Connect with us

ದಿನದ ಸುದ್ದಿ

ಕಾರ್ಯಕ್ಷಮತೆಗೆ ಕಿವಿ ಹಿಂಡಲೇಬೇಕೇ…

Published

on

  • ಡಾ ಜಿ. ಎನ್. ಮಲ್ಲಿಕಾರ್ಜುನಪ್ಪ, ವಿಶ್ರಾಂತ ಪ್ರಾಂಶುಪಾಲರು, ದಾವಣಗೆರೆ

ಸ್ಮಾರ್ಟ್‌ ಸಿಟಿ, ವಿದ್ಯಾನಗರಿ, ಎಂದು ಹೆಸರಾಗಿರುವ ಮಧ್ಯಕರ್ನಾಟಕದ ಮಹಾನಗರ ದಾವಣಗೆರೆ. ಇಲ್ಲಿ ವೃತ್ತಿಪರ ಮತ್ತು ಸಾಮಾನ್ಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ಖಾಸಗೀ ಸಂಸ್ಥೆಗಳೇ ಹೆಚ್ಚು.

ಅಂತಹುದರಲ್ಲಿ ಕೆಲವು ವರ್ಷಗಳ ಹಿಂದೆ ಚಿಕ್ಕದಾಗಿ ಪ್ರಾರಂಭವಾದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಕೂಡ ಒಂದು. ಒಂದು ನೂರು ವಿದ್ಯಾರ್ಥಿಗಳಿಂದ ಆರಂಭವಾದ ಈ ಕಾಲೇಜಿನಲ್ಲಿ ಇವತ್ತು ನಾಲ್ಕು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದು ಬಿ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಬಿ.ಎಮ್‌., ಬಿ.ಸಿ.ಎ., ಮೊದಲಾದ ಸ್ನಾತಕ ಪದವಿ ತರಗತಿಗಳು ಮತ್ತು ಎಂ.ಎ., ಎಂ.ಕಾಂ., ಎಂ.ಬಿ.ಎಗಳಂಥ ಸ್ನಾತಕೋತ್ತರ ತರಗತಿಗಳು ನಡೆಯುತ್ತಿವೆ. ಯಾತಕ್ಕೂ ಸಾಲದ ಕನಿಷ್ಠ ಮೂಲ ಸೌಲಭ್ಯದಲ್ಲಿ ಗುಣಮಟ್ಟದ ಶಿಕ್ಷಣವನ್ನ ಈ ಸಂಸ್ಥೆ ನೀಡುತ್ತಾ ಬಂದಿದೆ.

ಶೇ.70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರಿಶಿಷ್ಠ ಜಾತಿ, ಪಂಗಡ ಮತ್ತು ಹೊಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿದ್ದು ಅರ್ಧದಷ್ಟು ವಿದ್ಯಾರ್ಥಿನಿಯರೇ ಇದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಈ ಕಾಲೇಜಿನಲ್ಲಿ ಸಂಜೆ ಮಹಾವಿದ್ಯಾಲಯವಿದ್ದು ಬಿ.ಎ. ಮತ್ತು ಬಿ.ಕಾಂ ತರಗತಿಗಳಲ್ಲಿ ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುವ ಹಾಸ್ಟೆಲ್ಗಳಲ್ಲಿ ನಿಯಮಾವಳಿ ಪ್ರಕಾರ ಇವರಿಗೆ ಸೌಲಭ್ಯಗಳಿವೆ.

ಮೊನ್ನೆ ಆ ಕಾಲೇಜಿನಲ್ಲಿ ಈ ಶೈಕ್ಷಣಿಕ ವರ್ಷದ ಕ್ರೀಡಾ, ಸಾಂಸ್ಕೃತಿಕ, ರಾಷ್ಟ್ರೀಯ ಸೇವಾಯೋಜನೆ, ಎನ್.ಸಿ.ಸಿ, ಯುವ ರೆಡ್‌ ಕ್ರಾಸ್, ರೋವರ್ರ್ಸ್‌ ಮತ್ತು ರೇಂಜರ್ಸ್‌, ಮುಂತಾದ ಘಟಕಗಳ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಕೆಲವು ವರ್ಷಗಳ ಹಿಂದೆ ನಾನಲ್ಲಿ ಪ್ರಾಂಶುಪಾಲನಾಗಿ ಕಾರ್ಯ ನಿರ್ವಹಿಸಿದ್ದಕ್ಕೋ ಅಥವಾ ಆ ಎಲ್ಲ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ಕಾರಣಕ್ಕೋ ನನ್ನನ್ನೂ ಅತಿಥಿಯಾಗಿ ಆಹ್ವಾನಿಸಿದ್ದರು.

ರಾಜ್ಯದ ಸಚಿವರೂ ಮತ್ತು ಆ ಕ್ಷೇತ್ರದ ಶಾಸಕರೂ ಆಗಿರುವ ಎಸ್. ಎಸ್. ಮಲ್ಲಿಕಾರ್ಜುನ್‌ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಬೇಕಿತ್ತು. ಕಾರ್ಯನಿಮಿತ್ತ ಅವರಿಗೆ ಭಾಗವಹಿಸಲು ಸಾಧ್ಯವಾಗದ ಕಾರಣ, ಅದೇ ಕಾರ್ಯಕ್ರಮಕ್ಕೆ ಇನ್ನೋರ್ವ ಅತಿಥಿಯಾಗಿ ಆಗಮಿಸಿದ್ದ ಅವರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್‌ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಂತರ ಅದೇ ಸಂಜೆ ಮಹಾವಿದ್ಯಾಲಯದ ಸುಮಾರು ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತಮಗೆ ವಿದ್ಯಾರ್ಥಿಗಳಿಗಿರುವಂತೆ ಹಾಸ್ಟೆಲ್‌ ಸೌಲಭ್ಯ ಒದಗಿಸಲು ಶಿಫಾರಸು ಮಾಡುವಂತೆ ಕೋರಿ ಪ್ರಾಂಶುಪಾಲರ ಮೂಲಕ ಮನವಿ ಪತ್ರವೊಂದನ್ನು ಅವರಿಗೆ ಕೊಟ್ಟರು.

ಪ್ರಾಂಶುಪಾಲರನ್ನು ವಿಚಾರಿಸಲಾಗಿ, ಇಲಾಖೆಯ ಅಧಿಕಾರಿಗಳ ಪ್ರಕಾರ ವಿದ್ಯಾರ್ಥಿಗಳ ಹಾಸ್ಟೆಲ್ಗಳಲ್ಲಿ ರಾತ್ರಿ 09 ಗಂಟೆಯವರೆಗೆ ಒಳಗೆ ಬರುವ ಮತ್ತು ಊಟಮಾಡುವ ಅವಕಾಶವಿದ್ದು, ವಿದ್ಯಾರ್ಥಿನಿಯರ ಹಾಸ್ಟೆಲ್ಗಳಲ್ಲಿ ರಾತ್ರಿ 08ಕ್ಕೆ ಸಮಯ ಮುಗಿಯುತ್ತದೆ. ಕಾಲೇಜು ಮುಗಿಯುವ ಸಮಯ ರಾತ್ರಿ 08 ಗಂಟೆಗೆ. ಆ ಸಮಯದಲ್ಲಿ ವಿದ್ಯಾರ್ಥಿನಿಯರು ಕಾಲೇಜಿನಿಂದ ಹಾಸ್ಟೆಲ್ಗೆ ಬರಲು ಭದ್ರತಾ ಸಮಸ್ಯೆ ಇರುವ ಕಾರಣಕ್ಕೆ ಅವಕಾಶ ನೀಡಲಾಗಿಲ್ಲ ಎನ್ನುವುದು. ಕೇಳಿ ನಿಜಕ್ಕೂ ದಂಗು ಬಡಿದಂತಾಯಿತು.

ಮಹಿಳೆಯರು ರಾತ್ರಿ ನಿರ್ಭಯದಿಂದ ಓಡಾಡುವಂತಹ ಆಡಳಿತ ವ್ಯವಸ್ಥೆ ಇರಬೇಕು ಎಂದು ಕನಸಿದ ರಾಷ್ಟ್ರದಲ್ಲಿ, ಸಮಾನ ಅವಕಾಗಳು ಮೂಲಭೂತ ಹಕ್ಕಾಗಿರುವ ದೇಶದಲ್ಲಿ, ಪುಕ್ಕಟೆಯಾಗಿ ಮಹಿಳೆಯರು ರಸ್ತೆ ಸಾರಿಗೆ ಬಸ್ಸಿನಲ್ಲಿ ದಿನದ 24 ಗಂಟೆಗಳ ಕಾಲ ಓಡಾಡುವ ಸೌಲಭ್ಯವಿರುವ ರಾಜ್ಯದಲ್ಲಿ ಸಾಮಾನ್ಯ ಪದವಿಯೊಂದನ್ನು ಆರಸಿ ಹಗಲು ದುಡಿದು ಸಂಜೆ ಒಂದಷ್ಟು ತರಗತಿಗೆ ಹೋಗುವ ವಿದ್ಯಾರ್ಥಿನಿಯರಿಗೆ ಸಲ್ಲದ ಕಾರಣದಿಂದ 3 ವರ್ಷಗಳಿಂದ ಹಾಸ್ಟೆಲ್‌ ಸೌಲಭ್ಯವನ್ನು ನಿರಾಕರಿಸಲಾಗಿದೆ ಎಂದರೆ ಏನೆನ್ನಬೇಕು?

ಪ್ರಾಥಮಿಕ ಶಿಕ್ಷಣದಿಂದ ಉನ್ನತಶಿಕ್ಷಣಕ್ಕೆ ಕಾಲಿರಿಸುವ ವಿದಾರ್ಥಿಗಳ ಅನಪಾತ(ಜಿಇಆರ್) ಇವತ್ತು ಶೇ. 26ರ ಆಸುಪಾಸು ಇದ್ದು ಅದನ್ನು ಮುಂದಿನ 2035ರ ಹೊತ್ತಿಗೆ ಶೇ.50ಕ್ಕೆ ತಲುಪಿಸಬೇಕೆಂಬುದು ರಾಷ್ಟ್ರೀಯ ಶಿಕ್ಷಣ ನೀತಿ-2020ರ ಉದ್ದೇಶ. ಇದರ ಒಂದು ಭಾಗವಾಗಿ ಹಿಂದಿನ ಸರ್ಕಾರ ರಾಜ್ಯದ ಎಲ್ಲ ಮಹಾ ನಗರಪಾಲಿಕೆಗಳಿರುವ ನಗರಗಳ ಸಾಮಾನ್ಯ ಪದವಿ ಕಾಲೇಜುಗಳಲ್ಲಿ ಸಂಜೆ ಮಹಾ ವಿದ್ಯಾಲಯಗಳನ್ನು ಆರಂಭಿಸಿತು.

ಆರ್ಥಿಕವಾಗಿ ಅನುಕೂಲವಿರದ ಪೋಷಕರ ಮಕ್ಕಳು ಹಗಲು ಅಂಗಡಿ ಮುಂಗಟ್ಟುಗಳಲ್ಲಿ ಕೆಲಸಮಾಡಿ ಸಂಜೆ ಪದವಿ ತರಗತಿಗಳಿಗೆ ಹಾಜರಾಗಿ ಪದವಿ ಪಡೆಯುವ ಮತ್ತು ಆ ಮೂಲಕ ಉತ್ತಮ ಬದುಕನ್ನು ಕಟ್ಟಿಕೊಳ್ಳುವ ಕನಸನ್ನು ನನಸು ಮಾಡಿಕೊಳ್ಳುವ ಅವಕಾಶ ಅವರದಾಯಿತು. ಲಭ್ಯ ಮಾಹಿತಿ ಪ್ರಕಾರ ಹಾಲಿ 09 ನಗರಗಳಲ್ಲಿ ಇಂಥ ವ್ಯವಸ್ಥೆ ಇದ್ದು ಸಾವಿರಾರು ಪದವಿ ಆಕಾಂಕ್ಷಿ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಅದರಲ್ಲಿ ಶೇ. 50ರಷ್ಟು ವಿದ್ಯಾರ್ಥಿನಿಯರಿದ್ದು ಅಂಥವರಲ್ಲಿ ದಾವಣಗೆರೆಯ ಸಂಜೆ ಮಹಾವಿದ್ಯಾಲಯದಲ್ಲಿ ಕಲಿಯುತ್ತಿರುವ ಈ ವಿದ್ಯಾರ್ಥಿನಿಯರೂ ಕೂಡ ಒಬ್ಬರು.

ಹೊಸ ಶಿಕ್ಷಣ ನೀತಿಯ ಪೂರ್ಣಾನುಷ್ಠಾನಕ್ಕೆ ಮುಂದಾದ ಮೊದಲ ರಾಜ್ಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ರಾಜ್ಯದಲ್ಲಿ, ಕ್ಲಬ್ಬು ಪಬ್ಬು, ಬಾರು, ರೆಸ್ಟೋರೆಂಟ್ಗಳಲ್ಲಿ ಹೆಣ್ಣು-ಗಂಡೆನ್ನದೆ ರಾತ್ರಿ 12ರವರೆಗೆ ಮೋಜು ಮಸ್ತಿಗೆ ಅವಕಾಶವಿರುವ ನಗರಗಳಲ್ಲಿ, ಈ ವಿದ್ಯಾರ್ಥಿನಿಯರಿಗೇಕೆ ಈ ದುಃಸ್ಥಿತಿ? ಹಾಸ್ಟೆಲ್ಗಳಿಂದಾಗಿ ಕಾಲೇಜುಗಳಿವೆಯೋ ಕಾಲೇಜುಗಳಿಗಾಗಿ ಹಾಸ್ಟೆಲುಗಳಿವೆಯೋ ತಿಳಿಯಲಾಗದಾಗಿದೆ. ಇದೇ ಪರಿಸ್ಥಿತಿ ಉಳಿದ 08 ನಗರಗಳಲ್ಲಿಯೂ ಇರಬಹುದೇನೋ. ಇದಕ್ಕೆ ಕಾರಣರಾದ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಚಾಟಿ ಬೀಸುವವರಾರು.

ಚಾಟಿ ಬೀಸಿ ಕೆಲಸ ಮಾಡಿಸುವುದೇ ಕಾರ್ಯಕ್ಷಮತೆಯೇ? ಹೀಗಾದರೆ ಓದಿದ ವಿದ್ಯೆಗೆ, ಪಡೆದ ಸರ್ಕಾರಿ ಹುದ್ದೆಗೆ ಸಂದ ಬೆಲೆಯೇನು? ಕೊನೇ ಪಕ್ಷ ತಮ್ಮ ಮಕ್ಕಳೇ ಈ ದುಃಸ್ಥಿತಿಗೊಳಗಾಗಿದ್ದಿದ್ದರೆ ಇವರಿಗೇನೆನ್ನಿಸುತ್ತಿತ್ತು? ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಷ್ಕರಣೆಗೆ ಮುಂದಾಗಿರುವ ರಾಜ್ಯ ಸರ್ಕಾರ ಇಂಥ ವಿಪರ್ಯಾಸಗಳತ್ತ ಗಮನಕೊಡಬೇಕಿದೆ.

ಕಾಲೇಜಿನ ವೇಳಾಪಟ್ಟಿಯಲ್ಲಿ ಹೊಂದಾಣಿಕೆ ಮಾಡಿಯೋ, ರಜಾದಿನಗಳಂದು ತರಗತಿ ನಡೆಸಿಯೋ, ಕೊನೆಯ ಪಾಳಿಯಾಗಿ ರಾತ್ರಿ 09 ಗಂಟೆಗೆ ಕಾಲೇಜಿನಿಂದ ಹಾಸ್ಟೆಲ್ಗಳ ಮಾರ್ಗದಲ್ಲಿ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದನ್ನು ವ್ಯವಸ್ಥೆ ಮಾಡಿಯೋ ಈ ವಿದ್ಯಾರ್ಥಿನಿಯರಿಗೆ ಅನುಕೂಲ ಮಾಡಿಕೊಡಬೇಕಿದೆ. ಸಂವಿಧಾನದತ್ತ ಅವರ ಮೂಲಭೂತ ಹಕ್ಕುಗಳಿಗೆ ನ್ಯಾಯ ಒದಗಿಸಬೇಕಿದೆ.

ಡಾ ಜಿ. ಎನ್. ಮಲ್ಲಿಕಾರ್ಜುನಪ್ಪ, ವಿಶ್ರಾಂತ ಗ್ರೇಡ್-1 ಪ್ರಾಂಶುಪಾಲರು, ಕಾಲೇಜು ಶಿಕ್ಷಣ ಇಲಾಖೆ.
ಮೊ: 9449077003

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಸಿಹಿಸುದ್ದಿ: 4,744 ತಾಂತ್ರಿಕೇತರ ಹಾಗೂ ತಾಂತ್ರಿಕ ಹುದ್ದೆಗಳ ನೇಮಕಾತಿಗೆ ಸಿದ್ಧತೆ

Published

on

KEA Recruitment 2026: ಪದವಿ, ಪಿಯುಸಿ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ; 4,744 ಹುದ್ದೆಗಳಿಗೆ ಈ ತಿಂಗಳಲ್ಲೇ ಅಧಿಸೂಚನೆ, ನವೆಂಬರ್-ಡಿಸೆಂಬರ್‌ನಲ್ಲಿ ಪರೀಕ್ಷೆ!

ಸುದ್ದಿದಿನ,ಬೆಂಗಳೂರು: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಪದವಿ ಹಾಗೂ ಪಿಯುಸಿ-ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಅವಕಾಶ ಕಲ್ಪಿಸಲು ಸಜ್ಜಾಗಿದೆ. ವಿವಿಧ ಇಲಾಖೆಗಳಲ್ಲಿನ ಒಟ್ಟು 4,744 ತಾಂತ್ರಿಕೇತರ ಹಾಗೂ ತಾಂತ್ರಿಕ ಹುದ್ದೆಗಳ ನೇಮಕಾತಿಗೆ ಈ ತಿಂಗಳಲ್ಲೇ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆದಿದೆ. ನೇಮಕಾತಿ ಪ್ರಕ್ರಿಯೆಯ ಭಾಗವಾಗಿ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಲಿಖಿತ ಪರೀಕ್ಷೆ ನಡೆಸುವ ಸಾಧ್ಯತೆಯೂ ಇದ್ದು, ಅಭ್ಯರ್ಥಿಗಳು ಈಗಿನಿಂದಲೇ ಅಧ್ಯಯನ ಆರಂಭಿಸುವುದು ಸೂಕ್ತವಾಗಿದೆ.

ಹೈಲೈಟ್ಸ್: 4,744 ಹುದ್ದೆಗಳಿಗೆ ನೇಮಕಾತಿ
  • KEAಯಿಂದ ಒಟ್ಟು 4,744 ಹುದ್ದೆಗಳ ನೇಮಕಾತಿಗೆ ಸಿದ್ಧತೆ
  • ಪದವಿ ಮಟ್ಟದ ತಾಂತ್ರಿಕೇತರ ಹುದ್ದೆಗಳು – 2,421
  • ಪಿಯುಸಿ ಮಟ್ಟದ ತಾಂತ್ರಿಕೇತರ ಹುದ್ದೆಗಳು – 2,062
  • ತಾಂತ್ರಿಕ ಹುದ್ದೆಗಳು – 261; ಇನ್ನಷ್ಟು ಹುದ್ದೆಗಳು ಸೇರುವ ಸಾಧ್ಯತೆ
  • ಈ ತಿಂಗಳು ಅಧಿಸೂಚನೆ; ನವೆಂಬರ್-ಡಿಸೆಂಬರ್‌ನಲ್ಲಿ ಲಿಖಿತ ಪರೀಕ್ಷೆಗೆ ಸಿದ್ಧತೆ

http://Visit : www.suddidina.com

ಪದವಿ ಮಟ್ಟದಲ್ಲಿ 2,421 ಹುದ್ದೆಗಳು

ಈ ಬೃಹತ್ ನೇಮಕಾತಿಯಲ್ಲಿ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ. ಪದವಿ ಮಟ್ಟದ ತಾಂತ್ರಿಕೇತರ ಹುದ್ದೆಗಳು 2,421 ಇದ್ದು, ವಿವಿಧ ಸರಕಾರಿ ಇಲಾಖೆಗಳ ವ್ಯಾಪ್ತಿಯಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.

ಪದವಿ ಪೂರ್ಣಗೊಳಿಸಿರುವ ಉದ್ಯೋಗಾಕಾಂಕ್ಷಿಗಳು ಯಾವ ಇಲಾಖೆಯಲ್ಲಿ ಯಾವ ಹುದ್ದೆಗಳು ಲಭ್ಯವಿರಲಿವೆ, ಹುದ್ದೆವಾರು ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ವಿಧಾನ ಸೇರಿದಂತೆ ಅಧಿಸೂಚನೆಯಲ್ಲಿ ಪ್ರಕಟವಾಗುವ ಸಂಪೂರ್ಣ ವಿವರಗಳನ್ನು ಗಮನಿಸಬೇಕು.

ಪಿಯುಸಿ ಅಭ್ಯರ್ಥಿಗಳಿಗೂ ಅವಕಾಶ

ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರಿಗೂ ಈ ನೇಮಕಾತಿಯಲ್ಲಿ ಉತ್ತಮ ಅವಕಾಶವಿದೆ. ಪಿಯುಸಿ ಮಟ್ಟದ ತಾಂತ್ರಿಕೇತರ ಹುದ್ದೆಗಳು 2,062 ಇವೆ. ಹೀಗಾಗಿ ಪದವಿ ಮಾತ್ರವಲ್ಲದೆ ಪಿಯುಸಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳೂ ಈ ನೇಮಕಾತಿಯ ಮೇಲೆ ಕಣ್ಣಿಟ್ಟಿದ್ದಾರೆ.

ಪಿಯುಸಿ ಹಂತದ ಹುದ್ದೆಗಳಿಗೆ ಅರ್ಹರಾಗಿರುವವರು ಅಧಿಸೂಚನೆ ಪ್ರಕಟವಾದ ನಂತರ ತಮ್ಮ ವಿದ್ಯಾರ್ಹತೆಗೆ ಹೊಂದುವ ಹುದ್ದೆಗಳನ್ನು ಗುರುತಿಸಿ ಅರ್ಜಿ ಸಲ್ಲಿಸಬಹುದು.

ತಾಂತ್ರಿಕ ಹುದ್ದೆಗಳಿಗೂ ಅವಕಾಶ

ತಾಂತ್ರಿಕ ವಿಭಾಗದಲ್ಲಿಯೂ 261 ಹುದ್ದೆಗಳನ್ನು ಭರ್ತಿ ಮಾಡಲು ಸಿದ್ಧತೆ ನಡೆದಿದೆ. ತಾಂತ್ರಿಕ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ತಮ್ಮ ಅರ್ಹತೆಗೆ ಅನುಗುಣವಾಗಿ ಹುದ್ದೆಗಳನ್ನು ಪರಿಶೀಲಿಸಬೇಕಾಗಿದೆ.

ಒಟ್ಟು 4,744 ಹುದ್ದೆಗಳ ಪೈಕಿ 2,421 ಪದವಿ ಮಟ್ಟದ ತಾಂತ್ರಿಕೇತರ, 2,062 ಪಿಯುಸಿ ಮಟ್ಟದ ತಾಂತ್ರಿಕೇತರ ಹಾಗೂ 261 ತಾಂತ್ರಿಕ ಹುದ್ದೆಗಳು ಸೇರಿವೆ. ಈ ಮೂಲಕ ವಿವಿಧ ವಿದ್ಯಾರ್ಹತೆ ಹೊಂದಿರುವ ಉದ್ಯೋಗಾಕಾಂಕ್ಷಿಗಳಿಗೆ ಅವಕಾಶ ಸಿಗಲಿದೆ.

ಇನ್ನಷ್ಟು ಹುದ್ದೆಗಳು ಸೇರುವ ಸಾಧ್ಯತೆ

ಪ್ರಸ್ತುತ ಪ್ರಕಟಿಸಿರುವ ಹುದ್ದೆಗಳ ಸಂಖ್ಯೆಯೇ ಅಂತಿಮವಾಗಿಲ್ಲ ಎಂಬುದು ಗಮನಾರ್ಹ. ನಂತರದ ದಿನಗಳಲ್ಲಿ ಇನ್ನಷ್ಟು ಹೊಸ ಇಲಾಖೆಗಳು ಮತ್ತು ಹುದ್ದೆಗಳು ನೇಮಕಾತಿ ಪಟ್ಟಿಗೆ ಸೇರುವ ಸಾಧ್ಯತೆ ಇದೆ. ಹೀಗಾಗಿ ಅಭ್ಯರ್ಥಿಗಳು ಕೇವಲ ಈಗಿರುವ ಹುದ್ದೆಗಳನ್ನಷ್ಟೇ ಗಮನಿಸದೆ, ಅಧಿಕೃತ ಅಧಿಸೂಚನೆ ಹೊರಬರುವವರೆಗೆ KEA ಪ್ರಕಟಣೆಗಳನ್ನು ನಿರಂತರವಾಗಿ ಪರಿಶೀಲಿಸಬೇಕು.

ಪರೀಕ್ಷೆಗೆ ಈಗಿನಿಂದಲೇ ತಯಾರಿ

ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಲಿಖಿತ ಪರೀಕ್ಷೆ ನಡೆಸಲು ಸಿದ್ಧತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಿಗೆ ತಯಾರಿಗೆ ಸಮಯ ಸೀಮಿತವಾಗಿರಲಿದೆ. ನೇಮಕಾತಿಯ ಪಠ್ಯಕ್ರಮದ ವಿವರಗಳನ್ನೂ ಮುಂಚಿತವಾಗಿ ಪರಿಶೀಲಿಸಿ, ವಿಷಯವಾರು ಅಧ್ಯಯನ ಆರಂಭಿಸುವುದು ಉತ್ತಮ.

ಅಂತಿಮವಾಗಿ, ಹುದ್ದೆಗಳ ಸಂಖ್ಯೆ, ಇಲಾಖೆಗಳ ವಿವರ, ವಿದ್ಯಾರ್ಹತೆ, ಪರೀಕ್ಷಾ ವಿಧಾನ, ಪಠ್ಯಕ್ರಮ, ವಯೋಮಿತಿ ಹಾಗೂ ಅರ್ಜಿ ಸಲ್ಲಿಕೆಯ ದಿನಾಂಕ ಸೇರಿದಂತೆ ಪೂರ್ಣ ಹಾಗೂ ಅಧಿಕೃತ ಮಾಹಿತಿಯನ್ನು ಅಧಿಸೂಚನೆ ಪ್ರಕಟವಾದ ಬಳಿಕವೇ ಖಚಿತಪಡಿಸಿಕೊಳ್ಳಬೇಕು. ಅಭ್ಯರ್ಥಿಗಳು ಪ್ರಕಟಣೆಯ ಲಿಂಕ್ ಪರಿಶೀಲಿಸಿ, ತಮ್ಮ ಅರ್ಹತೆಗೆ ಹೊಂದುವ ಹುದ್ದೆಗಳ ವಿವರಗಳನ್ನು ತಿಳಿದುಕೊಂಡು ಸಿದ್ಧತೆ ಆರಂಭಿಸಬಹುದು.

Continue Reading

ದಿನದ ಸುದ್ದಿ

ಬಿಜೆಪಿ ರೈತ ಮೋರ್ಚಾದಿಂದ ಬಂದ್‌ಗೆ ಕರೆ; ಹಲವು ವೃತ್ತಗಳಲ್ಲಿ ಟೈರ್‌ಗೆ ಬೆಂಕಿ, ಬೆಂಕಿ ನಂದಿಸಿದ ಪೊಲೀಸರು

Published

on

ಮೇಲ್ಭದ್ರ ನೀರಿಗಾಗಿ ದಾವಣಗೆರೆ ಬಂದ್‌: ಗುಟ್ಕಾ–ಪಾನ್‌ ಮಸಾಲಾ ನಿಷೇಧಕ್ಕೂ ಆಗ್ರಹ, ನಗರದಲ್ಲಿ ಪ್ರತಿಭಟನೆ ಕಾವು

ಸುದ್ದಿದಿನ,ದಾವಣಗೆರೆ: ಮೇಲ್ಭದ್ರ ಯೋಜನೆಯ ನೀರನ್ನು ಸಮರ್ಪಕವಾಗಿ ಬಿಡುಗಡೆ ಮಾಡಬೇಕು ಎಂಬ ಬೇಡಿಕೆ ಸೇರಿದಂತೆ ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು ದಾವಣಗೆರೆಯಲ್ಲಿ ಬಿಜೆಪಿ ರೈತ ಮೋರ್ಚಾ ಬಂದ್‌ಗೆ ಕರೆ ನೀಡಿದೆ. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ನಗರದ ವಿವಿಧ ವೃತ್ತಗಳಲ್ಲಿ ಪ್ರತಿಭಟನಾಕಾರರು ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಮೇಲ್ಭದ್ರ ಯೋಜನೆಯ ನೀರು ದಾವಣಗೆರೆ ಭಾಗದ ರೈತರ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ನೀರಿನ ಲಭ್ಯತೆ ಕೃಷಿ ಚಟುವಟಿಕೆಗಳ ಮೇಲೆ ನೇರ ಪರಿಣಾಮ ಬೀರುವ ಹಿನ್ನೆಲೆಯಲ್ಲಿ, ನೀರು ಬಿಡುಗಡೆ ವಿಚಾರದಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ರೈತರ ಬೇಡಿಕೆಗೆ ತ್ವರಿತವಾಗಿ ಸ್ಪಂದಿಸಬೇಕು ಎಂಬ ಆಗ್ರಹವೂ ಕೇಳಿಬಂತು.

http://Visit : www.suddidina.com

davangere-bandh-upper-bhadra-water-release-gutka-pan-masala-ban-protest-renukacharya

ಗುಟ್ಕಾ, ಪಾನ್‌ ಮಸಾಲಾ ನಿಷೇಧಕ್ಕೂ ಆಗ್ರಹ

ಬಂದ್‌ನ ಮತ್ತೊಂದು ಪ್ರಮುಖ ಬೇಡಿಕೆ ಗುಟ್ಕಾ ಹಾಗೂ ಪಾನ್‌ ಮಸಾಲಾ ನಿಷೇಧಕ್ಕೆ ಸಂಬಂಧಿಸಿದೆ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಇಂತಹ ಉತ್ಪನ್ನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರೈತ ಮೋರ್ಚಾ ಒತ್ತಾಯಿಸಿದೆ.

ಈ ಎರಡು ಪ್ರಮುಖ ವಿಚಾರಗಳನ್ನು ಮುಂದಿಟ್ಟುಕೊಂಡು ಬಂದ್‌ಗೆ ಬೆಂಬಲ ನೀಡುವಂತೆ ವ್ಯಾಪಾರಸ್ಥರು, ವಿದ್ಯಾರ್ಥಿಗಳು, ಶಾಲಾ-ಕಾಲೇಜು ಆಡಳಿತ ಮಂಡಳಿಗಳು ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ನಗರದ ವಿವಿಧ ಭಾಗಗಳಲ್ಲಿ ಪ್ರತಿಭಟನೆಯ ವಾತಾವರಣ ನಿರ್ಮಾಣವಾಗಿದ್ದು, ಬಂದ್‌ಗೆ ಬೆಂಬಲ ಪಡೆಯಲು ಸಂಘಟಕರು ಕರೆ ನೀಡಿದ್ದಾರೆ.

https://x.com/ians_india/status/2094602342230528256

ಟೈರ್‌ಗೆ ಬೆಂಕಿ; ಪೊಲೀಸರ ಮಧ್ಯಪ್ರವೇಶ

ಪ್ರತಿಭಟನೆಯ ವೇಳೆ ನಗರದ ಹಲವು ವೃತ್ತಗಳಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಲಾಯಿತು. ಇದರಿಂದ ಕೆಲಕಾಲ ರಸ್ತೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿ ನಿಯಂತ್ರಣದಲ್ಲಿಡಲು ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದರು.

ಸಾರ್ವಜನಿಕ ಪ್ರತಿಭಟನೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಪರಿಸ್ಥಿತಿಯನ್ನು ಗಮನಿಸಲಾಗಿದ್ದು, ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವ ಪ್ರಯತ್ನ ನಡೆದಿದೆ.

ಬಂದ್‌ಗೆ ವ್ಯಾಪಾರಸ್ಥರ ಬೆಂಬಲ?

ಬಂದ್ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ವ್ಯಾಪಾರಸ್ಥರು, ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ಸಹಕರಿಸಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದ್ದಾರೆ. ಆದರೆ ಬಂದ್‌ಗೆ ವಿವಿಧ ವರ್ಗಗಳಿಂದ ಎಷ್ಟರ ಮಟ್ಟಿಗೆ ಬೆಂಬಲ ದೊರೆಯಲಿದೆ ಎಂಬುದು ದಿನದ ಬೆಳವಣಿಗೆಗಳಿಂದ ಸ್ಪಷ್ಟವಾಗಲಿದೆ.

ಮೇಲ್ಭದ್ರ ನೀರಿನ ವಿಚಾರ ದಾವಣಗೆರೆ ಜಿಲ್ಲೆಯ ರೈತರ ಪಾಲಿಗೆ ದೀರ್ಘಕಾಲದ ಪ್ರಮುಖ ವಿಷಯವಾಗಿದ್ದು, ಇದೀಗ ಈ ಬೇಡಿಕೆ ಮತ್ತೊಮ್ಮೆ ರಾಜಕೀಯ ಹಾಗೂ ಸಾರ್ವಜನಿಕ ಚರ್ಚೆಯ ಕೇಂದ್ರಕ್ಕೆ ಬಂದಿದೆ. ಇದರ ಜತೆಗೆ ಗುಟ್ಕಾ ಮತ್ತು ಪಾನ್‌ ಮಸಾಲಾ ನಿಷೇಧದ ಬೇಡಿಕೆಯನ್ನೂ ಮುನ್ನೆಲೆಗೆ ತರುವ ಮೂಲಕ ಬಿಜೆಪಿ ರೈತ ಮೋರ್ಚಾ ಹೋರಾಟಕ್ಕೆ ವ್ಯಾಪಕ ಸ್ವರೂಪ ನೀಡಲು ಮುಂದಾಗಿದೆ.

ಒಟ್ಟಿನಲ್ಲಿ, ಮೇಲ್ಭದ್ರ ನೀರು ಬಿಡುಗಡೆ ಮತ್ತು ಗುಟ್ಕಾ–ಪಾನ್‌ ಮಸಾಲಾ ನಿಷೇಧ ಎಂಬ ಎರಡು ಪ್ರಮುಖ ಬೇಡಿಕೆಗಳೊಂದಿಗೆ ದಾವಣಗೆರೆಯಲ್ಲಿ ಬಂದ್‌ ಹಾಗೂ ಪ್ರತಿಭಟನೆ ಕಾವು ಪಡೆದಿದ್ದು, ಸರಕಾರದ ಮುಂದಿನ ಪ್ರತಿಕ್ರಿಯೆ ಇದೀಗ ಕುತೂಹಲ ಮೂಡಿಸಿದೆ.

Continue Reading

ದಿನದ ಸುದ್ದಿ

ಅಪೌಷ್ಟಿಕತೆ ನಿವಾರಣೆಗೆ ಹೊಸ ಹೆಜ್ಜೆ; ಶಾಲೆ ಮುಗಿಯುವ ಮುನ್ನ ಮಕ್ಕಳಿಗೆ ಪೌಷ್ಟಿಕ ತಿನಿಸು

Published

on

ಗಣಿ ಬಾಧಿತ ಜಿಲ್ಲೆಗಳ ಮಕ್ಕಳಿಗೆ ‘ಸಂಜೆ ಸ್ನ್ಯಾಕ್ಸ್’ ಭಾಗ್ಯ: 24 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ

ಸುದ್ದಿದಿನ,ಹೂವಿನಹಡಗಲಿ: ಗಣಿ ಚಟುವಟಿಕೆಗಳಿಂದ ಬಾಧಿತ ಪ್ರದೇಶಗಳ ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆ ಸುಧಾರಣೆಗೆ ಕರ್ನಾಟಕ ಗಣಿ ಮತ್ತು ಪರಿಸರ ಪುನಸ್ಥಾಪನೆ ನಿಗಮ (ಕೆಎಂಆರ್‌ಸಿಇ) ಹೊಸ ಹೆಜ್ಜೆ ಇಟ್ಟಿದೆ. ವಿಜಯನಗರ, ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳಿಗೆ ಶೀಘ್ರದಲ್ಲೇ ಸಂಜೆ ಸ್ನ್ಯಾಕ್ಸ್ ವಿತರಿಸುವ ಯೋಜನೆ ರೂಪಿಸಲಾಗಿದೆ.

ಈ ಸಂಬಂಧ ನಾಲ್ಕು ಜಿಲ್ಲೆಗಳ ಜಿಲ್ಲಾ ಪಂಚಾಯಿತಿಗಳ ಮೂಲಕ ಸಂಬಂಧಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ರವಾನೆಯಾಗಿದ್ದು, ಯೋಜನೆಯನ್ನು ಅನುಷ್ಠಾನಗೊಳಿಸಲು ಸಿದ್ಧತೆ ಆರಂಭಿಸಲಾಗಿದೆ. ಹೂವಿನಹಡಗಲಿ ತಾಲೂಕಿನಲ್ಲಿ ಈಗಾಗಲೇ ಮುಖ್ಯಗುರುಗಳ ಸಭೆ ನಡೆಸಿ ಅಗತ್ಯ ಕ್ರಮಗಳ ಕುರಿತು ಚರ್ಚಿಸಲಾಗಿದೆ.

http://Visit : www.suddidina.com

ಅಪೌಷ್ಟಿಕತೆ ತಡೆಗೆ ಪೌಷ್ಟಿಕ ಆಹಾರ

ಗಣಿ ಬಾಧಿತ ಪ್ರದೇಶಗಳಲ್ಲಿ ಮಕ್ಕಳಿಗೆ ಹೆಚ್ಚುವರಿ ಪೌಷ್ಟಿಕ ಆಹಾರ ಒದಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಸಂಜೆ ಸಮಯದಲ್ಲಿ ಮಕ್ಕಳಿಗೆ ನೆನೆಸಿದ ಶೇಂಗಾ, ಮೊಳಕೆಯೊಡೆದ ಹೆಸರುಕಾಳು, ಚಕ್ಕಿ ಸೇರಿದಂತೆ ವಿವಿಧ ಪೌಷ್ಟಿಕ ಆಹಾರಗಳನ್ನು ನೀಡಲು ಉದ್ದೇಶಿಸಲಾಗಿದೆ. ಕೆಲವು ದಿನಗಳಲ್ಲಿ ಮೂಸಂಬಿ, ಕಿತ್ತಳೆ, ಸಪೋಟ ಮತ್ತಿತರ ಹಣ್ಣುಗಳನ್ನೂ ವಿತರಿಸುವ ವ್ಯವಸ್ಥೆ ಇರಲಿದೆ.

ಮಕ್ಕಳಲ್ಲಿ ಕಂಡುಬರುತ್ತಿರುವ ಅಪೌಷ್ಟಿಕತೆ ಹಾಗೂ ಪೌಷ್ಟಿಕಾಂಶದ ಕೊರತೆ ನಿವಾರಣೆಗೆ ಪೂರಕವಾಗುವಂತೆ ಈ ಯೋಜನೆ ರೂಪಿಸಲಾಗಿದೆ. ಶಾಲೆಯಲ್ಲಿ ಶಿಕ್ಷಣದ ಜತೆಗೆ ಮಕ್ಕಳ ಆರೋಗ್ಯಕ್ಕೂ ಆದ್ಯತೆ ನೀಡುವ ಪ್ರಯತ್ನ ಇದಾಗಿದೆ.

24,352 ಮಕ್ಕಳಿಗೆ ಪ್ರಯೋಜನ

ಹೂವಿನಹಡಗಲಿ ತಾಲೂಕಿನಲ್ಲಿ 138 ಸರ್ಕಾರಿ ಪ್ರಾಥಮಿಕ ಹಾಗೂ 27 ಪ್ರೌಢಶಾಲೆಗಳ ಒಟ್ಟು 24,352 ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಯೋಜನೆಗಾಗಿ ಕೆಎಂಆರ್‌ಸಿಇ ವತಿಯಿಂದ ₹10.64 ಕೋಟಿಗೂ ಹೆಚ್ಚು ಮೊತ್ತದ ಅನುದಾನ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಮೂರು ವರ್ಷಗಳ ಅವಧಿಗೆ ಒಟ್ಟು ಸುಮಾರು ₹33 ಕೋಟಿ ಆಡಳಿತಾತ್ಮಕ ಮಂಜೂರಾತಿ ದೊರೆತಿದ್ದು, ಅಡುಗೆದಾರರು ಮತ್ತು ಸಹಾಯಕಿಯರ ವೆಚ್ಚಕ್ಕೂ ಪ್ರತ್ಯೇಕ ಅನುದಾನ ಮೀಸಲಿಡಲಾಗಿದೆ. ಇದರಿಂದ ಯೋಜನೆ ಕೇವಲ ತಾತ್ಕಾಲಿಕ ಕ್ರಮವಾಗದೆ ನಿರಂತರವಾಗಿ ನಡೆಯುವ ನಿರೀಕ್ಷೆ ಮೂಡಿದೆ.

SATS ಮಾಹಿತಿ ಅಪ್‌ಡೇಟ್‌ ಸವಾಲು

ಆದರೆ ಯೋಜನೆ ಅನುಷ್ಠಾನಕ್ಕೆ ವಿದ್ಯಾರ್ಥಿಗಳ ನಿಖರ ಸಂಖ್ಯೆಯೇ ಪ್ರಮುಖ ಆಧಾರವಾಗಿದ್ದು, SATS ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಮಾಹಿತಿ ಅಪ್‌ಡೇಟ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಹೊಸ ಪ್ರವೇಶ, ಶಾಲೆ ಬದಲಾವಣೆ ಸೇರಿದಂತೆ ಹಲವು ಕಾರಣಗಳಿಂದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಬದಲಾವಣೆಯಾಗಿರುವುದರಿಂದ ಅಂತಿಮ ಪಟ್ಟಿ ಸಿದ್ಧಪಡಿಸುವುದು ಸವಾಲಾಗಿದೆ.

ಸೆಪ್ಟೆಂಬರ್ 5ರೊಳಗೆ ಮಾಹಿತಿ ನವೀಕರಣ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ನಂತರ ಸಂಜೆ ಸ್ನ್ಯಾಕ್ಸ್ ವಿತರಣೆಗೆ ವೇಗ ಸಿಗುವ ಸಾಧ್ಯತೆಯಿದೆ.

ಶಿಕ್ಷಕರಿಗೆ ಹೆಚ್ಚುವರಿ ಹೊರೆ?

ಯೋಜನೆಯ ಉದ್ದೇಶ ಉತ್ತಮವಾಗಿದ್ದರೂ, ಅನುಷ್ಠಾನದ ಹೊಣೆಗಾರಿಕೆ ಶಿಕ್ಷಕರ ಮೇಲೆಯೇ ಹೆಚ್ಚಾಗುವ ಆತಂಕವೂ ವ್ಯಕ್ತವಾಗಿದೆ. ಈಗಾಗಲೇ ಎಐ ಹಾಜರಾತಿ, ಬಿಸಿಯೂಟ, ಮೊಟ್ಟೆ, ಬಾಳೆಹಣ್ಣು ಹಾಗೂ ವಿವಿಧ ಡಿಜಿಟಲ್ ದಾಖಲೆಗಳ ನಿರ್ವಹಣೆಯಲ್ಲಿ ಶಿಕ್ಷಕರು ನಿರತರಾಗಿದ್ದಾರೆ. ನೆಟ್‌ವರ್ಕ್ ಸಮಸ್ಯೆಯೂ ಕೆಲವೊಮ್ಮೆ ತೊಂದರೆ ನೀಡುತ್ತಿದೆ.

ಶಾಲೆ ಮುಗಿಯುವ ವೇಳೆಯಲ್ಲಿ ಸ್ನ್ಯಾಕ್ಸ್ ವಿತರಣೆ, ದಾಖಲಾತಿ ಮತ್ತು ಮೇಲ್ವಿಚಾರಣೆ ಮತ್ತೊಂದು ಜವಾಬ್ದಾರಿಯಾಗಬಹುದು ಎಂಬುದು ಶಿಕ್ಷಕರ ಅಭಿಪ್ರಾಯ. ಹೀಗಾಗಿ ಮಕ್ಕಳಿಗೆ ಪೌಷ್ಟಿಕ ಆಹಾರ ತಲುಪಿಸುವ ಯೋಜನೆಯ ಜತೆಗೆ ಶಿಕ್ಷಕರ ಮೇಲಿನ ಆಡಳಿತಾತ್ಮಕ ಒತ್ತಡ ಕಡಿಮೆ ಮಾಡುವ ವ್ಯವಸ್ಥೆಯೂ ಅಗತ್ಯವಾಗಿದೆ.

ವಾರದ ಆರು ದಿನಗಳಲ್ಲಿ ವಿವಿಧ ಪೌಷ್ಟಿಕ ತಿನಿಸುಗಳು ಹಾಗೂ ಶನಿವಾರ ಹಣ್ಣು ವಿತರಿಸುವ ಉದ್ದೇಶವಿದ್ದು, ಸರಕಾರದ ಅಂತಿಮ ಸೂಚನೆ ಬಂದ ಬಳಿಕ ಯೋಜನೆಗೆ ಚಾಲನೆ ಸಿಗಲಿದೆ.

Continue Reading

Trending