Connect with us

ಲೈಫ್ ಸ್ಟೈಲ್

ನಾಡಿಗೆ ಬಂದ ಕಾಡುಕೋಣ..!

Published

on

ಸಾಂದರ್ಭಿಕ ಚಿತ್ರ
  • ಪಶುವೈದ್ಯರುಗಳ ಪೇಷಂಟುಗಳು ಬರೀ ದನ, ಎಮ್ಮೆ, ಕೋಳಿ,ಕುರಿ, ಆಡು, ನಾಯಿ, ಬೆಕ್ಕು, ಕೋಳಿ, ಹಂದಿ ಇತ್ಯಾದಿಗಳಿಗೆ ಸೀಮಿತವಾಗಿರದೆ ಮೊಲ, ಇಲಿ, ಕೋತಿ, ಆಮೆ, ಹುಲಿ, ಸಿಂಹ, ಒಂಟೆ, ಆನೆ, ಚಿರತೆ, ಹಾವು , ನರಿ, ಜಿಂಕೆ, ಕಡಿವೆ ಇತ್ಯಾದಿ ತರಹೇವಾರಿ ವನ್ಯಜೀವಿಗಳ ಚಿಕಿತ್ಸೆ ಮತ್ತು ಜೀವನ ಕ್ರಮದ ಬಗ್ಗೆಯೂ ತಿಳಿದುಕೋಂಡಿರಬೇಕಾಗುತ್ತದೆ. ಕೆಲವೊಮ್ಮೆ ಈ ಪ್ರಾಣಿಗಳನ್ನು ಚಿಕಿತ್ಸೆ ಮಾಡುವಾಗ ಸಾಕಷ್ಟು ಅಪಾಯವೂ ಕಾದಿರುತ್ತದೆ. ಗಾಯಗೊಂಡ ಕಾಡುಕೋಣವೊಂದರ ಚಿಕಿತ್ಸೆಯ ರೋಚಕ ಅನುಭವ.

ಡಾ. ಎನ್.ಬಿ.ಶ್ರೀಧರ

ನಿವಾರವೊಂದರ ಮಧ್ಯಾಹ್ನ 11 ಘಂಟೆಯಿರಬಹುದು. ಆ ದಿನ ತಾಳಗುಪ್ಪದಲ್ಲಿ ಸಂತೆ. ಆಸ್ಪತ್ರೆಯಲ್ಲಿ ಗಿಜಿಗುಟ್ಟುವಷ್ಟು ಜನ ಮತ್ತು ತರಹೆವಾರಿ ಕೇಸುಗಳು. ಹುಳವಾಗಿ ಗಬ್ಬು ನಾರುವ ಗಾಯದಿಂದ ಹಿಡಿದು ಸಂತಾನಹರಣ ಚಿಕಿತ್ಸೆಗೆಂದು ಕಾಯುತ್ತಿರುವ ಪಕ್ಕದ ತಾಲೂಕು ಸೊರಬದ ಶ್ವಾನಗಳ ಸವಾರಿ ಕ್ಯೂನಲ್ಲಿತ್ತು. ಒಳರೋಗಿಗಳಾಗಿ ಮಾಡಿಕೊಂಡ ಕೆಲವು “ಪೇಷಂಟು”ಗಳ ಚಿಕಿತ್ಸೆಯೂ ಕಾದಿತ್ತು. ನಾನೇ ಪ್ರಯೋಗಕ್ಕೆಂದು ತಂದು ಸಂಶಯಿತ ವಿಷಗಿಡಗಳನ್ನು ತಿನ್ನಿಸುಸುತ್ತಿರುವ ಕರುಗಳ ಗುಂಪಿತ್ತು. ಮನೆಗೆ ಚಿಕಿತ್ಸೆಗೆ ಕರೆದಿರುವ “ಟೂರಿಂಗ್ ಪೇಷಂಟು”ಗಳ ಪಟ್ಟಿಯೂ ಸಹ ಬೆಳೆಯುತ್ತಿತ್ತು.

ಅಷ್ಟರಲ್ಲೇ ನನ್ನ ಶಿಷ್ಯ “ಸಾರ್..ಡಿ ಎಪ್ ಓ ಅವರು ಲೈನಿನಲ್ಲಿದ್ದಾರೆ. ಗರಂ ಆಗಿದಾರೆ.. ನಿಮ್ಮ ಜೊತೆ ಮಾತಾಡಬೇಕಂತೆ “ ಎಂದ. ಯಾವುದೋ ಕಾಡು ಕೋಣವೋ ಅಥವಾ ಹುಲಿ ಸಿಂಹ, ಜಿಂಕೆ ಇತ್ಯಾದಿ ವನ್ಯೃಗಗಳು ಕಾಡಿನಲ್ಲಿ ಸತ್ತಿರಬೇಕು. ಮರಣೋತ್ತರ ಪರೀಕ್ಷೆ ಮಾಡಲು ಕರೆಯುತ್ತಿದ್ದಾರೆ. ಈ ದಿನ ಹಳ್ಳ ಹಿಡಿಯಿತು. ದೇಶದ ಆರ್ಥಿಕತೆಗೆ ನಮ್ಮ ಹಸು ಎಮ್ಮೆಗಳಂತೆ ಒಂದಿನಿತೂ ಕೊಡುಗೆ ನೀಡದ, ಕರದಾತರು ಕಷ್ಟಪಟ್ಟು ನೀಡಿದ ಹಣವನ್ನು ಜೀವವೈವಿಧ್ಯದ ಸಂರಕ್ಷಣೆಯ ಹೆಸರಿನಲ್ಲಿ ನುಂಗಿ ನೀರು ಕುಡಿಯುತ್ತಿರುವ ಅಧಿಕಾರಿಗಳ ಗುಂಪೊಂದರ ಪುನರ್ವಸತಿಯಾಗಿ ಕೇಂದ್ರವಾಗಿ ಮಾರ್ಪಟ್ಟ ಇಲಾಖೆಯೆಂದು ನನ್ನ ಮಿತ್ರ ಹೇಳುವ ಅರಣ್ಯ ಇಲಾಖೆಯ ಯಾವುದೋ ಕಾಡು ಪ್ರಾಣಿ ಸತ್ತರೆ ಎಲ್ಲ ಕೆಲಸ ಬದಿಗೊತ್ತಿ ಅದರ ಕೊಳೆತು ಹೋದ ಶವಪರೀಕ್ಷೆಗೆ ಇಲ್ಲಿಂದ ಹೋಗಬೇಕಾದ ಅನಿವಾರ್ಯತೆಯನ್ನು ಶಪಿಸುತ್ತಾ ಫೋನು ಎತ್ತಿದೆ. ಆಕಡೆಯಿಂದ “ ಡಾಕ್ಟ್ರೇನ್ರಿ.. ಎಷ್ಟೊತ್ರಿ ಬರೋದು? ನಾನು ಸಾಗರ ಡಿಎಪ್ಪೋ ಕಣ್ರೀ… ತುಮರಿ ಹತ್ರ ಕಾಡುಕೋಣ ಅಡಿಕೆ ತೋಟದಲ್ಲಿ ಮನೆ ಮಾಡಿ ಬಿಟ್ಟಿದೆ.. ಅದ್ಕೆ ಒಂದಿಷ್ಟು ಚಿಕಿತ್ಸೆ ಆಗ್ಬೇಕಿತ್ತು.. ತುಮರಿಗೆ ಬೇಗ ಬಂದ್ಬಿಡಿ.. ಈ ಪೇಪರ್ರಿನವರು ತಲೆ ತಿಂತಾ ಇದ್ದಾರೆ” ಎಂದು ಅವರ ಅಧಿಕಾರಿ ಗತ್ತಿನಲ್ಲೇ ಗಾರ್ಡು ಫಾರೆಸ್ಟರುಗಳಿಗೆ ನೀಡುವಂತೆ ಆದೇಶ ನೀಡಿದರು.

ಇದೊಳ್ಳೆ ಕಥೆಯಾಯ್ತಲ್ಲ !! ದನದ ಚಿಕಿತ್ಸೆ ಬಿಟ್ಟು ಈ ಕಾಡುಕೋಣದ ಚಿಕಿತ್ಸೆಗೆ ಹೋಗ್ಬೇಕಲ್ಲ ? ಎಲ್ಲೋದ್ರು ಈ ಕಾಡುಪ್ರಾಣಿ ಡಾಕ್ಟರುಗಳು? ಎಂದು ಪರಿಚಿತರಾದ ಅರಣ್ಯ ಇಲಾಖೆಯ ಸ್ನೇಹಿತ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಫೋನಾಯಿಸಿದೆ. ಅದರ ಪ್ರವರ ತಿಳಿಯಿತು.

“ಅಡಿಕೆ ತೋಟದಲ್ಲಿ ಮನೆ ಮಾಡಿದ ಕಾಡುಕೋಣ” “ಕಾಡಿನಿಂದ ನಾಡು ಸೇರಿದ ಕಾಡುಕೋಣ” ಇತ್ಯಾದಿ ಶಿರ್ಷಿಕೆಯ ಸುದ್ಧಿಗಳು ದಿನಪತ್ರಿಕೆಗಳಲ್ಲಿ ಬರತೊಡಗಿದ ಮೇಲೆಯೇ ನಮಗೆ ಗೊತ್ತಾಗಿದ್ದು ಕಾಡುಕೋಣವೊಂದು ತುಮರಿ ಭಾಗದ ಹೆಗಡೆಯೊಬ್ಬರ ತೋಟ ಸೇರಿ ಅಲ್ಲಿಯೇ ಠಿಕಾಣಿ ಹೂಡಿದೆ ಎಂದು. ಸಾಮಾನ್ಯವಾಗಿ ನಮ್ಮ ಜಾನುವಾರುಗಳ ಜಂಜಾಟದಲ್ಲಿಯೇ ಮುಳುಗಿಹೋಗುವ ನಾವು ಆಗೆಲ್ಲ ಕಾಡುಪ್ರಾಣಿಗಳ ಚಿಕಿತ್ಸೆಗೆ ಹೋಗುವುದು ಕಡಿಮೆಯಾಗಿತ್ತು. ಅದಕ್ಕೆಂದೇ ಶಿವಮೊಗ್ಗದಲ್ಲಿ ಅರಣ್ಯ ಇಲಾಖೆಯಲ್ಲಿರುವ ಇರುವ “ಆನೆ ಡಾಕ್ಟರು” ಹುಲಿ ಸಿಂಹ” ಡಾಕ್ಟರುಗಳಾದ ವನ್ಯಜೀವಿ ಪಶುವೈದ್ಯರು ಬಂದು ಏನೇನು ಬೇಕೋ ಅದೆಲ್ಲಾ ಕ್ರಮ ತೆಗೆದುಕೊಳ್ಳುತ್ತಿದ್ದರು.

ಅದರೆ ಆಗ ವನ್ಯಜೀವಿ ತಜ್ಞ ಪಶುವೈದ್ಯರು ದೂರದೂರಿನಲ್ಲಿ ಪುಂಡ ಕಾಡಾನೆಗಳು ಊರು ನುಗ್ಗಿ ದಾಂಧಲೆ ಎಬ್ಬಿಸಿದ್ದರಿಂದ ಅವುಗಳ ತರಲೆ ನಿಲ್ಲಿಸಿ ಖೆಡ್ಡಾಕ್ಕೆ ಕೆಡವಲು ನಾಡಾನೆಗಳನ್ನು ತೆಗೆದುಕೊಂಡು ಹೋಗಿ ಕೊಡಗಿನ ಹತ್ತಿರ ಯಾವುದೇ ಹಳ್ಳಿಯಲ್ಲಿ ಕಳೆದು ೧೫ ದಿನಗಳಿಂದ ಬೀಡು ಬಿಟ್ಟಿದ್ದು ಅವರು ಬಂದು ಈ ಕಾಡು ಪ್ರಾಣಿಯ ಚಿಕಿತ್ಸೆ ಮಾಡುವವರೆಗೆ ದಿನನಿತ್ಯ ಕಾಟಕೊಡುವ ದಿನಪತ್ರಿಕೆಗಳಿಂದ ಬಚಾವಾಗಲು ಡಿಎಪ್ಪೋ ನನಗೆ ಫೋನಾಯಿಸಿದ್ದಾರೆಂದೂ, ಸಾಗರ ಪಶುವೈದ್ಯ ಆಸ್ಪತ್ರೆಯ ಪಶುವೈದ್ಯರೆಲ್ಲ ತುಮರಿ ಏರಿಯಾವು ನನ್ನ ವ್ಯಾಪ್ತಿಯಲ್ಲಿ ಬರುವುದರಿಂದ ನನಗೆ ತಿಳಿಸಲು ಸೂಚಿಸಿದ್ದಾರೆಂದೂ ತಿಳಿಯಿತು.

ಸರಿ ನಮ್ಮಾಸ್ಪತ್ರೆಯಿಂದ ಯಾವ ರೂಟಿನಲ್ಲೇ ಹೋದರು 60-70 ಕಿಲೋಮೀಟರು ಇರುವ ತುಮರಿಗೆ ಹೋಗಲು ಎಲ್ಲಾ ಚಿಕಿತ್ಸಾ ಪರಿಕರಗಳನ್ನು ಸಿದ್ಧ ಮಾಡಿಕೊಳ್ಳಲು ನನ್ನ ಶಿಷ್ಯನಿಗೆ ತಿಳಿಸಿದೆ. ಕಾಡು ಪ್ರಾಣಿಗಳಿಗೆ ಅರಿವಳಿಕೆ ನೀಡುವ ಡಾರ್ಟ್ ಗನ್ನು ಇಲ್ಲವೆಂದೂ, ಕಾಡೆಮ್ಮೆ (ಕಾಡು ಕೋಣ?), ಮೈಮೇಲೆ ಬಂದರೆ ಕಷ್ಟವಿದೆಯೆಂದೂ ಯಾವುದಕ್ಕೂ ಮನೆಗೆ ಹೋಗಿ ತಿಳಿಸಿ ಬರುವೆನೆಂದೂ ನನ್ನ ಶಿಷ್ಯ ಮನೆಗೆ ಹೊರಟ.

ತುಮರಿ, ಬ್ಯಾಕೋಡು, ಕಾರ್ಗಲ್ಲು, ಶಿರವಂತೆ, ಅರಳಗೋಡು, ಕೊಂಜವಳ್ಳಿ, ಸೈದೂರು ಇತ್ಯಾದಿ ಈಗ ಆಸ್ಪತ್ರೆಯಾಗಿರುವ ಸುಮಾರು 90ಕಿಲೋಮೀಟರ್ ವ್ಯಾಪ್ತಿಯ ವಿಸ್ತಾರ ಪ್ರದೇಶಗಳಿಗೆ ಏಕೈಕ ತಜ್ಞ ಪಶುವೈದ್ಯನಾದ ನಾನು ಈ ಭಾಗದಲ್ಲಿ ಯಾವುದೇ ನಾಡು ಅಥವಾ ಕಾಡು ಪ್ರಾಣಿಗಳಿಗೆ ತೊಂದರೆಯಾದರೂ ಮರಣೋತ್ತರ ಪರೀಕ್ಷೆ ಅಥವಾ ಚಿಕಿತ್ಸೆ ನೀಡುವ ಮಹತ್ತರ ಜವಾಬ್ದಾರಿ ಹೊತ್ತು ಕೊಂಡಿದ್ದೆ.

ಎಂದಿನಂತೆ ನನ್ನ ಸುಜ಼ುಕಿ ಸವಾರಿ ನನ್ನ ಶಿಷ್ಯನ ಜೊತೆ ತುಮರಿ ಕಡೆ ಹೊರಟಿತು. ಸಾಗರ ಸೇರಿ ಸಾಗರದಿಂದ ಹೊಳೆಬಾಗಿಲಿನ ಬಾರ್ಜು ದಾಟಿ ಇನ್ನೂ 25 ಕಿಮಿ ಅಂಕು ಡೊಂಕಾದ ರಸ್ತೆಗಳಲ್ಲಿ ಸಾಗಿ ಕಾಡುಕೋಣದ ವಿಷಯ ಕೇಳುತ್ತಾ ಸಾಗಿದೆವು. ಗಮನದ ಹಳ್ಳಿ ತಲುಪಿ ಅಲ್ಲಿ ಹೆಗ್ಡೇರ ತೋಟದಲ್ಲಿ ಗಮಯದ ಜಾಡು ಹಿಡಿದು ಸಾಗಿದೆವು. ಬೈಕಿನಲ್ಲಿ ಸಾಗಿ ಸಾಗಿ ಬೇಸರ ಎಷ್ಟೊತ್ತಿಗಪ್ಪಾ ಈ ಊರು ಬರುತ್ತೆ ಎನ್ನುವಷ್ಟರಲ್ಲಿ ಗಮಯದ ಉಗಮ ಸ್ಥಾನ ಬಂತು.

ಗಮಯದ ಸುತ್ತ ಜನವೋ ಜನ. ಕೆಲವು ಅರಣ್ಯ ಇಲಾಖೆ ಸಿಬ್ಬಂದಿ ಜಮೆಯಾಗಿ ಅವರ ಅಮೂಲ್ಯ ವಸ್ತುವಿನ ರಕ್ಷಣೆ ಮಾಡುತ್ತಿದ್ದರು. ಒಂದೆರಡು ಪೋಲೀಸ್ ಸಿಬ್ಬಂದಿಯೂ ಸಹ ಜನರ ಬೀಡು ಕಡಿಮೆ ಮಾಡಲು ಹರ ಸಾಹಸ ಪಡುತ್ತಿದ್ದರು. ಹೋಯ್.. ಹೋಯ್… ಡಾಕ್ಟ್ರು ಬಂದ್ರು .. ದಾರಿ ಬಿಡಿ” ಎನ್ನುವ ಆಜ್ಞೆ ಪೋಲೀಸರಿಂದ ಬಂದು ಎಲ್ಲಾ ಜನರಿಂದ ನಾನೇ ಫ಼ೋಕಸ್ಸಾದೆ. ಕಾಡು ಕೋಣವನ್ನು ಸುಮಾರು ೧೫ ಅಡಿ ದೂರದಿಂದ ನೋಡಿದೆ. ಬಿಳಿಯ ಪಟ್ಟಿಯ ಕುತ್ತಿಗೆ, ಕಟ್ಟು ಮಸ್ತಾದ ದೇಹ, ರಾಜಗಾಂಭೀರ್ಯದಲ್ಲಿ ಇರಬೇಕಾದ ಕಾಡುಕೋಣ ಲಾಚಾರ್ ಎದ್ದು ಬಡ್ಕಾಟೆ ಹೆಣದಂತೆ ಹಿಂಡಿ ನೀಡದೇ ಇರುವ ಏಳಲು ಸಾಧ್ಯವಾಗದ ಮುದಿ ಎಮ್ಮೆಯಾಗಿ ಹೋಗಿತ್ತು. ಆದರೂ ಅದರ ಸ್ಥಿತಿ ಗಮನಿಸಲು ಸ್ವಲ್ಪ ಹತ್ತಿರ ಹೋದರೆ ಬುಸ್ ಎಂದು ಶಬ್ಧ ಮಾಡುತ್ತಾ ಏರಿ ಬಂತು.

ಸರಿಯಾಗಿ ಗಮನಿಸಿದಾಗ ಮುಂದಿನ ಬಲಗಾಲಿನ ಮೇಲ್ಬಾಗ ಉಬ್ಬಿದಂತೆ ಕಂಡು ಬಂತು. ಇದರ ಚಿಕಿತ್ಸೆ ಮಾಡದೇ ಇದ್ದರೆ ಸತ್ತು ಹೋಗುವುದು ಗ್ಯಾರಂಟಿ ಅನ್ನಿಸಿತು. ಅರಣ್ಯ ಇಲಾಖೆಯವರಿಗೆ “ ಈ ಕೋಣನ್ನ ಹೇಗಾದ್ರೂ ಹಿಡಿದು ಕೊಟ್ರೆ, ಅದಕ್ಕೆ ಅರಿವಳಿಕೆ ಚುಚ್ಚುಮದ್ದು ನೀಡಿ ಏನಾದರೂ ಮಾಡಬಹುದು. ನಮ್ಮ ಹತ್ತಿರ ಅರಿವಳಿಕೆಯನ್ನು ದೂರದಿಂದಲೇ ನೀಡುವ “ಡಾರ್ಟ್ ಗನ್” ಇರದೇ ಇರುವುದರಿಂದ ಯಾವುದೇ ಕ್ಷಣದಲ್ಲಿ ಕಾಡು ಕೋಣ ನುಗ್ಗಿದರೆನಾಮಾವಶೇಷವಾಗುವ ಸಾಧ್ಯತೆ ಇತ್ತು. ಅದು ಕೃಷವಾಗಿರುವುದನ್ನು ಗಮನಿಸಿದರೆ ಅದಕ್ಕೆ ಗಂಭೀರವಾದ ಕಾಯಿಲೆ ಇರುವುದು ಗ್ಯಾರಂಟಿಯಾಗಿತ್ತು. ಚಿಕಿತ್ಸೆ ಮಾಡದೇ ಇದ್ದರೆ ಸತ್ತು ಯಮಪುರಿ ಸೇರಿ ಖಾಯಂ ಆಗಿ ಯಮನ ವಾಹನ ಆಗುವ ಸಾಧ್ಯತೆ ಇತ್ತು.

ನನ್ನ ಶಿಷ್ಯ ಖಾಯಂ ಎಮ್ಮೆಗಳನ್ನು ಕೆಡಗಿ ಅಭ್ಯಾಸ ಇದ್ದಾತ. ಆತ “ ಸಾರ್.. ಒಂದು ಕೈ ನೋಡಿಯೇ ಬಿಡ್ಲಾ ಸಾರ್.. ಕಾಡುಕೋಣ ಹ್ಯಾಂಗಿದ್ರೂ ಬಡಕಲಾಗಿದೆ. ನಮ್ಮ ಎಮ್ಮೆಗಳಷ್ಟೇ ತಾಕತ್ತು ಇರ್ಬಹುದು, ಹಗ್ಗ ಹಾಕಿ ಕೆಡವಿ ಬಿಡ್ತೀನಿ “ ಎಂದು ಹುಂಬ ಧೈರ್ಯ ತೋರಿದ. ನಾನು ಮಾತ್ರ ಈ ರಿಸ್ಕ್ ತೆಗೆದುಕೊಳ್ಳಲು ಸುತರಾಂ ಸಿದ್ದವಿರಲಿಲ್ಲ. ಎಲ್ಲಾದರೂ ನಮ್ಮ ಅಂದಾಜು ತಪ್ಪಿ ಈ ಕಾಡುಕೋಣ ನುಗ್ಗಿ ಯಾರನ್ನಾದರೂ ಕೆಡಗಿ ಕೊಂದರೆ ಯಾರು ಜವಾಬ್ದಾರರರು? ಎಂದು “ ಈ ಕಾಡು ಪ್ರಾಣಿ ಸಹವಾಸ ಸಾಕಪ್ಪಾ.. ಅದರ ಡಾಕ್ಟರುಗಳು ಬಂದು ಏನಾದರೂ ಮಾಡ್ಲಿ. ನಮ್ಮಿಂದ ದನ ಆರಾಮವಾದ್ರೆ ಸಾಕು” ಎಂದು ರಾಗ ಎಳೆದೆ. ಆದರೂ ವೃತ್ತಿಯ ತುಡಿತ ಇದೆಯಲ್ಲ.. ಏನಾದರೂ ಮಾಡಲೇ ಬೇಕು. ಸುತ್ತ ಮುತ್ತ ಸೇರಿದ ಜನ ಎಲ್ಲಾ ತರಹೇವಾರಿ ಕಾಮೆಂಟು ಪಾಸು ಮಾಡಲಿಕ್ಕೆ ಪ್ರಾರಂಭಿಸಿದರು.

ಅವರೊಲ್ಲಬ್ಬ “ಇವರು ದನಕ್ಕೆ ಮಾತ್ರ ಡಾಕ್ಟರು. ಎಮ್ಮೆ ಮುಕಳಿ ಒಳಗೆ ಕೈ ಹಾಕಿ ಇನ್ಸೆಮಿನೇಷನ್ ಮಾಡೋದು ಮಾತ್ರ ಇವರಿಗೆ ಕಲ್ಸಿರ್ತಾರೆ. ಈ ಕಾಡುಕೋಣದ ಟ್ರೀಟ್ಮೆಂಟಿಗೆಲ್ಲಾ ಮೈಸೂರಿನಿಂದ ಎಕ್ಸ್ಪರ್ಟ್ಸ್ ಬರ್ಬೇಕು. ಸುಮ್ನೇ ಟೈಮ್ ಪಾಸಿಗೆ ಬಂದಿದ್ದಾರೆ. ಅದ್ರ ಜೊತೆ ಈ ಫ಼ಾರೆಸ್ಟ್ ಖಾತೆ ಜನಾ ಬೇರೆ ದಂಡ” ಎಂದು ನನ್ನ ವೃತ್ತಿಯ ಘನತೆಯನ್ನು ಮೂರುಕಾಸಿಗಿಳಿಸಿ ನಿವಾಳಿಸಿ ಬಿಸಾಡಿದ ಹಾಗೂ ಫ಼ಾರೆಸ್ಟು ಇಲಾಖೆಯವರು ಕಳ್ಳ ನಾಟಾ ಮಾಡುತ್ತಿದ್ದ ಕೆಲ ಹಳ್ಳಿಯ ಜನರನ್ನು ಕುಂಡೆಯ ಮೇಲೆ ಹಾಕಿ ಕಟಕಟೆ ಒಳಗೆ ಹಾಕಿದ ಹಳೆ ಸೇಡು ತೀರಿಸಿಕೊಂಡ. ಹಳ್ಳಿಯಲ್ಲಿ ರಾತ್ರಿ ,10 ಘಂಟೆಗೆ ಕರು ಅಡ್ಡ ಸಿಕ್ಕಿಹಾಕಿಕೊಂಡಾಗ ಎಣ್ಣೆಯ ಮತ್ತನ್ನು ಏರಿಸಿಕೊಂಡವರಿಂದ ಈ ತರಹದ ಮಾತು ಕೇಳಿ ಅಭ್ಯಾಸವಾಗಿ ಹೋದ ನಾನು ಇದನ್ನು ಸೀರಿಯಸ್ ಆಗಿ ತೆಗೆದುಕೊಳ್ಳಲೇ ಇಲ್ಲ. ಆದರೆ ನನ್ನ ಶಿಷ್ಯನಿಗೆ ಮಾತ್ರ ನಖಶಿಖಾಂತ ಕೋಪ ಬಂದಿತ್ತು.

ಆತ “ಸಾರ್. ಏನೂ ತೊಂದರೆ ಇಲ್ಲದಂತೆ ಅದನ್ನು ಕೆಡಗಿ ಕೊಡ್ತೀನಿ ಸಾರ್. ಇಂಜೆಕ್ಷನ್ ಹಾಕಿ ಅನೇಸ್ಠೇಸಿಯಾ ಕೊಟ್ಟು ಕೆಲಸ ಮಾಡಿ.. ಫ಼ಾರೆಸ್ಟ್ ಡಿಪಾರ್ಟ್ಮೇಂಟಿನವರೂ ಸಹಾಯ ಮಾಡ್ತಾರೆ” ಅಂದ. ಅಷ್ಟು ಹೊತ್ತು ನಮ್ಮ ಪರಿಪಾಟಲು ನೋಡಿ ಮಜಾ ತಗಳ್ತಿದ್ದ ಅರಣ್ಯ ಇಲಾಖೆಯ ಗಾರ್ಡು ಫ಼ಾರೆಸ್ಟರುಗಳೂ ಜನರ ಮಾತಿನಿಂದ ರೇಗಿ ಏನಾದರೂ ಮಾಡಲೇಬೇಕೆಂಬ ತೀರ್ಮಾನಕ್ಕೆ ಬಂದಾಗಿತ್ತು, ಅವರು ನಾಟಾ ಸಾಗಿಸಲು ಕಳ್ಳ ಸಾಗಣೆಗೆ ಉಪಯೋಗಿಸುತ್ತಿದ್ದ ಸೀಜ಼್ ಮಾಡಿದ ದಪ್ಪನೇ ಹಗ್ಗ ತಂದರು.

ಅದನ್ನು ಎಂಟತ್ತು ಅಡಿಕೆ ಮರದ ಸುತ್ತ ಕಟ್ಟಿ ಕಾಡು ಕೋಣ ಹಗ್ಗದ ಕೋಟೆ ಒಳಗೆ ಭದ್ರವಾಗುವಂತೆ ದಿಗ್ಭಂಧನ ಹಾಕಿದರು. ಕಾಡುಕೋಣ ಇರುವ ಜಾಗದ ಸುತ್ತ ಗೂಟದ ಬೇಲಿ ರೆಡಿಯಾಗಿ ಅಕ್ಷರಷ: ಕೊರೋನಾ ಪೀಡಿತರನ್ನು ಕ್ವಾರಂಟೈನಿನೊಳಗೆ ಹಾಕಿದ ಹಾಗೇ ಲಾಕ್ ಮಾಡಿದರು. ಆದರೆ ಕೋಣಕ್ಕೆ ಅನೇಶ್ಥೆಸಿಯಾ ಇಂಜೆಕ್ಷನ್ ಚುಚ್ಚಬೇಕಲ್ಲ. “ಯಾರಾದ್ರೂ ಬಂದು ಇದನ್ನು ಮಾಂಸದಲ್ಲಿ ತೂರಿಸ್ರೋ” ಎಂದು ಸಿರಿಂಜಿನಲ್ಲಿ ತಕ್ಕ ಪ್ರಮಾಣದ ಅನೇಸ್ಥೆಸಿಯಾ ಚುಚ್ಚುಮದ್ದು ಲೋಡ್ ಮಾಡಿ ನೀಡಲು ಹೋದೆ. ಯಾರೂ ಮುಂದೆ ಬರಲಿಲ್ಲ.

ಒಂದು ಉಪಾಯ ಹೊಳೆಯಿತು. ನಾವು ನಿರ್ಮಿಸಿದ ಕೋಟೆಯೊಳಗೆ ಒಂದಿಷ್ಟು ಮುರುಗಲು ಮತ್ತು ಕೋಕೋ ಗಿಡಗಳಿದ್ದವು. ಅವುಗಳ ಮೇಲೆ ಹತ್ತಿ ಕುಳಿತರೆ ಮತ್ತು ಕಾಡುಕೋಣವನ್ನು ಅಲ್ಲಿಗೆ ನಿಧಾನವಾಗಿ ಚಲನೆಯಾಗುವಂತೆ ನೋಡಿಕೊಂಡರೆ ಅದಕ್ಕೆ ಕಚಕ್ ಎಂದು ಇಂಜೆಕ್ಷನ್ ಚುಚ್ಚಿಬಿಡುವ ಎಂದುಕೊಂಡೆ. ಆದರೆ ಇಲ್ಲಿ ತುಂಬಾ ರಿಸ್ಕ್ ಇತ್ತು. ಆದರೆ ಮೊದಲೇ ಗಾಯಾಳು ಕೋಣ, ಖಂಡಿತಾ ರೋಷ ಭರಿತವಾಗಿರುತ್ತದೆ. ಏನಾದರೂ ಹೆಚ್ಚುಕಮ್ಮಿ ಆಗಿ ಆಯ ತಪ್ಪಿದರೆ ಅದರ ಮೇಲೆಯೇ ಬೀಳುವ ಸಾಧ್ಯತೆ ಇತ್ತು. ಬಿದ್ದರೆ ತುಳಿದು ಖಂಡಿತಾ ತುಳಿದು ಯಮಪುರಿಗೆ ಕಳಿಸುತ್ತಿತ್ತು.

ಯಾರಿಗಾದರೂ ಮರ ಹತ್ತಿ ಅದು ಕೆಳಗೆ ಬಂದೊಡೆ ಇಂಜೆಕ್ಷನ್ ಚುಚ್ಚಿ ಎಮ್ದರೆ ಎಲ್ಲರೂ ಹೆದರು ಪುಕ್ಕಲರೆ. ಮತ್ತೆ ಕೆಲವರು ಹೊಟ್ಟೆ ಹೊತ್ತ ದಡೂತಿಗಳು. ಅಲ್ಲಿ ಇರುವವರಲ್ಲಿ ನಾನೇ ತೆಳ್ಳಗಿರುವವ. ಏನಾದರಾಗಲಿ ಎಂದು ಅನಸ್ಥೆಸಿಯಾವನ್ನು ತುಂಬಿಸಿದ ಸಿರಿಂಜ್ ಕೈಲಿ ಹಿಡಿದು ಅದು ನೇರವಾಗಿ ಕೆಳಗೆ ಬರಬಹುದಾದ ಕೋಕೋ ಗಿಡದ ಮೇಲೆ ಏರಿದೆ. ಕಾಡುಕೋಣವನ್ನು ಮರದ ಕೆಳಗೆ ಬಂದು ನಿಲ್ಲುವಂತೆ ಬೆದರಿಸಲು ಸೂಚಿಸಿದೆ.

ಹಲವು ರೌಂಡ್ ಕಾರ್ಯಾಚರಣೆಯ ನಂತರ ಯಾವುದೋ ಗಳಿಗೆಯಲ್ಲಿ ಕಾಡು ಕೋಣ ನಾನು ಮೇಲೆ ಇದ್ದ ಕೊಂಬೆಯ ಕೆಳಗೆ ಬಂದು ನಿಂತಿತು. ಇದೇ ಅವಕಾಶವೆಂದು ಅದರ ಹಿಂಬಾಗದ ಪ್ರಷ್ಠದ ಮೇಲೆ ಸೂಜಿಯ ಸಮೇತ ಸಿರಿಂಜ್ ಚುಚ್ಚಿ ಸರಕ್ಕನೇ ಔಷಧಿ ಸೇರಿಸಿದೆ. ಆಯ ತಪ್ಪಿ ಕೆಳಗೆ ಬಿದ್ದ ಹೊಡೆತಕ್ಕೆ ಕಾಡುಕೋಣದ ಎದುರು ಅಂಗಾತ ಬಿದ್ದೆ. ಇನ್ನೇನು ಕಾಡುಕೋಣ ನನ್ನನ್ನು ತಿವಿಯಬೇಕು.. ನೋಡ್ತೀನಿ .. ಏನೂ ಶಬ್ಧ ಇಲ್ಲ.

ನಾನು ಕೊಟ್ಟ ಅರಿವಳಿಕೆಯ ಪ್ರಭಾವದಿಂದ ಕಾಡುಕೋಣ ಧರಾಶಾಯಿಯಾಗಿತ್ತು.
ಕೂಡಲೇ ನನ್ನ ಶಿಷ್ಯ ಮತ್ತು ಅರಣ್ಯ ಇಲಾಖೆಯವರು ಕಾಡುಕೋಣವನ್ನು ನಾಡುಕೋಣ ಕಟ್ಟಿದಂತೆ ಹಗ್ಗದಿಂದ ಏಳದಂತೆ ಕ್ಷಣಮಾತ್ರದಲ್ಲಿ ಬಂಧಿಸಿದರು. ಕಾಡುಕೋಣದ ಮುಂಗಾಲಿನ ಮೇಲ್ಬಾಗದಲ್ಲಿ ಕೀವಿನಿಂದ ಕೂಡಿದ ಗಡ್ಡೆಯಿತ್ತು. ಸಾವಧಾನವಾಗಿ ಅದನ್ನು ಓಪನ್ ಮಾಡಿದಾಗ ಟಕ್ ಎಂದು ಅದರೊಳಗಿದ್ದ ಬುಲೆಟ್ ಹೊರಬಂತು. ಯಾರೋ ದುರುಳರು ಮಾಂಸದಾಸೆಗೆ ಕಾಡುಕೋಣಕ್ಕೆ ಗುಂಡು ಹೊಡೆದಾಗ ಅದು ಮಾಂಸದಲ್ಲಿ ಕಚ್ಚಿಕೊಂಡು ಅಲ್ಲಿ ಕೀವುಂಟುಮಾಡಿದೆ ಎಂದು ತಿಳಿಯಿತು.

ಕೀವು ಬಸಿದು ಹೋಗುವ ಹಾಗೇ ಮಾಡಿ ಅದರೊಳಗೆ ಟಿಂಚರ್ ಆಯೋಡಿನ್ ಯುಕ್ತ ಭಟ್ಟೆಯನ್ನಿರಿಸಿ ಸುತ್ತಲೂ ಮುಲಾಮು ಹಚ್ಚಿದೆ. ಅವಶ್ಯಕ ನಂಜುನಿವಾರಕಗಳು, ನೋವು ನಿವಾರಕಗಳು ಹಾಗೂ ಜೀವನಿರೋಧಕದ ಚುಚ್ಚುಮದ್ದು ನೀಡಿದೆ. ಕಾಡುಕೋಣ ಬಹಳ ಬಡಕಲುಗೊಂಡಿತ್ತು. ಬಹುಶ: ಕೀವಿನ ನೋವಿನ ಬಾಧೆಯಿಂದ ಇರಬಹುದೇನೋ? ಕಾಡು ಕೋಣ ನಾಡಿಗೆ ಆಶ್ರಯಕ್ಕೆ ಬಂದಿದೆ.ತೋಟದಲ್ಲಿ ಸುಲಭವಾಗಿ ಸಿಗುವ ಹಲಸಿನ ಹಣ್ಣು ಇತ್ಯಾದಿ ತಿಂದು ಸೆಟ್ಲ್ ಆಗಿದೆ ಎಂದು ಗೊತ್ತಾಯ್ತು. ಎಲ್ಲ ಕೆಲಸ ಮುಗಿಸಿ, ಅದರ ತಿಲಕಾಷ್ಠ ಮಹಿಷ ಬಂಧನ ಬಿಡಿಸಿ ದೂರ ಬಂದೆವು. ಕೋಟೆಯಂತೆ ಮಾಡಿದ ಹಗ್ಗದ ಬಿಗಿತವನ್ನೂ ಸಡಿಲ ಗೊಳಿಸಿದೆವು. ಸುಮಾರು ಮುಕ್ಕಾಲು ಘಂಟೆಗೆ ಕಾಡುಕೋಣಕ್ಕೆ ಪ್ರಜ್ಞೆ ಬಂತು. ಓಲಾಡುತ್ತಾ ಏಳಲು ಪ್ರಯತ್ನಿಸಿತು. ಸ್ವಲ್ಪ ಹೊತ್ತಿಗೆ ಎದ್ದು ನಿಂಟು ಮೈಕೊಡವಿಕೊಂಡಿತು. ದುಡುಕ್ಕನೆ ಪಕ್ಕಳದ ಹಳ್ಳದ ಮೇಲೆ ಏರಿ ನಿಂತಿತು. ನಮ್ಮೆಡೆ ಒಂತರಾ ಕೃತಜ್ಞತೆಯ ನೋಟ ಬೀರಿ ಕಾಡಿನಲ್ಲಿ ಜಿಗಿದು ಮಾಯವಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಬಲ್ಲಿರೇನು ಕೊಬ್ಬರಿ ಎಣ್ಣೆ ಮಹಿಮೆ..!

Published

on

ರೋಗ್ಯಕರ ಆಹಾರ ಮತ್ತು ನೈಸರ್ಗಿಕ ಚಿಕಿತ್ಸೆಯಲ್ಲಿ ತೆಂಗಿನ ಎಣ್ಣೆಯು ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಆರೋಗ್ಯದ ದೃಷ್ಟಿಯಿಂದ ತೆಂಗಿನ ಎಣ್ಣೆಗಳಲ್ಲಿ ಕೋಲ್ಡ್ ಪ್ರೆಸ್ಡ್ ಕೊಬ್ಬರಿ ಎಣ್ಣೆ ಅತಿ ಉತ್ತಮ. ಇದನ್ನು ಕೊಬ್ಬರಿ (ಒಣಗಿದ ತೆಂಗಿನಕಾಯಿ) ಯಿಂದ ಮಾಡಲಾಗುತ್ತದೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ದೈನಂದಿನ ಜೀವನದಲ್ಲಿ ತೆಂಗಿನ ಎಣ್ಣೆ ಉಪಯೋಗಿಸಿ ಅದರ ಪ್ರಯೋಜನಗಳನ್ನು ಪಡೆಯಿರಿ :

ತೆಂಗಿನೆಣ್ಣೆಯಲ್ಲಿ ಲಾರಿಕ್ ಆಮ್ಲದಂಶವನ್ನು ಹೊಂದಿರುತ್ತದೆ. ತೆಂಗಿನೆಣ್ಣೆಯ ಬಳಕೆಯಿಂದ ಶಕ್ತಿ ದೊರಕುತ್ತದೆ ಮತ್ತು ತೂಕ ನಿರ್ವಹಣೆಯಲೂ ಸಹಾಯಮಾಡುತ್ತದೆ.

ಹೃದಯದ ಆರೋಗ್ಯ: ತೆಂಗಿನ ಎಣ್ಣೆಯನ್ನು ಸೇವಿಸುವುದರಿಂದ HDL (ಉತ್ತಮ) ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಮೂಲಕ ಲಿಪಿಡ್ ಆರೋಗ್ಯವನ್ನು ಸುಧಾರಿಸಬಹುದು ಎಂದು ಕೆಲವು ಅಧ್ಯಯನಗಳು ಸಾಬೀತುಪಡಿಸಿದೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

ಜೀರ್ಣಕಾರಿ ಆರೋಗ್ಯ: ತೆಂಗಿನ ಎಣ್ಣೆಯು ಕೊಬ್ಬು-ಕರಗಬಲ್ಲ ಜೀವಸತ್ವಗಳು ಮತ್ತು ಖನಿಜಗಳ ಹೀರಿಕೊಳ್ಳುವಿಕೆಯನ್ನು ಉತ್ತೇಜಿಸುವ ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಇರಿಟಬಲ್ ಬೋವೆಲ್ ಸಿಂಡ್ರೋಮ್ (IBS) ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಉರಿಯೂತದ ಗುಣಲಕ್ಷಣಗಳು: ತೆಂಗಿನ ಎಣ್ಣೆಯು ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಸಂಯುಕ್ತಗಳನ್ನು ಹೊಂದಿರುತ್ತದೆ. ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಚರ್ಮ ಮತ್ತು ಕೂದಲ ರಕ್ಷಣೆ: ತೆಂಗಿನೆಣ್ಣೆ ತಿನ್ನುವುದರಿಂದ ಆರೋಗ್ಯಕರ ಚರ್ಮ ಮತ್ತು ಕೂದಲನ್ನು ಪಡೆಯಲು ಸಹಾಯ ಮಾಡುತ್ತದೆ. ಇದು ಅಗತ್ಯವಾದ ಪೋಷಕಾಂಶಗಳು ಮತ್ತು ತೇವಾಂಶವನ್ನು ಒದಗಿಸುತ್ತದೆ. ತೆಂಗಿನ ಎಣ್ಣೆಯು ನಿಮ್ಮ ಕೂದಲಿಗೆ ಆಳವಾಗಿ ತೂರಿಕೊಂಡು, ಒಳಗಿನಿಂದ ಅವುಗಳನ್ನು ಪೋಷಿಸುತ್ತದೆ ಮತ್ತು ಆರೋಗ್ಯವನ್ನು ಹೊರಸೂಸುವ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಕೋಲ್ಡ್ ಪ್ರೆಸ್ಡ್ ಕೊಬ್ಬರಿ ಎಣ್ಣೆಯ ಪೋಷಕಾಂಶಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಅದೇ ಸಮಯದಲ್ಲಿ ಕೂದಲು ಒಡೆಯುವಿಕೆ ಮತ್ತು ವಿಭಜಿತ ತುದಿಗಳನ್ನು ತಡೆಯುತ್ತದೆ.

ರೋಗನಿರೋಧಕ ಬೆಂಬಲ: ತೆಂಗಿನೆಣ್ಣೆಯು ಲಾರಿಕ್ ಆಮ್ಲ ಮತ್ತು ಕ್ಯಾಪ್ರಿಲಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ರೋಗನಿರೋಧಕ-ಉತ್ತೇಜಿಸುವ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ದೇಹವು ಸೋಂಕುಗಳಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ.

ತೂಕ ನಿರ್ವಹಣೆ: ತೆಂಗಿನ ಎಣ್ಣೆಯು ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಸಮತೋಲಿತ ಆಹಾರದಲ್ಲಿ ಬಳಸಿದಾಗ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.

ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು: ತೆಂಗಿನಕಾಯಿಯಲ್ಲಿ ಲಾರಿಕ್ ಆಮ್ಲವಿದೆ ಆದ್ದರಿಂದ ಇದು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದ್ದು ಅದು ಬ್ಯಾಕ್ಟೀರಿಯಾ, ವೈರಸ್‌ಗಳು ಮತ್ತು ಶಿಲೀಂಧ್ರಗಳಿಂದ ಉಂಟಾಗುವ ಸೋಂಕನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೋಲ್ಡ್ ಪ್ರೆಸ್ಡ್ ಕೊಬ್ಬರಿ ಎಣ್ಣೆ ನಿಮ್ಮ ಅಡಿಗೆ ಮನೆಯ ಸಂಗಾತಿಯಾಗಲಿ.ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಆತ್ಮಕತೆ | ಹೊಸದಾಗಿ ಬಂದ ಹಳೆಯ ಗುರುಗಳು

Published

on

  • ರುದ್ರಪ್ಪ ಹನಗವಾಡಿ

ದೆಲ್ಲ ಹೊರಗಿನದಾದರೆ ನಮ್ಮ ವಿಭಾಗದಲ್ಲಿ ಸ್ವಲ್ಪ ಬದಲಾವಣೆಗಳಾಗಿದ್ದವು. ನಮ್ಮ ಜೊತೆಗಿದ್ದ ಡಾ. ಕೆ.ಎಂ. ನಾಯ್ಡು ಅವರು ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಪ್ರಾರಂಭವಾಗಿದ್ದ ಹೊಸ ಸ್ನಾತಕೋತ್ತರ ಕೇಂದ್ರಕ್ಕೆ ಮುಖ್ಯಸ್ಥರಾಗಿ ಆಯ್ಕೆಯಾಗಿ ಹೋಗಿದ್ದರು.

ನಾನು ಎಂ.ಎ. ಓದುವಾಗ ನನಗೆ ಪ್ರಾಧ್ಯಾಪಕರಾಗಿದ್ದ ಡಾ. ಬಿ.ಎಸ್. ಶ್ರೀಕಂಠಾರಾಧ್ಯರು ಇಲಾಖೆಗೆ ಮುಖ್ಯಸ್ಥರಾಗಿ ಬಂದಿದ್ದರು. ನನ್ನ ಬಗ್ಗೆ ನಮ್ಮ ವಿಭಾಗದಲ್ಲಿ ಮತ್ತು ಮೈಸೂರಿನ ಗಂಗೋತ್ರಿ ವಿಭಾಗದಲ್ಲಿ ನಾನು ಮದುವೆಯಾಗಿರುವ ಬಗ್ಗೆ ಅಸಮಾಧಾನವಿತ್ತು. ಅದನ್ನೆಲ್ಲ ತಲೆಯಲ್ಲಿ ತುಂಬಿಕೊಂಡು ಬಂದಿದ್ದ ಬಿಎಸ್‌ಎಸ್ ಗುರುಗಳು ಕೂಡ ನನ್ನ ಬಗ್ಗೆ ಅಸಮಾಧಾನಗೊಂಡವರಂತೆ ತೋರುತ್ತಿದ್ದರು.

ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಶ್ರೀಕಂಠಾರಾಧ್ಯರು ಅಧ್ಯಾಪಕರೆಲ್ಲರಿಗೂ ತೆಗೆದುಕೊಳ್ಳುವ ತರಗತಿಗಳ ವೇಳಾಪಟ್ಟಿ ತಯಾರಿಸಿಕೊಟ್ಟಿದ್ದರು. ನನಗೆ ಆಶ್ಚರ್ಯವಾಗುವಂತೆ ನನಗೆ ಯಾವುದೇ ಸಾಮಾನ್ಯ ತರಗತಿಗೆ ಪಾಠ ಮಾಡುವ ಅವಕಾಶವಿರದಂತೆ ತರಗತಿಗಳನ್ನು ಹಂಚಿಕೆ ಮಾಡಿದ್ದರು. ಐಚ್ಛಿಕವಾಗಿದ್ದ ಎರಡು ವಿಷಯಗಳಾದ ಪ್ರಾದೇಶಿಕ ಅರ್ಥಶಾಸ್ತ್ರ ಮತ್ತು ಕೃಷಿ ಅರ್ಥಶಾಸ್ತ್ರಗಳನ್ನು ಹಂಚಿಕೆ ಮಾಡಿ ಮುಗಿಸಿದ್ದರು. ನನಗೆ ವಿದ್ಯಾ ಗುರುಗಳು ಹೆಚ್ಚು ಸಲಿಗೆ ಇಲ್ಲದೆ ಇದ್ದ ಅವರೊಡನೆ ಇದು ಸರಿ ಇಲ್ಲ. ಇದನ್ನು ಸರಿಯಾಗಿ ಹಂಚಿಕೆಯಾಗಬೇಕೆಂದು ನನ್ನ ಅಸಮಾಧಾನ ತೋರಿ ಅವರ ಟೇಬಲ್ ಮೇಲೆ ತಾತ್ಸಾರದಿಂದಲೇ ಆದೇಶದ ಪ್ರತಿಯನ್ನು ಬಿಟ್ಟು ಬಂದಿದ್ದೆ. ಅತ್ಯಂತ ಮಿತಭಾಷಿ, ಸರಳ ಮತ್ತು ಆಳ ಅಧ್ಯಯನದಿಂದ ಗಳಿಸಿದ ಗಂಭೀರತೆಯಲ್ಲಿದ್ದ ಅವರಿಗೆೆ ನನ್ನ ಬಗ್ಗೆ, ನಾನು ಮದುವೆಯಾದ ಬಗ್ಗೆ ಇಲ್ಲ ಸಲ್ಲದ ಕಥೆಗಳನ್ನು ಕಟ್ಟಿ ಅವರಿಗೆ ಹೇಳಿ ನನಗೆ ಈ ರೀತಿಯ ಅನಾದರಣೆ ತೋರಿಸುವಂತೆ ನಮ್ಮವರೇ ಆಗಿದ್ದ ಕೆಲವು ಅಧ್ಯಾಪಕರು ಹೊಸಬರಾಗಿ ಬಂದಿದ್ದ ಇವರಿಗೆ ಹೇಳಿದ್ದರು.

ಆರಾಧ್ಯರೂ ಕೂಡ ಮೈಸೂರಿನ ಗಂಗೋತ್ರಿಯಲ್ಲಿ ಪಾಠ ಮಾಡುತ್ತಿದ್ದವರು, ಅಲ್ಲಿಯೇ ಪ್ರಾಧ್ಯಾಪಕರಾಗಬೇಕಾಗಿದ್ದವರನ್ನು ಬಿಆರ್‌ಪಿಗೆ ಒಬ್ಬ ಹಿರಿಯ ಪ್ರಾಧ್ಯಾಪಕರು ಬೇಕೆಂಬ ನೆಪವೊಡ್ಡಿ ಅವರನ್ನು ವರ್ಗಾವಣೆ ಮಾಡಿ ಇಲ್ಲಿಗೆ ಕಳಿಸಿದ್ದರು. ಇಲ್ಲಿಗೆ ಬರುವ ಬಗ್ಗೆ ಮನಸ್ಸಿಲ್ಲದ ಕಾರಣ ಅಸಮಾಧಾನವೂ ಅವರಲ್ಲಿ ಮನೆಮಾಡಿತ್ತು. ಬಂದಾಕ್ಷಣ ಇಲ್ಲಿನವರ ಚಾಡಿ ಮಾತು ಕೇಳಿ ನನ್ನ ಬಗ್ಗೆ ಈ ರೀತಿ ನಡೆದುಕೊಂಡಿದ್ದರು. ಆ ನಂತರ ಎಲ್ಲರೂ ಚರ್ಚಿಸಿ ಸಮಾನ ವಿಷಯಗಳ ಮತ್ತು ತರಗತಿಗಳನ್ನು ಹಂಚಿಕೆ ಮಾಡಿಕೊಂಡು ಎಂದಿನಂತೆ ತರಗತಿಗಳು ನಡೆಯಲಾರಂಭಿಸಿದವು. ಪ್ರಾರಂಭದಲ್ಲಿ ಆಗಿದ್ದ ನನ್ನ ಮತ್ತು ನನ್ನ ಗುರುಗಳಾಗಿದ್ದ ಶ್ರೀಕಂಠಾರಾಧ್ಯರ ನಡುವೆ ನಡೆದ ಸಣ್ಣ ಅಸಮಾಧಾನ ಕರಗಿ ಎಂದಿನ ಲವಲವಿಕೆಯಿಂದ ವಿಭಾಗದಲ್ಲಿ ಚಟುವಟಿಕೆಗಳು ಪ್ರಾರಂಭವಾದವು. ( ಸುದ್ದಿದಿನ.ಕಾಂ|ವಾಟ್ಸಾಪ್|9980346243)

Continue Reading

ದಿನದ ಸುದ್ದಿ

ಮಕ್ಕಳಿಗೆ ದೈನಂದಿನ ಆಹಾರದಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಸೇರಿಸಿ: ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ .ಪಿ ಗಡಾದ್ ಸಲಹೆ

Published

on

ಸುದ್ದಿದಿನ,ಕುಂದಾಪುರ: ದೈನಂದಿನ ಆಹಾರ ಪದ್ಧತಿಯಲ್ಲಿ ತರಕಾರಿ ಹಣ್ಣುಗಳನ್ನು ಸೇರಿಸುವುದು, ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಲಭ್ಯ ಇರುವ ಸರ್ಕಾರಿ ಸವಲತ್ತುಗಳನ್ನು ಬಳಸಿಕೊಳ್ಳುವಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲಾ ತಾಯಂದಿರಿಗೆ ಡಾ. ಐ .ಪಿ ಗಡಾದ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಉಡುಪಿ ಜಿಲ್ಲೆ ಇವರು ತಮ್ಮ ಉದ್ಘಾಟನಾ ನುಡಿಗಳಿಂದ ಮನವಿ ಮಾಡಿದರು.

ನಮ್ಮ ಪಿ.ಜಿ.ಡಿ.ಎಚ್.ಪಿ.ಇ 7ನೇ ತಂಡದ ಪ್ರಶಿಕ್ಷಣಾರ್ಥಿ ಶ್ರೀಮತಿ ವೃಂದಾ.ಬಿ.ತಾಮಸೆ ಇವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮದಲ್ಲಿ ಅಪೌಷ್ಟಿಕತೆಯ ಕುರಿತು ಸಂಶೋಧನಾತ್ಮಕ ಅಧ್ಯಯನವನ್ನು ಮಾಡಿ ಗ್ರಾಮದ ಎಲ್ಲಾ ಮಕ್ಕಳು ಮತ್ತು ತಾಯಂದಿರನ್ನು ಬೃಹತ್ ಮಹಾ ಮೇಳದ ಮೂಲಕ ಈ ಸಭಾಂಗಣದ ಕಾರ್ಯಕ್ರಮಕ್ಕೆ ಆಯೋಜಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಸ್ಥಳೀಯ ಸ್ವಯಂ ಸೇವಾ ಸಂಸ್ಥೆ ರೋಟರಿ ಕ್ಲಬ್ ಸ್ಥಳೀಯ ಗ್ರಾಮ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಕ್ಷಣ ಇಲಾಖೆ ಸ್ಥಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದ್ದಾರೆ ಇವರೆಲ್ಲರಿಗೂ ತಮ್ಮ ಧನ್ಯವಾದಗಳನ್ನು ಡಾ. ಮಂಜುನಾಥ್ ಜೆ .ಎ .ಉಪನ್ಯಾಸಕರು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ ಬೆಂಗಳೂರು ಇವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಶುಭ ಹಾರೈಸಿದರು.

ಮಳೆಗಾಲದಲ್ಲಿ ಮನೆಯ ಅಕ್ಕಪಕ್ಕದಲ್ಲಿ ನೀರು ನಿಲ್ಲುವುದು ಸಹಜ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂ ಮತ್ತು ಮಲೇರಿಯದಂತಹ ಕಾಯಿಲೆಗಳು ಬರುತ್ತವೆ ಹಾಗಾಗಿ ಮಳೆಯ ನೀರು ನಿಲ್ಲದಂತೆ ಹರಿದು ಹೋಗುವ ಹಾಗೆ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ತಿಳಿಸುತ್ತಾ ಈ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ನ ಉಪಾಧ್ಯಕ್ಷರು ಶುಭ ಕೋರಿದರು.

ಅಂಗನವಾಡಿಗಳ ಮೂಲಕ ಅಪೌಷ್ಟಿಕ ಮಕ್ಕಳ ದತ್ತು ಪಡೆಯುವ ಯೋಜನೆಯನ್ನು ಅಗತ್ಯತೆ ಇರುವ ಕುಟುಂಬಗಳು ಪಡೆದುಕೊಳ್ಳಬೇಕು ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸಲು ರಾಷ್ಟ್ರಧ್ವಜದ ತ್ರಿವರಣವುಳ್ಳ ಹಣ್ಣು ಹಂಪಲು ತರಕಾರಿ ಸೊಪ್ಪು ಬೇಳೆ ಕಾಳುಗಳು ಹಾಲು ಮೊಟ್ಟೆ ಮೀನು ಮಾಂಸ ಹೀಗೆ ಸಮತೋಲನ ಆಹಾರವನ್ನು ರೂಡಿಸಿಕೊಳ್ಳುವಂತೆ ಕುಂದಾಪುರ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀ ಉಮೇಶ್ ಟಿ ಎಂ ಕರೆ ನೀಡಿದರು.

ಪ್ರತಿ ಶುಕ್ರವಾರ ಆರೋಗ್ಯ ಇಲಾಖೆ ಹಾಗೂ ಇತರ ಇಲಾಖೆಗಳ ಸಹಯೋಗದೊಂದಿಗೆ ಡ್ರೈಡೇ ಕಾರ್ಯಕ್ರಮ ಪ್ರಾರಂಭವಾಗಿದ್ದು ಮನೆಯ ಒಳಾಂಗಣ ಮತ್ತು ಹೊರಾಂಗಣದಲ್ಲಿ ನೀರು ತುಂಬಿಟ್ಟುಕೊಳ್ಳುವ ಪರಿಕರಗಳನ್ನು ಸಂಪೂರ್ಣ ಖಾಲಿ ಮಾಡಿ ಹೊಸದಾಗಿ ನೀರನ್ನು ತುಂಬಿಸಿಕೊಳ್ಳಬೇಕೆಂದು ಉಡುಪಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀ ಶಶಿಧರ್ ಅವರು ಹೇಳುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸ್ಥಳೀಯ ಸರ್ಕಾರೇತರ ಸಂಸ್ಥೆ ರೋಟರಿ ಕ್ಲಬ್‌ನ ಅಧ್ಯಕ್ಷ ಶ್ರೀ ಸತೀಶ್ ಎಂ ನಾಯಕ ಕಾರ್ಯಕ್ರಮದ ಕುರಿತು ಮಾತನಾಡುತ್ತಾ ಆರೋಗ್ಯ ಇಲಾಖೆ ಆಯೋಜಿಸುತ್ತಿರುವ ಹಲವಾರು ಕಾರ್ಯಕ್ರಮಗಳಲ್ಲಿ ರೋಟರಿ ಕ್ಲಬ್ ದೇಶಾದ್ಯಂತ ಸಹಕಾರ ನೀಡುತ್ತಿದೆ ಇದೇ ರೀತಿಯಾಗಿ ನಾವು ಸಹ ಮಕ್ಕಳು ಮತ್ತು ತಾಯಂದಿರಿಗೆ ಲಘುಉಪಹಾರ ವ್ಯವಸ್ಥೆ ಮಾಡಿದ್ದೇವೆ ಮುಂದೆಯೂ ಇಂತಹ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ನಮ್ಮ ಸಹಕಾರ ನೀಡುವುದಾಗಿ ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಮಕ್ಕಳ ದೈಹಿಕ ಬೆಳವಣಿಗೆಗಾಗಿ ಅಪೌಷ್ಟಿಕತೆ ಪ್ರಮಾಣ ತಿಳಿಯಲು ಮೌಲ್ಯಮಾಪನ ಮಾಡಬೇಕಾಗುತ್ತದೆ ತೋಳಿನ ಮಧ್ಯಭಾಗದ ಸುತ್ತಳತೆ 11.5 cm ಗಿಂತ ಕಡಿಮೆ ಇರುವ ಮಕ್ಕಳನ್ನು ಅಪೌಷ್ಟಿಕ ಮಕ್ಕಳೆಂದು ಗುರುತಿಸಿ ಅವರಿಗೆ ಹೆಚ್ಚಿನ ಪೌಷ್ಟಿಕ ಆಹಾರ ಹಾಗೂ ಸಾಕಷ್ಟು ಪೋಷಕಾಂಶಗಳನ್ನು ನೀಡುವ ಅವಶ್ಯಕತೆ ಇದೆ. ಅಪೌಷ್ಟಿಕತೆಯು ದೇಹದ ಪ್ರಮುಖ ಅಂಗಗಳ ಕಾರ್ಯಕ್ಕೆ ಹಾನಿ ಉಂಟುಮಾಡುತ್ತದೆ ಹಾಗೂ ಪೌಷ್ಟಿಕಾಂಶದ ಕೊರತೆಯಿಂದ ಉಂಟಾಗುವ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗಾಗಿ ಪೌಷ್ಟಿಕ ಸಮತೋಲಿತ ಆಹಾರವನ್ನು ಉಪಯೋಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳುತ್ತಾ ನಮ್ಮ ಜಿಲ್ಲೆಯ ತಾಯಂದಿರಿಗೆ ಆರೋಗ್ಯಕ್ಕೆ ಸಂಬAಧಪಟ್ಟ ಹಾಗೆ ಜ್ಞಾನ ಹೆಚ್ಚಿದ್ದು, ಆದರೆ ಕಾರ್ಯರೂಪಕ್ಕೆ ತರುವಲ್ಲಿ ದೊಡ್ಡ ಪ್ರಮಾಣದ ಯಶಸ್ಸು ಇನ್ನೂ ಆಗಿಲ್ಲ ಅದಕ್ಕಾಗಿ ನಾವೆಲ್ಲರೂ ಅಪೌಷ್ಟಿಕತೆ ವಿರುದ್ಧ ಹೋರಾಡಲು ಇಲ್ಲಿ ಪ್ರಾತ್ಯಕ್ಷಿತೆಯ ಮೂಲಕ ತೋರಿಸಲಾಗಿರುವ ಆಹಾರಗಳನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ರೂಡಿಸಿಕೊಳ್ಳುವುದರೊಂದಿಗೆ ಕಾರ್ಯರೂಪಕ್ಕೆ ತರೋಣ ಎಂದು ತಮ್ಮ ಅಮೂಲ್ಯವಾದ ಮಾಹಿತಿಯಲ್ಲಿ ತಿಳಿಸುತ್ತಾ 0-19 ವರ್ಷದ ಒಳಗಿನ ಮಕ್ಕಳಿಗಾಗಿ ಸರ್ಕಾರದಿಂದ ಜಾರಿ ಇರುವ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಡಾ. ಪ್ರೇಮಾನಂದ.ಕೆ ತಾಲೂಕು ಆರೋಗ್ಯ ಅಧಿಕಾರಿಗಳು ಕುಂದಾಪುರ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾಹಿತಿ ನೀಡಿದರು.

ಇತ್ತೀಚಿನ ದಿನಗಳಲ್ಲಿ ನಮ್ಮ ಜಿಲ್ಲೆಯಲ್ಲಿ ಒಂದು ಅಥವಾ ಎರಡು ಮಕ್ಕಳ ಪಡೆಯುವವರ ಸಂಖ್ಯೆ ಅಧಿಕವಾಗಿದ್ದು ಈ ಮಕ್ಕಳ ಪಾಲನೆ ಪೋಷಣೆಗೆ ಎಲ್ಲಾ ಇಲಾಖೆಯವರು ಸಮನ್ವಯದೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದು ಕೇವಲ ಮಕ್ಕಳಿಗೆ ಮಾತ್ರ ಪೌಷ್ಟಿಕ ಆಹಾರವನ್ನು ನೀಡುವುದಲ್ಲದೆ ತಾಯಂದಿರು ಕೂಡ ಸಮತೋಲಿತ ಪೌಷ್ಟಿಕ ಆಹಾರವನ್ನು ಗರ್ಭಿಣಿ ಅವಧಿಯಲ್ಲಿಯೇ ಸೇವಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ನಾಗರತ್ನ ಅಧ್ಯಕ್ಷರು ಗ್ರಾಮ ಪಂಚಾಯತ್ ಕೋಟೇಶ್ವರ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪೂರ್ಣಿಮಾ ಆರ್ ಶೇಟ್, ಜಿಲ್ಲಾ ಆರ್ ಸಿ.ಎಚ್ ಅಧಿಕಾರಿಗಳು ಡಾ.ಜೋತ್ನಾ ಸ್ಥಳೀಯ ಗ್ರಾಮ ಪಂಚಾಯತ್‌ನ ಸರ್ವ ಸದಸ್ಯರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ್ ನಾಯಕ್, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಶೋಭಾ, ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು, ತಾಯಂದಿರು, ಮಕ್ಕಳು ಉಪಸ್ಥಿತರಿದ್ದರು ಹಾಗೂ ಈ ಕಾರ್ಯಕ್ರಮದಲ್ಲಿ ಆಯುಷ್ಮಾನ್ ಆಭಾಕಾರ್ಡ್ ಮತ್ತು ಅಸಾಂಕ್ರಾಮಿಕ ರೋಗಗಳ ತಪಾಸಣೆಯನ್ನು ಮಾಡಲಾಯಿತು.

ಶ್ರೀಮತಿ ವೃಂದಾ.ಬಿ.ತಾಮಸೆ ಪ್ರಶಿಕ್ಷಣಾರ್ಥಿ ಪಿ.ಪಿ.ಜಿ.ಡಿ.ಎಚ್.ಪಿ.ಇ ವಿಭಾಗ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ ಬೆಂಗಳೂರು ಸ್ವಾಗತಿಸಿದರು. ಶ್ರೀಮತಿ ಭಾಗ್ಯಲಕ್ಷ್ಮಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕುಂದಾಪುರ ಕಾರ್ಯಕ್ರಮದ ನಿರೂಪಣೆ ಮಾಡಿ ಧನ್ಯವಾದ ಅರ್ಪಿಸಿದರು.ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ಕ್ರೀಡೆ23 hours ago

Olympic Games Paris 2024 | ಇಂದು ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ ; ಭವ್ಯ ಸಮಾರಂಭಕ್ಕೆ ಸೀನ್ ನದಿ ಸಜ್ಜು

ಸುದ್ದಿದಿನಡೆಸ್ಕ್:ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಸೀನ್ ನದಿಯ ಮೇಲೆ ಇಂದು ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಪರೇಡ್‌ನಲ್ಲಿ ಭಾರತದ ಧ್ವಜಧಾರಿಗಳಾದ...

ದಿನದ ಸುದ್ದಿ24 hours ago

JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ

ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ...

ದಿನದ ಸುದ್ದಿ1 day ago

KSOU | ಪ್ರವೇಶಾತಿಗೆ ಅರ್ಜಿ ಆಹ್ವಾನ

ಸುದ್ದಿದಿನಡೆಸ್ಕ್:2024-25 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ....

ದಿನದ ಸುದ್ದಿ1 day ago

HEAVY RAIN | ಮೂರು ದಿನ ಭಾರೀ ಮಳೆ ; ಆರೆಂಜ್ ಅಲರ್ಟ್ ಘೋಷಣೆ

ಸುದ್ದಿದಿನಡೆಸ್ಕ್:ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನ ವ್ಯಾಪಕ ಮಳೆಯಾಗಲಿದೆ ಎಂದು ಆರೆಂಜ್ ಅಲರ್ಟ್ ಹವಾಮಾನ ಇಲಾಖೆ ಘೋಷಿಸಿದೆ. ಇಂದು ಮತ್ತು ನಾಳೆ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ,...

ದಿನದ ಸುದ್ದಿ1 day ago

ಇಂದು – ನಾಳೆ ಹಾವೇರಿ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ

ಸುದ್ದಿದಿನಡೆಸ್ಕ್:ಇಂದು ಮತ್ತು ನಾಳೆ, ಹಾವೇರಿ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಉತ್ತರಕಡ ಜಿಲ್ಲೆಯ ಶಾಲೆ ಹಾಗೂ ಪದವಿ ಪೂರ್ವ, ಐಟಿಐ ಮತ್ತು...

ದಿನದ ಸುದ್ದಿ1 day ago

ಯುವಕರಿಗೆ ಶಿಕ್ಷಣ, ಕೌಶಲ್ಯ ಹೆಚ್ಚಿಸುವ ‘ಮಾದರಿ ಕೌಶಲ್ಯ ಸಾಲ ಯೋಜನೆ’ಗೆ ಚಾಲನೆ

ಸುದ್ದಿದಿನಡೆಸ್ಕ್:ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ಜಯಂತ್ ಚೌಧರಿ ನವದೆಹಲಿಯಲ್ಲಿ ನಿನ್ನೆ ‘ಮಾದರಿ ಕೌಶಲ್ಯ ಸಾಲ ಯೋಜನೆ’ಗೆ ಚಾಲನೆ ನೀಡಿದರು. ಸಮಾರಂಭ ಉದ್ದೇಶಿಸಿ ಮಾತನಾಡಿದ...

ದಿನದ ಸುದ್ದಿ1 day ago

ಇಂದು ಕಾರ್ಗಿಲ್ ವಿಜಯ ದಿವಸ್ ; ಯೋಧರ ಸ್ಮರಣೆ

ಸುದ್ದಿದಿನಡೆಸ್ಕ್:ಇಂದು ಕಾರ್ಗಿಲ್ ವಿಜಯ್ ದಿವಸ್. ಇದರ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಪಾಕಿಸ್ತಾನ ವಿರುದ್ಧದ ಕಾರ್ಗಿಲ್ ಯುದ್ಧದಲ್ಲಿ ಬಲಿದಾನಗೈದ...

ದಿನದ ಸುದ್ದಿ2 days ago

ದಾವಣಗೆರೆ | ನಾಳೆ ಎಲ್ಲೆಲ್ಲಿ ಕರೆಂಟ್ ಕಟ್..

ಸುದ್ದಿದಿನ,ದಾವಣಗೆರೆ:ಜಲಸಿರಿ ಕಾಮಗಾರಿ ಪ್ರಯುಕ್ತ ಜುಲೈ 26 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಎಎಫ್.15 ರಂಗನಾಥ ಫೀಡರ್ ವ್ಯಾಪ್ತಿಯ ವಿದ್ಯಾನಗರ ಕೊನೆ ಬಸ್ ನಿಲ್ದಾಣದಿಂದ...

ದಿನದ ಸುದ್ದಿ2 days ago

ದಾವಣಗೆರೆ | ಸೆಪ್ಟೆಂಬರ್ 14 ರಂದು ರಾಷ್ಟ್ರೀಯ ಲೋಕ ಅದಾಲತ್

ಸುದ್ದಿದಿನ,ದಾವಣಗೆರೆ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಸೆಪ್ಟೆಂಬರ್ 14 ರಂದು ರಾಷ್ಟ್ರೀಯ ಲೋಕ್...

ದಿನದ ಸುದ್ದಿ2 days ago

ದಾವಣಗೆರೆ ಜಿಲ್ಲೆಯಲ್ಲಿ ವಾಡಿಕೆಗಿಂತ ಈ ಬಾರಿ ಹೆಚ್ಚು ಮಳೆ

ಸುದ್ದಿದಿನ,ದಾವಣಗೆರೆ:ದಾವಣಗೆರೆ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಪೂರ್ವ ಮುಂಗಾರು ಹಾಗೂ ಮುಂಗಾರಿನಲ್ಲಿ ವಾಡಿಕೆಗಿಂತ 41 ಮಿ.ಮೀ ಹೆಚ್ಚು ಮಳೆಯಾಗಿದೆ. 2024 ರ ಜನವರಿಯಿಂದ ಜುಲೈ 23 ರ ವರೆಗಿನ...

Trending