Connect with us

ದಿನದ ಸುದ್ದಿ

ಬಾಣಲೆಯಿಂದ ಬೆಂಕಿಗೆ : ಕೊರೊನಾ ರಣವೈದ್ಯ ಬೆಳಕಿಗೆ

Published

on

ಚಿತ್ರ: ಛತ್ತೀಸಗಢದ ಅರಣ್ಯದ ಮಧ್ಯೆ ಅದಾನಿ ಕಂಪನಿಯ ಕಲ್ಲಿದ್ದಲ ಗಣಿಗಾರಿಕೆಯ ದೃಶ್ಯ | ಕೃಪೆ :qz.com
  • ನಾಗೇಶ್ ಹೆಗಡೆ

ಕೊರೊನಾಮಾರಿ ಬರುವ ಮೊದಲು ಭಾರತದ ನದಿಗಳೆಲ್ಲ ಕೊಳಕು ಕೂಪಗಳಾಗಿದ್ದವು. ವಾಯುಮಾಲಿನ್ಯ ದಟ್ಟವಾಗಿತ್ತು. ಟ್ರಾಫಿಕ್ ಗದ್ದಲ ಅತಿಯಾಗಿತ್ತು. ಕಾರ್ಖಾನೆಗಳು, ಗಣಿಗಳು ಲಂಗುಲಗಾಮಿಲ್ಲದೇ ನಿಸರ್ಗ ಸಂಪತ್ತನ್ನು, ಕಾರ್ಮಿಕರನ್ನು ಶೋಷಣೆ ಮಾಡುತ್ತಿದ್ದವು. ಕೊರೊನಾ ಬಂದಮೇಲೆ ಎಲ್ಲಕಡೆ ಶಾಂತಿ ನೆಲೆಸಿತ್ತು. ಲಾಕ್ಡೌನ್ ಎಂಬ ಹಠಾತ್ ಎಡವಟ್ಟಿನಿಂದಾಗಿ ಅದೆಷ್ಟೊ ಲಕ್ಷ ಕಾರ್ಮಿಕರು ನೆಲೆತಪ್ಪಿ ಗುಳೆ ಹೊರಟು, ಘನಘೋರ ಸಂಕಷ್ಟಗಳಿಗೆ ತುತ್ತಾಗಿದ್ದನ್ನು ಬಿಟ್ಟರೆ , ಅಭಿವೃದ್ಧಿಯ ಭರಾಟೆಯಿಂದ ನಲುಗಿದ್ದ ನೆಲ-ನೀರು-ಗಾಳಿ-ವನ್ಯಜೀವ ಎಲ್ಲವೂ ತುಸು ಉಸಿರಾಡತೊಡಗಿದವು.

ಕೊರೊನಾ ನಂತರ ಹೊಸ ಭಾರತ ಉದಯಿಸಲಿದೆ ಎಂದು ನಮ್ಮಲ್ಲಿ ಅನೇಕರು ಸಣ್ಣ ಆಸೆಯನ್ನಿಟ್ಟುಕೊಂಡಿದ್ದರು. ಆದರೆ ಈಗಿನ ಸರಕಾರ ರಣವೈದ್ಯದ ವೈಖರಿ ನೋಡಿದರೆ, ಕಾಯಿಲೆಯ ನೆಪದಲ್ಲಿ ದುರ್ಬಲರನ್ನು (ಅಂದರೆ ಉದ್ಯೋಗ ಕಳಕೊಂಡವರನ್ನು, ನಡೆನಡೆದು ಸುಸ್ತಾದವರನ್ನು, ಹಸಿದವರನ್ನು) ಕಂದಕಕ್ಕೆ ದೂಡಿ ಮಣ್ಣು ಮುಚ್ಚಲು ಹೊರಟಂತೆ ಕಾಣುತ್ತದೆ. ನಮ್ಮಲ್ಲಿ ಹಕ್ಕಿಜ್ವರ ಬಂತೆಂದು ಹ್ಯಾಚರಿಯ ಸಾವಿರಾರು ಕೋಳಿಗಳನ್ನು ಕಂದಕಕ್ಕೆ ಹಾಕಿ ಮಣ್ಣು ಮುಚ್ಚಿದ ಹಾಗೆ.

(ಇಲ್ಲೊಂದು ಕ್ರೂರ ವ್ಯಂಗವಿದೆ: ಪ್ರಧಾನಿ ಮೋದಿಯವರು ಘೋಷಿಸಿದ 20 ಲಕ್ಷ ಕೋಟಿಯಲ್ಲಿ ಯಾವಯಾವ ಬಾಬ್ತಿಗೆ ಎಷ್ಟೆಷ್ಟು ಎಂಬುದನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಲ್ಕು ಟ್ರಾಂಚ್‌ (tranche)ಗಳಲ್ಲಿ ಹಂಚಿದ್ದಾರೆ. ನಾಲ್ಕನೆಯ ಕಂತಿನಲ್ಲಂತೂ ಗಣಿಗಾರಿಕೆ ವಿಸ್ತರಣೆಗೆ, ರಕ್ಷಣಾ ಉತ್ಪಾದನೆ, ವಿಮಾನಯಾನ, ಬಾಹ್ಯಾಕಾಶ ಸಾಹಸಕ್ಕೆ ಇತ್ಯಾದಿಯಂತೆ.

ಟ್ರಾಂಚ್ ಎಂದರೆ ಹೋಳು ಅಥವಾ ಭಾಗ. ಆದರೆ ನೀವು ಗೂಗಲ್ ಕನ್ನಡ ನಿಘಂಟಿನಲ್ಲಿ ಅದರ ಅರ್ಥವನ್ನು ಹುಡುಕಿದರೆ ಟ್ರಾಂಚ್ ಎಂದರೆ ‘ಕಂದಕ’ trench ಎಂಬ ತಪ್ಪು ಅರ್ಥವಿದೆ, ಬೇಕಿದ್ದರೆ ನೋಡಿ. ನಿಜಕ್ಕೂ 40 ಕೋಟಿ ಜನರನ್ನು ಕಂದಕಕ್ಕೆ ಬೀಳಿಸಿ ತಪ್ಪನ್ನೇ ಸರಿಯೆಂದು, trancheನ್ನೇ trench ಎಂದು ತೋರಿಸುವ ಹುನ್ನಾರವೆ?.)

ಹಳ್ಳಿಯ ಜನರು ಹಳ್ಳಿಗೇ ಮರಳಿ ವಲಸೆ ಬಂದಾಗ ಎಷ್ಟೊಂದು ವಿಧಗಳಲ್ಲಿ ಅವರಿಗೆ ನೆರವಾಗಲು ಸಾಧ್ಯವಿತ್ತು. ಅದರ ಕೆಲವು ಯಶಸ್ವೀ ಉದಾಹರಣೆಗಳು ನಮ್ಮಲ್ಲಿವೆ: ಮಹಾರಾಷ್ಟ್ರದಲ್ಲಿ ಹೀವ್ಡೆ ಬಝಾರ್ ಎಂಬ ಗ್ರಾಮವಿದೆ. ನಮ್ಮ ಕೋಲಾರದ ಯಾವುದೇ ಊರಿನ ಹಾಗೆ ಬರೀ 430 ಮಿ.ಮೀ. ಮಳೆ ಬೀಳುವ ಹಳ್ಳಿ.

1980ರ ದಶಕದಲ್ಲಿ ಬಹಳಷ್ಟು ಜನ ದಿಕ್ಕೆಟ್ಟು ಉದ್ಯೋಗ ಹುಡುಕಿ ಮುಂಬೈಗೋ ಪುಣೆಗೋ ಹೋದರು. ಆ ಊರಿನ ಪುಣ್ಯಾತ್ಮನೊಬ್ಬ ಸರಪಂಚನೆಂದು ಆಯ್ಕೆಯಾದ. ಮಳೆಕೊಯ್ಲು ಮಾಡಿಸಿದ. ಗಿಡಮರ ನೆಡಿಸಿದ. ಅಂತರ್ಜಲ ಹೆಚ್ಚಿತು. ಊರು ನಳನಳಿಸಿತು. ಕೃಷಿ, ಕುರಿಸಾಕಣೆ, ಡೇರಿ ಎಲ್ಲಕ್ಕೂ ಚೈತನ್ಯ ಬಂತು.

ಗುಳೆ ಹೋದವರು ಮರಳಿ ಬಂದರು. ಇಂದು ಆ ಊರಲ್ಲಿ (ನಂಬಿ ಇದನ್ನು) ಬಡತನದ ರೇಖೆಗಿಂತ ಕೆಳಗಿದ್ದ 135 ಕುಟುಂಬಗಳು ಮೇಲೆದ್ದು ಬಂದಿವೆ, 60 ಜನರು ದಶಲಕ್ಷಾಧೀಶರಾಗಿದ್ದಾರೆ. ಸರಕಾರಿ ಇಲಾಖೆಗಳ ಅಧಿಕಾರಿಗಳಿಗೆ ಈ ಊರೇ ಈಗ ಪ್ರವಾಸೀ ತಾಣವಾಗಿದೆ. ಬೇಕಿದ್ದರೆ Hewre Bazar ಎಂದು ಅಂತರಜಾಲದಲ್ಲಿ ಹುಡುಕಿ ನೋಡಿ.
ನಗರಮುಖೀ ವಲಸೆಯನ್ನು ಹೀಗೆ ಹಿಮ್ಮೊಗ ತಿರುಗಿಸಲು ಸಾಧ್ಯವೆಂದು ಮೊದಲು ತೋರಿಸಿದವರು ಅಣ್ಣಾ ಹಜಾರೆ ಮತ್ತು ರಾಜೇಂದ್ರ ಸಿಂಗ್.

ತಮ್ಮ ಊರಿನ ನೀರು, ನೆಲ, ಗಾಳಿ, ಬೆಳಕನ್ನೇ ಸಂಪತ್ತನ್ನಾಗಿ ಬಳಸಿಕೊಂಡು ಗ್ರಾಮದ ಸಮೃದ್ಧಿಗೆ ಕಾರಣರಾದ ಬೇರೆ ನೂರಾರು ಜನರ ಉದಾಹರಣೆಗಳು ನಮ್ಮಲ್ಲಿವೆ. ಕೊಯಮತ್ತೂರಿನ ಸಮೀಪದ ಒಡಂತ್ತುರೈ ಗ್ರಾಮ ತನ್ನ ಬಿಸಿಲಿನಿಂದ ಬರುವ ವಿದ್ಯುತ್ತನ್ನೇ ಮಾರಾಟ ಮಾಡುತ್ತ ಗ್ರಾಮಪಂಚಾಯತನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದೆ.

ಕಳೆದ ನಾಲ್ಕು ವರ್ಷಗಳಿಂದ ಆಮಿರ್ ಖಾನ್ ಆರಂಭಿಸಿದ ವಾಟರ್ ಕಪ್ ಮಳೆಕೊಯ್ಲಿನ ಸ್ಪರ್ಧೆಯಿಂದಾಗಿ ಮಹಾರಾಷ್ಟ್ರದಲ್ಲಿ ಅನೇಕ ಹಳ್ಳಿಗಳಲ್ಲಿ ಜಲ ಸಂವರ್ಧನೆ ಆಗಿದ್ದು, ಊರು ಬಿಟ್ಟು ಹೋದವರು ಮರಳಿ ಬರುತ್ತಿದ್ದಾರೆ. ಟ್ಯಾಂಕರ್ ನೀರನ್ನೇ ಆಧರಿಸಿದ್ದ ಬರಪೀಡಿತ ಹಳ್ಳಿಗಳು ಈಗ ತಮ್ಮ ಬಳಿಯ ಹೆಚ್ಚುವರಿ ನೀರನ್ನು ನಗರಕ್ಕೂ ಪೂರೈಸಲು ಮುಂದಾಗಿವೆ. ಇಂಧನ ವನಗಳನ್ನು ಸೃಷ್ಟಿಸಿ ನಗರಗಳಿಗೆ ಬಯೊಡೀಸೆಲ್ಲನ್ನೂ ಒದಗಿಸುವ ಕನಸು ಕಾಣುತ್ತಿದ್ದಾರೆ.

ಇಂಥ ಸ್ವಾವಲಂಬಿ ಗ್ರಾಮಗಳ ಒಂದು ಉದಾಹರಣೆಯೂ ಸರಕಾರದ ಗಮನಕ್ಕೆ ಬರಲೇ ಇಲ್ಲವೆ? ಗ್ರಾಮೀಣ ಜಲಸಂಪತ್ತನ್ನು ಹೆಚ್ಚಿಸುವ ಸರಳ ವಿಧಾನ ಅದಕ್ಕೆ ಗೊತ್ತೇ ಇಲ್ಲವೆ?
ಸರಕಾರ ಮನಸ್ಸು ಮಾಡಿದರೆ, ತಾಲ್ಲೂಕು ಮಟ್ಟದಲ್ಲೇ ಉತ್ತಮ ಗುಣಮಟ್ಟದ ಸಾಬೂನು, ಟೂಥ್ಪೇಸ್ಟ್, ಸೊಳ್ಳೆಪರದೆ, ಸೊಳ್ಳೆಬತ್ತಿ, ಶಾಂಪೂ, ಸುಗಂಧ ತೈಲ, ಪೇಯ, ಪ್ಯಾರಾಸಿಟೆಮಾಲ್, ಆಯುರ್ವೇದ ಔಷಧಗಳು, ಅಷ್ಟೇಕೆ ಗ್ರಾಮಗಳಿಗೆ ಬೇಕಾದ ಪ್ಲಾಸ್ಟಿಕ್ ಚಪ್ಪಲಿಗಳಿಂದ ಹಿಡಿದು ಕೃಷಿ ಸಲಕರಣೆ, ರಸಗೊಬ್ಬರಗಳ ಉತ್ಪಾದನೆಗೆ ಪ್ರೋತ್ಸಾಹ ನೀಡಬಹುದಿತ್ತು.

ಇವನ್ನೆಲ್ಲ ಬೃಹತ್, ನಗರಕೇಂದ್ರಿತ ಉದ್ಯಮಗಳ ಮುಷ್ಟಿಯಿಂದ ತಪ್ಪಿಸಿ ತಾಲ್ಲೂಕು ಮಟ್ಟಕ್ಕೆ ತಂದು ಸ್ಥಳೀಯರಿಗೆ ಉದ್ಯೋಗ ಸಿಗುವಂತೆ ಮಾಡಿ, ವಾಣಿಜ್ಯ ರಂಗದ ಅಸಲೀ ಸ್ವಾವಲಂಬನೆ ಸಾಧಿಸಬಹುದಿತ್ತು. ಅದರ ಬದಲಿಗೆ ಖನಿಜ ಮತ್ತು ಕಲ್ಲಿದ್ದಲ ಗಣಿಗಾರಿಕೆಗೆ ಹೆಬ್ಬಾಗಿಲು ತೆರೆಯಲಿದೆ.

ಕಲ್ಲಿದ್ದಲು ಎಂಬುದೇ ಮಹಾ ವಿಷವೃತ್ತ. ನಮ್ಮ ಎಲ್ಲ ಕಲ್ಲಿದ್ದಲ ನಿಕ್ಷೇಪಗಳೂ ಛತ್ತೀಸಗಢ, ಝಾರ್ಖಂಡ್, ಬಿಹಾರ್‌ನ ದಟ್ಟ ಅರಣ್ಯಗಳಲ್ಲಿವೆ. ಅಲ್ಲಿ ಆದಿವಾಸಿಗಳೂ ಮೂಲನಿವಾಸಿಗಳೂ ಇದ್ದಾರೆ. ಅವರನ್ನೆಲ್ಲ ಗುಡಿಸಿ ಒತ್ತಿ, ಜೀವಲೋಕವನ್ನು ಧ್ವಂಸ ಮಾಡಿ, ತೆರೆದ ಗಣಿಗಳ ಮೂಲಕ ಕಲ್ಲಿದ್ದಲನ್ನು ಸ್ಫೋಟಿಸಿ, (ಚಿತ್ರವನ್ನು ಗಮನಿಸಿ) ನೂರಾರು ಉಷ್ಣವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಿದರೆ ಹೊಮ್ಮುವ ಕಾರ್ಬನ್ ಡೈಆಕ್ಸೈಡ್‌ ಇಡೀ ಜಗತ್ತಿಗೇ ಮಾರಕ.

ಹಾರುಬೂದಿ, ಸೆಕೆ ಹೆಚ್ಚಳ, ಜಲಮಾಲಿನ್ಯ ಒಂದಲ್ಲ, ಎರಡಲ್ಲ. ಅಲ್ಲಿಂದ ಪಡೆದ ವಿದ್ಯುತ್ತು ನಗರಗಳ ಮಾಲ್‌ಗಳಿಗೆ.ಮತ್ತು ತರಾವರಿ ಯಂತ್ರಗಳಿಗೆ, ಕೊಳ್ಳುಬಾಕ ಶೋಕಿ ವಸ್ತುಗಳ ಉತ್ಪಾದನೆಗೆ ಹೋಗುತ್ತದೆ. ಅದರ ಲಾಭವೆಲ್ಲ ತಿರ್ಗಾ ಕೋಟ್ಯಧೀಶ ಉದ್ಯಮಿಗಳಿಗೆ.

ನಿಸರ್ಗ ಸಂಪತ್ತನ್ನು ಹೀಗೆ ಲೂಟಿ ಮಾಡಲು ದೊಡ್ಡ ಕಂಪನಿಗಳಿಗೆ ಅನುವು ಮಾಡಿಕೊಡಲೆಂದೇ ತೆರಿಗೆದಾರರ 50 ಸಾವಿರ ಕೋಟಿ ಮೀಸಲಿಡುವುದಾಗಿ ಸರಕಾರ ಘೋಷಿಸಿದೆ. ಅದಕ್ಕೆಂದು ಪರಿಸರ ಸಂರಕ್ಷಣೆಯ ಬಿಗಿ ಕಾನೂನುಗಳನ್ನು ಸಡಿಲ ಮಾಡುವ ಸಿದ್ಧತೆ ಆಗಲೇ ನಡೆದಿದೆ.

ನಿಸರ್ಗದ ದುರಂತ ಕತೆ ಹೀಗೆ. ಹಾಗಿದ್ದರೆ ಮನುಷ್ಯರ ಕತೆ? ಈ ರಣವೈದ್ಯ ಮಾಡಿದರೆ 40 ಕೋಟಿ ಬಡ, ಕಡುಬಡವರ ಹಾಗು ಆದಿವಾಸಿಗಳ ಸ್ಥಿತಿಗತಿ ಉತ್ತಮಗೊಂಡೀತೆ? ಅದೂ ಇಲ್ಲ.
ಮೂಲ ನಿವಾಸಿಗಳಿಗೆ ಅರಣ್ಯಾಧಾರಿತ ಉದ್ಯೋಗ ಕೊಡಲೆಂದು 6000 ಕೋಟಿ ಮೀಸಲಿದೆಯಂತೆ. ಅದರ ಕತೆ ಕೇಳಿ. ಅದು ಖಾಸಗಿಯ ಕಂಪನಿಗಳ ಜಂಟಿ ಯೋಜನೆಯಂತೆ. ಅಂದರೆ ಅರಣ್ಯಗಳಿಗೂ ಕೋಟ್ಯಧೀಶರು ಲಗ್ಗೆ ಇಡಲಿದ್ದಾರೆ. ಮೂಲನಿವಾಸಿಗಳ ಜಮೀನನ್ನು ಮುಗಿಸಿದ ನಂತರ ಮುಂದೇನು ಆದೀತೆಂದು ನಾವು ಊಹಿಸಬಹುದು.

ಆದಿವಾಸಿಗಳ ಕಲ್ಯಾಣವೇ ಮುಖ್ಯ ಗುರಿಯಾಗಿದ್ದಿದ್ದರೆ ಈಗಿರುವ ನರೇಗಾ ಸ್ಕೀಮನ್ನೇ ಸುಧಾರಿಸಿ ಅವರಿಗೂ ವಿಸ್ತರಿಸಬಹುದಿತ್ತು. ಗಿಡ ನೆಡುವ, ಬೇಲಿ ಕಂದಕಗಳಂಥ ಭದ್ರತಾ ಕೆಲಸವನ್ನು ಅವರೇ ಮಾಡಬಹುದಿತ್ತು. ಹಳ್ಳಿಗಳಲ್ಲೂ ನರೇಗಾ ದುಡಿಮೆಯ ಅವಧಿಯನ್ನು ಈಗಿನ 100 ದಿನಗಳ ಬದಲು 200-300 ಅಥವಾ ಅಗತ್ಯವಿದ್ದಷ್ಟು ದಿನಗಳಿಗೆ ವಿಸ್ತರಿಬಹುದಿತ್ತು. ಅದರತ್ತ ಆದ್ಯತೆಯೇ ಇಲ್ಲ.

ಅಷ್ಟೊಂದು ಜನರು ಹಳ್ಳಿಗಳಿಗೆ ಹಿಂದಿರುಗಿದ್ದಾರೆ. ಅವರಿಂದ ಎಷ್ಟೊಂದು ಗ್ರಾಮೀಣ ಅಭಿವೃದ್ಧಿಯ ಕೆಲಸ ಮಾಡಿಸಬಹುದಿತ್ತು. ಹಳ್ಳಿಗಳಿಗೆ ಹಿಂದಿರುಗಿದ ಆ ನತದೃಷ್ಟರಿಗೆ ಯಾವ ನೆರವೂ ಇಲ್ಲ. ನಗರ ನಿರ್ಮಾಣದಲ್ಲಿ ತೊಡಗಿದ್ದ ಅವರಲ್ಲಿ ಅನೇಕರು ಹಿಂದೆಲ್ಲ ಚುನಾವಣೆ ಬಂದಾಗ ತಮ್ಮದೇ ಖರ್ಚಿನಲ್ಲಿ ಊರಿಗೆ ಹೋಗಿ ಮತ ಹಾಕಿ ಈ ಸರಕಾರವನ್ನು ನಿಲ್ಲಿಸಿದವರು. ಪ್ರಧಾನಿಯವರ ಒಂದು ಅವಸರದ ಲಾಕ್‌ಡೌನ್‌ ಘೋಷಣೆಯಿಂದಾಗಿ ಇಡೀ ಜಗತ್ತೇ ಕಂಬನಿ ಮಿಡಿಯುವಂಥ ದುರ್ದೆಸೆಗೆ ಈಡಾದವರು. ಅವರ ಕೈ ಹಿಡಿಯುವ ಬದಲು ಬಹುಕೋಟ್ಯಧೀಶರ ಕೈ ಹಿಡಿಯಲು ಸರಕಾರ ಹೊರಟಿದೆ.

ದೇಶದ 20 ಕೋಟಿ ಮಹಿಳೆಯರ ಜನ್‌ಧನ್ ಖಾತೆಗೆ ತಿಂಗಳಿಗೆ 500 ರೂ. ಜೊತೆಗೆ 80 ಕೋಟಿ ಜನರಿಗೆ 6 ಕಿಲೊ ಧಾನ್ಯವನ್ನು ಮೂರು ತಿಂಗಳ ಅವಧಿಗೆ ಕೊಡುವುದಾಗಿ ಸರಕಾರ ಮಾರ್ಚ್‌ನಲ್ಲಿ ಹೇಳಿತ್ತು. ಅದನ್ನು ಇನ್ನೂ ಮೂರು ತಿಂಗಳಿಗೆ ವಿಸ್ತರಿಸಬಹುದಿತ್ತು. ಈ ತೀರಾ ಜುಜುಬಿ ಸಹಾಯದ ಮೊತ್ತವನ್ನು ಹೆಚ್ಚಿಸಬಹುದಿತ್ತು. ಹೆಚ್ಚಿಸುವುದು ಹಾಗಿರಲಿ, ಸರಕಾರದ್ದೇ ದಾಖಲೆಗಳ ಪ್ರಕಾರ ಈ ನೆರವೂ ಶೇ. 25ರಷ್ಟು ಜನರಿಗೆ ಮಾತ್ರ ತಲುಪಿದೆ. ಕೇವಲ 110 ಲಕ್ಷ ಟನ್ ಧಾನ್ಯ ಮಾತ್ರ ವಿತರಣೆಯಾಗಿದೆ.

ಹಾಗೆಂದು ನಮ್ಮ ದೇಶ ಅಷ್ಟೊಂದು ದರಿದ್ರ ಸ್ಥಿತಿಯಲ್ಲೇನೂ ಇಲ್ಲ. ತಜ್ಞರ ಲೆಕ್ಕಾಚಾರದ ಪ್ರಕಾರ ಕೆಲಸ ಕಳೆದುಕೊಂಡವರಿಗೆ ತಿಂಗಳಿಗೆ 7 ಸಾವಿರ ನಗದು ಮತ್ತು ದೇಶದ ಶೇ. 80ರಷ್ಟು ಜನಕ್ಕೆ ತಿಂಗಳಿಗೆ ಹತ್ತು ಕಿಲೊ ಧಾನ್ಯದಂತೆ ಆರು ತಿಂಗಳವರೆಗೆ ಉಚಿತವಾಗಿ ಕೊಟ್ಟಿದ್ದರೂ ನಮ್ಮ ಜಿಡಿಪಿಯ ಕೇವಲ 3%ರಷ್ಟು ವೆಚ್ಚವಾಗುತ್ತಿತ್ತು. ಅದನ್ನಂತೂ ಮಾಡಲಿಲ್ಲ. ತನ್ನ ಬಹುತೇಕ ವೈಫಲ್ಯಗಳಿಗೆ ರಾಜ್ಯಗಳನ್ನು ದೂರುವುದನ್ನು ಬಿಟ್ಟು ಸರಕಾರ ಏನನ್ನೂ ಮಾಡಲಿಲ್ಲ. ರಾಜ್ಯಗಳಿಗೂ ಸಿಗಬೇಕಾದ ಧನಸಹಾಯವನ್ನು ಪೂರ್ತಿ ನೀಡಲಿಲ್ಲ.

ಈಗ ಟ್ರಾಂಚ್ 3ರ ಕತೆ ಕೇಳಿ.
ಸಣ್ಣ ಮತ್ತು ಮಧ್ಯಮ ಉದ್ಯಮ(MSME)ಗಳು ಚೇತರಿಸಿಕೊಳ್ಳಲೆಂದು 3.7 ಲಕ್ಷ ಕೋಟಿ ಸಾಲ ಕೊಡುವುದಾಗಿ ಸರಕಾರ ಹೇಳಿದೆ. ಅದು ಆಮೇಲಾಗಲಿ, ಈವರೆಗೆ ಸಂದಾಯವಾಗಬೇಕಿದ್ದ 5 ಲಕ್ಷ ಕೋಟಿ ಬಾಕಿ ಹಣವನ್ನು ಮೊದಲು ಕೊಡ್ರಪ್ಪಾ ಎಂದು MSME ಗಳು ಕೇಳುತ್ತಿವೆ. ಅದಂತೂ ಬಾಕಿ ಇದೆ. ಈ ಹೊಸ ಸಾಲವನ್ನು ಪಡೆದು ಉತ್ಪಾದನೆ ಆರಂಭಿಸೋಣವೆಂದರೆ ಕಾರ್ಮಿಕರು ಎಲ್ಲಿದ್ದಾರೆ? ಅಂದಾಜು 12 ಕೋಟಿ ಕಾರ್ಮಿಕರು ಕೆಲಸ ಕಳೆದುಕೊಂಡು ತಂತಮ್ಮ ಹಳ್ಳಿಗಳಿಗೆ ಹೋಗಿದ್ದಾರೆ.

ಅವರು ಮರಳಿ ಬಾರದಂತೆ ಮಾಡಲು ಹೊಸ ಕಾರ್ಮಿಕ ನೀತಿಗಳನ್ನು ಜಾರಿಗೆ ತರಲು ಸರಕಾರ ಹೊರಟಿದೆ. ಕೆಲಸಗಾರರ ಹಕ್ಕುಗಳನ್ನೇ ಮೊಟಕುಗೊಳಿಸಿ ಅವರ ದುಡಿಮೆಯ ಅವಧಿಯನ್ನು 50% ಜಾಸ್ತಿ ಮಾಡುತ್ತಾರಂತೆ. ಸರಿ, ಕಾರ್ಮಿಕರು ಹೇಗೋ ಬಂದು ಉತ್ಪಾದನೆ ಆರಂಭಿಸಿದರೂ ಫ್ಯಾಕ್ಟರಿಯ ಉತ್ಪನ್ನಗಳನ್ನು ಖರೀದಿಸಲು ಜನರ ಬಳಿ ಹಣ ಎಲ್ಲಿದೆ? ಅದಕ್ಕೆ ಈಗ ಟ್ರಾಂಚ್‌ 4ನ್ನು ಹಣಕಾಸು ಸಚಿವೆ ಘೋಷಣೆ ಮಾಡಿದೆ.

ಹಣದ ಚಲಾವಣೆ ಹೆಚ್ಚಿಸಲೆಂದೇ ಎಗ್ಗಿಲ್ಲದ ಗಣಿಗಾರಿಕೆ, ಹೊಸ ವಿಮಾನ ನಿಲ್ದಾಣ ನಿರ್ಮಾಣ, ರಕ್ಷಣಾ ಸಾಮಗ್ರಿ ಉತ್ಪಾದನೆ, ಬಾಹ್ಯಾಕಾಶ ಎಲ್ಲವನ್ನೂ ಖಾಸಗಿ ಕಂಪನಿಗಳಿಗೆ ವಹಿಸುತ್ತಾರಂತೆ. ಲಾಕ್‌ಡೌನ್‌ ಸಡಿಲವಾಗುವ ಮೊದಲೇ ದೇಶದ ಹಿತಾಸಕ್ತಿಯನ್ನು ಕಾಯಬೇಕಿದ್ದ ನಿಯಮಗಳನ್ನೇ ಸಡಿಲ ಮಾಡಲಾಗುತ್ತಿದೆ.

ಅದಕ್ಕೇ, ‘ವಲಸಿಗರಿಗೆ ಮನೆ ತಲುಪಲು ಸಾಧ್ಯವಾಗುತ್ತಿಲ್ಲ; ಬಾಹ್ಯಾಕಾಶಕ್ಕೆ ಹೋಗಲು ಧನಿಕರಿಗೆ ಅನುಕೂಲ ಮಾಡುತ್ತಾರಂತೆ’ ಎಂದು ಜೈರಾಮ್ ರಮೇಶ್ ಕುಟುಕಿದ್ದಾರೆ. ಯಾರೆಷ್ಟೇ ಕುಟಕಿದರೂ ಪ್ರಭುತ್ವಕ್ಕೆ ವಂದಿಮಾಗಧರ ಮತ್ತು ಬಹುಕೋಟ್ಯಧೀಶರ ಭೋಪರಾಕ್ ಮಾತ್ರ ಕೇಳಿಸುತ್ತದೆ. ಕಂದಕಕ್ಕೆ ಕುಸಿದವರ ಆಕ್ರಂದನ ಮಾತ್ರ ಕೇಳಿಸುತ್ತಿಲ್ಲ.

ಅರಣ್ಯವಾಸಿಗಳನ್ನು ಹೊರಗಟ್ಟುವ ಗಣಿಗುತ್ತಿಗೆದಾರರ ಷಡ್ಯಂತ್ರದ ವಿರುದ್ಧ ಆದಿವಾಸಿಗಳ ಒಂದು ಸೊಗಸಾದ ಪ್ರತಿಭಟನಾ ಲಾವಣಿಯನ್ನು ಈ ಕೊಂಡಿಯಲ್ಲಿದೆ: ಕ್ಲಿಕ್ ಮಾಡಿ ನೋನೋಡಿ

https://www.youtube.com/watch?v=sFmsl7KrZn8

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ವಿಶ್ವ ಮೊಸಳೆಗಳ ದಿನ ; ಮೊಸಳೆ ಬಗ್ಗೆ ನಿಮಗಿಷ್ಟು ತಿಳಿದಿರಲಿ

Published

on

  • ಸಂಜಯ್ ಹೊಯ್ಸಳ

ಪ್ರತಿ ವರ್ಷದ ಜೂನ್ 17 ನ್ನು ವಿಶ್ವ ಮೊಸಳೆ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವದಲ್ಲಿ ಪ್ರಮುಖವಾಗಿ 24 ಜಾತಿಯ ಮೊಸಳೆಗಳಿದ್ದು, ಭಾರತದಲ್ಲಿ ಸದ್ಯಕ್ಕೆ 3 ಪ್ರಬೇಧದ ಮೊಸಳೆ ಸಂತತಿಗಳಿವೆ. ಅವುಗಳೆಂದರೆ..

ಉಪ್ಪು ನೀರಿನ ಮೊಸಳೆ (Saltwater crocodile) 
ಮಗ್ಗರ್/ಮಾರ್ಷ್ (Mugger)
ಘಾರಿಯಲ್ (Gharial)

ಇವುಗಳಲ್ಲಿ ಕರ್ನಾಟಕದಲ್ಲಿನ ನದಿಗಳಲ್ಲಿ, ಕೆಲವು ದೊಡ್ಡ ಕೆರೆಗಳಲ್ಲಿ ಕಂಡುಬರುವ ಮೊಸಳೆಗಳು ಮಗ್ಗರ್/ಮಾರ್ಷ್ ಮೊಸಳೆಗಳಾಗಿವೆ. ಕರ್ನಾಟಕದಲ್ಲಿ ಮೊಸಳೆಗಳು ಹೆಚ್ಚಾಗಿ ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿ ಪಾತ್ರದಲ್ಲಿ ಕಂಡುಬರುತ್ತವೆ. ಇತ್ತೀಚೆಗೆ ಮೊಸಳೆಯ ದವಣೆಗೆ ಸಿಲುಕಿ‌ ಕೆಲವು ಸಾವು ನೋವಿನ ಪ್ರಕರಣಗಳು ಆ ಭಾಗದಲ್ಲಿ ವರದಿಯಾಗಿವೆ‌.

ಇನ್ನು ಉತ್ತರ ಕರ್ನಾಟಕದ ಭಾಗದ ಕೆಲವು ಪ್ರಮುಖ ನದಿಗಳ ಪಾತ್ರದಲ್ಲೂ ಮೊಸಳೆಗಳು ಆಗಾಗ್ಗೆ ಕಂಡುಬರುತ್ತವೆ. ನಾನು ನೋಡಿದಂತೆ ಉತ್ತರ ಕರ್ನಾಟಕ ಭಾಗಕ್ಕೆ ಹೋಲಿಸಿದರೆ ದಕ್ಷಿಣ ಕರ್ನಾಟಕ ಭಾಗದಲ್ಲಿ ಮೊಸಳೆಗಳ ದಾಳಿ ಪ್ರಕರಣಗಳು ತುಂಬಾ ಕಡಿಮೆ ಎನ್ನಬಹುದು. ಈ‌ ಭಾಗದ ನದಿಗಳಲ್ಲಿ ಮೊಸಳೆಗಳ ಸಂಖ್ಯೆ ಕಡಿಮೆ ಇರುವುದು ಇದಕ್ಕೆ ಕಾರ ಇರಬಹುದು.

ಕಾವೇರಿ ನದಿಯಲ್ಲಿ ಅತಿಹೆಚ್ಚು ಮೊಸಳೆಗಳು‌ ಕಂಡು ಬರುವುದು ಮಂಡ್ಯದ ಶ್ರೀರಂಗಪಟ್ಟಣ ತಾಲ್ಲೂಕಿನ ವಿಶ್ವವಿಖ್ಯಾತ ಪಕ್ಷಿ ಧಾಮವಾದ ರಂಗನತಿಟ್ಟು ಪಕ್ಷಿಧಾಮದಲ್ಲಿ. ಹಿಂದೆ ಪಂಚತಂತ್ರದಲ್ಲಿ ಮೊಸಳೆ ಮತ್ತು ಕೋತಿ‌ಕತೆಯಲ್ಲಿ ಮೊಸಳೆಯ ಹೆಂಡತಿಗೆ ಕೋತಿ‌ ನೇರಳೆ ಹಣ್ಣುಗಳನ್ನು ಹೊತ್ತೊಯ್ಯುವ ಕತೆಯಲ್ಲಿ ಗಂಡ ಮತ್ತು‌ ಹೆಂಡತಿ‌ ಮೊಸಳೆಯನ್ನು ಕಲ್ಪಿಸಿಕೊಂಡು ಮಾತ್ರ ನಾನು ಮೊದಲು ಅವುಗಳ ಸಹಜ ಆವಾಸಸ್ಥಾನದಲ್ಲಿ ಮೊಸಳೆಯನ್ನು ನೋಡಿದ್ದು ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಹರಿಯುವ ಲಕ್ಷ್ಮಣತೀರ್ಥ ನದಿಯಲ್ಲಿ. ನಂತರ ಬಂಡೀಪುರ ದಟ್ಟಡವಿಯಲ್ಲಿ ಹರಿಯುವ ಮೂಲೆಹೊಳೆ/ ನುಗು ನದಿಯಲ್ಲಿ…‌ ನಂತರದ ದಿನಗಳಲ್ಲಿ ಕಬಿನಿ, ಪಾಲರ್ ಸೇರಿ ಬಹಳಷ್ಟು ಕಡೆ ಬಹಳಷ್ಟು ಮೊಸಳೆಗಳನ್ನು ನೋಡುವ ಅವಕಾಶ ಸಿಕ್ಕಿತು.

ಘಾರಿಯಲ್ ಗಳು ತುಂಬಾ ಅಪರೂಪದ ಮೊಸಳೆ ಸಂತತಿಗಳಾಗಿದ್ದು, ಸದ್ಯ ಉತ್ತರ ಭಾರತದ ಕೆಲವು ನದಿಗಳು ಹಾಗೂ ನೇಪಾಳದಲ್ಲಿ ಮಾತ್ರ ಇವು ಕಾಣಸಿಗುತ್ತಿವೆ. ಇವುಳನ್ನು IUCN red list ಗೆ ಸೇರಿಸಿದ್ದು, ಇವುಗಳ ಸಂರಕ್ಷಣೆಗೆ ವಿಶೇಷ ಗಮನ ನೀಡಲಾಗಿದೆ.

ನಮಗೆಲ್ಲಾ ಗೊತ್ತಿರುವಂತೆ ಜೀವವೈವಿಧ್ಯತೆಯ ರಕ್ಷಣೆಯಲ್ಲಿ ಎಲ್ಲಾ ಜೀವಿಗಳ‌ ಇರುವಿಕೆ ಬಹಳ ಮುಖ್ಯ. ಜಲಚರಗಳಲ್ಲಿ ಅಗ್ರ ಪರಪಕ್ಷಕಗಳಲ್ಲಿ ಒಂದೆನಿಸಿದ ಮೊಸಳೆ ಜಲಚರ ಜೀವಿಗಳ ಸಮತೋಲನ ಸಾಧಿಸಿ ಅಲ್ಲಿನ ಜೀವವೈವಿಧ್ಯ ಕಾಪಾಡುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ನಾವು ಮೊಸಳೆಗಳನ್ನು ಕೂಡ ಇತರ ಪ್ರಾಣಿಗಳಂತೆ ರಕ್ಷಿಸಬೇಕು.

ಮುಖ್ಯವಾಗಿ ಅವುಗಳ ಆವಾಸಸ್ಥಾನವಾದ ನದಿ, ಸರೋವರದಂತಹ ಜಲಮೂಲಗಳನ್ನು ಸಂರಕ್ಷಿಸಬೇಕು. ಅಲ್ಲಿ ಅಕ್ರಮ ಮರಳುಗಾರಿಗೆ ತಡೆದು, ಜಲಮಾಲಿನ್ಯ ನಿಯಂತ್ರಣ ಮಾಡಬೇಕು. ಹಾಗೆ ಪ್ಲಾಸ್ಟಿಕ್ ತ್ಯಾಜ್ಯಗಳು ನದಿ, ಸರೋವರಗಳನ್ನು ಸೇರದಂತೆ ಕ್ರಮವಹಿಸಬೇಕು. ಹಾಗೆಯೇ ಎಲ್ಲಾದರೂ ಮೊಸಳೆಗಳು ಕಂಡುಬಂದರೆ ಗಾಬರಿಯಾಗದೆ ತಕ್ಷಣ ಅರಣ್ಯ ಇಲಾಖೆಯ ಗಮನಕ್ಕೆ ತರಬೇಕು. (ಬರಹ:ಸಂಜಯ್ ಹೊಯ್ಸಳ,ಫೇಸ್ ಬುಕ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಜುಲೈ 1 ರಿಂದ ಹೊಸ ಕ್ರಿಮಿನಲ್ ಕಾನೂನು ಜಾರಿ

Published

on

ಸುದ್ದಿದಿನಡೆಸ್ಕ್:ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮರು ಪರಿಶೀಲಿಸುತ್ತಿಲ್ಲ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಸ್ಪಷ್ಟಪಡಿಸಿದ್ದಾರೆ.

ಭಾರತೀಯ ದಂಡ ಸಂಹಿತೆ 1860, ಭಾರತೀಯ ಸಾಕ್ಷ್ಯ ಕಾಯ್ದೆ 1872 ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆ 1973 ಅನ್ನು ಬದಲಿಸುವ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ಅವರು ಹೇಳಿದ್ದಾರೆ. ಭಾರತೀಯ ನ್ಯಾಯ್ ಸಂಹಿತಾ, ಭಾರತೀಯ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ ಎಂಬ ಹೊಸ ಕ್ರಿಮಿನಲ್ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ತಿಳಿಸಿದ್ದಾರೆ.

“ಐಪಿಸಿ, ಸಿಆರ್‌ಪಿಸಿ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳು ಬದಲಾಗುತ್ತಿವೆ. ಸೂಕ್ತ ಸಮಾಲೋಚನೆ ಪ್ರಕ್ರಿಯೆ ಅನುಸರಣೆ ಹಾಗೂ ಕಾನೂನು ಆಯೋಗದ ವರದಿಗಳನ್ನು ಗಮನದಲ್ಲಿಟ್ಟುಕೊಂಡು ಈ ಮೂರು ಕಾನೂನುಗಳನ್ನು ಬದಲಾಯಿಸಲಾಗಿದೆ” ಎಂದು ಮೇಘವಾಲ್ ತಿಳಿಸಿದರು.”

ಈ ಮೂರು ಕಾನೂನುಗಳನ್ನು ಜುಲೈ 1 ರಿಂದ ಭಾರತೀಯ ನ್ಯಾಯ್ ಸಂಹಿತಾ, ಭಾರತೀಯ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ ಎಂಬ ಹೆಸರಿನಲ್ಲಿ ಜಾರಿಗೆ ತರಲಾಗುವುದು. ಮೂರು ಹೊಸ ಕಾನೂನುಗಳ ತರಬೇತಿ ಸೌಲಭ್ಯಗಳನ್ನು ಎಲ್ಲಾ ರಾಜ್ಯಗಳಿಗೂ ಒದಗಿಸಲಾಗುತ್ತಿದೆ” ಎಂದು ಮೇಘವಾಲ್ ವಿವರಿಸಿದ್ದಾರೆ.”

ನಮ್ಮ ನ್ಯಾಯಾಂಗ ಅಕಾಡೆಮಿಗಳು, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ಸಹ ಈ ಬಗ್ಗೆ ತರಬೇತಿ ನೀಡುತ್ತಿವೆ. ಎಲ್ಲವೂ ಜೊತೆಜೊತೆಯಾಗಿ ಸಾಗುತ್ತಿದೆ ಮತ್ತು ಜುಲೈ 1 ರಿಂದ, ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ನಿರ್ಣಾಯಕವಾದ ಈ ಎಲ್ಲಾ ಮೂರು ಕಾನೂನುಗಳನ್ನು ದೇಶದಲ್ಲಿ ಜಾರಿಗೆ ತರಲಾಗುವುದು” ಎಂದು ಅವರು ಸ್ಪಷ್ಟಪಡಿಸಿದರು.

ದೇಶದಲ್ಲಿ ಅಪರಾಧ ನ್ಯಾಯ ಸುಧಾರಣೆಯು ದೇಶದ ನ್ಯಾಯದಾನ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಇದು ಸೂಚಿಸುತ್ತದೆ. ಮಹಿಳೆಯರು, ಮಕ್ಕಳು ಮತ್ತು ರಾಷ್ಟ್ರದ ವಿರುದ್ಧದ ಅಪರಾಧಗಳನ್ನು ಇದು ಮುಂಚೂಣಿಯಲ್ಲಿರಿಸುತ್ತದೆ. ಅಲ್ಲದೆ ಇದು ವಸಾಹತುಶಾಹಿ ಯುಗದ ಕಾನೂನುಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ; ವ್ಯಾಪಕ ಟೀಕೆ

Published

on

ಸುದ್ದಿದಿನಡೆಸ್ಕ್: ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಟೀಕಿಸಿದ್ದಾರೆ.

ರಾಜ್ಯ ಸರ್ಕಾರ ಮೊನ್ನೆಯಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಿಸಿದ ನಂತರ ರಾಜ್ಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 3 ರೂಪಾಯಿ ಹಾಗೂ ಡೀಸೆಲ್ 3.5 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಪ್ರತಿ ಕುಟುಂಬದ ಮಹಿಳೆಗೆ ತಿಂಗಳಿಗೆ 8 ಸಾವಿರದ 500 ರೂಪಾಯಿಗಳನ್ನು ವರ್ಗಾವಣೆ ಮಾಡುವ ಭರವಸೆಯನ್ನು ಈಡೇರಿಸುವ ಬದಲು, ಕಾಂಗ್ರೆಸ್ ಆಡಳಿತದ ಕರ್ನಾಟಕ ಸರ್ಕಾರವು, ರಾಜ್ಯದ ಜನರಿಗೆ ಹೊರೆಯಾಗಿದೆ ಎಂದು ಹರ್ದೀಪ್ ಸಿಂಗ್ ಪುರಿ ಸಾಮಾಜಿಕ ಜಾಲತಾಣದಲ್ಲಿ ದೂರಿದ್ದಾರೆ. ಇಂತಹ ನಿರ್ಧಾರ ಹಣದುಬ್ಬರದ ಬಗ್ಗೆ ಮಾತನಾಡುವ ಕಾಂಗ್ರೆಸ್‌ನ ಬೂಟಾಟಿಕೆ ಬಹಿರಂಗಪಡಿಸುತ್ತದೆ. ಆದರೆ ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪ್ರತಿ ಲೀಟರ್‌ಗೆ ಸುಮಾರು 8 ರೂಪಾಯಿಗಳಿಂದ 12 ರೂಪಾಯಿಗಳಷ್ಟು ಹೆಚ್ಚುವರಿ ವ್ಯಾಟ್ ಅನ್ನು ವಿಧಿಸುತ್ತಿದೆ ಎಂದು ಸಚಿವರು ಆರೋಪಿಸಿದ್ದಾರೆ.

ಈ ವಿಚಾರದ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯ ಸರ್ಕಾರ ಮುಂದಾಲೋಚನೆ ಇಲ್ಲದೇ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು, ಈಗ ಆರ್ಥಿಕ ಹೊರೆ ತಡೆಯಲು ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಮಾಡಿದೆ ಎಂದು ಹುಬ್ಬಳ್ಳಿಯಲ್ಲಿ ಆರೋಪಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಬಸ್ ದರ, ಹಾಲಿನ ದರ, ಅಗತ್ಯ ವಸ್ತುಗಳ ದರ ಹೆಚ್ಚಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಆಡಳಿತದ ವ್ಯವಸ್ಥೆ ಕುಸಿದುಹೋಗಿದೆ ಎಂದು ದೂರಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು ಎಂದು ಪ್ರಲ್ಹಾದ್ ಜೋಶಿ ಎಚ್ಚರಿಕೆ ನೀಡಿದ್ದಾರೆ.

ಮತ್ತೊಂದೆಡೆ, ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್ ದರ ಏರಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ವ್ಯಾಟ್ ಹೆಚ್ಚಳ ಬಳಿಕ ದಕ್ಷಿಣ ಭಾರತದ ರಾಜ್ಯಗಳಿಗಿಂತ ಕರ್ನಾಟಕದಲ್ಲಿಯೇ ದರ ಕಡಿಮೆ ಇದೆ. ಆರ್ಥಿಕವಾಗಿ ಬಲಿಷ್ಠವಾಗಿರುವ ಮಹಾರಾಷ್ಟ್ರಕ್ಕಿಂತಲ್ಲೂ ಹಾಗೂ ಗುಜರಾತ್ ಮತ್ತು ಮಧ್ಯಪ್ರದೇಶಕ್ಕಿಂತಲ್ಲೂ ನಮ್ಮ ರಾಜ್ಯದಲ್ಲಿ ದರ ಕಡಿಮೆ ಇದೆ ಎಂದು ಹೇಳಿದ್ದಾರೆ.

ಈ ಹಿಂದಿನ ಬಿಜೆಪಿ ಸರ್ಕಾರ ತೆರಿಗೆ ಕಡಿಮೆ ಮಾಡಿದ್ದರೂ, ಕೇಂದ್ರ ಸರ್ಕಾರ ಪದೇ ಪದೆ ವ್ಯಾಟ್ ಹೆಚ್ಚಳ ಮಾಡಿತ್ತು ಎಂದು ಆರೋಪಿಸಿದ್ದಾರೆ. ರಾಜ್ಯದ ತೆರಿಗೆ ಹೆಚ್ಚಳದಿಂದ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending