ರಾಜಕೀಯ
ಬಹುಜನ ಸಮಾಜ ಪಕ್ಷ ನಿಜಕ್ಕೂ ಬಹು ಜನರನ್ನು ಒಳಗೊಂಡಿದೆಯೇ..?

- ವಿವೇಕಾನಂದ. ಹೆಚ್.ಕೆ
ಭಾರತದಲ್ಲಿ ಅಸ್ತಿತ್ವದಲ್ಲಿರುವ ಬಹುಮುಖ್ಯ ರಾಷ್ಟ್ರೀಯ ಪಕ್ಷಗಳಲ್ಲಿ ಒಂದು. ಕಾಂಗ್ರೆಸ್, ಬಿಜೆಪಿ, ಕಮ್ಯುನಿಸ್ಟ್ ಪಕ್ಷಗಳ ನಂತರ ಹೆಚ್ಚು ಜನಪ್ರಿಯತೆ ಗಳಿಸಿರುವ ಪಕ್ಷ. ಉತ್ತರ ಪ್ರದೇಶದಲ್ಲಿ ಮೂರು ಬಾರಿ ಅಧಿಕಾರವನ್ನು ನಡೆಸಿದೆ ಮತ್ತು ಕೆಲವು ರಾಜ್ಯಗಳಲ್ಲಿ ಸಮ್ಮಿಶ್ರ ಸರ್ಕಾರದ ಭಾಗವೂ ಆಗಿದ್ದಿತು.ಕಾನ್ಷಿರಾಂ ಎಂಬುವವರು ಬಹು ಶ್ರಮದಿಂದ ಕಟ್ಟಿದ ಮತ್ತು ಈಗ ಮಾಯಾವತಿಯವರು ಅಧ್ಯಕ್ಷರಾಗಿರುವ ಪಕ್ಷವದು.ಅಂಬೇಡ್ಕರ್ ಮತ್ತು ಅವರ ವಿಚಾರಗಳ ಆಧಾರದ ಮೇಲೆ ಈ ಪಕ್ಷ ಹೋರಾಟ ಮಾಡುತ್ತಿದೆ ಎಂಬುದು ಅದರ ಅನುಯಾಯಿಗಳ ಸಮರ್ಥನೆ ಮತ್ತು ಮೂಲ ಆಶಯ.
ಹಾಗಾದರೆ ಇದು ವಾಸ್ತವವೇ ?
ಅದರ ಒಟ್ಟು ಇತಿಹಾಸದ ರಾಜಕೀಯ ನಡೆಗಳನ್ನು ಗಮನಿಸಿದಾಗ ನಮ್ಮ ಕರ್ನಾಟಕದ ಜನತಾದಳ ಪಕ್ಷದಂತೆ ಬಹುತೇಕ ಅಧಿಕಾರದ ಲಾಭ ನಷ್ಟಗಳನ್ನು ನೋಡಿಕೊಂಡು ಎಲ್ಲಾ ಕಡೆಯೂ ಸಲ್ಲುವ ಅನುಕೂಲಕರ ನಿರ್ಧಾರಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ.
ತನ್ನ ಸಿದ್ದಾಂತಗಳಿಗೆ ವಿರುದ್ಧ ನಿಲುವಿನ ಬಿಜೆಪಿಯ ಜೊತೆಗೂ, ತನ್ನ ಮೇಲೆ ಹಲ್ಲೆ ಮಾಡಿದ ಪ್ರಬಲ ಯಾದವ ಜಾತಿಯ ಸಮಾಜವಾದಿ ಪಕ್ಷದ ಜೊತೆಗೂ, ಕೆಲವು ಕಡೆ ತಾವು ವಿರೋಧಿಸುವ ಗಾಂಧಿ ತತ್ವದ ನೆಲೆಯ ಕಾಂಗ್ರೆಸ್ ಪಕ್ಷದ ಜೊತೆಯೂ ಸೇರುತ್ತಾರೆ.
ಅಂದರೆ ಅಂಬೇಡ್ಕರ್ ಶೋಷಿತರ ಜಾಗೃತಿಗಾಗಿ ಘೋಷಿಸಿದ ಶಿಕ್ಷಣ ಸಂಘಟನೆ ಹೋರಾಟ ಎಂಬ ತ್ರಿವಳಿ ಸಂದೇಶಕ್ಕೆ ಎಲ್ಲವೂ ಅಧಿಕಾರಕ್ಕಾಗಿ ಎಂಬುದನ್ನು ಹೊಸದಾಗಿ ಸೇರ್ಪಡೆಯಾದಂತೆ ಆಗುತ್ತದೆ. ಅಂಬೇಡ್ಕರ್ ರಾಜಕೀಯ ಅಧಿಕಾರದ ಪ್ರಾಮುಖ್ಯತೆ ಬಗ್ಗೆ ಖಂಡಿತ ಹೇಳಿದ್ದಾರೆ. ಅದರ ಜೊತೆಗೆ ಮಾರ್ಗವೂ ಮುಖ್ಯವಾಗಬೇಕಾಗುತ್ತದೆ.
ವಿಶಾಲ ತಳಹದಿಯ ಮೇಲೆ ಒಂದು ಪಕ್ಷ ಮತ್ತು ಸಂಘಟನೆ ದೊಡ್ಡದಾಗಿ ಬೆಳೆಯಬೇಕಾದರೆ ದೀರ್ಘಕಾಲದಲ್ಲಿ ಹೇಗೆಂದರೆ ಹಾಗೆ ತತ್ ಕ್ಷಣದ ಲಾಭವನ್ನು ನೋಡಬಾರದು. ಒಂದು ಪಕ್ಷದ ಕಾರ್ಯಕರ್ತರಲ್ಲಿ ಮತ್ತು ಸಾರ್ವಜನಿಕರಲ್ಲಿ ಕೂಡ ಆ ಪಕ್ಷದ ಬಗ್ಗೆ ಅದರ ನ್ಯಾಯ ನೀತಿ ಧರ್ಮದ ಬಗ್ಗೆ ಸಹಜ ಗೌರವ ಮೂಡುವಂತಿರಬೇಕು. ಅದರಲ್ಲಿ ಬಿಎಸ್ಪಿ ವಿಫಲವಾಗಿದೆ ಎಂದು ಹೇಳಬಹುದು.
ಮಾಯಾವತಿ ಹೊರತುಪಡಿಸಿ ಮತ್ತೊಂದಿಷ್ಟು ನಾಯಕರಗಳನ್ನು ಅವರ ಮಟ್ಟಕ್ಕೆ ಬೆಳೆಸಲು ಪ್ರಯತ್ನಿಸಲಿಲ್ಲ ಅಥವಾ ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷಿಸಿದಂತೆ ಕಾಣುತ್ತದೆ . ಅಂಬೇಡ್ಕರ್ ವಾದದ ಹಿನ್ನೆಲೆಯ ಅನೇಕ ಯುವ ಮತ್ತು ಅನುಭವಿ ಸಂಘಟಕರನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸದೆ ಪರ್ಯಾಯ ನಾಯಕತ್ವದ ಅಸೂಯೆಯಿಂದ ಅವರಿಗೆ ಪ್ರೋತ್ಸಾಹ ನೀಡಲಿಲ್ಲ.
ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಲು ಸಿದ್ಧವಾಗುತ್ತಿರುವಾಗಲೇ ರಾಜಕೀಯ ಪ್ರವೇಶಿಸಿದ ವಿದ್ಯಾವಂತೆ ಮತ್ತು ಬುದ್ದಿವಂತೆಯಾದ ಮಾಯಾವತಿಯರ ಬಹುದೊಡ್ಡ ಸಮಸ್ಯೆ ಸರ್ವಾಧಿಕಾರಿ ಮನೋಭಾವ, ಅಧಿಕಾರ ಲಾಲಸೆ ಮತ್ತು ಹೊಂದಾಣಿಕೆಯ ಮನೋಭಾವದ ಕೊರತೆ. ಜೊತೆಗೆ ಆಡಳಿತಾತ್ಮಕ ದಕ್ಷತೆಯೂ ಕಡಿಮೆ.
ಸರಿಯೋ ತಪ್ಪೋ ಆದರೆ ಜನರ ಬೆಂಬಲವನ್ನು ನಿರಂತರವಾಗಿ ಗಳಿಸಿದ ದೆಹಲಿಯ ಶೀಲಾ ದೀಕ್ಷಿತ್, ಪಶ್ಚಿಮ ಬಂಗಾಳದ ಜ್ಯೋತಿ ಬಸು, ಗುಜರಾತಿನ ನರೇಂದ್ರ ಮೋದಿ, ಒರಿಸ್ಸಾದ ನವೀನ್ ಪಾಟ್ನಾಯಕ್ ಮುಂತಾದವರ ಸಾಲಿನಲ್ಲಿ ನಿಲ್ಲುವ ಪ್ರಯತ್ನ ಮಾಡಲಿಲ್ಲ.
ಅಧಿಕಾರಕ್ಕೆ ಏರುವುದು ಒಂದು ಸಾಧನೆಯಾದರೆ ಅದನ್ನು ನಿರಂತರವಾಗಿ ಉಳಿಸಿಕೊಳ್ಳುವುದು ಸಹ ಮುಖ್ಯವಾಗುತ್ತದೆ. ಅದರಲ್ಲೂ ಒಬ್ಬ ದಲಿತ ಹೆಣ್ಣು ಮಗಳು ತಮಗೆ ಸಿಕ್ಕಿದ ಅಪರೂಪದ ಅವಕಾಶವನ್ನು ಇನ್ನಷ್ಟು ಜನರಿಗೆ ಹತ್ತಿರವಾಗುವ ರೀತಿ ಬಳಸಬಹುದಿತ್ತು.ಹೌದು, ಅದಕ್ಕೆ ಹಲವಾರು ಕಾರಣಗಳು ಇರಬಹುದು. ಆದರೆ ಜನರಿಗೆ ಅನುಕೂಲಕರ ಕೆಲಸ ಮಾಡುವಾಗ ಖಂಡಿತ ಜನರಿಂದ ಪ್ರೋತ್ಸಾಹ ಸಿಕ್ಕೇ ಸಿಗುತ್ತದೆ.
ನಮ್ಮ ಜನರ ಮನಸ್ಥಿತಿ ಹೇಗಿದೆ ಎಂದರೆ, ನೀವು ಸಾರ್ವಜನಿಕವಾಗಿ ಒಳ್ಳೆಯ ಉದ್ದೇಶಕ್ಕೇ ಆದರೂ ಸ್ವಲ್ಪ ಕೆಟ್ಟ ಅಥವಾ ತಪ್ಪು ನಿರ್ಧಾರ ಕೈಗೊಂಡರೇ ಜನ ಅದನ್ನೇ ಉದಾಹರಣೆಯಾಗಿ ತೆಗೆದುಕೊಂಡು ತಮ್ಮ ವೈಯಕ್ತಿಕ ಸ್ವಾರ್ಥ ಸಾಧನೆಗೆ ಇದನ್ನೇ ನಿದರ್ಶನವಾಗಿ ಉಪಯೋಗಿಸಿಕೊಳ್ಳುತ್ತಾರೆ.
ಇದೇ ಬಹುಮುಖ್ಯವಾಗಿ ಇಂದು ಅಂಬೇಡ್ಕರ್ ವಾದದ ಬಹುಜನ ಚೆಲ್ಲಾಪಿಲ್ಲಿಯಾಗಿ ಒಂದೊಂದು ಪಕ್ಷ ಅಥವಾ ಸಂಘಟನೆಯ ದಾರಿ ಹಿಡಿದಿದ್ದಾರೆ. ಸಹಜವಾಗಿ ಅದರ ವಿರೋಧಿಗಳು ಇದರ ಲಾಭ ಪಡೆಯುತ್ತಿದ್ದಾರೆ. ಬಹುಜನರ ಪಕ್ಷ ಆಂತರಿಕವಾಗಿಯೂ ಬಹುಜನರ ಪಕ್ಷವಾಗೇ ಇರಬೇಕೆ ಹೊರತು ಹೆಸರಿಗೆ ಮಾತ್ರ ಇದ್ದು ಸಂಘಟನೆಯಲ್ಲಿ ನೆಪ ಮಾತ್ರದ ನಡವಳಿಕೆ ಇದ್ದರೆ ಖಂಡಿತ ಬಹುಜನರ ವಿಶ್ವಾಸ ಗಳಿಸಲು ಸಾಧ್ಯವಿಲ್ಲ.
ಜೊತೆಗೆ ಹೋರಾಟ ಸಿದ್ದಾಂತಗಳೊಂದಿಗೆ ಆಡಳಿತಾತ್ಮಕ ದಕ್ಷತೆ ಸಹ ಮುಖ್ಯವಾಗುತ್ತದೆ. ಅಧಿಕಾರಕ್ಕೆ ಬರುವವರೆಗೂ ಚಳವಳಿ ಮುಖ್ಯ. ಬಂದ ನಂತರ ಆಡಳಿತ ಮಾಡುವುದು ಅತಿಮುಖ್ಯ ಇಲ್ಲದಿದ್ದರೆ ಜನ ಬಹುಬೇಗ ನಿರಾಸೆಗೊಳಗಾಗಿ ಪಕ್ಷ ತಿರಸ್ಕರಿಸಲ್ಪಡುತ್ತದೆ. ಆಗ ಪಕ್ಷ ಬೆಳೆಸಲು ಅಡ್ಡ ದಾರಿ ಹಿಡಿಯುವ ಅವಶ್ಯಕತೆ ಬರುತ್ತದೆ. ಅದು ಒಂದು ಸಿದ್ಧಾಂತದ ಅವಸಾನಕ್ಕೆ ದಾರಿ ಮಾಡಿಕೊಡುತ್ತದೆ.
ಬಹುಶಃ ಇಂದು ಕವಲು ದಾರಿಯಲ್ಲಿ ಸಾಗುತ್ತಿರುವ ಬಹುಜನ ಸಮಾಜ ಪಕ್ಷದ ಆತ್ಮಾವಲೋಕನಕ್ಕೆ ಇದು ಸರಿಯಾದ ಸಮಯವೆಂದು ಭಾವಿಸಬಹುದು.ಯಾವುದೇ ವ್ಯಕ್ತಿ ಪಕ್ಷ ಸಂಘಟನೆ ಸಿದ್ಧಾಂತ ಸಾಮಾಜಿಕ ಮೌಲ್ಯಗಳನ್ನು ಸದಾ ಪ್ರತಿನಿಧಿಸುವಂತಿರಬೇಕು. ಅದರ ಸ್ವಾರ್ಥದ ನಡೆಯನ್ನು ಜನ ಗಮನಿಸುತ್ತಿರುತ್ತಾರೆ. ಅಧಿಕಾರವೇ ಎಲ್ಲವೂ ಅಲ್ಲ. ಅದರಲ್ಲೂ ಶೋಷಿತ ಸಮುದಾಯಗಳ ಒಂದು ಪಕ್ಷ ಅತ್ಯಂತ ಶುದ್ದ ಪ್ರಾಮಾಣಿಕ ದೂರದೃಷ್ಟಿಯ ನಿಲುವುಗಳನ್ನು ತೆಗೆದುಕೊಳ್ಳಬೇಕು. ಪ್ರಜಾಪ್ರಭುತ್ವದಲ್ಲಿ ಪರ್ಯಾಯ ವ್ಯವಸ್ಥೆ ಇರುವುದಕ್ಕಿಂತ ಮತ್ತಷ್ಟು ಉತ್ತಮವಾಗಬೇಕು. ದೇಶದ ಸಮಗ್ರ ಅಭಿವೃದ್ಧಿಗೆ ಇದು ಬಹಳ ಮುಖ್ಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಶ್ವೇತಪತ್ರ ಹೊರಡಿಸಲು ಎಚ್.ಡಿ. ಕುಮಾರಸ್ವಾಮಿ ಆಗ್ರಹ

ಸುದ್ದಿದಿನ, ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಯೋಜನೆಯ ಫಲ ಎಷ್ಟು ಜನರಿಗೆ ಲಭ್ಯವಾಗಿದೆ, ಆರ್ಥಿಕವಾಗಿ ಎಷ್ಟು ಹೊರೆಬಿದ್ದಿದೆ, ಇದುವರೆಗೆ ಫಲಾನುಭವಿಗಳ ಖಾತೆಗೆ ಎಷ್ಟು ಹಣ ಜಮೆಯಾಗಿದೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದಾರೆ.
ಸರ್ಕಾರದ ಗ್ಯಾರಂಟಿ ಯೋಜನೆಗಳು ವಿಫಲವಾಗಿದೆ, ಸಮರ್ಪಕವಾಗಿ ಜಾರಿಯಾಗುತ್ತಿಲ್ಲ, ಈ ಬಗ್ಗೆ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪಂಚಾಯತ್ ರಾಜ್ ಇಲಾಖೆ ಜತೆ ಕೆಲಸ ಮಾಡಲು ಬಂಧುತ್ವ ಫೌಂಡೇಷನ್ ಸಿದ್ಧ : ಅಧ್ಯಕ್ಷ ರಾಘು ದೊಡ್ಡಮನಿ

ಸುದ್ದಿದಿನ, ದಾವಣಗೆರೆ : ಮಕ್ಕಳ ವಿಷೇಶ ಗ್ರಾಮ ಸಭೆಯ ಮೂಲಕ ಜಿಲ್ಲೆಯ ಮಕ್ಕಳ ಶಿಕ್ಷಣ, ರಕ್ಷಣೆ ಹಾಗೂ ಅವರ ಹಕ್ಕು ಬಾಧ್ಯತೆಗಳಿಗಾಗಿ ಪಂಚಾಯತ್ ರಾಜ್ ಇಲಾಖೆಯ ಜತೆ ಕೆಲಸ ಮಾಡಲು ನಮ್ಮ ಬಂಧುತ್ವ ಫೌಂಡೇಷನ್ ಸಿದ್ಧವಿದೆ ಎಂದು ಫೌಂಡೇಶನ್ ನ ಅಧ್ಯಕ್ಷರಾದ ರಾಘು ದೊಡ್ಡಮನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಹಾಗೂ ಮಕ್ಕಳ ಗ್ರಾಮ ಸಭೆ ರೂಪಿಸಲು ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಇದೇ ತಿಂಗಳ 14 ರಿಂದ ಜನವರಿ 24 ರವರೆಗೆ 10 ವಾರಗಳ ಮಕ್ಕಳ ಸ್ನೇಹಿ ಅಭಿಯಾನ ಹಾಗೂ ಮಕ್ಕಳ ಗ್ರಾಮ ಸಭೆ ನಡೆಸಲು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಸೂಚನೆ ನೀಡಲಾಗಿದೆ.
ಈ ಅಭಿಯಾನವು ಗ್ರಾಮ ಪಂಚಾಯಿತಿಗಳನ್ನು ಮಕ್ಕಳ ಸ್ನೇಹಿಯಾಗಿಸಲು ಪಂಚಾಯತ್ ರಾಜ್ ಇಲಾಖೆ ಈ ಮೂಲಕ ದಾಪುಗಾಲಿಟ್ಟಿದೆ. ಸ್ಥಳೀಯ ಸಂಸ್ಥೆಗಳ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಸರ್ಕಾರದ ಮಹಾತ್ವಕಾಂಕ್ಷೆಯ ಯೋಜನೆ ಇದಾಗಿದ್ದು, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿಗಳು ತಮ್ಮ ಸದಸ್ಯರು ಹಾಗೂ ಸ್ಥಳೀಯ ಶಾಲೆಗಳು, ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ನಮ್ಮ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಕಡ್ಡಾಯವಾಗಿ ಈ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಹಾಗೂ ಮಕ್ಕಳ ವಿಷೇಶ ಗ್ರಾಮ ಸಭೆ ನಡೆಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದಿದ್ದಾರೆ.
ಮಕ್ಕಳ ವಿಷೇಶ ಗ್ರಾಮ ಸಭೆಯು ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಕ್ಕಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಮಕ್ಕಳ ಆರೋಗ್ಯ, ರಕ್ಷಣೆ, ಅಂಗನವಾಡಿಗಳು, ಶಾಲೆ, ಶಾಲಾ ಆವರಣ, ಸ್ವಚ್ಛತೆ, ಬಡ ಮಕ್ಕಳಿಗೆ ನೆರವು ಮುಂತಾದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕು. ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳ ಜೊತೆ ಅಧಿಕಾರಿಗಳು ಸಭೆಯಲ್ಲಿ ಖುದ್ದು ಹಾಜರಿರಬೇಕು. ಮಕ್ಕಳ ಸಭೆ ಅಲ್ಲವೇ ಎಂದು ಯಾರು ಸಹ ನಿರ್ಲಕ್ಷ್ಯ ತೋರುವಂತಿಲ್ಲ. ಸಾಮಾನ್ಯ ಗ್ರಾಮ ಸಭೆಗಳಿಗಿರುವಷ್ಟು ಪ್ರಾಮುಖ್ಯತೆ ಈ ಮಕ್ಕಳ ಸಭೆಗೂ ಇರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆ; ರಾಜಕೀಯ ಪಕ್ಷಗಳೊಂದಿಗೆ ಜಾಹಿರಾತು ದರ ನಿಗದಿ ಸಭೆ

ಸುದ್ದಿದಿನ,ದಾವಣಗೆರೆ : 2024 ರಲ್ಲಿ ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮುದ್ರಣ, ವಿದ್ಯುನ್ಮಾನ ಮಾಧ್ಯಮ, ಕೇಬಲ್ ಟಿ.ವಿ ಗಳಲ್ಲಿ ಪ್ರಚಾರ ಮಾಡಲು ನಿಗದಿ ಮಾಡಿರುವ ಜಾಹಿರಾತು ದರದ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನವೆಂಬರ್ 10 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಯಿತು.
ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳು ರಾಜ್ಯ ಮಟ್ಟದ ಪತ್ರಿಕೆಗಳು, ಸ್ಥಳೀಯ, ಪ್ರಾದೇಶಿಕ, ವಾರಪತ್ರಿಕೆ, ಕೇಬಲ್ ಟಿ.ವಿ.ಗಳಲ್ಲಿ ನೀಡುವ ಚುನಾವಣಾ ಜಾಹಿರಾತುಗಳಿಗೆ ಅನ್ವಯಿಸುವ ದರದ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರಿಗೆ ತಿಳಿಸಲಾಯಿತು.
ಚುನಾವಣಾ ಸಂದರ್ಭದಲ್ಲಿ ಎಂಸಿಎಂಸಿ ಸಮಿತಿಯು ಕಾರ್ಯನಿರ್ವಹಿಸಲಿದ್ದು ಇದರ ಎಲ್ಲಾ ಮೇಲ್ವಿಚಾರಣೆ ನಡೆಸಲಿದೆ. ಅಭ್ಯರ್ಥಿಗಳು ನೀಡುವ ಜಾಹಿರಾತು ವೆಚ್ಚವು ಸಹ ಅಭ್ಯರ್ಥಿಗಳಿಗೆ ವೆಚ್ಚಕ್ಕೆ ನಿಗದಿಪಡಿಸಿರುವ ಮೊತ್ತದಲ್ಲಿ ಸೇರಲಿದೆ ಎಂದು ಪಕ್ಷಗಳ ಮುಖಂಡರಿಗೆ ಮನವರಿಕೆ ಮಾಡಿದರು.
ಸಭೆಯಲ್ಲಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಜಿ.ಸಿ.ರಾಘವೇಂದ್ರ ಪ್ರಸಾದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಧನಂಜಯ, ಚುನಾವಣಾ ತಹಶೀಲ್ದಾರ್ ಅರುಣ್ ಎಸ್.ಕಾರ್ಗಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
