Connect with us

ಅಂತರಂಗ

ಒಡಲುಗೊಂಡವ ಹುಸಿಯ: ಜಿ. ರಾಜಶೇಖರ

Published

on

  • ಎಚ್ ಪಟ್ಟಾಭಿರಾಮ ಸೋಮಯಾಜಿ, ಮಂಗಳೂರು

Beneath those rugged elms, that yew tree’s shade,
Where heaves the turf in many a moldering heap,
Each in his narrow cell forever laid,
The rude forefathers of the hamlet sleep.

Oft did the harvest to their sickle yield,
Their furrow oft the stubborn glebe has broke;
How jocund did they drive their team afield!
How bowed the woods beneath their sturdy stroke!

Let not Ambition mock their useful toil,
Their homely joys, and destiny obscure;
Nor Grandeur hear with a disdainful smile
The short and simple annals of the poor.

The boast of heraldry, the pomp of power,
And all that beauty, all that wealth e’er gave,
Awaits alike the inevitable hour.
The paths of glory lead but to the grave….

Full many a gem of purest ray serene,
The dark unfathomed caves of ocean bear:
Full many a flower is born to blush unseen,
And waste its sweetness on the desert air.

Yet even these bones from insult to protect
Some frail memorial erected nigh,
With uncouth rhymes and shapeless sculpture decked,
Implores the passing tribute of a sigh.

-(Thomas Gray: “Elegy Written in a Country Churchyard”; 1754/1751)

” ಬೋಳಿಮಗನೆ, ಬಹುವಚನ ಅಂತೆ ಬಹುವಚನ. ಏಕವಚನ ಮಾಡ್ತೇವೆ ನೋಡ್ತಾ ಇರು, ಸೂಳೆಮಗನೆ. ಇದು ಮಡಿಕೇರಿ, ತಿಳ್ಕೊ” ಎಂದು ವಿಕಾರವಾಗಿ ಕಿರುಚುತ್ತಾ ಸುಮಾರು ಮೂವತ್ತರಿಂದ ನಲವತ್ತರಷ್ಟು ಜನ ಸ್ಟೇಜಿಗೆ ನುಗ್ಗಿ ಕೈಯಲ್ಲಿದ್ದ ಟಿಪ್ಪಣಿ ಕಾಗದಗಳ ಕಟ್ಟನ್ನು ಬಲಾತ್ಕಾರದಿಂದ ಕಸಿದು ಹರಿದು ಬಿಸಾಡಿ, ಮೈಕನ್ನು ಕಿತ್ತು, ಕಾಲರನ್ನು ಹಿಡಿದು ಎಳೆದಾಡಿ ನನ್ನ ಮೇಲೆ ಏಕಾಏಕಿ ನುಗ್ಗಿದರು. ವಿವರವಾದ ಸುದೀರ್ಘ ಟಿಪ್ಪಣಿಗಳ ಆ ಕಾಗದದ ಕಟ್ಟಿನಲ್ಲಿ ಆ ಕಾಲದ ನನ್ನ ಯೋಚನೆಗಳನ್ನು ಭಟ್ಟಿಯಿಳಿಸುವ ಪ್ರಯತ್ನವಿತ್ತು; ಮಹಾತ್ಮಾ ಗಾಂಧಿ, ಮಾರ್ಟಿನ್ ಹೈಡೆಗರ್, ಸಾದತ್ ಹಸನ್ ಮಾಂಟೋ, ರಾಮಕೃಷ್ಣ ಪರಮಹಂಸ ಮುಂತಾದವರಿಂದ ನಾನು ತಯಾರಿಸಿಕೊಂಡ ಟಿಪ್ಪಣಿಗಳೂ ತರ್ಜುಮೆಗಳೂ ಅದರಲ್ಲಿ ಸೇರಿದ್ದವು; ಅದನ್ನು ಕಳೆದುಕೊಂಡ ನೋವು ಈಗಲೂ ನನ್ನನ್ನು ಮಾಯದ ಹಳೆಯ ಗಾಯದಂತೆ ಬಾಧಿಸುವುದು.

ಇದು ಈಗ ಇಪ್ಪತ್ತು ವರ್ಷಗಳ ಹಿಂದಿನ ಮಾತು. ಸ್ಥಳ, ಮಡಿಕೇರಿಯ ಕೋಟೆಯ (ಕೋಟೆ ಎಂದರೆ ನಿಜಕ್ಕೂ ಕೋಟೆಯೇ) ಆವರಣದೊಳಗಿರುವ ಜಿಲ್ಲಾಧಿಕಾರಿ ಕಛೇರಿಯ ಸೆನೆಟ್ ಸಭಾಂಗಣ. ಅಂದು ಭಾನುವಾರ. “ಬಹುವಚನ ಕೊಡಗು” ಎಂಬ ಹೆಸರಿನ ನಮ್ಮ ಪುಟ್ಟ ಬಳಗದಿಂದ ಆಯೋಜಿತವಾಗಿದ್ದ ಮಹತ್ವಾಕಾಂಕ್ಷೆಯ ಇಡೀ ಒಂದು ದಿನದ ನಿಬಿಡ ವಿಚಾರ ಸಂಕಿರಣ. “ಕೋಮುವಾದದ ಕರಾಳ ಮುಖಗಳು” ಎಂಬ ಶೀರ್ಷಿಕೆಯಲ್ಲಿ ನಡೆಯಬೇಕಾಗಿದ್ದ ಈ ಸಂಕಿರಣದ ಶೀರ್ಷಿಕೆಯ ಕುರಿತು ಆರಂಭದಲ್ಲೇ, ನಮ್ಮ ಪುಟ್ಟ ಬಳಗದ ಒಳಗೆಯೇ, ಒಬ್ಬರಿಂದ ಎದ್ದ ಅಪಸ್ವರದ ಕಾರಣದಿಂದಾಗಿ “ಕೋಮುವಾದದ ಹಲವು ಅವತಾರಗಳು” ಎಂದು ಮರುನಾಮಕರಣಗೊಂಡಿತ್ತು; ಆ ಕುರಿತು ನನಗೆ ಅಷ್ಟೇನೂ ಸಮಾಧಾನವಿರಲಿಲ್ಲ ಎಂಬುದು ಬೇರೆ ಮಾತು. ಜಿ ರಾಜಶೇಖರ, ರಹಮತ್ ತರೀಕೆರೆ ಮುಂತಾಗಿ ರಾಜ್ಯದ ಮುಂಚೂಣಿ ಚಿಂತಕ-ಹೋರಾಟಗಾರರು ನಮ್ಮ ಸಂಪನ್ಮೂಲ ವ್ಯಕ್ತಿಗಳು. ಹಾಗಾಗಿ, ಸಹಜವಾಗಿಯೇ ಈ ವಿಚಾರ ಸಂಕಿರಣಕ್ಕೆ ಬಹಳ ದೊಡ್ಡ ಸಂಖ್ಯೆಯ ಜನರು ಹಾಜರಾಗುವವರಿದ್ದರು. ಸಂಪನ್ಮೂಲ ವ್ಯಕ್ತಿಗಳು ಬಂದು ಅದಾಗಲೇ ಸಭಾಂಗಣದ ಮುಂದಿನ ಸಾಲಿನಲ್ಲಿ ಕುಳಿತಿದ್ದರು. ಮಡಿಕೇರಿ ಮತ್ತು ಸುತ್ತಮುತ್ತಲಿನ ಪತ್ರಕರ್ತ ಬಳಗ ಕೂಡಾ ಅದಾಗಲೇ ಹಾಜರಿತ್ತು.

ಸಭಿಕರು ಕೇವಲ ಬೆರಳೆಣಿಕೆಯಷ್ಟಿದ್ದರು; ಅವರಿನ್ನೂ ಬರುವುದರಲ್ಲಿದ್ದರು (ದೊಡ್ಡ ಸಂಖ್ಯೆಯಲ್ಲಿ ಆ ಮೇಲೆ ಬಂದರು ಕೂಡಾ). ಆದರೆ ಸಂಕಿರಣದ ಸುದೀರ್ಘ ಚರ್ಚೆಯು ಒತ್ತಡಕ್ಕೊಳಗಾಗಬಾರದು, ಹಾಗಾಗಿ ಸಮಯ ವ್ಯರ್ಥಮಾಡಬಾರದು ಎಂದು, “ಬಹುವಚನ ಕೊಡಗು” ಕುರಿತು, ದಿನದ ಕಾರ್ಯಕ್ರಮದ ಸ್ವರೂಪದ ಕುರಿತು, ಹಾಗೂ ಮುಖ್ಯವಾಗಿ ವಿಚಾರ ಸಂಕಿರಣದ ಆಶಯದ ಕುರಿತು– ಹತ್ತು ಗಂಟೆಗೆ ಸರಿಯಾಗಿ ನಾನು ವೇದಿಕೆಯಿಂದ ಮಾತನಾಡಲು ಪ್ರಾರಂಭ ಮಾಡಿದೆ. ಆಗ ಇದ್ದಕಿದ್ದಂತೆ ಸಾಲು ಸಾಲಾಗಿ ಆ ಮೂವತ್ತು ನಲವತ್ತರಷ್ಟು ಧಾಂಡಿಗರು ಸಭಾಂಗಣದೊಳಕ್ಕೆ ಲಗುಬಗೆಯಿಂದ ಬಂದರು. ಅವರ ವರ್ತನೆ ಹಾವಭಾವಗಳಾಗಲೀ ವೇಷಭೂಷಣಗಳಾಗಲೀ ಉತ್ತೇಜನಕಾರಿಯಾಗಿ ಕಂಡುಬರದಿದ್ದರೂ ಬಂದವರು ಕುಳಿತುಕೊಳ್ಳಲಿ ಎಂದು ಮಾತುಗಳನ್ನು ಅರ್ಧಕ್ಕೇ ನಿಲ್ಲಿಸಿ ನಾನು ಕಾದೆ. ಅವರು ಕೆಂಡದ ಮೇಲೆ ಕೂತವರಂತೆ ಕುರ್ಚಿಗಳಲ್ಲಿ ಕೂತರು. “ಬಹುವಚನ ಕೊಡಗು…” ಎಂದು ನಾನು ಮಾತುಗಳನ್ನು ಪುನರಾರಂಭಿಸುತ್ತಿದ್ದಂತೆ, ಅಷ್ಟೂ ಜನ ಏಕಾಏಕಿಯಾಗಿ ರಭಸದಿಂದ ನನ್ನ ಮೇಲೆ ನುಗ್ಗಿ ಬಂದರು.

ಆ ಕಾಲಕ್ಕೆ ಆ ರೀತಿ ಸಭೆಗಳಿಗೆ ಅನಾಗರಿಕವಾಗಿ ನುಗ್ಗಿ ನಿರ್ಲಜ್ಜವಾಗಿ ದಾಳಿ ಮಾಡುವುದು ಈಗಿನಷ್ಟು ವ್ಯಾಪಕವಾಗಲೀ, ಸಹಜವಾಗಲೀ, ಸುಲಭವಾಗಲೀ ಆಗಿರಲಿಲ್ಲ. ನಮ್ಮಂತೆ ಆ ಪುಂಡರಿಗೂ ಅದು ಹೊಸತೇ ಅನುಭವ. ನಮ್ಮ ಬಹುವಚನದ ಪುಟ್ಟ ಬಳಗದವರಿಗಂತೂ ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಈ ಅನಾಹುತ ಶುರುವಾಗಿತ್ತು. ಇದ್ದಬದ್ದ ವಿವೇಕವನ್ನು ಒಗ್ಗೂಡಿಸಿಕೊಂಡು, ಸಂಪನ್ಮೂಲ ವ್ಯಕ್ತಿಗಳ ಸುರಕ್ಷತೆಯೇ ತಮ್ಮ ತುರ್ತು ಆದ್ಯ ಕರ್ತವ್ಯವೆಂದು ಬಗೆದು ಸಂಪನ್ಮೂಲ ವ್ಯಕ್ತಿಗಳನ್ನು ಕ್ಷಿಪ್ರವಾಗಿ ಕರೆದುಕೊಂಡು ಅವರು ಕೋಟೆಯ ಆಚೆಗೆ ಹೊರಟುಹೋದರು. ಪತ್ರಕರ್ತರಿಗೆ ಈ ದಾಂಧಲೆಕೋರರ ಗುರುತು ಹತ್ತಿತು; ಸಂಭಾವ್ಯ ಘಟನಾವಳಿಗಳನ್ನು ಅವರು ಕ್ಷಣಮಾತ್ರದಲ್ಲಿ ಊಹಿಸಿ, ಅದನ್ನು ವರದಿ ಮಾಡಲೆಂದು ಅವರೂ ಎದ್ದು ಹೊರಟು ಹೋದರು. ಆಗಲೇ ಹೇಳಿದಂತೆ, ಸಭಿಕರು ಇನ್ನೂ ಅಷ್ಟಾಗಿ ಬಂದಿರಲಿಲ್ಲ, ಬಂದಿದ್ದವರೂ ಕಂಗಾಲಾಗಿ ದಿಕ್ಕಾಪಾಲಾಗಿ ಚದುರಿ ಹೋದರು; ಕೋಟೆಯ ಹೊರಬಾಗಿಲ ಬಳಿ ನಿಂತುಕೊಂಡು ನಮ್ಮ ಬಳಗದವರೊಬ್ಬರು ಸಂಕಿರಣಕ್ಕಾಗಿ ಒಳಗೆ ಬರುತ್ತಿದ್ದ ಜನರನ್ನು ತಡೆದು, “ಒಳಗೆ ದಾಂಧಲೆ ನಡೆಯುತ್ತಿದೆ, ಹೋಗಬೇಡಿ, ಸುರಕ್ಷಿತವಲ್ಲ” ಎಂದು ಹಿಂದೆ ಕಳುಹಿಸುತ್ತಿದ್ದರು. ಸರಿ ಸುಮಾರು ಮೂವತ್ತರಿಂದ ನಲವತ್ತು ನಿಮಿಷ ಒಳಾಂಗಣ-ಸಭಾಂಗಣ ರಣಾಂಗಣವಾಗಿ ಮಾರ್ಪಟ್ಟಿತ್ತು. ನಾನು ಒಬ್ಬಂಟಿ, ಆದರೆ ವಿಚಲಿತನಾಗಿರಲಿಲ್ಲ.

ಮಡಿಕೇರಿಯಲ್ಲಿ ಆಗ ‘ಪ್ರಜಾವಾಣಿ’ ಪತ್ರಿಕೆಯ ಮುಖ್ಯ ವರದಿಗಾರರಾಗಿದ್ದ, ಆರಡಿಗಿಂತ ಎತ್ತರದ ಆಜಾನುಬಾಹು ರಾಜೇಂದ್ರಪ್ರಸಾದ್ ರವರು, ಯಾರೂ ನನ್ನ ಮೈ ಮುಟ್ಟದಂತೆ ಧೀರೋದಾತ್ತವಾಗಿ ನನ್ನ ರಕ್ಷಣೆಗೆ ನಿಂತರು; ಅವರ ಪತ್ರಿಕಾ ವೃತ್ತಿ ವರ್ಚಸ್ವಿಯಾದುದಾಗಿತ್ತು; ಅಲ್ಲದೇ ದಿನಂಪ್ರತಿ ಎದುರು ಸಿಗುವ ಇಂಥ ಪ್ರಮುಖ ಪತ್ರಕರ್ತರೊಬ್ಬರನ್ನು ಕಡೆಗಣಿಸಿ ನನ್ನ ಮೇಲೆ ದೈಹಿಕ ಹಲ್ಲೆ ಮಾಡುವಷ್ಟು ಭಂಡ ಧೈರ್ಯವಾಗಲೀ ತರಬೇತಿಯಾಗಲೀ ಅಯಾಚಿತ ಸಾರ್ವಜನಿಕ ಬೆಂಬಲವಾಗಲೀ ಆ ಪುಂಡರಿಗೆ ಇರಲಿಲ್ಲ. ನಮ್ಮ ಮಾಧ್ಯಮಲೋಕದಲ್ಲಿ ರಾಜೇಂದ್ರಪ್ರಸಾದರಂಥ ವಿವೇಕಿಗಳಿದ್ದರೆ ಹೇಗೆ ಸಾಮಾಜಿಕ ದುಸ್ಥಿತಿ ಮತ್ತು ಅರಾಜಕತೆಗಳನ್ನು ಸ್ವಲ್ಪಕಾಲವಾದರೂ ತಹಬಂದಿಗೆ ತರಬಹುದು ಎಂಬುದು ಒಂದು ವಿರಳ ರೂಪಕದಂತೆ, ಈ ಘಟನೆಯಿಂದಾಗಿ, ನನ್ನ ಮನಸ್ಸಿನಲ್ಲಿ ಇವತ್ತಿಗೂ ನಾಟಿದೆ.ಇಷ್ಟೂ ಹೊತ್ತು, ಈ ದಾಂಧಲೆಕೋರ ಹುಳಪಾರ್ಟಿಗಳು ನನ್ನನ್ನು ಜಿ ರಾಜಶೇಖರ ಎಂದೇ ತಿಳಿದಿದ್ದರು.

ದಾಂಧಲೆ ಮಾಡುತ್ತಿರುವವರು ಯಾರು, ದಾಂಧಲೆಗೆ ಒಳಗಾಗುತ್ತಿರುವವರು ಯಾರು, ಯಾಕೆ? ಇದನ್ನು ತಡೆಯಬಲ್ಲವರು ಯಾರು, ಹೇಗೆ? ಎಂಬ ಗೆರೆಗಳೆಲ್ಲ ತೆಳುವಾಗುತ್ತ ಅಳಿಸಿಹೋಗಿ ಕಲಸುಮೇಲೋಗರವಾಗಿರುವ ದುರಂತಕ್ಕೆ ಈಗಂತೂ ನಾವೆಲ್ಲರೂ ಅಸಹಾಯಕ ಸಾಕ್ಷಿಗಳು. ಅದೇನಿದ್ದರೂ, ಕರಾವಳಿ ಕರ್ನಾಟಕದಲ್ಲಿ ಆಗಷ್ಟೇ ಉಲ್ಬಣಕ್ಕೆ ಬರುತ್ತಿದ್ದ ಹಿಂದೂತ್ವವಾದೀ ಹಿಂಸಾಚಾರವನ್ನು ಕ್ಲಿನಿಕಲ್ ಅಚ್ಚುಕಟ್ಟುತನದಿಂದ, ಇಲ್ಲಿನ ಕ್ರೂರ ಸತ್ಯವನ್ನು ಮುಕ್ಕಾಗದಂತೆ ವರದಿ ಮಾಡಿ ಆಗ ತಿಳಿಸುತ್ತಿದ್ದ ಏಕಮಾತ್ರ ವ್ಯಕ್ತಿ ಜಿ ರಾಜಶೇಖರ. ಕೋರೈಸುವ ಸತ್ಯ ಮತ್ತು ತರ್ಕಶುದ್ಧತೆಗಳ ಕಾರಣದಿಂದಾಗಿಯೇ ಅವರ ವರದಿಗಳು, ಹುಟ್ಟಾ ಅಜ್ಞಾನಿಗಳಾದ ಹಿಂದೂತ್ವವಾದಿಗಳಿಗೂ ಅಷ್ಟರಮಟ್ಟಿಗೆ ಅರ್ಥವಾಗುವಂತಿತ್ತು. ಆ ಕಾಲದ ವಿಷಯ ಸದ್ಯ ಒತ್ತಟ್ಟಿಗಿರಲಿ, ಕರಾವಳಿ ಕರ್ನಾಟಕದಲ್ಲಿ ಈಗ ಮೂರು ದಶಕಗಳಿಂದ ಹಗಲೂರಾತ್ರಿ ನಡೆಯುತ್ತಿರುವ ಹಿಂದೂತ್ವವಾದೀ ಬರ್ಬರ ಹಿಂಸಾಚಾರದ ಕುರಿತು ನಾನೋ ನೀವೋ ಆಡುವ ಮಾತುಗಳನ್ನು ಕರ್ನಾಟಕದ ಉಳಿದ ಕಡೆಯ ಜನರು, “ಇವರದ್ದೊಂದು ಉತ್ಪ್ರೇಕ್ಷಿತ ಕಟ್ಟುಕತೆ; ಕರ್ನಾಟಕವು ಲಾಗಾಯ್ತಿನಿಂದಲೂ ಸರ್ವಜನಾಂಗದ ಶಾಂತಿಯ ತೋಟ” ಎಂಬ ದೃಢ ನಂಬಿಕೆಯಲ್ಲೇ ಇತ್ತೀಚಿನವರೆಗೂ ವ್ಯವಹರಿಸುತ್ತ ಬಂದದ್ದಿದೆ. ಆ ಉದಾಸಿನಕ್ಕೆ ಮದ್ದಿಲ್ಲ. ಇದನ್ನು ನೆನೆದರೆ ಜಿ ರಾಜಶೇಖರ ಏಕಾಂಗಿಯಾಗಿ ನಡೆಸುತ್ತ ಬಂದ ಹೋರಾಟ ಇಮ್ಮಖವಾದುದು ಎಂಬುದೂ ತಿಳಿದೀತು: ಎದುರಾಳಿಗಳೂ, ಸಹಚರರೂ– ಇಬ್ಬಣಗಳೂ– ಅವರಿಗೆ ಎಡೆಬಿಡದ ಗಮನಕೇಂದ್ರಗಳು.

1998ರಲ್ಲಿ ಮಡಿಕೇರಿಯಲ್ಲಿ ನಾನು ಕೆಲಸಕ್ಕೆ ಸೇರಿದ ಹೊಸದರಲ್ಲಿ ಸುರತ್ಕಲ್ ನಲ್ಲಿ ನಡೆದ ಹಿಂದೂತ್ವವಾದೀ ಭೀಕರ ಹಿಂಸಾಚಾರದಿಂದಾಗಿ ನನಗೆ ಜಿ ರಾಜಶೇಖರರ ನಿಕಟ ಸಂಪರ್ಕ ಬೇಕೆನ್ನಿಸಿತು, ಉಂಟಾಯಿತು. ಆ ಕಾಲದಲ್ಲಿ ಅತ್ಯಂತ ಪ್ರಭಾವಶಾಲಿ ರಾಷ್ಟ್ರೀಯ ನಾಯಕಿಯಾಗಿದ್ದ ಶ್ರೀಮತಿ ಸೋನಿಯಾ ಗಾಂಧಿಯವರೇ ಸ್ವತಃ ಸುರತ್ಕಲ್ ಗೆ ಭೇಟಿಕೊಡಬೇಕಾಗಿ ಬರುವಷ್ಟು ಆ ಹಿಂಸಾಚಾರ ಢಾಳಾಗಿತ್ತು, ಕ್ರೂರವಾಗಿತ್ತು, ದೇಶದ ಗಮನ ಸೆಳೆದಿತ್ತು. ಗೊತ್ತಿರುವವರಿಗೆ ಗೊತ್ತಿರುವಂತೆ, ಈ ಹಿಂದೂತ್ವವಾದೀ ಭೀಕರ ಹಿಂಸಾಚಾರವನ್ನು “ಸುರತ್ಕಲ್ ಗಲಭೆ” ಎಂಬ ರಂಗಿನ ರಂಗೋಲಿಯ ಕೆಳಗೆ ಅಡಗಿಸುವ ಹೊಸ ಭಾಷೆ, ವ್ಯಾಪಕ ವ್ಯಾಕರಣ ಮತ್ತು ಮೀಮಾಂಸೆ ಹುರಿಗಟ್ಟುತ್ತಿದ್ದ ಕಾಲ ಅದು. ಇಲ್ಲಿ ನಡೆದಿರುವುದು ಸಾಂದರ್ಭಿಕ ಕೋಮು ಗಲಭೆಯಲ್ಲ, ಇವತ್ತು ಕಂಡು ನಾಳೆ ಮರೆಯಾಗುವ ಕ್ಷಣಿಕ ಅಪಭ್ರಂಶವಲ್ಲ, ಎರಡೂ ಕಡೆಯವರು ಸೇರಿ ನಡೆಸಿದ ಜೋಡಾಟವೋ ಜುಗಲ್ಬಂದಿಯೋ ಅಲ್ಲ; ಬದಲಾಗಿ, ವ್ಯವಸ್ಥಿತವಾದ, ವ್ಯಾಪಕವಾದ ಹಿಂದೂತ್ವವಾದೀ ದುಷ್ಟಕೂಟದ ಪ್ರಯೋಗವಾಗಿರುವ ಕ್ರೌರ್ಯ ಮತ್ತು ವಿಷ ಎಂದು ಸಾಧಾರವಾಗಿ, ನಿಖರವಾಗಿ, ವಿವರವಾಗಿ ದಾಖಲಿಸಿದವರು ಜಿ ರಾಜಶೇಖರ. ಹಾವನ್ನು ಹಗ್ಗ ಎಂದು ಅವರು ಎಂದೂ ಹೇಳಲಿಲ್ಲ: He had called the spade, the spade. ಎರಡಕ್ಕೆ ಎರಡು ಕೂಡಿಸಿದರೆ ನಾಲ್ಕು, ಎಂಬ ಸರಳಸತ್ಯವನ್ನು ಹೇಳುವುದು ಕೂಡಾ ಒಂದು ದಿಟ್ಟತನವೂ ಹೌದು, ಕಲೆಯೂ ಹೌದು.

ನಾನೊಬ್ಬ ಸಾಹಿತ್ಯದ ಅಧ್ಯಾಪಕ ಹಾಗೂ ವಿದ್ಯಾರ್ಥಿ. ವಿದ್ಯಾರ್ಥಿಯಾಗಿರುವಾಗಲೇ ನನ್ನ ಮೇಲೆ ಅತ್ಯಂತ ಪ್ರಭಾವ ಬೀರಿದ್ದ, ಈಗಲೂ ಸ್ಫೂರ್ತಿದಾಯಕವಾಗಿ ಉಳಿದುಬಂದಿರುವ ಬರಹಗಳಲ್ಲಿ ಬಹುಮುಖ್ಯವಾದ ಒಂದು ಕೃತಿ ಆಲ್ಬರ್ಟ್ ಕಮೂ ಬರೆದ “ದಿ ಔಟ್ ಸೈಡರ್” (1942). ಭಾಷೆ ಎಂಬುದು ಬರಿಯ ಪದವೋ ಪದಾರ್ಥವೋ ಅಲ್ಲ, ಎದುರು ಹರಡಿರುವ ವಸ್ತುಗಳಿಗೆ ಅಚ್ಚುಕಟ್ಟಾಗಿ ಮಾಡಿರುವ ನಾಮಕರಣವೂ ಅಲ್ಲ, ಅದು ಗರಗಸದಂತೆ ಹೋಗುತ್ತ ಕುಯ್ವುದು ಬರುತ್ತ ಕುಯ್ವುದು; ಭಾಷೆ ಎಂಬುದು, ಪ್ರಭುತ್ವವು ಹಲವು ಹೊಂಚುಗಳಲ್ಲಿ ಸ್ಥಿತಗೊಂಡಿರುವ, ಪ್ರಕಟಗೊಳ್ಳುವ, ಸ್ಥಿರೀಕರಣಗೊಳ್ಳುವ, ಬಗೆಬಗೆಯಾಗಿ ಪುನರಾವರ್ತನೆಗೊಳ್ಳುವ, ಏನನ್ನು ಬೇಕಾದರೂ ಲೋಕಜ್ಞಾನವೆಂಬಂತೆ– ಉಸಿರಾಡುವ ಗಾಳಿ, ನೋಟ ಒದಗಿಸುವ ಬೆಳಕಿನಂತೆ– ಸಹಜವಾದದ್ದು ಎಂದು ಯಶಸ್ವಿಯಾಗಿ ನಂಬಿಸಬಲ್ಲ ವ್ಯಾಪಕವಾದ ಜಾಲ. ಸ್ಥೂಲವಾಗಿ ಹೇಳುವುದಾದರೆ, ಇದು ಆ ಕೃತಿಯಲ್ಲಿ ಕಾಣುವ ಹೊಳಹು. ಇದು, ಯೂರೊಪ್ ಕಂಡ ಮಹಾಯುದ್ಧಗಳು ಹಾಗೂ ಫ್ಯಾಶಿಸ್ಮ್ ನ ವಿಕರಾಳ ಕ್ರೌರ್ಯಗಳ ಮೂಸೆಯಲ್ಲಿ ತಯಾರಾದ ಹೊಸ ತಿಳುವಳಿಕೆಯಾಗಿತ್ತು. ಕಮೂ ತನ್ನ ಈ ಕಾದಂಬರಿಯಲ್ಲಿ ನಮ್ಮ ದಿನನಿತ್ಯದ, ಸರ್ವಸಾಮಾನ್ಯವೆಂಬಂತೆ ಕಾಣುವ, ಭಾಷೆಯನ್ನು ಹಾಗೂ ವಿದ್ಯಮಾನಗಳನ್ನು ಸಂಪೂರ್ಣ ಬೆತ್ತಲೆಗೊಳಿಸಿ ನಿರ್ಭಾವುಕವಾಗಿ ಅದರ ಹುನ್ನಾರಗಳನ್ನು ಜಗಜ್ಜಾಹೀರು ಮಾಡಿದವನು.

ಮಡಿಕೇರಿಯಲ್ಲಿ ಕೆಲಸಕ್ಕೆ ಸೇರಿದ್ದ ಹೊಸತರಲ್ಲಿ, ಸುರತ್ಕಲ್ ನ ಹಿಂದೂತ್ವವಾದೀ ಹಿಂಸಾಚಾರದ ಕುರಿತು ಸುದೀರ್ಘವಾದ, ಸಣ್ಣಪುಟ್ಟ ವಿವರಗಳನ್ನೂ ಬಿಡದಂತೆ ಅಚ್ಚುಕಟ್ಟಾಗಿ ಒಳಗೊಂಡ ವರದಿಯನ್ನು ನಾನು ‘ಲಂಕೇಶ್ ಪತ್ರಿಕೆ’ಯಲ್ಲಿ ಓದಿದೆ. ಹಲವು ಕಂತುಗಳಲ್ಲಿ ಪ್ರಕಟವಾದ ಆ ವರದಿ ಈಗಲೂ ನನಗೆ ಕಣ್ಣಿಗೆ ಕಟ್ಟಿದಂತಿದೆ. ಅದರಲ್ಲಿ ಲೇಖಕನ ಸ್ವಂತ ಮಾತುಗಳಾಗಲೀ, ಅಭಿಪ್ರಾಯಗಳಾಗಲೀ, ವಾದಗಳಾಗಲೀ, ಸಮರ್ಥನೆ ಖಂಡನೆ ಮಂಡನೆಗಳಾಗಲೀ ಇರಲಿಲ್ಲ. ಬಲಿಪಶುಗಳಾದ, ಬಲಿ ತೆಗೆದುಕೊಂಡ, ನಮಗ್ಯಾಕೆ ಎಂದು ಕೈಚೆಲ್ಲಿ ಸಾಕ್ಷಿ ನಿಂತ ನಿರ್ಲಿಪ್ತ ವ್ಯಕ್ತಿಗಳ ಹೆಸರು, ವಯಸ್ಸು, ವರಮಾನ, ಉದ್ಯೋಗ, ಮನೆ, ಊರು, ನೆರೆಹೊರೆ, ದೈನಿಕ ಜೀವನ, ಈಗ ಅವರ ಕಣ್ಣೆದುರು ನಡೆದ ಘಟನೆಗಳು ಮುಂತಾಗಿ ಕರಾರುವಾಕ್ಕಾದ ಕ್ಲಿನಿಕಲ್ ವಿವರಗಳಷ್ಟೇ ಇದ್ದವು. ಲೇಖಕ ಸಂಪೂರ್ಣ ಮರೆಗೆ ಸಂದು, ಪಾತ್ರಗಳೇ ಮೈ ತಳೆದು ನಿಂತಿದ್ದವು. ಆ ಪಾತ್ರಗಳು ತಮಗೆ ಕಂಡಷ್ಟನ್ನೇ ಕಂಡಂತೆಯೇ ಭಯ ದಿಗಿಲು ಭರವಸೆಗಳ ಗೋಜಲಿನಲ್ಲಿ ಹೇಳಿದ್ದವು. ಕಮೂ ಕಾದಂಬರಿಯಲ್ಲಿ ನಾನು ಅಚ್ಚರಿಯಲ್ಲಿ ಏನನ್ನು ಕತೆಯಾಗಿ ಕಂಡಿದ್ದೆನೋ ಅದು ಇಲ್ಲಿ ನಮ್ಮದೇ ಕಾಲಬುಡದಲ್ಲಿ ಜೀವನವಾಗಿ ಮರುಕಳಿಸಿದ್ದನ್ನು ಕಂಡು ನಾನು ನಡುಗಿ ಹೋದೆ. ಈ ವರದಿ ಬರೆದವರು ಜಿ ರಾಜಶೇಖರ.

ತಾನು ಸಾಯುವ ಕಾಲಕ್ಕೆ ಬರೆದ ಕೊನೆಯ ಸಂಪಾದಕೀಯದಲ್ಲಿ ಲಂಕೇಶರು ಜಿ ರಾಜಶೇಖರರ ಕುರಿತು ಅಭಿಮಾನ ತೋರಿದ್ದು ಸುಖಾಸುಮ್ಮನೆ ಅಲ್ಲ. ಆ ಹೊತ್ತಲ್ಲಿ ಕೆ ಎನ್ ಫಣಿಕ್ಕರ್ ಸಂಪಾದಕರಾಗಿ ಪ್ರಕಟಿಸಿದ “ಕಾಮನ್ ಮ್ಯಾನ್ಸ್ ಗೈಡ್ ಟು ಕಮ್ಯೂನಲಿಸ್ಮ್” ಎಂಬ ಹೊಸ ಪುಸ್ತಕವನ್ನೂ ನಾನು ಓದಿದ್ದೆ; ಅದು ಬಹಳ ಪ್ರಭಾವಶಾಲಿಯಾದ ಪುಸ್ತಕ. ಈ ಕಾಕತಾಳೀಯಗಳು ಸೇರಿದ್ದರಿಂದಾಗಿ, “ಬಹುವಚನ ಕೊಡಗು” ಎಂಬ ಬಳಗ ಮತ್ತು ಅದರಿಂದ ಹಲವು ಕಾರ್ಯಕ್ರಮಗಳು ಘಟಿಸಿದವು. ಜಿ ರಾಜಶೇಖರ, ಹಾಗೂ ಅವರನ್ನು ಬಗ್ಗುಬಡಿಯುವ ಉದ್ದೇಶದ ಪುಂಡ ಪಟಾಲಂ ಮಡಿಕೇರಿಗೆ ಅವರನ್ನು ಹಿಂಬಾಲಿಸಿ ಬಂದದ್ದು ಹೀಗೆ.

2003ರಲ್ಲಿ ನಾನು ತಿರುಗಿ ಮಂಗಳೂರಿಗೆ ಬಂದು ಕೆಲಸಕ್ಕೆ ಸೇರಿದೆ. ದೂರದ ಗೋದ್ರಾ-ಗುಜರಾತ್ ಮಾತ್ರವಲ್ಲದೇ ಇಲ್ಲೇ ಆದಿ ಉಡುಪಿಯಲ್ಲೂ ಹಿಂದೂತ್ವವಾದೀ ಹಿಂಸಾಚಾರದ ಅಟ್ಟಹಾಸ ಉಲ್ಬಣಾವಸ್ಥೆಗೆ ಏರಿದ್ದ ಉಚ್ಛ್ರಾಯ ಕಾಲ. ಹಾಗಾಗಿ, ಕರಾವಳಿಯಾದ್ಯಂತ, ಮುಖ್ಯವಾಗಿ ಮಂಗಳೂರು ಉಡುಪಿಗಳಲ್ಲಿ, ಜಿ ರಾಜಶೇಖರ ಮತ್ತು ನಾನು ಹಲವು ಪ್ರತಿಭಟನಾ ಸಭೆಗಳಲ್ಲಿ ಪದೇಪದೇ, ಮತ್ತು ತನಿಖಾ ವರದಿಗಳಿಗಾಗಿ ಆಗಾಗ ಜೊತೆಯಾಗುವ ಸಂದರ್ಭಗಳು ಉಂಟಾದವು. ನಮ್ಮ ಈ ಒಡನಾಟಕ್ಕೆ ಸಂಬಂಧಿಸಿ, ಸಂಕ್ಷಿಪ್ತವಾಗಿ ನಾಲ್ಕು ವಿವರಗಳನ್ನಾದರೂ ನಾನಿಲ್ಲಿ ನೆನೆಯಬೇಕು: 2006ರ ಹಿಂದೂತ್ವವಾದೀ ಹಿಂಸಾಕಾಂಡ; ಉಡುಪಿಯ ಸೌಹಾರ್ದ ಸಾಹಿತ್ಯ ಸಮ್ಮೇಳನ; ಹತ್ತು ವರ್ಷಗಳ ಹಿಂದೆ ಮಂಗಳೂರಲ್ಲಿ ನನ್ನ ಮೇಲೆ ನಡೆದ ದೈಹಿಕ ಹಲ್ಲೆ; ಹಾಗೂ, ಮುಸ್ಲಿಮರು ಸಂಘಟಿತರಾಗಲು ಮಾಡಿದ ಪ್ರಯತ್ನದಲ್ಲಿ ನನ್ನ ಮತ್ತು ಜಿ ರಾಜಶೇಖರರ ಪಾಲುದಾರಿಕೆ.

2006ರಲ್ಲಿ, ಮುಖ್ಯವಾಗಿ ಮಂಗಳೂರು ನಗರ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ವಾರಗಟ್ಟಲೆ ಹಿಂದೂತ್ವವಾದೀ ಹಿಂಸಾಚಾರ ನಡೆಯಿತು. ಇಬ್ಬರು ಮುಸ್ಲಿಮರ ಕೊಲೆಯಾಯಿತು. ಪ್ರಭುತ್ವ ಕಳ್ಳರಂತೆ ಅಡಗಿ ಕೂತು ಚಳಿ ಕಾಯಿಸಿಕೊಳ್ಳುತ್ತಿತ್ತು. ಮನುಷ್ಯತ್ವವೇ ಹೊತ್ತಿ ಹೋಗಿ ದಕ್ಷಿಣಕನ್ನಡ ರಕ್ತಸಿಕ್ತ ರಣರಂಗವಾಗಿತ್ತು. ಅಳಿದುಳಿದವರ ಆರ್ತನಾದದ ಆ ದಿನಗಳನ್ನು ನೆನೆಸಿಕೊಂಡರೆ ಈಗಲೂ ಮೈ ನಡುಗುತ್ತದೆ. ಒಂದು ದಿನ, ಜಿ ರಾಜಶೇಖರರವರು ಫೋನ್ ಮಾಡಿ, ಹಿಂಸಾಚಾರಕ್ಕೆ ಈಡಾದ ಪ್ರದೇಶಗಳು ಮತ್ತು ವ್ಯಕ್ತಿಗಳ ಕುರಿತು ವಿವರವಾದ ಮಾಹಿತಿ ಮತ್ತು ಸಂಪರ್ಕಗಳಿರುವ ಒಬ್ಬ ತರುಣನಿದ್ದಾನೆ; ಸಾಧ್ಯವಿದ್ದರೆ ಕೆಲಸಕ್ಕೆ ರಜೆ ಹಾಕಿ ಬಿಡುವು ಮಾಡಿಕೊಂಡು ಬನ್ನಿ, ಏನು ನಡೆದಿದೆ ಎಂಬುದನ್ನು ನೋಡಬೇಕು ಎಂದರು. ಹಾಗೆ, ನಾವಿಬ್ಬರು ಹರ್ಷದ್ ವರ್ಕಾಡಿ ಎಂಬ ತರುಣನ ಮಾರ್ಗದರ್ಶನದಲ್ಲಿ ಜೊತೆಯಾಗಿ, ಆದಷ್ಟೂ ಕೂಲಂಕಷವಾಗಿ ಭೇಟಿ, ಸಂದರ್ಶನ, ಸುತ್ತಾಟ, ಮಾಹಿತಿ ಸಂಗ್ರಹಣೆ ಮಾಡಿದೆವು. ಅಗತ್ಯ ಕಂಡ ಕಡೆಗಳಿಗೆ ಹಲವು ಬಾರಿ ಹೋಗಬೇಕಾಗಿ ಬಂತು. ಸಂತ್ರಸ್ತರು ಮತ್ತು ಅಪರಾಧಿಗಳು ಒಬ್ಬರ ದಾರಿ ಮತ್ತೊಬ್ಬರು ತೋರಿಸಿ ಈ ಕಗ್ಗಂಟಿನ ಹಿಂದೆ ಮುಂದೆ ಒಳಹೊರಗೆ ಸುತ್ತಿ ಸುದೀರ್ಘವಾದ ವರದಿಯನ್ನು ತಯಾರಿಸಿದೆವು. ಆ ವರದಿ ಕಂತು ಕಂತುಗಳಾಗಿ ‘ಲಂಕೇಶ್ ಪತ್ರಿಕೆ’ಯಲ್ಲಿ ಪ್ರಕಟವಾಯಿತು. ‘ಕರ್ನಾಟಕ ಕೋಮು ಸೌಹಾರ್ದ ವೇದಿಕೆ’ ಅದನ್ನು ಒಂದು ಪುಸ್ತಕವಾಗಿ ಪ್ರಕಟಿಸಿತು. ಅದನ್ನು ನನ್ನಿಂದ ಇಂಗ್ಲಿಷ್ ಗೆ ಅನುವಾದಿಸಿ ತೀಸ್ತಾ ಸೆಟಲ್ ವಾಡ್ ತಮ್ಮ ‘ಕಮ್ಯೂನಲಿಸ್ಮ್ ಕಾಂಬ್ಯಾಟ್’ ಪತ್ರಿಕೆಯಲ್ಲಿ ಪ್ರಕಟಿಸಿದರು. ಈ ಸಂಬಂಧವಾಗಿ ತೀಸ್ತಾ ಸೆಟಲ್ ವಾಡ್ ಸ್ವತಃ ಮಂಗಳೂರಿಗೆ ಬಂದು (ಮಾಧ್ಯಮಲೋಕ ಅದಾಗಲೇ ಕುಲಗೆಟ್ಟು ಹಿಂದೂತ್ವವಾದಿಯಾಗಿ ಮತಾಂತರಗೊಂಡಿದ್ದಾಗಲೂ) ಪತ್ರಿಕಾಗೋಷ್ಠಿ ಕರೆದು, ವಿವರಗಳನ್ನು ಸಾರ್ವಜನಿಕರ ಎದುರು ತೆರೆದಿಟ್ಟರು.

ಈ ವರದಿಯ ಉಳಿದ ಫಲಿತಗಳೇನೇ ಇರಲಿ, ನಾನು ಜಿ ರಾಜಶೇಖರರಿಂದ ಆಗ ಕಲಿತದ್ದು ಬಹಳ. ಅದು ಬಹಳ ಅಮೂಲ್ಯ ಕೂಡಾ. ಅಪರಾಧಿಗಳಿರಲಿ, ತಟಸ್ಥರಿರಲಿ, ಸಂತ್ರಸ್ತರಿರಲಿ, ಪ್ರಭುತ್ವವಿರಲಿ– ನಾವು ಭಾವಾವೇಶಕ್ಕೆ ಎಡೆಯಾಗದಂತೆ, ಸಣ್ಣಪುಟ್ಟದು ಎಂಬ ಅಸಡ್ಡೆಯಲ್ಲಿ ಯಾವ ವಿವರಗಳೂ ಕೈ ಜಾರದಂತೆ, ಸಂದರ್ಭದ ಕಗ್ಗಂಟಾದ ಮಗ್ಗುಲುಗಳಿಗೂ ಸಂಕೀರ್ಣತೆ ಸಂದಿಗ್ಧಗಳಿಗೂ ಕುರುಡಾಗದಂತೆ, ಹುಂಬ ಪಕ್ಷಪಾತಿಗಳಾಗದಂತೆ, ಆದರೆ ಸತ್ಯಕ್ಕೆ ಧಕ್ಕೆ ಬರದಂತೆ, ಪ್ರಭುತ್ವದ ಅಟ್ಟಹಾಸದಿಂದ ಕೊಂಕದಂತೆ ನಡೆದ ಈ ತನಿಖೆಯನ್ನು, ಅದರ ಒಂದು ಉದಾಹರಣೆಯ ಮುಖಾಂತರ ಹೇಳುವುದಾದರೆ: ಈ ವರದಿ ತಯಾರಾದ ನಂತರ ದೇಶದ ಬೇರೆ ಭಾಗಗಳಿಂದ ಹಾಗೂ ಹೊರದೇಶಗಳಿಂದ ಕೆಲವು ವರದಿಗಾರರು ಮತ್ತು ಮಾಧ್ಯಮ ಅಧ್ಯಯನ ವಿದ್ಯಾರ್ಥಿಗಳು ಆಗಾಗ ನನ್ನ ಬಳಿ ಬರುತ್ತಿದ್ದರು; ಅವರನ್ನು ಪದೇಪದೇ ನಾನೊಬ್ಬನೇ ಕರೆದುಕೊಂಡು ಹೋಗಬೇಕಾದ ಸಂದರ್ಭಗಳು ಬರುತ್ತಿದ್ದವು. ಆಗ ನನ್ನ ಬಳಿ, ನಾವು ತಯಾರಿಸಿದ ವರದಿಯ ಪುಸ್ತಕಗಳ ಪ್ರತಿಗಳು ಇರುತ್ತಿದ್ದವು. ಗೂಡಂಗಡಿಗಳು, ಬಟ್ಟೆ ಚಪ್ಪಲಿ ತರಕಾರಿ ಅಂಗಡಿಗಳು, ದೂರದೂರದ ಒಂಟಿ ಮನೆಗಳು– ಮುಂತಾದ ಎಲ್ಲ ಕಡೆ ಈ ಪುಸ್ತಕ ನೋಡಿ, ಅದರಲ್ಲಿ ತಮ್ಮ ಹೆಸರು ಮತ್ತು ನಡೆದ ಘಟನೆಗಳ ವಿವರಗಳನ್ನು ನೋಡಿ ಆ ನತದೃಷ್ಟ ಅಮಾಯಕರು ಸಂತಸಗೊಳ್ಳುತ್ತಿದ್ದರು. ಅವರ ಕಣ್ಣಂಚಲ್ಲಿ ತಮ್ಮ ಅಳಲು ನಿರರ್ಥಕವಲ್ಲವೇನೋ ಎಂಬ ಮಿಂಚು ಒಮ್ಮೊಮ್ಮೆ ಮೂಡುತ್ತಿತ್ತು. ಕ್ರೂರ ವ್ಯಂಗ್ಯವೋ ಎಂಬಂತೆ ನನಗೆ ಬೇಂದ್ರೆಯವರ “ಸಾಯೋ ಆಟ” ನಾಟಕದ ಈ ಸಾಲುಗಳು ಬೇಡಬೇಡವೆಂದರೂ ನೆನಪಾಗುತ್ತಿದ್ದವು: “ನಾಲ್ಕು ಜನ ನೋಡುವವರಿದ್ದರೆ ಅತ್ತರೂ ಚೆಂದ, ಸತ್ತರೂ ಚೆಂದ.” ಮನುಷ್ಯರು ಕಡೆಗೂ ಬದುಕಿ ಉಳಿಯುವುದು ಗೋಡೆಗಳಿಗಾದರೂ ಹೇಳಲ್ಪಡುವ ಕತೆಗಳಲ್ಲಿ. (ಹಾಗೊಂದು ಜನಪದ ಕತೆಯೂ– Tell It To The Walls: ಎ ಕೆ ರಾಮಾನುಜನ್– ಇದೆ). ಈ ಅಮಾಯಕರು ಯಾರೋ, ಜಿ ರಾಜಶೇಖರ ಯಾರೋ; ಒಂದರ್ಥದಲ್ಲಿ ಪರಸ್ಪರ ಅವರು ಅಪರಿಚಿತ ಅನಾಮಧೇಯರು. ರಾಜಶೇಖರರಂತೆ, ಅಳಿಸಿ ಹೋಗುವ ನಮ್ಮ ಹೆಜ್ಜೆ ಗುರುತಿಗೂ ಗುರುತು ಬರುವಂತೆ, ಮರೆಯಾಗುವುದು ಸುಲಭವಲ್ಲ.

ಪ್ರಭುತ್ವ ಮತ್ತು ಮಠಮಾನ್ಯಗಳ ಕೃಪೆಯಲ್ಲೂ, ಜಾಗತೀಕರಣವು ಮಂಗಳೂರಿನ ವಿಶೇಷ ಆರ್ಥಿಕ ವಲಯದ ಅವತಾರದಲ್ಲಿ ಸೃಷ್ಟಿಸುತ್ತಿರುವ ದುರಂತಗಳಲ್ಲೂ, ಇವುಗಳ ಹೆಣಿಗೆಯಾಗಿರುವ ದಿವ್ಯ ನಿರ್ಲಕ್ಷ್ಯಗಳ ಹಾಸುಹೊಕ್ಕಿನಲ್ಲೂ– ಕರಾವಳಿ ಕರ್ನಾಟಕದ ಹಿಂದೂತ್ವವಾದೀ ಅಟ್ಟಹಾಸವನ್ನು ಅದೃಶ್ಯಗೊಳಿಸಿ, ಸಾಹಿತ್ಯ-ಸಂಸ್ಕೃತಿ ಎಂಬ ಸುವರ್ಣ ಚೌಕಟ್ಟನ್ನು ಸಾಹಿತ್ಯ ಪರಿಷತ್ತು ಸಿದ್ಧಪಡಿಸುತ್ತಿರುವಾಗಲೇ, ಅದಕ್ಕೆ ಎದುರಾಗಿ ಉತ್ತರವಾಗಿ ಸವಾಲಾಗಿ ಉಡುಪಿಯಲ್ಲಿ ಸೌಹಾರ್ದ ಸಾಹಿತ್ಯ ಸಮ್ಮೇಳನ ನಡೆಯಿತು. ಅದು ಬಹಳ ಅರ್ಥಪೂರ್ಣವೂ ಆಗಿತ್ತು. ಜಿ ರಾಜಶೇಖರ ಮೆಚ್ಚಿಕೊಂಡ ನನ್ನ ಆಶಯ ಭಾಷಣ ಕೂಡಾ ಅದರ ಭಾಗವಾಗಿತ್ತು. ಮಂಗಳೂರಲ್ಲಿ ನನ್ನ ಮೇಲೆ ದೈಹಿಕ ಹಲ್ಲೆ ನಡೆದುದನ್ನು ಖಂಡಿಸಿ ಜಿ ರಾಜಶೇಖರ ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿಯ ಎದುರು ಸಾರ್ವಜನಿಕ ಭಾಷಣ ಮಾಡಿದರು. ‘ಲಂಕೇಶ್ ಪತ್ರಿಕೆ’ಗಾಗಿ ನನ್ನ ಕುರಿತು ಬರೆದರು. ಜೀವಂತ ಇರುವಾಗಲೇ ಶೃದ್ಧಾಂಜಲಿ ಲೇಖನ ಓದಿದಷ್ಟು ಸಂತೋಷವಾಯಿತು ಎಂಬ ನನ್ನ ಪ್ರತಿಕ್ರಿಯೆಗೆ ಮನಃಪುರ್ವಕವಾಗಿ ಅಪರೂಪದ ನಗೆ ನಕ್ಕರು.

ಮುಸ್ಲಿಮರು ಹಲವರು ತಾವು ಸಂಘಟಿತರಾಗಲು ಬಯಸಿ ನಡೆಸಿದ ಪ್ರಯತ್ನಗಳ ಕುರಿತು ಕೆಲವಾದರೂ ಮಾತುಗಳನ್ನು ನಾನು ಹೇಳುವುದಿದೆ. ಧರ್ಮವು ಉತ್ಸವಮೂರ್ತಿಯಾಗಿ, ಆರ್ಥಿಕತೆ ಬೇಕಾಬಿಟ್ಟಿ ಜಾಗತೀಕರಣವಾಗಿ ನಿರ್ದಯವಾಗಿ ಎದುರು ನಿಂತಿರುವ ಕಾಲ ನಮ್ಮದು. ಯಾವ ಕಡೆ ತಿರುಗಿದರೂ ಮನುಷ್ಯತ್ವದ ಪಸೆ ಕಾಣದಂತಾಗಿದೆ. ಸಂಘಪರಿವಾರದ ಅಟ್ಟಹಾಸ ಮೇರೆ ಮೀರಿದೆ. ಪ್ರಭುತ್ವವು ಹಿಂದೂತ್ವವಾದದಲ್ಲಿ ಪರೋಕ್ಷವಾಗಿಯಷ್ಟೇ ಅಲ್ಲದೇ ನೇರವಾಗಿ ಪಾಲುದಾರವಾಗಿದೆ. ಉಳಿದ ರಾಜಕೀಯ ಪಕ್ಷಗಳೂ ಜಾತ್ಯತೀತತೆ ಎಂಬುದನ್ನು ಅನುಕೂಲ ಶಾಸ್ತ್ರವನ್ನಾಗಿ ಮಾರ್ಪಡಿಸಿವೆ. ಒಂದು ಕಾಲಕ್ಕೆ ಬಹಳ ಪ್ರಭಾವಶಾಲಿಯಾಗಿದ್ದ ಎಡಪಕ್ಷಗಳ ವರ್ಚಸ್ಸು ಜಾಗತೀಕರಣದ ಬಂಡವಾಳಶಾಹಿಯ ದಾಳಿಗೆ ಪೇಲವಗೊಳ್ಳುತ್ತಿದೆ. ಕೋಮುವಾದ ಮತ್ತು ನವ ಬಂಡವಾಳಶಾಹಿಗಳ ನಾಗಾಲೋಟದ ಎದುರು, ಚಳುವಳಿಗಳು ಏದುಸಿರುಬಿಡುತ್ತಿವೆ. ನನ್ನನ್ನೇ ಉದಾಹರಣೆಯಾಗಿಟ್ಟು ಆತ್ಮಮರುಕವಿಲ್ಲದೇ ಇಷ್ಟಂತೂ ಹೇಳಬಲ್ಲೆ: ನಾನು ಉದ್ಯೋಗ ಮಾಡುತ್ತಿದ್ದ ಸಂಸ್ಥೆಗಳ ಆಡಳಿತ, ಬಹುಪಾಲು ನನ್ನ ವಿದ್ಯಾರ್ಥಿಗಳು, ಸಂಘಪರಿವಾರದ ಬೀದಿ ಪುಂಡರು ನೇತಾರರು, ಅಷ್ಟೇ ಏಕೆ ಬಸ್ಸು ರಿಕ್ಷಾ ಅಂಗಡಿ ಹೊಟೇಲು ನೆರೆಹೊರೆಯವರು ನನ್ನನ್ನು ಕಂಡದ್ದು ಒಬ್ಬ ಕ್ರಿಮಿನಲ್ ಮತ್ತು ಜನ ಶತ್ರು ಎಂಬಂತೆ. ಅವು ಅಸುರಕ್ಷಿತತೆಯ ಬೇತಾಳ ಹೆಗಲೇರಿದ ದಿನರಾತ್ರಿಗಳು. ಸವಲತ್ತುಗಳ ನಡುವೆಯೂ ನನ್ನ ಪರಿಸ್ಥಿತಿಯೇ ಹೀಗನ್ನಿಸಿದರೆ, ಉಳಿದವರ ಪಾಡು ಕರುಣಾಜನಕ. ಕರ್ನಾಟಕ ಫೋರಮ್ ಫಾರ್ ಡಿಗ್ನಿಟಿ ಹುಟ್ಟಿದ್ದು ಈ ಸಂಧಿಕಾಲದಲ್ಲಿ. ಆ ಆರಂಭದ ದಿನಗಳಿಂದಲೂ ನಾನು ಮತ್ತು ಜಿ ರಾಜಶೇಖರ ಹೆಚ್ಚೂಕಡಿಮೆ ಅವರ ಎಲ್ಲ ಕಾರ್ಯಕ್ರಮಗಳಲ್ಲೂ ಭಾಷಣಕಾರರು ಮತ್ತು ಬೆಂಬಲಿಗರು. ಕೋಮುಸೌಹಾರ್ದ ವೇದಿಕೆಯಲ್ಲಿ ಎಡೆಬಿಡದೇ ಸಕ್ರಿಯರಾಗಿದ್ದುಕೊಂಡೇ ಕೆ ಎಫ್ ಡಿ/ಪಿ ಎಫ್ ಐಗೆ ನಾವು ಜೊತೆಯಾದವರು. ನಮ್ಮದೇ ಸ್ನೇಹಿತರು ನಮ್ಮನ್ನು ಮುಸ್ಲಿಮ್ ಸಂಘಟನೆಗಳಿಂದ ಹೊರಗೆಳೆಯಲು ಮಾಡಿದ ಪ್ರಯತ್ನಗಳ ದೊಡ್ಡ ಕತೆಯೇ ಇದೆ. ಅದೇನೇ ಇದ್ದರೂ, ನನ್ನ ಮತ್ತು ರಾಜಶೇಖರರ ನಿಲುವು ಆಗಲೂ ಈಗಲೂ ಬದಲಾಗದೇ ಉಳಿಯಿತು.

ಕಾರಣ ಇಷ್ಟೇ. ನನ್ನ ವಾದ ಸರಳವಾದದ್ದು, ಆದರೆ ದೃಢವಾದದ್ದು. ಭೋಳೆ ಎನ್ನುವವರ ಬಾಯಿ ಮುಚ್ಚಿಸುವ ದರ್ದು ಅದಕ್ಕಿಲ್ಲ: (೧) ಉದಾರವಾದೀ ಪ್ರಜಾತಂತ್ರ ವ್ಯವಸ್ಥೆಯಲ್ಲಿ, ಎಲ್ಲ ವ್ಯಕ್ತಿಗಳೂ ವ್ಯಕ್ತಿಗಳಾಗಿ ಕೇವಲ ಒಂದು ವೋಟು ಮಾತ್ರ; ಅವರು ಸಂಘಟಿತ ಸ್ವರವಾಗದಿದ್ದರೆ ಅವರನ್ನು ಕೇಳುವವರಿಲ್ಲ. ಕೇಳಿದರೂ, ಕೇಳುವವರು ತೋರಿಸುವ ಕೃಪೆ-ಔದಾರ್ಯ ಬಹಳ ಉಪಯುಕ್ತವೂ ಅಲ್ಲ, ಬಾಳಿಕೆ ಬರುವಂಥದ್ದೂ ಅಲ್ಲ, ಪಡೆಯುವವರ ಘನತೆಗೆ ಹೊಂದುವಂಥದ್ದೂ ಅಲ್ಲ. ಹಾಗಾಗಿ, ಸಂಘಟಿತರಾದರೆ ಉಂಟಾಗಬಹುದಾದ ವಿಕಾರಗಳು ಮತ್ತು ಅಪಾಯಗಳನ್ನು ವಾದಗಳನ್ನಾಗಿ ಸದಾ ಕಾಲ ಚಾಲ್ತಿಯಲ್ಲಿಡಲು ಅವಕಾಶಗಳೂ ಇಲ್ಲ. (೨) ಎರಡನೆಯ ಆರೋಪ ಹೆಚ್ಚು ತೀಕ್ಷ್ಣವಾದದ್ದು, ಕಟುವಾದದ್ದು: ಇದು ಕೇವಲ ಮುಸ್ಲಿಮರ ಸಂಘಟನೆ; ಇದು ಸಂಘಪರಿವಾರದ್ದೇ ಪಡಿಯಚ್ಚು; ಇವರೂ ಕೋಮುವಾದಿಗಳು; ಇವರೂ ಹಲ್ಲೆ ದೊಂಬಿ ದಾದಾಗಿರಿ ನಡೆಸುತ್ತಾರೆ; ಮುಸ್ಲಿಮ್ ಹೆಣ್ಣುಮಕ್ಕಳನ್ನು ಸಂಘಟನೆಯಲ್ಲಿ ಸೇರಿಸಿಕೊಳ್ಳುವುದಿಲ್ಲ, ಅವರು ಸಮಾನತೆಯ ಹಕ್ಕುಗಳನ್ನು ಮಾನ್ಯಮಾಡುವುದಿಲ್ಲ, ಮುಂತಾಗಿ.

ಈ ವಿವರಗಳು ನನಗೆ ಅಷ್ಟು ಮುಖ್ಯವೆಂದು ಅನ್ನಿಸುವುದಿಲ್ಲ. ಅವರ ಘೋಷಿತ ನಿಲುವುಗಳೇನು ಎಂಬುದಷ್ಟೇ ನನಗೆ ಮುಖ್ಯವಾದುದು. ಏಕೆಂದರೆ, ತಪ್ಪುಗಳು ಸಂಭವಿಸಿದ ಸಂದರ್ಭಗಳಲ್ಲಿ ಅದೇ ಘೋಷಿತ ನಿಲುವುಗಳ ಮೂಲಕ ಅವರ ಜೊತೆ ವಾಗ್ವಾದ-ಸಂವಾದ ನಡೆಸಬಹುದಾದ ಬಾಗಿಲು ತೆರೆದೇ ಇದೆ. ಇದನ್ನು ಸಂಘಪರಿವಾರದ ವಿಷಯದಲ್ಲಿ ಹೇಳುವಂತಿಲ್ಲ. ಸಾವರ್ಕರ್, ಗೋಳ್ವಲ್ಕರ್ ಅಥವಾ ಇನ್ನಾವುದೇ ಸಂಘಪರಿವಾರದ ಮುಖವಾಣಿಗಳಾದ ಜನರನ್ನು ಹಾಗೂ ಅವರ ಘೋಷಿತ ನಿಲುವುಗಳನ್ನು ಯಾವ ನಾಗರಿಕ ಸಮಾಜವೂ ಸಮರ್ಥಿಸುವುದು ಸಾಧ್ಯವಿಲ್ಲ. ಅಲ್ಲದೇ, ಬಹುಸಂಖ್ಯಾತ ಕೋಮುವಾದವನ್ನು ಮಾಮೂಲು ತಕ್ಕಡಿಯಲ್ಲಿ ತೂಗುವುದು ಸರ್ವಥಾ ಸಾಧುವಲ್ಲ. ಇದು ನನ್ನ ಖಡಾಖಂಡಿತವಾದ ಲಾಗಾಯ್ತಿನ ನಿಲುವು. ನನಗೆ ತಿಳಿದಮಟ್ಟಿಗೆ ರಾಜಶೇಖರರ ನಿಲುವು ಕೂಡಾ ಇದೇ ಸ್ವರೂಪದ್ದು. ಹಾಗಲ್ಲದೇ, ಮುಸ್ಲಿಮರು ರಾಜಶೇಖರರನ್ನು ತಮ್ಮ ಆಪತ್ಬಾಂಧವ ಎಂದು ತಿಳಿಯಲು ವಿಶೇಷ ಕಾರಣಗಳಿಲ್ಲ.

ರಾಜಶೇಖರರು ಪಡೆಯಬಹುದಾಗಿದ್ದ ಪ್ರಶಸ್ತಿಗಳು ಸನ್ಮಾನಗಳು ಹಲವು. ಕಿರುಚು ಕಂಠದ ಕುಲಗೆಟ್ಟ ಮುಂಚೂಣಿ ಜನರು ಅದನ್ನು ತಡೆದರು. ಅದರಿಂದ ರಾಜಶೇಖರರಿಗೇನೂ ನಷ್ಟವಾಗಲಿಲ್ಲ. ಅಂಥ ಹಲವು ಪ್ರಶಸ್ತಿ ಸನ್ಮಾನಗಳು ಕೂಡಾ ಅವರು ಎದುರಾಳಿಯಾಗಿ ನಿಂತು ಹೋರಾಡಿದ ರಿವಾಜುಗಳ ಕೂಸುಗಳೇ ಆಗಿರುವುದರಿಂದ, ಅಪ್ಪಿ ತಪ್ಪಿ ಅಂಥದ್ದೊಂದು ಪ್ರಶಸ್ತಿ ಬಂದಾಗಲೂ ಅವರು ಅದನ್ನು ನಿರಾಕರಿಸಿದರು. ಆದರೆ ಉಡುಪಿಯಲ್ಲಿ ಮುಸ್ಲಿಮ್ ಸಂಘಟನೆಗಳವರು, ಮಂಗಳೂರಲ್ಲಿ ‘ಪ್ರಸ್ತುತ ಬಳಗ’ದವರು ಕೊಟ್ಟ ಪ್ರಶಸ್ತಿ-ಸನ್ಮಾನಗಳನ್ನು ತನ್ನ ಹೋರಾಟಗಳ ಮುಂದುವರಿಕೆಯಾಗಿಯೇ ಅವರು ಸಂತೋಷದಿಂದ ಸ್ವೀಕರಿಸಿದರು. ಪ್ರಶಸ್ತಿಯನ್ನು ಸ್ವೀಕರಿಸುವುದೂ ಪ್ರಶಸ್ತಿಯನ್ನು ನಿರಾಕರಿಸುವಷ್ಟೇ ಅರ್ಥಪೂರ್ಣವಾದುದು ಎಂಬುದನ್ನು, ಪ್ರಶಸ್ತಿ ಸ್ವೀಕರಿಸುವಾಗ ಅವರು ಆಡಿದ ಮಾತುಗಳು ಕೂಡಾ ಸ್ಪಷ್ಟಪಡಿಸಿವೆ. ಈ ನಿಸ್ಪೃಹತೆ ವಿರಳಾತಿವಿರಳವಾದುದು. ನಿಜವಾಗಿಯೂ ದೊಡ್ಡವರಾಗಿರುವ ನಮ್ಮ ನಡುವಿನ ಹಲವು ಹಿರಿಯರಲ್ಲಿ ಕೂಡಾ ಈ ಗುಣ ದುರ್ಲಭವಾದುದು. ಈ ವಿಷಯದಲ್ಲಿ ದಾಕ್ಷಿಣ್ಯಕ್ಕೆ ಬಸುರಾಗದೇ ಉಳಿದವರ ಸಂಖ್ಯೆ ಬಹಳ ಕಡಿಮೆ.

ಆದರೆ, ಅದಕ್ಕಿಂತ ಮುಖ್ಯವಾದ ವಿಶೇಷವೊಂದಿದೆ. ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಲು ನಾನು ಆರಂಭಿಸಿದ್ದು, ಮುಖ್ಯವಾಗಿ ನೃತ್ಯ, ಸಂಗೀತ ಮುಂತಾದ ಶಾಸ್ತ್ರೀಯ ಕಲೆಗಳ ಅತ್ಯುತ್ತಮ ವಕ್ತಾರರ ಮುಖಾಂತರ. ಆದರೆ ಅದು ಕೇವಲ “ಕಲೆಗಾಗಿ ಕಲೆ” ಎಂಬಂತಾಗುವ ಅಪಾಯಗಳನ್ನು ತಪ್ಪಿಸುವ ಕಷ್ಟಗಳೇನು ಎಂಬುದು ಅನುಭವದಿಂದ ನನ್ನ ತಿಳುವಳಿಕೆಗೆ ಬಂದಿದೆ. ಆದರೆ ನಾನು ಭಾಗವಹಿಸುವ ಸಾರ್ವಜನಿಕ ಹೋರಾಟ ಪ್ರತಿಭಟನೆ ಮುಂತಾದವು ಢಾಳಾಗಿ ರಾಜಕೀಯ ನಿಲುವುಗಳನ್ನು ಹೊಂದಿರುವಂಥವು. ಇಲ್ಲಿನ ಕೊರತೆಯೆಂದರೆ ಕಲೆಯ ನಯ ನವಿರು ನಾಜೂಕು ಸೂಕ್ಷ್ಮಗಳ ಗೈರುಹಾಜರಿ. ಸೂಕ್ಷ್ಮಗಳಿಗೆ ಒಡ್ಡಿಕೊಳ್ಳದೇ, ಎದುರಾಳಿಯ ಸಂಕಟ-ತಲ್ಲಣಗಳನ್ನು ಗ್ರಹಿಸದೇ, ಅದದೇ ಜನರೆದುರು ಅದದೇ ಮಾತುಗಳನ್ನಾಡುತ್ತ, ಘೋಷಣೆಗಳ ಬುರುಗು ಗೀಳಿನಲ್ಲಿ ಕರಗುತ್ತ ಹೋಗುವ ಅಪಾಯದಿಂದ ತಪ್ಪಿಸಿಕೊಂಡು ಸ್ತಿಮಿತದಲ್ಲಿ ಉಳಿಯುವುದು ಇಂಥಲ್ಲಿ ಕಡುಕಷ್ಟ. ರಾಜಶೇಖರರು ಈ ಇರುಸುಮುರುಸನ್ನು ಮೇಲಿಂದ ಮೇಲೆ ಅನುಭವಿಸಿದ್ದಾರೆ ಎಂದೇ ನನ್ನ ಭಾವನೆ. ಹೀಗಿದ್ದೂ ಗೊಡ್ಡಾಗದೇ ಉಳಿದದ್ದು ಅವರ ಇನ್ನೊಂದೇ ಅಂತರಂಗದ ಹೋರಾಟವಿದ್ದೀತು. ಏಕೆಂದರೆ, ನಿಜಕ್ಕಾದರೆ ದಿನನಿತ್ಯದ ಏಕತಾನದ ಬುರ್ನಾಸು ಸಾಮಾನ್ಯತೆಯಲ್ಲಿ ಕರಗಿಹೋಗದ ಸೂಕ್ಷ್ಮವೇ ಅವರ ಅಡಿಪಾಯ– langue. ದೈನಿಕದ ರಾಜಕೀಯ ಹೋರಾಟ ಮತ್ತು ನಿಲುವುಗಳಾಗಿ ಬೀದಿಗಳಲ್ಲಿ ಅವರು ನಮಗೆ ಕಾಣಿಸಿದ್ದು ಆ ಅಭಿಜಾತ ಅಭಿರುಚಿಯ ಒಂದು ಝಲಕ್– parole. ವಿಪರ್ಯಾಸವೆಂದರೆ, ಜಾರ್ಜ್ ಲುಕಾಕ್ಸ್ ಹೇಳುವಂತೆ, ಉಪಯುಕ್ತವಾದ ಒಂದು ಸರ್ವಸಾಮಾನ್ಯ ಮೇಜನ್ನು ತಯಾರಿಸುವುದಕ್ಕೂ, ನಮ್ಮ ಈ ದುಷ್ಕಾಲದಲ್ಲಿ, ಮೈಖೆಲ್ ಏಂಜೆಲೋನ ಪ್ರತಿಭೆಯೇ ಬೇಕು.

ಸಾಮಾನ್ಯರ ನಡುವೆ ಸಾಮಾನ್ಯರಾಗಿ ಇರುವುದೂ ಒಂದು ಅಸಾಮಾನ್ಯ ಸಾಧನೆ. ನನಗೆ ತಿಳಿದಮಟ್ಟಿಗೆ ರಾಜಶೇಖರರ ಜೀವನಪೂರ್ತಿಯ ಪ್ರಜ್ಞಾಪೂರ್ವಕ ಹುಡುಕಾಟವಿದ್ದುದು ಸಾಮಾನ್ಯ ಜೀವನದ ಸಹಜ ಅಸಾಮಾನ್ಯತೆಯಲ್ಲಿ. ಅನಾಮಧೇಯನಾಗಿ ಉಳಿಯಬೇಕೆಂಬ ಹಠದಲ್ಲಿ.

1992ರ ಡಿಸೆಂಬರ್ ಕೊನೆಯ ಭಾಗದ ಒಂದು ಭಾನುವಾರ. ‘ಸಾಪ್ತಾಹಿಕ ಪ್ರಭ’ದಲ್ಲಿ “ಅಕ್ಕರೆಯ ರಾಮಲಾಲನಿಗೆ ಅಕಾಲ ಮುಪ್ಪು” ಎಂಬ ನನ್ನ ಲೇಖನ ಪ್ರಕಟವಾಗಿತ್ತು. ಮಹಾತ್ಮಾ ಗಾಂಧಿ, ಮಾರ್ಟಿನ್ ಹೈಡೆಗರ್, ಸಾದತ್ ಹಸನ್ ಮಾಂಟೋ ಮತ್ತು ರಾಮಕೃಷ್ಣ ಪರಮಹಂಸರ ವಿಚಾರಗಳಿಗೆ ನಾನು ಮರುಳಾಗಿದ್ದ ಕಾಲ. ಧ್ವಂಸಗೊಂಡ ಬಾಬರೀ ಮಸೀದಿಯ ಕಲ್ಲು ಇಟ್ಟಿಗೆಗಳ ಸಂದಿಯಲ್ಲಿ ಅನಾಥವಾಗಿ ಬಿದ್ದಿದ್ದ ಅಯೋಧ್ಯೆಯ ರಾಮಲಲ್ಲಾನ ಚಿತ್ರವೊಂದನ್ನು ‘ಫ್ರಂಟ್ ಲೈನ್’ ಪತ್ರಿಕೆಯಲ್ಲಿ ಕಂಡಿದ್ದೆ. ರಾಮಕೃಷ್ಣ ಪರಮಹಂಸರ ರಾಮ, ರಾಮಲಾಲ, ಮುದ್ದಿನ ಹಸುಗೂಸು. ಬಿಲ್ಲುಬಾಣ ಹೆದೆಯೇರಿಸಿ, ಇಲ್ಲದ ಶತ್ರುವನ್ನು ನಿರ್ನಾಮ ಮಾಡಬೇಕೆನ್ನುವ ವ್ಯಗ್ರ ಉಮೇದಿನ ಸೆಟೆದು ನಿಂತ ರಾಮನಲ್ಲ. ಹಾಗೆಂದು ಬರೆದಿದ್ದೆ. ಎರಡೇ ದಿನದಲ್ಲಿ ರಾಜಶೇಖರರಿಂದ ಮೆಚ್ಚುಗೆಯ ಪತ್ರ ಹಾಗೂ ಇಂಗ್ಲಿಷ್ ಲೇಖನವೊಂದರ ಛಾಯಾಪ್ರತಿ ಅಂಚೆಯಲ್ಲಿ ಬಂತು. ಇಂಗ್ಲಿಷ್ ಲೇಖನದ ಛಾಯಾಪ್ರತಿ ‘ಇಂಡಿಯನ್ ಎಕ್ಸ್‌ಪ್ರೆಸ್‌’ ಪತ್ರಿಕೆಯಲ್ಲಿ ಮರುದಿನ ಮಹಾತ್ಮಾ ಗಾಂಧಿಯವರ ಮೊಮ್ಮಗ ರಾಮಚಂದ್ರ ಗಾಂಧಿ ಬರೆದದ್ದು. ರಾಮಕೃಷ್ಣ ಪರಮಹಂಸರ ರಾಮಲಲ್ಲಾನ ಸುತ್ತ ನಾನು ಬರೆದಿದ್ದ ಅದದೇ ವಿವರಗಳು ಅದರಲ್ಲಿದ್ದವು. ರಾಜಶೇಖರರು ತಮ್ಮ ಪತ್ರದಲ್ಲಿ, “ಇಲ್ಲಿ ನೋಡಿ, ನಿಮ್ಮ ಲೇಖನ ಒಂದು ದಿನ ತಡವಾಗಿ ಪ್ರಿಂಟಾಗಿದ್ದರೆ ನೀವು ರಾಮಚಂದ್ರ ಗಾಂಧಿಯವರ ಲೇಖನವನ್ನು ನಕಲು ಮಾಡಿದ್ದೀರಿ ಎಂಬ ಅಪವಾದವನ್ನು ಹೊರಬೇಕಾಗುತ್ತಿತ್ತು.”

ಮಾರ್ಟಿನ್ ಹೈಡೆಗರ್ ಹೇಳುವಂತೆ, “One is ready to die as soon as one is born.” ಸಾವೆಂಬುದು ಹುಟ್ಟಿನೊಂದಿಗೇ ಅಂಟಿಬರುವ ಮಾರಣಾಂತಿಕ ಶಾಪ ಎಂಬುದನ್ನು ತಿಳಿಯದವರು ಯಾರು? ತಿಳಿದು ನಡೆದವರು ಯಾರು? ಈ ಜೀವಜಗತ್ತು ಆಸೆಗಳ ಸ್ವರ್ಗವನ್ನೇ ನಮ್ಮೆದುರು ಹರಡಿದೆ. ಆದರೆ ಸಾವು ಎಲ್ಲ ಸಂಭ್ರಮಗಳನ್ನೂ ಕಸಿಯಲು ಅಲ್ಲೇ ಹೊಂಚಿ ಕೂತಿದೆ. ನಮ್ಮ ಅದಮ್ಯ ಆಸೆಗಳನ್ನು ನಿಷ್ಕರುಣ ಅಸಡ್ಡೆಯಿಂದ ತಿರಸ್ಕರಿಸುತ್ತದೆ ಎಂದಾದರೆ ಈ ಬದುಕಿಗೆ ಏನು ಅರ್ಥ? ಸಾವಿನಿಂದ ಶಪಿತವಾದ ಜೀವ ಸ್ವಹತ್ಯೆ ಮಾಡಿಕೊಳ್ಳದೇ ಬದುಕಿರಬೇಕಾದದ್ದಾದರೂ ಯಾಕೆ ಎಂಬುದೇ ಮೂಲಭೂತ ಪ್ರಶ್ನೆ ಎಂದು ಕಮೂ ಹೇಳುತ್ತಾನೆ. ಗುಡ್ಡದ ಬುಡದಿಂದ ಹಲ್ಲುಕಚ್ಚಿ ಪ್ರಯಾಸಪಟ್ಟು ಬಂಡೆಯೊಂದನ್ನು ದೂಡಿ ತುದಿ ಮುಟ್ಟಿಸಿ ಅದು ಉರುಳಿಬೀಳುವುದನ್ನು ಅಸಹಾಯಕತೆಯಲ್ಲಿ ನೋಡುವ, ಪುನರಪಿ ಬಂಡೆಯನ್ನು ಮೇಲಕ್ಕೆ ತಳ್ಳುವ ಸಿಸಿಫಸ್ ಪುರಾಣವೇ ಕಮೂವಿನ ಪ್ರಕಾರ ನಮ್ಮ ಜೀವನ. ಆದರೆ ಸಿಸಿಫಸ್-ಕಮೂ ಸಿನಿಕರಂತೆ ಕೈಚೆಲ್ಲುವುದಿಲ್ಲ. ಬಂಡೆಯನ್ನು ಮೇಲಕ್ಕೆ ದೂಡುವ ಅವಿರತ ಪ್ರಯಾಸ ಹಾಗೂ ಬಂಡೆ ಉರುಳಿ ಕೆಳಕ್ಕೆ ಬೀಳುವುದನ್ನು ನೋಡುತ್ತ ನಿಂತ ಅಸಹಾಯಕ ಸಾಕ್ಷಿತ್ವದ ನಡುವೆ ಸಂದು ಕಡಿಯುವ ಬೆಳ್ಳಿಯ ಗೆರೆಯೊಂದಿದೆ. ಇನ್ನೊಮ್ಮೆ ಬಂಡೆಯನ್ನು ಮೇಲಕ್ಕೆ ದೂಡಲು ಕೆಳಗಿಳಿಯುವ ಕ್ಷಿಪ್ರ ಬಿಡುವೊಂದಿದೆ. ಅದು ನಿರಾಳ ಕಾಲ. ಅದು ಶಾಪದಿಂದ ಕಸಿದ ನಮ್ಮದೇ ಪಾಲು. ಬಂಡೆಯ ನೂಕಾಟದ ನಡುವೆ ಅರ್ಥ ಹೀಗೆ ಹಠಾತ್ತನೆ ಜಿನುಗುವುದು. ಹಾಗಲ್ಲದೇ, ಪರರ ನೋವು ಸಂಕಟ ಸಾವುಗಳ ಸತತ ಧ್ಯಾನ ರಾಜಶೇಖರರಿಗೆ ಒದಗಲು ಸಾಧ್ಯವಿತ್ತೇ?

(ಎಚ್ ಪಟ್ಟಾಭಿರಾಮ ಸೋಮಯಾಜಿ
104ಸಿ, 4ನೇ ಅಡ್ಡರಸ್ತೆ, ಗಿರಿನಗರ
ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್
ದೇರೇಬೈಲ್ ಕೊಂಚಾಡಿ
ಮಂಗಳೂರು, 575008
ಫೋನ್:9448325705
ಇಮೆಯ್ಲ್:somayajihp@gmail.com)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಕತೆ | ಮಾಯಮ್ಮ

Published

on

~ತೆಲುಗು ಮೂಲ: ಡಾ.ವೇಂಪಲ್ಲಿ ಗಂಗಾಧರ್,ಕನ್ನಡಕ್ಕೆ: ಡಾ.ಶಿವಕುಮಾರ್ ಕಂಪ್ಲಿ

ʼಆಗಸದ ತುಂಬಾ ಕಪ್ಪನೆಯ ದಟ್ಟ ಮೋಡಗಳು ಕವಿದುಕೊಂಡಿವೆ. ಮೋಡ ಮೋಡಗಳು ಬಸೆದುಕೊಂಡು ಗುಡುಗು ರ‍್ಜಿಸುತ್ತಿದೆ. ಗುಡುಗು ಗುಡುಗುಗಳನ್ನು ಹೊತ್ತಿಕೊಂಡು ಮಿಂಚುಗಳು ಮಿನುಗುತ್ತಿವೆ. ಮಿಂಚು ಮಿಂಚುಗಳು ಹೊಸೆದುಕೊಂಡು ಬೆಂಕಿಸುರಿಸುತ್ತಿವೆ.ಆ ಸೆಕೆಗೆ ಕಪ್ಪುಮೋಡ ಕದಲಿಹೋಗುತ್ತಿದೆ. ಹೊಡೆದುಕೊಂಡು ಹೋಗುತ್ತಿದೆ. ಹೊಗೆಯನ್ನು ತಗಲಿಸಿಕೊಂಡು ಬೋಂಕನೆ ಸರಿಯುತ್ತಿದೆ. ನಕ್ಕನ್‌ ಕರೇಮೋಡ. ಈ ಗಡ್ಡೆಮ್ಯಾಕೆ ಸುರಿಬೇಕಂದರೆ ಈ ಮಾಡಗಳಿಗೆ ಏನು ಮಾಡಬೇಕೋ. ನಮ್ಮ ನೆತ್ತಿಯ ಮೇಲೆ ಬರವನ್ನು ಹಾಕಿ ಎಲ್ಲಿಗೋ ಮಳೆಗಳನ್ನ ಓಡಿಸಿಬಿಡುತ್ತವೆ. ಈ ಮಾಡಗಳಿಗೆ ಅದೇಟು ತೀಟಿ…” ವೀರಶಿವ ಬೈದುಕೊಳ್ಳುತಿದ್ದಾನೆ ಮಾಯಮ್ಮನ ಗುಡಿಯ ಪಡಸಾಲೆಯೊಳಗೆ ಉದ್ದಕೆ ಮಲಗಿಕೊಂಡು.
ಕಪ್ಪನೆಯ ಶರೀರ. ಮಾಸಿದ ಗಡ್ಡ. ಹರಿದುಹೋಗಿರುವ ಬಟ್ಟೆಗಳು. ಕೈಯೊಳಗೊಂದು ಬಿದುರು ಕೋಲು. ಹೆಗಲ ಮೇಲೊಂದು ಜೋಳಿಗೆ. ಧೂಳ ಕಾಲಿನ ಮೇಲೊಂದು ಕುರ ಅದಕ್ಕೆ ಮುತ್ತಿಕೊಳ್ಳುತ್ತಿರುವ ನೊಣದ ಹಿಂಡು, ಇವು ತಿಕ್ಕ ಶಿವನ ಆಕಾರ. ಯಾವಾಗಲೂ ಮಾಯವ್ವನ ಗುಡಿಯ ಹತ್ತಿರವೇ ಇರುತಾನೆ. ಹೊಟ್ಟೆ ಹಸಿದಾಗ ಮಾತ್ರವೇ ಎದ್ದು ಹಳ್ಳಿಗಳ ಒಳಗೆ ಬಂದು ಯಾರೋ ಒಬ್ಬರ ಮನಿಯೊಳಗೆ ಕುಂತು ಅಷ್ಟು ಜೋಳಿಗಿಯೊಳಗೆ ಹಾಕಿಸಿಕೊಂಡು ಹೋಗಿ ಆ ಗುಡಿಯ ಒಳಗೇ ಕುಂತು ತಿನ್ನುತ್ತಾನೆ. ಕಾಲುವೆಯೊಳಗೆ ಹರಿವ ನೀರನ್ನು ಬಾಯಿಗಚ್ಚಿಕೊಂಡೇ ಕುಡಿತಾನೆ. ಹಂಗೇ ಆತನ ಬದುಕೆಲ್ಲಾ ಕಳೆದು ಹೋಗುತ್ತಿದೆ.

ಆಕಾಶವೆಂದರೆ ಕೋಪ. ಮೋಡಗಳೆಂದರೆ ಕೋಪ. ಬೆಳೆಗಳೆಂದರೆ ಕೋಪ. ವ್ಯವಸಾಯವೆಂದರೆ ಕೋಪ. ನಂಬಿಕೊಂಡ ದೇವರೆಂದರೆ ಕೋಪ. ಅದುಕ್ಕೇ ಮಾಯವ್ವ ತಾಯಿಗೆ ಅರಿಷಿಣ ಕುಂಕುಮದ ಬದಲು ಮಸಿಬಳಿಯುತ್ತಾನೆ. ಆ ಗುಡಿ ಹತ್ರ ಆ ತಾಯಿಗೆ ಪೂಜೆಗಳಿಲ್ಲ ಪುನಸ್ಕಾರಗಳಿಲ್ಲ. ದೇವರ ವಿಗ್ರಹವೂ ಕೊಂಚ ಮುಕ್ಕಾಗಿದೆ. ಬಾವಲಿಗಳು ಸೇರಿಕೊಂಡಿವೆ. ಹೊಲಸು ನಾತ ಹೊಡೆಯುತ್ತದೆ. ಅಂತಹ ಗುಡಿಯಲ್ಲೇ ತಿಕ್ಕ ಶಿವಪ್ಪ. ಆ ತಾಯಿಗೆ ಬಾಯಿಗೆ ಬಂದಂಗೆ ಬೈಯುತ್ತಾ ಇರುತ್ತಾನೆ.
ತಿಕ್ಕ ಶಿವಪ್ಪನೆಂದರೆ ನಮ್ಮ ಹಳ್ಳಿಯೊಳಗೆ ಎಲ್ಲರಿಗೂ ಅಭಿಮಾನ. ದೊಡ್ಡ ದೊಡ್ಡವರೆಲ್ಲಾ ಕೈಯೆತ್ತಿ ಮುಗಿಯುತ್ತಾರೆ.

ಆತ್ಮೀಯತೆಯಿಂದ ಆದರಿಸುತ್ತಾರೆ. ಅತ ಬಂದು ಕೇಳಬೇಕೇ ವಿನಃ ಆಸ್ತಿಗಳನ್ನಾದರೂ ಕೊಟ್ಟುಬಿಡುತ್ತಾರೆ. ಆತನಿಗಿರುವ ಹೆಸರು ಅಂತಾದ್ದು. ತಿಕ್ಕ ಶಿವನೆನ್ನೋ ಹೆಸರು ಕೂಡಾ ಅಮಾಯಕವಾಗಿ ಮಕ್ಕಳು ಮಾತಾಡಿಕೊಳ್ಳೋದು. ʼವೀರ ಶಿವʼ ಅಂತಾ ಬಾಯತುಂಬಾ ಕರೆಯಬೇಕೆಂದರೆ ಎಲ್ಲರಿಗೂ ಪರಮಾನ್ನ ತಿನ್ನುವಷ್ಟು ಇಷ್ಟ. ಆಗ… ಆಗ್ಯಾವಾಗಲೋ.. ನಾನು ಸಣ್ಣವನಿದ್ದಾಗಿನ ದಿನದೊಳಗೆ ವೀರ ಶಿವನ ಸಾಹಸಗಳ ಕುರಿತು ಕತೆ ಕತೆಗಳಾಗಿ ಹೇಳುತಿದ್ದರು. ಆ ಕಥೆಗಳೆಲ್ಲವೂ ಜ್ಞಾಪಕಕ್ಕೆಬರುತ್ತಿವೆ…
***
ದಿನಾ ರಾತ್ರಿ ಹೊತ್ತಿಗೆ ದೊಡ್ಡ ಹುಲಿ ಬರುತಾತೆಂದು ಹಳ್ಳಿಯ ಜನ ಭಯಬೀಳುತಿದ್ದರೆ ಆ ವಿಷಯವು ಚಿಕ್ಕ ವೀರಶಿವನಿಗೆ ಒಂದು ದಿನ ತನ್ನ ಜೊತೆಗಾರರನ್ನು ಹಿಂದಾಕಿಕೊಂಡು ಬೆಟ್ಟದ ಮಲ್ಲಪ್ಪನ ಗುಡ್ಡದ ಬಯಲಿಗೆ ಹೊಂಟನು. ಕಣವಿಹಳ್ಳಿ ಅಡವಿಯೊಳಗಿಂದ ದಾಟಿಕೊಂಡು ಕುಮಾರನ ಹಳ್ಳಿ ದಿಕ್ಕಿಗೆ ತಿರುಗಿದನು.ಏಳು ಮೆಟ್ಟಿನ ಹುಲಿಬೇಟೆಗೆಂದು ತಿಳಿದರೆ ಯಾರೂ ಹಿಂದೆ ಬರಲಾರರೆಂದು ಮೊಲದ ಬೇಟಿಗೆ ಹೋಗಾನ ರ‍್ರಿ ಅಂತ ನಂಬಿಸಿದ್ದನು. ನಡು ರಾತ್ರಿತಂಕಾ ಮಲ್ಲಪ್ಪನ ಗುಡ್ಡಕ್ಕೆ ಸೇರಿಕೊಂಡು ಅಲ್ಲಿಂದ ಅಡ್ಡದಾರಿಗುಂಟಾ ಮಲ್ಲಪ್ಪನ ಗುಡ್ಡದ ಬಯಲ ಕಡೆಗೆ ಸೇರಿದರು.
ಕೈಯೊಳಗಿನ ನಾಡ ಬಂದೂಕು ಹಸಿದ ಕಣ್ಣು ಬಿಡುತ್ತಿದೆ. ಬಂಡೆಗಲ್ಲಿನ ಮೇಲೇರಿ ಕೆಳಗೆ ನೋಡುತಿದ್ದಾನೆ ವೀರಶಿವ. ಸಣ್ಣಗೆ ಪೊದೆಯೊಳಗಿನ ಎಲೆಗಳು ಅಲುಗಿದಂಗಾಯಿತು. ಜೊತೆಗಾರರು ಬೆದರಿ ಗುಡ್ಡದ ಮೇಲಕ್ಕೆ ಏರತೊಡಗಿದರು. ವೀರ ಶಿವ ತುಪಾಕಿಯನ್ನು ಸರಿಮಾಡಿಕೊಂಡನು. ಗುರಿ ಕುದುರಿತು. ನೋಟದೊಳಗೆ ಏನೋ ಅನುಮಾನ ಕಾಣಿಸಿತು. ತಡೆದನು. ಲಾಟೀನಿನ ಬುಡ್ಡಿ ದೀಪವನ್ನ ಸ್ವಲ್ಪ ಮೇಲೆತ್ತಿರೆಂದು ಹಿಡಿದುಕೊಳ್ಳಿರೆಂದು ಹೇಳಿದನು. ಪರೀಕ್ಷೆಯಿಂದ ಮರದ ಕಡೆಗೆ ನೋಡಿದನು. ಬಂಡೆ ಇಳಿಯಲು ಪ್ರಾರಂಭಿಸಿದನು. ಎಲ್ಲರೂ ಬ್ಯಾಡಾ ಅಂದರು. ಆದರೂ ಕೇಳದಂತೆ ಹೆಜ್ಜೆಯ ಸಪ್ಪಳ ಕೇಳದಂತೆ ಮರಗಳ ಕೆಳಗೆ ಹೋಗಿ ಸ್ವಲ್ಪ ಬಗ್ಗಿಕೊಂಡು ಎರಡು ಕೈಗಳಿಂದ ಅವಚಿಕೊಂಡನು. ದಾರಿ ಬಳಿ ಜಿಂಕೆ ಮರಿ ಕೊಸರಾಡುತ್ತಿದೆ. ಆಕಡಿಗೆ ಈ ಕಡಿಗೆ ಅದು ತಪ್ಪಿಸಿಕೊಳ್ಳಬೇಕೆಂದು ಕೊಸರಾಡುವುದನ್ನು ನೋಡಿ ಕೈಯೊಳಗಿದ್ದ ಹಗ್ಗದಿಂದ ಅದರ ಎರಡು ಕಾಲು ಕಟ್ಟಿ ಅಲ್ಲೇ ವಗೆದನು. ಅದು ಅರಚುತ್ತಲೇ ಇದೆ. ಅಲ್ಲಿಂದ ಚಕ ಚಕನೇ ಗುಡ್ಡದ ಬಂಡೆಯನ್ನೇರಿದನು. ನಾಡ ಬಂದೂಕನ್ನು ಕೈಯೊಳಗೆ ತೆಗೆದುಕೊಂಡನು. ಜಿಂಕೆ ಮರಿಯ ಕಡೆಗೆ ಗುರಿ ಇಟ್ಟುಕೊಂಡು ಹೊಂಚಿಕೊಂಡು ಕುಳಿತನು. ಆ ಜಿಂಕೆ ಮರಿ ಅಡವಿಯೆಲ್ಲಾ ಅದುರುವಂತೆ ಮೊರೆಯುತ್ತಲೇ ಇದೆ.

ಲಾಟೀನು ಬುಡ್ಡಿಯ ಬೆಳಕನ್ನು ಇಳಿಸಿದನು. ಜೊತೆಗೆ ಬಂದವರೆಲ್ಲಾ ಬೆದರಿ ಮುದುರಿಕೊಂಡು ಏನು ನಡೆಯುತ್ತಿದಿಯೋ ಏನೋ ಎಂದು ನೋಡುತಿದ್ದಾರೆ. ಬಂದೂಕು ಜಿಂಕೆ ಮರಿಯ ಕಡೆಗೇ ಇದೆ. ಜಿಂಕೆಯ ಕೂಗು ಹೆಚ್ಚಾಯಿತು. ಒಂದೇ ಸಾರಿಗೆ ಸಾವಿನ ಕೂಗು ಕೂಗಿತು. ವೀರಶಿವನ ಕೈಯೊಳಗಿನ ಬಂದೂಕು ರ‍್ಜಿಸಿತು. ತೋಟ ತೂರಿ ನುಗ್ಗಿಹೊರಟಿತು. ಹುಲಿ ಎಗರಿಬಿತ್ತು. ಹುಲಿ…ಹುಲಿ… ಜಿಂಕೆಗಾಗಿ ಬಂದಿತ್ತು. ವೀರಶಿವನ ಗುರಿ ಗೆದ್ದಿತು. ಆ ಕ್ಷಣದಲ್ಲೇ ಹಗ್ಗದ ಮೊಲಕು ಬಿಡಿಸಿಕೊಂಡ ಜಿಂಕೆ ಅಷ್ಟೇ ಹೆದರಿಕೆಯಲ್ಲಿ ಜಿಗಿದು ಹಾರಿ ಪೊದೆಯೊಳಗೆ ತೂರಿಹೋಯಿತು. ಗುಡ್ಡ ನಾಲ್ಕು ಹೆಜ್ಜೆ ಇಳಿದು ಮತ್ತೆ ಬಂದೂಕನ್ನು ಸರಿಪಡಿಸಿಕೊಂಡು ಕೆಳಗೆ ಬಿದ್ದು ವಿಲವಿಲನೇ ವದ್ದಾಡುತಿದ್ದ ಹುಲಿಯನ್ನು ಗುರಿಯಿಟ್ಟು ಮತ್ತೆ ಹೊಡೆದನು. ಅದು ರ‍್ಜಿಸುತ್ತಾ ವದ್ದಾಡಿ ಸತ್ತಿತು. ಇದನ್ನೆಲ್ಲಾ ಗದಗದನೇ ನಡುಗುತ್ತಾ ನೋಡುತಿದ್ದ ಜೊತೆಗಾರರೆಲ್ಲಾ ಅಂಗೇ ಕೇಕೆ ಹಾಕಿದರು. ಇದು ಪರಶಿವನ ಬೇಟೆಯ ಕಥೆ.
ಹುಲಿಯನ್ನು ಹೊಡೆದನೆಂದು ಊರೆಲ್ಲಾ ತಿಳಿದಮೇಲೆ ಎತ್ತನ ಬಂಡಿಯಮೇಲೆ ಸತ್ತ ಹುಲಿಯನ್ನೂ, ವೀರ ಶಿವನನ್ನೂ ಕೂರಿಸಿ ಮೆರವಣಿಗೆ ಮಾಡಿದರು ಊರಜನ. ಸುತ್ತು ಮುತ್ತಲ ಅರವತ್ತು ಹಳ್ಳಿಗಳವರೂ ಬಂದು ಹಬ್ಬ ಮಾಡಿದರು.ಆ ಹುಲಿ ರ‍್ಮ ತೆಗೆದು ರ‍್ಪದಿಂದ ಪರಶಿವನ ಮನೆಗೆ ನೇತು ಹಾಕಿದರು.ಹುಲಿಯುಗುರು ತೆಗೆದು ಬಂಗಾರದ ಸರಕ್ಕೆ ಹಾಕಿಕೊಂಡರು.
***
ಪರಶಿವನ ವಿವಾಹ ನಿಶ್ಚಯವಾಯಿತು. ಕರವಾಗಿ ಮಾವನಿಗೆ ಕೊಮಾರನ ಹಳ್ಳಿ ತಾಂಡಾದ ಬಳಿಯ ಬೆದ್ದಲು ಭೂಮಿಯನ್ನು ನೀಡಿದನು. ವಿವಾಹದ ದಿನ ವಧು ಪರ‍್ವತಿಗೆ ಏಳು ಗಜದ ರೇಷಿಮೆ ಸೀರಿ,ಝರಿ ರವಿಕೆ, ಬಂಗಾರದ ಬಳೆಗಳು,ಮೂಗು ನತ್ತು,ಬುಗುಡಿ,ಬೆಂಡೋಲಿ,ತೀಕಿ,ನಾಗರ,ಬೆಳ್ಳಿ ಡಾಬು, ಏಳುವರಹದ ವಡವೆಗಳು ಎಲ್ಲಾ ಪರಶಿವನೇ ಕನ್ನೆಗೆ ಇತ್ತನು.
“ ಬರಗಾಲವು ಕಿತ್ತು ತಿನ್ನುವಾಗ ಇದೇನಪೋ ಮದುವಿ” ಎಂದರು ಸರೀಕರು.
“ ನಮ್ಮೂರ ಗೌಡಪ್ಪನ ಮದುವಿ ನಾವು ಘನವಾಗೇ ಮಾಡಿಕೊಳ್ಳತೀವಿ” ಅಂದು ಆಕಾಸದಂಗ ಹಂದರ ಹಾಕಿ,ಊರೆಲ್ಲಾ ರಂಗೋಲಿ ಬಿಟ್ಟು,ದೊಡ್ಡ ಊರ ಹಬ್ಬದಂತೆ ಹನ್ನೆರಡು ದಿನಗಳ ಮದುವಿ ಮಾಡಿದರು. ಸುತ್ತು ಹಳ್ಳಿಗಳೂ ಸಂಭ್ರಮದಿಂದ ಕುಣಿದವು.
ಮದುವಿ ಹೆಣ್ಣು ಪರ‍್ವತಿ ಅದೆಷ್ಟು ಅದೃಷ್ಟವಂತಳೋ..!? ಎಂದು ಊರೆಲ್ಲಾ ಗಲಗಲನೇ ಅಂದುಕೊಂಡರು. ಅದೇನು ಗಾಚಾರನೋ…ಆಯಮ್ಮನು ಊರೊಳಗೆ ಕಾಲಿಟ್ಟೊಡನೆಯೇ ಬರವು ಬೆನ್ನುಬಿದ್ದಿತು. ಮನಿ ಮನಿಗೆ ಅರಿಷ್ಟವು ಬಡಿಯಿತು. ಬಾವಿಗಳೆಲ್ಲಾ ಒಣಗಿ ಹೋಗಿ, ಹಳ್ಳಗಳೆಲ್ಲಾ ಇಂಗಿ ಹೋಗಿ, ಊರು ನಂಬಿದ ಚಿನ್ನದ ಹಗರಿ ಎಂಬ ಕಿರು ನದಿಯು ಒಣಗಲು ಶುರುವಾಗಿದೆ. ಅವ್ವನ ಜಾತ್ರೆಯ ದಿನ ಮಾಯವ್ವನಿಗೆ ಬೋನಗಳ ಎಡೆ ಇಟ್ಟರು,ಅಂಗಳದಲ್ಲಿ ಕುರಿಕೋಣ,ಆಡು ಕೋಳಿಗಳೆಂಬೋ ನೂರಾರು ಜೀವಿಗಳ ರಕ್ತದ ಮುಖಗಳನ್ನ ಚಲ್ಲಿ, ಬಂಡಿಗಳ ಕಟ್ಟಿ, ಸಿಡಿಗೆ ತೋರಣಗಳನ್ನು ಕಟ್ಟಿಸಿದ್ದಾರೆ. ಗುಡಿಯಲ್ಲಿ ತಾಯಿಮರ‍್ತಿಗೆ ಬೆಳ್ಳಿಯ ಮುಖ,ಕಣ್ಣು,ಕೋರೆಗಳ ಮಾಡಿ ಇಟ್ಟಿದ್ದಾರೆ. ಜಾತ್ರಿಯ ಪೂಜಿ ಜೋರಾಗಿ ನಡೆಯುತ್ತಿದ್ದಾಗಲೇ ತಳವಾರ ಲಕ್ಷ್ಮಿಯ ಮೈಮ್ಯಾಲೆ ಆ ಮಾಯವ್ವ ತಾಯಿ ಮೈದುಂಬಿ ಬಂದಳು…
“ಅಲಲಲಲ ಮಕ್ಕಳೇ…ನಾನು ಯಾರು!?
ಈ ಭೂಮಿ ಆಕಾಶ ಹುಟ್ಟಿದಾಗಿಂದಲೂ…
ಮಹಾಶಕ್ತಿ; ಲೋಕ ಮಾತೆ
ಆದಿಶಕ್ತಿ ; ಲೋಕ ಮಾತೆ
ಕಾಲ ಮೀರಿದವಳು ಗುಡುಗು,ಸಿಡಿಲು,ಗಾಳಿ,ಮಳೆ,ಮುಗಿಲು..
ಈಗ ಒಂದು ಪಕ್ಷಿಯಾಗಿ ಹುಟ್ಟಿ…
ಕೂರಬೇಕೆಂಬ ತಾವು ಸಿಗದಾಗಿ…..
ಕಲ ಕಲನೆ ಗಾಳಿ ಗಾಳಿಯಾಗಿ ಅಂತರ ಅಂತರವಾಗಿ ಆಡುತ್ತಾ…
ಮಹಾ ಬಲಿದಾನವನ್ನ ಕೋರುತ್ತಿದೆ….” ಎಂದು ಹೇಳಿ ದೇವಾಲಯದ ಸುತ್ತಾ ಕಾರ ಮತ್ತು ಮಣ್ಣು ಚಲ್ಲುತ್ತಾ ತಿರುಗಿದಳು. ಜಾತರೆಯು ಪರ‍್ತಿಯಾಯಿತು. ಆದರೆ ಆ ತಾಯಿ ಶಾಂತಿಯಾಗಲಿಲ್ಲವೆಂದು ತಿಳಿದುಹೋಯಿತು.

ಹಸಿರು ಮರಗಿಡಗಳು ಒಣಗಿ ಹೋಗಿವೆ. ಎಲ್ಲಿಯೂ ಕೂಡಾ ಹನಿ ನೀರಿರದ ಪರಿಸ್ಥಿತಿ. ಬರಗಾಲ …ಬರಗಾಲಕ್ಕೆ ಕಾರಣ ಆಯಮ್ಮ ಪರ‍್ವತಿಯೇ…
“ಎಲ್ಲಿಂದಲೋ ಇಲ್ಲಿಗೆ ಸೊಸೆಯಾಗಿ ಬಂದಳು.ಇದೆಲ್ಲವೂ ಆಯಮ್ಮನ ಕಾಲ್ಗುಣವೇ ಎಂದು ಕೆಲವರು ಹೇಳಿದರೆ, ಅದೇನಿಲ್ಲ ಬರಕ್ಕೆ ಕಾರಣ ಆಯಮ್ಮನದೇಗಾಗುತ್ತದೆ ಎಂದು ಕೆಲವರು ಹೇಳಿದರು. ಅದೇನಲ್ಲ ಆಕೆ ಅರಿಷ್ಟ ಊರಿಗೆ ಶಾಪವಾಗಿದ್ದಾಳೆ ಎನ್ನಲು ಪ್ರಾರಂಭಿಸಿದರು. ಆಕೆಯ ಇಂತಹ ಮುಳ್ಳು ಮೊನೆಯ ಮಾತುಗಳನ್ನು ಭರಿಸದಾದಳು.ತನ್ನೊಳಗೆ ತಾನು ಕುಗ್ಗಿ ಕುಗ್ಗಿ ಅಳತೊಡಗಿದಳು. ತನ್ನ ಅರಿಷ್ಟದ ಕಾರಣದಿಂದಾಗಿಯೇ ಊರು ಬಂಜರು ನೆಲವಾಗುತ್ತಿದೆ ಎಂದು ಅಂದುಕೊಂಡಳು.
ಪರಶಿವನು ಸಮಾಧಾನಿಸಿದರೂ ಕೇಳಲಿಲ್ಲ.
ಗಂಡ ಹೊಲದ ಕಡೆಗೆ ಹೋದಾಗ ಆ ನಡು ಮದ್ಯಾನ್ಹದಲ್ಲಿ ಕಣಗಿಲೆಯ ಹೂಗಳನ್ನು ಬಟ್ಟಲತುಂಬಾ ಬಿಡಿಸಿಕೊಂಡು ಬಂದು ಅರೆದು ಮನಸಿನೊಳಗೆ ಆ ಮಾಯಮ್ಮ ತಾಯಿಗೆ ಅಡ್ಡ ಬಿದ್ದು ಹರಕೆ ಮಾಡಿಕೊಂಡಳು. “ ಊರು ಜನರ ಕಷ್ಟಗಳು ಕೊನಿಯಾಗಲಿ,ಕಣ್ಣೀರು ಬತ್ತಿ ಹೋಗಲಿ, ನೀರು ನೀರ ಸೆಲೆ ಹರಿದುಬರಲಿ…ಮಳೆ ಸುರಿದು ಸುರಿದೂ ನೆಲವೆಲ್ಲಾ ತೊಯ್ದು ಹಸಿರಾಗಲಿ. ಕರೆಗಳೆಲ್ಲಾ ತುಂಬಿಕೊಳ್ಳಲಿ…ಬೆಳೆ ಬೆಳೆದು ಸುಗ್ಗಿಯಾಗಲಿ… ಬರಗಾಲ ಹೋಗಲಿ… ಚಿನ್ನದ ಹಗರಿ ನದಿ ಮತ್ತೆ ಹರಿದಾಡಲಿ…. ತಾಯಿ ನನ್ನ ಆತ್ಮ ಬಲಿದಾನವನ್ನು ತೆಗೆದುಕೋ. ತಗೆದು ಕೋ ತಾಯಿ. ಎಂದು ಬಟ್ಟಲನ್ನು ಎತ್ತಿಕೊಂಡು ಗಟ ಗಟನೆ ಗಂಟಲಿಗೆ ಹಾಕಿಕೊಂಡಳು. ಕುಡಿದ ಕೆಲವೇ ಕ್ಷಣಗಳಲ್ಲಿ ಉಸಿರು ನಿಂತಿತು. ಕಾಲು ಕೈಗಳು ತಣ್ಣಗಾದವು.
ಚೆಂಜೆಗೆ ವೀರಶಿವನು ಬಂದು ನೋಡೋ ವೇಳೆಗೆ ಆಯಮ್ಮನ ಶರೀರವು ಕಪ್ಪಾಗಿ ಹೋಗಿತ್ತು.ಇನ್ನ ಯಾರೇನು ಮಾಡುತ್ತಾರೆ? ಪರಶಿವನ ದುಃಖವನ್ನು ಪದಗಳು ಹಿಡಿಯಲಾಗಲಿಲ್ಲ. ಬಿದ್ದು ಬಿದ್ದು ಅತ್ತನು. ಬಂಗಾರದಂತಹ ಹುಡುಗಿ ಮದುವಿ ಆಗಿ ಆರು ತಿಂಗಳು ಕಳೆಯಲಿಲ್ಲವಲ್ಲೋ…ಊರಿಗಾಗಿ ಪ್ರಾಣವನ್ನೇ ಕಳಕೊಂಡಳು ಎಂದು ಜನರೆಲ್ಲರೂ ಅಂದುಕೊಂಡರು. ಆಕೆಯನ್ನು ಚಿನ್ನದ ಹಗರಿ ನದಿ ದಡದಲ್ಲೇ ಹೂತರು. ಇನ್ನ ಆ ದಿನದಿಂದಲೇ ವೀರ ಶಿವನು ಆ ಮನೆಗೆ ಹೋಗದೆ ತೋಟದ ಬಳಿಯೇ ಇರತೊಡಗಿದನು. ಮನೆ ಬಳಿಗೆ ಹೋದರೆ ತನ್ನ ಪರ‍್ವತಿಯೇ ಗರ‍್ತಿಗೆ ಬರುತ್ತಾಳೆಂದು ಹೋಗುವುದನ್ನು ಬಿಟ್ಟು ಬಿಟ್ಟನು. ಮತ್ತೆ ಮದುವೆ ಮಾಡಿಕೊ ಎಂದು ಯಾರೇಳಿದರೂ ಕೇಳದಾದನು.
ನೀರಿನ ಪರಿಸ್ಥಿತಿ ಇನ್ನಾ ಅದ್ವಾನವಾಯಿತು. ಎಲ್ಲೆಲ್ಲಿಂದಲೋ ಗುಂಡೆಯೊಳಗಿನ ಗಬ್ಬು ನೀರನ್ನು ಕೂಡಾ ದೇವಿಕೊಂಡು ತರುತಿದ್ದಾರೆ.
***
ದಿನಗಳು ಕಳೆದು ಹೋಗುತ್ತಿದ್ದಂತೆ ಊರಿಗೆ ಪರ‍್ಲಬ್ಬವು ಬಂದಿತು.ಊರಿನೊಳಗೆ ಯಾವ ಸಂಭ್ರಮವೂ ಇಲ್ಲ. ಆಗ ಪರಶಿವನೇ ಮುಂದೆ ಬಂದು ಚಾವಡಿಯ ಬಳಿ ಸಮಾವೇಶ ನಡೆಸಿದನು. ನಾವಿರುವ ಊರೊಳಗೆ ಬರಗಾಲ ಹೋಗಬೇಕೆಂದರೆ ಅಲಾಯಿ ಹಬ್ಬವನ್ನು ಮಾಡಬೇಕು. ಬರಗಾಲ ಹೋಗಲು, ಮಳೆಹನಿ ಸುರಿಯಲು,ನಾವು ಊರಲ್ಲಿ ಪೀರ ದೇವರ ಅಲೆಗುಣಿ ತೋಡಬೇಕು.ಪೀರಲು ದೇವರನ್ನು ಕೂಡಿಸಿ, ಕತ್ತಲ ರಾತ್ರಿಯ ಅಲೆ ಕುಣಿಯ ಕೆಂಡದ ಕರ‍್ಯವು ಜರುಗಿಸಬೇಕು ಎಂದನು. ರ‍್ಮಕ್ಕಾಗಿ ಬಲಿದಾನವಾದ ಹಸನ ಹುಸೇನರಂತೆ ನಮ್ಮೂರಿನ ಒಳ್ಳೇದಕ್ಕಾಗಿಯೇ ಬಲಿದಾನವಾದ ಊರ ಪರ‍್ವತವ್ವನನ್ನು ನೆನೆದು ಯಾರಿಂದಲಾದರೂ ಊರಿಗೆ ಒಳ್ಳೆಯದಾದರೆ ಸಾಕು ಎಂದು ಊರಿನ ಹಿರಿಯರು ಹಾಗೇ ಆಗಲಿ ಎಂದು ಒಪ್ಪಿಕೊಂಡರು.

ಅಮಾಸಿ ಆದ ಮರುದಿನ ಅಲೆ ಕುಣಿ ತೋಡಿದರು. ಸುತ್ತಿಟ್ಟ ಪಂಜಾ ದೇವರುಗಳನ್ನು ಪೂಜೆಗಿಟ್ಟರು. ಹುಲಿಗಳು ಊರತುಂಬಾ ಕುಣಿಯತೊಡಗಿದವು. ಅಳ್ಳಳ್ಳಿ ಬುವ್ವಗಳು ಸೊಂಟಕ್ಕೆ ಗಂಟೆಯ ಪಟಗಾಣಿ ಕಟ್ಟಿಕೊಂಡು ಚಡ್ಡು ಹಿಡಿದು ಹೊರಟರು. ಮಸೂತಿಗೆ ಜನ ಬಂದು ಬಂದು ಸಕ್ಕರಿ ಓದಕಿ ಓದಿಸಿ ಸಿಹಿ ಪಡೆದು ಲಾಡಿ ಕಟ್ಟಿಕೊಂಡು ಹೊರಟರು.ಮಸೂತಿ ದೇವರುಗಳು ಊರೊಳಗೆ ಹೊರಟು ಎಲ್ಲಾ ದೇವರುಗಳನ್ನು ಬೇಟಿ ಮಾಡತೊಡಗಿದವು. ತಂಗಿ ಮಯಮ್ಮನ ಗುಡಿ ಹತ್ತಿರ ಬಂದು ಎರಡೂ ದೈವಗಳು ಅಪ್ಪಿಕೊಂಡು ಅತ್ತವು. ಬಿಡಿಸಿಕೊಂಡು ಬಿಡು ಊರಿಗೆ ಒಳಿತಾಗಲಿ ಎಂದು ಬಿಡಿಸಿಕೊಂಡು ಎರಡು ದಿಕ್ಕಿಗೆ ತಿರುಗಿದವು. ಕತ್ತಲ ರಾತ್ರಿಯ ದಿನ ಕಡಿದು ತಂದ ಮರದ ಬಡ್ಡೆಗಳು ಹೊತ್ತಿಕೊಂಡವು. ಕೆಂಪನೆಯ ಕೆಂಡದ ಕೆನ್ನಾಲಿಗೆಗಳು ಎದ್ದವು. ಜನ ಉಪ್ಪು ಹಿಡಿದು ಕಟ್ಟಿಗೆಗಳನ್ನು ಹೊತ್ತು ತಂದು ಕ್ವಾವ್‌ ಸೇನ್‌ ಬಾವ್‌ ಸೇನ್‌ ಎಂದು ಕುಣಿಗೆ ಹಾಕಿ ಉರಿ ಹೆಚ್ಚು ಮಾಡಿ ಸುತ್ತಿ ಸುತ್ತಿ ಹೊರಟರು.ಅಲೆ ಕುಣಿಯ ಕೆಂಡದ ಹಾಸಿಗೆಯೇನೋ ತಯಾರಾಯಿತು ಆದರೆ ಅದರಲ್ಲಿ ನಡೆಯುವವರು ಯಾರು? ಯಾವಾಗಲೂ ನಡೆಯೋ ಪೀರಣ್ಣ ಮಾವ ಮಂಚ ಹಿಡಿದಿದ್ದಾನೆ. ಮಗ ಜಮಾಲ ಕಮ್ಮಾರ ಹುಡುಗಿ ಕಾಂತಮ್ಮನನ್ನು ಎಬಿಸಿಗೊಂಡು ಊರು ಬಿಟ್ಟು ಓಡಿದ್ದಾನೆ.

ಕುಣಿ ಉರಿಯುತ್ತಲೇ ಇದೆ. ಆಗ ಪರಶಿವನೇ ಮುಂದಕ್ಕೆ ಬಂದನು. ಕೈಯೊಳಗೆ ದೊಡ್ಡ ಪೀರದೇವರ ಪಂಜಾವನ್ನು ಹಿಡಿದುಕೊಂಡು ಕುಣಿಯೊಳಗೆ ಹೆಜ್ಜೆ ಇಟ್ಟನು. ಹೆಜ್ಜೆ ಕದಲಲು ಕೆಂಡಗಳು ಹೂತು ಬಿಡುವಂತೆ ಎಗರಿ ಎಗರಿ ಬೀಳುತ್ತಿವೆ.ಅಲೆ ಕುಣಿಯ ತುಂಬಾ ಜನ…ತಾಗಿ ಕೊಳ್ಳುತ್ತಾ…ದಬ್ಬಿಕೊಳ್ಳುತ್ತಾ ನೋಡಲಿಕ್ಕೆ ಮೇಲೆ ಮೇಲೆ ಬೀಳುತಿದ್ದಾರೆ.
ಆ ಕಡೆಯಿಂದ ಈ ಕಡೆಗೆ , ಈ ಕಡೆಯಿಂದ ಆ ಕಡೆಗೆ ಮೂರು ಸಲ ಕೆಂಡದೊಳಗೆ ನಡೆದು ಪೀರದೇವರನ್ನು ಗದ್ದುಗೆ ಮೇಲಿಟ್ಟು ಕಣ್ಣು ತಿರುಗಿ ಕುಸಿದು ಬಿದ್ದನು ಪರಶಿವ.
“ ಅಭ್ಯಾಸವಿಲ್ಲದ ಕೆಲಸವನ್ನು ಯಾಕೆ ಮಾಡಬೇಕಪ್ಪಾ ಸ್ವಾಮಿ” ಎಂದನು ಪಕ್ಕದಲ್ಲಿದ್ದ ಹಿರಿಯ ಕತ್ಲಪ್ಪ.
“ ಈ ಬರಗಾಲ ನೋಡಲಾಗದೇ ಬಂದೆ ಕಣಜ್ಜೋ..” ಎಂದನು ವೀರ ಶಿವ ಬಿಗಿದ ಪಾದಗಳನ್ನು ನೋಡಿಕೊಳ್ಳುತ್ತಾ.
ಆದರೂ ಮಳೆರಾಯ ತಿರುಗಿ ನೋಡುತ್ತಿಲ್ಲ. ಹನಿ ಬೀಳುತ್ತಿಲ್ಲ. ಮಾಡಗಳೆಲ್ಲಾ ಮೊಂಡು ಬಿದ್ದುಬಿಟ್ಟಂಗದೆ.
ಅಲೆ ಕುಣಿಯ ಕೆಂಡ ಚೆಲ್ಲಾಡಿ ದೇವರು ಹೊರಟ ಬಳಿಕ ಆ ಬೂದಿಯನ್ನು ವಿಭೂತಿಯಾಗಿ ಬಳಸಲಿಕ್ಕೆ ,ಆಧಾರವಾಗಿ ಇಟ್ಟುಕೊಳ್ಳಲಿಕ್ಕೆ ಜನರು ಪೈಪೋಟಿಗೆ ಬಿದ್ದಿದ್ದಾರೆ. ಆ ಬೂದಿ ಇದ್ದರೆ ಮನೆಯೊಳಗೆ ದೆವ್ವಗಳ ಕಾಟ ಬರೋದಿಲ್ಲ. ಹತ್ತಿರ ಸುಳಿಯಲಾರವು ಎಂಬುದು ಅವರ ನಂಬಿಕೆ. ಉಳಿದ ಬೂದಿಯನ್ನ ಜನರು ಆಕಾಶಕ್ಕೆ ತೂರಿದರು. ಮಳೆರಾಯನಿಗೆ ಬಾರಪ್ಪೋ ಸ್ವಾಮಿ ಎಂದು ಕೈ ಮುಗಿದರು. ಆದರೂ ಆಕಾಶರಾಯ ಕರಗಲಿಲ್ಲ.
ಜನ ಗುಳೇ ಹೋಗಲು ಶುರು ಮಾಡಿದರು. ನೀರಿಲ್ಲದ ಊರಲ್ಲಿ ಬಿದ್ದು ಸಾಯುವುದಕ್ಕಿಂತಾ ಎಲ್ಯಾನ ಕಾಡಲ್ಲಾದರೂ ಗಡ್ಡೆ ಗೆಣಸು ತಿಂದು ಇರೋದೇ ಪಾಡೆಂದು ಊರ ಜನರು ಮನೆಗಳ ತೊರೆದು ಹೋಗುತಿದ್ದಾರೆ. ಇಷ್ಟು ಕಾಲ ನಂಬಿಕೊಂಡಿದ್ದ ನೆಲವನ್ನು ಬಿಟ್ಟು ಕೊಟ್ಟು ದೇಸಾಂತರ ಹೋಗುತ್ತಿರುವವರ ನೋಡಿದಾಗ ಪರಶಿವನಿಗೆ ನೋವಾಗುತ್ತಿದೆ.
ಆದರೂ ಪಾಪ ಆತನೇನು ಮಾಡುತ್ತಾನೆ. ಕರುಣ ರಸವನ್ನು ಹೊಮ್ಮಿಸುವ ಭಕ್ತ ಕುಮಾರವ್ಯಾಸನ ಕಥೆ ಹೇಳಿಸಿದರೆ ಆ ಮಾಡಗಳು ಕರಗಿ ಕರುಣಿಸುತ್ತವೆಂದು ಯಾರೋ ಹಿರಿಯ ಹೇಳಿದರೆ ಆಗಲಿ ಬಿಡೆಂದು ಶಿವಮೊಗ್ಗದ ಕಡೆಯಿಂದ ಕಲಾ ಕಾರರನ್ನು ಕರೆಕಳಿಸಿದನು. ರಾತ್ರಿಯೆಲ್ಲಾ ಮಾಯವ್ವ ತಾಯಿಗೆ ಕಾವ್ಯದ ರಸವನ್ನು ಉಣಿಸತೊಡಗಿದನು.
ಅಳಿದುಳಿದವರು ಕೂಡಿ ಮಳೆಯ ಹಾಡುಗಳ ಹಾಡುತಿದ್ದಾರೆ.
“ ಯಾತಕ್ಕೆ ಮಳೆ ಹೋದವೋ ಶಿವ ಶಿವಾ
ಲೋಕ ತಲ್ಲಣಿಸುತಾವೋ ಶಿವ ಶಿವಾ…
ಬೇಕಿಲ್ಲಾದಿದ್ದರೆ ಬೆಂಕಿಯ ಮಳೆ ಸುರಿದು
ಉರಿಸಿ ಕೊಲ್ಲಲು ಬಾರದೇ.
ಹೊಟ್ಟೆಗೆ ಅನ್ನ ಇಲ್ಲದಲೆ
ನಡೆದರೆ ಜೋಲಿ ಹೊಡೆಯುತಲೆ
ಪಟ್ಟದಾನೆಯಂತ ಸ್ತ್ರೀಯಾರು ಸೊರಗಿ
ಸೀರೆ ನಿಲ್ಲೋದಿಲ್ಲ ಸೊಂಟಾದ ಮೇಲೆ.
ಹಸುಗೂಸು ಹಸುವಿಗೆ ತಾಲದೆಲೆ
ಅಳುತಾವೆ ರೊಟ್ಟಿ ಕೇಳುತಲೇ
ಹಡೆದ ಬಾಣಂತಿಗೆ ಅನ್ನವು ಇಲ್ಲದಲೆ
ಏರುತಾವೆ ಮೊಳಕೈಗೆ ಬಳೆ.
ಒಕ್ಕಾಲು ಮಕ್ಕಳಂತೆ
ಅವರಿನ್ನು ಮಕ್ಕಳನು ಮಾರುಂಡರು
ಮಕ್ಕಳನು ಮಾರುಂಡು ರೊಕ್ಕವನು ಮಾಡುತಾರೆ
ಮುಕ್ಕಣ್ಣ ಮಳೆ ಕರುಣಿಸೋ..
ಸ್ತ್ರೀಯರು ಅಳುತ್ತಿದ್ದಾರೆ. ಹಳ್ಳಿ ಜನರು ಮುತ್ತಿಕೊಳ್ಳುತಿದ್ದಾರೆ. ಬಂಗಾರದಂತ ಮಕ್ಕಳನ್ನು ಮಾರುವುದೇಗೆ ಎಂದು , ಅಂತ ಘಳಿಗೆ ತಂದ ಮಳೆರಾಯನಿಗೆ ತಾಯಂದಿರು ಬರಕ್ಕೆ ಶಪಿಸುತಿದ್ದಾರೆ. ಇದನ್ನು ಕಂಡ ಪರಶಿವನಿಗೆ ಬಾಯಿ ಕಟ್ಟಿತು. ಕಾಲು, ಕೈಗಳು ಬಿಗಿಯಲಾರಂಭಿಸಿದವು. ನಾಟಿ ವೈದ್ಯರು ಬಂದು ಹಸಿರು ಸೊಪ್ಪಿನ ರಸ ಹಿಂಡಿ ಕೂಡಿಸಿದರು. ಹಾಡು ಕಾವ್ಯಗಳು ಮಧ್ಯದಲ್ಲೇ ನಿಂತು ಹೋದವು.
ಆ ದಿನ ಮೊದ ಮೊದಲು ಪರಶಿವನಿಗೆ ಸ್ವಲ್ಪ ಸ್ವಲ್ಪ ಮತಿ ತಪ್ಪುವುದು ಶುರುವಾಯಿತು. ಹುಚ್ಚು ಹುಚ್ಚಾಗಿ ಮಾತಾಡುವುದು…. ವಿಚಿತ್ರವಾಗಿ ನಗುವುದು..ಅಳುವುದು….ಆಕಾಶಕ್ಕೆ ತಿರುಗಿ ಉಗಿವುದು… ಈ ರ‍್ತನೆಯನ್ನು ನೋಡಿದವರಿಗೆ ಮನವೆಲ್ಲಾ ನೊಂದಿತು.
ಬಂಗಾರದಂತಹ ಮನೆಯ ನಡುಗಂಬ ಕುಸಿದು ಬಿದ್ದಾಗ, ಭೂಮಿಗಳೆಲ್ಲಾ ಪಾಳು ಬಿದ್ದಾಗ ವೀರಶಿವನನ್ನು ನೋಡಿಕೊಳ್ಳರ‍್ಯಾರೂ ಇಲ್ಲದಾದರು. ಕಾಲದೊಂದಿಗೆ ಆತನ ವಯಸ್ಸೂ ಕರಗಿ ಹೋಗುತ್ತಿದೆ. ಪ್ರಾಯ ಹಾರಿ ಹೋಗಿದೆ.
ಮನುಷ್ಯನೇನೂ ಕುಗ್ಗಲಿಲ್ಲ ಆದರೂ ಆಗಾಗ ಬಿದಿರುಕೋಲು ಹಿಡಕೊಂಡು ಊರೊಳಗೆ ಕಾಣಿಸುತಿರುತ್ತಲೇ ಇರುತ್ತಾನೆ. ಆದರೂ ಆ ಮನುಷ್ಯ ಸುಮ್ಮನಿರುತಾನಾ…
***
ಬೆಳಗಾದಗಿಂದಲೂ ಬೆಳ್ಳನೆಯ ಮೋಡಗಳನ್ನು ಬೈಯುತ್ತಲೇ ಇದ್ದವನು ಈಗ ಹೊರಟಿದ್ದಾನೆ.ವೀರಾಪುರದ ಬಳಿಯ ಕಾಕಿ ಚಣ್ಣದ ಎಲ್ಲಜ್ಜನನ್ನು ಕಲೆತು ಅಂಜನ ಹಾಕಿ ನೋಡು ಎಂದನು. ಚಿನ್ನದ ಹಗರಿ ನದಿ ಕತೆಯೇನೋ. ಆತ ನೋಡಿ ಹೇಳಿದನು.” ನೆಲದ ಕೆಳಗಿನಿಂದ ಆಕಾಶದ ಮೋಡದ ತನಕ ಅರಿಷ್ಟವು ಸುತ್ತಿಕೊಂಡಿದೆ. ದೊಡ್ಡ ಬಲಿದಾನ ನಡೆಯದ ಹೊರತು ಇದು ಹೋಗದು. “ ಹೌದೌದು. ಹುಣ್ಣಿಮೆ ದಿನವೂ ಮಾಯವ್ವ ತಾಯಿ ಮೈದುಂಬಿ ಇದೇ ಮಾತೇಳಿದಳು.” ಎನ್ನುತ್ತಾ ಜೋರು ಜೋರಾಗಿ ನಡೆದು ಮಾಯಮ್ಮ ದೇವಿ ಗುಡಿಯ ಬಳಿಗೆ ಬಂದನು. ವಿಗ್ರಹಕ್ಕೆ ಹತ್ತಿದ ಮಸಿಗುಡ್ಡೆಯನ್ನು ತೆಗೆದು ಹಾಕಿದನು. ಹರಿಷಿಣ ಕುಂಕುಮಗಳನ್ನು ಹಚ್ಚಿ ಹೂಗಳನ್ನು ಏರಿಸಿ ಪೂಜೆಗಳನ್ನು ಮಾಡಿದನು. ಗುಡಿಯೊಳಗೆ ಸೇರಿಕೊಂಡ ಬಾವಲಿಗಳನ್ನು ಓಡಿಸಿದನು. ಕಸಕಡ್ಡಿ ,ಮಲಿನಗಳನ್ನೆಲ್ಲಾ ತೆಗೆದು ದಿಬ್ಬದ ಮೇಲೆ ಒಗೆದನು. ಬಾಯಿಗೆ ಬಂದ ಮಂತ್ರಗಳೇನೋ ಆ ತಾಯಿಯ ಮುಂದೆ ಕೂತು ಹೇಳಿದನು. ಹಾಡಿದನು. ಸಾಷ್ಟಾಂಗ ನಮಸ್ಕಾರಗಳನ್ನು ಮಾಡಿದನು. ಅತ್ತನು. ರಾತ್ರಿಯೆಲ್ಲಾ ಆ ತಾಯಿಯ ವಿಗ್ರಹದ ಬಳಿಯೇ ಕೂತು ಪ್ರರ‍್ಥಿಸಿದನು. ಬೆಳ್ಳಿ ಮೂಡುವ ವೇಳೆಗೆ ಯಾವುದೋ ರಹಸ್ಯವನ್ನು ಕಂಡು ಹಿಡಿದವನಂತೆ ಪರಶಿವನ ಸಂಭ್ರಮದಿಂದ ಊರಿನೊಳಗೆ ಬಂದನು.
“ ಇನ್ನ ಇರಲ್ಲ ಬಿಡು… ಈ ಬರಗಾಲವನ್ನ ಅವ್ನವೌನ್‌ ಅದರ ಹೆಣ ನೋಡ್ತಾನಿ” ಎಂದು ಊರೆಲ್ಲಾ ತಿರುಗುತ್ತಾ ಹೇಳಿದನು. ಜನರೆಲ್ಲಾ ಈ ಹುಚ್ಚು ಮಾತುಗಳನ್ನ ಆಶ್ರ‍್ಯದಿಂದ ಕೇಳಿದರು.
ಬಿದಿರು ಕೋಲನ್ನು ಪಕ್ಕಕ್ಕೆ ಬಿಸಾಕಿ ಮಾಯಮ್ಮ ತಾಯಿ ದೇವರ ಗುಡಿ ಮುಂದೆ ಆ ದೇವಿಗೆ ಧಿಡನಮಸ್ಕಾರ ಮಾಡಿದನು. ಅಂಗೇ ಹೊರ ಹೊಂಟನು… ಎಲ್ಲಿಗೆ ಸಿದ್ದಯ್ಯನ ಗುಡ್ಡದ ಮೇಲಕ್ಕೆ. ರ‍್ಮಾನುಷವಾಗಿ ಒಣಗಿ ಬೀಳು ಬಿದ್ದಿರುವ ಭೂಮಿಗಳು. ಕೆಂಪು ಧೂಳಿನಿಂದ ಸುತ್ತೂ ತಿರುಗಿ ಬರುತ್ತಲಿದೆ. ಏನು ಧೂಳಿನ ದೆವ್ವ ಗಾಳಿ. ಹಾಗೇ ಮುಂದಕ್ಕೆ ಸಾಗಿದನು. ಒಣಗಿದ ಕೆರೆಯ ಬಳಿ ನಿಂತು ಸುತ್ತೂ ಮಾಯಮ್ಮ ತಾಯಿಯನ್ನ ಬಿಡದಂತೆ ಕಂಡನು. ದುಃಖಿಸಿದನು. ದೂರದಲ್ಲಿ ಊರ ಜನರು ಓಡುತ್ತಾ ಇತ್ತ ಕಡೆಗೇ ಬರುತಿದ್ದಾರೆ.
ರಾತ್ರಿಯೆಲ್ಲಾ ಕುಳಿತು ಮಸೆದು ಇಟ್ಟ ರ‍್ಧಚಂದ್ರಾಕಾರದ ಗಂಡು ಗೊಡಲಿಗೆ ಮುತ್ತಿಟ್ಟನು. ನೆಲದ ಮಣ್ಣನ್ನು ತೆಗೆದುಕೊಂಡು ಕಣ್ಣಿಗೆ ತೀಡಿಕೊಂಡನು. “ ನಮಗೇಕೆ ತಾಯಿ ಈ ನರಕ. ಆ ಕಡಿಗೆ ಎಲ್ಲರನ್ನ ಸಾಯಿಸಾದರೂ ಸಾಯಿಸು. ಇಲ್ಲದಿದ್ದರೆ ಎಲ್ಲರಿಗನ್ನಾ ಹೊಟ್ಟೆತುಂಬಿಸು. ನಡುವಿನ ಈ ಬರಗಾಲವೇಕೆ” ಕೈಯೊಳಗೆ ಉಳಿದ ಮಣ್ಣನ್ನು ನೆಲಕ್ಕೆ ಹಾಕಿದನು.
“ ನನ್ನ ಪ್ರಾಣ ತಗಂಡನ್ನಾ ಶಾಂತವಾಗಿ ನಾಲ್ಕು ಚುಕ್ಕೆಗಳ ಕಣ್ಣೀರ ಹನಿಸು… ಎನ್ನುತ್ತಾ ಕೈಯೊಳಗಿನ ಗಂಡಗೊಡಲಿಯನ್ನ ಬಲವಾಗಿ ಗಿರ ಗಿರನೇ ತಿರುಗಿಸಿ ಮುಗಿಲ ಕಡೆಗೆ ಎಸೆದನು ಅದು ತಿರುಗುತ್ತಾ ತಿರುಗುತ್ತಾ ಕೆಳಕ್ಕೆ ಬರುತ್ತಿದೆ…ಬರುತ್ತಿದೆ..ಬರೋ ಕಡೆಗೇ ಶಿರ ಬಾಗಿಸಿದನು ವೀರ ಶಿವ. ತಲೆ ಬಾಗಿಸಿದವನನ್ನ ಪಕ್ಕಕ್ಕೆ ಎಳೆದುಕೊಂಡರು ಊರ ಜನರು.
“ ಬಿಡ್ರೋ… ಬಿಡ್ರೋ…” ಅಂತ ಬಿಡಿಸಿಕೊಂಡನು ವೀರಶಿವ.
ಮೇಲಿಂದ ಬೀಳುತಿದ್ದ ಗಂಡು ಗೊಡಲಿ ನೆಲದ ಮಣ್ಣಲ್ಲಿ ನಾಟಿಕೊಂಡಿತು.
“ ಏನು ಸ್ವಾಮಿ ಹಿಂಗ ಮಾಡಿದಿರಿ” ಜನರೊಳಗಿನ ಯಾರೋ ಕೇಳಿದರು.
“ ಸಾಯಲು ಬಿಡ್ರಿ ನನ್ನನ್ನು ಸಾಯಲು ಬಿಡ್ರಿ” ನಿಮಗೆ ಮಳೆ ರ‍್ತಾವು. ನೀವು ಸುಖವಾಗಿರುತ್ತೀರಿ..” ದುಃಖದಿಂದಲೇ ಹೇಳುತಿದ್ದಾನೆ.
“ ಸತ್ತರೇ ಮಳೆ ಬರುತಾದ ಅಂದ್ರ ದಿನಕ್ಕೊಬ್ಬರು ಸಾಯುತಿಲ್ಲವೇ ಸ್ವಾಮಿ. ಸಾವೇ ಸಮಾಧಾನವಾ…” ಎಂದು ಹೇಳಿದ ಜನರೊಳಗಿನ ಹಿರೀಕ.
“ ಮಾಯಮ್ಮ ತಾಯಿಗೆ ಕರುಣೆ ಹುಟ್ಟಿದರೆ ಈಗಲೇ ಮಳೆ ಬರುತ್ತದೆ. ನಾವ್ಯಾಕೆ ಪ್ರಾಣ ಕಳಕೋ ಬೇಕು. ಯಾರದೋ ಹೆಣ್ಣು ಧ್ವನಿ ಕೇಳುತ್ತಿದೆ.
ಓ… ತನೇನು ಮಾಡುತಿದ್ದೇನೆ. ಯಾಕೆ ಹೀಗೆ ರ‍್ತಿಸುತಿದ್ದೇನೆ. ಇಲ್ಲ. ನಾನು ಜನರಿಗಾಗಿ ವೀರಶಿವನಾಗಿಯೇ ಬದುಕಬೇಕು. ಜನರಿಗಾಗಿ ಬದುಕಬೇಕು. ಊರಿಗಾಗಿ ಬದುಕಬೇಕು. ಕಾಲ ಕೆಳಗೆ ತಣ್ಣನೆಯ ತಂಪು…ತಣ್ಣಗೆ ತಂಪಾದ ಸಣ್ಣನೆಯ ಅನುಭವ… ನೀರ ತೇವ…ಭೂಮಿ ಬಿರಿಯಿತು. ಭೂಮಿ ಉರಿಯಿತು. ಮುಗಿಲು ಬೆದರಿತು.
ಕವಿದುಕೊಂಡ ಕಪ್ಪು ಮೋಡಗಳು ಒಂದಕ್ಕೊಂದು ತಿವಿದುಕೊಂಡು ಅಪ್ಪಳಿಸಿದವು. ಮಿಂಚು ಮಿಂಚು ಹೆಣೆದುಕೊಂಡು ಬೆಂಕಿ ಬೆಳಗಿದವು. ಗುಡುಗು ಸಿಡಿಲು ಸಿಡಿದುಕೊಂಡು ಬೆಂಕಿ ಉಗಿದವು. ಆ ಬಿಸಿಗೆ ಕಪ್ಪು ಮೋಡಗಳು ಕದಲಿ ಕೆಳಗಿಳಿದವು. ಎಲ್ಲಿದ್ದವೋ ಅಲ್ಲೇ. ಎಲ್ಲಿ ನಿಂತ ಮೋಡ ಅಲ್ಲೇ ಹೃದಯವನ್ನು ತೆರೆದು ಕಣ್ಣೀರು ಸುರಿಸಿದಂತಹ ಹನಿಗಳು.
ಒಂದರ ನಂತರ ಒಂದು ನೆಲಕ್ಕೆ ಹಾರಿ ಹಾರಿ ಬರುತ್ತಲಿವೆ ಮಳೆ…ಮಳೆ..ಸುರಿಯುತ್ತಲೇ ಹೋಯಿತು. ಹಗಲೂ ಇರುಳು. ಹೊಳೆಗಳು ತುಂಬಿ ಹೊರಳತೊಡಗಿದವು.
ತಗ್ಗು ಹಳ್ಳ ದಿನ್ನೆಗಳೆಲ್ಲಾ ನೀರು…ನೀರು …ನೀರು.
ಎತ್ತ ನೋಡಿದರೂ ನೀರು… ಕರೆ ಕೋಡಿ ಬೀಳುತ್ತಿದೆ.
ತಾಯಿ ಮಹಾತಾಯಿ.ಮಾಯಮ್ಮ ತಾಯಿ ಹರಿಯುತ್ತಿದ್ದಾಳೆ.
ಚಿನ್ನದ ಹಗರಿಯಾಗಿ ಹರಿಯುತಿದ್ದಾಳೆ. ಪ್ರವಾಹವಾಗಿ ಉಕ್ಕುತಿದ್ದಾಳೆ.
ಹಸಿರಾಗಿ ನಗುತ್ತಾ ಹಾಡುತಿದ್ದಾಳೆ.
ಒಣಗಿದ ಬೇರುಗಳಿಗೆ ಉಸಿರು ಬಂದಿತು.
ಬಾಡಿದ ಎಲೆಗಳಿಗೆ ಪ್ರಾಣ ಬಂದಿದೆ… ಬಂದಿದೆ …ಬಂದಿದೆ.
ಊರಿಗೆ ಉಸಿರು ಬಂದಿದೆ. ಊರು ಹಸಿರ ಮರವಾಗಿದೆ.
ಪಕ್ಷಿಗಳ ಗೂಡಾಗಿದೆ…ಸುಗ್ಗಿಯ ನೆಲವಾಗಿದೆ… ಹಾಡುಗಳ ಕಣವಾಗಿದೆ…ಜಾತ್ರೆಯ ನದಿಯಾಗಿದೆ….ಮಾಯಮ್ಮ ತಾಯಿಯ ಬೆಳ್ಳಿ ಮುಖವಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಆತ್ಮಕತೆ | ಕೃಷ್ಣಪ್ಪನವರ ನಿಧನ : (09.06.1938 – 30.04.1997)

Published

on

~ ರುದ್ರಪ್ಪ ಹನಗವಾಡಿ

ದ್ರಾವತಿಯಿಂದ ಬೆಂಗಳೂರಿಗೆ ಬಂದ ಕೃಷ್ಣಪ್ಪನವರು ಬಹುಜನ ಸಮಾಜ ಪಕ್ಷದ ಕೆಲಸ ನಿರ್ವಹಿಸುತ್ತಿದ್ದರೂ ಅವರ ರಕ್ತಮಾಂಸ ಬಸಿದು ಕಟ್ಟಿದ ಮೂಲಸಂಘಟನೆ ಡಿಎಸ್‌ಎಸ್ ಹಲವು ಗುಂಪುಗಳಾಗಿ ಒಬ್ಬರಿಗೊಬ್ಬರು ಅನುಮಾನಗಳಿಂದ ದೂರದೂರವಾಗಿದ್ದರು. ಇವರ ಜೊತೆ ಆತ್ಮೀಯ ಹೋರಾಟಗಾರರಾಗಿದ್ದ ಅನೇಕರು ಮಾತಿಲ್ಲದೆ ಅವರವರೇ ಕೊರಗುತ್ತಿದ್ದರು.

ಶಿವಮೊಗ್ಗ ಭದ್ರಾವತಿಯಲ್ಲಿ ಕೃಷ್ಣಪ್ಪನವರಿಗೆ ಎಲ್ಲಾ ಜಾತಿಯ, ಸಾಹಿತ್ಯ ಮತ್ತು ಸಾಂಸ್ಕೃತಿಕ ನಾಯಕರ ಬೆಂಬಲ, ಡಿಎಸ್‌ಎಸ್ ನ ಎಲ್ಲ ಹೋರಾಟಗಾರರಿಗೂ ಸಿಗುತ್ತಿತ್ತು. ಬೆಂಗಳೂರಿಗೆ ಬಂದ ನಂತರ ಆದ ಬೆಳವಣಿಗೆಗಳ ಬಗ್ಗೆ ಒಂದು ರೀತಿಯ ವಿಷಾದ ತುಂಬಿದ ಭಾವ ಕೃಷ್ಣಪ್ಪನವರಲ್ಲಿ ತುಂಬಿತ್ತು. ಆದರೂ ಅವರು ಮತ್ತೆ ಇದನ್ನು ಪುನಶ್ಚೇತನಗೊಳಿಸುವ ಕರ‍್ಯದಲ್ಲಿ ಹಗಲು ರಾತ್ರಿ ರಾಜ್ಯದ ವಿವಿಧೆಡೆಗೆ ಪ್ರಯಾಣ ಮಾಡುತ್ತ ವಿವಿಧ ಜಿಲ್ಲೆಗಳಿಗೆ ಹೋಗಿ ಡಿಎಸ್ ಎಸ್ ಸಂಘಟನೆಯ ಕರ‍್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಅವರು ಡಿಎಸ್‌ಎಸ್ ಸಂಘಟನೆಯಲ್ಲಿನ ಬೆಳವಣಿಗೆಗಳ ಬಗ್ಗೆ ಮಾಡಿದ ನಿರಾಶಾ ಕಾಲದಲ್ಲಿಯೇ ಛಲಬಿಡದ ವಿಕ್ರಮನಂತೆ ದಲಿತರನ್ನೆಲ್ಲ ಪುನಃ ಸಂಘಟಿಸಿ ಪುನಶ್ಚೇತನ ಗೊಳಿಸುವ ಬಗ್ಗೆ ಅವರ ಸಹಪಾಠಿ ಆರ್. ನಾಗರಾಜ್, ಅರ್ಕೇಶ್ ಮತ್ತು ನಾನು ಅವರ ಮನೆಯಲ್ಲಿ ಸೇರಿದಾಗ ಚರ್ಚಿಸುತ್ತಿದ್ದರು. ಮೈಸೂರಿನ ಮಹಾದೇವ ಬೆಂಗಳೂರಿನ ಸಿದ್ಧಲಿಂಗಯ್ಯ ಇವರುಗಳ ಸಂಬಂಧ ಬಹಳ ದೂರ ಸರಿದಿತ್ತು. ಅದನ್ನು ಪುನಃ ಪುನಶ್ಚೇತನಗೊಳಿಸುವುದಕ್ಕೆ ಬೇಕಾದ ಶ್ರಮ ಹಾಕಲು ಮಹಾದೇವನಿಗಾಗಲೀ, ಸಿದ್ಧಲಿಂಗಯ್ಯನಿಗಾಗಲೀ ಇರಲಿಲ್ಲ. ಹಾಗಾಗಿ ಮತ್ತೆ ಏಕಾಂಗಿಯಾಗಿಯೇ ಎಲ್ಲಾಕಡೆ ಇವರೊಬ್ಬರೇ ತಿರುಗಾಡಿ ಸಂಘಟಿಸಲು ಶ್ರಮಿಸುತ್ತಿದ್ದರು.

ಈ ಯೋಜನೆಯ ಭಾಗವಾಗಿ ಆಯೋಜಿಸಿದ್ದ ಅಂಬೇಡ್ಕರ್ ರ‍್ಯಾಲಿಯಲ್ಲಿ ಭಾಗವಹಿಸಲು, ಗದಗ ಜಿಲ್ಲಾ ಕೇಂದ್ರದಲ್ಲಿ ವ್ಯವಸ್ಥೆಗೊಳಿಸಿದ ಸಭೆಗೆ ಹೋಗಿದ್ದರು. ನಾನು ಯಲಹಂಕ ಆಫೀಸಿನ ಕೆಲಸ ಮುಗಿಸಿ ಮಧ್ಯಾಹ್ನ ಊಟಕ್ಕೆ ಅವರ ಮನೆಗೆ ಹೋದಾಗ ಮೇಷ್ಟರು ಗದಗ್‌ಗೆ ಹೋದ ಸುದ್ದಿ ತಿಳಿದಿತ್ತು. ಗದಗ್‌ನಲ್ಲಿ ಕೃಷ್ಣಪ್ಪನವರ ತಂಗಿಯ ಮಗಳು ಮೈತ್ರ‍್ರಾ ಕೂಡಾ ಇದ್ದುದು, ಮೈತ್ರಾಳ ಗಂಡ ಬ್ಯಾಂಕ್‌ವೊಂದರಲ್ಲಿ ಉದ್ಯೋಗಿಯಾಗಿದ್ದು, ಸಂಘಟನೆಯ ಜೊತೆ ಅವರನ್ನೆಲ್ಲಾ ನೋಡಿಕೊಂಡು ಬರುವರೆಂದು ಮಾತಾಡಿಕೊಂಡು ನಾನು ಮಧ್ಯಾಹ್ನ ಊಟ ಮುಗಿಸಿಕೊಂಡು ಮತ್ತೆ ಆಫೀಸಿಗೆ ಹೋಗಿದ್ದೆ. ಆದರೆ ಸಂಜೆ 5ರ ವೇಳೆಗೆ ಕೃಷ್ಣಪ್ಪನವರು ಗದಗ್‌ನಲ್ಲಿ ಹುಷಾರಿಲ್ಲದೆ ಆಸ್ಪತ್ರೆಯಲ್ಲಿರುವುದಾಗಿಯೂ ಗದಗ್‌ನಿಂದ ಫೋನ್ ಬಂದಿರುವುದಾಗಿಯೂ ನನ್ನ ಆಫೀಸಿಗೆ ಮಗಳು ಶಾಲಿನಿ ಫೋನ್ ಮಾಡಿದ್ದಳು. ಇಂದಿರಾ ಆಫೀಸ್ ಮುಗಿಸಿ ಮನೆಗೆ ಬರುವ ವೇಳೆಗೆ ನನ್ನ ಹೆಂಡತಿ ಗಾಯತ್ರಿಗೂ ಫೋನ್ ಮಾಡಿ ತಿಳಿಸಿದೆ. ಅರ್ಜೆಂಟಾಗಿ ನಾವು ಎಲ್ಲರೂ ಗದಗ್‌ಗೆ ಹೋಗಿ ಮೇಷ್ಟçರನ್ನ ಕರೆದುಕೊಂಡು ಬಂದು ಇಲ್ಲಿಯೇ ಶುಶ್ರೂಷೆ ಕೊಡಿಸುವ ಎಂದು ಮಾತಾಡಿಕೊಂಡು ರಾತ್ರಿಯೇ ಬೆಂಗಳೂರಿನಿಂದ ಹೊರಟು ಮಧ್ಯೆ ರಾತ್ರಿ ನಮ್ಮೂರ ಬಳಿ ನಿಂತು ನಮ್ಮ ಊರಿನವರಿಗೂ ವಿಷಯ ತಿಳಿಸಿ ಬೆಳಿಗ್ಗೆ 7 ಘಂಟೆಗೆ ಗದಗ ತಲುಪಿದೆವು.

ಬೆಂಗಳೂರು ಬಿಟ್ಟು ಹೊರಟಾಗ ಅವರ ಆರೋಗ್ಯದಲ್ಲಿನ ಸಮಸ್ಯೆ ಸ್ಪಷ್ಟವಾಗಿ ಏನೆಂದು ತಿಳಿಯದಿದ್ದರೂ-ಅವರ ಬಿಡುವಿಲ್ಲದ ತಿರುಗಾಟಕ್ಕೆ ತಡೆಹಾಕಿ ಆರೋಗ್ಯದ ಕಡೆ ಗಮನ ನೀಡಲು ಏನೆಲ್ಲ ಕ್ರಮ ಜರುಗಿಸಬೇಕೆಂದು ನನ್ನ ಹೆಂಡತಿ ಗಾಯತ್ರಿ ಇಂದಿರಾಗೆ ಸಲಹೆ ನೀಡುತ್ತಿದ್ದಳು. ಕೃಷ್ಣಪ್ಪನವರ ಆರೋಗ್ಯ ಕೆಡಿಸುವಂತಹ ಅಭ್ಯಾಸಗಳು ಅವರಿಗೆ ಮೊದಲಿನಿಂದಲೂ ಇರಲಿಲ್ಲ. ಡಿಎಸ್‌ಎಸ್‌ನ ಸಮಾವೇಶಗಳಲ್ಲೂ ಕೂಡ ಎಲ್ಲರಿಗೂ ಸ್ವಚ್ಛತೆ, ವ್ಯಾಯಾಮ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರಭಾವಿಸುತ್ತಿದ್ದರು. ಕೊಳಕುತನ, ಸೋಮಾರಿತನ ಬಾಲ್ಯದಿಂದಲೂ ಕೃಷ್ಣಪ್ಪನವರ ಬಳಿ ಸುಳಿದಿರಲಿಲ್ಲ. ಊಟ ಉಪಚಾರಗಳಲ್ಲೂ ಶಿಸ್ತುಬದ್ದರಾಗಿದ್ದು ಅವರಿಗೆ ಅನಾರೋಗ್ಯ ಎಂಬ ಮಾತು ಕೇಳಿರಲಿಲ್ಲ. ಈ ಕಾರಣದಿಂದ ಏನಾದರೂ ಆಗಿರಲಿ ಬಂದ ನಂತರ ಅವರನ್ನು ಹೆಚ್ಚು ತಿರುಗಾಡಲು ಬಿಡಬಾರದೆಂಬ ತೀರ್ಮಾನ ಮಾಡಿಕೊಂಡು ನಾವೆಲ್ಲ ಗದಗ್ ಕಡೆ ಹೊರಟಿದ್ದೆವು.

ಹೋದಾಕ್ಷಣ ಅವರನ್ನು ಐಸಿಯುನಲ್ಲಿ ನಾವು ಮೂವರೂ ಹೋಗಿ ನೋಡಿದೆವು. ಕಣ್ಣು ಬಿಟ್ಟು ನೋಡಿದ್ದನ್ನು ಬಿಟ್ಟರೆ ಬೇರೇನೂ ಮಾತಾಡಲಿಲ್ಲ. ಇಂತಹ ಪರಿಸ್ಥಿತಿಯನ್ನು ನಾವ್ಯಾರು ನಿರೀಕ್ಷಿಸಿರಲಿಲ್ಲ. ದಾರಿಯುದ್ದಕ್ಕೂ ಯೋಚಿಸಿಕೊಂಡು ಬಂದದ್ದಕ್ಕೂ ಇಲ್ಲಿನ ಪರಿಸ್ಥಿತಿ ನೋಡಿ ನಾವೆಲ್ಲಾ ಗರಬಡಿದಂತಾಗಿ ಕೂತಿದ್ದೆವು. ಗಾಯತ್ರಿ, ಇಂದಿರಾ ಮಾತಾಡದೆ ಉಸಿರಾಡುತ್ತಿದ್ದರು. ಮತ್ತೆ 10-15 ನಿಮಿಷಗಳಲ್ಲಿ ಪರಿಸ್ಥಿತಿ ಹದಗೆಡುತ್ತಿದೆ ಎಂದು ವಾರ್ಡ್ ಬಾಯ್ ಹೇಳಿದಾಗ ನಾವೆಲ್ಲ ಒಳಗೆ ಹೋದೆವು. ಬಂದ ಡಾಕ್ಟರ್ ನಮ್ಮನ್ನೆಲ್ಲ ಮತ್ತೆ ಹೊರಹೋಗಲು ಹೇಳಿ ಶುಶ್ರೂಷೆ ಮಾಡುತ್ತಿದ್ದರು. ಏನಾಯಿತು, ಹೇಗಾಯಿತು ಎಂದು ನಾವುಗಳೆಲ್ಲ ಸಾವರಿಸಿಕೊಳ್ಳುತ್ತಿರುವಾಗಲೇ ಮೇಷ್ಟರು ಕೊನೆಯುಸಿರೆಳೆದಿದ್ದರು. ಅಂದು ದಿನಾಂಕ 30-4-1997 ಬೆಳಗಿನ 8.30 ಇರಬಹುದು. ನಾವು ಬಂದು ನೋಡಿ ನಂತರ ಫ್ರೆಶ್ ಆಗಿ ನಂತರ ಏನು ಮಾಡುವುದು ಎಂದು ಯೋಚಿಸುವ ಮುನ್ನ ಇದೆಲ್ಲ ಆಗಿ ಹೋಗಿತ್ತು.

ಈಚೆ ಬಂದ ನನಗೆ ಸಾವನ್ನ ಹೀಗೆ ನೇರವಾಗಿ ಎದುರಿಸಿದ ಸಂದರ್ಭಗಳು ಇರಲಿಲ್ಲ. ಮುಂದಿನ ವಿಚಾರವನ್ನು ಯೋಚನೆ ಮಾಡುತ್ತಲೇ ಹತ್ತಿರದಲ್ಲಿದ್ದ ಟೆಲಿಫೋನ್ ಬೂತ್‌ನಿಂದ ಮೈಸೂರಿನಲ್ಲಿದ್ದ ಮಗಳು ಸೀಮಾ ಮತ್ತು ಬೆಂಗಳೂರಿನಲ್ಲಿದ್ದ ಶಾಲುಗೆ ಹಾಗೂ ಬೆಂಗಳೂರಿನ ವಿಧಾನಸೌಧದಲ್ಲಿ ಪಿಎಸ್ ಆಗಿದ್ದ ಬಸವಣ್ಯಪ್ಪನಿಗೆ ತಿಳಿಸಿ ಎಲ್ಲಾ ಡಿಎಸ್‌ಎಸ್ ಸ್ನೇಹಿತರಿಗೆ ತಿಳಿಸಲು ಹೇಳಿದೆ. ಹರಿಹರದಲ್ಲಿನ ಮೇಷ್ಟರ ತಮ್ಮಂದಿರಿಗೆ ಸುದ್ದಿ ತಿಳಿಸಿ ಬಂದೆ. ಸಿರಸಿಯಲ್ಲಿದ್ದ ಮೇಷ್ಟರ ಇನ್ನೊಬ್ಬ ತಮ್ಮ ಮಾರುತಿಗೆ ತಿಳಿಸಿ ಮೇಷ್ಟರ ಪಾರ್ಥಿವ ಶರೀರವನ್ನು ಹರಿಹರಕ್ಕೆ ತೆಗೆದುಕೊಂಡು ಹೋಗುವ ಬಗ್ಗೆ ವ್ಯವಸ್ಥೆ ಮಾಡಿದೆ. ಆಸ್ಪತ್ರೆಯ ರೀತಿನೀತಿಗಳನ್ನು ಮುಗಿಸಿ-ಸಮಾಧಿಯಾಗುವುದು ಇನ್ನೂ ಒಂದು ದಿನ ತಡವಾಗುವುದರಿಂದ ದೇಹಕ್ಕೆ ಬೇಕಾದ ರೀತಿಯಲ್ಲಿ ಇಂಜೆಕ್ಷನ್ ಕೊಡಿಸಿ ಸುಮಾರು 3-4 ಗಂಟೆಗೆ ಗದಗ ಬಿಟ್ಟು ಹರಿಹರ ಟೌನ್‌ನಲ್ಲಿದ್ದ ಮೇಷ್ಟರ ಮನೆಗೆ ಸಂಜೆ 7 ಗಂಟೆಯ ಸಮಯಕ್ಕೆ ತಲುಪಿದ್ದೆವು.

ರಾತ್ರಿ ಭಜನೆ ಮಾಡಲು ವ್ಯವಸ್ಥೆ ಮಾಡಿ ನಂತರ ಮೇಷ್ಟರ ಸಂಸ್ಕಾರ ಎಲ್ಲಿ ಏನು ಎಂದು ಅವರ ತಮ್ಮಂದಿರು ತಂಗಿಯರ ಜೊತೆ ಮಾತಾಡಿದಾಗ ಅದೆಲ್ಲ ತುಂಗಭದ್ರಾ ನದಿಯ ದಡದಲ್ಲಿ ಮಾಡುವುದು ಎಂದು ತಿಳಿಸಿದರು. ಈ ಬಗ್ಗೆ ದುಃಖದಲ್ಲಿ ಮುಳುಗಿದ್ದ ಇಂದಿರಾ ಜೊತೆ ಏನೂ ಮಾತಾಡುವ ಸ್ಥಿತಿಯಲ್ಲಿರಲಿಲ್ಲ. ಇದೇ ಚಿಂತೆಯಲ್ಲಿ ನಾನು ಮೂರು ಕಿ.ಮೀ. ದೂರದ ನಮ್ಮ ಊರಿಗೆ ಬಂದಿಳಿದೆ. ರಾತ್ರಿಯಲ್ಲಿ ನಿದ್ದೆ ಬಾರದೆ ಒದ್ದಾಡಿದೆ. ಹರಿಹರ ತುಂಗಾ ನದಿ ದಡದಲ್ಲಿ ಸಂಸ್ಕಾರ ಮಾಡುವ ಅವರ ನಿರ್ಧಾರವನ್ನು ತಿಳಿದು ಮನಸ್ಸಿಗೆ ಒಂದು ಚಿಂತೆಯಾಯಿತು. ಇಷ್ಟೊಂದು ಹೋರಾಟದ ಜೀವನ ನಡೆಸಿದ ಮನುಷ್ಯನ ನೆನಪು ನಾಳೆಗೆ ಭೌತಿಕವಾಗಿ ಕೊನೆಯಾಗುವ ಬಗ್ಗೆ ಚಿಂತೆಯಾಯಿತು. ನಾನು ನಮ್ಮ ಅಣ್ಣ ಅವ್ವ ಇವರ ಜೊತೆ ಚರ್ಚಿಸಿ-ನಮ್ಮ ತೋಟದ ಜಮೀನಿನಲ್ಲಿ ಸಮಾಧಿ ಮಾಡಿದರೆ ಹೇಗೆ ಎಂದು ಯೋಚಿಸಿ, ಬೆಳಿಗ್ಗೆ ಈ ನನ್ನ ಯೋಚನೆಯನ್ನು ಮೇಷ್ಟರ ತಮ್ಮ ಮಾರುತಿ ಬಳಿ ಚರ್ಚಿಸಿ ನಂತರ ಎಲ್ಲ ಅವರ ಸಂಬಂಧಿಗಳಿಗೂ ವಿಚಾರಿಸಿದೆ. ಅವರೆಲ್ಲರೂ ನನ್ನ ಸಲಹೆಗೆ ಒಪ್ಪಿದರು. ಅದರಂತೆ ಎಲ್ಲಾ ಡಿಎಸ್‌ಎಸ್‌ನ ಕರ‍್ಯಕರ್ತರಿಗೆ, ಅಧ್ಯಾಪಕರಿಗೆ, ರಾಜಕಾರಣಿಗಳಿಗೆ ತಿಳಿಸಿದೆವು. ಹರಿಹರದಿಂದ ನಮ್ಮೂರಿನಿಂದಲೇ ತರಿಸಿದ್ದ ಟ್ರಾಕ್ಟರ್‌ನಲ್ಲಿ ನಮ್ಮ ತೋಟದಲ್ಲಿ ಸುಮಾರು 4 ಗಂಟೆಯ ಸಮಯಕ್ಕೆ 1-5-1997ರಂದು ಕೃಷ್ಣಪ್ಪನವರ ಅಂತಿಮ ಕಾರ್ಯವನ್ನು ಮಾಡಿದೆವು. ಅಂತಿಮ ದರ್ಶನ ಪಡೆಯಲು ರಾಜ್ಯದಾದ್ಯಂತ ಪ್ರಗತಿಪರರು, ಡಿಎಸ್‌ಎಸ್ ಕರ‍್ಯಕರ್ತರು, ರಾಜಕಾರಣಿಗಳ ದಂಡೇ ಆಗಮಿಸಿತ್ತು. ಸಮಾಧಿಯಾದ ನಂತರ ಡಿಎಸ್‌ಎಸ್‌ನ ಎಲ್ಲಾ ಬಣಗಳ ಕರ‍್ಯಕರ್ತರೂ ಕೃಷ್ಣಪ್ಪನವರ ಹೋರಾಟದ ಆಶಯಗಳನ್ನು ಈಡೇರಿಸಲು ಅಂದು ಪ್ರಮಾಣ ಮಾಡುವ ಪ್ರತಿಜ್ಞೆ ಮಾಡಿ ನಿರ್ಗಮಿಸಿದ್ದರು.

1997ರಲ್ಲಿ ಕೃಷ್ಣಪ್ಪನವರ ನಿರ್ಗಮನದ ನಂತರ ಕರ್ನಾಟಕದ ದಲಿತ ಹೋರಾಟದ ಸಮಗ್ರ ಚಿತ್ರಣ ಹಲವು ಟಿಸಿಲುಗಳಾಗಿ ಹೊರಹೊಮ್ಮಿದ್ದವು. ನನ್ನ ಸರ್ಕಾರಿ ನೌಕರಿಯ ಜೊತೆ ಎಲ್ಲ ಬಣಗಳಲ್ಲಿ ನನಗೆ ಬಲ್ಲವರಿದ್ದರೂ ಯಾರೊಡನೆ ಒಡನಾಡುವುದು ಎಂಬ ಪ್ರಶ್ನೆ ಮೂಡುತ್ತಿತ್ತು. ಆದರೂ ಯಾರು ಏನೇ ಕರ‍್ಯಕ್ರಮ ಮಾಡುವಾಗ ಸಹಕಾರ ನೀಡಲು ಕೋರಿದರೆ ಮುಕ್ತ ಮನಸ್ಸಿನಿಂದ ಸಹಾಯ ಮಾಡುತ್ತಿದ್ದೆ.

ಕೃಷ್ಣಪ್ಪನವರ ನಿಧನಾನಂತರ ಬಿಎಸ್‌ಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಕಾನ್ಷಿರಾಮ್ ಅವರು ಯಲಹಂಕದಲ್ಲಿದ್ದ ಕೃಷ್ಣಪ್ಪನವರ ಮನಗೆ ಬಂದು ಇಂದಿರಾ ಮತ್ತು ಅವರ ಇಬ್ಬರು ಮಕ್ಕಳು ಶಾಲಿನಿ, ಸೀಮಾ ಅವರಿಗೆ ಸಾಂತ್ವನ ಹೇಳಿದರು. ತಕ್ಷಣದ ಅಗತ್ಯಗಳಿಗೆ ಎಂಬ ಕಾರಣದಿಂದಲೋ ಏನೋ ಎರಡು ಲಕ್ಷ ರೂಪಾಯಿಗಳನ್ನು ಇಂದಿರಾ ಅವರ ಕುಟುಂಬಕ್ಕೆ ನೀಡಿದ್ದರು. ಆದರೆ ಇಂದಿರಾ ಅವರು ನನಗೀಗ ಸರ್ಕಾರಿ ನೌಕರಿ ಇರುವ ಕಾರಣ ನೀಡಿ, ಅದನ್ನು ಕೃಷ್ಣಪ್ಪನವರ ಹೆಸರಿನಲ್ಲಿ ಮುಂದೆ ಸ್ಥಾಪಿಸಿದ ಟ್ರಸ್ಟ್ನ ಹೆಸರಿನಲ್ಲಿ ನಡೆಸುವ ಕರ‍್ಯಕ್ರಮಗಳಿಗೆ ಬಳಸಿಕೊಳ್ಳಲಾಗುವುದು ಎಂದು ಹೇಳಿ ಆ ಹಣವನ್ನು ಒಪ್ಪಿಕೊಂಡಿದ್ದರು. ಅದರಂತೆ ಕಾನ್ಷಿರಾಮ್ ಅವರು ನೀಡಿದ ಹಣ, 1997ರಲ್ಲಿ ಸ್ಥಾಪಿಸಿದ ಪ್ರೊ.ಬಿ. ಕೃಷ್ಣಪ್ಪ ಟ್ರಸ್ಟ್ನಲ್ಲಿ ಮೂಲಧನವಾಗಿ ಉಳಿದಿದೆ. ಕೃಷ್ಣಪ್ಪನವರ ಆಶಯದಂತೆ ಕರ‍್ಯಕ್ರಮಗಳನ್ನು ನಿರ್ವಹಿಸಿಕೊಂಡು ಕಳೆದ 24 ವರ್ಷಗಳಿಂದ ಬರುತ್ತಿದ್ದೇವೆ.

ಕೃಷ್ಣಪ್ಪನವರು ಕಾಲವಾದ ಎರಡು ತಿಂಗಳಲ್ಲಿ ಡಿಎಸ್‌ಎಸ್‌ನ ಅವರ ಅನುಯಾಯಿಗಳಲ್ಲಿ ನಾನು ಮತ್ತು ಇಂದಿರಾ ಮನವಿ ಮಾಡಿ ಕೃಷ್ಣಪ್ಪನವರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸುವ ಬಗ್ಗೆ ಬೆಂಗಳೂರಿನಲ್ಲಿ ಪೂರ್ವಭಾವಿ ಸಭೆಯನ್ನು ಅರ್ಕೇಶ್ ಇದ್ದ ಸಿಆರ್‌ಪಿಎಫ್‌ನಲ್ಲಿನ ಒಂದು ಸಭಾಂಗಣದಲ್ಲಿ ಕರೆದಿದ್ದೆವು. ಆ ಸಭೆಗೆ ಸಾಕಷ್ಟು ಜನ ಬಾರದಿದ್ದರಿಂದ ಮತ್ತೊಂದು ಬಾರಿ ಎಲ್ಲರಿಗೂ ತಿಳಿಹೇಳಿ 9 ಅಥವಾ 11 ಜನರಿರುವ ಒಂದು ಟ್ರಸ್ಟ್ ಸ್ಥಾಪಿಸುವ ಬಗ್ಗೆ ಮತ್ತೆ ಸಭೆ ಕರೆದೆವು. ಎರಡನೇ ಸಭೆಯಲ್ಲಿ ಬಂದವರ ಅಭಿಪ್ರಾಯ ಪಡೆದು 11 ಜನರಲ್ಲಿ ದಲಿತ ಹೋರಾಟಗಾರರು, ಕೃಷ್ಣಪ್ಪನವರ ಕುಟುಂಬ ಮತ್ತು ಅವರ ಸಹಪಾಠಿಗಳನ್ನು ಸೇರಿದಂತೆ ಟ್ರಸ್ಟ್ ಸದಸ್ಯರ ಹೆಸರುಗಳನ್ನು ಅಂತಿಮಗೊಳಿಸಿದೆವು.

ನಾನು ಮತ್ತು ಇಂದಿರಾ ಮ್ಯಾನೇಜಿಂಗ್ ಟ್ರಸ್ಟಿಗಳು. ಕೃಷ್ಣಪ್ಪನವರ ಸಹಪಾಠಿಗಳಾಗಿದ್ದ ಆರ್. ನಾಗರಾಜ್ ಮತ್ತು ಕೃಷ್ಣಪ್ಪನವರ ಕಿರಿಯ ಸಹೋದರ ಬಿ. ಮಾರುತಿ, ನಮ್ಮ ಸಹೋದರ ಸಿ. ತಿಪ್ಪಣ್ಣ ಮತ್ತು ಉಳಿದಂತೆ ಡಿಎಸ್‌ಎಸ್‌ನಲ್ಲ್ಲಿದ್ದ ಕೃಷ್ಣಪ್ಪನವರ ಅನುಯಾಯಿಗಳಾದ ಚಿತ್ರದುರ್ಗದ ಜಯಣ್ಣ, ಶ್ರೀಧರ ಕಲಿವೀರ, ಮಾವಳ್ಳಿ ಶಂಕರ್, ಬಿಎಸ್‌ಪಿಯಲ್ಲಿದ್ದ ಮಾರಸಂದ್ರದ ಮುನಿಯಪ್ಪನವರ ಹೆಸರುಗಳನ್ನು ಅಂತಿಮಗೊಳಿಸಿದ್ದೆವು. ಎರಡು ಬಾರಿ ಎಲ್ಲರೂ ಸೇರಿ ನೋಂದಾಯಿಸಲು ಸಬ್ ರಿಜಿಸ್ಟಾçರ್ ಆಫೀಸಿಗೆ ಬರುವಂತೆ ದಿನಾಂಕ ನಿಗದಿ ಮಾಡಿದ್ದರೂ ಕೆಲವರು ಕೊನೆಯವರೆಗೂ ಬಾರದ ಕಾರಣ ಬಂದವರಲ್ಲಿ ಏಳು ಜನರಿರುವ ಟ್ರಸ್ಟ್ವೊಂದನ್ನು ದಿನಾಂಕ 28-11-97ರಲ್ಲಿ ಸ್ಥಾಪಿಸಿದೆವು. ಕೃಷ್ಣಪ್ಪನವರ ಆಶಯಗಳನ್ನು ಟ್ರಸ್ಟಿನ ಧ್ಯೇಯೋದ್ದೇಶಗಳಲ್ಲಿ ಉಲ್ಲೇಖಿಸಿ ನೊಂದಾಯಿಸಿದೆವು. ಅಂದಿನಿಂದ ಇಂದಿನವರೆಗೆ ಸುಮಾರು 24 ವರ್ಷಗಳಲ್ಲಿ ರಾಜ್ಯದಾದ್ಯಂತ ದಲಿತ ಹೋರಾಟಗಳಿಗೆ ಒತ್ತಾಸೆಯಾಗಿ, ಸಮಾನತೆ ಸಹೋದರತೆ ಸಾರುವ ಮಾನವೀಯ ಹೋರಾಟಗಳಲ್ಲಿ ಭಾಗವಹಿಸುತ್ತಾ, ಅಂತರ್ಜಾತಿ-ಅಂತರ್‌ಮತೀಯ ಮತ್ತು ಸರಳ ಮದುವೆಗಳನ್ನು ಮಾಡುತ್ತಾ ಜೊತೆಗೆ, ಕೃಷ್ಣಪ್ಪನವರು ಬರೆದಿದ್ದ ಹೋರಾಟದ ಕವನ ಮತ್ತು ವೈಚಾರಿಕ ಲೇಖನಗಳನ್ನು ಪ್ರಕಟಿಸಿ ಜನರಿಗೆ ತಲುಪಿಸುತ್ತಾ ಇಂದಿಗೂ ಜನಪರ ಚಳುವಳಿಗಳಲ್ಲಿ ಕೃಷ್ಣಪ್ಪ ಟ್ರಸ್ಟ್ ಸಕ್ರಿಯವಾಗಿದೆ. ಟ್ರಸ್ಟ್ನ ಕರ‍್ಯಕ್ರಮಗಳ ಭಾಗವಾದ ಕೃಷ್ಣಪ್ಪ ಸಮಾಧಿ ಸ್ಥಳ ಉದ್ಘಾಟನೆಗೆ ಬಿಎಸ್‌ಪಿಯ ಕಾನ್ಷಿರಾಮ್ ಅವರು ಹಿರಿಯ ನ್ಯಾಯವಾದಿ ಮತ್ತು ಮಾಜಿಮಂತ್ರಿಗಳಾಗಿದ್ದ ಎಲ್.ಜಿ. ಹಾವನೂರ ಅವರು, ಮಾಜಿಮಂತ್ರಿಗಳಾಗಿದ್ದ ಕಾಗೋಡು ತಿಮ್ಮಪ್ಪ ಅವರು 1997ರಲ್ಲಿ ಬಂದು ಉದ್ಘಾಟಿಸಿದ್ದರು. ಅಂದಿನಿಂದ ಇಂದಿನವರೆಗೆ ನೂರಾರು ಸಾಹಿತ್ಯ, ಸಂಸ್ಕೃತಿ, ನಾಟಕ, ಹೋರಾಟಗಳ ಸಭೆ ಸಮಾರಂಭಗಳನ್ನು ಕೃಷ್ಣಪ್ಪ ಸಮಾಧಿ ಸ್ಥಳದಲ್ಲಿ ಸಂಘಟಿಸುತ್ತಾ ಬಂದಿದೆ. ಮಂತ್ರಿಗಳು, ಮುಖ್ಯಮಂತ್ರಿಗಳು, ರಾಜ್ಯಪಾಲರಾದಿಯಾಗಿ ಜೊತೆಗೆ ನೂರಾರು ದಲಿತ ಹೋರಾಟಗಾರರು, ರಾಜಕಾರಣಿಗಳು ಅನೇಕ ಪ್ರಗತಿಪರರು, ರೈತ ಹೋರಾಟಗಾರರು ಗ್ರಾಮೀಣ ಜನರು ಸಮಾಧಿ ಸ್ಥಳದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುತ್ತಾರೆ.

2017ರಲ್ಲಿ ಸಮಾಧಿ ಸ್ಥಳದಲ್ಲಿ ಸರ್ಕಾರದ ಸಹಾಯದಿಂದ ಕೃಷ್ಣಪ್ಪ ಸ್ಮಾರಕ ಭವನ ನಿರ್ಮಿಸಿದ್ದು, ಅಲ್ಲಿ ಲೈಬ್ರರಿ ಮತ್ತು ಸ್ಮರಣಲೋಕವನ್ನು ಕೃಷ್ಣಪ್ಪನವರ ಹೋರಾಟದ ವಿವರಗಳನ್ನು ಒಳಗೊಂಡಂತೆ ಕಲೆ ಹಾಕಿದೆ. ಅನೇಕ ಪ್ರಗತಿಪರ ಕರ‍್ಯಕ್ರಮಗಳು ಜನಪರ ಗ್ರಾಮೀಣ ಜನರು ಅದರ ಸದುಪಯೋಗ ಪಡೆಯುತ್ತಿರುವುದು ಸಂತೋಷದ ಸಂಗತಿಯಾಗಿದೆ.

ಕೃಷ್ಣಪ್ಪನವರು ತೀರಿದ ಎರಡು ತಿಂಗಳಲ್ಲಿ ಯಲಹಂಕದಲ್ಲಿನ ಪ್ರಗತಿಪರರೊಡನೆ ಜೊತೆಗೂಡಿ ಕೃಷ್ಣಪ್ಪನವರ ಸ್ಮರಣ ಕರ‍್ಯಕ್ರಮ ಆಯೋಜಿಸಿದ್ದೆವು. ಆ ಸಭೆಗೆ ನಮ್ಮ ನಗರಸಭೆಯ ಸದಸ್ಯರು ಮತ್ತು ಅನೇಕ ಪ್ರಗತಿಪರರು ಕೈಜೋಡಿಸಿದ್ದರು. ಸಭೆಗೆ ಡಿಎಸ್‌ಎಸ್ ನಾಯಕರು ಮತ್ತು ಅಂದಿನ ವಿಧಾನಸಭಾ ಅಧ್ಯಕ್ಷರಾಗಿದ್ದ ಡಿ. ಮಂಜುನಾಥ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕೃಷ್ಣಪ್ಪನವರ ಹೋರಾಟ ಮತ್ತು ತ್ಯಾಗಗಳ ಬಗ್ಗೆ ನುಡಿನಮನ ಸಲ್ಲಿಸಿದ್ದರು.

ನಮ್ಮ ಊರಿನಿಂದ ಒಂದು ದೊಡ್ಡ ದಂಡೇ ಬ್ಯಾಂಡ್‌ಸೆಟ್ ಜೊತೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಬಸವಲಿಂಗಪ್ಪನವರ ಸಮಾಧಿ ಸ್ಥಳದಿಂದ ಯಲಹಂಕದಲ್ಲಿ ನಡೆಸುತ್ತಿದ್ದ ಕೃಷ್ಣಪ್ಪನವರ ಸ್ಮರಣ ಸಮಾರಂಭದವರೆಗೆ ಮೆರವಣಿಗೆ ಮಾಡಿಕೊಂಡು ಬಂದು ಕೃಷ್ಣಪ್ಪನವರ ಬದುಕು, ಹೋರಾಟ, ಡಿಎಸ್‌ಎಸ್ ಸಂಘಟನೆಯನ್ನು ಸ್ಥಾಪಿಸಿ ಹೋರಾಟ ಮಾಡಿದ ವಿವಿಧ ವಿಷಯಗಳ ಬಗ್ಗೆ ಅಂದಿನ ಸಭೆಯಲ್ಲಿ ಭಾಗವಹಿಸಿದವರೆಲ್ಲರೂ ಮಾತನಾಡಿ ಕೃಷ್ಣಪ್ಪನವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಸಿದ್ಧಾಂತ ಮತ್ತು ಪತ್ರಿಕೋದ್ಯಮ

Published

on

  • ಹರ್ಷಕುಮಾರ್‌ ಕುಗ್ವೆ, ಪತ್ರಕರ್ತ ಮತ್ತು ಆಕ್ಟಿವಿಸ್ಟ್

ಇದು ಸುಮಾರು 2002-03ರ ಸಂದರ್ಭ. ಶಿವಮೊಗ್ಗದಲ್ಲಿ ನಾವು ಹೋರಾಟಗಳಲ್ಲಿ ಸಕ್ರಿಯವಾಗಿದ್ದ ಕಾಲ. ಒಬ್ಬ ಪತ್ರಕರ್ತ ಮಿತ್ರರೊಂದಿಗೆ ಹೀಗೇ ಚರ್ಚೆ ನಡೆಯುತ್ತಿತ್ತು. ಅವರು ಪತ್ರಿಕೋದ್ಯಮದ ನ್ಯೂಟ್ರಾಲಿಟಿ ಕುರಿತು ಮಾತಾಡುತ್ತಾ, ʼನಾವು ಪತ್ರಕರ್ತರು ನಿಮ್ಮ ರೀತಿ ಯೋಚನೆ ಮಾಡೋದಕ್ಕೆ ಆಗಲ್ಲ. ನಾವು ಯಾವತ್ತೂ ಯಾವುದೇ ಸಿದ್ಧಾಂತಕ್ಕೆ ವಾಲಿಕೊಳ್ಳದೇ ತಟಸ್ಥತೆ ಕಾಪಾಡಬೇಕಾಗುತ್ತದೆʼ ಎಂದು ಹೇಳಿದರು. ʼಅವರ ಜೊತೆ ನಾನು ವಾದಿಸಿದೆ.

ಸರ್, ಸುಳ್ಳನ್ನೇ ಬಂಡವಾಳ ಮಾಡಿಕೊಂಡ ಸಿದ್ಧಾಂತಗಳು ರಾರಾಜಿಸುವಾಗ ಸತ್ಯವನ್ನು ಹುಡುಕಲು ಸಹ ಸಿದ್ಧಾಂತದ ಸಹಾಯ ಬೇಕಾಗುತ್ತದೆ. ಯಾವ ವ್ಯಕ್ತಿಯೂ ಸಿದ್ಧಾಂತದ ಹೊರಗಾಗಿ ಇರಲು ಸಾಧ್ಯವಿಲ್ಲ. ನನಗೆ ಸಿದ್ದಾಂತವೇ ಇಲ್ಲ ಎನ್ನುವ ವ್ಯಕ್ತಿಯನ್ನು ಕೂಡಾ ಅವನಿಗೆ ತಿಳಿದೋ ತಿಳಿಯದೆಯೋ ಒಂದಲ್ಲಾ ಒಂದು ಸಿದ್ದಾಂತ ಇಲ್ಲವೇ ಹಲವು ಸಿದ್ಧಾಂತಗಳು ನಿರ್ದೇಶಿಸುತ್ತಿರುತ್ತವಲ್ಲ.. ʼ ಎಂದ ನನ್ನ ಮಾತಿಗೆ ನಮಗೆ ಪತ್ರಕರ್ತರಿಗೆ ಹಾಗೆ ಯೋಚಿಸಲು ಬರುವುದಿಲ್ಲ. ನೀವು ಎಡ ಪಂಥ ಅಂತೀರಿ, ಅವರು ಬಲಪಂಥ ಅಂತಾರೆ, ನಾವು ಇವೆರಡರ ನಡುವೆ ಸತ್ಯ ಹುಡುಕ್ತೀವಿʼ ಎಂದೆಲ್ಲಾ ಹೇಳಿದರು. ಕೊನೆಗೆ ಯಾರೂ ರಾಜಿಯಾಗಲಿಲ್ಲ.

ಇದಾಗಿ ಹದಿನೈದು ವರ್ಷಗಳ ನಂತರ, 2019ರಲ್ಲಿ ಅದೇ ಪತ್ರಕರ್ತ ಸ್ನೇಹಿತರು ನಮ್ಮ ಜೊತೆ ಕೆಲಸ ಮಾಡುತ್ತಿದ್ದರು. ಅವರು ನರೇಂದ್ರ ಮೋದಿ ಸರ್ಕಾರದ ಆರ್ಥಿಕ ವಂಚನೆಗಳನ್ನು ಅದ್ಭುತ ರೀತಿಯಲ್ಲಿ ಅಂಕಿಅಂಶಗಳ ಸಮೇತ ಬಯಲು ಮಾಡುತ್ತಿದ್ದುದು ಕಂಡು ನನಗೆ ಅಚ್ಚರಿ ಮತ್ತು ಸಂತೋಷವಾಗಿತ್ತು. ಅಂದು ಅವರು ನಿಜಕ್ಕೂ ಸತ್ಯದ ಪರವಾಗಿದ್ದರು. ಆದರೆ ಅವರ ಬರೆಹಗಳನ್ನು ಯಾರಾದರೂ ಬಲಪಂಥೀಯರು ಓದಿದರೆ ಅವರಿಗೆ ಖಂಡಿತಾ ಇವರು ʼಎಡಪಂಥೀಯ ಸಿದ್ಧಾಂತಿʼ, ʼನಗರ ನಕ್ಸಲ್ʼ ಎಂದೆಲ್ಲಾ ಸುಲಭವಾಗಿ ಹಣೆಪಟ್ಟಿ ಕಟ್ಟಬಹುದಿತ್ತು. ಆದರೆ ಆ ಪತ್ರಕರ್ತ ಸ್ನೇಹಿತರು ನಿಜಕ್ಕೂ ಈ ದೇಶದ ಭವಿಷ್ಯದ ಬಗ್ಗೆ ತುಂಬಾ ಆತಂಕಗೊಂಡು, ಕಾಳಜಿಯಿಂದ ಕೆಲಸ ಮಾಡುತ್ತಿದ್ದರು. ಕೊನೆಗೆ ಅವರಿಗೂ ಸಹ ಅವರು ಹಿಂದೆ ಹೇಳಿದ್ದ ರೀತಿಯಲ್ಲಿ ತಟಸ್ಥವಾಗಿ ಪತ್ರಿಕೋದ್ಯಮ ನಡೆಸುವುದು ಸಾಧ್ಯವಿಲ್ಲ ಎಂಬ ಅರಿವಾಗಿರಬಹುದು ಎಂದುಕೊಂಡೆ. ಹೌದು ಪತ್ರಕತ್ರರಾದವರು ಮಾಡಲು ಇರುವ ಬಹಳ ಕೆಲಸಗಳ ನಡುವೆಯೂ ಅವರು ಅದ್ಯತೆಯನ್ನು ಗುರುತಿಸಿಕೊಂಡಿದ್ದರು.

ಪತ್ರಿಕೋದ್ಯಮದ ಬಗ್ಗೆ ಮಾತಾಡುವಾಗ ನಾವು ಒಂದು ಪ್ರಾಥಮಿಕ ಸಂಗತಿಯನ್ನು ತಿಳಿದುಕೊಳ್ಳಬೇಕು. ನಮ್ಮ ದೇಶದಲ್ಲಿ ಪತ್ರಿಕೋದ್ಯಮ ಆರಂಭವಾದ ಸಂದರ್ಭದಲ್ಲಿ ಯಾವೆಲ್ಲಾ ಭಾರತೀಯರು ಪತ್ರಿಕೆಗಳನ್ನು ಹೊರತರುತ್ತಿದ್ದರೋ ಅವರೆಲ್ಲರೂ ಕಟು ಸಿದ್ಧಾಂತಿಗಳಾಗಿದ್ದರು. ಸಾಮ್ರಾಜ್ಯವಾದದ ವಿರುದ್ಧದ ಸಿದ್ದಾಂತ ಅವರೆಲ್ಲರನ್ನು ಮುನ್ನಡೆಸುತ್ತಿತ್ತು. ಬಹುತೇಕ ಅವರೆಲ್ಲರೂ ಸ್ವಾತಂತ್ರ್ಯ ಹೋರಾಟಗಾರರು ಇಲ್ಲವೇ ಸ್ವಾಭಿಮಾನ ಚಳವಳಿಯ ಹೋರಾಟಗಾರರು, ನಾಯಕರು ಆಗಿದ್ದರು. ಅಂತಹ ಸ್ಪಷ್ಟ ಸೈದ್ಧಾಂತಿಕ ಬುನಾದಿಯಿಟ್ಟುಕೊಂಡು ಅವರೆಲ್ಲಾ ಬ್ರಿಟಿಷರ ವಿರುದ್ಧ ಪತ್ರಿಕೋದ್ಯಮ ನಡೆಸದಿದ್ದರೆ ಈ ದೇಶದ ಪತ್ರಿಕೋದ್ಯಮದ ಇತಿಹಾಸ ಅತ್ಯಂತ ಟೊಳ್ಳಾದ, ಬೂಸಾ ಇತಿಹಾಸವಾಗುತ್ತಿತ್ತು.

ಕೆಲ ಬ್ರಿಟಿಷ್ ಪತ್ರಕರ್ತರು ಹೇಗೆ ಬ್ರಿಟಿಷ್ ಅಧಿಕಾರಿಗಳ ಬೆಡ್ ರೂಮ್ ಸ್ಟೋರಿಗಳನ್ನು ಚಪ್ಪರಿಸಿಕೊಂಡು ಅದನ್ನೇ ಪತ್ರಿಕೋದ್ಯಮ ಎಂದು ಬೀಗುತ್ತಿದ್ದರೋ ಅಷ್ಟರಲ್ಲೇ ಭಾರತೀಯ ಪತ್ರಿಕೋದ್ಯಮ ಉಳಿದುಬಿಡುತ್ತಿತ್ತು. ಆದರೆ ಹೀಗೆ ಆಗಲು ಬಿಡದೇ ಉದಾತ್ತ ಧ್ಯೇಯಗಳ ಮೂಲಕ ದೇಶದ ಪತ್ರಿಕೋದ್ಯಮ ಬೆಳೆಸಿದ 19ನೆಯ ಶತಮಾನದ ಅಂತಹ ಧೀಮಂತ ಪತ್ರಕರ್ತರು ಹಲವರು. ಸುರೇಂದ್ರ ನಾಥ್ ಬ್ಯಾನರ್ಜಿ (ಬೆಂಗಾಲಿ ಪತ್ರಿಕೆ- 1879) ಪತ್ರಕರ್ತರಾಗಿ ಕೆಲಸ ಮಾಡುತ್ತಲೇ ಸತ್ಯ ಹೇಳಿದ ಕಾರಣಕ್ಕೆ ಬ್ರಿಟಿಷ್ ಸರ್ಕಾರ ಅವರನ್ನು ವರ್ನಾಕ್ಯುಲರ್ ಪ್ರೆಸ್ ಕಾಯ್ದೆಯ ಅಡಿ ಜೈಲಿಗಟ್ಟಿತ್ತು. ಸಂವಾದ ಕೌಮುದಿ ಎಂಬ ಪತ್ರಿಕೆ ನಡೆಸುತ್ತಿದ್ದ ರಾಜಾರಾಮ ಮೋಹನ್ ರಾಯ್ ಒಬ್ಬ ಸ್ಪಷ್ಟ ವಿಚಾರವಾದಿಯಾಗಿದ್ದರು.

ಅವರು ಈ ದೇಶದ ಅನಿಷ್ಟಗಳ ಕುರಿತೇ ತಮ್ಮ ಪತ್ರಿಕೆಯಲ್ಲಿ ಬರೆಯುತ್ತಾ ಹೋದರು. ಇದೇ ಕೆಲಸವನ್ನು ಮಹಾರಾಷ್ಟ್ರದಲ್ಲಿ ಮರಾಠಿ ಪತ್ರಿಕೆ ಆರಂಭಿಸಿದ ಜಂಬೇಕರ್ ಮಾಡಿದರು, ಅವರು ತಮ್ಮ ದರ್ಪಣ್ ಪತ್ರಿಕೆಯ ಮೂಲಕ ಸಾಮಾಜಿಕ ಅನಿಷ್ಟಗಳು ಕುರಿತು ಜಾಗೃತಿ ಮೂಡಿಸಿದರು- ಇವರನ್ನು ಮರಾಠಿ ಪತ್ರಿಕೋದ್ಯಮದ ಪಿತಾಮಹ ಎಂದು ಕರೆಯಲಾಗುತ್ತದೆ. ಬಂಗಾಳದಲ್ಲಿ ಹರೀಶ್ಚಂದ್ರ ರಾಯ್ ಎಂಬುವವರು ಬಂಗದರ್ಶನ್ ಎಂಬ ಪತ್ರಿಕೆ ತಂದರು; ಗುಜರಾತಿಯಲ್ಲಿ ʼಬಾಂಬೆ ಸಮಾಚಾರ್ʼ ಪತ್ರಿಕೆ ಆರಂಭಿಸಿದ ಫರ್ದುನ್ಜಿ ಮರ್ಜ್ ಬಾನ್ ಎಂಬುವವರು ಸಹ ಪತ್ರಿಕೆಯ ಮೂಲಕ ಸಮಾಜ ಸುಧಾರಣೆಗೆ ಒತ್ತು ಕೊಟ್ಟರು. ಇನ್ನು ಸ್ವಾತಂತ್ರ್ಯ ಹೋರಾಟಗಾರರಲ್ಲಿ ಬಾಲಗಂಗಾಧರ ತಿಲಕ್ ಕೇಸರಿ ಮತ್ತು ಮರಾಟಾ ಪತ್ರಿಕೆ ಹೊರಡಿಸುತ್ತಿದ್ದರು, ಗಾಂದೀಜಿಯವರು ಆಫ್ರಿಕಾದಲ್ಲಿದ್ದಾಗಲೇ ಇಂಡಿಯನ್ ಒಪಿನಿಯನ್ ಪತ್ರಿಕೆ ನಡೆಸುತ್ತಿದ್ದರೆ, ಭಾರತಕ್ಕೆ ಬಂದ ಮೇಲೆ ಯಂಗ್ ಇಂಡಿಯಾ ಮತ್ತು ಹರಿಜನ್ ಎಂಬ ಪತ್ರಿಕೆಗಳನ್ನು ಹೊರತಂದರು,

ಸುಭಾಷ್ ಚಂದ್ರ ಬೋಸ್ ಅವರು ಸ್ವರಾಜ್ ಪತ್ರಿಕೆಯ ಸಂಪಾದಕರಾಗಿದ್ದರು, ಲಾಲಾ ಲಜಪತ್ ರಾಯ್ ಅವರು ದ ಟ್ರಿಬ್ಯೂನ್ ಎಂಬ ಇಂಗ್ಲಿಷ್ ಪತ್ರಿಕೆ ತಂದರು, ಜೊತೆಗೆ ವಂದೆ ಮಾತರಂ ಎಂಬ ಉರ್ದು ಪತ್ರಿಕೆಯನ್ನೂ ಪ್ರಕಟಿಸುತ್ತಿದ್ದರು- ಇವುಗಳ ಮೂಲಕ ಸ್ವದೇಶಿ ಚಿಂತನೆಯನ್ನು ಅಥವಾ ಸಿದ್ಧಾಂತವನ್ನು ಪ್ರಚುರಪಡಿಸಿದರು, ಹೋಂರೂಲ್ ಚಳವಳಿಯ ಮುಂದಾಳು ಅನಿಬೆಸೆಂಟ್ ಅವರು ನ್ಯೂ ಇಂಡಿಯಾ ಪತ್ರಿಕೆ ತಂದರು, ಇನ್ನು ಮದನ್ ಮೋಹನ್ ಮಾಳವೀಯ ಅವರು ಮೋತಿಲಾಲ್ ನೆಹರೂ ಜೊತೆ ಸೇರಿಕೊಂಡು ದ ಲೀಡರ್ ಎಂಬ ಪತ್ರಿಕೆ ತಂದರೆ, ನಂತರ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯನ್ನೂ ಪುನರುಜ್ಜೀವಗೊಳಿಸಿದರು. ಇನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು ʼಅಸ್ಪೃಶ್ಯರಿಗೆ ಈ ದೇಶದಲ್ಲಿ ಪತ್ರಿಕೆಯಿಲ್ಲʼ ಎಂದು ಘೋಷಿಸಿ ಮೊದಲಿಗೆ ಶಾಹು ಮಹಾರಾಜರ ಬೆಂಬಲದಿಂದ ಮೂಕನಾಯಕ ಪತ್ರಿಕೆ (1920) ತಂದರು; ನಂತರ ಬಹಿಷ್ಕೃತ ಭಾರತ (1927), ನಂತರ ಸಮತಾ (1928), ನಂತರ ಜನತಾ (1930) ಹಾಗೂ ಪ್ರಬುದ್ಧ ಭಾರತ (1956) ಪತ್ರಿಕೆಗಳನ್ನು ಹೊರಡಿಸಿ ನಿರಂತರವಾಗಿ ಅವುಗಳಲ್ಲಿ ಬರೆಯುತ್ತಾ ತಾವೊಬ್ಬ ಧೀಮಂತ ಪತ್ರಕರ್ತ ಎಂಬುದನ್ನೂ ನಿರೂಪಿಸಿದ್ದರು.

ಇವರನ್ನೆಲ್ಲಾ ಹೊರಗಿಟ್ಟು ಕೇವಲ ಬ್ರಿಟಿಷರು ತಂದ ಬೆಂಗಾಲ್ ಗೆಜೆಟ್ ನಂತವುಗಳನ್ನು ಮಾತ್ರವೇ ಭಾರತದ ಪತ್ರಿಕೋದ್ಯಮದ ಇತಿಹಾಸ ಎಂದು ಹೇಳಲು ಬರುತ್ತದೆಯೇ? ಈ ದೇಶದ ಪತ್ರಿಕೋದ್ಯಮದ ಇತಿಹಾಸದ ಸೈದ್ಧಾಂತಿಕ ಅಡಿಪಾಯ ಅತ್ಯಂತ ಭದ್ರವಾಗಿತ್ತು ಎಂಬುದಕ್ಕೆ ಇವೆಲ್ಲಾ ಸಾಕ್ಷಿಯಲ್ಲವೆ? ಅಲ್ಲಿ ಎಡಬಿಡಂಗಿತನಕ್ಕೆ, ಸೊ ಕಾಲ್ಡ್ ತಟಸ್ಥತೆಗೆ ಯಾವುದೇ ಅವಕಾಶವಿರಲಿಲ್ಲ. ಈ ದೇಶವನ್ನು ಕಾಡುತ್ತಿದ್ದ ಸಾಮ್ರಾಜ್ಯಶಾಹಿ ಮತ್ತು ಬ್ರಾಹ್ಮಣಶಾಹಿ ಶಕ್ತಿಗಳನ್ನು ನೇರವಾಗಿ ಎದುರಿಸಿಯೇ ಭಾರತದ ಪತ್ರಿಕೋದ್ಯಮ ನಡೆದುಕೊಂಡುಬಂದಿದೆ ಎಂಬುದಕ್ಕೆ ಮೇಲಿನ ಉದಾಹರಣೆಗಳೇ ಸಾಕ್ಷಿ.

ಸ್ವಾತಂತ್ರ್ಯಾನಂತರದಲ್ಲಿ, ನಮ್ಮ ಕರ್ನಾಟಕದಲ್ಲೇ ನಾವು ಯಾರನ್ನೆಲ್ಲಾ ಇಂದು ಧೀಮಂತ ಪತ್ರಕರ್ತರೆಂದು ಪರಿಗಣಿಸಿದ್ದೇವೆಯೋ, ಯಾರನ್ನೆಲ್ಲಾ ಆದರ್ಶ ಎಂದು ನೋಡುತ್ತೇವೆಯೋ ಅವರೆಲ್ಲರೂ ಅತ್ಯಂತ ಸ್ಪಷ್ಟ ಮತ್ತು ದೃಢವಾದ ಸಿದ್ಧಾಂತಿಗಳೇ ಆಗಿದ್ದರು ಎಂಬುದನ್ನು ಮರೆಯಬಾರದು. ಕರ್ನಾಟಕದ ಪತ್ರಿಕೋದ್ಯಮಕ್ಕೇ ಹೊಸ ಮೆರಗು ತಂದು ಸಂಚಲನ ಮೂಡಿಸಿದ ಪಿ. ಲಂಕೇಶ್ ಅವರು ಕಡಿಮೆ ಸಿದ್ಧಾಂತಿಯೇ? ಸ್ಪಷ್ಟ ಸೈದ್ಧಾಂತಿಕ ತಳಹದಿಯ ಪತ್ರಿಕೋದ್ಯಮವೇ ಅವರ ಆಕ್ಟಿವಿಸಂ ಆಗಿತ್ತು ಮಾತ್ರವಲ್ಲ ಪತ್ರಿಕೋದ್ಯಮದ ಮೂಲಕ ಸಾಮಾಜಿಕ ರಾಜಕೀಯ ಬದಲಾವಣೆಯನ್ನೂ ಮಾಡಲು ಸಾಧ್ಯ ಎಂದು ಪಿ ಲಂಕೇಶ್ ಒಂದು ಮಾದರಿಯನ್ನೇ ಸೃಷ್ಟಿಸಿದರು. ಅದು ಸಾಧ್ಯವಾಗಿದ್ದೇ ಅವರ ಕಟಿಬದ್ಧ ಸೈದ್ಧಾಂತಿಕ ನಿಲುವಿನಿಂದ.

ನಾಡು ಕಂಡ ಮತ್ತೊಬ್ಬ ಧೀಮಂತ ಪತ್ರಕರ್ತ ವಡ್ಡರ್ಸೆ ರಘುರಾಮ್ ಶೆಟ್ಟಿ ಕೂಡಾ ಗಟ್ಟಿ ತಾತ್ವಿಕ ನಿಲುವುಗಳ ಮೂಲಕ ನಾಡಿನ ಜನರನ್ನು ತಲುಪಿದರು. ಇನ್ನು 70-80ರ ದಶಕಗಳಲ್ಲಿ ಭಾರತೀಯ ಪತ್ರಿಕೋದ್ಯಮದ ಧೀಮಂತ ಪರಂಪರೆಯಲ್ಲಿ ಸಾಗಿದ ಹಲವಾರು ಕನ್ನಡ ಪತ್ರಿಕೆಗಳಿದ್ದವು- ಸುದ್ದಿ ಸಂಗಾತಿ, ಶೂದ್ರ, ಪಂಚಮ, ಸಮುದಾಯ, ಸಂಕ್ರಮಣ ಮುಂತಾದ ನಿಯತಕಾಲಿಕೆಗಳು ಕನ್ನಡಿಗರ ಅರಿವಿನ ವಿಸ್ತರಣೆಯಲ್ಲಿ ಕಡಿಮೆ ಕೆಲಸ ಮಾಡಿವೆಯೇ? ಹಾಗಾದರೆ ಇವೆಲ್ಲವೂ ಖಚಿತ ಸೈದ್ದಾಂತಿಕತೆಯಿಂದಲೇ ನಡೆಯಲಿಲ್ಲವೇ?

ಇನ್ನು ಕಳೆದ ಕೆಲವು ದಶಕಗಳಲ್ಲಿ, ಅಗ್ನಿ, ಹಾಯ್ ಬೆಂಗಳೂರು, ಗೌರಿ ಲಂಕೇಶ್ ವಾರಪತ್ರಿಗಳೂ ತಮ್ಮ ಛಾಪು ಮೂಡಿಸಿದವು. ಪಿ ಲಂಕೇಶರ ಸ್ಪೂರ್ತಿಯಲ್ಲೇ ದೊಡ್ಡ ದೊಡ್ಡ ಭ್ರಷ್ಟಾಚಾರ ಪ್ರಕರಣಗಳನ್ನು ಅನಾವರಣಗೊಳಿಸಿದವು. ಇದ್ದುದರಲ್ಲಿ ರವಿ ಬೆಳಗರೆ ಎಡಬಿಡಂಗಿಯಾಗಿ ಕ್ರೈಂ, ಸೆಕ್ಸ್ ಗಳನ್ನ ಅಸ್ತ್ರವಾಗಿಸಿಕೊಂಡು ಟ್ಯಾಬ್ಲಾಯ್ಡ್ ಪತ್ರಿಕೋದ್ಯಮವನ್ನು ಹಳ್ಳ ಹಿಡಿಸಿದರೂ ಹಾಯ್ ಬೆಂಗಳೂರು ಸಹ ಅನೇಕ ಬ್ರಷ್ಟಾಚಾರ ಹಗರಣಗಳನ್ನು ಬಯಲು ಮಾಡಿದ್ದು ಸತ್ಯ.

ಯಾವನ್ನು ನಾವು ದಿನಪತ್ರಿಕೆಗಳು ಅಥವಾ ವೃತ್ತ ಪತ್ರಿಕೆಗಳು ಎನ್ನುತ್ತೇವೆಯೋ ಇವುಗಳ ಆದ್ಯತೆ ದಿನನಿತ್ಯದ ಸುದ್ದಿಗಳನ್ನು ಜನರಿಗೆ ತಲುಪುವುದು ಮಾತ್ರವಾಗಿದ್ದ ಕಾರಣ ಬಹಳ ಪತ್ರಿಕೆಗಳಲ್ಲಿ ಸೈದ್ಧಾಂತಿಕತೆ ದೊಡ್ಡ ವಿಷಯವಾಗಲಿಲ್ಲ. ಆದರೆ ಅಂತಹ ಕಡೆಗಳಲ್ಲಿ ಸಹ ದೊಡ್ಡ ದೊಡ್ಡ ಸಿದ್ಧಾಂತಿಗಳು ಹತ್ತಾರು ವರ್ಷಗಳ ಕಾಲ ಕೆಲಸ ಮಾಡಿದ್ದರು ಮತ್ತು ತಮ್ಮ ಖಚಿತ ಅಭಿಪ್ರಾಯಗಳನ್ನು ಆ ವೇದಿಕೆಗಳ ಮೂಲಕ ಜನರಿಗೆ ತಲುಪಿಸುತ್ತಾ ಬಂದಿದ್ದರೆಂಬುದನ್ನು ನಾವು ಮರೆಯಕೂಡದು.

ಈಗ ಹೇಳಿ, ನಮ್ಮ ಪತ್ರಿಕೋದ್ಯಮಕ್ಕೆ ಸಿದ್ಧಾಂತ ಬೇಡವೆ, ಪತ್ರಕರ್ತರಾಗಿರುವವರು ಸೈದ್ಧಾಂತಿಕ ಸ್ಪಷ್ಟತೆ ಹೊಂದಿರಬಾರದೆ? ಆಕ್ಟಿವಿಸ್ಟುಗಳು ಪತ್ರಕರ್ತರಾಗುವುದು ಅಪರಾಧವೆ? ಪತ್ರಿಕೋದ್ಯಮ ಆಕ್ಟಿವಿಸಂಗೆ ಪೂರಕವಾಗಿರಬಾರದೆ? ಇಂದು ಬ್ರಾಹ್ಮಣ್ಯದ ದಿಗ್ವಿಜಯ ಮತ್ತೊಮ್ಮೆ ನಿಜವಾಗುವ ಕರಾಳ ಛಾಯೆ ಇಡೀ ದೇಶವನ್ನು ಆವರಿಸಿಕೊಂಡಿರುವಾಗ, ಬಾಬಾಸಾಹೇಬರು ಎಚ್ಚರಿಸಿದ್ದ ಆ ʼಪ್ರತಿಕ್ರಾಂತಿʼ ತನ್ನ ಕಬಂಧಬಾಹುಗಳನ್ನು ಚಾಚಿಕೊಂಡ ಎಲ್ಲವನ್ನೂ ನೊಣೆಯುತ್ತಿರುವಾಗ, ಅಪರಾಧವೇ ಅಧಿಕಾರವಾಗಿ ದೇಶದ ಪ್ರಮುಖ ಸಂಸ್ಥೆಗಳೆಲ್ಲವನ್ನೂ ನುಂಗಿ ನೀರುಕುಡಿದು ತಮ್ಮ ಅಂಕೆಯಲ್ಲಿ ತಂದುಕೊಂಡು ಇಡೀ ದೇಶದ ಜನರಿಗೆ ಕರಾಳತೆ ದರ್ಶನ ಮಾಡುತ್ತಾ ಭ್ರಷ್ಟಾಚಾರದ ವ್ಯಾಖ್ಯಾನವನ್ನೇ ತಿರುಗುಮರುಗು ಮಾಡುತ್ತಿರುವಾಗ ಸೊ ಕಾಲ್ಡ್ ತಟಸ್ಥತೆಯ ಬದನೇಕಾಯಿಯನ್ನು ನೆಚ್ಚಿಕೊಳ್ಳದೇ ನಿರ್ಧಾರಿತ ಜನಾಂದೋಲನಗಳಿಗೆ ಪೂರಕವಾಗಿ ಪತ್ರಿಕೋದ್ಯಮ ಮತ್ತು ಪತ್ರಕರ್ತರಾದವರು ಜೊತೆಗೂಡುವುದು ಬೇಡವೇ?

‘ಬೇಡ’ ಎಂಬ ಅಭಿಪ್ರಾಯ ನಿಮ್ಮದಾಗಿದ್ದರೆ ನಿಮ್ಮ ಬಳಿ ಹೇಳಲು ನನಗೆ ಏನೂ ಉಳಿದಿಲ್ಲ. ನೀವು ನಿಮ್ಮದೇ ಸುಖಾಸನದಲ್ಲಿ ನೆಮ್ಮದಿಯಾಗಿ ಪವಡಿಸಬಹುದು, ನನಗೇನೂ ಅಭ್ಯಂತರವಿಲ್ಲ. (ಬರಹ- ಹರ್ಷಕುಮಾರ್‌ ಕುಗ್ವೆ, ಪತ್ರಕರ್ತ ಮತ್ತು ಆಕ್ಟಿವಿಸ್ಟ್)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending