ದಿನದ ಸುದ್ದಿ
ಕೋವಿಡ್ -19 | ಲಾಕ್ ಡೌನ್ ನಿಂದ ಉಂಟಾಗುವ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಮುನ್ನೋಟ..!
- ಕ್ರಾಂತಿರಾಜ್ ಒಡೆಯರ್ ಎಂ, ಸಹಾಯಕ ಪ್ರಾಧ್ಯಾಪಕರು, ಮೈಸೂರು
ಸಂದರ್ಭ 1
ಬೇರೆ ಬೇರೆ ರಾಜ್ಯಗಳಿಂದ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದಿದ್ದ ವಲಸೆ ಕಾರ್ಮಿಕರು ಕೋವಿಡ್ 19 ಲಾಕ್ ಡೌನ್ ನಿಂದ ಕೆಲಸವಿಲ್ಲದೇ ಜೀವನೋಪಾಯ ಕಷ್ಟವಾಗಿ, ತಮ್ಮ ತಮ್ಮ ಊರುಗಳಿಗೆ ಹೊರಡಲು ರೈಲ್ವೆ ಹಾಗು ಬಸ್ಸು ನಿಲ್ದಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸೇರಿದ್ದ ವಲಸೆ ಕಾರ್ಮಿಕರ ಕುರಿತು ನಮ್ಮ ರಾಜ್ಯದ ಮುಖ್ಯಮಂತ್ರಿ ಯೆಡಿಯೂರಪ್ಪನವರು, ಕಾರ್ಮಿಕರು ವಾಪಸು ಹೋಗದಂತೆ ಕಳಕಳಿಯ ಮನವಿ ಮಾಡಿಕೊಂಡರೂ, ಮುಖ್ಯಮಂತ್ರಿಗಳ ಮನವಿಗೆ ಸ್ಪಂಧಿಸದ ವಲಸೆ ಕಾರ್ಮಿಕರು, ತಾವು 2 ತಿಂಗಳಿನಿಂದ ಅನುಭವಿಸುತ್ತಿರುವ ಯಾತನೆ ಸಾಕು.
ಈಗಲಾದರೂ ತಮ್ಮ ತಮ್ಮ ಊರುಗಳಿಗೆ ಸೇರಿಕೊಳ್ಳೋಣ ಎಂದು ಕೆಲವರು ಈಗಾಗಲೇ ತಮ್ಮ ಊರು ಸೇರಿಕೊಂಡಿದ್ದರೆ, ಹಲವರು ತಮ್ಮ ಗೂಡು ಸೇರಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ಸಂದರ್ಭ 2
ಒಂದು ವಾರದ ಹಿಂದೆ ಟಿ ವಿ ಯಲ್ಲಿ ನೋಡಿದ್ದು. ಮುಂಬೈಯಿಂದ ಉತ್ತರ ಪ್ರದೇಶಕ್ಕೆ ಕಾಲ್ನಡಿಗೆಯಲ್ಲಿ ಹೊರಟಿದ್ದ ವಲಸೆ ಕಾರ್ಮಿಕನಿಗೆ ಪತ್ರಕರ್ತ ಕೇಳಿದ ಪ್ರಶ್ನೆ, “ಸರ್ಕಾರ ನಿಮಗಾಗಿ ರೈಲಿನ ವ್ಯವಸ್ಥೆ ಮಾಡಿದೆ.
ನೀವು ಏಕೆ ನಡೆದು ಹೋಗ್ತಿದ್ದೀರಾ? ಲಾಕ್ ಡೌನ್ ಮುಗಿದ ಮೇಲೆ ವಾಪಸ್ ಇಲ್ಲಿಗೆ ಬರುತ್ತೀರಾ?” ಎಂಬ ಹಲವಾರು ಪ್ರಶ್ನೆಗಳಿಗೆ ವಲಸೆ ಕಾರ್ಮಿಕ ಕೊಟ್ಟ ಉತ್ತರ, “ನಮಗೆ ಅಕ್ಷರ ಜ್ಞಾನ ಇಲ್ಲ, ಈ ಮೊಬೈಲ್ ಬಳಸಲು ಸಹ ಬರಲ್ಲ, ಅವರ ಇವರ ಬಳಿ ಕಾಡಿ ಬೇಡಿ ಅನ್ ಲೈನ್ ಅರ್ಜಿ ಸಲ್ಲಿಸಿದ್ದೆ ಅದು ರಿಜೆಕ್ಟ್ ಆಗಿದೆ, ಮತ್ತೆ ಯಾರು ಅರ್ಜಿ ಹಾಕಲು ಸಹಾಯ ಮಾಡಲಿಲ್ಲ, ಅದಕ್ಕೆ ನಡೆದುಕೊಂಡೆ ಹೋಗ್ತಿದ್ದಿನಿ.ಊರಲ್ಲಿ ಅಪ್ಪನಿಗೆ ವ್ಯವಸಾಯಕ್ಕೆ ಸಹಾಯ ಮಾಡಿಕೊಂಡು ಇರ್ತೀನಿ ವಿನಾ ಇಲ್ಲಿ ಬಂದು ಇನ್ನೊಮ್ಮೆ ನರಕಯಾತನೆ ಅನುಭವಿಸಲು ಇಷ್ಟ ಇಲ್ಲ”.
ಸಂದರ್ಭ 3
ಮೈಸೂರಿನ ಹೆಮ್ಮೆಯ ಉದ್ದಿಮೆಗಳಾದ ಸಥರನ್ ಸ್ಟಾರ್ ಹೋಟೆಲ್ ಹಾಗು ರೀಡ್ ಅಂಡ್ ಟೇಲರ್ ಕಂಪನಿಗಳು ಲಾಕ್ ಡೌನ್ ನಿಂದ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದು, ದೇಶದ ಆರ್ಥಿಕ ಸ್ಥಿತಿಗತಿಯು ಅನಿಶ್ಚಿತತೆಯಿಂದ ಕೂಡಿದ್ದು, ಮುಂದೇನು ಮಾಡಬೇಕೆಂಬ ದಾರಿ ತೋಚದೆ, ಉದ್ದಿಮೆಗಳನ್ನು ಮುಚ್ಚಿದ್ದು, ಸುಮಾರು 2000 ಕಾರ್ಮಿಕರು ಬೀದಿಪಾಲಾದಂತಾಗಿದೆ.
ಈ ಸಮಸ್ಯೆ ಕೇವಲ ವಲಸೆ ಕಾರ್ಮಿಕರು ಹಾಗು ಕೆಲವು ಕಂಪೆನಿಗಳದ್ದಲ್ಲ. ದೇಶದ ಎಲ್ಲ ಆರ್ಥಿಕ ವಲಯಗಳಿಗೂ ಹರಡಿರುವ ಸಮಸ್ಯೆ. ಭಾರತದಲ್ಲಿ ಸರಿ ಸುಮಾರು 67% ರಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಹಲವು ಸಂಸ್ಥೆಗಳ ಸಮೀಕ್ಷೆಗಳು ಹೇಳುತ್ತವೆ.
ಈ ಸಂದರ್ಭದಲ್ಲಿ ಆಗಿರುವ ಬದಲಾವಣೆಗಳಿಂದ ದೇಶದಲ್ಲಿ ದೊಡ್ಡ ಮಟ್ಟದ ಆರ್ಥಿಕ ಹಾಗು ಸಾಮಾಜಿಕ ಸಮಸ್ಯೆಗಳು ಉಂಟಾಗಲಿದ್ದು, ನಮ್ಮ ಆಡಳಿತ ವ್ಯವಸ್ಥೆಯು ಸಮಸ್ಯೆ ಹೋಗಲಾಡಿಸಲು ಸರಿಯಾದ ಮಾರ್ಗೋಪಾಯಗಳನ್ನು ಕಂಡುಕೊಳ್ಳದ್ದಿದ್ದರೆ, ದೇಶವು ಸರಿಪಡಿಸಲಾಗದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಲಿದೆ. ಕೋವಿಡ್ 19 ಲಾಕ್ ಡೌನ್ ನಿಂದ ದೇಶದ ಆರ್ಥಿಕ ವಲಯಗಳ ಮೇಲೆ ಉಂಟಾಗುವ ಸಾಮಾಜಿಕ ಹಾಗು ಆರ್ಥಿಕ ಪರಿಣಾಮಗಳನ್ನು ಅವಲೋಕಿಸುವುದಾದರೆ..
ಸಣ್ಣ, ಮಧ್ಯಮ ಹಾಗು ಬೃಹತ್ ಉದ್ದಿಮೆಗಳ ಮೇಲೆ ಉಂಟಾಗುವ ಪರಿಣಾಮ
ಲಾಕ್ ಡೌನ್ ನಿಂದ ಉದ್ದಿಮೆಗಳು ಸಂಪೂರ್ಣ ಮುಚ್ಚಿದ್ದು, ಐಟಿ, ಬಿಟಿ ವಲಯಗಳೇನೋ ಕಾರ್ಮಿಕರಿಗೆ ಮನೆಯಿಂದಲೇ ಕೆಲಸ ನಿರ್ವಹಿಸುವ ಸೌಲಭ್ಯವನ್ನು ಕಲ್ಪಿಸಿದ್ದು, ಈ ವ್ಯವಸ್ಥೆ ಇನ್ನೂ 6 ತಿಂಗಳು ಮುಂದುವರೆಯುವ ಮುನ್ಸೂಚನೆಯನ್ನು ಹಲವು ಕಂಪನಿಗಳು ನೀಡಿವೆ.
ಆದರೆ ಉತ್ಪಾದನಾ ವಲಯವು ಬೇಡಿಕೆ ಇಲ್ಲದೇ, ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿದ್ದು, ಈ ವಲಯದ ಮುಂದಿನ ದಿನಗಳು ಅನಿಶ್ಚಿತತೆಯಿಂದ ಕೂಡಿದೆ. ಕೆಲಸ ಕಳೆದುಕೊಂಡ ಕಾರ್ಮಿಕರಲ್ಲಿ ಹಲವರು ಈಗಾಗಲೇ ತಮ್ಮ ತಮ್ಮ ಊರುಗಳನ್ನು ಸೇರಿಕೊಂಡಿದ್ದು, ಇನ್ನೂ ಹಲವರು ತಮ್ಮ ಊರು ಸೇರಿಕೊಳ್ಳುವ ಪ್ರಕ್ರಿಯೆಯಲ್ಲಿದ್ದು, ತಮ್ಮ ಜೀವನೋಪಾಯಕ್ಕೆ ತಮ್ಮ ತಮ್ಮ ಹಳ್ಳಿಗಳಲ್ಲೇ ಹಲವು ಆರ್ಥಿಕ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದು, ಮುಂದೊಂದು ದಿನ ದೇಶದ ಆರ್ಥಿಕ ವ್ಯವಸ್ಥೆ ಸರಿಹೋದರೂ, ಇವರು ತಮ್ಮ ಹಳೇ ಕೆಲಸಗಳಿಗೆ ಮರಳುವುದು ಕಷ್ಟಸಾಧ್ಯ.
ಇದರಿಂದ ಈ ವಲಯಕ್ಕೆ ಕಾರ್ಮಿಕರ ಕೊರತೆ ಉಂಟಾಗಲಿದ್ದು, ಉದ್ದಿಮೆಗಳಿಗೆ ತಗಲುವ ಕಾರ್ಮಿಕರ ವೆಚ್ಚ ಹೆಚ್ಚಾಗಲಿದ್ದು, ಇದರಿಂದ ಈ ವಲಯ ತಯಾರಿಸುವ ಉತ್ಪನ್ನಗಳ ಬೆಲೆ ಹೆಚ್ಚಾಗಲಿದ್ದು, ಗ್ರಾಹಕರ ಮೇಲೆ ಬೆಲೆ ಏರಿಕೆಯ ಬರೆ ಬೀಳುವುದು ಗ್ಯಾರಂಟಿ. ಮತ್ತೊಂದು ಸಮಸ್ಯೆ ಎಂದರೆ, ಕಾರ್ಖಾನೆಗಳ ಮಾಲೀಕರು ಈಗಾಗಲೇ ಅನುಭವಿಸಿರುವ ನಷ್ಟವನ್ನು ಸರಿದೂಗಿಸಿಕೊಳ್ಳಲು, ಬೇರೆ ದಾರಿ ತೋಚದೆ ಇದೇ ಕೆಲಸದಲ್ಲಿ ಉಳಿಯುವ ಕಾರ್ಮಿಕರಿಂದ ಕಡಿಮೆ ಸಂಬಳಕ್ಕೆ ಹೆಚ್ಚು ಕೆಲಸ ಮಾಡಿಸಿ ಶೋಷಣೆ ಮಾಡುವ ದಿನಗಳನ್ನು ಶೀಘ್ರದಲ್ಲೇ ನೋಡುತ್ತೇವೆ.
ಶಿಕ್ಷಣ ವಲಯದ ಮೇಲೆ ಉಂಟಾಗುವ ಪರಿಣಾಮ
ನಮ್ಮ ದೇಶದ ಆರ್ಥಿಕ ವ್ಯವಸ್ಥೆಯಲ್ಲಿನ ಬೇಡಿಕೆ ಕುಂಠಿತದಿಂದಾಗಿ ಉದ್ದಿಮೆಗಳು ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕುತ್ತಿದ್ದು, ಬೇಡಿಕೆ ಮರಳಲು ಇನ್ನೂ 3 ರಿಂದ 4 ವರ್ಷಗಳು ಬೇಕಾಗಬಹುದು. ಈ ಸಂದರ್ಭದಲ್ಲಿ, ಪ್ರಸ್ತುತ ವರ್ಷದಲ್ಲಿ ಹಾಗೂ ಮುಂದಿನ ಕೆಲವು ವರ್ಷಗಳಲ್ಲಿ ಪದವಿ ಪಡೆದು ಉದ್ಯೋಗದ ಕನಸು ಕಟ್ಟಿಕೊಳ್ಳುವ ವಿದ್ಯಾರ್ಥಿಗಳನ್ನು ನೆನೆಸಿಕೊಂಡರೆ ಅಯ್ಯೋ ಎನಿಸುತ್ತದೆ. ಇವರು ಉದ್ಯೋಗ ಪಡೆದು ಜೀವನದಲ್ಲಿ ನೆಲೆಯೂರುವ ದಿನಗಳು ಮುಂದೆ ಹೋದಷ್ಟು, ಇವರ ಸ್ವಾಭಿಮಾನದ ಜೀವನದ ಕನಸು, ಮದುವೆ ಆಸೆಗಳು ಮುಂದೂಡಲಾಗಿ, ಜೀವನದ ಸಹಜ ಪ್ರಕ್ರಿಯೆಗಳಿಗೆ ಹಾಗು ಹಣಕಾಸಿನ ಸಂಪಾದನೆಗೆ ಅಡ್ಡದಾರಿಯನ್ನು ಹಿಡಿಯಬಹುದಾದ ಸಂದರ್ಭ ಬರಬಹುದು.
ಸರ್ಕಾರ ನಿರ್ವಹಿಸಬೇಕಾದ ಪಾತ್ರ
ಜಾನ್ ಮೇನಾರ್ಡ್ ಕೇನ್ಸ್ ಎಂಬ ಇಂಗ್ಲೆಂಡ್ ದೇಶದ ಶ್ರೇಷ್ಠ ಆರ್ಥಿಕ ತಜ್ಞ ಅವನ The theory of Empolyment, Interest and Money ಹಾಗೂ The Role of the Government ಎನ್ನುವ ಪುಸ್ತಕದಲ್ಲಿ ದೇಶಗಳು ಆರ್ಥಿಕ ಸಂಕಷ್ಟದಲ್ಲಿ ಯಾವ ರೀತಿಯ ಆರ್ಥಿಕ ನೀತಿಗಳನ್ನು ರೂಪಿಸಬೇಕು ಎಂದು ಹೇಳುತ್ತಾ, “ಆರ್ಥಿಕ ದುಸ್ಥಿತಿಯಲ್ಲಿ ಆಳುವ ಸರ್ಕಾರಗಳು, ಯಾವುದಾದರೂ ಮೂಲಗಳಿಂದ ಹಣವನ್ನು ತಂದು ಆರ್ಥಿಕ ವ್ಯವಸ್ಥೆಯ ತಳ ಪದರಕ್ಕೆ (ಕುಟುಂಬಗಳಿಗೆ ಹಾಗು ಕಾರ್ಮಿಕ ಸಮೂಹ) ನೇರ ಹಂಚಬೇಕು.ಇದರಿಂದ ಕಾರ್ಮಿಕರನ್ನು ಅವರವರ ಕೆಲಸಗಳಲ್ಲಿ ಜೀವಂತವಾಗಿಟ್ಟುಕೊಳ್ಳುವುದಲ್ಲದೇ, ಉತ್ಪನ್ನಗಳಿಗೆ ಬೇಡಿಕೆಯನ್ನೂ ಹುಟ್ಟಿಸಬಹುದಾಗಿದ್ದು, ದೊಡ್ಡಮಟ್ಟದ ಆರ್ಥಿಕ ಕುಸಿತದಿಂದ ದೇಶವನ್ನು ರಕ್ಷಿಸಬಹುದು” ಎಂದು ಹೇಳುತ್ತಾನೆ. ಇಂದಿನ ಸಂದರ್ಭದಲ್ಲಿ ಜಾನ್ ಮೇನಾರ್ಡ್ ಕೇನ್ಸ್ ನ ಆರ್ಥಿಕ ಸಿದ್ಧಾಂತವು ಪ್ರಸ್ತುತವೆನಿಸುತ್ತದೆ.
ಆದರೆ ನಮ್ಮ ಸರ್ಕಾರದ ಆರ್ಥಿಕ ಪ್ಯಾಕೇಜ್ ನೋಡಿದಾಗ, ಕಡಿಮೆ ಪ್ರಮಾಣದ ಹಣಕಾಸಿನ ಪ್ಯಾಕೇಜ್ ಆರ್ಥಿಕ ವ್ಯವಸ್ಥೆಯ ಕೆಳಸ್ತರಕ್ಕೆ ಮೀಸಲಿಟ್ಟಿದ್ದು, ದೊಡ್ಡ ಮಟ್ಟದ ಹಣ ಮೇಲಿನ ಸ್ತರಕ್ಕೆ ಮೀಸಲಿಟ್ಟಿದೆ.
ಇದರಿಂದ ಇಂದಿನ ಆರ್ಥಿಕ ಸಮಸ್ಯೆ ಬಗೆಹರಿಯದು ಎಂಬುದು ನನ್ನ ಅನಿಸಿಕೆ. ಇಂದು ನಮಗೆ ಬೇಕಿರುವುದು “BOTTOM TO TOP ECONOMIC APPROACH” ಹೊರತು “TOP TO BOTTOM ECONOMIC APPROACH” ಅಲ್ಲ. ಆಳುವ ಸರ್ಕಾರಗಳು ಲಭ್ಯವಿರುವ ಆರ್ಥಿಕ ಸಿದ್ದಾಂತಗಳನ್ನು ಅಧ್ಯಯಿಸಿ ಸಂದರ್ಭಕ್ಕೆ ಸರಿಯಾದ ಆರ್ಥಿಕ ನೀತಿಗಳನ್ನು ರೂಪಿಸಬೇಕೆಂಬುದು ನನ್ನ ಅನಿಸಿಕೆ.
(ಲೇಖಕರು :ಕ್ರಾಂತಿರಾಜ್ ಒಡೆಯರ್ ಎಂ
ಸಹಾಯಕ ಪ್ರಾಧ್ಯಾಪಕರು
ವ್ಯವಹಾರ ನಿರ್ವಹಣಾ ವಿಭಾಗ
ಸೇಪಿಯೆಂಟ್ ಕಾಲೇಜು
ಮೈಸೂರು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆ ಹರಿಹರ ರೈಲು ನಿಲ್ದಾಣದಲ್ಲಿ ವಾರ್ಷಿಕ ವಿಪತ್ತು ನಿರ್ವಹಣೆ ಅಣುಕು ಅಭ್ಯಾಸ
ಸುದ್ದಿದಿನ, ಹರಿಹರ :ಇದೇ 14 ರಂದು ಗುರುವಾರ (ನಾಳೆ) ಹರಿಹರ ರೈಲು ನಿಲ್ದಾಣದಲ್ಲಿ ವಾರ್ಷಿಕ ವಿಪತ್ತು ನಿರ್ವಹಣೆಯ ಅಣುಕು ಅಭ್ಯಾಸವನ್ನು ಬೆಳಗ್ಗೆ 8:30 ಕ್ಕೆ ನಡೆಸಲಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಎನ್ಡಿಆರ್ಎಫ್, ಎಸ್ಡಿಆರ್ಎಫ್ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳ ಸಮನ್ವಯದಲ್ಲಿ ಅಣಕು ಅಭ್ಯಾಸವು ನಡೆಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಟ ದಿಲೀಪ್ ರಾಜ್ ಆ ಒಂದು ತಪ್ಪು ಪ್ರಾಣಕ್ಕೆ ಮುಳುವಾಯ್ತು
ಸುದ್ದಿದಿನಡೆಸ್ಕ್:ಕನ್ನಡ ಚಿತ್ರರಂಗದ ಖ್ಯಾತ ನಟ ದಿಲೀಪ್ ರಾಜ್ (47) ಅವರ ಅಕಾಲಿಕ ನಿಧನವು ಇಡೀ ಸ್ಯಾಂಡಲ್ವುಡ್ ಅನ್ನು ದಿಗ್ಭ್ರಮೆಗೊಳಿಸಿದೆ. ಕೇವಲ 47 ವರ್ಷ ವಯಸ್ಸಿನ ಈ ಪ್ರತಿಭಾನ್ವಿತ ಕಲಾವಿದ ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಆದರೆ ಅವರ ಈ ಸಾವಿನ ಹಿಂದೆ ಒಂದು ಬೇಸರದ ಸಂಗತಿಯೂ ಅಡಗಿದೆ, ಅದೇನೆಂದರೆ ಅವರ ಆರೋಗ್ಯದ ಕುರಿತು ತೋರಿದ ಒಂದು ನಿರ್ಲಕ್ಷ್ಯ!
ನಟ ನಿರ್ಮಾಪಕ ದಿಲೀಪ್ ರಾಜ್ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದು, ಇಡೀ ಸ್ಯಾಂಡಲ್ವುಡ್ ದಿಗ್ಭ್ರಮೆಗೊಂಡಿದೆ. ಕೆಲವು ದಿನಗಳ ಹಿಂದೆ ಗೋವಾ ಪ್ರವಾಸದಲ್ಲಿದ್ದಾಗಲೇ ಅವರಿಗೆ ಆಗಾಗ ಎದೆನೋವು ಕಾಣಿಸಿಕೊಂಡಿತ್ತು, ಆದರೆ ಪ್ರವಾಸದ ಖುಷಿಯಲ್ಲಿದ್ದ ಅವರು ಅದನ್ನ ಗಂಭೀರವಾಗಿ ಪರಿಗಣಿಸಿರಲಿಲ್ಲ.. ಬೆಂಗಳೂರಿಗೆ ಮರಳಿದ ನಂತರ ಇಂದು ವೈದ್ಯಕೀಯ ತಪಾಸಣೆಗೆ ಅಪಾಯಿಂಟ್ಮೆಂಟ್ ಕೂಡ ಫಿಕ್ಸ್ ಆಗಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು;
ತಪಾಸಣೆಗೆ ಹೋಗುವ ಮುನ್ನವೇ ರಾತ್ರಿ ತೀವ್ರ ಎದೆನೋವು ಕಾಣಿಸಿಕೊಂಡು ಕುಮಾರಸ್ವಾಮಿ ಲೇಔಟ್ನ ಅಪೋಲೋ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.ನೋವು ಕಾಣಿಸಿಕೊಂಡ ತಕ್ಷಣವೇ ಆಸ್ಪತ್ರೆಗೆ ದಾಖಲಾಗಿದ್ದರೆ ಇಂದು ಪರಿಸ್ಥಿತಿ ಬೇರೆಯೇ ಇರುತ್ತಿತ್ತು ಎಂದು ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.
ನಟ ದಿಲೀಪ್ ರಾಜ್ ಅವರು ಕೆಲವೇ ದಿನಗಳ ಹಿಂದೆ ಗೋವಾಗೆ ಪ್ರವಾಸ ತೆರಳಿದ್ದರು.
ಅಲ್ಲಿ ಗೆಳೆಯರೊಂದಿಗೆ ಕಾಲ ಕಳೆಯುವಾಗಲೇ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು ಎನ್ನಲಾಗುತ್ತಿದೆ. ಅಂದೇ ಹೃದಯವು ಅಪಾಯದ ಮುನ್ಸೂಚನೆ ನೀಡಿದ್ದರೂ, ದಿಲೀಪ್ ಅವರು ಅದನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ತೋರಿದ್ದರು. ಗೋವಾ ಟ್ರಿಪ್ನಲ್ಲಿದ್ದಾಗಲೇ ಆಗಾಗ ನೋವು ಕಾಣಿಸಿಕೊಂಡರೂ, ಅವರು ಅದನ್ನು ಕೇರ್ ಮಾಡಿರಲಿಲ್ಲ.
ಬೆಂಗಳೂರಿಗೆ ಮರಳಿದ ನಂತರ ಅವರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ನಿರ್ಧರಿಸಿದ್ದರು. ವಿಪರ್ಯಾಸವೆಂದರೆ, ಇಂದು ಅವರು ಆಸ್ಪತ್ರೆಗೆ ತೆರಳಿ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕಿತ್ತು ಮತ್ತು ಅದಕ್ಕಾಗಿ ವೈದ್ಯರ ಅಪಾಯಿಂಟ್ಮೆಂಟ್ ಕೂಡ ಫಿಕ್ಸ್ ಆಗಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು. ನಿನ್ನೆ ರಾತ್ರಿ ಕೂಡ ಧಾರಾವಾಹಿ ಕಲಾವಿದರ ಜೊತೆ ಫೋನ್ನಲ್ಲಿ ಆತ್ಮೀಯವಾಗಿ ಮಾತನಾಡಿದ್ದ ನಟನಿಗೆ, ಮಧ್ಯರಾತ್ರಿ ತೀವ್ರವಾದ ಎದೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ತೆರಳುವ ಮುನ್ನವೇ ಅವರು ಏಕಾಏಕಿ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಾವಿನಲ್ಲೂ ಒಂದಾದ ಪ್ರೇಮಿಗಳು: ಪ್ರೇಮಿಯ ಪಕ್ಕದಲ್ಲೇ ಪ್ರೇಯಸಿಯ ಅಂತ್ಯಸಂಸ್ಕಾರ!
ಸುದ್ದಿದಿನ,ಕುಂಬಳೆ: ಪ್ರೀತಿ ಎನ್ನುವುದು ಸಾವಿನ ನಂತರವೂ ಶಾಶ್ವತ ಎಂಬುದಕ್ಕೆ ಕೇರಳದ ಕಾಸರಗೋಡಿನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ನಿಶ್ಚಿತಾರ್ಥವಾಗಿದ್ದ ಯುವಕ ಮೃತಪಟ್ಟ ಬೆನ್ನಲ್ಲೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿಯ ಅಂತ್ಯಸಂಸ್ಕಾರವನ್ನು ಆಕೆಯ ಇಚ್ಛೆಯಂತೆ ಯುವಕನ ಸಮಾಧಿಯ ಪಕ್ಕದಲ್ಲೇ ನೆರವೇರಿಸಲಾಗಿದೆ.
ನಡೆದಿದ್ದೇನು?
ಕಿದೂರು ಕುಂಟಂಗೇರಡ್ಕದ ಪ್ರಫುಲ್ಲ (26) ಮತ್ತು ತಮಿಳುನಾಡು ನಿವಾಸಿಯಾದ ಬ್ಯಾಂಕ್ ನೌಕರ ಮಣಿ ಎಂಬವರಿಗೆ ನಾಲ್ಕು ತಿಂಗಳ ಹಿಂದೆ ಅದ್ಧೂರಿಯಾಗಿ ಮದುವೆ ನಿಶ್ಚಿತಾರ್ಥ ನಡೆದಿತ್ತು. ಇನ್ನೇನು ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಎನ್ನುವಷ್ಟರಲ್ಲಿ, ಒಂದು ತಿಂಗಳ ಹಿಂದೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಮಣಿ ಮೃತಪಟ್ಟಿದ್ದರು.
ಡೆತ್ ನೋಟ್ನಲ್ಲಿತ್ತು ಕೊನೆಯ ಆಸೆ
ತನ್ನ ಭಾವಿ ಪತಿಯ ಅಗಲಿಕೆಯಿಂದ ತೀವ್ರವಾಗಿ ನೊಂದಿದ್ದ ಪ್ರಫುಲ್ಲ, ಕಳೆದ ಭಾನುವಾರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿಗೂ ಮುನ್ನ ಆಕೆ ಬರೆದಿದ್ದ ಡೆತ್ ನೋಟ್ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ. “ನನ್ನ ಮೃತದೇಹವನ್ನು ಮಣಿಯ ಸಮಾಧಿಯ ಸಮೀಪದಲ್ಲೇ ಅಂತ್ಯಸಂಸ್ಕಾರ ಮಾಡಬೇಕು” ಎಂದು ಆಕೆ ತನ್ನ ಕೊನೆಯ ಆಸೆಯನ್ನು ಬರೆದಿಟ್ಟಿದ್ದರು.
ತಮಿಳುನಾಡಿನಲ್ಲಿ ಅಂತ್ಯಕ್ರಿಯೆ
ಯುವತಿಯ ಆಸೆಯಂತೆ ಉಭಯ ಕುಟುಂಬದವರು ಮಾತುಕತೆ ನಡೆಸಿದರು. ಅದರಂತೆ ನಿನ್ನೆ ಕಾಸರಗೋಡಿನಿಂದ ಪ್ರಫುಲ್ಲರ ಮೃತದೇಹವನ್ನು ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ವಳ್ಳಿಯೂರು ಎಂಬಲ್ಲಿಗೆ ಕೊಂಡೊಯ್ಯಲಾಯಿತು. ಅಲ್ಲಿ ಮಣಿಯ ಸಮಾಧಿಯ ಪಕ್ಕದಲ್ಲೇ ಪ್ರಫುಲ್ಲರ ಅಂತ್ಯಸಂಸ್ಕಾರವನ್ನು ನೆರವೇರಿಸುವ ಮೂಲಕ ಪ್ರೇಮಿಗಳಿಬ್ಬರನ್ನು ಸಾವಿನಲ್ಲೂ ಒಂದಾಗಿಸಲಾಯಿತು.
ಅಂತ್ಯಸಂಸ್ಕಾರದ ವೇಳೆ ಎರಡೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದು, ಮರುಗುವ ಪ್ರೇಮಕಥೆಗೆ ಕಂಬನಿಯ ವಿದಾಯ ಹೇಳಿದರು. ಈ ವಿಡಿಯೋ ಮತ್ತು ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ಜೋಡಿಯ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ3 days ago2.5 ಕೋಟಿ ಖರೀದಿಯಲ್ಲಿ ಅವ್ಯವಹಾರ ; ಆಯುಕ್ತೆ ಮಂಜುಶ್ರೀ ಸೇರಿ 6 ಅಧಿಕಾರಿಗಳ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ6 days agoದಾವಣಗೆರೆ | ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬೆಂಕಿ ರಹಿತ ಕುಕಿಂಗ್ ಕಾರ್ಯಕ್ರಮ
-
ದಿನದ ಸುದ್ದಿ6 days agoಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣಕ್ಕೆ ಉಚಿತ ಅವಕಾಶ : ಕೂಡಲೇ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ
-
ದಿನದ ಸುದ್ದಿ3 days agoದಾವಣಗೆರೆ | ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸಮಾರೋಪ ಸಮಾರಂಭ
-
ಅಂಕಣ2 days agoಪ್ರಜಾಪ್ರಭುತ್ವ: ಸಮಾನತೆ, ಸಾಮಾಜಿಕ ನ್ಯಾಯ ಮತ್ತು ನೈತಿಕ ಹೊಣೆಗಾರಿಕೆ
-
ಕ್ರೀಡೆ6 days agoಹಿರಿಯ ಕ್ರಿಕೆಟ್ ಪಟು ಎನ್ಆರ್ಎಚ್ ರಮೇಶ್ ನಿಧನ
-
ದಿನದ ಸುದ್ದಿ2 days agoದಾವಣಗೆರೆ| ಅಪರಿಚಿತರು ನೀಡಿದ ಟೆಲಿಗ್ರಾಮ್ ಲಿಂಕ್ ಕ್ಲಿಕ್ ಮಾಡಿ 14 ಲಕ್ಷ ಕಳೆದುಕೊಂಡ ಉಪನ್ಯಾಸಕ
-
ದಿನದ ಸುದ್ದಿ3 days agoಮಾನಸಿಕ ಆರೋಗ್ಯ ಅರಿವು ಅಗತ್ಯ : ಡಾ. ಪ್ರಭು ಎಂ. ಬಿಸ್ಲೇರಿ

