ಬಹಿರಂಗ
ಬೌದ್ಧಿಕ ಕ್ರೌರ್ಯವೂ ಮನದ ಮಾತಿನ ಮೌನವೂ

- ನಾ ದಿವಾಕರ
ತಣ್ಣನೆಯ ಮೌನ ಎಂತಹ ಭೀಭತ್ಸ ಕ್ರೌರ್ಯವನ್ನೂ ಮೀರಿಸುವಂತಹ ಬರ್ಬರ ಮನಸ್ಥಿತಿಯ ಸಂಕೇತ. ಭಾರತ ಮೂಲತಃ ಹಿಂಸೆಯ ನಾಡು. ಇಲ್ಲಿ ಹಿಂಸೆಯ ಪರಿಭಾಷೆ ಅಗೋಚರ ತಂತುಗಳಲ್ಲಿ ಅಡಗಿರುತ್ತದೆ. ಇತಿಹಾಸ ಕಾಲದಿಂದಲೂ ಭಾರತದ ಒಡಲಲ್ಲಿ ಈ ತಂತುಗಳು ನೆಲೆ ಕಂಡುಕೊಂಡಿವೆ.
ಪ್ರತ್ಯಕ್ಷವಾಗಿ ನಡೆಯುವ ಹಿಂಸೆಯನ್ನೂ ಸಾಪೇಕ್ಷ ನೆಲೆಯಲ್ಲಿ ನೋಡುವ ಮೂಲಕ ನಾವು ನಮ್ಮ ನಡುವಿನ ಅಹಿಂಸಾತ್ಮಕ ಧೋರಣೆಯನ್ನು ಮುನ್ನೆಲೆಗೆ ತರುತ್ತೇವೆ. ನಾವು ತೊಟ್ಟ ಅಥವಾ ತೊಡುವ ಮಸೂರಗಳು ಹಿಂಸೆ ಮತ್ತು ಅಹಿಂಸೆಯನ್ನು ನಿರ್ಧರಿಸುತ್ತವೆ. ಜಾತಿ ಶ್ರೇಣೀಕರಣದ ನೆಲೆಯಲ್ಲೇ ಭಾರತೀಯ ಸಮಾಜದಲ್ಲಿ ಹಿಂಸೆ ಮತ್ತು ಅಹಿಂಸೆಯ ವ್ಯಾಖ್ಯಾನಗಳೂ ಮೌಲ್ಯಯುತವಾಗಿಬಿಡುತ್ತವೆ.
ಭಾರತದ ಇತಿಹಾಸದಲ್ಲಿ ಅಹಿಂಸಾ ಬೋಧಕರು ಹೇರಳವಾಗಿ ಕಂಡುಬರುತ್ತಾರೆ. ಅಹಿಂಸೆಯನ್ನೇ ಮೂಲತತ್ವವನ್ನಾಗಿ ಬೋಧಿಸುವ ಜೈನ ಧರ್ಮವೂ ಭಾರತದಲ್ಲಿ ಹುಟ್ಟಿದೆ. ಇತರ ಯಾವುದೇ ದೇಶಗಳಿಗೆ ಹೋಲಿಸಿದರೆ ಇಲ್ಲಿ ಅಹಿಂಸೆಯ ಬೋಧನೆ ಹೆಚ್ಚು ಪರಿಣಾಮಕಾರಿಯಾಗಿದೆ. ಏಕೆಂದರೆ ಇಲ್ಲಿ ಹಿಂಸೆ ಸಮಾಜದ ಅಂತರ್ಗತ ಭಾಗವಾಗಿದೆ.
ಒಂದು ಸಂಸ್ಕøತಿಯಾಗಿದೆ. ಒಂದು ಒಪ್ಪಿತ ನಾಗರಿಕತೆಯೂ ಆಗಿದೆ. ಇಲ್ಲಿ ಹಿಂಸೆಯ ವ್ಯಾಖ್ಯಾನ, ಹಿಂಸೆಗೊಳಗಾದ ವ್ಯಕ್ತಿ, ಸಮುದಾಯ ಅಥವಾ ಅಸ್ಮಿತೆಗಳನ್ನಾಧರಿಸಿರುತ್ತದೆ. ಹಾಗಾಗಿಯೇ ಸಾರ್ವಜನಿಕ ಸಂಕಥನಗಳಲ್ಲಿ ಕೆಲವು ಹಿಂಸೆಗಳು ಸ್ವೀಕಾರಾರ್ಹ ಸಹಜ ಘಟನೆಗಳಾಗಿಬಿಡುತ್ತವೆ. ಅಥವಾ ಅನಿವಾರ್ಯ ಎನಿಸಿಬಿಡುತ್ತವೆ. ಕಾರಣ ಇಷ್ಟೆ, ಹಿಂಸೆಗೊಳಗಾದವರು ಒಂದು ಪ್ರಬಲ ವರ್ಗದ ದೃಷ್ಟಿಯಲ್ಲಿ ಅರ್ಹರೂ ಆಗಿಬಿಡುತ್ತಾರೆ. ಈ ಪ್ರಬಲ ವರ್ಗವೇ ದೇಶದ ಸಾರ್ವಜನಿಕ ಅಭಿಪ್ರಾಯದ ಜನಕ ಆಗಿರುತ್ತದೆ.
ಹಾಗಾಗಿಯೇ ಶತಮಾನಗಳ ನಂತರವೂ ಭಾರತೀಯ ಸಮಾಜದಲ್ಲಿ ಹಿಂಸೆ ಮತ್ತು ಅಹಿಂಸೆಯ ವ್ಯಾಖ್ಯಾನಕ್ಕೆ ಒಂದು ಮಾನವೀಯ ಸಂವೇದನೆಯ ಸ್ಪರ್ಶ ಇರಲೇ ಇಲ್ಲ. ದೇಶದ ಬಹುಸಂಖ್ಯಾತ ಜನರನ್ನು , ಮೂಲ ನಿವಾಸಿಗಳನ್ನು ಶೋಷಿತರಾಗಿಯೇ ಮುಂದುವರೆಸಿ ಶಿಕ್ಷಣ ಮತ್ತು ಸಾಮಾಜಿಕ ಘನತೆಯಿಂದ ವಂಚಿತರನ್ನಾಗಿ ಮಾಡಿದ್ದು ನಮ್ಮ ಲಿಖಿತ ಇತಿಹಾಸದಲ್ಲಿ ಹಿಂಸೆಯ ಚೌಕಟ್ಟಿನಲ್ಲಿ ಚರ್ಚೆಗೊಳಗಾಗಿಲ್ಲ.
ಪೇಶ್ವೆಯರ ಆಡಳಿತದಲ್ಲಿ ನಡೆಯುತ್ತಿದ್ದ ಜಾತಿ ದೌರ್ಜನ್ಯಗಳು ಇಂದಿಗೂ ಸಹ ಹಿಂಸೆಯ ಪರಿಕಲ್ಪನೆಯಲ್ಲಿ ವ್ಯಾಖ್ಯಾನಕ್ಕೊಳಗಾಗಿಲ್ಲ. ಈ ಅಮಾನುಷ ಪದ್ಧತಿಗಳನ್ನು ಭಾರತೀಯ ಸಮಾಜದ ನ್ಯೂನತೆ ಎಂದಷ್ಟೇ ಗುರುತಿಸಲಾಗುತ್ತಿದೆಯೇ ಹೊರತು, ಇದು ಭಾರತೀಯ ಶ್ರೇಣೀಕೃತ ಸಮಾಜದಲ್ಲಿ ಅಂತರ್ಗತವಾಗಿದ್ದ ಬೌದ್ಧಿಕ ಕ್ರೌರ್ಯ ಮತ್ತು ಹಿಂಸಾತ್ಮಕ ಧೋರಣೆಯ ಒಂದು ಆಯಾಮ ಎನ್ನುವ ವಿಶ್ಲೇಷಣೆಗಳು ಅಪರೂಪ.
ಈ ಬೌದ್ಧಿಕ ದಾರಿದ್ರ್ಯಕ್ಕೆ ಮೂಲ ಕಾರಣ ಎಂದರೆ ನಾವು ನಮ್ಮ ಸಮಾಜದಲ್ಲಿನ ಬೌದ್ಧಿಕ ಹಿಂಸೆ ಮತ್ತು ಕ್ರೌರ್ಯವನ್ನು ವ್ಯವಸ್ಥೆಯ ಒಂದು ಲೋಪ ಎಂದೇ ಭಾವಿಸಿದ್ದೇವೆಯೇ ಹೊರತು, ಇದು ಒಂದು ಸಮಾಜೋ ಸಾಂಸ್ಕೃತಿಕ ವ್ಯಸನ ಎಂದು ಭಾವಿಸಿಯೇ ಇಲ್ಲ.
ಹಾಗಾಗಿ ಸಮಕಾಲೀನ ಸಂದರ್ಭದಲ್ಲಿ ನಡೆದಿರುವ ಮತ್ತು ಈ ಹೊತ್ತಿನಲ್ಲೂ ಕಂಡುಬರುತ್ತಿರುವ ಕ್ರೌರ್ಯ ಮತ್ತು ಹಿಂಸೆ ಆಳುವ ವರ್ಗಗಳ ದೃಷ್ಟಿಯಲ್ಲಿ ಕಾನೂನು ಸಮಸ್ಯೆಯಾಗಿ ಕಂಡುಬಂದರೆ, ಸಮಾಜದ ದೃಷ್ಟಿಯಲ್ಲಿ ಸಹಜ ಸ್ವಾಭಾವಿಕ ಘಟನೆಗಳಾಗಿ ಕಂಡುಬರುತ್ತವೆ. ಹಥ್ರಾಸ್ ನಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆ, ಊನ ಗ್ರಾಮದಲ್ಲಿ ವ್ಯವಸ್ಥಿತ ಹಲ್ಲೆಗೊಳಗಾದ ಅಸ್ಪøಶ್ಯರು, ಒಂದು ಮಾಂಸದ ತುಂಡಿಗೆ ಬಲಿಯಾದ ಅಕ್ಲಾಖ್ ಮತ್ತು ಮಲಗುಂಡಿಯಲ್ಲಿ ಬಿದ್ದು ಅಸುನೀಗುತ್ತಿರುವ ಸ್ವಚ್ಚತಾ ಕಾರ್ಮಿಕರು ಹಿಂಸೆಯ ವ್ಯಾಖ್ಯಾನಕ್ಕೆ ಒಳಪಡುವುದಿಲ್ಲ.
21ನೆಯ ಶತಮಾನದ ಮೂರನೆಯ ದಶಕದಲ್ಲೂ ಅಸ್ಪೃಶ್ಯ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯ ಭಾರತೀಯ ಸಮಾಜದ ಅಭಿಪ್ರಾಯ ಜನಕರಿಗೆ ಹಿಂಸೆ ಎನಿಸುವುದಿಲ್ಲ. ಕೇವಲ ಒಂದು ಬಗೆಹರಿಸಬಹುದಾದ ಸಮಸ್ಯೆ ಎನಿಸುತ್ತದೆ. ಕಾಶ್ಮೀರದ ಉಗ್ರಗಾಮಿಗಳಿಂದ ನಡೆಯುವ ಹತ್ಯೆಗಳು ಹಿಂಸೆಯ ಪರಾಕಾಷ್ಠೆ ಎನಿಸುತ್ತದೆ.
ಕಂಬಾಲಪಲ್ಲಿ, ಕರಂಚೇಡು, ಖೈರ್ಲಾಂಜಿ, ಲಕ್ಷ್ಮಣಪುರಬಾತೆ, ಬತಾನಿತೊಲ, ತ್ಸೆಂಡೂರು ಇವಾವುದೂ ಹಿಂಸಾಕಾಂಡ ಎನಿಸುವುದಿಲ್ಲ. ಹತ್ತಾರು ಜನರನ್ನು ಬಲಿತೆಗೆದುಕೊಂಡ ಮುಂಬೈ ಭಯೋತ್ಪಾದಕ ದಾಳಿ ಶತಮಾನಗಳ ಕಾಲ ಭಾರತದ ಭೂಪಟದಲ್ಲಿ ಕಪ್ಪುಚುಕ್ಕೆಯಾಗುವಂತಹ ಹಿಂಸಾಕಾಂಡದಂತೆ ಕಾಣುತ್ತದೆ. ಸಾವಿರಾರು ಅಮಾಯಕರನ್ನು ಬಲಿಪಡೆದ ಗುಜರಾತ್ ಹಿಂಸಾಕಾಂಡ ರಾಜಧರ್ಮದ ವೈಫಲ್ಯದಂತೆ ಮಾತ್ರವೇ ಕಾಣುತ್ತದೆ.
ಹಿಂಸೆಯನ್ನು ನಾವು ಹೇಗೇ ಸಾಪೇಕ್ಷಗೊಳಿಸಿಬಿಟ್ಟಿದ್ದೇವೆ ಎನ್ನಲು ಇದಕ್ಕಿಂತಲೂ ಉತ್ತಮ ನಿದರ್ಶನ ಬೇಕಿಲ್ಲ. ಹಿಂಸೆಗೊಳಗಾಗುವವರು ಯಾರು ಮತ್ತು ಹಿಂಸೆಯ ಜನಕರು ಯಾರು ಎನ್ನುವ ಪ್ರಶ್ನೆಗಳೇ ನಮ್ಮ ದೇಶದಲ್ಲಿ ಕ್ರೌರ್ಯ ಮತ್ತು ಹಿಂಸೆಯ ಸಂಕಥನವನ್ನು ರೂಪಿಸುತ್ತದೆ. ಇದು ಮನುವಾದಿ ಬ್ರಾಹ್ಮಣ್ಯದ ಒಂದು ಚಾರಿತ್ರಿಕ ಕೊಡುಗೆಯಾದರೆ ಮತ್ತೊಂದೆಡೆ ಭಾರತೀಯ ಸಮಾಜದಲ್ಲಿ ಬೇರೂರಿರುವ ಊಳಿಗಮಾನ್ಯ ಧೋರಣೆಯ ಕೊಡುಗೆಯೂ ಹೌದು. ಕೋವಿದ್ ಸಂದರ್ಭದಲ್ಲಿ ಮೂರು ತಿಂಗಳ ಲಾಕ್ ಡೌನ್ ಬಂಧನದಿಂದ ಕಂಗೆಟ್ಟು ವಿಚಲಿತವಾದ ಒಂದು ಸಮಾಜಕ್ಕೆ ಕಾಶ್ಮೀರದ ಜನತೆ ಒಂದು ವರ್ಷದ ಕಾಲ ದಿಗ್ಬಂಧನಕ್ಕೆ ಒಳಗಾಗಿದ್ದುದು ಹಿಂಸೆ ಎನಿಸಲೇ ಇಲ್ಲ.
ಕಾರಣ ಏನೆಂದರೆ ದೈಹಿಕ ಹಿಂಸೆಯನ್ನಷ್ಟೇ ನಾವು ಹಿಂಸೆಯ ಪರಿಭಾಷೆಯಲ್ಲಿ ವ್ಯಾಖ್ಯಾನಿಸುತ್ತೇವೆ. ಬೌದ್ಧಿಕ ಹಿಂಸೆಯನ್ನು ಮಾನವ ಸಹಜ ಕ್ರಿಯೆ ಎಂದು ಭಾವಿಸಿಬಿಡುತ್ತೇವೆ. ಭಾರತದ ಶ್ರೇಣೀಕೃತ ಸಮಾಜದಲ್ಲಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ನರನಾಡಿಗಳಲ್ಲಿ ಹರಿಯುತ್ತಿರುವುದು ಬೌದ್ಧಿಕ ಕ್ರೌರ್ಯ ಮತ್ತು ಮಿದುಳಿನಲ್ಲಿ ಸದಾ ಜಾಗೃತವಾಗಿರುವುದು ಬೌದ್ಧಿಕ ಹಿಂಸೆ.
ಹಾಗಾಗಿಯೇ ತಲೆಯ ಮೇಲೆ ಮಲ ಹೊರುವುದು ನಮಗೆ ಕಸುಬು ಎನಿಸುತ್ತದೆ, ಹಿಂಸೆ ಎನಿಸುವುದಿಲ್ಲ. ಈ ಧೋರಣೆಯ ಒಂದು ಆಯಾಮವನ್ನು ನಾವು ಇಂದಿನ ರೈತ ಹೋರಾಟದ ನಡುವೆ ಕಾಣುತ್ತಿದ್ದೇವೆ. ಒಂದು ಪ್ರಜಾಸತ್ತಾತ್ಮಕ ದೇಶದ ಆಡಳಿತ ವ್ಯವಸ್ಥೆಯಲ್ಲಿ ಊಹಿಸಲೂ ಸಾಧ್ಯವಾಗದ ಮಟ್ಟಿಗೆ ಬೌದ್ಧಿಕ ಕ್ರೌರ್ಯ ನೆಲೆ ಮಾಡಿರುವುದನ್ನು ಭಾರತ ಸರ್ಕಾರದ ಧೋರಣೆಯಲ್ಲಿ ಕಾಣುತ್ತಿದ್ದೇವೆ.
ನವಂಬರ್ 26 , 2020ರಂದು ಆರಂಭವಾದ ರೈತರ ಪ್ರತಿಭಟನೆಗೆ ಇಂದಿಗೆ 40 ದಿನಗಳಾಗುತ್ತದೆ. ಒಂದು ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡುವ ಸಾರ್ವಭೌಮ ಪ್ರಜೆಗಳ ನಡುವೆ ಉಗ್ರಗಾಮಿಗಳನ್ನು, ಭಯೋತ್ಪಾದಕರನ್ನು ಹೆಕ್ಕಿ ತೆಗೆಯುವಷ್ಟು ಕ್ರೌರ್ಯ ಭಾರತದ ಮಣ್ಣಲ್ಲಿ ಇರಲು ಸಾಧ್ಯವೇ ? ಹೌದು ಎಂದೇ ಹೇಳಬೇಕಾಗುತ್ತದೆ.
ಏಕೆಂದರೆ ಇದೇ ಆಡಳಿತ ವ್ಯವಸ್ಥೆಯಲ್ಲಿ ಹತ್ತು, ಹದಿನೈದರ ಹರೆಯದ ಮಕ್ಕಳೂ ಉಗ್ರಗಾಮಿಗಳ ಪಟ್ಟಿಗೆ ಸೇರಿ ಗುಂಡೇಟಿಗೆ ಬಲಿಯಾಗಿದ್ದಾರೆ. ಇದೇ ಆಡಳಿತ ವ್ಯವಸ್ಥೆಯಲ್ಲಿ ಸಜೀವ ದಹನಕ್ಕೊಳಗಾದ ಅಮಾಯಕ ಜೀವಗಳು ನ್ಯಾಯವಂಚಿತವಾಗುತ್ತವೆ. ತಮ್ಮ ಸಾಂವಿಧಾನಿಕ ಮತ್ತು ಶೈಕ್ಷಣಿಕ ಹಕ್ಕುಗಳಿಗಾಗಿ ಹೋರಾಡುವ ವಿದ್ಯಾರ್ಥಿ ಯುವಜನರಲ್ಲಿ “ ನಗರ ನಕ್ಸಲರನ್ನು ತುಕಡೆ ತುಕಡೆ ಗುಂಪನ್ನು ” ಗುರುತಿಸಲಾಗುತ್ತದೆ.
ಇದೇ ಮಣ್ಣಲ್ಲಿ, ತಮ್ಮ ಅರಣ್ಯ ಹಕ್ಕುಗಳಿಗಾಗಿ, ಬದುಕುವ ಹಕ್ಕುಗಳಿಗಾಗಿ ಹೋರಾಡುವ ಆದಿವಾಸಿಗಳನ್ನು ಉಗ್ರಗಾಮಿಗಳಂತೆ ಕಾಣಲಾಗುತ್ತದೆ. ನಿಷ್ಕಾರುಣ್ಯವಾಗಿ ಅವರ ಶತಮಾನಗಳ ಮೂಲ ನೆಲೆಗಳನ್ನು ಧ್ವಂಸ ಮಾಡಲಾಗುತ್ತದೆ. ಇದೇ ಮಣ್ಣಿನಲ್ಲಿ ಒಂದು ಪ್ರಾಣಿಯ ಪಾವಿತ್ರ್ಯತೆಗಾಗಿ ನೂರಾರು ಮನುಜ ಜೀವಗಳನ್ನು ಬಲಿ ಕೊಡಲಾಗುತ್ತದೆ.
ಇದೇ ಮಣ್ಣಿನಲ್ಲಿ ಜಾತಿ, ಮತಧರ್ಮ ಮತ್ತು ಸಂಸ್ಕೃತಿ ರಕ್ಷಣೆಗಾಗಿ ನರಬಲಿ ನೀಡುವುದನ್ನು ಸಹಜ ಪ್ರಕ್ರಿಯೆಯಂತೆ ಸ್ವೀಕರಿಸಲಾಗಿದೆ. ಒಂದು ಪೂಜಾ ಸ್ಥಳ, ಒಂದು ಮಂದಿರ, ಒಂದು ಮಸೀದಿ ಅಥವಾ ಇಗರ್ಜಿ ಹಲವು ಜೀವಗಳಿಗೆ ಪ್ರಾಣಾಂತಿಕವಾಗುವ ಒಂದು ಸಮಾಜೋ ಸಾಂಸ್ಕøತಿಕ ವ್ಯವಸ್ಥೆಯನ್ನೂ ನಾವು ಕಂಡಿದ್ದೇವೆ. ಈ ವಿದ್ಯಮಾನಗಳಲ್ಲಿ ಕಂಡುಬರುವ ದೈಹಿಕ ಹಿಂಸೆಗಿಂತಲೂ ನಮ್ಮನ್ನು, ಅಂದರೆ ನಾಗರಿಕ ಪ್ರಜ್ಞೆ ಇರುವ ಜನರನ್ನು, ಹೆಚ್ಚು ಕಾಡಬೇಕಿರುವುದು ಈ ಮನಸುಗಳಲ್ಲಿ ಅಂತರ್ಗತವಾಗಿರುವ ಬೌದ್ಧಿಕ ಕ್ರೌರ್ಯ ಮತ್ತು ಹಿಂಸೆ.
ಈ ಬೌದ್ಧಿಕ ಕ್ರೌರ್ಯವನ್ನು ನಾವಿಂದು ಸಂಸದೀಯ ಪ್ರಜಾತಂತ್ರದ ಕಟಕಟೆಯಲ್ಲಿ ಕಾಣುತ್ತಿದ್ದೇವೆ. ಭಾರತದ ಪ್ರಜಾಸತ್ತಾತ್ಮಕ ಗಣತಂತ್ರ ವ್ಯವಸ್ಥೆಯ ಆವರಣದಲ್ಲಿ ಕಾಣುತ್ತಿದ್ದೇವೆ. ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತ ಚಳುವಳಿ ಈಗಾಗಲೇ ನಮ್ಮ ಆಡಳಿತ ವ್ಯವಸ್ಥೆಯ ನಿರ್ವೀರ್ಯತೆ, ನಿರ್ಲಜ್ಜತೆ ಮತ್ತು ಕ್ರೂರ ಮುಖವಾಡವನ್ನು ಕಳಚಿಹಾಕಿದೆ.
ರಾಜಧಾನಿಯ ನಾಲ್ಕೂ ಕಡೆ ನೆರೆದಿರುವ ಲಕ್ಷಾಂತರ ರೈತಾಪಿಯ ನಡುವೆ ಖಲಿಸ್ತಾನಿಗಳು, ಭಯೋತ್ಪಾದಕರು, ಉಗ್ರಗಾಮಿಗಳು, ನಗರ ನಕ್ಸಲರು, ದೇಶದ್ರೋಹಿಗಳು ಅಥವಾ ‘ ತುಕಡೆ ತುಕಡೆ ಗುಂಪುಗಳು’ ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಏಕೆಂದರೆ ಈ ಹೋರಾಟಗಾರರೊಡನೆ ಕೇಂದ್ರ ಸಚಿವರು ಭೋಜನದ ಸವಿ ಉಂಡಿದ್ದಾರೆ. ಆದರೂ ಈ ನೊಂದ ಜೀವಗಳಿಗೆ ಒಂದು ಮಾನವೀಯ ಸ್ಪಂದನೆ, ಅವರ ಸಮಸ್ಯೆಗಳಿಗೆ ಸಂವೇದನಾಶೀಲ ಸ್ಪರ್ಶ ದೊರೆಯುತ್ತಿಲ್ಲ.
ಈ ಹೋರಾಟ ತಡೆಯಲಸಾಧ್ಯವಾದ ಚಳಿಯಲ್ಲಿ ನಡೆಯುತ್ತಿದೆ, ಕಳೆದ ಹಲವು ದಿನಗಳಿಂದ ಮಳೆಯ ಪ್ರಮಾಣ, ಶೀತಲ ಗಾಳಿ ಹೆಚ್ಚಾಗಿದೆ. ಈಗಾಗಲೇ 50ಕ್ಕೂ ಹೆಚ್ಚು ರೈತರು ಅಸುನೀಗಿದ್ದಾರೆ. ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರದಲ್ಲಿ ಒಂದು ಸರ್ವಾಧಿಕಾರಿ ಆಡಳಿತವೇ ಇದ್ದಿದ್ದರೂ ಬಹುಶಃ, ಮೂರು ಕೃಷಿ ಮಸೂದೆಗಳನ್ನು ಭಿನ್ನಾಭಿಪ್ರಾಯಗಳು ಬಗೆಹರಿಯುವವರೆಗೂ ಅಮಾನತಿನಲ್ಲಿರಿಸುವ ಆಶ್ವಾಸನೆ ನೀಡಿ ಮುಷ್ಕರ ಕೊನೆಗೊಳಿಸಲು ಯತ್ನಿಸುತ್ತಿತ್ತು.
ಆದರೆ ಒಂದು ಚುನಾಯಿತ ಸರ್ಕಾರ ಈ ಕನಿಷ್ಠ ಪ್ರಜ್ಞೆಯನ್ನೂ ಕಳೆದುಕೊಂಡಿದೆ. ಮುಷ್ಕರ ನಿರತ ರೈತರ ಬಳಿಗೆ ಖುದ್ದಾಗಿ ಒಮ್ಮೆ ಭೇಟಿ ನೀಡುವ ಸಂಯಮವೂ ಇಲ್ಲದ ಪ್ರಧಾನಮಂತ್ರಿ, ಕನಿಷ್ಟ ಮಡಿದ ರೈತರಿಗೆ ಅನುಕಂಪ ಸೂಚಿಸುವ ಮಾತುಗಳನ್ನೂ ಆಡದಿರುವುದು ಈ ದೇಶದ ಆಡಳಿತ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಬೌದ್ಧಿಕ ಕ್ರೌರ್ಯವನ್ನು ಸೂಚಿಸುತ್ತದೆ.
ದೆಹಲಿ ಗಡಿಯಲ್ಲಿ ಸಂಭವಿಸಿರುವ ಸಾವುಗಳು ವ್ಯವಸ್ಥೆಯ ನಿಷ್ಕ್ರಿಯತೆಯ ಫಲ ಎಂದರೂ ತಪ್ಪೇನಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹಠಮಾರಿ ಧೋರಣೆ ಸಲ್ಲದು ಎನ್ನುವ ಕನಿಷ್ಟ ನಾಗರಿಕ ಪ್ರಜ್ಞೆ ಆಡಳಿತ ನಿರ್ವಹಣೆ ಮಾಡುವವರಲ್ಲಿ ಇರಬೇಕಲ್ಲವೇ ? ಹೆಂಗಸರು, ಮಕ್ಕಳು, ವೃದ್ಧರು, ಯುವಕರು, ನಿವೃತ್ತ ಯೋಧರು ಹೀಗೆ ವಯೋಮಾನ, ಲಿಂಗ, ಜಾತಿ, ಧರ್ಮ ಯಾವುದೇ ಬೇಧವಿಲ್ಲದೆ ರೈತರು ತಮ್ಮ ಹೋರಾಟ ಮುಂದುವರೆಸಿದ್ದಾರೆ.
ಕೊರೆವ ಚಳಿಯಲ್ಲಿ, ಸುರಿವ ಮಳೆಯ ನಡುವೆ ತಮ್ಮವರನ್ನು ಕಳೆದುಕೊಳ್ಳುತ್ತಿರುವ ರೈತರನ್ನು ಕುರಿತು “ ನೀವು ಮುಷ್ಕರ ಹಿಂಪಡೆಯಿರಿ, ನಿಮ್ಮ ಅನುಮಾನಗಳನ್ನು ಪರಿಶೀಲಿಸುತ್ತೇವೆ, ಅಲ್ಲಿಯವರೆಗೂ ಮೂರು ಕೃಷಿ ಮಸೂದೆಗಳ ಅನುಷ್ಟಾನವನ್ನು ತಡೆಹಿಡಿಯುತ್ತೇವೆ ” ಎಂದು ಹೇಳಿದ್ದರೂ ಸಾಕಿತ್ತು, ಈ ಸರ್ಕಾರಕ್ಕೆ ಮತ್ತು ಸರ್ಕಾರವನ್ನು ನಿರ್ವಹಿಸುವವರಿಗೆ ಮನುಷ್ಯತ್ವ ಇದೆ ಎಂದು ಹೇಳಬಹುದಿತ್ತು.
ಲಾಕ್ ಡೌನ್ ಸಂದರ್ಭದಲ್ಲಿ ಮಡಿದ 25ಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಪರಿಹಾರ ನೀಡಲೂ ಒಪ್ಪದ ಕೇಂದ್ರ ಸರ್ಕಾರ, ಈ ಕುರಿತ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಕೈತೊಳೆದುಕೊಂಡಿತ್ತು. ಈಗ ರಾಜಧಾನಿಯ ಪಕ್ಕದಲ್ಲೇ ರೈತರು ಸಾಯುತ್ತಿದ್ದಾರೆ, ನಮ್ಮ ಪ್ರಧಾನಮಂತ್ರಿಯವರು ತಮ್ಮ ಮನದ ಮಾತಿನಲ್ಲಿ ಮಾರುಕಟ್ಟೆಗೆ ಸಾಂತ್ವನದ ಮಾತುಗಳನ್ನಾಡುತ್ತಿದ್ದಾರೆ.
25 ವರ್ಷಗಳಲ್ಲಿ ಆತ್ಮಹತ್ಯೆಗೆ ಬಲಿಯಾದ ಮೂರೂವರೆ ಲಕ್ಷ ರೈತರಿಗೆ ಅನುಕಂಪ ತೋರದ ಆಡಳಿತ ವ್ಯವಸ್ಥೆಯಿಂದ ಇಲ್ಲಿ ಸತ್ತ 50 ರೈತರಿಗೆ ಸಾಂತ್ವನ ಬಯಸುವುದೂ ಸಹ ತಪ್ಪೇನೋ ಎನಿಸುತ್ತದೆ. ಅಸಂಖ್ಯಾತ ಜನರ ಮಾರಣಹೋಮಗಳನ್ನು ಸಂಭ್ರಮಿಸುತ್ತಾ, ಅಮಾಯಕರ ಸಮಾಧಿಗಳ ಮೇಲೆ ನುಣುಪಾದ ಹಾಸುಗಲ್ಲುಗಳನ್ನು ಹರಡಿ ಅಧಿಕಾರದ ಜಗನ್ನಾಥ ರಥಚಕ್ರಗಳನ್ನು ಉರುಳಿಸಿದ ಒಂದು ಪರಂಪರೆಯಿಂದ ಮಾನವೀಯ ಸ್ಪಂದನೆ, ಸಂವೇದನೆ ಮತ್ತು ಅನುಕಂಪ ನಿರೀಕ್ಷಿಸುವುದಾದರೂ ಹೇಗೆ ? ಅನ್ಯರ ನೋವಿನಿಂದ ವಿಚಲಿತಗೊಳ್ಳದ, ಮತ್ತೊಬ್ಬರ ಸಾವನ್ನು ಸಂಭ್ರಮಿಸುವ ಮನಸ್ಸುಗಳಷ್ಟೇ ಹೀಗಿರಲು ಸಾಧ್ಯ .
ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತ್ಯಂತ ಕರಾಳ ಅಧ್ಯಾಯ ಎಂದು ಪರಿಗಣಿಸಲಾಗುವ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಪ್ರಭುತ್ವ ತನ್ನ ಪ್ರಜೆಗಳ ಮೇಲೆ ದೌರ್ಜನ್ಯ ನಡೆಸಿತ್ತು, ಹಕ್ಕುಗಳನ್ನು ಕಸಿದುಕೊಂಡಿತ್ತು. ಆದರೆ ಅಂದೂ ಸಹ ಈ ರೀತಿಯ ಬೌದ್ಧಿಕ ಕ್ರೌರ್ಯ ಮತ್ತು ಹಿಂಸೆ ಕಂಡುಬಂದಿರಲಿಲ್ಲ. ಕಣ್ಣೆದುರಿನಲ್ಲೇ ನಡೆಯುವ ಸಾವು ನೋವುಗಳಿಗೂ ಸ್ಪಂದಿಸದಿರುವಷ್ಟು ಕ್ರೌರ್ಯ ಭಾರತದ ಪ್ರಜೆಗಳು ಕಂಡಿರಲೂ ಇಲ್ಲ.
ಇಡೀ ದೇಶದ ಪ್ರಜ್ಞಾವಂತ ಮನಸುಗಳನ್ನು ವಿಚಲಿತಗೊಳಿಸುತ್ತಿರುವ ಸಾವು ನೋವಿನ ಚಿತ್ರಣಗಳು ಮನದ ಕದವ ಬಡಿಯದೆ ಇದ್ದರೆ ಆ ಮನದಿಂದ ಸಾಂತ್ವನದ, ಸಂವೇದನೆಯ ಮಾತುಗಳು ಬರುವುದಾದರೂ ಹೇಗೆ ? ಮೌನವೇ ಸಾಕು ಕ್ರೌರ್ಯದ ಛಾಯೆ ಕವಿಯಲು.
ದೆಹಲಿಯ ಗಡಿಯಲ್ಲಿ ಕವಿದಿರುವ ಕಾರ್ಮೋಡಗಳಲ್ಲಿ ತುಂಬಿರುವುದು ಜಲಬಿಂದುಗಳಲ್ಲ, ಈ ದೇಶದ ಆಡಳಿತ ವ್ಯವಸ್ಥೆಯ ಕ್ರೌರ್ಯ ಮತ್ತು ಅಮಾನುಷ ಧೋರಣೆಯ ಜಲಾಗಾರ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಬಹಿರಂಗ
ಗಾಳಿಪಟ ವೇಗದ ರಾಜಕುಮಾರ ‘ಬೀರ್ ಚಿಲಾರಾಯ್’..!

- ಡಾ. ಗಿರೀಶ್ ಮೂಗ್ತಿಹಳ್ಳಿ, ಸಂಶೋಧಕರು, ಚಿಕ್ಕಮಗಳೂರು
ಮಾರ್ಚ್- 27-2021 ರಂದು ಮಾನ್ಯ ಪ್ರಧಾನ ಮಂತ್ರಿ ಅವರು, “ಬೀರ್ ಚಿಲಾರಾಯ್ ಅವರು ಅಪ್ರತಿಮ ಶೌರ್ಯ ಮತ್ತು ದೇಶಭಕ್ತಿಗೆ ಸಮಾನಾರ್ಥಕವಾಗಿದ್ದರು. ಅವರು ಮಹೋನ್ನತ ಯೋಧರಾಗಿದ್ದರು. ಜನರಿಗಾಗಿ ಜೀವನಪೂರ್ತಿ ಹೋರಾಟ ನಡೆಸಿದ್ದ ಅವರು, ತಾವು ನಂಬಿದ್ದ ತತ್ವಗಳನ್ನು ಕೊನೆಯ ತನಕ ಪಾಲಿಸಿಕೊಂಡು ಬಂದಿದ್ದರು.
ಅವರ ಕೆಚ್ಚೆದೆಯ ಧೈರ್ಯವು ಮುಂಬರುವ ಪೀಳಿಗೆಗೆ ಸದಾ ಪ್ರೇರಣೆಯಾಗಿ ಮುಂದುವರಿಯಲಿದೆ. ಬೀರ್ ಚಿಲಾರಾಯ್ ಜಯಂತಿಯಂದು ಅವರನ್ನು ನೆನಪು ಮಾಡಿಕೊಳ್ಳುತ್ತಿದ್ದೇನೆ.” ಎಂದು ಟ್ವೀಟ್ ಮಾಡಿದ್ದರು. ಯಾರು ಈ ಬೀರ್ ಚಿಲಾರೈ? ಎಂದು ಹುಡುಕಿದಾಗ ಅವನ ಬಗೆಗೆ ದಕ್ಕಿರುವ ವಿಚಾರವಿದು.
The great Bir Chilarai is synonymous with valour and patriotism. He was an outstanding warrior, who fought for people and the principles he held sacred. His bravery will continue to motivate the coming generations. Remembering him on his Jayanti.
— Narendra Modi (@narendramodi) February 27, 2021
ಅಸ್ಸಾಂ ನ ಕೋಚ್ ರಾಜವಂಶದ ಸ್ಥಾಪಕ ಆಡಳಿತಗಾರನಾಗಿದ್ದ ಮಹಾರಾಜ ವಿಶ್ವ ಸಿಂಘನ ಮೂರನೇ ಮಗ, ಕಮಟಾ ಸಾಮ್ರಾಜ್ಯದ ರಾಜ ನಾರ ನಾರಾಯಣ ನ ಕಿರಿಯ ಸಹೋದರನೇ ಶುಕ್ಲಧ್ವಾಜ. ಹುಣ್ಣಿಮೆಯ ದಿನದಂದು ಜನಿಸಿದ ಶುಕ್ಲಧ್ವಾಜನು ಉನ್ನತ ಶಿಕ್ಷಣ ಸಾಧಿಸಲು ಹಿರಿಯ ಸಹೋದರ ಮಲ್ಲಾದೇವನ ಜತೆ ವಾರಣಾಸಿಗೆ ಹೋದನು. ಸಂಗೀತ, ಸಾಹಿತ್ಯ, ವ್ಯಾಕರಣ, ಕಾನೂನು, ಜ್ಯೋತಿಷಿ ಮುಂತಾದ ವಿಷಯಗಳಲ್ಲಿ ಪರಿಣತಿ ಹೊಂದಿದನು.
ಅನಂತರ ನಾರ ನಾರಾಯಣನ ಸಾಮ್ರಾಜ್ಯವನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದನು. ಇವನ ಸೈನ್ಯದಲ್ಲಿ ಕಮಾಂಡರ್ -ಇನ್- ಚೀಫ್ ಆಗಿ ಕಾರ್ಯಭಾರ ನಿರ್ವಹಿಸಿದನು. ಜನರಲ್ ಆಗಿ ಇವನ ಚಲನೆಯು ಚಿಲಾ( ಗಾಳಿಪಟ)ದಷ್ಟು ವೇಗವಾಗಿದ್ದರಿಂದ ಇವನಿಗೆ ‘ಚಿಲರೈ’ ಎಂಬ ಹೆಸರು ಬಂತು.
ಚಿಲಾರೈ ನ ಶೌರ್ಯವು ಭೂಟಿಯಾ, ಕಾಚಾರಿ ಸಾಮ್ರಾಜ್ಯ ಮತ್ತು ಅಹೋಮ್ಸ್ ( ಕೋಚೆನ್ ಮತ್ತು ಅಹೋಮ್ಸ್ ನಡುವೆ ಹಲವಾರು ಕದನಗಳಲ್ಲಿ ಹೋರಾಡಿದರೂ ಎರಡೂ ಕಡೆಯಿಂದ ಎಣಿಸಬಹುದಾದ ವಿಜಯಗಳೊಂದಿಗೆ) ಕೋಚ್ ಪ್ರಾಬಲ್ಯವನ್ನು ಖಚಿತಪಡಿಸಿತು.1563ರಲ್ಲಿ ಚಿಲಾರೈ ನೇತೃತ್ವದಲ್ಲಿ ಕೋಚೆನ್ ಬ್ರಹ್ಮಪುತ್ರ ನದಿಯನ್ನು ದಾಟಿ ಗಾರ್ಗಾಂವ್ ನ ಅಹೋಮ್ ಸಾಮ್ರಾಜ್ಯದ ಮೇಲೆ ದಾಳಿ ಮಾಡಿ ತನ್ನ ಸೈನಿಕರಿಗೆ ಭೂಮಿಯಲ್ಲಿ ಮತ್ತು ನೀರಿನಲ್ಲಿ ಹೋರಾಡಲು ಆಜ್ಞಾಪಿಸಿ ದನು. ಸೋತ ರಾಜನ ನಡುವೆ ಒಪ್ಪಂದವಾಯಿತು.
ನಾರ ನಾರಾಯಣನು ಕ್ಯಾಚರ್ ರಾಜನನ್ನು ಸೋಲಿಸಿ ತನ್ನ ಆಳ್ವಿಕೆಯನ್ನು ತಂದನು. ಇಂಥ ಪ್ರಬಲ ರಾಜನೊಂದಿಗೆ ಹೋರಾಡದಿರಲು ನಿರ್ಧರಿಸಿದ ಮಣಿಪುರದ ರಾಜನು ಇವನಿಗೆ ಶರಣಾದನು. ನಂತರ ಚಿಲಾರೈ ಜಯಂತಿಯಾ, ತ್ರಿಪುರ ಮತ್ತು ಸಿಲ್ಹೆಟ್ ರಾಜ್ಯಗಳ ಮೇಲೆ ದಾಳಿ ಮಾಡಿದನು.ರಾಜರನ್ನು ಸೋಲಿಸಿ ಕೊಂದನು. ಇದರಿಂದ ಭಯಭೀತರಾದ ಖೈರಾಮ್ ಮತ್ತು ದಿಮೋರಿಯಾ ದೊರೆಗಳು ತಮ್ಮ ಸಣ್ಣ ರಾಜ್ಯಗಳನ್ನು ಒಪ್ಪಿಸಿದರು. ಚಿಲಾರೈನ ಇಂಥ ಶೌರ್ಯದ ಸಹಾಯದಿಂದ ರಾಜ ನಾರ ನಾರಾಯಣನ ಸಾಮ್ರಾಕ್ಯ ವಿಸ್ತಾರವಾಯಿತು.
೧೫೬೮ರಲ್ಲಿ ಸೊಲೆಮನ್ ಆಳ್ವಿಕೆ ನಡೆಸಿದ ಗೌರ್ ಮೇಲೆ ನಾರ ನಾರಾಯಣ ದಾಳಿ ಮಾಡಿದನು. ಆದರೆ ಕಾಲಾಪಹಾರ್ ಎದುರು ಸೋಲನ್ನು ಅನುಭವಿಸಿದರು. ಕಾಲಾಪಹಾರ್ ತನ್ನ ಸೈನ್ಯದೊಂದಿಗೆ ತಮಜ್ ಪುರದತ್ತ ಸಾಗುತ್ತಿರುವಾಗ ಕಾಮಾಕ್ಯ ಸೇರಿದಂತೆ ಅನೇಕ ದೇವಾಲಯಗಳನ್ನು ನಾಶಪಡಿಸಿದನು.
ಕೋಚ್ ಸಾಮ್ರಾಜ್ಯದ ಬಹುಪಾಲು ಭಾಗವನ್ನು ಅಫ್ಘನ್ನರು ವಶಪಡಿಸಿಕೊಂಡರು. ಆದಾಗ್ಯೂ ಚಿಲಾರೈ ಮತ್ತು ನಾರ ನಾರಾಯಣ ಇಬ್ಬರೂ ಸೇರಿ ಕಾಮಾಕ್ಯ ದೇವಾಲಯವನ್ನು ಪುನರ್ನಿರ್ಮಾಣ ಮಾಡಿದರು. ಶಂಕಾರ್ದೇವನ ಮಹಾವೈಷ್ಣವ ಚಳವಳಿಗೆ ಪ್ರೋತ್ಸಾಹ ನೀಡಿದರು.
ಮೊಘಲ್ ಚಕ್ರವರ್ತಿ ಅಕ್ಬರ್ ನು ಇವರ ಬಳಿ ಸಹಾಯ ಕೋರಿದಾಗ ನಾರ ನಾರಾಯಣನು ಎರಡನೇ ಬಾರಿಗೆ ಗೌರ್ ಮೇಲೆ ದಾಲಿ ಮಾಡಿದನು. ಅನಂತರ ಸಿಸ್ಯಾ ಸಂಘಾ ರಾಯ್ಕತ್ ಮತ್ತು ಭೂತಾನ್ ರಾಜ ಡೆಬ್ರಾಜ್ ಅವರೊಂದಿಗೆ ಮೈತ್ರಿ ಮಾಡಿಕೊಂಡರು. ಚಿಲಾರೈ ಘೋರ್ ಘಾಟ್ ಅನ್ನು ವಶವಡಿಸಿಕೊಂಡನು.
ರಾಜ ಗೌರ ಪಾಷನನ್ನು ಸೋಲಿಸಿದ ನಂತರ ರಾಜ್ಯವನ್ನು ನಾರ ನಾರಾಯಣ ಮತ್ತು ಅಕ್ಬರ್ ನಡುವೆ ಹಂಚಲಾಯಿತು. ಗೌರ್ ನ ಎರಡನೇ ಆಕ್ರಮಣದ ಸಮಯದಲ್ಲಿ ಗಡ್ಡೆ ನೋವಿನಿಂದ ಬಳಲುತ್ತಿದ್ದ ಚಿಲಾರೈ ಗಂಗಾನದಿ ದಡದಲ್ಲಿ ಅಸು ನೀಗಿದನು(1577). ಚಿಲಾರೈ ನ ಇಂಥ ಧೈರ್ಯಶಾಲಿ ಕಾರ್ಯಗಳೇ ಕೋಚ್ ಸಾಮ್ರಾಜ್ಯವನ್ನು ಉತ್ತುಂಗಕ್ಕೆ ಏರಿಸಿತ್ತು.
ಅಸ್ಸಾಂ ಸರ್ಕಾರವು ಮಹಾನ್ ಕಮಾಂಡರ್-ಇನ್- ಚೀಫ್ ಆದ ಚಿಲಾರೈ ಜನ್ಮದಿನವನ್ನು 2004ರಲ್ಲಿ ‘ಬಿರ್ ಚಿಲಾರಾಯ್ ದಿವಸ್’ ಎಂದು ಘೋಷಿಸಿತು. ಇದರ ಅಂಗವಾಗಿ ಅಸ್ಸಾಂನ ಧೈರ್ಯಶಾಲಿ ವ್ಯಕ್ತಿಗಳಿಗೆ ಅತ್ಯುನ್ನತ ಗೌರವವಾಗಿ ‘ಬಿರ್ ಚಿಲಾರೈ ಪ್ರಶಸ್ತಿ’ ಯನ್ನು ನೀಡುತ್ತಿರುವುದು ಗಮನಾರ್ಹ ಸಂಗತಿ.
Warm greetings to the people of Assam on Bir Chilarai Divas, the birth anniversary of Shukladhwaja. This valiant scion of the Koch dynasty was famously known as Bir Chilarai, for commanding troop movements that were as fast as a chila (kite). pic.twitter.com/eFIEWMk8pR
— Congress (@INCIndia) February 9, 2020
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಬಹಿರಂಗ
ಪ್ರತಿರೋಧದ ದನಿಗಳು ಸರ್ವಾಧಿಕಾರಕ್ಕೆ ಸದಾ ಅಪಥ್ಯವೇ

- ನಾ ದಿವಾಕರ
ಒಂದು ಸ್ವಸ್ಥ ಸಮಾಜ ತನ್ನ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು, ಮುಂದಿನ ಪೀಳಿಗೆಗೆ ಆರೋಗ್ಯಕರ ನೆಲೆಗಳನ್ನು ಬಿಟ್ಟುಹೋಗಲು ಬಯಸುವುದು ಸಹಜ. ಮಾನವ ಸಮಾಜದ ಅಭ್ಯುದಯದ ಹಾದಿಯಲ್ಲಿ ಈ ಸ್ವಾಸ್ಥ್ಯ ಸಂರಕ್ಷಣೆಯ ಪ್ರಯತ್ನಗಳು ನಡೆಯುತ್ತಾ ಬಂದಿರುವುದರಿಂದಲೇ ಮನುಕುಲ ಇಂದಿಗೂ ಸಹ ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡುಬಂದಿದೆ. ಒಬ್ಬ ಹಿಟ್ಲರಿಗೆ ನೂರಾರು ಗಾಂಧಿ ಮಂಡೇಲಾಗಳು ಹುಟ್ಟಿಕೊಳ್ಳುತ್ತಾ ಬಂದಿದ್ದಾರೆ. ಒಬ್ಬ ಮುಸೋಲಿನಿಗೆ ನೂರಾರು ಅಂಬೇಡ್ಕರುಗಳು ಉದಯಿಸುತ್ತಾ ಬಂದಿದ್ದಾರೆ.
ಮತಾಂಧನೊಬ್ಬನಿಂದ ಹತ್ಯೆಗೀಡಾದರೂ ಗಾಂಧಿ ಬೌದ್ಧಿಕವಾಗಿ ನಮ್ಮ ನಡುವೆ ಇದ್ದಾರೆ. ಭಾರತದ ಮೇಲ್ಜಾತಿ ಮನಸುಗಳಿಂದ ಬಹಿಷ್ಕೃತರಾಗಿದ್ದರೂ ಪೆರಿಯಾರ್, ಅಂಬೇಡ್ಕರ್ ಇಂದು ಭಾರತೀಯ ಸಮಾಜದ ಅಂತಃಸತ್ವದ ಬುನಾದಿಯಾಗುತ್ತಾರೆ. ಸಾಂಸ್ಕೃತಿಕ ರಾಜಕಾರಣದ ರಾಯಭಾರಿಗಳ ಗುಂಡೇಟಿಗೆ ಬಲಿಯಾದರೂ ಧಬೋಲ್ಕರ್, ಪನ್ಸಾರೆ, ಗೌರಿ, ಕಲಬುರ್ಗಿ ನಮ್ಮ ನಡುವೆ ಚಿಂತನೆಗಳ ರೂಪದಲ್ಲಿ ಜೀವಂತಿಕೆಯಿಂದಿದ್ದಾರೆ.
ಸಮಾಜದಲ್ಲಿ ಅಂತರ್ಗತವಾಗಿರುವ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಉಳಿಸಿ ಬೆಳೆಸಲು ಈ ಚಿಂತಕರ ಚಿಂತನೆಗಳು, ಬೋಧನೆಗಳು ಸುಭದ್ರ ಬುನಾದಿಯನ್ನು ನಿರ್ಮಿಸುತ್ತವೆ. ಶತಮಾನಗಳ ಹಿಂದೆ ಭಾರತೀಯ ಸಮಾಜದಲ್ಲಿ ಅಂತರ್ಗತವಾಗಿದ್ದ ಅಸಮಾನತೆ, ಅಸಹಿಷ್ಣುತೆ ಮತ್ತು ಜಾತಿ ಶ್ರೇಷ್ಠತೆಯ ಚಿಂತನೆಗಳಿಗೆ ಪ್ರತಿರೋಧದ ರೂಪದಲ್ಲೇ ಭಾರತದಲ್ಲಿ ಜೈನ, ಬೌದ್ಧ, ಸಿಖ್ ಧರ್ಮಗಳು ಉದಯಿಸಿದ್ದವು.
ಸಾಂಪ್ರದಾಯಿಕ ಸಮಾಜದ, ವೈದಿಕ ಪರಂಪರೆಯ ಡಂಭಾಚಾರ, ಶೋಷಣೆ, ಕಂದಾಚಾರಗಳ ವಿರುದ್ಧ ಭಕ್ತಿ ಪಂಥ, ಸೂಫಿ ಪರಂಪರೆಗಳು ಹುಟ್ಟಿಕೊಂಡಿದ್ದವು. ಈ ಪ್ರತಿರೋಧದ ದನಿಗಳು ಇಂದಿಗೂ ನಮ್ಮ ನಡುವೆ ಜೀವಂತವಾಗಿದ್ದರೆ ಅದರ ಹಿಂದೆ ಅನೇಕ ಸಮಕಾಲೀನ ಚಿಂತಕರ, ಸಾಹಿತಿಗಳ ಮತ್ತು ಸಮಾಜ ಸುಧಾರಕರ ಪರಿಶ್ರಮ ಇದೆ.
ಬುದ್ಧನಿಂದ ಗಾಂಧಿ ಅಂಬೇಡ್ಕರ್ ವರೆಗೆ ಈ ಚಿಂತನಾ ವಾಹಿನಿಗಳು ಭಾರತೀಯ ಸಮಾಜಕ್ಕೆ ಮಾರ್ಗದರ್ಶಿ ಸೂತ್ರಗಳನ್ನು ಒದಗಿಸಿವೆ. ಸಾವಿರಾರು ಭಾಷೆಗಳು, ನೂರಾರು ಸಂಸ್ಕೃತಿಗಳು ಭಾರತೀಯ ಸಮಾಜದ ವೈವಿಧ್ಯತೆಯನ್ನು, ಬಹುಸಂಸ್ಕೃತಿಯ ನೆಲೆಗಳನ್ನು ಕಾಪಾಡಿಕೊಂಡು ಬಂದಿದ್ದರೆ ಅದಕ್ಕೆ ಕಾರಣ ಈ ಮಹಾನ್ ಚಿಂತಕರು ಬಿಟ್ಟುಹೋಗಿರುವ, ಕೊಟ್ಟುಹೋಗಿರುವ ಟೂಲ್ಕಿಿಟ್ಗದಳು.
ಭಾರತದ ಫ್ಯಾಸಿಸ್ಟ್ ಆಡಳಿತ ವ್ಯವಸ್ಥೆಯ ದೃಷ್ಟಿಯಲ್ಲಿ, ವಂದಿಮಾಗಧ ಸುದ್ದಿಮನೆಗಳ ದೃಷ್ಟಿಯಲ್ಲಿ ರಾಜದ್ರೋಹದ ಅಸ್ತ್ರದಂತೆ ಕಾಣುವ ಒಂದು ಸಾಧಾರಣ ಟೂಲ್ಕಿ ಟ್ ದಿಶಾ ರವಿ ಎಂಬ 21 ವರ್ಷದ ಪರಿಸರವಾದಿಯನ್ನು ದೇಶದ್ರೋಹಿಯನ್ನಾಗಿ ಮಾಡುತ್ತದೆ. ಆದರೆ ಇಂತಹ ನೂರಾರು ಟೂಲ್ಕಿಷಟ್ಗರಳೇ ಭಾರತದಲ್ಲಿ ಪ್ರಜಾತಂತ್ರ ಮೌಲ್ಯಗಳನ್ನು ಸಂರಕ್ಷಿಸಿಕೊಂಡುಬಂದಿದೆ.
ದೆಹಲಿಯಲ್ಲಿ ನಡೆಯುತ್ತಿರುವ ರೈತ ಮುಷ್ಕರವನ್ನು ಬೆಂಬಲಿಸುವ ಒಂದು ಟೂಲ್ಕಿ ಟ್ 136 ಕೋಟಿ ಜನತೆಯನ್ನು ಪ್ರತಿನಿಧಿಸುವ ಒಂದು ಚುನಾಯಿತ ಸರ್ಕಾರವನ್ನು ವಿಚಲಿತಗೊಳಿಸುತ್ತದೆ ಎಂದರೆ ನಮ್ಮನ್ನು ಆಳುವ ವ್ಯವಸ್ಥೆ ಎಷ್ಟು ದುರ್ಬಲವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ದೆಹಲಿಯ ಪೊಲೀಸರು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿದ್ದ ಒಬ್ಬ ಹೋರಾಟಗಾರ್ತಿಯನ್ನು ರಾತ್ರೋರಾತ್ರಿ ಬಂಧಿಸುತ್ತಾರೆ, ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಯಾವುದೇ ಸುಳಿವು ನೀಡದೆ ಆಕೆಯನ್ನು ದೆಹಲಿಗೆ ಕರೆದೊಯ್ಯುತ್ತಾರೆ. ಒಂದು ಒಕ್ಕೂಟ ವ್ಯವಸ್ಥೆಯಲ್ಲಿ, ಗಣತಂತ್ರದ ಚೌಕಟ್ಟಿನಲ್ಲಿ ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ನಮ್ಮನ್ನು ಕಾಡದೆ ಹೋದರೆ ನಾವು ಪ್ರಜ್ಞಾಶೂನ್ಯರಾಗಿದ್ದೇವೆ ಎಂದೇ ಭಾವಿಸಬೇಕಾಗುತ್ತದೆ.
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಮುಷ್ಕರ ಮೂರು ತಿಂಗಳು ಪೂರೈಸಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಷ್ಟು ದೀರ್ಘಕಾಲಿಕ ಮುಷ್ಕರ ಈವರೆಗೂ ಕಂಡಿರಲಿಲ್ಲ. ಹಾಗೆಯೇ ಮುಷ್ಕರನಿರತರಲ್ಲಿನ ಈ ಪ್ರಮಾಣದ ಬದ್ಧತೆ ಮತ್ತು ಆತ್ಮಸ್ಥೈರ್ಯವನ್ನೂ ಭಾರತ ಕಂಡಿರಲಿಲ್ಲ. ಮತ್ತೊಂದು ಮಜಲಿನಲ್ಲಿ ನೋಡಿದಾಗ ಭಾರತದ ಗಣತಂತ್ರ ವ್ಯವಸ್ಥೆಯಲ್ಲಿ ಈ ರೀತಿಯ ನಿಷ್ಕ್ರಿಯ, ನಿರ್ದಯಿ ಮತ್ತು ನಿರ್ಲಕ್ಷ್ಯ ಸರ್ಕಾರವನ್ನೂ ಈವರೆಗೂ ನಾವು ಕಂಡಿರಲಿಲ್ಲ. ಇವೆಲ್ಲದರ ನಡುವೆ ಕೇಂದ್ರ ಸರ್ಕಾರ ರೈತ ಮುಷ್ಕರದ ನೈತಿಕ ಉದ್ದೇಶವನ್ನೇ ಪ್ರಶ್ನಿಸುತ್ತಿದ್ದು ಸರ್ಕಾರ ಜಾರಿಗೊಳಿಸಿರುವ ಅಸಾಂವಿಧಾನಿಕ ಕರಾಳ ಮರಣ ಶಾಸನಗಳನ್ನು ವಿರೋಧಿಸುವುದನ್ನೇ ರಾಜದ್ರೋಹ ಎಂದು ಪರಿಗಣಿಸುತ್ತಿದೆ. ಮುಷ್ಕರವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಅನುಸರಿಸಿದ ಕ್ರೂರ, ಅಸಾಂವಿಧಾನಿಕ ಕುಟಿಲೋಪಾಯಗಳು ವಿಫಲವಾದ ನಂತರ ಈಗ ಈ ಮುಷ್ಕರವನ್ನು ಬೆಂಬಲಿಸುವ ದನಿಗಳನ್ನೇ ಶಾಶ್ವತವಾಗಿ ಅಡಗಿಸುವ ಪ್ರಯತ್ನಗಳು ನಡೆಯುತ್ತಿವೆ. ದಿಶಾರವಿ ಇಂತಹ ಕುತಂತ್ರಕ್ಕೆ ಬಲಿಯಾದ ಪರಿಸರ ಹೋರಾಟಗಾರ್ತಿ.
ಕೆನಡಾದಲ್ಲಿ 2020ರ ಮಾರ್ಚ್ ತಿಂಗಳಲ್ಲಿ ಸ್ಥಾಪಿಸಲಾದ ಪೋಯೆಟಿಕ್ ಜಸ್ಟಿಸ್ ಫೌಂಡೇಷನ್ ಮೂಲತಃ ಜಗತ್ತಿನಾದ್ಯಂತ ನಡೆಯುವ ಜನಾಂದೋಲನಗಳನ್ನು, ಪರಿಸರ ಹೋರಾಟಗಳನ್ನು ಮತ್ತು ಹಕ್ಕೊತ್ತಾಯಗಳ ಹೋರಾಟಗಳನ್ನು ಬೆಂಬಲಿಸುವ ಒಂದು ಸಂಸ್ಥೆ. ದೆಹಲಿ ಪೊಲೀಸರು ಆರೋಪಿಸಿರುವಂತೆ ಇದು ಖಲಿಸ್ತಾನಿ ಬೆಂಬಲಿಗ ಸಂಘಟನೆ ಎಂದು ನಿರೂಪಿಸಲು ಯಾವುದೇ ಪುರಾವೆಗಳಿಲ್ಲ. ಸಾಮಾಜಿಕ ಮಾಧ್ಯಮಗಳು ಹೆಚ್ಚು ಪ್ರಚಲಿತವಾದ ನಂತರ ಇಂತಹ ಜಾಗತಿಕ ವೇದಿಕೆಗಳು ವಿಶ್ವದಾದ್ಯಂತ ನಡೆಯುವ ಜನಾಂದೋಲನಗಳಿಗೆ ಪ್ರೋತ್ಸಾಹ, ಬೆಂಬಲ ವ್ಯಕ್ತಪಡಿಸಲು ಕೆಲವು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುತ್ತವೆ. ಈ ಸೂತ್ರಗಳ ಮೂಲಕ ಹೋರಾಟಗಳನ್ನು ಹೇಗೆ ಮುನ್ನಡೆಸಬೇಕು, ಜನರನ್ನು ಹೇಗೆ ಕ್ರೋಢೀಕರಿಸಬೇಕು ಎಂದು ಸೂಚಿಸಲಾಗುತ್ತದೆ. ಇದನ್ನು ಟೂಲ್ಕಿೆಟ್ ಎಂದು ಕರೆಯಲಾಗುತ್ತದೆ. ಅಂದರೆ ಹೋರಾಟದ ಅಸ್ತ್ರಗಳನ್ನೊಳಗೊಂಡ ಒಂದು ಆಕರ. ಇಲ್ಲಿ ಮೌಖಿಕ, ಲಿಖಿತ, ಸಾಂಕೇತಿಕ ಸೂಚನೆಗಳಿರುತ್ತವೆಯೇ ಹೊರತು ಶಸ್ತ್ರಾಸ್ತ್ರಗಳ ಸುಳಿವೂ ಇರುವುದಿಲ್ಲ.
ಭಾರತದಲ್ಲಿ ನಡೆಯುತ್ತಿರುವ ರೈತ ಮುಷ್ಕರದ ಬಗ್ಗೆಯೂ ಸಹ ಇಂತಹುದೇ ಟೂಲ್ಕಿೇಟ್ ಒಂದನ್ನು ಸಿದ್ಧಪಡಿಸಲಾಗಿದ್ದು ಇದರಲ್ಲಿ ಮುಷ್ಕರ ನಿರತ ರೈತರು ಅನುಸರಿಸಬೇಕಾದ ಅಹಿಂಸಾತ್ಮಕ ಕಾರ್ಯ ಚಟುವಟಿಕೆಗಳನ್ನು ಸೂಚಿಸಲಾಗಿದೆ. ಟ್ವೀಟ್ಗ ಳ ಮೂಲಕ ಪ್ರತಿಭಟಿಸುವುದು, ಅರ್ಜಿಗಳನ್ನು ಸಲ್ಲಿಸುವುದು, ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಧರಣಿ ನಡೆಸುವುದು ಹೀಗೆ ಹಲವು ಸೂಚನೆಗಳನ್ನು ನೀಡಲಾಗಿದೆ. ಭಾರತದ ಎಂಬೆಸಿ ಕಚೇರಿಯ ಮುಂದೆ ಧರಣಿ ನಡೆಸಲು ಸೂಚಿಸುವುದು , ಸಂಸತ್ತಿನ ಮುಂದೆ ಪ್ರತಿಭಟನೆ ನಡೆಸಲು ಸೂಚಿಸುವುದು ಸಂವಿಧಾನವಿರೋಧಿಯೂ ಆಗುವುದಿಲ್ಲ, ದೇಶದ್ರೋಹವೂ ಆಗುವುದಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಾರ್ವಭೌಮ ಪ್ರಜೆಗಳಿಗೆ ಈ ಹಕ್ಕು ಇರುತ್ತದೆ ಎನ್ನುವುದನ್ನು ನಾವು ಗಮನಿಸಬೇಕು.
ಜನವರಿ 26ರಂದು ರೈತರ ಟ್ರಾಕ್ಟರ್ ಪರೇಡ್ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಟೂಲ್ಕಿಟಟ್ ಮತ್ತು ಇತರ ಸಂಘಟಕರನ್ನು ಅನುಮಾನಾಸ್ಪದವಾಗಿ ನೋಡುತ್ತಿದೆ. ಆದರೆ ಕೆಂಪುಕೋಟೆಯಲ್ಲಿ ನಡೆದ ಘಟನೆ ಯಾವುದೇ ಒಂದು ಬೃಹತ್ ಜನಾಂದೋಲನದ ಸಂದರ್ಭದಲ್ಲಿ ಸಹಜವಾಗಿ ನಡೆಯುವಂತಹುದೇ ಆಗಿದ್ದು, ಭಾರತದ ರಾಷ್ಟ್ರಧ್ವಜಕ್ಕೆ ಅವಮಾನವಾಗಿದೆ ಎನ್ನುವ ಆರೋಪಗಳೂ ಸಹ ಹುಸಿ ಎಂದು ಸಾಬೀತಾಗಿದೆ.
ರೈತ ಮುಷ್ಕರವನ್ನು ಸಾರ್ವಜನಿಕರ ದೃಷ್ಟಿಯಲ್ಲಿ ತಪ್ಪಾಗಿ ತೋರಿಸುವ ಒಂದು ಹುನ್ನಾರವನ್ನೂ ಈ ಘಟನೆಗಳಲ್ಲಿ ಕಾಣಬಹುದಾಗಿದೆ. ಆದರೆ ಈ ಘಟನೆಗಳನ್ನು ನೆಪವಾಗಿಟ್ಟುಕೊಂಡೇ ಕೇಂದ್ರ ಸರ್ಕಾರ ರೈತ ಮುಷ್ಕರದ ಪರ ವಹಿಸುವ ಪ್ರಜಾಸತ್ತಾತ್ಮಕ ದನಿಗಳನ್ನು ಅಡಗಿಸಲು ಪ್ರಯತ್ನಿಸುತ್ತಿದೆ. ದಿಶಾ ರವಿ ಪ್ರಕರಣದಲ್ಲಿ ಇದರ ಉದ್ದೇಶ ಸ್ಪಷ್ಟವಾಗಿ ಕಾಣುತ್ತದೆ.
ಫ್ರೈಡೇಸ್ ಫಾರ್ ಫ್ಯೂಚರ್ ಪ್ರಚಾರಾಂದೋಲನ ಎನ್ನುವ ಒಂದು ಟೂಲ್ಕಿುಟ್ ಸಂಪಾದಿಸುವಲ್ಲಿ ದಿಶಾರವಿ ಪಾತ್ರವಿದೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ. ಈ ಟೂಲ್ಕಿಲಟ್ ಸಿದ್ಧಪಡಿಸಿದ ಖ್ಯಾತ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬಪರ್ಗ್ ಜಾಗತಿಕ ಮಟ್ಟದಲ್ಲೇ ಭಾರತದ ರೈತರ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇವರು ಸಿದ್ಧಪಡಿಸಿರುವ ಟೂಲ್ಕಿರಟ್ ಸಾರ್ವಜನಿಕ ಓದಿಗೂ ಲಭ್ಯವಿದ್ದು, ಅದರಲ್ಲಿ ಹೋರಾಟದ ರೂಪುರೇಷೆಗಳನ್ನು ಹೊರತುಪಡಿಸಿ ಮತ್ತಾವುದೇ ಸಂವಿಧಾನವಿರೋಧಿ ಸಂದೇಶಗಳಿಲ್ಲ ಎನ್ನುವುದು ಸ್ಪಷ್ಟವಾಗಿದೆ.
ಈ ಟೂಲ್ಕಿಾಟ್ನಿಲ್ಲಿನ ಕೆಲವು ಅಂಶಗಳನ್ನು ತಾನು ಸಂಪಾದಿಸಿರುವುದಾಗಿ ದಿಶಾರವಿ ಒಪ್ಪಿಕೊಂಡಿದ್ದಾರೆ ಆದರೆ ಈ ಚಟುವಟಿಕೆಯನ್ನೇ ಆಧರಿಸಿ ಆಕೆಯನ್ನು ರಾಜದ್ರೋಹದ ಕಾಯ್ದೆಯಡಿ ಬಂಧಿಸುವುದು ಸಂವಿಧಾನ ವಿರೋಧಿ ಕ್ರಮವಾಗಿದೆ. ಒಂದು ವೇಳೆ ಇಡೀ ಟೂಲ್ ಕಿಟ್ ದಿಶಾ ರವಿ ಅವರಿಂದಲೇ ರಚಿಸಲ್ಪಟ್ಟಿದ್ದರೂ ಅಪರಾಧವೇನೂ ಆಗುವುದಿಲ್ಲ.
ಟೂಲ್ ಕಿಟ್ ನಲ್ಲಿ ಏನಿದೆ ?
ಭಾರತದಲ್ಲಿ ನಡೆಯುತ್ತಿರುವ ರೈತ ಮುಷ್ಕರಕ್ಕೆ ಬೆಂಬಲ ಸೂಚಿಸಲು ಗ್ರೇಟಾ ಥನ್ಬದರ್ಗ್ ಸಿದ್ಧಪಡಿಸಿರುವ ಟೂಲ್ಕಿಬಟ್ನಲಲ್ಲಿ ಭಾರತ ಸರ್ಕಾರದ ಹೊಸ ಕೃಷಿ ಮಸೂದೆಗಳನ್ನು ರೈತ ವಿರೋಧಿ ಎಂದು ಗುರುತಿಸಲಾಗಿದ್ದು, ಈ ಕಾಯ್ದೆಗಳು ನವ ಉದಾರವಾದಿ ಆರ್ಥಿಕ ನೀತಿಗಳ ಪರಿಣಾಮವಾಗಿ ಮೂಡಿಬಂದಿರುವುದನ್ನು ಸ್ಪಷ್ಟಪಡಿಸಲಾಗಿದೆ. ರೈತರನ್ನು ಸಂಪರ್ಕಿಸದೆ, ಸಂಸತ್ತಿನಲ್ಲಿ ಚರ್ಚೆ ನಡೆಸದೆ ಈ ಕಾಯ್ದೆಗಳನ್ನು ಜಾರಿಗೊಳಿಸಿರುವುದನ್ನೂ ಟೂಲ್ಕಿಪಟ್ನನಲ್ಲಿ ಉಲ್ಲೇಖಿಸಲಾಗಿದೆ.
ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್ ಉದ್ಯಮಿಗಳಿಗೆ ವಹಿಸುವುದರಿಂದ ಪರಿಸರ ವಿನಾಶಕ್ಕೂ ದಾರಿಮಾಡಿಕೊಟ್ಟಂತಾಗುತ್ತದೆ ಎನ್ನುವ ಅಂಶವನ್ನೂ ಉಲ್ಲೇಖಿಸಲಾಗಿದೆ. ಈ ನಿಟ್ಟಿನಲ್ಲಿ ರೈತ ಮುಷ್ಕರಕ್ಕೆ ಭಾರತದ ಜನತೆ ಮತ್ತು ವಿಶ್ವದ ಇತರ ರಾಷ್ಟ್ರಗಳ ಜನತೆ ಹೇಗೆ ಪ್ರತಿಕ್ರಯಿಸಬೇಕು ಎನ್ನುವುದನ್ನು ಟೂಲ್ಕಿ್ಟ್ನಷಲ್ಲಿ ವಿವರಿಸಲಾಗಿದೆ. ರೈತರಿಗೆ ಬೆಂಬಲಿಸಿ ಟ್ವೀಟ್ ಮಾಡುವುದು, ಹ್ಯಾಷ್ಟ್ಯಾ ಗ್ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಬೆಂಬಲ ವ್ಯಕ್ತಪಡಿಸುವುದು, ಸರ್ಕಾರದ ಪ್ರತಿನಿಧಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಇ ಮೇಲ್ ಕಳಿಸುವುದು, ಫೆಬ್ರವರಿ 13-14ರಂದು ಭಾರತೀಯ ರಾಯಭಾರ ಕಚೇರಿಯ ಮುಂದೆ, ಸ್ಥಳೀಯ ಸರ್ಕಾರಿ ಕಚೇರಿಗಳ ಮುಂದೆ ಧರಣಿ ನಡೆಸುವುದು, ಸತತ ಟ್ವೀಟ್ ಮಾಡುವುದು, ಮುಖ್ಯ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದು ಹೀಗೆ ಹಲವು ಸೂಚನೆಗಳನ್ನು ನೀಡಲಾಗಿದೆ. ಇದರ ಪೂರ್ಣ ವಿವರಗಳು ಇಲ್ಲಿ ಲಭ್ಯವಿದೆ :Farming and its Crisis
ಈ ಟೂಲ್ ಕಿಟ್ ಆಧಾರದಲ್ಲೇ ದಿಶಾ ರವಿ ಅವರನ್ನು ಬಂಧಿಸಲಾಗಿದ್ದು ಇದೀಗ ದೆಹಲಿಯ ಪಟಿಯಾಲಾ ನ್ಯಾಯಾಲಯದಲ್ಲಿ ಆಕೆಗೆ ಜಾಮೀನು ನೀಡುವ ಸಂದರ್ಭದಲ್ಲಿ ನ್ಯಾಯಮೂರ್ತಿ ಧರ್ಮೇಂದ್ರ ರಾಣಾ ಅವರು ವ್ಯಕ್ತಪಡಿಸಿರುವ ಕೆಲವು ಅಭಿಪ್ರಾಯಗಳು ಇಂದಿನ ಸಂದರ್ಭದಲ್ಲಿ ಬಹಳ ಮುಖ್ಯವಾಗುತ್ತದೆ. ಎಲ್ಗಾರ್ ಪರಿಷತ್ ಮತ್ತು ಭೀಮಾ ಕೊರೆಗಾಂವ್ ಘಟನೆಯ ಹಿನ್ನೆಲೆಯಲ್ಲಿ ಹಲವಾರು ವಕೀಲರನ್ನು, ಬರಹಗಾರರನ್ನು, ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ಇವರ ವಿರುದ್ಧ ಯುಎಪಿಎ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗಿದೆ. ರಾಜದ್ರೋಹ ಕಾಯ್ದೆ ಸೆಕ್ಷನ್ 124ಎ ಮತ್ತು ಯುಎಪಿಎ, ಈ ಎರಡು ಕರಾಳ ಶಾಸನಗಳು ಪ್ರತಿರೋಧದ ದನಿಗಳನ್ನು ಅಡಗಿಸುವ ಅಸ್ತ್ರಗಳಾಗಿ ಪರಿಣಮಿಸಿರುವುದು ಭಾರತೀಯ ಪ್ರಜಾತಂತ್ರದ ದುರಂತ.
ದಿಶಾ ರವಿಯವರ ಬಂಧನದ ಹಿಂದೆ ದೇಶದ ಯುವ ಸಮುದಾಯದ ಜಾಗೃತ ಪ್ರಜ್ಞೆಯನ್ನು ಕುಡಿಯಲ್ಲೇ ಚಿವುಟುವ ಹುನ್ನಾರವನ್ನೂ ಗುರುತಿಸಬಹುದಾಗಿದೆ. ಇಂದು ದೇಶ ಎದುರಿಸುತ್ತಿರುವ ಅನೇಕ ಜ್ವಲಂತ ಸಮಸ್ಯೆಗಳಿಗೆ ಮೋದಿ ಸರ್ಕಾರದ ಆಡಳಿತ ನೀತಿಗಳೇ ಕಾರಣ ಎನ್ನುವುದು ದಿನದಿಂದ ದಿನಕ್ಕೆ ಸ್ಪಷ್ಟವಾಗುತ್ತಿದೆ. ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಳ, ಉತ್ಪಾದನೆಯ ಕೊರತೆ, ಅಭಿವೃದ್ಧಿ ಸೂಚ್ಯಂಕದಲ್ಲಿ ಕುಸಿತ, ಉದ್ಯೋಗ ಸೃಷ್ಟಿಯಲ್ಲಿನ ವೈಫಲ್ಯ, ತೈಲ ಮತ್ತು ಅವಶ್ಯ ವಸ್ತುಗಳ ಬೆಲೆ ಏರಿಕೆ, ಕೃಷಿ ಬಿಕ್ಕಟ್ಟು ಮತ್ತು ಹಣಕಾಸು ಬಿಕ್ಕಟ್ಟು ಜನಸಾಮಾನ್ಯರನ್ನು ಬಾಧಿಸುತ್ತಿದೆ.
ಈ ಗಂಭೀರ ಸಮಸ್ಯೆಗಳ ನಡುವೆಯೂ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಯಥಾಸ್ಥಿತಿಯಲ್ಲಿದ್ದರೆ ಅದಕ್ಕೆ ಕಾರಣ ಯುವ ಸಮುದಾಯವನ್ನು ಆವರಿಸಿರುವ ಸಮೂಹ ಸನ್ನಿ ಮತ್ತು ಮಧ್ಯಮ, ಮೇಲ್ ಮಧ್ಯಮ ವರ್ಗವನ್ನು ಆವರಿಸಿರುವ ಅಂಧ ಶ್ರದ್ಧೆ.
ಈ ಸಮೂಹ ಸನ್ನಿಗೊಳಗಾಗಿರುವ ಯುವಸಮುದಾಯದ ಒಂದು ವರ್ಗ ಇತ್ತೀಚಿನ ದಿನಗಳಲ್ಲಿ ಜಾಗೃತವಾಗುತ್ತಿದೆ. ರೈತ ಮುಷ್ಕರದ ಹಿನ್ನೆಲೆಯಲ್ಲಿ ಉತ್ತರದ ಹಲವು ರಾಜ್ಯಗಳಲ್ಲಿ ಜನಾಭಿಪ್ರಾಯ ಬದಲಾಗುತ್ತಿದೆ. ಭ್ರಮನಿರಸನಗೊಂಡ ಯುವ ಸಮುದಾಯ ಭಿನ್ನ ನೆಲೆಯಲ್ಲಿ ಯೋಚಿಸಲಾರಂಭಿಸಿದೆ. ಈ ಜಾಗೃತ ಮನಸುಗಳನ್ನು ಪುನಃ ಪರಿವರ್ತಿಸುವುದು ಇಂದಿನ ದುಸ್ಥಿತಿಯಲ್ಲಿ ಕಷ್ಟ ಎನ್ನುವುದೂ ಮೋದಿ ಸರ್ಕಾರಕ್ಕೆ ತಿಳಿದಿದೆ.
ಹಾಗಾಗಿ ಯುವ ಮನಸುಗಳಲ್ಲಿ ಭೀತಿ ಉಂಟುಮಾಡುವ ಉದ್ದೇಶದಿಂದಲೇ 21 ವರ್ಷದ ಪರಿಸರ ಹೋರಾಟಗಾರ್ತಿ ದಿಶಾರವಿ ವಿರುದ್ಧ ರಾಜದ್ರೋಹದಂತಹ ಗಂಭೀರ ಆರೋಪ ಹೊರಿಸಿ ಬಂಧಿಸಲಾಗುತ್ತದೆ. ಇದು ಜನಸಾಮಾನ್ಯರಲ್ಲಿ ಭೀತಿ ಸೃಷ್ಟಿಸಿ ಜಾಗೃತಿಗೆ ಧಕ್ಕೆ ಉಂಟುಮಾಡುವ ತಂತ್ರಗಾರಿಕೆ ಎನ್ನುವುದು ಸುಸ್ಪಷ್ಟ.
ಸ್ವತಂತ್ರ ಆಲೋಚನೆಗೆ ಅವಕಾಶವೇ ನೀಡದೆ ಅಧಿಪತ್ಯ ರಾಜಕಾರಣವನ್ನು ಬಲಪಡಿಸುವ ನಿಟ್ಟಿನಲ್ಲಿ ಮೋದಿ-ಶಾ ಜೋಡಿ ಹಲವು ವ್ಯೂಹಗಳನ್ನು ರಚಿಸುತ್ತಿದ್ದು, ದಿಶಾರವಿಯ ಪ್ರಕರಣವೂ ಇಂತಹುದೇ ಪ್ರಯತ್ನವಾಗಿದೆ. ಮಾಧ್ಯಮಗಳು ವಂದಿಮಾಗಧ ಸಂಸ್ಕೃತಿಯ ಶಿಖರ ತಲುಪಿರುವ ಹೊತ್ತಿನಲ್ಲಿ ಸರ್ಕಾರದ ತಪ್ಪುಒಪ್ಪುಗಳನ್ನು ಪರಾಮರ್ಶಿಸುವ ಅವಕಾಶವೇ ಇಲ್ಲವಾಗಿದ್ದು, ಈ ಸಂದರ್ಭದಲ್ಲಿ ವಿದ್ಯಾರ್ಥಿ ಯುವ ಸಮುದಾಯದ ಸ್ವತಂತ್ರ ಆಲೋಚನೆ ಪ್ರಜಾತಂತ್ರ ಮೌಲ್ಯಗಳ ರಕ್ಷಣೆಗೆ ಅತ್ಯವಶ್ಯವಾಗಿರುತ್ತದೆ.
ಈ ಬೆಳವಣಿಗೆಗೆ ಅವಕಾಶ ನೀಡದಿರಲು ಸರ್ಕಾರ ಕರಾಳ ಶಾಸನಗಳ ಮೊರೆ ಹೋಗುತ್ತಿದೆ. ಭಾರತದ ಬಹುತ್ವ ಸಂಸ್ಕೃತಿಯನ್ನು ಮತ್ತು ಬಹುಮುಖೀ ಸಾಂಸ್ಕೃತಿಕ ನೆಲೆಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಂಡು ಮುಂದಿನ ಪೀಳಿಗೆಗೆ ರವಾನಿಸುವ ಗುರುತರ ಹೊಣೆ ಹೊತ್ತಿರುವ ಯುವ ಸಮುದಾಯದ ಮೇಲೆ ಕರಾಳ ಶಾಸನಗಳ ಪ್ರಹಾರದ ಮೂಲಕ ಒತ್ತಡ ಹೇರುವ ತಂತ್ರವನ್ನು ನಾವಿಂದು ನೋಡುತ್ತಿದ್ದೇವೆ.
ಈ ಹಿನ್ನೆಲೆಯಲ್ಲಿ ದಿಶಾರವಿ ಜಾಮೀನು ತೀರ್ಪಿನಲ್ಲಿ ಪಟಿಯಾಲಾ ನ್ಯಾಯಾಲಯದ ನ್ಯಾಯಮೂರ್ತಿ ಧರ್ಮೇಂದ್ರರಾಣಾ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಸಾರ್ವಕಾಲಿಕ ಮಾನ್ಯತೆ ಪಡೆಯುತ್ತವೆ. ಇದೇ ನ್ಯಾಯಮೂರ್ತಿಗಳು ಈ ಹಿಂದೆ ಜೆಎನ್ಯುಕ ವಿದ್ಯಾರ್ಥಿನಿ ಸಫೂರ ಜರ್ಗರ್ ಪ್ರಕರಣದಲ್ಲಿ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿದ್ದರೂ, ದಿಶಾರವಿ ಪ್ರಕರಣದ ತೀರ್ಪು ಇಂದಿನ ಸಂದರ್ಭದಲ್ಲಿ ಸ್ವಾಗತಾರ್ಹ ಎನಿಸುತ್ತದೆ.
ನ್ಯಾ ಧರ್ಮೇಂದ್ರ ರಾಣಾ ತಮ್ಮ ತೀರ್ಪಿನಲ್ಲಿ ಹೀಗೆ ಹೇಳಿದ್ದಾರೆ:-“ ಒಬ್ಬ ವ್ಯಕ್ತಿಯು ಕೆಲವು ಸಂಶಯಾಸ್ಪದ ವ್ಯಕ್ತಿಗಳ ಜೊತೆಗೆ ಸಂಪರ್ಕದಲ್ಲಿದ್ದ ಮಾತ್ರಕ್ಕೆ ಆ ವ್ಯಕ್ತಿಯ ಎಲ್ಲ ಚಟುವಟಿಕೆಗಳನ್ನೂ ಸಂಶಯಾಸ್ಪದವಾಗಿ ನೋಡುವ ಅಗತ್ಯವಿಲ್ಲ , ಕಾನೂನಿನ ಚೌಕಟ್ಟಿನೊಳಗೆ ನಡೆಸುವ ಚಟುವಟಿಕೆಗಳನ್ನು ಆಧರಿಸಿ ಕಳಂಕ ಹೊರಿಸುವುದು ಸಮರ್ಥನೀಯವಲ್ಲ. ಸರ್ಕಾರ ಜಾರಿಗೊಳಿಸಿರುವ ಒಂದು ಶಾಸನವನ್ನು ವಿರೋಧಿಸುವ ವೇದಿಕೆ ಅಥವಾ ಸಂಘಟನೆಯನ್ನು ಬೆಂಬಲಿಸದ ಮಾತ್ರಕ್ಕೆ ಊಹಾಪೋಹಗಳನ್ನು ಆಧರಿಸಿ ಯಾರನ್ನೂ ಭಯೋತ್ಪಾದಕರಂತೆ ನೋಡುವುದು ತರವಲ್ಲ.
ಭಾರತದ ಸಂವಿಧಾನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚಿನ ಮನ್ನಣೆ ನೀಡಿದ್ದು, ಇದಕ್ಕೆ ಯಾವುದೇ ಭೌಗೋಳಿಕ ಚೌಕಟ್ಟು, ಗಡಿರೇಖೆ ಇರುವುದಿಲ್ಲ, ಜಾಗತಿಕ ಅಭಿಪ್ರಾಯ ಮೂಡಿಸಲೂ ಸಹ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಬಳಸಬಹುದು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸರ್ಕಾರದ ಕೆಲವು ಯೋಜನೆಗಳನ್ನು, ನೀತಿಗಳನ್ನು ವಿರೋಧಿಸುವುದೇ ರಾಜದ್ರೋಹ ಎನಿಸಿಕೊಳ್ಳುವುದಿಲ್ಲ, ಈ ಕಾರಣಕ್ಕಾಗಿ ಪ್ರಜೆಗಳನ್ನು ಜೈಲಿಗೆ ತಳ್ಳುವುದು, ಮತ್ತು ಘಾಸಿಗೊಂಡ ಸರ್ಕಾರದ ದುರಭಿಮಾನವನ್ನು ತಣಿಸಲು ರಾಜದ್ರೋಹ ಪ್ರಕರಣ ದಾಖಲಿಸುವುದು ನ್ಯಾಯಯುತವಲ್ಲ. ಭಾರತ ಸಾವಿರಾರು ವರ್ಷಗಳಿಂದ ಹಲವಾರು ಭಿನ್ನ ಚಿಂತನೆಗಳನ್ನು, ಅಭಿಪ್ರಾಯಗಳನ್ನು ಗೌರವಿಸುತ್ತಲೇ ಬಂದಿದೆ ಎಂದು ಹೇಳುತ್ತಾ ಋಗ್ವೇದದ ವಾಕ್ಯವೊಂದನ್ನು ಉದ್ಧರಿಸಿರುವ ನ್ಯಾಯಮೂರ್ತಿಗಳು, ವಾಟ್ಸಾಪ್ ಗುಂಪು ರಚಿಸುವುದು, ಟೂಲ್ ಕಿಟ್ ಸಿದ್ಧಪಡಿಸುವುದು ಶಿಕ್ಷಾರ್ಹ ಅಪರಾಧವಾಗುವುದಿಲ್ಲ ”
ರಾಜದ್ರೋಹ ಕಾಯ್ದೆಯನ್ನು ಸಂತೆಯ ಸರಕಿನಂತೆ ಬಳಸುತ್ತಿರುವ ಕೇಂದ್ರ ಸರ್ಕಾರ, ಆಡಳಿತ ನೀತಿಯ ವಿರುದ್ಧ ಮಾತನಾಡುವುದನ್ನೇ ಅಪರಾಧ ಎಂದು ಭಾವಿಸುತ್ತಿದೆ. ಸರ್ಕಾರದ ವಿರುದ್ಧ ಮಾತನಾಡುವುದನ್ನೇ ದೇಶದ್ರೋಹ ಎಂದು ಪರಿಗಣಿಸುತ್ತಿದೆ. 2010ರ ನಂತರ ದೇಶದಲ್ಲಿ 11 ಸಾವಿರ ಜನರ ವಿರುದ್ಧ 816 ರಾಜದ್ರೋಹ ಮೊಕದ್ದಮೆಗಳು ದಾಖಲಾಗಿವೆ. ಪತ್ರಕರ್ತರು, ವಿದ್ಯಾರ್ಥಿಗಳು, ವಿರೋಧಪಕ್ಷ ನಾಯಕರು, ಲೇಖಕರು, ಬೋಧಕರು, ಕಲಾವಿದರು ಈ ಕರಾಳ ಶಾಸನದಡಿ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ.
2010 ರಿಂದ 2014ರ ಯುಪಿಎ ಅವಧಿಯಲ್ಲಿ 279 ಪ್ರಕರಣಗಳು ದಾಖಲಾಗಿದ್ದರೆ, 2014ರ ನಂತರ 519 ರಾಜದ್ರೋಹ ಮೊಕದ್ದಮೆಗಳು ದಾಖಲಾಗಿವೆ. ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ 144 ಜನರು ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ 149 ಮಂದಿಯ ವಿರುದ್ಧ ರಾಜದ್ರೋಹ ಪ್ರಕರಣಗಳು ದಾಖಲಾಗಿವೆ.
ಈ ಹಿನ್ನೆಲೆಯಲ್ಲಿ ದಿಶಾ ರವಿ ಪ್ರಕರಣ ಪ್ರಭುತ್ವದ ದಮನಕಾರಿ ನೀತಿಯ ಒಂದು ಆಯಾಮವಾಗಿದ್ದರೆ, ಪಟಿಯಾಲ ನ್ಯಾಯಾಲಯದ ಮಹತ್ವದ ತೀರ್ಪು ನ್ಯಾಯ ವ್ಯವಸ್ಥೆಗೆ ಚುರುಕುಮುಟ್ಟಿಸುವಂತಿದೆ. ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದಂತೆಯೂ ಇದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳ ದನಿಯೇ ಅಂತಿಮ ಎನ್ನುವ ಸತ್ಯವನ್ನು ಸರ್ಕಾರಕ್ಕಿಂತಲೂ ಹೆಚ್ಚಾಗಿ ಜನಸಾಮಾನ್ಯರು ಅರ್ಥಮಾಡಿಕೊಳ್ಳಬೇಕಿದೆ. ಆಗಲಾದರೂ ಭಾರತದ ಯುವ ಸಮುದಾಯ ಸಮೂಹ ಸನ್ನಿಯಿಂದ ಮುಕ್ತವಾಗಿ ಸ್ವತಂತ್ರವಾಗಿ ಆಲೋಚಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಬಹಿರಂಗ
ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದೇ ಮೊದಲ ತಪ್ಪು..!

- ಆದಿತ್ಯ ಭಾರದ್ವಾಜ್
ಹುಟ್ಟಿನಿಂದ ನಾನು ಬ್ರಾಹ್ಮಣ. ನಾನು ಜಾತಿಯನ್ನು ನಿರಾಕರಿಸುವುದು ಸುಲಭ. ಆದರೆ ದಲಿತನಿಗೆ ಅದು ಸಾಧ್ಯವಿಲ್ಲ. ಹಾಗಾಗಿ ನಾನು ನನ್ನ ಜಾತಿಯನ್ನು ನಿರಾಕರಿಸದೆ ಅದರೊಂದಿಗೆ ಬರುವ previlege ಬಗ್ಗೆ ಸದಾಕಾಲ ಅರಿವು ಇಟ್ಟುಕೋಬೇಕು ಎಂಬುದು ನನ್ನ ನಿಲುವು.
ಪೊಗರು ಸಿನಿಮಾದಲ್ಲಿ ಬ್ರಾಹ್ಮಣರಿಗೆ ಅವಮಾನಿಸಲಾಗಿದೆ ಅಂತ ಬ್ರಾಹ್ಮಣ ಅಭಿವೃದ್ಧಿ ನಿಗಮ, ಹಿಂದುತ್ವದ ಮುಖವಾಡ ತೊರೆದ ಸಂವಾದ ಅಂತಹ ಸಂಘ ಪರಿವಾರದ ಮಾಧ್ಯಮಗಳೂ ಸೇರಿದಂತೆ ಎಲ್ಲರೂ ಮುಗಿಬಿದ್ದು ನಿರ್ದೇಶಕರ ಕೈಲಿ ಕ್ಷಮೆ ಕೇಳಿಸಿದ್ದಾರೆ. ದೃಶ್ಯಗಳಿಗೆ ಕತ್ತರಿ ಹಾಕಲು ಧಮಕಿ ಹಾಕಿ ಒಪ್ಪಿಸಿದ್ದಾರೆ.
ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದೇ ಮೊದಲ ತಪ್ಪು. ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನೇ ಬುಡಮೇಲು ಮಾಡುವ ನಡೆ ಇದು. ಈ ನಿಗಮ ಸ್ಥಾಪನೆಯ ಬಗ್ಗೆ ಅಂದೇ ಬಹಿರಂಗವಾಗಿ ಖಂಡಿಸದಿರುವುದಕ್ಕಾಗಿ ಕ್ಷಮೆ ಯಾಚಿಸುತ್ತೇನೆ. ಮರಾಠರು, ಲಿಂಗಾಯತರಿಗೆ ನಿಗಮ ಸ್ಥಾಪಿಸಿದಾಗ ವಿರೋಧ ವ್ಯಕ್ತವಾಗಿದೆ. ಆದರೆ ಬ್ರಾಹ್ಮಣರಿಗೇ ನಿಗಮ ಸ್ಥಾಪಿಸಿದ ಮೇಲೆ ಯಾವ ಜಾತಿಗೆ ಬೇಕಾದರೂ ಸ್ಥಾಪಿಸಬಹುದಾಗಿದೆ. ಇದು ಸಾಮಾಜಿಕ ನ್ಯಾಯದ ಅಣಕ. ಎಲ್ಲ ಮೇಲ್ಜಾತಿಗಳ ನಿಗಮಗಳನ್ನು ರದ್ದು ಮಾಡಬೇಕಿದೆ.
ಇವತ್ತು ಇದೇ ಬ್ರಾಹ್ಮಣ ಅಭಿವೃದ್ಧಿ ನಿಗಮ ಒಂದು ಶಕ್ತಿಕೇಂದ್ರವಾಗಿ ತಲೆ ಎತ್ತಿದೆ. ಬ್ರಾಹ್ಮಣ್ಯವನ್ನು ಯಾಕ್ರೀ ಲೇವಡಿ ಮಾಡ್ತೀರಿ ಅಂತ ಅದರ ಅಧ್ಯಕ್ಷರು ಕೇಳ್ತಾರೆ ಇವತ್ತು! ಬ್ರಾಹ್ಮಣರು ಮತ್ತು ಫ್ಯೂಡಲ್ ಮೇಲ್ಜಾತಿಗಳು ಜಾತಿ ನಿಂದನೆ ಅಂತ ಅರಚಾಡುವುದೇ ಅಪಹಾಸ್ಯ. ಈ ಜಾತಿಗಳು ನಡೆಸಿರುವ ಅಟ್ರಾಸಿಟಿಗಳ ಹಿನ್ನೆಲೆಯಲ್ಲಿ ಇವತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತುಳಿತಕ್ಕೊಳಗಾದವರು ಟೀಕಿಸಿದರೆ, ಬೈದರೆ ಅದನ್ನು ಕೇಳಿಸಿಕೊಳ್ಳುವ ಸಹನೆಯನ್ನು ಈ ಸಮುದಾಯಗಳು ಬೆಳೆಸಿಕೊಳ್ಳಬೇಕಿದೆ.
ಇದನ್ನೂ ಓದಿ | ಗ್ಯಾಸ್ ಸಿಲಿಂಡರ್ ಮತ್ತೆ 25 ರೂ ಹೆಚ್ಚಳ ; ಇತಿಹಾಸದಲ್ಲೇ ಮೊದಲ ಸಲ ಒಂದೇ ತಿಂಗಳಲ್ಲಿ ಮೂರನೇ ಬಾರ ಗ್ಯಾಸ್ ಬೆಲೆ ಏರಿಕೆಯಾಗಿದ್ದು..!
ದನಿ ಇದ್ದವನದೇ ನ್ಯಾಯ ಎಂಬಂತಾಗಿದೆ. ಬಲಹೀನ ವರ್ಗಗಳನ್ನು ಕಾಪಾಡಲು ಇರುವ ಕಾನೂನು, ಮೀಸಲಾತಿಯಂತಹ ಸವಲತ್ತುಗಳನ್ನು, ಈ ಕೋಮುಗಳು ಹೊಡೆದುಕೊಳ್ಳುತ್ತಿವೆ, ತಮ್ಮ ಹಕ್ಕು ಎಂಬಂತೆ ಆಗ್ರಹಿಸುತ್ತಿವೆ. ಆರ್ಥಿಕ ಹಿಂದುಳಿದಿರುವಿಕೆಯ ಆಧಾರದ ಮೇಲೆ ಮೀಸಲಾತಿಯ ತಾತ್ವಿಕ ತಳಹದಿಯನ್ನೇ ಬುಡಮೇಲು ಮಾಡಿ ಬ್ರಾಹ್ಮಣರು, ವೈಶ್ಯರು ಒಂದು ಬೆರಳು ಕೂಡಾ ಎತ್ತದೇ ಹೊಡೆದುಕೊಂಡರು. ಬ್ರಾಹ್ಮಣರು ಇವತ್ತು ತಾವೇ ವಿಕ್ಟಿಂಗಳು ಎಂಬಂತೆ ಇತರ ಬಲಹೀನ ವರ್ಗಗಳೊಂದಿಗೆ ತಮ್ಮನ್ನೂ ಕಾಣಬೇಕು ಎಂಬಂತೆ ಆಡುತ್ತಿದ್ದು ಅದಕ್ಕೆ ಮನ್ನಣೆ ಸಿಗುತ್ತಿರುವುದು ದುರಂತ. ಇವತ್ತು ಹಿಂದುತ್ವದ ಮುಖವಾಡ ಹೊತ್ತು ಅಧಿಕಾರ ಹಿಡಿದಿರುವುದು ಬ್ರಾಹ್ಮಣಿಕೆಯೇ ಆಗಿರುವುದರಿಂದ ಇದು ಆಶ್ಚರ್ಯವೇನೂ ಅಲ್ಲ.
ಇನ್ನು ಪೊಗರು ಸಿನಿಮಾದಲ್ಲಿ ಹೆಣ್ಣನ್ನು ಬಿಂಬಿಸಿರುವ ಕುರಿತು ಪ್ರತಿಭಟನೆಗಳಾಗಬೇಕಿತ್ತು. “ಖರಾಬು” ಹಾಡಿಗೆ ಯೂಟ್ಯೂಬ್ ಅಲ್ಲಿ ಸುಮಾರು 21 ಕೋಟಿ views ಇವೆ! ಬದಲಿಗೆ ಬ್ರಾಹ್ಮಣರು ಪ್ರತಿಭಟನೆ ಮಾಡುತ್ತಿರುವುದು, ಅದನ್ನು ದಕ್ಕಿಸಿಕೊಂಡಿರುವುದು ಇವತ್ತಿನ ಕಾಲಮಾಪದ ರೂಪಕ.
(ಕೃಪೆ : ಫೇಸ್ಬುಕ್ ಬರಹ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಲೈಫ್ ಸ್ಟೈಲ್7 days ago
ರೆಸಿಪಿ | ಖರ್ಜೂರದ ಹೋಳಿಗೆ ಮಾಡೋದು ಹೇಗೆ ಗೊತ್ತಾ..?
-
ಸಿನಿ ಸುದ್ದಿ5 days ago
ಇಂದು ಕನ್ನಡ ಬಿಗ್ ಬಾಸ್ ಸೀಸನ್ 8 ಗ್ರ್ಯಾಂಡ್ ಓಪನಿಂಗ್ | ಒಂಟಿ ಮನೆಯಲ್ಲಿ ಯಾರೆಲ್ಲಾ ಇರಲಿದ್ದಾರೆ ಗೊತ್ತಾ..?
-
ದಿನದ ಸುದ್ದಿ6 days ago
ಅಸ್ಸಾಂ | ಅಥ್ಲೀಟ್ ಹಿಮಾ ದಾಸ್ ಡಿಎಸ್ಪಿಯಾಗಿ ನೇಮಕ ; ನನ್ನ ಮತ್ತು ತಾಯಿಯ ಕನಸು ನನಸಾದ ದಿನವಿದು : ಹಿಮಾ ಭಾವುಕ ನುಡಿ
-
ದಿನದ ಸುದ್ದಿ7 days ago
ಕೃಷಿ ಸಿಂಚಾಯಿ ಯೋಜನೆ | ಸಹಾಯಧನ ಪಡೆಯಲು ಅರ್ಜಿ ಆಹ್ವಾನ
-
ದಿನದ ಸುದ್ದಿ7 days ago
Breaking | ಕೇರಳ ರೈಲು ಪ್ರಯಾಣಿಕರಿಂದ 100 ಕ್ಕೂ ಹೆಚ್ಚು ಜೆಲೆಟಿನ್ ಸ್ಟಿಕ್ಗಳು, 350 ಡಿಟೋನೇಟರ್ಗಳನ್ನು ವಶಕ್ಕೆ ಪಡೆದ ಪೊಲೀಸ್
-
ಸಿನಿ ಸುದ್ದಿ4 days ago
ರಾಬರ್ಟ್ ನ ಫಸ್ಟ್ ವಿಡಿಯೋ ಸಾಂಗ್ ರಿಲೀಸ್ : ಬೇಬಿ ಡಾನ್ಸ್ ವಿಡಿಯೋ ನೀವೂ ನೋಡಿ..!
-
ನಿತ್ಯ ಭವಿಷ್ಯ5 days ago
ಫೆಬ್ರವರಿ-27 | ಈ ರಾಶಿಯವರಿಗೆ ಬಯಸಿದ್ದೆಲ್ಲ ಸಿಗುವುದು! ಶನಿವಾರ- ರಾಶಿ ಭವಿಷ್ಯ
-
ದಿನದ ಸುದ್ದಿ6 days ago
ದಾವಣಗೆರೆ ಜಿ.ಪಂ ಸಾಮಾನ್ಯ ಸಭೆ | ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಸುವಂತೆ ಸದಸ್ಯರ ಒತ್ತಾಯ