Connect with us

ಅಂತರಂಗ

ಒಡಲುಗೊಂಡವ ಹುಸಿಯ: ಜಿ. ರಾಜಶೇಖರ

Published

on

  • ಎಚ್ ಪಟ್ಟಾಭಿರಾಮ ಸೋಮಯಾಜಿ, ಮಂಗಳೂರು

Beneath those rugged elms, that yew tree’s shade,
Where heaves the turf in many a moldering heap,
Each in his narrow cell forever laid,
The rude forefathers of the hamlet sleep.

Oft did the harvest to their sickle yield,
Their furrow oft the stubborn glebe has broke;
How jocund did they drive their team afield!
How bowed the woods beneath their sturdy stroke!

Let not Ambition mock their useful toil,
Their homely joys, and destiny obscure;
Nor Grandeur hear with a disdainful smile
The short and simple annals of the poor.

The boast of heraldry, the pomp of power,
And all that beauty, all that wealth e’er gave,
Awaits alike the inevitable hour.
The paths of glory lead but to the grave….

Full many a gem of purest ray serene,
The dark unfathomed caves of ocean bear:
Full many a flower is born to blush unseen,
And waste its sweetness on the desert air.

Yet even these bones from insult to protect
Some frail memorial erected nigh,
With uncouth rhymes and shapeless sculpture decked,
Implores the passing tribute of a sigh.

-(Thomas Gray: “Elegy Written in a Country Churchyard”; 1754/1751)

” ಬೋಳಿಮಗನೆ, ಬಹುವಚನ ಅಂತೆ ಬಹುವಚನ. ಏಕವಚನ ಮಾಡ್ತೇವೆ ನೋಡ್ತಾ ಇರು, ಸೂಳೆಮಗನೆ. ಇದು ಮಡಿಕೇರಿ, ತಿಳ್ಕೊ” ಎಂದು ವಿಕಾರವಾಗಿ ಕಿರುಚುತ್ತಾ ಸುಮಾರು ಮೂವತ್ತರಿಂದ ನಲವತ್ತರಷ್ಟು ಜನ ಸ್ಟೇಜಿಗೆ ನುಗ್ಗಿ ಕೈಯಲ್ಲಿದ್ದ ಟಿಪ್ಪಣಿ ಕಾಗದಗಳ ಕಟ್ಟನ್ನು ಬಲಾತ್ಕಾರದಿಂದ ಕಸಿದು ಹರಿದು ಬಿಸಾಡಿ, ಮೈಕನ್ನು ಕಿತ್ತು, ಕಾಲರನ್ನು ಹಿಡಿದು ಎಳೆದಾಡಿ ನನ್ನ ಮೇಲೆ ಏಕಾಏಕಿ ನುಗ್ಗಿದರು. ವಿವರವಾದ ಸುದೀರ್ಘ ಟಿಪ್ಪಣಿಗಳ ಆ ಕಾಗದದ ಕಟ್ಟಿನಲ್ಲಿ ಆ ಕಾಲದ ನನ್ನ ಯೋಚನೆಗಳನ್ನು ಭಟ್ಟಿಯಿಳಿಸುವ ಪ್ರಯತ್ನವಿತ್ತು; ಮಹಾತ್ಮಾ ಗಾಂಧಿ, ಮಾರ್ಟಿನ್ ಹೈಡೆಗರ್, ಸಾದತ್ ಹಸನ್ ಮಾಂಟೋ, ರಾಮಕೃಷ್ಣ ಪರಮಹಂಸ ಮುಂತಾದವರಿಂದ ನಾನು ತಯಾರಿಸಿಕೊಂಡ ಟಿಪ್ಪಣಿಗಳೂ ತರ್ಜುಮೆಗಳೂ ಅದರಲ್ಲಿ ಸೇರಿದ್ದವು; ಅದನ್ನು ಕಳೆದುಕೊಂಡ ನೋವು ಈಗಲೂ ನನ್ನನ್ನು ಮಾಯದ ಹಳೆಯ ಗಾಯದಂತೆ ಬಾಧಿಸುವುದು.

ಇದು ಈಗ ಇಪ್ಪತ್ತು ವರ್ಷಗಳ ಹಿಂದಿನ ಮಾತು. ಸ್ಥಳ, ಮಡಿಕೇರಿಯ ಕೋಟೆಯ (ಕೋಟೆ ಎಂದರೆ ನಿಜಕ್ಕೂ ಕೋಟೆಯೇ) ಆವರಣದೊಳಗಿರುವ ಜಿಲ್ಲಾಧಿಕಾರಿ ಕಛೇರಿಯ ಸೆನೆಟ್ ಸಭಾಂಗಣ. ಅಂದು ಭಾನುವಾರ. “ಬಹುವಚನ ಕೊಡಗು” ಎಂಬ ಹೆಸರಿನ ನಮ್ಮ ಪುಟ್ಟ ಬಳಗದಿಂದ ಆಯೋಜಿತವಾಗಿದ್ದ ಮಹತ್ವಾಕಾಂಕ್ಷೆಯ ಇಡೀ ಒಂದು ದಿನದ ನಿಬಿಡ ವಿಚಾರ ಸಂಕಿರಣ. “ಕೋಮುವಾದದ ಕರಾಳ ಮುಖಗಳು” ಎಂಬ ಶೀರ್ಷಿಕೆಯಲ್ಲಿ ನಡೆಯಬೇಕಾಗಿದ್ದ ಈ ಸಂಕಿರಣದ ಶೀರ್ಷಿಕೆಯ ಕುರಿತು ಆರಂಭದಲ್ಲೇ, ನಮ್ಮ ಪುಟ್ಟ ಬಳಗದ ಒಳಗೆಯೇ, ಒಬ್ಬರಿಂದ ಎದ್ದ ಅಪಸ್ವರದ ಕಾರಣದಿಂದಾಗಿ “ಕೋಮುವಾದದ ಹಲವು ಅವತಾರಗಳು” ಎಂದು ಮರುನಾಮಕರಣಗೊಂಡಿತ್ತು; ಆ ಕುರಿತು ನನಗೆ ಅಷ್ಟೇನೂ ಸಮಾಧಾನವಿರಲಿಲ್ಲ ಎಂಬುದು ಬೇರೆ ಮಾತು. ಜಿ ರಾಜಶೇಖರ, ರಹಮತ್ ತರೀಕೆರೆ ಮುಂತಾಗಿ ರಾಜ್ಯದ ಮುಂಚೂಣಿ ಚಿಂತಕ-ಹೋರಾಟಗಾರರು ನಮ್ಮ ಸಂಪನ್ಮೂಲ ವ್ಯಕ್ತಿಗಳು. ಹಾಗಾಗಿ, ಸಹಜವಾಗಿಯೇ ಈ ವಿಚಾರ ಸಂಕಿರಣಕ್ಕೆ ಬಹಳ ದೊಡ್ಡ ಸಂಖ್ಯೆಯ ಜನರು ಹಾಜರಾಗುವವರಿದ್ದರು. ಸಂಪನ್ಮೂಲ ವ್ಯಕ್ತಿಗಳು ಬಂದು ಅದಾಗಲೇ ಸಭಾಂಗಣದ ಮುಂದಿನ ಸಾಲಿನಲ್ಲಿ ಕುಳಿತಿದ್ದರು. ಮಡಿಕೇರಿ ಮತ್ತು ಸುತ್ತಮುತ್ತಲಿನ ಪತ್ರಕರ್ತ ಬಳಗ ಕೂಡಾ ಅದಾಗಲೇ ಹಾಜರಿತ್ತು.

ಸಭಿಕರು ಕೇವಲ ಬೆರಳೆಣಿಕೆಯಷ್ಟಿದ್ದರು; ಅವರಿನ್ನೂ ಬರುವುದರಲ್ಲಿದ್ದರು (ದೊಡ್ಡ ಸಂಖ್ಯೆಯಲ್ಲಿ ಆ ಮೇಲೆ ಬಂದರು ಕೂಡಾ). ಆದರೆ ಸಂಕಿರಣದ ಸುದೀರ್ಘ ಚರ್ಚೆಯು ಒತ್ತಡಕ್ಕೊಳಗಾಗಬಾರದು, ಹಾಗಾಗಿ ಸಮಯ ವ್ಯರ್ಥಮಾಡಬಾರದು ಎಂದು, “ಬಹುವಚನ ಕೊಡಗು” ಕುರಿತು, ದಿನದ ಕಾರ್ಯಕ್ರಮದ ಸ್ವರೂಪದ ಕುರಿತು, ಹಾಗೂ ಮುಖ್ಯವಾಗಿ ವಿಚಾರ ಸಂಕಿರಣದ ಆಶಯದ ಕುರಿತು– ಹತ್ತು ಗಂಟೆಗೆ ಸರಿಯಾಗಿ ನಾನು ವೇದಿಕೆಯಿಂದ ಮಾತನಾಡಲು ಪ್ರಾರಂಭ ಮಾಡಿದೆ. ಆಗ ಇದ್ದಕಿದ್ದಂತೆ ಸಾಲು ಸಾಲಾಗಿ ಆ ಮೂವತ್ತು ನಲವತ್ತರಷ್ಟು ಧಾಂಡಿಗರು ಸಭಾಂಗಣದೊಳಕ್ಕೆ ಲಗುಬಗೆಯಿಂದ ಬಂದರು. ಅವರ ವರ್ತನೆ ಹಾವಭಾವಗಳಾಗಲೀ ವೇಷಭೂಷಣಗಳಾಗಲೀ ಉತ್ತೇಜನಕಾರಿಯಾಗಿ ಕಂಡುಬರದಿದ್ದರೂ ಬಂದವರು ಕುಳಿತುಕೊಳ್ಳಲಿ ಎಂದು ಮಾತುಗಳನ್ನು ಅರ್ಧಕ್ಕೇ ನಿಲ್ಲಿಸಿ ನಾನು ಕಾದೆ. ಅವರು ಕೆಂಡದ ಮೇಲೆ ಕೂತವರಂತೆ ಕುರ್ಚಿಗಳಲ್ಲಿ ಕೂತರು. “ಬಹುವಚನ ಕೊಡಗು…” ಎಂದು ನಾನು ಮಾತುಗಳನ್ನು ಪುನರಾರಂಭಿಸುತ್ತಿದ್ದಂತೆ, ಅಷ್ಟೂ ಜನ ಏಕಾಏಕಿಯಾಗಿ ರಭಸದಿಂದ ನನ್ನ ಮೇಲೆ ನುಗ್ಗಿ ಬಂದರು.

ಆ ಕಾಲಕ್ಕೆ ಆ ರೀತಿ ಸಭೆಗಳಿಗೆ ಅನಾಗರಿಕವಾಗಿ ನುಗ್ಗಿ ನಿರ್ಲಜ್ಜವಾಗಿ ದಾಳಿ ಮಾಡುವುದು ಈಗಿನಷ್ಟು ವ್ಯಾಪಕವಾಗಲೀ, ಸಹಜವಾಗಲೀ, ಸುಲಭವಾಗಲೀ ಆಗಿರಲಿಲ್ಲ. ನಮ್ಮಂತೆ ಆ ಪುಂಡರಿಗೂ ಅದು ಹೊಸತೇ ಅನುಭವ. ನಮ್ಮ ಬಹುವಚನದ ಪುಟ್ಟ ಬಳಗದವರಿಗಂತೂ ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಈ ಅನಾಹುತ ಶುರುವಾಗಿತ್ತು. ಇದ್ದಬದ್ದ ವಿವೇಕವನ್ನು ಒಗ್ಗೂಡಿಸಿಕೊಂಡು, ಸಂಪನ್ಮೂಲ ವ್ಯಕ್ತಿಗಳ ಸುರಕ್ಷತೆಯೇ ತಮ್ಮ ತುರ್ತು ಆದ್ಯ ಕರ್ತವ್ಯವೆಂದು ಬಗೆದು ಸಂಪನ್ಮೂಲ ವ್ಯಕ್ತಿಗಳನ್ನು ಕ್ಷಿಪ್ರವಾಗಿ ಕರೆದುಕೊಂಡು ಅವರು ಕೋಟೆಯ ಆಚೆಗೆ ಹೊರಟುಹೋದರು. ಪತ್ರಕರ್ತರಿಗೆ ಈ ದಾಂಧಲೆಕೋರರ ಗುರುತು ಹತ್ತಿತು; ಸಂಭಾವ್ಯ ಘಟನಾವಳಿಗಳನ್ನು ಅವರು ಕ್ಷಣಮಾತ್ರದಲ್ಲಿ ಊಹಿಸಿ, ಅದನ್ನು ವರದಿ ಮಾಡಲೆಂದು ಅವರೂ ಎದ್ದು ಹೊರಟು ಹೋದರು. ಆಗಲೇ ಹೇಳಿದಂತೆ, ಸಭಿಕರು ಇನ್ನೂ ಅಷ್ಟಾಗಿ ಬಂದಿರಲಿಲ್ಲ, ಬಂದಿದ್ದವರೂ ಕಂಗಾಲಾಗಿ ದಿಕ್ಕಾಪಾಲಾಗಿ ಚದುರಿ ಹೋದರು; ಕೋಟೆಯ ಹೊರಬಾಗಿಲ ಬಳಿ ನಿಂತುಕೊಂಡು ನಮ್ಮ ಬಳಗದವರೊಬ್ಬರು ಸಂಕಿರಣಕ್ಕಾಗಿ ಒಳಗೆ ಬರುತ್ತಿದ್ದ ಜನರನ್ನು ತಡೆದು, “ಒಳಗೆ ದಾಂಧಲೆ ನಡೆಯುತ್ತಿದೆ, ಹೋಗಬೇಡಿ, ಸುರಕ್ಷಿತವಲ್ಲ” ಎಂದು ಹಿಂದೆ ಕಳುಹಿಸುತ್ತಿದ್ದರು. ಸರಿ ಸುಮಾರು ಮೂವತ್ತರಿಂದ ನಲವತ್ತು ನಿಮಿಷ ಒಳಾಂಗಣ-ಸಭಾಂಗಣ ರಣಾಂಗಣವಾಗಿ ಮಾರ್ಪಟ್ಟಿತ್ತು. ನಾನು ಒಬ್ಬಂಟಿ, ಆದರೆ ವಿಚಲಿತನಾಗಿರಲಿಲ್ಲ.

ಮಡಿಕೇರಿಯಲ್ಲಿ ಆಗ ‘ಪ್ರಜಾವಾಣಿ’ ಪತ್ರಿಕೆಯ ಮುಖ್ಯ ವರದಿಗಾರರಾಗಿದ್ದ, ಆರಡಿಗಿಂತ ಎತ್ತರದ ಆಜಾನುಬಾಹು ರಾಜೇಂದ್ರಪ್ರಸಾದ್ ರವರು, ಯಾರೂ ನನ್ನ ಮೈ ಮುಟ್ಟದಂತೆ ಧೀರೋದಾತ್ತವಾಗಿ ನನ್ನ ರಕ್ಷಣೆಗೆ ನಿಂತರು; ಅವರ ಪತ್ರಿಕಾ ವೃತ್ತಿ ವರ್ಚಸ್ವಿಯಾದುದಾಗಿತ್ತು; ಅಲ್ಲದೇ ದಿನಂಪ್ರತಿ ಎದುರು ಸಿಗುವ ಇಂಥ ಪ್ರಮುಖ ಪತ್ರಕರ್ತರೊಬ್ಬರನ್ನು ಕಡೆಗಣಿಸಿ ನನ್ನ ಮೇಲೆ ದೈಹಿಕ ಹಲ್ಲೆ ಮಾಡುವಷ್ಟು ಭಂಡ ಧೈರ್ಯವಾಗಲೀ ತರಬೇತಿಯಾಗಲೀ ಅಯಾಚಿತ ಸಾರ್ವಜನಿಕ ಬೆಂಬಲವಾಗಲೀ ಆ ಪುಂಡರಿಗೆ ಇರಲಿಲ್ಲ. ನಮ್ಮ ಮಾಧ್ಯಮಲೋಕದಲ್ಲಿ ರಾಜೇಂದ್ರಪ್ರಸಾದರಂಥ ವಿವೇಕಿಗಳಿದ್ದರೆ ಹೇಗೆ ಸಾಮಾಜಿಕ ದುಸ್ಥಿತಿ ಮತ್ತು ಅರಾಜಕತೆಗಳನ್ನು ಸ್ವಲ್ಪಕಾಲವಾದರೂ ತಹಬಂದಿಗೆ ತರಬಹುದು ಎಂಬುದು ಒಂದು ವಿರಳ ರೂಪಕದಂತೆ, ಈ ಘಟನೆಯಿಂದಾಗಿ, ನನ್ನ ಮನಸ್ಸಿನಲ್ಲಿ ಇವತ್ತಿಗೂ ನಾಟಿದೆ.ಇಷ್ಟೂ ಹೊತ್ತು, ಈ ದಾಂಧಲೆಕೋರ ಹುಳಪಾರ್ಟಿಗಳು ನನ್ನನ್ನು ಜಿ ರಾಜಶೇಖರ ಎಂದೇ ತಿಳಿದಿದ್ದರು.

ದಾಂಧಲೆ ಮಾಡುತ್ತಿರುವವರು ಯಾರು, ದಾಂಧಲೆಗೆ ಒಳಗಾಗುತ್ತಿರುವವರು ಯಾರು, ಯಾಕೆ? ಇದನ್ನು ತಡೆಯಬಲ್ಲವರು ಯಾರು, ಹೇಗೆ? ಎಂಬ ಗೆರೆಗಳೆಲ್ಲ ತೆಳುವಾಗುತ್ತ ಅಳಿಸಿಹೋಗಿ ಕಲಸುಮೇಲೋಗರವಾಗಿರುವ ದುರಂತಕ್ಕೆ ಈಗಂತೂ ನಾವೆಲ್ಲರೂ ಅಸಹಾಯಕ ಸಾಕ್ಷಿಗಳು. ಅದೇನಿದ್ದರೂ, ಕರಾವಳಿ ಕರ್ನಾಟಕದಲ್ಲಿ ಆಗಷ್ಟೇ ಉಲ್ಬಣಕ್ಕೆ ಬರುತ್ತಿದ್ದ ಹಿಂದೂತ್ವವಾದೀ ಹಿಂಸಾಚಾರವನ್ನು ಕ್ಲಿನಿಕಲ್ ಅಚ್ಚುಕಟ್ಟುತನದಿಂದ, ಇಲ್ಲಿನ ಕ್ರೂರ ಸತ್ಯವನ್ನು ಮುಕ್ಕಾಗದಂತೆ ವರದಿ ಮಾಡಿ ಆಗ ತಿಳಿಸುತ್ತಿದ್ದ ಏಕಮಾತ್ರ ವ್ಯಕ್ತಿ ಜಿ ರಾಜಶೇಖರ. ಕೋರೈಸುವ ಸತ್ಯ ಮತ್ತು ತರ್ಕಶುದ್ಧತೆಗಳ ಕಾರಣದಿಂದಾಗಿಯೇ ಅವರ ವರದಿಗಳು, ಹುಟ್ಟಾ ಅಜ್ಞಾನಿಗಳಾದ ಹಿಂದೂತ್ವವಾದಿಗಳಿಗೂ ಅಷ್ಟರಮಟ್ಟಿಗೆ ಅರ್ಥವಾಗುವಂತಿತ್ತು. ಆ ಕಾಲದ ವಿಷಯ ಸದ್ಯ ಒತ್ತಟ್ಟಿಗಿರಲಿ, ಕರಾವಳಿ ಕರ್ನಾಟಕದಲ್ಲಿ ಈಗ ಮೂರು ದಶಕಗಳಿಂದ ಹಗಲೂರಾತ್ರಿ ನಡೆಯುತ್ತಿರುವ ಹಿಂದೂತ್ವವಾದೀ ಬರ್ಬರ ಹಿಂಸಾಚಾರದ ಕುರಿತು ನಾನೋ ನೀವೋ ಆಡುವ ಮಾತುಗಳನ್ನು ಕರ್ನಾಟಕದ ಉಳಿದ ಕಡೆಯ ಜನರು, “ಇವರದ್ದೊಂದು ಉತ್ಪ್ರೇಕ್ಷಿತ ಕಟ್ಟುಕತೆ; ಕರ್ನಾಟಕವು ಲಾಗಾಯ್ತಿನಿಂದಲೂ ಸರ್ವಜನಾಂಗದ ಶಾಂತಿಯ ತೋಟ” ಎಂಬ ದೃಢ ನಂಬಿಕೆಯಲ್ಲೇ ಇತ್ತೀಚಿನವರೆಗೂ ವ್ಯವಹರಿಸುತ್ತ ಬಂದದ್ದಿದೆ. ಆ ಉದಾಸಿನಕ್ಕೆ ಮದ್ದಿಲ್ಲ. ಇದನ್ನು ನೆನೆದರೆ ಜಿ ರಾಜಶೇಖರ ಏಕಾಂಗಿಯಾಗಿ ನಡೆಸುತ್ತ ಬಂದ ಹೋರಾಟ ಇಮ್ಮಖವಾದುದು ಎಂಬುದೂ ತಿಳಿದೀತು: ಎದುರಾಳಿಗಳೂ, ಸಹಚರರೂ– ಇಬ್ಬಣಗಳೂ– ಅವರಿಗೆ ಎಡೆಬಿಡದ ಗಮನಕೇಂದ್ರಗಳು.

1998ರಲ್ಲಿ ಮಡಿಕೇರಿಯಲ್ಲಿ ನಾನು ಕೆಲಸಕ್ಕೆ ಸೇರಿದ ಹೊಸದರಲ್ಲಿ ಸುರತ್ಕಲ್ ನಲ್ಲಿ ನಡೆದ ಹಿಂದೂತ್ವವಾದೀ ಭೀಕರ ಹಿಂಸಾಚಾರದಿಂದಾಗಿ ನನಗೆ ಜಿ ರಾಜಶೇಖರರ ನಿಕಟ ಸಂಪರ್ಕ ಬೇಕೆನ್ನಿಸಿತು, ಉಂಟಾಯಿತು. ಆ ಕಾಲದಲ್ಲಿ ಅತ್ಯಂತ ಪ್ರಭಾವಶಾಲಿ ರಾಷ್ಟ್ರೀಯ ನಾಯಕಿಯಾಗಿದ್ದ ಶ್ರೀಮತಿ ಸೋನಿಯಾ ಗಾಂಧಿಯವರೇ ಸ್ವತಃ ಸುರತ್ಕಲ್ ಗೆ ಭೇಟಿಕೊಡಬೇಕಾಗಿ ಬರುವಷ್ಟು ಆ ಹಿಂಸಾಚಾರ ಢಾಳಾಗಿತ್ತು, ಕ್ರೂರವಾಗಿತ್ತು, ದೇಶದ ಗಮನ ಸೆಳೆದಿತ್ತು. ಗೊತ್ತಿರುವವರಿಗೆ ಗೊತ್ತಿರುವಂತೆ, ಈ ಹಿಂದೂತ್ವವಾದೀ ಭೀಕರ ಹಿಂಸಾಚಾರವನ್ನು “ಸುರತ್ಕಲ್ ಗಲಭೆ” ಎಂಬ ರಂಗಿನ ರಂಗೋಲಿಯ ಕೆಳಗೆ ಅಡಗಿಸುವ ಹೊಸ ಭಾಷೆ, ವ್ಯಾಪಕ ವ್ಯಾಕರಣ ಮತ್ತು ಮೀಮಾಂಸೆ ಹುರಿಗಟ್ಟುತ್ತಿದ್ದ ಕಾಲ ಅದು. ಇಲ್ಲಿ ನಡೆದಿರುವುದು ಸಾಂದರ್ಭಿಕ ಕೋಮು ಗಲಭೆಯಲ್ಲ, ಇವತ್ತು ಕಂಡು ನಾಳೆ ಮರೆಯಾಗುವ ಕ್ಷಣಿಕ ಅಪಭ್ರಂಶವಲ್ಲ, ಎರಡೂ ಕಡೆಯವರು ಸೇರಿ ನಡೆಸಿದ ಜೋಡಾಟವೋ ಜುಗಲ್ಬಂದಿಯೋ ಅಲ್ಲ; ಬದಲಾಗಿ, ವ್ಯವಸ್ಥಿತವಾದ, ವ್ಯಾಪಕವಾದ ಹಿಂದೂತ್ವವಾದೀ ದುಷ್ಟಕೂಟದ ಪ್ರಯೋಗವಾಗಿರುವ ಕ್ರೌರ್ಯ ಮತ್ತು ವಿಷ ಎಂದು ಸಾಧಾರವಾಗಿ, ನಿಖರವಾಗಿ, ವಿವರವಾಗಿ ದಾಖಲಿಸಿದವರು ಜಿ ರಾಜಶೇಖರ. ಹಾವನ್ನು ಹಗ್ಗ ಎಂದು ಅವರು ಎಂದೂ ಹೇಳಲಿಲ್ಲ: He had called the spade, the spade. ಎರಡಕ್ಕೆ ಎರಡು ಕೂಡಿಸಿದರೆ ನಾಲ್ಕು, ಎಂಬ ಸರಳಸತ್ಯವನ್ನು ಹೇಳುವುದು ಕೂಡಾ ಒಂದು ದಿಟ್ಟತನವೂ ಹೌದು, ಕಲೆಯೂ ಹೌದು.

ನಾನೊಬ್ಬ ಸಾಹಿತ್ಯದ ಅಧ್ಯಾಪಕ ಹಾಗೂ ವಿದ್ಯಾರ್ಥಿ. ವಿದ್ಯಾರ್ಥಿಯಾಗಿರುವಾಗಲೇ ನನ್ನ ಮೇಲೆ ಅತ್ಯಂತ ಪ್ರಭಾವ ಬೀರಿದ್ದ, ಈಗಲೂ ಸ್ಫೂರ್ತಿದಾಯಕವಾಗಿ ಉಳಿದುಬಂದಿರುವ ಬರಹಗಳಲ್ಲಿ ಬಹುಮುಖ್ಯವಾದ ಒಂದು ಕೃತಿ ಆಲ್ಬರ್ಟ್ ಕಮೂ ಬರೆದ “ದಿ ಔಟ್ ಸೈಡರ್” (1942). ಭಾಷೆ ಎಂಬುದು ಬರಿಯ ಪದವೋ ಪದಾರ್ಥವೋ ಅಲ್ಲ, ಎದುರು ಹರಡಿರುವ ವಸ್ತುಗಳಿಗೆ ಅಚ್ಚುಕಟ್ಟಾಗಿ ಮಾಡಿರುವ ನಾಮಕರಣವೂ ಅಲ್ಲ, ಅದು ಗರಗಸದಂತೆ ಹೋಗುತ್ತ ಕುಯ್ವುದು ಬರುತ್ತ ಕುಯ್ವುದು; ಭಾಷೆ ಎಂಬುದು, ಪ್ರಭುತ್ವವು ಹಲವು ಹೊಂಚುಗಳಲ್ಲಿ ಸ್ಥಿತಗೊಂಡಿರುವ, ಪ್ರಕಟಗೊಳ್ಳುವ, ಸ್ಥಿರೀಕರಣಗೊಳ್ಳುವ, ಬಗೆಬಗೆಯಾಗಿ ಪುನರಾವರ್ತನೆಗೊಳ್ಳುವ, ಏನನ್ನು ಬೇಕಾದರೂ ಲೋಕಜ್ಞಾನವೆಂಬಂತೆ– ಉಸಿರಾಡುವ ಗಾಳಿ, ನೋಟ ಒದಗಿಸುವ ಬೆಳಕಿನಂತೆ– ಸಹಜವಾದದ್ದು ಎಂದು ಯಶಸ್ವಿಯಾಗಿ ನಂಬಿಸಬಲ್ಲ ವ್ಯಾಪಕವಾದ ಜಾಲ. ಸ್ಥೂಲವಾಗಿ ಹೇಳುವುದಾದರೆ, ಇದು ಆ ಕೃತಿಯಲ್ಲಿ ಕಾಣುವ ಹೊಳಹು. ಇದು, ಯೂರೊಪ್ ಕಂಡ ಮಹಾಯುದ್ಧಗಳು ಹಾಗೂ ಫ್ಯಾಶಿಸ್ಮ್ ನ ವಿಕರಾಳ ಕ್ರೌರ್ಯಗಳ ಮೂಸೆಯಲ್ಲಿ ತಯಾರಾದ ಹೊಸ ತಿಳುವಳಿಕೆಯಾಗಿತ್ತು. ಕಮೂ ತನ್ನ ಈ ಕಾದಂಬರಿಯಲ್ಲಿ ನಮ್ಮ ದಿನನಿತ್ಯದ, ಸರ್ವಸಾಮಾನ್ಯವೆಂಬಂತೆ ಕಾಣುವ, ಭಾಷೆಯನ್ನು ಹಾಗೂ ವಿದ್ಯಮಾನಗಳನ್ನು ಸಂಪೂರ್ಣ ಬೆತ್ತಲೆಗೊಳಿಸಿ ನಿರ್ಭಾವುಕವಾಗಿ ಅದರ ಹುನ್ನಾರಗಳನ್ನು ಜಗಜ್ಜಾಹೀರು ಮಾಡಿದವನು.

ಮಡಿಕೇರಿಯಲ್ಲಿ ಕೆಲಸಕ್ಕೆ ಸೇರಿದ್ದ ಹೊಸತರಲ್ಲಿ, ಸುರತ್ಕಲ್ ನ ಹಿಂದೂತ್ವವಾದೀ ಹಿಂಸಾಚಾರದ ಕುರಿತು ಸುದೀರ್ಘವಾದ, ಸಣ್ಣಪುಟ್ಟ ವಿವರಗಳನ್ನೂ ಬಿಡದಂತೆ ಅಚ್ಚುಕಟ್ಟಾಗಿ ಒಳಗೊಂಡ ವರದಿಯನ್ನು ನಾನು ‘ಲಂಕೇಶ್ ಪತ್ರಿಕೆ’ಯಲ್ಲಿ ಓದಿದೆ. ಹಲವು ಕಂತುಗಳಲ್ಲಿ ಪ್ರಕಟವಾದ ಆ ವರದಿ ಈಗಲೂ ನನಗೆ ಕಣ್ಣಿಗೆ ಕಟ್ಟಿದಂತಿದೆ. ಅದರಲ್ಲಿ ಲೇಖಕನ ಸ್ವಂತ ಮಾತುಗಳಾಗಲೀ, ಅಭಿಪ್ರಾಯಗಳಾಗಲೀ, ವಾದಗಳಾಗಲೀ, ಸಮರ್ಥನೆ ಖಂಡನೆ ಮಂಡನೆಗಳಾಗಲೀ ಇರಲಿಲ್ಲ. ಬಲಿಪಶುಗಳಾದ, ಬಲಿ ತೆಗೆದುಕೊಂಡ, ನಮಗ್ಯಾಕೆ ಎಂದು ಕೈಚೆಲ್ಲಿ ಸಾಕ್ಷಿ ನಿಂತ ನಿರ್ಲಿಪ್ತ ವ್ಯಕ್ತಿಗಳ ಹೆಸರು, ವಯಸ್ಸು, ವರಮಾನ, ಉದ್ಯೋಗ, ಮನೆ, ಊರು, ನೆರೆಹೊರೆ, ದೈನಿಕ ಜೀವನ, ಈಗ ಅವರ ಕಣ್ಣೆದುರು ನಡೆದ ಘಟನೆಗಳು ಮುಂತಾಗಿ ಕರಾರುವಾಕ್ಕಾದ ಕ್ಲಿನಿಕಲ್ ವಿವರಗಳಷ್ಟೇ ಇದ್ದವು. ಲೇಖಕ ಸಂಪೂರ್ಣ ಮರೆಗೆ ಸಂದು, ಪಾತ್ರಗಳೇ ಮೈ ತಳೆದು ನಿಂತಿದ್ದವು. ಆ ಪಾತ್ರಗಳು ತಮಗೆ ಕಂಡಷ್ಟನ್ನೇ ಕಂಡಂತೆಯೇ ಭಯ ದಿಗಿಲು ಭರವಸೆಗಳ ಗೋಜಲಿನಲ್ಲಿ ಹೇಳಿದ್ದವು. ಕಮೂ ಕಾದಂಬರಿಯಲ್ಲಿ ನಾನು ಅಚ್ಚರಿಯಲ್ಲಿ ಏನನ್ನು ಕತೆಯಾಗಿ ಕಂಡಿದ್ದೆನೋ ಅದು ಇಲ್ಲಿ ನಮ್ಮದೇ ಕಾಲಬುಡದಲ್ಲಿ ಜೀವನವಾಗಿ ಮರುಕಳಿಸಿದ್ದನ್ನು ಕಂಡು ನಾನು ನಡುಗಿ ಹೋದೆ. ಈ ವರದಿ ಬರೆದವರು ಜಿ ರಾಜಶೇಖರ.

ತಾನು ಸಾಯುವ ಕಾಲಕ್ಕೆ ಬರೆದ ಕೊನೆಯ ಸಂಪಾದಕೀಯದಲ್ಲಿ ಲಂಕೇಶರು ಜಿ ರಾಜಶೇಖರರ ಕುರಿತು ಅಭಿಮಾನ ತೋರಿದ್ದು ಸುಖಾಸುಮ್ಮನೆ ಅಲ್ಲ. ಆ ಹೊತ್ತಲ್ಲಿ ಕೆ ಎನ್ ಫಣಿಕ್ಕರ್ ಸಂಪಾದಕರಾಗಿ ಪ್ರಕಟಿಸಿದ “ಕಾಮನ್ ಮ್ಯಾನ್ಸ್ ಗೈಡ್ ಟು ಕಮ್ಯೂನಲಿಸ್ಮ್” ಎಂಬ ಹೊಸ ಪುಸ್ತಕವನ್ನೂ ನಾನು ಓದಿದ್ದೆ; ಅದು ಬಹಳ ಪ್ರಭಾವಶಾಲಿಯಾದ ಪುಸ್ತಕ. ಈ ಕಾಕತಾಳೀಯಗಳು ಸೇರಿದ್ದರಿಂದಾಗಿ, “ಬಹುವಚನ ಕೊಡಗು” ಎಂಬ ಬಳಗ ಮತ್ತು ಅದರಿಂದ ಹಲವು ಕಾರ್ಯಕ್ರಮಗಳು ಘಟಿಸಿದವು. ಜಿ ರಾಜಶೇಖರ, ಹಾಗೂ ಅವರನ್ನು ಬಗ್ಗುಬಡಿಯುವ ಉದ್ದೇಶದ ಪುಂಡ ಪಟಾಲಂ ಮಡಿಕೇರಿಗೆ ಅವರನ್ನು ಹಿಂಬಾಲಿಸಿ ಬಂದದ್ದು ಹೀಗೆ.

2003ರಲ್ಲಿ ನಾನು ತಿರುಗಿ ಮಂಗಳೂರಿಗೆ ಬಂದು ಕೆಲಸಕ್ಕೆ ಸೇರಿದೆ. ದೂರದ ಗೋದ್ರಾ-ಗುಜರಾತ್ ಮಾತ್ರವಲ್ಲದೇ ಇಲ್ಲೇ ಆದಿ ಉಡುಪಿಯಲ್ಲೂ ಹಿಂದೂತ್ವವಾದೀ ಹಿಂಸಾಚಾರದ ಅಟ್ಟಹಾಸ ಉಲ್ಬಣಾವಸ್ಥೆಗೆ ಏರಿದ್ದ ಉಚ್ಛ್ರಾಯ ಕಾಲ. ಹಾಗಾಗಿ, ಕರಾವಳಿಯಾದ್ಯಂತ, ಮುಖ್ಯವಾಗಿ ಮಂಗಳೂರು ಉಡುಪಿಗಳಲ್ಲಿ, ಜಿ ರಾಜಶೇಖರ ಮತ್ತು ನಾನು ಹಲವು ಪ್ರತಿಭಟನಾ ಸಭೆಗಳಲ್ಲಿ ಪದೇಪದೇ, ಮತ್ತು ತನಿಖಾ ವರದಿಗಳಿಗಾಗಿ ಆಗಾಗ ಜೊತೆಯಾಗುವ ಸಂದರ್ಭಗಳು ಉಂಟಾದವು. ನಮ್ಮ ಈ ಒಡನಾಟಕ್ಕೆ ಸಂಬಂಧಿಸಿ, ಸಂಕ್ಷಿಪ್ತವಾಗಿ ನಾಲ್ಕು ವಿವರಗಳನ್ನಾದರೂ ನಾನಿಲ್ಲಿ ನೆನೆಯಬೇಕು: 2006ರ ಹಿಂದೂತ್ವವಾದೀ ಹಿಂಸಾಕಾಂಡ; ಉಡುಪಿಯ ಸೌಹಾರ್ದ ಸಾಹಿತ್ಯ ಸಮ್ಮೇಳನ; ಹತ್ತು ವರ್ಷಗಳ ಹಿಂದೆ ಮಂಗಳೂರಲ್ಲಿ ನನ್ನ ಮೇಲೆ ನಡೆದ ದೈಹಿಕ ಹಲ್ಲೆ; ಹಾಗೂ, ಮುಸ್ಲಿಮರು ಸಂಘಟಿತರಾಗಲು ಮಾಡಿದ ಪ್ರಯತ್ನದಲ್ಲಿ ನನ್ನ ಮತ್ತು ಜಿ ರಾಜಶೇಖರರ ಪಾಲುದಾರಿಕೆ.

2006ರಲ್ಲಿ, ಮುಖ್ಯವಾಗಿ ಮಂಗಳೂರು ನಗರ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ವಾರಗಟ್ಟಲೆ ಹಿಂದೂತ್ವವಾದೀ ಹಿಂಸಾಚಾರ ನಡೆಯಿತು. ಇಬ್ಬರು ಮುಸ್ಲಿಮರ ಕೊಲೆಯಾಯಿತು. ಪ್ರಭುತ್ವ ಕಳ್ಳರಂತೆ ಅಡಗಿ ಕೂತು ಚಳಿ ಕಾಯಿಸಿಕೊಳ್ಳುತ್ತಿತ್ತು. ಮನುಷ್ಯತ್ವವೇ ಹೊತ್ತಿ ಹೋಗಿ ದಕ್ಷಿಣಕನ್ನಡ ರಕ್ತಸಿಕ್ತ ರಣರಂಗವಾಗಿತ್ತು. ಅಳಿದುಳಿದವರ ಆರ್ತನಾದದ ಆ ದಿನಗಳನ್ನು ನೆನೆಸಿಕೊಂಡರೆ ಈಗಲೂ ಮೈ ನಡುಗುತ್ತದೆ. ಒಂದು ದಿನ, ಜಿ ರಾಜಶೇಖರರವರು ಫೋನ್ ಮಾಡಿ, ಹಿಂಸಾಚಾರಕ್ಕೆ ಈಡಾದ ಪ್ರದೇಶಗಳು ಮತ್ತು ವ್ಯಕ್ತಿಗಳ ಕುರಿತು ವಿವರವಾದ ಮಾಹಿತಿ ಮತ್ತು ಸಂಪರ್ಕಗಳಿರುವ ಒಬ್ಬ ತರುಣನಿದ್ದಾನೆ; ಸಾಧ್ಯವಿದ್ದರೆ ಕೆಲಸಕ್ಕೆ ರಜೆ ಹಾಕಿ ಬಿಡುವು ಮಾಡಿಕೊಂಡು ಬನ್ನಿ, ಏನು ನಡೆದಿದೆ ಎಂಬುದನ್ನು ನೋಡಬೇಕು ಎಂದರು. ಹಾಗೆ, ನಾವಿಬ್ಬರು ಹರ್ಷದ್ ವರ್ಕಾಡಿ ಎಂಬ ತರುಣನ ಮಾರ್ಗದರ್ಶನದಲ್ಲಿ ಜೊತೆಯಾಗಿ, ಆದಷ್ಟೂ ಕೂಲಂಕಷವಾಗಿ ಭೇಟಿ, ಸಂದರ್ಶನ, ಸುತ್ತಾಟ, ಮಾಹಿತಿ ಸಂಗ್ರಹಣೆ ಮಾಡಿದೆವು. ಅಗತ್ಯ ಕಂಡ ಕಡೆಗಳಿಗೆ ಹಲವು ಬಾರಿ ಹೋಗಬೇಕಾಗಿ ಬಂತು. ಸಂತ್ರಸ್ತರು ಮತ್ತು ಅಪರಾಧಿಗಳು ಒಬ್ಬರ ದಾರಿ ಮತ್ತೊಬ್ಬರು ತೋರಿಸಿ ಈ ಕಗ್ಗಂಟಿನ ಹಿಂದೆ ಮುಂದೆ ಒಳಹೊರಗೆ ಸುತ್ತಿ ಸುದೀರ್ಘವಾದ ವರದಿಯನ್ನು ತಯಾರಿಸಿದೆವು. ಆ ವರದಿ ಕಂತು ಕಂತುಗಳಾಗಿ ‘ಲಂಕೇಶ್ ಪತ್ರಿಕೆ’ಯಲ್ಲಿ ಪ್ರಕಟವಾಯಿತು. ‘ಕರ್ನಾಟಕ ಕೋಮು ಸೌಹಾರ್ದ ವೇದಿಕೆ’ ಅದನ್ನು ಒಂದು ಪುಸ್ತಕವಾಗಿ ಪ್ರಕಟಿಸಿತು. ಅದನ್ನು ನನ್ನಿಂದ ಇಂಗ್ಲಿಷ್ ಗೆ ಅನುವಾದಿಸಿ ತೀಸ್ತಾ ಸೆಟಲ್ ವಾಡ್ ತಮ್ಮ ‘ಕಮ್ಯೂನಲಿಸ್ಮ್ ಕಾಂಬ್ಯಾಟ್’ ಪತ್ರಿಕೆಯಲ್ಲಿ ಪ್ರಕಟಿಸಿದರು. ಈ ಸಂಬಂಧವಾಗಿ ತೀಸ್ತಾ ಸೆಟಲ್ ವಾಡ್ ಸ್ವತಃ ಮಂಗಳೂರಿಗೆ ಬಂದು (ಮಾಧ್ಯಮಲೋಕ ಅದಾಗಲೇ ಕುಲಗೆಟ್ಟು ಹಿಂದೂತ್ವವಾದಿಯಾಗಿ ಮತಾಂತರಗೊಂಡಿದ್ದಾಗಲೂ) ಪತ್ರಿಕಾಗೋಷ್ಠಿ ಕರೆದು, ವಿವರಗಳನ್ನು ಸಾರ್ವಜನಿಕರ ಎದುರು ತೆರೆದಿಟ್ಟರು.

ಈ ವರದಿಯ ಉಳಿದ ಫಲಿತಗಳೇನೇ ಇರಲಿ, ನಾನು ಜಿ ರಾಜಶೇಖರರಿಂದ ಆಗ ಕಲಿತದ್ದು ಬಹಳ. ಅದು ಬಹಳ ಅಮೂಲ್ಯ ಕೂಡಾ. ಅಪರಾಧಿಗಳಿರಲಿ, ತಟಸ್ಥರಿರಲಿ, ಸಂತ್ರಸ್ತರಿರಲಿ, ಪ್ರಭುತ್ವವಿರಲಿ– ನಾವು ಭಾವಾವೇಶಕ್ಕೆ ಎಡೆಯಾಗದಂತೆ, ಸಣ್ಣಪುಟ್ಟದು ಎಂಬ ಅಸಡ್ಡೆಯಲ್ಲಿ ಯಾವ ವಿವರಗಳೂ ಕೈ ಜಾರದಂತೆ, ಸಂದರ್ಭದ ಕಗ್ಗಂಟಾದ ಮಗ್ಗುಲುಗಳಿಗೂ ಸಂಕೀರ್ಣತೆ ಸಂದಿಗ್ಧಗಳಿಗೂ ಕುರುಡಾಗದಂತೆ, ಹುಂಬ ಪಕ್ಷಪಾತಿಗಳಾಗದಂತೆ, ಆದರೆ ಸತ್ಯಕ್ಕೆ ಧಕ್ಕೆ ಬರದಂತೆ, ಪ್ರಭುತ್ವದ ಅಟ್ಟಹಾಸದಿಂದ ಕೊಂಕದಂತೆ ನಡೆದ ಈ ತನಿಖೆಯನ್ನು, ಅದರ ಒಂದು ಉದಾಹರಣೆಯ ಮುಖಾಂತರ ಹೇಳುವುದಾದರೆ: ಈ ವರದಿ ತಯಾರಾದ ನಂತರ ದೇಶದ ಬೇರೆ ಭಾಗಗಳಿಂದ ಹಾಗೂ ಹೊರದೇಶಗಳಿಂದ ಕೆಲವು ವರದಿಗಾರರು ಮತ್ತು ಮಾಧ್ಯಮ ಅಧ್ಯಯನ ವಿದ್ಯಾರ್ಥಿಗಳು ಆಗಾಗ ನನ್ನ ಬಳಿ ಬರುತ್ತಿದ್ದರು; ಅವರನ್ನು ಪದೇಪದೇ ನಾನೊಬ್ಬನೇ ಕರೆದುಕೊಂಡು ಹೋಗಬೇಕಾದ ಸಂದರ್ಭಗಳು ಬರುತ್ತಿದ್ದವು. ಆಗ ನನ್ನ ಬಳಿ, ನಾವು ತಯಾರಿಸಿದ ವರದಿಯ ಪುಸ್ತಕಗಳ ಪ್ರತಿಗಳು ಇರುತ್ತಿದ್ದವು. ಗೂಡಂಗಡಿಗಳು, ಬಟ್ಟೆ ಚಪ್ಪಲಿ ತರಕಾರಿ ಅಂಗಡಿಗಳು, ದೂರದೂರದ ಒಂಟಿ ಮನೆಗಳು– ಮುಂತಾದ ಎಲ್ಲ ಕಡೆ ಈ ಪುಸ್ತಕ ನೋಡಿ, ಅದರಲ್ಲಿ ತಮ್ಮ ಹೆಸರು ಮತ್ತು ನಡೆದ ಘಟನೆಗಳ ವಿವರಗಳನ್ನು ನೋಡಿ ಆ ನತದೃಷ್ಟ ಅಮಾಯಕರು ಸಂತಸಗೊಳ್ಳುತ್ತಿದ್ದರು. ಅವರ ಕಣ್ಣಂಚಲ್ಲಿ ತಮ್ಮ ಅಳಲು ನಿರರ್ಥಕವಲ್ಲವೇನೋ ಎಂಬ ಮಿಂಚು ಒಮ್ಮೊಮ್ಮೆ ಮೂಡುತ್ತಿತ್ತು. ಕ್ರೂರ ವ್ಯಂಗ್ಯವೋ ಎಂಬಂತೆ ನನಗೆ ಬೇಂದ್ರೆಯವರ “ಸಾಯೋ ಆಟ” ನಾಟಕದ ಈ ಸಾಲುಗಳು ಬೇಡಬೇಡವೆಂದರೂ ನೆನಪಾಗುತ್ತಿದ್ದವು: “ನಾಲ್ಕು ಜನ ನೋಡುವವರಿದ್ದರೆ ಅತ್ತರೂ ಚೆಂದ, ಸತ್ತರೂ ಚೆಂದ.” ಮನುಷ್ಯರು ಕಡೆಗೂ ಬದುಕಿ ಉಳಿಯುವುದು ಗೋಡೆಗಳಿಗಾದರೂ ಹೇಳಲ್ಪಡುವ ಕತೆಗಳಲ್ಲಿ. (ಹಾಗೊಂದು ಜನಪದ ಕತೆಯೂ– Tell It To The Walls: ಎ ಕೆ ರಾಮಾನುಜನ್– ಇದೆ). ಈ ಅಮಾಯಕರು ಯಾರೋ, ಜಿ ರಾಜಶೇಖರ ಯಾರೋ; ಒಂದರ್ಥದಲ್ಲಿ ಪರಸ್ಪರ ಅವರು ಅಪರಿಚಿತ ಅನಾಮಧೇಯರು. ರಾಜಶೇಖರರಂತೆ, ಅಳಿಸಿ ಹೋಗುವ ನಮ್ಮ ಹೆಜ್ಜೆ ಗುರುತಿಗೂ ಗುರುತು ಬರುವಂತೆ, ಮರೆಯಾಗುವುದು ಸುಲಭವಲ್ಲ.

ಪ್ರಭುತ್ವ ಮತ್ತು ಮಠಮಾನ್ಯಗಳ ಕೃಪೆಯಲ್ಲೂ, ಜಾಗತೀಕರಣವು ಮಂಗಳೂರಿನ ವಿಶೇಷ ಆರ್ಥಿಕ ವಲಯದ ಅವತಾರದಲ್ಲಿ ಸೃಷ್ಟಿಸುತ್ತಿರುವ ದುರಂತಗಳಲ್ಲೂ, ಇವುಗಳ ಹೆಣಿಗೆಯಾಗಿರುವ ದಿವ್ಯ ನಿರ್ಲಕ್ಷ್ಯಗಳ ಹಾಸುಹೊಕ್ಕಿನಲ್ಲೂ– ಕರಾವಳಿ ಕರ್ನಾಟಕದ ಹಿಂದೂತ್ವವಾದೀ ಅಟ್ಟಹಾಸವನ್ನು ಅದೃಶ್ಯಗೊಳಿಸಿ, ಸಾಹಿತ್ಯ-ಸಂಸ್ಕೃತಿ ಎಂಬ ಸುವರ್ಣ ಚೌಕಟ್ಟನ್ನು ಸಾಹಿತ್ಯ ಪರಿಷತ್ತು ಸಿದ್ಧಪಡಿಸುತ್ತಿರುವಾಗಲೇ, ಅದಕ್ಕೆ ಎದುರಾಗಿ ಉತ್ತರವಾಗಿ ಸವಾಲಾಗಿ ಉಡುಪಿಯಲ್ಲಿ ಸೌಹಾರ್ದ ಸಾಹಿತ್ಯ ಸಮ್ಮೇಳನ ನಡೆಯಿತು. ಅದು ಬಹಳ ಅರ್ಥಪೂರ್ಣವೂ ಆಗಿತ್ತು. ಜಿ ರಾಜಶೇಖರ ಮೆಚ್ಚಿಕೊಂಡ ನನ್ನ ಆಶಯ ಭಾಷಣ ಕೂಡಾ ಅದರ ಭಾಗವಾಗಿತ್ತು. ಮಂಗಳೂರಲ್ಲಿ ನನ್ನ ಮೇಲೆ ದೈಹಿಕ ಹಲ್ಲೆ ನಡೆದುದನ್ನು ಖಂಡಿಸಿ ಜಿ ರಾಜಶೇಖರ ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿಯ ಎದುರು ಸಾರ್ವಜನಿಕ ಭಾಷಣ ಮಾಡಿದರು. ‘ಲಂಕೇಶ್ ಪತ್ರಿಕೆ’ಗಾಗಿ ನನ್ನ ಕುರಿತು ಬರೆದರು. ಜೀವಂತ ಇರುವಾಗಲೇ ಶೃದ್ಧಾಂಜಲಿ ಲೇಖನ ಓದಿದಷ್ಟು ಸಂತೋಷವಾಯಿತು ಎಂಬ ನನ್ನ ಪ್ರತಿಕ್ರಿಯೆಗೆ ಮನಃಪುರ್ವಕವಾಗಿ ಅಪರೂಪದ ನಗೆ ನಕ್ಕರು.

ಮುಸ್ಲಿಮರು ಹಲವರು ತಾವು ಸಂಘಟಿತರಾಗಲು ಬಯಸಿ ನಡೆಸಿದ ಪ್ರಯತ್ನಗಳ ಕುರಿತು ಕೆಲವಾದರೂ ಮಾತುಗಳನ್ನು ನಾನು ಹೇಳುವುದಿದೆ. ಧರ್ಮವು ಉತ್ಸವಮೂರ್ತಿಯಾಗಿ, ಆರ್ಥಿಕತೆ ಬೇಕಾಬಿಟ್ಟಿ ಜಾಗತೀಕರಣವಾಗಿ ನಿರ್ದಯವಾಗಿ ಎದುರು ನಿಂತಿರುವ ಕಾಲ ನಮ್ಮದು. ಯಾವ ಕಡೆ ತಿರುಗಿದರೂ ಮನುಷ್ಯತ್ವದ ಪಸೆ ಕಾಣದಂತಾಗಿದೆ. ಸಂಘಪರಿವಾರದ ಅಟ್ಟಹಾಸ ಮೇರೆ ಮೀರಿದೆ. ಪ್ರಭುತ್ವವು ಹಿಂದೂತ್ವವಾದದಲ್ಲಿ ಪರೋಕ್ಷವಾಗಿಯಷ್ಟೇ ಅಲ್ಲದೇ ನೇರವಾಗಿ ಪಾಲುದಾರವಾಗಿದೆ. ಉಳಿದ ರಾಜಕೀಯ ಪಕ್ಷಗಳೂ ಜಾತ್ಯತೀತತೆ ಎಂಬುದನ್ನು ಅನುಕೂಲ ಶಾಸ್ತ್ರವನ್ನಾಗಿ ಮಾರ್ಪಡಿಸಿವೆ. ಒಂದು ಕಾಲಕ್ಕೆ ಬಹಳ ಪ್ರಭಾವಶಾಲಿಯಾಗಿದ್ದ ಎಡಪಕ್ಷಗಳ ವರ್ಚಸ್ಸು ಜಾಗತೀಕರಣದ ಬಂಡವಾಳಶಾಹಿಯ ದಾಳಿಗೆ ಪೇಲವಗೊಳ್ಳುತ್ತಿದೆ. ಕೋಮುವಾದ ಮತ್ತು ನವ ಬಂಡವಾಳಶಾಹಿಗಳ ನಾಗಾಲೋಟದ ಎದುರು, ಚಳುವಳಿಗಳು ಏದುಸಿರುಬಿಡುತ್ತಿವೆ. ನನ್ನನ್ನೇ ಉದಾಹರಣೆಯಾಗಿಟ್ಟು ಆತ್ಮಮರುಕವಿಲ್ಲದೇ ಇಷ್ಟಂತೂ ಹೇಳಬಲ್ಲೆ: ನಾನು ಉದ್ಯೋಗ ಮಾಡುತ್ತಿದ್ದ ಸಂಸ್ಥೆಗಳ ಆಡಳಿತ, ಬಹುಪಾಲು ನನ್ನ ವಿದ್ಯಾರ್ಥಿಗಳು, ಸಂಘಪರಿವಾರದ ಬೀದಿ ಪುಂಡರು ನೇತಾರರು, ಅಷ್ಟೇ ಏಕೆ ಬಸ್ಸು ರಿಕ್ಷಾ ಅಂಗಡಿ ಹೊಟೇಲು ನೆರೆಹೊರೆಯವರು ನನ್ನನ್ನು ಕಂಡದ್ದು ಒಬ್ಬ ಕ್ರಿಮಿನಲ್ ಮತ್ತು ಜನ ಶತ್ರು ಎಂಬಂತೆ. ಅವು ಅಸುರಕ್ಷಿತತೆಯ ಬೇತಾಳ ಹೆಗಲೇರಿದ ದಿನರಾತ್ರಿಗಳು. ಸವಲತ್ತುಗಳ ನಡುವೆಯೂ ನನ್ನ ಪರಿಸ್ಥಿತಿಯೇ ಹೀಗನ್ನಿಸಿದರೆ, ಉಳಿದವರ ಪಾಡು ಕರುಣಾಜನಕ. ಕರ್ನಾಟಕ ಫೋರಮ್ ಫಾರ್ ಡಿಗ್ನಿಟಿ ಹುಟ್ಟಿದ್ದು ಈ ಸಂಧಿಕಾಲದಲ್ಲಿ. ಆ ಆರಂಭದ ದಿನಗಳಿಂದಲೂ ನಾನು ಮತ್ತು ಜಿ ರಾಜಶೇಖರ ಹೆಚ್ಚೂಕಡಿಮೆ ಅವರ ಎಲ್ಲ ಕಾರ್ಯಕ್ರಮಗಳಲ್ಲೂ ಭಾಷಣಕಾರರು ಮತ್ತು ಬೆಂಬಲಿಗರು. ಕೋಮುಸೌಹಾರ್ದ ವೇದಿಕೆಯಲ್ಲಿ ಎಡೆಬಿಡದೇ ಸಕ್ರಿಯರಾಗಿದ್ದುಕೊಂಡೇ ಕೆ ಎಫ್ ಡಿ/ಪಿ ಎಫ್ ಐಗೆ ನಾವು ಜೊತೆಯಾದವರು. ನಮ್ಮದೇ ಸ್ನೇಹಿತರು ನಮ್ಮನ್ನು ಮುಸ್ಲಿಮ್ ಸಂಘಟನೆಗಳಿಂದ ಹೊರಗೆಳೆಯಲು ಮಾಡಿದ ಪ್ರಯತ್ನಗಳ ದೊಡ್ಡ ಕತೆಯೇ ಇದೆ. ಅದೇನೇ ಇದ್ದರೂ, ನನ್ನ ಮತ್ತು ರಾಜಶೇಖರರ ನಿಲುವು ಆಗಲೂ ಈಗಲೂ ಬದಲಾಗದೇ ಉಳಿಯಿತು.

ಕಾರಣ ಇಷ್ಟೇ. ನನ್ನ ವಾದ ಸರಳವಾದದ್ದು, ಆದರೆ ದೃಢವಾದದ್ದು. ಭೋಳೆ ಎನ್ನುವವರ ಬಾಯಿ ಮುಚ್ಚಿಸುವ ದರ್ದು ಅದಕ್ಕಿಲ್ಲ: (೧) ಉದಾರವಾದೀ ಪ್ರಜಾತಂತ್ರ ವ್ಯವಸ್ಥೆಯಲ್ಲಿ, ಎಲ್ಲ ವ್ಯಕ್ತಿಗಳೂ ವ್ಯಕ್ತಿಗಳಾಗಿ ಕೇವಲ ಒಂದು ವೋಟು ಮಾತ್ರ; ಅವರು ಸಂಘಟಿತ ಸ್ವರವಾಗದಿದ್ದರೆ ಅವರನ್ನು ಕೇಳುವವರಿಲ್ಲ. ಕೇಳಿದರೂ, ಕೇಳುವವರು ತೋರಿಸುವ ಕೃಪೆ-ಔದಾರ್ಯ ಬಹಳ ಉಪಯುಕ್ತವೂ ಅಲ್ಲ, ಬಾಳಿಕೆ ಬರುವಂಥದ್ದೂ ಅಲ್ಲ, ಪಡೆಯುವವರ ಘನತೆಗೆ ಹೊಂದುವಂಥದ್ದೂ ಅಲ್ಲ. ಹಾಗಾಗಿ, ಸಂಘಟಿತರಾದರೆ ಉಂಟಾಗಬಹುದಾದ ವಿಕಾರಗಳು ಮತ್ತು ಅಪಾಯಗಳನ್ನು ವಾದಗಳನ್ನಾಗಿ ಸದಾ ಕಾಲ ಚಾಲ್ತಿಯಲ್ಲಿಡಲು ಅವಕಾಶಗಳೂ ಇಲ್ಲ. (೨) ಎರಡನೆಯ ಆರೋಪ ಹೆಚ್ಚು ತೀಕ್ಷ್ಣವಾದದ್ದು, ಕಟುವಾದದ್ದು: ಇದು ಕೇವಲ ಮುಸ್ಲಿಮರ ಸಂಘಟನೆ; ಇದು ಸಂಘಪರಿವಾರದ್ದೇ ಪಡಿಯಚ್ಚು; ಇವರೂ ಕೋಮುವಾದಿಗಳು; ಇವರೂ ಹಲ್ಲೆ ದೊಂಬಿ ದಾದಾಗಿರಿ ನಡೆಸುತ್ತಾರೆ; ಮುಸ್ಲಿಮ್ ಹೆಣ್ಣುಮಕ್ಕಳನ್ನು ಸಂಘಟನೆಯಲ್ಲಿ ಸೇರಿಸಿಕೊಳ್ಳುವುದಿಲ್ಲ, ಅವರು ಸಮಾನತೆಯ ಹಕ್ಕುಗಳನ್ನು ಮಾನ್ಯಮಾಡುವುದಿಲ್ಲ, ಮುಂತಾಗಿ.

ಈ ವಿವರಗಳು ನನಗೆ ಅಷ್ಟು ಮುಖ್ಯವೆಂದು ಅನ್ನಿಸುವುದಿಲ್ಲ. ಅವರ ಘೋಷಿತ ನಿಲುವುಗಳೇನು ಎಂಬುದಷ್ಟೇ ನನಗೆ ಮುಖ್ಯವಾದುದು. ಏಕೆಂದರೆ, ತಪ್ಪುಗಳು ಸಂಭವಿಸಿದ ಸಂದರ್ಭಗಳಲ್ಲಿ ಅದೇ ಘೋಷಿತ ನಿಲುವುಗಳ ಮೂಲಕ ಅವರ ಜೊತೆ ವಾಗ್ವಾದ-ಸಂವಾದ ನಡೆಸಬಹುದಾದ ಬಾಗಿಲು ತೆರೆದೇ ಇದೆ. ಇದನ್ನು ಸಂಘಪರಿವಾರದ ವಿಷಯದಲ್ಲಿ ಹೇಳುವಂತಿಲ್ಲ. ಸಾವರ್ಕರ್, ಗೋಳ್ವಲ್ಕರ್ ಅಥವಾ ಇನ್ನಾವುದೇ ಸಂಘಪರಿವಾರದ ಮುಖವಾಣಿಗಳಾದ ಜನರನ್ನು ಹಾಗೂ ಅವರ ಘೋಷಿತ ನಿಲುವುಗಳನ್ನು ಯಾವ ನಾಗರಿಕ ಸಮಾಜವೂ ಸಮರ್ಥಿಸುವುದು ಸಾಧ್ಯವಿಲ್ಲ. ಅಲ್ಲದೇ, ಬಹುಸಂಖ್ಯಾತ ಕೋಮುವಾದವನ್ನು ಮಾಮೂಲು ತಕ್ಕಡಿಯಲ್ಲಿ ತೂಗುವುದು ಸರ್ವಥಾ ಸಾಧುವಲ್ಲ. ಇದು ನನ್ನ ಖಡಾಖಂಡಿತವಾದ ಲಾಗಾಯ್ತಿನ ನಿಲುವು. ನನಗೆ ತಿಳಿದಮಟ್ಟಿಗೆ ರಾಜಶೇಖರರ ನಿಲುವು ಕೂಡಾ ಇದೇ ಸ್ವರೂಪದ್ದು. ಹಾಗಲ್ಲದೇ, ಮುಸ್ಲಿಮರು ರಾಜಶೇಖರರನ್ನು ತಮ್ಮ ಆಪತ್ಬಾಂಧವ ಎಂದು ತಿಳಿಯಲು ವಿಶೇಷ ಕಾರಣಗಳಿಲ್ಲ.

ರಾಜಶೇಖರರು ಪಡೆಯಬಹುದಾಗಿದ್ದ ಪ್ರಶಸ್ತಿಗಳು ಸನ್ಮಾನಗಳು ಹಲವು. ಕಿರುಚು ಕಂಠದ ಕುಲಗೆಟ್ಟ ಮುಂಚೂಣಿ ಜನರು ಅದನ್ನು ತಡೆದರು. ಅದರಿಂದ ರಾಜಶೇಖರರಿಗೇನೂ ನಷ್ಟವಾಗಲಿಲ್ಲ. ಅಂಥ ಹಲವು ಪ್ರಶಸ್ತಿ ಸನ್ಮಾನಗಳು ಕೂಡಾ ಅವರು ಎದುರಾಳಿಯಾಗಿ ನಿಂತು ಹೋರಾಡಿದ ರಿವಾಜುಗಳ ಕೂಸುಗಳೇ ಆಗಿರುವುದರಿಂದ, ಅಪ್ಪಿ ತಪ್ಪಿ ಅಂಥದ್ದೊಂದು ಪ್ರಶಸ್ತಿ ಬಂದಾಗಲೂ ಅವರು ಅದನ್ನು ನಿರಾಕರಿಸಿದರು. ಆದರೆ ಉಡುಪಿಯಲ್ಲಿ ಮುಸ್ಲಿಮ್ ಸಂಘಟನೆಗಳವರು, ಮಂಗಳೂರಲ್ಲಿ ‘ಪ್ರಸ್ತುತ ಬಳಗ’ದವರು ಕೊಟ್ಟ ಪ್ರಶಸ್ತಿ-ಸನ್ಮಾನಗಳನ್ನು ತನ್ನ ಹೋರಾಟಗಳ ಮುಂದುವರಿಕೆಯಾಗಿಯೇ ಅವರು ಸಂತೋಷದಿಂದ ಸ್ವೀಕರಿಸಿದರು. ಪ್ರಶಸ್ತಿಯನ್ನು ಸ್ವೀಕರಿಸುವುದೂ ಪ್ರಶಸ್ತಿಯನ್ನು ನಿರಾಕರಿಸುವಷ್ಟೇ ಅರ್ಥಪೂರ್ಣವಾದುದು ಎಂಬುದನ್ನು, ಪ್ರಶಸ್ತಿ ಸ್ವೀಕರಿಸುವಾಗ ಅವರು ಆಡಿದ ಮಾತುಗಳು ಕೂಡಾ ಸ್ಪಷ್ಟಪಡಿಸಿವೆ. ಈ ನಿಸ್ಪೃಹತೆ ವಿರಳಾತಿವಿರಳವಾದುದು. ನಿಜವಾಗಿಯೂ ದೊಡ್ಡವರಾಗಿರುವ ನಮ್ಮ ನಡುವಿನ ಹಲವು ಹಿರಿಯರಲ್ಲಿ ಕೂಡಾ ಈ ಗುಣ ದುರ್ಲಭವಾದುದು. ಈ ವಿಷಯದಲ್ಲಿ ದಾಕ್ಷಿಣ್ಯಕ್ಕೆ ಬಸುರಾಗದೇ ಉಳಿದವರ ಸಂಖ್ಯೆ ಬಹಳ ಕಡಿಮೆ.

ಆದರೆ, ಅದಕ್ಕಿಂತ ಮುಖ್ಯವಾದ ವಿಶೇಷವೊಂದಿದೆ. ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಲು ನಾನು ಆರಂಭಿಸಿದ್ದು, ಮುಖ್ಯವಾಗಿ ನೃತ್ಯ, ಸಂಗೀತ ಮುಂತಾದ ಶಾಸ್ತ್ರೀಯ ಕಲೆಗಳ ಅತ್ಯುತ್ತಮ ವಕ್ತಾರರ ಮುಖಾಂತರ. ಆದರೆ ಅದು ಕೇವಲ “ಕಲೆಗಾಗಿ ಕಲೆ” ಎಂಬಂತಾಗುವ ಅಪಾಯಗಳನ್ನು ತಪ್ಪಿಸುವ ಕಷ್ಟಗಳೇನು ಎಂಬುದು ಅನುಭವದಿಂದ ನನ್ನ ತಿಳುವಳಿಕೆಗೆ ಬಂದಿದೆ. ಆದರೆ ನಾನು ಭಾಗವಹಿಸುವ ಸಾರ್ವಜನಿಕ ಹೋರಾಟ ಪ್ರತಿಭಟನೆ ಮುಂತಾದವು ಢಾಳಾಗಿ ರಾಜಕೀಯ ನಿಲುವುಗಳನ್ನು ಹೊಂದಿರುವಂಥವು. ಇಲ್ಲಿನ ಕೊರತೆಯೆಂದರೆ ಕಲೆಯ ನಯ ನವಿರು ನಾಜೂಕು ಸೂಕ್ಷ್ಮಗಳ ಗೈರುಹಾಜರಿ. ಸೂಕ್ಷ್ಮಗಳಿಗೆ ಒಡ್ಡಿಕೊಳ್ಳದೇ, ಎದುರಾಳಿಯ ಸಂಕಟ-ತಲ್ಲಣಗಳನ್ನು ಗ್ರಹಿಸದೇ, ಅದದೇ ಜನರೆದುರು ಅದದೇ ಮಾತುಗಳನ್ನಾಡುತ್ತ, ಘೋಷಣೆಗಳ ಬುರುಗು ಗೀಳಿನಲ್ಲಿ ಕರಗುತ್ತ ಹೋಗುವ ಅಪಾಯದಿಂದ ತಪ್ಪಿಸಿಕೊಂಡು ಸ್ತಿಮಿತದಲ್ಲಿ ಉಳಿಯುವುದು ಇಂಥಲ್ಲಿ ಕಡುಕಷ್ಟ. ರಾಜಶೇಖರರು ಈ ಇರುಸುಮುರುಸನ್ನು ಮೇಲಿಂದ ಮೇಲೆ ಅನುಭವಿಸಿದ್ದಾರೆ ಎಂದೇ ನನ್ನ ಭಾವನೆ. ಹೀಗಿದ್ದೂ ಗೊಡ್ಡಾಗದೇ ಉಳಿದದ್ದು ಅವರ ಇನ್ನೊಂದೇ ಅಂತರಂಗದ ಹೋರಾಟವಿದ್ದೀತು. ಏಕೆಂದರೆ, ನಿಜಕ್ಕಾದರೆ ದಿನನಿತ್ಯದ ಏಕತಾನದ ಬುರ್ನಾಸು ಸಾಮಾನ್ಯತೆಯಲ್ಲಿ ಕರಗಿಹೋಗದ ಸೂಕ್ಷ್ಮವೇ ಅವರ ಅಡಿಪಾಯ– langue. ದೈನಿಕದ ರಾಜಕೀಯ ಹೋರಾಟ ಮತ್ತು ನಿಲುವುಗಳಾಗಿ ಬೀದಿಗಳಲ್ಲಿ ಅವರು ನಮಗೆ ಕಾಣಿಸಿದ್ದು ಆ ಅಭಿಜಾತ ಅಭಿರುಚಿಯ ಒಂದು ಝಲಕ್– parole. ವಿಪರ್ಯಾಸವೆಂದರೆ, ಜಾರ್ಜ್ ಲುಕಾಕ್ಸ್ ಹೇಳುವಂತೆ, ಉಪಯುಕ್ತವಾದ ಒಂದು ಸರ್ವಸಾಮಾನ್ಯ ಮೇಜನ್ನು ತಯಾರಿಸುವುದಕ್ಕೂ, ನಮ್ಮ ಈ ದುಷ್ಕಾಲದಲ್ಲಿ, ಮೈಖೆಲ್ ಏಂಜೆಲೋನ ಪ್ರತಿಭೆಯೇ ಬೇಕು.

ಸಾಮಾನ್ಯರ ನಡುವೆ ಸಾಮಾನ್ಯರಾಗಿ ಇರುವುದೂ ಒಂದು ಅಸಾಮಾನ್ಯ ಸಾಧನೆ. ನನಗೆ ತಿಳಿದಮಟ್ಟಿಗೆ ರಾಜಶೇಖರರ ಜೀವನಪೂರ್ತಿಯ ಪ್ರಜ್ಞಾಪೂರ್ವಕ ಹುಡುಕಾಟವಿದ್ದುದು ಸಾಮಾನ್ಯ ಜೀವನದ ಸಹಜ ಅಸಾಮಾನ್ಯತೆಯಲ್ಲಿ. ಅನಾಮಧೇಯನಾಗಿ ಉಳಿಯಬೇಕೆಂಬ ಹಠದಲ್ಲಿ.

1992ರ ಡಿಸೆಂಬರ್ ಕೊನೆಯ ಭಾಗದ ಒಂದು ಭಾನುವಾರ. ‘ಸಾಪ್ತಾಹಿಕ ಪ್ರಭ’ದಲ್ಲಿ “ಅಕ್ಕರೆಯ ರಾಮಲಾಲನಿಗೆ ಅಕಾಲ ಮುಪ್ಪು” ಎಂಬ ನನ್ನ ಲೇಖನ ಪ್ರಕಟವಾಗಿತ್ತು. ಮಹಾತ್ಮಾ ಗಾಂಧಿ, ಮಾರ್ಟಿನ್ ಹೈಡೆಗರ್, ಸಾದತ್ ಹಸನ್ ಮಾಂಟೋ ಮತ್ತು ರಾಮಕೃಷ್ಣ ಪರಮಹಂಸರ ವಿಚಾರಗಳಿಗೆ ನಾನು ಮರುಳಾಗಿದ್ದ ಕಾಲ. ಧ್ವಂಸಗೊಂಡ ಬಾಬರೀ ಮಸೀದಿಯ ಕಲ್ಲು ಇಟ್ಟಿಗೆಗಳ ಸಂದಿಯಲ್ಲಿ ಅನಾಥವಾಗಿ ಬಿದ್ದಿದ್ದ ಅಯೋಧ್ಯೆಯ ರಾಮಲಲ್ಲಾನ ಚಿತ್ರವೊಂದನ್ನು ‘ಫ್ರಂಟ್ ಲೈನ್’ ಪತ್ರಿಕೆಯಲ್ಲಿ ಕಂಡಿದ್ದೆ. ರಾಮಕೃಷ್ಣ ಪರಮಹಂಸರ ರಾಮ, ರಾಮಲಾಲ, ಮುದ್ದಿನ ಹಸುಗೂಸು. ಬಿಲ್ಲುಬಾಣ ಹೆದೆಯೇರಿಸಿ, ಇಲ್ಲದ ಶತ್ರುವನ್ನು ನಿರ್ನಾಮ ಮಾಡಬೇಕೆನ್ನುವ ವ್ಯಗ್ರ ಉಮೇದಿನ ಸೆಟೆದು ನಿಂತ ರಾಮನಲ್ಲ. ಹಾಗೆಂದು ಬರೆದಿದ್ದೆ. ಎರಡೇ ದಿನದಲ್ಲಿ ರಾಜಶೇಖರರಿಂದ ಮೆಚ್ಚುಗೆಯ ಪತ್ರ ಹಾಗೂ ಇಂಗ್ಲಿಷ್ ಲೇಖನವೊಂದರ ಛಾಯಾಪ್ರತಿ ಅಂಚೆಯಲ್ಲಿ ಬಂತು. ಇಂಗ್ಲಿಷ್ ಲೇಖನದ ಛಾಯಾಪ್ರತಿ ‘ಇಂಡಿಯನ್ ಎಕ್ಸ್‌ಪ್ರೆಸ್‌’ ಪತ್ರಿಕೆಯಲ್ಲಿ ಮರುದಿನ ಮಹಾತ್ಮಾ ಗಾಂಧಿಯವರ ಮೊಮ್ಮಗ ರಾಮಚಂದ್ರ ಗಾಂಧಿ ಬರೆದದ್ದು. ರಾಮಕೃಷ್ಣ ಪರಮಹಂಸರ ರಾಮಲಲ್ಲಾನ ಸುತ್ತ ನಾನು ಬರೆದಿದ್ದ ಅದದೇ ವಿವರಗಳು ಅದರಲ್ಲಿದ್ದವು. ರಾಜಶೇಖರರು ತಮ್ಮ ಪತ್ರದಲ್ಲಿ, “ಇಲ್ಲಿ ನೋಡಿ, ನಿಮ್ಮ ಲೇಖನ ಒಂದು ದಿನ ತಡವಾಗಿ ಪ್ರಿಂಟಾಗಿದ್ದರೆ ನೀವು ರಾಮಚಂದ್ರ ಗಾಂಧಿಯವರ ಲೇಖನವನ್ನು ನಕಲು ಮಾಡಿದ್ದೀರಿ ಎಂಬ ಅಪವಾದವನ್ನು ಹೊರಬೇಕಾಗುತ್ತಿತ್ತು.”

ಮಾರ್ಟಿನ್ ಹೈಡೆಗರ್ ಹೇಳುವಂತೆ, “One is ready to die as soon as one is born.” ಸಾವೆಂಬುದು ಹುಟ್ಟಿನೊಂದಿಗೇ ಅಂಟಿಬರುವ ಮಾರಣಾಂತಿಕ ಶಾಪ ಎಂಬುದನ್ನು ತಿಳಿಯದವರು ಯಾರು? ತಿಳಿದು ನಡೆದವರು ಯಾರು? ಈ ಜೀವಜಗತ್ತು ಆಸೆಗಳ ಸ್ವರ್ಗವನ್ನೇ ನಮ್ಮೆದುರು ಹರಡಿದೆ. ಆದರೆ ಸಾವು ಎಲ್ಲ ಸಂಭ್ರಮಗಳನ್ನೂ ಕಸಿಯಲು ಅಲ್ಲೇ ಹೊಂಚಿ ಕೂತಿದೆ. ನಮ್ಮ ಅದಮ್ಯ ಆಸೆಗಳನ್ನು ನಿಷ್ಕರುಣ ಅಸಡ್ಡೆಯಿಂದ ತಿರಸ್ಕರಿಸುತ್ತದೆ ಎಂದಾದರೆ ಈ ಬದುಕಿಗೆ ಏನು ಅರ್ಥ? ಸಾವಿನಿಂದ ಶಪಿತವಾದ ಜೀವ ಸ್ವಹತ್ಯೆ ಮಾಡಿಕೊಳ್ಳದೇ ಬದುಕಿರಬೇಕಾದದ್ದಾದರೂ ಯಾಕೆ ಎಂಬುದೇ ಮೂಲಭೂತ ಪ್ರಶ್ನೆ ಎಂದು ಕಮೂ ಹೇಳುತ್ತಾನೆ. ಗುಡ್ಡದ ಬುಡದಿಂದ ಹಲ್ಲುಕಚ್ಚಿ ಪ್ರಯಾಸಪಟ್ಟು ಬಂಡೆಯೊಂದನ್ನು ದೂಡಿ ತುದಿ ಮುಟ್ಟಿಸಿ ಅದು ಉರುಳಿಬೀಳುವುದನ್ನು ಅಸಹಾಯಕತೆಯಲ್ಲಿ ನೋಡುವ, ಪುನರಪಿ ಬಂಡೆಯನ್ನು ಮೇಲಕ್ಕೆ ತಳ್ಳುವ ಸಿಸಿಫಸ್ ಪುರಾಣವೇ ಕಮೂವಿನ ಪ್ರಕಾರ ನಮ್ಮ ಜೀವನ. ಆದರೆ ಸಿಸಿಫಸ್-ಕಮೂ ಸಿನಿಕರಂತೆ ಕೈಚೆಲ್ಲುವುದಿಲ್ಲ. ಬಂಡೆಯನ್ನು ಮೇಲಕ್ಕೆ ದೂಡುವ ಅವಿರತ ಪ್ರಯಾಸ ಹಾಗೂ ಬಂಡೆ ಉರುಳಿ ಕೆಳಕ್ಕೆ ಬೀಳುವುದನ್ನು ನೋಡುತ್ತ ನಿಂತ ಅಸಹಾಯಕ ಸಾಕ್ಷಿತ್ವದ ನಡುವೆ ಸಂದು ಕಡಿಯುವ ಬೆಳ್ಳಿಯ ಗೆರೆಯೊಂದಿದೆ. ಇನ್ನೊಮ್ಮೆ ಬಂಡೆಯನ್ನು ಮೇಲಕ್ಕೆ ದೂಡಲು ಕೆಳಗಿಳಿಯುವ ಕ್ಷಿಪ್ರ ಬಿಡುವೊಂದಿದೆ. ಅದು ನಿರಾಳ ಕಾಲ. ಅದು ಶಾಪದಿಂದ ಕಸಿದ ನಮ್ಮದೇ ಪಾಲು. ಬಂಡೆಯ ನೂಕಾಟದ ನಡುವೆ ಅರ್ಥ ಹೀಗೆ ಹಠಾತ್ತನೆ ಜಿನುಗುವುದು. ಹಾಗಲ್ಲದೇ, ಪರರ ನೋವು ಸಂಕಟ ಸಾವುಗಳ ಸತತ ಧ್ಯಾನ ರಾಜಶೇಖರರಿಗೆ ಒದಗಲು ಸಾಧ್ಯವಿತ್ತೇ?

(ಎಚ್ ಪಟ್ಟಾಭಿರಾಮ ಸೋಮಯಾಜಿ
104ಸಿ, 4ನೇ ಅಡ್ಡರಸ್ತೆ, ಗಿರಿನಗರ
ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್
ದೇರೇಬೈಲ್ ಕೊಂಚಾಡಿ
ಮಂಗಳೂರು, 575008
ಫೋನ್:9448325705
ಇಮೆಯ್ಲ್:somayajihp@gmail.com)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಆತ್ಮಕತೆ | ಮದುವೆಯ ಬಂಧ-ಸ್ನೇಹಿತರ ಮನೆಯಲ್ಲಿ ಔತಣ

Published

on

  • ರುದ್ರಪ್ಪ ಹನಗವಾಡಿ

ನನ್ನ ಹೆಂಡತಿ ಗಾಯತ್ರಿ 1979ನೇ ಬ್ಯಾಚಿನ ನನ್ನ ವಿಭಾಗದಲ್ಲಿಯೇ ವಿದ್ಯಾರ್ಥಿಯಾಗಿದ್ದವಳು. ವಿದ್ಯಾರ್ಥಿನಿಯಾಗಿ ಅವಳ ಶೈಕ್ಷಣಿಕ ಓದಿನ ಜೊತೆ ನಾಟಕ, ಸಂಗೀತ ಮತ್ತು ಸಾಹಿತ್ಯದಲ್ಲಿ ಆಸಕ್ತಿಯುಳ್ಳವಳಾಗಿದ್ದಳು. ಅವಳಿಗಿದ್ದ ತಮ್ಮ ಹಿರಿಯ/ಕಿರಿಯ ವಿದ್ಯಾರ್ಥಿನಿಗಳ ಜೊತೆಗಿನ ಸ್ನೇಹ ಸಂಬಂಧದ ಜೊತೆ, ಕೇಂದ್ರದಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಳು.

ನಮ್ಮ ಕೇಂದ್ರದಿಂದ 1978ರಲ್ಲಿ ಎಂ.ಎ. ಮುಗಿಸಿದ್ದ ಯಶೋಧ ಮತ್ತು ಶಾರದ ಎಂಬ ಇಬ್ಬರು ವಿದ್ಯಾರ್ಥಿನಿಯರು ಎಂ.ಎ., ಮುಗಿಸಿದ ನಂತರ, ಬೆಂಗಳೂರಿನಲ್ಲಿ ಯಶೋಧ ವಿ.ಕೆ.ಆರ್.ವಿ. ರಾವ್ ಇನ್ಸಿಟಿಟ್ಯೂಟ್‌ನಲ್ಲಿ ಸಂಶೋಧಕಿಯಾಗಿ ಕೆಲಸ ಮಾಡುತ್ತಿದ್ದಳು. ಶಾರದ ತನ್ನ ಸೋದರ ಸಂಬಂಧಿ ಡಾಕ್ಟರ್‌ರೊಬ್ಬರನ್ನು ಮದುವೆಯಾಗಿ ಗೃಹಿಣಿ ಯಾಗಿದ್ದಳು. ಇವರಿಬ್ಬರೂ ಮೊದಲು ಶಿವಮೊಗ್ಗದಿಂದ ದಿನವೂ ಬೆಳಿಗ್ಗೆ ಬರುತ್ತಿದ್ದ ಗಜಾನನ ಬಸ್ಸಿಗೆ ಗಾಯತ್ರಿ ಮತ್ತು ಇತರರೊಡನೆ ಕ್ಲಾಸಿಗೆ ಬರುತ್ತಿದ್ದರು. ಹಾಗಾಗಿ ಅವರಿಬ್ಬರ ಎಂ.ಎ., ಮುಗಿದ ನಂತರವೂ ಕೇಂದ್ರಕ್ಕೆ ಬಂದಾಗ ಗಾಯತ್ರಿಯನ್ನು ಜೊತೆಗೆ ಇದ್ದ ಸ್ನೇಹಿತರನ್ನು ಭೇಟಿ ಮಾಡಿ ಹೋಗುತ್ತಿದ್ದರು. ಹೀಗೆ ಹೋಗುವಾಗ ನಮ್ಮ ಜ್ಞಾನೇಂದ್ರ ಪ್ರಭು ಜೊತೆ ನಾನು ಶಿವಮೊಗ್ಗಕ್ಕೂ ಜೊತೆಗೆ ಹೋಗಿ ಅಲ್ಲಿನ ಮನೋಹರ ಕೆಫೆಯಲ್ಲಿ ಕಾಫಿ ಕುಡಿದು, ಹರಟೆ ಹೊಡೆದು ಹಿಂತಿರುಗುತ್ತಿದ್ದೆವು. ಆ ದಿನಗಳಲ್ಲಿಯೇ ನನಗೆ ಗಾಯತ್ರಿಯ ಪರಿಚಯವಾಗಿ ಒಬ್ಬರಿಗೊಬ್ಬರು ಆಸಕ್ತರಾಗಿದ್ದೆವು. ಅದೆಲ್ಲ ಪ್ರಭು, ದೇವರಾಜು ಮತ್ತು ಕೇಶವಮೂರ್ತಿಗಳ ನಮ್ಮ ಸ್ನೇಹ ವಲಯಕ್ಕೂ ತಿಳಿದಿತ್ತು.

ಗ್ರಾಮೀಣ ಪ್ರದೇಶಗಳಿಂದ ಬಹಳ ಹುಡುಗರು ಏನೆಲ್ಲ ಓದಿದ್ದರೂ ಹುಡುಗಿಯರೊಡನೆ ಸರಳವಾಗಿ ಮಾತಾಡಿಕೊಂಡು ಇರುವುದು ವಿರಳವಾಗಿದ್ದ ದಿನಗಳು. ನಾನಾದರೂ ಎಂ.ಎ. ಮುಗಿಸಿ 4-5 ವರ್ಷಗಳ ಪಾಠ ಮಾಡಿದ ಅನುಭವವಿದ್ದರೂ ಗ್ರಾಮೀಣ ಹಿನ್ನೆಲೆಯ ಸಾಮಾನ್ಯ ಹಿಂಜರಿಕೆ ಮತ್ತು ಸಂಕೋಚದ ಕಾರಣ ಹುಡುಗಿಯರಿಂದ ದೂರವೇ ಉಳಿಯುತ್ತಿದ್ದೆ.
ಓದಿನ ಜೊತೆಗೆ ಎಸ್‌ವೈಎಸ್, ಡಿ.ಎಸ್.ಎಸ್.ಗಳ ಹೋರಾಟಗಳಲ್ಲಿ ಭಾಗವಹಿಸಿ, ಬೀದಿ ಬೀದಿಗಳಲ್ಲಿ ಭಾಷಣ, ಮೆರವಣಿಗೆ ಅನೇಕ ಸಂದರ್ಭಗಳಲ್ಲಿ ಪೋಲೀಸ್ ಸ್ಟೇಷನ್‌ನಲ್ಲಿ ಬಂಧಿಯಾಗಿ ಹೊರಬಂದಿದ್ದರೂ ಪ್ರೀತಿಯ ಪ್ರೇಮಗಳ ವಿಷಯದಲ್ಲಿ ಹಿಂಜರಿಕೆ ಮತ್ತು ಸಂಕೋಚಗಳು ನನ್ನಲ್ಲಿ ಮನೆ ಮಾಡಿದ್ದವು. ನಾನು ಈ ಹಿಂದೆ ಸೋಷಿಯಾಲಜಿ ವಿಭಾಗದಲ್ಲಿ ಕೆಲಸ ಮಾಡುತ್ತಿರುವಾಗ ಅಲ್ಲಿದ್ದ ಮೂರು ಜನ ಹುಡುಗಿಯರಲ್ಲಿ ಒಬ್ಬಳು ತೋರಿದ ವಿಶೇಷ ಆಸಕ್ತಿ ಮತ್ತು ಮಾತುಕತೆಗೆ ಮಾರುಹೋಗಿ, ಅವಳು ವಿಶೇಷವಾಗಿ ತಂದು ಕೊಡುತ್ತಿದ್ದ ತಿಂಡಿ ಮತ್ತು ಪ್ರಸೆಂಟೇಷನ್‌ಗಳನ್ನು ನನ್ನ ಮೇಲಿನ ವಿಶೇಷ ಪ್ರೀತಿಯಿಂದಲೇ ಕೊಟ್ಟಿರಬೇಕೆಂದು ಭಾವಿಸಿಕೊಂಡಿದ್ದೆ. ಅದನ್ನೆಲ್ಲ ಆಗ ನನ್ನ ಜೊತೆಗಿದ್ದ ಬಸವಣ್ಯಪ್ಪನಿಗೆ ಹೇಳಿದಾಗ ಅವನು, `ಅವಳು ನಿನ್ನನ್ನು ಪ್ರೀತಿಸುತ್ತಿದ್ದಾಳೆ, ನಿನಗೆ ಇಷ್ಟವಾದರೆ-ನೀನೆ ಅವಳಿಗೆ ಮದುವೆಯಾಗುವಂತೆ ಕೇಳು’ ಎಂದು ಹುರಿದುಂಬಿಸುತ್ತಿದ್ದ. ಏರು ಯೌವನದ ಸೆಳೆವಿನಲ್ಲಿದ್ದ ನಾನು ಒಂದು ದಿನ ಕುಕ್ಕರಹಳ್ಳಿ ಕೆರೆ ಏರಿ ಮೇಲೆ ಸಂಜೆಯ ವಿಹಾರದಲ್ಲಿದ್ದಾಗ ನನ್ನನ್ನು ಮದುವೆಯಾಗುತ್ತೀಯ ಎಂದು ಕೇಳಿಯೇ ಬಿಟ್ಟೆ. ನನಗಿಂತಲೂ ವಯಸ್ಸಿನಲ್ಲಿ ಮತ್ತು ಬುದ್ದಿಯಲ್ಲಿ ಮುಂದಿದ್ದ ಅವಳು ನನ್ನ ಪ್ರೇಮ ಭಿಕ್ಷೆಯನ್ನು ನಯವಾಗಿ ತಿರಸ್ಕರಿಸಿದ್ದಳು. ನಂತರ ನಾನು ನನ್ನ ವೃತ್ತಿಯನ್ನೇ ಬದಲಾಯಿಸಿದ ಕಾರಣ ಆ ಪ್ರೇಮ ಪ್ರಕರಣ ಅಲ್ಲಿಗೆ ಮುಕ್ತಾಯವಾಗಿ ಬಿಆರ್‌ಪಿಗೆ ವರ್ಗವಾಗಿ ಬಂದಿದ್ದೆ.

ಈ ಹಿನ್ನೆಲೆಯಲ್ಲಿದ್ದ ನನಗೆ ತಕ್ಷಣದಲ್ಲಿ ಪ್ರೀತಿಯ ಪ್ರಸ್ತಾಪವನ್ನು ಮಾಡುವಾಗ ಅನೇಕ ರೀತಿಯ ಹಿಂಜರಿಕೆಯಲ್ಲಿ ಮುಳುಗಿ ಬಿಡುತ್ತಿದ್ದೆ. ಆದರೆ ಪ್ರಭು ಮತ್ತು ಕೇಶವಮೂರ್ತಿಯವರೊಡನೆ ನಂತರ ನನ್ನ ಹಳೆ ವಿದ್ಯಾರ್ಥಿನಿಯರಾದ ಯಶೋಧ ಮತ್ತು ಶಾರದಾ ಅವರ ಮುಖಾಂತರ ಗಾಯತ್ರಿಯ ಬಗ್ಗೆ ನನಗಿರುವ ಆಸಕ್ತಿ ತಿಳಿಸಿದೆ. ಅವಳು ಎಂ.ಎ. ಪರೀಕ್ಷೆ ಮುಗಿದಿದ್ದರಿಂದ ಊರಿಗೆ ಹೋಗಿದ್ದಳು. ಅವಳು ಮದುವೆಗೆ ಒಪ್ಪಿಗೆ ಸೂಚಿಸಿದ್ದರೂ ಅವಳಿಗೆ ಒಂದು ಕೆಲಸ ಪಡೆದ ನಂತರ ದಿನಗಳಲ್ಲಿ ಮದುವೆ ಮಾಡಿಕೊಳ್ಳುವ ಯೋಚನೆಯಲ್ಲಿ ನಾನಿದ್ದೆ. ಗಾಯತ್ರಿಯೂ ರಜೆಯಿದ್ದ ಕಾರಣ ತನ್ನ ಊರಾದ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರಕ್ಕೆ ಹೋಗಿದ್ದಳು. ನನ್ನ ಜೊತೆ ಮನೆತನ, ಜಾತಕಗಳ ವಿವರಗಳ ಗೊಡವೆ ಇಲ್ಲದೆ, ನನ್ನನ್ನು ಮದುವೆಯಾಗಲು ಒಪ್ಪಿಸುವಲ್ಲಿ ಗಾಯತ್ರಿಯ ಗೆಳತಿಯರು, ನನ್ನ ಮಿತ್ರ ಪ್ರಭು ಎಲ್ಲ ಕಾರಣರಾಗಿದ್ದರು. ನಾನಾವ ಜಾತಿ ಮತ್ತು ಆರ್ಥಿಕ ಸಾಂಸ್ಕೃತಿಕ ಹಿನ್ನೆಲೆಗಳ ಬಗ್ಗೆ ಏನೂ ಕೆದಕದೆ ನನ್ನನ್ನು ಮಾತ್ರ ನೋಡಿ ಒಪ್ಪಿದ ಗಾಯತ್ರಿಯ ಬಗ್ಗೆ ಅಭಿಮಾನದ ಪ್ರೀತಿಯಲ್ಲಿ ಕಾಲ ಕಳೆಯುತ್ತಿದ್ದೆ. ಹೀಗಿರುವಾಗ ಮೇ ತಿಂಗಳ ಕೊನೆ ವಾರದಲ್ಲಿ ತನ್ನ ಗೆಳತಿಯ ಜೊತೆ ಬಿ.ಆರ್.ಪಿ.ಗೆ ಬಂದ ಗಾಯತ್ರಿ ಹೊಸ ಸುದ್ದಿಯನ್ನು ತಂದಿದ್ದಳು. ರಜೆಯಲ್ಲಿ ಅವರ ಮನೆಗೆ ಬಂದಿದ್ದ ಹುಡುಗನೊಬ್ಬ ಗಾಯತ್ರಿಯನ್ನು ನೋಡಿ ಮದುವೆಯಾಗಲು ಒಪ್ಪಿರುವುದಾಗಿಯೂ, ಇಷ್ಟರಲ್ಲೇ ಮದುವೆ ಮಾತು ಆಗಬಹುದೆಂಬ ಆತಂಕದ ಸುದ್ದಿಯನ್ನು ತಿಳಿಸಿದಳು.

ಗಾಯತ್ರಿಯ ಎಂ.ಎ. ಮುಗಿದು ನೌಕರಿ ಹಿಡಿದ ನಂತರ ಎಲ್ಲರ ಒಪ್ಪಿಗೆ ಪಡೆದು ಮದುವೆ ಮಾಡಿಕೊಳ್ಳುವ ಯೋಚನೆಯಲ್ಲಿದ್ದ ನಮಗೆ ನಂತರದ ಬೆಳವಣಿಗೆಗಳು ನಮ್ಮಿಬ್ಬರ ಕೈತಪ್ಪಿ ಹೋಗುವ ಆತಂಕವಾಯಿತು. ಈ ನನ್ನ ಎಲ್ಲ ಅಂತರಂಗದ ವಿಷಯಗಳನ್ನು ಚರ್ಚಿಸಲು ಪ್ರಭು ಜೊತೆ ಭದ್ರಾವತಿಗೆ ಕೃಷ್ಣಪ್ಪನವರನ್ನು ಕಂಡು ಚರ್ಚಿಸಿಕೊಂಡು ಬರಲು ಹೋದೆವು. ಕೃಷ್ಣಪ್ಪ ಮತ್ತು ಇಂದಿರಾ ಅವರ ಜೊತೆ ಎಲ್ಲ ವಿಷಯಗಳನ್ನು ಚರ್ಚಿಸಿ ದಿನಾಂಕ 4-6-1979ರಂದು ರಿಜಿಸ್ಟರ್ ಮದುವೆಯ ಕಾರ್ಯ ಮುಗಿಸಲು ತೀರ್ಮಾನಿಸಿದೆವು. ಅದಕ್ಕೂ ಮುಂಚೆ ಗಾಯತ್ರಿಯನ್ನು ಕರೆದುಕೊಂಡು ಬರಲು ತಿಳಿಸಿದರು. ಅದರಂತೆ ಹೋದಾಗ ಇಂದಿರಾ ಕೂಡ ಇದ್ದು ಗಾಯತ್ರಿಗೆ ಸಮಾಧಾನ, ಧೈರ್ಯ ಹೇಳಿ ಮದುವೆಯ ಆತಂಕವನ್ನು ಹಗುರ ಮಾಡಿದ್ದರು. ತುರ್ತಾಗಿ ಇದ್ದ ಪರಿಸ್ಥಿತಿಯಲ್ಲೇ ಮದುವೆಮಾಡಿಕೊಳ್ಳುವುದನ್ನು ಬಿಟ್ಟರೆ ಬೇರೆ ಮಾರ್ಗ ಕಾಣಲಿಲ್ಲ. ನಮ್ಮ ಊರ ಮನೆಯಲ್ಲಿ ಈ ವಿಷಯಗಳನ್ನು ತಿಳಿಸಿ ಚರ್ಚಿಸಿ ಒಪ್ಪಿಸುವುದು ಸಾಧ್ಯವಿರಲಿಲ್ಲ. ಏಕೆಂದರೆ ಅವ್ವ ನನ್ನ ಅಕ್ಕನ ಮಗಳನ್ನು ಮದುವೆ ಮಾಡಿಕೊಳ್ಳುವ ಬಗ್ಗೆ ತೀರ್ಮಾನಿಸಿದ್ದಳು. ಆ ರೀತಿ ಅಕ್ಕನ ಮಗಳನ್ನು ಮದುವೆಯಾಗುವುದು, ಅವರು ನನ್ನನ್ನು ಅವರ ಸಾಗರದ ಮನೆಯಲ್ಲಿಟ್ಟುಕೊಂಡು ಓದಿಸಿದ ಬಗ್ಗೆ ಋಣ ತೀರಿಸುವ ಜವಾಬ್ದಾರಿ ಎಂದು ಎಲ್ಲರ ನಂಬಿಕೆಯಾಗಿತ್ತು. ಇದನ್ನೆಲ್ಲ ತಿಳಿಗೊಳಿಸಿ ಪ್ರಸ್ತುತ ಮದುವೆ ವಿಷಯಕ್ಕೆ ಒಪ್ಪಿಸಿ ಕರೆತರುವುದು ಆ ಕ್ಷಣದಲ್ಲಿ ಸಾಧ್ಯವಿಲ್ಲದ ಮಾತಾಗಿತ್ತು.

ಇನ್ನು ಗಾಯತ್ರಿ ಮನೆಯವರು ಶೃಂಗೇರಿ ಮಠದ ಅನುಯಾಯಿಗಳು. ಪ್ರಥಮದಲ್ಲಿ ನಾನು ಅಬ್ರಾಹ್ಮಣನಾದ ಕಾರಣ ಈ ಮುದುವೆಯ ಪ್ರಸ್ತಾಪವೇ ಸಾಧ್ಯವಿಲ್ಲದ ಮಾತಾಗಿತ್ತು. ಅದರಲ್ಲೂ ನನ್ನ ಜಾತಿ ದಲಿತ ಗುಂಪಿಗೆ ಸೇರಿದ್ದೆಂಬುದು ತಿಳಿಸಿದರೆ ಇನ್ನು ಅನೇಕ ಸಮಸ್ಯೆಗಳನ್ನು ಹುಟ್ಟುಹಾಕುವುದರಲ್ಲಿತ್ತು. ಹಾಗಾಗಿ ಅವರಿಗೂ ಈ ಮದುವೆ ವಿಷಯ ತಿಳಿಸಿ ಒಪ್ಪಿಗೆ ಪಡೆದು ಮದುವೆಯಾಗುವುದು ಸಾಧ್ಯವಿರಲಿಲ್ಲ. ಈ ವಿಷಯಗಳೇನಾದರೂ ಮೊದಲೇ ಗೊತ್ತಾದರೆ, ಮದುವೆಯಾಗಲು ಖಂಡಿತ ಬಿಡುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡಿದ್ದ ಕಾರಣದಿಂದಾಗಿ ಎಲ್ಲದನ್ನು ಗೌಪ್ಯವಾಗಿಟ್ಟು ಮದುವೆಯ ತಯಾರಿ ಮಾಡಿಕೊಳ್ಳಬೇಕಾಗಿತ್ತು. ಕೃಷ್ಣಪ್ಪ – ಇಂದಿರಾ ಅವರ ಮದುವೆ 1975ರಲ್ಲಿಯೇ ನಡೆದು ಆ ನಂತರ ಅನೇಕ ಅಂತರ್ಜಾತೀಯ, ಧರ್ಮೀಯ ಮತ್ತು ಸರಳ ಮದುವೆಗಳನ್ನು ಮಾಡಿಸಿ ಹೆಸರಾಗಿದ್ದರು. ಸಮಾಜವಾದಿ ಚಳುವಳಿ, ದಲಿತ ಚಳುವಳಿಯ ಅನೇಕ ಯುವಕ, ಯುವತಿಯರು ಇಂದಿರಾ ಕೃಷ್ಣಪ್ಪನವರ ನೇತೃತ್ವದಲ್ಲಿ ಅಂತರ್‌ಜಾತಿ ಮದುವೆಯಾಗಿದ್ದರು. ಕೃಷ್ಣಪ್ಪನವರ ಅಭಿಮಾನಿ ಬಳಗ – ಭದ್ರಾವತಿ, ಶಿವಮೊಗ್ಗದಲ್ಲಿ ಸದಾ ಇಂತಹ ಸಂದರ್ಭದಲ್ಲಿ ಬೇಕಾದ ನೆರವು ನೀಡಲು ಮುಂದಾಗಿರುತ್ತಿತ್ತು.
ಈ ತಯಾರಿಯ ಸಮಯದಲ್ಲಿಯೇ ನನ್ನ ಹಳೆಯ ವಿದ್ಯಾರ್ಥಿನಿಯರಾಗಿದ್ದ ಯಶೋಧ ಮತ್ತು ಶಾರದ ಅವರು ನೀವು ಹೇಗೂ ಲಿಂಗಾಯತರಂತೆ ಕಾಣುತ್ತೀರಿ, ಸದ್ಯದ ಸಮಯದಲ್ಲಿ ನೀವು ನಿಮ್ಮ ಜಾತಿಯನ್ನು ಲಿಂಗಾಯತರೆಂದು ಹೇಳಿ ಮದುವೆಗೆ ಗಾಯತ್ರಿ ಮನೆಯವರನ್ನು ಒಪ್ಪಿಸುವ ಸಲಹೆ ನೀಡಿದರು. ಆದರೆ ಅದೆಲ್ಲ ಆಗದ ಮಾತು ಎಂದು ನಾನು ಅವರಿಗೆ ಆಗಲೇ ತಿಳಿ ಹೇಳಿದೆ. ಮದುವೆಯ ದಿನಕ್ಕೆ ಬೇಕಾದ ಸೀರೆ, ಒಂದು ತಾಳಿ ಚೈನು ವ್ಯವಸ್ಥೆ ಮಾಡಿಕೊಳ್ಳುವುದು ಮತ್ತು ನನಗೆ ಒಂದು ಜೊತೆ ಷರ್ಟ್ ಪ್ಯಾಂಟ್ ಹೊಲಿಯಲು ಹಾಕಿದ್ದೆ. ಆದರೆ ನನಗೆ ಆ ಟೈಲರ್ ಮದುವೆ ದಿನಕ್ಕೆ ಕೊಡಲೇ ಇಲ್ಲ. ಗಾಯತ್ರಿಯನ್ನು ಭದ್ರಾವತಿಯ ಕೃಷ್ಣಪ್ಪನವರ ಮನೆಗೆ ಬರಲು ಹೇಳಿ ನಂತರ ಎಲ್ಲರೂ ಸೇರಿ ಸಬ್ ರಿಜಿಸ್ಟಾçರ್ ಆಫೀಸಿಗೆ ಹೋದೆವು. ಆಗ ಚಿತ್ರದುರ್ಗದಲ್ಲಿದ್ದ ಬಸವಣ್ಯಪ್ಪ ಕಟ್ಟಲು ತಾಳಿಯೊಂದನ್ನು ಕೊಂಡು ತಂದಿದ್ದ. ಸಬ್‌ರಿಜಿಸ್ಟರ್ ಆಫೀಸಿನಲ್ಲಿ ಫೀಸಾಗಿ 14ರೂ.ಗಳ ಖರ್ಚಿನಲ್ಲಿ ಭದ್ರಾವತಿಯಲ್ಲಿ ಸಮಾಜವಾದಿ ಮತ್ತು ದಲಿತ ಗೆಳೆಯರ ಸಮಕ್ಷಮದಲ್ಲಿ ಕೃಷ್ಣಪ್ಪ-ಇಂದಿರಾ ದಂಪತಿಗಳ ನೇತೃತ್ವದಲ್ಲಿ ಮದುವೆಯಾಗಿತ್ತು. ಉಟ್ಟ ಸೀರೆಯಲ್ಲಿ ನರಸಿಂಹರಾಜಪುರದಿಂದ ಬಂದಿದ್ದ ಗಾಯತ್ರಿ ಅವರ ಮನೆಯವರಿಗೆ ಪ್ರಭು ಮತ್ತು ಕೇಶವಮೂರ್ತಿಗಳು ಮಾರನೆದಿನ ಹೋಗಿ ನಮ್ಮ ವಿವಾಹ ಆಗಿರುವ ಬಗ್ಗೆ ತಿಳಿಸಿ ಬರಬೇಕೆಂಬ ಮಾತಿಗೆ ಇಬ್ಬರೂ ಮಾರನೇ ದಿನ ಗಾಯತ್ರಿಯ ಮನೆಗೆ ಹೋಗಿ ಮದುವೆಯಾದ ಸುದ್ದಿ ತಿಳಿಸಿದ್ದರು. `ಗಾಯತ್ರಿಯು ಅವಳಿಗೆ ಅಧ್ಯಾಪಕರಾಗಿದ್ದ ರುದ್ರಪ್ಪ ಎನ್ನುವವರನ್ನು ಮದುವೆಯಾಗಿದ್ದಾಳೆ, ಅವರಿಬ್ಬರೂ ಚೆನ್ನಾಗಿರುತ್ತಾರೆ, ನೀವೇನು ಚಿಂತಿಸುವ ಅಗತ್ಯವಿಲ್ಲ’ ಎಂಬುದನ್ನು ಬಾಯಿಪಾಠ ಮಾಡಿದಂತೆ ಒಪ್ಪಿಸಿ ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಿ ಬಂದಿದ್ದರು. ಅದರಿಂದಾಗಿ ಅವರ ಮನೆಯವರಿಗೆ ಗಾಯತ್ರಿ ಎಲ್ಲಿ ಹೋಗಿದ್ದಾಳೆ ಮತ್ತು ಏನಾಗಿದೆ ಎಂಬುದರ ಬಗ್ಗೆ ತಕ್ಷಣ ತಿಳಿದಂತಾಗಿತ್ತು.

ನನ್ನ ಮದುವೆ ದಿನ ಕೃಷ್ಣಪ್ಪನವರ ಮನೆಯಲ್ಲಿದ್ದ ನಾವು ಅಲ್ಲಿದ್ದರೆ ಗಾಯತ್ರಿ ಮನೆ ಕಡೆಯವರು ಬಂದು ಗಲಾಟೆ ಮಾಡಬಹುದೆಂದು ಭಾವಿಸಿ ಇಂದಿರಾ ಕೃಷ್ಣಪ್ಪನವರ ಹಿತೈಷಿ ಆಧ್ಯಾಪಕ ಶಿವಮೊಗ್ಗ ಮುನೀರ್ ಮತ್ತು ಅವರ ತಾಯಿ (ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ) ಬಚ್ಚಿಮ್ಮಾ ಮನೆಗೆ ಹೋಗಿ ಉಳಿಯಬೇಕೆಂದು ತೀರ್ಮಾನಿಸಿದ್ದರು. ಅದರಂತೆ ಮೊದಲ ರಾತ್ರಿ ಬಚ್ಚಿಮ್ಮಾ ಸಿಹಿ ಅಡುಗೆ ಮಾಡಿ ಔತಣ ಏರ್ಪಡಿಸಿದ್ದರು. ಊಟದ ಶಾಸ್ತç ಮಾಡಿ ಮಲಗಿದರೆ ನಿದ್ದೆ ಬಾರದೇ ಇಡೀ ರಾತ್ರಿ ಆತಂಕ ಮತ್ತು ಚಿಂತೆಗಳಲ್ಲಿ ಕಳೆದೆವು. ಮದುವೆಯಾಗಿ ಒಂದು ವಾರದಲ್ಲಿ ಅಂದರೆ 10-6-1979ರಂದು ಶಿವಮೊಗ್ಗ ಡಿ.ಸಿ.ಸಿ. ಬ್ಯಾಂಕ್ ಸಭಾಂಗಣದಲ್ಲಿ ಒಂದು ಸಂತೋಷಕೂಟ ವ್ಯವಸ್ಥೆ ಮಾಡಿದ್ದೆವು. ಅದಕ್ಕೆಲ್ಲಾ ಶಿವಮೊಗ್ಗದವನೇ ಆಗಿದ್ದ ಪ್ರಭು ಮತ್ತು ಅವನ ಅಲ್ಲಿನ ಗೆಳೆಯರಾದ ರೈತಸಂಘದ ಚಟ್ನಳ್ಳಿ ಮಂಜಪ್ಪ, ಅರ್ಚನ ಟ್ರೇರ‍್ಸ್ ಕಾಂತರಾಜ್ ಓಡಾಡಿ ನಿಗದಿಗೊಳಿಸಿದ್ದರು. ಸುಮಾರು 300-400 ಜನರಿಗೆ ಲಘು ಉಪಹಾರದೊಡನೆ ಈ ಸಮಾರಂಭವನ್ನು ಹಮ್ಮಿಕೊಂಡಿದ್ದೆವು. ಅದಕ್ಕಾಗಿ ಒಂದು ಸಾಮಾನ್ಯ ಕರೆಯೋಲೆಯನ್ನು ಸಹ ಮುದ್ರಿಸಿ ಬೇಕಾದ ಸ್ನೇಹಿತರಿಗೆ ಮತ್ತು ನನ್ನ ಊರಿನ ಸಂಬಂಧಿಕರಿಗೆ ಹಂಚಲು ನಮ್ಮ ಊರಿನ ಮಾಂತೇಶಿಗೆ ಜವಾಬ್ದಾರಿ ನೀಡಿದ್ದೆನು. ಅವನ ಮುಖಾಂತರ ಊರಿಗೆ ಕಳಿಸಿಕೊಟ್ಟಿದ್ದೆ. ಅವ್ವ ಮತ್ತು ಎಲ್ಲ ಸಂಬಂಧಿತ ಬಳಗ ಮತ್ತು ಊರಿನವರು ಹೇಳಿ ಕೇಳಿ ಮದುವೆಯಾಗದೆ ದಿಢೀರ್ ಆಗಿ ಈ ರೀತಿ ಆದ ಬಗ್ಗೆ ಆಕ್ಷೇಪಗಳನ್ನು ಮಾಡಿ ಅರ‍್ಯಾರೂ ಬಾರದೆ 7-8 ಜನ ಸ್ನೇಹಿತರು ಮಾತ್ರ ಊರಿನಿಂದ ಬಂದಿದ್ದರು. ನಂತರ ನಡೆಯಬೇಕಾಗಿದ್ದ ಸಂತೋಷಕೂಟವೂ ಕೂಡ ಶಿವಮೊಗ್ಗದಲ್ಲಿ ನಡೆಸಲು ಗಾಯತ್ರಿಯವರ ಮನೆಕಡೆಯಿಂದ ಶಿವಮೊಗ್ಗದಲ್ಲಿ ಮಾತ್ರ ಈ ಸಮಾರಂಭ ಮಾಡುವುದು ಬೇಡ ಎಂಬ ಅಭಿಪ್ರಾಯಪಟ್ಟಿದ್ದರಿಂದ ಕೊನೆ ಹಂತದಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಮುಂದೆ ಒಂದು ತಿಳುವಳಿಕೆಯ ಸೂಚನೆಯನ್ನು ಬರೆದು ಹಾಕಿ ಇಲ್ಲಿ ನಡೆಯಬೇಕಾಗಿದ್ದ ಸಂತೋಷ ಕೂಟ ಸಮಾರಂಭವನ್ನು ಬಿಆರ್‌ಪಿಯಲ್ಲಿನ ಸ್ನಾತಕೋತ್ತರ ಕೇಂದ್ರಕ್ಕೆ ವರ್ಗಾಯಿಸಲಾಗಿದೆ ಎಂದು ತಿಳಿಸಲಾಗಿತ್ತು. ಆದರೆ ನನ್ನ ಅನೇಕ ಸ್ನೇಹಿತರು ಸಂಜೆ ಬಂದವರು ನಂತರದ ಸ್ಥಳ ಬದಲಾವಣೆಯನ್ನು ತಿಳಿದು ಕಡೆಗವರು ಬಿಆರ್‌ಪಿಯಲ್ಲಿ ನಡೆದ ಸಂತೋಷಕೂಟದಲ್ಲಿ ಪಾಲ್ಗೊಳ್ಳಲಾಗಲಿಲ್ಲ. ಮತ್ತೆ ಕೆಲವರು ಅಲ್ಲಿ ಇಲ್ಲಿ ವಿಚಾರಿಸಿ ಬಿಆರ್‌ಪಿಗೆ ಬರುವ ವೇಳೆಗೆ ಸಂತೋಷಕೂಟವೇ ಅವಸರದ ಗಲಾಟೆಯಲ್ಲಿ ಮುಕ್ತಾಯವಾಗಿತ್ತು.

ಮದುವೆಯಾದ ಮಾರನೇ ದಿನ ಭದ್ರಾವತಿಯಲ್ಲಿರುವುದಾಗಲೀ ಹತ್ತಿರದಲ್ಲಿ ಇಲ್ಲೆಲ್ಲಿ ಇರುವುದು ಸೂಕ್ತವಲ್ಲವೆಂದು ಅವಸರದಲ್ಲಿ ಇಂದಿರಾ ಜೋಡಿಸಿಕೊಟ್ಟಿದ್ದ ಅವರದೇ ಸೂಟ್‌ಕೇಸ್‌ನಲ್ಲಿ ಒಂದೆರಡು ಸೀರೆ ಬಟ್ಟೆಗಳನ್ನು ಜೋಡಿಸಿಕೊಂಡು ಭದ್ರಾವತಿಯ ಬಸ್ ಸ್ಟಾö್ಯಂಡ್‌ಗೆ ಬಂದೆವು. ನಾನು ದಾವಣಗೆರೆಗೆ ಹೋಗೋಣವೆಂದು ಯೋಚಿಸುತ್ತಿರುವಾಗಲೇ ಅಲ್ಲಿಗೆ ಬಂದ ಶಂಕರ್ ಮೋಟಾರ್ ಟ್ರಾನ್ಸ್ಪೋರ್ಟ್ ನೋಡಿ, ಇವಳು ಅದು ನಮ್ಮ ಊರಿಗೆ ಹೋಗುವ ಬಸ್, ಅದರಲ್ಲಿ ತಮ್ಮ ಊರಿನವರು ಯಾರಾದರು ಇರುತ್ತಾರೆ ಎಂದು ಗಡಿಬಿಡಿ ಮಾಡಿದಾಗ ಅಲ್ಲೇ ಮೈಸೂರು ಕಡೆ ಹೊರಟು ನಿಂತಿದ್ದ ಬಸ್ ಹತ್ತಿ ಅರಸೀಕೆರೆಗೆ ಎರಡು ಟಿಕೆಟ್ ತೆಗೆದುಕೊಂಡು ಬಸ್ ಹತ್ತಿ ಕೂತೆವು. ಸದ್ಯ ಭದ್ರಾವತಿ ಬಿಟ್ಟೆವಲ್ಲ ಎಂಬ ಸಮಾಧಾನದಲ್ಲಿ ಸ್ವಲ್ಪ ಯೋಚಿಸುತ್ತಾ ಮೈಸೂರಿಗೆ ಹೋಗುವುದೋ ಇಲ್ಲ, ಅರಸೀಕೆರೆಯಲ್ಲಿ ಉಳಿಯುವುದೋ ಎಂಬ ಯೋಚನೆಯಲ್ಲಿದ್ದಾಗಲೇ, ಅರಸೀಕೆರೆಯಲ್ಲಿ ನಾನು ಬಿ.ಎ., ಮತ್ತು ಎಂ.ಎ. ನಲ್ಲಿ ನನ್ನ ರೂಂಮೇಟ್ ಮತ್ತು ಬ್ಯಾಚ್‌ಮೇಟ್ ಆಗಿದ್ದ ಎಲ್. ರವೀಂದ್ರ ಆಗ ಅರಸೀಕೆರೆ ತಹಸೀಲ್ದಾರನಾಗಿದ್ದ. ನಾವು ಅರಸೀಕೆರೆಯಲ್ಲಿ ಇಳಿದು ಬಸ್ ಸ್ಟಾö್ಯಂಡ್ ಹತ್ತಿರದಲ್ಲಿದ್ದ ವಸತಿಗೃಹದಲ್ಲಿ ರೂಂ ಮಾಡಿದೆವು. ನಂತರ ಸೂಟ್‌ಕೇಸ್‌ನಲ್ಲಿದ್ದ ಬಟ್ಟೆಯನ್ನೆಲ್ಲಾ ನೋಡಿ ಅವಳಿಗೊಂದು ಹೊಸ ಸೀರೆ ತೆಗೆದುಕೊಳ್ಳಲು ನಿರ್ಧರಿಸಿ, ವಸತಿಗೃಹದ ಎದುರಲ್ಲಿದ್ದ ಈಗಲೂ ಇರುವ `ಕನ್ನಿಕಾ ಪರಮೇಶ್ವರಿ ಕ್ಲಾತ್ ಸೆಂಟರ್’ನಲ್ಲಿ ಗಾಯತ್ರಿಗೆ `ನಾಳೆಯೊಳಗೆ ಬ್ಲೌಸ್ ಹೊಲೆದುಕೊಡುವ ಒಪ್ಪಿಗೆಯ ಮೇಲೆ ಒಂದು ಸೀರೆ ಮತ್ತಿತರ ಸಣ್ಣಪುಟ್ಟ ಸಾಮಾನುಗಳನ್ನು ಕೊಂಡುಕೊಂಡೆವು. ನಂತರ ತಹಸೀಲ್ದಾರನಾಗಿದ್ದ ರವೀಂದ್ರನಿಗೆ ಪೋನ್ ಮಾಡಿದೆ. ಹೀಗೆ ನಾನು ಮದುವೆಯಾಗಿ ಹೆಂಡತಿಯೊಡನೆ ಅರಸೀಕೆರೆ ಲಾಡ್ಜ್ನಲ್ಲಿ ಉಳಿದಿರುವ ಬಗ್ಗೆ ತಿಳಿಸಿದೆ. ಅವನು ನೇರ ಸಂಜೆ ಮನೆಗೆ ಊಟಕ್ಕೆ ಬರುವಂತೆ ಆಹ್ವಾನಿಸಿದ. ಆತಂಕದ ಆವೇಗದಲ್ಲಿದ್ದ ನಮಗೆ ಅವನಿದ್ದುದು ಮತ್ತು ಮನೆಗೆ ತಕ್ಷಣ ಆಹ್ವಾನಿಸಿದ್ದುದು ಒಂದು ರೀತಿಯ ಸಮಾಧಾನ ನೀಡಿತ್ತು. ಸಂಜೆ ಅವರ ಮನೆಗೆ ಊಟಕ್ಕೆ ಹೊರಡುವ ಮುನ್ನ ಗಾಯತ್ರಿಯ ಎಲ್ಲಾ ಅಕ್ಕಂದಿರಿಗೆ ಪ್ರತ್ಯೇಕ ಪತ್ರಗಳನ್ನು ಬರೆದು, ತುರ್ತಾಗಿ ಮದುವೆಯಾದ ಬಗ್ಗೆ ವಿವರಿಸಿ ತಾವೆಲ್ಲರೂ ಆಶೀರ್ವದಿಸಬೇಕೆಂದೂ, ಯಾವುದೇ ಆತಂಕಕ್ಕೆ ಒಳಗಾಗಬಾರದೆಂದು ನಮ್ರವಾಗಿ ವಿನಂತಿಸಿಕೊಂಡಿದ್ದೆವು.
ಸಂಜೆ ರವೀಂದ್ರನ ಮನೆಗೆ ಮದುವೆಯ ಜೋಡಿಯಾಗಿ ಔತಣವೊಂದಕ್ಕೆ ಜೊತೆಯಾಗಿ ಹೋಗುತ್ತಿರುವುದು ಮೊಟ್ಟಮೊದಲನೆಯದಾಗಿತ್ತು.

ನಾನು ಮಾಂಸಾಹಾರಿ ಮತ್ತು ಬೀರ್ ಕುಡಿಯುತ್ತಿದ್ದುದು ಗಾಯತ್ರಿಗೆ ಗೊತ್ತಿದ್ದರೂ ನಾನು ಅವಳಿಗಾಗಿ ಆ ಕ್ಷಣದಲ್ಲಿ ಕುಡಿಯುವುದು ಬೇಡ ಎಂದು ನಿರ್ಧರಿಸಿದ್ದೆ. ರವೀಂದ್ರನ ಮನೆಯಲ್ಲಿ ಅವರ ತಂದೆ ಆರ್.ಎಫ್.ಒ. ಆಗಿ ನಿವೃತ್ತರಾದವರು. ಮನೆಯಲ್ಲಿ ಮೊದಲೇ ಊಟಕ್ಕೆ ಕೂತಿದ್ದರು. ಜೊತೆಗೆ ಮ್ಯಾಕ್‌ಡೆವಲ್ ವಿಸ್ಕಿ ಬಾಟಲ್ ಹಾಗೂ ಮಾಂಸದೂಟದ ಎಲುಬಿನ ತುಣುಕುಗಳೆಲ್ಲ ಸುತ್ತಲೂ ಇದ್ದವು. ಗಾಯತ್ರಿ ನೋಡಿದ ಮೊದಲ ಮಾಂಸಹಾರಿ ಊಟದ ನೋಟದಲ್ಲಿಯೇ ಹೌಹಾರಿ ನಿಂತಿದ್ದಳು. ನಾನು ಮದುವೆ ಮಾಡಿಕೊಂಡು ಬಂದಿರುವ ಕಾರಣ ರವೀಂದ್ರ ನಿಜವಾಗಿಯೂ ಅದ್ದೂರಿ ಊಟ ಮತ್ತು ವಿಸ್ಕಿಗೆ ವ್ಯವಸ್ಥೆ ಮಾಡಿದ್ದ. ನಾನು ನನ್ನ ಮದುವೆಯ ಯಾವ ವಿವಾದಗಳನ್ನೂ ಅವನಿಗೆ ತಿಳಿಸದ ಕಾರಣ ಅವನು ತೋಚಿದಂತೆ ಮಾಡಿದ್ದ. ನಾನು ಅವನಿಗೂ ಮತ್ತು ಅವನ ಶ್ರೀಮತಿಯವರಿಗೆ, ಇವಳು ಮಾಂಸ ತಿನ್ನುವುದಿಲ್ಲ ಬೇರೇನಾದರೂ ಇದ್ದರೆ ಆದೀತೆಂದು ಹೇಳಿದೆ. ಅದಕ್ಕೇನೆಂದು 10 ನಿಮಿಷದಲ್ಲಿ ತಿಳಿಸಾರೊಂದು ತಯಾರಿಸಿದರು. ನಾನು ಗಾಯತ್ರಿ ಮತ್ತು ರವೀಂದ್ರ ಊಟ ಮಾಡಿದೆವು. ಮೊದಲ ಮದುವೆಯ ಔತಣಕೂಟ ತಿಳಿಸಾರು ಉಪ್ಪಿನಕಾಯಿ ಮೊಸರಲ್ಲಿ ಅವಳ ಊಟ ಮುಗಿದಿತ್ತು. ನನಗೆ ಒಳ್ಳೆಯ ಮಾಂಸಾಹಾರದ ಊಟವಾಗಿತ್ತು. ಅಲ್ಲಿಂದ ಮಾರನೇ ದಿನ ಮೈಸೂರಿಗೆ ಬಂದು ಜಗನ್ಮೋಹನ ಪ್ಯಾಲೇಸ್ ಹತ್ತಿರದಲ್ಲಿದ್ದ ಮಹಾರಾಜಾ ಲಾಡ್ಜ್ನಲ್ಲಿ ಉಳಿದುಕೊಂಡೆವು. ಅಲ್ಲಿಂದ ಮೈಸೂರಿನ ಗೆಳೆಯರಿಗೆ ನನ್ನ ಹಿರಿಕಿರಿ ಸ್ನೇಹಿತರಿಗೆ ಫೋನಿನಲ್ಲೆ ನಾವು ಮದುವೆಯಾಗಿ ಬಂದಿರುವ ವಿಷಯ ತಿಳಿಸಿದೆ.

ಹಿರಿಯರಾದ ಪಿ. ಮಲ್ಲೇಶ್ ಅವರು ಮನೆಗೆ ಕರೆದು ಅದ್ದೂರಿಯಾದ ಔತಣ ಮಾಡಿಸಿ ನನಗೆ ಗೊತ್ತಿರುವ ಮತ್ತು ಇನ್ನಿತರ ಸ್ನೇಹಿತರನ್ನು ಕರೆದು ನಾವಿಬ್ಬರೂ ಹೊಸದಾಗಿ ಮದುವೆಯಾಗಿ ಬಂದಿರುವ ಬಗ್ಗೆ ಅಭಿಮಾನದಿಂದ ಪರಿಚಯ ಮಾಡಿಸಿ ಹರಸಿ ಜೊತೆಗೆ ನನ್ನ ಹೆಂಡತಿಗೆ ಒಳ್ಳೆಯ ಸೀರೆಯನ್ನು ತಂದು ಉಡುಗೊರೆ ನೀಡಿದ್ದನ್ನ ಈಗಲೂ ಗಾಯತ್ರಿ ನೆನಪಿಸಿಕೊಳ್ಳುತ್ತಾಳೆ. ಮಲ್ಲೇಶ್ ಮತ್ತು ಅವರ ಶ್ರೀಮತಿ ಅವರು ಗಾಯತ್ರಿಯನ್ನು ಚೆನ್ನಾಗಿ ಮಾತಾಡಿಸಿ, ಒಳ್ಳೆಯ ಹುಡುಗನನ್ನು ಮದುವೆಯಾಗಿದ್ದೀಯ ಏನೂ ಯೋಚನೆ ಮಾಡಬೇಡ ಎಂದೆಲ್ಲ ಅವಳಿಗೆ ಸಮಾಧಾನದ ಮಾತು ಹೇಳಿ ಕಳುಹಿಸಿದ್ದರು.
ಹಾಗೆಯೇ ಮಾದೇವ ಮತ್ತು ಸುಮಿತ್ರಾಬಾಯಿಯವರು ಮನೆಗೆ, ಪಿ.ಕೆ. ಮಿಶ್ರಾಜಿ ಮತ್ತು ಮಹೇಶನ ಮನೆಗೂ ಹೋಗಿದ್ದೆವು. ಸುಮಿತ್ರಾಬಾಯಿ ಅವರು ನನ್ನ ಹೆಂಡತಿಯ ಹಿನ್ನೆಲೆ ಮೊದಲೇ ತಿಳಿದುಕೊಂಡಿದ್ದ ಕಾರಣ ಸೊಗಸಾದ ಸಸ್ಯಾಹಾರಿ ಔತಣ ಮಾಡಿದ್ದರು. ನನಗೆ ಬ್ರಾಹ್ಮಣ ಜಾತಿಯ ಅನೇಕ ಸ್ನೇಹಿತರಿರುವುದಾಗಿಯೂ ಆದುದರಿಂದ ಸಸ್ಯಾಹಾರಿ ಊಟ ಉಪಚಾರಗಳು ನನಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿ ಸುಮಿತ್ರಾಬಾಯಿ ಅವರು ಆದರಿಸಿದ್ದರು.

ಎಲ್ಲ ಸ್ನೇಹಿತರನ್ನು ಮಾತಾಡಿಸಿದ ನಂತರ ಸಂಜೆ ಎಂ.ಸಿ. ಸುಂದರೇಶ ನಮ್ಮ ಕಿರಿಯ ಗೆಳೆಯ ಮತ್ತು ತನ್ನ ಎಂಬಿಎ ಶಿಕ್ಷಣದ ನಂತರ ಸ್ವಂತ ಗ್ಯಾಸ್ ಏಜೆನ್ಸಿ ನಡೆಸುತ್ತಾ ಬೆಳೆಯುವ ಉದ್ಯಮಿಯಾಗಿದ್ದ. ಅವನು ದೊಡ್ಡ ಹೋಟೆಲೊಂದರಲ್ಲಿ ಪಾರ್ಟಿ ಏರ್ಪಡಿಸಿದ್ದ. ಮಹೇಶ ಮತ್ತಿತರ ಗೆಳೆಯರ ಜೊತೆ ಪಾರ್ಟಿಗೆ ಹೋಗಿದ್ದೆವು. ಆಗ ಅಲ್ಲಿಗೆ `ಆಂದೋಲನ’ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಶಿವಣ್ಣ ತನ್ನ ಪ್ರೇಮ ಪ್ರಕರಣದ ವೈಫಲ್ಯ ಕುರಿತು ಹೇಳುತ್ತಾ… ಅಳುತ್ತಾ ಮತ್ತಾರೂ ಮಾತಾಡಲಾಗದಂತೆ ಅವನದೇ ದೊಡ್ಡ ಗೋಳಾಯಿತು. ಮಹೇಶ ಎಲ್ಲರನ್ನು ಸಮಾಧಾನ ಮಾಡುತ್ತಾ ಪಾರ್ಟಿ ಮುಗಿಸಿದ್ದೆವು. ಸುಂದರೇಶ್, ಇವರೆಲ್ಲ ಅದಕ್ಕೆ ನಾನು ಬೇಡ ಅಂದಿದ್ದು, ಎಂದು ಬೇಸರ ಮಾಡಿಕೊಂಡಿದ್ದ. ನಾನೇ ಆತನಿಗೆ ಸಮಾಧಾನದ ಮಾತುಗಳನ್ನು ಹೇಳಿ ಅಲ್ಲಿಂದ ಬೀಳ್ಕೊಂಡಿದ್ದೆವು.

ಮಾರನೇ ದಿನ ಮಹೇಶನ ಊರಿಗೆ ಹೋಗಿ ಎರಡು ದಿನ ಅವನ ಊರಾದ ಕುಪ್ಪೇಗಾಲದಲ್ಲಿ ಇದ್ದೆವು. ಮಹೇಶನ ತಂದೆ ದೊಡ್ಡ ಜಮೀನುದಾರರು. ಮನೆಯಲ್ಲಿ ಹತ್ತಾರು ಆಳು ಕಾಳುಗಳು ಇದ್ದು ರೈತಾಪಿ ಕೆಲಸಗಳು ನಡೆಯುತ್ತಿದ್ದವು. ರೇಷ್ಮೆ, ತೆಂಗು, ಬತ್ತದ ಬೆಳೆಗಳಿದ್ದ ಹೊಲ ಗದ್ದೆಗಳ ಕಡೆ ತಿರುಗಾಡುತ್ತಾ ಅವರೂರಿಗೆ ಹೊಂದಿಕೊಂಡ ನದಿಕಡೆ ತಿರುಗಾಡಿ ಮನೆಗೆ ಬರುತ್ತಿದ್ದೆವು. ಮಹೇಶನ ಮನೆಯವರು ವಿಶೇಷವಾಗಿ ಉಪಚರಿಸಿದರು. ಗಾಯತ್ರಿ, ಅವರ ಅಡುಗೆಯ ಮನೆಯಲ್ಲಿದ್ದ ಒಂದು ಬುಟ್ಟಿ ತುಂಬಾ ಕಟ್ಟಿಟ್ಟಿದ್ದ ರಾಗಿ ಮುದ್ದೆಗಳನ್ನು ನೋಡಿ `ಇಷ್ಟೊಂದಾ’ ಎಂದು ಉದ್ಗಾರ ತೆಗೆದಿದ್ದಳು. ಅದಕ್ಕೆ ಅವರಮ್ಮ ಕೆಲಸಗಾರರಿಗೆ ಊಟ ಕೊಡದಿದ್ದರೆ ಕೆಲಸಕ್ಕೆ ಬರುವುದಿಲ್ಲ ಎಂದೆಲ್ಲ ವಿವರಣೆ ನೀಡುತ್ತಿದ್ದರು. ಎರಡು ದಿನ ಆರಾಮ ಇದ್ದು ಕುಪ್ಪೇಗಾಲದಿಂದ ಮೈಸೂರಿಗೆ ಹೊರಟು ನಿಂತಿದ್ದ ಬಸ್ಸು ಏರಿದ್ದೆವು. ನಮ್ಮನ್ನು ಕಳಿಸಲು ಬಂದಿದ್ದ ಮಹೇಶ ಏನೋ ನೆನಪು ಮಾಡಿಕೊಂಡವನಂತೆ ಬಸ್ಸಿನ ಪಕ್ಕಕ್ಕೆ ಬಂದು 200ರೂಗಳನ್ನು ನನ್ನ ಕೈಗಿಟ್ಟು ನಾನೇ ಮದುವೆ ಕಾಲಕ್ಕೆ ಸ್ವಲ್ಪ ಮುಂಚೆ ಬರಬೇಕಾಗಿತ್ತು, ಆಗಲಿಲ್ಲ ಎಂದು ಹೇಳುತ್ತಿರುವಾಗಲೇ ಬಸ್ ಮುಂದೆ ಮುಂದೆ ಚಲಿಸುತ್ತಿತ್ತು. ಧಾವಂತದಲ್ಲಿ ಮದುವೆ ನೋಂದಾಯಿಸಿಕೊಂಡು ಮೈಸೂರು ಕಡೆಗೆ ಹೋಗಿದ್ದ ನಾನು ಬಿಆರ್‌ಪಿಗೆ ವಾಪಸ್ ಬಂದಿದ್ದೆ. ನಂತರ 10ನೇ ತಾರೀಖಿನಂದು ಆಯೋಜಿಸಿದ್ದ ಔತಣಕೂಟಕ್ಕೆ ರೆಡಿಯಾಗುತ್ತಿದ್ದೆವು. ಯಾರೆಲ್ಲಾ ಬರಬಹುದು, ಏನೇನು ಬೆಳವಣಿಗೆಯಾಗಬಹುದೆಂಬ ದುಗುಡದಲ್ಲಿದ್ದೆವು. ನಮ್ಮ ಮದುವೆಗೆಲ್ಲಾ ಒತ್ತಾಸೆಯಾಗಿದ್ದ ಪ್ರಭುವಿನ ಮೇಲೆ ಎಲ್ಲರ ವಕ್ರದೃಷ್ಟಿ ಬಿದ್ದಿತ್ತು. ಗಾಯತ್ರಿ ಮನೆಯವರು ಮತ್ತು ಅವರಲ್ಲಿನ ಹಿರಿಯರನೇಕರು ಶಿವಮೊಗ್ಗದ ಅವರ ಮನೆಗೆ ಬಂದು ಗಾಯತ್ರಿಯನ್ನು ಅವರುಗಳು ಮಾತಾಡಿಸಬೇಕೆಂದು ಅದಕ್ಕಾಗಿ ನೀವು ಅವರಿಬ್ಬರನ್ನು ಶಿವಮೊಗ್ಗಕ್ಕೆ ಕರೆಸಲು ಪ್ರಭುಗೆ ಒತ್ತಾಯಿಸಿದ್ದರು.

ಅವರ ಇಚ್ಛೆಯಂತೆ ನಾನು ಗಾಯತ್ರಿ ಪ್ರಭು ಮನೆಗೆ ಸುಮಾರು ಮಧ್ಯಾಹ್ನ 11-12ರ ಸಮಯಕ್ಕೆ ಹೋದೆವು. ಗಾಯತ್ರಿಯ ಹಿರಿಯ ಅಣ್ಣ ಹೆಚ್.ಸಿ. ನಂಜುಂಡಭಟ್ಟ ಮತ್ತು ಹೆಚ್.ಸಿ. ಜಗದೀಶ್ ಹಾಗೂ ಬಂಧುವಾಗಿದ್ದ ಶಾರದಮ್ಮ ಅವರುಗಳ ಜೊತೆ ಇನ್ನೂ ಹಲವರು ಗಾಯತ್ರಿಯೊಡನೆ ಮಾತನಾಡಿದರು. ಅವರನ್ನೆಲ್ಲ ನೋಡಿದ ಗಾಯತ್ರಿ ಭಾವುಕಳಾಗಿ ಕೂತಿದ್ದಳು. ಬಂದ ಗಾಯತ್ರಿ ಬಂಧುಗಳು ಯಾರೂ ನನ್ನನ್ನು ಮಾತಾಡಿಸಲಿಲ್ಲ. ಅವರೆಲ್ಲ ಗಾಯತ್ರಿಯೊಡನೆ ಮಾತಾಡಿ ಬೇರೆಲ್ಲ ಮಾತು ಮುಗಿದು ಕೊನೆಯಲ್ಲಿ ಈಗ ಎಂ.ಎ. ಮುಗಿದಿರುವ ಕಾರಣ ಮುಂದಿನ ಓದಿಗಾಗಿ ಹೊರದೇಶಕ್ಕೆ ಹೋಗುವ ವ್ಯವಸ್ಥೆ ಮಾಡುವುದಾಗಿಯೂ, ಜೀವನದಲ್ಲಿ ಭೋಗಕ್ಕಿಂದ ತ್ಯಾಗ ದೊಡ್ಡದು ಎಂಬೆಲ್ಲ ಮಾತಾಡಿ ಈಗ ಆಗಿರುವ ಮದುವೆ ಮದುವೆಯಲ್ಲ, ಬಿಟ್ಟು ಬಿಡು ಎಂದೆಲ್ಲ ಮಾತುಗಳು ಬಂದವು. ಆಗ ಅದುವರೆಗೂ ಸುಮ್ಮನಿದ್ದ ಪ್ರಭು ಮಧ್ಯೆ ಪ್ರವೇಶಿಸಿ, ಈಗ ನನ್ನ ಸ್ನೇಹಿತ ನಿಮ್ಮ ತಂಗಿಯನ್ನು ಮದುವೆಯಾಗಿದ್ದು ಮುಂದಿನ ಜೀವನದ ವಿಷಯ ಮಾತನಾಡುವುದನ್ನು ಬಿಟ್ಟು ನೀವು ಬೇರ್ಪಡಿಸುವ ಮಾತಾಡುತ್ತಿದ್ದೀರಿ ಎಂದು ಆಕ್ಷೇಪಿಸಿ, ಇನ್ನು ಸಾಕು ಹೊರಡಿ ಎಂದು ಏರು ಧ್ವನಿಯಲ್ಲಿ ಹೇಳಿದ. ಗಾಯತ್ರಿ ಚಿಕ್ಕ ಅಣ್ಣ ಜಗದೀಶ, ಇದು ಏನು ಮನೆಯೋ ಜೈಲೋ ಹೀಗೆಲ್ಲಾ ಮಾತಾಡುತ್ತೀರೆಂದು ಹೇಳುವಾಗಲೇ, ಪ್ರಭು ಹೌದು ಇದು ಜೈಲು ನಾನಿಲ್ಲಿನ ಜೈಲ್ ಸೂಪರಿಂಟೆಂಡೆಂಟ್ ಎಂದು ಏರು ಧ್ವನಿಯಲ್ಲಿ ಹೇಳಿದ ಕಾರಣ ಮುಂದಿನ ಮಾತುಗಳು ನಿಂತು ನಮ್ಮೆಲ್ಲರ ಭೇಟಿ ಕೊನೆಗೊಂಡಿತ್ತು.

ದಿನಾಂಕ 10-6-1979ರ ಮಧ್ಯಾಹ್ನ 3-4 ಗಂಟೆಗೆ ನಾವಿಬ್ಬರೂ ನಮ್ಮ ಸ್ನಾತಕೋತ್ತರ ಕೇಂದ್ರದಲ್ಲಿನ ಒಂದು ಶಾಲಾ ಕೊಠಡಿಯಲ್ಲಿ ಸಂತೋಷ ಕೂಟ ಆಯೋಜಿಸಲಾಗಿತ್ತು. ಕೃಷ್ಣಪ್ಪನವರ ಸಮಾಜವಾದಿ, ದಲಿತ ಮಿತ್ರರನೇಕರು ಹಾಜರಿದ್ದರು. ಪ್ರಾಸ್ತಾವಿಕವಾಗಿ ಕೃಷ್ಣಪ್ಪನವರು ಮಾತಾಡಿ, ಸರಳ, ಜಾತ್ಯತೀತ ಮದುವೆಗಳು ಭಾರತೀಯರಿಗೆ ಇಂದಿನ ಅವಶ್ಯಕವಾದ ಅಂಶಗಳೆಂದು ಮಾತನಾಡಿ ಇಂತಹ ಮದುವೆಯಾಗುತ್ತಿರುವ ನಮ್ಮಿಬ್ಬರಿಗೂ ಶುಭ ಕೋರಿದ್ದರು. ನಂತರದಲ್ಲಿ ಡಾ. ತೀ.ನಂ. ಶಂಕರನಾರಾಯಣ, ಡಾ. ಶ್ರೀಕಂಠ ಕೂಡಿಗೆ, ಡಾ. ಜಿ.ಎನ್ ಕೇಶವಮೂರ್ತಿ ಮತ್ತು ಪ್ರಭು ಕೂಡ ಮಾತಾಡಿದ ನಂತರ ನಾನು ಎಲ್ಲರಿಗೂ ಕೃತಜ್ಞತೆ ಹೇಳಿದ್ದೆ. ಇನ್ನೇನು ಇದೆಲ್ಲ ಆಗುವ ಸಮಯಕ್ಕೆ ಸರಿಯಾಗಿ ಗಾಯತ್ರಿಯ ತಂದೆ, ಅಣ್ಣಂದಿರು ಹಾಗೂ ಇತರ ಕೆಲವರು ಅಲ್ಲಿಗೆ ಬಂದರು. ಕೃಷ್ಣಪ್ಪನವರು ಇದೆಲ್ಲವನ್ನು ಗಮನಿಸುತ್ತಾ ಇದ್ದ ಕಾರಣ ಗಲಾಟೆ ಆಗುವ ಸಂಭವವನ್ನು ನಿರೀಕ್ಷಿಸಿ ನಮ್ಮಿಬ್ಬರನ್ನು ಒಂದು ಅಂಬಾಸಿಡರ್ ಕಾರಿನಲ್ಲಿ ಭದ್ರಾವತಿಗೆ ತರಾತುರಿಯಲ್ಲಿ ಕಳಿಸಿಕೊಟ್ಟರು. (ಸುದ್ದಿದಿನ.ಕಾಂ|ವಾಟ್ಸಾಪ್|9980346243

ಮುಂದುವರಿಯುವುದು

Continue Reading

ಅಂತರಂಗ

ಮಹಾತ್ಮ ಗಾಂಧಿ ಬಿಟ್ಟರೆ ನಾನೇ ಫಾದರ್‍ ಆಫ್‍ ದಿ ನೇಷನ್‍ ಅಂತಾರೆ..!

Published

on

  • ಚೇತನ್ ನಾಡಿಗೇರ್

‘ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳ ಜಾಸ್ತಿ ಆಗ್ತಿಲ್ಲ, ಆ ಬಗ್ಗೆ ಮಾತಾಡೋಣ. ಆಟೋ ಚಾಲಕರಿಗೆ ಬೈಕ್‍ ಸವಾರರಿಂದ ತೊಂದರೆ ಆಗುತ್ತಿದೆ ಆ ಬಗ್ಗೆ ಮಾತಾಡೋಣ. ಸರ್ಕಾರಿ ಶಾಲೆಗಳಲ್ಲಿ ಬಿಸಿಊಟ ಅಡುಗೆ ಮಾಡುವವರಿಗೆ ತಿಂಗಳಿಗೆ ಮೂರು ಸಾವಿರ ರೂಪಾಯಿ ಸಂಬಳ. ಅದರ ಬಗ್ಗೆ ಮಾತಾಡೋಣ. ಮಿಕ್ಕವರೆಲ್ಲಾ ಬಹಳ ಬ್ಯುಸಿಯಾಗಿರುವುದರಿಂದ ನಾವು ಇದರ ಬಗ್ಗೆ ಮಾತಾಡೋಣ್ವಾ?’

ಮಾರ್ಮಿಕವಾಗಿ ಕೇಳಿದರು ಪ್ರಕಾಶ್‍ ರೈ. ಅವರಿಗೆ ಆ ವಿಷಯದ ಬಗ್ಗೆ ಮಾತಾಡುವುದಕ್ಕೆ ಇಷ್ಟವಿರಲಿಲ್ಲ. ಆದರೂ ಕನ್ನಡ ಚಿತ್ರರಂಗದಲ್ಲಿ ಕಳೆದ ಒಂದು ತಿಂಗಳಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂಬ ಪ್ರಶ್ನೆ ಬಂತು. ಅದನ್ನು ಬಹಳ ಜಾಣ್ಮೆಯಿಂದ ತಳ್ಳಿಹಾಕಿದರು ರೈ. ಅದೊಂದು ಬಿಟ್ಟು ಹಲವು ವಿಷಯಗಳ ಬಗ್ಗೆ ಮಾತನಾಡಿದರು. ತಮ್ಮ ಇಷ್ಟದ ಚಿತ್ರದ ಬಗ್ಗೆ, ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿಯ ಬಗ್ಗೆ, ಸೋಷಿಯಲ್ ಮೀಡಿಯಾವನ್ನು ಕೆಲವರು ಕೆಟ್ಟದಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ, ತಂದೆ-ಮಗನ ಸಂಬಂಧದ ಬಗ್ಗೆ, STARDOM ಸಂಭಾಳಿಸುವ ಬಗ್ಗೆ, ಕಲಿಕೆಯ ಬಗ್ಗೆ … ಹೀಗೆ ಹಲವು ವಿಷಯಗಳನ್ನು ಅವರು ಮಾತನಾಡಿದರು. ಅದಕ್ಕೆ ವೇದಿಕೆಯಾಗಿದ್ದು, ಆರ್. ಚಂದ್ರು ನಿರ್ಮಾಣದ, ‘ಡಾರ್ಲಿಂಗ್‍’ ಕೃಷ್ಣ ಅಭಿನಯದ ‘ಫಾದರ್‍’ ಚಿತ್ರದ ಪತ್ರಿಕಾಗೋಷ್ಠಿ. ಈ ಚಿತ್ರದಲ್ಲಿನ ತಮ್ಮ ಪಾತ್ರ ಮತ್ತ ತಂದೆಯ ವ್ಯಾಖ್ಯಾನವನ್ನು ರೈ ಎಷ್ಟು ಚೆನ್ನಾಗಿ ಮಾಡಿದರು ಗೊತ್ತಾ? ನೀವೇ ಓದಿ …

ನಾನು ನನ್ನ ಮೂರು ದಶಕಗಳ ವೃತ್ತಿಜೀವನದಲ್ಲಿ ಯಶಸ್ಸಿನಿಂದ ಹಾಳಾದ ಬಹಳಷ್ಟು ಜನರನ್ನು ನೋಡಿದ್ದೇನೆ. ಸೋಲಿನಿಂದ ಹಾಳಾದವರನ್ನು ನೋಡಿದ್ದು ಕಡಿಮೆ. ಯಶಸ್ಸು ಎನ್ನುವುದು ಒಂದು ನಶೆ. ಯಶಸ್ವಿಯಾಗುವುದು ದೊಡ್ಡ ವಿಷಯವಲ್ಲ. ಅದನ್ನು ದಕ್ಕಿಸಿಕೊಳ್ಳೋದು, ಉಳಿಸಿಕೊಳ್ಳೋದು ಬಹಳ ಮುಖ್ಯ. ಹಾಗಾಗಿ, ಡಾ. ರಾಜಕುಮಾರ್, ರಜನಿಕಾಂತ್‍, ಕಮಲ್ ಹಾಸನ್‍ ಮುಂತಾದವರು ಆರು ದಶಕ, ಐದು ದಶಕಗಳ ಕಾಲ ಕೆಲಸ ಮಾಡಿದವರನ್ನು ನಾವು ನೋಡಬಹುದು. ಈಗ ಅಂಥವರು ಸಿಗುವುದೇ ಇಲ್ಲ ನಮಗೆ. ಬಹಳಷ್ಟು ಯುವಕರು stardomಗೆ ತಯಾರಾಗಿರುವುದಿಲ್ಲ. ಎಷ್ಟು ನಾವು ಅದನ್ನು ಇಳಿಸಿಕೊಂಡು ಹೊರಗೆ ಬರುತ್ತೀವೋ, ಅಷ್ಟು ಒಳ್ಳೆಯದು. ಇಲ್ಲದಿದ್ದರೆ ಅದು ನಮ್ಮನ್ನು ಸುಟ್ಟುಹಾಕುತ್ತದೆ. ಕೆಲವರು ಕಲಿಯುತ್ತಿದ್ದಾರೆ, ಕೆಲವರು ಕಲಿಯುವುದಿಲ್ಲ.

ಪ್ರತಿಯೊಬ್ಬರಿಗೂ ಇಗೋ ಇರಬೇಕು. ಅದು ಸ್ವಾಭಿಮಾನವಾಗಿರುವವರೆಗೂ ಇರಬೇಕು. ಅದು ಅಹಂಕಾರವಾದರೆ ಇಬ್ಬರಿಗೂ ಒಳ್ಳೆಯದಲ್ಲ. ಒಂದು ಇಗೋ ನನ್ನನ್ನು ಬೆಳೆಸುವುದಕ್ಕೆ ಸಾಧ್ಯವಾದರೆ, ಇನ್ನೊಂದನ್ನು ರೂಪಿಸುವುದಕ್ಕೆ ಸಾಧ್ಯವಾದರೆ, ಒಂದು ಧಾರ್ಮಿಕ ಕೋಪವಾದರೆ ಒಳ್ಳೆಯದಲ್ವಾ? ಅದು ಆಯಾ ಪರಿಸ್ಥಿತಿಗೆ ಬದಲಾಗುತ್ತಿರುತ್ತದೆ. ಒಂದು ಪದದ ಅರ್ಥ ಪದಕೋಶದಲ್ಲಿ ಸಿಗುವುದಿಲ್ಲ, ಆ ಸಂದರ್ಭದಲ್ಲಿ ಸಿಗುತ್ತದೆ. ಯಾವ ಸಂದರ್ಭದಲ್ಲಿ ಆ ಪದವನ್ನು ಉಪಯೋಗಿಸುತ್ತೀವೋ, ಆ ಪದಕ್ಕೆ ಅರ್ಥ ಇರುತ್ತದೆಯೇ ಹೊರತು, ಇಗೋ ಎಂದರೆ ಒಂದು definite ಅರ್ಥವಿರುವುದಿಲ್ಲ.

ಕೆಲವು ನಟರು ಸಹ ತಾವು ಜಿಮ್‍ಗೆ ಹೋಗಿಯೇ ನಟ ಆಗುತ್ತೀನಿ ಎಂದರೆ ಆಗುವುದಿಲ್ಲ. ಭಾಷೆ, ಸಂಸ್ಕೃತಿ, ಸಾಹಿತ್ಯದ ಬಗ್ಗೆ ತಿಳಿದುಕೊಳ್ಳೋದು, ಕಲೆಯ ಪ್ರಕಾರಗಳನ್ನು ಅರಿತುಕೊಳ್ಳೋದು, ಅದರಿಂದ ನನಗೆ ಹೆಸರಾಗಬೇಕೆಂದು ಬಯಸೋದು ಸಹ ಮುಖ್ಯ. ಎಲ್ಲಕ್ಕಿಂತ ಹೆಚ್ಚಾಗಿ, ಪ್ರತಿಯೊಬ್ಬರು ಗೆಲ್ಲಬೇಕೆಂಬ ಒತ್ತಡ ಯಾಕೆ? ಸೋಲು ಸಂತೋಷ ಯಾಕೆ ನಾವು ಕೊಟ್ಟಿಲ್ಲ? ಕ್ಷಮಿಸುವ ಸಂತೋಷವನ್ನು ನಾವು ಯಾಕೆ ಕೊಟ್ಟಿಲ್ಲ? ನಮಗೂ ಅವನೇನು ಹೇಳುತ್ತೇನೆ ಎನ್ನುವ ತಾಳ್ಮೆಯೇ ಇಲ್ಲ. ನಾನು ಅಂದುಕೊಂಡಿರುವ ಸಿನಿಮಾ ತೆಗೆದಿದ್ದೀಯಾ? ಅಂತಲೇ ಎಲ್ಲರೂ ಕೇಳೋದು. ಏನು ಹೇಳುತ್ತಾನೆ ಎನ್ನುವ ತಾಳ್ಮೆಯೇ ಯಾರಿಗೂ ಇಲ್ಲ.

ನಾನೇ ಈಗ ಮತ್ತೆ ಕಲಿಯಬೇಕಾದ ಪರಿಸ್ಥಿತಿಯಲ್ಲಿದ್ದೀನಿ. ಇಷ್ಟು ಸಿನಿಮಾಗಳನ್ನು ಮಾಡಿದ್ದೇನೆ, ಹೊಸಹೊಸ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದೇನೆ. ಇವತ್ತು ಹೊಸಬರ ಜೊತೆಗೆ ಮಾಡುವಾಗ, ಅವರು ಬೇರೇನೋ ಕೇಳುತ್ತಿದ್ದಾರೆ ಅಂತನಿಸುತ್ತಿದೆ. ಹಾಗಾಗಿ, ಇದುವರೆಗೂ ಕಲಿತಿದ್ದನ್ನು ಮರೆತು, ಹೊಸದಾಗಿ ಕಲಿಯಬೇಕು. ಇದೊಂದು ಸವಾಲು. ಖುಷಿಯಾಗುತ್ತಿದೆ. ಇತ್ತೀಚೆಗೆ ‘ರಾಯನ್‍’ ಸಿನಿಮಾದ ಸಮಾರಂಭದಲ್ಲಿದ್ದೆ. ಆ ಚಿತ್ರಕ್ಕೆ ರೆಹಮಾನ್‍ ಸಂಗೀತ ಸಂಯೋಜಿಸುತ್ತಿದ್ದು, ರೆಹಮಾನ್‍ ಚಿತ್ರರಂಗಕ್ಕೆ ಬಂದು 30 ವರ್ಷಗಳಾಗಿವೆ. ನನ್ನ ಮೊದಲ ತಮಿಳು ಚಿತ್ರಕ್ಕೆ ಅವರೇ ಸಂಗೀತ ನಿರ್ದೇಶಕರು.

30 ವರ್ಷಗಳ ನಂತರವೂ ನಾವಿನ್ನೂ ಇದ್ದೀವಲ್ಲ ಎನ್ನುವುದೇ ಬಹಳ ಸಂತೋಷದ ವಿಷಯ. ಒಬ್ಬ ಕಲಾವಿದ ಬೆಳೆಯೋದು ಬರೀ ಅವನ ಪ್ರತಿಭೆಯಿಂದ ಮಾತ್ರವಲ್ಲ. ಜನರ ಪ್ರೀತಿಯಿಂದ ಮತ್ತು ಅದಕ್ಕಿಂತ ಜನರು ಅವನ ಮೇಲಿಟ್ಟಿರುವ ನಂಬಿಕೆಯಿಂದ. ಆ ನಂಬಿಕೆಯನ್ನು 30 ವರ್ಷಗಳ ಕಾಲ ಉಳಿಸಿಕೊಂಡಿದ್ದೇವೆ ಎನ್ನುವುದೇ ನಮ್ಮ ಹೆಮ್ಮೆ ಆಗುತ್ತದೆ. ಏಕೆಂದರೆ, ಅವರು ನಮ್ಮನ್ನು ನಂಬಿ ಒಂದು ವೇದಿಕೆ ಕೊಟ್ಟಿದ್ದಾರೆ. ಅವರಿಗೆ ಇಷ್ಟ ಆದರಂತೂ, ನಿಮ್ಮನ್ನು ಪ್ರೀತಿಸೋಕೆ ಕಾರಣಗಳನ್ನು ಹುಡುಕುತ್ತಾನೆ. ಒಬ್ಬ ವ್ಯಕ್ತಿಯ ಬೆಳವಣಿಗೆ ಬರೀ ಅವನು ಬೆಳೆದ ಎತ್ತರ ನೋಡಿ ಲೆಕ್ಕ ಹಾಕುವುದಲ್ಲ, ಅವನು ಎತ್ತರವಾಗಿ ಬೆಳೆದ ಮೇಲೆ ಎಷ್ಟು ಜನರನ್ನ ಬೆಳೆಸಿದ ಎನ್ನುವುದು ಬಹಳ ಮುಖ್ಯ.

‘ನಾನು ನನ್ನ ಕನಸು’ ಇರಬಹುದು, ‘ಒಗ್ಗರಣೆ’ ಅಥವಾ ‘ಇದೆಂಥಾ ರಾಮಾಯಣ’ ಚಿತ್ರಗಳು ನನ್ನ ಅಭಿರುಚಿ. ತಂದೆ-ಮಗನ ಸಂಬಂಧದ ಕುರಿತು ಸಾಕಷ್ಟು ಚಿತ್ರೆಗಳು ಬಂದಿವೆ. ಮಹಾತ್ಮ ಗಾಂಧಿ ಬಿಟ್ಟರೆ ನಾನೇ ಫಾದರ್‍ ಆಫ್‍ ದಿ ನೇಷನ್‍ ಅಂತಾರೆ. ಏಕೆಂದರೆ, ಅಷ್ಟೊಂದು ತಂದೆಯ ಪಾತ್ರಗಳನ್ನು ನಾನು ಇದುವರೆಗೂ ಮಾಡಿಬಿಟ್ಟಿದ್ದೀನಿ. ಇದು ತೀವ್ರವಾಗಿ ಕಾಡುವ ಸಿನಿಮಾ. ತಂದೆ-ಮಗನ ಬಾಂಧವ್ಯಕ್ಕಿಂತ, ಇಲ್ಲಿ ಮಗನನ್ನು ಅರ್ಥ ಮಾಡಿಕೊಳ್ಳುವುದರ ಜೊತೆಗೆ ಹಿರಿಯರನ್ನೂ ಅರ್ಥ ಮಾಡಿಕೊಳ್ಳಬೇಕು ಎಂದು ಸೂಕ್ಷ್ಮವಾಗಿ ಹೇಳಲಾಗಿದೆ. ಪರಿಸ್ಥಿತಿಯ ವಿಕೋಪಗಳಿಗೆ ಅಥವಾ ಕೆಲವು ಒತ್ತಡಗಳಿಗೆ ಆ ಸಂಬಂಧ ಪ್ರಶ್ನಿಸಲ್ಪಡುತ್ತದೆ. ಜೀವನದಲ್ಲಿ ಕೆಲವು ಸಂಘರ್ಷಗಳು ಬಂದಾಗ ನಮಗೊಂದು ಲಿಬರೇಶನ್ ‍ಸಿಗುತ್ತದೆ. ಒಂದು ಪರಿಸ್ಥಿತಿ ಎದುರಾದಾಗ ನಮ್ಮಳೊಗಿರುವ ಇನ್ನೊಂದು ಶಕ್ತಿ ನಮಗೆ ಅರ್ಥವಾಗೋದು ಅಥವಾ ನಾವು ಇನ್ನಷ್ಟು ಬೆಳೆಯೋದಕ್ಕೆ ಸಾಧ್ಯ. ಅದನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ಇದೊಂದು ಜನ ಸಾಮಾನ್ಯರ ಸಿನಿಮಾ. ನಿಜವಾಗಲೂ ಕಾಡುವ ಸಿನಿಮಾ.

ಒಬ್ಬ ಗಂಡಸು ಮಕ್ಕಳು ಹುಟ್ಟುವ ತನಕ ಬರೀ ಒಬ್ಬ ಗಂಡ ಆಗಿರುತ್ತಾನೆ. ಮಕ್ಕಳು ಹುಟ್ಟಿದ ನಂತರ ಅಪ್ಪ ಎನ್ನುವ ಸ್ಥಿತಿ. ಅಪ್ಪನಿಗೂ, ಮಕ್ಕಳಿಗೂ ಒಂದೇ ವಯಸ್ಸು. ಅದರಲ್ಲೂ ಒಂದು ಹೆಣ್ಣು ಮಗಳ ಜೊತೆಗಿನ ಸಂಬಂಧ ಎಂದರೆ, ಅವನ ಜೀವನದಲ್ಲಿ ಬರುವ ಎಲ್ಲಾ ಸಂಬಂಧಗಳು, ಅಂದರೆ ತಾಯಿ ಇರಬಹುದು, ಹೆಂಡತಿ ಇರಬಹುದು, ತಂಗಿ ಇರಬಹುದು, ಸ್ನೇಹಿತೆ ಇರಬಹುದು. ಆದರೆ, ಮಗಳ ಜೊತೆಗೆ ಬೇರೆ ಸಂಬಂಧ ಇರುತ್ತದೆ. ಚೆನ್ನಾಗಿ ಬೆಳಸಿ ಯಾವುದನ್ನೂ ಎದುರು ನೋಡದೆ ಬಿಟ್ಟು ಕೊಡುವುದು. ತಂದೆ-ಮಗನ ಸಂಬಂಧ ಹಾಗಿರುವುದಿಲ್ಲ. ನನ್ನ ನಂತರ ನೀನು, ನನ್ನ ಇನ್ನೊಂದು ಛಾಯೆ ನೀನು ಎನ್ನುವ ಸಂಬಂಧ ಅದು. ಅದೊಂಥರಾ Love-Hate relationship. ತಂದೆ ತನ್ನ ಮಗನಿಗೆ ಕಲಿಸೋದಕ್ಕಿಂತ, ಅವನ behaviourನಿಂದ ಮಕ್ಕಳು ಕಲಿಯೋದು ತುಂಬಾ ಇರುತ್ತದೆ.

ನನಗೆ ನನ್ನ ಮಗಳ ಜೊತೆಗೆ ಇರುವ relationship ಬೇರೆ, ಮಗನ ಜೊತೆಗೆ ಇರುವ ಸಂಬಂಧ ಬೇರೆ. ಇವತ್ತಿನ ಪ್ರಪಂಚದಲ್ಲಿ ಹೊರಗೆ ಹೋಗಬೇಕು. ಸಾಕಷ್ಟು ಸಮಸ್ಯೆಗಳು ಇರುತ್ತವೆ. ಅದನ್ನು ಹೇಳಿಕೊಳ್ಳುವುದಕ್ಕೆ ಆಗಲ್ಲ. ಅದನ್ನು ಅವರೇ ನಿಭಾಯಿಸಬೇಕು. ಮಗ ಎಷ್ಟೇ ದೊಡ್ಡವನಾದರೂ, ತಂದೆಗೆ ಇನ್ನೂ ಚಿಕ್ಕವನು ಎಂದನಿಸುತ್ತದೆ. ಅದರ ಜೊತೆಗ ಮಗನಿಗೆ ತನ್ನದೇ ಆದ ನಿರ್ಧಾರಗಳೂ ಇರುತ್ತವೆ. ಅದನ್ನೂ ಒಪ್ಪಿಕೊಳ್ಳಬೇಕಾಗುತ್ತದೆ. ನಾನು ನಿನಗೆ ಇಷ್ಟು ಮಾಡಿದೆ, ನೀನೇನು ವಾಪಸ್ಸು ಕೊಡುತ್ತೀಯ ಎನ್ನುವುದಕ್ಕಿಂತ ಅವನನ್ನೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಒಬ್ಬ ನಟನಾಗಿ ನನಗೆ ‘ನಾನು ನನ್ನ ಕನಸು’ ಬಹಳ ಇಷ್ಟವಾದ ಮತ್ತು ಕಾಡುವ ಸಿನಿಮಾ. ಏಕೆಂದರೆ, ನನ್ನ ಹೆಂಡತಿ ನನ್ನ ಹೆಂಡತಿಯಾಗಿಯೇ ಇರುತ್ತಾಳೆ. ಮಗಳು ಮದುವೆಯಾದಾಗ, ಮಾವ ಆಗ ನನಗೆ ಅರ್ಥಾವಾಗುತ್ತಾನೆ. ಅಲ್ಲಿಯವರೆಗೂ ಹೆಂಡತಿ ಅಪ್ಪ ಅಂತ ಜಗಳ ಆಡುತ್ತಿರುತ್ತೀವಿ. ನನ್ನ ಮಗಳಿಗೆ ಮಾವ ಸಿಗುತ್ತಾನೆ ಎಂದಾಗ, ನನಗೆ ಹೆಂಡತಿ ಅರ್ಥವಾಗುತ್ತಾ ಹೋಗುತ್ತಾಳೆ. ಅವಳು ಇನ್ನೊಬ್ಬಳ ಮಗಳಾಗಿದ್ದಳು, ನಾನು ಅವಳನ್ನು ಇನ್ನೊಬ್ಬರ ಮಗಳು ಅಂತ ನೋಡಿರಲೇ ಇಲ್ಲ. ನನ್ನ ಮಗಳನ್ನು ನಾನು ನೋಡುತ್ತಿದ್ದ ಹಾಗೆ, ಅವಳ ಅಪ್ಪ ಸಹ ಅವಳನ್ನು ಹಾಗೆಯೇ ನೋಡುತ್ತಿದ್ದ. ಮಗಳು ಮತ್ತು ತಂದೆಯ ಸಂಬಂಧದಲ್ಲಿ ಆ ಚಿತ್ರ ನನಗೆ ಬಹಳಷ್ಟು ವಿಷಯಗಳನ್ನು ಕಲಿಸಿತು. ಆ ಚಿತ್ರವನ್ನು ಬರೆಯುತ್ತಾ, ನಿರ್ದೇಶನ ಮಾಡುತ್ತಾ ತುಂಬಾ ಕಲಿತೆ. ಹಾಗಾಗಿ, ನನಗೆ ಅದು ಬಹಳ ಇಷ್ಟವಾದ ಚಿತ್ರ.

ಮಾಣಿಕ್ಯ ಒಳ್ಳೆಯದೇ? ಅದು ಕೋತಿ ಕೈಗೆ ಸಿಕ್ಕಿದರೆ? ಅದರ ಬಗ್ಗೆ ನಾವು ಯೋಚಿಸಬೇಕು. ಪ್ಲಸ್‍, ಮೈನಸ್‍ ಇದ್ದೇ ಇರುತ್ತದೆ. ಒಳಗಿನ ಅಸಹ್ಯವೂ ಹೊರಗೆ ಬರುತ್ತದೆ, ವಿಕಾರಗಳೂ ಹೊರಗ ಬರುತ್ತಿವೆ. ಅವೆರಡೂ ಬರಬೇಕು. ಸೋಷಿಯಲ್‍ ಮೀಡಿಯಾಗಳು ಬಹಳ ಮುಖ್ಯವಾದ ವಿಷಯಗಳನ್ನು ತಲುಪಿಸೋಕೆ ಮಹತ್ವದ ಪಾತ್ರ ವಹಿಸುತ್ತಿದೆ. ಇದರಲ್ಲಿ ಒಳ್ಳೆಯದೂ ಇದೆ, ಕೆಟ್ಟದ್ದೂ ಇದೆ. ಅವೆರಡರಲ್ಲಿ ನಾವು ಯಾವುದನ್ನು ತೆಗೆದುಕೊಳ್ಳುತ್ತೇವೆ ಎನ್ನುವುದು ಬಹಳ ಮುಖ್ಯ. ‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಲ್ಲಿ ಅನಂತ್‍ ನಾಗ್‍ ಒಂದು ಸಂಭಾಷಣೆ ಹೇಳ್ತಾರೆ. ‘ನಮ್ಮೆಲ್ಲರಲ್ಲೂ ಕಪ್ಪು ನಾಯಿ, ಬಿಳಿ ನಾಯಿ ಇರತ್ತೆ. ಕಪ್ಪು ನಾಯಿ ಕೆಟ್ಟದ್ದು, ಬಿಳಿ ನಾಯಿ ಒಳ್ಳೇದು.

ಅವೆರಡರಲ್ಲಿ ನಾವು ಯಾವುದಕ್ಕೆ ಊಟ ಜಾಸ್ತಿ ಹಾಕುತ್ತೇವೆ ಅನ್ನೋದು ಮುಖ್ಯ’ ಅಂತಾರೆ. ನಾವು ಎರಡನ್ನೂ ನೋಡಬೇಕು. ಅಣು ಬಾಂಬ್‍ ಕಂಡುಹಿಡಿದಿದ್ದು ಎನರ್ಜಿಗೆ, ಇನ್ನೊಬ್ಬರನ್ನು ಕೊಲ್ಲುವುದಕ್ಕೆ ಅಲ್ಲ. ಇಲ್ಲಿ ನಮ್ಮ ಮನಸ್ಸಾಕ್ಷಿ, ಆತ್ಮಾವಲೋಕನ ಬಹಳ ಮುಖ್ಯ. ಇದನ್ನು ಯಾರೋ ಒಬ್ಬರು ನೋಡುವುದಿಲ್ಲ. ಹೆಣ್ಮಕ್ಕಳು ನೋಡುತ್ತಿರುತ್ತಾರೆ. ಸಮಾಜದ ಒಂದು ಸ್ವಾಸ್ತ್ಯ ನೋಡುತ್ತಿರುತ್ತದೆ. ಅವರಿಗೆ ನಾವೇನು ತಲುಪಿಸಬೇಕು, ಯಾವುದು ಮುಖ್ಯ ಆಗಬೇಕು ಎಂಬುದು ನಮ್ಮ ಕೈಯಲ್ಲಿರೋದು. ಇವತ್ತಿನ ಯುವ ಜನಾಂಗದ ತಪ್ಪೇನು ಇಲ್ಲ. ಒಬ್ಬಿಬ್ಬರು ತಪ್ಪು ಮಾಡಿದರೆ, ಎಲ್ಲರೂ ತಪ್ಪು ಮಾಡುತ್ತಾರೆ ಎನ್ನುವುದು ತಪ್ಪು. Let’s be responsible ಅಷ್ಟೇ. (ಬರಹ : ಚೇತನ್ ನಾಡಿಗೇರ್, ಫೇಸ್ ಬುಕ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಆತ್ಮಕತೆ | ಪಠ್ಯೇತರ ಚಟುವಟಿಕೆಗಳು

Published

on

  • ರುದ್ರಪ್ಪ ಹನಗವಾಡಿ

ಠ್ಯೇತರ ಚಟುವಟಿಕೆಗಳ ಕಾರಣದಿಂದಾಗಿ ಅದರ ಅಧ್ಯಕ್ಷನಾಗಿದ್ದ ಕಾರಣ ಇಡೀ ಕೇಂದ್ರದ ವಿದ್ಯಾರ್ಥಿಗಳು ಪರಸ್ಪರ ಪರಿಚಯ ಮತ್ತು ಅರ್ಥಮಾಡಿಕೊಳ್ಳುವಂತಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಭಾಷಣ, ಚರ್ಚೆಗಳ ಜೊತೆಗೆ ವಿದ್ಯಾರ್ಥಿಗಳಿಗೆ ಸಂಘಟಿತ ಕಾರ್ಯಕ್ರಮಗಳಾದ ಸಂಗೀತ, ನಾಟಕ, ಏಕಪಾತ್ರಾಭಿನಯಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತಾಗಿತ್ತು.

ಪಠ್ಯೇತರ ಚಟುವಟಿಕೆಯ ಸಂಘದ ಉದ್ಘಾಟನಾ ಸಮಾರಂಭದ ನೆಪದಲ್ಲಿ ನಮ್ಮ ಕೇಂದ್ರಕ್ಕೆ ಆಗಿನ ವಿದ್ಯಾ ಮಂತ್ರಿಗಳಾಗಿದ್ದ ಎ. ಆರ್. ಬದರಿ ನಾರಾಯಣ, ಪಿಡಬ್ಲೂಡಿ ಮಂತ್ರಿಗಳಾಗಿದ್ದ ಕಾಗೋಡು ತಿಮ್ಮಪ್ಪ, ಉಪಕುಲಪತಿಗಳಾಗಿದ್ದ ಕೆ.ಎಸ್. ಹೆಗ್ಗಡೆಯವರಂತವರನ್ನು ಆಹ್ವಾನಿಸಿ, ಇಲ್ಲಿನ ಅನಾನುಕೂಲತೆಗಳನ್ನು ಅವರಿಗೆ ವಿವರಿಸಿ, ಅದರ ಅಭಿವೃದ್ಧಿಗಾಗಿ ಕ್ರಮ ಜರುಗಿಸುವಂತೆ ಒತ್ತಾಯಿಸುತ್ತಿದ್ದೆವು. ಮತ್ತು ಇದೇ ಸಂಘಟನೆಯನ್ನು ಉಪಯೋಗಿಸಿಕೊಂಡು ನಮ್ಮ ಕೇಂದ್ರಕ್ಕೆ ಹಿರಿಯ ಸಾಹಿತಿಗಳಾಗಿದ್ದ ಚಂಪಾ, ಸುಜನಾ ಮತ್ತು ಆಗಿನ್ನು ಹಾಡುವ ಉತ್ಸಾಹದಲ್ಲಿದ್ದ ಜಾನಪದ ಹಾಡುಗಾರ ಬಾನಂದೂರು ಕೆಂಪಯ್ಯ, ಶಿವಮೊಗ್ಗದ ಜನಪದ ಹಾಡುಗಾರರಾಗಿದ್ದ ಯುವರಾಜ ಹೀಗೆ ಅನೇಕರನ್ನು ಸಮಾರಂಭಗಳಿಗೆ ಆಹ್ವಾನಿಸಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೆವು.

ನಮ್ಮಲ್ಲಿನ ಕೊರತೆಗಳನ್ನು ಅರುಹುತ್ತಾ ಸರ್ಕಾರ ಮತ್ತು ವಿಶ್ವವಿದ್ಯಾಲಯ ನಮ್ಮ ಕೇಂದ್ರದ ಬೆಳವಣಿಗೆಗೆ ಏನೆಲ್ಲ ಪ್ರಯತ್ನಗಳನ್ನು ಮಾಡಬೇಕೆಂಬುದರ ಬಗ್ಗೆ ಚರ್ಚೆ ಕೂಡ ನಡೆಯುತ್ತಿದ್ದವು. ಇದೇ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಂದ ಚಂದ್ರಶೇಖರ ಪಾಟೀಲರ `ಕುಂಟ ಕುಂಟ ಕುರುವತ್ತಿ’, `ಕೊಡೆಗಳು’, ಚಂದ್ರಶೇಖರ ಕಂಬಾರರ ‘ಸಂಗ್ಯಾ-ಬಾಳ್ಯಾ’, ಪೂರ್ಣಚಂದ್ರ ತೇಜಸ್ವಿಯವರ ‘ಯಮಳ ಪ್ರಶ್ನೆ’, ನಾಟಕಗಳನ್ನು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರೆಲ್ಲ ಸೇರಿ ಪ್ರದರ್ಶನ ಮಾಡುತ್ತಿದ್ದೆವು. ನಾಟಕದ ನಿರ್ದೇಶನವನ್ನು ನಾನೇ ಮಾಡುತ್ತಿದ್ದೆ. ಈ ಸಮಾರಂಭಗಳು ನಡೆದಾಗ ವಿಶೇಷವಾಗಿ ವಿದ್ಯಾರ್ಥಿಗಳಲ್ಲದೆ, ಕೇಂದ್ರದ ಅಕ್ಕಪಕ್ಕದ ಗ್ರಾಮಸ್ಥರು ಮತ್ತು ಬಿ.ಆರ್.ಪಿ. ಯಲ್ಲಿ ಇದ್ದ ವಿದ್ಯುತ್ ನಿಗಮದ ಹಿರಿಯ ಅಧಿಕಾರಿಗಳು,ಲೋಕೋಪಯೋಗಿ ಇಲಾಖೆ ನೌಕರರು ಹಾಗೂ ಹತ್ತಿರದಲ್ಲಿದ್ದ ಮೀನುಗಾರಿಕಾ ಇಲಾಖೆಯ ನೌಕರರು ಕೂಡಾ ಬರುತ್ತಿದ್ದರು. ನಮ್ಮ ಪಠ್ಯೇತರ ಚಟುವಟಿಕೆಗಳ ಕಾರಣದಿಂದಾಗಿ ನಮ್ಮ ಕೇಂದ್ರದ ಅಸ್ತಿತ್ವಕ್ಕೆ ಒಂದು ರೀತಿಯ ಮನ್ನಣೆ ದೊರೆತಂತಾಗಿತ್ತು. ಇಂತಹ ಎಲ್ಲಾ ಸಭೆ ಸಮಾರಂಭಗಳಲ್ಲಿ ಹಿರಿಯರಾಗಿದ್ದ ಕನ್ನಡ ವಿಭಾಗದ ಡಾ. ಹೆಚ್. ತಿಪ್ಪೇರುದ್ರ ಸ್ವಾಮಿ ಅವರು ಅಧ್ಯಕ್ಷತೆ ವಹಿಸುತ್ತಿದ್ದರು. ಇತರೆ ಎಲ್ಲಾ ಆಧ್ಯಾಪಕರು ಕೂಡಾ ಏಕಮನಸ್ಸಿನಿಂದ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದರು.

ನಮ್ಮ ಅರ್ಥಶಾಸ್ತ್ರ ವಿಭಾಗದ ಯೋಜನಾ ವೇದಿಕೆಯೂ ಕೂಡ ಕ್ರಿಯಾಶೀಲವಾಗಿತ್ತು. ಸಾಮಾನ್ಯ ಅರ್ಥಶಾಸ್ತçಕ್ಕೂ ಒಳಪಡುವ ರಾಷ್ಟç ಮತ್ತು ರಾಜ್ಯ ಯೋಜನೆಗಳ ರ‍್ಯಾವಲೋಚನೆ, ವಾರ್ಷಿಕ ಬಜೆಟ್ ಮೇಲಿನ ಚರ್ಚೆ ಇವೇ
ಮುಂತಾದ ವಿಷಯಗಳನ್ನು ಚರ್ಚಿಸುತ್ತಿದ್ದೆವು. ಇದಕ್ಕಾಗಿ ಮೈಸೂರಿನಿಂದ ಹಿರಿಯ ಅಧ್ಯಾಪಕರಾಗಿದ್ದ ಡಾ. ಮಾದಯ್ಯ, ಡಾ. ಎಸ್. ನಾಗರಾಜು, ಡಾ. ಎಸ್.ಎಂ. ವೀರರಾಘವಾಚಾರ್ ಅವರುಗಳನ್ನು ಜೊತೆಗೆ ಆಡಳಿತಾಧಿ ಕಾರಿಗಳಾಗಿದ್ದ ತರಿಕೆರೆ ಉಪ ವಿಭಾಗದಲ್ಲಿದ್ದ ಎಸ್.ಎಂ. ಜಾಮಾದಾರ್ ಅವರನ್ನು ಕರೆಸಿ ನಮ್ಮ ವಿದ್ಯಾರ್ಥಿಗಳಿಗೆ ಅವರಿಂದ ಉಪನ್ಯಾಸ ಮತ್ತು ಆಡಳಿತದಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ಮಾಡುತ್ತಿದ್ದೆವು.

ನಮ್ಮ ಕೇಂದ್ರದ ಅಧ್ಯಾಪಕರ ಮತ್ತು ವಿದ್ಯಾರ್ಥಿಗಳನ್ನು ಸಂಘಟಿಸಿ ಸುಮಾರು 10 ದಿನಗಳಿಗೂ ಹೆಚ್ಚು ಕಾಲ ಇಡೀ ಸ್ನಾತಕೋತ್ತರ ಕೇಂದ್ರವನ್ನು ಬಂದ್ ಮಾಡಿ ಪ್ರತಿಭಟಿಸಿದ್ದೆವು. ಈ ಕೇಂದ್ರ ಪ್ರಾರಂಭವಾಗಿ 6-7 ವರ್ಷಗಳಾದರೂ ಖಾಯಂ ಅಧ್ಯಾಪಕರ ಕೊರತೆ ನೀಗಿಸಲು ಸರಿಯಾದ ಲೈಬ್ರರಿ ವ್ಯವಸ್ಥೆ, ಹಾಸ್ಟೆಲ್‌ನಲ್ಲಿನ ಮೂಲಭೂತ ಸೌಲಭ್ಯಗಳ ಕೊರತೆಯನ್ನು ಮುಂದಿಟ್ಟುಕೊಂಡು ಒಂದು ಕರಪತ್ರ ಮುದ್ರಿಸಿ ಧರಣಿ ನಡೆಸಿದ್ದೊಂದು ದೊಡ್ಡ ಇತಿಹಾಸ.

ನೇರವಾಗಿ ಅಧ್ಯಾಪಕರು ಭಾಗವಹಿಸಿಲ್ಲವಾದರೂ ವಿದ್ಯಾರ್ಥಿಗಳು ದಿನನಿತ್ಯದ ಬೆಳವಣಿಗೆಯನ್ನೆಲ್ಲ ಗಮನಿಸುತ್ತಾ ಈ ಧರಣಿಯ ವಿಷಯಗಳು ವಿಶ್ವವಿದ್ಯಾಲಯ ಮತ್ತು ಸರ್ಕಾರಕ್ಕೆ ಮುಟ್ಟುವಂತೆ ಮಾಡಲು ಶಿವಮೊಗ್ಗದಲ್ಲಿದ್ದ ಪತ್ರಕರ್ತರಿಗೂ ಸಂಪರ್ಕಿಸಿ ಎಲ್ಲಾ ಪತ್ರಿಕೆಗಳಲ್ಲಿ ಬರುವಂತೆ ಮಾಡಿದ್ದೆವು. ಅದರ ಪರಿಣಾಮವೋ ಎನ್ನುವಂತೆ, ವಿಶ್ವವಿದ್ಯಾಲಯದಿಂದ ಹಿರಿಯ ಅಧಿಕಾರಿಗಳು ಬಂದು ಅಲ್ಲಿನ ಸಮಸ್ಯೆಗಳ ಬಗ್ಗೆ ತುರ್ತು ಗಮನ ಹರಿಸುವ ಬಗ್ಗೆ ಭರವಸೆ ನೀಡಿದ್ದು, ಅದರ ಭಾಗವಾಗಿ ತಾತ್ಕಾಲಿಕವಾಗಿ ಕೆಲಸ ನಿರ್ವಹಿಸುತ್ತಿದ್ದ ಅಧ್ಯಾಪಕರಲ್ಲಿ ನನ್ನನ್ನು ಒಳಗೊಂಡAತೆ ಅನೇಕರಿಗೆ ಖಾಯಂಗೊಳಿಸುವ ಪ್ರಕ್ರಿಯೆ ಪ್ರಾರಂಭವಾದವು. ಲೈಬ್ರರಿ ಶಾಖೆಗೆ ಪೂರ್ಣ ಪ್ರಮಾಣದ ಲೈಬ್ರರಿಯನ್ ಆಗಿ ಮೈಸೂರಿನಿಂದ ರಾಮಕೃಷ್ಣ ಗೌಡ ಬಂದರು. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಎಲ್ಲಾ ವಿಭಾಗಗಳಿಗೆ ಹೊಸ ಪುಸ್ತಕಗಳನ್ನು, ನಿಯತಕಾಲಿಕಗಳನ್ನು ಕೇಂದ್ರಕ್ಕೆ ತರಿಸುವ ವ್ಯವಸ್ಥೆಯಾಯಿತು.

ಈ ನಡುವೆ ನಾನು ಪಿಹೆಚ್.ಡಿ., ಮಾಡಲು ಹೊಸ ವಿಷಯವೊಂದರ ಹುಡುಕಾಟ ಮತ್ತು ನನಗೆ ಗೈಡ್ ಮಾಡಲು ಈಗಾಗಲೇ ಪ್ರಾಧ್ಯಾಪಕರಾಗಿದ್ದವರನ್ನು ನಿಗದಿಗೊಳಿಸಿಕೊಳ್ಳುವ ತಯಾರಿಯಲ್ಲಿದ್ದೆ. ಗಂಗೋತ್ರಿಯಲ್ಲಿ ಪ್ರೊ. ಮಾದಯ್ಯನವರನ್ನು ಈ ಬಗ್ಗೆ ವಿಚಾರಿಸಿದೆ. ಅವರ ಬಳಿ ಈಗಾಗಲೇ ಸಂಶೋಧನೆ ಮಾಡುವ ಹೆಚ್ಚಿನ ವಿದ್ಯಾರ್ಥಿಗಳಿರುವ ಕಾರಣ ನೀಡಿ, ಸಾಧ್ಯವಾಗುವುದಿಲ್ಲ ಎಂದರು. ಹಿರಿಯ ಪ್ರಾಧ್ಯಾಪಕರಾಗಿದ್ದ ಎಪಿಎಸ್ ಮತ್ತು ಎಸ್.ಎಂ.ವಿ. ಅವರು ನಿವೃತ್ತಿ ಅಂಚಿನಲ್ಲಿದ್ದು ಅವರೂ ಕೂಡ ನನಗೆ ಮಾರ್ಗದರ್ಶನ ಮಾಡುವ ಆಸಕ್ತಿ ತೋರಲಿಲ್ಲ. ಇದೇ ಯೋಚನೆಯಲ್ಲಿ ನಾನು ಬೆಂಗಳೂರು ವಿಕೆಆರ್‌ವಿ. ಇನ್ಸಿಟಿಟ್ಯೂಟ್‌ನಲ್ಲಿ ಅಂದು ಪ್ರಾಧ್ಯಾಪಕರಾಗಿದ್ದ ಡಾ. ಅಬ್ದುಲ್ ಅಜೀಜ್ ಅವರನ್ನು ಭೇಟಿ ಮಾಡಿ ನನ್ನ ಸಂಶೋಧನಾ ಆಸಕ್ತಿಯನ್ನು ವಿವರಿಸಿ ತಾವು ಗೈಡ್ ಆಗಬೇಕೆಂದು ಕೇಳಿದೆ. ಅದಕ್ಕವರು ಇಲ್ಲ, ನೀವು ನಿಮ್ಮ ವಿಶ್ವವಿದ್ಯಾಲಯದಲ್ಲೇ ಇರುವ ಪ್ರಾಧ್ಯಾಪಕರಲ್ಲಿ ಸಂಶೋಧನೆ ಮಾಡುವುದು ಸೂಕ್ತ.

ಮುಂದೆ ಅನೇಕ ಸಂದರ್ಭಗಳಲ್ಲಿ ನಿಮ್ಮ ವಿಭಾಗದ ಮುಖ್ಯಸ್ಥರ ಶಿಫಾರಸ್ಸುಗಳು ನಿಮಗೆ ಬೇಕಾಗುತ್ತದೆ. ನೀವು ಬೇರೊಂದು ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಪ್ರಾರಂಭಿಸಿದರೆ ಮುಂದೆ ನಿಮಗೆ ವಿಭಾಗ ಮಟ್ಟದಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸಿ ನಿಮಗೆ ಸಂಶೋಧನೆಯಲ್ಲಿ ಆಸಕ್ತಿ ಬರದಂತಹ ಸನ್ನಿವೇಶ ಬರಬಹುದೆಂದು ಅವರು ತಿಳಿ ಹೇಳಿದರು. ಸ್ನಾತಕೋತ್ತರ ವಿಭಾಗದಲ್ಲಿ ಹೆಚ್ಚು ಅರ್ಹತೆಗಳನ್ನು ಪಡೆಯದೆ ಸ್ನಾತಕೋತ್ತರ ಕೇಂದ್ರದಲ್ಲಿ ಮುಂದುವರಿಯುವುದು ನ್ಯಾಯ ಸಮ್ಮತವಲ್ಲವೆಂದು ನನ್ನೊಳಗಿನ ಒಳ ಮನಸ್ಸು ಕೂಡ ಜಾಗೃತವಾಗಿ ಹೇಳುತ್ತಲೇ ಇತ್ತು. ಅದರ ಒತ್ತಾಸೆಯಂತೆ ಮುಂದೆ ನಾನು ನನ್ನ ಹುದ್ದೆಯನ್ನು ಬಿಟ್ಟು ಬೇರೆ ಕಡೆಗೆ ಹೋಗುವ ಬಗ್ಗೆ ಯೋಚನೆ ಪ್ರಾರಂಭವಾಗಿತ್ತು.

ಮುಂದುವರಿಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending