Connect with us

ಅಂತರಂಗ

ರಾಜಶೇಖರ್ ಜತೆ ಒಂದು ದಿನ

Published

on

ಬಿ. ರಾಜಶೇಖರ್
  • ರಹಮತ್ ತರೀಕೆರೆ, ಚಿಂತಕರು

ಖುಶವಂತ ಸಿಂಗರ `ಟ್ರೈನ್ ಟು ಪಾಕಿಸ್ತಾನ್’ ಕೃತಿ ಕುರಿತ ಸಂವಾದ ಕಾರ್ಯಕ್ರಮಕ್ಕೆಂದು ಮಂಗಳೂರಿಗೆ ಹೋದವನು, ಮಾರನೇ ದಿನ ಜಿ. ರಾಜಶೇಖರ್ ಅವರ ಮನೆಗೆ ಹೋದೆ. ಭೇಟಿಯ ನೆಪದಲ್ಲಿ ಅವರ ಸಂದರ್ಶನವನ್ನೂ ಮಾಡಬೇಕಿತ್ತು. ನಮ್ಮಿಬ್ಬರ ಭೇಟಿಗೆ ಗೆಳೆಯರಾದ ಫಣಿರಾಜ್ ಹಾಗೂ ಸಂವರ್ತ ಸಾಹಿಲ್, ಪೂರ್ವಭಾವಿ ಭೂಮಿಕೆ ಕಲ್ಪಿಸಿದ್ದರು. ನಾನು ಹೋದ ದಿನ ಉಡುಪಿಯಲ್ಲಿ ಆಗಸಕ್ಕೆ ಹುಚ್ಚು ಹಿಡಿದಂತೆ ಪ್ರಳಯಕಾಲದ ಮಳೆ. ಬಳ್ಳಾರಿಯ ಬಿಸಿಲಿನಿಂದ ಹೋಗಿದ್ದ ನಾನು ಥಂಡಿಗೆ ಥರಥರಿಸುತ್ತಿದ್ದೆ. ಆಟೊದಲ್ಲಿ ಇರುವಾಗಲೇ ಇರಿಸಲು ಬಡಿದು ಅರ್ಧ ಒದ್ದೆಯಾಗಿದ್ದೆ; ಆಟೊ ಇಳಿದು, ಗೇಟುತೆಗೆದು ಮನೆಬಾಗಿಲಿಗೆ ಹೋಗುವಷ್ಟರಲ್ಲಿ ಇನ್ನರ್ಧ ತೊಯ್ದುಹೋದೆ.

ರಾಜಶೇಖರ್ ಅವರ ಮನೆ, ಉಡುಪಿಯ ದಕ್ಷಿಣದಿಕ್ಕಿನ ಅಂಚಿನಲ್ಲಿರುವ ಕೊಳಂಬೆ ಪ್ರದೇಶದಲ್ಲಿದೆ; ನೀರು ಜುಳುಜುಳಿಸುವ ತೋಡುಗಳೂ ಹಸಿರುಹೊಮ್ಮಿಸುವ ಭತ್ತದ ಗದ್ದೆಗಳೂ ಕಂಗು-ತೆಂಗಿನ ತೋಟಗಳೂ ಅದನ್ನು ಸುತ್ತುವರೆದಿವೆ. ಹಾಡುಹಗಲೇ ಜೀರುಂಡೆಯ ಜೀಕಾರವೂ ನವಿಲಿನ ಪರಾಕೂ ಅಲ್ಲಿ ಕೇಳಿಸುತ್ತದೆ. ಕಾಂಪೌಂಡಿನ ಗೋಡೆಯ ಮೇಲೆ ಹಸಿರುಪಾಚಿ ಹಬ್ಬಿಕೊಂಡು ನಡುನಡುವೆ ಫರ್ನ್ ಸಸ್ಯಗಳು ಬೆಳೆದಿವೆ; ಇನ್ನು ಕಾಂಪೌಂಡಿನೊಳಗೆ ಬೆಳೆದಿದ್ದ ಹೂಗಿಡಗಳ ಹಳುವಿನಲ್ಲಂತೂ, ಒಂದು ಹುಲಿ ಆರಾಮಾಗಿ ಅಜ್ಞಾತವಾಸ ಮಾಡಬಹುದಿತ್ತು. ನಾನು ಸೋಜಿಗದಿಂದ ಅವನ್ನೆಲ್ಲ ನೋಡುವಾಗ, ರಾಜಶೇಖರ್ ಸಂಕೋಚ ಬೆರೆತ ಅಭಿಮಾನದಿಂದ “ಇದು ಆರ್ಡರ್ ಇನ್ ಡಿಸ್ಆ ರ್ಡರ್” ಎಂದು ವರ್ಣಿಸಿದರು.

ಅದೊಂದು ಚಿಕ್ಕಮನೆ; ಹಾಲಿನ ಮೂಲೆಯಲ್ಲಿ ಮೇಜು; ಬಗಲಿಗೇ ಒಟ್ಟಿದ ಪುಸ್ತಕರಾಶಿ. ಇನ್ನೊಂದು ಮೂಲೆಯ ಗೂಡಿನಲ್ಲಿ ಆಂಜನೇಯನ ಚಿತ್ರಪಟ. ಅದರ ಮುಂದೆ ಅವರ ಹೆಂಡತಿ ಸುಮತಿ, ಪೂಜೆ ಮಾಡಿದ ಕುರುಹು. ಅದನ್ನು ನೋಡುತ್ತ ನನಗೆ ಕಾರಂತರ`ಅಳಿದಮೇಲೆ’ ನೆನಪಾಯಿತು. ಅದು ರಾಜಶೇಖರ್ ಬಹಳ ಆಸ್ಥೆಯಿಂದ ಮತ್ತೆಮತ್ತೆ ವಿಶ್ಲೇಷಣೆ ಮಾಡಿರುವ ಕಾದಂಬರಿ. ‘ನಾವು ವೈಯಕ್ತಿಕವಾಗಿ ನಾಸ್ತಿಕರಾಗಿರಬಹುದು. ಆದರೆ ಇಂಟಿಗ್ರಿಟಿಯುಳ್ಳ ಆಸ್ತಿಕರ ಶ್ರದ್ಧೆಯನ್ನು ಗೌರವಿಸುವುದು ಒಂದು ದೊಡ್ಡಮೌಲ್ಯ’ ಎಂದು ಪ್ರತಿಪಾದಿಸುವ ಕೃತಿ.

ನಮ್ಮ ಮಾತುಕತೆಯದ್ದಕ್ಕೂ ಸೋನೆ ಶೃತಿ ಹಿಡಿದಿತ್ತು. ಸುಮತಿಯವರು ನನಗೆ ಬಿಸಿಬಿಸಿ ಅನ್ನ ಸಾರು, ಹುರಿದ ಹಪ್ಪಳ, ಕುಂದಾಪುರ ಕಡೆಯ ಉಪ್ಪಿನಕಾಯಿಯ ಊಟ ಬಡಿಸಿದರು; ನಡುನಡುವೆ ರಾಜಶೇಖರ್ `ನಮ್ಮನೇಲಿ ಯಾರಿಗೂ ಒಳ್ಳೇ ಟೀ ಮಾಡೋಕೆ ಬರೋಲ್ಲಾರಿ; ನಾನೇ ಮಾಡಬೇಕು. ಅಣ್ಣನಿಗೆ (ಮಗ ವಿಷ್ಣುವಿಗೆ ಅವರು ಕರೆಯುವುದು ಹಾಗೆ.) ಈಗ ಟೀಬೇಕು’ ಎಂದು ಎದ್ದುಹೋಗಿ, ಕೈಯಾರೆ ಟೀಮಾಡಿ ತರುತ್ತಿದ್ದರು; ಅವರ ಕೈಚಹ ಕುಡಿಯಲು `ಅಪ್ಪ ಟೀ ಚೆಂದ ಮಾಡ್ತಾರೆ’ ಎಂದು ವಿಷ್ಣು ಕಣ್ಣುಮಿಟುಕಿಸಿ ಪುಸಲಾಯಿಸುತ್ತಿದ್ದರು.

ನಾನು ರಾಜಶೇಖರ್ ಅವರನ್ನು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹತ್ತಾರು ಸಲ ಕಂಡಿದ್ದೇನೆ. ಯಾವಾಗಲೂ ಅವರ ಚಹರೆ ಸರಿಸುಮಾರು ಒಂದೇ ತರಹ; ಹೇಗೆಂದರೆ-ತುಸು ಬಿಗಿದುಕೊಂಡ ಮುಖ; ಹಳೇಮಾದರಿಯ ದಪ್ಪ ಫ್ರೇಮಿನ ಕನ್ನಡಕದೊಳಗೆ ತೀಕ್ಷ್ಣನೋಟ ಹರಿಸುವ ಗಾಬರಿಗೊಂಡಂತೆ ತೋರುವ ಕಣ್ಣು; ಸರಿಯಾಗಿ ಬಾಚದ ತಲೆಗೂದಲು; ಕಪ್ಪು ಚೌಕಳಿಯ ಶರ್ಟು. ಆರ್ಡರ್ ಇನ್ ಡಿಸಾರ್ಡರ್. ಹಾಲಿನ ಇನ್ನೊಂದು ಭಾಗದಲ್ಲಿ ಅವರು ಹೆಂಡತಿ ಜತೆ ತೆಗೆಸಿಕೊಂಡ ಎರಡು ಚಿತ್ರಪಟಗಳಿದ್ದವು.‌ ಒಂದು-ಮದುವೆಯಾದ ಹೊಸತರಲ್ಲಿ ತೆಗೆಸುಕೊಂಡಿದ್ದು. ನಗುಮುಖದ ಯುವಕನ ಸೌಮ್ಯತೆ ಲಾಸ್ಯವಾಡುತ್ತಿದೆ. ಇನ್ನೊಂದು-ನಿವೃತ್ತಿಯ ದಿನ ತಾಂತ್ರಿಕ ಕಾರಣಕ್ಕೆ ತೆಗೆಸಿಕೊಂಡಿದ್ದಿರಬೇಕು- ನೆರಿಗೆ ಸಡಿಲಗೊಂಡಿರದ ಬಿಗುಮುಖ ಗುರುಗುಟ್ಟುತಿದೆ.

ರಾಜಶೇಖರರ ಮುಖದ ಚಿಂತನಶೀಲ ಗಾಂಭೀರ್ಯಕ್ಕೆ ಅವರ ಸ್ವಭಾವದಲ್ಲಿ ಅರ್ಧ ಕಾರಣವಿದ್ದರೆ, ಅವರ ಹೆಚ್ಚಿನ ಕಾರ್ಯಕ್ರಮಗಳೆಲ್ಲ ಪ್ರತಿಭಟನೆಗೆ ಸಂಬಂಧಿಸಿದವೇ ಆಗಿರುವುದು ಇನ್ನರ್ಧ ಕಾರಣ. ಅವರ ನನ್ನ ಮೊದಲ ಭೇಟಿ ನೆನಪಾಗುತ್ತಿದೆ. ಮಡಿಕೇರಿಯಲ್ಲಿ ಪಟ್ಟಾಭಿರಾಮ ಸೋಮಯಾಜಿಯವರು ಸಂಘಟಿಸಿದ್ದ ಕಾರ್ಯಕ್ರಮವದು. ರಾಜಶೇಖರ ಅವರನ್ನು ಮೊದಲ ಸಲ‌ ಕಾಣುವ ಪುಳಕದಲ್ಲಿ ನಾನು ಭೇಟಿಯಾದೆ. ಅವರು ಕೈಕುಲುಕಿ ನಿರ್ಭಾವುಕವಾಗಿ `ಹ್ಞಾ! ಯಾವಾಗ ಬಂದ್ರಿ?’ ಎಂಬ ವಾಕ್ಯಬಿಟ್ಟರೆ ಹೆಚ್ಚೇನೂ ಆಡಲಿಲ್ಲ. ನನಗೆ ತುಸು ನಿರಾಶೆಯಾಗಿತ್ತು. ಬಹುಶಃ ಅವರು ಅಂದಿನ ಕಾರ್ಯಕ್ರಮದ ಬಗ್ಗೆ ತವಕಿತರಾಗಿದ್ದರು. ಕಾರಣ, ಕಾರ್ಯಕ್ರಮ ತಡೆಯಲು ಎದುರಾಳಿಗಳು ಭಯಂಕರ ತಯಾರಿ ಮಾಡಿಕೊಂಡಿದ್ದರಿಂದ, ವಾತಾವರಣ ಬಿಗುವಾಗಿತ್ತು. ಪೋಲಿಸರ ಸಂಖ್ಯೆ ನಮ್ಮನ್ನು ಮೀರಿಸುವಷ್ಟಿತ್ತು. ರಾಜಶೇಖರರ ಆತಂಕ ನಿಜವಾಗುವಂತೆ ಅಂದಿನ ಕಾರ್ಯಕ್ರಮ ನಡೆಯಲಿಲ್ಲ. ನಾವೆಲ್ಲ ಪೆಟ್ಟುತಿನ್ನದೇ ಮರಳಿದ್ದೇ ದೊಡ್ಡ ಸಂಗತಿ.

ನಾನು ಮಾತುಕತೆಗೆ ಮನೆಗೆ ಹೋದ ದಿನ ಅವರು, ಕರಿಬಿಳಿಯ ಉದ್ದಗೆರೆಯಿರುವ ಅಂಗಿ ಹಾಗೂ ಆಗಸನೀಲಿಯ ಚೌಕುಳಿಲುಂಗಿ ಧರಿಸಿದ್ದರು. ವಯಸ್ಸಿನ ಕಾರಣದಿಂದ ದೇಹ ನಸುಬಾಗಿತ್ತು. ಆದರೆ ಲವಲವಿಕೆಯಿತ್ತು. ನಾಲ್ಕೈದು ತಾಸು ಕಾಲ, ಸಾಹಿತ್ಯದ ಬಗ್ಗೆ, ಭಾರತದ ರಾಜಕೀಯ ವಿದ್ಯಮಾನಗಳ ಬಗ್ಗೆ, ಒಳನೋಟಗಳಿಂದ ಕೂಡಿದ ಮಾತುಕತೆಯನ್ನು ನಡೆಸಿಕೊಟ್ಟರು. ನಾನು ಕಳೆದ ೨೫ ವರುಷಗಳಲ್ಲಿ ಮಾಡಿದ ಅತ್ಯತ್ತಮ ಸಂದರ್ಶನವದು. ಇದು ‘ನ್ಯಾಯ ನಿಷ್ಠುರಿಗಳ ಜತೆಯಲ್ಲಿ’ ಸಂಪುಟದಲ್ಲಿ ಅಚ್ಚಾಯಿತು.

ಎದುರು ನಾನೊಬ್ಬನೇ ಇದ್ದರೂ, ರಾಜಶೇಖರ್ ದೊಡ್ಡಸಭೆಯನ್ನು ಸಂಬೋಧಿಸುವಂತೆ ಏರುದನಿಯಲ್ಲಿ ಮಾತಾಡುತ್ತಿದ್ದರು; ಮತೀಯ ರಾಜಕಾರಣದ ಚರ್ಚೆ ಬಂದಾಗಲೆಲ್ಲ ಉದ್ವಿಗ್ನತೆಯಿಂದ ಅವರ ದನಿ ವ್ಯಗ್ರಗೊಳ್ಳುತ್ತಿತ್ತು. ಆದರೆ ಹುಟ್ಟೂರಾದ ಗುಂಡ್ಮಿ, ತಮ್ಮ ಬಾಲ್ಯ, ತಾಯಿ, ತಂದೆ, ಅಲ್ಲಿನ ಪರಿಸರ, ಅಡುಗೆ ಇತ್ಯಾದಿ ವಿಷಯ ಬಂದಾಗ, ದನಿ ಮೃದುಗೊಂಡು ಆಪ್ತತೆ ತನ್ಮಯತೆ ಪಡೆಯುತ್ತಿತ್ತು-ಕುವೆಂಪು ಮಲೆನಾಡಿನ ವಿಷಯ ಬಂದರೆ ಭಾವುಕರಾಗುವ ಹಾಗೆ. ಬದುಕಿನ ಸಣ್ಣಸಂಗತಿಗಳಿಗೆ ಮಿಡಿಯುವ ಅವರ ಆಸ್ಥೆ ಮತ್ತು ಜೀವನ ಪ್ರೀತಿಗಳು, ಅವರಲ್ಲಿರುವ ಪ್ರತಿರೋಧ ಪ್ರಜ್ಞೆಯಷ್ಟೇ ತೀವ್ರವಾಗಿದ್ದವು.

ರಾಜಶೇಖರ್ ಆದಿನ ಒಳ್ಳೇ ಮೂಡಲ್ಲಿದ್ದರು. ಅವರಲ್ಲಿರುವ ಹಾಸ್ಯಪ್ರಜ್ಞೆ ಸುಳಿಸುಳಿಯಾಗಿ ಹೊರಹೊಮ್ಮುತಿತ್ತು. ಅವರು ಸಾಮಾನ್ಯವಾಗಿ ಉಡುಪಿ ಬಿಟ್ಟು ಹೆಚ್ಚು ಹೊರ ಹೋದವರಲ್ಲ. ಉಡುಪಿಯ ಜತೆ ಅವರಿಗೆ ಆಪ್ತವಾದ ಗಾಢವಾದ ನಂಟಿತ್ತು. ಹಿಂದೊಮ್ಮೆ ನನ್ನ ಗುರುಗಳಾದ ಪುಣೇಕರ್ ಅವರು ಉಡುಪಿಯಲ್ಲಿ ವಾಸವಿದ್ದ ವಿಷಯ ಪ್ರಸ್ತಾಪಕ್ಕೆ ಬಂತು. ಆಗ ರಾಜಶೇಖರ್ ಹೇಳಿದರು: “ಅವರು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿದ್ದು ಗೊತ್ತಲ್ಲ? ಅವರಿದ್ದ ಮನೆಯಲ್ಲಿಯೇ ಅಡಿಗರು ಇದ್ರು. ಅದೊಂದು ಹಳೇ ಕಾಲದ ಮನೆ. ಅದರ ಎದುರು ಒಂದಿಷ್ಟು ಖಾಲಿ ಜಾಗ ಇತ್ತು. ಅದನ್ನು ಹಾಗೇ ಹಾಳು ಬಿಟ್ಟಿದ್ರು. ಪುಣೇಕರ್ ಆಗಲಿ, ಅವರ ನಂತರ ಬಂದ ಅಡಿಗರಾಗಲಿ, ಇವರಿಬ್ಬರಿಗಿಂತ ಮೊದಲಿದ್ದ ವಿ.ಎಂ.ಇನಾಂದಾರ್ ಆಗಲಿ, ಮೂರೂ ಪುಣ್ಯಾತ್ಮರು ಒಂದು ಗಿಡಾನೂ ಅಲ್ಲಿ ನೆಡಲಿಲ್ಲ. ಆ ಮನೆಗೊಂದು ಮೊಗಸಾಲೆ ಇತ್ತು. ಅಲ್ಲಿ ಈ ಮೂವರು ಸಂಜೆ ವಿರಾಜಮಾನರಾಗಿರುತ್ತಿದ್ದರು. ಅಡಿಗರಂತೂ ಒಂದಾದ ಮೇಲೊಂದು ಸಿಗರೇಟ್ ಸುಡ್ತಾ ಇದ್ದರು.” ಮಾತಿನ ಮಧ್ಯೆ ಕೆಲವು ಪತ್ರಿಕೆಗಳ ವಿಷಯ ನುಸುಳಿತು. “ನಾನು ಅವನ್ನು ಓದುವುದಿಲ್ಲ” ಎಂದೆ. ಅವರು ತುಸು ಅಸೂಯೆಯಿಂದ “ನೀವು ಅದೃಷ್ಟವಂತರು ಕಂಡ್ರಿ. ದಾರೀಲಿ ನಡೀವಾಗ ಸೈಡಲ್ಲಿ ಬಿದ್ದಿರೋ ಮಲಕ್ಕೆ ಬೇಡವೆಂದೂ ನಮ್ಮ ದೃಷ್ಟಿಹೋಗುತ್ತೆ” ಎಂದು ಸ್ವಗೇಲಿ ಮಾಡಿಕೊಂಡರು.

ರಾಜಶೇಖರ್ ಗೆ, ಸಾಹಿತ್ಯ ಕ್ಷೇತ್ರದಾಚೆ ಇರುವ ಸಾರ್ವಜನಿಕ ವ್ಯಕ್ತಿಗಳ ಬರೆಹ-ಮಾತುಗಾರಿಕೆ ಬಗ್ಗೆ ಬಹಳ ಆಸಕ್ತಿಯಿತ್ತು “ನೀವು ಗದುಗಿನ ತೋಂಟದಾರ್ಯ ಸ್ವಾಮಿಗಳ ಭಾಷಣದಿಂದ, ಅದರಲ್ಲೂ ಅವರ ಕನ್ನಡದಿಂದ ಬಹಳ ಪ್ರಭಾವಿತರಾಗಿದ್ದಿರಿ ಅಂತ ಕೇಳೀದೀನಿ. ಯಾವ ಸನ್ನಿವೇಶ ಅದು?” ಎಂದು ಕೇಳಿದೆ. “ ತೋಂಟದಾರ್ಯ ಸ್ವಾಮಿಗಳೂ, ನಿಡುಮಾಮಿಡಿ ಸ್ವಾಮಿಯವರೂ ಮತ್ತು ನಾನೂ, ಮಂಗಳೂರಿನ ಕೋಮು ಸೌಹಾರ್ದ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿದ್ದೆವು. ಇಬ್ಬರದೂ ಒಂದು ಜುಗಲಬಂದಿ ನಡೀತು ಸ್ವಲ್ಪಹೊತ್ತು-‘ಎಷ್ಟು ಸೊಗಸಾಗಿ ಮಾತಾಡಿದಿರಿ ತಾವು’ ಅಂತ ಒಬ್ಬರು. ‘ಇಲ್ಲಿಲ್ಲ. ತಾವು ತುಂಬ ಚೆನ್ನಾಗಿ ಮಾತಾಡಿದಿರಿ’ ಅಂತ ಇನ್ನೊಬ್ಬರು. ಅದರೆ ಇಬ್ಬರೂ ಸೊಗಸಾಗಿ ಮಾತಾಡಿದ್ದರು. ಗದುಗಿನ ಸ್ವಾಮಿಗಳಂತೂ ಬಹಳ ಸಹಜವಾಗಿ ಮಾತಾಡಿದ್ದರು” ಎಂದು ಸಂತೋಷದಲ್ಲಿ ನೆನೆದರು.

ಹಳೇ ಉಡುಪಿ ಶಹರಿನ ಚಹರೆ ಚರ್ಚೆಗೆ ಬಂತು. ಆಗ ರಾಜಶೇಖರ್ ಬನ್ನಂಜೆಯಲ್ಲಿದ್ದ ಒಂದು ಗುಡಿಯನ್ನು ನೆನೆಸಿಕೊಂಡು ನುಡಿದರು: “ಅಲ್ಲೊಂದು ಬಹಳ ಸುಂದರವಾದ ದೇವಸ್ಥಾನ ಇತ್ತು. ಸರಳವಾದ ಜಾಮಿಟ್ರಿಕಲ್ ಆದ ವಾಸ್ತು ಅದು. ಈಗ ಆ ಟೆಂಪಲ್ನ ವರಿಗೆ ಬುದ್ಧಿ ಬಂದು, ಅದರ ಮೂಲ ಆಕೃತಿ ಮರವೆ ಆಗುವ ಹಾಗೆ ಸುತ್ತ ಒಂದು ತಗಡಿನ ಚಪ್ಪರ ಎಬ್ಬಿಸಿ, ಅದರ ಎದುರುಗಡೆ ಶಿಲೆಯ ಕಾಂಕ್ರೀಟಿನಲ್ಲಿ ಏನೆಲ್ಲವನ್ನು ಮಾಡಬಹುದೊ ಅದನ್ನೆಲ್ಲ ಮಾಡಿದಾರೆ” ಎಂದರು. ಮಸೀದಿ ಕೆಡವಿ ಗುಡಿ ಕಟ್ಟುವುದನ್ನು ಸಾಂಸ್ಕøತಿಕ ಅಪಚಾರವೆಂದು ಭಾವಿಸಿರುವ ಚಿಂತಕನಿಗೆ, ತನ್ನೂರಿನ ಗುಡಿಯ ವಾಸ್ತುವಿನ ಬಗ್ಗೆ ಇದ್ದ ಆಸಕ್ತಿ ಪ್ರೀತಿ ಸೋಜಿಗ ಹುಟ್ಟಿಸಿತು. ಚಿಕ್ಕಮಗಳೂರಿನಲ್ಲಿ ನಡೆದ ಬಾಬಾಬುಡನಗಿರಿ ಕುರಿತ ಕಾರ್ಯಕ್ರಮದಲ್ಲಿ, ಶಬನಂ ವೀರಮಾನ್ವಿ ಹಾಡಿದ ಕಬೀರ್ ಭಜನನ್ನು ಕೇಳಿ ಅವರು `ಹಾ! ಎಂಥಾ ಎನರ್ಜಿ ಮತ್ತು ತನ್ಮಯಗೊಳಿಸುವ ಶಕ್ತಿಯಿದೆ ಈ ಕಂಠಕ್ಕೆ’ ಎಂದು ಆನಂದಪಟ್ಟಿದ್ದನ್ನು ನೆನೆಸಿಕೊಂಡೆ.

ನಾಸ್ತಿಕರು ಅಥವಾ ಕೋಮುವಾದ ಮೂಲಭೂತವಾದ ವಿರೋಧ ಮಾಡುವವರು, ಜನತೆಯ ಧಾರ್ಮಿಕ ಲೋಕಗಳ ಬಗ್ಗೆ ಗೌರವವುಳ್ಳವರು; ಅಲ್ಲಿರುವ ಕಲೆ ಸೌಂದರ್ಯಗಳ ಬಗ್ಗೆ ಪ್ರೀತಿಯುಳ್ಳವರು- ಎಂದರೆ ಕೆಲವರು ನಂಬುವುದಿಲ್ಲ. ಶಕ್ತಿ ರಾಜಕಾರಣವು ಧರ್ಮವನ್ನು ತನ್ನ ಹತ್ಯಾರದಂತೆ ಬಳಸುವುದನ್ನು ವಿರೋಧಿಸುವುದು ಬೇರೆ: ನಿತ್ಯ ಜೀವನದಲ್ಲಿ ಸಾಮಾನ್ಯ ಜನ ಬದುಕುವ ಧರ್ಮವನ್ನು ಮನ್ನಿಸುವುದು ಬೇರೆ ಎಂದರೆ, ಅವರಿಗೆ ಅರ್ಥವಾಗುವುದಿಲ್ಲ. ಅರ್ಥವಾಗುವ ಕೆಲವರು ಇವುಗಳ ನಡುವಿನ ಫರಕನ್ನು ಉದ್ದೇಶಪೂರ್ವಕವಾಗಿ ಮರೆಯಿಸಿ, ‘ವಿಚಾರವಾದಿ’ ‘ಬುದ್ಧಿಜೀವಿ’ ಲೇಖಕರು’ ಎಂಬುವರನ್ನು ‘ಸಮಾಜದ ಕ್ಷೇಮಕ್ಕಾಗಿ ನಿವಾರಿಸಬೇಕಾದ ಪೀಡೆಗಳು’ ಎಂಬ ಗೊಂದಲದ ಸನ್ನಿವೇಶವನ್ನು ನಿರ್ಮಾಣ ಮಾಡಿರುವರು.

ಈ ಸನ್ನಿವೇಶವೇ ಲೇಖಕರ ಹತ್ಯೆಗಳಿಗೂ ಕಾರಣವಾಗುತ್ತಿದೆ. ಆದರೆ ನಿಜವಾದ ವಿಚಾರವಾದವು, ಧರ್ಮದ ಹೆಸರಲ್ಲಿರುವ ಮತೀಯ ರಾಜಕಾರಣವನ್ನು ನಿರಾಕರಿಸುತ್ತಲೇ, ಪರಂಪರೆಯಿಂದ ಬಂದ ಜೀವನ ಕ್ರಮಗಳ ಬಗ್ಗೆ, ಅದು ಸೃಷ್ಟಿಮಾಡಿರುವ ಅಡುಗೆ, ವಾಸ್ತು, ಇತ್ಯಾದಿ ಕ್ಷೇತ್ರಗಳಲ್ಲಿರುವ ಕುಶಲತೆ ಬಗ್ಗೆ ಅಪಾರ ಶ್ರದ್ಧೆ ತೋರುತ್ತದೆ. ಇದು ಕಾರಂತ ಕುವೆಂಪು ಅವರಿಂದ ಕನ್ನಡದಲ್ಲಿ ಹರಿದು ಬಂದಿರುವ ಪರಂಪರೆ. ಲೋಹಿಯಾ ಅವರು ಮಹಾನ್ ವಿಚಾರವಾದಿ. ಆದರೆ ಅವರ `ರಾಮಕೃಷ್ಣಶಿವ’ ಲೇಖನ ಸಾಂಸ್ಕøತಿಕ ಆಸ್ಥೆಯಿರುವ ಮನಸ್ಸು ಮಾತ್ರ ಬರೆಯುವಂಥದ್ದು. ರಾಜಶೇಖರ್ ಇಂಥಾ ಪರಂಪರೆಗೆ ಸೇರಿದ ಚಿಂತಕರು.

ರಾಜಶೇಖರ್ ಜೀವವಿಮಾ ಕಛೇರಿಯಲ್ಲಿ ಸಹಾಯಕರಾಗಿ ಸೇವೆ ಸಲ್ಲಿಸಿದವರು. ಕಳೆದ ದಶಕದಿಂದ ಕೋಮಸೌಹಾರ್ದ ಚಳುವಳಿಯಲ್ಲಿ ಗುರುತಿಸಿಕೊಂಡಿದ್ದ ಅವರು, ಜೀವಮಾನ ಉದ್ದಕ್ಕೂ ಬೇರೆಬೇರೆ ಜನಪರ ಚಳುವಳಿಗಳ ಭಾಗವಾದವರು; ಸಾವಿರಾರು ಬೀದಿಭಾಷಣಗಳನ್ನು ಮಾಡಿದವರು. ಅವರ ವಿಮರ್ಶೆ ಓದುವುದು ಮತ್ತು ಭಾಷಣ ಕೇಳುವುದು ಎಂದರೆ, ಸಾಹಿತ್ಯವನ್ನೂ ಅದರ ಘನತೆಯಲ್ಲಿ, ಸಮಾಜವನ್ನು ಅದರ ಸಂಕೀರ್ಣತೆಯಲ್ಲಿ, ಅರಿಯುವ ಕ್ರಮವೇ ಆಗಿದೆ. ಅವರ ಚಿಂತನೆ ಮತ್ತು ಭಾಷೆಗಳಲ್ಲಿರುವ ತೀಕ್ಷ್ಣತೆಗೂ ವ್ಯಕ್ತಿತ್ವದಲ್ಲಿರುವ ತಳಮಳಿಕೆಗೂ ಕಾರಣ, ಅವರ ಸೂಕ್ಷ್ಮಸಂವೇದನೆ ಮಾತ್ರವಲ್ಲ, ಹಾಲಿ ಕರಾವಳಿ ಕರ್ನಾಟಕದ ಪ್ರಕ್ಷುಬ್ಧ ಸನ್ನಿವೇಶ ಕೂಡ.

ಮಾತುಕತೆಯಲ್ಲಿ ನಾನು ಕೇಳುತ್ತಿದ್ದ ಪ್ರಶ್ನೆಗಳಿಗೆ ಅವರು ಬಹಳ ಸಲ `ನನಗೆ ಗೊತ್ತಿಲ್ಲ’ ಎಂದು ವಿವರಣೆ ಶುರುಮಾಡುತ್ತಿದ್ದರು. ಆದರೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಅವರಷ್ಟು ಓದಿದವರು ಕನ್ನಡದಲ್ಲಿ ಕಡಿಮೆ. ಅವರಷ್ಟು ಆಳವಾದ ವ್ಯಾಪಕವಾದ ಓದನ್ನು ವಿಶ್ವವಿದ್ಯಾಲಯಗಳಲ್ಲಿರುವ ನಾವು ಮಾಡಿದ್ದರೆ, ನಮ್ಮ ವಿದ್ಯಾರ್ಥಿಗಳು ಏನೇನಾಗಿರುತ್ತಿದ್ದರೊ? ಆ ದಿನದ ಮಾತುಕತೆಯಲ್ಲಿ ನನಗೆ ಅವರು ಆಂಗ್ಲ ಶಿಕ್ಷಕರಾಗಿದ್ದ ಸಂಗತಿ ಆಕಸ್ಮಿಕವಾಗಿ ತಿಳಿಯಿತು. ಅವರ ಇಂಗ್ಲೀಶ್ ಓದು ಕೂಡ ವ್ಯಾಪಕ.

ಅವರೊಬ್ಬ ಅದ್ಭುತ ಕನ್ನಡ ಗದ್ಯಕಾರ. ಕನ್ನಡದಲ್ಲಿ ಅವರಂತೆ ಮುಕ್ಕಾಗದ ನೈತಿಕ ಪ್ರಜ್ಞೆ ಮತ್ತು ಧೀಮಂತಿಕೆಯುಳ್ಳ ಚಿಂತಕರು ವಿರಳ. ಕನ್ನಡ ಬರೆಹದಲ್ಲಿರುವ ಜಡತೆ ಮತ್ತು ಲಯಗೇಡಿತನ ಕಂಡಾಗಲೆಲ್ಲ ಹರಿಹಾಯುತ್ತಿದ್ದ ಲಂಕೇಶ್, ತಮ್ಮ ಸಾಯುವ ಕೊನೆಯ ಕ್ಷಣಗಳಲ್ಲಿ ಬರೆದ ಟಿಪ್ಪಣಿ, ರಾಜಶೇಖರ ಅವರ ಪ್ರಾಂಜಲವಾದ ಕನ್ನಡವನ್ನು ಕುರಿತಾಗಿತ್ತು. ಬಾಳಿಡೀ ಪ್ರತಿರೋಧ‌ ಮತ್ತು ಆಕ್ಟಿವಿಸಂನಿಂದ ಜಗಜಗಿಸಿದ ರಾಜಶೇಖರ್ ಅವರಲ್ಲಿ, ಮತೀಯವಾದವು ದೇಶವನ್ನು ಈ ಪರಿಯಲ್ಲಿ ಆವರಿಸಿಕೊಂಡಿರುವ ಬಗ್ಗೆ ನಿರಾಶೆಯಿತ್ತು; ಅವರು ಮತ್ತಷ್ಟು ಹತಾಶೆಯ ಗಳಿಗೆಗಳಿಗೆ ತಮ್ಮನ್ನು ಸಿದ್ಧಗೊಳಿಸಿಕೊಳ್ಳುತ್ತಿದ್ದಾರೆ ಎಂದೂ ಅನಿಸಿತು. ಒಳ್ಳೆಯ ಮಾತುಗಾರರಾದ ಅವರು, ಮಾತು ಮತ್ತು ಬರೆಹದ ನಿಷ್ಫಲತೆಯನ್ನೂ ಅರಿತವರು. ಸದ್ಯದ ಚಾರಿತ್ರಿಕ ಸನ್ನಿವೇಶವೇ ಅವರ ಬರೆಹ ಮತ್ತು ಮಾತಿಗೆ ತೀವ್ರತೆಯನ್ನೂ ವಿಷಾದದ ಗುಣವನ್ನೂ ತಂದುಕೊಟ್ಟಂತೆ ತೋರಿತು.

“ನೀವು ಅಷ್ಟೊಂದು ಬೀದಿಭಾಷಣ ಮಾಡಿದವರು. ಆದರೆ ಸೆಮಿನಾರುಗಳಲ್ಲಿ ಬರಕೊಂಡು ಬಂದು ಮಾತಾಡ್ತೀರಲ್ಲ, ಯಾಕೆ?” ಎಂದೆ. “ಎಕ್ಸಟೆಂಪರ್ ಮಾತಾಡೋ ಧೈರ್ಯವೇ ಇಲ್ಲ ನನಗೆ. ಮೈಕ್ ಮುಂದೆ ನಿಂತು ಮಾತಾಡುವಾಗ ಯೋಚನೆ ಮಾಡಿಕೊಂಡು ಬಂದಿದ್ದ ಮಾತೆಲ್ಲ ಮರೆತೇ ಹೋಗುತ್ತೆ. ನನಗೆ ಅಲ್ಲಲ್ಲೇ ನಿಂತುಗೊಂಡು ಸೃಷ್ಟಿ ಮಾತಾಡೋವಷ್ಟು ಸೃಜನಶೀಲತೆ ಇಲ್ಲ. ಕಿ.ರಂ. ಮಾಡ್ತಿದ್ದರಂತೆ ಅದನ್ನ. ಕಿ.ರಂ. ಭಾಷಣ ಮಾಡೋಕೆ ಪುಟಗಟ್ಟಲೆ ನೋಟ್ಸ್ ಮಾಡ್ಕೊಂಡು ಹೋಗ್ತಾರೆ. ಮೈಕ್ ಮುಂದೆ ನಿಂತುಕೊಳ್ತಾರೆ.

ಆಮೇಲೆ ಅದನ್ನು ನೋಡೋದೇ ಇಲ್ಲವಂತೆ. ಮಾಡ್ಕೊಂಡಿರೋ ನೋಟ್ಸೇ ಬೇರೆ; ಎದುರುಗಡೆ ಬಂದು ಹೇಳೋದೇ ಬೇರೆ. ಆ ತರಹದ ಕುಶಲತೆ ನನ್ನ ಹತ್ತರ ಇಲ್ಲ. ಮಾತಿಗೆ ತಡವರಿಸೋದೇ ಜಾಸ್ತಿ. ಸುಮಾರಷ್ಟು ಡಿಸಾಸ್ಟರಸ್ ಎಕ್ಸ್ ಪೀರಿಯನ್ಸ್ ಆಗಿವೆ ನನಗೆ” ಎಂದರು. “ನೀವು ಮೇನ್ ಸ್ಟ್ರೀಂ ಪತ್ರಿಕೆಗಳಲ್ಲಿ ಯಾಕೆ ಬರೆಯೋಲ್ಲ?” ಎಂದೆ. “ನಾನು ಬರೆದಿದ್ದನ್ನು ಅವರು ಹಾಕುವುದಿಲ್ಲ. ನಾನು ಹಿಂದೆ ಬರೆಯುತ್ತಿದ್ದುದು `ಲಂಕೇಶ್ ಪತ್ರಿಕೆ’ಗೆ; ನಂತರ ‘ಗೌರಿಲಂಕೇಶ್’ಗೆ. ಈಗ ಎರಡೂ ಇಲ್ಲ. ನನಗೆ ಬರೆಸುವವರ ಪ್ರಚೋದನೆಯೇ ಇಲ್ಲವಾಗಿದೆ” ಎಂದು ಜವಾಬಿಸಿದರು.

ಹೊರಡುವಾಗ ಅವರ ಜತೆ ನಿಂತು ಫೋಟೊ ತೆಗೆಸಿಕೊಂಡೆ. ಅವರನ್ನು ನಗಿಸಬೇಕೆಂದು ನಾನೂ ವಿಷ್ಣುವೂ ಯತ್ನಿಸಿದೆವು. ತುಸುವೇ ತುಟಿ ಅರಳಿಸಿದರು. ಆಹೊತ್ತಿಗೆ ಮಳೆನಿಂತಿತ್ತು. ಆಗಸ ಹೊರಪಾಗಿತ್ತು. ಬರುತ್ತ ಅವರ ಕಾನನ ಸದೃಶ ಹಿತ್ತಲಿನಿಂದ ಒಂದು ಹೂಗಿಡದ ಸಸಿಯನ್ನು ಹಿಡಿದುಕೊಂಡು ಬಂದೆ.

ತಲ್ಲೂರು ಪ್ರತಿಷ್ಠಾನದ ಉಪನ್ಯಾಸ ಮಾಲೆಯಲ್ಲಿ, ‘ಬಹುತ್ವದ ಬಹುಮುಖಗಳು’ ವಿಷಯ ಕುರಿತು ಮಾತಾಡಲು ಉಡುಪಿಗೆ ಹೋಗಿದ್ದೆ. ಅಲ್ಲಿಗೆ ಹೋದಾಗಲೆಲ್ಲ ನನ್ನ ಪ್ರಿಯ ಚಿಂತಕರಾದ ಜಿ.‌ರಾಜಶೇಖರ ಅವರನ್ನು ಕಾಣುವ, ಚರ್ಚಿಸುವ ಇರಾದೆಯೂ ಇರುತ್ತಿತ್ತು. ನನ್ನ ಉಪನ್ಯಾಸವನ್ನು ಅವರಿಗೆ ಅರ್ಪಿಸಿ ಮಾತಾಡಿದೆ. ಮಾತು ಮುಗಿಯುವಾಗ ಅವರೇ ಸಭಾಂಗಣಕ್ಕೆ ಬಂದರು. ನನ್ನ ಓದು ಬರೆಹಗಳ‌ ಮೇಲೆ ತುಂಬ ಪ್ರಭಾವ ಬೀರಿದ ಅವರನ್ನು ಈ ಹಿಂದೆ ಮುಖಾಮುಖಿ ಮಾಡುವಾಗೆಲ್ಲ, ಗುರುವಿನ ಮುಂದೆ ಕೂತಾಗಿನ ಆದರ ಅಳುಕು ವಿಸ್ಮಯ. ಈಗ ಒಂದು ಮಗುವಿನ ಮುಂದೆ ಕೂತಂತಾಯಿತು. ಎದೆ ಭಾರವಾಗಿಸುವ ರೂಪಾಂತರ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಮರೆಯಾದ ಅಪೂರ್ವ ಚಿತ್ರಕಲಾ ಪ್ರತಿಭೆ ‘ಶೋಭಾ ಕರಣಿಕ್’

Published

on

ಶೋಭಾ ಕರಣಿಕ್
  • ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ

ವರು ಬಿಡಿಸುತ್ತಿದ್ದ ರೇಖೆಗಳು ನಮ್ಮ ದೇಶೀ ಸಂಸ್ಕೃತಿಯ ವಕ್ತಾರಿಕೆಯ ಪಾತ್ರ ನಿರ್ವಹಿಸುತ್ತಿದ್ದವು. ಕನ್ನಡದ್ದೇ ಆದ ಕಲಾತ್ಮಕ ಪರಂಪರೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಅವರ ಚಿತ್ರಗಳು ಜೀವಂತಿಕೆಯ ಗುಣಲಕ್ಷಣದೊಂದಿಗೆ ಕಂಗೊಳಿಸುತ್ತಿದ್ದವು.

ಸಾಂಪ್ರದಾಯಿಕ ಚಿತ್ರಶೈಲಿಯನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಮಣಿಸಿ ಪರಂಪರೆಯೊಳಗೇ ಅಡಗಿದ್ದ ಮೌಲಿಕ ಮಾದರಿಗಳನ್ನು ಮನಗಾಣಿಸುವ ಶ್ರದ್ಧೆಯೊಂದಿಗೇ ಅವರು ಚಿತ್ರವಿನ್ಯಾಸ ರೂಪಿಸುತ್ತಿದ್ದರು. ಇನ್ಸ್ಟಾಗ್ರಾಮ್, ಫೇಸ್‌ಬುಕ್ ಮತ್ತಿತರ ಮಾಧ್ಯಮಗಳ ಮೂಲಕ ತಮ್ಮ ಚಿತ್ರಗಳನ್ನು ಕಾಣಿಸುತ್ತಿದ್ದರು. ಪರಂಪರೆ ಮತ್ತು ವರ್ತಮಾನವನ್ನು ಬೆಸೆದು ಹೊಸ ಬಗೆಯ ಚಿತ್ರಪ್ರಯೋಗಗಳನ್ನು ನಡೆಸುವ ಹುಮ್ಮಸ್ಸಿನೊಂದಿಗೆ ಚಿತ್ರಕಲಾಯಾನ ಮುಂದುವರೆಸಿದ್ದರು. ಅವರ ಹೆಸರು ಶೋಭಾ ಕರಣಿಕ್.

ಇತ್ತೀಚೆಗಷ್ಟೇ ಅವರ ಚಿತ್ರಕಲಾಯಾನ ನಿಂತಿತು. ಅವರ ನಿಧನವು ವಿನೂತನವಾದ ಪ್ರಯೋಗಶೀಲ ಚಿತ್ರಕಲಾ ಸಾಧ್ಯತೆಗಳನ್ನು ತಡೆದು ನಿಲ್ಲಿಸಿತು. ಪುರಾಣದ ಕಥನ ಪ್ರಸಂಗಗಳಲ್ಲಿ ಉಲ್ಲೇಖಿತ ದೇವರು-ದೇವತೆಗಳ ಅಸ್ಮಿತೆ ಮತ್ತು ದೇಸೀ ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸಗಳನ್ನು ಸಮನ್ವಯಗೊಳಿಸಿ ಚಿತ್ರಕಲೆಗೆ ಹೊಸ ಆಯಾಮ ತಂದುಕೊಟ್ಟ ಪ್ರತಿಭೆಯಾಗಿ ಶೋಭಾ ಕರಣಿಕ್ ಅವರದ್ದು ವಿಶೇಷ ವ್ಯಕ್ತಿತ್ವವಾಗಿತ್ತು. ಮ್ಯೂರಲ್ ಪೇಂಟಿಂಗ್‌ನಲ್ಲಿ ಅವರಿಗಿದ್ದ ಪರಿಣತಿ, ಉತ್ತರ ಕನ್ನಡದ ಕಾವಿ ಕಲೆಯ ಕುರಿತಾದ ವಿಸ್ತೃತ ಜ್ಞಾನವು ಚಿತ್ರಕಲೆಯನ್ನು ಉನ್ನತೀಕರಿಸುವುದಕ್ಕೆ ಅವರಿಗೆ ನೆರವಾಗಿತ್ತು.

ಕಲೆಯ ಜೊತೆಗಿನ ಅನುಸಂಧಾನದ ಕ್ಷಣಗಳು ಅಪೂರ್ವ. ಒಂದು ನಿರ್ದಿಷ್ಟ ನಿರ್ಣಾಯಕ ಸಂದರ್ಭ, ಸಮಯದಲ್ಲಿ ಕಲೆಯೊಂದು ವ್ಯಕ್ತಿತ್ವವನ್ನು ಪ್ರಭಾವಿಸಿ ಸೃಜನಶೀಲತೆಯ ಹಸಿವನ್ನು ನೆಲೆಗೊಳಿಸುವುದಕ್ಕೆ ಪ್ರೇರಣೆಯಾಗುತ್ತದೆ. ಕಲೆಯ ಪ್ರಭಾವ ಎರಡು ಬಗೆಯದ್ದು. ಸಹೃದಯರನ್ನು ತನ್ನ ಕಲಾತ್ಮಕ ಮಾದರಿಗಳಿಂದ ಸೆಳೆದು ಅವರೊಳಗೆ ವಿಶೇಷ ಅನುಭೂತಿ ಧಾರೆ ಎರೆಯುವಂಥದ್ದು ಒಂದು ಬಗೆಯಾದರೆ ಹೀಗೆ ಸೆಳೆದುಕೊಂಡು ಮತ್ತೆ ಮತ್ತೆ ಪ್ರಭಾವಿಸುತ್ತಾ ಸಹೃದಯರನ್ನೇ ಕಲಾವಿದರನ್ನಾಗಿಸುವ ಸಾಧ್ಯತೆ ಮತ್ತೊಂದು ತೆರನಾದದ್ದು.

ಈ ಕಾರಣಕ್ಕಾಗಿಯೇ ಕಲಾತ್ಮಕ ಸಂಭವನೀಯತೆಯು ಅನನ್ಯವೆನ್ನಿಸಿಕೊಂಡಿದೆ. ಇಂಥ ಅನನ್ಯತೆಯೊಂದಿಗೇ ಶೋಭಾ ಕರಣಿಕ್ ಗುರುತಿಸಿಕೊಂಡಿದ್ದರು. ಅವರು ಓದಿದ್ದು ತಾಂತ್ರಿಕ ವಿಜ್ಞಾನ. ಆದರೆ, ಅವರ ನಿಜದ ಪ್ರತಿಭೆ ಅಭಿವ್ಯಕ್ತವಾದದ್ದು ಚಿತ್ರಕಲೆಯ ಮೂಲಕ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರಿಸರದಲ್ಲಿ ಬೆಳೆದ ಶೋಭಾ ಕರಣಿಕ್ ಮೊದಲಿನಿಂದಲೂ ದೇಶೀ ಕಲೆಯ ಕುರಿತು ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದರು. ಹೈಸ್ಕೂಲ್ ಓದುತ್ತಿರುವಾಗಲೇ ಕಾವಿಕಲೆಯ ವಿನ್ಯಾಸ ಅವರನ್ನು ಸೆಳೆದಿತ್ತು. ಇವುಗಳನ್ನು ಮತ್ತೆ ಮತ್ತೆ ನೋಡುತ್ತಾ ಹೋದಂತೆಲ್ಲಾ ಕಾವಿ ಕಲೆಯ ಕುರಿತ ಆಕರ್ಷಣೆ ಕಲಿಕೆಯ ಹಂಬಲವಾಗಿ ಮಾರ್ಪಟ್ಟಿತು. ಉತ್ತರ ಕನ್ನಡದ ಟೆಂಪಲ್ ರ‍್ಟ್ ಪ್ರಕಾರದ ಭಾಗವಾಗಿ ಕಾವಿ ಕಲೆಯನ್ನು ಪರಿಚಯಿಸುವ ದೃಷ್ಟಿಯಿಂದ ಅವರು ರಚಿಸಿದ್ದ ತರಹೇವಾರಿ ವಿನ್ಯಾಸಗಳು ವಿವಿಧ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದವು.

ಕಾವಿ ಕಲೆಯೂ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಗಳು ಈ ಹಿಂದಿನ ಕಾಲದ ತಲೆಮಾರನ್ನಷ್ಟೇ ಪ್ರಭಾವಿಸಿದ್ದಲ್ಲದೇ ನಂತರದ ಹೊಸ ಪೀಳಿಗೆಯನ್ನೂ ಆಕರ್ಷಿಸುವ ಗುಣ ಹೊಂದಿವೆ. ಮೂಲ ಅಂತಃಸತ್ವಕ್ಕೆ ಧಕ್ಕೆಯೊದಗದ ಹಾಗೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಈ ಸಾಂಪ್ರದಾಯಿಕ ಚಿತ್ರಕಲಾ ವಿನ್ಯಾಸಗಳನ್ನು ಮರುರೂಪಿಸಬಹುದು. ಹೊಸ ಕಾಲದಲ್ಲಿ ಅವುಗಳ ಮಹತ್ವವನ್ನು ಮನಗಾಣಿಸಬಹುದು ಎಂಬುದು ಅವರ ಆಶಯವಾಗಿತ್ತು.

ಕಲೆಯೊಂದು ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಪಲ್ಲಟಗಳು ಸಹಜ. ಈ ಪಲ್ಲಟಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಇಂತಹ ಕಲೆಗಳಿಗೆ ಹೊಸಕಾಲದಲ್ಲೂ ಜೀವಂತಿಕೆಯನ್ನು ತಂದುಕೊಡುವ ಪ್ರಯತ್ನದ ಅಗತ್ಯವನ್ನು ಮನಗಾಣಿಸುವುದಕ್ಕಾಗಿಯೇ ಶೋಭಾ ಕರಣಿಕ್ ಅವರು ಚಿತ್ರಕಲಾ ರಚನೆಯ ವೈವಿಧ್ಯಮಯ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದರು.

ಅವರ ನಿಧನದಿಂದ ಈ ಪ್ರಯೋಗಶೀಲ ಹೆಜ್ಜೆಗಳು ನಿಂತಂತಾಗಿವೆ. ಆದರೆ, ಅವರು ಪರಂಪರೆ ಮತ್ತು ವರ್ತಮಾನವನ್ನು ಸಮನ್ವಯಗೊಳಿಸಿ ಸಾಬೀತುಪಡಿಸಿದ ಅಪೂರ್ವ ಚಿತ್ರಕಲಾ ಪ್ರಯೋಗಶೀಲತೆಯ ಜೀವಂತಿಕೆ ಹೊಸ ಪೀಳಿಗೆಗೆ ಸದಾ ಸ್ಫೂರ್ತಿಯ ಸೆಲೆಯಾಗಿರುತ್ತದೆ. ಅವರ ಹೆಸರಿನ ಇನಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಇಂಥ ಸ್ಫೂರ್ತಿಯ ಪ್ರಭೆಯನ್ನು ದಾಟಿಸುತ್ತಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಹೊಸತನದ ಹೊಸ್ತಿಲಲ್ಲಿ..!

Published

on

ಬರಹ : ಮೀನಾಕ್ಷಿ. ಬಿ
  • ಮೀನಾಕ್ಷಿ .ಬಿ, ಎಂ. ಎ ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ

ಹೊಸವರ್ಷ ವೆಂಬುದು ಪ್ರತಿಯೊಬ್ಬರ ಬಾಳಲ್ಲಿ ವರ್ಷಕ್ಕೊಮ್ಮೆ ಬರುವ ಹೊಸದಿನಗಳ ಆಗಮನ ಯಾಕೆಂದರೆ ಹೊಸತನವನ್ನು ತರುತ್ತಾ ಇರುವ ಹೊಸವರ್ಷ ಕೂಡ ಒಂದು ಜೀವನದ ಭರವಸೆ, ನಿರೀಕ್ಷೆ ಕನಸುಗಳ ಬಂಡಿಯ ಮೇಲೆ ಸಾಗುವ ಪ್ರಯಾಣ ನಮ್ಮ ಜೀವನ.

ವ್ಯಕ್ತಿಯ ನಂಬಿಕೆಯ ಆಧಾರದ ಮೇಲೆಯೇ ಜೀವನ ಸಾಗುಸುತ್ತಿರುವುದು.ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಕೂಡ ಕಷ್ಟ -ಸುಖ ದುಃಖದ ಸಂಗತಿಗಳು ಇದ್ದೆ ಇರುತ್ತದೆ. ಕೆಲವೊಂದು ಬಾರಿ ಹತಾಶೆಯನ್ನು ಹೊಂದಿ ಜೀವನದಲ್ಲಿ ಜಿಗುಪ್ಸೆ ಒಂದು ಕೆಟ್ಟ ನಿರ್ಧಾರಕ್ಕೆ ಮನಸ್ಸು ದಾರಿ ಮಾಡಿಕೊಡುತ್ತದೆ. ಹಾಗೆಯೇ ಕಷ್ಟ ಇದ್ದಲ್ಲಿ ಸುಖವಿರುವುದುಂಟು ಅನ್ನುವ ಹಾಗೇ ಇವತ್ತಲ್ಲ ನಾಳೆ ಒಳ್ಳೆಯ ದಿನಗಳು ನಮ್ಮ ಜೀವನದಲ್ಲಿ ಬರಬಹುದೆಂಬ ಭರವಸೆ,ಆತ್ಮವಿಶ್ವಾಸವನ್ನು ಇಟ್ಟುಕೊಂಡು ಜೀವನ ನಡೆಸುತ್ತಲೇ ಇದ್ದೇವೆ.

ಈ ವರ್ಷ ಒಳ್ಳೆಯದಾಗಿಲ್ಲ ಅಂದರೆ ಏನು ಮುಂದಿನ ವರ್ಷ ಆದರೂ ನನ್ನ ಬದುಕು ಬದಲಾಗಬಹುದು ಎಂಬ ಹೊಸತನವನ್ನು ನಮ್ಮಲ್ಲಿ ಭರವಸೆ,ನಂಬಿಕೆಯ ಬೇರಿನೊಂದಿಗೆ ಬೆರೆಸಿಕೊಂಡು ಬದುಕಬೇಕು.ನಾಳೆಯ ದಿನಗಳ ಮೇಲಿನ ಅನಿರೀಕ್ಷಿತ ತೀರಿವಿನಿಂದಾಗುವ ಬದುಕಿನಲ್ಲಾಗುವ ಬದಲಾವಣೆ ಹೊಸತನದ ಚಾಪನ್ನು ಮೂಡಿಸುತ್ತದೆ.
ಎಂಥ ಹತಾಶ ಮನಸ್ಥಿತಿಯವರಲ್ಲೂ ಹೊಸವರ್ಷ ಭರವಸೆಯ ಅಭಯ ಹಸ್ತವನ್ನು ಚಾಚುತ್ತದೆ. ಅದೆಲ್ಲಿಂದಲೇ ಆತ್ಮ ವಿಶ್ವಾಸದ ಬೆಳಕಿನ ಕಿಡಿಯೊಂದು ಕಾಣಿಸಿಕೊಳ್ಳುತ್ತದೆ.

ಹೊಸವರ್ಷವೆಂಬುದು ಕೇವಲ ಸಂಭ್ರಮದ ಕಾಲ ಮಾತ್ರವಲ್ಲ. ಕಳೆದ ದಿನಗಳತ್ತ ಹಿಂತಿರುಗಿ ನೋಡುವ ಸಮಯ ಕೂಡ ಹಿಂದಿನ ದಿನಗಳ ಪುಟಗಳನ್ನು ತೆಗೆದು ನೋಡಿದರೆ. ಉತ್ಸಾಹದ ಗಳಿಗೆಗಳು ಮುಂದಿನ ಕೆಲಸಗಳಿಗೆ ಚೈತನ್ಯ, ಉತ್ಸಾಹ ನೀಡಬಲ್ಲದು.ನಮ್ಮ ದಿಕ್ಕಿಲ್ಲದ ದಾರಿಗೆ ಖಚಿತ ದಿಕ್ಕು ದಾರಿಯನ್ನು ತೋರಬಲ್ಲದು.

ಜೀವನದ ಪ್ರಯಾಣಕ್ಕೆ ಒಂದು ನಿಲ್ದಾಣವಾಗಿದೆ. ನಾವು ಕಾಣುವ ಕನಸಗಳು ಕನಸಾಗಿಯೇ ಉಳಿದಿದೆ ಯಾಕೆಂದರೆ ನಮ್ಮಲ್ಲಿನ ಬೇಜವಾಬ್ದಾರಿ, ನಿರ್ಲಕ್ಷತನ ಆಮೇಲೆ ಮಾಡಿದರೆ ಆಯ್ತು ಅನ್ನೋ ಮನೋಭಾವನೆ ಯಾವುದರ ಬಗ್ಗೆಯೂ ಆಸಕ್ತಿ ಕೊಡದೆ ಇರೋದು ಎಲ್ಲವು ನಮ್ಮ ಕನಸಿನ ಜೀವನ ರೂಪಿಸಿಕೊಳ್ಳುವಲ್ಲಿ ಸಫಲರಾಗದೆ ಉಳಿಯಲು ಕಾರಣ.

ಮೊದಲು ಆತ್ಮವಿಶ್ವಾಸ ಬೇಕು ನಾನು ಈ ಕೆಲಸವನ್ನು ಮಾಡುವೆ ಎಂಬ ಒಂದು ನಿರ್ಧಿಷ್ಟ ಗುರಿ ಇರಬೇಕು ಅಂಗಿದ್ರೆ ಅಷ್ಟೇ ಜೀವನದ ಪಯಣದ ಹಾದಿಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲವಾದಲ್ಲಿ ಸೋಲನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಮುಂದಿನ ದಿನಗಳ ಆಗಮನದೊಂದಿಗೆ ನಾವು ಕಂಡ ಕನಸನ್ನು ಈಡೇರಿಸಿಕೊಳ್ಳುವ ಸತತ ಪ್ರಯತ್ನದೊಂದಿಗೆ ಬರುವ ದಿನವನ್ನು ಸ್ವಾಗತಿಸಿಕೊಳ್ಳೋಣ.
ಎಲ್ಲರ ಬಾಳಲಿ ಹರುಷ ,ಸಂತೋಷ ಮನೆಮಾಡಲಿ ಎಂದು ಆಶಿಸುತ್ತಾ ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಕಾಮರೂಪದ ಪ್ರಭಾಕರ

Published

on

  • ಪ್ರೊ.ರಹಮತ್ ತರೀಕೆರೆ

ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ `ಆದಿಮ’ಕ್ಕೆ; ಇನ್ನೊಂದು-`ಕಾಮರೂಪಿ’ ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. 50ರ ದಶಕದ ಕೊನೆಯಲ್ಲಿ ಕರ್ನಾಟಕ ಬಿಟ್ಟುಹೋದ ಪ್ರಭಾಕರ, ‘ಹಿಂದೂ’ ಪತ್ರಿಕೆಯ ವರದಿಗಾರರಾಗಿ ಆಫ್ರಿಕಾ ಅಮೇರಿಕ ಬಾಂಗ್ಲಾದೇಶ ಈಶಾನ್ಯ ಭಾರತವನ್ನೆಲ್ಲ ಅಲೆದಾಡಿ, ಕಡೆಗೆ ಕಾಮರೂಪದಲ್ಲಿ (ಅಸ್ಸಾಮಿನ ಪುರಾತನ ಹೆಸರಿದು) ನೆಲೆಸಿಬಿಟ್ಟರು.

`ಕಾಮರೂಪ’ ಶಬ್ದಕ್ಕೆ ಬಯಸಿದ ರೂಪಧಾರಣೆ ಮಾಡುವ ಮಾಯಾವಿ ವಿದ್ಯೆ ಎಂಬರ್ಥವೂ ಇದೆ. ಎಂಬತ್ತರ ಪ್ರಾಯದಲ್ಲಿ ಕರ್ನಾಟಕಕ್ಕೆ ಮರಳಿ ಬಂದಿರುವ ಪ್ರಭಾಕರ ಅವರು, ತಾವು ಹುಟ್ಟಿಬೆಳೆದ ಮನೆಯಲ್ಲಿ ಬಿಡಾರ ಹೂಡಿದ್ದಾರೆ. ಹಿರೀಕರು ಕಟ್ಟಿದ ದೊಡ್ಡಮನೆ. ಮನೆಯೊಳಗೊಂದೇ ಜೀವ; ಮನೆ ತುಂಬ ಪುಸ್ತಕದ ರಾಶಿ (ಹೆಚ್ಚಿನವು ಇಂಗ್ಲೀಶ್ ಬಂಗಾಳಿ ಅಸ್ಸಾಮಿ). ನಟ್ಟನಡುವಿರುವ ಹಾಲಿನ ಮೂಲೆಯಲ್ಲಿ ಬೀದಿಗೆ ಬೆನ್ನುಕೊಟ್ಟಂತೆ ಕೂತು, ಲ್ಯಾಪ್‌ಟಾಪಿನಲ್ಲಿ ಬರೆಯುತ್ತ, ವೆಬ್‌ಸೈಟುಗಳನ್ನು ಜಾಲಾಡುತ್ತ, ಬ್ಲಾಗುಗಳನ್ನೋದುತ್ತ ಪ್ರಭಾಕರ ಕುಳಿತಿರುತ್ತಾರೆ.

ಅವರ ಮನಗೆ ಹೋದಾಗಲೆಲ್ಲ ನನಗೆ ರಾಗಿಮುದ್ದೆ ಸೊಪ್ಪಿನ ಸಾರಿನ ಊಟ ಸಿಗುತ್ತದೆ. ಅವರು ಉಣ್ಣುವುದೊಂದು ಅಪೂರ್ವ ದೃಶ್ಯ. ತಣಿಗೆಯ ನಡುವೆ ಹದವಾಗಿ ಬೆಂದು ಕಂಪು ಬೀರುವ ಗೋಂದಿನಂತಹ ಕೆಂಗಪ್ಪು ಬಣ್ಣದ ಬಿಸಿಮುದ್ದೆಯನ್ನಿಟ್ಟು, ಅದರ ತಲೆಯ ಮೇಲೆ ಶಿಖರವನ್ನು ಹಿಮವು ಅಲಂಕರಿಸುವಂತೆ ಬೆಣ್ಣೆಯ ಚೂರನ್ನಿಡುತ್ತಾರೆ; ಬೆಣ್ಣೆಯು ಮುದ್ದೆ ಕಾವಿಗೆ ಕರಗಿ ಇಡೀ ಚೆಂಡನ್ನು ಆವರಿಸಿ ಅಭಿಷೇಕ ಮಾಡಿಸಿಕೊಂಡ ಮೂರುತಿಯಂತೆ ಥಳಥಳ ಹೊಳೆಯುತ್ತದೆ. ಆಗ ಘಮಿಸುವ ಮುದ್ದೆಯನ್ನು ಚೆನ್ನಾಗಿ ಮಿದ್ದು, ಒಂದು ಬದಿಯಿಂದ ಇಷ್ಟಿಷ್ಟೇ ಮುರಿದು ತುತ್ತು ಮಾಡಿ, ಸೊಪ್ಪಿನ ಗಟ್ಟಿಸಾರಲ್ಲಿ ಹೊರಳಾಡಿಸಿ ಗುಕ್ಕನೆ ನುಂಗಿ ಕಣ್ಮುಚ್ಚಿ ಕೊಳ್ಳುತ್ತಾರೆ. ತರುವಾಯ ಶ್ರೀಯುತರು ಜ್ಞಾನೋದಯವಾದ ಸಿದ್ಧನಂತೆ ಅವರ ಮುಖದಲ್ಲಿ ಪರಮಾನಂದದ ಒಂದು ಕಳೆ ಆವಿರ್ಭವಿಸುತ್ತದೆ. ಇದನ್ನೆಲ್ಲ ಕಾಣುವಾಗ, ಲೋಕವನ್ನೆಲ್ಲ ಸುತ್ತಾಡಿರುವ ಇವರು ಕೋಲಾರಕ್ಕೆ ಮುದ್ದೆಸುಖಕ್ಕಾಗಿಯೆ ಬಂದರೇನೊ ಎಂದು ಶಂಕೆ ಬರುತ್ತದೆ. ಪ್ರಭಾಕರ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅನೇಕ ದೂರುಗಳಿವೆ. ಅವುಗಳಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಕುರಿತು ಅದರಲ್ಲಿ ವಿವರಗಳೇ ಇಲ್ಲ ಎಂಬುದೂ ಒಂದು.

ಕನ್ನಡದ ಅತಿಹಿರಿಯ ಮತ್ತು ಹೆಚ್ಚು ಬರೆಯದ ಲೇಖಕರಲ್ಲಿ ಪ್ರಭಾಕರ ಅವರೂ ಒಬ್ಬರು. ನಾನು ಅವರ ‘ಕುದುರೆಮೊಟ್ಟೆ’ ಕಾದಂಬರಿಯನ್ನೂ ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಸಂಕಲನವನ್ನೂ ಓದಿದ್ದೆ. ಇವುಗಳಲ್ಲಿ ‘ಕುದುರೆ ಮೊಟ್ಟೆ’ ಈಗಲೂ ಪ್ರಿಯವಾದ ಪುಸ್ತಕ. ಅದರಲ್ಲಿರುವ ಕೆಲವು ಪಾತ್ರಗಳು ಕೊಂಚ ವಿಕ್ಷಿಪ್ತವಾಗಿವೆ; ಅಲ್ಲಿನ ಬಾಳಿನ ಸನ್ನಿವೇಶಗಳೂ ಅನಿರೀಕ್ಷಿತವಾಗಿವೆ. ಆದರೆ ಎಲ್ಲಿಯೂ ಹುಸಿ ಅನಿಸದಂತೆ, ಒಂದೇ ಶಬ್ದ ಅಪವ್ಯಯವಾಗದಂತೆ ಅದನ್ನು ಬರೆಯಲಾಗಿದೆ. ಪಾತ್ರಗಳನ್ನು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಮಣಿಸಿ ಕೈಗೊಂಬೆಯಂತೆ ಆಡಿಸುತ್ತ, ಕೆಲವನ್ನು ಮುದ್ದಾಮಾಗಿ ದುರುಳಗೊಳಿಸಿ ಕಲೆಯ ಜಾಣಮುಸುಕಿನಲ್ಲಿ ಅಡಗಿಸುತ್ತ, ಕೆಲವು ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಇಂತಹ ಹೊತ್ತಲ್ಲಿ ಅರ್ಧ ಶತಮಾನದ ಹಿಂದೆ ಪ್ರಕಟವಾದ ಈ ಕಾದಂಬರಿ, ಬಾಳನ್ನು ಕುರಿತು ತೋರುವ ಕಕ್ಕುಲಾತಿ ಕಂಡು ಖುಶಿಯಾಗುತ್ತದೆ. ಕತೆಗಾರರಿಗೆ ತಾವು ಸೃಷ್ಟಿಸುವ ಕೆಲವು ಪಾತ್ರಗಳ ಮೇಲೆ ಕೊಂಚ ಭಾವ ಪಕ್ಷಪಾತವಿರುತ್ತದೆ. ಆದರೆ ತಾವು ಸೃಜಿಸುವ ಎಲ್ಲ ಪಾತ್ರಗಳನ್ನು ತಾಯಿಯಂತೆ ನೋಡುವುದು ಬರೆಹದ ನೈತಿಕತೆ. ಈ ಸಂಗತಿ ಕುವೆಂಪು ಮತ್ತು ಟಾಲ್ ಸ್ಟಾಯ್ ಕಾದಂಬರಿ ಓದಿದವರಿಗೆ ಗೊತ್ತಿದೆ.

ಕಾಮವನ್ನು ಇಟ್ಟುಕೊಂಡು ಜೀವನದ ಸತ್ಯಗಳನ್ನು ಶೋಧಿಸುವ ವಿಷಯದಲ್ಲಿ ಕಾಮರೂಪಿಯವರು, ಒಬ್ಬ ಟಿಪಿಕಲ್ ನವ್ಯಲೇಖಕರೇ. ಆದರೆ ನವ್ಯದ ಕೆಲವು ಲೇಖಕರಲ್ಲಿ ಕಾಣುವಂತೆ, ಅದಕ್ಕವರು ಅನಗತ್ಯ ಪ್ರಾಮುಖ್ಯ ಕೊಡುವುದಿಲ್ಲ. ಅದನ್ನು ಚಪ್ಪರಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಬದಲಿಗೆ, ಮನುಷ್ಯರಾದವರು ಜೀವನದ ಇಕ್ಕಟ್ಟುಗಳಲ್ಲಿ ಸಿಲುಕಿ ಅನಿವಾರ್ಯವಾಗಿ ವರ್ತಿಸುವ ಪರಿಯನ್ನು ತಣ್ಣಗೆ ವ್ಯಂಗ್ಯವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಸತ್ಯಕ್ಕಿರುವ ಹಲವು ಮುಖಗಳನ್ನು ಹಿಡಿಯುವಂತಹ ಕುರುಸೋವಾನ ‘ರಶೋಮನ್’ ಸಿನಿಮಾ ನೆನಪಿಸುವ ಈ ಕಾದಂಬರಿ, ಮತ್ತೆಮತ್ತೆ ಓದಬೇಕು ಎನಿಸುವಷ್ಟು ತಾಜಾ ಆಗಿದೆ. ‘ಉಪಪತ್ತಿಯೋಗ’ ಎಂಬುದನ್ನು ಬಿಟ್ಟರೆ, ಉಳಿದಂತೆ ವ್ಯಕ್ತಿವಾದವನ್ನು ಅತಿಯಾಗಿ ಬಿಂಬಿಸುವ ತಂತ್ರದ ಬಿಗಿತದಲ್ಲಿರುವ ಅವರ ಕತೆಗಳು ಅಷ್ಟು ಆಪ್ತವೆನಿಸಿಲ್ಲ.

ನನಗೆ ಪ್ರಭಾಕರ್ ಕುರಿತು ಆಸಕ್ತಿ ಮೂಡಿಸಿದವರು ಮಾರ್ಕ್ಸ್‌ವಾದಿ ಚಿಂತಕ ಕೆ.ರಾಘವೇಂದ್ರರಾವ್ ಅವರು. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಎ.ಕೆ.ರಾಮಾನುಜನರ ಹೊಂದಾಣಿಕೆಯ ಗುಣವನ್ನು ಕಟುವಾಗಿ ವಿಮರ್ಶಿಸುತ್ತ, ಅಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿರುವ ಬಿಳಿಯರ ಯಜಮಾನಿಕೆಗೆ ಬಾಗದೆ ಹೊರಬಂದ ಪ್ರಭಾಕರ ಅವರ ದಿಟ್ಟ ಸ್ವಭಾವವನ್ನು ಅವರು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದರು. ಪ್ರಭಾಕರ ಅವರನ್ನು ಭೇಟಿಯಾಗಬೇಕು ಎಂದು ಅನಿಸುತ್ತಿತ್ತು. ಅದರಲ್ಲೂ ಭಾರತದ ಶಾಕ್ತಪೀಠಗಳಲ್ಲಿ ಮುಖ್ಯವಾಗಿರುವ ಅಸ್ಸಾಮಿನ ಕಾಮಾಖ್ಯಕ್ಕೆ ಹೋಗಲು ಯತ್ನಿಸುತ್ತಿದ್ದ ನಾನು, ಅಲ್ಲೇ ಸಮೀಪದ ಗೌಹಾತಿಯಲ್ಲಿರುವ ಅವರನ್ನು ಕಾಣಲು ಹವಣಿಕೆ ಮಾಡಿಕೊಂಡಿದ್ದೆ. ಆದರೆ ಸಾರ್ವಜನಿಕ ವ್ಯಕ್ತಿಯಾಗಲು ನಿರಾಕರಿಸಿ ಅಜ್ಞಾತವಾಗಿಯೇ ಬಾಳುವ ಅವರು ಸುಲಭವಾಗಿ ಸಿಗುತ್ತಿರಲಿಲ್ಲ.

ನನ್ನ ತವಕವನ್ನರಿತಿದ್ದ ಕೆ.ರಾಮಯ್ಯ, ‘ಪ್ರಭಾಕರ್ ಕರ್ನಾಟಕಕ್ಕೆ ಬಂದಿದ್ದಾರೆ. ಬನ್ನಿ’ ಎಂದು ಅವರ ಮನೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ಸುಡುಹೊತ್ತು. ಪ್ರಭಾಕರ ಪ್ರೀತಿಯಿಂದ ಬರಮಾಡಿಕೊಂಡು ನೊರೆ ತುಂಬಿದ ಒಗರು ಬೀರಿನ ಮಗ್ಗನ್ನು ಕೈಗೆ ಕೊಟ್ಟು, ಕಾಮಾಖ್ಯದ ಬಗ್ಗೆಯೂ ತಂತ್ರ ಪಂಥದ ಬಗ್ಗೆಯೂ ಇರುವ ಕೃತಿಗಳನ್ನು ತೋರಿಸುತ್ತ, ಗಂಟೆಗಟ್ಟಳೆ ಮಾತಾಡಿದರು. ಅರಿವಿನ ಕಿಡಿಗಳು ಹಾರುವ ಅದೊಂದು ವಿದ್ವತ್‌ಪೂರ್ಣ ಹರಟೆ.

ನಾನು ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ ಹಲವಾರು ಸಲ ಕೋಲಾರಕ್ಕೆ ಹೋಗಿ ಬಂದಿದ್ದೇನೆ. ಅವರ ಮಾತುಕತೆಗಳಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು, ಜಾತ್ಯತೀತವಾದ ಮನಸ್ಸು; ಸಣ್ಣಪುಟ್ಟ ಸಂಗತಿಗಳ ಮೇಲೂ ಕಾಳಜಿಯಿಂದ ಸೂಕ್ಷ್ಮವಾಗಿ ಚಿಂತಿಸುವ ಮಾನವೀಯತೆ; ಗತಕಾಲದ ಬಗ್ಗೆ ಹಳಹಳಿಕೆಯಿಲ್ಲದೆ ವರ್ತಮಾನದ ಸಮಸ್ಯೆಗಳನ್ನು ಕುರಿತು ಚಿಂತಿಸುವ ಪ್ರಖರವೂ ನಿಷ್ಠುರವೂ ಆದ ರಾಜಕೀಯ ಪ್ರಜ್ಞೆ. ಸಾರ್ವಜನಿಕ ಬದುಕಿನಲ್ಲಿ ಜಾತಿಪದ್ಧತಿ ಎಲ್ಲೆಮೀರಿ ನಿರತವಾಗಿರುವ ಕುರಿತ ಹೇವರಿಕೆ. ಹಿರಿಯ ಲೇಖಕರಲ್ಲಿ ಸಾಮಾನ್ಯವಾಗಿ ಎರಡು ಸ್ವಭಾವಗಳಿರುತ್ತವೆ. ಒಂದು- ಕಳೆದುಹೋದ ಕಾಲದ ಬಗ್ಗೆ ಭಾವುಕ ಮರುಕಳಿಕೆ. ಎರಡು-ವರ್ತಮಾನದ ಸಾಮಾಜಿಕ ರಾಜಕೀಯ ವೈರುಧ್ಯಗಳನ್ನು ಉದಾರವಾಗಿ ನೋಡುತ್ತ, ಚಿಂತನೆಯ ಮೊನಚನ್ನು ಕಳೆದುಕೊಳ್ಳುವುದು. ಆದರೆ ಆತ್ಮಕ್ಕೆ ಸದಾ ಬೆಂಕಿ ಹತ್ತಿಸಿಕೊಂಡಂತೆ ಉರಿಯುವ ಕೆಲವರಿದ್ದಾರೆ. ಕೋಚೆ, ಕುಸುಮಾಕರ ದೇವರಗೆಣ್ಣೂರ, ಎಂ.ಡಿ. ನಂಜುಂಡಸ್ವಾಮಿ, ನೀಲಗಂಗಯ್ಯ ಪೂಜಾರ, ಕೆ.ರಾಘವೇಂದ್ರರಾವ್, ಅಬ್ಬಿಗೇರಿ ವಿರೂಪಾಕ್ಷಪ್ಪ, ಸಾರಾ ಅಬೂಬಕರ್, ಕಾಮರೂಪಿ ಪ್ರಭಾಕರ-ಇವರೆಲ್ಲ ಇಂತಹವರು. ಈ ಹಿರಿಯರ ಜತೆ ಮಾತಾಡುವಾಗ ಇವರ ಹಠಮಾರಿತನ, ಜಗಳಗಂಟಿತನ, ಆದರ್ಶವಾದ, ನೈತಿಕ ಪ್ರಜ್ಞೆ ಹಾಗೂ ಭಿನ್ನಮತ ಇಷ್ಟವಾಗುತ್ತದೆ.

ಕರ್ನಾಟಕದಿಂದ ಬಹುಕಾಲ ದೂರವಿದ್ದ ಕಾರಣದಿಂದ ಏರ್ಪಟ್ಟಿರುವ ಅಪರಿಚಿತತೆಯಿಂದಲೊ ಅಥವಾ ಕರ್ನಾಟಕದ ಒಳಗೇ ಇದ್ದೂಇದ್ದೂ ನಮಗೆ ಕಾಣದಂತಾಗಿರುವ ವೈರುಧ್ಯಗಳು ‘ಹೊರಗಿನಿಂದ’ ಬಂದಿರುವ ಅವರಿಗೆ ಒಡೆದು ಕಾಣುತ್ತಿರುವುದರಿಂದಲೊ, ಪ್ರಭಾಕರ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ವೈರುಧ್ಯಗಳ ಬಗ್ಗೆ ತೀಕ್ಷ್ಣವಾದ ಟಿಪ್ಪಣಿ ಮಾಡುತ್ತಿರುತ್ತಾರೆ; ಕನ್ನಡಿಗರ ಸ್ವಭಾವದಲ್ಲೇ ವ್ಯಕ್ತಿನಿಷ್ಠೆಗಾಗಿ ವಿಮರ್ಶೆಯ ನಿಷ್ಠುರತೆ ಬಿಟ್ಟುಕೊಡುವ, ಸಜ್ಜನಿಕೆಯ ಭಾಷೆಯಲ್ಲಿ ವಾಸ್ತವವನ್ನು ಅಡಗಿಸುವ ಪ್ರವೃತ್ತಿಯಿದೆ ಎಂದು ಹೇಳುತ್ತಿರುತ್ತಾರೆ. ಸಂಘಟಕರೊಬ್ಬರು ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡು ಪರಿಚಯ ಭಾಷಣದಲ್ಲಿ ತಮ್ಮನ್ನು ಅತಿಯಾಗಿ ಹೊಗಳಿದ್ದನ್ನು ನೆನೆಯುತ್ತ ಅವರೊಮ್ಮೆ ಹೇಳಿದರು: “ಏನ್ ಸ್ವಾಮಿ ಕನ್ನಡಿಗರು? ಎಷ್ಟು ಉದಾರತೆ! ನನ್ನ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ನಾನು ಎಲ್ಲ ಸೇರಿದರೆ ನೂರೈವತ್ತು ಪುಟಗಳನ್ನೂ ಬರೆದಿಲ್ಲ. ಕನ್ನಡಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿಲ್ಲ. ಆದರೂ ವಾಚಾಮಗೋಚರ ಹೊಗಳಿಬಿಟ್ಟರು. ಕರ್ನಾಟಕದಲ್ಲಿ ಮಾತಿಗೆ ಬೆಲೆಯೇ ಇದ್ದಂತಿಲ್ಲ.’’

ಇದನ್ನು ಕೇಳುವಾಗ ಈಚೆಗೆ ಕಲ್ಕತ್ತಾದಲ್ಲಿ ನಾನು ಕಂಡ, ಹಿರಿಯ ಲೇಖಕ ರುದ್ರಪ್ರತಾಪ ಸೇನರ ಸನ್ಮಾನ ಕಾರ್ಯಕ್ರಮ ನೆನಪಾಯಿತು. ಸೇನರಿಗೆ 75ವರ್ಷ ತುಂಬಿದ ನೆಪದಲ್ಲಿ ಇರಿಸಿಕೊಂಡಿದ್ದ ಆ ಕಾರ್ಯಕ್ರಮ ಎಷ್ಟು ವಿಮರ್ಶಾತ್ಮಕವಾಗಿತ್ತು ಎಂದರೆ, ಅವರ ಶಿಷ್ಯರು ತಮ್ಮ ಗುರುವಿನ ಜತೆ ಕೋರ್ಟ್ಮಾರ್ಶಲ್ ನಡೆಸುವವರ ಹಾಗೆ ಪ್ರಶ್ನೆ ಕೇಳುತ್ತಿದ್ದರು. ಸೇನರು ಆ ಕಟುತರ ಪ್ರಶ್ನೆಗಳಿಗೆಲ್ಲ ಪ್ರಾಮಾಣಿಕವಾಗಿ ದ್ವಂದ್ವವಿಲ್ಲದೆ ಉತ್ತರಿಸುತ್ತಿದ್ದರು. ಹಿರಿಯರ ತಲೆಗೆ ಅಭಿನಂದನ ಗ್ರಂಥಗಳ ಸರಮಾಲೆಯನ್ನು ತಂದು ಕಟ್ಟಿ, ಎಗ್ಗಿಲದೆ ಹೊಗಳಿ ವೈಭವೀಕರಿಸುವ ಪದ್ಧತಿಯಿರುವ ಕರ್ನಾಟಕದಲ್ಲಿ, ಈ ಪರಿಯ ನಿಷ್ಠುರತೆ ಕಲ್ಪಿಸಿಕೊಳ್ಳುವುದೇ ಕಷ್ಟ.

ತೋರುಗಾಣಿಕೆಯನ್ನು ಸದಾ ನಿರಾಕರಿಸುವ ಪ್ರಭಾಕರ ಅವರಲ್ಲಿ, ಅವರ ಖಂಡಿತವಾದಿ ನಿಲುವಿಗೆ ಅಷ್ಟೊಂದು ತಾಳೆಯಾಗದ ಇನ್ನೊಂದು ಮುಖವಿದೆ. ಅದೆಂದರೆ, ಜೀವನಪ್ರೀತಿಯ ಸಂಕೇತದಂತಿರುವ ತಮಾಶೆ ಮತ್ತು ಪೋಲಿತನ. ಈ ತಮಾಶೆಯ ಗುಣ ಅದ್ಭುತ ನಾಟಕೀಯ ಶೈಲಿಯಾಗಿ ಅವರ ಕಥೆ ಕಾದಂಬರಿಗಳಲ್ಲೆಲ್ಲ ಆವರಿಸಿಕೊಂಡಿದೆ. ತಮಗೆ ಪಾಠ ಹೇಳಿದ ಗುರುಗಳ ವೈಯಕ್ತಿಕ ಬದುಕಿನಲ್ಲಿದ್ದ ಸನಾತನವಾದ ಮತ್ತು ತರಗತಿಗಳಲ್ಲಿ ಕನ್ನಡ ಬಳಸದ ಅವರ ಇಂಗ್ಲಿಷಿನ ವ್ಯಾಮೋಹ ಕುರಿತಂತೆ, ಅವರಲ್ಲಿ ಸ್ವಾರಸ್ಯಕರ ಮಾಹಿತಿಗಳಿವೆ. ಪ್ರಭಾಕರ ಅವರು ಆಪ್ತರ ಎದುರು ತಾವು ಬರೆದಿರುವ ಅಪ್ರಕಟಿತ ಪೋಲಿ ಪದ್ಯಗಳನ್ನು ವಾಚಿಸುವುದುಂಟು. ಬಹುಶಃ ಇದು ಅವರ ಗೆಳೆಯರಾಗಿದ್ದ ಎಚ್.ಎಸ್. ಬಿಳಿಗಿರಿಯವರ ಸಹವಾಸ ಫಲವಿರಬೇಕು.

ಒಂದೇ ವ್ಯಕ್ತಿತ್ವದಲ್ಲಿ ಒಟ್ಟಿಗೇ ಇರಲು ಕಷ್ಟವೆನಿಸಬಹುದಾದ ಇನ್ನೂ ಅನೇಕ ಸಂಗತಿಗಳು ಅವರಲ್ಲಿ ಸಹಜವಾಗಿ ನಿರಾಳವಾಗಿ ಇವೆ. ಉದಾ.ಗೆ, ಬಹುಭಾಷಿಕರಾದ ಅವರ ಮನೆಮಾತು ತಮಿಳುಗನ್ನಡ; ಬರವಣಿಗೆ ಕನ್ನಡ ಮತ್ತು ಇಂಗ್ಲೀಶಿನಲ್ಲಿ; ಸಂಸ್ಕೃತ ಅಸ್ಸಾಮಿ ಬಂಗಾಳಿ ಭಾಷೆಗಳಲ್ಲಿ ದೊಡ್ಡ ವಿದ್ವತ್ತು. (ಅವರ ಅಸ್ಸಾಮಿ ಬಂಗಾಳಿ ತಿಳಿವಳಿಕೆಯಿಂದ ಕನ್ನಡಕ್ಕೆ ಪ್ರಯೋಜನವಿನ್ನೂ ಆಗಿಲ್ಲ). ಪಂಪ ಅವರ ಇಷ್ಟದ ಕವಿ. ಮೂಲತಃ ಇಂಗ್ಲೀಶ್ ಸಾಹಿತ್ಯದ ವಿದ್ಯಾರ್ಥಿಯಾದರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಅಂತರಾಷ್ಟ್ರೀಯ ರಾಷ್ಟ್ರೀಯ ರಾಜಕಾರಣದ ಮೇಲೆ ಹೆಚ್ಚು ಬರೆವಣಿಗೆ. ಅದರಲ್ಲೂ ಈಶಾನ್ಯ ಭಾರತದ ರಾಜಕಾರಣ ಭಾಷೆ ಧರ್ಮ ಸಂಸ್ಕೃತಿ ಕುರಿತ ಅವರ ತಿಳಿವಳಿಕೆ ಅಪರೂಪದ್ದು. ಇವನ್ನೆಲ್ಲ ಒಟ್ಟಿಗೆ ಹೇಗೆ ಕಲ್ಪಿಸಿಕೊಳ್ಳುವುದು? ಪ್ರಭಾಕರ ತಮ್ಮ ಕಾದಂಬರಿಯ ಒಂದು ಪಾತ್ರದ ಹಾಗೇ ಬದುಕಿದ್ದಾರೆ.

ಅವರು ಈಚೆಗೆ ಮಾತಾಡುತ್ತ ಕೊಂಚ ದಣಿದ ದನಿಯಲ್ಲಿ “ಸ್ವಾಮಿ, ಕರ್ನಾಟಕ ನನಗೆ ಸಾಕಾಗಿದೆ. ಗೌಹಾಟಿಗೆ ಹೋಗಬೇಕು ಅನಿಸುತ್ತಿದೆ’ ಎಂದು ಗೊಣಗಿದರು. “ಹೋಗಿ. ಆದರೆ ಮತ್ತೆಬನ್ನಿ’’ ಎಂದೆ. ಅವರಲ್ಲಿ ಕೋಲಾರ-ಗೌಹಾತಿಗಳ ನಡುವೆ ವಿಚಿತ್ರವಾದ ಆಕರ್ಷಣೆ ವಿಕರ್ಷಣೆಯಿದೆ. ಇದು ಬಹುಕಾಲ ಬೇರೆಡೆ ಬೆಳೆದ ಮರ ತನ್ನ ಮೂಲನೆಲಕ್ಕೆ ಬಂದು ನಾಟಿಗೊಂಡರೆ ಬೇರೂರುವ ಕಷ್ಟ. ಮರಳಿ ಹುಟ್ಟಿದೂರಿಗೆ ಬರುವಿಕೆ ಬಾಲ್ಯದ ನೆನಪುಗಳನ್ನು ಎಚ್ಚರಿಸಿ ಸುಖ ಕೊಡುತ್ತದೆ; ಆದರೆ ಹೊಚ್ಚ ಹೊಸತೆೆನಿಸುವಷ್ಟು ಬದಲಾಗಿರುವ ಪರಿಸರವು, ಕಾಡುವ ಏಕಾಂಗಿತನವನ್ನೂ ತಂದಿಡುತ್ತದೆ. ಯಾರ ಮರುಕವನ್ನೂ ಬಯಸದೆ ಏಕಾಂತದಲ್ಲಿ ಘನತೆಯಿಂದ ಕೊನೆಯ ದಿನಗಳನ್ನು ಕಳೆಯ ಬಯಸುವ ಇಂತಹ ಹಠಮಾರಿ ಜೀವಗಳು, ಒಳಗೇ ಮೃದ್ವಂಗಿಗಳಾಗಿ ಆಪ್ತಸಂಗಾತಕ್ಕೆ ಹಾತೊರೆಯುತ್ತಿರುತ್ತವೆ.

ಆ ಸಂಗಾತದ ಸ್ವರೂಪ ಎಂತಹುದು ಎಂದು ಸ್ಪಷ್ಟವಾಗುವುದಿಲ್ಲ. ನಾನು ‘ಕಾಮರೂಪಕ್ಕೆ ಯಾವಾಗ ಹೋಗುತ್ತೀರಿ’ ಎಂದು ಕೇಳಿದೆ: ‘ಆದಿಮದ 50ನೇ ಬೆಳುದಿಂಗಳ ಕಾರ್ಯಕ್ರಮ ಮುಗಿಸಿಕೊಂಡು’ ಎಂದರು.
ಪ್ರತಿಯೊಬ್ಬರಿಗೂ ಬಾಳಿನಲ್ಲಿ ಬಹುರೂಪಧಾರಣೆ ಮಾಡಬೇಕಾದ ಒತ್ತಡಗಳು ಎದುರಾಗಬಹುದು. ಆದರೆ ಈ ರೂಪಧಾರಣೆಗೆ ಕಾರಣ, ನಮ್ಮ ಇಚ್ಛಾನಿಚ್ಛೆಗಳು ಮಾತ್ರವಲ್ಲ, ಬಾಳಿನ ಅನೂಹ್ಯ ಒತ್ತಡಗಳು ಸಹ. ಈ ಒತ್ತಡಗಳು ಬರೆಹ ಇಲ್ಲವೇ ಮಾತಿನ ವ್ಯಾಖ್ಯಾನಕ್ಕೆ ಕೆಲವೊಮ್ಮೆ ನಿಲುಕುವಂತೆ ಇರುವುದಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending