Connect with us

ಲೈಫ್ ಸ್ಟೈಲ್

ಹೀಗೊಂದು ಹೆಬ್ಬಾವಿನ ಚಿಕಿತ್ಸೆ..!

Published

on

ಡಾ.ಎನ್.ಬಿ.ಶ್ರೀಧರ್ ಅವರು ಹೆಬ್ಬಾವಿಗೆ ಚಿಕಿತ್ಸೆ ನೀಡುತ್ತಿರುವುದು.
  • ಡಾ.ಎನ್.ಬಿ.ಶ್ರೀಧರ, ಪ್ರಾಧ್ಯಾಪಕರು, ವೆಟರ್ನರಿ ಕಾಲೇಜು, ಶಿವಮೊಗ್ಗ

ನೇಕ ಸಲ ನಮಗೆ ಹೊಸ ರೀತಿಯ “ಪೇಶಂಟು”ಗಳು ಬಂದು ಅಚ್ಚರಿಗೊಳಿಸುವುದುಂಟು. ಅದರಲ್ಲೂ ಕಾಡಿನಿಂದ ಬರುವ “ರೋಗಿ” ಗಳ ಚಿಕಿತ್ಸೆ ಒಂದು ಸವಾಲು. ಪಶುವೈದ್ಯಕೀಯ ಓದುವಾಗ ಈ ರೀತಿಯ ಯಕ:ಶ್ಚಿತ್ ಹುಳ ಹುಪ್ಪಟೆಗಳಂತ ಪ್ರಾಣಿಗಳನ್ನು ಚಿಕಿತ್ಸೆ ಮಾಡಬೇಕಾಬಹುದಾದ ಸಂದರ್ಭವೆಂದೂ ಬರದು ಎಂದು “ವೈಲ್ಡ್ ಲೈಫ಼್ ಚಿಕಿತ್ಸೆ”ಯ ಪಾಠ ಮಾಡುವಾಗ ದಿವ್ಯ ನಿರ್ಲಕ್ಷ್ಯದಿಂದಿರುವುದು ನಮ್ಮಲ್ಲಿ ಅನೇಕರಿಗೆ ಸಾಮಾನ್ಯವಾಗಿತ್ತು. ಒಂದಿಬ್ಬರು ಸಹೋದ್ಯೋಗಿ ವಿದ್ಯಾರ್ಥಿಗಳು ಈ ರೀತಿಯ ತರಹೇವಾರಿ ಪ್ರಾಣಿಗಳ ಕ್ರಿಮಿಕೀಟಗಳ ಚಿಕಿತ್ಸೆಯಲ್ಲಿ ಆಸಕ್ತಿ ವಹಿಸುವುದು ಬಿಟ್ಟರೆ ಉಳಿದವರ ಆಸಕ್ತಿ ಅಷ್ಟಕ್ಕಷ್ಟೇ. ನಮ್ಮದೇನಿದ್ದರೂ ದನ, ಎಮ್ಮೆ, ಬೆಕ್ಕು, ನಾಯಿ, ಕುದುರೆ, ಕೋಳಿ, ಹಂದಿ ಎಂಬಿತ್ಯಾದಿ ಹಲವು ಹತ್ತು ಸಾಕು ಪ್ರಾಣಿ ಕುಲಕೋಟಿಗಳ ಚಿಕಿತ್ಸೆ ಬಿಟ್ಟರೆ ಉಳಿದ ಪ್ರಾಣಿಗಳ ಗೊಡವೆ ನಮಗ್ಯಾಕೆ ಎಂಬ ದಿವ್ಯ ನಿರ್ಲಕ್ಷ್ಯವಿತ್ತು.

ಆದರೆ ಕೆಲವೊಮ್ಮೆ ಆಮೆ, ಮೊಸಳೆ, ಉಡ,ಕರಡಿ, ಚಿರತೆ, ಕಾಡುಕೋಣ ಇವುಗಳ ಚಿಕಿತ್ಸೆ ದುತ್ತನೇ ಬಂದು ತಲೆ ಕೆರೆದುಕೊಂಡ ಘಟನೆಗಳು ಅನೇಕ. ಆಮೆಯಂತ ಪ್ರಾಣಿಗಳನ್ನು ಸಾಕಿ “ಡಾಕ್ಟ್ರೇ. ನಮ್ಮನೆ ’ಕಣ್ವ’ (ಆಮೆಯ ಹೆಸರು) ಯಾಕೋ ಫುಡ್ಡೇ ತಿಂತಿಲ್ಲ. ಜ್ವರಾ ಬಂದಿದೆ ಅನ್ಸತ್ತೆ. ಸ್ವಲ್ಪ ನೋಡಿ” ಎಂದಾಗ “ಎಲಾ..ಈ ಆಮೆಗೆ ಹ್ಯಾಗೆ ಜ್ವರ ಪರೀಕ್ಷೆ ಮಾಡೋದು?” ಪಾಠ ಮಾಡುವಾಗ ಸ್ವಲ್ಪ ಆಸಕ್ತಿ ವಹಿಸಬೇಕಿತ್ತು” ಎಂದುಕೊಳ್ಳುತ್ತಾ ಇಂಜೆಕ್ಷನ್ ಕೊಡಬೇಕೆಂದು ಅದರ ಕಾಲನ್ನು ಎಳೆದು ಹಿಡಿದು ಸೂಜಿ ಚುಚ್ಚಬೇಕೆಂದುಕೊಂಡರೆ ಇದ್ದಕ್ಕಿದ್ದಂತೆ ಲಬಕ್ಕೆಂದು ತಲೆ ಕಾಲುಗಳನ್ನು ಒಳಗೆಳೆದುಕೊಂಡು ಕೂರ್ಮಾವತಾರ ತಳೆದು ಪಶುವೈದ್ಯ ಜ್ಞಾನ ಅಣಕಿಸಿದ್ದಿದೆ.

ಬಹುಶ: ತೊಂಬತ್ತರ ದಶಕದ ದಿನಗಳಿರಬಹುದು. ಎಂದಿನಂತೆ ಪಶುಚಿಕಿತ್ಸೆಯಲ್ಲಿ ತೊಡಗಿದ್ದೆ. ಸಾಗರದ ಉರಗತಜ್ಞ ಮನ್ಮಥ ಕುಮಾರ್ ಸ್ಥಿರ ದೂರವಾಣಿಗೆ ಕರೆ ಮಾಡಿ “ಡಾಕ್ಟ್ರೇ. ಹೆಬ್ಬಾವಿಗೊಂದು ಚಿಕಿತ್ಸೆ ಆಗಬೇಕಿತ್ತು. ಆಸ್ಪತ್ರೆಯಲ್ಲಿರ್ತಿಲ್ಲಾ. ಬರ್ತಾ ಇರುವೆ” ಎಂದು ಅರ್ಧ ಘಂಟೆಯಲ್ಲಿ ಪ್ರತ್ಯಕ್ಷರಾದರು. ಜೊತೆಯಲ್ಲಿ ಅರಣ್ಯ ಇಲಾಖೆಯ ಖಾಕಿ ಪಡೆಯ ಸಾತ್ ಬೇರೆ. ನನ್ನ ಪೇಶಂಟ್ ಅವರ ಜೀಪಿನಲ್ಲಿಟ್ಟಿದ್ದ ಗೋಣಿಚೀಲದಲ್ಲಿತ್ತು. ಬೆಳಿಗ್ಗೆ ಸೋಮಾರಿತನದಿಂದ ಏಳುವ ಹುಡುಗರಿಗೆ “ಏಯ್. ಹೆಬ್ಬಾವಿನಂತೆ ಬಿದ್ದುಕೊಂಡಿದ್ದೆಯಲ್ಲೋ.. ಎಂದು ಬಯ್ಯುವವರು ನಿಜವಾಗಲೂ ಹೆಬ್ಬಾವಿನ ಸೋಮಾರಿತನ ಗಮನಿಸಬೇಕು. ಈ ಹೆಬ್ಬಾವು ಯಾರದೋ ಮನೆಯಲ್ಲಿ ದೊಡ್ಡ ಹೆಗ್ಗಣ ನುಂಗಿ ಹೊಟ್ಟೆ ಭಾರ ಆಗಿ ಸ್ವಲ್ಪ ರಿಲ್ಯಾಕ್ಸ್ ಮಾಡೋಣ ಎಂದು ಯಾರದೋ ಮನೆಯ ಒಳಗೆ ಸೇರಿ ಮಂಚದ ಅಡಿಗೆ ಸೇರಿಕೊಂಡು ಬಿಟ್ಟಿತ್ತಂತೆ.

ಮೊದಲೇ ಸೋಮಾರಿ. ಹೆಗ್ಗಣ ಹೊಟ್ಟೆಯಲ್ಲಿರುವುದರಿಂದ ಇನ್ನೂ ಸೋಮಾರಿಯಾಗಿ ಮಂಚದಡಿ ನಿದ್ದೆ ಹೊಡೆದಿದೆ. ಮನೆಯೊಡತಿ ಸೌತೆಕಾಯಿಯ ಜಾತಿಯ ಮೊಗೆ ಕಾಯಿಯ ಜ್ಯೂಸ್ ಮಾಡೋಣ ಎಂದು ಮಂಚದಡಿ ಒಂದೆರಡು ಹಣ್ಣಾದ ಮೊಗೆಕಾಯಿ(?)ಗಳಿಗಾಗಿ ಹುಡುಕಲು ತಡಕಾಡಿದಾಗ ನಿಧಾನವಾಗಿ ಮಿಸುಕಾಡುವ “ತಣ್ಣನೆ”ಯ ಸರೀಸ್ರಪ ಕೈಗೆ ತಾಗಿ ನಂತರ ಅದು ಹೆಬ್ಬಾವು ಎಂದು ಗೊತ್ತಾಗಿ ಗಾಬರಿಗೊಂಡಿದ್ದಾರೆ. ಮನೆಯವರು ಮತ್ತು ಸುತ್ತಲೂ ಇರುವ ಜನ ಈ ವಿಶೇಷ ಅತಿಥಿಯ ಬೀಳ್ಕೊಡುಗೆಯ ಸಮಾರಂಭವೇರ್ಪಡಿಸಲು ಪ್ರಯತ್ನ ಪಟ್ಟಿದ್ದಾರೆ. ಹೆಬ್ಬಾವೂ ಸಹ ಗಾಬರಿಗೊಂಡು ಪೆಟ್ಟಿಗೆಯಾಕಾರದ ಮಂಚದ ಗೂಡಿನಲ್ಲಿ ಸೇರಿಕೊಂಡು ಬಿಟ್ಟಿದೆ.

ಕಿರಿದಾದ ಗ್ಯಾಪಿನಿಂದ ಅದನ್ನು ಹೊರತರಲು ಅದರ ಉದ್ದನೆಯ ಬಾಲ ಹಿಡಿದು ಜನರೆಲ್ಲಾ ಸೇರಿ ಎಳೆದಾಗ ಹೆಗ್ಗಣ ಹೊಟ್ಟೆಯೊಳಗಿರುವುದರಿಂದ “ಹೊಟ್ಟೆ ಡುಮ್ಮಣ್ಣ”ನಾಗಿದ್ದರಿಂದ ಮಂಚದ ಸಣ್ಣ ಗ್ಯಾಪಿನಲ್ಲಿ ಸಿಕ್ಕಿ ಹಾಕಿಕೊಂಡು ಅದರ ಚರ್ಮ ಸುಲಿದು ಬಿಡಿಸಿದ ಹಲಸಿನ ಹಣ್ಣಿನ ಪರಿಸ್ಥಿತಿಯಾಗಿದೆ. ಚೀನಾದಲ್ಲಾದರೆ ನಮಗೆ “ಹೋಳಿಗೆಯೇ ಜಾರಿ ತುಪ್ಪಕ್ಕೆ ಬಿದ್ದಹಾಗೇ” ಎಂಬ ಗಾದೆಯ ಹಾಗೇ “ಹಾವು ಅಡಿಗೆ ಮನೆಗೆ ಬಂದಹಾಗೆ” ಎಂಬ ಗಾಧೆ ಅನ್ವರ್ಥವಾಗಿ ಎಲ್ಲರಿಗೂ ಇದೊಂದು ವಿಶೇಷ “ಹೆಬ್ಬಾವಿನ ಹಬ್ಬ”ವಾಗಿ ಅದಕ್ಕೆ ತರತರದ ಮಸಾಲೆ ಹಾಕಿ ವಿವಿಧ ಖಾದ್ಯ ಮಾಡಿ ಹುರಿದು ಮುಕ್ಕುತ್ತಿದ್ದರೇನೋ?. ಅಷ್ಟೊತ್ತಿಗೆ ಜನ ಮನ್ಮಥಕುಮಾರನ್ನು ಕರೆಸಿದಾಗ ಹೆಬ್ಬಾವಿಗೆ ಆದ ಗಾಯ ನೋಡಿ ಅವರು ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಕರೆ ಮಾಡಿದರು.

ಹೆಬ್ಬಾವು ತುಂಬಾ ಗಾಯಗೊಂಡಿತ್ತು. ಐದಾರು ಜನ ಹಿಡಿದು ಎಳೆದ ಹೊಡೆತಕ್ಕೆ ಹೊಟ್ಟೆಯ ಭಾಗದ ಚರ್ಮದ ಮೇಲ್ಪದರ ಹಿಸಿದು ಹೋಗಿ ಅಂಗಾಂಗಗಳೆಲ್ಲಾ ಹೊರಚೆಲ್ಲಿಕೊಂಡು ವಿಕಾರವಾಗಿ ಕಾಣುತ್ತಿದ್ದವು. ಅವೆಲ್ಲಾ ಕೆಸರುಮಯವಾಗಿ ಮೂಲ ಬಣ್ಣವೇನು ಎಂಬುದೇ ಗೊತ್ತಾಗುತ್ತಿರಲಿಲ್ಲ. ಇಷ್ಟಿದ್ದರೂ ಸಹ ಸಹ ಹೆಬ್ಬಾವು ಪಿಳಿ ಪಿಳಿ ಎಂದು ಉದ್ದನೆಯ ನಾಲಿಗೆಯನ್ನು ಹೊರಹಾಕಿ ಒಳಗೆಳೆದುಕೊಂಡು ತನ್ನ ಬದುಕಿರುವಿಕೆಯನ್ನು ನಿರ್ವಿಕಾರವಾಗಿ ತೋರಿಸುತ್ತಿತ್ತು.

ಇದರ ಚಿಕಿತ್ಸೆಗೆ ಸುಮಾರು ಎರಡು ತಾಸು ಸಮಯ ಬೇಕು. ನಮ್ಮ ಆಸ್ಪತ್ರೆಯಲ್ಲಿ ಆಗ ಅಪರೇಷನ್ ಟೇಬಲ್ಲು ಇರಲಿಲ್ಲ. ಎರಡು ಗಂಟೆಗಳ ಕಾಲ ಕುಳಿತು ಈ ಕೈಂಕರ್ಯ ಮಾಡಿದರೆ ಬೆನ್ನು ಸೊಂಟ ಬಿದ್ದು ಹೋಗುತ್ತಿತ್ತು. ಈ ಜೀವಿಯ ಚಿಕಿತ್ಸೆಗೆ ಯಾರನ್ನೇನು ಕೇಳುವುದು ಎಂದು ನನ್ನ ಮನೆಯಲ್ಲಿದ್ದ ಟೀಪಾಯಿಯನ್ನು ತರಿಸಿ ಅದನ್ನೇ ಅಪರೇಷನ್ ಟೇಬಲ್ ಮಾಡಿಕೊಂಡೆ. ಈಗಿನಂತೆ ಮೊಬೈಲು, ವಾಟ್ಸಾಪ್ಪುಗಳಿರದೇ ಇರುವುದರಿಂದ ಯಾರನ್ನು ಕೇಳುವುದು?.

ನನ್ನ ಬಳಿಯಿರುವ ಪಶುವೈದ್ಯಕೀಯ ಗ್ರಂಥಗಳನ್ನು ಕೆದಕಿ ಅಧ್ಯಯನ ಮಾಡಿ ಅವಶ್ಯವಿರುವ ಅರಿವಳಿಕೆಗಳು, ಜೀವನಿರೋಧಕಗಳು, ಹೊಲಿಗೆ ದಾರ, ಸೂಜಿ ಇವನ್ನೆಲ್ಲ್ಲಾ ಸಾಗರದ ಮೆಡಿಕಲ್ಲಿನಿಂದ ತರಿಸಿದೆ. ಮನ್ಮಥಕುಮಾರ್ ಹೆಬ್ಬಾವಿನ ನಿಯಂತ್ರಣ ಸಾಧಿಸಿಕೊಟ್ಟರು. ಯಾವುದೋ ಕಚೇರಿ ಕೆಲಸಕ್ಕೆಂದು ಕಾರ್ಗಲ್ಲಿನಿಂದ ಬಂದ ಹಿರಿಯ ಪಶುವೈದ್ಯಕೀಯ ಪರೀಕ್ಷಕ ಶ್ರೀ ಪ್ರಭಯ್ಯಮಠ (ಅವರು ಈಗಿಲ್ಲ) ಮತ್ತು ಕೆರೆಯಪ್ಪ ಇವರೂ ಕೈಜೋಡಿಸಿದರು. ಅರಿವಳಿಕೆ ನೀಡಿದ ನಂತರ ಹೆಬ್ಬಾವಿನ ಹೊಟ್ಟೆಯಲ್ಲಿನ ವಿವಿಧ ಜೀವಜಠರಸಾಮ್ಲಗಳ ಸ್ನಾನದಿಂದ ಮಿಂದು ಇನ್ನೇನು ಜೀರ್ಣವಾಗಿ ಹಾವಿನ ರಕ್ತ ಸೇರಬೇಕಾಗಿದ್ದ ಅರೆ ಜೀವವಾಗಿದ್ದ ಹೆಗ್ಗಣವನ್ನು ಹೊರತೆಗೆದು, ಕರುಳಿನಂತಿರುವ ಅನೇಕ ಅಂಗಗಳನ್ನು ಸ್ವಚ್ಚಗೊಳಿಸಿ ಒಳಗೆ ಹಾಕಿ ವಿವಿಧ ಪದರಗಳಿಗೆ ಹೊಲಿಗೆ ಹಾಕಿ ಒಂದೆರಡು ಗಂಟೆಗಳ ಕಾಲದ ಪ್ರಯತ್ನದ ನಂತರ ಶಸ್ತ್ರಚಿಕಿತ್ಸೆ ಮುಗಿಯಿತು.

ಇದಾದ ನಂತರವೇ ಬಂದಿದ್ದು ನಿಜವಾದ ಪಜೀತಿ. ಈ ಉರಗಕ್ಕೆ ದಿನಾ ಜೀವ ನಿರೋಧಕ, ನಂಜುನಿವಾರಕ ಚುಚ್ಚು ಮದ್ದು ಒಂದು ವಾರ ನೀಡಬೇಕಲ್ಲ? ಯಾರು ನೀಡುವವರು? ಎಂಬ ಪ್ರಶ್ನೆ ಬಂತು. ಇಲ್ಲದಿದ್ದರೆ ಹೆಬ್ಬಾವು ನಂಜಾಗಿ ಸತ್ತು ಹೋಗುವ ಸಾಧ್ಯತೆ ಇತ್ತು. ಈ ಜೀವ ಜಂತಿಗೆ ಇಂಜೆಕ್ಷನ್ ಕೊಡಿಸಲು ಅರಣ್ಯ ಇಲಾಖೆ ಸಿಬ್ಬಂದಿಗೆ ದಿನಾಲೂ ನಮ್ಮ ಆಸ್ಪತ್ರೆಯ ದರ್ಶನ ಮಾಡಿಸಲು ಹೇಳಿದೆ. ಅವರು ಅವರಿಗೆ ಇಂತಹ ಸಹಸ್ರ ಕೆಲಸ ಕಾರ್ಯಗಳಿವೆಯೆಂದೂ, ಕಾಡಿನ ಸಮಸ್ಥ ಜೀವಜಲಚರ ರಕ್ಷಣೆಯ ಭಾರ ಅವರ ಮೇಲಿದೆಯೆಂದೂ, ಸಾಗವಾನಿ, ಬೀಟೆ, ಶ್ರಿಗಂಧ ಇತ್ಯಾದಿ ದುಬಾರಿ ಮರಗಳನ್ನು ಮರಗಳ್ಳರಿಂದ ರಕ್ಷಣೆ ಮಾಡಬೇಕಾದ ಗುರುತರ ಜವಾಬ್ಧಾರಿಯಿರುವದರಿಂದ ನಮ್ಮ ಆಸ್ಪತ್ರೆಯಲ್ಲಿಯೇ ಇದನ್ನು “ಒಳರೋಗಿ”ಯಾಗಿ ಸೇರಿಸಿಕೊಂಡು ಚಿಕಿತ್ಸೆ ಮಾಡಬೇಕೆಂದು ಹಾಗೂ ಅವರು ದಿನಾ ಬಂದು ನಮಗೆ ಪೂರ್ಣ ಸಹಕಾರ ಕೊಡುವುದಾಗಿ ಕೋರಿಕೊಂಡರು. ಆಸ್ಪತ್ರೆಗೆ ಹೊಂದಿಕೊಂಡ ಮೊಲ ಸಾಕಣೆ ಕೇಂದ್ರವನ್ನು ಹೆಬ್ಬಾವಿಗೆ “ಒಳರೋಗಿ ಚಿಕಿತ್ಸಾ ಕೇಂದ್ರ” ಮಾಡಿ ಅಲ್ಲೊಂದು ಗೋಣಿಚೀಲ ಹಾಕಿ ಅದರ ಮೇಲಿಟ್ಟೆವು.

ಮೊದ ಮೊದಲು ತಣ್ಣಗೇ ಇರುವ ಈ ಶೀತರಕ್ತದ ಪ್ರಾಣಿಯನ್ನು ಮುಟ್ಟಲೂ ಅಸಹ್ಯಮಾಡಿಕೊಂಡು ಬೇಸರ ಪಟ್ಟುಕೊಂಡ ಕೆರಿಯಪ್ಪ ನಿಧಾನವಾಗಿ ಅದರ ಮೇಲೆ ಮಮತೆ ಬೆಳೆಸಿಕೊಂಡ. ಅದರ ಹಸಿವು ನೀಗಲು ಒಂದೆರಡು ಕಪ್ಪೆಗಳನ್ನು ಹಿಡಿದು ಆ ರೂಮಿನಲ್ಲಿ ಬಿಟ್ಟ. ಈ ಸೋಮಾರಿ ಹೆಬ್ಬಾವು ಚುರುಕಾಗಿರುವ ಕಪ್ಪೆಗಳನ್ನು ಬೆನ್ನು ಹತ್ತಿ ಬೇಟೆ ಮಾಡುವ ಬಗ್ಗೆ ಸಂಪೂರ್ಣ ಸಂಶಯವಿತ್ತು. ಈ ಕಪ್ಪೆಗಳೋ ಅವುಗಳ ಎಂದಿನ ಹುಟ್ಟುಗುಣದಂತೆ ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಎಗರಾಡಿ ಇಡೀ ರೂಮಿನಲ್ಲಿ ಕುಣಿದು ಕುಪ್ಪಳಿಸಿ ಹೆಬ್ಬಾವಿನ ಮೈಮೇಲೆಯೂ ಸವಾರಿ ಮಾಡಿ ಅವು ಅದರ ಆಹಾರವಾಗುವ ನಮ್ಮ ಬಯಕೆಯನ್ನೇ ನಿವಾಳಿಸಿ ಒಗೆದವು.

ಹೆಬ್ಬಾವಿನ ಜಾತಿಯ ಹಾವುಗಳು ಆಹಾರವಿಲ್ಲದೆಯೂ ಅನೇಕ ದಿನ ಬದುಕಬಲ್ಲವು ಮತ್ತು ಇದಕ್ಕೆ ಆಹಾರ ಹಾಕುವ ವ್ಯರ್ಥ ಪ್ರಯತ್ನ ಬೇಡವೆಂದರೂ ಸಹ ಅದರ ನೈಸರ್ಗಿಕ ಅಹಾರವಾದ ಇಲಿಗಳು, ಮೊಟ್ಟೆ ಇತ್ಯಾದಿಗಳನ್ನು ಅದಕ್ಕೆ ತಿನ್ನಿಸುವ ನಿರಂತರ ಪ್ರಯತ್ನ ಕೆರಿಯಪ್ಪನಿಂದ ನಡೆದೇ ಇತ್ತು. ಆಗಾಗ ತನ್ನ ನಾಲಿಗೆಯನ್ನು ಹೊರಚಾಚಿ ಒಳಗೆಳೆದುಕೊಂಡು ತಾನು ಬದುಕಿರುವಿಕೆಯನ್ನು ಹೆಬ್ಬಾವು ಖಚಿತಪಡಿಸುತ್ತಿತ್ತು. ಈಗಾಗಲೇ ಅದು ವಿಷರಹಿತ ಮತ್ತು ಅಪಾಯರಹಿತ ಎಂದು ಗೊತ್ತಾಗಿರುವುದರಿಂದ ಆರಾಮವಾಗಿ ಅದಕ್ಕೆ ಒಂದೈದಾರು ದಿನ ಅವಶ್ಯಕ ಚುಚ್ಚುಮದ್ದು ನೀಡಿದೆವು.

ಚುಚ್ಚು ಮದ್ದಿನ ಮೂಲಕ ಔಷಧಿ ನೀಡದೆಯೇ ಇದಕ್ಕೆ ಗುಳಿಗೆ ತಿನ್ನಿಸಲಾದೀತೇ?. ಹತ್ತು ದಿನಗಳ ನಂತರ ಗಾಯ ವಾಸಿಯಾಗಿದ್ದರಿಂದ ಹಾಕಿದ ಹೊಲಿಗೆಯನ್ನೂ ಬಿಡಿಸಿಯಾಯ್ತು. ಇಷ್ಟಾದರೂ ಕಾಡುಕಾಯುವ ಗುರುತರ ಜವಾಬ್ದಾರಿ ಹೊಂದಿದ ಅರಣ್ಯ ಮತ್ತು ಹೆಬ್ಬಾವು ಹಿಡಿದು ಅದಕ್ಕೆ ಚುಚ್ಚುಮದ್ದು ನೀಡಲು ನಮಗೆ ಸಹಕಾರದ ಮಹಾನ್ ಆಶ್ವಾಸನೆ ನೀಡಿದ ಇಲಾಖೆಯ ಸಿಬ್ಬಂದಿಯ ಪತ್ತೆಯೇ ಇರಲಿಲ್ಲ.

ಹೆಬ್ಬಾವಿಗೆ ಅಪರೇಷನ್ ಮಾಡಿದ ಈ ಸುದ್ಧಿ ಮಾಧ್ಯಮದವರಿಗೆ ಹೇಗೋ ತಿಳಿದು ಅದು ಅನೇಕ ಪೇಪರ್ರುಗಳಲ್ಲಿ ಬಂದು ಸುತ್ತ ಮುತ್ತಲಿನ ಜನ ನಮ್ಮ ವಿಶೇಷ ಒಳರೋಗಿಯನ್ನು ನೋಡಲು ತಂಡೋಪ ತಂಡವಾಗಿ ಬರತೊಡಗಿದರು. ನಮ್ಮ ದಿನ ನಿತ್ಯದ ಕಾಯಕ ಬದಿಗೊತ್ತಿ ಹೆಬ್ಬಾವಿನ ಅಪರೇಶನ್ನಿನ ಕಥೆಯನ್ನೇ ಪ್ರಾರಂಭದಿಂದ ಹೇಳಿ ಹೇಳಿ ಸಾಕಾಗಿ ಹೋಯಿತು. ಶಾಲಾ ಮಕ್ಕಳು ಅಧ್ಯಯನ ಶಿಬಿರದಂತೆ ಬೇಟಿಕೊಡಲಾರಂಭಿಸಿದ್ದರಿಂದ ಹೆಬ್ಬಾವಿಗೂ ಕಿರಿ ಪ್ರಾರಂಭವಾಯಿತೇನೋ?

ಇದು ಪ್ರಾಣ ಬಿಟ್ಟರೆ ಹೆಬ್ಬಾವನ್ನು ಸ್ವರ್ಗಕ್ಕಟ್ಟಿದ ಪಶುವೈದ್ಯ ಸಿಬ್ಬಂದಿ ಇತ್ಯಾದಿ ಚಿತ್ರ ವಿಚಿತ್ರ ತಲೆಬರಹದಲ್ಲಿ ಸುದ್ಧಿ ಬರಬಹುದಾದ ಸಾಧ್ಯತೆ ನೆನೆದು ಅರಣ್ಯ ಇಲಾಖೆಯವರಿಗೆ ಈ ಹೆಬ್ಬಾವನ್ನು ಕೂಡಲೇ ಕಾಡಿಗೆ ಸೇರಿಸಬೇಕೆಂದು ಮೊರೆಯಿಟ್ಟೆ. ನನ್ನ ನಿರಂತರ ಮೊರೆ ಕೇಳಿ ಅವರು ಒಂದು ಶುಭ ದಿನದಂದು ಬಂದು ಅದನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಸಮೀಪದ ಅಭಯಾರಣ್ಯದಲ್ಲಿ ಬಿಟ್ಟ ಕೂಡಲೇ ಒಮ್ಮೆಯೂ ತಿರುಗಿ ನೋಡದೇ ಸರಸರನೇ ಹರಿದು ದಟ್ಟ ಕಾಡಿನಲ್ಲಿ ಕಣ್ಮರೆಯಾಯ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಇಂದು ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ

Published

on

ಸುದ್ದಿದಿನಡೆಸ್ಕ್:ಇಂದು ಗಣೇಶ ಚತುರ್ಥಿ, ದೇಶ ಸೇರಿ ನಾಡಿನದ್ಯಂತ ಹಿಂದೂ ಸಂಪ್ರದಾಯದಲ್ಲಿ ನಾಡಿನ ಜನತೆ ತಮ್ಮ ಒಳಿತಿಗಾಗಿ, ಜ್ಞಾನ ಸಮೃದ್ಧಿಗಾಗಿ ಶಿವನ ಪುತ್ರ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಅತ್ಯಂತ ಶ್ರದ್ದಾ ಭಕ್ತಿಯಿಂದ ಈ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ ಅದರಂತೆ ಬೆಂಗಳೂರು ಜನತೆ ಮನೆ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶನ ಮೂರ್ತಿಗಳನ್ನು ಜಲ ಮೂಲಗಳಲ್ಲಿ ವಿಸರ್ಜಿಸಲು ಬೆಂಗಳೂರು ಮಹಾ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಇನ್ನೂ ಗಣೇಶ ಚತುರ್ಥಿ ವಿಶೇಷವಾಗಿ ನಾಡಿನ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತ್ತೆ ಅನೇಕ ಸಚಿವರು ಹಾಗೂ ಗಣ್ಯರು ಶುಭ ಹಾರೈಸಿದ್ದಾರೆ.

ಗಣೇಶ ಹಬ್ಬದ ಆಚರಣೆಯ ಸಂದರ್ಭದಲ್ಲಿ ಮದ್ಯಪಾನಾಸಕ್ತರು ಗಲಭೆಮಾಡುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಕರ್ನಾಟಕ ಅಬಕಾರಿ ನಿಯಮಗಳಡಿ ಇಂದಿನಿಂದ ಉಡುಪಿ ಜಿಲ್ಲೆಯಾದ್ಯಂತ ಹಾಗೂ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಇದೇ 9 ಮತ್ತು ಸೆಪ್ಟೆಂಬರ್ 11 ರಂದು ಮಧ್ಯಾಹ್ನ 2 ರಿಂದ ಮದ್ಯರಾತ್ರಿ 12.00 ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.

ನೈಸರ್ಗಿಕವಾಗಿ ತಯಾರಿಸಿದ ಮಣ್ಣಿನ ಗಣೇಶನ ವಿಗ್ರಹಗಳನ್ನು ಮಾತ್ರ ಬಳಸುವ ಮೂಲಕ ಕೆರೆ, ನದಿ ಮೂಲಗಳು ಕಲುಷಿತಗೊಳಿಸದಂತೆ ಕಾಪಾಡುವುದು ನಮ್ಮ ಕರ್ತವ್ಯ ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಅಸ್ತಮಾ ಸಮಸ್ಯೆಗೆ ಶಾಶ್ವತ ಪರಿಹಾರ

Published

on

ಇಂದು ಅಸ್ತಮಾ ರೋಗದ ಬಗ್ಗೆ ಕೆಲವು ಮುಖ್ಯ ಮತ್ತು ವಿಶೇಷ ವಿಷಯಗಳನ್ನು ತಿಳಿದುಕೊಳ್ಳೋಣ.ಅಸ್ತಮಾ ಸಮಸ್ಯೆ ಒಮ್ಮೆ ಬಂತೆಂದರೆ, ಜೀವನಪರ್ಯಂತ ಇದರಿಂದ ಬಳಲಲೇಬೇಕು ಮತ್ತು ಇನ್ಹೇಲರ್ ಗಳನ್ನು ಬಿಡಲು ಸಾಧ್ಯವೇ ಇಲ್ಲ ಎಂಬ ಕಲ್ಪನೆ ಜನರಲ್ಲಿ ಇದೆ. ಇದು ಅರ್ಧ ಸತ್ಯ; ಏಕೆಂದರೆ ನಾವು ಮನಸ್ಸು ಮಾಡಿದರೆ ಇದರಿಂದ ಸಂಪೂರ್ಣವಾಗಿ ಹೊರಬರಲು ಸಾಧ್ಯವಿದೆ. ಯಾವ ಕಾರಣದಿಂದ ಅಸ್ತಮಾ ಸಮಸ್ಯೆ ಬಂದಿದ್ದರೂ ನಮ್ಮ ಜೀವನ ಶೈಲಿ ಮತ್ತು ದಿನಚರಿಯ ಕ್ರಿಯೆಗಳು ಸರಿಯಾಗಿದ್ದರೆ ಅದನ್ನು ಖಂಡಿತ ಹತೋಟಿಯಲ್ಲಿಡಲು ಸಾಧ್ಯವಿದೆ. ಅತ್ಯುತ್ತಮ ಉದಾಹರಣೆ ಎಂದರೆ ಪ್ರಾಣಾಯಾಮ.

ಭಸ್ತ್ರಿಕಾ, ಕಪಾಲಭಾತಿ, ನಾಡಿಶೋಧನ, ಉಜ್ಜಾಯಿ, ಬಂಧಗಳಂತಹ ಪ್ರಾಣಾಯಾಮದ ಕ್ರಿಯೆಗಳನ್ನು ನಿತ್ಯವೂ ತಪ್ಪದೇ ಅಭ್ಯಾಸ ಮಾಡಿದರೆ ನಮ್ಮ ಶ್ವಾಸಾಂಗವ್ಯೂಹದ ಶಕ್ತಿ ಎಷ್ಟರಮಟ್ಟಿಗೆ ಹೆಚ್ಚಾಗುತ್ತದೆ ಎಂದರೆ ಸುಲಭಕ್ಕೆ ಅಸ್ತಮಾ ಸಮಸ್ಯೆ ಉಂಟಾಗಲು ಸಾಧ್ಯವಿಲ್ಲ. ಸುಲಭವಾಗಿ ಅರ್ಥವಾಗುವಂತೆ ಹೇಳಬೇಕೆಂದರೆ ಅಸ್ತಮಾ ಖಾಯಿಲೆಯಲ್ಲಿ ಸೂಕ್ಷ್ಮ ಶ್ವಾಸನಾಳಗಳಲ್ಲಿ ಹೆಚ್ಚಾದ ಲೋಳೆಯ ಸ್ರವಿಸುವಿಕೆಯ ಕಾರಣ ನಾಳಗಳು ಕಿರಿದಾಗಿ ಉಸಿರಾಟಕ್ಕೆ ಕಷ್ಟವಾಗುತ್ತದೆ.

ಇದರಿಂದ ಹೃದಯ, ಶ್ವಾಸಕೋಶ, ಮೆದುಳು ಮತ್ತು ಇಡೀ ದೇಹಕ್ಕೆ ದುಷ್ಪರಿಣಾಮ ಉಂಟಾಗುತ್ತದೆ. ಹಾಗಾಗಿ ತಕ್ಷಣ ಸಮಸ್ಯೆ ಶಮನವಾಗಲು ಆಧುನಿಕ ವೈದ್ಯ ಪದ್ಧತಿಯಲ್ಲಿ ಹೇಳಿದ ಔಷಧಗಳನ್ನು ಅಥವಾ ಇನ್ಹೇಲರ್ ಗಳನ್ನು ಬಳಸುವುದು ಒಳ್ಳೆಯದೇ. ಆದರೆ ಶಾಶ್ವತ ಪರಿಹಾರಕ್ಕಾಗಿ ಭಾರತೀಯ ಚಿಕಿತ್ಸಾ ಪದ್ಧತಿಗಳು ವಿವರಿಸಿರುವ ಚಿಕಿತ್ಸೆಗಳ ಮೊರೆ ಹೋಗಲೇಬೇಕು.

ಆಸನ, ಪ್ರಾಣಾಯಾಮ, ಜಲನೇತಿ, ಸೂತ್ರನೇತಿಯಂತಹ ಕ್ರಿಯೆಗಳನ್ನು ನಿಯಮಿತವಾಗಿ ಅಭ್ಯಾಸದಲ್ಲಿ ಇಟ್ಟುಕೊಂಡರೆ ತುಂಬಾ ಸಹಾಯವಾಗುತ್ತದೆ. ಆಯುರ್ವೇದ ಹೇಳಿದ ವಮನ, ವಿರೇಚನದಂತಹ ಪಂಚಕರ್ಮ ಚಿಕಿತ್ಸೆಗಳನ್ನು ತೆಗೆದುಕೊಂಡರೆ ಬಹಳ ದೊಡ್ಡ ಪ್ರಮಾಣದಲ್ಲಿ ಅಸ್ತಮಾ ಹತೋಟಿಗೆ ಬರುತ್ತದೆ ಮತ್ತು ಆನುವಂಶಿಕವಾಗಿ ಬರುವ ಸಾಧ್ಯತೆ ಇದ್ದರೂ ಅದನ್ನು ತಡೆಗಟ್ಟುತ್ತದೆ. ಅಪರೂಪಕ್ಕೆ ಮಾತ್ರ ಜೀರ್ಣಕ್ರಿಯೆಗೆ ಕಷ್ಟಕರವಾದ ಆಹಾರಗಳನ್ನು ಅಂದರೆ ಕರಿದ ಪದಾರ್ಥಗಳು ಅಥವಾ ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ಸೇವಿಸಬೇಕೇ ಹೊರತು ಸಾಮಾನ್ಯವಾಗಿ ನಿತ್ಯವೂ ಲಘು ಭೋಜನವನ್ನೇ ಮಾಡಬೇಕು.

ಇದರಿಂದ ನಮ್ಮ ಶ್ವಾಸಕೋಶದ ಸೂಕ್ಷ್ಮನಾಳಗಳಲ್ಲಿ ವ್ಯತಿರಿಕ್ತ ಬದಲಾವಣೆ ಆಗುವುದನ್ನು ತಡೆಯಬಹುದು. ಹಗಲುನಿದ್ದೆ ಮಾಡುವ ರೂಢಿಯಿದ್ದರೆ ಹಗಲುನಿದ್ದೆಯ ಅವಧಿಯನ್ನು ಕಡಿಮೆ ಮಾಡುತ್ತಾ ಬಂದು ಪೂರ್ತಿಯಾಗಿ ಬಿಟ್ಟುಬಿಡಬೇಕು. ರಾತ್ರಿ ಅತ್ಯಂತ ಲಘು ಭೋಜನ ಮಾಡಬೇಕು ಮತ್ತು ಸಾಧ್ಯವಾದಷ್ಟೂ ಬೇಗ ಮಾಡಬೇಕು. ರಾತ್ರಿಯ ಊಟದಲ್ಲಿ ಹಾಲು, ಮೊಸರು, ತುಪ್ಪ, ಕರಿದ ಪದಾರ್ಥಗಳು, ಮಾಂಸಾಹಾರಗಳನ್ನು ತ್ಯಜಿಸಲೇಬೇಕು. ರಾತ್ರಿ ಊಟದ ನಂತರ ಕನಿಷ್ಟ ಒಂದೂವರೆ ಘಂಟೆ ಬಿಟ್ಟು ಮಲಗಬೇಕು.

ಇನ್ನು ಅಸ್ತಮಾ ತೀವ್ರಾವಸ್ಥೆಯಲ್ಲಿದ್ದು ವೈದ್ಯರನ್ನು ಭೇಟಿಯಾಗಲು ಸಾಧ್ಯವಾಗದೇ ಇದ್ದಾಗ ಸಾಸಿವೆ ಎಣ್ಣೆಗೆ ಉಪ್ಪು ಸೇರಿಸಿ ಬಿಸಿಮಾಡಿ, ಎದೆಗೆ, ಬೆನ್ನಿಗೆ ಮಸ್ಸಾಜ್ ಮಾಡಿ, ಆ ಜಾಗಗಳಿಗೆ ನೀರಿನ ಉಗಿ ಕೊಡಬೇಕು. ನೀರಿಗೆ ನೀಲಗಿರಿ ಎಣ್ಣೆಯನ್ನು ಬಿಟ್ಟು ಉಗಿ ಕೊಟ್ಟರೆ ಹೆಚ್ಚು ಸಹಾಯವಾಗುತ್ತದೆ. ಕಫ ಸರಿಯಾಗಿ ಹೊರಗೆ ಬರದೆ ತೊಂದರೆಯಾಗುತ್ತಿದ್ದರೆ ಆಡುಮುಟ್ಟದ ಸೊಪ್ಪಿನ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಒಂದು ವಾರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.

ಒಂದು ವೀಳ್ಯದೆಲೆಯಲ್ಲಿ ಐದು ಎಲೆ ತುಳಸಿ, ಒಂದು ಲವಂಗ, ಒಂದು ಚೂರು ಜೇಷ್ಠಮಧು ಹಾಕಿ ಪ್ರತಿ ಬಾರಿ ಊಟವಾದ ನಂತರ ಒಂದು ವಾರದ ಕಾಲ ಸೇವಿಸಬಹುದು. ಕಾಳುಮೆಣಸು, ಶುಂಠಿ, ಹಿಪ್ಪಲಿಗಳ ಸಮಪ್ರಮಾಣದ ಮಿಶ್ರಣವನ್ನು ಅರ್ಧ ಚಮಚ ತೆಗೆದುಕೊಂಡು ಅದಕ್ಕೆ ಒಂದು ಚಮಚ ಜೇನುತುಪ್ಪ ಹಾಕಿ ನಿತ್ಯ ಸೇವಿಸುವುದರಿಂದ ಜೀರ್ಣಶಕ್ತಿಯೂ ಹೆಚ್ಚುತ್ತದೆ; ಅಸ್ತಮಾ ಕೂಡಾ ಹತೋಟಿಯಲ್ಲಿರುತ್ತದೆ.

ದೀರ್ಘಾವಧಿಯಿಂದ ಇರುವ ಅಸ್ತಮಾ ರೋಗಿಗಳಿಗೆ ಕೆಲವೊಮ್ಮೆ ಒಳರೋಗಿಯಾಗಿದ್ದು ಪಂಚಕರ್ಮ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಚಿಕಿತ್ಸೆಗಳನ್ನು ಪಡೆದು ಗುಣಪಡಿಸಿಕೊಳ್ಳಬೇಕಾಗುತ್ತದೆ. ಅಸ್ತಮಾ ಸಂಪೂರ್ಣವಾಗಿ ಗುಣವಾದ ಮೇಲೆಯೂ ಕೆಲವು ನಿಯಮಗಳನ್ನು ಪಾಲಿಸದೇ ಹೋದರೆ ಕೆಲವು ಕಾಲದ ನಂತರ ಮರುಕಳಿಸುವ ಸಾಧ್ಯತೆ ಇರುತ್ತದೆ. ಅಸ್ತಮಾ ತೀವ್ರಾವಸ್ಥೆಯಲ್ಲಿದ್ದಾಗ ಸಾಧ್ಯವಾದಷ್ಟೂ ಬೇಗ ಆಸ್ಪತ್ರೆಗೆ ಭೇಟಿ ಕೊಟ್ಟು ತುರ್ತು ಚಿಕಿತ್ಸೆ ತೆಗೆದುಕೂಳ್ಳಬೇಕು. ಉಸಿರಾಟದ ತೊಂದರೆಗಳೆಲ್ಲವೂ ಅಸ್ತಮಾ ಅಲ್ಲ. ಹಾಗಾಗಿ ವೈದ್ಯರ ಭೇಟಿ ಮಾಡದೇ ಅಸ್ತಮಾ ಎಂದು ತೀರ್ಮಾನಿಸಿ ಮನೆಮದ್ದುಗಳನ್ನಾಗಲೀ ಔಷಧ ಸೇವನೆಯನ್ನಾಗಲೀ ಮಾಡಬಾರದು.(ಬರಹ-ಡಾ ವೆಂಕಟ್ರಮಣ ಹೆಗಡೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ಸಕ್ಕರೆ ಕಾಯಿಲೆ ಸುತ್ತ ಮುತ್ತ..! ; ಹುಷಾರಾಗಿರಿ..!

Published

on

ಪ್ರಪಂಚದಲ್ಲಿ ಅತಿ ಹೆಚ್ಚು ಸಕ್ಕರೆ ಕಾಯಿಲೆ ಇರುವ ನಂಬರ್ ಒನ್ ದೇಶ ಚೀನಾ, ಭಾರತ ಎರಡನೇ ಸ್ಥಾನದಲ್ಲಿದೆ. 2025 ರಲ್ಲಿ ಭಾರತವೇ ನಂಬರ್ ಒನ್ ಆಗಲಿದೆ ಎಂದು ವೈದ್ಯಕೀಯ ಜಗತ್ತು ಹೇಳುತ್ತಿದೆ. ನಮ್ಮ ದೇಶದಲ್ಲಿ ಸಾಕಷ್ಟು ಆಸ್ಪತ್ರೆಗಳಿವೆ. ಸಾಕಷ್ಟು ವೈದ್ಯರಿದ್ದಾರೆ. ಪ್ರತಿಯೊಂದು ಕಾಯಿಲೆಗೂ ಉತ್ತಮವಾದ ಔಷಧಿಗಳೂ ಇವೆ.

ಒಟ್ಟಿನಲ್ಲಿ ವೈದ್ಯಕೀಯ ಕ್ಷೇತ್ರ ಅತ್ಯಂತ ಮುಂದುವರೆದಿದೆ. ಆದರೂ ಬಿಪಿ ಶುಗರ್ ನಿಯಂತ್ರಣ ಏಕೆ ಸಾಧ್ಯವಾಗುತ್ತಿಲ್ಲ. ಇಂದಿಗೂ ಅನೇಕ ವೈದ್ಯರು ಬಿಪಿ ಶುಗರ್ ಕಾಯಿಲೆಗೆ ಔಷಧಿ ಜೀವನ ಪರ್ಯಂತರ ತೆಗೆದುಕೊಳ್ಳಲೇಬೇಕೆಂದು ಏಕೆ ಹೇಳುತ್ತಿದ್ದಾರೆ? ಈ ಬಗ್ಗೆ ಆಳವಾಗಿ ನೋಡಿದಾಗ ಪ್ರಮುಖವಾಗಿ ಇಂದಿನ ಅಧಿಕ ಜನರು ಅಧಿಕ ಆಹಾರ ಸೇವಿಸುತ್ತಿದ್ದಾರೆ. ಪದೇ ಪದೇ ಆಹಾರ ಸೇವಿಸುತ್ತಿದ್ದಾರೆ. ಪ್ರತಿದಿನ ಮೂರು ಹೊತ್ತು ಊಟ ಮಾಡಲೇಬೇಕು. ಹಸಿವೆ ಇರಲಿ ಇಲ್ಲದಿರಲಿ ಆಹಾರ ಸೇವಿಸುತ್ತಿದ್ದಾರೆ. ಅದರಲ್ಲೂ ಪ್ರಕೃತಿಯಿಂದ ಗಿಡ ಮರಗಳಿಂದ ಬರುವ ಆಹಾರವನ್ನು ನೇರವಾಗಿ ಸೇವಿಸುತ್ತಿಲ್ಲ. ಪ್ರತಿಯೊಂದು ಆಹಾರವೂ ಪ್ರೊಸೆಸ್ಡ್ ಪ್ಯಾಕ್ಡ್ ಆಗಿ ಬರುತ್ತಿದೆ. ಅದರಲ್ಲೂ ಎಣ್ಣೆಯಲ್ಲಿ ಕರಿದ, ಮಸಾಲೆಯಿಂದ ರುಚಿಕರವಾದ ಆಹಾರವೇ ಬೇಕು. ಉಪವಾಸ ಮಾಡುವವರು ಅತಿ ಕಡಿಮೆಯಾಗಿದ್ದಾರೆ. ಇದಕ್ಕೆಲ್ಲ ಕಾರಣ ಇಂದಿನ ಜನರಲ್ಲಿ ಅಧಿಕ ಹಣವಿದೆ. ಆಹಾರದ ಕೊರತೆಯಿಲ್ಲ. ಮನೆಯಲ್ಲಿ ಊಟವಿಲ್ಲವೆಂದರೆ ಹೋಟೆಲ್ಗೆ ಹೋಗಿ ಊಟ ಮಾಡುತ್ತಾರೆ. ಖಾಲಿ ಹೊಟ್ಟೆಯಲ್ಲಿ ಮಾತ್ರ ಇರುವುದಿಲ್ಲ.

ದೇಶದ ಶೇಕಡ 20 ರಷ್ಟು ಜನರಿಗೆ ತಮಗೆ ಬಿಪಿ ಮತ್ತು ಸಕ್ಕರೆ ಕಾಯಿಲೆ ಇರುವ ಬಗ್ಗೆ ಅರಿವೆಯೇ ಇರುವುದಿಲ್ಲ. ಶೇ.20 ರಷ್ಟು ಜನರು ತಮಗೆ ಬಿಪಿ ಅಥವಾ ಶುಗರ್ ಕಾಯಿಲೆ ಇಲ್ಲದೆ ಇದ್ದರೂ ಮಾತ್ರೆ ಸೇವಿಸುತ್ತಿದ್ದಾರೆ. ಶೇಕಡ 50 ರಷ್ಟು ಜನರು ಆಹಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳದೇ ಬಿಪಿ ಸಕ್ಕರೆ ಕಾಯಿಲೆಗೆ ಮಾತ್ರೆ ಸೇವಿಸುತ್ತಿದ್ದಾರೆ. ಶೇಕಡ 30 ರಷ್ಟು ಜನರು ಅನವಶ್ಯಕ ಅತಿಯಾದ ನಿರಂತರ ಔಷಧಿಗಳ ಸೇವನೆಯಿಂದ ಹೈಬಿಪಿ ಮತ್ತು ಶುಗರ್ ಕಾಯಿಲೆಗೆ ಈಡಾಗುತ್ತಿದ್ದಾರೆ. ಬಿಪಿ ಮತ್ತು ಶುಗರ್ ಕಾಯಿಲೆ ಇವೆರಡೂ ಅಣ್ಣ ತಮ್ಮಂದಿರಿದ್ದಂತೆ. ಒಂದು ಬಂದರೆ ಇನ್ನೊಂದು ಬರಲೇಬೇಕು. ಇವೆರಡೂ ಬಂದಾಗ ಇತರೆ ಎಲ್ಲಾ ಕಾಯಿಲೆಗಳು ಒಂದೊಂದಾಗಿ ಬರುತ್ತವೆ.

ನಮ್ಮ ದೇಹದಲ್ಲಿರುವ ಮೇದೋಜೀರಕ ಗ್ರಂಥಿಯು (pancreatitis) ಶುಗರ್ ಕಾಯಿಲೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಮೆದೋಜೀರಕ ಗ್ರಂಥಿಯು ಆಹಾರ ಜೀರ್ಣಗೊಳಿಸಲು ಕೆಲವು ರಾಸಾಯನಿಕಗಳನ್ನು ಉತ್ಪತ್ತಿ ಮಾಡುತ್ತದೆ. ಜೊತೆಗೆ ಇನ್ಸುಲಿನ್ ಉತ್ಪಾದಿಸುವ ಕೆಲಸವನ್ನೂ ಇದು ಮಾಡುತ್ತದೆ. ನಾವು ಸೇವಿಸುವ ಕೆಟ್ಟ ಆಹಾರದಿಂದ, ಕೆಟ್ಟ ಜೀವನ ಶೈಲಿಯಿಂದ ಈ ಮೆದೋಜೀರಕ ಗ್ರಂಥಿಯು ಬಲಹೀನಗೊಂಡು ಇನ್ಸುಲಿನ್ ಅನ್ನು ಕಡಿಮೆ ಉತ್ಪಾದಿಸುತ್ತದೆ ಅಥವಾ ಉತ್ಪಾದಿಸುವದನ್ನೇ ನಿಲ್ಲಿಸಿ ಬಿಡುತ್ತದೆ. ಆಗಲೇ ಶುಗರ್ ಕಾಯಿಲೆ ನಮಗೆ ಬರುತ್ತದೆ.

ನಾನು ಈ ಲೇಖನದಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳವಾಗಿ ಮಾಹಿತಿ ಒದಗಿಸಿರುತ್ತೇನೆ. ನಾನು ತಿಳಿಸಿರುವ ಈ ಚಿಕಿತ್ಸಾ ಪದ್ಧತಿಯು ವಿಶ್ವದಲ್ಲಿಯೇ ಶ್ರೇಷ್ಠ ಚಿಕಿತ್ಸಾ ಪದ್ದತಿಯಾಗಿದೆ. ಇದನ್ನು 100% ಪಾಲಿಸುವ ಮೂಲಕ ನಿಮ್ಮ ಶುಗರ್ ಕಾಯಿಲೆಯನ್ನು 100% ಕಂಟ್ರೋಲ್ನಲ್ಲಿ ಇಡಬಹುದು. ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದಲ್ಲಿ ನಿಮ್ಮ ಅನುಭವಕ್ಕೆ ಬರುತ್ತದೆ. ಅವರವರ ದೇಹ ಪ್ರಕೃತಿಗೆ ಅನುಗುಣವಾಗಿ ನಿಯಂತ್ರಣ ಹೊಂದಲು, ಗುಣಮುಖ ಹೊಂದಲು ಹೆಚ್ಚು ಕಡಿಮೆ ಸಮಯ ತೆಗೆದುಕೊಳ್ಳಬಹುದು. ಆದರೆ, ಶಾಶ್ವತ ಪರಿಹಾರ ಸಿಗುತ್ತದೆ.

ಸಕ್ಕರೆ ಕಾಯಿಲೆ ಎಂದರೇನು?

ಅಧಿಕ ಸಕ್ಕರೆ ಸೇವನೆಯಿಂದ ಸಕ್ಕರೆ ಕಾಯಿಲೆ ಬರುತ್ತದೆ ಎಂದು ಅನೇಕರು ತಿಳಿದುಕೊಂಡಿದ್ದಾರೆ. ಆದರೆ, ಇದು ತಪ್ಪು. ಏಕೆಂದರೆ ನಾವು ಪ್ರತಿ ದಿನ ಬೆಳಿಗ್ಗೆಯಿಂದ ರಾತ್ರಿಯವರೆಗೂ ಸೇವಿಸುವ ಎಲ್ಲಾ ಆಹಾರಗಳು ಕಾರ್ಬೋಹೈಡ್ರೇಟ್ ಎಂಬ ಸಕ್ಕರೆ ಅಂಶವನ್ನು ಹೊಂದಿರುತ್ತವೆ. ಅಂದರೆ, ನಾವು ಪ್ರತಿ ದಿನ ಸೇವಿಸುವ ಅನ್ನ, ಚಪಾತಿ, ಇಡ್ಲಿ, ವಡಾ, ದೋಸೆ ಇತರೆ ಎಲ್ಲವುಗಳಲ್ಲೂ ಶೇ.50 ಕ್ಕಿಂತ ಹೆಚ್ಚು ಸಕ್ಕರೆ ಅಂಶವಿರುತ್ತದೆ. ಈ ಆಹಾರ ಸೇವಿಸಿದಾಗ ಜೀರ್ಣಗೊಂಡು ಗ್ಲುಕೋಸ್ ರೂಪದಲ್ಲಿ ಪರಿವರ್ತನೆ ಹೊಂದಿ ರಕ್ತ ಸೇರುತ್ತದೆ. ರಕ್ತ ಸೇರಿದ ಈ ಗ್ಲುಕೋಸನ್ನು ಮೆದೋಜೀರಕ ಗ್ರಂಥಿ ಬಿಡುಗಡೆ ಮಾಡುವ ಇನ್ಸುಲಿನ್ ಎಂಬ ಹಾರ್ಮೋನು ರಕ್ತದ ಮೂಲಕ ಶರೀರದ ಎಲ್ಲಾ ಜೀವಕೋಶಗಳಿಗೆ ತಲುಪಿಸುತ್ತದೆ. ಆಗಲೇ ನಮಗೆ ಶಕ್ತಿ ಬರುತ್ತದೆ. ಈ ಗ್ಲುಕೋಸ್ ಜೀವಕೋಶಗಳಿಗೆ ತಲುಪದೇ ರಕ್ತದಲ್ಲಿಯೇ ಅಧಿಕವಾಗಿ ಸಂಗ್ರಹವಾಗುವುದನ್ನು ಸಕ್ಕರೆ ಕಾಯಿಲೆ ಎನ್ನುವರು.

ಟೈಪ್-1 ಮತ್ತು ಟೈಪ್-2 ಡಯಾಬಿಟೀಸ್ ಎಂದರೇನು?

ಕೆಲವು ಕಾರಣಗಳಿಂದ ಮೆದೋಜೀರಕ ಗ್ರಂಥಿಯು ಇನ್ಸುಲಿನ್ ಕಡಿಮೆ ಉತ್ಪಾದಿಸುತ್ತದೆ ಅಥವಾ ಉತ್ಪಾದಿಸುವುದನ್ನೆ ನಿಲ್ಲಿಸಿಬಿಡುತ್ತದೆ. ಆಗ ರಕ್ತದಲ್ಲಿರುವ ಗ್ಲುಕೋಸ್ ಉಪಯೋಗವಾಗದೆ ರಕ್ತದಲ್ಲಿಯೇ ಅಧಿಕವಾಗಿ ಉಳಿದುಬಿಡುತ್ತದೆ. ಇದನ್ನು ಟೈಪ್-1 ಡಯಾಬಿಟೀಸ್ ಎನ್ನುವರು. ಇದು ಮಕ್ಕಳಲ್ಲಿ ಅತಿ ಹೆಚ್ಚಾಗಿ ಕಂಡುಬರುತ್ತದೆ. ಕೆಲವರಲ್ಲಿ ಮೇದೋಜೀರಕ ಗ್ರಂಥಿ ಅಗತ್ಯ ಇನ್ಸುಲಿನ್ ಉತ್ಪಾದಿಸಿದರೂ ಗ್ಲುಕೋಸ್ ಉಪಯೋಗಿಸಿಕೊಳ್ಳಲು ಜೀವಕೋಶಗಳು ವಿಫಲವಾಗುತ್ತವೆ. ಇದರಿಂದಲೂ ರಕ್ತದಲ್ಲಿ ಅಧಿಕ ಗ್ಲುಕೋಸ್ ಸಂಗ್ರಹವಾಗುತ್ತದೆ. ಇದನ್ನೇ ಟೈಪ್-2 ಡಯಾಬಿಟೀಸ್ ಎನ್ನುವರು. ಇದು ಇಂದು ಎಲ್ಲರಲ್ಲೂ ಅತೀ ಹೆಚ್ಚಾಗಿ ಕಂಡುಬರುತ್ತಿದೆ.

ಸಕ್ಕರೆ ಕಾಯಿಲೆಯ ಲಕ್ಷಣಗಳು

ಅತಿಯಾದ ಹಸಿವು, ಪದೇ ಪದೇ ಮೂತ್ರ ವಿಸರ್ಜನೆ, ತೂಕ ಕಡಿಮೆಯಾಗುವುದು, ಗಾಯ ವಾಸಿಯಾಗಲು ವಿಳಂಬ, ಕಣ್ಣು ಮಂಜಾಗುವುದು, ಇವು ಸಕ್ಕರೆ ಕಾಯಿಲೆಯ ಪ್ರಮುಖ ಲಕ್ಷಗಳಾಗಿವೆ. ಇವುಗಳಲ್ಲಿ ಕೆಲವು ಲಕ್ಷಣಗಳು ಕಾಣದೇ ಇರಬಹುದು. ಈ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದಲ್ಲಿ ಶುಗರ್ ಪರೀಕ್ಷೆ ಮಾಡಿಸಿಕೊಳ್ಳಿ.

ಸಕ್ಕರೆ ಕಾಯಿಲೆ ಬರಲು ಕಾರಣವೇನು?

ಪ್ರಮುಖವಾಗಿ ಎರಡು ಕಾರಣಗಳಿಂದ ಸಕ್ಕರೆ ಕಾಯಿಲೆ ಬರುತ್ತದೆ. ತಪ್ಪಾದ ಆಹಾರ ಸೇವನೆ ಮತ್ತು ತಪ್ಪಾದ ಜೀವನ ಶೈಲಿಯಿಂದ ಸಕ್ಕರೆ ಕಾಯಿಲೆ ಬರುತ್ತದೆ. ಪ್ರೊಸೆಸ್ಡ್ ಪ್ಯಾಕ್ಡ್ ಫುಡ್ ಸೇವನೆ, ಕರಿದ ಹುರಿದ ಆಹಾರ, ಅತಿಯಾದ ಆಹಾರ, ಪದೇ ಪದೇ ಆಹಾರ ಸೇವನೆ, ತೂಕ ಹೆಚ್ಚಳ, ಅನವಶ್ಯಕ ಅತಿಯಾದ ಔಷಧಿಗಳ ಸೇವನೆ, ರೋಗ ನಿರೋಧಕ ವ್ಯವಸ್ಥೆಯ ಅಸಮತೋಲನ, ಅನುವಂಶಿಕ, ಮಾನಸಿಕ ಒತ್ತಡ, ಮತ್ತು ದೈಹಿಕ ಶ್ರಮ ಇಲ್ಲದೇ ಇರುವುದು ಈ ಎಲ್ಲಾ ಕಾರಣಗಳಿಂದಲೂ ಸಕ್ಕರೆ ಕಾಯಿಲೆ ಬರುತ್ತದೆ.

ಸಕ್ಕರೆ ಕಾಯಿಲೆಯ ನಾರ್ಮಲ್ ರೇಂಜ್

ಖಾಲಿ ಹೊಟ್ಟೇಲಿ 100 ರೊಳಗೆ ಇದ್ದಲ್ಲಿ ನಾರ್ಮಲ್, ಊಟದ ನಂತರ 140 ರೊಳಗಿದ್ದಲ್ಲಿ ನಾರ್ಮಲ್ ಎಂದು ವೈದ್ಯಕೀಯ ಕ್ಷೇತ್ರವು ಪರಿಗಣಿಸಿದೆ. ನಿಮಗೆ ಖಾಲಿ ಹೊಟ್ಟೇಲಿ 100 ರಿಂದ 126 ರೊಳಗಿದ್ದಲ್ಲಿ ಮತ್ತು ಊಟದ ನಂತರ 140 ರಿಂದ 200ರ ರೊಳಗಿದ್ದಲ್ಲಿ ನಿಮಗೆ ಸಕ್ಕರೆ ಖಾಯಿಲೆ ಬರುವ ಸಂಭವವಿರುತ್ತದೆ. ಮುಂಜಾಗ್ರತೆಯಾಗಿ ನಿಮ್ಮ ಆಹಾರದಲ್ಲಿ ಬದಲಾವಣೆ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಆದರೆ, ಶುಗರ್ ಮಾತ್ರೆ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಒಂದು ವೇಳೆ ಖಾಲಿ ಹೊಟ್ಟೇಲಿ 126ರ ಮೇಲಿದ್ದಲ್ಲಿ ಮತ್ತು ಊಟದ ನಂತರ 200 ಕ್ಕಿಂತ ಮೇಲಿದ್ದಲ್ಲಿ ನಿಮಗೆ ಸಕ್ಕರೆ ಕಾಯಿಲೆ ಇದ್ದು, ನಿಮ್ಮ ಆಹಾರದಲ್ಲಿ ಬದಲಾವಣೆ ಮತ್ತು ಜೀವನ ಶೈಲಿಯಲ್ಲಿ ಬದಲಾವಣೆ ಜೊತೆಗೆ ಅಲ್ಪ ಪ್ರಮಾಣದ ಶುಗರ್ ಔಷಧ ತೆಗೆದುಕೊಳ್ಳಲೇಬೇಕು. (ಬರಹ :ಸೂರ್ಯಕಾಂತ ಸಜ್ಜನ್)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending