ದಿನದ ಸುದ್ದಿ
ಎಲ್ಲ ರೀತಿಯಿಂದ ದೊಡ್ಡವರು ‘ಜಿ.ಎಸ್.ಆಮೂರ’
ಜಿ ಎಸ್ ಆಮೂರ ಎಲ್ಲ ರೀತಿಯಿಂದಲೂ ದೊಡ್ಡವರು. ಕಳೆದ ಮೇ ತಿಂಗಳಲ್ಲಿ 95 ಮುಗಿಸಿ ನೂರರೆಡೆಗೆ ಹೆಜ್ಜೆ ಹಾಕುತ್ತಿದ್ದರು. ಕನ್ನಡಕ್ಕೆ ಇಂಗ್ಲಿಷ್ ಮೇಷ್ಟ್ರುಗಳ ಲಿಂಕ್ (ಸಂಬಂಧ, ಕೊಡುಗೆ, ಬಾಂಧವ್ಯ ಈ ಪದಗಳಿಗಿಂತ ಉತ್ತಮ) ದೊಡ್ಡದು. ಮೇಷ್ಟ್ರುಗಳಷ್ಟೇ ಅಲ್ಲ ಬೇರೆ ಬೇರೆ ನೌಕರಿಗಳಲ್ಲಿದ್ದವರೂ ಇದ್ದರು. ಇರಲಿ. ನವೋದಯ, ನವೋದಯಪೂರ್ವ ಕಾಲದಿಂದಲೂ ಈ ಇತಿಹಾಸವಿದೆ. ಆ ಪರಂಪರೆಯ ಕೊಂಡಿಯಾಗಿದ್ದ ಅಮೂರ ಕಳಚಿಕೊಂಡು ಕನ್ನಡ ಸಾಹಿತ್ಯ ಚರಿತ್ರೆಯ ಭಾಗವಾದರು.
ಕನ್ನಡಕ್ಕೆ ಗಂಟುಬೀಳುವ ಇಂಗ್ಲಿಷ್ ಮೇಷ್ಟ್ರುಗಳ ಲಿಂಕೂ ಇದೆ ! ಅವರಲ್ಲಿ ಬಹುತೇಕರಿಗೆ ಅತ್ತ ಇಂಗ್ಲಷ್ಷೂ ಐಬು ಇತ್ತ ಅವರ ತಾಯ್ನುಡಿಯೂ ಐಬು. ಅವರು ಇಂಗ್ಲಿಷ್ ಡಿಗ್ರಿ ಸರ್ಟಿಫಿಕೇಟ್ ಇಟ್ಟುಕೊಂಡು ಕನ್ನಡದೊಳಗೆ ಓಡಾಡ್ತಾ ಇರ್ತಾರೆ. ಸ್ವಲ್ಪ ಬೆದರಿಕೆ, ಸ್ವಲ್ಪ ಬೂಟಾಟಿಕೆ ತೋರ್ತಾರೆ ! ಕೆಲವು ಕನ್ನಡದವು ಬೆದರೋದೂ ಉಂಟು !
ಆದರೆ ಕನ್ನಡಕ್ಕೆ ಕಾಮಧೇನುವಿನಂತೆ ಬರುವ ಇಂಗ್ಲಿಷ್ ಮೇಷ್ಟ್ರುಗಳ ಲಿಂಕ್ ಇದ್ಯಲ್ಲಾ ಅದು ಮಹತ್ವದ್ದು. ‘ ಶ್ರೀ ‘ ಯವರಿಂದಲೇ ಶ್ರೀಕಾರಗೊಂಡ ಆ ಪರಂಪರೆಗೆ ಸೇರಿದವರು ಅಮೂರ. ಮುಂದುವರೆದ ಹೊಸ ತಲೆಮಾರಿನಲ್ಲೂ ಕೆಲವರು ಆ ಪರಂಪರೆಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ.
ಇಂಥವರು ಕನ್ನಡವನ್ನು ಪ್ರೀತಿ ಗೌರವದಿಂದ ಕಾಣುತ್ತಾರೆ. ಕನ್ನಡವೆಂಬುದು ಇಂಗ್ಲಿಷಿನಂತೆಯೇ ಒಂದು ದೊಡ್ಡ ಭಾಷೆಯೆಂಬ ಅರಿವಿನಲ್ಲಿ ಒಡನಾಡುತ್ತಾರೆ, ಕೆಲಸ ಮಾಡುತ್ತಾರೆ. ಅಂಥವರಿಂದಲೇ ಇವಳ ಒಡವೆ ಅವಳಿಗಿಡುವ ಶಕ್ತಿ ಬರುವುದು. ಆಮೂರ ಇಂಗ್ಲಿಷ್ ಮತ್ತು ಕನ್ನಡ ಎರಡನ್ನೂ ಅರಗಿಸಿಕೂಂಡ ವಿಮರ್ಶಕರು. ಯಾವ ವಿಷಯವೇ ಆಗಲಿ ಅವರು ಬುಡಮಟ್ಟ ಶೋಧಿಸಿ ಬರೆಯುತ್ತಿದ್ದರು.
ಕನ್ನಡ ಕಥನ ಪರಂಪರೆ, ಮಹಿಳೆಯರ ಕಾವ್ಯ, ನವೋದಯ ಸಾಹಿತ್ಯ, ಜನಪ್ರಿಯ ಸಾಹಿತ್ಯ ಎಲ್ಲದರ ಬಗ್ಗೆಯೂ ಸಮಾನ ಆಸಕ್ತಿಯಿಂದ ಅಧ್ಯಯನಶೀಲರಾಗುತ್ತಿದ್ದರು. ಬೇಂದ್ರೆ, ಶ್ರೀರಂಗರ ಬಗ್ಗೆ ಎಂಥ ತಾದಾತ್ಮ್ಯ ಹೊಂದುತ್ತಿದ್ದರೋ ಅಷ್ಟೇ ತಾದಾತ್ಮ್ಯದಲ್ಲಿ ಜನಪ್ರಿಯ ಕಾದಂಬರಿಕಾರ ಅನಕೃ ಬಗ್ಗೆ ಚಿಂತಿಸಿ ಬರೆಯುತ್ತಿದ್ದರು. ಜನಪ್ರಿಯ ಸಾಹಿತ್ಯದ ಬಗ್ಗೆ ಸದಭಿರುಚಿಯ ಅಭಿಪ್ರಾಯ ಮೂಡಿಸುತ್ತಿದ್ದರು.
ಇಂಗ್ಲಿಷ್ ಭಾಷೆಯಲ್ಲಿ ಹಲವಾರು ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. ಮಳಗಾಂವಕರ್, ಮುಲ್ಕ್ ರಾಜ್ ಆನಂದ, ರಾಜಾರಾವ್, ನಾಯ್ಪಾಲ್, ಸಲ್ಮಾನ್ ರುಶ್ದಿ ( ನಾನು ನೈಪಾಲ್, ರಶ್ದಿ ಅಂದಾಗಲೆಲ್ಲ ಅವರು ನಾಯ್ಪಾಲ್, ರುಶ್ದಿ ಅಂತ ಸರಿಮಾಡುತ್ತಿದ್ದರು ! ) ಅವರೆಲ್ಲರ ಕೃತಿಗಳ ವಿಸ್ತೃತ ಓದು ಅವರದಾಗಿತ್ತು. ಕುವೆಂಪು ಅವರ ರಾಮಾಯಣ ದರ್ಶನಂ ಕುರಿತ ಅವರ ಇಂಗ್ಲಿಷ್ ಲೇಖನ ಬಹಳ ಮೌಲಿಕವಾದುದು.
ಪ್ರಾಚೀನ ಸಾಹಿತ್ಯದ ಬಗ್ಗೆ ಇರುವಷ್ಟೇ ಆಸಕ್ತಿಯನ್ನು ಹೊಸದಾಗಿ ಬರೆಯುವವರ ಕತೆ ಕವಿತೆಗಳನ್ನು ಸಂಕಲನಗಳಲ್ಲಿ ಸೇರಿಸುತ್ತಿದ್ದರು. ಬೇರೆ ಬೇರೆ ರೀತಿಯ ಸಂಕಲನಗಳನ್ನು ಸಂಪಾದಿಸುವುದಕ್ಕೆ ಬೇಕಾದ ಅಪಾರ ಓದನ್ನು ಅವರು ಸಂತೋಷದಿಂದ ಮತ್ತು ಪರಿಪೂರ್ಣತೆಯಿಂದ ಮಾಡುತ್ತಿದ್ದರು.
ಬೆಂಗಳೂರಿಗೆ ಬಂದರೆ ಲಂಕೇಶ್ ಅವರಲ್ಲಿಗೆ ಭೇಟಿ ಕೊಟ್ಟು ಅವರೊಡನೆ ಗಂಭೀರ ಸಾಹಿತ್ಯ ಚರ್ಚೆ ಮಾಡುತ್ತಿದ್ದರು. ಹಾಗೆ ಒಮ್ಮೆ ಚರ್ಚಿಸುತ್ತಿದ್ದ ಹೊತ್ತಿನಲ್ಲಿ ಅವರು, ‘ ವರ್ಷಕ್ಕೆ ಒಂದು ಸಾರಿ ತಪ್ಪದೇ War and Peace ಮತ್ತು Anna Karenina ಓದೇ ಓದ್ತೀನಿ ‘ ಅಂತ ಹೇಳಿದ್ದು ನನ್ನ ನೆನಪಿನಲ್ಲಿದೆ. ಅವರ ‘ಭುವನದ ಭಾಗ್ಯ’ ಕುರಿತು ಆಗ ನಾನು ಲಂಕೇಶ್ ಪತ್ರಿಕೆ ಯಲ್ಲಿ ಬರೆದಿದ್ದೆ.
ಅವರು ಬಹುಶೃತ ವಿದ್ವಾಂಸರಾಗಿದ್ದರು. ನಿಷ್ಠುರ ವಿಮರ್ಶಕರಾಗಿದ್ದರು. ಒಮ್ಮೆ ಒಂದು ಪ್ರತಿಷ್ಠಿತ ಪ್ರಶಸ್ತಿ ತೀರ್ಮಾನ ಮಾಡಲು ಒಂದು ಸಭೆ ನಡೆಯಿತು. ಮೂವರು ತೀರ್ಪುಗಾರರಲ್ಲಿ ಅಮೂರ ಒಬ್ಬರು. ಇನ್ನೊಬ್ಬರು ಅವರ ವಯಸ್ಸಿನವರೇ. ಮೂರನೆಯವರು ಇನ್ನೂ ಯುವಕರು. ತೀರ್ಮಾನ ವಿವಾದದಲ್ಲಿ ಆಯಿತು. ಆ ಪ್ರಶಸ್ತಿಗೆ ಯಾವ ರೀತಿಯಿಂದಲೂ ಅರ್ಹವಲ್ಲದ ಕೃತಿಯನ್ನು ಅಮೂರ ಒಪ್ಪಲಿಲ್ಲ.
ಆದರೆ ಉಳಿದಿಬ್ಬರ ಬಹುಮತವಿತ್ತು. ಅದು ಆಯ್ಕೆಯಾಗಬೇಕಾಯ್ತು. ಎಲ್ಲ ಮುಗಿದಮೇಲೆ ಹೊರಡುವಾಗ ಆ ಯುವಕರನ್ನು ಪಕ್ಕಕ್ಕೆ ಕರೆದು ಆಮೂರ ಹೇಳಿದರು, ” ನೀವಿನ್ನೂ ಚಿಕ್ಕ ವಯಸ್ಸಿನವರಿದ್ದೀರಿ, ಇನ್ನು ಮುಂದೆ ಎಂದೂ ಇಂಥ ಲಿಟರರಿ ಪೊಲಿಟಿಕ್ಸ್ ಮಾಡಬೇಡಿ, ” ಅಂದ ಅವರ ಮಾತಿಗೆ ನಾನು ಸಾಕ್ಷಿಯಾಗಿದ್ದೆ. ಆ ಯುವ ಪ್ರಭೃತಿ ತಲೆತಗ್ಗಿಸಿ ನಿಂತಿದ್ದರು.
ಅದು ಸಾಹಿತ್ಯ ಲೋಕದಲ್ಲಿರಬೇಕಾದ ದೊಡ್ಡತನ. ಅಮೂರ ಅಂಥ ಅಪರೂಪದ ದೊಡ್ಡವರು. ನಮಗೆ ಬಹಳಷ್ಟು ಕಲಿಸಿದ್ದಾರೆ. ಅಂಥ ಮೌಲ್ಯಗಳನ್ನು ಕಲಿತು ದೊಡ್ಡವರಾಗಲು ಬದುಕೋಣ. ಅವರ ನೆನಪಿಗೆ ನಮನಗಳು.
-ಅಗ್ರಹಾರ ಕೃಷ್ಣಮೂರ್ತಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ
ಸುದ್ದಿದಿನ, ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ.
ಯುವಜನರು, ಮಹಿಳೆಯರು, ರೈತರು ಸೇರಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಬಾಂಡ್ ಕುರಿತ ದತ್ತಾಂಶ ಬಿಡುಗಡೆ
ಸುದ್ದಿದಿನ,ನವದೆಹಲಿ : ಚುನಾವಣಾ ಬಾಂಡ್ ಕುರಿತಂತೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ ಇಂದ ಲಭ್ಯವಾದ ಅಂಕಿಕೃತ ದತ್ತಾಂಶ ಮಾದರಿಯನ್ನು ಚುನಾವಣಾ ಆಯೋಗ ಭಾನುವಾರ ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ. www.eci.gov.in/candidate-politicalparty ವೆಬ್ಸೈಟ್ನಲ್ಲಿ ಈ ದತ್ತಾಂಶ ಲಭ್ಯವಿರುತ್ತದೆ.
ಸುಪ್ರೀಂಕೋರ್ಟ್ ನಿರ್ದೇಶಿಸಿದಂತೆ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಕುರಿತ ದತ್ತಾಂಶಗಳನ್ನು ಮೊಹರು ಹಾಕಿದ ಲಕೋಟೆಯಲ್ಲಿ ಸಲ್ಲಿಸಿದ್ದವು ಎಂದು ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ. ರಾಜಕೀಯ ಪಕ್ಷಗಳಿಂದ ಸ್ವೀಕರಿಸಿದ ಮೊಹರು ಹಾಕಿದ ಲಕೋಟೆಗಳನ್ನು ತೆರೆಯದೇ ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗಿತ್ತು.
ಇದೇ 15ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ಮೇರೆಗೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ, ಭೌತಿಕ ಪ್ರತಿ ಹಾಗೂ ಅದರ ಡಿಜಿಟಲ್ ದಾಖಲೆಯಿರುವ ಪೆನ್ಡ್ರೈವ್ ಒಳಗೊಂಡ ಮೊಹರು ಹಾಕಿದ ಲಕೋಟೆಯನ್ನು ಹಿಂತಿರುಗಿಸಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರಶ್ಮಿ ಚಂದ್ರಗಿರಿ ಅವರಿಗೆ ಪಿಎಚ್.ಡಿ ಪದವಿ
ಸುದ್ದಿದಿನ,ಹಾವೇರಿ : ನಗರದ ರಶ್ಮಿ ಚಂದ್ರಗಿರಿ ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿದ “ದಲಿತ ಬಂಡಾಯ ಕಾದಂಬರಿಗಳಲ್ಲಿ ಸಾಂಸ್ಕೃತಿಕ ನೆಲೆಗಳು” ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ.
ಇವರಿಗೆ ಡಾ.ಬಿಎಸ್.ಭಜಂತ್ರಿ , ಸಹಾಯಕ ಪ್ರಧ್ಯಾಪಕರು ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ ಇವರು ಮಾರ್ಗದರ್ಶನ ಮಾಡಿದ್ದರು.
ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ರಶ್ಮಿ ಚಂದ್ರಗಿರಿಯವರ ಹಲವು ಲೇಖನಗಳು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಸ್ತುತ ಇವರು ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243