ರಾಜಕೀಯ
ಆಯುಷ್ಮಾನ್ ಭಾರತ : ಆರೋಗ್ಯ ವಿಮೆಯಿಂದ ಯಾರಿಗೆ ಲಾಭ?
- ನವ ಉದಾರ ನೀತಿಗಳ ಅನುಸರಣೆಯ ಅವಧಿಯಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಹಾಳುಗೆಡವಿ ಖಾಸಗಿ ಆಸ್ಪತ್ರೆಗಳಿಗೆ ಉತ್ತೇಜನ ಕೊಡಲಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ವಿಮೆಯ ಪರಿಕಲ್ಪನೆ ಪ್ರಚಲಿತಗೊಂಡಿದೆ. ಇದನ್ನು ಹಿಂದಿನ ಕಾಂಗ್ರೆಸ್ ನೇತೃತ್ವದ ಸರಕಾರ ಆರಂಭಿಸಿದ್ದರೂ, ಬಿಜೆಪಿ ನೇತೃತ್ವದ ಎನ್ಡಿಎ ಸರಕಾರಗಳ ಅಡಿಯಲ್ಲಿ ಇದರ ಮೇಲೆಯೇ ಗಮನ ಕೇಂದ್ರೀಕರಿಸಲಾಗಿದೆ.
- ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತನ್ನು ಸಂಪೂರ್ಣವಾಗಿ ಪಲ್ಲಟಗೊಳಿಸಿ ಖಾಸಗಿಯವರನ್ನೇ ಹೆಚ್ಚಾಗಿ ಅವಲಂಬಿಸುವಂತೆ ಮಾಡುವ ಖಾಸಗಿಯವರ ಮೂಲಕದ ಆರೋಗ್ಯ ವಿಮೆಯ ಪ್ರಯೋಜನ ಹೆಚ್ಚು ಸ್ಥಿತಿವಂತ ವಿಭಾಗಗಳಿಗೇ ದೊರೆತಿರುವಂತೆ ಕಾಣುತ್ತದೆ. ಇದರ ಆವಶ್ಯಕತೆ ಹೆಚ್ಚಾಗಿರುವ ಬಡವಿಭಾಗಗಳಿಗೆ ದೊರೆತಿರುವ ಪ್ರಯೋಜನ ನಗಣ್ಯವೆಂದೇ ಅಂಕಿ-ಅಂಶಗಳು ಹೇಳುತ್ತವೆ.
-ಕೆ.ಎಂ.ನಾಗರಾಜ್
ಮಾನವ ಹಕ್ಕುಗಳನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಲು ಮುಖ್ಯವಾಗಿ ಆರೋಗ್ಯ ಒಂದು ಹಕ್ಕು ಎಂದು ಪರಿಗಣಿತವಾದಾಗ ಮಾತ್ರ ಸಾಧ್ಯವಾಗುತ್ತದೆ. ಆದರೆ, ಆರೋಗ್ಯ ಒಂದು ಹಕ್ಕು ಎಂಬುದನ್ನು ನಮ್ಮ ಸಂವಿಧಾನ ಇನ್ನೂ ಒಪ್ಪಿಕೊಂಡಿಲ್ಲ. ಸಂವಿಧಾನದ ಮಾರ್ಗದರ್ಶಿ ತತ್ವಗಳಡಿಯಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಉತ್ತಮಪಡಿಸುವಂತೆ ಸುಪ್ರೀಂ ಕೋರ್ಟಿನ ಆದೇಶಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷಿಸಿವೆ. ಹಣಕಾಸಿನ ತೊಂದರೆಯಿಂದಾಗಿ ಸುಮಾರು ಎಂಟು ಕೋಟಿಯಷ್ಟು ಭಾರತೀಯರು ಕಾಯಿಲೆ ಇದ್ದಾಗಲೂ ಯಾವುದೇ ಔಷಧೋಪಚಾರ ಪಡೆಯುತ್ತಿಲ್ಲ.
ಇನ್ನು ಔಷಧೋಪಚಾರ ಪಡೆಯುವವರ ಪರಿಸ್ಥಿತಿಯಂತೂ ಭಯಾನಕವಾಗಿದೆ. ವೈದ್ಯಕೀಯ ಚಿಕಿತ್ಸೆಯ ವೆಚ್ಚ ಹೇಳತೀರದಷ್ಟು ದುಬಾರಿಯಾಗಿದೆ. ಆರೋಗ್ಯ ರಕ್ಷಣೆಗಾಗಿ ಒಂದು ಕುಟುಂಬವು ಮಾಡುವ ಖರ್ಚಿನಲ್ಲಿ 67% ಹಣ ಸಣ್ಣ ಪುಟ್ಟ ಔಷಧೋಪಚಾರ ಮತ್ತು ಇತರ ಕೆಲವು ಖರ್ಚುಗಳಿಗೆ ತಗಲುತ್ತದೆ ಎಂಬುದಾಗಿ ವರದಿಗಳು ತಿಳಿಸುತ್ತವೆ.
ನವ ಉದಾರ ನೀತಿಗಳ ಅನುಸರಣೆಯ ಅವಧಿಯಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಹಾಳುಗೆಡವಿ ಖಾಸಗಿ ಆಸ್ಪತ್ರೆಗಳಿಗೆ ಉತ್ತೇಜನ ಕೊಡಲಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ವಿಮೆಯ ಪರಿಕಲ್ಪನೆ ಪ್ರಚಲಿತಗೊಂಡಿದೆ. ಇದನ್ನು ಹಿಂದಿನ ಕಾಂಗ್ರೆಸ್ ನೇತೃತ್ವದ ಸರಕಾರ ಆರಂಭಿಸಿದ್ದರೂ, ಬಿಜೆಪಿ ನೇತೃತ್ವದ ಎನ್ಡಿಎ ಸರಕಾರಗಳ ಅಡಿಯಲ್ಲಿ ಇದರ ಮೇಲೆಯೇ ಗಮನ ಕೇಂದ್ರೀಕರಿಸಲಾಗಿದೆ.
ಮೋದಿ ಸರ್ಕಾರವು ತನ್ನ 2018-19ರ ಬಜೆಟ್ನಲ್ಲಿ ಆಯುಷ್ಮಾನ್ ಭಾರತ ಎಂಬ ಆರೋಗ್ಯ ವಿಮೆ ಯೋಜನೆಯನ್ನು ಘೋಷಿಸಿತ್ತು. 10 ಕೋಟಿ ಕುಟುಂಬಗಳಿಗೆ (ಅಂದರೆ, ಸುಮಾರು 50 ಕೋಟಿ ಮಂದಿಗೆ) ಐದು ಲಕ್ಷ ರೂಗಳ ವರೆಗಿನ ಆರೋಗ್ಯ ವಿಮೆ ಒದಗಿಸುವ ಈ ಯೋಜನೆಯು ಜಗತ್ತಿನಲ್ಲೇ ಅತಿ ದೊಡ್ಡದು ಎಂದು ಸರ್ಕಾರ ಹೇಳಿಕೊಂಡಿತ್ತು ಮತ್ತು ಅದಕ್ಕಾಗಿ ಬಜೆಟ್ನಲ್ಲಿ 2000 ಕೋಟಿ ರೂ ನಿಗದಿಪಡಿಸಿತ್ತು. ವಿಮಾ ಕಂಪೆನಿಗಳ ಮೂಲಕ ಜಾರಿಯಾಗುವ ಈ ಯೋಜನೆಗೆ ಫಲಾನುಭವಿಗಳ ಸಂಖ್ಯೆಯ ಆಧಾರದ ಮೇಲೆ ಸರ್ಕಾರವು ಪ್ರೀಮಿಯಂ ತೆರಬೇಕಾಗುತ್ತದೆ. ಹಾಗಾಗಿ, ಸರ್ಕಾರ ನಿಗದಿಪಡಿಸಿದ 2000 ಕೋಟಿ ರೂ ಗಳಲ್ಲಿ 50ಕೋಟಿ ಮಂದಿಗೆ ಪ್ರೀಮಿಯಂ ಲೆಕ್ಕದಲ್ಲಿ ಒದಗುವ ಹಣ ತಲಾ 40 ರೂಗಳಾಗುತ್ತದೆ.
ಈ ಒಂದು ಅಂಶವೇ ಜಗತ್ತಿನಲ್ಲೇ ಅತಿ ದೊಡ್ಡ ಆರೋಗ್ಯ ವಿಮೆಯ ನಿಜ ಸ್ವರೂಪವನ್ನು ಬಯಲು ಮಾಡಿತ್ತು. ಆದರೂ, ಬಿಜೆಪಿಯು 2019ರ ಚುನಾವಣೆಯಲ್ಲಿ ಆಯುಷ್ಮಾನ್ ಭಾರತ ಯೋಜನೆಯನ್ನು ಪ್ರಚಾರಕ್ಕೆ ಬಳಸಿಕೊಂಡಿತ್ತು. ಎರಡನೆಯ ಬಾರಿಗೆ ಅಧಿಕಾರಕ್ಕೆ ಬಂದ ನಂತರವೂ ಮೋದಿ ಸರ್ಕಾರವು 2019-20ರ ಬಜೆಟ್ನಲ್ಲಿ ಈ ಯೋಜನೆಗೆ 6400 ಕೋಟಿ ರೂ ನಿಗದಿಪಡಿಸಿದೆ. ಹಾಗಾಗಿ, ಈ ಯೋಜನೆಯು ಅದೆಷ್ಟು ಟೊಳ್ಳು ಎಂಬುದನ್ನು ಅರ್ಥಮಾಡಿಕೊಳ್ಳಲು ಹಿಂದಿನ ಸರ್ಕಾರಗಳು (ರಾಜ್ಯ ಮತ್ತು ಕೇಂದ್ರ ಸರ್ಕಾರಗಳು) ಜಾರಿಗೊಳಿಸಿದ್ದ ಆರೋಗ್ಯ ವಿಮಾ ಯೋಜನೆಗಳನ್ನು ಅವಲೋಕಿಸಬೇಕಾಗುತ್ತದೆ.
2002ರಲ್ಲಿ ಕರ್ನಾಟಕ ಸರ್ಕಾರವು ಯಶಸ್ವಿನಿ ಎಂಬ ಒಂದು ಆರೋಗ್ಯ ವಿಮೆಯನ್ನು ಜಾರಿಗೊಳಿಸಿತ್ತು. ಆರಂಭದಲ್ಲಿ, ಗ್ರಾಮೀಣ ಪ್ರದೇಶದ ಸಹಕಾರಿ ಸಂಘಗಳ ಸದಸ್ಯರಿಗೆ ಮಾತ್ರ ಸೀಮಿತಗೊಂಡಿದ್ದ ಈ ಕಿರು ಯೋಜನೆಯು ಸದಸ್ಯರಿಂದ ತಿಂಗಳಿಗೆ ತಲಾ ಐದು ರೂ ವಂತಿಕೆಯ ಮೂಲಕ ಸ್ವತಃ ಹಣ ಒದಗಿಸಿಕೊಳ್ಳುತ್ತಿತ್ತು. ಹೃದಯ ಸಂಬಂಧಿ ಮತ್ತು ಇತರ ಕೆಲವು ಶಸ್ತ್ರ ಚಿಕಿತ್ಸೆಗಳಿಗೆ ಗುರುತಿಸಿದ ಕೆಲವು ಆಸ್ಪತ್ರೆಗಳ ಮೂಲಕ ನಗದುರಹಿತ ಸೌಲಭ್ಯ ಒದಗಿಸಿತ್ತು.
ಈಚೆಗೆ, ಎರಡು ಲಕ್ಷದ ವರೆಗಿನ ವಿಮೆಯೊಂದಿಗೆ ವಾರ್ಷಿಕ ಪ್ರೀಮಿಯಂ ಮೊತ್ತವನ್ನು ಗ್ರಾಮೀಣದವರಿಗೆ 600ರೂ ಮತ್ತು ಪಟ್ಟಣದವರಿಗೆ 710 ರೂ ಏರಿಸಲಾಗಿದೆ ಮತ್ತು ಅನೇಕ ಆಸ್ಪತ್ರೆಗಳು ಮತ್ತು ಸುಮಾರು ಎಲ್ಲ ಶಸ್ತ್ರ ಚಿಕಿತ್ಸೆಗಳೂ ಯೋಜನೆಗೆ ಸೇರ್ಪಡೆಯಾಗಿವೆ. ಈ ನಡುವೆ, ಕರ್ನಾಟಕ ಸರ್ಕಾರವು ಯಶಸ್ವಿನಿ, ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ, ವಾಜಪೇಯಿ ಆರೋಗ್ಯ ಶ್ರೀ, ರಾಜೀವ್ ಆರೋಗ್ಯಭಾಗ್ಯ ಮುಂತಾದ ಎಲ್ಲ ಯೋಜನೆಗಳನ್ನೂ ಸೇರಿಸಿ ಆರೋಗ್ಯ ಕರ್ನಾಟಕ ಎಂಬ ಹೆಸರಿನ ಯೋಜನೆಯು ಗೊಂದಲದ ಗೂಡಾಗಿತ್ತು. ಆಯುಷ್ಮಾನ್ ಭಾರತ ಯೋಜನೆಯನ್ನು ಒಪ್ಪಿಕೊಳ್ಳಲಾಗದ ಪರಿಸ್ಥಿತಿಯಲ್ಲಿ, ಹಿಂದಿನ ಮತ್ತು ಇಂದಿನ ಮುಖ್ಯ ಮಂತ್ರಿ, ಇಬ್ಬರೂ, ಹಳೆಯ ಯಶಸ್ವಿನಿ ಯೋಜನೆಯನ್ನೇ ಜಾರಿಗೊಳಿಸುವುದಾಗಿ ಹೇಳಿದ್ದಾರೆ.
ಯುಪಿಎ ಸರ್ಕಾರವು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಅಡಿಯಲ್ಲಿ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ, ಜನನಿ ಸುರಕ್ಷಾ ಮುಂತಾದ ಯೋಜನೆಗಳ ಜೊತೆಗೆ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ಎಂಬ ಒಂದು ಆರೋಗ್ಯ ವಿಮೆಯನ್ನು ಜಾರಿಗೊಳಿಸಿತ್ತು. ಬಡತನ ರೇಖೆಯ ಕೆಳಗಿರುವ ಕುಟುಂಬಗಳಿಗೆ 30 ಸಾವಿರ ರೂ ವರೆಗಿನ ವಾರ್ಷಿಕ ಒಳ-ರೋಗಿ ಚಿಕಿತ್ಸೆಯನ್ನು ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯಡಿ ಕಲ್ಪಿಸಲಾಗಿತ್ತು.
ಈ ಯೋಜನೆಯನ್ನೇ ಮುಂದುವರೆಸಿದರೂ, ಅದೊಂದು ತನ್ನ ಹೊಸ ಯೋಜನೆಯೆಂಬಂತೆ ಪ್ರಸ್ತುತಪಡಿಸುತ್ತ ಮೋದಿ ಸರ್ಕಾರವು 2016-17ರ ಬಜೆಟ್ನಲ್ಲಿ, ಬಡ ಕುಟುಂಬಗಳಿಗೆ ಒಂದು ಲಕ್ಷ ರೂ ವರೆಗಿನ ಒಳ-ರೋಗಿ ಚಿಕಿತ್ಸೆಯನ್ನು ಮತ್ತು ಹಿರಿಯ ನಾಗರಿಕರಿಗೆ 30 ಸಾವಿರ ರೂ ಅಧಿಕವಾಗಿ ಒದಗಿಸುವುದಾಗಿ ಹೇಳಿತ್ತು. ಆದರೆ, ಈ ಯೋಜನೆ ಅನುಷ್ಠಾನಗೊಳ್ಳಲೇ ಇಲ್ಲ. ಬದಲಿಗೆ, ಮೂಗಿಗೆ ತುಪ್ಪ ಸವರುವ ಆಯುಷ್ಮಾನ್ ಭಾರತ ಯೋಜನೆಯ ಘೋಷಣೆಯಾಗಿದೆ.
ವಿಮೆಗೆ ಸಂಬಂಧಿಸಿದ ಅಂಕಿ-ಅಂಶಗಳ ಲೆಕ್ಕ ಹಾಕುವ ತಜ್ಞರ ಪ್ರಕಾರ, 50 ಕೋಟಿ ಮಂದಿಗೆ ಐದು ಲಕ್ಷ ರೂಗಳ ವರೆಗಿನ ಆರೋಗ್ಯ ವಿಮೆ ಒದಗಿಸುವ ಆಯುಷ್ಮಾನ್ ಭಾರತ ಯೋಜನೆಯ ತಲಾ ವಾರ್ಷಿಕ ಪ್ರೀಮಿಯಂ ಕನಿಷ್ಠ ಐದು ಸಾವಿರ ರೂ ಆಗುತ್ತದೆ. ಅಂದರೆ, ಸರ್ಕಾರವು ಒಂದು ಲಕ್ಷದ ಇಪ್ಪತ್ತೈದು ಸಾವಿರ ಕೋಟಿ ರೂಗಳಷ್ಟು ಪ್ರೀಮಿಯಂ ತೆರಬೇಕಾಗುತ್ತದೆ. ಆದರೆ, ಈ ಬಾಬ್ತು ಮೋದಿ ಸರ್ಕಾರವು 2019-20ರ ಬಜೆಟ್ನಲ್ಲಿ ತೆಗೆದಿಟ್ಟಿರುವ ಹಣ ಕೇವಲ 6,400 ಕೋಟಿ ರೂ. ಇದು ಮೋದಿ ಸರ್ಕಾರದ ಮಾತಿಗೂ ಮತ್ತು ಕೃತಿಗೂ ಇರುವ ಅಂತರವನ್ನು ತೋರಿಸುತ್ತದೆ.
ವಾಸ್ತವವಾಗಿ ಇದು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತನ್ನು ಸಂಪೂರ್ಣವಾಗಿ ಪಲ್ಲಟಗೊಳಿಸಿ ಖಾಸಗಿಯವರನ್ನೇ ಹೆಚ್ಚಾಗಿ ಅವಲಂಬಿಸುವಂತೆ ಮಾಡುವ ಯೋಜನೆಯೇ ಆಗಿದೆ. ಖಾಸಗಿಯವರ ಮೂಲಕ ಆರೋಗ್ಯ ವಿಮೆಯ ಮೇಲೆ ಹೆಚ್ಚಿನ ಒತ್ತು ನೀಡುವ ಇಂತಹ ಯೋಜನೆಗಳಿಂದ ನಿಜವಾಗಿ ಯಾರಿಗೆ ಲಾಭ ಎಂಬುದನ್ನು ಅಧ್ಯಯನ ಮಾಡುತ್ತಿರುವ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಅಂಕುರ್ ವರ್ಮ ಪ್ರಕಾರ (Who Benefits from the Govt Funded Health Insurance? , ನ್ಯೂಸ್ಕ್ಲಿಕ್, ಡಿಸೆಂಬರ್ 3, 2019) 2014ರಿಂದ 2018ರ ಅವಧಿಯಲ್ಲಿ ಆರೋಗ್ಯ ವಿಮೆಗೆ ಒಳಪಟ್ಟವರ ಪ್ರಮಾಣವೇನೂ ಹೆಚ್ಚಿಲ್ಲ.
ವಿಮಾಯೋಜನೆಯನ್ನು ಸಾರ್ವತ್ರಿಕಗೊಳಿಸಿರುವ ರಾಜ್ಯಗಳಲ್ಲಿ ಮಾತ್ರವೇ ಆರೋಗ್ಯ ವಿಮೆಯ ಫಲಾನುಭವಿಗಳ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಇರುವುದು. ಈ ಆರೋಗ್ಯ ವಿಮೆಯ ಪ್ರಯೋಜನ ಕೂಡ ಹೆಚ್ಚು ಸ್ಥಿತಿವಂತ ವಿಭಾಗಗಳಿಗೇ ದೊರೆತಿರುವಂತೆ ಕಾಣುತ್ತದೆ. ಇದರ ಆವಶ್ಯಕತೆ ಹೆಚ್ಚಾಗಿರುವ ಬಡವಿಭಾಗಗಳಿಗೆ ದೊರೆತಿರುವ ಪ್ರಯೋಜನ ನಗಣ್ಯವೆಂದೇ ಹೇಳಬಹುದು.
ಅಂಕುರ್ವರ್ಮ ತಮ್ಮ ಲೇಖನದಲ್ಲಿ ಹೋಲಿಸಿರುವ ೭೫ನೇ ಸುತ್ತಿನ ರಾಷ್ಟ್ರೀಯ ಸ್ಯಾಂಪಲ್ ಸರ್ವೆಯ 71ನೇ ಮತ್ತು 75ನೇ ಸುತ್ತಿನ ಮಾಹಿತಿಗಳು ಕುತೂಹಲಕಾರಿಯಾಗಿವೆ. ಜುಲೈ 2017 ಮತ್ತು ಜೂನ್ 2018ರ ನಡುವೆ, ಎನ್ಎಸ್ಎಸ್ಒ ನಡೆಸಿದ 75ನೇ ಸುತ್ತಿನ ರಾಷ್ಟ್ರೀಯ ಸ್ಯಾಂಪಲ್ ಸರ್ವೆಯ ಭಾಗವಾಗಿ, ಆರೋಗ್ಯ ಸಂಬಂಧವಾಗಿ ಕುಟುಂಬಗಳು ಮಾಡುವ ಖರ್ಚಿನ ವಿವರಗಳನ್ನು ಸಂಗ್ರಹಿಸಿದ ವರದಿಯನ್ನು ನವೆಂಬರ್ 24ರಂದು ಬಿಡುಗಡೆ ಮಾಡಿದೆ. ಇದೇ ಸರ್ವೆಯನ್ನು ಹಿಂದೆ 2014ರ 71ನೇ ಸುತ್ತಿನ ರಾಷ್ಟ್ರೀಯ ಸ್ಯಾಂಪಲ್ ಸರ್ವೆಯ ಭಾಗವಾಗಿ ಮಾಡಲಾಗಿತ್ತು.
75ನೇ ಸುತ್ತಿನ ರಾಷ್ಟ್ರೀಯ ಸ್ಯಾಂಪಲ್ ಸರ್ವೆಯ ಪ್ರಕಾರ, 2017-18ರಲ್ಲಿ, 85.9% ಗ್ರಾಮೀಣ ಜನತೆ ಮತ್ತು 82% ನಗರವಾಸಿಗಳು ಯಾವುದೇ ಆರೋಗ್ಯ ವಿಮೆಗೆ ಒಳಪಟ್ಟಿರಲಿಲ್ಲ. ವಿಮೆಗೆ ಒಳಪಡದವರ ಸಂಖ್ಯೆ 2014ರ ಸರ್ವೆಯಲ್ಲಿಯೂ ಇಷ್ಟೇ ಇತ್ತು ಮತ್ತು ಈ ನಾಲ್ಕು ವರ್ಷಗಳ ಅವಧಿಯಲ್ಲಿ ಆರೋಗ್ಯ ವಿಮೆಗೆ ಒಳಪಟ್ಟವರ ಸಂಖ್ಯೆಯು ನಗರಗಳಲ್ಲಿ ಮಾತ್ರ ಕೇವಲ 1.1% ಹೆಚ್ಚಿದೆ.
ವಿಮೆಗೆ ಒಳಪಟ್ಟವರಲ್ಲಿ ಬಹುತೇಕ ಎಲ್ಲರೂ ಸರ್ಕಾರ-ಪ್ರಾಯೋಜಿತ ವಿಮೆಗೊಳಪಟ್ಟಿದ್ದಾರೆ (ಕೋಷ್ಟಕ-1). ಗ್ರಾಮೀಣದಲ್ಲಿ, 0.2% ಮಂದಿ ಆರೋಗ್ಯ ವಿಮೆಯನ್ನು ತಾವೇ ಒದಗಿಸಿಕೊಂಡಿದ್ದಾರೆ ಮತ್ತು 0.3% ಮಂದಿ ಖಾಸಗಿ ಉದ್ಯೋಗದಾತರು ಒದಗಿಸಿದ ವಿಮೆಗೊಳಪಟ್ಟಿದ್ದಾರೆ. ನಗರಗಳಲ್ಲಿ, 3.8% ಮಂದಿ ಆರೋಗ್ಯ ವಿಮೆಯನ್ನು ತಾವೇ ಒದಗಿಸಿಕೊಂಡಿದ್ದಾರೆ ಮತ್ತು ಕೇವಲ 2.9% ಮಂದಿ ಖಾಸಗಿ ಉದ್ಯೋಗದಾತರು ಒದಗಿಸಿದ ವಿಮೆಗೊಳಪಟ್ಟಿದ್ದಾರೆ.
ಆರೋಗ್ಯ ವಿಮೆಗೊಳಪಟ್ಟವರ ಸಂಖ್ಯೆ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ. ಆಂಧ್ರ, ತೆಲಂಗಾಣ, ಕೇರಳ ಮತ್ತು ಛತ್ತೀಸ್ಘಡ ರಾಜ್ಯಗಳಲ್ಲಿ, ರಾಜ್ಯ ಸರ್ಕಾರಗಳು ಅರ್ಹತೆಯನ್ನು ಸಡಿಲಗೊಳಿಸಿರುವುದರಿಂದಾಗಿ, ಬಹುತೇಕ ಎಲ್ಲರೂ ಆರೋಗ್ಯ ವಿಮೆಗೊಳಪಟ್ಟಿದ್ದಾರೆ. ಉಳಿದ ರಾಜ್ಯಗಳಲ್ಲಿ ಆರೋಗ್ಯ ವಿಮೆಗೊಳಪಟ್ಟವರ ಸಂಖ್ಯೆ ನಿಕೃಷ್ಟವಾಗಿದೆ.
ಈ ಸರ್ವೆಯಿಂದ ಹೊರಹೊಮ್ಮುವ ಒಂದು ಮುಖ್ಯವಾದ ಅಂಶವೆಂದರೆ, ಬಡವರಿಗಾಗಿಯೇ ಇರುವ ಯೋಜನೆಗಳನ್ನೊಳಗೊಂಡ ಸರ್ಕಾರ-ಪ್ರಾಯೋಜಿತ ಆರೋಗ್ಯ ವಿಮೆಗೆ ಬಡ ಕುಟುಂಬಗಳಿಗಿಂತ ಅತಿ ಹೆಚ್ಚು ಸಂಖ್ಯೆಯ ಶ್ರೀಮಂತರೇ ಒಳಪಟ್ಟಿದ್ದಾರೆ (ಕೋಷ್ಟಕ-2).ಶೇ.20 ತಳ ಮಟ್ಟದ ಬಡ ಕುಟುಂಬಗಳ (ವೆಚ್ಚದ ಆಧಾರದ ಮೇಲೆ) ಪೈಕಿ ಕೇವಲ 10% ಕುಟುಂಬಗಳು ಆರೋಗ್ಯ ವಿಮೆಗೊಳಪಟ್ಟಿವೆ. ಇನ್ನೊಂದೆಡೆಯಲ್ಲಿ, ಶೇ.20 ಅತಿ ಶ್ರೀಮಂತ ಕುಟುಂಬಗಳ (ವೆಚ್ಚದ ಆಧಾರದ ಮೇಲೆ) ಪೈಕಿ ಶೇ.22 ಕುಟುಂಬಗಳು ಆರೋಗ್ಯ ವಿಮೆಗೊಳಪಟ್ಟಿವೆ. ಈ ಶ್ರೀಮಂತ ಕುಟುಂಬಗಳಲ್ಲಿ ಶೇ.20ರಷ್ಟು ಮಂದಿ ಸರ್ಕಾರ-ಪ್ರಾಯೋಜಿತ ಆರೋಗ್ಯ ವಿಮೆಯ ಸೌಲಭ್ಯ ಬಳಸಿಕೊಂಡಿದ್ದಾರೆ. ನಗರ ವಾಸಿಗಳಲ್ಲಿ ಸುಮಾರು 8% ಮಂದಿ ಸರ್ಕಾರ-ಪ್ರಾಯೋಜಿತ ಆರೋಗ್ಯ ವಿಮೆಗೊಳಪಟ್ಟಿದ್ದಾರೆ.
ಆಸ್ಪತ್ರೆ ಸೇರಿದ ಸಂದರ್ಭದಲ್ಲಿ ಸ್ವತಃ ಮಾಡಿದ ಖರ್ಚಿನಲ್ಲಿ ಸ್ವಲ್ಪ ಹಣ ಮರಳಿಸಲಾಗುತ್ತದೆ. ಈ ಪ್ರಕಾರವಾಗಿ, ಸರ್ಕಾರ-ಪ್ರಾಯೋಜಿತ ಆರೋಗ್ಯ ವಿಮೆ, ಖಾಸಗಿ ಉದ್ಯೋಗದಾತರು ಒದಗಿಸಿದ ಆರೋಗ್ಯ ವಿಮೆ ಮತ್ತು ಸ್ವಂತವೇ ಪಡೆದ ಆರೋಗ್ಯ ವಿಮೆಗಳ ಮೂಲಕ ಶ್ರೀಮಂತರು ಹೆಚ್ಚು ಹಣ ಮರಳಿ ಪಡೆಯುತ್ತಾರೆ (ಕೋಷ್ಟಕ-3). ಉದಾಹರಣೆಗೆ, ಗ್ರಾಮೀಣದಲ್ಲಿ, ಆಸ್ಪತ್ರೆ ಸೇರಿದ ಪ್ರಕರಣಗಳಲ್ಲಿ, ಬಡವರ ಪ್ರಕರಣಗಳಲ್ಲಿ ಕೇವಲ 1.6% ಮತ್ತು ಶ್ರೀಮಂತರ 4% ಪ್ರಕರಣಗಳಲ್ಲಿ ಸ್ವಲ್ಪ ಹಣ ಮಾತ್ರ ಮರಳಿ ಪಡೆಯುತ್ತಾರೆ. ಬಡ ಕುಟುಂಬಗಳು ಆಸ್ಪತ್ರೆಯಲ್ಲಿ ಮಾಡಿದ ಖರ್ಚಿನಲ್ಲಿ ಕೇವಲ 4% ಹಣ ಮರಳಿ ಪಡೆದರೆ, ಶ್ರೀಮಂತರು ಆಸ್ಪತ್ರೆಯಲ್ಲಿ ಮಾಡಿದ ಖರ್ಚಿನಲ್ಲಿ 22% ಹಣ ಮರಳಿ ಪಡೆಯುತ್ತಾರೆ. ಅದೇ ರೀತಿಯಲ್ಲಿ, ನಗರ ವಾಸಿಗಳಲ್ಲಿ, ಬಡವರು 1.5% ಹಣ ಮರಳಿ ಪಡೆದರೆ, ಶ್ರೀಮಂತರು 22% ಹಣ ಮರಳಿ ಪಡೆಯುತ್ತಾರೆ.
ನಗರವಾಸಿಗಳು ಆಸ್ಪತ್ರೆ ಸೇರಿದ ಪ್ರಕರಣಗಳಲ್ಲಿ, ಬಡವರು ಆಸ್ಪತ್ರೆಯಲ್ಲಿ ಮಾಡಿದ ಖರ್ಚಿನಲ್ಲಿ ಕೇವಲ 4 % ಹಣ ಮರಳಿ ಪಡೆದರೆ, ಶ್ರೀಮಂತರು 27% ಹಣ ಮರಳಿ ಪಡೆಯುತ್ತಾರೆ. ನಿರ್ದಿಷ್ಟವಾಗಿ, ಗ್ರಾಮೀಣ ಬಡವರು, ಒಂದು ಪ್ರಕರಣದಲ್ಲಿ, ಸರಾಸರಿ 279ರೂ ಮರಳಿ ಪಡೆದರೆ, ನಗರವಾಸಿ ಶ್ರೀಮಂತರು, ಒಂದು ಪ್ರಕರಣದಲ್ಲಿ, ಸರಾಸರಿ 12000 ರೂ ಮರಳಿ ಪಡೆಯುತ್ತಾರೆ. ಇದು, ಆರೋಗ್ಯ ವಿಮೆಯ ಒಳಗೊಳ್ಳುವಿಕೆಯಲ್ಲಿ ಮತ್ತು ಆಸ್ಪತ್ರೆಯಲ್ಲಿ ಖರ್ಚಾದ ಹಣ ಮರಳಿಪಡೆಯುವಲ್ಲಿ ಅದೆಷ್ಟು ತಾರತಮ್ಯತೆ ಇದೆ ಮತ್ತು ಬಡವರು ಅದೆಷ್ಟು ತಿರಸ್ಕಾರಕ್ಕೊಳಗಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಒಂದು ಅಂದಾಜಿನ ಪ್ರಕಾರ, ದುಬಾರಿ ವೆಚ್ಚದ ವೈದ್ಯಕೀಯ ಚಿಕಿತ್ಸೆಯ ಕಾರಣದಿಂದಾಗಿಯೇ ಪ್ರತಿ ವರ್ಷವೂ ಸುಮಾರು ಆರು ಕೋಟಿ ಮಂದಿ ಭಾರತೀಯರು ಬಡತನಕ್ಕೆ ತಳ್ಳಲ್ಪಡುತ್ತಾರೆ.
ಕೋಷ್ಟಕ – 1
2014 ಮತ್ತು 2018ರಲ್ಲಿ ಬೇರೆ ಬೇರೆ ಮಾದರಿಯ ಆರೋಗ್ಯ ವಿಮಾ ಯೋಜನೆ ಬಳಸಿಕೊಂಡ ವ್ಯಕ್ತಿಗಳ ಶೇಖಡಾವಾರು
ಆರೋಗ್ಯ ವಿಮೆಯ ಮಾದರಿ 71ನೇ ಸುತ್ತು 2014ರಲ್ಲಿ 75ನೇ ಸುತ್ತು 2017-18ರಲ್ಲಿ
ಗ್ರಾಮೀಣ ಪ್ರದೇಶ
ಸರ್ಕಾರ ಒದಗಿಸಿದ ಆರೋಗ್ಯ ವಿಮಾ ಯೋಜನೆ ಬಳಸಿಕೊಂಡವರು 13.1 13.5
ಖಾಸಗಿ ಉದ್ಯೋಗದಾತರು ಒದಗಿಸಿದ ವಿಮಾ ಯೋಜನೆ ಬಳಸಿಕೊಂಡವರು 0.6 0.3
ತಾವೇ ಒದಗಿಸಿಕೊಂಡ ಆರೋಗ್ಯ ವಿಮಾ ಯೋಜನೆಯನ್ನು ಬಳಸಿಕೊಂಡ ಕುಟುಂಬಗಳು 0.3 0.2ಇತರೆ 0.1 0.1
ಯಾವುದೇ ಆರೋಗ್ಯ ವಿಮೆಗೆ ಒಳಪಡದವರು 85.9 85.9
ನಗರ ಪ್ರದೇಶ
ಸರ್ಕಾರ ಒದಗಿಸಿದ ಆರೋಗ್ಯ ವಿಮಾ ಯೋಜನೆ ಬಳಸಿಕೊಂಡವರು 12 12.2
ಖಾಸಗಿ ಉದ್ಯೋಗದಾತರು ಒದಗಿಸಿದ ವಿಮಾ ಯೋಜನೆ ಬಳಸಿಕೊಂಡವರು 2.4 2.9
ತಾವೇ ಒದಗಿಸಿಕೊಂಡ ಆರೋಗ್ಯ ವಿಮಾ ಯೋಜನೆಯನ್ನು ಬಳಸಿಕೊಂಡ ಕುಟುಂಬಗಳು 3.5 3.8
ಇತರೆ 0.2 0.2
ಯಾವುದೇ ಆರೋಗ್ಯ ವಿಮೆಗೆ ಒಳಪಡದವರು 82 80.9
ಕೋಷ್ಟಕ – 2
2018ರಲ್ಲಿ ಆರೋಗ್ಯ ವಿಮೆಗೊಳಗಾದ ಕುಟುಂಬಗಳ ಅನುಪಾತ (ಕುಟುಂಬಗಳ ವೆಚ್ಚವನ್ನು ಆಧರಿಸಿ ಅವುಗಳನ್ನು ಐದು ಗುಂಪುಗಳಾಗಿ ವರ್ಗೀಕರಿಸಲಾಗಿದೆ)
ಕುಟುಂಬಗಳ ಐದು ಗುಂಪುಗಳು
ಸರ್ಕಾರದ ಆರೋಗ್ಯ ವಿಮೆ ಬಳಸಿಕೊಂಡವರು ಯಾವುದೋ ಒಂದು ಆರೋಗ್ಯ ವಿಮೆಗೆ ಒಳಪಟ್ಟವರು ಗ್ರಾಮೀಣ ನಗರ ಗ್ರಾಮೀಣ ನಗರ
ಶೇ.20 ತಳಮಟ್ಟದಬಡಕುಟುಂಬಗಳು 10.1 8.1 10.2 9.8
ಶೇ.20 ತಳಮಟ್ಟದಮೇಲಿನಕುಟುಂಬಗಳು (20-40) 9.2 11.9 9.4 14
ಮಧ್ಯಮಮಟ್ಟದಶೇ.20 ಕುಟುಂಬಗಳು (40-60) 12.5 14.2 12.9 18.2
ಶೇ.20 ಶ್ರೀಮಂತಕುಟುಂಬಗಳು (60-80) 15.4 13.2 16 20.4
ಶೇ.20 ಅತಿಶ್ರೀಮಂತಕುಟುಂಬಗಳು 20 13.5 21.9 33
ಕೋಷ್ಟಕ – 3
ಆಸ್ಪತ್ರೆಗೆ ಸೇರಿದ್ದಾಗ ಮಾಡಿದ ಖರ್ಚಿನಲ್ಲಿ ಶೇ. ಎಷ್ಟು ಮಂದಿ ಮರಳಿ ಹಣ ಪಡೆದರು ಮತ್ತು ಅದರ ಮೊತ್ತ ವೆಷ್ಟು(ಕುಟುಂಬಗಳ ವೆಚ್ಚವನ್ನು ಆಧರಿಸಿ ಅವುಗಳನ್ನು ಐದು ಗುಂಪುಗಳಾಗಿ ವರ್ಗೀಕರಿಸಲಾಗಿದೆ)
ಕುಟುಂಬಗಳ ಐದು ಗುಂಪುಗಳು
ಗ್ರಾಮೀಣ ನಗರ
ವೆಚ್ಚ ಮರಳಿ ಪಡೆದವರು(ಶೇ. ಸಂಖ್ಯೆ) ಮರಳಿ ಪಡೆದ ಸರಾಸರಿ ಮೊತ್ತ ವೆಚ್ಚ ಮರಳಿ ಪಡೆದವರು
(ಶೇ. ಸಂಖ್ಯೆ ಮರಳಿ ಪಡೆದ ಸರಾಸರಿ ಮೊತ್ತ
ಶೇ.20 ತಳಮಟ್ಟದಬಡಕುಟುಂಬಗಳು 1.6 279 1.5 562
ಶೇ.20 ತಳಮಟ್ಟದಮೇಲಿನಕುಟುಂಬಗಳು (20-40) 1.1 211 3.4 1467
ಮಧ್ಯಮಮಟ್ಟದಶೇ.20 ಕುಟುಂಬಗಳು (40-60) 1.9 417 5.5 2527
ಶೇ.20 ಶ್ರೀಮಂತಕುಟುಂಬಗಳು (60-80) 2.2 705 7.8 4030
ಶೇ.20 ಅತಿಶ್ರೀಮಂತಕುಟುಂಬಗಳು 4 1373 21.8 12000
(ಈ ವಾರದ ಜನಶಕ್ತಿ ವಾರ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಶ್ವೇತಪತ್ರ ಹೊರಡಿಸಲು ಎಚ್.ಡಿ. ಕುಮಾರಸ್ವಾಮಿ ಆಗ್ರಹ

ಸುದ್ದಿದಿನ, ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಯೋಜನೆಯ ಫಲ ಎಷ್ಟು ಜನರಿಗೆ ಲಭ್ಯವಾಗಿದೆ, ಆರ್ಥಿಕವಾಗಿ ಎಷ್ಟು ಹೊರೆಬಿದ್ದಿದೆ, ಇದುವರೆಗೆ ಫಲಾನುಭವಿಗಳ ಖಾತೆಗೆ ಎಷ್ಟು ಹಣ ಜಮೆಯಾಗಿದೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದಾರೆ.
ಸರ್ಕಾರದ ಗ್ಯಾರಂಟಿ ಯೋಜನೆಗಳು ವಿಫಲವಾಗಿದೆ, ಸಮರ್ಪಕವಾಗಿ ಜಾರಿಯಾಗುತ್ತಿಲ್ಲ, ಈ ಬಗ್ಗೆ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪಂಚಾಯತ್ ರಾಜ್ ಇಲಾಖೆ ಜತೆ ಕೆಲಸ ಮಾಡಲು ಬಂಧುತ್ವ ಫೌಂಡೇಷನ್ ಸಿದ್ಧ : ಅಧ್ಯಕ್ಷ ರಾಘು ದೊಡ್ಡಮನಿ

ಸುದ್ದಿದಿನ, ದಾವಣಗೆರೆ : ಮಕ್ಕಳ ವಿಷೇಶ ಗ್ರಾಮ ಸಭೆಯ ಮೂಲಕ ಜಿಲ್ಲೆಯ ಮಕ್ಕಳ ಶಿಕ್ಷಣ, ರಕ್ಷಣೆ ಹಾಗೂ ಅವರ ಹಕ್ಕು ಬಾಧ್ಯತೆಗಳಿಗಾಗಿ ಪಂಚಾಯತ್ ರಾಜ್ ಇಲಾಖೆಯ ಜತೆ ಕೆಲಸ ಮಾಡಲು ನಮ್ಮ ಬಂಧುತ್ವ ಫೌಂಡೇಷನ್ ಸಿದ್ಧವಿದೆ ಎಂದು ಫೌಂಡೇಶನ್ ನ ಅಧ್ಯಕ್ಷರಾದ ರಾಘು ದೊಡ್ಡಮನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಹಾಗೂ ಮಕ್ಕಳ ಗ್ರಾಮ ಸಭೆ ರೂಪಿಸಲು ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಇದೇ ತಿಂಗಳ 14 ರಿಂದ ಜನವರಿ 24 ರವರೆಗೆ 10 ವಾರಗಳ ಮಕ್ಕಳ ಸ್ನೇಹಿ ಅಭಿಯಾನ ಹಾಗೂ ಮಕ್ಕಳ ಗ್ರಾಮ ಸಭೆ ನಡೆಸಲು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಸೂಚನೆ ನೀಡಲಾಗಿದೆ.
ಈ ಅಭಿಯಾನವು ಗ್ರಾಮ ಪಂಚಾಯಿತಿಗಳನ್ನು ಮಕ್ಕಳ ಸ್ನೇಹಿಯಾಗಿಸಲು ಪಂಚಾಯತ್ ರಾಜ್ ಇಲಾಖೆ ಈ ಮೂಲಕ ದಾಪುಗಾಲಿಟ್ಟಿದೆ. ಸ್ಥಳೀಯ ಸಂಸ್ಥೆಗಳ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಸರ್ಕಾರದ ಮಹಾತ್ವಕಾಂಕ್ಷೆಯ ಯೋಜನೆ ಇದಾಗಿದ್ದು, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿಗಳು ತಮ್ಮ ಸದಸ್ಯರು ಹಾಗೂ ಸ್ಥಳೀಯ ಶಾಲೆಗಳು, ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ನಮ್ಮ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಕಡ್ಡಾಯವಾಗಿ ಈ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಹಾಗೂ ಮಕ್ಕಳ ವಿಷೇಶ ಗ್ರಾಮ ಸಭೆ ನಡೆಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದಿದ್ದಾರೆ.
ಮಕ್ಕಳ ವಿಷೇಶ ಗ್ರಾಮ ಸಭೆಯು ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಕ್ಕಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಮಕ್ಕಳ ಆರೋಗ್ಯ, ರಕ್ಷಣೆ, ಅಂಗನವಾಡಿಗಳು, ಶಾಲೆ, ಶಾಲಾ ಆವರಣ, ಸ್ವಚ್ಛತೆ, ಬಡ ಮಕ್ಕಳಿಗೆ ನೆರವು ಮುಂತಾದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕು. ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳ ಜೊತೆ ಅಧಿಕಾರಿಗಳು ಸಭೆಯಲ್ಲಿ ಖುದ್ದು ಹಾಜರಿರಬೇಕು. ಮಕ್ಕಳ ಸಭೆ ಅಲ್ಲವೇ ಎಂದು ಯಾರು ಸಹ ನಿರ್ಲಕ್ಷ್ಯ ತೋರುವಂತಿಲ್ಲ. ಸಾಮಾನ್ಯ ಗ್ರಾಮ ಸಭೆಗಳಿಗಿರುವಷ್ಟು ಪ್ರಾಮುಖ್ಯತೆ ಈ ಮಕ್ಕಳ ಸಭೆಗೂ ಇರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆ; ರಾಜಕೀಯ ಪಕ್ಷಗಳೊಂದಿಗೆ ಜಾಹಿರಾತು ದರ ನಿಗದಿ ಸಭೆ

ಸುದ್ದಿದಿನ,ದಾವಣಗೆರೆ : 2024 ರಲ್ಲಿ ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮುದ್ರಣ, ವಿದ್ಯುನ್ಮಾನ ಮಾಧ್ಯಮ, ಕೇಬಲ್ ಟಿ.ವಿ ಗಳಲ್ಲಿ ಪ್ರಚಾರ ಮಾಡಲು ನಿಗದಿ ಮಾಡಿರುವ ಜಾಹಿರಾತು ದರದ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನವೆಂಬರ್ 10 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಯಿತು.
ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳು ರಾಜ್ಯ ಮಟ್ಟದ ಪತ್ರಿಕೆಗಳು, ಸ್ಥಳೀಯ, ಪ್ರಾದೇಶಿಕ, ವಾರಪತ್ರಿಕೆ, ಕೇಬಲ್ ಟಿ.ವಿ.ಗಳಲ್ಲಿ ನೀಡುವ ಚುನಾವಣಾ ಜಾಹಿರಾತುಗಳಿಗೆ ಅನ್ವಯಿಸುವ ದರದ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರಿಗೆ ತಿಳಿಸಲಾಯಿತು.
ಚುನಾವಣಾ ಸಂದರ್ಭದಲ್ಲಿ ಎಂಸಿಎಂಸಿ ಸಮಿತಿಯು ಕಾರ್ಯನಿರ್ವಹಿಸಲಿದ್ದು ಇದರ ಎಲ್ಲಾ ಮೇಲ್ವಿಚಾರಣೆ ನಡೆಸಲಿದೆ. ಅಭ್ಯರ್ಥಿಗಳು ನೀಡುವ ಜಾಹಿರಾತು ವೆಚ್ಚವು ಸಹ ಅಭ್ಯರ್ಥಿಗಳಿಗೆ ವೆಚ್ಚಕ್ಕೆ ನಿಗದಿಪಡಿಸಿರುವ ಮೊತ್ತದಲ್ಲಿ ಸೇರಲಿದೆ ಎಂದು ಪಕ್ಷಗಳ ಮುಖಂಡರಿಗೆ ಮನವರಿಕೆ ಮಾಡಿದರು.
ಸಭೆಯಲ್ಲಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಜಿ.ಸಿ.ರಾಘವೇಂದ್ರ ಪ್ರಸಾದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಧನಂಜಯ, ಚುನಾವಣಾ ತಹಶೀಲ್ದಾರ್ ಅರುಣ್ ಎಸ್.ಕಾರ್ಗಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days ago
ಚನ್ನಗಿರಿ | ಅತಿಥಿ ಉಪನ್ಯಾಸಕರಿಂದ ಅನಿರ್ದಿಷ್ಟಾವಧಿ ಮುಷ್ಕರ ; ತಹಶೀಲ್ದಾರರಿಗೆ ಮನವಿ
-
ದಿನದ ಸುದ್ದಿ6 days ago
ದೇಹದಾಡ್ಯ ಸ್ಪರ್ಧೆ | ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪ್ರೇಮ್ ಕುಮಾರ್ ಗೆ ‘ಮಿಸ್ಟರ್ ದಾವಣಗೆರೆ’ ಪ್ರಶಸ್ತಿ
-
ದಿನದ ಸುದ್ದಿ2 days ago
ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್
-
ದಿನದ ಸುದ್ದಿ5 days ago
ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು
-
ದಿನದ ಸುದ್ದಿ2 days ago
ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ