷ್ಟ್ರದ
ನಾಯಕರಾದ ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ರವರ ಹಲವಾರು ಹಾಡುಗಳನ್ನು
ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದರೆ ಇನ್ನುಷ್ಟು ಭಾರತದ ಇತಿಹಾಸದ ಪುಟಗಳಲ್ಲಿ ಮರೆತು ಹೋಗಿರುವ ಹಲವು ಬಗ್ಗೆ ದಾಖಲೆ ಇಲ್ಲದ ನೈಜ ಸಂಗತಿಗಳನ್ನು ಪುನಃ ಹೊಸ ದಾಖಲೆಗೆ ಉಪಯುಕ್ತವಾದ ವಿಶಿಷ್ಟವಾದ ಮೇರು ನಾಯಕನ
ಅಂಬೇಡ್ಕರ್ ರವರ ವಿಚಾರ ಧಾರೆಗಳು ತಾವು ಅನುಭವಿಸಿದ ನೋವು, ನಲಿವು, ಭಾರತದ ರಾಜ್ಯಾಂಗದ ಶಿಲ್ಪಿಯನ್ನು ಮುಂಬರುವ ದಿನಗಳಲ್ಲಿ ಹೊಸ ಪೀಳಿಗೆಯ ಪರಿಚಯಿಸುವ ಕೀರ್ತಿದಾಯಿಕವಾಗಲಿ ಮತ್ತು ಅದಷ್ಟು ಮುಂಬರುವ ದಿನಗಳಲ್ಲಿ ಅಂಬೇಡ್ಕರ್ ರವರ ಆಸಕ್ತಿದಾಯಕ ವಿಚಾರಗಳು ಹಾಗೂ ಸಂಗೀತದ ಬಗ್ಗೆ ಹಲವಾರು ಮಾಹಿತಿಗಳು ಸಮಸಮಸಮಾಜಕ್ಕೆ ತಲುಪುವ ವ್ಯವಸ್ಥೆಗೆ ಸಾಕ್ಷಿಯಾಗಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಬಹಿರಂಗ
ರಷ್ಯಾದಲ್ಲಿ ಓಂ – ಭರತಾಸ್- ರಾಮ – ರಾವಣ ಲಂಕೇಶ – ಮಾರೀಚ – ಸೀತ ನದಿಗಳು..!
- ಲಕ್ಷ್ಮೀಪತಿ ಕೋಲಾರ, ಸಂಶೋಧಕರು, ಸಂಸ್ಕೃತಿ ಚಿಂತಕರು, ಬೆಂಗಳೂರು
ಸ್ಲಾವ್ ಸಮುದಾಯದ ಲಿತುವೇನಿಯ, ಲಾತ್ವಿಯ, ಬೆಲಾರಸ್,ಉಕ್ರೇನ್ ಮತ್ತು ರಷಿಯಾದಂತಹ ದೇಶಗಳ ನದಿ,ನಗರಗಳು ಸಂಸ್ಕೃತ ಮೂಲದ ಹೆಸರುಗಳನ್ನೆ ಇಂದಿಗು ಉಳಿಸಿಕೊಂಡಿರುವುದು ಆ ಭಾಷೆ ಮತ್ತು ಸಂಬಂಧಿತ ಸಂಸ್ಕೃತಿಯೊಂದಿಗೆ ಅವು ಹಿಂದೊಮ್ಮೆ ಹೊಂದಿದ್ದ ಬಲವಾದ ನಂಟಿಗೆ ಸಾಕ್ಷಿಯಾಗಬಲ್ಲವು.
ಇದರೊಂದಿಗೆ ಉತ್ತರ ಭಾರತದ ಆರ್ಯ ವೈದಿಕರ ಭಾಷೆ ಸಂಸ್ಕೃತಿಯೊಂದಿಗೆ ಸ್ಲಾವ್ ಸಮುದಾಯಕ್ಕೆ ಎಷ್ಟು ನಿಕಟ ಸಂಬಂಧವಿತ್ತೆಂಬುದನ್ನು ಮತ್ತು ನಾಲ್ಕೈದು ಸಾವಿರ ವರ್ಷಗಳ ಹಿಂದೆ ಈ ಎಲ್ಲ ಆರ್ಯ ಸಮುದಾಯಗಳು ಒಟ್ಟಿಗೆ ಒಂದೆಡೆಯೇ ಕಳ್ಳುಬಳ್ಳಿಗಳಾಗಿ ಜೀವಿಸಿದ್ದರೆಂಬುದನ್ನ ಈ ಹಿನ್ನೆಲೆಯಲ್ಲಿ ನಾವು ಗ್ರಹಿಸಬಹುದಾಗಿದೆ.
ಅದರಲ್ಲು ವಿಶೇಷವಾಗಿ ಲಿತುವೇನಿಯ ಮತ್ತು ರಷಿಯಾದ ನದಿಗಳ ಹೆಸರುಗಳು ಎಷ್ಟು ಸಂಸ್ಕೃತಮಯವು (ಇಂಡೋ – ಯುರೋಪಿಯನ್ ಭಾಷಾಮೂಲದ) ಮತ್ತು ವೈದಿಕರ ಪುರಾಣ ಮೂಲದವು ಆಗಿವೆ ಎಂದರೆ, ನಂಬಲಿಕ್ಕು ಅಸಾಧ್ಯ ಎಂಬಂತಿವೆ. ಇದರರ್ಥ ಸ್ಲಾವ್ ಜನರು ವೈದಿಕರ ಪುರಾಣಗಳಿಂದ ಪ್ರೇರಿತಗೊಂಡಿದ್ದಾರೆ ಎಂಬುದಲ್ಲ.
ಬದಲಿಗೆ ವೈದಿಕರ ಇಂದಿನ ಪುರಾಣ – ಸಂಸ್ಕೃತಿ – ಭಾಷೆಗಳು ವೈದಿಕರಿಗೆ ಎಷ್ಟು ಸಂಬಂಧಿಸಿದ್ದೋ ಅದಕ್ಕು ಹೆಚ್ಚಿನದಾಗಿ ಸ್ಲಾವ್ ಸಮುದಾಯಕ್ಕೂ ಸಂಬಂಧಿಸಿದ್ದಾಗಿದ್ದವು. ಹಾಗೆ ನೋಡಿದರೆ ಬ್ರಹ್ಮ – ವೇದ ಮೂಲವು ಕೂಡ ಸ್ಲಾವ್ ಸಮುದಾಯದ ಉತ್ತರ ಧ್ರುವ ಪ್ರದೇಶಕ್ಕೆ ಹೋಗಿ ನಿಲ್ಲುತ್ತದೆ ಎಂಬುದು ಸೋಜಿಗವಾದರು ನಿರ್ವಿವಾದವಾಗಿ ಚಾರಿತ್ರಿಕ ಸತ್ಯವಾಗಿದೆ. 12 – 13 ನೇ ಶತಮಾನಗಳಲ್ಲಿ ಸ್ಲಾವ್ ಜನರು ಕ್ರೈಸ್ತರಾಗಿ ಪರಿವರ್ತಿತರಾಗುವವರೆಗು ಅವರು ಶತಾಂಶ ಮತ್ತು ಥೇಟ್ ಶ್ರೇಷ್ಟ ಆರ್ಯ ವೈದಿಕರೆ ಆಗಿದ್ದರು.
ರಷ್ಯ ಮತ್ತು ಲಿತುವೇನಿಯಾಗಳಲ್ಲಿ ಭರತಾಸ್, ಓಂ, ರಾಮ, ಸೀತ, ಲಂಕೇಶ, ರಾವಣ, ಮಾರೀಚ, ನೆಮುನ (ಯಮುನ), ಕಾಮ, ಯಂತ್ರ, ಶ್ವೇತೆ, ದ್ರವ, ಮೋಕ್ಷ, ಋಗ್ವೇದದ ದಾನವ ಮಾತೆ ದನು ನೆನಪಿನ ದನುಬೆ ಮುಂತಾದ ನದಿಗಳು ಮತ್ತು ನಾರದ (ಈಗ ನರೋದ್ನಯ ಎಂದಿದ್ದರು ಸ್ಥಳೀಯರು ನಾರದ ಬೆಟ್ಟ ಎಂದೇ ಕರೆಯುತ್ತಾರೆ) ಹೆಸರಿನ ಬೆಟ್ಟವು ಇವೆ ಎಂದರೆ ಯಾರೂ ಅಚ್ಚರಿಪಡುವಂತದ್ದೆ.
ಯಾರಿಗಾದರು ಈ ಸಂಗತಿಗಳಲ್ಲಿ ಅನುಮಾನ ಹುಟ್ಟುವುದು ಸಹಜವೆ. ಯಾಕೆಂದರೆ ಸ್ಲಾವ್ – ವೈದಿಕ ಆರ್ಯರ ಮೂಲ ಪ್ರದೇಶವೆ ಉತ್ತರ ದ್ರುವ ಪ್ರದೇಶವಾಗಿತ್ತು ಎಂಬ ಚರಿತ್ರೆಯನ್ನೇ ನಮ್ಮಿಂದ ಮರೆಮಾಚಲಾಗಿತ್ತು ಮತ್ತು ಅದು ಬಹುದೊಡ್ಡ ಸಾಂಸ್ಕೃತಿಕ ರಾಜಕಾರಣವೂ ಆಗಿತ್ತು. ಆದರೆ ತಿಲಕರು ತಮ್ಮ “Arctic Home In the Vedas” ಎಂಬ ಪುಸ್ತಕದಲ್ಲಿ ಉತ್ತರ ಭಾರತದ ವೈದಿಕ ಆರ್ಯರ ತವರು ನೆಲ ಉತ್ತರ ದ್ರುವ ಪ್ರದೇಶವೆ, ಅಂದರೆ ಇಂದಿನ ಲಿತುವೇನಿಯ, ಲಾತ್ವಿಯ, ಬೆಲಾರಸ್ ಪ್ರದೇಶಗಳೇ ಆಗಿದ್ದವು ಎಂದು ಸಮರ್ಥ ಸಾಕ್ಷಾಧಾರಗಳೊಂದಿಗೆ ನಿರೂಪಿಸಿದ್ದಾರೆ.
ರಷ್ಯಾದಲ್ಲಿ ಸಂಸ್ಕೃತ ಭಾಷಾಮೂಲದ ನೂರಾರು ನದಿಗಳಿವೆ. ಭಾರತದಲ್ಲಿ ಕೆಲವು ನದಿಗಳನ್ನ ಹೊರತುಪಡಿಸಿದರೆ ಆ ಪ್ರಮಾಣದ ವೈದಿಕ ಪುರಾಣ ಮೂಲದ ನದಿ ಹೆಸರುಗಳು ಈ ನೆಲದಲ್ಲಿ ಇಲ್ಲವೆಂಬುದು ಪ್ರಾಚೀನ ಕಾಲದಿಂದಲು ಆರ್ಯ ವೈದಿಕರು ಇಲ್ಲಿರಲಿಲ್ಲವೆಂಬುದನ್ನೇ ಸೂಚಿಸುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ6 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ6 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು
-
ದಿನದ ಸುದ್ದಿ3 days ago
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
-
ದಿನದ ಸುದ್ದಿ2 days ago
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ